Saturday, October 25, 2008

ಡಾರ್ಕ್ ರೂಂನಲ್ಲಿ ಕುಳಿತ್ಯಾಕೆ ಬರೀಬೇಕು?


ಕೆಲವು ಜನ ಮೆಸೇಜ್ ಮಾಡಿ ’ಸುರಗಿ ನಿಮ್ಮ ನಿಜವಾದ ಹೆಸರಾ॥?’ ಎಂದು ಕೇಳಿದ್ದಾರೆ। ಹೆಸರಿನಲ್ಲೇನಿದೆ ಮಹಾ ಎಂದುಕೊಂಡರೂ, ಎಲ್ಲಾ ಇರುವುದು ಹೆಸರಲ್ಲೇ ಎಂಬುದು ನನಗೆ ಗೊತ್ತಿದೆ.

ಸಾರ್ವಜನಿಕ ಬದುಕಿನಲ್ಲಿ, ಸಮಾಜದಲ್ಲಿ ನಾವು ’ಎನೋ’ ಆಗಿರುತ್ತೇವೆ। ನಾವು ಆಡುವ ಮಾತುಗಳು, ವ್ಯಕ್ತಪಡಿಸುವ ಅಭಿಪ್ರಾಯಗಳು ’ನಮ್ಮವರ’ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹಾಗಾಗಿ ಅಳೆದು, ತೂಗಿ ಮಾತಾಡುತ್ತೇವೆ. ಆದರೆ ಹೇಳಲಾರದ ದುಃಖ-ದುಮ್ಮಾನಗಳು, ಆಸೆ-ಆಕಾಂಕ್ಷೆಗಳು, ಸಿಟ್ಟು-ಸೆಡವುಗಳು ಮನಸ್ಸಿನೊಳಗೆ ಹಾಗೇ ಉಳಿದು ಬಿಡುತ್ತಲ್ಲ, ಅದಕ್ಕೇನು ಮಾಡೋಣ?

’ಡೈರಿ ಬರೆದು ಬಿಡಿ’ ಅಂದು ಬಿಡಬಹುದು। ಆದರೆ, ಅದು ಖಾಸಗಿ ಹಂತದಲ್ಲೇ ಉಳಿದು ಬಿಡುತ್ತದೆ. ತನ್ನ ಕ್ರಿಯೆಗಳನ್ನು ಬೇರೆಯವರು ಗಮನಿಸಬೇಕು ಎಂಬುದು ಮನುಷ್ಯ ಸಹಜ ಗುಣ. ಹಾಗಾಗಿ ಬ್ಲಾಗ್ ಬರೆಯಲು ಆರಂಭಿಸಿದೆ. ಇದು ’ನನ್ನೊಡನೆ ನಾನು’ ಮಾತಾಡಿಕೊಂಡಂತೆ. ಇದನ್ನೇ ನಾನು ನನ್ನ ಬ್ಲಾಗ್ ಬರವಣಿಗೆಯ ಆರಂಭದಲ್ಲಿ ಹೇಳಿಕೊಂಡಿದ್ದೇನೆ.

’ಮನಸ್ಸಿಗೆ ತೋಚಿದಂತೆ ಬರೆಯಲು ಬ್ಲಾಗೇನು ಪರ್ಸನಲ್ ಡೈರಿಯಾ?’ ಎಂದು ವಿಜಯ ಕರ್ನಾಟಕದಲ್ಲಿ ಲೇಖಕರೊಬ್ಬರು ಪ್ರಶ್ಣಿಸಿದ್ದಾರೆ। ಹೌದು, ಒಂದು ರೀತಿಯಲ್ಲಿ ಅದು ಪರ್ಸನಲ್ ಡೈರಿಯೇ. ಯಾರೂ ಓದುಗರಿಲ್ಲದಿದ್ದರೂ ನಾನು ಮನಸ್ಸು ಬಂದಾಗಲೆಲ್ಲಾ ಬರಿತಾನೇ ಇರ್ತಿನಿ. ಇಷ್ಟಕ್ಕೂ ಬರವಣಿಗೆ ಅನ್ನೊದು ಬಿಡುಗಡೆ. ಅದು ಲೇಖಕನ ಮಡುಗಟ್ಟಿದ ಭಾವನೆಗಳ ಅಭಿವ್ಯಕ್ತಿ.

ಇಂತಹ ಬರವಣಿಗೆಯಲ್ಲಿ ಆತ್ಮಚರಿತ್ರೆಯ ಛಾಯೆಯಿರಬಹುದು। ಹೆಂಗಸರಲ್ಲಿ ಸ್ವಂತ ಐಡೆಂಟಿಟಿ ಇರುವವರು ಕಡಿಮೆ. ’ಇಂತಹವರ’ ಪತ್ನಿ, ಮಗಳು, ತಂಗಿ, ತಾಯಿ ಅಥವಾ ಗೆಳತಿ ಎಂದೇ ಗುರುತಿಸುತ್ತಾರೆ. ಅದರಲ್ಲೂ ಗಣ್ಯ ವ್ಯಕ್ತಿಯ ಪತ್ನಿಯಾಗಿದ್ದು, ಗಂಡನ ಕ್ಷೇತ್ರದಲ್ಲೇ ಚೂರು ಪಾರು ಹೆಸರು ಮಾಡಿದ್ದರೆ ಅವಳನ್ನು ಸಂಶಯದಿಂದಲೇ ನೋಡಲಾಗುತ್ತದೆ. ಪತಿಯ ನೆರಳಲ್ಲೆ ಪತ್ನಿಯ ಪ್ರತಿಭೆಯನ್ನು ಗುರುತಿಸಲಾಗುತ್ತದೆ.

