Friday, May 27, 2016

ಸಂಕಲ್ಪಶಕ್ತಿಯ ಜೊತೆಗೆ ಮಾತು.



ಶೋಭಾ ಎಂಬ ಅಲೆಮಾರಿಯನ್ನು ನಾನು ಬೇಟಿಯಾಗಿದ್ದು ನಲ್ಲಮಲ್ಲ ಕಾಡಿನ ಚಾರಣದ ಸಂದರ್ಭದಲ್ಲಿ. ಪಯಣ ಮುಗಿದ ಮೇಲೆ ಸಹಪ್ರಯಾಣಿಕರನ್ನು ಮರೆಯುವುದು ಸಹಜವೆಂಬಂತೆ  ನಾನವರನ್ನು ಮರೆತುಬಿಟ್ಟೆ. ಆದರೆ ಚಾರಣದ ಸಂದರ್ಭದಲ್ಲಿ  ಹಿಮಾಲಯವೆಂದರೆ ನನಗೆ ತೀರದ ಮೋಹವಿದೆ ಎಂದು ಅವರಲ್ಲಿ ಹೇಳಿದ್ದೆ. ಅದನ್ನವರು ಮರೆತಿರಲಿಲ್ಲ.
ಪ್ರತಿವರ್ಷದಂತೆ ಮರುವರ್ಷ ಅವರು ಹಿಮಾಲಯಕ್ಕೆ ಹೋಗುವ ತಯಾರಿಯಲ್ಲಿರುವಾಗ ನನ್ನ ಮಾತನ್ನು ನೆನಪು ಮಾಡಿಕೊಂಡು ತಮ್ಮೊಡನೆ ಬರುವಿರಾ ಎಂದು ಅಹ್ವಾನಿಸಿದರು. ಮತ್ತೆ ಯೋಚಿಸೋದೇನಿದೆ? ಕೈಯ್ಯಲ್ಲಿ ಟ್ರಾಲಿ ಬ್ಯಾಗ್ , ಬ್ಯಾಕ್ ಪ್ಯಾಕ್ ಹಾಕಿಕೊಂಡು ಹೊರಟೇಬಿಟ್ಟೆ.
ಈಗವರು ನಾಲ್ಕು ವರ್ಷಗಳಿಂದ ನನ್ನ ಹಿಮಾಲಯ ಚಾರಣದ ಸಂಗಾತಿ.
ಶೋಭಾಗೆ ಈಗ ೬೩ ವರ್ಷ. ಹರೆಯದ ಹುಡುಗರಂತೆ ಹಿಮಾಲಯದ ಕಡಿದಾದ ಬೆಟ್ಟಗಳಲ್ಲಿ ಚಾರಣ ಮಾಡುತ್ತಿರುವ ಅವರು ನನಗೊಂದು ವಿಸ್ಮಯ, ಅಚ್ಚರಿ. ಆ ಬೆರಗಿನಿಂದಲೇ ಅವರನ್ನು ಮಾತಿಗೆಳೆದೆ

ಪ್ರಶ್ನೆ; ಎಷ್ಟು ವರ್ಷಗಳಿಂದ ನೀವು ಹಿಮಾಲಯಕ್ಕೆ ಹೋಗುತ್ತಿದ್ದೀರಿ?

ಶೋಭಾ; ಹದಿನಾಲ್ಕು ವರ್ಷಗಳಿಂದ. ೨೦೦೨ರಲ್ಲಿ ಮೊತ್ತ ಮೊದಲ ಬಾರಿಗೆ ಶಿವನ ಆಲಯ ಹಿಮಾಲಯಕ್ಕೆ ಅಡಿಯಿಟ್ಟೆ. ಅಲ್ಲಿಂದ ಇಲ್ಲಿತನಕ ಒಂದು ವರ್ಷವೂ ಮಿಸ್ ಮಾಡಿಲ್ಲ. ೨೦೧೩ರಲ್ಲಿ ಹಿಮಾಲಯದಲ್ಲಿ ಸುನಾಮಿ ಆದಾಗಲೂ ಅದರಿಂದಾದ ಅವಘಡಗಳನ್ನು ನೋಡಲೆಂದೇ ನಾವಲ್ಲಿಗೆ ಹೋಗಿದ್ದೆವು. ಕಳೆದ ತಿಂಗಳು ಈಶಾನ್ಯದ ಏಳು ರಾಜ್ಯಗಳು ಮತ್ತು ಭೂತಾನ್ ಪ್ರವಾಸ ಮುಗಿಸಿ ಬಂದಿದ್ದೇವೆ.

ಪ್ರಶ್ನೆ; ನಿಮಗೆ ಈ ಮೊದಲೇ ಪ್ರವಾಸ ಮತ್ತು ಚಾರಣದ ಅನುಭವ ಇತ್ತೇ? ಅಂದರೆ ಬಾಲ್ಯದಿಂದಲೇ?

ಶೋಭಾ; ಇಲ್ಲ. ಆದರೆ ನಮ್ಮ ತಂದೆ ಸರಕಾರಿ ಉದ್ಯೋಗದಲ್ಲಿದ್ದರು. ಹಾಗಾಗಿ ಊರೂರು ಸುತ್ತುವುದು ಅಭ್ಯಾಸವಾಗಿತ್ತು. ಹಾಗಾಗಿ ನನ್ನೂರು ಇಂತಹದೇ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಊರು ನನಗಿಲ್ಲ. ಮದುವೆಯಾದ ಮೇಲೆ ಬೆಂಗಳೂರೇ ಪರ್ಮನೆಂಟ್ ಊರಾಯ್ತು. ಯಾಕೆಂದರೆ ನನ್ನ ಪತಿ ಬೆಂಗಳೂರಿನ BHEL ನಲ್ಲಿ ಉದ್ಯೋದಲ್ಲಿದ್ದರು. ಹಾಗಾಗಿ ಕಛೇರಿ ಮತ್ತು ಮನೆ ಇವೆರಡೇ ನನ್ನ ಕಾರ್ಯಕ್ಷೇತ್ರವಾಯ್ತು. ಪ್ರವಾಸದ ಬಗ್ಗೆ ಕನಸು ಕೂಡಾ ಕಂಡಿರಲಿಲ್ಲ.

ಪ್ರಶ್ನೆ;  ಯಾವಾಗ ನಿಮ್ಮನ್ನು ಹಿಮಾಲಯ ಸೆಳೆಯಿತು?

ಶೋಭಾ; ನಾನು BSNL ನಲ್ಲಿ ಕೆಲಸ ಮಾಡುತ್ತಿದ್ದೆ.  ೨೦೦೨ರ ಜುಲೈ ನಲ್ಲಿ ಅನಿರೀಕ್ಷಿತವಾಗಿ ಪತಿಯನ್ನು ಕಳೆದುಕೊಂಡೆ. ಅದೇ ವರ್ಷ ನನ್ನ ಪರಿಚಯಸ್ಥರೊಬ್ಬರು ಅಮರನಾಥ ಯಾತ್ರೆಯನ್ನು ಕಂಡಕ್ಟ್ ಮಾಡಿದ್ದರು. ನಾನೂ ಹೊರಟುಬಿಟ್ಟೆ. ಆಮೇಲೆ ಸತತ ನಾಲ್ಕೈದು ವರ್ಷ ಯಾತ್ರೆ ಕೈಗೊಂಡೆ. ಆಮೇಲೆ ಟ್ರಾವಲ್ಸ್ ಜೊತೆ ಹೋಗೋದನ್ನು ಬಿಟ್ಟುಬಿಟ್ಟೆ. ಹಿಮಾಲಯದ ವಿವಿಧ ಗರಿಸ್ರುಂಗಗಳನ್ನು ಸುತ್ತುವ ಸಣ್ಣ ಟೀಮ್ ಅನ್ನು ನಾವೇ ಕಟ್ಟಿಕೊಂಡೆವು. ಈಗಾ ನಾವು ನಾವೇ ಗೋಗಲ್ ನಲ್ಲಿ ಹುಡುಕಿಕೊಂಡು ಪ್ರವಾಸ ಹೊರಟುಬಿಡುತ್ತೇವೆ.

ಪ್ರಶ್ನೆ; ನೀವು ಹತ್ತಿಳಿದ ಜಾಗಗಳಲ್ಲಿ ಕೆಲವನ್ನು ಹೆಸರಿಸಬಹುದೇ?

ಶೋಭಾ; ಜಮ್ಮು ಕಾಶ್ಮೀರದಿಂದ ಆರಂಭವಾಗಿ ಅರುಣಾಚಲಪ್ರದೇಶ-ಸಿಕ್ಕಿಂ ತನಕ ಸುಮಾರು ಎರಡೂವರೆ ಸಾವಿರ ಕಿ.ಮೀ ಉದ್ದದ ಹಿಮಾಲಯ ನಮ್ಮದು. ಅದರ ಉದ್ದಕ್ಕೂ ನಾವು ಓಡಾಡಿದ್ದೇವೆ. ಈ ಬಾಗದಲ್ಲಿ ಬರುವ ಪಂಚಕೇದಾರಗಳು, ಪಂಚಕೈಲಾಸಗಳು, ಪಂಚ ಬದರಿಗಳು ಗಂಗೋತ್ರಿ, ಯಮುನೋತ್ರಿ, ಮಾನಸ ಸರೋವರ, ಸತೋಪಂಥ್, ಆದಿ ಕೈಲಾಸ, ನೇಪಾಳ.. ಹೀಗೆ ಪಟ್ಟಿ ದೊಡ್ಡದಿದೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಚಾರಣಿಗರ ಸ್ವರ್ಗ. ಇಲ್ಲಿ ನಿಮ್ಮ ಮೈಯ್ಯಲ್ಲಿ ಕಸುವು ಇದ್ದಷ್ಟು ಕಾಲ ಸುತ್ತಾಡಲು ಜಾಗಗಳಿವೆ.

ಪ್ರಶ್ನೆ; ನಿಮ್ಮ ಕುಟುಂಬ?

ಶೋಭಾ; ನನಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಇಬ್ಬರೂ ಸಾಪ್ಟ್ವೇರ್ ಇಂಜಿನಿಯರ್ಸ್. ಅವರಿಗೂ ಪ್ರವಾಸದ ಹುಚ್ಚಿದೆ. ಹಾಗಾಗಿ ವಿದೇಶಿ ಪ್ರವಾಸಗಳಲ್ಲಿ ಮಗಳು ನನ್ನ ಜತೆಗೂಡುತ್ತಾಳೆ. ನನ್ನ ಗಂಡನ ಊರು ಉತ್ತರಕನ್ನಡ ಜಿಲ್ಲೆಯ ಕುಮುಟಾ ಆಗಿದ್ದರೂ ಅಲ್ಲಿಗೆ ಹೋಗಿ ಬಂದು ಹೆಚ್ಚು ಬಳಕೆಯಿಲ್ಲ.

ಪ್ರಶ್ನೆ; ಇಷ್ಟೆಲ್ಲಾ ಪ್ರವಾಸ ಹೋಗುತ್ತೀರಲ್ಲಾ...ಅದು ನಿಮಗೇನು ಕೊಡುತ್ತೆ?

ಶೋಭಾ; ಇದಕ್ಕೆ ಉತ್ತರಕೊಡುವುದು ಕಷ್ಟ. ನಮ್ಮ ಅನುಭವದ ವಿಸ್ತಾರತೆಗಾಗಿಕೋಶ ಓದು ದೇಶ ಸುತ್ತು’ ಅನ್ನು ಗಾದೆಯಿದೆಯೇ ಇದೆಯಲ್ಲಾ.  ಆಯಾಯ ಊರಿನ ಜತೆ ತಳುಕು ಹಾಕಿಕೊಂಡಿರುವ ಇತಿಹಾಸ, ಪುರಾಣಗಳು, ಅಲ್ಲಿಯ ಜನರ ಆಚಾರ-ವಿಚಾರ, ಸಂಸ್ಕ್ರುತಿ, ಇವುಗಳನ್ನೆಲ್ಲಾ ತಿಳಿದುಕೊಂಡಾಗ ನಮ್ಮ ಸಂಸ್ಕ್ರುತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತೆ. ಪೇಪರುಗಳಲ್ಲಿ, ಟೀವಿಯಲ್ಲಿ ಆ ಊರಿನ, ರಾಜ್ಯದ ಬಗ್ಗೆ ಸುದ್ದಿ ಬಂದಾಗಲೆಲ್ಲಾ ಅಲ್ಲೆಲ್ಲಾ ನವು ಓಡಾಡಿದ್ದೇವೆ. ಅವರೆಲ್ಲ್ಲಾ ನಮ್ಮವರು ಎಂಬ ಏಕತಾ ಭಾವಮೂಡುತ್ತೆ.

ಪ್ರಶ್ನೆ; ಈ ವಯಸ್ಸಲ್ಲೂ ಇಷ್ಟೇಲ್ಲಾ ಓಡಾಡುತ್ತಿರಲ್ಲಾ ನಿಮಗೆ ದಣಿವಾಗುವುದೆಲ್ಲವೇ? ನಿಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡಿದ್ದೀರಿ.

ಶೋಭಾ; ವಯಸ್ಸಾಗುವುದು ದೇಹಕ್ಕೆ; ಮನಸ್ಸಿಗಲ್ಲಾ. ನಾನು ಈ ಪರ್ವತವನ್ನು ಹತ್ತಬಲ್ಲೆ ಅಂತ ಸಂಕಲ್ಪ ಮಾಡಿದರೆ ನೀವು ಹತ್ತಿಯೇ ಹತ್ತುತ್ತೀರಿ,,ನಿಮ್ಮ ಮನಸ್ಸು ನಿಮ್ಮ ದೇಹವನ್ನು ಹೊತ್ತುಯ್ಯುತ್ತದೆ, ಅಲ್ಲದೆ ಯೋಗ, ಧ್ಯಾನ, ಮುಂಜಾವಿನ ನಡಿಗೆ ನೀವು ಸದಾ ಫಿಟ್ ಆಗಿರಲು ಸಹಾಯ ಮಾಡುತ್ತದೆ.

ಪ್ರಶ್ನೆ;ಮುಂದಿನ ನಿಮ್ಮ ಪ್ರವಾಸ ಎಲ್ಲಿಗೆ?

ಶೋಭಾ; ೨೦೧೩ರ ಹಿಮಾಲಯದ ಸುನಾಮಿಗೆ ಕೇದಾರನಾಥ ಪರಿಸರ ನಿರ್ನಾಮವಾಯ್ತಲ್ಲಾ..ಮಂದಾಕಿನಿಯ ಪ್ರವಾಹಕ್ಕೆ ಕಾರಣವಾದ ಕಾಂತಿ ಸರೋವರಕ್ಕೆ. ಅದನ್ನು ಗಾಂಧಿ ಸರೋವರ ಎಂದೂ ಕರೆಯಲಾಗುತ್ತದೆ. ಇದು ಕೇದಾರನಾಥದಿಂದ ಇನ್ನೂ ಮುಂದಕ್ಕೆ ಎಂಟು ಕಿ.ಮೀ ದೂರದಲ್ಲಿದೆ. ಅಲ್ಲಿಗೆ ಹೋಗಬೇಕೆಂಬ ಮಹಾದಾಸೆಯಿದೆ. ಆದರೆ ತುಂಬಾ ಕಠಿಣವಾದ ಚಾರಣ. ಅದಕ್ಕಾಗಿ ನಾವು ಮೈಮನಸುಗಳನ್ನು ಸಿದ್ಧಗೊಳಿಸಿಕೊಳ್ಳಬೇಕಾಗಿದೆ
[ಕನೆಕ್ಟ್ ಇಂಡಿಯಾದ ’ಅಥಿತಿ’ ಅಂಕಣಕ್ಕಾಗಿ ನಡೆಸಿದ ಸಂದರ್ಶನವಿದು.
ಅದರ ಲಿಂಕ್ ಇಲ್ಲಿದೆ.
http://connectkannada.com/2016/05/21/%E0%B2%B8%E0%B2%82%E0%B2%95%E0%B2%B2%E0%B3%8D%E0%B2%AA-%E0%B2%B6%E0%B2%95%E0%B3%8D%E0%B2%A4%E0%B2%BF%E0%B2%AF-%E0%B2%9C%E0%B3%8A%E0%B2%A4%E0%B3%86%E0%B2%97%E0%B3%86-%E0%B2%AE%E0%B2%BE%E0%B2%A4/ ]

.

2 comments:

Syed Shah said...

Hello Suragi,
I'm Syed Shah from Pakistan. Engineer by education, self employed by profession :). I have some sort of business deal regarding this blog, don't worry about content. If you want It will remain as it is and yours. Please let me know your email in reply so we can discuss it further in detail. Many thanks and regards,
Syed Shah

ಹಲೋ Suragi,
ನಾನು ಪಾಕಿಸ್ತಾನದಿಂದ ಸೈಯದ್ ಶಾ ಮನುಷ್ಯ. ಶಿಕ್ಷಣ ಎಂಜಿನಿಯರ್ ಸ್ವಯಂ ವೃತ್ತಿಯಲ್ಲಿ ಕೆಲಸ :). ನಾನು ವಿಷಯವನ್ನು ಬಗ್ಗೆ ಚಿಂತಿಸಬೇಡಿ, ಈ ಬ್ಲಾಗ್ ಬಗ್ಗೆ ವ್ಯಾಪಾರ ಒಪ್ಪಂದದ ಕೆಲವು ರೀತಿಯ ಹೊಂದಿವೆ. ನೀವು ಬಯಸಿದರೆ ಮತ್ತು ನಿಮ್ಮದೇ ಎಂದು ಉಳಿಯುತ್ತದೆ. ದಯವಿಟ್ಟು ನಾವು ವಿವರ ಮತ್ತಷ್ಟು ಚರ್ಚಿಸುವ ಮಾಡಬಹುದು ನನಗೆ ಪ್ರತ್ಯುತ್ತರ ನಿಮ್ಮ ಇಮೇಲ್ ತಿಳಿಸಿ. ಅನೇಕ ಧನ್ಯವಾದಗಳು ಮತ್ತು ಸಂಬಂಧಿಸಿದಂತೆ,
ಸೈಯದ್ ಷಾ

ಸಿಂಧು sindhu said...

Oh.. innonderadu varshadalli innobba tirugaala tippi siguttaaLe nimage jothege bandu jaggalu