Wednesday, October 19, 2011

ಕಟಕಟೆಯಲ್ಲಿ ಯಡ್ಡಿ- ನೋಡಿದ್ದು, ಕಾಡಿದ್ದು


ನಿನ್ನೆ ಇಡೀ ದಿವಸ ನಮ್ಮ ರಾಜ್ಯ ರಾಜಧಾನಿಯಲ್ಲಿ ರಾಜಕೀಯ ದೊಂಬರಾಟ ನಡೆಯಿತು. ಆ ದೊಂಬರಾಟ ನಿನ್ನೆ ಆರಂಭವಾಗಿದ್ದೇನಲ್ಲ. ಎಂದೋ ಆರಂಭವಾಗಿದ್ದು ನಿನ್ನೆ ಉತ್ತುಂಗಕ್ಕೇರಿತ್ತು. ಇಂದೂ ದೊಂಬರಾಟ ಮುಂದುವರಿದಿದೆ….

ನಿನ್ನೆಯ ಪ್ರಹಸನದಲ್ಲಿ ಮೂರು ಘಟನೆಗಳು ನನ್ನ ಗಮನ ಸೆಳೆದವು. ಒಂದು ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮಿಗಳು ಯಡಿಯೂರಪ್ಪನವರ ಆರೋಗ್ಯ ವಿಚಾರಿಸಲು ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿದ್ದು. ಎರಡು, ಹಿರಿಯ ರಾಜಕಾರಣಿ,ಸಮಾಜವಾದಿ ಚಿಂತಕ ಕೆ.ಎಚ್.ರಂಗನಾಥ್ ವಿಧಿವಶರಾದದ್ದು. ಇನ್ನೊಂದು, ನ್ಯಾಯಾಲಯದ ಆಣತಿಯನ್ನೇ ಅಣಕಿಸುವಂತೆ ಜಯದೇವದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಪೇಷೆಂಟ್ ಯಡಿಯೂರಪ್ಪನವರು ಜಾರಿಕೊಂಡದ್ದು ಮತ್ತು ಅದನ್ನು ಲೈವ್ ಕಾಮೆಂಟ್ರಿಯಂತೆ ದೃಶ್ಯ ಮಾಧ್ಯಮದವರು ಬಿತ್ತರಿಸಿದ್ದು.

ಕೆ.ಎಚ್.ರಂಗನಾಥ ತೀರಿಕೊಂಡರು ಎಂದಾಗ ಅವರ ಬಗ್ಗೆ ಹಿಂದೆ ಹಿರಿಯ ಪತ್ರಕರ್ತರೊಬ್ಬರು ಹೇಳಿದ ಘಟನೆಯೊಂದು ನೆನಪಾಯಿತು..ಅದು ಅವರು ವಿಧಾನ ಸಬಾ ಅಧ್ಯಕ್ಷರಾಗಿದ್ದ ಸಮಯ. ಅವರ ಛೇಂಬರಿನಲ್ಲಿ ಇವರು ಮಾತಾಡುತ್ತಾ ಕುಳಿತ್ತಿದ್ದರಂತೆ. ಬಿಳ್ಕೊಡಲೆಂದು ಎದ್ದು ನಿಂತಾಗ ಏನೋ ತಗುಲಿ ಅವರ ಚಪ್ಪಲಿ ಕಿತ್ತು ಹೋಯಿತಂತೆ. ಹೊರಗೆಲ್ಲೋ ಹೋಗಬೇಕಾದ ಕಾರ್ಯಕ್ರಮವಿದ್ದುದರಿಂದ ಅನಿವಾರ್ಯವಾಗಿ ತಮ್ಮ ಪಿ.ಎ ಯನ್ನು ಕರೆದು ತಮಗೊಂದು ಚಪ್ಪಲಿ ತರುವಂತೆ ಹೇಳಿ ಆ ಪತ್ರಕರ್ತರನ್ನು ಇನ್ನೂ ಸ್ವಲ್ಪ ಹೊತ್ತು ತಮ್ಮಲ್ಲೇ ಉಳಿಸಿಕೊಂಡರಂತೆ. ಪಿ.ಎ ಸುಮಾರು ಎಂಟುನೂರು ರೂಪಾಯಿ ಬೆಲೆಬಾಳುವ ಚಪ್ಪಲಿಯನ್ನು ತಂದು ಅವರ ಮುಂದಿಟ್ಟಾಗ ಅವರು, ಇಂತಹ ದುಬಾರಿ ಬೆಲೆಯ ಚಪ್ಪಲಿಯನ್ಯಾಕೆ ತಂದೆಯೆಂದು ಅವನಿಗೆ ಸಿಕ್ಕಾಪಟ್ಟೆ ಬೈದರಂತೆ.ಬೈದದ್ದು ಮಾತ್ರವಲ್ಲಾ ಶಿವಾಜಿನಗರಕ್ಕೆ ಕಳುಹಿಸಿ ೭೦ ರೂಪಾಯಿಯ ಚಪ್ಪಲಿಯನ್ನು ತರಿಸಿಕೊಂಡರಂತೆ. ಅಂತಹ ಸರಳ ಜೀವಿಯನ್ನು ನಾಳೆ ಆಕ್ರಮ ಸಂಪತ್ತು ಗಳಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ವಿಚಾರಣೆಯನ್ನೆದುರಿಸಲು ಕರ್ನಾಟಕಕ್ಕೆ ಆಗಮಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಳ ಸಂಗ್ರಹದಲ್ಲಿದ್ದ ೭೫೦ ಜೊತೆ ಚಪ್ಪಲಿಯನ್ನೊಮ್ಮೆ ಹೋಲಿಸಿ ನೋಡಿಕೊಳ್ಳಿ!

ಸಮಾಜವಾದಿ ಚಿಂತನೆಯ ಹಿನ್ನೆಲೆಯಿದ್ದ, ದಲಿತರ ಗಟ್ಟಿ ಧ್ವನಿಯ, ನಿಷ್ಠುರವಾದಿ ಕೆ.ಎಚ್. ಕೊನೆಯ ತನಕ ತೀರಾ ಸರಳವಾಗಿಯೇ ಬದುಕಿದರು. ಬೆಂಗಳೂರಿನ ನವರಂಗ್ ಪಕ್ಕದ ಪ್ರಕಾಶ್ ನಗರದಲ್ಲಿ ಪುಟ್ಟ ಮನೆಯೊಂದರಲ್ಲಿ ಬಾಳಿ ಬದುಕಿದ ಈ ಹಿರಿಯ ರಾಜಕಾರಣಿಯ ಅಂತಿಮ ದರ್ಶನಕ್ಕೆ ಯಾವ ಸ್ವಾಮೀಜಿಯೂ ಬರಲಿಲ್ಲ. ಆದರೆ ಅದೇ ಸಮಯಕ್ಕೆ ಜಯದೇವ ಆಸ್ಪತೆಯಲ್ಲಿ ಪವಡಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನೋಡಲು ತುಮಕೂರಿನ ಸಿದ್ಧಗಂಗಾ ಮಠಾದೀಶ ಶಿವಕುಮಾರ ಸ್ವಾಮೀಜಿ ಆಗಮಿಸಿದ್ದರು!

ಇದೇ ಸಂದರ್ಭದಲ್ಲಿ ಪತ್ರಕರ್ತರೊಭ್ಭರು ಹೇಳಿದ ಮಾತೊಂದು ನೆನಪಾಗುತ್ತಿದೆ; ’ಬೀದರಿನಲ್ಲಿ ಲಿಂಗ ಸ್ವಲ್ಪ ಅಲ್ಲಾಡಿದರೂ ಸಾಕು ಚಾಮರಾಜ ನಗರದಲ್ಲಿನ ಪಾಣಿಪೇಠ ಅದಕ್ಕೆ ಪ್ರತಿಕ್ರಿಯಿಸುತ್ತೆ’ ಇದನ್ನು ವಿವರಿಸಿ ಹೇಳಬೇಕಿಲ್ಲ ಅನ್ನುತ್ತೆ. ಹೇಳಲೇ ಬೇಕಾದರೆ ಮೂರು ವರ್ಷದ ಹಿಂದೆ ಮೈಸೂರು ದಸರಾ ಉದ್ಘಾಟನೆಗೆ ಆಗ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಸಿದ್ದಗಂಗಾ ಶ್ರೀಗಳನ್ನು ಕೇಳಿಕೊಂಡಿದ್ದರು. ಅವರು ಕೂಡಾ ಒಪ್ಪಿಕೊಂಡಿದ್ದರು. ಆದರೆ ಯಡಿಯೂರಪ್ಪನವರಿಗೆ ಮಾತು ಕೊಟ್ಟಂತೆ ಕುಮಾರ ಸ್ವಾಮಿ ಅಧಿಕಾರ ಹಸ್ತಾಂತರಿಸಲಿಲ್ಲ. ಸಿಟ್ಟುಗೊಂಡ ಸ್ವಾಮಿಗಳು ಉದ್ಗಾಟನೆಗೆ ಬರಲಿಲ್ಲ!

ಈಗಲೂ ಹೇಗಾದರೂ ಮಾಡಿ ಯಡಿಯೂರಪ್ಪನವರನ್ನು ಜೈಲಿನಿಂದ ಹೊರತರಲು ಲಿಂಗಾಯಿತ ಸಮುದಾಯ, ಮಠಮಾನ್ಯರು,ಪತ್ರಕರ್ತರಾದಿಯಾಗಿ ಎಲ್ಲರೂ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ಇನ್ನು ನಿನ್ನೆ ದೃಶ್ಯ ಮಾಧ್ಯಮದವರ ವರದಿಗಾರಿಕೆ ಹೇಗಿತ್ತೆಂದರೆ ಅವರೆಲ್ಲಾ ಕ್ರಿಕೆಟ್ ಕಾಮೆಂಟ್ರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆನೋ ಎಂದು ಭಾಸವಾಗುತ್ತಿತ್ತು. ಆದರೆ ತಮ್ಮ ವೃತ್ತಿ ಭಾಂದವರಲ್ಲೇ ಹಲವರ ಹೆಸರುಗಳು ಲೋಕಾಯುಕ್ತ ಯು.ವಿ.ಸಿಂಗ್ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ನಾಳೆ ಅವರನೇನಾದರೂ ವಿಚಾರಣೆಗೆ ಒಳಪಡಿಸಿದರೆ ಇದೇ ಉತ್ಸಾಹದಿಂದ ಇವರು ವರದಿ ಮಾಡಬಲ್ಲರೇ?

ಬ್ರಷ್ಟಾಚಾರ. ಸ್ವಜನ ಪಕ್ಷಪಾತವೆಂಬುದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ.

ನಿನ್ನೆಯವರೆಗೆ ಯಡ್ಡಿಯ ವಿರುದ್ಧ ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದ ಕುಮಾರಸ್ವಾಮಿ ನಿನ್ನೆ ಮದ್ಯರಾತ್ರಿ ಕಳ್ಳರಂತೆ ಯಡ್ಡಿಯನ್ನು ಬೇಟಿ ಮಾಡಿದ್ದಾರೆ. ಅಲ್ಲಿ ಅವರು ಯಾವ ತಂತ್ರ ಹಣೆದರೋ ಗೊತ್ತಿಲ್ಲ. ರಾಜಕೀಯದಲ್ಲಿ ಯಾರೂ ವಿರೋಧಿಗಳಲ್ಲ!

ಇಂದಿನ ಕಥೆ ಕೇಳಿ, ಅದು ಇನ್ನೂ ಸ್ವಾರಸ್ಯಕರವಾಗಿದೆ. ಕುಮಾರ ಸ್ವಾಮಿಯ ಮೇಲೆ ಐ.ಪಿ.ಸಿ ೪೯೪ರ ಅಡಿಯಲ್ಲಿ ದಿಪತ್ನಿತ್ವದ ಆರೋಪದಡಿಯಲ್ಲಿ ಕೇಸ್ ದಾಖಲಾಗಿದೆ. ನಗರದ ಲಾಯರ್ ಒಬ್ಬರು, ಮೊದಲನೇ ಹೆಂಡತಿಯಿರುವಾಗಲೇ ಇನ್ನೊಂದು ಮದುವೆಯಾಗಿರುವ ಅಪರಾಧಕ್ಕಾಗಿ ಕುಮಾರಸ್ವಾಮಿಯವರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಕೇಸ್ ದಾಖಲಿಸಿದ್ದಾರೆ.

ನಮ್ಮ ಗೃಹ ಸಚಿವ ಸಾಮ್ರಟ್ ಅಶೋಕ್ ಮೇಲೆ ಡಿನೋಟಿಫಿಕೇಶನ್ ಕೇಸ್ ದಾಖಲಾಗಿದೆ.

ಅಂತೂ ಬಿ.ಜೆ.ಪಿಯ ನಾಯಕರೆಲ್ಲಾ ನ್ಯಾಯಾಂಗದ ಮುಂದೆ ಕೈಕಟ್ಟಿ ನಿಲ್ಲುವ ಪ್ರಸಂಗ ಬಂದೊದಗುತ್ತಿದೆ.

ಅಂತೂ ನ್ಯಾಯಾಂಗ ಹಿಂದೆಂದೂ ಇಲ್ಲದಷ್ಟು ಕ್ರಿಯಾಶೀಲವಾಗಿದೆ. ಜನತೆ ಕಾರ್ಯಾಂಗ, ಶಾಸಕಾಂಗ,ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಪತ್ರಿಕಾರಂಗದ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದರು. ಸಿನಿಕರಾಗಿದ್ದರು. ಆದರೆ ಈಗ ಅವರಲ್ಲಿ ಮತ್ತೆ ಭರವಸೆ ಮೂಡುತ್ತಿದೆ. ಅದು ಸಮೂಹ ಪ್ರಜ್ನೆಯಾಗಿ ಹೊರಹೊಮ್ಮಬೇಕು. ಅದು ಮುಂಬರುವ ಚುನಾವಣೆಯಲ್ಲಿ ಮತಗಳಾಗಿ ಹೊರಹೊಮ್ಮಬೇಕು ಹಾಗಾಗಲು ಸಾಧ್ಯವೇ? ನಮ್ಮ ಜಾತಿ ವ್ಯವಸ್ಥೆಯನ್ನು ನೋಡಿದರೆ ಆ ಬಗ್ಗೆ ಸಂಶಯಗಳಿವೆ.

ಪ್ರಗತಿಪರ ಚಳುವಳಿಗಳಿಲ್ಲ; ಹೋರಾಟಗಳಿಲ್ಲ, ಚಿಂತಕರಿಲ್ಲ, ಆದರ್ಶ ವ್ಯಕ್ತಿತ್ವಗಳಿಲ್ಲ ಒಟ್ಟಿನಲ್ಲಿ ಹೇಳಬೇಕೆಂದರೆ ಮುಂದೆ ಗುರಿಯಿಲ್ಲ, ಹಿಂದೆ ಗುರುವಿಲ್ಲ. ಅಡಿಗರು ಹೇಳಿದಂತೆ, ’ಹೆಳವನ ಹೆಗಲ ಮೇಲೆ ಕುರುಡ ಕುಳಿತ್ತಿದ್ದಾನೆ. ದಾರಿ ಸಾಗುವುದೆಂತೋ ನೋಡಬೇಕು’

1 comments:

ಪುರುಷೋತ್ತಮ ಬಿಳಿಮಲೆ said...

ನಿಮ್ಮ ಲೇಖನ ಚೆನ್ನಾಗಿದೆ. ಈಗ ಜಪಪರ ಹೋರಾಟಗಳನ್ನು ನಡೆಸುವುದು ಕಷ್ಟ ಯಾಕೆಂದರೆ ಈಗ ಜನ ಸಂವಾದಕ್ಕೆ ಮುಂದೆ ಬರುತ್ತಿಲ್ಲ. ತಮಗೆ ಆಗದಿದ್ದರೆ ಗೂನ್ಡಾಗಿರಿಯಿನ್ದ ಬಾಯಿಮುಚ್ಚಿಸುವ ಹಲ್ಲೆ ಮಾಡುವ ಜನರ ಸಂಖ್ಯೆ ಹೆಚ್ಚಾಗಿದೆ. ಅಸಹನೆ ಅತೀವವಾಗಿದೆ , ಪತ್ರಕರ್ತರು ಹಿಂದೆಂದು ಕಾಣದ ರೀತಿಯಲ್ಲಿ ಕಳನ್ಕಿತರಾಗಿದ್ದಾರೆ . ಹಾಗಾಗಿ ಕರ್ನಾಟಕದ ಅನೇಕ ಸ್ವಾಮಿಗಳ ಪುಣ್ಯ ಪ್ರಭಾವದಿಂದ , ದೈವ ದೇವತೆಗಳ ಕೃಪೆಯಿಂದ ಜೈಲಿಗೆ ಹೋದವರೆಲ್ಲ ವಾಪಾಸು ಬರಲಿದ್ದಾರೆ ಎಂದು ನಂಬಿ ಸುಮ್ಮನಿರುವುದು ಒಳ್ಳೆಯದು ಅಲ್ಲವೇ?