Thursday, June 11, 2009

....ಮಾನವೀಯ ಸ್ಪರ್ಶ ಇರಲಿ


[ಕಳೆದ ವರ್ಷ ಜೂನ್ ೧೦ರಂದು ಕಾಣೆಯಾದ ಪದ್ಮಪ್ರಿಯ ಜೂನ್ ೧೫ರಂದು ದೆಹಲಿಯಲ್ಲಿ ಹೆಣವಾಗಿ ಕಾಣಿಸಿದರು.ಆ ಸಂದರ್ಭದಲ್ಲಿ ’ಸುಧಾ’ದಲ್ಲಿ ಪ್ರಕಟವಾಗಿದ್ದ ಲೀಖನ. ಆಕೆಯ ಸಾವು ಇಂದಿಗೂ ನಿಗೂಢ]

ಉಡುಪಿ ಶಾಸಕ ಬಿ.ಜೆ.ಪಿಯ ರಘುಪತಿಭಟ್ಟರ ಪತ್ನಿ ಪದ್ಮಪ್ರಿಯ ಇತ್ತಿಚೆಗೆ ದೆಹಲಿಯಲ್ಲಿ ಆತ್ಮಹತ್ಯೆ ಮಾದಿಕೊಂಡರು.
ತಕ್ಷಣ ನನಗೆ ನೆನಪಿಗೆ ಬಂದದ್ದು ಲಕ್ಶ್ಮಿ. ಆಕೆ ಕಳೆದ ವರ್ಷ ಇದೇ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಕೌಟುಂಬಿಕ ಬದುಕು ಕೂಡ ಚನ್ನಾಗಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಆಕೆ ತನ್ನ ದೊಡ್ಡಪ್ಪನ ಮಗನೊಡನೆ ಕಾಣೆಯಾದಳು. ಒಂದು ವಾರದ ನಂತರ ನನಗೆ ಹಿಮಾಲಯದ ಸೆರಗಿನಿಂದ ೨೪ ಪುಟಗಳ ಡೆತ್ ನೋಟ್ ಕೊರಿಯರಿನಲ್ಲಿ ಬಂತು. ತಕ್ಷಣ ಕಾರ್ಯೋನ್ಮುಖರಾಗಿ ದೆಹಲಿಯಲ್ಲಿ ಅವರಿಬ್ಬರನ್ನು ಪತ್ತೆ ಹಚ್ಚಿ ಇಲ್ಲಿಗೆ ಕರೆತರಲಾಯಿತು. ಅವರಿಬ್ಬರಿಗೂ ಸಾಂತ್ವನ ಹೇಳಿ ಬದುಕಿಗೆ ಭರವಸೆಯನ್ನು ತುಂಬಲೆತ್ನಿಸಿದೆವು. ಆಕೆಯ ಆಪೇಕ್ಷೆಯಂತೆ ಗಂಡನಿಂದ ವಿಛ್ಛೇದನ ಕೊಡಿಸಿ, ಆಕೆಗೊಂದು ನೌಕರಿ, ವಾಸಕ್ಕೆ ಸ್ವಂತ ಪ್ಲಾಟ್, ಕಾರು, ೨೦ ಲಕ್ಷ ನಗದು ನೀಡುವುದೆಂದು ತೀರ್ಮಾನಿಸಲಾಯ್ತು. ಆದರೂ ಮರುದಿನ ಬೆಳಿಗ್ಗೆ ಅವರಿಬ್ಬರೂ ಸಯನೈಡ್ ತಿಂದು ಸತ್ತು ಹೋದರು.

