Tuesday, November 25, 2008

ವಾಟಾಳ್ ನಾಗರಾಜ್ ಉಚ್ಚೆ ಹೊಯ್ತಾರಂತೆ !

ವಾಟಾಳ್ ನಾಗರಾಜರ ಹೊಸ ಸಾಹಸದ ಬಗ್ಗೆ ಯಾರಾದರೂ ಬರೆದಿರಬಹುದೇ ಎಂದು ಗೊತ್ತಿರುವ ಬ್ಲಾಗ್ ಗಳನ್ನೆಲ್ಲಾ ಜಾಲಾಡಿದೆ. ಕಾಣಿಸಲಿಲ್ಲ. ’ಬೊಗಳೆ-ರಗಳೆ’ಯಲ್ಲಾದರೂ ಕಾಣಿಸಿಕೊಳ್ಳಬಹುದೆಂದು ಭಾವಿಸಿದ್ದೆ. ಅಲ್ಲೂ ಇರಲಿಲ್ಲ. ಹಾಗಾಗಿ ಈ ಕಾಯಕಕ್ಕೆ ಕೈ ಹಾಕುತ್ತಿದ್ದೇನೆ.

ವಿಷಯ ಏನಪ್ಪಾ ಅಂದ್ರೆ, ನಿನ್ನೆ ಇದ್ದಕ್ಕಿದ್ದಂತೆ ನಮ್ಮ ಕನ್ನಡದ ಉಟ್ಟು ಓರಾಟಗಾರ, ಪ್ರತಿಭಟನೆಗಳ ಸರದಾರ ವಾಟಾಳ್ ನಾಗರಾಜ್ ಪತ್ರಿಕಾ ಗೋಷ್ಟಿ ಕರೆದಿದ್ದರು. ಅಲ್ಲಿ ಅವರು ಹೇಳಿದ್ದು; ಸರಕಾರವು ರಾಜ್ಯಾದ್ಯಂತ ಸರ್ವಾಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಡಿಸೆ.ಬರ ಅಂತ್ಯದೊಳಗಾಗಿ ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ತಾವು ರಾಜಭವನದ ಎದುರು ’ಉಚ್ಚೆ ಹೊಯ್ಯುವ ಚಳುವಳಿ’ ನಡೆಸುವುದಾಗಿ ಹೇಳಿದರು. ಮುಂದೆ ಈ ಚಳುವಳಿಯನ್ನು ಹಂತ ಹಂತವಾಗಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಹಾಗು ಐಎ ಎಸ್ ಅಧಿಕಾರಿಗಳ ನಿವಸಕ್ಕೂ ವಿಸ್ತರಿಸುವುದಾಗಿಯೂ ಸ್ಪಷ್ಟಪಡಿಸಿದರು

ಶೌಚಾಲಯಗಳ ಸಮಸ್ಯೆಗಳ ಕುರಿತು ಚರ್ಚಿಸಲು ನವೆಂಬರ ೨೯ರಂದು ಹಿರಿಯರ ಸಭೆ ಕರೆದಿರುವುದಾಗಿಯೂ ತಿಳಿಸಿದರು. ಇವರಿಗೆ ಹಿರಿಯರೇ ಯಾಕೆ ಬೇಕಿತ್ತು? ಅವರಲ್ಲಿ ಬಹಳಷ್ಟು ಜನರು ಡಯಾಬಿಟಿಕ್ ಇರಬಹುದು; ಅವರಿಗೆ ಮೂತ್ರ ಹಿಡಿದಿಟ್ಟುಕೊಳ್ಳುವುದು ಕಷ್ಟವೆಂದೇ? ಆದ ಕಾರಣ ಇವರ ಚಳುವಳಿಗೆ ಅವರ ಸಾಥ್ ಸಿಗಬಹುದೆಂಬ ಆಶಾ ಭಾವನೆಯಿರಬಹುದೇ?


ಪತ್ರಕರ್ತರ ಬುದ್ಧಿಯನ್ನು ಶತಶತಮಾನಗಳಿಂದ ಬಲ್ಲವರು ಈ ವಾಟಾಳ್. ಹಾಗಾಗಿಯೇ ಅವರು ಪತ್ರಕರ್ತರಿಗೆ ಅಲ್ಲಿಯೇ ತಾಕೀತು ಮಾಡಿದರು; ’ನೀವು ಬರೆಯುವಾಗ ಉಚ್ಚೆ ಹೊಯ್ಯುವ ಚಳುವಳಿ ಎಂದೇ ಬರೆಯಬೇಕು, ಬದಲಾಗಿ ಮೂತ್ರ ವಿಸರ್ಜನೆ ಚಳುವಳಿ ಎಂದು ಬರೆಯಬಾರದು’ ಪಾಪ ಸಜ್ಜನ ಪತ್ರಕರ್ತರು ಮುಸಿಮುಸಿ ನಗುತ್ತಾ ತಲೆಯಲ್ಲಾಡಿಸಿದರು.

ದೃಶ್ಯ ಮಾದ್ಯಮದವರು ಅವರು ಹೇಳಿದ್ದೆಲ್ಲವನ್ನೂ ಅಪ್ಪಣೆ ಸಮೇತ ಪ್ರಸಾರಮಾಡಿದರು. ಮುದ್ರಣ ಮಾದ್ಯಮದವರು ಪಾಪ ಮಾನವಂತರು, ಮೂತ್ರವಿಸರ್ಜನೆ ಚಳುವಳಿ ಎಂದೇ ಪ್ರಕಟಿಸಿದವು. ಪ್ರಜಾವಾಣಿ ಇವರ ಸಹವಾಸವೇ ಬೇಡ ಎಂದು ದಿವ್ಯ ನಿರ್ಲಕ್ಷ್ಯ ವಹಿಸಿತು. ಅಥವಾ ನಾಳೆ ಪ್ರಕಟಿಸುತ್ತೋ ಏನೋ, ಯಾಕೆಂದರೆ ಅದು ಪ್ರಜಾವಾಣಿ!

ಈಗ ನನ್ನಲ್ಲಿ ಕುತೂಹಲವಿದೆ; ಹಲವಾರು ಅನುಮಾನಗಳಿವೆ. ಅವರು ಹಿರಿಯರ ಸಭೆ ಕರಿದಿದ್ದಾರೆ. ಅದರಲ್ಲಿ ಮಹಿಳೆಯರು ಸೇರಿದ್ದಾರೆಯೇ? ಯಾಕೆಂದರೆ ಶೌಚಾಲಯದ ಸಮಸ್ಯೆಗಳು ಇದುವರೆಗೆ ಮಹಿಳೆಯರನ್ನು ಮಾತ್ರ ಕಾಡಿವೆ. ಪುರುಷರು ಮೋಟು ಗೋಡೆಯ ಮುಂದೆ ಬೇಕಾದರೂ ಪ್ಯಾಂಟ್ ಬಿಚ್ಚಿ ನಿಲ್ಲುತ್ತಾರೆ.

ಇವತ್ತು ವಿಜಯ ಕರ್ನಾಟಕ ಮೂತ್ರ ವಿಸರ್ಜನೆ ಎಂದೇ ಬರೆದಿದೆ. ಈಗ ವಾಟಾಳರು ವಿಜಯ ಕರ್ನಾಟಕದೆದುರು ಮೂತ್ರ ವಿಸರ್ಜಿಸಿ ಇದನ್ನು ಪ್ರತಿಭಟಿಸುತ್ತಾರೆಯೇ?

ನನ್ನ ಅಲ್ಪ ತಿಳುವಳಿಕೆಯ ಪ್ರಕಾರ ವಾಟಾಳ್ ಪಡೆಯಲ್ಲಿ ಮಹಿಳೆಯರಿಲ್ಲ. ಒಂದು ವೇಳೆ ಇದ್ದಲ್ಲಿ ಅವರೂ ಕೂಡ ಈ ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಾರೆಯೇ?

ಇನ್ನೊಂದು ಅನುಮಾನವಿದೆ; ಅಲ್ಲಾ,ಅದು ಕುತೂಹಲ ಶೋಭಾ ಕರಂದ್ಲಾಜೆ ಮನೆಯೆದುರು.... ಮಹಿಳಾ ಪೋಲಿಸರೆದುರು...

ದೊಂಬರಾಟಕ್ಕೂ ಒಂದು ಮಿತಿಯಿರಬೇಕಲ್ಲವೇ?
’ ಏನಕೇನಾ ಪ್ರಕರಣಂ ಪ್ರಸಿದ್ಧ ಪುರುಷಂ’

3 comments:

ಸಂದೀಪ್ ಕಾಮತ್ said...

ಬಹುಶಃ ಪ್ರತಿಭಟನೆಯ ದಿನ ತಾತ್ಕಾಲಿಕ ಶೌಚಾಲಯವನ್ನು ಮಾಡಬಹುದೇನೋ ರಾಜಭವನದ ಮುಂದೆ! ಓಹ್ ಮರೆತ ಹೋಯ್ತು ರಾಜಭವನದ ಮುಂದೆ ಮೋಟು ಗೋಡೆ ಇದೆ ಅಲ್ವಾ??

"ಪುರುಷರು ಮೋಟು ಗೋಡೆಯ ಮುಂದೆ ಬೇಕಾದರೂ ಪ್ಯಾಂಟ್ ಬಿಚ್ಚಿ ನಿಲ್ಲುತ್ತಾರೆ."
!!??? ಝಿಪ್ ಇರ್ಬೇಕಾದ್ರೆ ಪ್ಯಾಂಟ್ ಯಾಕೆ ಬಿಚ್ಚೋದು?!!

Chamaraj Savadi said...

ವಾಟಾಳ್‌ ನಾಗರಾಜ್‌ ಒಂದು ಪಾಲು ಮೂರ್ಖನಾದರೆ, ಆ ಬೊಗಳೆ ಶೂರ ಹೇಳಿದ್ದನ್ನು ಯಥಾವತ್ತಾಗಿ ವರದಿ ಮಾಡುವ ಪತ್ರಕರ್ತರು ಎರಡು ಪಾಲು ಮೂರ್ಖರು. ಇಂತಹ ದಡ್ಡರು ನೀಡಿದ ಪ್ರಚಾರದಿಂದಲೇ ವಾಟಾಳ್‌ ಇಂಥ ನಿರ್ಲಜ್ಜತನಕ್ಕೆ ಬಂದಿರೋದು. ಈತನನ್ನು ನಿರ್ಲಕ್ಷ್ಯಿಸುವುದೇ ಉತ್ತಮ.

- ಚಾಮರಾಜ ಸವಡಿ

ವಿ.ರಾ.ಹೆ. said...

ಹೋರಾಟ ಅನ್ನೋದನ್ನ ದೊಂಬರಾಟ ಮಾಡಿ ನಿಜ ಹೋರಾಟದ ಅರ್ಥ ಕಳೆದ ಆಸಾಮಿ ಆತ. ಅವನ ಹೋರಾಟಗಳನ್ನ ದೊಂಬರಾಟಕ್ಕೆ ಹೋಲಿಸಿದ್ರೆ ದೊಂಬರಾಟಕ್ಕೂ ಅವಮಾನ!