Saturday, January 29, 2011

ನಿಮ್ಮ ಪ್ರೀತಿಗೆ ನನ್ನನ್ನು ಖರೀದಿಸುವ ಶಕ್ತಿಯಿದೆ!




[೨೦೦೫ರಲ್ಲಿ ’ಓ ಮನಸೇ’ ಪಾಕ್ಷಿಕದಲ್ಲಿ ನಾನೊಂದು ಫ್ರೀಸ್ಟೈಲ್ ಲೇಖನ ಬರೆದಿದ್ದೆ. ಅಂತರ್ಜಾಲದಲ್ಲಿ ’ಹರಾಜು’ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಸ್ತುತವಾಗಬಹುದೆಂದು ಭಾವಿಸಿ ಅದನಿಲ್ಲಿ ಪೋಸ್ಟ್ ಮಾಡುತ್ತಿದ್ದೇನೆ.]

ಮೊನ್ನೆ ನಾನೊಂದು ಹೊಸ ಮೊಬೈಲ್ ಸೆಟ್ ಕೊಂಡುಕೊಂಡೆ. ತುಂಬಾ ಮುದ್ದಾಗಿದೆ. ಆ ಮಾದರಿಯ ಹ್ಯಾಂಡ್ ಸೆಟ್ಟನ್ನು ನಾನು ಯಾರದೋ ಕೈಯಲ್ಲಿ ನೋಡಿದ್ದೆ. ನನಗದು ತುಂಬಾ ಇಷ್ಟವಾಗಿತ್ತು. ಮುಂದೆಂದಾದರೂ ಸೆಟ್ ಕೊಳ್ಳಬೇಕೆನಿಸಿದಾಗ ಇಂತಹದ್ದನ್ನೇ ಕೊಳ್ಳಬೇಕೆಂದು ಮನಸ್ಸಿನಲ್ಲೇ ನಿಶ್ಚಯಿಸಿಕೊಂಡಿದ್ದೆ.

ಹಾಗೊಂದು ಸಂದರ್ಭ ಮೊನ್ನೆ ಒದಗಿ ಬಂದಿತ್ತು. ನನ್ನ ಸಂಬಂದಿಯೊಬ್ಬರ ಮೊಬೈಲ್ ಸೆಟ್ ನಿಷ್ಕ್ರೀಯಗೊಂಡಿತು. ಎಲೆಕ್ಟ್ರಾನಿಕ್ ವಸ್ತುಗಳ ಹಣೆಬರಹವೇ ಅಷ್ಟು. ಇದ್ದಕ್ಕಿದ್ದಂತೆ ಅವುಗಳ ಉಸಿರು ನಿಂತು ಬಿಡುತ್ತೆ. ಖಾಯಿಲೆ ಏನು ಎಂದು ಕಂಡು ಹಿಡಿದು ಪರ್ಸ್ ಖಾಲಿ ಮಾಡಿಕೊಳ್ಳುವುದಕ್ಕಿಂತ ಹೊಸದನ್ನು ಖರೀದಿಸುವುದೇ ಸೂಕ್ತವೆನಿಸುತ್ತದೆ. ನನ್ನ ಸಂಬಂದಿಗೆ ನನ್ನ ಸೆಟ್ ಇಷ್ಟವಾಗಿದ್ದ ಕಾರಣ ನಾನವಳಿಗೆ ಅದನ್ನು ಉಡುಗೊರೆಯಾಗಿ ಕೊಟ್ಟುಬಿಟ್ಟೆ. ನಾನು ಈ ಹಿಂದೆಯೇ ಮೋಹಗೊಂಡಿದ್ದ ಸೆಟ್ಟನ್ನು ಖರೀದಿ ಮಾಡಿದೆ.

ನಾವು ಏನನ್ನಾದರೂ ಕೊಂಡುಕೊಂಡರೆ ಅದನ್ನು ಇನ್ನೊಬ್ಬರೆದುರು ಪ್ರದರ್ಶಿಸಲೇ ಬೇಕು. ಸಾಧ್ಯವಾದರೆ ಅವರ ಹೊಟ್ಟೆಗಿಷ್ಟು ಕಿಚ್ಚು ಸುರಿಯಲೇ ಬೇಕು! ಇದು ಹ್ಯೂಮನ್ ಸೈಕಲಾಜಿ.
ನಾನು ಕೂಡಾ ಹುಲುಮಾನವಳಲ್ಲವೇ? ನಾನು ಮೋಹಗೊಂಡ ವಸ್ತು ನನ್ನ ಕೈ ಸೇರಿದುದರ ಬಗ್ಗೆ ಪುಳಕಿತಗೊಂಡು ನನ್ನ ಗೆಳೆಯನೊಬ್ಬನಿಗೆ ಪೋನ್ ಮಾಡಿದೆ. ಆದರೆ ಅವನಿಗದು ’ಎನೂ’ ಆಗಿರಲಿಲ್ಲ.
ಆದರೂ ನಾನೂ ಉತ್ಸಾಹದಿಂದಲೇ ಆ ಸೆಟ್, ಅದರಲ್ಲಿರುವ ಸವಲತ್ತುಗಳ ಬಗೆಗೆ ವಿವರಿಸುತ್ತಲೇ ಹೋದೆ...’ನಿನ್ನ ಪೋಟೋವನ್ನು ನಿನ್ನ ನಂಬರಿನೊಡನೆ ಜೋಡಿಸಿದ್ದೇನೆ. ನೀನು ಪೋನ್ ರಿಸೀವ್ ಮಾಡದಿದ್ದರೂ ಒಂದಷ್ಟು ಹೊತ್ತು ನಿನ್ನ ಪೋಟೋ ನೋಡ್ತಾ ಕಳೆದೋಗ್ತೀನಿ...’ ಎಂದೆಲ್ಲಾ ಕೀಟಲೆ ಮಾಡಿದೆ. ನನ್ನ ಬಗ್ಗೆ ಕೊಚ್ಚಿಕೊಳ್ಳುತ್ತಾ, ’ನಾನು ಯಾವಾಗಲೂ ಅತ್ಯುತ್ತಮವಾದುದನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಿನ್ನನ್ನು ನನ್ನ ಗೆಳೆಯನನ್ನಾಗಿ ಆಯ್ದುಕೊಂಡ ಹಾಗೆ’ ಎಂದೆ. ತಕ್ಷಣ ಆತ ”ನನ್ನನ್ನ ಎಷ್ಟಕ್ಕೆ ಪರ್ಚೇಸ್ ಮಾಡಿದ್ದೆ?” ಎಂದ.
ನಾನು ಒಂದು ಕ್ಷಣ ಅವಕ್ಕಾದೆ. ಎನೋ ಮಾತಾಡಿ ಪೋನ್ ಇಟ್ಬಿಟ್ಟೆ. ಆದರೆ ಆ ಪ್ರಶ್ನೆ ನನ್ನ ಮನಸ್ಸಿನಲ್ಲಿ ರಿಜಿಸ್ಟರ್ ಆಗಿಬಿಡ್ತು.

ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಖರೀದಿ ಮಾಡಲು ಸಾಧ್ಯವೇ?
ನಾವು ಇತಿಹಾಸದಲ್ಲಿ ಓದಿದ್ದೇವೆ; ಗುಲಾಮಗಿರಿ ಪದ್ಧತಿ ಅಸ್ತಿತ್ವದಲ್ಲಿದ್ದ ಕಾಲಘಟ್ಟದಲ್ಲಿ ಮನುಷ್ಯರನ್ನು ವಸ್ತುಗಳಂತೆ ಮಾರಾಟ ಮಾಡುವ ಮತ್ತು ಖರೀದಿಸುವ ವ್ಯವಹಾರ ನಡೆಯುತ್ತಿತ್ತು. ಖರೀದಿಸುವುದೆಂದರೆ ಒಂದನ್ನು ಕೊಟ್ಟು ಇನ್ನೊಂದನ್ನು ಪಡೆದುಕೊಳ್ಳುವುದು. ನಾನು ಹಣ ನೀಡಿ ನನ್ನ ಇಷ್ಟದ ಮೊಬೈಲ್ ಸೆಟ್ ಖರೀದಿ ಮಾಡಿದೆ. ಅದನ್ನು ನನ್ನದನ್ನಾಗಿ ಮಾಡಿಕೊಂಡೆ. ಹಾಗೆ ಏನನ್ನು ಕೊಟ್ಟು ಒಬ್ಬ ಮನುಷ್ಯನನ್ನು ನನ್ನವನನ್ನಾಗಿ/ನನ್ನವಳನ್ನಾಗಿ ಮಾಡಿಕೊಳ್ಳಬಹುದು?

ಒಂದು ವೇಳೆ ಹಾಗೆ ಖರೀದಿ ಮಾಡಲು ಸಾಧ್ಯವಾಗುವುದಾರೆ, ಖರೀದಿಗೆ ಸಿಗುವಂತಿದ್ದರೆ ಆತ ನಮಗೆ ಪ್ರೀತಿ ಪಾತ್ರನಾಗಬಲ್ಲನೇ? ದುಡ್ಡು ಬಿಸಾಕಿ ಖರೀದಿಸುವ ಯಾವುದೇ ವಸ್ತುವಿನ ಬಗ್ಗೆ ನಮಗೆ ಯಾವತ್ತಿಗೂ ಒಂದೇ ಭಾವವಿರಲು ಸಾಧ್ಯವೇ? ವಸ್ತುಗಳನ್ನಾದರೆ ಒಂದಷ್ಟು ಕಾಲ ಉಪಯೋಗಿಸಿ ನಂತರ ಬಿಸಾಕಿ ಬಿಡುತ್ತೇವೆ. ಹಾಗೆ ಜೀವಂತ ಮನುಷ್ಯರನ್ನು ಬಿಸಾಡಲು ಸಾಧ್ಯವೇ?

ಬಂದುತ್ವವನ್ನು ಬೆಸೆಯುವ ವಿವಾಹ, ಈಗ ವ್ಯವಹಾರದ ಮಟ್ಟಕ್ಕಿಳಿದಿರುವ ಈ ಸಂದರ್ಭದಲ್ಲಿ ವಧುವಿನ ಮನೆಯವರು ದುಡ್ಡು, ಬಂಗಾರ,ಕಾರು, ಬಂಗ್ಲೆ ಮುಂತಾದ ಸುಖಭೋಗದ ವಸ್ತುಗಳನ್ನು ನೀಡಿ ಒಂದು ಗಂಡನ್ನು ಖರೀದಿ ಮಾಡುತ್ತಾರೆ. ಆದರೆ ಮನಸ್ಸನ್ನು ಖರೀದಿಸಲು ಸಾಧ್ಯವೇ?

ನನ್ನ ಗೆಳೆಯ ಕೀಟಲೆಗೆ ಪ್ರತಿ ಕೀಟಲೆಯಂತೆ ಸಹಜವಾಗಿ ಕೇಳಿದ ಒಂದು ಪ್ರಶ್ನೆ ನನ್ನಲ್ಲಿ ಇಷ್ಟೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಯ್ತು.

ನಮ್ಮ ದೈಹಿಕ ಸಾಮರ್ಥ್ಯವನ್ನು ಖರೀದಿ ಮಾಡುವವರಿದ್ದಾರೆ. ನಮ್ಮನ್ನು ಬೌದ್ಧಿಕ ಗುಲಾಮರನ್ನಾಗಿ ಮಾಡಿಕೊಳ್ಳುವವರಿದ್ದಾರೆ. ಖರೀದಿ ಎಂಬ ಶಬ್ದದಲ್ಲೇ ವಾಣಿಜ್ಯದ ಉದ್ದೇಶವೂ ಅಡಗಿಕೊಂಡಿದೆ. ವಾಣಿಜ್ಯ ಅಂದ ಮೇಲೆ ಲಾಭ-ನಷ್ಟದ ಪ್ರಶ್ನೆ ಇದ್ದಿದ್ದೇ.

ಖರೀದಿದಾರನು ತಾನು ಖರೀದಿಸಲ್ಪಟ್ಟ ವಸ್ತುವಿನಿಂದ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ಆತನಲ್ಲಿರುವುದು ಅಹಂ; ಮಾಲೀಕನ ದರ್ಪ. ಖರೀದಿಗೆ ಒಳಪಟ್ಟವನಲ್ಲಿರುವುದು ಕೀಳರಿಮೆ.
ಕೆಲವೊಮ್ಮೆ ಈ ಅಹಮಿಕೆ ಮತ್ತು ಕೀಳರಿಮೆಯ ಮನಸ್ಥಿತಿ ಒಂದೇ ವ್ಯಕ್ತಿಯಲ್ಲಿ ಇರುವ ಸಾಧ್ಯತೆ ಇದೆ. ಪ್ರೇಮಿಗಳಲ್ಲಿ ಈ ಮನಸ್ಥಿತಿ ಹೆಚ್ಚು. ಇಬ್ಬರಲ್ಲೂ ಪರಸ್ಪರ ಖರೀದಿಸಿದ ಮನಸ್ಥಿತಿ ಇರುವ ಕಾರಣದಿಂದಲೇ ಪರಸ್ಪರ ಹಕ್ಕು ಸ್ಥಾಪನೆ ಮಾಡಲು ಸದಾ ಹವಣಿಸುತ್ತಿರುತ್ತಾರೆ.
ಗಂಡ-ಹೆಂಡತಿಯರಲ್ಲೂ ಇದೇ ರೀತಿಯ ಮನಸ್ಥಿತಿ ಕೆಲಸ ಮಾಡುತ್ತಿರುತ್ತದೆ. ಆದರೆ ವರದಕ್ಷಿಣೆ ಕೊಟ್ಟು ಹುಡುಗಿಯೊಬ್ಬಳು ಗಂಡನನ್ನು ಖರೀದಿ ಮಾಡಿದ್ದರೂ ಅವಳಲ್ಲಿರುವುದು ಖರೀದಿಗೆ ಒಳಪಟ್ಟ ಕಿಳರಿಮೆಯೇ. ಸ್ವತಃ ಖರೀದಿಗೊಳಪಟ್ಟಿದ್ದರೂ ಭಾರತೀಯ ಪರಂಪರೆಯಲ್ಲಿ ಗಂಡನಲ್ಲಿರುವುದು ಖರೀದಿದಾರನ ಮನಸ್ಥಿತಿಯೇ.

ರಾಜಕಾರಣದಲ್ಲಿ ’ಕುದುರೆ ವ್ಯಾಪಾರ’ ಎಂಬ ಮಾತೊಂದು ಚಾಲ್ತಿಯಲ್ಲಿದೆ. ಆಡಳಿತ ಪಕ್ಷದವರು ಇಲ್ಲವೇ ವಿರೋಧ ಪಕ್ಷದವರು ತಮ್ಮ ಸಂಖ್ಯಾಬಲವನ್ನು ವೃದ್ದಿಸಿಕೊಳ್ಳುವುದರ ಸಲುವಾಗಿ ಎಂ.ಪಿಗಳನ್ನು ಅಥವಾ ಎಂ.ಎಲ್.ಎಗಳನ್ನು ಖರೀದಿ ಮಾಡುತ್ತಾರೆ. ಇದು ವಸ್ತುಗಳ ಖರೀದಿಗೆ ಹತ್ತಿರವಾದುದೇ.

ಪಶುಗಳಂತೆ ಖರೀದಿ ಮತ್ತು ಮಾರಾಟ ಜಾಲದಲ್ಲಿ ಆಗಾಗ ಸಿಕ್ಕಿ ಬೀಳುವವವರೆಂದರೆ ನಮ್ಮ ಹೆಣ್ಣುಮಕ್ಕಳು. ಇವರನ್ನು ವೇಶ್ಯಾವೃತ್ತಿಗೆ ಸರಬರಾಜು ಮಾಡುವ ದೊಡ್ಡ ಪಡೆಗಳೇ ಅಸ್ತಿತ್ವದಲ್ಲಿದೆ. ಅಲ್ಲದೆ ಅರಬ್ ರಾಷ್ಟ್ರಗಳಲ್ಲಿ ಬಹು ಜನಪ್ರಿಯವಾದ ಶ್ರೀಮಂತರ ಮೋಜಿನ ಕ್ರೀಡೆಯಾದ ಒಂಟೆ ಓಟಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಪುಟ್ಟ ಪುಟ್ಟ ಮಕ್ಕಳನ್ನು ಖರೀದಿ ಮಾಡಲಾಗುತ್ತದೆ. ಒಂಟೆಯ ಹೊಟ್ಟೆಗೆ ಕಟ್ಟಿದ ಮಕ್ಕಳು ಪ್ರಾಣ ಭಯದಿಂದ ಕಿರುಚಾಡುತ್ತಿದ್ದರೆ ಅಥವಾ ಒಂಟೆಯ ಕಾಲಕೆಳಗೆ ಬಿದ್ದು ನರಳಿ ಸತ್ತರೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ. ಇಂಥ ಸ್ಯಾಡಿಸ್ಟ್ ಮನೋಭಾವ ಮನುಷ್ಯನ ಮನಸ್ಸಿನಾಳದಲ್ಲಿ ಗುಪ್ತವಾಗಿ ಅವಿತಿರುತ್ತದೆ.

ಕಳೆದ ವರ್ಷ ಅಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಸಾಕಷ್ಟು ಕೋಲಾಹಲ ಎಬ್ಬಿಸಿದ ಮಕ್ಕಳ ಮಾರಾಟ ಜಾಲ ಅದರ ವಿಕೃತ ಮುಖಗಳನ್ನು ತೆರೆದಿಟ್ಟಿತು. ವಿವಿಧ ದಂದೆಗಳಲ್ಲಿ ಅಪ್ರಾಪ್ತ ಬಾಲಕ ಬಾಲಕಿಯರನ್ನು ತೊಡಗಿಸಿಕೊಳ್ಳುವ ಸಮಾಜ ವಿರೋದಿ ಚಟುವಟಿಕೆಗಳಲ್ಲಿ ಹಲವು ಬಾರಿ ಗಣ್ಯ ವ್ಯಕ್ತಿಗಳ ಕೈವಾಡವೂ ಇರುತ್ತದೆ.

ತಾನು ಖರೀದಿಸಲ್ಪಟ್ಟಿದ್ದೇನೆ ಎಂಬುದು ಕೆಲವು ಬಾರಿ ಖರೀದಿಗೊಳಗಾದವನ ಅರಿವಿಗೇ ಬರುವುದಿಲ್ಲ. ಉದಾಹರಣೆಗೆ ಕಾರ್ಪೋರೇಟ್ ವಲಯ ತನ್ನ ನೌಕರರಿಗೆ ಆಕರ್ಷಕವಾದ ವೇತನ, ಸವಲತ್ತುಗಳನ್ನು ನೀಡಿ ದಿನಕ್ಕೆ ಕನಿಷ್ಟ ಹದಿನೆಂಟು ಗಂಟೆಗಳ ಕಾಲ ದುಡಿಸಿಕೊಳ್ಳುತ್ತದೆ.
ಇದೆಲ್ಲಕ್ಕಿಂತಲೂ ವಿಸ್ಮಯದ ಸಂಗತಿಯೆಂದರೆ ಸಾಂಸ್ಕೃತಿಕ ಲೋಕದಲ್ಲಿ ನಡೆಯುವ ಬೌದ್ಧಿಕ ಖರೀದಿ. ಮುಂದೆ ಬರೆಯಲಿರುವ ಪುಸ್ತಕಕ್ಕಾಗಿ ಲಕ್ಷಾಂತರ ಡಾಲರ್ ಹಣ ಮುಂಗಡ ಪಡೆಯುವ ಬರಹಗಾರರು ನಮ್ಮ ನಡುವಿನಲ್ಲಿಯೇ ಇದ್ದಾರೆ. ಆಧುನಿಕ ಜಗತ್ತಿನಲ್ಲಿ ಎಲ್ಲೆಲ್ಲೂ ವರ್ತಕರ ವರ್ತುಲವೇ ಕಂಡುಬರುತ್ತಿದೆ!

ನಮ್ಮ ಪುರಾಣಗಳ ಒಳಹೊಕ್ಕು ನೋಡಿದರೆ ದಾನದ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ನ್ಯಾಸ[ಅಡವಿಡುವುದು]ದ ಸಂದರ್ಭಗಳೂ ಸಿಗುತ್ತವೆ. ಆದರೆ ಖರೀದಿ ಮತ್ತು ಮಾರಾಟದ ಉದಾಹರಣೆಗಳು ಕಡಿಮೆ. ಸೂರ್ಯವಂಶದ ದೊರೆ ರಾಜಾ ಹರಿಶ್ಚಂದ್ರನು ಸತ್ಯಕ್ಕಾಗಿ ಹೆಂಡತಿ ಮಗನನ್ನು ಮಾರಿ, ಕೊನೆಗೆ ತನ್ನನ್ನು ತಾನೇ ಹರಾಜಿಗಿಟ್ಟುಕೊಂಡದ್ದು ಲೋಕಪ್ರಸಿದ್ಧ ಕಥೆ. ಅಂಥಹ ರಾಜನನ್ನು ಖರೀದಿಸಲು ಸಾಕ್ಷಾತ್ ಯಮಧರ್ಮರಾಯನೇ ಭೂಮಿಗಿಳಿದು ಬಂದಿದ್ದ. ಇದೇ ಹರಿಶ್ಚಂದ್ರನು ತನ್ನ ಮಗ ರೋಹಿತನ ಬದಲಿಗೆ ಋಚೀಕ ಋಷಿಯ ಮಧ್ಯಮ ಪುತ್ರ ಶುನಶ್ಯೇಫನನ್ನು ವರುಣನಿಗೆ ಬಲಿ ನೀಡಲೆಂದು ಖರೀದಿಸಿದ್ದು ಇನ್ನೊಂದು ಕಥೆ. ಆದರೆ ಅದೇ ಶುನಶ್ಯೇಫನನ್ನು ವಿಶ್ವಾಮಿತ್ರ ಬಿಡುಗಡೆ ಮಾಡುತ್ತಾನೆ.