ಇಲ್ಲಿ, ಡಾರ್ಕ್ ರೂಂನಲ್ಲಿ ನಾನು ’ನಾನು’ ಮಾತ್ರ ಆಗಿರುತ್ತೇನೆ। ನನ್ನ ಬರಹ ಮಾತ್ರ ನಿಮ್ಮ ಮುಂದಿರುತ್ತದೆ. ಅದು ಮಾತ್ರ ನಿಮ್ಮನ್ನು ತಲುಪುತ್ತದೆ. ಸಮಾಜವನ್ನು ತಿದ್ದುವ, ಬದಲಿಸುವ ದೊಡ್ಡ ದೊಡ್ಡ ಹೊಣೆಗಾರಿಕೆಗಳು ಖ್ಯಾತ ನಾಮರಿಗೇ ಇರಲಿ.

ಕನ್ನಡದ ಕೆಲವು ಪತ್ರಿಕೆಗಳು ಮತ್ತು ನಿಯತಕಾಲಿಕಗಳು ನನ್ನ ಲೇಖನಗಳನ್ನು ಪ್ರಕಟಿಸಲಿಲ್ಲ। ಹಿಂದೆ ಪ್ರಕಟಿಸುತ್ತಿದ್ದವು. ಯಾಕಿರಬಹುದೆಂದು ಕೆದಕಿದಾಗ ಗೊತ್ತಾಗಿದ್ದು; ನಾನು ’ಇಂತವರ’ ಪತ್ನಿಯೆಂದು, ಮತ್ತೊಂದು ಕಾರಣ ಆ ಪತ್ರಿಕೆಯ ದ್ಯೇಯಧೋರಣೆಗಳಿಗೆ ವ್ಯತಿರಿಕ್ತವಾಗಿ ನನ್ನ ಬರಹ ಇದ್ದದ್ದು. ’ನಿಮ್ಮ ಬರಹದಲ್ಲಿ ಸತ್ವ ಇದ್ದಿರಲಾರದು ಬಿಡಿ’ ಎಂದು ನೀವನ್ನಬಹುದು. ಆದರೆ ಅದೇ ಬರಹಗಳನ್ನು ಪ್ರಜಾವಾಣಿ ಸಮೂಹ ಪ್ರಕಟಿಸಿತು.’ ಓ॥ಗೊತ್ತಾಯ್ತು ಬಿಡಿ ನೀವು ಎಲ್ಲಿ ಗುರುತಿಸಲ್ಪಡುತ್ತೀರಿ ’ ಅಂತ ರಾಗ ಎಳೆದ್ರಾ.. ಇದೇ ಸ್ವಾಮಿ, ಪೂರ್ವಗ್ರಹ ಅಂದ್ರೆ.

ಮೊನ್ನೆ ’ಕೆಂಡ ಸಂಪಿಗೆ’ಯಲ್ಲಿ ಜೋಗಿ ಬರೆದ ಬೈರಪ್ಪನವರ ಬರಹಕ್ಕೆ ಕಮೆಂಟ್ ಬರೆಯೋಣವೆಂದುಕೊಂಡೆ। ಯಾಕೆಂದರೆ ಬೈರಪ್ಪನವರ ಸ್ತ್ರೀ ಪಾತ್ರಗಳು ಜೋಗಿಗೆ ಕಾಡದಿರಬಹುದು.ಆದರೆ ನನಗಂತೂ ಕಾಡಿವೆ. ಅವರ ಸ್ತ್ರೀ ಪಾತ್ರಗಳು ಕಾದಂಬರಿಕಾರರನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತವೆ. ಕಾದಂಬರಿಕಾರ ಅವರನ್ನು ಉಸಿರುಗಟ್ಟಿಸಿದರೂ ನನ್ನಂಥ ಓದುಗಳಲ್ಲಿ ಅದು ಮರು ಜೀವ ಪಡೆದು ಚಿಗುರಿಕೊಳ್ಳುತ್ತದೆ.

ಆದರೆ ಬರೆಯಲಿಲ್ಲ। ಅಲ್ಲಿರುವ ಕಮೆಂಟ್ ರಾಶಿ ನೋಡಿ ಬೆರಗಾಗಿ ಹೋದೆ. ನಮ್ಮ ಪರಿಸರ ನಮ್ಮ ವ್ಯಕ್ತಿತ್ವವನು ರೂಪಿಸುತ್ತದೆ. ಓದು ಮತ್ತು ಅನುಭವ ಅದಕ್ಕೆ ಇನ್ನೊಂದು ಆಯಾಮ ನೀಡಬಹುದು. ಆದರೆ ನಮ್ಮದಲ್ಲದ ವ್ಯಕ್ತಿತ್ವವನ್ನು ಅರೋಪಿಸಿ ಜಗ್ಗಾಡಿದರೆ ನೋವಾಗುವುದಿಲ್ಲವೇ? ಜೋಗಿಯ ಬರವಣಿಗೆ ಹಿನ್ನೆಲೆಗೆ ಸರಿದು ಜೋಗಿ ’ಇಂಥವರು’, ಕಮೆಂಟ್ ಮಾಡಿದವರು ’ಇಂತವರಿಗೆ ಸಂಬಂದಿಸಿದವರು’ ಎಂಬುದರ ಮೇಲೆ ಚರ್ಚೆ ಮುಂದುವರಿಯುತ್ತಿತ್ತು. ಸೂಕ್ಷ ಮನಸ್ಸಿನವರಿಗೆ ಇದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ.

ಯಾವುದೋ ಒಂದು ಸಮುದಾಯದ ಅಥವಾ ಸಿದ್ಧಾಂತದ ಚೌಕಟ್ಟಿನೊಳಗೆ ನನ್ನನ್ನು ನನಗೆ ಗುರುತಿಸಿಕೊಳ್ಳಲು ಸಾಧ್ಯವಾಗದು। ಆದರೆ ಪ್ರಭಾವಕ್ಕೊಳಗಾಗಬಹುದು. ಗುರುತಿಸಿಕೊಳ್ಳುವುದೇ ಅನಿವಾರ್ಯವಾದರೆ ಸ್ತ್ರೀವಾದಿಯಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಹಾಗಾಗಿ ’ ಇಂಥವರ’ ನೆರಳಲ್ಲಿ ಗುರುತಿಸಿಕೊಂಡರೆ ನಮ್ಮ ಐಡೆಂಟಿಟಿ ಮಸುಕಾಗುತ್ತದೆ. ಇಲ್ಲವೇ ಸಂಶಯಕ್ಕೊಳಗಾಗುತ್ತದೆ.

ಡಾರ್ಕ್ ರೂಂನಿಂದ ಬರೆದಾಗಲೂ ಕಿರಿಕಿರಿಯಾಗುವುದುಂಟು। ಸುಮಾರು ಒಂದು ತಿಂಗಳಿಗೂ ಹಿಂದೆ ನಾನು ಕೆಲವು ಪರಿಚಿತರಿಗೆ ಮೆಸೇಜ್ ಮಾಡಿ ನನ್ನ ಬ್ಲಾಗ್ ನೋಡುವಂತೆ ಮನವಿ ಮಾಡಿದ್ದೆ. ಇಮೇಲ್ ಗಿಂತಲೂ ಮೆಸೇಜ್ ಸುಲಭ ಅಂದುಕೊಂಡು ಮೊಬೈಲ್ ನಂಬರ್ ಪ್ರೋಪೈಲ್ ನಲ್ಲಿ ನೀಡಿದ್ದೆ. ಇಂಗ್ಲೀಷ್ ಪತ್ರಕರ್ತನೊಬ್ಬ ’ಲೀವಿಂಗ್ ಟುಗೆದರ್’ ಲೇಖನ ಬರೆದಾಗ ಎಚ್ಚೆತ್ತುಕೊಂಡ. ಬೆನ್ನು ಬಿಡದ ಬೇತಾಳದಂತೆ ಕಾಡತೊಡಗಿದ. ಅವನು ಇನ್ನಾರೋ ಪತ್ರಕರ್ತೆ ತಾನೆಂದು ಭಾವಿಸಿದನಂತೆ!

ಈ ಬ್ಲಾಗ್ ಮನುಷ್ಯ ಸ್ವಭಾವದ ಕೆಲವು ಮುಖಗಳನ್ನು ಪರಿಚಯ ಮಾಡಿಕೊಟ್ಟಿದೆ। ಅದಕ್ಕಾಗಿ ಕೃತಜ್ನತೆಯಿದೆ. ನಿಜದ ಬದುಕಿನಲ್ಲಿ ಎಲ್ಲವನ್ನೂ ಬಿಚ್ಚಿಟ್ಟು ಬದುಕಲಾಗದು. ಇಲ್ಲಾದರೆ ಅಡ್ಡಗೊಡೆಯಲ್ಲಿಟ್ಟ ದೀಪದಂತೆ ಹೇಳಿಕೊಳ್ಳಬಹುದು. ಹೇಳಿ ಹಗುರಾಗಬಹುದು. ಕೆಲವೊಮ್ಮೆ ಪ್ರತಿಕ್ರಿಯೆಯೂ ಸಿಗಬಹುದು. ಭಾವನೆಗಳ ವಿನಿಮಯಕ್ಕೆ ಇಲ್ಲಿ ಮುಕ್ತ ಅವಕಾಶವಿದೆ. ಓದುಗರ ಜೋತೆ ನೇರ ಸಂಪರ್ಕವಿರುವುದರಿಂದ ಬ್ಲಾಗ್ ಒಮ್ಮೊಮ್ಮೆ ಆಪ್ತ ಸಲಹಾ ಕೇಂದ್ರದಂತೆಯೂ ಕೆಲಸ ಮಾಡುತ್ತದೆ.

ನನ್ನದೊಂದು ಪುಟ್ಟ ಭಾವ ಪ್ರಪಂಚ. ಅಲ್ಲಿರುವುದು ನಾನು ಮತ್ತು ನನ್ನ ಭಾವನೆಗಳು ಮಾತ್ರ. ಅಲ್ಲಿಗೆ ಆಕ್ರಮಣವಾಗದಂತೆ ನಾನು ಎಚ್ಚರ ವಹಿಸುತ್ತೇನೆ. ’ನಿನಗೆ ನೀನೇ ಗೆಳೆಯ’ ಎಂಬ ಮಾತಿನಲ್ಲಿ ನನಗೆ ಸಂಪೂರ್ಣ ವಿಸ್ವಾಸವಿದೆ.

Sunday, October 12, 2008

’ಲಿವಿಂಗ್ ಟುಗೆದರ್’ ಯಾಕೀ ರಗಳೆ?



ಶಾಸ್ತೋಕ್ತ ಅಥವಾ ಕಾನೂನು ಬದ್ಧ ವಿಧಿ ವಿಧಾನಗಳ ಹೊರತಾಗಿ ಯಾವುದೇ ಪುರುಷ ಮತ್ತು ಮಹಿಳೆ ಸಕಾರಣಗಳಿಂದಾಗಿ ದೀರ್ಘಕಾಲ ಒಟ್ಟಿಗೇ ವಾಸಿಸುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ಅವರನ್ನು ದಂಪತಿ ಎಂದೇ ಮಾನ್ಯ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಸರಕಾರ ಯಾಕೆ ಈ ನಿರ್ಧಾರಕ್ಕೆ ಬಂತು?
ಯಾಕೆಂದರೆ, ಆನೇಕ ವರ್ಷಗಳ ಕಾಲ ಸಹಜೀವನ ನಡೆಸಿದ ಪುರುಷ ಸಂಗಾತಿ ಒಂದು ದಿನ ಇದ್ದಕ್ಕಿದ್ದಂತೆ ’ನಿನಗೂ ನನಗೂ ಯಾವ ಸಂಬಂಧವೂ ಇಲ್ಲ’ ಎಂದು ಎದ್ದು ಹೊರಟುಬಿಡುತ್ತಿದ್ದ. ಬಹುತೇಕ ಸಂದರ್ಭಗಳಲ್ಲಿ ಆತನ ಮುಂದೆ ಎರಡು ಆಯ್ಕೆಗಳಿರುತ್ತಿದ್ದವು. ಮೊದಲನೆಯದಾಗಿ ಆತ ಇನ್ನೊಂದು ಹೆಣ್ಣಿನತ್ತ ಈ ಮೊದಲೇ ಆಕರ್ಷಿತನಾಗಿರುತ್ತಿದ್ದ ಹಾಗಾಗಿ ಇಲ್ಲಿ ಸಂಬಂದ ಹರಿದುಕೊಂಡು ಅಲ್ಲಿ ಮುಂದುವರಿಸುತ್ತಿದ್ದ. ಎರಡನೆಯದಾಗಿ ಮನೆಯವರ ಒತ್ತಡಕ್ಕೆ ಮಣಿದು ಮದುವೆಯ ಬಂಧನಕ್ಕೆ ಒಳಗಾಗುತ್ತಿದ್ದ. ಇಲ್ಲಿ ಈ ಹುಡುಗಿ ಭಾವನಾತ್ಮಕವಾಗಿ ಕುಸಿದು ಹೋಗುತ್ತಿದ್ದಳು.
ಇಂತಹ ಸಂದರ್ಭಗಳಲ್ಲಿ ಕೆಲವು ಮಹಿಳೆಯರು ತಮಗಾಗಿರುವ ಅನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಲೇರಿದ್ದರು. ಆದರೆ ಹಿಂದು ವಿವಾಹ ಕಾಯ್ದೆಯ ಪ್ರಕಾರ ಒಟ್ಟಿಗೆ ಬದುಕುವುದು ಮದುವೆ ಅನ್ನಿಸಿಕೊಳ್ಳುವುದಿಲ್ಲ. ಹಾಗಾಗಿ ಪುರುಷರು ’ಮದುವೆ’ ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು. ಆಕೆಗೆ ಯಾವುದೇ ಪರಿಹಾರವನ್ನು ಕೊಡುತ್ತಿರಲಿಲ್ಲ.
ಒಬ್ಬ ಮಹಿಳೆಯ ಗುಣಮಟ್ಟದ ಕ್ರಿಯಾಶೀಲ ಬದುಕು ನಲ್ವತ್ತನೇ ವಯಸ್ಸಿಗೆ ಮುಗಿದು ಹೊಗುತ್ತದೆ. ಅಥವಾ ಮಸುಕಾಗುತ್ತಾ ಬರುತ್ತದೆ. ಅದರಲ್ಲೂ ಭಾರತಿಯ ಸಮಾಜದಲ್ಲಿ ಮತ್ತೊಮ್ಮೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪೂರಕ ವಾತಾವರಣವಿಲ್ಲ. ಪರಂಪರೆಯ, ಸಂಪ್ರದಾಯದ ಚೌಕಟ್ಟುಗಳನ್ನು ಮೀರಿದವರನ್ನು ಬಂಧುಬಾಂಧವರು ಅಷ್ಟು ಸುಲಭವಾಗಿ ತಮ್ಮೊಡನೆ ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ ಅವರು ಒಂಟಿಯಾಗಿಬಿಡುತ್ತಾರೆ. ಇಳಿ ವಯಸ್ಸಿನಲ್ಲಿ ಒಂಟಿತನ ಸಹಿಸುವುದು ಕಷ್ಟ.
ಇದನ್ನೆಲ್ಲಾ ಮನಗಂಡ ಸರಕಾರ ’ಲೀವಿಂಗ್ ಟುಗೆದರ್’ಗೆ ಕಾನೂನಿನ ಮಾನ್ಯತೆ ನೀಡಲು ನಿರ್ಧರಿಸಿದೆ.
ಇಲ್ಲಿ ಉದ್ಭವಿಸುವ ಪ್ರಶ್ನೆ ಏನೇಂದರೆ, ಎಷ್ಟು ಪರ್ಸೆಂಟ್ ಜನ ಲಿವಿಂಗ್ ಟುಗೆದರ್ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಎಂತಹ ಮನಸ್ಥಿತಿಯ ಜನ ಆಯ್ಕೆ ಮಾಡಿಕೊಳ್ಳುತ್ತಾರೆ?
ಇದು ನಗರ ಸಂಸ್ಕ್ರ್‍ಅತಿಯ ಬಳುವಳಿ. ಇದಕ್ಕೆ ಬದಲಾದ ಕೌಟುಂಬಿಕ ಮೌಲ್ಯಗಳೇ ಕಾರಣ. ಮೌಲ್ಯ ಬದಲಾವಣೆಗೆ ಜಾಗತೀಕರಣವೂ ಒಂದು ಕಾರಣ. ಹಾಗಾಗಿ ಸಮಾಜಮುಖಿಯಾದ ಸಮೂಹ ಕೇಂದ್ರಿತ ಬದುಕು ಈಗಿಲ್ಲ. ಈಗ ಏನಿದ್ದರೂ ವ್ಯಕ್ತಿ ಕೇಂದ್ರಿತ ಬದುಕು. ’ನಾವು, ನಮ್ಮದು’ ಇಲ್ಲ; ’ನಾನು, ನನ್ನದು’ ಎಲ್ಲಾ. ಹಾಗಾಗಿ ಜನರು, ಮುಖ್ಯವಾಗಿ ಯುವ ಜನಾಂಗ ಸ್ವಾರ್ಥಿಗಳೂ, ಅಂತರ್ಮುಖಿಗಳೂ, ಭಾವರಹಿತರೂ ಆಗುತ್ತಿದ್ದಾರೆ. ಅವರ ಕೈಯಲ್ಲೊಂದು ಮೊಬೈಲ್, ಎದುರುಗಡೆ ಕಂಪ್ಯೂಟರ್, ಓಡಾಡಲೊಂದು ವೆಹಿಕಲ್ ಇದ್ದುಬಿಟ್ಟರೆ ಪ್ರಪಂಚ ತಮ್ಮ ಮುಷ್ಟಿಯಲ್ಲಿರುತ್ತೆ ಎಂಬ ನಂಬಿಕೆ ಅವರಲ್ಲಿರುತ್ತೆ.
ಇಂತಹ ಯುವ ಮನಸ್ಸುಗಳೇ ’ಲೀವಿಂಗ್ ಟುಗೆದರ್’ನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರು ನೈತಿಕ ಕಟ್ಟುಪಾಡು ಇಲ್ಲದವರು, ಮುಕ್ತ ಲೈಂಗಿಕತೆಯ ಪ್ರತಿಪಾದಕರು.. ಎಂಬೆಲ್ಲಾ ಅಭಿಪ್ರಾಯಗಳಿವೆ. ಆದರೆ ಅದು ಸರಿಯಲ್ಲ. ಇವರಲ್ಲಿ ಹೆಚ್ಚಿನವರು ಭಾವನಾತ್ಮಕ ಆಸರೆಗಾಗಿ ಹಾತೊರೆಯುತ್ತಾ ಇಂಥಹ ಬಂಧದಲ್ಲಿ ಒಂದಾಗುತ್ತಾರೆ. ಇನ್ನು ಕೆಲವರು ಮದುವೆಯ ಬಂಧ ಹೊರಿಸುವ ಹೊಣೆಗಾರಿಕೆಯನ್ನು ನಿಭಾಯಿಸಲಾರೆವೆನ್ನುವ ಭಯದಿಂದ ಇಂಥ ಸಂಬಂಧದಲ್ಲಿ ಸಿಲುಕಿಕೊಳ್ಳುತ್ತಾರೆ. ಕೆಲವರು ಭಾವಿಸುವಂತೆ ಸೆಕ್ಸೇ ಮುಖ್ಯವಾಗುವುದಾದರೆ ಈಗೆಲ್ಲಾ ’ಟೈಂಪಾಸ್ ಸೆಕ್ಸ್’ ಎನ್ನುವುದು ಅತಿ ಸುಲಭವಾಗಿ ಸಿಗುವ ಮನೋರಂಜನೆ.
ಆರ್ಥಿಕವಾಗಿ ಸ್ವತಂತ್ರಳಿದ್ದು ಎಂತಹ ಪರಿಸ್ಥಿತಿಯನ್ನು ಕೂಡ ಸಮರ್ಥವಾಗಿ, ಒಂಟಿಯಾಗಿ ಎದುರಿಸಬಲ್ಲೆ ಎನ್ನುವ ಆತ್ಮವಿಶ್ವಾಸದ, ಭಾವುಕವಾಗಿದ್ದರೂ- ನಿರ್ಣಾಯಕ ಘಟ್ಟಗಳಲ್ಲಿ ನಿರ್ಧಾಕ್ಷಣ್ಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಹುಡುಗಿಯೊಬ್ಬಳು ’ಲಿವಿಂಗ್ ಟುಗೆದರ್’ನತ್ತ ವಾಲಿದರೆ ಅದವಳ ಅತ್ಯುತ್ತಮ ಆಯ್ಕೆಯಾಗಬಲ್ಲುದು.
ಯಾಕೆಂದರೆ ಒಬ್ಬ ಗೆಳೆಯ ಕೊಡುವ ಸಾಂಗತ್ಯವನ್ನು ಒಬ್ಬ ’ಗಂಡ’ ಕೊಡಲಾರ. ಹಿಂದೆ ಬದ್ರತೆಯನ್ನು ನೀಡುತ್ತಿದ್ದ ಕುಟುಂಭ ಈಗ ಹೊಣೆಗಾರಿಕೆಯನ್ನು ಮಾತ್ರ ನೀಡುತ್ತಿದೆ. ಆಕೆ ಗೃಹಿಣಿಯಾಗಿದ್ದಾಗ ಗೃಹಸ್ಥನಾಗಿ ಆತ ಹೊಣೆಗಾರಿಕೆಯಲ್ಲಿ ಪಾಲುದಾರನಾಗುತ್ತಿದ್ದ. ಆದರೆ ಈಗ ಆಕೆ ಉದ್ಯೋಗಸ್ಥ ಮಹಿಳೆ. ಆತನ ಪಾಲುದಾರಿಕೆ ಶೂನ್ಯ. ’ಅಲೆಮಾರಿತನ’ ಎಂಬುದು ಗಂಡಸಿನ ಸ್ಥಾಯಿ ಭಾವ. ಬೇಜವಾಬ್ದಾರಿತನ, ಉಡಾಫೆ, ಸೋಮಾರಿತನ...ಇತ್ಯಾದಿ ಸಂಚಾರಿ ಭಾವಗಳು.
ಇಷ್ಟೆಲ್ಲ ಹೇಳಿದರೂ ’ಲೀವಿಂಗ್ ಟುಗೆದರ್’ನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಶೇ.೧ನ್ನೂ ದಾಟಿಲ್ಲ. ಹಾಗಾಗಿ ಇಷ್ಟು ಬೇಗನೇ ಸರಕಾರ ಇದನ್ನು ಕಾನೂನಿನ ವ್ಯಾಪ್ತಿಗೆ ತರಬೇಕಾದ ಅವಶ್ಯಕತೆ ಇದ್ದಂತಿಲ್ಲ. ಈಗ ಬದಲಾಗಬೇಕಾದ್ದು ಪುರುಷ ಮನಸ್ಥಿತಿ. ಗಂಡ ಹೆಂಡತಿಯಲ್ಲಿ ಭರವಸೆಯನ್ನು ತುಂಬಬೇಕು. ಬದುಕಿನ ಬದ್ರತೆಯನ್ನು ಮೂಡಿಸಬೇಕು. ಇಲ್ಲವಾದರೆ..... ಇಂದು ’ಲೀವಿಂಗ್ ಟುಗೆದರ್’ -ನಾಳೆ ಮದುವೆಯ ನಿರಾಕರಣೆ.

Thursday, October 2, 2008

ನಿಮ್ಮ ಇಷ್ಟ ದೈವ ಯಾವುದು?


ರಾಜಸ್ತಾನದ ಜೋದ್ ಪುರದ ಚಾಮುಂಡಾ ದೇವಿಯ ಸನಿಧಿಯಲ್ಲಿ ಸಂಭವಿಸಿದ ದುರಂತವನ್ನು ಟೀವಿಯಲ್ಲಿ ನೋಡುತ್ತಲಿದ್ದೆ. ಅದಕ್ಕೆ ಕಾರಣಗಳನ್ನು ಮತ್ತು ಭಕ್ತರ ನಂಬಿಕೆಯ ಜಗತ್ತನ್ನು ಭೂತಕನ್ನಡಿಯಲ್ಲಿಟ್ಟು ವಿಮರ್ಶಿಸುವುದು ನನಗಿಷ್ಟವಿಲ್ಲ. ನನಗೆ ಅನ್ನಿಸಿದ್ದೇ ಬೇರೆ...!
ನಮ್ಮಲ್ಲಿ ಅಂದ್ರೆ ಹಿಂದುಗಳಲ್ಲಿ [ಬೇರೆ ದರ್ಮದ ದೇವರ ವಿಚಾರ ಇಲ್ಲಿ ತರುವುದು ಬೇಡ ಅಲ್ವಾ.. ನಮ್ಮದು, ನಮ್ಮವರು ಅಂದ್ರೆ ಸಲಿಗೆ ಜಾಸ್ತಿ ಎನೆಂದ್ರೂ ಸಹಿಸ್ಕೋತಾರೆ!.] ಮೂವತ್ತಮೂರು ಕೋಟಿ ದೇವತೆಗಳಿದ್ದಾರೆ. ಸಾಯಿಬಾಬಾ, ಚಿಕೂನುಗುನ್ಯಾದ ಕೀಲಮ್ಮ, ಈಗ ನಡೆದಾಡುವ; ಮುಂದೆ ದೇವರಾಗಬಹುದಾದ ದೇವಮಾನವರುಗಳು, ಹೀಗೆ ಅಯಾಯ ಕಾಲಕ್ಕೆ ಈ ಪಟ್ಟಿ ಪರಿಷ್ಕರಣೆಯಗುತ್ತಲೇ ಇರುತ್ತದೆ. ವಿರೋಧವನ್ನು ಕೂಡ ತನ್ನಲ್ಲಿ ಐಕ್ಯವಾಗಿಸಿಕೊಳ್ಳುವ ಅಥವಾ ಅಫೋಶನ ತೆಗೆದುಕೊಳ್ಳುವ ಇಲ್ಲವೇ ತನಗೆ ಬೇಕಾದಂತೆ ಪರಿವರ್ತಿಸಿಕೊಳ್ಳುವ ಆಗಾಧ ಶಕ್ತಿ ಹಿಂದು ಧರ್ಮಕ್ಕಿದೆ. ಹಿಂದು ಧರ್ಮದ ಕಟ್ಟಾ ವಿರೋಧಿಗಳಾದ ಚರ್ವಾಕರು,ಬೌದ್ಧರು, ಲಿಂಗಾಯಿತರು ಮತ್ತು ತಾಂತ್ರಿಕರನ್ನು ಇಂದು ಹಿಂದು ದರ್ಮದ ಭಾಗವೆಂಬಂತೆ ಚಿತ್ರಿಸಲಾಗುತ್ತದೆ.ಹಿಂದು ಧರ್ಮಕ್ಕೆ ಸಮಾನಂತರವಾಗಿ ಅಷ್ಟೇ ಪ್ರಭಲವಾಗಿದ್ದ ಮೌಖಿಕ ಸಾಹಿತ್ಯ ಹಾಗು ಜಾನಪದ ಪರಂಪರೆಯನ್ನೊಳಗೊಂಡ ಭಾರತಿಯ ಸಂಸ್ಕ್ರ್‍ಅತಿ ಅಕ್ಷರ ಬಲ್ಲವರಿಂದ ಮೂಲೆಗುಂಪಾಯಿತು. ಒಹ್, ವಿಷಯಾಂತರವಾಯಿತು ಅಲ್ವಾ, ಕ್ಷಮಿಸಿ.
ಮುವತ್ತಮೂರು ಕೋಟಿ ದೇವತೆಗಳು ಅನ್ತಿದ್ದೆ ಅಲ್ವಾ, ಇವರಲ್ಲಿ ಹೆಣ್ಣೆಷ್ಟು? ಗಂಡೆಷ್ಟು? ನನಗೆ ಗೊತ್ತಿಲ್ಲ. ಯಾರಿಗೆ ಯಾವ ದೇವರು/ದೇವತೆ ಯಾಕೆ ಇಷ್ಟವಾಗುತ್ತಾನೆ/ಳೆ ಅದೂ ಕೂಡ ಗೊತ್ತಿಲ್ಲ. ನಾನೇನೂ ಆಸ್ತಿಕಳಲ್ಲ. ಹಾಗಂತ ನಾಸ್ತಿಕಳೂ ಅಲ್ಲ. ಒಂದು ಕಾಲದಲ್ಲಿ ನೀಲಮೇಘಶ್ಯಾಮನಾದ ಕೃಷ್ಣ ನನ್ನ ಇಷ್ಟದೈವವಾಗಿದ್ದ. ರಾಧ-ಮಾಧವರ ಪ್ರೇಮ ನನ್ನ ಆದರ್ಶವಾಗಿತ್ತು. ಮುಂದೆ ದ್ರೌಪಧಿಯ ಸಖ, ದ್ವಾರಕೆಯ ಕೃಷ್ಣ ನನ್ನ ಆತ್ಮಬಂಧುವಾದ. ಆತನ ಕಿರುಬೆರಳು ಹಿಡಿದು ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ಈಗ ಆತನೂ ನನ್ನ ಜತೆಯಲಿಲ್ಲ. ಈಗ ನನ್ನನ್ನು ಸಂಪೂರ್ಣ ಆವರಿಸಿಕೊಂಡಿರುವವನು ಶಿವ.
ಅಬ್ಬಾ! ಎಂತಹ ಪರಿಪೂರ್ಣ ವ್ಯಕ್ತಿತ್ವ ಶಿವನದು!! ತನ್ನ ದೇಹದ ಅರ್ಧ ಭಾಗವನ್ನೇ ಮಡದಿಗೆ ನೀಡಿ ಅರ್ಧನಾರೀಶ್ವರನಾದ ಪ್ರೇಮಿ ಆತ. ಆತನ ಕೌಟುಂಬಿಕ ಬದುಕು ಎಷ್ಟೊಂದು ವೈರುಧ್ಯತೆಗಳಿಂದ ಕೂಡಿದೆ.. ಆದರೂ ಅಲ್ಲಿ ಸಾಮರಸ್ಯವಿದೆ. ಪಾರ್ವತಿಯ ವಾಹನಹುಲಿ. ಹುಲಿಯ ಆಹಾರ ಶಿವನ ವಾಹನವಾದ ನಂದಿ. ಶಿವನ ಕೊರಳನ್ನಲಂಕರಿಸಿರುವ ಹಾವಿನ ಕಣ್ಣು ಗಣಪನ ವಾಹನವಾದ ಇಲಿಯ ಮೇಲಿರುತ್ತದೆ. ಸುಬ್ರಹ್ಮಣ್ಯನ ವಾಹನ ನವಿಲಿನ ಆಹಾರ ಶಿವನ ಕೊರಳಲ್ಲಿರುವ ಹಾವು. ಶಿವನ ಹಣೆಯಲ್ಲಿ ಸದಾ ಪ್ರಜ್ವಲಿಸುವ ಬೆಂಕಿಕಣ್ಣಿದೆ. ಆದರೆ ತಲೆಯಲ್ಲಿ ಬೆಂಕಿ ನಂದಿಸುವ ಗಂಗೆಯಿದ್ದಾಳೆ. ಸ್ವತ ಶಿವ ಬೂದಿಬಡುಕನಾದ ಶ್ಮಶಾನವಾಸಿ ತಿರುಕ ಆದರೆ ಪಾರ್ವತಿ ಸುರಸುಂದರಿಯಾದ ರಾಜಕುಮಾರಿ.ಆದರೂ ಶಿವನನ್ನು ಮೆಚ್ಚಿ ಮದುವೆಯಾದವಳು. ಡೊಳ್ಳು ಹೊಟ್ಟೆಯ ಆನೆ ಮುಖದ ಗಣೇಶ ಇಲಿ ಮೇಲೆ ಕೂತು ಸವಾರಿ ಮಾಡುವುದು ನೆನೆಸಿದರೇ ನಗು ಬರುತ್ತದೆ. ಇನ್ನು ಅವರ ಪರಿವಾರವೋ ಭೂತ ಪ್ರೇತಾದಿ ಗಣಗಳು.
ಸಂಸಾರದಲ್ಲಿ ಸಾಮರಸ್ಯ ಸಾಧಿಸುವುದು ಹೇಗೆ ಎಂಬುದನ್ನು ಶಿವ-ಶಿವೆಯರನ್ನು ನೋಡಿಯೇ ಕಲಿತುಕೊಳ್ಳಬೇಕು. ಆತನ ಪರಿವಾರ ನೋಡಿದರೇ ಗೊತ್ತಾಗುತ್ತದೆ. ಅತನೊಬ್ಬ ಕೃಷಿಕ. ಪಶುಪತಿನಾಥ ಎಂಬ ಹೆಸರು ಆತನಿಗೆ ಅನ್ವರ್ಥನಾಮ. ಇಂತಪ್ಪ ಪಶುಪತಿನಾಥನನ್ನು ಹುಡುಕಿಕೊಂಡು ನಾನು ಯಾವುದೋ ಟ್ರಾವಲ್ಸ್ ಹತ್ತಿ ಒಂಟಿಯಾಗಿ ನೇಪಾಳಕ್ಕೆ ಹೋಗಿದ್ದೆ. ಆದರೆ ಅಲ್ಲಿ ಪಶುಪತಿನಾಥನ ಪಕ್ಕದ ಗುಡಿಯಲ್ಲಿದ್ದ ಉನ್ಮತ್ತ ಬೈರವನನ್ನು ನೋಡಿ ದಿಗ್ಮೂಢಳಾಗಿ ನಿಂತಿದ್ದೆ. ಈಗ ಎಷ್ಟು ನೆನಪಿಸಿಕೊಂಡರೂ ಪಂಚಮುಖಿ ಪಶುಪತಿನಾಥನ ಮುಖ ಸ್ಪಷ್ಟವಾಗಿ ಗೊಚರಿಸದು. ಉನ್ಮತ್ತ ಬೈರವ ಮಾತ್ರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದೆ. ಇನ್ನೊಮ್ಮೆ ನೇಪಾಳಕ್ಕೆ ಹೋಗಿ ಪಶುಪತಿನಾಥ ಮತ್ತು ಶಕ್ತಿಪೀಠವನ್ನು ಒಟ್ಟಾಗಿ ನೋಡಬೇಕೆಂಬ ಬಯಕೆಯಿದೆ.
ಸ್ಥೀಯ ಧೀಃಶಕ್ತಿಯ ಬಗ್ಗೆ ನನಗೆ ಅಪಾರ ಭರವಸೆಯಿದೆ. ಅವಳು ಆಧಿಶಕ್ತಿ. ಸೃಷ್ಟಿಸುವ, ಪಾಲಿಸುವ ಮತ್ತು ಪೊರೆಯುವ ಸಾಮರ್ಥ್ಯ ಅವಳಿಗೆ ಮಾತ್ರ ಇದೆ. ಪುರುಷನಲ್ಲಿ ಅದು ಇಲ್ಲ. ಸಮಸ್ತ ಹಿಂದುಗಳ ಶ್ರದ್ಧಾ ಕೇಂದ್ರವಾದ ಕಾಶಿ ವಿಶ್ವನಾಥ, ಅಷ್ಟೈಶ್ವರ್ಯವನ್ನು ಬಯಸುವವರಿಗಾಗಿ ತಿರುಪತಿ ತಿಮ್ಮಪ್ಪ, ಹಾಗು ಸ್ತ್ರೀದ್ವೇಷಿ ಅಯ್ಯಪ್ಪ ಬಿಟ್ಟರೆ ಬೇರೆ ಪುರುಷ ದೇವರುಗಳು ಅಷ್ಟು ಜನಪ್ರಿಯರಾಗಿದ್ದು ನನಗೆ ಗೊತ್ತಿಲ್ಲ.ಹಾಗೆಯೇ ಅಲ್ಲಿ ಭಕ್ತರ ನೂಕು ನುಗ್ಗಾಟದಲ್ಲಿ ಸಾವು ಸಂಭವಿಸಿದ್ದು ನನಗೆ ನೆನಪಿಲ್ಲ
ಕುಂಬಮೇಳಕ್ಕೆ ಲಕ್ಷಾಂತರ ಜನಸೇರುತ್ತಾರೆ. ಅದು ಕೂಡ ಶಕ್ತಿ ಸ್ಥಳವೇ. ಗಂಗಾ, ಯಮುನಾ, ಸರಸ್ವತಿಯರ ಸಂಗಮ ಸ್ಥಳ ಅದು. ಅಲ್ಲಿ ಪ್ರತಿ ಬಾರಿಯೂ ಸಾವು ನೋವುಗಳಾಗುವುದು ಸಾಮಾನ್ಯ. ಇತ್ತೀಚೆಗೆ ಹಿಮಾಚಲಪ್ರದೇಶದ ನೈನಾದೇವಿ ಮಂದಿರದಲ್ಲಿ, ಅದಕ್ಕೂ ಹಿಂದೆ ಮಹಾರಾಷ್ಟ್ರದ ಮಾಂದ್ರಾದೇವಿ ದೇಗುಲದಲ್ಲಿ ಭಕ್ತರ ನೂಕುನುಗ್ಗಾಟದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು.
ಈಗ ನನಗೊಂದು ಕುತೂಹಲವಿದೆ; ಮಾತೃ ದೇವತೆಗಳಿಗೆ ಹೆಚ್ಚು ಭಕ್ತರಿರುತ್ತಾರೋ ಅಥವಾ ಗಂಡು ದೇವರುಗಳಿಗೋ...! ನನಗೆ ಶಿವ ಇಷ್ಟ. ಅದಕ್ಕೆ ನಾನು ಸ್ತ್ರೀಯಾಗಿರುವುದು ಕಾರಣವಾಗಿರಬಹುದು; ನನಗೆ ಗೊತ್ತಿಲ್ಲ. ನಿಮಗೆ ಯಾರು ಇಷ್ಟ? ಲೇಖನದ ಬಲ ಬದಿಯಲ್ಲಿರುವ ಕಾಲಂನಲ್ಲಿ ಓಟು ಮಾಡ್ತೀರಲ್ಲಾ.....?