Tuesday, May 22, 2012

’ಯಾರಿಗೂ ಬೇಡದ ಪ್ರಾಮಾಣಿಕತೆ ನಿಂಗ್ಯಾಕೋ ಬೇಕಿತ್ತು ಮಹಾಂತೀ..?’



ಇದು ನಿನ್ನೆ ಸಾವನಪ್ಪಿರುವ ಕೆ.ಎ.ಎಸ್ ಅಧಿಕಾರಿ ಮಹಾಂತೇಶ್ ಅವರ ಆಕ್ಕ ತಮ್ಮನ ಶವದ ಮೇಲೆ ಬಿದ್ದು ರೋಧಿಸುತ್ತಾ ಕೇಳಿದ ಪ್ರಶ್ನೆ.
ಇದೇ ಪ್ರಶ್ನೆಯನ್ನು ಮೊನ್ನೆ ಮೊನ್ನೆ ದುಷ್ಕರ್ಮಿಗಳ ಧಾಳಿಗೆ ತುತ್ತಾಗಿ ಸಾವಿಗೀಡಾಗಿದ್ದ ದಾಂಡೇಲಿಯ ಎಸಿಎಫ಼್ ಮದನನಾಯಕ್ ಅವರ ಕುಟುಂಬದವರೂ ಕೇಳುತ್ತಿರಬಹುದಲ್ಲವೇ?

ಮುದ್ರಣ ಮಾಧ್ಯಮವು ಮಹಂತೇಶ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅದರ ಕುರಿತಾದ ವಿಸ್ತೃತ ವರಧಿಯನ್ನು  ಪ್ರಕಟಿಸಿದವು. ಅದು ಒಂದು ಸಮೂಹ ಮಾಧ್ಯಮಕ್ಕಿರುವ ಸಾಮಾಜಿಕ ಜವಾಭ್ದಾರಿ. ಅವು ನಿನ್ನೆ ಇನ್ನೊಂದು ಸುದ್ದಿಯನ್ನೂ ಪ್ರಕಟಿಸಿದವು. ಅದು ನಮ್ಮ ನಡುವಿನ ಪ್ರಮುಖ ಸಾಹಿತಿಯಾದ ಕುಂ. ವೀರಭದ್ರಪ್ಪ ಹೇಳಿದ ಮಾತುಗಳು-’ಸಮಾಜದಲ್ಲಿ ನಾಚಿಕೆ ಹಾಗೂ ಸಂಕೋಚ ಇಂದು ಸ್ಥಾನ ಪಲ್ಲಟವಾಗಿದೆ. ಕೇವಲ ರಾಜಕಾರಣಿಗಳಲ್ಲಿ ಮಾತ್ರವಲ್ಲ. ಎಲ್ಲಾ ವರ್ಗದ ಜನರಲ್ಲಿಯೂ ಇದು ಎದ್ದು ಕಾಣುತ್ತದೆ.’

 ಮೇಲೆ ಆ ಅಕ್ಕ ನೊಂದು ನುಡಿದ ಮಾತುಗಳು ಮತ್ತು ಸಮಾಜದ ಸಾಕ್ಷಿಪ್ರಜ್ನೆಯಂತಿರುವ ಸಾಹಿತಿಯೊಬ್ಬರು ಹತಾಶೆಯಿಂದ ಹೇಳಿದ ಮಾತುಗಳ ಆವರಣಗಳು ಬೇರೆ ಬೇರೆಯಾಗಿರಬಹುದು. ಆದರೆ ಇವೆರಡೂ ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ. ಸಮಾಜದಲ್ಲಿ ಹಿಂಸೆಯ ವೈಭವೀಕರಣ ಹೆಚ್ಚಾಗುತ್ತಲಿದೆ. ಹಿಂಸೆಯೂ ಒಂದು ಮೌಲ್ಯವೇನೋ ಎಂದು ಭ್ರಮೆ ಹುಟ್ಟುವಷ್ಟರಮಟ್ಟಿಗೆ ಅದರ ಗುಣಗಾನ ನಡೆಯುತ್ತಿದೆ. ಅದರ ಪರಿಣಾಮ ಎಷ್ಟು ಘೋರವಾಗಿದೆಯೆಂದರೆ ಸಮಾಜ ತನ್ನ ಸೂಕ್ಷತೆಯನ್ನೇ ಕಳೆದುಕೊಳ್ಳುತ್ತಲಿದೆ. ನಾವೀಗ ಒಂದು ಕೊಲೆಯನ್ನೋ, ಆತ್ಮಹತ್ಯೆಯನ್ನೋ ಲೈವ್ ಆಗಿ ಯಾವುದೇ ಭಾವನೆಗಳಿಲ್ಲದೆ ನೋಡಬಲ್ಲೆವು; ಸಾಮೂಹಿಕವಾಗಿ ಎಂಜಾಯ್ ಮಾಡಬಲ್ಲೆವು. ಹಿಂದಾದರೆ ಅದಕ್ಕಾಗಿ ನಾವು ಪ್ರಾಣಿಗಳನ್ನು ಬಳಸಿಕೊಳ್ಳುತ್ತಿದ್ದೆವು ಈಗ ಮನುಷ್ಯರನ್ನು ಬಳಸಿಕೊಳ್ಳುತ್ತಿದ್ದೇವೆ. ಯಾಕೆ ಹೀಗಾದೆವು? ಮನುಷ್ಯನ ಮನಸ್ಸಿನಾಳದಲ್ಲಿರುವ ಮೃಗತ್ವ ಸೂಕ್ತ ಸಮಯಕ್ಕಾಗಿ ಹೊಂಚು ಹಾಕಿ ಕಾಯುತ್ತಿದೆಯೇ? ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.

ಮಹಂತೇಶ್ ಹತ್ಯೆ ಪ್ರಕರಣ ಅಥವಾ ದಾಂಡೇಲಿಯ ವನ್ಯಜೀವಿ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಮಾಧವ ನಾಯಕ್ ಅವರ ಮೇಲಾದ ಹತ್ಯೆ ಮತ್ತು ಅನಂತರದ ಸಾವಿನ ಘಟನೆಗಳನ್ನೇ ತೆಗೆದುಕೊಳ್ಳಿ. ಅದಕ್ಕೆ ಸಂಬಂಧಪಟ್ಟವರು ಪ್ರತಿಕ್ರಿಯಿಸಿದ, ಪ್ರತಿಕ್ರಿಯಿಸುತ್ತಿರುವ ನಿಧಾನಗತಿಯನ್ನು ನೋಡಿದರೆ ’ನ್ಯಾಯದ ನಿಧಾನವೇ ನ್ಯಾಯದ ನಿರಾಕರಣೆ’ ಎಂಬ ನಾಣ್ನುಡಿಯ ನೆನಪು ಬರುತ್ತದೆಯಲ್ಲವೇ? ಗ್ರಾಮ ಸ್ವರಾಜ್ಯದ ಕನಸು ಕಂಡ ಅಹಿಂಹೆಯ ಹರಿಕಾರ ಗಾಂದೀಜಿ ಹುಟ್ಟಿದ ನಾಡಿನಲ್ಲಿ ಒಬ್ಬ ಒಬ್ಬ ಪ್ರಾಮಾಣಿಕ  ಕೆ.ಎ.ಎಸ್ ಅಧಿಕಾರಿ ಬೀದಿಯಲ್ಲಿ ಹೆಣವಾಗಿ ಬಿದ್ದರೆ ಯಾರಿಗೂ ಏನೂ ಅನ್ನಿಸುವುದಿಲ್ಲವೇ?
 ಅಧಿಕಾರ ಶಕ್ತಿಕೇಂದ್ರವಾದ ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿ,  ತುಂಬಾ ಸರಳ ಹಾಗೂ ಪ್ರಮಾಣಿಕ ಅಧಿಕಾರಿಯೆಂದು ಹೆಸರು ಪಡೆದಿದ್ದ ಮಹಂತೇಶ್ ಮೇಲೆ ಕರ್ತವ್ಯದಲ್ಲಿದ್ದಾಗಲೇ ಮಾರಣಾಂತಿಕವಾಗಿ ಹಲ್ಲೆಯಾಗಿತ್ತು.
 ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ರಾಗಿದ್ದ ಅವರ ಮೇಲಿನ ಹಲ್ಲೆಯಲ್ಲಿ ಭೂಮಾಪಿಯದ ಕೈವಾಡ ಇದೆಯೆಂದು ಶಂಕಿಸಲಾಗಿತ್ತು. ಸಹಕಾರಿಸಂಘಗಳ ಅಡಿಟಿಂಗ್ ಜವಾಬ್ದಾರಿ ಹೊತ್ತವರು ಮಹಾಂತೇಶ್. ಬೆಂಗಳೂರಿನಲ್ಲಿ೨೮೨ ಗೃಹನಿರ್ಮಾಣ ಸಂಘಗಳಿವೆ. ಇಲ್ಲಿ ಮೂರುಲಕ್ಷ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಅದನ್ನು ಇತ್ತೀಚೆಗಷ್ಟೇ ಅವರ ಇಲಾಖೆ ಬಯಲಿಗೆಳೆದಿತ್ತು. ಇಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತ ಅಧಿಕಾರಿಯನ್ನು  ಮಾನವೀಯ ನೆಲೆಯಲ್ಲಾದರೂ ಭೇಟಿಮಾಡುವ ಸೌಜನ್ಯವನ್ನು ಈ ನಾಡಿನ ಯಾವ ರಾಜಕಾರಣಿಯೂ ಮಾಡಲಿಲ್ಲ. ಕೊನೆಯ  ಪಕ್ಷ ಪ್ರಮಾಣಿಕ ಅಧಿಕಾರಿಗಳಲ್ಲಿ ದೈರ್ಯ ತುಂಬುವ ಹೇಳಿಕೆಯನ್ನೂ ನೀಡಲಿಲ್ಲ. ಅದೇ ಬ್ರಷ್ಟಾಚಾರದ ಆರೋಪ ಹೊತ್ತ ರಾಜಕಾರಣಿಯನ್ನು ನೋಡಲು ಜೈಲಿಗೇ ಹಿಂಡುಗಟ್ಟಿಕೊಂಡು ಹೋಗುವ ರಾಜಕಾರಣಿಗಳಿದ್ದಾರೆ; ಮಠಾದೀಶರಿದ್ದಾರೆ. ಬ್ರಷ್ಟಾಚಾರ ಸರ್ವವ್ಯಾಪಿಯಾಗಿದೆ.
ನಮ್ಮ ರಾಜ್ಯದ ಗೃಹಮಂತ್ರಿಯವರೇ ಭೂಹಗರಣದಲ್ಲಿ ಸಿಕ್ಕಿಬಿದ್ದಿದ್ದರೆ ಅರಣ್ಯ ಸಚಿವರು ವಂಚನೆಯ ಆರೋಪಕ್ಕೆ ಒಳಗಾಗಿದ್ದವರು. ಇಂತವರಿಂದ ಎಂತಹ ಪ್ರಾಮಾಣಿಕತೆಯನ್ನು ನಿರೀಕ್ಷಿಸಲಾದೀತು? ಸಮಾಜದ ಕೆನೆಪದರದಲ್ಲಿರುವ ವ್ಯಕ್ತಿಗಳೇ ಬ್ರಷ್ಟರಾದರೆ ಅವರ ಕೈಕೆಳಗಿನ ಅಧಿಕಾರಿಗಳು ಅಸಹಾಯಕರಾಗುತ್ತಾರೆ.

ನಾವು ಸತತವಾಗಿ ಏನನ್ನು ಕೇಳುತ್ತೆವೆಯೋ, ನೋಡುತ್ತೆವೆಯೋ ಅದು ನಮ್ಮ ಆಲೋಚನಾಕ್ರಮದ ಮೇಲೆ ಪರೆಣಾಮ ಬೀರುತ್ತದೆ. ಒಂದು ಸಮಾಜವನ್ನು ಅದೋಗತಿಗೆ ತಳ್ಳಲು ಅದರ ಸಾಂಸ್ಕೃತಿಕ ಅನನ್ಯತೆಯನ್ನು ನಾಶಪಡಿಸಿದರೆ ಸಾಕು. ಆ ಕೆಲಸವನ್ನು ರಾಜಕಾರಣ ಮಾಡುತ್ತಲೇ ಬಂದಿದೆ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಲ್ಲಿ ಒಂದಾದ ಮಾಧ್ಯಮ ಅದಕ್ಕೆ ಸಾತ್ ನೀಡುತ್ತಲಿದೆ. ಹಾಗಾಗಿ ಜನರು ಹತಾಶರಾಗುತ್ತಿದ್ದಾರೆ.  ಅವರಲ್ಲಿ ಪ್ರತಿಭಟನೆಯ ಧ್ವನಿ ಹುಟ್ಟುತ್ತಿಲ್ಲ. ರಾಷ್ಟ್ರಪಿತ ಗಾಂಧಿಯಂತೆ ಬಿಂಬಸಲ್ಪಟ್ಟ ಅಣ್ಣಾ ಹಜಾರೆಯವರ ಜನಾಂದೋನವೇ ಮಸುಕಾಗಿರುವುದೇ ಇದಕ್ಕೆ ಸಾಕ್ಷಿ. ಇಡೀ ವ್ಯವಸ್ಥೆಯೇ ಜಡ್ಡುಗಟ್ಟಿ ಹೋಗಿದೆ.

ಮಹಂತೇಶರ ಅಕ್ಕ ವೈಯಕ್ತಿಕ ಮಟ್ಟದಲ್ಲಿ ಕೇಳಿದ ಪ್ರಶ್ನೆಯನ್ನು ಒಂದು ಸಾವಿರ ವರ್ಷಗಳ ಹಿಂದೆ ಪಂಪ ಸಮೂಹದ ನೆಲೆಯಿಂದ ಕೇಳಿದ್ದ ಮತ್ತು ಅದಕ್ಕೆ ಉತ್ತರವನ್ನೂ ನೀಡಿದ್ದ
’ಒತ್ತಿ ತರುಂಬಿ ನಿಂದ ರಿಪುಭೂಜ ಸಮಾಜದ ಬೇರ್ಗಳಂ ನಭಕೆತ್ತದೆ
ಬಂಧು ತನ್ನ ಮರೆವೊಕ್ಕಡೆ ಕಾಯ್ವದೆ, ಚಾಗದ ಒಳ್ಪಿನ ಅಚ್ಚೊತ್ತದೆ,
ಮಾಣ್ದು ಬಾಳವ ಪುಳುವಾನಸನ್, ಅಜಾಂಡಮೆಂಬೊಂದು ಅತ್ತಿಯ
ಪಣ್ಣೊಳಿರ್ಪ ಪುಳುವಲ್ಲದೆ ಮಾನಸನೇ ಮುರಾಂತಕಾ?’

ಅಂತಹ ಹುಳ ಸಮಾನವಾದ ಬದುಕು ನಮಗೆ ಬೇಕೆ? ಬೇಡ ಎಂದು ಧಿಕ್ಕರಿಸಿ ನಿಂತ ಮಹಂತೇಶ್, ಮದನನಾಯಕರಂಥ ಅಧಿಕಾರಿಗಳನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು? ಇದು ನಾಡಿನ ಪ್ರಜ್ನಾವಂತರು ತಮ್ಮೊಳಗೆ ಕೇಳಿಕೊಳ್ಳಬೇಕಾದ ಪ್ರಶ್ನೆ.


[ ವಿಜಯಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]

0 comments: