Saturday, April 7, 2012

’ಶಿಶಿರ ವಸಂತ’ ದಲ್ಲಿ ವಸಂತನೇ ನಾಪತ್ತೆ…!




ಶಿಶಿರ ವಸಂತ’ ನಾಟಕವನ್ನು ನೋಡಲು ರವೀಂದ್ರ ಕಲಾಕ್ಷೇತ್ರಕ್ಕೆ ಹೊರಟಾಗ ನನ್ನಲ್ಲಿ ನಿರೀಕ್ಷೆಗಳ ಜೊತೆಗೆ ಪುಟ್ಟದೊಂದು ಕುತೂಹಲವೂ ಇತ್ತು. ಮೊದಲನೆಯದಾಗಿ ಅದು ಶೇಕ್ಷ್ ಪಿಯರ್ ನ ನಾಟಕ. ಎರಡನೆಯದಾಗಿ ಅದನ್ನು ಅನುವಾದಿಸಿ ನಿರ್ದೇಶಿಸಿದವರು ಅಕ್ಷರ ಕೆ.ವಿ ಮತ್ತು ಅಭಿನಯಿಸುತ್ತಿರುವವರು ಕನ್ನಡದ ಮೊದಲ ರೆಪರ್ಟರಿಯೆನಿಸಿಕೊಂಡಿರುವ ನೀನಾಸಂ ತಂಡ. ಕುತೂಹಲ ಯಾಕೆಂದರೆ ನಾಲ್ಕು ಶತಮಾನಗಳ ಹಿಂದೆ ರಚನೆಗೊಂಡಿರುವ ನಾಟಕವೊಂದು ವರ್ತಮಾನಕ್ಕೆ ಹೇಗೆ ಸ್ಪಂದಿಸುತ್ತದೆಯೆಂಬುದು…
ನಾಟಕದ ವಸ್ತು ಸಾಮಾನ್ಯವಾದುದು. ಎಲ್ಲರಿಗೂ ಅರ್ಥವಾಗುವಂಥದು. ಇಬ್ಬರು ಗೆಳೆಯರಿರುತ್ತಾರೆ. ಅವರು ಅಕ್ಕಪಕ್ಕ ರಾಜ್ಯದ ರಾಜರೂ ಹೌದು. ಲಿಯಾಂಟೆಸ್ ನ ಮನೆಗೆ ಪಾಲಿಕ್ಸೆನಸ್ ಬರುತ್ತಾನೆ; ದೀರ್ಘ ಕಾಲ ಉಳಿಯುತ್ತಾನೆ. ಆತನನ್ನು ಇನ್ನಷ್ಟು ಕಾಲ ಉಳಿಸಿಕೊಳ್ಳುವ ಆಸೆ ಇವನಿಗೆ, ಆದರೆ ಅವನಿಗೆ ತಾಯ್ನಾಡಿಗೆ ಮರಳುವ ಹಂಬಲ, ಇವನ ಮಾತು ಕೇಳದ ಪಾಲಿಕ್ಸೆನಸ್, ಲಿಯಾಂಟೆಸ್ ನ ಪತ್ನಿ ಹರ್ಮಿಯೋನ್ ಳ ಅನುನಯದ ಮಾತುಗಳಿಗೆ ಒಪ್ಪಿ ಇನ್ನಷ್ಟು ಕಾಲ ಇಲ್ಲೇ ಉಳಿಯಲು ಮನಸ್ಸು ಮಾಡುತ್ತಾನೆ. ಇದು ಲಿಯಾಂಟೆಸ್ ನ ಮನಶ್ಯಾಂತಿಯನ್ನು ಕದಡಿಬಿಡುತ್ತದೆ. ಅವನ ಮತ್ತು ಈಕೆಯ ನಡುವೆ ಅನೈತಿಕ ಸಂಬಂಧ ಇರಬಹುದೆಂದು ಶಂಕಿಸುತ್ತಾನೆ. ಆ ಶಂಕೆಯ ಕಾರಣದಿಂದಾಗಿ ಲಿಯಾಂಟೆಸ್ ನ ಬದುಕಿನ ವಸಂತದಲ್ಲಿ ಶಿಶಿರ [ಶಿಶಿರ;ಆರು ಋತುಗಳಲ್ಲಿ ಕೊನೆಯದು. ಮರಗಳೆಲ್ಲಾ ಎಲೆಗಳನುದುರಿಸಿಕೊಂಡು ಬೋಳಾಗಿ ನಿಲ್ಲುವ ಕಾಲ. ಇದು ಮುಪ್ಪನ್ನು, ಮುದುಡುವಿಕೆಯನ್ನು ಸಂಕೇತಿಸುತ್ತದೆ.]ಆವರಿಸಿಕೊಳ್ಳುತ್ತದೆ. ಆ ಶಂಕೆಯೇ ಮುಂದೆ ನಡೆಯುವ ಹಲವು ಅವಘಡಗಳಿಗೆ ಕಾರಣವಾಗುತ್ತದೆ.
ಪತ್ನಿಯ ಶೀಲದ ಮೇಲಿನ ಶಂಕೆ ಕಾಲ, ದೇಶಾತೀತವಾದುದು. ಅದು ಶ್ರೀರಾಮಚಂದ್ರನಿಂದ ಹಿಡಿದು ಪಕ್ಕದ ಮನೆಯ ರಾಮಪ್ಪನ ತನಕ ಇಂದಿಗೂ ಮುಂದುವರಿದಿದೆ. ಮುಂದೆಯೂ ಮುಂದುವರಿಯುತ್ತದೆ. ಇಂಥ ಸಾರ್ವಕಾಲಿಕ ಸತ್ಯದ ಕಥಾಹಂದರವನ್ನು ಹೊಂದಿರುವ ಶೇಕ್ಷ್ ಪಿಯರ್ ನ ’ದಿ ವಿಂಟರ್ಸ್ ಟೇಲ್’ ನಾಟಕವನ್ನು ವಿಮರ್ಶಕರು, ಆತನ ದುರ್ಬಲ ನಾಟಕಗಳಲ್ಲೊಂದು ಎಂದು ಗುರುತಿಸಿದ್ದಾರೆ. ಇಂತಹ ನಾಟಕವೊಂದನ್ನು ಕೆ.ವಿ.ಅಕ್ಷರ ಅನುವಾದಿಸಿದ್ದಲ್ಲದೆ ಅದನ್ನು ಪ್ರಯೋಗಕ್ಕೊಳಪಡಿಸುವ ಸಾಹಸಕ್ಕೂ ಕೈ ಹಾಕಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾದರೇ?
ನೀನಾಸಂ ನಾಟಕಗಳೆಂದರೆ ’ಹೀಗೆಯೇ ಇರುತ್ತವೆ’ ಎಂಬ ಸಾಮಾನ್ಯ ಕಲ್ಪನೆಗಳನ್ನೆಲ್ಲಾ ಒಡೆದ ನಾಟಕವಿದು. ಅವರ ನಾಟಕಗಳಲ್ಲಿ ವಸ್ತುವನ್ನು ಮೀರಿ ಟೆಕ್ನಿಕ್ ವಿಜೃಂಭಿಸುತ್ತದೆ. ರಂಗಪರಿಕರಗಳ ಭಾರಕ್ಕೆ ನಾಟಕ ನಲುಗಿದಂತೆ ಭಾಸವಾಗುತ್ತದೆ. ನಾಟಕವನ್ನು ಶಿಸ್ತುಬದ್ಧಗೊಳಿಸುತ್ತಾ ಹೋದಂತೆಲ್ಲಾ ಸೃಜನಶೀಲತೆ ಮರೆಯಾಗುತ್ತದೆಯೆನೋ ಎಂಬ ಶಂಕೆಗೆ ನೀನಾಸಂ ನಾಟಕಗಳು ಕಾರಣವಾಗುತ್ತಿದ್ದವು. ಆದರೆ ಶಿಶಿರ ವಸಂತ ಈ ನಂಬಿಕೆಗಳಿಗೆಲ್ಲಾ ಹೊರತಾಗಿತ್ತು.
’ಶಿಶಿರ ವಸಂತ’ದಲ್ಲಿ ಸಮಕಾಲೀನ ವಸ್ತುವಿತ್ತು. ಹಿತಮಿತವಾದ ರಂಗಪರಿಕರಗಳಿದ್ದವು. ಒಳ್ಳೆಯ ಸಂಗೀತವಿತ್ತು.ಆದರೂ ಒಳ್ಳೆಯ ಪ್ರಯೋಗವಾಗವೆಂದು ಹೇಳಲಾಗುವುದಿಲ್ಲ. ಅದಕ್ಕೆ ಕಾರಣ ಸಡಿಲ ನಿರ್ದೇಶನ. ಮೊದಲನೆಯದಾಗಿ ಪಾತ್ರಗಳ ಆಯ್ಕೆಯೇ ಸರಿಯಾಗಿರಲಿಲ್ಲ. ನಾಟಕದ ಕೇಂದ್ರ ಪಾತ್ರವಾದ ಲಿಯಾಂಟೆಸ್ ನದು ದುರಂತ ಪಾತ್ರ. ಆತ ಮಾನಸಿಕ ಅಸ್ವಸ್ಥನಂತೆ ನಟಿಸಬೇಕಾಗಿತ್ತು. ಆದರೆ ಆತನಲ್ಲಿ ಎನರ್ಜಿಯೇ ಇರಲಿಲ್ಲ. ಕುಡುಕನಂತೆ ವರ್ತಿಸುತ್ತಿದ್ದ. ಪೌಲಿನಾ, ಪಾಲಿಕ್ಸ್ ನಸ್,, ಹರ್ಮಿಯೋನ್, ಮುದಿಕುರುಬ ಮುಂತಾದ ಕೆಲವು ಪಾತ್ರಗಳನ್ನು ಹೊರತುಪಡಿಸಿದರೆ ಬಹುತೇಕ ನಟರಲ್ಲಿ ರಂಗ ಹುಮ್ಮಸು ಇರಲಿಲ್ಲ. ರಂಗಚಲನೆಯಿರಲಿಲ್ಲ. ಡೈಲಾಗ್ ಡೆಲಿವರಿ ಮಾತ್ರವೇ ನಾಟಕವಾಗುವುದಿಲ್ಲ. ರಂಗಕ್ರಿಯೆಗಳು ನಡೆಯಬೇಕು. ಅಪೋಲೋ ವಾಣಿಯನ್ನು ಪ್ರೇಕ್ಷಕರ ಮದ್ಯದಿಂದ ಹೊತ್ತು ತಂದು ಬ್ರೆಕ್ಟ್ ನ ಪೋರ್ತ್ ವಾಲ್ ನ ಟೆಕ್ನಿಕ್ ಅನ್ನು ಬಳಸಿಕೊಂಡರೂ ಅದು ನಾಟಕವನ್ನು ಮೇಲೆತ್ತುವಲ್ಲಿ ಸಹಾಯಕವಾಗಲಿಲ್ಲ. ವಸ್ತ್ರ ವಿನ್ಯಾಸದಲ್ಲಿ ಹೊಸತನವಿರಲಿಲ್ಲ.
ನಾಟಕದ ವಸ್ತುವಿನ ಬಗ್ಗೆ ಕಾಲಪ್ರಕೃತಿ ಮತ್ತು ಕಾಲಪುರುಷನ ವಿವರಣೆಯ ನಂತರ ಇಬ್ಬರು ಗೆಳೆಯರ ನಡುವಿನ ಆಪ್ತತೆಯನ್ನು ಬಿಂಬಿಸುವುದರೊಂದಿಗೆ ಆರಂಭವಾದ ನಾಟಕ ಭರವಸೆಯನ್ನು ಹುಟ್ಟಿಸಿತಾದರೂ ಅನಂತರದಲ್ಲಿ ನಿಧಾನ ಗತಿಯಲ್ಲಿ ಸಾಗಿ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡಿತು. ಎರಡೂವರೆ ಘಂಟೆಗೂ ಮೀರಿ ಲಂಬಿಸಲ್ಪಟ್ಟ ನಾಟಕದಲ್ಲಿ ಬಿಡಿಬಿಡಿಯಾಗಿ ಕೆಲವು ದೃಶ್ಯಗಳಲ್ಲಿ ಕಲಾವಿದರು ಚೆನ್ನಾಗಿ ಅಭಿನಯಿಸಿದರೂ ನಾಟಕ ಒಟ್ಟು ಶಿಲ್ಪವಾಗಿ ಮೂಡಿ ಬರಲಿಲ್ಲ. ಬಹುಶ’ ಕೃತಿಯಲ್ಲಿಯೇ ಆ ಮಿತಿಗಳಿದ್ದರೆ ಅದನ್ನು ರಂಗಪ್ರಯೋಗದಲ್ಲಿ ತುಂಬಿಕೊಳ್ಳವ ಸ್ವಾತಂತ್ರ್ಯ ನಿರ್ದೇಶಕನಿಗೆ ಇರುತ್ತದೆಯಲ್ಲವೇ?
ನಾಟಕವೊಂದು ಪ್ರೇಕ್ಷಕನಿಗೆ ಏನನ್ನು ದಾಟಿಸಬೇಕು? ಇದನ್ನು ನಿರ್ದೇಶಕ ಯೋಚಿಸುತ್ತಾನೆ. ಪ್ರೇಕ್ಷಕ ನಾಟಕದಿಂದ ಏನನ್ನು ಗ್ರಹಿಸಿದ್ದಾನೆ ಮತ್ತು ಏನನ್ನು ಬಯಸುತ್ತಾನೆ? ಅದು ಅವನ ನಡವಳಿಕೆಯಿಂದ ಗೊತ್ತಾಗುತ್ತದೆ.. ಬೆಂಗಳೂರಿನಂತಹ ಒತ್ತಡದ, ಜನನಿಬಿಡ ನಗರದಲ್ಲಿ ನಾಟಕ ನೋಡಲು ಅರ್ಧ ದಿನವನ್ನು ವ್ಯಯಿಸಬೇಕಾಗುತ್ತದೆ. ಹಾಗಾಗಿಯೇ ಆತ ತಾನು ನಾಟಕಕ್ಕಾಗಿ ಮೀಸಲಿಟ್ಟ ಸಮಯ ಮತ್ತು ಖರ್ಚು ಮಾಡಿದ ದುಡ್ಡು ವರ್ಥ್ ಅನ್ನಿಸುತ್ತದೆಯೇ ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಆ ದೃಷ್ಟಿಯಿಂದ ನೋಡಿದರೆ ಚಿಕ್ಕದೊಂದು ಅಸಹನೆ ಆತನ ಮನದಲ್ಲಿ ಮೂಡಿದ್ದರೆ ಅಚ್ಚರಿಯೇನಿಲ್ಲ.
[ಇವತ್ತಿನ ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ ]

3 comments:

sunaath said...

ಉತ್ತಮ ವಿಮರ್ಶೆ.

Yogeesh Bankeshwar said...

ಉತ್ತಮ ವಿಮರ್ಶೆ... ಇತ್ತೀಚಿನ ದಿನಗಳಲ್ಲಿ ನೀನಾಸಂ ರಂಗಪ್ರಯೋಗಗಳಲ್ಲಿ ಸತ್ವ ಕಡಿಮೆಯಾಗುತಿದೆ ಅಂತ ಅನ್ನಿಸುತ್ತಿದೆ... ಇತ್ತೀಚಿಗೆ ಬಂದ ಅವರ ಕೆಲವು ಪ್ರಯೋಗಗಳು ಪ್ರೇಕ್ಷಕರನ್ನು ನಾಟಕದಿಂದ ದೂರ ಉಳಿಯುವಂತೆ ಮಾಡುತ್ತವೇನೋ ಎಂಬ ಭಯವಾಗುತ್ತಿದೆ.

Uma Bhat said...

ಉಷಾ......... ಉತ್ತಮವಾದ ವಿಮರ್ಶೆ.