Sunday, July 3, 2016

ಏಕಾಂಗಿ ಸಮರವೀರ; ಜಸ್ವಂತಸಿಂಗ್ ರಾವತ್





ತಾನು ಸತ್ತ ಮೇಲೂ ತನ್ನ ಹುದ್ದೆಯನ್ನು ಯಥಾಸ್ಥಿತಿ ಉಳಿಸಿಕೊಂಡು ಕಾಲಕಾಲಕ್ಕೆ ಭಡ್ತಿಯನ್ನು ಪಡೆಯುತ್ತಾ ಜೀವಂತವಿದ್ದಾಗ ಯಾವ್ಯಾವ ರೀತಿಯ ಸವಲತ್ತುಗಳನ್ನು ಪಡೆಯಬಹುದಿತ್ತೋ ಅವೆಲ್ಲವನ್ನು ಪಡೆಯುತ್ತಾ ತನ್ನ ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶಕನಾಗಿ, ಅವರಲ್ಲಿ ಸ್ಪೂರ್ತಿಯನ್ನು ತುಂಬುತ್ತಲಿರುವ ವ್ಯಕ್ತಿಯೊಬ್ಬನ ಬಗ್ಗೆ ನೀವೆಂದಾದರೂ ಕೇಳಿದ್ದೀರಾ?

ಇಲ್ಲವೆಂದಾದ್ರೆ ಅರುಣಾಚಲಪ್ರದೇಶದ ತವಾಂಗಿಗೆ ಬನ್ನಿ. ಜನಮಾನಸದಲ್ಲಿ ಬೇರುಬಿಟ್ಟು, ದಂತಕಥೆಯಾಗಿ ದೈವತ್ವಕ್ಕೇರಿರುವ ವೀರಯೋಧನೊಬ್ಬನನ್ನು ನೀವಿಲ್ಲಿ ಕಾಣಬಹುದು..

ಅದು  ೧೯೬೨ನೇ ಇಸವಿ. ಭಾರತದ ಮೇಲೆ ಚೀನಾ ಹಟತ್ತಾಗಿ ಧಾಳಿ ನಡೆಸಿತ್ತು. ಇದನ್ನು ಭಾರತ ನಿರೀಕ್ಷಿಸಿರಲಿಲ್ಲ. ಪ್ರಧಾನ ಮಂತ್ರಿ ಜವಹರಲಾಲ್ ನೆಹರುರವರು ಪಂಚಶೀಲ ತತ್ವಗಳ ಗುಂಗಿನಲ್ಲಿ, ’ಹಿಂದಿ ಚೀನಿ ಬಾಯಿ ಬಾಯಿ’ ಘೋಷಣೆಯಲ್ಲಿ ವಾಸ್ತವವನ್ನು ಮರೆತಿದ್ದರು. ಅನಿರೀಕ್ಷಿತ ಆಘಾತಕ್ಕೆ ನಮ್ಮ ಸೇನೆ ತತ್ತರಿಸಿ ಹೋಗಿತ್ತು. ಚೀನಿಯರ ಅತ್ಯಾಧುನಿಕ ಶಸ್ತ್ರಾಸ್ತ್ರಗಳೆದುರು ನಮ್ಮ ಬಂದೂಕಿನ ಗುಂಡುಗಳು ಮೊಂಡಾಗಿದ್ದವು. ನಮ್ಮ ಸೇನೆ ಸೋತು ಸುಣ್ಣವಾಗುತ್ತಿತ್ತು. ಚೀನಾ ಗಡಿರೇಖೆಯನ್ನು ದಾಟಿ ತವಾಂಗ್ ಅನ್ನು ಹಿಂದಿಕ್ಕಿ ಸೆಲ್ಲಾ ಪಾಸ್ ದಾಟಿ ಅಸ್ಸಾಂನ ತೇಜ್ ಪುರ ದವರೆಗೂ ಮುಂದೊತ್ತಿ ಬಂದಿತ್ತು. ಈ ಯುದ್ಧದಲ್ಲಿ ಸೇನಾಧಿಕಾರಿಗಳು ಸೇರಿದಂತೆ ಮೂರು ಸಾವಿರ ಭಾರತೀಯರ ಬಲಿಧಾನವಾಯ್ತು. ಆಗ ಭಾರತ ಅರುಣಾಚಲಪ್ರದೇಶದ ತವಾಂಗ್ ನಲ್ಲಿರುವ ತನ್ನ ಸೇನಾನೆಲೆಯಲ್ಲಿ ಅಳಿದುಳಿದಿದ್ದ ಸೈನಿಕರನ್ನು ಹಿಂದಕ್ಕೆ ಬರಲು ಆಜ್ನೆ ನೀಡಿತು. ಅರ್ಥಾತ್ ಭಾರತ ಚೀನಾದೆದುರು ಸೋಲನ್ನು ಒಪ್ಪಿಕೊಂಡಿತ್ತು.
ಆದರೆ ಮೂವರು ಕೆಚ್ಚೆದೆಯ ಸೈನಿಕರು ಸೇನಾ ಮುಖ್ಯಸ್ಥರ ಆಜ್ನೆಯನ್ನು ಧಿಕ್ಕರಿಸಿ ಯುದ್ಧವನ್ನು ಮುಂದುವರಿಸಲು ನಿರ್ಧರಿಸಿಬಿಟ್ಟರು.

ಆರಾಧನಾ ಸ್ಥಳವಾದ ಜಸ್ವಂತ್ ಗಡ್
 ಗಮನಿಸಿ; ಅದು ನವೆಂಬರ್ ತಿಂಗಳು. ಕಡು ಚಳಿಗಾಲ. ತವಾಂಗ್, ಸಮುದ್ರಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರದಲ್ಲಿರುವ ಹಿಮಾವೃತ ಪರ್ವತ ಶ್ರೇಣಿಯಲ್ಲಿ ಹುದುಗಿರುವ ಪುಟ್ಟ ಊರು. [ಈಗ ಪಟ್ಟಣವಾಗಿದೆ, ಇದು  ಅರುವತ್ತನಾಲ್ಕು ವರ್ಷಗಳ ಹಿಂದಿನ ಮಾತು.] ಸದಾ ಮಳೆ ಮತ್ತು ಹಿಮಸುರಿಯುವ ಶೀತಲ ವಾತಾವರಣ.  ಇಂತಹದ್ದರಲ್ಲಿ ಅತ್ಯಾಸೆಯಿಂದ ಸೇನೆಗೆ ಸೇರಿದ್ದ ಉತ್ತರಾಖಂಡ ರಾಜ್ಯದ ಘಡ್ವಾಲ್ ರೀಜನ್ನಿಗೆ ಸೇರಿದ ಇಪ್ಪತ್ತೆರಡರ ಹರೆಯದ ರೈಪಲ್ ಮ್ಯಾನ್ ಜಸ್ವಂತ್ ಸಿಂಗ್ ರಾವತ್, ಲ್ಯಾನ್ಸ್ ನಾಯಕ್ ತ್ರಿಲೋಕ್ ಸಿಂಗ್ ನೇಗಿ ಮತ್ತು ರೈಪಲ್ ಮ್ಯಾನ್ ಗೋಪಾಲ್ ಸಿಂಗ್ ಗುಸೈನ್ ಸೇನಾ ಆಜ್ನೆಯನ್ನು ಧಿಕ್ಕರಿಸಿ ಸಾವಿಗೆ ಮುಖಾಮುಖಿಯಾಗಲು ಸೆಲ್ಲಾ ಪಾಸ್ ನ ಬಂಕರ್ ಗೆ ಬಂದರು. ಸೆಲ್ಲಾ ಪಾಸ್ ಸಮುದ್ರಮಟ್ಟದಿಂದ ಹದಿನಾಲ್ಕು ಸಾವಿರ ಅಡಿ ಎತ್ತರದಲ್ಲಿದೆ. ಸುತ್ತ ಹಿಮಪರ್ವತಗಳು. ಅವರ ಕೈಯ್ಯಲ್ಲಿ ರೈಪಲ್ ಬಿಟ್ಟರೆ ಇನ್ನೇನೂ ಶಸ್ತಾಸ್ರ್ತಗಳಿರಲಿಲ್ಲ..  ಬಂಕರ್ಗಳಲ್ಲಿ ಕೂತು ಚೀನಿಯರತ್ತ ಗುಂಡು ಹಾರಿಸತೊಡಗಿದರು. ಮದ್ದುಗುಂಡುಗಳು ಮುಗಿದಾಗ ತೆವಳುತ್ತಾ ಹೋಗಿ ಸತ್ತ ಚೀನಿಯರ ಕೈಗಳಲ್ಲಿದ್ದ ಅತ್ಯಾಧುನಿಕ ಬಂದೂಕುಗಳನ್ನು ತಂದರು. ಹಾಗೆ ತರುವ ಪ್ರಯತ್ನದಲ್ಲಿ ತ್ರಿಲೋಕ್ ಸಿಂಗ್ ಮತ್ತು ಗೋಪಾಲ್ ಸಿಂಗ್ ನೆಲಕ್ಕೊರಗಿದರು.

ಅದು ೧೯೬೨ರ ನವೆಂಬರ್ ೧೭.  ಒಂಟಿಯಾಗುಳಿದ ಜಸ್ವಂತ್ ಸಿಂಗ್ ವೀರ ಅಭಿಮನ್ಯುವಿನ ರೀತಿಯಲ್ಲಿ ಹೋರಾಟಕ್ಕಿಳಿದ. ಬಂಕರ್ನಿಂದ ಬಂಕರ್ ಗೆ ಜಿಗಿಯುತ್ತಾ ಅವರದೇ ಬಂದೂಕುಗಳಿಂದ ಚೀನಿಯರತ್ತ ಗುಂಡು ಹಾರಿಸತೊಡಗಿದ ಹೀಗೆ ಸತತ ಮೂರು ದಿನ ಹೋರಾಡಿ ಮೂನ್ನೂರಕ್ಕೂ ಹೆಚ್ಚು ಚೀನಿಯರನ್ನು ಆಹುತಿ ತಗೊಂಡ. ಆತಂಕಕ್ಕೀಡಾದ ಚೀನಿಯರಿಗೆ ಭಾರತದ ಬಂಕರುಗಳಲ್ಲಿ ಎಷ್ಟು ಜನ ಸೈನಿಕರಿದ್ದರೆಂಬುದರ ಅಂದಾಜು ಸಿಕ್ಕಿರಲಿಲ್ಲ. ಬಂದೂಕಿನ ಹೊಡೆತ ನೋಡಿ ಒಂದು ಬೆಟಾಲಿಯನ್ ಸೈನಿಕರಿರಬಹುದೆಂದು ಅಂದಾಜಿಸಲಾಗಿತ್ತು. ಅವರು ಆತನೆಡೆಗೆ ಹದ್ದಿನ ಕಣ್ಣಿಟ್ಟಾಗ ಅವನಿಗೆ ಆಹಾರವನ್ನು ಸರಬರಾಜು ಮಾಡುತ್ತಿದ್ದ ಸ್ಥಳೀಯ ವ್ಯಕ್ತಿಯೊಬ್ಬನನ್ನು ಹಿಡಿದು ಚಿತ್ರಹಿಂಸೆ ಕೊಟ್ಟಾಗ ಅಲ್ಲಿರುವುದು ಕೇವಲ ಒಬ್ಬ ವ್ಯಕ್ತಿ ಎಂಬುದು ಗೊತ್ತಾಗಿ ಬೆಕ್ಕಸ ಬೆರಗಾದರು.ಅಲ್ಲದೆ ಅವನಿಗೆ ಪೋರ್ಟರ್ ಗಳಾಗಿ ಕೆಲಸಮಾಡುತ್ತಿದ್ದವರು ಸೆಲ್ಲಾ ಮತ್ತು ನೂರಾ ಎಂಬ ಹುಡುಗಿಯರೆಂದು ತಿಳಿದು ಇನ್ನೂ ಅಚ್ಚರಿಗೊಂಡರು.

ಆಮೇಲೆ ಅವರಿಗೆಲ್ಲವೂ ಸಲೀಸಾಯ್ತು. ಸೆಲ್ಲಾ ಗ್ರೆನೇಡ್ ಧಾಳಿಯಲ್ಲಿ ಸತ್ತಳು. ನೂರಾ ಬಂದಿಯಾದಳು. ಇವರೆಲ್ಲರ ಅಂತ್ಯದ ಬಗ್ಗೆ ಹಲವಾರು ಕಥೆಗಳಿವೆ ಸ್ಥಳೀಯ ಮೂಲದ ಪ್ರಕಾರ ಚಿತ್ರಹಿಂಸೆ ಕೊಟ್ಟು ಜಸ್ವಂತ್ ಇರುವ ಜಾಗವನ್ನು ತೋರಿಸೆಂದು ಚೀನಿ ಬ್ರಿಗೇಡಿಯರ್ ಆಕೆಯನ್ನು ಕರೆದೊಯ್ಯುತ್ತಿರುವಾಗ ಕಣಿವೆಯೊಂದಕ್ಕೆ ಆತನನ್ನು ದೂಡಿ ತಾನೂ ಬಿದ್ದು ಸತ್ತು ಹೋದಳಂತೆ. ಹಾಗೆಯೇ ತಾನು ಬಂದಿಯಾಗುತ್ತಿದ್ದೇನೆ ಎಂಬುದು ಗೊತ್ತಾದ ಒಡನೆಯೇ ತಾನೇ ಬಂದೂಕು ಹಾರಿಸಿಕೊಂಡು ಜಸ್ವಂತ್ ಆತ್ಮಾರ್ಪಣೆ ಮಾಡಿಕೊಂಡ ಎನ್ನಲಾಗುತ್ತದೆ. ಇಂತಹ ವೀರಾಧಿವೀರ ಭಾರತೀಯರ ಸೈನಿಕರ ಮನಸ್ಸಿನಲ್ಲಿ ಹೇಗೆ ಮನೆ ಮಾಡಿದ್ದಾನೆ; ಮನೆ ಮಾಡುತ್ತಿದ್ದಾನೆ ಗೊತ್ತೆ?

ಸೆಲ್ಲಾ ಪಾಸ್.
 ಮಿಲ್ಕಾಸಿಂಗ್ ನನ್ನು ತೆರೆಗೆ ತಂದ ರಾಕೇಶ್ ಓಂ ಪ್ರಕಾಶ್ ಮೇಹ್ರಾ ಅವರು ಜಸ್ವಂತ ಸಿಂಗ್ ನ ಜೀವನಗಾಥೆಯನ್ನು ಆಧಾರಿಸಿ ಸಿನೇಮಾ ತೆಗೆಯಲು ಮುಂದಾಗಿದ್ದರೆ. ಆ ಹಿನ್ನೆಲೆಯಲ್ಲಿ ಅವರು ಜಸ್ವಂತನ ಮನೆಯವರನ್ನು ಸಂಪರ್ಕಿಸಿ ಅವರ ತಾಯಿ ಮತ್ತು ತಮ್ಮಂದಿರ ಜೊತೆ ಮಾತುಕಥೆಯಾಡಿದ್ದಾರೆ. ಆ ಸಂದರ್ಭದಲ್ಲಿ ಅವರ ತಮ್ಮ ಆಡಿದ ಮಾತುಗಳನ್ನು ಕೇಳುವಾಗ ಸೋಜಿಗವಾಗುತ್ತದೆ. ಅವರ ಪ್ರಕಾರ, ಜಸ್ವಂತಸಿಂಗ್ ನ ತಲೆಯನ್ನು ಚೀನಿ ಸೈನಿಕರು ತಮ್ಮ ಜೊತೆಯಲ್ಲಿ ಕೊಂಡೊಯ್ಯುತ್ತಾರೆ. ಅಲ್ಲಿನ ಸೇನಾಧಿಕಾರಿಗಳು ಈ ಏಕಾಂಗಿ ವೀರನ ಸಾಹಸಗಾಥೆಯನ್ನು ಕೇಳಿ ದಿಗ್ಮೂಢರಾಗುತ್ತಾರೆ. ಆತನ ಶೌರ್ಯವನ್ನು ಕೊಂಡಾಡುತ್ತಾರೆ. ಮಾತ್ರವಲ್ಲ ಬಿನ್ನವತ್ತಳೆಯೊಂದಿಗೆ ಆತನ ಶಿರದ [ಎದೆಯಿಂದ ಮೇಲ್ಭಾಗದ] ಕಂಚಿನ ಮೂರ್ತಿಯನ್ನು ಮಾಡಿ ಗೌರವದೊಂದಿಗೆ ಭಾರತಕ್ಕೆ ಕಳುಹಿಸಿಕೊಡುತ್ತಾರೆ. ನೂರಾನಂಗ್ ನಲ್ಲಿರುವ ಜಸ್ವಂತ್ ಗುಡಿಯಲ್ಲಿ ಇಂದು ಪೂಜೆಗೊಳ್ಳುತ್ತಿರುವ ಕಂಚಿನ ಪ್ರತಿಮೆ ಇದೇ ಚೀನಿಯರು ಮಾಡಿಸಿಕೊಟ್ಟ ಪ್ರತಿಮೆಯಂತೆ. ಅಲ್ಲಿ ಶತ್ರುನೆಲದಲ್ಲಿ ಜಸ್ವಂತನ ಗುಣಗಾನ ನಡೆಯುತ್ತಿದ್ದರೆ, ಇಲ್ಲಿ ತಾಯ್ನೆಲದಲ್ಲಿ ಮೇಲಾಧಿಕಾರಿಗಳ ಆಜ್ನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಆತನ ಕೋರ್ಟ್ ಮಾರ್ಷಲ್ ಗೆ ಸಿದ್ಧತೆಗಳು ನಡೆಯ್ತುತ್ತವೆ.
ಅನಂತರದಲ್ಲಿ ಆತನ ಬಲಿದಾನವನ್ನು ಗುರುತಿಸಿದ ಭಾರತ, ರೈಪಲ್ ಮ್ಯಾನ್ ಜಸ್ವಂತ್ ಸಿಂಗ್ ರಾವತ್ ಗೆ ಮರಣೋತ್ತರ ಪರಮವೀರ ಚಕ್ರ ಪುರಸ್ಕಾರ ನೀಡಿ ಗೌರವಿಸಿತ್ತು.

ಸೆಲ್ಲಾ ಪಾಸ್ ನಿಂದ ೨೧ ಕಿಮೀ ದೂರದಲ್ಲಿ ತವಾಂಗ್ ಹಾದಿಯಲ್ಲಿ ಜಸ್ವಂತ್ ಘರ್ ಇದೆ. ಇದು  ಇದು ಜಸ್ವಂತ್ ಸಿಂಗ್ ರಾವತ್ ಹೆಸರಿನಲ್ಲಿರುವ ಯುದ್ಧಸ್ಮಾರಕ. ಈ ಸ್ಥಳದ ಹೆಸರು ನೂರಾನಂಗ್. ಸ್ಥಳೀಯರು ಹೇಳುವ ಪ್ರಕಾರ ಸೆಲ್ಲಾ ಪಾಸ್ ಮತ್ತು ನೂರಾನಂಗ್, ಜಸ್ವಂತ್ ಸಿಂಗ್ ನ ಏಕಾಂಗಿ ಹೋರಾಟಕ್ಕೆ ಸಾಥ್ ನೀಡಿ ವೀರಮರಣವನ್ನಪ್ಪಿದ ಅಕ್ಕ ತಂಗಿಯರ ಹೆಸರಿನಲ್ಲಿರುವ ಜಾಗಗಳಿವು. ಆದರೆ ಜಸ್ವಂತ್ ಘರ್ ನಲ್ಲಿ ಆ ಹುಡುಗಿಯರ ತ್ಯಾಗವನ್ನು ಶಾಶ್ವತಗೊಳಿಸಿದ್ದರ ಕುರುಹು ನನಗೆ ಕಾಣಿಸಲಿಲ್ಲ.

 ಜಸ್ವಂತ್ ಘರ್ ಈಗ ಕೇವಲ ಯುದ್ಧ ಸ್ಮಾರಕವಾಗಿ ಉಳಿದಿಲ್ಲ. ಅದೊಂದು ದೇವಸ್ಥಾನವಾಗಿದೆ. ಜಸ್ವಂತ್ ಬಾಬಾ ಆಗಿದ್ದಾರೆ. ಇಲ್ಲಿಯ ಸೈನಿಕರಿಗೆ ಆತ ಸತ್ತಿಲ್ಲ. ಆತನಿಗಾಗಿ ಹೊತ್ತು ಹೊತ್ತಿಗೆ ಇಲ್ಲಿ ಊಟ ತಯಾರಾಗುತ್ತೆ. ಆತನ ಬಟ್ಟೆಗೆ ಪ್ರತಿದಿನ ಇಸ್ತ್ರೀ ಮಾಡಲಾಗುತ್ತೆ, ಶೂಗೆ ಪಾಲೀಸ್ ಹಾಕಲಾಗುತ್ತೆ, ರಾತ್ರಿ ಮಲಗಲು ಬೆಡ್ ಸಿದ್ಧಪಡಿಸಲಾಗುತ್ತೆ. ಮತ್ತು ಅದನ್ನು ಅವರು ಉಪಯೋಗಿಸಿದ್ದಾರೆ ಎಂಬುದು ಮರುದಿನ ತಮ್ಗೆ ತಿಳಿಯುತ್ತೆ ಅಂತ ಅವರ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಿರುವ ನಾಲ್ವರು ಯೋದರು ಹೇಳುತ್ತಾರೆ.  ’ಬಾಬಾ ಅವರ ಶೂಗೆ ಪಾಲೀಸ್ ಮಾಡುವ ಭಾಗ್ಯ ನನಗೊದಗಿ ಬರಲಿ’ ಅಂತ ಇಲ್ಲಿಗೆ ಬರುವ ಪ್ರತಿ ಸೈನಿಕನೂ ಹಂಬಲಿಸುತ್ತಾನೆ. ೧೧೨೬ ಕಿಮೀ ಉದ್ದದ ಚೀನಾ-ಭಾರತ ಗಡಿಯನ್ನು ಕಾಯುವ ದೇವರು ಜಸ್ವಂತ್ ಬಾಬಾ ಎಂಬುದನ್ನು ಸೈನಿಕರು ನಂಬುತ್ತಾರೆ.

ಜಸ್ವಂತ್ ಗೆ ಕಾಲಕಾಲಕ್ಕೆ ಸೇವಾಭಡ್ತಿ ನೀಡಲಾಗುತ್ತೆ. ಸಂಬಳ ಬರುತ್ತೆ, ಪ್ರತಿ ವರ್ಷ ಸಮವಸ್ತ್ರ ನೀಡಲಾಗುತ್ತೆ. ವಾರ್ಷಿಕ ರಜೆ ಮಂಜೂರಾಗುತ್ತೆ, ಆತನ ಮನೆಯಿಂದ ಕಾಗದ ಬರುತ್ತೆ.ಮತ್ತು ಇದೆಲ್ಲವೂ ಸೇನಾ ರಿಜಿಸ್ಟರ್ ನಲ್ಲಿ ದಾಖಲಾಗುತ್ತದೆ. ಜಸ್ವಂತ್ ಸತ್ತು ನಲ್ವತ್ತು ವರ್ಷಗಳಾದ ನಂತರ ೨೦೦೨ರ ನವೆಂಬರ್ ೭ರಂದು ಆತ ಮೇಜರ್ ಜನರಲ್ ಹುದ್ದೆಗೇರಿದರು. ಆತ ಸೈನಿಕರ ಕನಸಿನಲ್ಲಿ ಬಂದು ನಿರ್ದೇಶನಗಳನ್ನು ನೀಡುತ್ತಾರೆಂದು ಸೈನಿಕರು ನಂಬುತ್ತಾರೆ. ಅಲ್ಲಿಯ ಚಟುವಟಿಕೆಗಳನ್ನು ನೋಡಿದರೆ ಆ ನಂಬಿಕೆಯ ಪ್ರಮಾಣ ತಿಳಿಯುತ್ತಿತ್ತು. ನಾವು ಹೋದಾಗಲೂ ಅಲ್ಲಿ ಸೈನಿಕರ ಜಂಗುಳಿಯಿತ್ತು. ಅಲ್ಲಿಗೆ ಬಂದ ಅವರೆಲ್ಲರೂ ದೇವಸ್ಥಾನಕ್ಕೆ ಪ್ರವೇಸುವಷ್ಟೇ ಭಕ್ತಿಭಾವದಿಂದ ಜಸ್ವಂತ್ ಗುಡಿಯ ಮೆಟ್ಟಲುಗಳಿಗೆ ನಮಿಸಿ ಕಣ್ಣಿಗೊತ್ತಿಕೊಳ್ಳುವುದು ಸಾಮಾನ್ಯ ದ್ರುಶ್ಯವಾಗಿತ್ತು. ಒಂದು ಟ್ರಕ್ಕಿನಲ್ಲಿ ಬಂದಳಿದ ಸೈನಿಕರಲ್ಲಿ ಹಲವಾರು ಕನ್ನಡಿಗೆ ಯೋದರಿದ್ದರು. ಜಸ್ವಂತ್ ಸಮಾಧಿಗೆ ನಮಿಸಲೆಂದೇ ಅವರ ವೆಹಿಕಲ್ ನಿಲ್ಲಿಸಿದ್ದರು. ತಮ್ಮ ಸಂಗಾತಿ ಜಸ್ವಂತ್ ಹೆಸರಿನಲ್ಲಿ ಯೋಧರು ಅಲ್ಲೊಂದು ಕ್ಯಾಂಟೀನ್ ನಡೆಸುತ್ತಾರೆ. ಅಲ್ಲಿ ಒಂದು ಡ್ರಮ್ಮಿನಲ್ಲಿ ಸದಾ ಬೆಚ್ಚನೆಯ ಚಹಾ ಇಟ್ಟಿರುತ್ತಾರೆ. ಪ್ರಯಾಣಿಕರು ಎಷ್ಟು ಲೋಟ ಬೇಕಾದರೂ ಚಹಾ ಕುಡಿಯಬಹುದು. ಅಲ್ಲಿಯ ಶೀತಲ ವಾತಾವರಣದಲ್ಲಿ ಬೆಚ್ಚನೆಯ ಚಹಾ ಪ್ರಯಾಣಿಕರಿಗೆ ಬಲು ಮುದನೀಡುತ್ತೆ. ಹತ್ತು ರೂಪಾಯಿ ಕೊಟ್ಟರೆ ರುಚಿಯಾದ ಎರಡು ಸಮೋಸ ಕೊಡುತ್ತಾರೆ. ಆ ನಿರ್ಜನ ಪ್ರದೇಶದಲ್ಲಿ ಅದು ನಮಗೆ ಅಮೃತ ಸಮಾನವೆನಿಸಿತ್ತು.

ತವಾಂಗ್ ಗೆ ಪೋಸ್ಟಿಂಗ್ ಆಗುವ ಪ್ರತಿ ಸೇನಾ ಸಿಬ್ಬಂದಿಯೂ,ಉನ್ನತ ರ್ಯಾಂಕಿನವರಾಗಿದ್ದರೂ ಜಸ್ವಂತ್ ಘರ್ ಗೆ ಹೋಗಿ ಬಾಬನಿಗೆ ನಮಸ್ಕರಿಸಿಯೇ ಮುಂದೆ ಹೋಗುತ್ತಾನೆ. ಹಾಗೆ ಮಾಡದೆ ಹೋದರೆ ದಾರಿ ಮಧ್ಯೆ ಅವಘಡಗಳು ಸಂಭವಿಸುತ್ತವೆ ಎಂಬುದನ್ನು ಸ್ಥಳಿಯರು ಉಧಾರಣೆಗಳ ಸಮೇತ ವಿವರಿಸುತ್ತಾರೆ.

ಚೀನಾ-ಭಾರತ ಯುದ್ಧದಲ್ಲಿ ಬಲಿಧಾನಗೈದ ಯೋಧರ ನೆನಪಿನಲ್ಲಿ ತವಾಂಗ್ ನಲ್ಲಿ ಇನ್ನೊಂದು ಯುದ್ಧ ಸ್ಮಾರಕವಿದೆ. ಇದು ಬೌದ್ಧಸ್ತೂಪದ ಮಾದರಿಯಲ್ಲಿದೆ. ಇದನ್ನು ಮ್ಯೂಸಿಯಂ ಮಾದರಿಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಆ ಕಾಲದಲ್ಲಿ ಯೋಧರು ಉಪಯೋಗಿಸುತ್ತಿದ್ದ ಸಲಕರಣೆಗಳು, ಮದ್ದುಗುಂಡುಗಳು, ಸಮವಸ್ತ್ರಗಳು ಇವೆಲ್ಲವನ್ನು ನೋಡುತ್ತಿದ್ದರೆ ಅವೆಲ್ಲಾ ಎಷ್ಟು ಕಳಪೆ ಗುಣಮಟ್ಟದವಾಗಿರುತ್ತಿದ್ದವು ಅಂತ ನಮ್ಮ ಯೋದರನ್ನು ನೆನೆದು ಸಂಕಟವಾಗುತ್ತದೆ..

[BOX] ನಮ್ಮಲ್ಲಿ ಬಹಳ ಜನರಿಗೆ ಈಶಾನ್ಯ ರಾಜ್ಯಗಳ ಬಗ್ಗೆ ಅಷ್ಟಾಗಿ ಮಾಹಿತಿ ಇದ್ದಂತಿಲ್ಲ, ಹಾಗಾಗಿ ಅದೆಲ್ಲಿದೆ ಎಂಬುದನ್ನು ನೋಡೋಣ. ಚೀನಾ [ಹಿಂದಿನ ಟಿಬೇಟ್] ಮತ್ತು ಭೂತಾನ್ ನೊಡನೆ ಗಡಿಯನ್ನು ಹೊಂದಿರುವ ಅರುಣಾಚಲಪ್ರದೇಶ ಭಾರತದ ಸೂರ್ಯ ಉದಯಿಸುವ ನಾಡು. ನಮ್ಮ ರಾಜಧಾನಿ ದೆಹಲಿಯಿಂದ 2314 ಕಿಮೀ ದೂರದಲ್ಲಿದೆ. ನಾವು ತವಾಂಗ್ ಪ್ರವಾಸವನ್ನು ಆರಂಭಿಸಿದ್ದು ಅಸ್ಸಾಂನ ರಾಜಧಾನಿ ಗೌಹಾಟಿಯಿಂದ. ಗೌಹಾಟಿಯಿಂದ ತವಾಂಗ್ ಗೆ ಇರುವ ದೂರ 518ಕಿಮೀ. ಮುಂಜಾನೆ ಗೌಹಾಟಿಯನ್ನು ಬಿಟ್ಟವರು ಅರುಣಾಚಲಪ್ರದೇಶದ ಬೊಂಬ್ಡಿಲಾವನ್ನು ತಲುಪಿದಾಗ ರಾತ್ರಿ ಒಂಬತ್ತು ಘಂಟೆ. ಬೊಂಬ್ಡಿಲಾದಲ್ಲಿ ಅಂದು ತಂಗಿ ಮರುದಿನ ತವಾಂಗ್ ನತ್ತ ಹೊರಟಿದ್ದೆವು. ಇಲ್ಲಿಂದ ತವಾಂಗ್ ಗೆ ಇರುವ ದೂರ ಕೇವಲ 181 ಕಿಮೀ. ಆದರೆ ಮುಂಜಾನೆ ಹೊರಟವರು ಅಲ್ಲಿಗೆ ತಲುಪಿದ್ದು ರಾತ್ರಿ ಒಂಬತ್ತೂವರೆಗೆ..

ನಮಗೆಲ್ಲಾ ಗೊತ್ತಿದೆ. ಅಸ್ಸಾಂ ನಮ್ಮ ಮಲೆನಾಡಿನ ಹಾಗೇ ಮೇಲ್ಮೈಲಕ್ಷಣವನ್ನು ಹೊಂದಿರುವ ನಾಡು. ತಂಪಾದ ವಾತಾವರಣವಿಲ್ಲ. ಆ ರಾಜ್ಯದ ಸರಹದ್ದನ್ನು ದಾಟಿ ಅರುಣಾಚಲಪ್ರದೇಶದ ಬೊಂಬ್ಡಿಲ್ಲಾವನ್ನು ಪ್ರವೇಶಿಸಿದೊಡನೆಯೇ ಎಲುಬು ಕೊರೆಯುವ ಚಳಿ ಆರಂಭವಾಗುತ್ತದೆ. ಅಲ್ಲಿಂದ ತವಾಂಗಿನ ಏರು ಹಾದಿಯನ್ನು ಸುತ್ತಿಬಳಸುತ್ತಾ ಹೋದಂತೆಲ್ಲಾ ನಾಲ್ಕೈದು ಪದರಿನಲ್ಲಿ ಹಾಕಿದ ಬಟ್ಟೆಯನ್ನು ಅದರ ಒಳಗಿನ ಥರ್ಮಲ್ ಅನ್ನು ಬೆದಿಸಿ ಒಳನುಗ್ಗುವ ಚಳಿ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ತವಾಂಗ್ ಗೆ ಹೋಗಲು ಇರುವುದು ಇದೊಂದೇ ಹಾದಿ. ಬೊಂಬ್ಡಿಲ್ಲಾದಿಂದ ಸೆಲ್ಲಾಪಾಸ್ ಗೆ ಇರುವ ದೂರ ೧೦೩ಕಿಮೀ.  ಸೆಲ್ಲಾ ಪಾಸ್ ನಿಂದ ಜಸ್ವಂತ್ ಘರ್ ಗೆ ಇರುವ ದೂರ ೨೧ ಕಿ.ಮೀ.ಬೊಂಬ್ಡಿಲ್ಲಾದಿಂದ ಇಲ್ಲಿಯವರೆಗೆ ನಾವು ಸುತ್ತಿ ಸುತ್ತಿ ಏರು ಹಾದಿಯಲ್ಲಿ ಹೋಗುತ್ತಿದ್ದರೆ, ಇಲ್ಲಿಂದ ತವಾಂಗಿನತ್ತ ಮತ್ತೆ ಇಳಿಜಾರು ಹಾದಿಯಲ್ಲಿ ಹೋಗುತ್ತಾ ಮತ್ತೆ ಮೇಲೇರಿ ಹೋಗಬೇಕು. ಜ್ಸ್ವಂತ್ ಘರ್ ನಿಂದ ತವಾಂಗ್ ಗೆ ಇರುವ ದೂರ ೪೬ ಕಿ.ಮೀ. ತವಾಂಗ್ ನಿಂದ ಚೀನಾ ಗಡಿಗೆ ಹೋಗುವ ಬೊಮ್ಲಾಪಾಸ್ ಗೆ ಇರುವ ದೂರ ೩೫ ಕಿ.ಮೀ. ಬೊಮ್ಲಾ ಪಾಸ್ ಸಮುದ್ರ ಮಟ್ಟದಿಂದ ಹದಿನಾರು ಸಾವಿರ ಅಡಿ ಎತ್ತರದಲ್ಲಿದೆ.  ಸೆಲ್ಲಾ ಪಾಸ್ ಸಮುದ್ರಮಟ್ಟದಿಂದ ಹದಿನಾಲ್ಕು ಅಡಿಗಳಷ್ಟು ಎತ್ತರದಲ್ಲಿ ಇರುವ ಕಾರಣ ಇಲ್ಲಿ ಕೊರೆಯುವ ಚಳಿಯಿರುತ್ತದೆ.ಇಲ್ಲಿ ತುಂಬಾ ಹೊತ್ತು ಉಳಿದರೆ ಉಸಿರಾಟದ ತೊಂದರೆಯೂ ಉಂಟಾಗುತ್ತದೆ. ಇಲ್ಲಿಯ ಸೆಲ್ಲಾ ಸರೋವರ ನಾವು ಹೋದಾಗ ಸಂಪೂರ್ಣ ಹೆಪ್ಪುಗಟ್ಟಿತ್ತು.  
ಬೊಮ್ಲಾ ಪಾಸ್ ಗೆ ಹೋಗುವ ಹಾದಿಯಲ್ಲಿ ನಮ್ಮ ವಾಹನ ಹಿಮದಲ್ಲಿ ಹೂತು ಹೋಗಿದ್ದು

ನಾವು ತವಾಂಗ್ ಹೋದಾಗ [ಮಾರ್ಚ್ ಮೊದಲನೇ ವಾರದಲ್ಲಿ] ಅಲ್ಲಿ ಮಳೆ ಸುರಿಯುತ್ತಿತ್ತು. ಬೊಮ್ಲಾ ಪಾಸ್ ಗೆ ಹೋಗುವ ದಾರಿಯಲ್ಲಿ ಹತ್ತಡಿ ಹೀಮ ಇರುವ ಕಾರದಿಂದಾಗಿ ಅಲ್ಲಿಗೆ ಹೋಗಲು ಸೇನೆ ಅನುಮತಿ ಕೊಡಲಿಲ್ಲ. ಆದರೆ ನಾವು ಪರ್ಮಿಷನ್ ಕೊಡುವ ಗೇಟಿನಲ್ಲಿ ಗಂಟೆಗಟ್ಟಲೆ ಕಾದು ಸೇನಾಧಿಕಾರಿಗಳ ಮನವೊಲಿಸಿ ಒಂದಷ್ಟು ದೂರ ಒಳಗೆ ಹೋಗಲು ಅನುಮತಿಯನ್ನು ಪಡೆದುಕೊಂಡಿದ್ದೆವು.  ಇದೇ ಬೊಮ್ಲಾ ಪಾಸ್ ಮೂಲಕ ದಲೈಲಾಮ ಚೀನಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದರು. ನಾವು ಈದಾರಿಯಲ್ಲಿ ಸುಮಾರು ಹತ್ತು ಹನ್ನೆರಡು ಕಿ.ಮೀ ದೂರ ಬಂದಿದ್ದೆವು. ರಸ್ತೆಯ ಮೇಲೆಲ್ಲಾ ಹಿಮಚಾದರವಿತ್ತು..ಅದು ಹೆಚ್ಚುತ್ತಲೇ ಹೋಗಿ ಒಂದೆಡೆ. ನಮ್ಮ ವಾಹನದ ಚಕ್ರಗಳು ಹಿಮದಲ್ಲಿ ಹೂತುಬಿಟ್ಟಿತು. ನಮ್ಮ ಡ್ರೈವರ್ ಚಕ್ರ ಮೇಲೆತ್ತಲು ಬಹಳ ಪ್ರಯತ್ನಪಟ್ಟ. ಆದರೆ ಸಾಧ್ಯವಾಗಲಿಲ್ಲ. ಕೊನೆಗೆ ಸೇನಾ ವಾಹನಗಳು ಹಿಮದ ಮೇಲೆ ಚಲಿಸಲು ಮಾಡುವಂತೆ ಹಗ್ಗವನ್ನು ಚಕ್ರಕ್ಕೆ ಒತ್ತೊತ್ತಾಗಿ ಸುತ್ತಿದ [ಸೇನಾವಾಹನಗಳಲ್ಲಿ ಚಕ್ರಕ್ಕೆ ಕಬ್ಬಿಣದ ಸರಪಳಿಯಿರುತ್ತದೆ] ಆದರೆ ವಾಹನ ಸ್ಟಾರ್ಟ್ ಮಾಡಿದ ಒಡನೆಯೇ ಅದು ತುಂಡಾಗಿ ಬಿತ್ತು. ಆಗ ಅಲ್ಲಿ ಸಂಚರಿಸುತ್ತಿದ್ದ ಮಿಲಿಟರಿ ವಾಹನವೊಂದು ನಮ್ಮ ವಾಹನವನ್ನು ಹಿಮದಿಂದ ಮೇಲೆತ್ತಿ ಹಿಂತಿರುಗಿ ಹೋಗಲು ಆದೇಶಿಸಿತ್ತು. 
ಬೊಮ್ಲಾ ಪಾಸ್ ಹಾದಿ.

ಅಸ್ಸಾಮ್ನಿಂದ ಬೊಂಮ್ಡಿಲ್ಲಾ ಮಾರ್ಗವಾಗಿ ಸೆಲ್ಲಾ ಪಾಸ್, ಜಸ್ವಂತ್ ಘರ್ ಮಾರ್ಗವಾಗಿಯೇ ತವಾಂಗ್ ತಲುಪಬೇಕು. ಅಲ್ಲಿಗೆ ಸೇರಲು ಇರುವುದು ಇದೊಂದೇ ಮಾರ್ಗ.  ಆದರೆ ದಾರಿಯುದ್ದಕ್ಕೂ ಹಿಮದ ಕಿರೀಟ ಹೊದ್ದ ಪರ್ವತಗಳ ಸಾಲು. ಹಿಮ ಪದರಗಳನ್ನು ಹೊದ್ದು ನಿಂತಿರುವ ಪೈನ್ ಮರಗಳು. ಅವುಗಳ ಅಡಿಯಲ್ಲಿ ಕಣ್ಮನ ತಣಿಸುವ ಹಿಮ ಹಾಸುಗಳು. ತವಾಂಗಿನತ್ತ ಹೋಗುವ ಬರುವ ಮಿಲಿಟರಿ ಟ್ರಕ್ಕ್ ಗಳು.ನಿರ್ಜನ ಹಾದಿಯುದ್ದಕ್ಕೂ ಅಲ್ಲಲ್ಲಿ ಸಿಗುವ ಸೇನಾ ನೆಲೆಗಳು ಇವೆಲ್ಲವೂ ಪ್ರಯಾಣಿಕರನ್ನು ವಾಸ್ತವ ಲೋಕದಿಂದಾಚೆ ಬಲು ದೂರಕ್ಕೆ ಒಯ್ಯುತ್ತವೆ. 

 ಇಷ್ಟೆಲ್ಲಾ ವಿವರಣೆ ಯಾಕೆ ಎಂದರೆ ಈದಾರಿ ಅಷ್ಟೊಂದು ಕಡಿದಾಗಿದೆ ಮತ್ತು ತಿರುವುಮುರುವುಗಳಿಂದ ಕೂಡಿದೆ. ನುರಿತ ಚಾಲಕ ಮಾತ್ರ ಇಲ್ಲಿ ವಾಹನ ಚಲಾಯಿಸಬಲ್ಲ. ಜೊತೆಗೆ ಆಗಾಗ ಉಂಟಾಗುವ ಹಿಮಪಾತ. ಒಂದಡಿಯಿಂದಾಚೆ ದಾರಿಯೇ ಕಾಣಿಸದು. ಹೆಡ್ಲೈಟ್ ಆನ್ ಮಾಡಿಯೇ ನಿಧಾನವಾಗಿ ಚಲಿಸಬೇಕು. ಇಂತಹ ದಾರಿಯಲ್ಲಿ ಅರುವತ್ತನಾಲ್ಕು ವರ್ಷಗಳ ಹಿಂದೆ ಜಸ್ವಂತಸಿಂಗ್ ನಂತಹ ಯೋದರು ಈ ದಾರಿಯನ್ನು ಕ್ರಮಿಸಲು ತೆಗೆದುಕೊಳ್ಳುತ್ತಿದ್ದ ಸಮಯವೆಷ್ಟು ಗೊತ್ತೆ? ಬರೋಬ್ಬರಿ ಇಪ್ಪತ್ತೊಂದು ದಿನಗಳು. ಆಗ ಈಗಿನಂತೆ ಸುಸಜ್ಜಿತವಾದ ರಸ್ತೆಯಿದ್ದಿರಲಿಕ್ಕಿಲ್ಲ. ಇದ್ದ ಹಾದಿಯಲ್ಲೇ ಅವರು ಸಾಮಾನು ಸರಂಜಾಮುಗಳನ್ನು ಬೆನ್ನ ಮೇಲೆ ಹೊತ್ತು ತರಬೇಕಾಗಿತ್ತು.]

ತವಾಂಗಿಗೆ ಹೋಗುವಾಗ ನಮ್ಮಲ್ಲಿ ಇದ್ದ ಮನಸ್ಥಿತಿಗೂ ಅಲ್ಲಿಂದ ಹಿಂತಿರುವಾಗ ಇದ್ದ ಮನಸ್ಥಿತಿಗೂ ಅಪಾರ ವ್ಯತ್ಯಾಸವಿತ್ತು. ಆಗ ಸೆಲ್ಲಾ ಪಾಸ್, ತವಾಂಗ್, ಬೊಮ್ಲಾಪಾಸ್, ಹಿಮಪರ್ವತಗಳು ತುಂಬಿದ್ದರೆ ಬರುವಾಗ ಜಸ್ವಂತ್ ಸಿಂಗ್ ರಾವತ್ ಮತ್ತು ನಮ್ಮ ಸಾವಿರಾರು ಯೋದರಿದ್ದರು. ಮನಸ್ಸು ಮ್ಲಾನವಾಗಿತ್ತು.

[ ಕನ್ನಡಪ್ರಭದ FRONTLINE ಮಾಲಿಕೆಯಲ್ಲಿ ಪ್ರಕಟವಾದ ಲೇಖನ ]


                                               


0 comments: