Tuesday, February 5, 2008

ನನ್ನೊಳಗೆ ’ನಾನು’

ನನ್ನ ಬಗ್ಗೆ ಹೇಳೀಕೊಳ್ಳುವಂತಹ ಮಹತ್ವವಾದದ್ದು ಏನೂ ಇದ್ದಂತಿಲ್ಲ. ಒ೦ಚೂರು ಬದುಕು ಕಂಡಿದ್ದೇನೆ.ಇನ್ನೊಂದ್ಚೂರು ಓದಿಕೊಂಡಿದ್ದೇನೆ.ಪ್ರವಾಸ ಮಾಡುವುದು ನಂಗಿಷ್ಟ.ಅದು ನನ್ನ ದೌರ್ಬಲ್ಯ ಕೂಡ.

ಪ್ರತಿ ಕ್ಸಣವನ್ನೂ ಅನುಭವಿಸಿ ನನ್ನೊಳಗೆ ಹಿಡಿದಿಟ್ಟುಕೊಳ್ಳುವ ಬಯಕೆ.ಹಾಗಾಗಿ ನಾನು ಸದಾ ಹಸನ್ಮುಖಿ.ಖುಶಿ ಖುಶಿ ಇಬ್ಬನಿ ! ಯೋಗ,ಪ್ರಾಣಯಾಮ ನನ್ನ ದಿನಚರಿಯ ಭಾಗ.

ಹೊರ ಜಗತ್ತಿಗೆ ತೆರೆದುಕೊಳ್ಳಲು ಭಯ.ಸುತ್ತಲಿನ ಜನರ ತೋರಿಕೆಯ ಬದುಕನ್ನು ನೋಡಿ ನೋಡಿ ಸಾಕಾಗಿದೆ.ಎಲ್ಲಾ ಕಡೆ ಮುಖವಾಡಗಳೇ ಮುಖವಾಡಗಳು.ಅತಿರಂಜಿತ ದ್ರಶ್ಯಮಾದ್ಯಮಗಳು,ಶ್ರವ್ಯಮಾದ್ಯಮದ ಶಬ್ದಮಾಲಿನ್ಯ,ಅಕ್ಷರ ಹಾದರದ ಮುದ್ರಣಮಾಲಿನ್ಯ-ಇದೆಲ್ಲದರ ನಡುವೆ ಗಂಭೀರವಾದ ವೀಕ್ಷಕರು,ಶೋತ್ರುಗಳು, ಪ್ರೇಕ್ಶಕರು ಯಾವ ಕಡೆ ಮುಖ ಮಾಡಬೇಕು? ಹಾಸ್ಯೊತ್ಸವಗಳೇ ಬದುಕನ್ನು ನಿರ್ದೇಶಿಸುವುದಿಲ್ಲ ಅಲ್ಲವೇ?

ತೋರಿಕೆಯ ಜಗತ್ತು ಸಾಕಾಗಿದೆ.ಅಂತರಂಗದ ಒಳಜಗತ್ತಿಗೆ ಸರಿದು ಹೊಗಲಿದು ಸಕಾಲ. ಒಂಟಿತನ ದೌರ್ಬಲ್ಯಕ್ಕೆ ಕಾರಣವಾಗುತ್ತದೆ; ಅದು ಶಿಕ್ಶೆ ಎಂದು ಭಾವಿಸುವವರಿದ್ದಾರೆ. ಆದರೆ ’ಒಂಟಿತನ’ವನ್ನು ’ಏಕಾಂತ’ವಾಗಿಸಿಕೊಳ್ಳಲು ಸಾದ್ಯವಾಗುವುದಾದರೆ ಅದರಲ್ಲಿನ ಸುಖಕ್ಕೆ ಸರಿಸಾಟಿಯಿಲ್ಲ.ಆದರೆ ವ್ಯಕ್ತಿಯೊಬ್ಬ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಇದಾಗಿರಬಹುದೇ? ಗೊತ್ತಿಲ್ಲ... ಇದ್ದರೂ ಇರಬಹುದು..!
ಈ ಸಮಯದಲ್ಲಿ ಡಿ.ವಿ.ಜಿ ನೆನಪಾಗುತ್ತರೆ.

’ಓರ್ವನೇ ನಿಲುವೆ ನೀನುತ್ಕಟಕ್ಷಣಗಳಲ್ಲಿ/
 ಧರ್ಮಸಂಕಟಗಳಲ್ಲಿ,ಜೀವಸಮರದಲ್ಲಿ
/ ನಿರ್ವಾಣದೀಕ್ಷೆಯಲ್ಲಿ,ನಿರ್ಯಾಣುಘಟ್ಟದಲ್ಲಿ
/ನಿರ್ಮಿತ್ರನಿರಲು ಕಲಿ-ಮಂಕುತಿಮ್ಮ

ಒಬ್ಬಳೇ ನಿಂತಿದ್ದೇನೆ; ಈ ವಿಶಾಲ ಜಗತ್ತಿನಲ್ಲಿ....
 ನೋಟ ಹೊರಗಿದೆ. ಮನಸ್ಸು ಒಳಗಡೆ ಇಳಿಯುತ್ತಿದೆ.
 ಆದರೂ ಹೊರ ಜಗತ್ತಿಗೊಂದು ರಹದಾರಿ ಬೇಕು. ಅದು ಇದಾಗಿರಬಹುದೇ? ಗೊತ್ತಿಲ್ಲ.
 ಗೊತ್ತಿದ್ದರೆ ನೀವು ಹೇಳ್ತಿರಲ್ಲಾ...?
 ಬನ್ನಿ ನನ್ನ ’ಮೌನಕಣಿವೆ’ಗೆ ಹೀಗೆ ಸುಮ್ಮನೆ.