Thursday, December 24, 2009

ರೇಣುಕಾಚಾರ್ಯನಿಗೆ ಪಟ್ಟಾಭೀಷೇಕ- ಮಾನವಂತರಿಗಿದು ಕಾಲವಲ್ಲ.




ಅಂತೂ ಇಂತೂ ಹೊನ್ನಾಳಿಯ ರಸಿಕ ಚಕ್ರವರ್ತಿಗೆ ಕಿರೀಟಧಾರಣೆಯಾಯಿತು.
ಬ್ಲಾಕ್ ಮೈಲ್ ರಾಜಕೀಯ ಮೆಲುಗೈ ಪಡೆಯಿತು. ನನಗೆ ತಕ್ಷಣ ನೆನಪಿಗೆ ಬಂದದ್ದು ಕುಮಾರವ್ಯಾಸನ ಸಾಲುಗಳು;
”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ,
ಪರಿವಾರ ಹದ್ದಿನ ನೆರವಿ, ಉರಿ ಉರಿಯುತಿದೆ ದೇಶ,
ಬಡವರ ಬಿನ್ನಪವಿನ್ನಾರು ಕೇಳುವರು......’

ಉತ್ತರ ಕರ್ನಾಟಕದ ಜನ ಕಂಡು ಕೇಳರಿಯದ ನೆರೆ ಹಾವಳಿಯಿಂದ ತತ್ತರಿಸಿ, ಮತ್ತೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರಿಗೆ ಸರಕಾರದ, ಜನಪ್ರತಿನಿಧಿಗಳ ನೆರವಿನ ಹಸ್ತವಿಲ್ಲ. ಸಂತೈಸಬೇಕಾದವರೇ, ಭರವಸೆಯ ಹಸ್ತ ಚಾಚಬೇಕಾದವರೇ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿ ನಗೆ ಪಾಟಲಿಗೆ ಗುರಿಯಾಗುತ್ತಿದ್ದಾರೆ. ಯಡಿಯೂರಪ್ಪ ಮತ್ತವರ ಪರಿವಾರ ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಚಾರಿತ್ರ್ಯ ಹೀನರಾಗುತ್ತಿದ್ದಾರೆ. ಕುದುರೆಗೆ ಕಣ್ಣ ಪಟ್ಟಿ ಕಟ್ಟಿದಂತೆ ದುಡ್ಡು ಬಾಚಿಕೊಳ್ಳುವುದೇ ಎಲ್ಲರ ಗುರಿಯಾಗಿದೆ. ಇದೆಲ್ಲದರ ಪರಿಣಾಮವಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ.
’ಬಡವರ ಬಿನ್ನಪವ ಕೇಳುವವರಿಲ್ಲ’

ಇಂದು ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ರೇಣುಕಾಚಾರ್ಯ ತಮ್ಮ ಬಳಗವನ್ನುದ್ದೇಶಿಸಿ ಮಾತನಾಡುತ್ತಾ, ತಾನು ಹನುಮಂತ ಮುಖ್ಯಮಂತ್ರಿಗಳ ನಮ್ರ ಸೇವಕ ಎಂದು ಹೇಳಿಕೊಂಡರು. ಹೆಂಡ ಕುಡಿದ ಮಂಗ ಎಂದಿದ್ದರೆ ಅವರ ವ್ಯಕ್ತಿತ್ವಕ್ಕೆ ಸರಿಯಾದ ಹೋಲಿಕೆಯಾಗುತ್ತಿತ್ತು.

ಅವರ ಮಾತುಗಳನ್ನು ದೃಶ್ಯ ಮಾಧ್ಯಮದಲ್ಲಿ ನೋಡಿದಾಗ ರಾಮಾಯಣದ ಘಟನೆಯೊಂದು ನೆನಪಿಗೆ ಬಂತು; ರಾವಣನನ್ನು ಕೊಂದು ಸೀತೆಯನ್ನು ಅಯೋಧ್ಯೆಗೆ ಕರೆ ತಂದ ಮೇಲೆ ಕೃತಜ್ನಾಪೂರ್ವಕವಾಗಿ ರಾಮನ ಅರಮನೆಯಲ್ಲಿ ಕಪಿಸೈನಕ್ಕೆ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಭೂರಿಬೋಜನದಲ್ಲಿ ಉಪ್ಪಿನಕಾಯಿಯೂ ಇತ್ತು. ಒಂದು ಮರಿ ಮಂಗ ಅದನ್ನು ಅಂಗೈನಲ್ಲಿ ತೆಗೆದುಕೊಂಡು ಬೆರಳುಗಳಿಂದ ಮಡಚಿ ಒತ್ತಿ ಹಿಡಿದು ಚೀಪಲು ನೋಡಿದಾಗ ಅದರ ಗೊರಟು ಮೇಲಕ್ಕೆ ಹಾರಿತಂತೆ. ತಕ್ಷಣ ಮರಿಮಂಗ ’ನನಗಿಂತ ಎತ್ತರ ಜಿಗಿತಿಯಾ’ ಎಂದು ಊಟ ಬಿಟ್ಟು ಗೊರಟಿಗಿಂತ ಮೇಲಕ್ಕೆ ಜಿಗಿತಂತೆ. ಪಕ್ಕದಲ್ಲಿ ಕೂತ ಇನ್ನೊಂದು ಮಂಗ ಮರಿಮಂಗನ ಜಿಗಿತ ಕಂಡು, ’ನಿನಗಿಂತ ಎತ್ತರಕ್ಕೆ ನಾ ಜಿಗಿಯಬಲ್ಲೆ’ ಎನ್ನುತ್ತಾ ಮೇಲಕ್ಕೆ ಜಿಗಿಯಿತಂತೆ. ಅದನ್ನು ಕಂಡು ಇನ್ನೊಂದು, ಮಗದೊಂದು ಎನ್ನುತ್ತಾ ಊಟದ ಪಂಕ್ತಿಯಲ್ಲಿದ್ದ ಎಲ್ಲಾ ಮಂಗಗಳೂ ಲಾಗ ಹೊಡೆಯತೊಡಗಿದವಂತೆ. ಕೊನೆಗೆ ಹನುಮಂತನೂ ಇವರಲ್ಲಿ ಸೇರಿಕೊಂಡನಂತೆ.

’ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗದು.’ ಪಾಳೆಗಾರಿಕೆ ಗುಣಗಳನ್ನು ರಕ್ತಗತವಾಗಿಸಿಕೊಂಡಿರುವ ರೆಡ್ಡಿ ಬಳಗ, ಪುರುಷ ಪ್ರಾಧಾನ್ಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಬಿಜೆಪಿ ಸರಕಾರ, ಸಿಕ್ಕಷ್ಟು ಬಾಚಿಕೊಳ್ಳೋಣ ಎನ್ನುವ ಆಸೆಬುರುಕ ಜನಪ್ರತಿನಿಧಿಗಳು- ಮಾನವಂತರಿಗಿದು ಕಾಲವಲ್ಲ.

3 comments:

ಪುರುಷೋತ್ತಮ ಬಿಳಿಮಲೆ said...

ಕರ್ನಾಟಕದ ಜನತೆಯ ದೌರ್ಭಾಗ್ಯ!

sunaath said...

ಇದು ಕಲಿಗಾಲ!

Guruprasad said...

ಹೌದು, ತುಂಬ ದುರಾದೃಷ್ಟ, ಬಿಜೆಪಿ ಸರಕಾರ ಅಂದ್ರೆ ಏನೋ expectation ಇಟ್ಟುಕೊಂಡು ಇದ್ವಿ... ಆದರೆ.. ಇಸ್ತೊಂದ್ ಅಸಹ್ಯ ಅಂತ ಗೊತ್ತಿರಲಿಲ್ಲ