Sunday, October 4, 2009

ನಿಸರ್ಗದ ವಿಸ್ಮಯ!



















ಕಳೆದ ತಿಂಗಳು ಹೆಚ್ಚು ಕಮ್ಮಿ ನಾನು ಧರ್ಮಸ್ಥಳ ಸಮೀಪದ ನನ್ನ ಜಮೀನಲ್ಲೇ ಇದ್ದೆ. ಅಡಿಕೆ, ಕೊಕ್ಕೋ, ಗೇರು, ಬಾಳೆ ಗಿಡಗಳನ್ನು ನೆಡಿಸ್ತಾ, ಗೊಬ್ಬರ ಹಾಕುವುದರಲ್ಲಿ ನಿರತಳಾಗಿದ್ದೆ.
ಮೊನ್ನೆ ಬೆಂಗಳೂರಿಗೆ ಹಿಂದಿರುಗಿದಾಗಲೂ ಮನಸ್ಸು ಜಮೀನು ಕಡೆಯೇ ಎಳೆಯುತ್ತಿತ್ತು. ಧಾರಾಕಾರ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಹೊಂಡದಲ್ಲಿ ನೀರು ನಿಂತು ಹಾಕಿದ ಗಿಡಗಳು ಕೊಳೆತು ಹೋದರೆ....? ಭಯ ಕಾಡುತ್ತಿತ್ತು. ಕಪಿಲೆ ಮುನಿದು ತನ್ನ ಬಲಿಷ್ಟ ತೋಳುಗಳನ್ನು ನನ್ನ ತೋಟಗಳೆಡೆ ಬೀಸಿದರೆ...?ತೋಟಕ್ಕೆ ಹೋಗಲು ಮನಸ್ಸು ನೆಪಗಳನ್ನು ಹುಡುಕುತ್ತಿತ್ತು.

ನೆಪ ಸಿಕ್ಕಿತ್ತು; ಅ.೨ ಗಾಂಧಿ ಜಯಂತಿ. ಗ್ರಾಮ ಸ್ವರಾಜ್ ಕನಸು ಕಂಡವರು. ಹಳ್ಳಿಗಳ ಉದ್ಧಾರದಲ್ಲೇ ದೇಶದ ಪ್ರಗತಿ ಎಂದವರು. ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಅಂದುಕೊಂಡೆ. ಅ.೨ರಂದು ಮುಂಜಾನೆ ಎದ್ದು ಮನೆಯವರನ್ನೆಲ್ಲಾ ಕೂಡಿಸಿಕೊಂಡು ದೇವನಹಳ್ಳಿಯಲ್ಲಿರುವ ’ತೇಜ ಅಗ್ರೋ ಫಾರ್ಮ್’ಗೆ ಬಂದುಬಿಟ್ಟೆ.

’ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು. ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು...’ ಎಂಬ ಹಾಡಿನ ಸಾಲುಗಳನ್ನು ಎಲ್ಲರಂತೆ ನಾನು ಕೂಡ ಮೆಚ್ಚಿಕೊಂಡಿದ್ದೆ. ಜಮೀನು ಕೊಂಡುಕೊಂಡಿದ್ದೆ. ಹೂ- ಹಣ್ಣು ಬೆಳೆಯದಿದ್ದರೆ ಹೇಗೆ?.

ನನ್ನ ಉದ್ದೇಶ, ಕನಸುಗಳನ್ನು ತೇಜ ನರ್ಸರಿಯ ಮಾಲೀಕರಾದ ರಮೇಶ್ ಅವರಿಗೆ ವಿವರಿಸಿದೆ. ಎರಡು ದಶಕಗಳಿಗಿಂತಲೂ ಹಿಂದಿನಿಂದ ಸಾವಯವ ಪದ್ದತಿಯಲ್ಲಿ ಗಿಡಗಳನ್ನು ಬೆಳೆಸಿ, ನಾಡಿನಾದ್ಯಂತ ವಿತರಿಸುತ್ತಾ, ಆಸಕ್ತರಿಗೆ ತರಬೇತಿ ಶಿಭಿರಗಳನ್ನು ಏರ್ಪಡಿಸುತ್ತಾ ಇರುವ ಪ್ರಗತಿಪರ ರೈತ ಅವರು. ರಮೇಶ್ ನನಗೆ ಮಲೆನಾಡಿಗೆ ಹೊಂದಿಕೊಳ್ಳುವ ೨೦ ರೀತಿಯ ವಿವಿಧ ಹಣ್ಣಿನ ಗಿಡಗಳನ್ನು ನೀಡಿದರು. ಅದರಲ್ಲಿ ಹಲವು ಗಿಡಗಳ ಹೆಸರನ್ನು ನಾನು ಕೇಳಿಯೇ ಇರಲಿಲ್ಲ. ಕಲಾಫಡ್ ಮಾವು, ಕಾಲಪಟ್ಟಿ ಸಪೋಟ, ಕ್ರಿಕೇಟ್ ಬಾಲ್ ಸಪೋಟ, ವಾಟರ್ ಅಪಲ್, ಬಗ್ವಾ ದಾಳಿಂಬೆ, ರೆಡ್ ಸೀತಾಫಲ... ಹೀಗೆ, ನನಗೆ ಯಾವುದನ್ನು ಕೊಂಡುಕೊಳ್ಳಲಿ ಎಂದು ಗೊಂದಲ. ರಮೇಶ್ ಸರಿಯಾದ ಮಾರ್ಗದರ್ಶನವನ್ನು ನೀಡುವುದರಲ್ಲೂ ಸಿದ್ದಹಸ್ತರು. ಎಲ್ಲಾ ಗಿಡಗಳ ಗುಣವಿಶೇಷಗಳನ್ನು ವಿವರಿಸುತ್ತಾ ನಮ್ಮ ಆಯ್ಕೆಯನ್ನು ಸುಗಮಗೊಳಿಸಿದರು.

ನಮ್ಮ ಗಾಡಿಯಲ್ಲಿ ತುಂಬುವಷ್ಟು ಗಿಡಗಳನ್ನು ಹೇರಿಕೊಂಡು, ಮುಂದಿನ ಸರ್ತಿಗಾಗಿ ಇನ್ನಷ್ಟು ಗಿಡಗಳನ್ನು ಗುರುತಿಸಿಟ್ಟುಕೊಂಡೆವು.
ಬ್ಲಾಗ್ ಬರೆದದ್ದು ಇದನ್ನೆಲ್ಲಾ ಹೇಳಲಿಕ್ಕಲ್ಲ ಮಾರಾಯ್ರೆ! ಕೃಷಿ ಯಾರಿಗೆ ಬೇಕು ಅಲ್ವಾ?. ಊರಿಂದ ಬರುವಾಗ ಚಾರ್ಮಾಡಿ ಘಾಟ್ ನಲ್ಲಿ ಬಂದೆವು, ಅದು ನನ್ನ ಇಷ್ಟದ ಹಾದಿ. ಬೆಟ್ಟವನ್ನು ಬಳಸಿ, ಬಳಸಿ ಹತ್ತುತ್ತ ಬರುವಾಗ ನೇಪಾಳ ಹಾದಿಯ ಕಣಿವೆ, ಗಿರಿ ಶೃಂಗಗಳ ನೆನಪು ಬರುತ್ತದೆ. ಜೇನುಕಲ್ಲಿನ ಬಳಸು ದಾರಿಯಲ್ಲಿ ನಿಂತು ಪ್ರಪಾತದತ್ತ ಕಣ್ಣು ಹಾಯಿಸಿದರೆ ದೇವಲೋಕದಲ್ಲಿ ನಿಂತ ಅನುಭವ. ಆದರೆ ನಿನ್ನೆ ಎಲ್ಲವೂ ಹೊಸ ಅನುಭವ; ಮಂಜು ಮುಸುಕಿದ ಹಾದಿ. ಮಧ್ಯಾಹ್ನದಲ್ಲಿಯೇ ಹೆಡ್ ಲೈಟ್ಸ್ ಹಾಕಿಯೇ ಗಾಡಿ ಓಡಿಸಬೇಕಾಗಿತ್ತು. ಬಲಗಡೆ ಮಂಜು ಮುಸುಕಿದ ಪರ್ವತ. ಎಡಗಡೆ ನಯನ ಮನೋಹರವಾದ ಜಲಪಾತಗಳು. ಕ್ಯಾಮಾರವನ್ನು ಮನೆಯಲ್ಲೇ ಬಿಟ್ಟು ಬಂದ ಬಗ್ಗೆ ನನ್ನನ್ನು ನಾನೆಂದೂ ಕ್ಷಮಿಸಿಕೊಳ್ಳಲಾರೆ. ಆದರೂ ನನ್ನ ಕ್ಯಾಮಾರ ಪೋನಿನಿಂದ ತೆಗೆದ ಕೆಲವೊಂದು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ಇನ್ನೂ ಒಂದು ವಾರ ಕಾಲ ಈ ವೈಭವ ನಿಮಗೆ ಕಾಣಸಿಗಬಹುದು. ನೀವು ಹೋಗುವಿರಾದರೆ ಕ್ಯಾಮಾರ ಕೊಂಡು ಹೋಗಲು ಮರೆಯದಿರಿ.

ಏಕ ಕಾಲದಲ್ಲಿ ಜೀವನದಿಗಳು ಉತ್ತರ ಕರ್ನಾಟಕದಲ್ಲಿ ಮೃತ್ಯು ಸ್ವರೂಪಿಯಾಗಿಯೂ, ಘಟ್ಟಪ್ರದೇಶದಲ್ಲಿ ಹೃನ್ಮನ ತಣಿಸುವ ಜಲಪಾತಗಳಾಗಿಯೂ ಅವತರಿಸುವ ವಿಸ್ಮಯವೇ ನಿಸರ್ಗದ ಸೋಜಿಗ!

3 comments:

Guruprasad said...

ನಿಸರ್ಗದ ಸೊಬಗು ತುಂಬ ಚೆನ್ನಾಗಿ ಇದೆ.... ಮುಂಜಾವಿನ ಮಂಜಿನ ಫೋಟೋಗಳು ವೆರಿ ನೈಸ್

Anonymous said...

cellphone ನಲ್ಲಿ ಇಷ್ಟು ಚಂದದ ಫೋಟೋಗಳು! very nice .
ಇಷ್ಟವಾಯ್ತು. :)

- ವೈಶಾಲಿ

ಗೌತಮ್ ಹೆಗಡೆ said...

mast mast photos:)