Thursday, August 26, 2010

’ಸ್ಮೃತಿ ವಿಸ್ಮೃತಿ; ಭಾರತೀಯ ಸಂಸ್ಕೃತಿ’- ವಿಭಿನ್ನ ಚಿಂತನೆಯ ಕೃತಿ


ಭಾನುವಾರ, ಆಗಸ್ಟ್ ೨೯ರಂದು ಬೆಳಿಗ್ಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಸ್.ಎನ್. ಬಾಲಗಂಗಾಧರ ರಾವ್ ಅವರ ”ಹೀದನ್ ಇನ್ ಹಿಸ್ ಬ್ಲೈಂಡ್ನೆಸ್” ಕೃತಿಯ ಕನ್ನಡಾನುವಾದ ”ಸ್ಮೃತಿ ವಿಸ್ಮೃತಿ; ಭಾರತೀಯ ಸಂಸ್ಕೃತಿ” ಬಿಡುಗಡೆಯಾಗಲಿದೆ.

ಕನ್ನಡಿಗರಾದ ಬಾಲಗಂಗಾಧರನಾಥರು ಕಳೆದ ಮೂರು ದಶಕಗಳಿಂದ ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ವಿಭಾಗದ ನಿರ್ದೇಶಕರಾಗಿದ್ದಾರೆ. ವಿಭಿನ್ನ ಮಾನವ ಸಂಸ್ಕೃತಿಗಳ ಕುರಿತು ಪರ್ಯಾಯವಾದ ದೃಷ್ಟಿಕೋನವೊಂದು ಬೆಳೆಸುವ ನಿಟ್ಟಿನಲ್ಲಿ ಅವರು ಸಂಶೋಧನೆಯನ್ನು ಕೈಗೊಂಡಿದ್ದಾರೆ. ಅದರ ಫಲಶ್ರುತಿಯಾಗಿ ಈ ಪುಸ್ತಕ ಹೊರಬಂದಿದೆ.

ಪಾಶ್ಚಾತ್ಯ ಸಂಸ್ಕೃತಿ ಚಿಂತಕರ ಪ್ರಕಾರ, ಎಲ್ಲಾ ಸಂಸ್ಕೃತಿಗಳು ಒಂದಿಲ್ಲೊಂದು ಪ್ರಕಾರದ ರಿಲೀಜನ್ ಅನ್ನು ಹೊಂದಿರುತ್ತವೆ; ರಿಲೀಜನ್ ಗಳು ಇಲ್ಲದ ಸಂಸ್ಕೃತಿಗಳೇ ಇಲ್ಲ.ಆದರೆ ಬಾಲಗಂಗಾಧರನಾಥರು ಪಾಶ್ಚ್ಯಾತ್ಯರ ಗ್ರಹಿಕೆಯನ್ನು ಅಲ್ಲಗೆಳೆಯುತ್ತಾ’ ರಿಲೀಜನ್ ಸಾಂಸ್ಕೃತಿಕ ಸಾರ್ವತಿಕವಲ್ಲ’ ಎಂದು ವಾದಿಸುತ್ತಾರೆ. ಅವರ ವಾದವು ಮುಂದುವರೆದು ಹೇಗೆ ಕ್ರಿಶ್ಚಿಯನ್ ಥಿಯಾಲಜಿಯು ಎಲ್ಲಾ ಸಂಸ್ಕೃತಿಗಳು ಒಂದಿಲ್ಲೊಂದು ಪ್ರಕಾರದ ರಿಲೀಜನ್ನುಗಳನ್ನು ಹೊಂದಿದೆ ಎಂದು ಪಾಶ್ಚಿಮಾತ್ಯಾರು ಗ್ರಹಿಸಿಕೊಳ್ಳುವಂತೆ ಹಾಗು ಅದರಿಂದುಂಟಾದ ಪರಿಣಾಮಗಳೇನು? ಎಂಬ ಪ್ರಶ್ನೆಯ ಕುರಿತು ತೀರಾ ತರ್ಕಬದ್ಧವಾಗಿ, ಹಾಗು ವಿವರಣಾತ್ಮಕವಾಗಿ ಚರ್ಚಿಸಿದ್ದಾರೆ. ಭಾರತದ ಇಂದಿನ ಸಂದರ್ಭದಲ್ಲಿ ಕೂಡ ಹಲವಾರು ಬಗೆ ಹರಿಯದ ಸಮಸ್ಯೆಗಳನ್ನು ಅರ್ಥ್ಯೈಸಿಕೊಳ್ಳಲು ಈ ಪುಸ್ತಕ ನೆರವಾಗುತ್ತದೆ.

೫೭೨ ಪುಟಗಳ ಈ ಪುಸ್ತಕದಲ್ಲಿ ಒಟ್ಟು ನಾಲ್ಕು ಭಾಗಗಳಿವೆ; ೧೨ ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯದಲ್ಲಿ ರಿಲಿಜನ್ನಿನ ವಿದ್ವಾಂಸರಲ್ಲಿ ಇರುವ ಅಸಂಗತತೆಯನ್ನು ಲೇಖಕರು ಎತ್ತಿ ತೋರಿಸುತ್ತಾರೆ.
೨,೩,೪ನೇ ಅಧ್ಯಾಯಗಳು ರಿಲಿಜನ್ನು ಎಲ್ಲಾ ಸಂಸ್ಕೃತಿಗಳಿಗೂ ಸಾಮಾನ್ಯವಾದ ಸಂಗತಿ ಎಂಬ ಧೋರಣೆಯ ಉಗಮ,ಮತ್ತು ವಿಕಾಸ ಹೇಗಾಯಿತು? ಪ್ರಪಂಚದ ತುಂಬೆಲ್ಲಾ ಹಿಂದೂಯಿಸಂ, ಶಿಂಟೋಯಿಸಂ ಇತ್ಯಾದಿ ರಿಲಿಜನ್ ಗಳು ಹೇಗೆ ಸೃಷ್ಟಿಯಾದವು ಎಂಬುದರ ಐತಿಹಾಸಿಕ ಅವಲೋಕನವಾಗಿದೆ.
೫,೬,೭ನೇ ಅಧ್ಯಾಯಗಳು ರಿಲಿಜನ್ನಿನ ಕುರಿತ ಆಧುನಿಕ ಸಿದ್ಧಾಂತಗಳು ಥಿಯಾಲಜಿಗಳನ್ನು ತಿರಸ್ಕರಿಸಿ ವೈಜ್ನಾನಿಕ ವಿಧಾನದಲ್ಲಿ ರಿಲಿಜನ್ನಿನ ಅಧ್ಯಯನವನ್ನು ನಡೆಸುತ್ತಿವೆಯೆಂಬುದಾಗಿ ಹೇಳಿಕೆಯಿದ್ದರೂ ಕೂಡ ಅವು ಮೂಲತಃ ಥಿಯಾಲಜಿಯದೇ ಸೆಕ್ಯೂಲರ್ ರೂಪಗಳು ಎಂಬುದನ್ನು ನಿರ್ದೇಶಿಸುತ್ತದೆ.
೮,೯, ೧೦ನೇ ಅಧ್ಯಾಯಗಳಲ್ಲಿ ಲೇಖಕರು ರಿಲಿಜನ್ನಿನ ಕುರಿತು ಸಿದ್ಧಾಂತವನ್ನು ಕಟ್ಟುವ ಪ್ರಯತ್ನಕ್ಕೆ,
ತೊಡಗುತ್ತಾರೆ.
೧೧ ಮತ್ತು ೧೨ನೇ ಅಧ್ಯಾಯಗಳಲ್ಲಿ ರಿಲಿಜನ್ ಇಲ್ಲದ ಸಂಸ್ಕೃತಿಗಳಿಗೂ ಅದು ಇರುವ ಸಂಸ್ಕೃತಿಗಳಿಗೂ ನಡುವೆ ತುಲನಾತ್ಮಕ ಅಧ್ಯಯನವನ್ನು ನಡೆಸಬಹುದಾದ ಸಾಧ್ಯತೆಯನ್ನು ಶೋಧಿಸುತ್ತಾರೆ.

ಪುಸ್ತಕದ ಮುಖಪುಟದ ಆಯ್ಕೆಯನ್ನು ಎಷ್ಟು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡಿದ್ದಾರೆ ಅಂದರೆ ಪುಸ್ತಕದ ಹೂರಣವನ್ನು ಚಿತ್ರವೇ ಹಿಡಿದಿಟ್ಟುಕೊಂಡಿರುವಂತಿದೆ.ಇದು ಮೂಲತ ನರಸಿಂಹನ ಚಿತ್ರ.ಲುಡುವಿಕೋ ವಾರ್ಥೆಮಾ ಎಂಬ ಇಟಲಿ ಪ್ರವಾಸಿ ೧೫೦೫ರಲ್ಲಿ ಕ್ಯಾಲಿಕಟಿನ ರಾಜನನ್ನು ಭೇಟಿ ಮಾಡಿದಾಗ ಆತನು ಪೂಜಿಸುತ್ತಿದ್ದ ನರಸಿಂಹನನ್ನು ಕಂಡು ತಾನು ಅರ್ಥೈಸಿಕೊಂಡಿದ್ದನ್ನು ತನ್ನ ಪ್ರವಾಸಿ ಕಥನದಲ್ಲಿ ವಿವರಿಸಿದ್ದನು. ಅದನ್ನು ಓದಿ ಜರ್ಮನ್ ಚಿತ್ರಕಾರನೊಬ್ಬನು ಚಿತ್ರಿಸಿದ ಚಿತ್ರವಿದು. ೧೬ನೇ ಶತಮಾನದಲ್ಲಿ ಐರೋಪ್ಯರು ಮೊಟ್ಟ ಮೊದಲ ಬಾರಿಗೆ ಭಾರತೀಯ ಸಂಸ್ಕೃತಿಯನ್ನು ಸಂಧಿಸಿದಾಗ ಅವರು ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಕಣ್ಣಿಂದ ಎಲ್ಲಿನ ಆಚರಣೆಗಳನ್ನು ವೀಕ್ಷಿಸಿದರು.ಅವರಿಗೆ ಭಾರತೀಯ ಮೂರ್ತಿ ಪೂಜೆಯು ಪ್ರಾಚೀನ ಪೇಗನ್ನರ ಮೂರ್ತಿ ಪೂಜೆಯಂತೆ ಪಾಪವಾಗಿ ಹಾಗೂ ದೋಷಪೂರ್ಣವಾಗಿ ಕಂಡಿತಲ್ಲದೆ, ಅದು ಡೆವಿಲ್ಲನ ಪೂಜೆ ಎಂಬುದಾಗಿ ಭಾವಿಸಿದರು. ಆ ಮೂರ್ತಿಯ ಕೀರಿಟವನ್ನು ಕ್ಯಾಥೋಲಿಕ್ ಪೋಪನ ಕಿರೀಟಕ್ಕೆ ಹೋಲಿಸುವುದೂ ಗಮನಾರ್ಹ.

ಈ ವಿದ್ವತ್ಪೂರ್ಣ ಕೃತಿಯನ್ನು ಕುವೆಂಪು ವಿಶ್ವವಿದ್ಯಾನಿಲಯದ ’ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ’ದ ನಿರ್ದೇಶಕರಾಗಿರುವ ರಾಜರಾಮ ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಹೆಗ್ಗೋಡಿನ ಅಕ್ಷರ ಪ್ರಕಾಶನದಿಂದ ಪ್ರಕಟವಾಗಿದೆ. ಬೆಲೆ ರೂ ೪೧೫