Friday, February 3, 2012

ಅಧಿಕಾರದ ಹಪಹಪಿಕೆ ಮತ್ತು ಬದುಕಿನ ಕ್ಷಣಭಂಗುರತೆ




ಪಂಪ-ಕನ್ನಡದ ಆದಿ ಕವಿ. ಎಲ್ಲರನ್ನೂ ಎಲ್ಲಾ ಕಾಲಕ್ಕೂ ಕಾಡುವ ಮಹಾನ್ ಪ್ರತಿಭೆ. ಈತ ಮತ್ತೆ ನೆನಪಾಗಿದ್ದು ಮೊನ್ನೆ ಸಂಸ ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಂಡ ನಾಟಕ ’ಮಸ್ತಕಾಭಿಷೇಕ ರಿಹರ್ಸಲ್’ ನಲ್ಲಿ. ಎಚ್.ಎಸ್. ಶಿವಪ್ರಕಾಶ್ ರಚಿಸಿದ ಈ ನಾಟಕವನ್ನು ’ಅನೇಕ’ ತಂಡ ಅಭಿನಯಿಸಿತ್ತು. ನಿರ್ದೇಶನ ಸುರೇಶ್ ಅನಗಳ್ಳಿ ಅವರದು.
ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ್ ಟ್ಯಾಗೂರ್ ಪೀಠದ ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಶಿವಪ್ರಕಾಶ್ ರನ್ನು ಅಭಿನಂದಿಸಲು ಭಾರತ ಯಾತ್ರ ಕೇಂದ್ರವು ಅವರ ನಾಟಕೋತ್ಸವನ್ನು ಏರ್ಪಡಿಸಿತ್ತು. ಅಲ್ಲಿ ಪ್ರದರ್ಶಿತವಾದ ನಾಟಕವಿದು. ಈ ನಾಟ್ಅಕ ಈಗಾಗಲೇ ದೆಹಲಿಯಲ್ಲಿ ನಡೆದ ಎನ್.ಎಸ್.ಡಿ ಪ್ರಾಯೋಜಿತ ಭಾರತ ರಂಗೋತ್ಸವದಲ್ಲಿ ಪ್ರದರ್ಶಗೊಂಡಿದೆ. ಇದು ಅದರ ಎರಡನೇ ಪ್ರದರ್ಶನ.
ಎಚ್.ಎಸ್. ಶಿವಪ್ರಕಾಶ್ ಕನ್ನಡದ ಪ್ರಮುಖ ನಾಟಕಕಾರಲ್ಲಿ ಒಬ್ಬರು. ಅದಕ್ಕಿಂತಲೂ ಮಿಗಿಲಾಗಿ ಅವರೊಬ್ಬ ಅನುಭಾವ ಕವಿ.ಅವರನ್ನು ಬಸವಣ್ಣನಂತೆ ಅಲ್ಲಮನೂ ಕಾಡಿದ್ದಾನೆ. ಈ ನಾಟ್ಕದಲ್ಲಿ ಅವರನ್ನು ಕಾಡಿದ್ದು ಬಾಹುಬಲಿ. ಅದರಲ್ಲಿಯೂ ಪಂಪನ ’ಆದಿಪುರಾಣ’ದಲ್ಲಿ ಅಂತರ್ಗತವಾಗಿರುವ ಭೋಗ ನಶ್ವರತೆ ಮತ್ತು ವೈರಾಗ್ಯದ ಔನತ್ಯ.
ಮಸ್ತಕಾಭಿಷೇಕ ನಾಟಕದ ಪಠ್ಯವಿನ್ನೂ ಪ್ರಕಟಗೊಂಡಿಲ್ಲ. ಆದರೆ ಪಂಪನ ಪ್ರಭಾವ ಆ ನಾಟಕದ ಮೇಲೆ ದಟ್ಟವಾಗಿದೆ. ಅದಕ್ಕೆ ಕಾರಣಗಳಿವೆ; ಜಿನಸೇನನ ’ಪೂರ್ವ ಪುರಾಣ’ ದಲ್ಲಿ ಜೈನ ಧರ್ಮದ ಭವಾವಳಿಗಳನ್ನು ಹೇಳಲಷ್ಟೇ ಬರುವ ಈ ಕಥೆಯನ್ನು ಪಂಪ ವಿಸ್ತಾರವಾದ ಚಂಪೂ ಕಾವ್ಯವಾಗಿಸಿ ಜನಪ್ರಿಯಗೊಳಿಸಿದ್ದಾನೆ. ಆದಿಪುರಾಣದ ಮುಖ್ಯ ಶಿಖರಗಳೆಂದರೆ ನೀಲಾಂಜನೆಯ ನೃತ್ಯ; ಇದರಲ್ಲಿ ವ್ಯಕ್ತವಾಗುವ ಬದುಕಿನ ಕ್ಷಣ ಭಂಗುರತೆ. ಇನ್ನೊಂದು ಭರತ ದಿಗ್ವಿಜಯವನ್ನು ಮುಗಿಸಿಕೊಂಡು ವೃಷಭಾಚಲದ ಎದುರು ನಿಂತು ತನ್ನ ಕೀರ್ತಿಯನ್ನು ಕೆತ್ತಿಸಿಕೊಳ್ಳುವ ಸಂದರ್ಭದಲ್ಲಾಗುವ ಆತನ ಗರ್ವಬಂಗ. ಹಾಗೆಯೇ ಅಣ್ಣ ಭರತನನ್ನು ತಮ್ಮ ಭಾಹುಬಲಿ ಜಲಯುದ್ದ, ದೃಷ್ಟಿಯುದ್ಧಗಳಲ್ಲಿ ಸೋಲಿಸಿ ಕೊನೆಯ ಮಲ್ಲಯುದ್ಧದಲ್ಲಿ ಆತನ್ನನ್ನು ಮೇಲಕ್ಕೆ ಹಿಡಿದೆತ್ತಿ ನಿಂತಾಗ ಆತನ ಅಂತರಂಗದಲ್ಲಿ ಉಂಟಾಗುವ ಮಾನಸಿಕ ವಿಪ್ಲವ; ವೈರಾಗ್ಯದ ಅಂಕುರ-ಇವು ಆದಿಪುರಾಣದ ಹೈಲೈಟ್. ಐಶ್ವರ್ಯ, ಅಧಿಕಾರದ ಮದ ಇವುಗಳು ಅಣ್ಣ ತಮ್ಮಂದಿರನ್ನು, ತಂದೆ ಮಗನನ್ನು ಬೇರ್ಪಡಿಸುತ್ತದೆ; ಕಲಹವನ್ನು ತಂದಿಡುತ್ತದೆ, ಇಂಥ ರಾಜಶ್ರೀಯನ್ನು ತಾನು ಹೇಗೆ ಸ್ವೀಕರಿಸಲಿ ಎಂದು ವೈರಾಗ್ಯ ಹೊಂದಿ ಜೈನ ದೀಕ್ಷೆಯನ್ನು ಪಡೆಯುತ್ತಾನೆ. ಈ ಮೂರೂ ಘಟನೆಗಳು ನಾಟ್ಕದಲ್ಲಿಯೂ ಪ್ರಮುಖ ಘಟನೆಗಳೇ.
ಅದರೆ ಈ ನಾಟಕ ನಡೆಯುವುದು ನಾಟಕದೊಳಗಿನ ನಾಟಕದಲ್ಲಿ. ನಾಟ್ಕದ ಹೊರ ಆವರಣದಲ್ಲಿ ನಡೆಯುವ ನಾಟಕದ ರಿಹರ್ಸಲನಲ್ಲಿ ಅಂಬಾನಿ ಸಹೋದರರ ಕೌಟುಂಬಿಕ ಜಗಳ ಸಾಂಕೇತಿಕವಾಗಿ ಬಂದಿದೆ. ಅವರ ವ್ಯಾಜ್ಯ ಕೋರ್ಟಿನಲ್ಲಿ ಇರುವಾಗಲೇ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಅದನ್ನು ಮಾಧ್ಯಮ ತನ್ನ ಟಿಅರ್ ಪಿ ಹೆಚ್ಚಳಕ್ಕೆ ಬಳಸಿಕೊಂಡರೆ. ಅಂಬಾನಿ ಸಹೋದರನೊಬ್ಬ ನಾಟಕ ನಿರ್ದೇಶಕನೊಬ್ಬನನ್ನು ಗೊತ್ತುಮಾಡಿ ಭರತ ಬಾಹುಬಲಿ ಬಗ್ಗೆ ನಾಟಕ ವಾಡಿಸುತ್ತಾನೆ. ಅವನ ರಿಹರ್ಸಲ್ ನೋಡಿದ ಯು.ಎಸ್. ಮೂಲದ ಟೀವಿ ಚಾನಲ್ಲೊಂದು ಅದರ ಟಿಲಿಕಾಸ್ಟ್ ಹಕ್ಕುಗಳನ್ನು ಪಡೆದುಕೊಳ್ಳುತ್ತದೆ.
’ಮಸ್ತಕಾಭಿಷೇಕ ರಿಹರ್ಸಲ್’ ನಾಟಕವನ್ನು ನೋಡಿದಾಗ ಅನ್ನಿಸಿದ್ದು ಈ ನಾಟಕಕ್ಕೆ ಹಲವು ಆಯಾಮಗಳಿವೆ. ಮೇಲ್ನೋಟಕ್ಕೆ ಇದು ಮಸ್ತಕಾಭಿಷೇಕ ನಾಟಕದ ರಿಹರ್ಸಲ್. ಆದರೆ ಅದರೊಳಗಡೆ ಹಲವಾರು ನೆಯ್ಗೆಗಳಿವೆ. ಯಾವ ಜೈನ ಧರ್ಮ ತ್ಯಾಗ ಮತ್ತು ವೈರಾಗ್ಯವನ್ನು ಜೀವನ ಮೌಲ್ಯವನ್ನಾಗಿ ಅಂಗೀಕರಿಸಿಕೊಂಡಿತ್ತೋ ಆ ಧರ್ಮವೀಗ ವ್ಯಾಪಾರಿಕರಣಗೊಂಡು ಮಾರುಕಟ್ಟೆಯ ಸರಕ್ಕಾಗಿ ಬದಲಾಗಿರುವುದನ್ನು ನಾಟಕ ಹೇಳುತ್ತದೆಯಾದರೂ ಇಲ್ಲಿ ಎಲ್ಲವೂ ಬಿಕರಿಗಿಟ್ಟ ವಸ್ತುಗಳೇ. ಅದು ಮಾಧ್ಯಮಗಳ ಮೇಲಾಟ, ವಿಚಾರವಾದಿಗಳ ವೈಚಾರಿಕತೆ, ಕಲಾವಿದರ ಉಡಾಫೆ. ನಾಟಕದೊಳಗಿನ ನಾಟಕ ನಿರ್ದೇಶಕನ ಆಸೆಬುರುಕತನ ಎಲ್ಲವೂ ಕೂಡಾ ಜಾಗತೀಕರಣದ ಭರಾಟೆಯಲ್ಲಿ ಬಿಕರಿಗಿಟ್ಟ ವಸ್ತುಗಳೇ.
ನಾಟಕ ಪ್ರೇಕ್ಷಕರನ್ನು ತಲುಪುವ ಬಗ್ಗೆ ಅಥವಾ ಅವರ ಗ್ರಹಿಕೆಯ ಬಗ್ಗೆ ನಿರ್ದೇಶಕರಿಗೆ ಅನುಮಾನಗಳಿರಬೇಕು ಹಾಗಾಗಿ ಅವರು ಮಸ್ತಕಾಭಿಷೇಕದ ನೇರ ಪ್ರಸಾರವನ್ನು ’ಹೀಗೂ ಉಂಟೇ’ ಶೈಲಿಯಲ್ಲಿ ನಿರೂಪಿಸಿದ್ದಾರೆ. ಆ ಶೈಲಿ ಟೀವಿ ನಿರೂಪಕರ ದಡ್ಡತನವನ್ನು ತೋರಿಸುವುದರ ಜೊತೆಗೆ ನಾಟಕದ ಗಾಂಭೀರ್ಯವನ್ನು ಮಸುಕಾಗಿಸಿತ್ತು. ಒಂದು ಒಳ್ಳೆಯ ವಿಡಂಬನಾ ನಾಟಕವಾಗಬಹುದಾದ ಸಾಧ್ಯತೆಯನ್ನು ಈ ಪಾತ್ರ ಮಸುಕಾಗಿಸಿತೇನೋ ಎಂಬ ಅನುಮಾನ ಪಡುವಷ್ಟು ಆ ಪಾತ್ರ ಮಿಂಚಿತ್ತು.
ನಾಟಕದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ತನ್ಮಯತೆಯಿಂದ ನಟಿಸಿದ್ದಾರೆ.
ತಾಂತ್ರಿಕವಾಗಿಯೂ ನಾಟಕ ಉತ್ತಮವಾಗಿ ಮೂಡಿ ಬಂದಿದೆ ಇದಕ್ಕೆ ರಂಗಪರಿಕರವನ್ನು ಒದಗಿಸಿದ ಪ್ರಮೋದ್ ಶಿಗ್ಗಾಂವ್, ಬೆಳಕು ವಿನ್ಯಾಸ ಮಾಡಿದ ಅ.ನಾ.ರಮೇಶ್ ಮತ್ತು ಮಹಾದೇವಸ್ವಾಮಿ ಹಾಗೂ ಸೆಟ್ ಸಿದ್ಧಪಡಿಸಿದ ಶಂಕರ್, ಇದಲ್ಲದೆ ಸ್ವತಃ ಸಂಗೀತ ನೀಡಿದ ನಿರ್ದೇಶಕ ಅನಗಳ್ಳಿಯವರ ಕೊಡುಗೆ ಕಾರಣವಾಗಿದೆ
ನಾಟಕದಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ನೇರ ಪ್ರಸಾರದ ತುಣುಕುಗಳನ್ನು ಸಂದರ್ಭಕ್ಕೆ ತಖ್ಖಂತೆ ಬಳಸಿಕೊಳ್ಳಲಾಗಿತ್ತು. ಹಾಗಾಗಿ ಇದನ್ನು ’ಡ್ಯಾಕು ಡ್ರಾಮ’ ಎಂದು ಕರೆಯಬಹುದೆಂದು ನಿರ್ದೇಶಕರು ಹೇಳುತ್ತಾರೆ. ಅದನ್ನು ಒದಗಿಸಿದವರು ಪ್ರಸಿದ್ದ ಇತಿಹಾಸಕಾರರಾದ ಷ.ಶೆಟ್ಟರ್ ಅವರು.
ವರ್ತಮಾನದಲ್ಲಿ ಅಧಿಕಾರಕ್ಕಾಗಿ ನಡೆಯುವ ಕಚ್ಚಾಟ ಮತ್ತು ಬದುಕಿನ ಕ್ಷಣಭಂಗುರತೆ ನಾಟಕಕಾರರನ್ನು ಕಾಡಿದ್ದರೆ, ನಾಟಕ ಪ್ರಯೋಗದ ಸಂಕಷ್ಟ ಮತ್ತು ಮಾಧ್ಯಮದ ಹುಚ್ಚಾಟಗಳು ನಿರ್ದೇಶಕರನ್ನು ಕಾಡಿರಬೇಕು.ಆದರೂ ’ಮಸ್ತಕಾಭಿಷೇಕ ರಿಹರ್ಸಲ್’ ಒಂದು ರಿಹರ್ಸಲ್ ಮಾತ್ರ.ಅಂದರೆ ಮುಂದೆ ನಡೆಯಬಹುದಾದ ನಾಟಕದ ತಾಲೀಮ್ . ಹಾಗಾಗಿ ತಿದ್ದಿಕೊಳ್ಳಲು ಇನ್ನೂ ಅವಕಾಶಗಳಿವೆ ಎಂಬ ಆಶಯವನ್ನು ನಾಟಕ ಸೂಚ್ಯವಾಗಿ ಹೇಳುತ್ತದೆ. ಅದಕ್ಕೆ ಸಾಕ್ಷಿಯಾಗಿ ರಂಗದ ಕೊನೆಯಲ್ಲಿ, ಸ್ಪಾಟ್ ಲೈಟ್ ನಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿ ನಿಶ್ಚಲನಾಗಿ ನಿಂತಿರುತ್ತಾನೆ. ನಾಟಕದೊಳಗಿನ ಆ ಪಾತ್ರದಾರಿ ನಾಟಕದ ರಿಹರ್ಸಲ್ ನಲ್ಲಿ ಪಾಲ್ಗೊಳ್ಳುತ್ತಲೇ ತನಗರಿವಿಲ್ಲದಂತೆ ಬಾಹುಬಲಿಯ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ನಾಟಕದೊಳಗಿನ ನಿರ್ದೇಶಕ ಮತ್ತು ಟೀವಿ ನಿರ್ದೇಶಕನ್ನು ಧಿಕ್ಕರಿಸಿ ಬೆತ್ತಲೆಯಾಗಿ ನಿಲ್ಲುವುದು ಒಟ್ಟು ನಾಟಕದ ಆಶಯವಾಗಿದೆ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ]

0 comments: