Monday, July 5, 2010

ಮಾಧ್ಯಮಗಳಲ್ಲಿ ಮಹಾ ಕಾವ್ಯಗಳ ಮರು ಓದು




ಮಹಾ ಕಾವ್ಯಗಳು ಸೃಜನಶೀಲ ಮನಸ್ಸುಗಳನ್ನು ಮತ್ತೆ ಮತ್ತೆ ಕಾಡುತ್ತವೆ; ಕೆಣಕುತ್ತವೆ; ಅವರ ಕಲ್ಪನೆಯ ಮೂಸೆಯಲ್ಲಿ ರೂಪಾಂತರ ಹೊಂದುತ್ತವೆ. ಭಾರತೀಯ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳು ಅಂಥ ಬತ್ತದ ಕಣಜಗಳು. ಪ್ರಕಾಶ ಝಾ ಮತ್ತು ಮಣಿರತ್ನರು ಆ ಕಣಜಕ್ಕೆ ಕೈ ಹಾಕಿ ’ರಾಜನೀತಿ’ ಮತ್ತು ’ರಾವಣ’ ಎಂಬ ಸಿನೇಮಾಗಳನ್ನು ತಯಾರಿಸಿದ್ದಾರೆ.ಅದ್ದೂರಿ ಪ್ರಚಾರದೊಂದಿಗೆ ತೆರೆ ಕಂಡ ಈ ಚಿತ್ರಗಳು ನಿರೀಕ್ಷೆಯ ಯಶಸ್ಸನ್ನು ಕಾಣಲಿಲ್ಲ. ಮಹಾಕಾವ್ಯದ ಹರಹನ್ನು ಹೊಂದಿರುವ ಕುವೆಂಪುರವರ ಕಾದಂಬರಿ ’ಮಲೆಗಳಲ್ಲಿ ಮದುಮಗಳು’ ಕೂಡಾ ರಂಗ ಪ್ರಯೋಗವಾಗಿ ದಾಖಲೆಯಾಯಿತೇ ಹೊರತು ಯಶಸ್ಸನ್ನು ಕಾಣಲಿಲ್ಲ ಎಂದು ನಾಟಕ ನೋಡಿದವರ ಬಾಯಿಂದ ಕೇಳಿದ್ದೇನೆ.

ಯಾಕೆ ಹೀಗೆ? ಜನ ಮಾನಸದಲ್ಲಿ ನೆಲೆ ನಿಂತಿರುವ ಕಥೆ/ಕೃತಿಯೊಂದನ್ನು ಇನ್ನೊಂದು ಮಾಧ್ಯಮಕ್ಕೆ ಅಳವಡಿಸಿದಾಗ ಪ್ರೇಕ್ಷಕ ಪೂರ್ವನಿರ್ಧಾರಿತ ಮನಸ್ಸಿನೊಂದಿಗೆ ಅದನ್ನು ನೋಡಲು ಬರುತ್ತಾನೆ. ಆತ ಮೂಲ ಕೃತಿಯೊಡನೆ ಇದನ್ನು ಹೊಲಿಸಿ ನೋಡುತ್ತಾನೆ. ನಿರ್ದೇಶಕ ಹೊಸತೇನನ್ನು ಕೊಟ್ಟಿದ್ದಾನೆ ಎಂದು ಹುಡುಕಾಡುತ್ತಾನೆ. ಪ್ರೇಕ್ಷಕನಿಗೆ ಗೊತ್ತಿದೆ; ’ಅದು’ ಇದಾಗದು. ಎಷ್ಟೆಂದರೂ ಇದು ಅದರ ರೀಮೆಕ್. ಇದೇ ಅದಾಗಲು ಪ್ರಯತ್ನಿಸಿದರೆ ಪ್ರೇಕ್ಷಕನನ್ನು ಗೆಲ್ಲಲು ಸಾಧ್ಯವಾಗದು. ಮಣಿರತ್ನಂರವರ ’ರಾವಣ’ ಅದೇ ಆಗಲು ಪ್ರಯತ್ನಿಸಿದೆ. ಸೋತಿದೆ.

ರಾವಣದಲ್ಲಿ ಕಥೆಯೇ ಇಲ್ಲ.ಕೇವಲ ದೃಶ್ಯ ವೈಭವಗಳಷ್ಟೆ ಒಂದು ಸಿನೆಮಾವನ್ನು ಗೆಲ್ಲಿಸಲು ಸಾಧ್ಯವಾಗದು. ನಿರ್ದೇಶಕನಿಗೆ ಕಥನ ಕಲೆ ಗೊತ್ತಿರಬೇಕು. ಭಾರತೀಯ ಪ್ರೇಕ್ಷಕನಿಗಂತೂ ಕಥೆಯೇ ಮುಖ್ಯ.
ರಾಜನೀತಿಯಲ್ಲಿ ಕಥೆ ಇದೆ. ಅದ್ದೂರಿ ತಾರಾ ಸಮೂಹವಿದೆ. ಆದರೆ ಹೀರೊ ಇಲ್ಲ. ಎಲ್ಲಾ ಪಾತ್ರಗಳೂ ವಿಲನ್ ಗಳೇ. ಪ್ರತಿ ಪ್ರೇಮಿನಲ್ಲಿಯೂ ನಮಗೆ ಮಹಾಭಾರತ ನೆನಪಾಗುತ್ತದೆ. ಹಾಗಾಗಿ ಸಿನೇಮಾ ವಾಚ್ಯವಾಗಿದೆ.
ಸಿನೇಮಾವೊಂದು ಬಿಡುಗಡೆಗೆ ಪೂರ್ವದಲ್ಲಿಯೇ ಇದು ಇಂತಹ ಕಾವ್ಯದ ಆಧಾರವೆಂದು ಅದ್ದೂರಿ ಪ್ರಚಾರ ನೀಡಬಾರದು. ಸಿನೇಮಾ ನೋಡಿದ ಪ್ರೇಕ್ಷಕನಿಗೆ ಮಹಾಭಾರತ ಇಲ್ಲವೆ ರಾಮಾಯಣದ ಪಾತ್ರಗಳು, ಘಟನೆಗಳು ನೆನಪಾಗಬೇಕು.

ಕುವೆಂಪುರವರ ’ಮಲೆಗಳಲ್ಲಿ ಮದುಮಗಳು’ ಮಹಾಕಾವ್ಯದ ವಿಸ್ತಾರವನ್ನು ಹೊಂದಿರುವ, ಮಲೆನಾಡಿನ ಸಮಗ್ರ ಚಿತ್ರಣವನ್ನು ಸರಳವಾಗಿ ಕಟ್ಟಿಕೊಡುವ ಬೃಹತ್ ಕಾದಂಬರಿ.ಇಂತಹ ಕಾದಂಬರಿ ರಂಗಪ್ರಯೋಗಕ್ಕೆ ಒಳಪಡುತ್ತಿದೆ ಎಂಬುದನ್ನು ಕೇಳಿದಾಗಲೇ ಅಚ್ಚರಿಯಾಗಿತ್ತು. ಕೆಲವರಿಗೆ ಅದಕ್ಕಿಂತಲೂ ಅಚ್ಚರಿಯಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದಕ್ಕೆ ಮಂಜೂರು ಮಾಡಿದ ಹಣದ ಮೊತ್ತ. ಬಹುಶಃ ಆ ಹಣದಲ್ಲಿ ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ನಾಟಕೋತ್ಸವವನ್ನು ಏರ್ಪಡಿಸಬಹುದಿತ್ತು ಎಂಬುದು ಅವರ ತಕರಾರು.

ಇದೆಲ್ಲಾ ನಿಜವೇ. ಆದರೆ ಕೇಂದ್ರ ಪಾತ್ರವಿಲ್ಲದ, ಅತ್ಯಲ್ಪ ನಾಟಕೀಯ ಘಟನೆಗಳಿರುವ, ಕೇವಲ ವಿವರಣೆಗಳಲ್ಲೇ ಮಲೆನಾಡಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ೭೧೮ ಪುಟಗಳ ಮಹಾ ಕಾದಂಬರಿ’ ಮಲೆಗಳಲ್ಲಿ ಮದುಮಗಳು’ ನ್ನು ಯಶಸ್ವಿಯಾಗಿ ರಂಗಕ್ಕೆ ಅಳವಡಿಸುವುದಕ್ಕೆ ಧೈರ್ಯ, ಪ್ರತಿಭೆ ಮತ್ತು ಆರ್ಥಿಕ ಸಾಮರ್ಥ್ಯ ಎಲ್ಲವೂ ಬೇಕು.

ಬಸವಲಿಂಗಯ್ಯನವರಿಗೆ ದೈರ್ಯ ಇತ್ತು. ಅವರು ನಾಟಕಕ್ಕೆ ಆಯ್ಕೆ ಮಾಡಿಕೊಳ್ಳುವ ವಸ್ತುಗಳೇ ಅದನ್ನು ಪ್ರತಿಫಲಿಸುತ್ತಿದ್ದವು. ಈ ಮೊದಲೇ ಅವರು ಕುವೆಂಪುರವರ ’ಶೂದ್ರ ತಪಸ್ವಿ’ ಕಾರ್ನಾಡರ ’ಅಗ್ನಿ ಮತ್ತು ಮಳೆ’ ದೇವನೂರು ಮಹಾದೇವರ ’ಕುಸುಮ ಬಾಲೆ’ ’ದ್ಯಾವನೂರು’ಗಳನ್ನು ರಂಗರೂಪಕ್ಕೆ ಅಳವಡಿಸಿದ್ದರು. ಇನ್ನು ಪ್ರತಿಭೆಯೂ ಇತ್ತು. ಯಾಕೆಂದರೆ ಅವರು ಎನ್ ಎಸ್ ಡಿ ಪಧವಿದರರು. ಆರ್ಥಿಕ ಸಹಾಯಕ್ಕಾಗಿ ಅವರು ಸರಕಾರದೆಡೆ ನೋಡಲೇಬೇಕಾಗಿತ್ತು. ಮೈಸೂರಿನಲ್ಲಿರುವ ’ರಂಗಾಯಣ’ ರೆಪರ್ಟರಿ ಸರಕಾರದ ಅಂಗ ಸಂಸ್ಥೆ. ಅಲ್ಲಿಯ ಕಲಾವಿದರೆಲ್ಲಾ ಸರಕಾರಿ ನೌಕರರು. ಬಸವಲಿಂಗಯ್ಯನವರಿಗೆ ಅವಕಾಶ ಒದಗಿ ಬಂತು. ಮದುಮಗಳು ರಂಗಕ್ಕೆ ಬಂದಳು.

ಮಾಧ್ಯಮಗಳಲ್ಲಿ ಮದುಮಗಳ ರಂಗಪ್ರಯೋಗದ ಬಗ್ಗೆ ಹಲವು ಅಭಿಪ್ರಾಯಗಳು ಬಂದವು. ಬೆಂಗಳೂರಿನಲ್ಲಿರುವ ನನಗೆ ಮೈಸೂರಿನಲ್ಲಿ ನಡೆದ ಪ್ರಯೋಗವನ್ನು ನೋಡಲಾಗಲಿಲ್ಲ. ಆದರೆ ಅದು ಒಂಬತ್ತು ಘಂಟೆಗಳ ಸುದೀರ್ಘ ಅವಧಿಯ ಪ್ರಯೋಗವೆಂದು ಕೇಳಿ ಮತ್ತೊಮ್ಮೆ ಅಚ್ಚರಿಯಾಯಿತು. ನಾವು ಕರಾವಳಿಯ ಜನ. ರಾತ್ರಿಯಿಡಿ, ಒಂಬತ್ತು ಘಂಟೆಗಳ ಯಕ್ಷಗಾನವನ್ನು ನೋಡುತ್ತ ಬೆಳೆದು ಬಂದವರು. ಅಂಥ ನನ್ನೂರ ಜನರೇ ಇಂದು ಮೂರು ಘಂಟೆಗಳ ಯಕ್ಷಗಾನಕ್ಕೆ ಒಗ್ಗಿಕೊಂಡಿದ್ದಾರೆ. ಯಕ್ಷಗಾನದ ಯಕ್ಷ, ಕಿನ್ನರ, ಗಂದರ್ವ ಲೋಕವೇ ಕಾಲನ ತೆಕ್ಕೆಯಲ್ಲಿ ಮಸುಕಾಗಿದೆ. ಇನ್ನು ಜೀವಂತ ರಂಗಭೂಮಿಯಾದ ನಾಟಕ ಪ್ರೇಕ್ಷಕನ ಏಕಾಗ್ರತೆಯನ್ನು ಬಯಸುತ್ತೆ. ೧೫೦ ಪಾತ್ರಗಳು,೫೮ ದೃಶ್ಯ, ೪೮ ಹಾಡು, ೬೭ ನಟರು ನಾಲ್ಕು ವಿರಾಮವಿರುವ ಈ ನಾಟಕಕ್ಕೆ ಆರು ತಿಂಗಳ ತಯಾರಿ ನಡೆಸಲಾಗಿತ್ತು.

ಖಂಡಿತವಾಗಿಯೂ ರಂಗಾಯಣ ಮಾತ್ರ ಇಂತಹ ಪ್ರಯೋಗಗಳನ್ನು ಮಾಡಲು ಸಾಧ್ಯ. ಆದರೆ ಅದನ್ನು ರಾಜ್ಯದ ಎಲ್ಲಾ ರಂಗಪ್ರೇಮಿಗಳು ನೋಡುವಂತಾಗಬೇಕು ಯಾಕೆಂದರೆ ಅದಕ್ಕೆ ವ್ಯಯವಾಗಿರೋದು ಪ್ರಜೆಗಳ ತೆರಿಗೆ ಹಣ. ಅದಕ್ಕಾಗಿ ನಾಟಕದ ಅವಧಿಯನ್ನು ಕಡಿಮೆಗೊಳಿಸಿ ಅದನ್ನು ರಾಜ್ಯಾದ್ಯಂತ ತಿರುಗಾಟಕ್ಕೆ ಅಣಿಗೊಳಿಸಬೇಕು.

ಈ ಸಂದರ್ಭದಲ್ಲಿ ಪೀಟರ್ ಬ್ರೂಕ್ ರ ’ಮಹಾಭಾರತ’ ನೆನಪಾಗುತ್ತದೆ. ಒಂಬತ್ತು ಘಂಟೆಗಳ ಈ ನಾಟಕದ ಸ್ಕ್ರೀನ್ ಪ್ಲೆಗಾಗಿ ಅವರು ಎಂಟು ವರ್ಷ ಕೆಲಸ ಮಾಡಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು ನಲ್ವತ್ತೆರಡು ಕಲಾವಿದರಲ್ಲಿ ದ್ರೌಪದಿ ಪಾತ್ರ ಮಾಡಿದ್ದು ಭಾರತದ ಮಲ್ಲಿಕಾ ಸಾರಾಭಾಯಿ. ೫ ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಾದ ಈ ನಾಟಕದಲ್ಲಿ ಆಪ್ರಿಕಾದ ಕಪ್ಪು ವರ್ಣದವರೇ ಜಾಸ್ತಿಯಿದ್ದರು. ಜೊತೆಗೆ ರವೀಂದ್ರನಾಥ ಠಾಕೂರರ ಸಂಗೀತವಿತ್ತು.ಅದರ ಕಾಸ್ಟ್ಯೂಮ್ ವಾಸ್ತವಕ್ಕೆ ಹತ್ತಿರವಿತ್ತು. ಚಕ್ರವ್ಯೂಹದ ರಚನೆ ನಿರ್ದೇಶಕರ ಸೃಜನಶೀಲತೆಗೆ ಕನ್ನಡಿ ಹಿಡಿದಂತಿತ್ತು. ಬಹುರಾಷ್ಟ್ರೀಯ, ಬಹುಜನಾಂಗೀಯ ಕಲಾವಿದರಿದ್ದ ಈ ತಂಡ ನಾಲ್ಕು ವರ್ಷಗಳ ಕಾಲ ಪ್ರಪಂಚದಾದ್ಯಂತ ತಿರುಗಾಟ ನಡೆಸಿತ್ತು. ಅನಂತರ ಅದು ಆರು ಘಂಟೆಗಳ ಟೀವಿ ಧಾರಾವಾಯಿಯಾಗಿ ಚಿತ್ರಿಕರಿಸಲಾಯಿತು.ಅದು ದೂರದರ್ಶನದಲ್ಲಿಯೂ ಬಿತ್ತರಗೊಂಡಿತು. ಕೊನೆಗೆ ಮೂರು ಘಂಟೆಗಳ ನಾಟಕವಾಗಿಸಿ ಅದರ ಡಿವಿಡಿ ರಿಲೀಸ್ ಮಾಡಲಾಯ್ತು.

ನಾಟಕ, ಸಿನೇಮಾದಂತಹ ಪ್ರಭಾವಿ ಮಾಧ್ಯಮಕ್ಕೆ ಸಮೂಹವನ್ನು ಸಮ್ಮೋಹನಗೊಳಿಸುವ ಶಕ್ತಿ ಇದೆ. ಅದು ನಮಗೆ ಮನರಂಜನೆಯನ್ನು ನೀಡಬೇಕು.ಇಲ್ಲವೇ ಅದು ಪ್ರದರ್ಶನದಾಚೆಯೂ ಕೆಲಕಾಲ ನಮ್ಮನ್ನು ಕಾಡಬೇಕು. ಅಥವಾ ಇನ್ಯಾವುದಕ್ಕೊ ನಮ್ಮನ್ನು ಸಕಾರಾತ್ಮಕವಾಗಿ ಪ್ರೆರೇಪಿಸಬೇಕು. ಅದ್ಯಾವುದನ್ನು ರಾವಣ ಮತ್ತು ರಾಜನೀತಿ ಮಾಡುವುದಿಲ್ಲ.
ಮಲೆಗಳಲ್ಲಿ ಮದುಮಗಳು ಏನು ಮಾಡಿದೆಯೆಂಬುದು ಮೈಸೂರಿನ ರಂಗಾಸಕ್ತರು ಮತ್ತು ಅಲ್ಲಿಗೆ ಹೋಗಿ ನಾಟಕ ನೋಡಲು ವ್ಯವಧಾನ ಮತ್ತು ಸಾಮರ್ಥ್ಯವಿದ್ದ ಕೆಲವರಿಗಷ್ಟೆ ಗೊತ್ತಾಗಿದೆ!
[ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]

0 comments: