Sunday, March 25, 2012

ಹೊಸ ಪ್ರಯತ್ನದಲ್ಲಿ ’ಮನ್ವಂತರ’



ಕಲ್ಪನೆ ಇತಿಹಾಸವಾಗಲು ಸಾಧ್ಯವೇ? ಹಾಗೆ ಸಾಧ್ಯವಾದಲ್ಲಿ ಅದನ್ನು ದಾಖಲೆಯಾಗಿಸುವುದು ಹೇಗೆ? ಈ ಪ್ರಶ್ನೆ ಕಾಡಿದ್ದು ಮೊನ್ನೆ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಪ್ರದಶನಗೊಂಡ ’ಮನ್ವಂತರ’ ಎಂಬ ನಾಟಕ ನೋಡಿದ ಮೇಲೆ.
ಆ ನಾಟಕ ಕುತೂಹಲ ಮೂಡಿಸಲು ಕಾರಣವಿತ್ತು; ಕನ್ನಡದಲ್ಲಿ ಹೊಸ ನಾಟಕ ಕೃತಿಗಳು ಬರುತ್ತಿಲ್ಲ ಎಂಬುದು ಹಳೆಯ ಕೂಗು. ಹಾಗಾಗಿ ಆಗಾಗ ನಾಟಕ ರಚನಾ ಕಮ್ಮಟಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಅಲ್ಲಿ ಬಂದ ನಾಟಕಗಳು ಆಮೇಲೆ ಏನಾಗುತ್ತವೆಯೋ ಅದು ಅದರ ಸೃಷ್ಠಿಕರ್ತರಿಗಷ್ಟೇ ಗೊತ್ತಿರುವ ಸತ್ಯ. ಸ್ವತಃ ನಾಟಕ ಅಕಾಡಮಿಯೇ ಇಂಥ ಹಲವಾರು ನಾಟಕ ರಚನಾ ಶಿಬಿರಗಳನ್ನು ರಚಿಸಿದೆ. ಅಲ್ಲಿ ರಚನೆಗೊಂಡ ನಾಟ್ಕಗಳು ಅಕಾಡಮಿಯ ಶೆಲ್ಫ್ ಗಳಲ್ಲಿ ದೂಳು ಹಿಡಿಯುತ್ತಾ ಮಲಗಿವೆ ಎಂಬುದನ್ನು ಅಕಾಡಮಿಯ ರಿಜಿಸ್ಟ್ರಾರ್ ಆಗಿರುವ ನರಸಿಂಹಮೂರ್ತಿಯವರೇ ಒಪ್ಪಿಕೊಳ್ಳುತ್ತಾರೆ. ಹಾಗಿರುವಾಗ…
ಕಳೆದ ವರ್ಷ ಆದಿಚುಂಚನಗಿರಿಯಲ್ಲಿ ’ಸಮಾನ ಮನಸ್ಕರು’ ವೇದಿಕೆಯು ನಾಟಕ ರಚನಾ ಚಿಂತನಾ ಶಿಬಿರವೊಂದು ನಡೆದಿತ್ತು. ಅದರಲ್ಲಿ ೨೩ ಜನ ಭಾಗವಹಿಸಿದ್ದರು. ಅಲ್ಲಿ ಮೂಡಿ ಬಂದ ನಾಟಕವೇ ’ಮನ್ವಂತರ’ ಇದನ್ನು ರಚಿಸಿದವರು ಎಚ್ ಎ.ಎಲ್ ನಲ್ಲಿ ಉದ್ಯೋಗಿಯಾಗಿರುವ ರಾಜು ಭಂಡಾರಿ ಎಂಬ ಯುವಕ. ಆ ನಾಟಕವನ್ನು ಬಹು ಅಕ್ಕರೆಯಿಂದ ಪ್ರದರ್ಶನಕ್ಕೆ ಕೈಗೆತ್ತಿಕೊಂಡದ್ದು ರಂಗಸುಗ್ಗಿ ಟ್ರಸ್ಟ್ ಎಂಬ ಸಾಂಸ್ಕೃತಿಕ ಸಂಘಟನೆ. ನಿರ್ದೇಶನದ ಜವಾಬ್ದಾರಿಯನ್ನು ಹೊತ್ತವರು ಕೆ. ಪ್ರಭಾಕರ ಬಾಬು. ಮತ್ತು ಇದೆಲ್ಲದರ ಸೂತ್ರದಾರಿ ತುಮಕೂರು ಶಿವಕುಮಾರ್. ಇಷ್ಟು ಮಾತ್ರವಲ್ಲಾ ಆ ನಾಟಕ ಮುದ್ರಣಗೊಂಡು ಅಂದೇ ನಾಟಕ ಅಕಾಡಮಿಯ ರಿಜಿಸ್ಟ್ರಾರ್ ಅವರ ಸಮ್ಮುಖದಲ್ಲಿಯೇ ಬಿಡುಗಡೆಯನ್ನೂ ಕಂಡಿತು!
ಧಾರ್ಮಿಕ ಭಯೋತ್ಪಾದನೆ ಎಂಬುದು ಇಂದು ಜಾಗತಿಕ ಸಮಸ್ಯೆ. ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಮರಳುಮಾಡಿ ಉಗ್ರಗಾಮಿಗಳನ್ನಾಗಿ ಪರಿವರ್ತಿಸುವ ಜಾಲ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಸರ್ವಧರ್ಮ ಸಮಾನತೆಯ ವಾತಾವರಣದಲ್ಲಿ ಬೆಳೆದ ಸಮೀರನೆಂಬ ಯುವಕ ಹಿಂದು ಯುವತಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಅಮೃತಾಪುರವೆಂಬ ಹೆಸರಿನ ಆ ದೇಶದ ರಾಜ ಆದಿದೇವರಾಯ ಅವರ ಪ್ರೀತಿಯನ್ನು ಗೌರವಿಸುತ್ತಾನೆ. ಆದರೆ ಬಿಲಾಲ್ ಖಾನ್ ಎಂಬ ಉಗ್ರಗಾಮಿ ಸಮೀರನ ಮನಸ್ಸಿನಲ್ಲಿ ಹಿಂದು ವಿರೋಧಿ ಭಾವನೆಗಳನ್ನು ಬಿತ್ತಿ ಆದಿದೇವರಾಯನ ಕೊಲೆಗೆ ಆತನನ್ನು ಸಿದ್ಧಗೊಳಿಸುತ್ತಾನೆ. ಆಗ ಸಮೀರ ದ್ವಂದಕ್ಕೆ ಬೀಳುತ್ತಾನೆ. ಕೊನೆಯಲ್ಲಿ ಆತನಿಗೆ ತನ್ನ ತಪ್ಪಿನ ಅರಿವಾಗಿ ರಾಜನಿಗೆ ಶರಣಾಗುತ್ತಾನೆ. ರಾಜ ಕ್ಷಮಿಸುತ್ತಾನೆ. ಅಪ್ಪ, ಅಬ್ದುಲ್ಲಾನ ಆಸೆಯಂತೆ ತನ್ನ ಮಗ ಖ್ಯಾತ ಕೊಳಲುವಾದಕನಾಗುವ ಸಮೀರನ ಕನಸಿನೊಂದಿಗೆ ನಾಟಕ ಅಂತ್ಯಗೊಳ್ಳುತ್ತದೆ.
ಬಹುಶಃ ಇಂಥ ಒಂದು ವಿವಾದಾತ್ಮಕ ವಸ್ತುವನ್ನು ಎತ್ತಿಕೊಂಡ ಕಾರಣದಿಂದಲೇ ಇರಬಹುದು ಕೃತಿಕಾರರು ಈ ನಾಟಕವನ್ನು ’ಕಾಲ್ಪನಿಕ ಐತಿಹಾಸಿಕ’ ಎಂದು ಕರೆದಿದ್ದಾರೆ. ಈ ಆಬಾಸವನ್ನು ಹೊರತು ಪಡಿಸಿ ನೋಡಿದರೆ ಈ ಪ್ರದರ್ಶನವನ್ನು ಹೊಸಬರ ಒಳ್ಳೆಯ ಪ್ರಯತ್ನ ಎನ್ನಬಹುದು.
”ಚಂದ್ರನಲ್ಲಿ ಮಿನಾರ್ ಗಳು ಮಾತ್ರ ಮಿನುಗುತ್ತಿರಬೇಕು, ರಕ್ತ ಬಿದ್ದರೂ ಪರವಾಗಿಲ್ಲ; ಕಣ್ಣೀರು ಬೀಳಬಾರದು”ಎಂದು ಹೇಳುತ್ತಾ ಸಮೀರನ ಕಯ್ಯಲ್ಲಿ ಕತ್ತಿಯನ್ನು ಕೊಟ್ಟು ’ನೀನು ದೈವ ಸೈನಿಕನಾಗು’ ಎನ್ನುವ ಉಗ್ರಗಾಮಿ ಬಿಲಾಲ್ ಖಾನ್ ಪಾತ್ರದಲ್ಲಿ ಕೃತಿಕಾರ ರಾಜು ಭಂಡಾರಿ ಲವಲವಿಕೆಯಿಂದ ನಟಿಸಿದ್ದಾರೆ. ಕೃತಿಕಾರನೊಭ್ಭ ಸ್ವತಃ ನಟನೂ ಆದಾಗ ಆತನಿಗೆ ಪಾತ್ರ ಪೋಷಣೆಗೆ ಹೆಚ್ಚಿನ ಅವಕಾಶಗಳಿರುತ್ತವೆ. ಸಮೀರನ ಪಾತ್ರ ನಿರ್ವಹಿಸಿದ ಮಧುಸೂದನರಿಗೆ ಇನ್ನೂ ಹೆಚ್ಚಿನ ಎನರ್ಜಿಯ ಅವಶ್ಯಕತೆಯಿತ್ತು. ಆತನ ಮಾನಸಿಕ ತುಮುಲಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರೆ ನಾಟಕದ ಗಾಂಭೀರ್ಯ ಹೆಚ್ಚುತ್ತಿತ್ತು. ಒಂದು ಕಡೆ ತಾನೊಬ್ಬ ಉತ್ತಮ ಕೊಳಲುವಾದಕನಾಗಬೇಕೆಂದು ಕನಸು ಕಾಣುತ್ತಿರುವ ಅಪ್ಪ. ಇನ್ನೊಂದೆಡೆ ತಾನು ಪ್ರೀತಿಸಿ ಮದುವೆಯಾದ ಅನ್ಯಧರ್ಮೀಯ ಹುಡುಗಿ ಮೃದುಲಾದೇವಿಯೆಡೆಗಿನ ಸೆಳೆತ, ಉಗ್ರಗಾಮಿಗಳ ಹಿಡಿತ ಇವುಗಳೆಲ್ಲವನ್ನು ಬಿಂಬಿಸಲು ಈ ಪಾತ್ರಕ್ಕೆ ಅವಕಾಶವಿತ್ತು.
ಸಮೀರನ ತಂದೆ ಅಬ್ದುಲ್ಲಾನ ಪಾತ್ರದಲ್ಲಿ ಹಿರಿಯ ನಟರಾದ ಆಲೆಮನೆ ಸುಂದರಮೂರ್ತಿಯವರ ಆಂಗಿಕ ಅಭಿನಯ ಕಂಪೆನಿ ನಾಟಕಗಳನ್ನು ನೆನಪಿಸಿಸುತ್ತಿತ್ತು. ಅದು ಸಹಕಲಾವಿದರ ಅಭಿನಯಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಮೃದುಲಾದೇವಿಯ ಪಾತ್ರದಲ್ಲಿ ನಯನ ಜೆ. ಸೂಡ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಜ ಆದಿದೇವನ ಪಾತ್ರಕ್ಕೆ ನಟ ಮಹದೇವ ಗಾಂಭೀರ್ಯ ತುಂಬಿದ್ದಾರೆ. ನಾಟಕದಲ್ಲಿ ದೃಶ್ಯ ಮತ್ತು ಮೂಡ್ ಬದಲಾವಣೆಗೆ ಹಾಡುಗಳನ್ನು ಬಳಸಿಕೊಂಡಿದ್ದಾರೆ. ಹಾಡುಗಳನ್ನು ಬರೆದ ವಿ.ವಿ.ಗೋಪಾಲ್ ವಸ್ತುವಿನ ಗಂಭೀರತೆಯನ್ನು ಮನನ ಮಾಡಿಕೊಂಡಿದ್ದರೆ ಅವರಿಂದ ಒಳ್ಳೆಯ ರಚನೆಗಳು ಬಂದು ನಾಟಕಕ್ಕೆ ಪೂರಕವಾಗುತ್ತಿತ್ತೆನೋ! ನಾಟಕಕ್ಕೆ ಬೆಳಕು ನೀಡಿದವರು ಕೆ.ಪ್ರಭಾಕರಬಾಬು. ಅವರು ಕೆಲವು ಕಡೆಗಳಲ್ಲಿ ಅದ್ಬುತವೆನಿಸುವ ಬೆಳಕು ನೀಡಿದ್ದಾರೆ. ತನ್ನ ಹೊಟ್ಟೆಯಲ್ಲಿರುವ ಮಗುವಿನ ಬದುಕಲ್ಲೂ ಅಂಧಕಾರ ತುಂಬುತ್ತಿದೆಯಲ್ಲಾ ಎಂದು ರೋದಿಸುತ್ತಾ ’ಇಷ್ಟು ಚಿಕ್ಕ ಬೆಳಕಿಗೆ ಇಷ್ಟು ದೊಡ್ಡ ಕತ್ತಲನ್ನು ಬೆಳಗಿಸುವ ಶಕ್ತಿ ಇದೆಯಾ?’ ಎನ್ನುವಲ್ಲಿ ಹಣತೆಯ ಸಹಜ ಬೆಳಕನ್ನು ವಿನ್ಯಾಸ ಮಾಡಿದ್ದು ಪರಿಣಾಮಕಾರಿಯಾಗಿತ್ತು. ಆದರೆ ನಾಟಕದುದ್ದಕ್ಕೂ ಬಳಸಿದ ಪ್ಲಡ್ ದೀಪಗಳು ಪ್ರೇಕ್ಷಕರ ಏಕಾಗ್ರತೆಯನ್ನು ಭಂಗಗೊಳಿಸುತ್ತಿದ್ದವು.
ನಾಟಕದಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಗಳು ಕರಾರುವಾಕ್ಕಾಗಿರಲಿಲ್ಲ; ಗೊಂದಲಗಳಿದ್ದವು. ನಿರ್ದೇಶಕರು ಸ್ವಲ್ಪ ಮುತುವರ್ಜಿ ವಹಿಸಿದ್ದರೆ ನಾಟಕವನ್ನು ಇನ್ನಷ್ಟು ಪಾಲೀಶ್ ಮಾಡಬಹುದಿತ್ತು. ಮುಖ್ಯವಾಗಿ ಉದ್ದುದ್ದ ಡೈಲಾಗ್ ಗಳನ್ನು ತುಂಡರಿಸಿ ಮೌನಕ್ಕೆ ಮತ್ತು ಸಂಗೀತಕ್ಕೆ ಒತ್ತು ಕೊಡಬೇಕಾಗಿತ್ತು.
ಹಳೆಯ ನಟರೊಡನೆ ಹೊಸಬರು ಕೂಡಾ ಕಾಣಿಸಿಕೊಂಡು ಲವಲವಿಕೆಯಿಂದ ನಟಿಸಿದ್ದಾರೆ. ರಂಗಭೂಮಿಗೆ ಒಳ್ಳೆಯ ಕಲಾವಿದರು ಕೆಲವರಾದರೂ ದೊರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿದ ಪ್ರದರ್ಶನವಿದು.
[ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬರಹ ]

2 comments:

Badarinath Palavalli said...

ಒಂದು ಒಳ್ಳೆಯ ನಾಟಕದ ವೀಕ್ಷಣೆ ಮನೋವಿಕಸನ ಮಾಡುತ್ತದೆ. ಅದರ ಆಶಯವು ಮನಸ್ಸನ್ನು ತುಸುವಾದರೂ ತಟ್ಟುತ್ತದೆ. ಇಂದಿನ ನೆಟ್ ಯುಗದಲ್ಲೂ ನಾಟಕಗಳು ನಿಮ್ಮಂತ ಸಹೃದಯರಿಂದ ಉಸಿರಾಡುತ್ತಿವೆ.

ನಿರ್ದೇಶಕರು ನಾಟಕದ ವಸ್ತುವಿನ ಅನುಗುಣವಾಗಿ ರಂಗಸಜ್ಜಿಕೆ ಮತ್ತು ಬೆಳಕಿನ ವಿನ್ಯಾಸ ಮಾಡಿದ್ದರೆ ಚೆನ್ನ.

Ittigecement said...

ಈ ನಾಟಕ ಇನ್ನೂ ನೋಡಿಲ್ಲ..

ನಿಮ್ಮ ಲೇಖನ ಓದಿದ ಮೇಲೆ ನೋಡಬೇಕು ಅಂತ ಅನ್ನಿಸ್ತ ಇದೆ...

ಧನ್ಯವಾದಗಳು..