Monday, February 24, 2014

ಸೆಲೆಬ್ರಿಟಿಗಳ ಖಾಸಗಿ ಮತ್ತು ಸಾರ್ವಜನಿಕ ಬದುಕು.


[ಅಕಸ್ಮತ್ತಾಗಿ ಕಣ್ಣಿಗೆ ಬಿದ್ದ ಹಳೆಯ ಬರಹ]

ಕನ್ನಡದ ಹಿರಿಯ ಸಾಹಿತಿ,  ಡಾ. ಯು.ಆರ್.ಅನಂತಮೂರ್ತಿ’ ಅಗ್ನಿ’ ವಾರಪತ್ರಿಕೆ ಕಛೇರಿ ಮುಂದೆ ಕುಟುಂಬ ಸಮೇತರಾಗಿ ಧರಣಿ ನಡೆಸಿದ ’ಪ್ರಹಸನ’ ಈಗ ಮುಗಿದೆದೆ. ಆದರೆ ಈ ಪ್ರಕ್ಲರಣ ಅನೇಕ ಪ್ರಕರಣಗಳಿಗೆ ಚಾಲನೆ ನೀಡಿದೆ. ಅವು ಹೊಸತೇನೂ ಅಲ್ಲ. ಹಲವು ದಶಕಗಳಿಂದಲೂ ಅಷ್ಟೇಕೆ ಹಲವು ಶತಮಾನಗಳಿಂದಲೂ ಈ ಪ್ರಶ್ನೆ ಸಾಹಿತ್ಯವಲಯದಲ್ಲಿ ಚರ್ಚಿತವಾಗುತ್ತಲೇ ಬಂದಿದೆ. ಅದೆಂದರೆ;ಸಾಹಿತ್ಯಕೃತಿಯಷ್ಟೇ ಅದನ್ನು ರಚಿಸಿದಾತನೂ ಮುಖ್ಯನಾಗುತ್ತನೆಯೇ/ ಕೃತಿಕಾರನನ್ನು ನಗಣ್ಯವಾಗಿಸಿ ಬರಿಯ ಕೃತಿಯನ್ನು ನೋಡಲು ಸಾಧ್ಯವಿಲ್ಲವೇ?

ಇದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ಆದರೆ ಯಾವ ಕಾಲಘಟ್ಟದಲ್ಲಿ ಆ ಕೃತಿ ರಚನೆಯಾಯ್ತು ಮತ್ತು ಯಾವ ಕಾಲಘಟ್ಟದಲ್ಲಿ ನಿಂತು ಆ ಕೃತಿಯನ್ನು ನಾವು ಓದುತ್ತಿದ್ದೇವೆ ಎಂಬುದರ ಮೇಲೆ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.

ನಮ್ಮ ಆದಿ ಕವಿ ಪಂಪ ತನ್ನ ಧರ್ಮ, ರೂಪ, ಸ್ವಭಾವ, ರಸಿಕತೆಗಳ ಬಗ್ಗೆ ಸ್ವತಹ ಸಾಕಷ್ಟು ಹೇಳಿಕೊಂಡಿದ್ದಾನೆ. ಆದರೆ ಅವನು ಹಾಗ್ಯೇ ಇದ್ದ,ಹಾಗೆಯೇ ಬದುಕಿದ್ದ ಎಂಬುದಕ್ಕೆ ಪುರಾವೆಗಳಿಲ್ಲ. ಹತ್ತನೇ ಶತಮಾನದ ಆತನನ್ನು ಬಿಟ್ಟು ಹತ್ತೊಂಬತ್ತನೆಯ ಶತಮಾನದ ನವೋದಯ ಸಾಹಿತ್ಯದ ಉದಯದ ತನಕ ತಮ್ಮ ಬಗ್ಗೆ ಹೇಳಿಕೊಂಡ ಪ್ರಮುಖ ಕನ್ನಡದ ಕವಿಗಳು ನಮಗೆ ಸಿಗುವುದಿಲ್ಲ.

ಹರಿಶ್ಚಂದ್ರ ಕಾವ್ಯವನ್ನು ಬರೆದ ರಾಘವಾಂಕ ನಿಜ ಜೀವನದಲ್ಲಿ ಸತ್ಯವಂತನಾಗಿದ್ದನೆ? ಗೊತ್ತಿಲ್ಲ. ' ಸ್ತೀ ರೂಪಮೆ ರೂಪಂ ಶೃಂಗಾರಮೇ ಕಾವ್ಯಂ’ ಎಂದ ನೇಮಿಚಂದ್ರ ಸ್ತ್ರೀ ಲೋಲನಾಗಿದ್ದಿರಬಹುದೇ? ಗೊತ್ತಿಲ್ಲ. ಅಷ್ಟೊಂದು ನಾಟಕಗಳನ್ನು ಬರೆದ ಕಾಳಿದಾಸ ಬಾಳಿ ಬದುಕಿದ ಕಾಲದಲ್ಲಿ ನಾಟಕಗಳಿಗೆ ಸಾಮಾಜಿಕ ಮನ್ನಣೆಯಿತ್ತೇ? ಗೊತ್ತಿಲ್ಲ.

ನಮ್ಮ ಹಿಂದಿನ ಸಾಹಿತಿ ಕಲಾವಿದರು ಬದುಕಿ ಬಾಳಿದ ಕಾಲಘಟ್ಟದ ಸಾಮಾಜಿಕ ಪರಿಸರವನ್ನು ’ಇಅದಮಿತ್ತಂ’ ಎಂದು ಹೇಳಲು ನಮಗೆ ಸಾಧ್ಯವಿಲ್ಲ. ಆದರೆ ಇತಿಹಾಸಕಾರರು, ಸಂಸ್ಕೃತಿ ವಿಶ್ಲೇಷಕರು ಇದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಈ ಕೃತಿಗಳು ಸಹಾಯ ಮಾಡುತ್ತವೆ. ಅಂದರೆ ಸಾಹಿತಿಯೊಬ್ಬ ತನ್ನ ಕೃತಿಯಲ್ಲಿ ಎಲ್ಲೋ ಒಂದು ಕಡೆ ಬದುಕಿರುತ್ತಾನೆ.. ಯಾಕೆಂದರೆ ಸಾಹಿತ್ಯ ರಚನೆಯೆಂದರೆ ಸಾಹಿತಿಯೊಬ್ಬ ಏಕಕಾಲದಲ್ಲಿ ತನ್ನೊಡನೆ ಮತ್ತು ಸಮಾಜದೊಡನೆ ನಡೆಸುವ ಸಂವಾದವಾಗಿರುತ್ತದೆ. ಆದ ಕಾರಣ ಆತನನ್ನು ಸಮಾಜದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಸಮಕಾಲೀನ ಸಾಹಿತಿಯೊಬ್ಬನ ಬಗ್ಗೆ ಮಾತನಾಡುವ, ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ವಿಚಾರಗಳು ಬಹಳ ಮುಖ್ಯವಾಗುತ್ತವೆ.

ಆಧುನಿಕ ಬದುಕು ಹೆಚ್ಚು ಸಂಕೀರ್ಣಗೊಳ್ಳುತ್ತಿದೆ. ಜೊತೆಗೆ ಪಾರದರ್ಶಕವೂ ಆಗುತ್ತಿದೆ. ಸಾರ್ವಜನಿಕ ಮತ್ತು ವ್ಯಯಕ್ತಿಕ ಬದುಕಿನ ಅಂತರವೇ ಅಳಿಸಿ ಹೋಗುತ್ತಿದೆ. ಈಗ ನಾನೇ ಬೇರೆ, ನನ್ನ ಸಾಹಿತ್ಯವೇ ಬೇರೆ ಎಂದು ಯಾವ ಸಾಹಿತಿಯೂ ಹೇಳಲಾರ. ಸಾಮಾಜಿಕ ಹೊಣೆಗಾರಿಕೆ ಇರಬೇಕಾದ ಸಾಹಿತಿ ಹಾಗೆ ಹೇಳಬಾರದು ಕೂಡಾ. ತನ್ನ ಖುಷಿಗಾಗಿ ಮಾತ್ರ ಬರೆಯುತ್ತೇನೆ ಎನ್ನುವ ಬರಹಗಾರ ಅದನ್ನು ಬರೆದು ತನ್ನ ತಲೆದಿಂಬಿನಡಿಯಲ್ಲಿ ಇಡಬೇಕೇ ಹೊರತು ಪ್ರಕಟಿಸುವ ಗೋಜಿಗೆ ಹೋಗಬಾರದು. ಒಮ್ಮೆ ಪ್ರಕಟವಾದ ಮೇಲೆ ಅದು ಓದುಗರ ಸ್ವತ್ತಾಗುತ್ತದೆ. ಓದುಗರು ಅದನ್ನು ತಮಗೆ ಸರಿಕಂಡಂತೆ ಅರ್ಥೈಸಿಕೊಳ್ಳಬಹುದು. ಆದರೆ ಕೃತಿಕಾರನ ಬದುಕಿನ ರೀತಿಯ ಬಗೆಗೂ ಸಾರ್ವಜನಿಕರಿಗೆ ಹಕ್ಕೊತ್ತಾಯಗಳಿರುತ್ತವೆಯೇ?

ಸಾಹಿತಿಯೊಬ್ಬ ಸಾರ್ವಜನಿಕರಿಗೆ ಪರಿಚಯವಾಗುವುದು ತನ್ನ ಬರಹಗಳ ಮೂಲಕ. ಅದರಲ್ಲಿ ಆತ ಮಂಡಿಸುವ ವೈಚಾರಿಕ, ಭಾವನಾತ್ಮಕ ನಿಲುವುಗಳ ಮುಖಾಂತರ ಆತ ವೈಯಕ್ತಿಕವಾಗಿಯೂ ಓದುಗರಿಗೆ ಹತ್ತಿರದವನಾಗುತ್ತಾನೆ. ಪ್ರಭು ಸಮ್ಮಿತಕ್ಕಿಂತ ಕಾಂತ ಸಮ್ಮಿತ ಹೆಚ್ಚು ಪರಿಣಾಮಕಾರಿಯಲ್ಲವೇ? ಲೇಖಕ ತನ್ನ ಬರವಣಿಗೆಯ ಮುಖಾಂತರ ಸಾರ್ವಜನಿಕ ವ್ಯಕ್ತಿತ್ವವೊಂದನ್ನು ರೂಪಿಸಿಕೊಂಡಿರುತ್ತಾನೆ. ಸಾರ್ವಜನಿಕರಿಗೆ ಅದೇ ಸತ್ಯ. ಆ ವ್ಯಕ್ತಿತ್ವವೇ ಮುಖ್ಯ. ಇದಕ್ಕಿಂತ ಭಿನ್ನವಾದ ವ್ಯಕ್ತಿತ್ವವೊಂದು ತನ್ನ ನೆಚ್ಚಿನ ಸಾಹಿತಿಗಿದೆ ಎಂಬುದನ್ನು ಆತನಿಗೆ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ.

ಇದು ಕೇವಲ ಒಬ್ಬ ಸಾಹಿತಿಯ ಬಗೆಗಿನ ಮಾತಲ್ಲ. ಸಿನಿಮಾ ನಟರು, ರಾಜಕಾರಣಿಗಳು, ಜನಪ್ರಿಯ ಕ್ರೀಡೆಗಳಲ್ಲಿ  ತ್ತೊಡ್ಗಿಗ್ಸಿಸ್ಕೊಿಕ್ವೊಂಡ್ರವರು ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿರುವ ಎಲ್ಲಾ ಪ್ರಮುಖರು ಎದುರಿಸುತ್ತಿರುವ ಸಮಸ್ಯೆಯಿದು.
ಒಬ್ಬ ಸೃಜನಶೀಲ ಬರಹಗಾರನ ಮ್ಟ್ಟಿಗೆ ಹೇಳುವುದಾದರೆ ಇವತ್ತಿನ ಸಂದರ್ಭದಲ್ಲಿ ಆತ ಮೂರು ಹಂತಗಳಲ್ಲಿ ಬದುಕುತ್ತಿರುತ್ತಾನೆ. ಅದು ಆತನೊಬ್ಬ ಬರಹಗಾರ, ಸಾರ್ವಜನಿಕ ವ್ಯಕ್ತಿ ಮತ್ತು ಕೌಟುಂಬಿಕ ವ್ಯಕ್ತಿ.. ಈ ಮೂರು ವ್ಯಕ್ತಿತ್ವಗಳು ಮೇಲ್ನೋಟಕ್ಕೆ ಒಂದೇ ಆಗಿ ಕಂಡು ಬಂದರೂ ಅವು ಮೂರೂ ವಿಭಿನ್ನವಾದ ಸ್ವತಂತ್ರ ವ್ಯಕ್ತಿತ್ವಗಳು.

ಬರವಣಿಗೆ ಎಂಬುದು ಏಕಾಂತದಲ್ಲಿ ನಡೆಯುವ ಸೃಷ್ಟಿ ಕಾರ್ಯ. ಪ್ರಾಪಂಚಿಕ ಅನುಭವ ಮತ್ತು ಕಲ್ಪನಎ ಅದರ ಮೂಲದ್ರವ್ಯ. ಒಬ್ಬ ವಿಜ್ನಾನಿಗೆ, ಒಬ್ಬ ತತ್ವಜ್ನಾನಿಗೆ ಇರುವಂತ ’ಕಾಣ್ಕೆ’ ಅವನಲ್ಲಿಯೂ ಇರುತ್ತದೆ. ವಾಸ್ತವ ಜಗತ್ತಿನಲ್ಲಿ ಇದ್ದೂ ಇಲ್ಲದಂತಹ ಸ್ಥಿತಿ ಅದು. ಆದ ಕಾರಣ ಅವನ ಸೃಷ್ಟಿಗೆ ಸಮಾಜವನ್ನು ಮುನ್ನಡೆಸುವ ಶಕ್ತಿ ಇರುತ್ತದೆ. ಅದಕ್ಕೇ ಕವಿಗಳನ್ನು ಅನಧಿಕೃತ ಶಾಸನಕರ್ತರೆಂದು ಶೆಲ್ಲಿ ಬಹಳ ಹಿಂದೆಯೇ ಕರೆದಿದ್ದಾನೆ. ಇದು ಒಬ್ಬ ಬರಹಗಾರನ ವ್ಯಕ್ತಿತ್ವ. ಒಬ್ಬ ಕೌಟುಂಬಿಕ ವ್ಯಕ್ತಿಯಾಗಿ ಆತ ನಿರ್ವಹಿಸುವ ಹಕ್ಕು ಮತ್ತು ಕರ್ತವ್ಯಗಳಿಗೆ ಬಹಳ ಸೀಮಿತವಾದ ವರ್ತುಲವಿದ್ದರೂ ಅದೇ ಅವನ ಕ್ರಿಯಾಶಕ್ತಿಗೆ ಪ್ರೇರಕ. ಇಲ್ಲಿ ಆತನಿಗೆ ನೆಮ್ಮದಿಯ ವಾತಾವರಣವಿದ್ದರೆ ಆತನ ವ್ಯಕ್ತಿತ್ವದ ಉಳಿದೆರಡು ಮುಖಗಳು ಪುಷ್ಟಿಯನ್ನು ಪಡೆಯುತ್ತವೆ.

ಒಬ್ಬ ಬರಹಗಾರನ ಮೂರೂ ಮುಖಗಳನ್ನು ಒಂದಾಗಿ ನೋಡುವ, ಒಂದಾಗಿಯೇ ಇರಬೇಕೆಂದು ಅಪೇಕ್ಷಿಸುವವರ ಸಂಖ್ಯೆ ದೊಡ್ಡದಿದೆ. ಒಬ್ಬ ಹೊಣೆಗಾರಿಕೆಯುಳ್ಳ ಬರಹಗಾರನಿಗೆ ಈ ಮೂರೂ ಮುಖಗಳನ್ನು ಸಂತುಲನಗೊಳಿಸುವ ಶಕ್ತಿ, ಜಾಣ್ಮೆ ಇರಬೇಕಾಗುತ್ತದೆ.

ಕನ್ನಡದ ಶ್ರೇಷ್ಟ ನಾಟಕಕಾರ ಟಿ.ಪಿ.ಕೈಲಾಸಂ ನಿಜ ಜೀವನದಲ್ಲಿ ಅತ್ಯಂತ ಕೊಳಕು ಪರಿಸರದಲ್ಲಿದ್ದರು ಎಂಬುದನ್ನು ಓದಿದ್ದೇವೆ. ಆದರೆ ಅವರ ನಾಟಕಗಳು ಸಮಾಜದ ಕೊಳಕನ್ನು ಹೊಡೆದೊಡಿಸಬೇಕು ಎಂಬ ಸಂದೇಶವನ್ನು ಸಾರುತ್ತಿರಲಿಲ್ಲವೇ? ಕನ್ನಡದ ಶ್ರೇಷ್ಟ ಬರಹಗಾರರೊಬ್ಬರು ಸಲಿಂಗಿಗಳಾಗಿದ್ದರು ಎಂಬುದನ್ನು ಕೇಳಿದ್ದೇವೆ. ಅವರ ಬರಹಗಳಲ್ಲಿ ಸಲಿಂಗಕಾಮ ಪರದ ವಾಸನೆಯಿತ್ತೇ? ಹೆಚ್ಚೇಕೆ ನಮ್ಮ ಸುತ್ತಮುತ್ತಲಿನ ಅನೇಕ ಬರಹಗಾರರು ಇಬ್ಬರು ಹೆಂಡಿರ ಗಂಡರು; ಇನ್ನು ಕೆಲವರು ಸ್ತೀಲೋಲರು,ಲಂಪಟರು. ಅವರೆಲ್ಲರನ್ನು ನಾವು ನಮ್ಮ ಬದುಕಿನ ಮಾದರಿಯನ್ನಿಟ್ಟುಕೊಳ್ಳಬೇಕೆ?
ವೈಯಕ್ತಿಕಮಟ್ಟದ ದೋಷಾರೋಪಣೆಯಾಗಿದ್ದರೂ ಅದು ಒಂದು ಮಿತಿಯನ್ನು ಮೀರದೆ ಆರೋಗ್ಯಕಾರಿಯಾಗಿದ್ದರೆ ಸಮಾಜವನ್ನು ಮುನ್ನಡೆಸುವಂತೆ ಇದ್ದರೆ ಚೆನ್ನ. ಬೇಂದ್ರೆ-ಶಂಬಾ ಜೋಶಿ, ಲಂಕೇಶ್-ಚಂಪಾ, ರಾಮಚಂದ್ರಶರ್ಮ-ಲಕ್ಷ್ಮಿನಾರಾಯಣ ಭಟ್ಟರ ನಡುವೆ ನಡೆಯುತ್ತಿದ್ದ, ನಡೆಯುತ್ತಿರುವ ಆರೋಗ್ಯಕರ ಸಂವಾದಗಳ ಹಿಂದೆ ಚಾರಿತ್ರ್ಯವಧೆಯಂತೂ ಇರುತ್ತಿರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ.

ಇಂದು ನಮ್ಮಂಥ ಜನಸಾಮಾನ್ಯರೂ ಸೇರಿದಂತೆ ಎಲ್ಲಾ ಸಾರ್ವಜನಿಕ ವ್ಯಕ್ತಿಗಳ ಕೌಟುಂಬಿಕ ಬದುಕಿನೊಳಗೆ ಟಿ.ವಿ. ಕ್ಯಾಮಾರಗಳು, ಟ್ಯಾಬ್ಲಾಯಿಡ್ ಪತ್ರಿಕೆಗಳು ಇಣುಕಿ ನೋಡುತ್ತಿವೆ. ಸುದ್ದಿ ಮಾಧ್ಯಮಗಳ ಸುದ್ದಿ ಬಿತ್ತರದ ಭರಾಟೆಯಲ್ಲಿ ಸಾರ್ವಜನಿಕ ವ್ಯಕ್ತಿಗಳ ಖಾಸಗಿ ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ. ಅವರು ಸಹಜವಾಗಿ ಆಡಿದ ಯಾವುದೋ ಒಂದು ಮಾತು, ಒಂದು ಹಾಸ್ಯದ ತುಣುಕು, ಆರೋಗ್ಯಕಾರಿಯಾದ ಟೀಕೆ ಇನ್ಯಾವುದೋ ಚೊಕಟ್ಟಿನೊಳಗೆ ಸೇರಿಕೊಂಡು ವಿಭಿನ್ನ ಅರ್ಥ ಪಡೆಯುತ್ತಿದೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಯಾವುದೋ ಒಂದು ಸುರಕ್ಷಿತ ಗಮ್ಯವನ್ನು ತಲುಪುವುದಕ್ಕಾಗಿ ಇಂಗೆಂಡಿನ ರಾಜಕುಮಾರಿ ಡಯಾನ ಅಂದು ಓಡಿದ ಹಾಗೆ ನಾವೂ ಓಡುತ್ತಿದ್ದೇವೆ.

[ ನನ್ನ ಕಂಪ್ಯೂಟರನ್ನು ಜಾಲಾಡುತ್ತಿರುವಾಗ ಹಿಂದೆಂದೋ ಬರೆದ ಈ ಬರಹವೊಂದು ಕಣ್ಣಿಗೆ ಬಿತ್ತು..ಇದು ಎಲ್ಲಿಯಾದರೂ ಪ್ರಕಟವಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈಗ ಪ್ರಸ್ತುತವಾಗಬಹುದೆಂದು ಪೋಸ್ಟ್ ಮಾಡುತ್ತಿದ್ದೇನೆ.]

3 comments:

Badarinath Palavalli said...

ಒಂದು ಒಳ್ಳೆಯ ಬರಹವನ್ನು ಪ್ರಕಟಿಸಿದ್ದೀರಾ.
ಖ್ಯಾತರ ಖಾಸಗೀ ಬದುಕನ್ನು ತಿಳಿದುಕೊಂಡ ಕೂಡಲೇ ಅವರ ಬಗೆಗಿನ ಆಸೆಯೇ ಮಣ್ಣಾಗಿ ಹೋಗುತ್ತದೆ ಅಲ್ಲವೇ?
ಕೆಲವರು ಮಾತ್ರ ಬರೆದಂತೆ ಬದುಕಿದ್ದಾರು ಅಥವಾ ನಟಿಸಿದಂತೆ ಜೀವಿಸಿದ್ದಾರು, ಉಳಿದವರೆಲ್ಲಾ ಅಲ್ಲೊಂದು ಒಳಗೊಂದು ಅಷ್ಟೇ!
ಕೆಲವೊಮ್ಮೆ ತೀರಾ ಆರಾಧಿಸಿದ ಖ್ಯಾತರೊಡನೆ ಕಛೇರಿ ಹಂಚಿಕೊಂಡಾಗಲೂ ನನಗೆ ಭ್ರಮ ನಿರಸನವಾಗಿದೆ.

sunaath said...

ಜಿ.ಬಿ.ಜೋಶಿಯವರು ಬೇಂದ್ರೆಯವರ ಆಪ್ತ ಮಿತ್ರರು. ಬೇಂದ್ರೆ ಹಾಗು ಶಂ.ಬಾ.ಜೋಶಿಯವರು ಹಾವು-ಮುಂಗುಸಿಯ ತರಹ ಕಾದಾಡಿದ್ದಾರೆ. ನೀವು ಬರೆಯುವಾಗ ಅಚ್ಚಿನ ತಪ್ಪು ಆಗಿರಬಹುದು. ದಯವಿಟ್ಟು ಸರಿಪಡಿಸಿ ಎಂದು ವಿನಂತಿಸುತ್ತೇನೆ.

suragi \ ushakattemane said...

ಸುನಾತ್ ಕಾಕ..ನಿಮ್ಮ ಕಾಮೆಂಟ್ ಅನ್ನು ಮೊನ್ನೆಯೇ ನೋಡಿದೆ..ಕ್ಷಮಿಸಿ ತಕ್ಷಣ ತಪ್ಪನ್ನು ತಿದ್ದಿಕೊಳ್ಳಲಾಗಲಿಲ್ಲ. ಕಾರಣ ನೀವು ಮತ್ತು ಬದ್ರಿಯವರು ಹೇಗೆ ಕಾಮೆಂಟ್ ಹಾಕಿದ್ರೋ ಗೊತ್ತಾಗಲಿಲ್ಲ.ನ್ನ್ನ ಬ್ಲಾಗ್ ಗೆ ಕಾಮೆಂಟ್ ಹಾಕಲು ಆಗುತ್ತಿಲ್ಲ. ಅಂತ ಕೆಲವರು ನನಗೆ ಮೆಸೇಜ್ ಮಾಡಿ ಹೇಳಿದ್ದರು. ನಾನೂ ಪ್ರಯತ್ನಿಸಿದೆ, ನನಗೂ ಆಗುತ್ತಿರಲಿಲ್ಲ. ಈಗ ನನ್ನ ಡ್ಯಾಸ್ ಬೋರ್ಡ್ ಗೆ ಮಂದು ಕಮೆಂಟಿಸುತ್ತಿದ್ದೇನೆ. ಈಗ ತಪ್ಪನ್ನು ಸರಿಪಡಿಸುವೆ..[ಇದು ತುಂಬಾ ವರ್ಷಗಳ ಹಿಂದೆ ಬರೆದದ್ದು.ಕಂಪ್ಯೂಟರ್ ನಲ್ಲಿ ಸೇವ್ ಆಗಿತ್ತು..ಹಾಗಾಗಿ ತಿದ್ದಲು ಹೋಗಲಿಲ್ಲ.
ಕಾಕ, ನಿಮ್ಮ ಕಾಳಜಿಗೆ ಧನ್ಯವಾದಗಳು.
ಬದ್ರಿಯವರೇ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ನಮನಗಳು.