ಖರೀದಿಗೆ ಇದೆ ಎಂದಾದರೆ ಖರೀದಿಸುವವರೂ ಇರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಯಾರಾದರೂ ತಮ್ಮ ಪ್ರೀತಿಯನ್ನು ನೀಡಿ ನನ್ನನ್ನು ಖರೀದಿಸಲಿ ಎಂದು ಹಂಬಲಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಏಕೆ ಸಾಧ್ಯವಾಗುವುದಿಲ್ಲ? ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಮತ್ತೆ ನಾವು ಮನಸ್ಸಿನ ವಿಶ್ಲೇಷಣೆಗೆ ಇಳಿಯಬೇಕು. ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಗೆಳೆಯನಿಗೆ ತಾನು ಬಿಕರಿಯಾಗಿದ್ದೇನೆ ಎಂಬ ವಿಷಣ್ಣತೆಯಿದ್ದರೆ ನನ್ನಲ್ಲಿ ಖರೀದಿಸಿದ ಭಾವವಿರಲಿಲ್ಲ. ಅಂದರೆ ಎಲ್ಲೋ ಲಿಂಕ್ ಮಿಸ್ಸಾಗುತ್ತಲಿದೆ. ಅದು ಮನುಷ್ಯನ ವೈಯಕ್ತಿಕ ದುರಂತ; ಮನುಕುಲದ ದುರಂತ.

Friday, January 14, 2011

ಯಾರಿಲ್ಲಿ ಅಂತಕನ ದೂತರು...?!






ಕಳೆದ ವಾರ ಹಾಸನ ಸಮೀಪ ಬೋಸ್ಮನ ಹಳ್ಳಿ ಮತ್ತು ನವಿಲಹಳ್ಳಿಗಳಲ್ಲಿ ಎರಡು ಪುಟ್ಟ ಆನೆ ಮರಿಗಳು ಸತ್ತು ಬಿದ್ದವು.ಅದನ್ನು ಕಂಡ ತಾಯಿ ಆನೆ ಸಂಕಟದಿಂದ ಘೀಳಿಟ್ಟು ರೋಧಿಸುತ್ತಿದ್ದ ಪರಿ ಎಂತಹ ಕಲ್ಲೆದೆಯವರನ್ನೂ ಕರಗಿಸುವಂತಿತ್ತು. ವಿಕ್ಷಕರೆದೆಯಲ್ಲಿ ಕರುಣ ರಸ ಉಕ್ಕುವಂತೆ ದೃಶ್ಯ ಮಾದ್ಯಮ ಅವುಗಳನ್ನು ಬಿತ್ತರಿಸಿತ್ತು. ಮರುದಿನ ಕನ್ನಡದ ಪ್ರಮುಖ ಪತ್ರಿಕೆಯಾದ ’ವಿಜಯ ಕರ್ನಾಟಕ’ ಈ ಸಾವಿಗೆ ಹೀಗೆ ಪ್ರತಿಕ್ರಿಯೆ ನೀಡಿತ್ತು ’ಅಂತಕನ ದೂತರಿಗೆ ಕಿಂಚಿತ್ತೂ ಕರುಣವಿಲ್ಲ’. ಅತ್ಯಂತ ಸೂಕ್ತವಾದ ಶೀರ್ಷಿಕೆ.

ಹಿಂದೆ ದಾಸರು ಆಡಿದ ಮಾತಿದು; ಆಗ ಅಂತಕನ ದೂತರು ಯಾರು ಎಂಬುದರ ಬಗ್ಗೆ ಸ್ಪಸ್ಟ ಕಲ್ಪನೆಯಿತ್ತು. ಇಂದಿನ ಸಂದರ್ಭದಲ್ಲಿ ಯಾರು ಈ ಅಂತಕನ ದೂತರು?

ನಮಗೊಂದು ಚುನಾಯಿತ ಸರಕಾರವಿದೆ. ಅದರಲ್ಲೊಂದು ಅರಣ್ಯ ಖಾತೆಯಿದೆ. ಅದಕೊಬ್ಬ ಸಚಿವರಿದ್ದಾರೆ. ಅವರು ಸ್ಥಳಕ್ಕೆ ಬರುವುದಿರಲಿ ಕನಿಷ್ಟ ಒಂದು ಹೇಳಿಕೆಯನ್ನೂ ನೀಡಿಲ್ಲ. ಉಂಡಬತ್ತಿ ಕೆರೆಯಿಂದ ಸಾಲು ಸಾಲು ಹೆಣಗಳನ್ನು ಮೇಲಕ್ಕೆತ್ತುತ್ತಿದ್ದಾಗಲೇ ಹಣಿಕಿ ನೋಡದ ಸರಕಾರಕ್ಕೆ ಯಕಶ್ಚಿತ್ ಆನೆಮರಿಗಳು ಸತ್ತದ್ದು ಗಮನಕ್ಕೆ ಬಂದೀತಾದರು ಹೇಗೆ?!

ಮನುಷ್ಯ, ಜೀವ ಸರಪಳಿಯಲ್ಲಿನ ಒಂದು ಕೊಂಡಿ. ಪ್ರಾಣಿ, ಪಕ್ಷಿಗಳೂ ಸೇರಿದಂತೆ ಉಳಿದ ಜೀವಸಂಕುಲಗಳೂ ಆ ಸರಪಳಿಯಲ್ಲಿನ ಇತರ ಕೊಂಡಿಗಳು. ಈ ನಿಸರ್ಗದ ಮೇಲೆ ನಮಗೆಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಅವುಗಳಿಗೂ ಇದೆ. ಅದರೆ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಅವುಗಳ ಮೇಲೆ ನಿಯಂತ್ರಣ ಸಾಧಿಸಿ ತನ್ನ ಅನುಕೂಲತೆಗೆ ತಕ್ಕಂತೆ ಬಳಸಿಕೊಂಡಿದ್ದಾನೆ. ಇಂಥ ಬಳಸುವಿಕೆಯಿಂದ ಜೀವ ಜಾಲದ ಕೊಂಡಿಗಳು ಒಂದೊಂದಾಗಿ ಕಳಚಿ ಬೀಳುತ್ತಾ ಪ್ರಾಕೃತಿಕ ಅಸಮತೋಲಕ್ಕೆ ಕಾರಣವಾಗುತ್ತಿದೆ.

ಇದನ್ನು ಬರೆಯುತ್ತಿರುವಾಗಲೇ ಬೆಂಗಳೂರಿನ ಬಾಗಲೂರಿನ ಗುಡಿಸಲೊಂದರಲ್ಲಿ ಮಲಗಿಸಿದ್ದ ಒಂದೂವರೆ ವರ್ಷದ ಮಗುವನ್ನು ಬೀದಿನಾಯಿಗಳು ಹರಿದು ಕಿತ್ತು ತಿಂದಿವೆ. ಇದಕ್ಕೆ ಯಾರು ಹೊಣೆ?
ಯಾರಿಲ್ಲಿ ಅಂತಕನ ದೂತರು?
ಆನೆ ಹತ್ಯೆಗೆ ಮನುಷ್ಯನ ಆಸೆಬುರುಕತನ ನೇರ ಕಾರಣವಾದರೆ ಇಲ್ಲಿಯೂ ಅದೇ ಮನಸ್ಥಿತಿ ಕೆಲಸ ಮಾಡಿದೆ. ಸಮಸ್ಯೆಯ ಆಳಕ್ಕೆ ಇಳಿದು ಪರಿಹಾರವನ್ನು ಹುಡುಕುವುದರ ಬದಲು ’ಪ್ರಭುತ್ವ’ವು ನಾಯಿಯನ್ನು ಅರೆಸ್ಟ್ ಮಾಡಿದೆ. ನಾಡಿನ ಪುಣ್ಯ; ಮರಿಗಳನ್ನು ರೈತರ ಜಮೀನಿಗೆ ನುಗ್ಗಿಸಿದ ಆರೋಪದ ಮೇಲೆ ತಾಯಿ ಆನೆಯ ಅರೆಸ್ಟ್ ಮಾಡಲು ಕೈಯ್ಯಲ್ಲಿ ಲಾಠಿ ಹಿಡಿದು ನಮ್ಮ ಪೋಲಿಸರು ಹೋಗಿಲ್ಲ!

ಮನುಷ್ಯ ಕಾಡನ್ನು ಒತ್ತುವರಿ ಮಾಡಿಕೊಂಡಿದ್ದಾನೆ. ಪ್ರಾಣಿಗಳು ಆಹಾರ ಹುಡುಕಿಕೊಂಡು ಊರಿಗೆ ಬಂದಿವೆ. ಹಾಗೆಯೇ ಹಳ್ಳಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ; ರೈತರಿಗೆ, ಆತ ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿದೆ. ಜೊತೆಗೆ ವಿಶೇಷ ಅರ್ಥಿಕ ವಲಯ ಮತ್ತು ಕೈಗಾರಿಕೆ ಸ್ಥಾಪನೆಯ ನೆಪದಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಸರಕಾರವೇ ವಶಪಡಿಸಿಕೊಳ್ಳುತ್ತಿದೆ. ಹಾಗಾಗಿ ಸ್ವಾವಲಂಬಿಯಾಗಿದ್ದ ರೈತ ದಿಕ್ಕುಗೆಟ್ಟು ಪಟ್ಟಣ ಸೇರಿ ಕೂಲಿಯಾಳಾಗಿದ್ದಾನೆ. ಹಳ್ಳಿ ಮತ್ತು ಪಟ್ಟಣದ ಮಧ್ಯೆ ದೊಡ್ಡ ಕಂದಕ ಏರ್ಪಟ್ಟಿದೆ.

ಹಳ್ಳಿ-ಪಟ್ಟಣದ ಎಲ್ಲಾ ಜನರು ದುಡ್ಡಿನ ಹಿಂದೆ ಓಡುತ್ತಿದ್ದಾರೆ; ಅದು ಕೊಡಬಹುದಾದ ಸುಖದ ಕಲ್ಪನೆಯಲ್ಲಿ ಮಾನವೀಯತೆಯನ್ನೇ ಮರೆಯುತ್ತಿದ್ದಾರೆ.

ನಿಸರ್ಗದಲ್ಲಿರುವ ಪ್ರತಿ ಪ್ರಾಣಿಯೂ ತನಗೊಂದು ಸುರಕ್ಷಿತ ವಲಯವನ್ನು ತಾನೇ ನಿರ್ಮಿಸಿಕೊಳ್ಳುತ್ತದೆ. ಹಾಗೆ ನಿರ್ಮಿಸಿಕೊಳ್ಳುವಾಗ ತನ್ನ ಸಹಜೀವಿಗಳಿಗೆ ತೊಂದರೆಯಾಗದಂತೆಯೂ ನೋಡಿಕೊಳ್ಳುತ್ತದೆ. ತನ್ನ ರಹದಾರಿಯನ್ನು ಬಿಟ್ಟು ಆಚೀಚೆ ಹೋಗುವುದಿಲ್ಲ. ಅತಿಕ್ರಮಣ ಮಾಡುವುದಿಲ್ಲ.
ಉದಾಹರಣೆಗೆ ದೂರದ ಸೈಭಿರಿಯಾದಿಂದ ಸಾವಿರಾರು ಮೈಲಿಗಳನ್ನು ಕ್ರಮಿಸಿ ಮಂಡ್ಯದ ಬೆಳ್ಳೂರಿಗೆ ಕೊಕ್ಕರೆಗಳು ವಲಸೆ ಬರುತ್ತವೆ. ಇಲ್ಲಿ ಮೊಟ್ಟೆಯಿಟ್ಟು, ಮರಿ ಮಾಡಿ ಮತ್ತೆ ಅಲ್ಲಿಗೇ ಮರಳುತ್ತವೆ. ಅದವುಗಳ ಹೆದ್ದಾರಿ.ಅಂಥವೇ ಹೆದ್ದಾರಿ ಇರುವೆಗಳಿಗೂ ಇದೆ. ಗುಂಪು ಗುಂಪಾಗಿ ವಾಸಿಸುವ ಪಶು-ಪಕ್ಷಿಗಳಿಗೂ ಇದೆ. ಪ್ರಾಣಿಗಳಿಗೂ ಇದೆ. ಅವುಗಳ ಹೆದ್ದಾರಿಗಳನ್ನು ಮಾನವ ಆಕ್ರಮಿಸಿಕೊಳ್ಳುತ್ತಿದ್ದಾನೆ. ಆಗ ಅವುಗಳೇನು ಮಾಡಬೇಕು?
ಗಂಡು ನಾಯಿಗಳು ಗಿಡ-ಮರ, ಕಲ್ಲು, ಮೋಟು ಗೋಡೆ ಕಂಡಲ್ಲಿ ಕಾಲೆತ್ತಿ ಮೂತ್ರ ಮಾಡುವುದನ್ನು ಎಲ್ಲರೂ ನೋಡಿರುತ್ತೇವೆ. ಹಾಗೆ ಮಾಡುವುದರ ಮುಖಾಂತರ ಅದು ತನಗೆ ಬೌಂಡರಿಯನ್ನು ಹಾಕಿಕೊಳ್ಳುತ್ತದೆ. ಅಲ್ಲದೆ ಅನ್ಯ ನಾಯಿಗಳಿಗೆ ಇದು ತನ್ನ ಏರಿಯಾ ಎಂಬ ಸಂದೇಶವನ್ನು ರವಾನಿಸುತ್ತದೆ. ಬೇಕಾದರೆ ಗಮನಿಸಿ; ತನ್ನ ಏರಿಯಾದಲ್ಲಿ ಆ ನಾಯಿಯ ಬಾಲ ನೆಟ್ಟಗೆ ಇದ್ದರೆ ಇನ್ನೊಂದು ನಾಯಿಯ ಏರಿಯಾಕ್ಕೆ ಹೋದಾಗ ಅದರ ಬಾಲ ಬಾಗಿ ಕಾಲುಗಳ ಮಧ್ಯದಲ್ಲಿ ಅಡಗಿರುತ್ತದೆ.

ಕಾಡು ಪ್ರಾಣಿಗಳಿಗೆ ಕಾಡಿನಲ್ಲಿಯೇ ಆಹಾರವಿದೆ. ಬಿದಿರು ಮೆಳೆಗಳೇ ಆನೆಗಳ ಮುಖ್ಯ ಆಹಾರ. ಅದರ ಜೊತೆ ಹೆಬ್ಬಲಸು, ನೆಲ್ಲಿಕಾಯಿ, ಚೂರಿಕಾಯಿ, ಮೊಗ್ಗರೆಕಾಯಿ, ಕೋಳಿಕುಡ್ತಹಣ್ಣು, ಗೊಟ್ಟೆಹಣ್ಣು[ಮುಳ್ಳುಹಣ್ಣು], ಬೈನೆಮರ, ರಾಂಪತ್ರೆ...ಸಮೃದ್ಧ ಆಹಾರ.ಜೊತೆಗೆ ಯಥೇಚ್ಚ ನೀರು. ಸ್ವಛ್ಚಂದ ಬದುಕು. ಇಂದು ಅದಿಲ್ಲ. ಕಾಡು ಉತ್ಪನ್ನಗಳನ್ನು ಸಂಗ್ರಹಿಸುವ ಗುತ್ತಿಗೆಯನ್ನು ಸರಕಾರವೇ ಹರಾಜು ಹಾಕುತ್ತದೆ. ಗುತ್ತಿಗೆದಾರನ ಕೆಲಸಗಾರರು ಕಾಡಿಗೆ ದಾಳಿಯಿಟ್ಟು ಕಾಡು ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ. ಪ್ರಾಣಿಗಳ ಸ್ವಚ್ಚಂದ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ. ಪ್ರಾಣಿ ಸಂಕುಲ ಉಪವಾಸ ಬೀಳುತ್ತವೆ. ಆಹಾರಕ್ಕಾಗಿ ಅವು ಊರಿಗೆ ಧಾಳಿಯಿಡುತ್ತವೆ.
ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟ ಶ್ರೇಣಿಯ ಆನೆ ಹೆದ್ದಾರಿ [ಕಾರಿಡಾರ್]ಯಲ್ಲೊಮ್ಮೆ ಹೊಕ್ಕು ಬಂದರೆ ತಿಳಿಯುತ್ತದೆ. ಅಭಿವೃದ್ದಿ ಮತ್ತು ಪ್ರವಾಸೋಧ್ಯಮದ ನೆಪದಲ್ಲಿ ನಿತ್ಯ ಹರಿದ್ವರ್ಣದ ಕಾಡು ಮಾನವನ ಆಕ್ರಮಣಕ್ಕೆ ನಲುಗಿ ಹೋಗಿದೆ. ನದಿಮೂಲಗಳು ಬತ್ತುತ್ತಿವೆ, ಜೊತೆಗೆ ಕಲುಷಿತಗೊಳ್ಳುತ್ತಿವೆ. ಇದರಿಂದಾಗಿ ಮತ್ಸ್ಯ ಸಂತತಿ ನಾಶವಾಗುತ್ತಿದೆ.

ಸುತ್ತಲಿನ ಚಾರಚರ ವಸ್ತುಗಳು ತನ್ನ ಉಪಭೋಗಕ್ಕಾಗಿಯೇ ಅಸ್ತಿತ್ವದಲ್ಲಿವೆಯೆಂದು ಮಾನವ ಭಾವಿಸಿದ್ದಾನೆಯೇ? ಈ ಧರೆಯಲ್ಲಿ ತಾನು ಏಕಮೇವಾದ್ವಿತೀಯನಾಗಿ ಮೆರೆಯಬೇಕೆಂದು ಆತ ಬಯಸುತ್ತಿದ್ದಾನೆಯೇ? ಆ ಕಾರಣಕ್ಕಾಗಿಯೇ ಆತ ತನ್ನ ಸಹ ಜೀವಿಗಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾನೆಯೇ?

ನಾನೊಂದು ನಾಯಿ ಸಾಕಿದ್ದೇನೆ. ಅದನ್ನು ಆಗಾಗ ಪಶುವೈದ್ಯರ ಬಳಿ ಕರೆದೊಯ್ಯುತ್ತೇನೆ. ಅಲ್ಲಿ ವಿವಿಧ ತಳಿಯ ನಾಯಿಗಳನ್ನು ನೋಡುವ ಅವಕಾಶ ನನಗೆ ಸಿಗುತ್ತದೆ. ಅವುಗಳು ಮನುಷ್ಯನ ಪ್ರೀತಿಗೆ ಪಾತ್ರವಾದ ಪರಿಯನ್ನು ನೋಡಿದರೆ ಒಂದು ಘಳಿಗೆ ಅವುಗಳ ಬಗ್ಗೆ ಅಸೂಯೆ ಮೂಡುತ್ತೆ. ಅದರೆ ಕೆಲವು ನಾಯಿಗಳ ರೂಪವನ್ನು ಅದರ ಮಾಲೀಕರು ತಮಗೆ ಬೇಕಾದಂತೆ ಬದಲಾಯಿಸುತ್ತಿರುವುದನ್ನು ಕಂಡಾಗ ಹಿಂಸೆಯೆನಿಸುತ್ತದೆ. ಜೋಲು ಕಿವಿ, ಸುರುಳಿಬಾಲ ನಾಯಿಗಳ ಸಹಜ ಸೌಂದರ್ಯ. ಆದರೆ ಅಪರೇಷನ್ ಮಾಡಿ ಅದರ ಕಿವಿಯನ್ನು ನೆಟ್ಟಗೆ ನಿಲ್ಲಿಸುತ್ತಾರೆ. ಬಾಲವನ್ನು ಮೊಂಡು ಮಾಡಿಸುತ್ತಾರೆ. ಅದನ್ನು ಸದಾ ಕಾಲ ಕಟ್ಟಿ ಹಾಕಿ ಒಂಟಿಯಾಗಿ ನರಳಿಸುತ್ತಾರೆ. ಅದಕ್ಕೂ ಒಂದು ಲೈಂಗಿಕ ಸಂಗಾತಿ ಬೇಕೆಂಬುದರ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಹಸುಗಳಿಗೂ ಅಷ್ಟೆ. ಕೃತಕ ಗರ್ಭದಾರಣೆಯನ್ನು ಮಾಡಿಸುತ್ತಾರೆ.

ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದಾಗ ನನ್ನ ಮಕ್ಕಳು ಕೆಂಪಿಯ ಕರು ಮಂಗಳೆಯನ್ನು ಮುದ್ದಿಸಿ ಆನಂದ ಪಟ್ಟಿದ್ದರು. ಅದರ ನೆಗೆದಾಟವನ್ನು ಅಚ್ಚರಿಯ ಕಣ್ಣುಗಳಿಂದ ಹಿಂಬಾಲಿಸುತ್ತಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಆದರೆ ಕಳೆದ ವಾರ ಅಲ್ಲಿಂದ ಸುದ್ದಿ ಬಂತು; ಮಂಗಳೆ ಸತ್ತು ಹೋಯ್ತು.

ನನಗೆ ಗೊತ್ತಿತ್ತು, ಮಂಗಳೆ ಬದುಕುವುದಿಲ್ಲವೆಂದು, ಹಾಗೆ ಅನ್ನಿಸಲಿಕ್ಕೆ ಕಾರಣವಿತ್ತು. ಅಮ್ಮನ ಮೊಲೆ ಹಾಲು ಕುಡಿಯುವುದು ಮಗುವಿನ ಹಕ್ಕು. ಹಸುವಿನ ಕೆಚ್ಚಲಲ್ಲಿ ಹಾಲು ಉತ್ಪಾದನೆಯಾಗುವುದು ಕರು ಕುಡಿಯಲೆಂದು. ಆದರೆ ಅದರಲ್ಲಿ ನಾವು ಪಾಲು ಪಡೆಯುತ್ತೇವೆ. ಅದನ್ನು ನಾವು ಸಹಜವೆಂದು ಒಪ್ಪಿಕೊಂಡಿದ್ದೇವೆ. ಆದರೆ ಕರುವಿಗೆ ಕೆಚ್ಚಲನ್ನು ಚೀಪಲು ಅವಕಾಶವನ್ನೇ ನೀಡದಿದ್ದರೆ....ಅದು ಸತ್ತು ಹೋಗುತ್ತದೆ.
ಹಸುವನ್ನು ಹಾಲು ಉತ್ಪಾದನೆಯ ಪ್ಯಾಕ್ಟರಿಯೆಂದು ಪರಿಗಣಿಸಿದ ಅಮೇರಿಕ ಅದಕ್ಕೆ ಸಹಜವಲ್ಲದ ಮಾಂಸಹಾರವನ್ನು ನೀಡಲಾರಂಬಿಸಿತು. ಪರಿಣಾಮವಾಗಿ ಹಸುಗಳಿಗೆ ಹುಚ್ಚು ಹಿಡಿಯಿತು. ಮನುಷ್ಯರ ಅರೋಗ್ಯದ ದೃಷ್ಟಿಯಿಂದ ಹಸುಗಳ ಮಾರಣ ಹೋಮ ನಡೆಯಿತು.
ಮಹತ್ವಕಾಂಕ್ಷಿಯಾದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕುರಿ, ಕೋಳಿ, ಮೀನು, ಹಂದಿ, ದನ- ಎಲ್ಲವನ್ನೂ ಅಸಹಜ ರೀತಿಯಲ್ಲಿ ಬೆಳೆಸಿ ಅದನ್ನು ತನ್ನ ಆಹಾರವನ್ನಾಗಿಸಿಕೊಂಡಿದ್ದಾನೆ. ಆತನ ಭಕ್ಷಣೆಗೆ ನಿಲುಕದ್ದು ಬಹುಶಃ ಈ ಸೃಷ್ಟಿಯಲ್ಲಿ ಯಾವುದೂ ಇದ್ದಂತಿಲ್ಲ.

ಕಾಡುನಾಶ, ಅದರಿಂದಾಗಿ ಅವಸಾನದ ಅಂಚಿನತ್ತ ಸಾಗುತ್ತಿರುವ ಸಸ್ಯ, ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳು; ಇದನ್ನೆಲ್ಲಾ ಮನಗಂಡ ವಿಶ್ವ ಸಂಸ್ಥೆಯು ೨೦೧೧ರನ್ನು ’ಅಂತರಾಷ್ಟೀಯ ಅರಣ್ಯ ವರ್ಷ’ವೆಂದು ಘೋಷಣೆ ಮಾಡಿದೆ. ಅದರೆ ಕೇವಲ ಘೋಷಣೆಯಿಂದ ನಮ್ಮ ಪರಿಸರವನ್ನು, ಅರಣ್ಯ ಜೀವಿಗಳನ್ನು, ಒಟ್ಟು ಜೀವಸಂಕುಲವನ್ನು ರಕ್ಷಿಸಲು ಸಾಧ್ಯವೇ?

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ ]

Wednesday, January 5, 2011

ಬ್ಲಾಗರ್‌ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ

ಇವರು ಪತ್ರಕರ್ತರಲ್ಲ, ಆದರೂ ಪತ್ರಕರ್ತರು. ಇವರು ಪತ್ರಿಕೋದ್ಯಮಿಗಳಲ್ಲ, ಆದರೂ ಪತ್ರಿಕೋದ್ಯಮಿಗಳು. ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು.

ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟು ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು, ಹಬ್ಬಗಳ-ವಿವಿಧ ಡೇ ಗಳ ಸಂಭ್ರಮ, ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಸ್ವಪ್ನದ ಕಿರಿಕಿರಿ... ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.

ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್‌ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು.
ಇಲ್ಲಿನ ಬರವಣಿಗೆಯೂ ಅಷ್ಟೆ. ಅದಕ್ಕೆ ಯಾವುದರ ಹಂಗೂ ಇಲ್ಲ. ಎದೆ ಬಿಚ್ಚಿ ಹೇಳಲು ಕವಿತೆ, ದೊಡ್ಡದೇನನ್ನೋ ಹೇಳಲು ಸಣ್ಣ ಕತೆ, ಆತ್ಮಕಥನದ ಧಾಟಿಯ ಹರಟೆಗಳು, ಸೀರಿಯಸ್ಸಾದ ಪ್ರಬಂಧಗಳು... ಹೇಳುವುದಕ್ಕೆ ಸಾವಿರ ವಿಧಾನ, ಓದುವವರಿಗೆ ವ್ಯವಧಾನವಿರಬೇಕು ಅಷ್ಟೆ.

ಈ ಬ್ಲಾಗರ್‌ಗಳು ಸದಾ ಕ್ರಿಯಾಶೀಲರು. ಒಂದು ಪೋಸ್ಟಿನ ಹಿಂದೆ ಮತ್ತೊಂದು ಪೋಸ್ಟು ಒದ್ದುಕೊಂಡು ಬರುತ್ತಿದ್ದಂತೆ ಪುಳಕ. ಒಂದೊಂದು ಕಮೆಂಟಿಗೂ ಸಣ್ಣ ಖುಷಿ. ಗಿರ್ರನೆ ತಿರುಗುವ ಹಿಟ್ ಕೌಂಟರುಗಳನ್ನು ನೋಡಿದರೆ ಹೆಮ್ಮೆ. ಕ್ಲಸ್ಟರ್‌ಮ್ಯಾಪುಗಳಲ್ಲಿ ಇವತ್ತು ಅದ್ಯಾವುದೋ ಅನಾಮಿಕ ದೇಶವೊಂದರಲ್ಲಿ ಅಪರಿಚಿತ ಗೆಳೆಯ ತನ್ನ ಸೈಟನ್ನು ನೋಡಿದ್ದನ್ನು ಗಮನಿಸಿ ಸಂಭ್ರಮ.

ಇವರು ಸ್ನೇಹಜೀವಿಗಳು. ಒಬ್ಬರನ್ನು ಮತ್ತೊಬ್ಬರು ಕೈ ಹಿಡಿದು ಮೇಲಕ್ಕೆ ಎತ್ತುತ್ತಾರೆ. ಒಬ್ಬರ ಬ್ಲಾಗಿನಲ್ಲಿ ಮತ್ತೊಬ್ಬರ ಲಿಂಕು. ಅವಳಿಗೆ ಇವನು ಫಾಲೋಯರ್, ಇವನಿಗೆ ಅವಳು ಫಾಲೋಯರ್. ಒಬ್ಬರನ್ನು ಒಬ್ಬರು ಹಿಂಬಾಲಿಸುತ್ತ, ಪರಸ್ಪರ ಮೈದಡವುತ್ತ ಸಾಗುತ್ತಾರೆ. ಸಣ್ಣ ಗೇಲಿ, ಕಚಗುಳಿಯಿಡುವ ಕೀಟಲೆ, ಕಾಲೆಳೆಯುವ ತುಂಟಾಟ ಎಲ್ಲಕ್ಕೂ ಇಲ್ಲಿ ತೆರೆದ ಮನಸ್ಸು.

ಇಲ್ಲೂ ಧರ್ಮರಕ್ಷಣೆಯ ಮಣಭಾರ ಹೊತ್ತವರಿದ್ದಾರೆ, ಜಾತಿ ಕೂಟ ಕಟ್ಟಿಕೊಂಡವರಿದ್ದಾರೆ. ಆದರೆ ಮನುಷ್ಯತ್ವದ ವಿಷಯಕ್ಕೆ ಬಂದರೆ ಎಲ್ಲರೂ ಬಾಗುತ್ತಾರೆ. ಸಮೂಹಕ್ಕೆ ಇರುವಷ್ಟು ಕೆಡುವ, ಕೆಡಿಸುವ ಆಕ್ರಮಣಕಾರಿ ಗುಣ ವ್ಯಕ್ತಿಗಿರುವುದಿಲ್ಲವಲ್ಲ.

ಇಲ್ಲಿ ಎಲ್ಲವೂ ಖುಲ್ಲಂಖುಲ್ಲಾ. ಸರಿಯೆಂದು ತೋರಿದ್ದನ್ನು ಮೆಚ್ಚುಗೆಯಿರುತ್ತದೆ, ತಪ್ಪು ಕಂಡರೆ ಎಗ್ಗಿಲ್ಲದ ಟೀಕೆಯಿರುತ್ತದೆ. ಒಮ್ಮೆಮ್ಮೆ ತೀರಾ ಆಕ್ರೋಶ ಬಂದಾಗ ಇವರು ಅಮೀರ್‌ಖಾನನ ಚಿತ್ರದಲ್ಲಿ ಮೊಂಬತ್ತಿ ಹಿಡಿದು ಹೊರಟವರಂತೆ ಪ್ರತಿಭಟಿಸುತ್ತಾರೆ.

ಇವರು ಬ್ಲಾಗರ್‌ಗಳು. ಜರ್ನಲಿಸ್ಟುಗಳಲ್ಲದ ಜರ್ನಲಿಸ್ಟುಗಳು. ಇವರಿಗೆ ಖಾದ್ರಿ ಶಾಮಣ್ಣನವರ ಹೆಸರಿನಲ್ಲಿ, ಟಿಎಸ್‌ಆರ್ ಹೆಸರಿನಲ್ಲಿ, ನೆಟ್ಟಕಲ್ಲಪ್ಪನವರ ಹೆಸರಲ್ಲಿ ಯಾರೂ ಅವಾರ್ಡು ಕೊಡುವುದಿಲ್ಲ. ರಿಪೋರ್ಟರ‍್ಸ್ ಗಿಲ್ಡಿನಲ್ಲಿ, ಕೆಯುಡಬ್ಲ್ಯುಜೆಯಲ್ಲಿ, ಪ್ರೆಸ್ ಕ್ಲಬ್‌ನಲ್ಲಿ ಮೆಂಬರ್‌ಶಿಪ್ ಕೊಡುವುದಿಲ್ಲ. ಇವರಿಗೆ ಸಂಬಳವಿಲ್ಲ, ಸಾರಿಗೆ ವೆಚ್ಚ ಯಾರೂ ಕೊಡುವುದಿಲ್ಲ, ತಾವು ಬರೆದದ್ದನ್ನು ಓದಿದ್ದಕ್ಕೆ ಯಾರಿಂದಲೂ ಚಂದಾ ಪಡೆಯುವುದಿಲ್ಲ, ಇನ್ನು ಪಿಎಫ್ಫು, ಪಿಂಚಣಿ ಇಲ್ಲವೇ ಇಲ್ಲ.

ಕೆಲವರು ಬ್ಲಾಗರ್‌ಗಳನ್ನು ಸುಖಾಸುಮ್ಮನೆ ಬೈಯುತ್ತಾರೆ. ಕೋಣೆಯೊಳಗೆ ಬಾಗಿಲು ಮುಚ್ಚಿಕೊಂಡು ದುರ್ವಾಸನೆ ಬಿಟ್ಟು ಅದನ್ನು ಆಘ್ರಾಣಿಸುವವರು ಎಂದು ಇವರನ್ನು ಜರಿದವರೂ ಉಂಟು. ಆದರೆ ಪತ್ರಿಕೋದ್ಯಮದ ಹುಲಿ ಸವಾರಿಯನ್ನು ಬಿಟ್ಟ ನಂತರ ದೊಡ್ಡದೊಡ್ಡ ಪತ್ರಕರ್ತರಿಗೆ ಆಶ್ರಯ ಕೊಟ್ಟಿದ್ದು ಇದೇ ಅಂತರ್ಜಾಲ ತಾಣ. ಹುಲಿ ಸವಾರಿ ಮಾಡಿದವರಿಗೆ ಕುರಿಯನ್ನಾದರೂ ಕೊಡುವ ಶಕ್ತಿ ಈ ಜಾಲಕ್ಕಿದೆ.

ಪತ್ರಕರ್ತರಲ್ಲದಿದ್ದರೂ ಇವರು ಸೊ ಕಾಲ್ಡ್ ಮೇನ್‌ಸ್ಟ್ರೀಮಿನ ಪತ್ರಕರ್ತರಿಗೇ ಹೆಚ್ಚು ಅಚ್ಚುಮೆಚ್ಚು. ಸಂಪಾದಕೀಯದಂಥ ಬ್ಲಾಗುಗಳನ್ನು ಪತ್ರಕರ್ತರು ತಮ್ಮ ತಮ್ಮ ಕಚೇರಿಗಳಲ್ಲಿ ಕದ್ದುಮುಚ್ಚಿ ಬ್ಲೂಫಿಲಂ ನೋಡಿದಂತೆ ನೋಡುವುದುಂಟು.

ನಿಜ, ಇವರು ಕ್ರಾಂತಿಯನ್ನೇನು ಮಾಡಲಾರರು. ತಮ್ಮ ಇತಿಮಿತಿಯಲ್ಲಿ ಜನಾಭಿಪ್ರಾಯ ರೂಪಿಸಬಲ್ಲರು. ತಪ್ಪುಗಳನ್ನು ಎತ್ತಿತೋರಿಸಬಲ್ಲರು. ಹೊಸ ಕನಸುಗಳನ್ನು ಸೃಷ್ಟಿಸಬಲ್ಲರು.

ಬ್ಲಾಗರ್‌ಗಳೆಂಬ ಈ ಪತ್ರಕರ್ತರಿಗೆ ಜಯವಾಗಲಿ. ಬ್ಲಾಗ್ ಲೋಕ ಚಿರಾಯುವಾಗಲಿ.

(ಇಷ್ಟವಾದರೆ ಈ ಪೋಸ್ಟನ್ನು ಬ್ಲಾಗರ್‌ಗಳು ತಮ್ಮ ತಮ್ಮ ಬ್ಲಾಗ್‌ಗಳಲ್ಲಿ ಬಳಸಿಕೊಳ್ಳಲು ಅನುಮತಿಯುಂಟು!)