Saturday, May 29, 2010

ಸುಚೇಂದ್ರಪ್ರಸಾದರ ’ಪ್ರಪಾತ’ಕ್ಕೆ ಹರಿದು ಬಂದ ತೊರೆಗಳು





ಅನ್ನವನ್ನು ಅರಸಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಹೋದ ನನ್ನೂರ ಜನರನ್ನು ತವರೂರಿಗೆ ಹೊತ್ತು ತರುತ್ತಿದ್ದ ವಿಮಾನ ಮೇ ೨೨ರ ಶನಿವಾರ ಬೆಳಿಗ್ಗೆ ಬಜ್ಪೆ ಸಮೀಪದ ಕೆಂಜಾರು ಗುಡ್ಡದ ೩೦೦ ಅಡಿ ಪ್ರಪಾತಕ್ಕೆ ಬಿದ್ದು ಹೊತ್ತಿ ಉರಿಯಿತು. ೬ ಸಿಬ್ಬಂದಿ, ೧೮ ಕಂದಮ್ಮಗಳು ಸೇರಿದಂತೆ ೧೫೮ ಜನ ಉರಿದು ಕರಕಲಾದರು. ೮ ಜನ ಅದೃಷ್ಟವಂತರು ಬದುಕುಳಿದರು.

ಮೃತ್ಯು ಬಂದು ಅಪ್ಪಳಿಸಿದ ಪರಿಯನ್ನು, ಆಪ್ತರ ಆಕ್ರಂದನವನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿ ಭಾರವಾದ ಮನಸ್ಥಿತಿಯಲ್ಲಿರುವಾಗಲೇ ಗೆಳತಿ ಸುಧಾಶರ್ಮ ಚವತ್ತಿ ಪೋನ್ ಮಾಡಿ ಮರುದಿನ ಸುಚೇಂದ್ರಪ್ರಸಾದರ ’ಪ್ರಪಾತ’ದ ಶೋ ಇದೆ ಹೋಗೋಣ್ವಾ? ಎಂದರು.

ಒಂದು ಪ್ರಪಾತದಿಂದ ಇನ್ನೊಂದು ಪ್ರಪಾತಕ್ಕೆ ಯಾನ ಮಾಡಲು ಮನಸ್ಸನ್ನು ಸಿದ್ಧ ಮಾಡಿಕೊಳ್ಳತೊಡಗಿದೆ. ನಟ ಸುಚೇಂದ್ರಪ್ರಸಾದ್ ರಂಗಭೂಮಿಯ ಹಿನ್ನೆಲೆಯೆಯವರು. ರಂಗಭೂಮಿ ಎಂಬುದು ಎಲ್ಲಾ ಕಲೆಗಳ, ಇನ್ನೊಂದರ್ಥದಲ್ಲಿ ಎಲ್ಲಾ ತೆವಲುಗಳ ಸಂಗಮ ಸ್ಥಳ. ಹಾಗಾಗಿ ಅವರ ಸಾಹಸವನ್ನೊಮ್ಮೆ ನೋಡೋಣವೆಂದುಕೊಂಡು ಭಾನುವಾರ ಮಧ್ಯಾಹ್ನ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಿಜಾಯ್ಸ್ ಗೆ ಹೋದೆ.

ಭಾರದ್ವಾಜ ಮುನಿ ಸಂಸ್ಕೃತದಲ್ಲಿ ಬರೆದಿರುವ ವೈಮಾನಿಕ ಶಾಸ್ತ್ರ ಕುರಿತಾದ ’ಯಂತ್ರ ಸಾರಸ್ವ’ ಕ್ಕೆ ಭಾಷ್ಯವನ್ನು ಬರೆದಿರುವ ಅನೇಕಲ್ ಸುಬ್ಬರಾಯ ಶಾಸ್ತ್ರಿ ಕುರಿತಾದ ಚಿತ್ರ ’ಪ್ರಪಾತ’. ಹಾಗೆಂದು ಅದು ಸಾಕ್ಷ್ಯ ಚಿತ್ರವಲ್ಲ. ಸಾಕ್ಷ್ಯ ಚಿತ್ರದಂತೆ ಆರಂಭಗೊಂಡರೂ ಮುಂದೆ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಾ ಎರಡು ಗಂಟೆಗಳ ಪೂರ್ಣ ಪ್ರಮಾಣದ ಚಲನಚಿತ್ರವಾಗಿ ರೂಪಾಂತರ ಪಡೆದಿದೆ. ಇಂತಹ ಚಿತ್ರವನ್ನು ನಿರ್ಮಿಸುವ ಸಾಹಸ ಮಾಡಿದವರು ಮಾರುತಿ ಎಸ್ ಜಡಿ ಅವರ್.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರು ತಾಲೂಕಿನಲ್ಲಿ೧೮೧೬ರಲ್ಲಿ ಜನಿಸಿದ ಶಾಸ್ತ್ರಿಗಳು ’ಯಂತ್ರ ಸಾರಸ್ವ’ ವನ್ನು ಅಧ್ಯಯನ ಮಾಡಿ ೧೯೦೩ರಲ್ಲೇ ಸ್ವದೇಶಿ ನಿರ್ಮಿತ ವಿಮಾನವನ್ನು ಉಡಾಯಿಸಿದ್ದರೆಂಬ ಪ್ರತಿತಿಯಿದೆ. ಕೇವಲ ಒಂದೇ ಶತಮಾನದಲ್ಲಿ ಐತಿಹ್ಯವಾಗಿ ನಂತರ ದಂತಕಥೆಯಾಗಿ ವಿಸ್ಮೃತಿಗೆ ಸಂದಿದ ಸಾಧಕರಿವರು.

ಇಂಥ ಸಾಧಕರನ್ನು’ ಅವರ ಸಾಧನೆಯನ್ನು ಅನ್ವೇಶಕ ದೃಷ್ಟಿಯಿಂದ ನೋಡಿದ್ದಾರೆ ನಿರ್ದೇಶಕ ಸುಚೇಂದ್ರಪ್ರಸಾದ್. ಶಾಸ್ತ್ರೀಯಂಥ ಮೇರುಸದೃಷ ವ್ಯಕ್ತಿತ್ವದವರನ್ನು ಮತ್ತವರ ಸಾಧನೆಯನ್ನು ನಾವು ಪ್ರಪಾತದಲ್ಲಿ ನಿಂತು ನೋಡುತ್ತಿದ್ದೇವೆ. ಅಥವ ಅವರ ಜ್ನಾನದ ಆಳವನ್ನು ಶಿಖರದ ತುದಿಯಲ್ಲಿ ನಿಂತು ನೋಡುತ್ತಿದ್ದೇವೆ. ಅದು ಬೌದ್ಧಿಕತೆಯ ಪ್ರಪಾತ ಎಂಬುದು ಪ್ರಸಾದ್ ಗ್ರಹಿಕೆ.

ಅಪರೂಪಕ್ಕೆ ಆ ಜ್ನಾನಶಿಖರಗಳನ್ನು ಮುಟ್ಟುವ ಪ್ರಯತ್ನ ಮಾಡಿದವರು ಆ ಜ್ನಾನವನ್ನು ಬೇರೆಯವರಿಗೂ ಹಂಚದೆ ತಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳುವ ಪ್ರಯತ್ನಿಸುತ್ತಾರೆ; ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಅಲ್ಪರಂತೆ ವರ್ತಿಸುತ್ತಾರೆ. ಇಂಥ ಅರೆಬೆಂದವರ ಪಾತ್ರದಲ್ಲಿ ದತ್ತಣ್ಣ, ಕೃಷ್ಣ ಅಡಿಗ, ಶಿವರಾಂ, ವಿದ್ಯಾಮೂರ್ತಿ, ಸೇತುರ್‍ಆಂ ಪಾತ್ರದ ಒಳಹೊಕ್ಕು ಅಭಿನಯಿಸಿದ್ದಾರೆ. ಮಾತ್ರವಲ್ಲ ವರ್ತಮಾನದಲ್ಲಿರುವ ಹಲವರನ್ನು ಅನುಕರಣೆ ಮಾಡಿದ್ದಾರೆ. ಅನ್ವೇಶಕನ ಪಾತ್ರದಲ್ಲಿ ಅಮಾನ್ ಅವರದು ಸಂಯಮದ ಅಬಿನಯ. ಆತನ ವಿದ್ಯಾರ್ಥಿ ಮಿತ್ರನ ಪಾತ್ರದಲ್ಲಿರುವ ಸಂತೋಷ್, ಅಡಿಗರ ’ವರ್ಧಮಾನ’ ಕವನದ ನಾಯಕನನ್ನು ನೆನಪಿಸುತ್ತಾರೆ. ಕೆ.ಎಸ್.ಎಲ್ ಸ್ವಾಮಿ, ಸ್ರೀನಿವಾಸಪ್ರಭು ಸೇರಿದಂತೆ ಪ್ರತಿಯೊಬ್ಬರದ್ದೂ ಸಹಜಾಭಿನಯ. ಚಿತ್ರದ ಒಟ್ಟಂದಕ್ಕೆ ಶಶಿಧರ್.ಕೆ ಅವರ ಕ್ಯಾಮರ ವರ್ಕ್ ಮತ್ತು ಎಡಿಟರ್ ಗಳಾದ ಲಿಂಗರಾಜು ಮತ್ತು ನಾಗೇಶ್ ರ ಕಾಣಿಕೆ ದೊಡ್ಡದು.

’ಪ್ರಪಾತ’ದಲ್ಲಿ ನಿರ್ದೇಶಕರ ಪ್ರತಿಭೆ ಚಿಕ್ಕಚಿಕ್ಕ ಶಶಕ್ತ ತೊರೆಗಳಾಗಿ ಪ್ರಪಾತಕ್ಕೆ ಹರಿದಿದೆ-ಆಹ್ವಾನಿತ ಪ್ರೇಕ್ಷಕರು ಕೂಡಾ ತೊರೆಗಳಾಗಿ ಹರಿದು ಬಂದಿದ್ದಾರೆ. ಆದರೆ ಅವೆಲ್ಲಾ ಒಂದಾಗಿ ಜೀವನದಿಯಾಗಿ ಹರಿದ ಅನುಭವವಾಗುವುದಿಲ್ಲ. ಅದರೂ ಇಷ್ಟೆಲ್ಲಾ ಚಿಂತನೆಗೆ, ವಾದಕ್ಕೆ, ಊಹೆಗೆ ಕಾರಣವಾದ ಈ ಚಿತ್ರವನ್ನು ಖಂಡಿತವಾಗಿಯೂ ಒಮ್ಮೆ ನೋಡಬಹುದು. ಸಧ್ಯದಲ್ಲಿಯೇ ನಿರ್ಧೇಶಕರು ಇದರ ಇನ್ನೊಂದು ಪ್ರದರ್ಶನವನ್ನು ಏರ್ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

[ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾದ ಬರಹ ]





0 comments: