Sunday, May 19, 2019

how do the personal and the universal interact in a creative process?

ಸೃಜನಶೀಲ ಪ್ರಕ್ರಿಯೆಯಲ್ಲಿವೈಯಕ್ತಿಕ ಮತ್ತು ಸಾರ್ವತ್ರಿಕ ಸಂವಹನ ಹೇಗೆ?


ಸೃಜನಶೀಲ ಪ್ರಕ್ರಿಯೆಯಲ್ಲಿ ವೈಯಕ್ತಿಕ ಅನುಭವಗಳು ಸಾರ್ವತ್ರಿಕ ಅನುಭವಗಳಾಗಿ ರೂಪಾಂತರಗೊಳ್ಳುವುದು ಬಲು ಸೋಜಿಗದ ಮತ್ತು ಕುತೂಹಲಕಾರಿಯಾದ  ವಿಚಾರ.

ಬರಹಗಾರ ಅಥವಾ ಕಲಾಕಾರರು ತಾವು ಬದುಕಿನಲ್ಲಿ ನೋಡಿದ್ದು, ಅನುಭವಿಸಿದ್ದು, ಕನಸು ಕಂಡಿದ್ದು, ಸದಾ ಕಾಲ ಕಾಡಿದ್ದು, ಇದೆಲ್ಲವನ್ನೂ ಕಲಾ ರೂಪಕ್ಕೆ ತಂದಾಗ ಅದು ಸಾರ್ವತ್ರಿಕವಾಗುತ್ತದೆ. ಆಗ ಓದುಗ ಅಥವಾ ಕಲಾರಸಿಕ ಅದು ತನ್ನದೇ ಅನುಭವವೆಂಬಂತೆ ಪರಿಭಾವಿಸುತ್ತಾನೆ. ಆ ಕಲಾಕೃತಿ ತನ್ನೊಳಗಿನ ಪ್ರತಿಬಿಂಬ ಎಂದು ಭಾವಿಸಿ ಅದನ್ನು ಸೃಷಿಸಿದಾತನ ಮೇಲೆ ಪ್ರೀತಿ ಮತ್ತು ಗೌರವವನ್ನು ತಾಳುತ್ತಾನೆ. ಇದು ಒಂದು ಕಲೆಗೆ ಮತ್ತು ಕಲಾಕಾರನಿಗೆ ಸಂದ ಗೌರವವಾಗುತ್ತದೆ.

 ಸತ್ಯ ಮತ್ತು ಸೌಂದರ್ಯಗಳಂತ ಅಮೂರ್ತ ವಿಚಾರಗಳನ್ನು ಸಾರ್ವತ್ರಿಕಗೊಳಿಸಬೇಕಾದರೆ ವೈಯಕ್ತಿಕ ಅನುಭವಗಳ ಮುಖಾಂತರ ಹೇಳಿದರೆ ಅದು ಓದುಗನ ಅಥವಾ ನೋಡುಗನ ಮನಸನ್ನು ಬೇಗನೆ ತಟ್ಟುತ್ತದೆ. ವೈಯಕ್ತಿಕ ಅನುಭವಗಳನ್ನು ಪ್ರತಿಮೆಗಳ ಮೂಲಕ ಹೇಳಿದಾಗ  ಕೃತಿ ಆಳವನ್ನು ಪಡೆಯುತ್ತದೆ.

ಒಂದು ಕೃತಿಯಲ್ಲಿ ಕೃತಿಕಾರನ ವೈಯಕ್ತಿಕ ಅನುಭವ ಹೇಗೆ ಸಾರ್ವತ್ರಿಕವಾಗಿ ರೂಪಾಂತರಗೊಂಡಿದೆ ಎಂಬುದು  ಒಬ್ಬ ಸೂಕ್ಷ್ಮ ಓದುಗನಿಗೆ, ಕೇಳುಗನಿಗೆ ಅಥವಾ ನೋಡುಗನಿಗೆ ಗೊತ್ತಾಗುತ್ತದೆ. ಹಾಗಾಗಿ ಆತ ಅದು ತನ್ನದೇ ಬದುಕಿನ ಭಾಗವೆಂಬಂತೆ  ಭಾವಿಸುತ್ತಾನೆ.  ಹಾಗೆ ಆದಲ್ಲಿ ಅದು ಕೃತಿಯ ಗೆಲುವು.

Friday, May 17, 2019

What is the difference between a story and a situation?



Story ಅಂದರೆ ಅದಕ್ಕೊಂದು ಆರಂಭ ಮತ್ತು ಅಂತ್ಯವಿರುತ್ತದೆ. ಇದರ ಮಧ್ಯೆ ಅನೇಕ ಘಟನೆಗಳು ನಡೆಯುತ್ತವೆ. ಭಾವನೆಗಳು ಅನಾವರಣಗೊಳ್ಳುತ್ತವೆ.
Situation ಅಂದರೆ ಸಂದರ್ಭ ಅಥವಾ ಸನ್ನಿವೇಶ. ಕಥೆ ಭಾವನೆಗಳ ಮೇಲೆ ನಿಂತಿದ್ದರೆ ಸಂದರ್ಭ ಆ ಕಾಲದ ವರ್ತಮಾನದ ಮೇಲೆ ನಿಂತಿರುತ್ತದೆ. ಹಾಗಾಗಿ ಇವೆರಡರ ನಡುವೆ ಯಾವಾಗಲೂ ಒಂದು ರೀತಿಯ ತಿಕ್ಕಾಟ, ಹೊಂದಾಣಿಕೆ ಮತ್ತು ಘರ್ಷಣೆ ಇರುತ್ತದೆ. ಅದು ಇದ್ದಾಗ ಮಾತ್ರ ಅದೊಂದು ಸಾಹಿತ್ಯ ಕೃತಿಯಾಗುತ್ತದೆ. ಒಳ್ಳೆಯ ನಾಟಕವಾಗುತ್ತದೆ.
ಉದಾಹರಣೆಗೆ ಶೂದ್ರಕ ಬರೆದ ಮೃಚ್ಛಕಟಿಕ ನಾಟಕವನ್ನೇ ತೆಗೆದುಕೊಳ್ಳುವುದಾದರೆ ಅದು ಕ್ರಿಸ್ತಪೂರ್ವ ಐದನೆಯ ಶತಮಾನದ ಕಥೆ. ಅದು ಇವತ್ತಿಗೂ ಯಾಕೆ ಒಂದು ಅತ್ಯುತ್ತಮ ನಾಟಕವಾಗಿ ಉಳಿದುಕೊಂಡಿದೆಯೆಂದರೆ ಅದಕ್ಕಿರುವ ಹಲವು ಆಯಾಮಗಳು. ಮೃಚ್ಚಕಟಿಕ ನಾಟ್ಕ ಆ ಕಾಲದ ರಾಜಕೀಯ, ಸಾಮಾಜಿಕ, ಸಾಂಸಾರಿಕ ಬದುಕಿನ ವಿವರಗಳನ್ನು ಹೇಳುತ್ತದೆ.
ನಾಟಕದಲ್ಲಿ ಪ್ರತಿಯೊಂದು ಪಾತ್ರಕ್ಕೂ ಮಹತ್ವವನ್ನು ಕೊಡಲಾಗಿದೆ.ಅದು ಚಾರುದತ್ತನ ಸಂಸಾರದ ಕಥೆಯೂ ಹೌದು, ಚಾರುದತ್ತ ವಸಂತಸೇನೆಯ ಪ್ರೇಮದ ಕಥೆಯೂ ಹೌದು. ರಾಜನ ವಿರುದ್ಧ ಬಂಡಾಯವೆದ್ದು ಗೆದ್ದ ಕ್ರಾಂತಿಕಾರಿಗಳ ಕಥೆಯೂ ಹೌದು. ಚಾರುದತ್ತನ ಪ್ರೇಮದ ಕಥೆಯಷ್ಟೇ ಕಳ್ಳ ಮತ್ತು ವಸಂತಸೇನೆಯ ಪ್ರೇಮದ ಕಥೆಯೂ ಮಹತ್ವ ಪಡೆದುಕೊಳ್ಳುತ್ತದೆ. ಕಾಮಸೂತ್ರವನ್ನು ಬರೆದ ವಾತ್ಸಾಯನ ಋಷಿಯೂ ಇಲ್ಲಿ ಪ್ರಮುಖ ಪಾತ್ರ. ಹಾಗಾಗಿ ಇವರೇ ಈ ನಾಟಕದ ನಾಯಕ ಅಥ್ವಾ ನಾಯಕಿ ಎಂದು ಹೇಳಲು ಸಾಧ್ಯವಿಲ್ಲ. ನಿರ್ದೇಶಕ ಈ ನಾಟ್ಕದಲ್ಲಿ ಯಾರನ್ನು ಬೇಕಾದರೂ ಬೇಕಾದರೂ ನಾಯಕ ನಾಯಕಿಯನ್ನಾಗಿ ಮಾಡಬಹುದು. ಶೂದ್ರಕನ ದೃಷ್ಟಿಯಲ್ಲಿ situation ಕೇಂದ್ರ ಪಾತ್ರ ಆಗಿರಲೂ ಬಹುದು.
ಇದೆಲ್ಲಾ ನಾಟಕದೊಳಗಿನ ಸನ್ನಿವೇಶಗಳಾದವು. ಆದರೆ ಸ್ವತಃ ನಾಟಕಕಾರನೇ ನಾಟಕ ರಚನೆಗಿರಬೇಕಾದ ಪರಂಪರಾಗತ ನಿಯಮಾವಳಿಗಳನ್ನು ಉಲ್ಲಂಘಸಿಸುತ್ತಾನೆ. ಭರತನ ‘ನಾಟ್ಯಶಾಸ್ತ್ರ’ದ ನಿಯಮದ ಪ್ರಕಾರ ಕಳ್ಳಕಾಕರು, ವೈಶ್ಯೆಯರಂತಹ ಸಮಾಜನಿಂದಿತ ವರ್ಗದವರು ನಾಟಕದ ಮುಖ್ಯ ಪಾತ್ರಧಾರಿಗಳಾಗಬಾರದು. ಆದ್ರೆ ಶೂದ್ರಕ ಆ ಕಾಲದಲ್ಲೇ ಅದನ್ನು ಮೀರುತ್ತಾನೆ. ಮೃಚ್ಛಕಟಿಕಾದಲ್ಲಿ ಯಾವ ಪಾತ್ರವೂ ಹೆಚ್ಚಲ್ಲ ಯಾವ ಪಾತ್ರವೂ ಕಡಿಮೆಯಲ್ಲ. ಹಾಗಾಗಿ ಇಡೀ ನಾಟಕ, ನಾಟಕದ ಹೊರತಾದ ಇನ್ನೇನನ್ನೋ ಹೇಳುತ್ತದೆ. ಹಾಗಾಗಿಯೇ ಅದು ಸಾರ್ವಕಾಲೀಕವಾಗಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಬರೆದರೂ ಇಂದಿಗೂ ಪ್ರಸ್ತುತವಾಗಿದೆ.
ನಾನು ಬರೆಯಬಹುದಾದ ನಾಟಕದ ಬಗ್ಗೆ ಹೇಳುವುದಾದರೆ ಅದು ಬೊಬ್ಬರ್ಯ ಎನ್ನುವ ಒಬ್ಬ ಜಾನಪದ ವ್ಯಕ್ತಿಯ ಕಥೆ. ಮಹಮ್ಮದ್ ಎನ್ನುವ ಕಡಲಿನ ವ್ಯಾಪಾರಿ  ಒಮ್ಮೆ ಊರಿಗೆ ಬಂದಾಗ ತನ್ನ ಪರಿಚಯದ ಇಬ್ಬರು ಅಣ್ಣಂದಿರು ತಮ್ಮ ಒಬ್ಬಳೇ ತಂಗಿಯ ಬಗ್ಗೆ ಚಿಂತಿತರಾಗಿರುವುದನ್ನು ಕಂಡು ಕಾರಣ ಕೇಳುತ್ತಾನೆ. ಆಗ ಅವರು, ತಂಗಿಗೆ ಪ್ರತಿಸಲ ಮದುವೆ ಮಾಡಿದಾಗಲೂ ಪ್ರಥಮ ರಾತ್ರಿಯಂದೇ ವರ ಸತ್ತು ಹೋಗುತ್ತಾನೆ. ಹೀಗೆ ಇಪ್ಪತ್ತೊಂದು ಬಾರಿ ನಡೆಯುತ್ತಾನೆ. ಅಣ್ಣಂದಿರ ಅನುಮತಿಯನ್ನು ಪಡೆದು ಮಹಮ್ಮದ್ ಆಕೆಯನ್ನು ಮದುವೆಯಾಗುತ್ತಾನೆ. ಉಪಾಯದಿಂದ ಬದುಕಿ ಉಳಿಯುತ್ತಾನೆ. ಅವರಿಬ್ಬರಿಗೆ ಹುಟ್ಟಿದವನೇ ಬೊಬ್ಬರ್ಯ. ಬೊಬ್ಬರ್ಯ ಸತ್ತ ಮೇಲೆ ದೈವವಾಗಿ ಹಿಂದು ಮುಸ್ಲಿಂ ಎರಡೂ ಪಂಗಡಗಳಿಂದಲೂ ಆರಾಧನೆಗೆ ಒಳಾಗುತ್ತಾನೆ. ಇದು stoy.
ಕರಾವಳಿಗೆ ಮುಸ್ಲಿಂ ಆಗಮನದಿಂದ ಇಂಗ್ಲೀಶರ ಆಗಮನದವರೆಗೆ stoy ವಿಸ್ತರಿಸಿಕೊಳ್ಳುತ್ತದೆ. Situation ಯಾವುದೆಂದರೆ ಇಂದಿನ ಕರಾವಳಿಯ ಕೋಮು ಸಂಘರ್ಷದ ವಾತಾವರಣ. ಅದಕ್ಕಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು. Story ಮತ್ತು Situation  ನಡುವೆ ಸಂಘರ್ಷ [conflict] ನಡೆದಾಗ ನಾಟಕೀಯ ಅಂಶಗಳು [ dramatic elements] ಸೇರಿ ನಾಟಕ ರಚನೆಯಾಗುತ್ತದೆ.
Usha kattemane