Sunday, December 29, 2013

ಪೇಸ್ ಬುಕ್ಕಿನಲ್ಲಾದ ಜ್ನಾನೋದಯಗಳು..!


ನಿನ್ನನ್ನು ಪ್ರೀತಿಸಲು ಆರಂಭಿಸಿದ ಮೇಲೆ..
ಕನ್ನಡಿಯತ್ತ ತಿರುಗಿದೆ..
ನನ್ನ ಮುಖವೀಗ ಸುಂದರವಾಗಿ ಕಾಣಿಸುತ್ತಿದೆ...!

ನೀನೊಂದು ಸುಂದರವಾದ, ಸುದೀರ್ಘವಾದ ಕನಸಾಗಿದ್ದೆ.
ನನ್ನ ಪುಣ್ಯ; ಅದೊಂದು ಖಂಡಕಾವ್ಯ.
ಬದುಕಿನುದ್ದಕ್ಕೂ ಮೆಲುಕು ಹಾಕುವ ಭಾಗ್ಯ..!
.

ಎಲ್ಲಾ ಘಟನೆಗಳನ್ನು ಆಯಾಯ ಕಾಲಕ್ಕೆ ಎಳೆದೆಳೆದು ಬಿಸಾಕಿಬಿಡುತ್ತಿದ್ದೆ.
ಅದೊಂದು ನೆನಪು....
ಜನ್ಮ ಜನ್ಮ ಜನ್ಮಾಂತರದ ಕನವರಿಕೆಯಂತೆ ಕಾಡುತ್ತಿದೆ.
ನಾನು ಮಧುಮೇಹಿಯಲ್ಲ ಆದರೂ...
ಹುಣ್ಣು ವ್ರಣವಾಗುತ್ತಿದೆ..
ಇದು ಅಂಗ ಛೇಧಿಸದೆ ಬಿಡದು.

ನದಿ ದಾಟುತ್ತಿದ್ದೆ; ಪರ್ಸ್ ಜಾರಿ ಬಿತ್ತು.
ಅದು ತೇಲುವ-ಮುಳುಗುವ ಅಂದವನ್ನು ನೋಡುತ್ತಾ ನಿಂತು ಬಿಟ್ಟೆ.
ಅದರಲ್ಲಿದ್ದ ಒಡವೆಗಳು ನೆನಪಾಗಲೇ ಇಲ್ಲ;
ಬಹುಶಃ ನಾನು ಸತ್ತಿರಬೇಕು...!
ಅಂದು ಘಟಿಸಿದ ಕಂಕಣ ಸೂರ್ಯನ ಬೆಳಕಿನುಂಗರಕ್ಕಾಗಿ
ಇಂದು ಹಂಬಲಿಸುತ್ತಿದೆ ನನ್ನ ಬೋಳು ಬೆರಳು.
ಅಂದು-ಇಂದುಗಳ ಬೆಸೆಯಬಲ್ಲ ಬಂಧು, ನೀನೆಲ್ಲಿರುವೆ ಹೇಳು?


ದೇವಕಣ, ವೇವ್ಸ್, ಪಾರ್ಟಿಕಲ್ಸ್ ಗಳ ಗೊಂದಲದಲ್ಲಿ ಬಿದ್ದಿದ್ದೇನೆ.....
ಮುಂದೊಂದು ದಿನ ಅವನು....
ಕೋಟಿ ಯೋಜನ ದೂರವಿದ್ದರೂ ಕ್ಷಣಮಾತ್ರದಲ್ಲಿ ನನ್ನೆದುರು ಪ್ರತ್ಯಕ್ಷನಾಗಬಹುದು...
ಈ ಕಲ್ಪನೆಯಿಂದಲೇ ರೋಮಾಂಚನಗೊಳ್ಳುತ್ತಿದ್ದೇನೆ...!



ನಾಳೆ ಶುಕ್ರ ಸಂಗಮ; ಶತಮಾನಕ್ಕೊಮ್ಮೆ ಘಟಿಸುವುದಂತೆ.
ಈ ಭೂಮಿಯಲ್ಲಂತೂ ನಮ್ಮಿಬ್ಬರ ಕಣ್ಣುಗಳು ಸಂಗಮಿಸಲಿಲ್ಲ.
ಸುಮೂರ್ತ ನಾಳೆ; ಆಕಾಶಕ್ಕೆ ನೆಟ್ಟುಬಿಡು ದೃಷ್ಟಿ.
ತ್ರಿಕೋನ ಗೋಪುರವಾಗಲಿ.
ದೃಷ್ಟಿಸಂಗಮಕ್ಕೆ ಸೂರ್ಯ ಸಾಕ್ಷಿಯಾಗಲಿ



ಹೊರಜಗತ್ತು ಮಬ್ಬಾಗಿತ್ತು; ಒಳಗನ್ನು ತುಂಬಿಕೊಳ್ಳುವ ಹಂಬಲ.
ಧೂಮಕೇತುವಿನಂತೆ ಅಪ್ಪಳಿಸಿಬಿಟ್ಟೆ
ಪಂಚೇಂದ್ರಿಯಗಳಿಗೆ ದಕ್ಕಲಿಲ್ಲ; ಭಾವಸ್ಪರ್ಶಕ್ಕೆ ನಿಲುಕಲಿಲ್ಲ.
ಮನಸೀಗ ವೃಷಭಾವತಿ..!


ಅವನು ಹೂ ಬಿರಿದಂತೆ ನಗುತ್ತಿದ್ದ;
ನಾನು ಮೈ ಮರೆತು ನೋಡಿದೆ.
ಕೊನೆಯಲ್ಲಿ ನಾನು ಅಳುತ್ತಿದ್ದೆ;
ಅವನು ಸುಮ್ಮನೆ ನೋಡುತ್ತಿದ್ದ.
ಪೂರ್ವದಲ್ಲಿ ಉದಯಿಸಿದ್ದು, ಪಶ್ಚಿಮದಲ್ಲಿ ಬಾಡಿತ್ತು.

ಗ್ಯಾಲರಿಯಲ್ಲಿಟ್ಟ ಹುಚ್ಚು ಹಿಡಿಸುವ ಮೋಹಕ ಪೈಂಟಿಂಗ್;
ನನ್ನ ನೋಡಿ ಮುಗುಳ್ನಕ್ಕಿತು.
ಕೈ ಚಾಚಿದೆ.ನುಣುಚಿಕೊಂಡಿತು.
ಮೊನ್ನೆ ಚಿತ್ರಸಂತೆಯಲ್ಲಿ ಅದರ ಪ್ರತಿಕೃತಿಯ ಕಂಡೆ.
ತಡಮಾಡಲಿಲ್ಲ. ಖರೀದಿಸಿದೆ. 
ಬೆರಳ ತುದಿಯಲ್ಲಿ ಹಿಡಿದು,
ಎತ್ತಿ ಸಂಗಮದಲ್ಲಿ ಎಸೆದೆ.
ಎದೆಯಲ್ಲಿ ಹಸಿರು ಆವರಿಸಿತು.
ಕಣ್ಮುಚ್ಚಿದೆ; ಎದೆಯಲ್ಲಿ ಹೂಗಳು ತೊನೆದಾಡುತ್ತಿದ್ದವು

ರೆಂಜೆ ಮರದಡಿಯಲ್ಲಿ ನಿಂತಿದ್ದೆ.
ಟಪ್.. ಟಪ್..ಲಯ ಬದ್ದ ಹನಿಗಳು 
ಸೂರ್ಯ ಮಾರ್ಕಿನ ಕೊಡೆಯ ಓರೆ ಮಾಡಿ ನೋಡಿದ್ದೆ.
ಮರಕ್ಕೆ ಕತ್ತರಿಕಾಲನ್ನಾಕಿ ತಬ್ಬಿ, ಮೇಲೆರುತ್ತಾ.. ಜಾರುತ್ತಾ
ಸೀತೆ ಹೂನತ್ತ ಕೈ ಚಾಚುತ್ತಿದ್ದೆ.
ಈಗಲೂ ಮಳೆ ಸುರಿಯುತ್ತಿದೆ....
ಕನಸಲ್ಲೂ ಕಾಡುವ ಅದೇ ಜಾಗ; ನೀನಿಲ್ಲ.
ಪಾರಿಜಾತದ ಕಂಪಿನಲ್ಲಿ ಕಸುವಿಲ್ಲ.
ದಿಂಬಿನಲ್ಲಿ ತಲೆಯಿಟ್ಟಿದ್ದೇನೆ.
ಇಲ್ಲಿಳಿಯುವ ನೀರಿಗೆ ಶಬ್ದವಿಲ್ಲ.
ಅಂದಿನಂತೆ ಇಂದೂ ಅಂಜಲಿಬದ್ಧೆ,


ಹಡೆಯೆತ್ತಿದ ನಾಗರದ ದಾಳಿ ಕಟ್ಟ ನೀನು.
ಸೊಬಗಿಗೆ ಸೋತಿದ್ದೇನೆ.
ಮುಟ್ಟಬೇಕೆಂಬ ಬಯಕೆ.
ತಾಯಿತ ಕಟ್ಟುವ ಲಿಂಗಪ್ಪಜ್ಜ ಸತ್ತು ವರ್ಷಗಳು ಸಂದಿವೆ.
ಮಂತ್ರ ಸಿದ್ಧಿಯಾಗುವ ಲಕ್ಷಣಗಳಿಲ್ಲ.
ಫಲವಂತಿಕೆಯ ದೇವ ನೀನು.
ಕೇದಗೆಯ ಹೂ ಮುಡಿದಿರುವೆ.
ಬಾ, ಬಂದೆನ್ನ ಗರ್ಭದೊಳಗೆ ಹುದುಗಿಕೋ.
ಮಿಡಿ ನಾಗರವೊಂದು ಅಲ್ಲೇ ಈಜಾಡುತ್ತಿರಲಿ..

ನಿನ್ನ ನಿರಾಕರಣೆಯಲ್ಲಿ...
ನನ್ನ ಬದುಕಿನ ಹಾದಿ ತೆರೆಯಿತು.
ನಾನು ಜೀವನ್ಮುಖಿಯಾದೆ..

ನಿರಾಯುಧಳಾಗಿ ಜಗದೆದುರು ನಿಂತಿದ್ದೇನೆ ಮಾಧವ,
ನಿನ್ನ ಪಾದಗಳಿಗೆ ಹಣೆ ಹಚ್ಚಿದ್ದೇನೆ...
ಕುಮಾರವ್ಯಾಸ ಸ್ತುತಿಸಿದ ಕೈತವದ ಶಿಕ್ಷಾಗುರುವೇ..
ಶಸ್ತ್ರಸಜ್ಜಿತನಾಗಿ ಬಂದೆನ್ನ ಬೆನ್ನ ಹಿಂದೆ ನಿಲ್ಲು.
ಭವಸಾಗರವನ್ನು ಗೆದ್ದು ಬಿಡುತ್ತೇನೆ!



ನಟ್ಟ ನಡುರಾತ್ರಿಯಲಿ ಬಾಲ್ಕನಿಯ ನಿಶ್ಚಲ ಪ್ರತಿಮೆ.
ಆಕಾಶದೆಡೆಗೆ ಮುಖ ಎತ್ತಿದೆ; ಚಳಿಗಾಲದ ಚಂದಿರನೂ ನಿಶ್ಚಲ,
ಮಳೆಗಾಲದಲ್ಲಿ ಎದೆಗಿಳಿದ ಹನಿಗಳು
ಮೋಡಗಳಾಗಿ ಮೇಲೇರಿ ಚಂದ್ರನಿಗೆ ಹಾರವಾಗುತ್ತಿವೆ.
ಮನಸು ಸ್ವರ್ಗದ ಬಾಗಿಲ ಕಾವಲು ನಾಯಿ;
ನರಕದ ರೊಟ್ಟಿ ತುಂಡಿಗಾಗಿ ಹಂಬಲಿಸುತ್ತಿದೆ.

ನಾನು ನರಕಕ್ಕೆ ಬೇಕಾದರೂ ಬೀಳಲು ಸಿದ್ಧ.
ಆದರೆ ಅದು ಸ್ವರ್ಗ ಎಂದು ಕ್ಷಣಕಾಲವಾದರೂ
ನನ್ನನ್ನು ನಂಬಿಸು ದೊರೆಯೇ.
                      ***

[ಪೇಸ್ ಬುಕ್ ನಲ್ಲಿ ಮೂಡಿದ ಸಂಚಾರಿಭಾವಗಳಿವು; ಆದರೂ ಇವುಗಳ ಹಿಂದೆ ನೆನಪುಗಳ ಮಿಂಚಿದೆ. ಹಾಗಾಗಿ ಇದನ್ನಿಲ್ಲಿ ದಾಖಲಿಸುತ್ತಿದ್ದೇನೆ..
ಇದು ನನಗಾಗಿ, ನೀವೂ ಓದಿದರೆ ನಾನೂ ಧನ್ಯಳು.]

7 comments:

Swarna said...
This comment has been removed by the author.
Swarna said...

ನೆನಪುಗಳ ಮಾತುಗಳನ್ನು ದಾಖಲಿಸಿ ಓದಿಸಿದ್ದಕ್ಕಾಗಿ ವಂದನೆಗಳು
ನಿರಾಯುಧಳಾಗಿ ಜಗದೆದುರು ನಿಂತಿದ್ದೇನೆ ಮಾಧವ,....... ಭವಸಾಗರವನ್ನು ಗೆದ್ದು ಬಿಡುತ್ತೇನೆ!
ಕಾಡುವ ಮತ್ತು ಸದಾ ನೆನಪನಲ್ಲುಳಿವ ಸಾಲುಗಳು
ಒಂದು ಪ್ರಶ್ನೆ ಬಹುಶಃ ಬಾಲೀಶ, ಖಂಡಕಾವ್ಯದ ಬಗ್ಗೆ ಒಮ್ಮೆ ಬರೆಯುತ್ತಿರಾ ಪ್ಲೀಸ್ ?

Badarinath Palavalli said...

ಪೇಸ್ ಬುಕ್ ನಲ್ಲಿ ಮೂಡಿದ ತಮ್ಮ ಸಂಚಾರಿಭಾವಗಳು ಒಂದಕ್ಕಿಂತಲೂ ಒಂದು ಚೆನ್ನಾಗಿವೆ.

"
ಹೊರಜಗತ್ತು ಮಬ್ಬಾಗಿತ್ತು; ಒಳಗನ್ನು ತುಂಬಿಕೊಳ್ಳುವ ಹಂಬಲ.
ಧೂಮಕೇತುವಿನಂತೆ ಅಪ್ಪಳಿಸಿಬಿಟ್ಟೆ
ಪಂಚೇಂದ್ರಿಯಗಳಿಗೆ ದಕ್ಕಲಿಲ್ಲ; ಭಾವಸ್ಪರ್ಶಕ್ಕೆ ನಿಲುಕಲಿಲ್ಲ.
ಮನಸೀಗ ವೃಷಭಾವತಿ..!
"
ವಾವ್....

ಆಸು ಹೆಗ್ಡೆ said...

ಓದಿದೆ!

akshaya kanthabailu said...

ನಿಜ ಅದ್ಭುತ ಅನ್ನಿಸಿತು.

ಮಹಿಮಾ said...

akkaa
ರೆಂಜೆ ಮರದಡಿಯಲ್ಲಿ ನಿಂತಿದ್ದೆ.
ಟಪ್.. ಟಪ್..ಲಯ ಬದ್ದ ಹನಿಗಳು
ಸೂರ್ಯ ಮಾರ್ಕಿನ ಕೊಡೆಯ ಓರೆ ಮಾಡಿ ನೋಡಿದ್ದೆ.
ಮರಕ್ಕೆ ಕತ್ತರಿಕಾಲನ್ನಾಕಿ ತಬ್ಬಿ, ಮೇಲೆರುತ್ತಾ.. ಜಾರುತ್ತಾ
ಸೀತೆ ಹೂನತ್ತ ಕೈ ಚಾಚುತ್ತಿದ್ದೆ.
ಈಗಲೂ ಮಳೆ ಸುರಿಯುತ್ತಿದೆ....
ಕನಸಲ್ಲೂ ಕಾಡುವ ಅದೇ ಜಾಗ; ನೀನಿಲ್ಲ.
ಪಾರಿಜಾತದ ಕಂಪಿನಲ್ಲಿ ಕಸುವಿಲ್ಲ.
ದಿಂಬಿನಲ್ಲಿ ತಲೆಯಿಟ್ಟಿದ್ದೇನೆ.
ಇಲ್ಲಿಳಿಯುವ ನೀರಿಗೆ ಶಬ್ದವಿಲ್ಲ.
ಅಂದಿನಂತೆ ಇಂದೂ ಅಂಜಲಿಬದ್ಧೆ,
sooper!!

ಸಿಂಧು sindhu said...

uhh..

ನಾನು ನರಕಕ್ಕೆ ಬೇಕಾದರೂ ಬೀಳಲು ಸಿದ್ಧ.
ಆದರೆ ಅದು ಸ್ವರ್ಗ ಎಂದು ಕ್ಷಣಕಾಲವಾದರೂ
ನನ್ನನ್ನು ನಂಬಿಸು ದೊರೆಯೇ.

so beautiful

hugs for coming back..