Saturday, August 2, 2008

ದಂತಗೋಪುರದಲ್ಲಿ ಸಾಹಿತ್ಯವೇ?

ಸಾಹಿತ್ಯದ ಉದ್ದೇಶವೇನು? ತನ್ನ ಹುಟ್ಟಿನಲ್ಲೇ ಅಂತರ್ಗತ ಮಾಡಿಕೊಂಡಿರುವ ಪ್ರಶ್ನೆ ಇದು.ಕಾಲಕ್ಕನುಗುಣವಾಗಿ ಇದಕ್ಕೆ ತಮಗೆ ಸರಿ ಕಂಡ ಉತ್ತರ ಕಂಡುಕೊಳ್ಳುತ್ತಲೇ ಇದ್ದಾರೆ.ಸಾಹಿತ್ಯ ಎನ್ನುವುದು ಯಾವಾಗಲೂ ಜನಸಾಮಾನ್ಯರ ಮಧ್ಯೆಯೇ ಹುಟ್ಟುತ್ತದೆ. ಮತ್ತು ಅದು ಅಲ್ಲಿಯೇ ಪ್ರಸರಣಗೊಳ್ಳುತ್ತದೆ. ಒಮ್ಮೊಮ್ಮೆ ಅದು, ಪಂಪ, ರನ್ನರಂತೆ ಪ್ರಭುಸಮ್ಮುಖದಲ್ಲಿ ಪ್ರಕಟಗೊಂಡರೂ ಅದರ ಗುಣವಿಶೇಶ ಕಾಂತ ಸಂಮಿತವೇ. ಈಗ ನನ್ನಲ್ಲಿ ಈ ಪ್ರಶ್ನೆ ಹುಟ್ಟಿಕೊಳ್ಳುದಕ್ಕೆ ಕಾರಣವಾದ ಘನ ಉದ್ಧೇಶ ಎನೆಂದರೆ, ಇತ್ತೇಚೆಗೆ ಪುಸ್ತಕ ಬಿಡುಗಡೆಗಳು ಪ್ರಭುಸಮ್ಮುಖವಾಗುತ್ತಿವೆ. ಲೇಖಕರು ಅಧಿಕಾರ ಗದ್ದುಗೆ ಹಿಡಿದವರ ಕೈಯಿಂದ ತಮ್ಮ ಪುಸ್ತಕ ಬಿಡುಗಡೆಗೊಳಿಸಲು ಹಾತೊರೆಯುತ್ತಾರೆ. ಇದರಿಂದ ಲೇಖಕರಿಗಾಗುವ ಲಾಭವೇನು? ಇವರೇನು ಆಸ್ಥಾನ ಸಾಹಿತಿಗಳೇ? ನಿನ್ನೆಯ ಉದಾಹರಣೆಯನ್ನೇ ನೋಡಿ; ನಿನ್ನೆ ಮುಖ್ಯಮಂತ್ರಿಗಳ ಗೃಹಕಛೇರಿ ’ಕೃಷ್ಣಾ’ದಲ್ಲಿ ಪತ್ರಕರ್ತರೊಬ್ಬರು ಬರೆದ ’ಬದಲಾದ ಭಾರತ’ಎಂಬ ಪುಸ್ತಕ ಬಿಡುಗಡೆಯಾಯ್ತು. ಬಿಡುಗಡೆ ಮಾಡಿದವರು ಮುಖ್ಯಮಂತ್ರಿ ಯೆಡಿಯೂರಪ್ಪನವರು. ಅತಿಥಿ, ಉನ್ನತ ಶಿಕ್ಷಣ ಸಚಿವರಾದ ಅರವಿಂದ ಲಿಂಬಾವಳಿ. ಇವರಿಬ್ಬರಿಗೆ ಸಾಹಿತ್ಯ ಅರ್ಥವಾಗುತ್ತದೆಯೇ? ಹೀಗೆ ಕನ್ನಡದ ಗಂಧಗಾಳಿ ತಿಳಿಯದ ರಾಜ್ಯಪಾಲರಿಂದ, ರಾಜಭವನದಲ್ಲಿಯೇ ಪುಸ್ತಕ ಬಿಡುಗಡೆ ಮಾಡಿಸುವ ಉದ್ಧಾಮ ಸಾಹಿತಿಗಳು ನಮ್ಮಲ್ಲಿದ್ದಾರೆ. ಕಲಾಕ್ಷೇತ್ರಕ್ಕೆ,ಎಡಿಎ ರಂಗಮಂದಿರಕ್ಕೆ,ಯವನಿಕಕ್ಕೆ ಹೋದಷ್ಟೇ ಸಲೀಸಾಗಿ ರಾಜಭವನಕ್ಕೆ, ಕೃಷ್ಣಾಕ್ಕೆ, ವಿಧಾನಸೌಧದ ಬಾಂಕ್ವಟ್ ಹಾಲ್ ಗೆ ಸಾಮಾನ್ಯ ಮನುಷ್ಯರು ಹೋಗಲು ಸಾಧ್ಯವೇ? ಪ್ರಭುಗಳ ಕೃಪಾಕಟಾಕ್ಷಕ್ಕಾಗಿ ಹಾತೊರೆಯುವ ಆಸ್ಥಾನ ಸಾಹಿತಿಗಳಿಗೆ ಮಾನ ಸನ್ಮಾನಗಳ ಮೇಲೆಯೇ ಕಣ್ಣು. ಇನ್ನು ಕೆಲವರಿರುತ್ತಾರೆ; ಅವರು ಒಂದಕ್ಷರ ಬರೆದವರಲ್ಲ. ಆದರೆ ಯಾರೋ ಮಹನೀಯರ ಬಗ್ಗೆ ಅಥವಾ ಅವರು ಬರೆದ ಗ್ರಂಥಗಳ ಬಗ್ಗೆ ಲೇಖನಗಳನ್ನು ಸಂಗ್ರಹಿಸುತ್ತಾರೆ. ನಂತರ ತಾವು ಸಂಪಾದಕರೆಂದು ಹೆಸರು ಹಾಕಿಸಿಕೊಂಡು ಪ್ರಕಟಿಸಿಬಿಡುತ್ತಾರೆ. ನಂತರ ಪ್ರಭುಗಳ ಕೈಯಲ್ಲಿ ಬಿಡುಗಡೆ ಮಾಡಿಸುತ್ತಾರೆ! ಕರ್ನಾಟಕದ ಲೈಬ್ರರಿಗಳನ್ನೊಮ್ಮೆ ಸುಮ್ಮನೆ ಹೊಕ್ಕು ಬನ್ನಿ. ರ್‍ಯಾಕ್ ಗಳಲ್ಲಿ ಸುಂದರವಾಗಿ ಜೋಡಿಸಿಟ್ಟ ಇಂತಹ ಪುಸ್ತಕಗಳೇ ಕಾಣಸಿಗುತ್ತದೆ. ಪುಸ್ತಕ ಪ್ರಕಾಶನ ಕೂಡ ಈಗ ಒಂದು ದಂದೆಯಾಗಿಬಿಟ್ಟಿಯಾಗಿದೆ. ಇಂತಹ ಅಸಂಖ್ಯ ಪುಸ್ತಕಗಳ ನಡುವೆ ಒಳ್ಳೆ ಪುಸ್ತಕ ಯಾವುದೆಂದು ಹುಡುಕುವುದೇ ಕಸ್ಟವಾಗಿಬಿಟ್ಟಿದೆ. ವಿಮರ್ಶೆ ನೋಡಿ ಪುಸ್ತಕ ಕೊಂಡರೆ ಸಿನೆಮಾ ವಿಮರ್ಶೆ ನೋಡಿ ಥಿಯೇಟರಿಗೆ ಹೋದಂತಾಗುತ್ತದೆ! ಲೇಖಕ ಹತ್ತಿರದವನಾಗಿದ್ದರೆ ವಿಮರ್ಶಕನಿಗೆ ಆ ಪುಸ್ತಕದಲ್ಲಿ ಅನೇಕ ಆಯಾಮಗಳು ಗೋಚರಿಸಿಬಿಡುತ್ತದೆ. ಸಿನೇಮಾ ಪತ್ರಕರ್ತನನ್ನು ’ಚೆನ್ನಾಗಿ’ ನೋಡಿಕೊಂಡರೆ ಸಿನೇಮಾ ಸೂಪರ್ ಆಗಿಬಿಡುತ್ತದೆ. ಇದು ಥಳುಕು ಬಳುಕಿನ ಪ್ರಪಂಚ. ಪ್ರದರ್ಶಕ ಗುಣ ಇದ್ದರೆ ಮಾತ್ರ ಮನ್ನಣೆ!

0 comments: