Sunday, February 12, 2012

ಸಂಸಾರ ಶರಧಿಯಲ್ಲಿರಬೇಕು ಕಂಪರ್ಟ್ ಝೋನ್ ಗಳು.




ಸಂಸಾರ ಶರಧಿ ಎಂಬ ಪದವನ್ನು ನೋಡಿದಾಗ ನನಗೆ ತಟ್ಟನೆ ನೆನಪಾಗಿದ್ದು, ನನ್ನ ಹೈಸ್ಕೂಲ್ ದಿನಗಳಲ್ಲಿ ನಮ್ಮ ಸಮಾಜ ಪಾಠದ ಮುತ್ತಪ್ಪ ಮೇಸ್ಟ್ರು ಆಗಾಗ ಹೇಳುತ್ತಿದ್ದ ಮಾತುಗಳು;”ಸಾಧಿಸಿದರೆ ಸಬಳವನ್ನೂ ನುಂಗಬಹುದು’

ನಿಜ. ಸಾಧನೆಯ ಛಲ ಇದ್ದರೆ ಸಬಳವನ್ನೂ ಅಂದರೆ ಸಮುದ್ರವನ್ನೂ ನುಂಗಬಹುದು. ಅಸಾಧ್ಯವಾದುದನ್ನು ತಮ್ಮ ಹಿಡಿತಕ್ಕೆ ತರಬಹುದು. ಸಬಳದ ಸಂವಾದಿ ಪದವೇ ಶರಧಿ. ಇದರ ಆಳ-ಅಗಲಗಳನ್ನು ಅರಿತವರಿಲ್ಲ. ಆದರೆ ಕಡಲಿನಲೆಗಳ ಲಯ, ಮಿಡಿತಗಳನ್ನು ಅರಿತವರಿಗೆ ಅದರಲ್ಲಿ ಈಜುವುದೊಂದು ಮೋಜಿನಾಟ. ಆಟ, ಆಡಾಡುತ್ತಲೇ ಅದು ಕಲೆಯಾಗಿ ಕರಗತವಾಗುತ್ತದೆ.

ಸಂಸಾರ ಶರಧಿಯಲ್ಲಿ ಹುಟ್ಟು ಹಾಕುತ್ತಿರುವವರು ಗಂಡು ಹೆಣ್ಣು ಇಬ್ಬರಾದರೂ ಅದರಲ್ಲಿ ಹೆಣ್ಣಿನ ಹೊಣೆಗಾರಿಕೆ ಹೆಚ್ಚು. ಯಾಕೆಂದರೆ ಸಂಸಾರವನ್ನು ಕಟ್ಟಿಕೊಂಡವಳು ಅವಳು. ಅಲೆಮಾರಿಯಾಗಿದ್ದ ಗಂಡನ್ನು ಕೃಷೀಯ ಕೈಂಕರ್ಯಕ್ಕೆ ಹಚ್ಚಿ, ಮನೆಯೆಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿ, ಸಂಸಾರ ನೌಕೆಯನ್ನು ಕಟ್ಟಿದಾಕೆ ಅವಳು. ಅವಳ ಕರ್ತೃತ್ವ ಮತ್ತು ಧೀ ಶಕ್ತಿಗೆ ಬೆಚ್ಚಿ ಅವಳನ್ನು ಚೌಕಟ್ಟುಗಳಲ್ಲಿ ಬಂಧಿಸಿ ತನ್ನ ಆಳ್ತತನದಲ್ಲಿ ಅದುಮಿಟ್ಟುಕೊಂಡವನು ಗಂಡು. ಆದರೂ….’ನಾ ನಿಲ್ಲುವಳಲ್ಲಾ….’ ಎಂದು ಹರಿಯುತ್ತಲೇ ಇರುವಾಕೆ ಹೆಣ್ಣು.

ಸೃಷ್ಟಿಸುತ್ತಾ..ಪೊರೆಯುತ್ತಾ..ಎಲ್ಲವನ್ನೂ ಸ್ವೀಕರಿಸುತ್ತಾ..ತನ್ನೊಳಗೆ ಜೀರ್ಣಿಸಿಕೊಳ್ಳತ್ತಾ ಹೋಗುವ ಮಹಿಳೆ…ಸ್ವತಃ ತನಗೆ ತಾನೇ ಒಂದು ವಿಸ್ಮಯ.

ಈಗೀಗ ನಮ್ಮ ಹೆಣ್ಮಕ್ಕಳು, ಗಂಡು ಹುಡುಗರು ಕೂಡಾ ಈ ಸಂಸಾರ ಶರಧಿಯನ್ನು ಈಜುವ ಗೊಡವೆಯೇ ಬೇಡಪ್ಪಾ ಎಂದು ದೂರ ಓಡಿ ಹೋಗುವುದನ್ನು ನಾನು ಗಮನಿಸುತ್ತಿದ್ದೇನೆ. ಇದೊಂದು ಥರಾ ಪಲಾಯನ ಎನ್ನಬಹುದೇನೋ. ಯಾಕೆಂದರೆ ಹಾಗೆ ಓಡಿ ಹೋಗುವುದರಿಂದ ಆ ಒಂದು ಅನುಭವದಿಂದ ಅವರು ವಂಚಿತರಾದಂತೆ. ‘ಈಸಬೇಕು ಇದ್ದು ಜೈಸಬೇಕು’. ಅದನ್ನೊಂದು ಮೋಜಿನಾಟ ಎಂದು ಭಾವಿಸುತ್ತಾ….ಇದರ ಹುಟ್ಟು ನಾನು ಹಾಕಲಾರೆನಪ್ಪಾ ಎಂದು ಕೈ ಸೋತು ಹೋದರೆ ಅದರಿಂದ ಹೊರಬರಲು ಹಲವಾರು ದಾರಿಗಳಿವೆಯಲ್ಲಾ… ಹಾಗೆ ಹೊರ ಬರುವ ದಾರಿ ಕೂಡಾ ನಮ್ಮ ವಿವೇಚನೆಗೆ ಸಂಬಂಧಪಟ್ಟುದು.

”ಈ ಸಂಸಾರವನ್ನು ನಾನು ಹೇಗೆ ನಿಬಾಯಿಸಲಿ?’ ಎಂಬ ಭಾವನೆಯೇ ಬಾರವಾದುದು. ನಾನು ನಿಬಾಯಿಸಬಲ್ಲೆ; ನಿಬಾಯಿಸ್ತಾ ಇದ್ದೇನೆ ಎಂದು ಪದೇ ಪದೇ ನಮ್ಮೊಳಗೆ ಹೇಳಿಕೊಂಡರೆ, ಸಂಸಾರ ನೌಕೆ ತಾನಾಗಿಯೇ ಮುಂದೆ ಸಾಗುತ್ತಿರುತ್ತದೆ.

ಹಿಂದೆಲ್ಲಾ ಈ ಸಂಸಾರ ಶರಧಿ, ಸಂಸಾರ ನೌಕೆ, ಅದನ್ನು ನಿಭಾಯಿಸುವುದು ಎಂಬುದಕ್ಕೆಲ್ಲಾ ಅರ್ಥ ಇತ್ತು. ಈಗ ಸಂಸಾರ ಶರಧಿಯಲ್ಲಿ ಪ್ರತಿಯೊಬ್ಬರೂ ನಡುಗಡ್ಡೆಗಳನ್ನು ನಿರ್ಮಿಸಿಕೊಂಡಿದ್ದಾರೆ, ಅವರವರ ಅಭಿರುಚಿಗನುಗುಣವಾಗಿ, ಅದು ಸಾಹಿತ್ಯ, ಸಂಗೀತ, ಚಿತ್ರಕಲೆ, ಸಮಾಜ ಸೇವೆ,ಗಾರ್ಡನಿಂಗ್, ಅಡುಗೆ..ಯಾವುದೇ ಇರಬಹುದು ಮೈ ಮತ್ತು ಮನಸ್ಸು ಒಂದಾಗಿ ತೊಡಗಿಸಿಕೊಳ್ಳಲು ಅವಕಾಶವಿರುವ ಇವು ಅವರ ಕಂಪರ್ಟ್ ವಲಯಗಳು. ತಮಗೆ ಸ್ವಾತಂತ್ರ್ಯ ಮತ್ತು ಏಕಾಂತ ಬೇಕೆಂದಾಗ ಅವರು ಆ ನಡುಗಡ್ಡೆಯನ್ನು ಹೊಕ್ಕುಬಿಡುತ್ತಾರೆ. ಅಲ್ಲಿಂದ ಅವರು ಎನರ್ಜಿಯನ್ನು ತುಂಬಿಕೊಂಡು ಬರುವ ಪ್ರಯತ್ನ ಮಾಡುತ್ತಾರೆ. ಲಿಂಗ ಬೇಧವಿಲ್ಲದೆ, ವಯಸ್ಸಿನ ತಾರತಮ್ಯವಿಲ್ಲದೆ ಎಲ್ಲರಿಗೂ ಈ ಕಂಪರ್ಟ್ ಝೋನ್ ಬೇಕು. ಅಲ್ಲಿ ಅವರು ತಮಗೆ ಬೇಕಾದ ರಾಧೆಯನ್ನೋ, ಮಾಧವನನ್ನೋ, ಚೆನ್ನಮಲ್ಲಿಕಾರ್ಜುನನ್ನೋ ಹುಡುಕಿಕೊಳ್ಳಬಹುದು.

ಕೇವಲ ನಗರ ಕೇಂದ್ರಿತ, ವಿದ್ಯಾವಂತ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತಾಡುತ್ತಿದ್ದೀರಾ ಎಂದು ನೀವಂದುಕೊಳ್ಳಬಹುದು. ಇಲ್ಲಾ, ಗ್ರಾಮೀಣ ಪ್ರದೇಶದ ಜನರಿಗೂ ಇಂತಹ ಕಂಪರ್ಟ್ ವಲಯಗಳಿರುತ್ತವೆ. ಗಂಡಸರಿಗೆ ಅವರವರದೇ ಚ್ಟಟಗಳಿರುತ್ತವೆ ವ್ಯಸನಗಳಿರುತ್ತವೆ. ಗಂಡಸರ ಈ ಕಂಪರ್ಟ್ ವಲಯಗಳು ಸಂಸಾರ ನೌಕೆ ಅಲ್ಲಾಡಲು ಕಾರಣವಾಗಬಹುದು. ಆಗ ಹೆಂಗಸರು ತಮ್ಮ ಕಂಪರ್ಟ್ ವಲಯಗಳ ಮೊರೆ ಹೋಗುತ್ತಾರೆ.ಅವರ ಸಾಕು ಪ್ರಾಣಿಗಳು, ಕೈಯಾರೆ ನೆಟ್ಟು ಬೆಳೆಸಿದ ಗಿಡ, ಮರ ಸಸಿಗಳು; ಮಕ್ಕಳು , ಮೊಮ್ಮಕ್ಕಳು ಇವುಗಳ ಆರೈಕೆಯಲ್ಲಿ ಧೈನಿಕದ ಕ್ಷುದ್ರತೆಗಳನ್ನು ಮರೆಯಲೆತ್ನಿಸುತ್ತಾರೆ. ಜಾತ್ರೆ, ಉತ್ಸವ, ಮದುವೆ-ಮುಂಜಿಗಳಲ್ಲಿ ಭಾಗವಹಿಸುತ್ತಾ ಬದುಕನ್ನು ಸಹನೀಯಗೊಳಿಸಿಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶದ ಪುರುಷರಿಗೆ ”ಬಂಧುತ್ವ’ ಮತ್ತು ಹೆಣ್ಣುಮಕ್ಕಳಿಗೆ”ತವರು ಮನೆ’ಯೆಂಬುದು ಬಹುದೊಡ್ಡ ಕಂಪರ್ಟ್ ವಲಯ. ನಗರ ಪ್ರದೇಶದ ಮಹಿಳೆಯರಿಗೆ ಮತ್ತು ಪುರುಷರಿಗೆ ಗೆಳೆತನವೇ ಕಂಪರ್ಟ್ ವಲಯ- ಇಲ್ಲಿಯೇ ಅವರ ಅಂತರಂಗ ಬಹಿರಂಗವಾಗುವುದು.

ಮುಖ್ಯವಾಗಿ ಸಂಸಾರವನ್ನು ಶರಧಿಗೆ ಹೊಲಿಸಿಕೊಳ್ಳಲೇ ಬಾರದು. ಸಮುದ್ರ ಅಂದರೆ ಅಗಾಧ, ನಿಗೂಢ, ಅದರ ಮುಂದೆ ತಾವು ಅಲ್ಪರು ಎಂಬ ಭಾವನೆ ಬಂದುಬಿಡುತ್ತದೆ. ಸಾಗರದಲ್ಲಿ ನೀರು ಎಷ್ಟಿದ್ದರೇನು? ಕುಡಿಯಲು ಒಂದು ತೊಟ್ಟು ಜೀವ ಜಲವೂ ಸಿಗಲಾರದು. ಹಾಗಾಗಿ ಅದನ್ನು ನದಿ ಅಥವಾ ತೊರೆ ಎಂದು ಅಂದುಕೊಂಡರೆ ಅದನ್ನು ಈಜುವ, ದಾಟುವ ದೈರ್ಯ ತಮ್ಮೊಳಗೆ ತಾವೇ ತುಂಬಿಕೊಳ್ಳಬಹುದು.

ಸಂಸಾರವೆಂಬ ನದಿಯಲ್ಲಿ ಪರಸ್ಪರ ನಂಬಿಕೆಯೆಂಬ ದೋಣಿಯಲ್ಲಿ ಸಂಗಾತಿಯೊಡನೆ ಕುಳಿತು ’ದೋಣಿ ಸಾಗಲಿ ಮುಂದೆ ಹೋಗಲಿ’ ಎಂದು ಹಾಡ್ತಾ ಇದ್ದರೆ ದಡ ತಲುಪಿದ್ದೇ ಗೊತ್ತಾಗುವುದಿಲ್ಲ. ದೋಣಿ ತೂತಾಯ್ತು ಎನ್ನಿ, ಒಳಬರುವ ನೀರನ್ನು ಎತ್ತಿ ಹೊರ ಚೆಲ್ಲುತ್ತಿದ್ದರಾಯು. ದೋಣಿ ಮುಳುಗುವ ಸಂದರ್ಭ ಬಂದರೆ ಈಜಿ ದಡ ಸೇರಿದರಾಯ್ತು. ಹಾಗೆ ದಡ ಸೇರುವ ದೈರ್ಯವನ್ನು ನಾವು ಒಳಗಿಂದೊಳಗೆ ಆಗಾಗ ತುಂಬಿಕೊಳ್ತಾ ಇರಬೇಕು. ಅದಕ್ಕೆ ಹಿಂದೆ ಹೇಳಿದ ಕಂಪರ್ಟ್ ವಲಯಗಳು ಒತ್ತಾಸೆಯಾಗಿ ನಿಲ್ಲುತ್ತವೆ.

ಅದಕ್ಕೆ ನಮ್ಮ ಹನಿಗವಿ ಡುಂಡಿರಾಜ್ ಹೇಳಿರುವುದು’ ನದಿ ದಾಟಲು ತೆಪ್ಪ ಇರಬೇಕು, ಸಂಸಾರ ಶರದಿ ದಾಟಲು ತೆಪ್ಪಗಿರಬೇಕು’ ಬಹಳಷ್ಟು ಸಂದರ್ಭಗಳಲ್ಲಿ ಮಾತಿಗೆ ಮಾತು ಬೆಳೆದು ಸಂಸಾರ ಬೀದಿ ಪಾಲಾಗುತ್ತದೆ. ಹಾಗಾಗಿ ಮಾತೆಲ್ಲವೂ ಅಂತರಂಗದಲ್ಲಿ ನಡೆಯುತ್ತಿರಬೇಕು. ಆಗಾಗ ಕಂಪರ್ಟ್ ವಲಯಗಳಿಗೆ ಭೇಟಿ ನೀಡುತ್ತಿರಬೇಕು ಆಗ ತೆಪ್ಪ ನಡೆಸುವುದು ಸುಲಭ. ನೋಡುಗರಿಗೂ ಅಲೆಗಳ ಬೆಳ್ನೊರೆಯಾಟ ಮುದವನ್ನು ಕೊಡುತ್ತದೆ. ಶರಧಿಯೊಳಗಿನ ವಡವಾಗ್ನಿ ಯಾರಿಗೂ ಗೊತ್ತಾಗದು.


[ 'ಸಿಹಿಗಾಳಿ’ ಮ್ಯಾಗಝಿನಿನ ’ಸಂಸಾರ ಶರಧಿ’ ಎಂಬ ಕಾಲಂಗಾಗಿ ಬರೆದ ಬರಹ ]

3 comments:

ರವಿ ಮೂರ್ನಾಡು said...

ಉಷಾಕ್ಕ..! ಮತ್ತೊಂದು ಶಕ್ತಿಶಾಲಿ ಲೇಖನದಿಂದ ಅಲೆಗಳನ್ನೆಬ್ಬಿಸಿದ ಸಮುದ್ರ ಚಿಂತನೆ. ಬಿರುಕಿಟ್ಟ ಸಂಸಾರದ ಗೋಡೆಯೊಳಗೆ ಬಿಕ್ಕಳಿಸುವ ಅದೇಷ್ಟೋ ಮನಸ್ಸುಗಳು ಬೀದಿಯಿಂದ ಮನೆಗೆ ಬರಲಿ. ನಿಮ್ಮ ಸಂಸಾರದ ದೀವಿಗೆಯ ದಾರಿ ಸಂಪೂರ್ಣ ನಿರ್ಮಲವಾಗಿದೆ. ಬೀದಿಗೆ ಬಂದ ಯಾವುದೇ ಒಂದು ಸಂಸಾರ ಮನೆಗೆ ಬಂದರೆ ಈ ಲೇಖನದ ಆಶಯ ಸಾರ್ಥಕ.

Uma Bhat said...

ಉತ್ತಮ ಲೇಖನ ಉಷಾ.

prabhamani nagaraja said...

ಉತ್ತಮ ವಿಶ್ಲೇಷಣಾತ್ಮಕ ಲೇಖನ, ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಬನ್ನಿ.