Wednesday, February 1, 2012

”ಪಿನಾಕಿನೀ ತೀರದಲ್ಲಿ’ ಇತಿಹಾಸದತ್ತ ಒಂದು ಇಣುಕು ನೋಟ.




ಇತಿಹಾಸದ ಘಟನೆಯೊಂದನ್ನು ವರ್ತಮಾನದಲ್ಲಿ ನಿಂತು ನೋಡುವ ಪ್ರಯತ್ನವೇ ’ಪಿನಾಕಿನೀ ತೀರದಲ್ಲಿ’ ಈ ನಾಟಕವನ್ನು ಕೆ.ಜಿ.ಎಫ್ ಸಮುದಾಯ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು.
ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿ ತೀರದಲ್ಲಿದೆ ವಿದುರಾಶ್ವತ್ಥ. ಮಹಾಭಾರತದ ವಿದುರನ ಹೆಸರಿನೊಂದಿಗೆ ತಳುಕು ಹಾಕಿಕೊಂದಿರುವ ಇಲ್ಲಿರುವ ಅರಳಿ ಮರದ ಕೆಳಗೆ ಸಾವಿರಾರು ನಾಗರ ಕಲ್ಲುಗಳಿವೆ. ಇದೊಂದು ಭಕ್ತರ ಆರಾಧನಾ ಕ್ಷೇತ್ರ. ಆದರೆ ಈ ಜಾಗ ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು ಎಂಬುದು ಬಹಳ ಜನಕ್ಕೆ ಗೊತ್ತಿದ್ದಂತಿಲ್ಲ.
ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ನಡೆದ ಧ್ವಜ ಸತ್ಯಾಗ್ರ್ಹ ಚಳುವಳಿ ಮತ್ತು ಅದರಲ್ಲಿ ಹುತಾತ್ಮರಾದವರ ಇತಿಹಾಸ ವಿದುರಾಶ್ವತ್ಥದೊಂದಿಗೆ ಸೇರಿಕೊಂಡಿದೆ. ಇದನ್ನು ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ.
ಅದು ೧೯೩೮ ನೇ ಇಸವಿ. ವಿದುರರಾಶ್ವತ್ಥ ಜಾತ್ರೆಯ ಸಂದರ್ಭ. ಆಗ ನಡೆದ ಧ್ವಜ ಸತ್ಯಾಗ್ರಹ ಸಂದರ್ಭದಲ್ಲಿ ನಡೆದ ಗೋಲಿಬಾರಿನಲ್ಲಿ ಗರ್ಭಿಣಿ ಮಹಿಳೆಯೂ ಸೇರಿದಂತೆ ಒಂಬತ್ತು ಜನರು ಹುತಾತ್ಮರಾಗಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಡಾ. ರಂಗಾರೆಡ್ಡಿ ನಾಟಕವನ್ನು ರಚಿಸಿದ್ದಾರೆ. ನಿರ್ದೇಶನ ಅಚ್ಯುತ ಅವರದು.
ಒಂದೂವರೆ ಘಂಟೆಯ ಅವಧಿಯ ಈ ನಾಟಕ ಇತಿಹಾಸವನ್ನು ಮೆಲ್ಮಟ್ಟದಲ್ಲಿ ನೋಡುವ ಪ್ರಯತ್ನವನ್ನು ಮಾಡುತ್ತದೆ. ವರ್ತಮಾನದಲ್ಲಿ ನಿಂತು ಇತಿಹಾಸವನ್ನು ನೋಡುವಾಗ ಚಿಕಿತ್ಸಕ ದೃಷ್ಟಿಕೋನವಿರಬೇಕು. ಆ ಚಿಕಿತ್ಸಕ ನೋಟ ನಾಟಕದ ಪಠ್ಯದಲ್ಲಿರಲಿಲ್ಲ. ಆ ಕಾಲಘಟ್ಟದಲ್ಲಿ ಭಾರತ ಸ್ವಾತಂತ್ಯ ಚಳುವಳಿಯಲ್ಲಿ ನಡೆದ ಮಹತ್ವದ ಘಟನೆಗಳನ್ನು ನಾಟಕದಲ್ಲಿ ಒಪ್ಪವಾಗಿ ಜೋಡಿಸಲಾಗಿತ್ತು. ಈ ಜೋಡಣೆಗೆ ನಿರ್ದೇಶಕರು ಬಳಸಿಕೊಂಡದ್ದು ಕಥನ ಕಲೆಯ ಕೌಶಲ್ಯವನ್ನು, ಹಿನ್ನೋಟದ ತಂತ್ರವನ್ನು.
ಕಥೆಗಾರ ಮತ್ತು ಆತನ ಇಬ್ಬರು ಶಿಷ್ಯೆಯರು ವರ್ತಮಾನದಲ್ಲಿ ನಿಂತು ಇತಿಹಾಸದ ನಿರೂಪಣೆಯನ್ನು ಮಾಡುತ್ತಿದ್ದರು. ಇಲ್ಲಿ ವರ್ತಮಾನ ಅಂದರೆ೧೯೩೮ ನೇ ವರ್ತಮಾನ. ಹಾಗಾಗಿ ದೇಶಾದ್ಯಂತ ನಡೆಯುವ ಹೋರಾಟಕ್ಕೆ ಅವರು ಕಣ್ಣಾಗುತ್ತಿದ್ದರು. ರಂಗದ ಒಂದು ಬದಿಯಲ್ಲಿ ಸ್ಪಾಟ್ ಲೈಟ್ ಬೆಳಕಿನಲ್ಲಿ ಅವರು ನಿರೂಪಣೆ ಮಾಡುತ್ತಲಿದ್ದರೆ, ರಂಗದ ಮೇಲೆ ದೃಶ್ಯ ಬದಲಾವಣೆಯ ಪರಿಕರಗಳು ಚಕಚಕನೆ ಸಿದ್ದಗೊಳ್ಳುತ್ತಿದ್ದ ಕಾರಣದಿಂದಾಗಿ ಸಮಯ ಪೋಲಾಗುತ್ತಿರಲಿಲ್ಲ; ರಂಗ ಖಾಲಿಯಿರುತ್ತಿರಲಿಲ್ಲ.
ನಾಟಕದಲ್ಲಿ ರಿಹರ್ಸಲ್ ಕೊರತೆ ಎದ್ದು ಕಾಣುತಿತ್ತು. ಕಲಾವಿದರಲ್ಲಿ ಹೊಂದಾಣಿಕೆಯ ಕೊರತೆ ಇತ್ತು. ಸಂಭಾಷಣೆಯಲ್ಲಿ ಎಡವುತ್ತಿದ್ದರು. ಆದರೂ ನಾಟಕದ ಒಟ್ಟಂದಕ್ಕೆ ಇದರಿಂದ ಅಡ್ಡಿಯಾಗಲಿಲ್ಲ. ಅದಕ್ಕೆ ಕಾರಣ ಸಮರ್ಥವಾಗಿ ಬಳಸಿಕೊಂಡ ಹಾಡುಗಳು. ಸಮುದಾಯದ ನಾಟಕಗಳೆಂದರೆ ಹಾಗೆನೇ ಅಲ್ಲಿ ಯಾವಾಗಲೂ ಜಾನಪದ ಶೈಲಿಯ ಮತ್ತು ಹೋರಾಟದ ಹಾಡುಗಳದ್ದೇ ಪಾರುಪತ್ಯ. ಇಲ್ಲಿಯೂ ಅನೇಕ ಹಾಡುಗಳ ಸಮರ್ಥ ಬಳಕೆಯಾಗಿತ್ತು. ನಟರೇ ಮೇಳಗಾರರಾಗಿಯೂ ಬದಲಾಗುತ್ತಿದ್ದರು.
ದೃಶ್ಯಗಳ ವಿಂಗಡಣೆಯಲ್ಲಿ, ಅದರ ಕಾಲಮಿತಿಯಲ್ಲಿ ಬಿಗುವಿದ್ದ ಕಾರಣದಿಂದಾಗಿ ಎಲ್ಲೂ ನೀರಸ ಅನ್ನಿಸಲಿಲ್ಲ; ನಾಟಕದ ಉದ್ದಕ್ಕೂ ಏಕಸೂತ್ರತೆಯಿತ್ತು. ಸ್ಟೇಜ್ ಬ್ಯಾಲೆನ್ಸ್ ಇತ್ತು. ವಿದುರಾಶ್ವತಥವನ್ನು ಮಧ್ಯದಲ್ಲಿಟ್ಟು ಮಾಡಿದ ರಂಗ ವಿನ್ಯಾಸ ಸಾಂಕೇತಿಕವಾಗಿತ್ತು. ನಾಟಕವೆಲ್ಲಾ ಅದರ ಹಿನ್ನೆಲೆಅಲ್ಲೇ ನಡೆಯುತ್ತಿದ್ದವು. ನಾಟಕದ ಅಂತ್ಯದಲ್ಲಿ ಅದರ ಬಲ ಬದಿಯಲ್ಲಿ ಹುತಾತ್ಮರ ಸ್ಮಾರಕವನ್ನು ತೋರಿಸಿದರೆ ಎಡ ಬದಿಯಲ್ಲಿ ತ್ರಿವರ್ಣ ದ್ವಜ ಸ್ತಂಭವನ್ನು ತೋರಿಸಿದ್ದು ಕೂಡಾ ಆ ಮೂರು ಘಟನೆಗಳನ್ನು ವಿಭಿನ್ನವಾಗಿ ಆದರೆ ಒಂದಾಗಿ ನೋಡುವ ಪ್ರಯತ್ನವಾಗಿತ್ತು.
ಗಣರಾಜೋತ್ಸವದ ಮುನ್ನಾದಿನದಂದು, ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ’ಪಿನಾಕಿನೀ ತೀರದಲ್ಲಿ’ ಪ್ರದರ್ಶನಗೊಂಡದ್ದು ಅರ್ಥಪೂರ್ಣವಾಗಿತ್ತು. ರಂಗದ ತುಂಬೆಲ್ಲಾ ತ್ರಿವರ್ಣ ಧ್ವಜ; ನಟರ ಬಾಯಿಂದ ಹೊರಹೊಮ್ಮುತ್ತಿದ್ದ ’ಝಂಡಾ ಊಂಚಾ ರಹೇ ಹಮಾರ…’ ಹಾಡು ನಾಟಕದಲ್ಲಿ ಅನುರಣಿಸುತ್ತಿದ್ದರೆ ನಾಳೆಯ ಗಣ ರಾಜ್ಯೋತ್ಸವದ ನೆನಪು ಪ್ರೇಕ್ಶಕರಲ್ಲಿ ಮೂಡಿದ್ದರೆ ಅಶ್ಚರ್ಯವಿರಲಿಲ್ಲ.
ಸಮುದಾಯವು ’ಸಂಸ್ಕೃತಿ- ಸಾಮರಸ್ಯ’ ದ ಹೆಸರಿನಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿದ್ದ ರಂಗಚಟುವಟಿಕೆಯ ಸಮಾರೋಪದಂದು ಪ್ರದರ್ಶಿತವಾದ ಈ ನಾಟಕದಲ್ಲಿ, ಕಥನಕಾರನ ’ಮಾಡಬೇಕಿದೆ ಮತ್ತೊಂದು ಹೋರಾಟ’ ಎಂಬ ಡೈಲಾಗ್ ನೊಂದಿಗೆ ನಾಟ್ಅಕ ಅಂತ್ಯಗೊಳ್ಳುತ್ತದೆ. ಅದು ಸಮುದಾಯ ತಂಡದ ಮೂಲ ಆಶಯವೂ ಹೌದು.
ನಾಟ್ಕ ರಚನೆಕಾರನೊಬ್ಬನಿಗೆ ವರ್ತಮಾನದ ಜೊತೆ ಮುಖಾಮುಖಿಯಾಗುವುದು ಯಾವಾಗಲೂ ಕಷ್ಟದ ಕೆಲಸವೇ. ಆದರೆ ವರ್ತಮಾನದಲ್ಲಿ ನಿಂತು ಭೂತಕಾಲವನ್ನು ನೋಡಿ ವಿಶ್ಲೇಷಿಸುವುದು ಅಂಥಹ ಕಷ್ಟವೇನಲ್ಲ. ಇಂತಹ ಕೃತಿಯೊಂದನ್ನು ನಿರ್ದೇಶಕನೊಬ್ಬ ಪ್ರದರ್ಶನಕ್ಕೆ ಕೈಗೆತ್ತಿಕೊಂಡಾಗ ಆತನ ಪ್ರತಿಭೆ ಒರಗೆ ಹಚ್ಚಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಈ ನಾಟಕ ನಿರ್ದೇಶಕರ ಪ್ರತಿಬೆಗೆ ಬಹುದೊಡ್ದ ಸವಾಲಾಗಿತ್ತು ಎಂಬುದು ನಿಜ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

0 comments: