Wednesday, February 10, 2010

’ರಣ್’ ಮಾಧ್ಯಮಕ್ಕೆ ಹಿಡಿದ ಕನ್ನಡಿ




ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡದೆ ವರ್ಷಗಳೇ ಆಗಿತ್ತು. ’ರಣ್’ ಸುದ್ದಿ ಚಾನಲ್ ಗಳ ನಡುವಿನ ರಣಾಂಗವೆಂದು ಪ್ರಚಾರ ಪಡೆದಿತ್ತು. ನಮ್ಮಲ್ಲೂ ಎರಡು ಸುದ್ದಿ ಚಾನಲ್ ಗಳ ನಡುವೆ ಟಿಆರ್ ಪಿ ಸಮರ ಇದೆಯಲ್ಲ! ಅಲ್ಲದೆ ನಮ್ಮ ಸುದೀಪ್, ಅಮಿತಾಭ್ ಎದುರು ಹೇಗೆ ನಟಿಸಿರಬಹುದೆಂಬ ಕುತೂಹಲ. ಪೂರ್ವಾಶ್ರಮದ ಸೆಳೆತ ಬೇರೆ. ರಾಮ್ ಗೋಪಾಲವರ್ಮರ ’ರಣ್’ ಸಿನಿಮಾಕ್ಕೆ ಹೋದೆ.

ವಿಜಯ್ ಹರ್ಷವರ್ಧನ್ ಮಲಿಕ್ [ಅಮಿತಾಭ್] ಸುದ್ದಿ ಚಾನಲ್ಲೊಂದರ ಮಾಲಿಕ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪ್ರಜಾಪ್ರಭುತ್ವವನ್ನು ರಕ್ಷಿಸುವ ಮೂರು ಸ್ತಂಭಗಳು. ಪತ್ರಿಕೋಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಯಲಾಗುತ್ತದೆ. ಅದಕ್ಕೆ ಸಾಮಾಜಿಕ ಹೊಣೆಗಾರಿಕೆಯಿರುತ್ತದೆ. ಅದನ್ನು ನಂಬಿದವನು ವಿಜಯ್. ಆತನ ದೃಷ್ಟಿಯಲ್ಲಿರುವುದು ಜನ ಸಾಮಾನ್ಯರು. ಆತನ ಮಟ್ಟಿಗೆ ಸುದ್ದಿಯೆನ್ನುವುದು ಸತ್ಯಸೋಧನೆ.

ವಿಜಯ್ ನ ಪ್ರತಿಸ್ಪರ್ಧಿ ಚಾನಲ್ ಮಾಲೀಕ ಮೊಹನೀಶ್ ಬೆಹ್ಲ್ [ಪಾತ್ರದ ಹೆಸರು ನೆನಪಾಗುತ್ತಿಲ್ಲ]. ವಿಜಯ್ ಗರಡಿಯಲ್ಲಿ ಪಳಗಿದವನಾದರೂ ಈತನಿಗೆ ಪತ್ರಿಕೋಧ್ಯಮದ ಮೌಲ್ಯಗಳು ಮುಖ್ಯವಲ್ಲ, ಟಿಆರ್ ಪಿ ಮುಖ್ಯ. ಅದಕ್ಕಾಗಿ ಆತ ಸುದ್ದಿವಾಚಕರಿಗೆ ಕನಿಷ್ಟ ಉಡುಗೆ ಹಾಕಲು ಸೂಚಿಸುತ್ತಾನೆ.ಸುದ್ದಿಯನ್ನು ವೈಭವಿಕರಿಸುತ್ತಾನೆ; ಮಸಾಲೆ ಬೆರೆಸುತ್ತಾನೆ. ಹಾಗಾಗಿ ಟಿಅರ್ ಪಿ ಲಿಸ್ಟ್ ನಲ್ಲಿ ಸದಾ ನಂ೧. ಆದರೆ ನ್ಯೂಸ್ ಕ್ರೆಡಿಬಿಲಿಟಿಯನ್ನು ಉಳಿಸಿಕೊಂಡಿರುವುದು ವಿಜಯ್ ಚಾನಲ್.

ವಿಜಯ್ ಮಗ ಜಯ್. ಆ ಪಾತ್ರವನ್ನೇ ನಮ್ಮ ಕನ್ನಡದ ಹುಡುಗ ಸುಧಿಪ್ ಮಾಡಿರೊದು. ಪತ್ರಿಕೋದ್ಯಮವನ್ನು ವಿದೇಶದಲ್ಲಿ ಓದಿ ಬಂದವನು. ಆತ ತಮ್ಮ ಚಾನಲ್ ಅನ್ನು ನಂ೧ ಚಾನಲ್ ಮಾಡಲು ಹೊರಡುತ್ತಾನೆ. ಆತ ಮಹಾತ್ವಾಕಾಂಕ್ಷಿ. ಮಹಾತ್ವಾಕಾಂಕ್ಷಿಗಳಿಗೆ ಗುರಿ ಮುಟ್ಟುವುದೇ ಮುಖ್ಯ. ದಾರಿ ಮುಖ್ಯವಲ್ಲ. ಅವನ ಭಾವ ಪ್ರಭಾವಿ ವಾಣಿಜ್ಯೋದ್ಯಮಿ-ಅಮಿತಾಬ್ ಅಳಿಯ-ರಜತ್ ಕಪೂರ್[ಪಾತ್ರದ ಹೆಸರು ನೆನಪಿಲ್ಲ] ಅವನನ್ನು ವಿರೋಧ ಪಕ್ಷದ ನಾಯಕ ಮೋಹನ ಪಾಂಡೆಗೆ ಪರಿಚಯಿಸುತ್ತಾನೆ. ಆತನಿಗಾದರೋ ಪ್ರಧಾನ ಮಂತ್ರಿ ಗಾದಿಯ ಮೇಲೆ ಕಣ್ಣು. ಆತ ’ಸುದ್ದಿಯನ್ನು ಹುಡುಕುವುದಲ್ಲ; ಸೃಷ್ಟಿಸಬೇಕು’ ಎಂದು ನಕಲಿ ಸ್ಟಿಂಗ್ ಆಪರೇಷನ್ ಐಡಿಯಾ ಕೊಡುತ್ತಾನೆ. ವಿಜಯ್ ಅದನ್ನು ಕಾರ್ಯರೂಪಕ್ಕೆ ತರುತ್ತಾನೆ.

ಸ್ಟಿಂಗ್ ಅಪರೇಷನ್ ಚಾನಲ್ ನಲ್ಲಿ ಪ್ರಸಾರವಾಗುತ್ತದೆ[ ನಿಮಗೆ ಟಿವಿ೯ ನೆನಪಾಯಿತೇ?] ಸ್ವತಃ ವಿಜಯ್ ಸುದ್ದಿ ವಿಶ್ಲೇಷಣೆ ಮಾಡುತ್ತಾರೆ. ಪರಿಣಾಮವಾಗಿ ದಕ್ಷ ಪ್ರಧಾನಮಂತ್ರಿ ಕೆ.ಕೆ.ರೈನಾ ರಾಜಿನಾಮೆ ಕೊಡಬೇಕಾಗುತ್ತದೆ. ಟಿಆರ್ ಪಿ ಸಡನ್ನಾಗಿ ಏರಿ ನಂ೧ ಪಟ್ಟ ಸಿಕ್ಕಿ ಬಿಡುತ್ತದೆ. ಜಯ್ ಗೆ ಮಾಧ್ಯಮ ಪ್ರಶಸ್ತಿಯೂ ದೊರೆಯುತ್ತದೆ. ಆದರೆ ವಿಜಯನ ಆದರ್ಶಗಳನ್ನು ಮೆಚ್ಚಿ ಅವರಲ್ಲಿಗೆ ಬಂದು ಕೆಲಸಕ್ಕೆ ಸೇರಿಕೊಂಡ ಯುವ ಪತ್ರಕರ್ತ ಪೂರಭ್ [ಭೂಮಿಕೆ ನಿಭಾಯಿಸಿದ್ದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರಮಂತ್ರಿ ವಿಲಾಶ್ ರಾವ್ ದೇಶ್ ಮುಖ್ ಮಗ ರಿತೇಶ್ ದೇಶ್ ಮುಖ್] ಈ ವಿದ್ಯಾಮಾನಗಳಿಂದ ಭ್ರಮನಿರಸಗೊಳ್ಳುತ್ತಾನೆ. ತಾನೇ ಸ್ಟಿಂಗ್ ಅಪರೇಷನ್ನಿನ ಪೂರ್ವಾಪರ ತನಿಖೆ ಮಾಡಿ ಸಿಡಿ ತಯಾರಿಸುತ್ತಾನೆ. ತನ್ನ ಚಾನಲ್ ನಲ್ಲಿ ಇದು ಪ್ರಸಾರವಾಗದೆಂದು ಎದುರಾಳಿ ಚಾನಲ್ ಮೊಹನೀಶ್ ಬೆಹ್ಲ್ ಬಳಿ ಹೋಗುತ್ತಾನೆ. ಆತ ಅದನ್ನು ಪ್ರಸಾರ ಮಾಡದೆ ಪಾಂಡೆಯೊಡನೆ ೫೦೦ ಕೋಟಿಗೆ ಡೀಲ್ ಕುದುರಿಸಿ,ಅದನ್ನು ಪೂರಭ್ ನೆದುರು ಹೆಮ್ಮೆಯಿಂದ ಹೇಳಿಕೊಂಡು ಆತನಿಗೂ ೧೦ ಕೋಟಿ ಕೊಡುವುದಾಗಿ ಹೇಳುತ್ತಾನೆ. ಪೂರಭ್ ಅದನ್ನೆಲ್ಲಾ ಚಿತ್ರಿಸಿಕೊಂಡು ತಂದು ಅಮಿತಾಭ್ ಕೈಗೆ ಕೊಟ್ಟು ಹೊರಟು ಹೋಗುತ್ತಾನೆ.