ಅವರಿಗೆ ಬದುಕಬೇಕೆಂಬ ಇಚ್ಚೆಯೇ ಸತ್ತು ಹೋಗಿತ್ತು. ಸಾವನ್ನು ಅವರು ಪ್ರಜ್ನಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದರು.
ಆದರೆ ಮೊನ್ನೆ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪದ್ಮಪ್ರಿಯಳಿಗೆ ಬದುಕು ಬೇಕಾಗಿತ್ತು. ತುಂಬು ಜೀವನಪ್ರೀತಿ ಇಟ್ಟುಕೊಂಡ ಹೆಣ್ಣುಮಗಳು ಆಕೆ. ಆಕೆಗೆ ಇಲ್ಲಿಯ ಬದುಕು ಅಸಹನೀಯವಾಗಿತ್ತು.ಅದಕ್ಕಾಗಿ ಆಕೆ ಹೊಸ ಬದುಕನ್ನು ಕಟ್ಟಿಕೊಳ್ಳಲು ದೆಹಲಿಗೆ ಹೋಗಿದ್ದಳು. ಅದಕ್ಕಾಗಿ ಸಕಲ ಸಿದ್ದತೆಯನ್ನೂ ಮಾಡಿಕೊಂಡಿದ್ದಳು.

ಉಡುಪಿಯನ್ನು ತೊರೆದು ಹೊರಟಾಗ ಆಕೆ ಒಂದಷ್ಟು ದುಡ್ಡು ಡ್ರಾ ಮಾಡಿಕೊಂಡಿದ್ದಳು. ದೆಹಲಿಯಲ್ಲಿ ವಾಸ್ತವ್ಯದ ವ್ಯವಸ್ಥೆ, ಓಡಾಡಲು ಕಾರು, ಹೊಸ ಮೊಬ್ಯೆಲ್ ಸಿಮ್, ನೌಕರಿಯ ಪ್ರಯತ್ನ ಎಲ್ಲವನ್ನೂ ಆಕೆ ಪೂರ್ವಯೋಜನೆಯಂತೆ ಎಚ್ಚರದಿಂದ ಮಾಡಿಕೊಂಡಿದ್ದಳು. ಈ ಪ್ರಕ್ರಿಯೆಯಲ್ಲಿ ಆಕೆಯ ಕುಟುಂಬ ಸ್ನೇಹಿತ ಅತುಲ್ ಆಕೆಗೆ ನೆರವಾಗಿದ್ದಾನೆ.

ಆತ ಆಕೆಗೆ ಯಾಕೆ ನೆರವಾದ? ಆತ ಯಾರು? ಆತ ಆಕೆಯ ಗಂಡನ ಬಾಲ್ಯ ಸ್ನೇಹಿತ. ಹಾಗಾಗಿ ಆತ ಕುಟುಂಬಕ್ಕೆ ಚಿರಪರಿಚಿತ . ತನ್ನ ಸುಖ ದು;ಖಗಳನ್ನು, ಗಂಡನ ಕ್ರಷ್ಣಲೀಲೆಗಳನ್ನು ಆತನಲ್ಲಿ ಸಹಜವಾಗಿ ಆಕೆ ಹೇಳಿಕೊಂಡಿರಬಹುದು. ಅದಕ್ಕೆ ಆತ ಪೂರಕವಾಗಿ ಸ್ಪಂದಿಸಿರಬಹುದು
ಪದ್ಮಪ್ರಿಯಳ ಸಾಂಸಾರಿಕ ಬದುಕಿನಲ್ಲಿ ಬಿರುಕಿತ್ತು. ಗಂಡಹೆಂಡತಿಯರ ನಡುವೆ ಜಗಳಗಳಾಗುತ್ತಿದ್ದವು. ಹಿಂದೆ ಒಂದೆರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಮನೆ ಬಿಟ್ಟು ಹೋಗುವ ಪ್ರಯತ್ನ ಕೂಡ ಮಾಡಿದ್ದಳು. ವಿಛ್ಛೇದನವನ್ನೂ ಬಯಸಿದ್ದಳು ಎಂಬುದನ್ನು ಆಕೆಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಗೆಳೆಯನ ಮಡದಿಯ ತುಮುಲವೆಲ್ಲವನ್ನು ಅತುಲ್ ಹತ್ತಿರದಿಂದ ನೋಡಿದ್ದಾನೆ; ಗಮನಿಸಿದ್ದಾನೆ. ಹಾಗಾಗಿಯೋ ಏನೋ ಆಕೆ ಸಹಾಯ ಯಾಚಿಸಿದಾಗ ಆತ ಮಾನವೀಯ ನೆಲೆಯಲ್ಲಿ ನೆರವು ನೀಡಿರಬಹುದು.ಆಕೆ ಇಲ್ಲಿಂದ ಪಾರಾಗಿ ಹೋಗಲು ಸಹಾಯ ಮಾಡಿರಬಹುದು
ಇದೊಂದು ಊಹೆ. ಆದರೂ ಇದುವೇ ನಿಜಕ್ಕೆ ಹತ್ತಿರವಾದುದು ಅನ್ನಿಸುತ್ತಿದೆ.ಆದರೂ ಆಕೆ ಸತ್ತು ಹೋದಳು ಯಾಕೆ?

ಆಕೆಯದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಬಾಲ್ಯದಲ್ಲಿ ಆದರ್ಶಮಯ ವಾತಾವರಣ. ಇನ್ನೂ ಡಿಗ್ರಿ ಓದುತ್ತಿರುವಾಗಲೇ ಫೆನಾನ್ಶಿಯಲ್ ಕುಳ ರಘುಪತಿಭಟ್ಟರ ಜೊತೆ ಮದುವೆ .ಮದುವೆಯಾದ ಮೇಲೂ ವಿದ್ಯಾಭ್ಯಾಸ ಮುಂದುವರಿಸಿ ಡಿಗ್ರಿ ಪಡೆದಳು.ಡ್ರೈವಿಂಗ್ ಕಲಿತಳು. ಗಂಡನ ಫೈನಾನ್ಶಿಯಲ್ ಕಂಪೆನಿ ನಿಬಾಯಿಸಿದಳು. ಅತ್ತೆ-ಮಾವ, ಬಂದು-ಬಳಗ,ಆಳು-ಕಾಳು,..ಹೀಗೆ ತುಂಬು ಕುಟುಂಬದ ನಡುವೆ ಸದಾ ಚಟುವಟಿಕೆಯಿಂದ ಬಾಳಿದವಳು. ಇದ್ಯಾವುದೂ ತನಗೆ ಬೇಡ ಎಂದು ದೂರದ ದೆಹಲಿಗೆ ಹೋಗಿ ಬದುಕನ್ನು ಕಟ್ಟಿಕೊಳ್ಳಬಯಸಿದ್ದ ಸ್ವಾಭಿಮಾನಿ ಹೆಣ್ಣು ಪದ್ಮಪ್ರಿಯ. ಇಂತಹ ’ಗಟ್ಟಿಗಿತ್ತಿ’ ಹೆಣ್ಣುಮಗಳು ಹೇಗೆ ಕುಸಿದು ಹೋದಳು? ಅವಳ ದ್ರ್ರಢತೆಯನ್ನು ಯಾರು ಅಲುಗಾಡಿಸಿದರು? ಯಾವ ಕಾಣದ ಕೈ ಅವಳ ಜೀವನ ಪ್ರೀತಿಯನ್ನು ಕಸಿದುಕೊಂಡಿತು?

ಎಲ್ಲವೂ ಸರಿಯಗಿತ್ತು; ಅಕೆ ದೆಹಲಿ ತಲುಪುವತನಕ .ಆಕೆ ಬಯಸಿದ್ದ ವಿಛ್ಛೇದನ ಸಿಕ್ಕಿದ್ದರೆ ಅಲ್ಲಿ ನೆಲೆಯೂರಿ ಬೆಳೆಯುತ್ತಿದ್ದಳು.ಆದರೆ ಹಾಗಾಗಲಿಲ್ಲ. ಯಾಕೆ? ಬಹುಶ: ಆಕೆ ದೆಹಲಿಯಲ್ಲಿ ಖರಿದಿಸಿದ್ದ ವಸ್ತುಗಳ ಪ್ಯೆಕಿ ಟಿ.ವಿಯೊಂದು ಇರದಿರುತ್ತಿದ್ದರೆ ಆಕೆ ಬದುಕಿ ಉಳಿಯುತ್ತಿದ್ದಳೋ ಏನೋ!. ಆಕೆಯ ಗಟ್ಟಿ ಮನಸ್ಸನ್ನು ಆಲುಗಾಡಿಸಿದವರು ಮಾಧ್ಯಮಗಳು. ಅದರಲ್ಲೂ ಇಲೆಕ್ಟಾನಿಕ್ ಸುದ್ದಿ ಮಾಧ್ಯಮಗಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ವಾತಾವರಣವನ್ನು ಮಾಧ್ಯಮಗಳು ಮತ್ತು ಪೋಲಿಸ್ ಇಲಾಖೆ ಜಂಟಿಯಾಗಿ ನಡೆಸಿದವು.

ಪದ್ಮಪ್ರಿಯ ವಾಸಿಸುತ್ತಿದ್ದ ಮನೆಯ ಬಾಗಿಲನ್ನು ಒಡೆದು ಪ್ರವೇಶಿಸಿದಾಗ ಟಿ.ವಿ ಚಾಲೂ ಆಗಿತ್ತು.ಆಕೆ ನೇಣಿನ ಕುಣಿಕೆಯಲ್ಲಿ ಚಿರನಿದ್ರೆಯಲ್ಲಿದ್ದರು. ಕನ್ನದದ ಸುದ್ದಿವಾಹಿನಿಯೊಂದು ’ಅತುಲ್ ಬಂಧನ’ ಕರ್ನಾಟಕ ಪೋಲಿಸರು ದೆಹಲಿಯಲ್ಲಿ’ ಎಂಬ ಬ್ರೆಕಿಂಗ್ ನ್ಯೂಸ್ ಪ್ರಸಾರ ಮಾಡುತ್ತಿತ್ತು.
ತನಗಾಗಿ ರಿಸ್ಕ್ ತೆಗೆದುಕೊಂಡ ಅತುಲ್ ಬಂಧನವಾಯ್ತು ಎಂದು ಆ ಜೀವ ತಲ್ಲಣಿಸಿಬಿಟ್ಟಿತೆ? ದೆಹಲಿಗೆ ಪೋಲಿಸರು ಬಂದು ತನ್ನನ್ನೂ ಬಂಧಿಸಿದರೆ? ಅಥವ ತಾನು ಅತ್ಯಂತ ಗಾಢವಾಗಿ ನಂಬಿದ ಅತುಲ್ ವಿಶ್ವಾಸಘಾತುಕನಾದನೆ? ಎಕಕಾಲಕ್ಕೆ ಹಲವಾರು ಸಂದೇಹಗಳು,ಪ್ರಶ್ನೆಗಳು ಅವಳನ್ನು ಕಾಡಿವೆ. ಜೀವ ಕುಸಿದು ಹೋಗಿದೆ. ಆ ನರಕಕ್ಕೆ ಮತ್ತೆ ಹೋಗುವುದಕ್ಕಿಂತ ಸಾವೇ ಲೇಸೆನಿಸಿದೆ

ಆಕೆ ವಾಸವಾಗಿದ್ದ ಪ್ಲಾಟ್ ನ ಬಾಗಿಲು ಒಡೆಯುವುದಕ್ಕಿಂತ ಕೆಲವೇ ಘಂಟೆಗಳ ಮೊದಲು ಆ ಪ್ಲಾಟ್ ಗೆ ಕರ್ನಾಟಕದಿಂದ ಬಂದಿದ್ದ ಮೂರು ಜನ ಪ್ರವೇಶಿಸಿದ್ದರು.ಅದು ಅಲ್ಲಿಯ ರಿಜಿಸ್ಟರ್ ನಲ್ಲಿ ದಾಖಲಾಗಿದೆ. ಅವರು ಯಾರು? ಅವರೇ ಅವಳಿಗೊಂದು ಗತಿ ಕಾಣಿಸಿದರೇ...?

ಈ ಪ್ರಕರಣವನ್ನು ಮಾಧ್ಯಮಗಳು ಅತಿ ರಂಜಿತವಾಗಿ ಲಂಬಿಸಿವೆ. ಅವರಿಬ್ಬರಿಗೂ ಅನ್ಯೆತಿಕ ಸಂಬಂಧವಿತ್ತು ಎಂದು ಬಿತ್ತರಿಸ್ಸಿದ್ದಾರೆ. ಅವರಿಬ್ಬರ ನಡುವೆ ಏನು ಸಂಬಂಧವಿತ್ತೋ ನಮಗೆ ತಿಳಿಯದು. ಆದರೆ ಪುರುಷ ಮನಸ್ಸುಗಳಿಗೆ ಅರ್ಥವಾಗದ ಕೆಲವು ವಿಚಾರಗಳಿರುತ್ತವೆ. ನೀವು ವಿವಾಹಿತರಾಗಿದ್ದರೂ ಮನಸ್ಸು ಮಾಡಿದರೆ ಒಂದು ಹುಡುಗಿಯನ್ನು ಒಲಿಸಿಕೊಳ್ಳಬಹುದು.ಮಕ್ಕಳಿಲ್ಲದ ಪರಸ್ತ್ರೀಯನ್ನೂ ಕಷ್ಟಪಟ್ಟು ತನ್ನವಳಾಗಿಸಿಕೊಳ್ಳಬಹುದು. ಆದರೆ ಒಬ್ಬಳು ತಾಯಿಯನ್ನು ಅಷ್ಟು ಸುಲಭವಾಗಿ ಹಾಸಿಗೆಯೆಡೆಗೆ ಸೆಳೆದುಕೊಳ್ಳಲಾರಿರಿ. ಹಾಗೊಂದು ವೇಳೆ ಆಕೆ ಒಲಿದು ಬಂದರೆ ಅದು ಆಕೆ ಆತನ ಮೇಲೆ ಇಟ್ಟ ಅಚಲ ನಂಬಿಕೆ ಮತ್ತು ವಿಶ್ವಾಸ .ಅದು ಅಕೆಗೆ ಗಂಡನಿಂದ ಸಿಕ್ಕಿರಲಿಕ್ಕಿಲ್ಲ.
ಇಷ್ಟಕ್ಕೂ ಗೆಳೆತನ ವೆಂಬುದು ಸಮಾನಲಿಂಗಿಗಳಲ್ಲಿ ಮಾತ್ರ ಇರಬೇಕೆ?

ಈಗ ಸಾರ್ವಜನಿಕರಿಗೆ ಹಲವು ಗೊಂದಲಗಳಿವೆ. ಅತುಲ್ ನಿಜಕ್ಕೂ ಪದ್ಮಪ್ರಿಯಳಿಗೆ ತೀರಾ ಹತ್ತಿರವಾಗಿದ್ದು ಅವಳ ಗಂಡನ ವಿರುದ್ಧವಾಗಿ ಅಕೆಗೆ ಸಹಾಯ ಮಾಡಿದ್ದರೆ ಆತ ಈಗ ಆಪಾಯದಲ್ಲಿದ್ದಾನೆ. ಈ ಸಹಾಯ ಆಕೆಯ ಪತ್ನಿಗೆ ಗೊತ್ತಿದ್ದರೆ ಸರಿ. ಇಲ್ಲವಾದರೆ ಅವರ ಸಂಸಾರದ ಚೌಕಟ್ಟು ಅಲುಗಾಡಿದಂತೆಯೇ. ಪದ್ಮಪ್ರಿಯಳ ಅಂತರಂಗ ಬಲ್ಲ ಗೆಳೆಯ ಆತ. ಹಾಗಾಗಿ ಪ್ರಕರಣದ ಕುರಿತಾಗಿ ಎದ್ದಿರುವ ಅನೇಕ ಪ್ರಶ್ನೆಗಳಿಗೆ ಅತುಲ್ ಮಾತ್ರ ಉತ್ತರ ನಿಡಬಲ್ಲ. ಖಸಾಗಿಯಿರಬೇಕಾದಂತಹ ವಿಚಾರ ಈಗ ಬೀದಿಗೆ ಬಿದ್ದಿದೆ. ಹಾಗಾಗಿ ಸತ್ಯವನ್ನು ತಿಳಿಯಬೇಕಾದ ಹಕ್ಕು ಜನತೆಗಿದೆ.
ಹಿರಿಯ ಪೋಲಿಸ್ ಅಧಿಕಾರಿ ಶಂಕರಿ ಬಿದರಿ ಈ ಪ್ರಕರಣಕ್ಕೆ ಸರಿಯಾದ ವ್ಯಖ್ಯಾನವನ್ನು ನೀಡಿದ್ದಾರೆ. ’ನನಗೆ ಕಣ್ಣಿದೆ, ಕಿವಿಯಿದೆ ಆದರೆ ಬಾಯಿ ಇಲ್ಲ.’ ಅವರ ಬಾಯಿಯನ್ನು ಕಟ್ಟಿ ಹಾಕಿದವರು ಯಾರು?

ಮಾಲೂರಿನಲ್ಲಿ ಪದ್ಮಪ್ರಿಯ ಮತ್ತು ಅತುಲ್ ಪತ್ತೆಯಾದರು ಎಂಬ ಸುದ್ದಿಯನ್ನು ಮಾಧ್ಯಮದವರಿಗೆ ನೀಡಿದವರು ಯಾರು? ಅದರಿಂದ ಅವರಿಗೇನು ಲಾಭ? ಬಿ.ಜೆ.ಪಿ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಆಗಲೇ ಎರಡು ದುರದೃಷ್ಟಕರ ಘಟನೆಗಳು ನಡೆದಿವೆ. ಅದರಲ್ಲಿ ಪೋಲಿಸ್ ಇಲಾಖೆ ನೇರವಾಗಿ ಭಾಗಿಯಾಗಿದೆ. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರಿಗೆ ಆಜ್ನೆ ಕೊಟ್ಟವರು ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಈಗ ಮಾಲೂರು ಸುದ್ಧಿ ಪ್ಲಾಂಟ್ ಮಾದಿದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.
ಬಿ.ಜೆ.ಪಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ’ ಎಂಬ ವಿರೋಧ ಪಕ್ಷದವರ ಹೇಳಿಕೆಯಲ್ಲಿ ಹುರುಳಿದೆ ಅನಿಸುತ್ತೆ ಅಲ್ವೆ?

ಸುದ್ಧಿವಾಹಿನಿಯ್ಂದು ಹೇಳಿಯೆಬಿಟ್ಟಿತು ಬಿ.ಜೆ.ಪಿಯವರಿಗೆ ಸರ್ಕಾರ ಮಾಡೋಕೆ ಬರೊದಿಲ್ಲ ಎಂಬೊದು ಎಲ್ಲರಿಗೂ ಗೊತ್ತಿದೆ ಇಗ ಸಂಸಾರ ಮಾಡೊಕು ಬರೊದಿಲ್ಲ ಎಂಬುದು ಗೊತ್ತಾಯ್ತು’ ಅರ್ದಘಂಟೆ ಅವಧಿಯ ಈ ಕಾರ್ಯಕ್ರಮದಲ್ಲೆಲ್ಲ ಪದ್ಮಪ್ರಿಯ ಮತ್ತು ಅಕೆಯ ಪ್ರಿಯಕರ ಎಂದೇ ಹೇಳಲಾಗುತ್ತಿತ್ತು. ಓ..ಪ್ರಿಯ..ಪ್ರಿಯಾ’ ಎಂದು ಸ್ಕ್ರೂಲಿಂಗ್ ಬರುತ್ತಿತ್ತು. ಸಾವಿನಲ್ಲೂ ಕ್ರೌರ್ಯವೇ? ಅದಕ್ಕೊಂದು ಘನತೆ ಬೇಡವೇ? ಸ್ಕ್ರೀಪ್ಟ್ ಬರೆದವರು ಮತ್ತು ನಿರೂಪಣೆ ಮಾಡಿದವರು ಹೆಣ್ಣುಮಕ್ಕಳೆಂಬುದು ಇನ್ನೊಂದು ದುರಂತ!

ಒಬ್ಬ ಛಲಗಾತಿ ಮಹಿಳೆಗೆ ಬದುಕು ಬದುಕಲಾರದಷ್ಟು ನಿಕೃಷ್ಟ ಎನಿಸಿದಾಗ,ಕರುಳಬಳ್ಳಿ ಕೂಡ ಈ ಲೋಕದ ಜೊತೆ ಬಂಧಿಸಲಾಗದು ಎನಿಸಿದಾಗ ಮಾನವೀಯ ನೆಲೆಯಲ್ಲಿ ಯುವಕನೊಬ್ಬ ಅವಳಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದು ತಪ್ಪೆ? ಬಿ.ಜೆ.ಪಿ ಪ್ರಣಿತ ಮಾಧ್ಯಮದವರಿಗೆ ’ಆದರ್ಶ್ ಕುಟುಂಬ’ದ ಕಲ್ಪನೆಯೇ ಮುಖ್ಯ.ಆ ಮೂಲಕ ಪರಂಪರಾಗತ ಕುಟುಂಬ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ. ಹುತಾತ್ಮರಾಗುವುದು ಅವರಿಗೆ ಹೆಚ್ಚು ಪ್ರಿಯ.ಸಹಗಮನಕ್ಕೆ ಸತಿಯೇ ಸೂಕ್ತ!
ಪದ್ಮಪ್ರಿಯ ಪ್ರಕರಣದಲ್ಲಿ ಇಡೀ ವ್ಯವಸ್ಥೆಯೇ ಪುರುಷಸಿಂಹನಂತೆ ವರ್ತಿಸಿದೆ. ಮಾಧ್ಯಮಗಳು ಪುರುಷಪರ.ಸರಕಾರ ಪುರುಷಪರ, ಪೋಲಿಸ್ ಪುರುಷಪರ.

ಗಣ್ಯ ವ್ಯಕ್ತಿಯನ್ನು ಮದುವೆಯಾಗಿ ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಮತ್ತು ಹುಡುಕಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಅದು ಗಾಜಿನ ಮನೆ. ಕಲ್ಲು ಹೊಡೆಯುವ ಜನ ಜಾಸ್ತಿ. ಸುಲಭ ಕೂಡ. ಜೋಡಿಸುವುದು ಕಷ್ಟ.
ಈಗಲೂ ಕೂಡ ಮಾಧ್ಯಮಗಳಲ್ಲಿ ಪದ್ಮಪ್ರಿಯಳ ಚಾರಿತ್ಯವಧೆ ಮುಂದುವರಿಯುತ್ತಲೇ ಇದೆ. ಜರ್ನಲಿಸಂನಿಂದ ವ್ರತ್ತಿಪರತೆ ಮತ್ತು ನೈತಿಕತೆ ದೂರವಾಗುತ್ತಿದೆ. ಮುದ್ರಣಮಾಧ್ಯಮವನ್ನು ಜಾಹಿರಾತುಗಳು ನಿರ್ದೇಶಿಸಿದರೆ ದ್ರಶ್ಯಮಾಧ್ಯಮವನ್ನು ಟಿ.ಅರ್.ಪಿ ನಿಯಂತ್ರಿಸುತ್ತದೆ
ಆರಂಭದಲ್ಲಿ ಹೇಳಿದ ಲಕ್ಸ್ಮಿ ಮತ್ತು ಪದ್ಮಪ್ರಿಯ ಗಣ್ಯವ್ಯಕ್ತಿಯರ ಪತ್ನಿಯರಾಗಿರದಿದ್ದಲ್ಲಿ ಹೀಗೆ ದುರಂತ ಕಾಣುತ್ತಿರಲ್ಲಿಲ್ಲ.

ಬದುಕಿನ ಖುಶಿ ಯಾವಗಲೂ ಆ ಕ್ಷಣದ ಸಣ್ಣ ಸಣ್ಣ ಸಂಗತಿಯಲ್ಲಿರುತ್ತದೆ.ಅದನ್ನು ತನ್ನವರೊಂದಿಗೆ ಆನುಭವಿಸಬೇಕು. ಹಿಡಿದಿಟ್ಟುಕೊಳ್ಳಬೇಕು. ಆಪ್ತರೊಂದಿಗೆ ಹಂಚಿಕೊಳ್ಳಬೇಕು. ಇದು ಗಣ್ಯರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಪತ್ನಿಯರು ಒಂಟಿಯಾಗುತ್ತಾರೆ. ಖಿನ್ನರಾಗುತ್ತಾರೆ. ಭಾವನಾತ್ಮಕ ಅಸರೆಗಾಗಿ ಹಾತೊರೆಯುತ್ತಾರೆ.ಅದನ್ನು ಅತುಲ್ ನಂತವರು ಬಳಸಿಕೊಳ್ಳುತ್ತಾರೆ. ನೌಕರಿಯಲ್ಲಿರುವವರು, ಲಲಿತಕಲೆ,ಸಾಮಾಜಿಕಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ತಮ್ಮ ಲ್ಲಿನ ಶೂನ್ಯವನ್ನು ಹೇಗಾದರೂ ತುಂಬಿಸಿಕೊಳ್ಳಬಲ್ಲರು ಆದರೆ ಗ್ರಹಿಣಿ..?

ಗಂಡಂದಿರು ತನ್ನವರಿಗಾಗಿ, ತನ್ನ ಕುಟುಂಬಕ್ಕಾಗಿ ಒಂಚೂರಾದರೂ ಸಮಯ ಮಿಸಲಿಡಲೇಬೇಕಾಗಿದೆ. ಇಲ್ಲವಾದರೆ ಮನೆ ಮನೆಯಾಗಿ ಉಳಿಯಲಾರದು. ಯಾಕೆಂದರೆ ಈಗಿನ ಮಹಿಳೆಯ ಮುಂದೆ ಆನೇಕ ಆಯ್ಕೆಗಳಿವೆ. ಆಕೆ ಎಲ್ಲವನ್ನೂ ಬಿಟ್ಟು ಎದ್ದು ನಡೆಯಬಲ್ಲಳು.
’ನನ್ನದು’ ಆ ಮೂಲಕ ಒಳಗೊಳ್ಳುವ ’ನಮ್ಮದು’ ಎಂಬ ಭಾವವೇ ಮನುಷ್ಯನನ್ನು ಈ ಲೋಕದೊಡನೆ ಬಂಧಿಸುತ್ತದೆ. ಅದು ವ್ಯಯಕ್ತಿಕ ನೆಲೆಯಲ್ಲಿ ಗ್ರಹಿಣಿಯೊಬ್ಬಳ ಬದುಕಿನಲ್ಲಿ ’ಗಂಡ ಮತ್ತು ಮಕ್ಕಳು’ ಆಗಿರುತ್ತಾರೆ. ಅಲ್ಲಿ ಎಲ್ಲವೂ ಸರಿಯಾಗಿದ್ದರೆ ’ನಮ್ಮದು’ ಎಂಬ ಭಾವ. ಇಲ್ಲವಾದರೆ.....?.

3 comments:

Anonymous said...

ಮಾನವೀಯ ಸ್ವಶ೵ ಎಂಬುದು ಬರೀ ಭ್ರಮೆ. ಎಲ್ಲವೂ ಅವರವರ ಅನೂಕೂಲಕ್ಕೆ ತಕ್ಕಂತೆ......

sunaath said...

ಗಂಡ ಮಂತ್ರಿಯಾಗಿರದಿದ್ದರೆ, ಪದ್ಮಪ್ರಿಯಾ ಸುಖವಾಗಿ ಇರುತ್ತಿದ್ದಳೇನೊ?

Sahana said...

yaara ganda manthri?
Bahtta MLA. Acharya mantri ?