ಸಿಡಿ ನೋಡಿ ಅಮಿತಾಭ್ ದಿಗ್ಮೂಢನಾಗುತ್ತಾನೆ. ಅತ್ತ ಪಾಂಡೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ಇತ್ತ ಅಮಿತಾಭ್ ವೀಕ್ಷಕರ ಕ್ಷಮೆ ಯಾಚಿಸುತ್ತ ತನ್ನ ಚಾನಲ್ ನಲ್ಲಿ ಈ ಷಡ್ಯಂತ್ರದ ಎಳೆ ಎಳೆಯನ್ನೂ ಬಿಚ್ಚಿಡುತ್ತಾನೆ. ಪ್ರಮಾಣ ವಚನ ಸಮಾರಂಭ ನಡೆಯುವುದಿಲ್ಲ. ಆದರೆ ಅವಮಾನಿತನಾದ ಜಯ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ವಿಜಯ್ ಚಾನಲ್ ಜವಾಬ್ದಾರಿಯನ್ನು ಪೂರಭ್ ಗೆ ವಹಿಸಿಕೊಟ್ಟು ತಾನು ನಿವೃತ್ತನಾಗುತ್ತಾನೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮ ತನ್ನ ಸಿನೆಮಾದ ಬಗ್ಗೆ ಹೇಳಿಕೊಂಡದ್ದು ಹೀಗೆ; ಇದು ಮೀಡಿಯಾ ಬಗ್ಗೆ ನನ್ನ ಕಮೆಂಟ್ ಅಲ್ಲ. ಮೀಡಿಯಾ ಹೀಗೆಯೇ ಇರಬೇಕೆಂದು ನಾನು ಹೇಳಲಾರೆ. ನಾನು ಮಿಡಿಯಾವನ್ನು ಕಂಡಂತೆ , ಅರ್ಥ ಮಾಡಿಕೊಂಡಂತೆ ಸಿನೆಮಾ ಮಾಡಿದ್ದೇನೆ.

ಸಧ್ಯದ ಪರಿಸ್ಥಿತಿಯನ್ನು ನೋಡಿದರೆ ವರ್ಮ ಮೀಡಿಯವನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದಾರೆಂದು ಅನ್ನಿಸುತ್ತದೆ. ಜಯ್ ನನ್ನು ಮಹಾತ್ವಾಕಾಂಕ್ಷಿಯಾದ ರೆಸ್ಟ್ಲೆಸ್ ಪತ್ರಕರ್ತನನ್ನಾಗಿ ಚಿತ್ರಿಸಿದ್ದಾರೆ. ಕೆಲವೊಮ್ಮೆ ವಾಚಾಳಿಯನ್ನಾಗಿ ಮಾಡಿದ್ದಾರೆ. ನಮ್ಮ ವಿಷುವಲ್ ಮೀಡಿಯಾದ ಬಹುತೇಕ ಪತ್ರಕರ್ತರು ತೆರೆಯ ಮೇಲೆ ಕಾಣಿಸಿಕೊಳ್ಳುವುದೇ ಹಾಗೆ.ಆತನ ವಿಕ್ಷಿಪ್ತ ವ್ಯಕ್ತಿತ್ವವನ್ನು ಅವನ ಮ್ಯಾನರಿಸನಲ್ಲಿ ತೋರಿಸಿದ್ದಾರೆ. ಆತನ ಕೈಯಲ್ಲೊಂದು ಸಿಗರ್ಲೈಟ್ ಕೊಟ್ಟು ಅದನ್ನು ಆತ ಮುಚ್ಚಿ ತೆರೆಯುವ ರೀತಿಯಲ್ಲೇ ಆತನ ಮನಸ್ಸು ಪ್ರತಿಫಲಿಸುವಂತೆ ಮಾಡಿದ್ದಾರೆ. ಅಮಿತಾಭ್ ನಂಥ ಅಭಿಜಾತ ಕಲಾವಿದನೆದುರು ಸುದೀಪ್ ಕಷ್ಟಪಟ್ಟು ಅಭಿನಯಿಸಿದಂತೆ ಭಾಸವಾಗುತ್ತದೆ. ಆದರೆ ಮೌನದಲ್ಲಿ ಗೆಲ್ಲುತ್ತಾರೆ.

ಸಿನೆಮಾ ನೋಡುತ್ತಿರುವಾಗಲೇ ನಿಮಗೆ ಇತ್ತೀಚೆಗೆ ನಡೆದ ’ಅಪರೇಷನ್ ಸುವರ್ಣ’ ನೆನಪಿಗೆ ಬರುತ್ತದೆ. ಜೋಕರ್ ಗಳಗಬೇಕಾದವರು [ರಾಜಪಾಲ್ ಯಾದವ್ ಪಾತ್ರ ], ಜ್ಯೋತಿಷಿಗಳಬೇಕಾದವರು ಗಂಭೀರ ಪತ್ರಕರ್ತರಾಗುತ್ತಿರುವುದು ನೆನಪಾಗಬಹುದು. ಪ್ರಿಂಟ್ ಮೀಡಿಯಾದ ಕೆಲವರು ಸೈಡ್ ವಿಂಗ್ ನಲ್ಲಿ ಕಾಣಿಸಿಕೊಳ್ಳಲೂಬಹುದು. ಸಕ್ಕರೆ ಕಾರ್ಖಾನೆ ಮಾಲೀಕರು, ಗಣಿಧನಿಗಳು ಪತ್ರಕರ್ತರನ್ನು ಪರ್ಚೇಸ್ ಮಾಡುತ್ತಿರುವುದು ನೆನಪಿಗೆ ಬಂದರೂ ಬರಬಹುದು! ಸುದ್ದಿಯ ವೈಭವಿಕರಣದಲ್ಲಿ ನಿಮಗೆ ಏನೇನೋ ನೆನಪಾಗಬಹುದು.

ನಾನು ಸಿನೆಮಾ ನೋಡಿದ್ದು ವೀರೇಶ್ ಚಿತ್ರ ಮಂದಿರದಲ್ಲಿ. ಅಲ್ಲಿಯ ಸೌಂಡ್ ಸಿಸ್ಟಮ್ ದೇವರಿಗೇ ಪ್ರೀತಿ! ಆದರೆ ಚಿತ್ರದ ಆರಂಭದಲ್ಲಿ ಬರುವ ರಾಷ್ಟ್ರಗೀತೆಗೆ ಇಡೀ ಚಿತ್ರಮಂದಿರವೇ ಎದ್ದು ನಿಂತು ಗೌರವ ತೋರಿಸಿದ್ದು ನಿಜಕ್ಕೂ ನಂಗೆ ಖುಷಿ ಕೊಟ್ಟಿತು.

3 comments:

sunaath said...

ಒಳ್ಳೆಯ ವಿಮರ್ಶೆಗಾಗಿ ಧನ್ಯವಾದಗಳು.

ESSKAY said...

ಮೊಹನೀಶ್ ಬೆಹಲ್ ಪಾತ್ರದ ಹೆಸರು - ಅಮ್ರೀಷ್ ಕಕ್ಕರ್
ಸುಚಿತ್ರಾ ಕ್ರಿಷ್ಣಮೂರ್ತಿ ಪಾತ್ರದ ಹೆಸರು - ನಲಿನಿ ಕಷ್ಯಪ್
ರಜತ್ ಕಪೂರ್ ಪಾತ್ರದ ಹೆಸರು - ನವೀನ್ ಶಂಕಾಲ್ಯ


ಒಳ್ಳೆಯ ವಿಮರ್ಶೆ.

ESSKAY said...

ಒಳ್ಳೆಯ ವಿಮರ್ಶೆ.

ಮೊಹನೀಶ್ ಬೆಹಲ್ ಪಾತ್ರದ ಹೆಸರು - ಅಮ್ರೀಷ್ ಕಕ್ಕರ್
ಸುಚಿತ್ರಾ ಕ್ರಿಷ್ಣಮೂರ್ತಿ ಪಾತ್ರದ ಹೆಸರು - ನಲಿನಿ ಕಷ್ಯಪ್
ರಜತ್ ಕಪೂರ್ ಪಾತ್ರದ ಹೆಸರು - ನವೀನ್ ಶಂಕಾಲ್ಯ