Showing posts with label ಪ್ರವಾಸ-ಚಾರಣ. Show all posts
Showing posts with label ಪ್ರವಾಸ-ಚಾರಣ. Show all posts

Saturday, October 13, 2018

ಕೊಚ್ಚಿ ಬಿಯನಾಲೆ; ಕಲೆಯ ಬಲೆ.












 ಅಮೂರ್ತತೆಯನ್ನು ಮೂರ್ತರೂಪಕ್ಕೆ ತರುವುದು ಹೇಗೆ?  ಮೂರ್ತವಾಗಿರುವುದನ್ನು ವಿವಿಧ ದ್ರುಷಿಕೋನಗಳಿಂದ ಗ್ರಹಿಸಿ ಅದಕ್ಕೆ ಮತ್ತಷ್ಟು ಹೊಳಪು ತುಂಬಿ ಇನ್ನೊಂದು ಮಾಧ್ಯಮಕ್ಕೆ ತರುವುದು ಹೇಗೆ? ಇದು ಕಲಾವಿದನ ಸವಾಲು.

 ಕಲಾಕ್ರುತಿಯನ್ನು ನೋಡುವ. ಅಸ್ವಾದಿಸುವ ಬಗೆ ಹೇಗೆ?  ಕಲಾಕ್ರುತಿಯ ಮುಂದೆ ಕೆಲವು ಜನರು ಯಾಕೆ ಮೌನವಾಗಿ ಘಂಟೆಗಟ್ಟಲೆ ನಿಂತುಕೊಳ್ಳುತ್ತಾರೆ?  ಇದು ಕಲಾವಿದೆಯಲ್ಲದ. ಕಲಾವಿಮರ್ಶಕಳೂ ಅಲ್ಲದ ನನ್ನನ್ನು  ಕಾಡುವ ಕೆಲವು ಪ್ರಶ್ನೆಗಳು.

  .ಹಾಗಿದ್ದರೂ ನಾನಿರುವ ಬೆಂಗಳೂರಿನಿಂದ 528 ಕಿ.ಮೀ ದೂರದಲ್ಲಿರುವ ಕೇರಳದ ಪೋರ್ಟ್ ಕೊಚ್ಚಿಯಲ್ಲಿ ನಡೆಯುತ್ತಿರುವ  ಕೊಚ್ಚಿ ಬಿಯಾನಾಲೆ’ [Kochi-muziris Biennale] ಕಳೆದ ತಿಂಗಳು ಹೋಗಿದ್ದೆ.. ಹಾಗೆ ಹೋಗಲು ಬಲವಾದ ಇನ್ನೊಂದು ಕಾರಣವೂ ಇತ್ತು.ಅದು ಐತಿಹಾಸಿಕ ಹಿನ್ನೆಲೆಯಿರುವ ಪೋರ್ಟ್ ಕೊಚ್ಚಿಯೆಂ ಪುಟ್ಟ ಬಂದರಿನೆಡೆಗಿರುವ ಸಹಜ ಕುತೂಹಲ. ಪೋರ್ಚಿಗೀಸರು, ಡಚ್ಚರು ಮತ್ತು ಬ್ರಿಟೀಶರು ಇಲ್ಲಿ ಕಾಲಾನುಕ್ರಮದಲ್ಲಿ  ವಸಹಾತುಗಳನ್ನು ನಿರ್ಮಿಸಿಕೊಂಡಿದ್ದರು. ಇಲ್ಲಿಂದಲೇ ಸಾಂಬಾರು ಪದಾರ್ಥಗಳು ಸೇರಿದಂತೆ ಭಾರತದ ಇನ್ನಿತರ ವಸ್ತುಗಳು ಮದ್ಯಪ್ರಾಚ್ಯ ದೇಶಗಳಿಗೆ ರವಾನೆಯಾಗುತ್ತಿತ್ತು. ಹಾಗಾಗಿ ಇಂದಿಗೂ  ಇಲ್ಲಿಯ ವಾಸ್ತುಶಿಲ್ಪಗಳಲ್ಲಿ ಆ ದೇಶಗಳ ಪ್ರಭಾವವನ್ನು ಕಾಣಬಹುದು. ಸುಂದರವಾದ ಕಡಲ ಕಿನಾರೆಯನ್ನು ಹೊಂದಿರುವ ಈ ಪುಟ್ಟ ದ್ವೀಪದಲ್ಲಿ ನಮ್ಮ ಗೋಕರ್ಣದ  ಹಾಗೆ ಸದಾ ವಿದೇಶಿಯರೇ ಅಡ್ಡಾಡುತ್ತಿರುತ್ತಾರೆ.

 

  ಬಿಯನಾಲೆ ಎಂಬುದು ಮೂಲತ್ ಇಟಾಲಿಯನ್ ಪದ. ಅದರ ಅರ್ಥಎರಡು ವರ್ಷಗಳಿಗೊಮ್ಮೆ ನಡೆಯುವ ಉತ್ಸವ, ಈ ಉತ್ಸವದ ಕನಸು ಕಂಡು ಕಾರ್ಯಗತಗೊಳಿಸಿದವರಲ್ಲಿ ಮೂವರ ಹೆಸರು ಪ್ರಮುಖವಾದುದು. ಅವರೇ ಈಗ ಕೊಚ್ಚಿ ಬಿಯನಾಲೆಯ ಪ್ರೆಸಿಡೆಂಟ್ ಆಗಿರುವ ಬೋಸ್ ಕ್ರುಷ್ಣಮಾಚಾರಿ, ಪ್ರೋಗ್ರಾಮ್ಸ್ ಡೈರೆಕ್ಟರ್ ಆಗಿರುವ ರಿಯಾಸ್ ಕೋಮ್ ಮತ್ತು ಎಜುಕೇಶನ್ ಕನ್ಸ್ ಲ್ಟೆಂಟ್ ಆಗಿರುವ ಮೀನಾ ವಾರಿ. ಇವರ ಜೊತೆ ಹತ್ತಾರು ಮಂದಿ ಕ್ಯೂರೇಟರ್ ಗಳು, ಪ್ರೋಜೆಕ್ಟ್ ಅಡೈಸರ್ ಗಳು ಬಿಯನಾಲೆಯ ಯಶಸ್ವಿಗಾಗಿ ಹಗಲಿರುಳು ದುಡಿಯುತ್ತಿರುತ್ತಾರೆ. ಈ ವರ್ಷದ ಬಿಯನಾಲೆಯ ಕ್ಯುರೇಟರ್ ಮೂಲತಃ ಕನ್ನಡಿಗರಾದ ಮುಂಬೈನಿವಾಸಿಯಾಗಿರುವ ಆರ್ಟಿಸ್ಟ್ ಸುದರ್ಶನ ಶೆಟ್ಟಿ . ಪ್ರಪಂಚಾದ್ಯಾಂತದ ಕಲಾವಿದರನ್ನೆಲ್ಲಾ ಸಂಪರ್ಕಿಸಿ ಕೊಚ್ಚಿಗೆ ಬರಮಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು. ಬಿಯನಾಲೆಯ ಹಿಂದೆ ವರ್ಷಗಳ ತಯಾರಿಯಿದೆ. ಸಾವಿರಾರು ಜನಗಳ ಪರಿಶ್ರಮವಿದೆ. ಇದೇ ಮಾದರಿಯ ಬಿಯನಾಲೆ ವೆನಿಸ್. ಬರ್ಲಿನ್. ಶಾಂಘೈಗಳಲ್ಲಿ ನಡೆಯುತ್ತಿದೆ.

 ಮುಝುರಿಸ್ ಅಂದರೆ ಕೊಚ್ಚಿಯಲ್ಲಿದ್ದ ಪುರಾತನ ಕೋಟೆ. ಇದು ಕೊಚ್ಚಿಯಲ್ಲಿ ನಡೆಯುತ್ತಿರುವುದರಿಂದ ಕೊಚ್ಚಿ ಮುಝುರೀಸ್ ಬಿಯನಾಲೆ. ಅಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಸ್ಥಳೀಯತೆಯನ್ನು ಒಳಗೊಂಡ ಸಮಕಾಲೀನ ಅಂತರಾಷ್ಟ್ರೀಯ ಮಟ್ಟದ ಕಲಾ ಉತ್ಸವ. ಇಲ್ಲಿಯ ವಿಶೇಶತೆಯೇನೆಂದರೆ ಅಲ್ಲಿ ಯಾವ್ಯಾವ ಕಲಾಪ್ರಕಾರಗಳ ಪ್ರದರ್ಶ ನಡೆಯುತ್ತದೆಯೋ ಅದೆಲ್ಲದರ ರೂವಾರಿಗಳಾದ ಕಲಾವಿದರು ಸ್ವತಃ ಉತ್ಸವದಲ್ಲಿ ಭಾಗಿಯಾಗುತ್ತಾರೆ ಮಾತ್ರವಲ್ಲ. ಕಲಾಪ್ರೇಮಿಗಳ ಜೊತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಾರೆ; ಸಂವಾದದಲ್ಲಿ ಬಾಗಿಯಾಗುತ್ತಾರೆ. ಕೊಚ್ಚಿ ಬಿಯನಾಲೆಯ ಸ್ಥಾಪಕರಲ್ಲಿ ಒಬ್ಬರಾದ ರಿಯಾಸ್ ಕೊಮು [Riyas Komu] ಇದನ್ನು ಜನರ ಬಿಯನಾಲೆಎಂದು ಕರೆಯುತ್ತಾರೆ,

ಕೊಚ್ಚಿ ಬಿಯನಾಲೆ ಮೊದಲ ಬಾರಿಗೆ ೨೦೧೨ರಲ್ಲಿ ಆರಂಭವಾಗಿತ್ತು. ಈಗ ನಡೆಯುತ್ತಿರುವುದು ಮೂರನೆಯ ಬಿಯನಾಲೆ. ದಿಸೆಂಬರ್ ೧೨ರಂದು ಆರಂಭವಾದ ಬಿಯನಾಲೆ ೧೦೮ ದಿನಗಳ ಕಾಲ ನಡೆದು ಮಾರ್ಚ್ ತಿಂಗಳಾಂತ್ಯಕ್ಕೆ ಸಂಪನ್ನಗೊಳ್ಳುತ್ತದೆ. ಈ ವರ್ಷ ೩೧ ದೇಶಗಳ ೯೭ ಆರ್ಟಿಸ್ಟ್ ಗಳು ಭಾಗವಹಿಸುತ್ತಿದ್ದಾರೆ. ಏಕಕಾಲದಲ್ಲಿ ಹತ್ತು ಜಾಗಗಳಲ್ಲಿ ಕಲಾಪ್ರದರ್ಶನ ನಡೆಯುತ್ತಿದೆ. ಹವ್ಯಾಸಿ ಮತ್ತು ವ್ರುತ್ತಿಪರ  ಕಲಾವಿದರ ಜೊತೆ ವಿದ್ಯಾರ್ಥಿ ಬಿಯನಾಲೆಯೂ ನಡೆಯುತ್ತಿದೆ. ರಾಷ್ಟ್ರದಾದ್ಯಂತದ ೫೫ ಕಲಾಶಾಲೆಗಳ ಕಿರಿಯ ಆರ್ಟಿಸ್ಟ್ ಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು ಏಳು ಜಾಗಗಳಲ್ಲಿ ವಿದ್ಯಾರ್ಥಿ ಬಿಯನಾಲೆ ನಡೆಯುತ್ತಿದೆ.. ಮೊಹಮ್ಮದಾಲಿ ವೇರ್ ಹೌಸ್ ಮತ್ತು ಮಟನ್ಚೇರಿ ಟೆಂಪಲ್ ನಲ್ಲಿ ನಡೆಯುತ್ತಿರುವ ಪ್ರದರ್ಶನಗಳು ನಿಜಕ್ಕೂ ವಿದ್ಯಾರ್ಥಿಗಳಲ್ಲಿರುವ ಕಲ್ಪನಾಶಕ್ತಿ ಮತ್ತು ಪ್ರಖರ ಅಲೋಚನೆಗಳ ಕೈಗನ್ನಡಿಯಂತಿದ್ದವು.

ಈ ವರ್ಷದ ಬಿಯನಾಲೆಯ ಥೀಮ್ forming in the pupil of the eye’  ಇದರ ಯಥಾವತ್ ಅನುವಾದ ಮಾಡುವುದಾದರೆ ಕಣ್ಣಿನ ಪಾಪೆಯೊಳಗಿನ ರೂಪಎಂದಾಗುತ್ತದೆ. ಆದರೆ ಇದು ಮಹಾಭಾರತದ ಸಂಜಯನ ನೋಟದಿಂದ ಸ್ಪೂರ್ತಿಯನ್ನು ಪಡೆದಿದೆ.
.ಕಲಾಪ್ರದರ್ಶನವೆಂದರೆ ನಮಗೆ ಅದರಲ್ಲೂ ಬೆಂಗಳೂರಿಗರಿಗೆ ಸಾಮಾನ್ಯವಾಗಿ ನೆನಪಿಗೆ ಬರುವುದು ವೆಂಕಟಪ್ಪ ಆರ್ಟ್ ಗ್ಯಾಲರಿ, ಮಾಡರ್ನ್ ಆರ್ಟ್ ಗ್ಯಾಲರಿ ಮತ್ತು ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಗೊಳ್ಳುವ ವರ್ಣಚಿತ್ರಗಳು. ಪೋಟೋಗಳು ಇಲ್ಲವೇ ಶಿಲ್ಪಕಲಾಕ್ರುತಿಗಳು ನೆನಪಿಗೆ ಬರುತ್ತವೆ. ನಾನು ಪೋರ್ಟ್ ಕೊಚ್ಚಿಗೆ ಹೋಗುವಾಗ ಅದೇ ನನ್ನ ತಲೆಯಲ್ಲಿತ್ತು. ಆದರೆ ಅಲ್ಲಿ ಹೋಗಿ ನೋಡಿದಾಗ ಅದೆಲ್ಲಾ ತಲೆಕೆಳಗಾಯಿತು. ಅಲ್ಲಿನ ಕಲಾಪ್ರದರ್ಶನ ನನ್ನ ಕಲ್ಪನೆಯನ್ನು ಮೀರಿದ ವ್ಯಾಪ್ತಿಯಲ್ಲಿ ಹರಡಿಕೊಂಡಿತ್ತು,

ಅಲ್ಲೊಂದು ಕಲಾಪ್ರದರ್ಶನವಿತ್ತು. ಅದರ ವಿವರಣೆಯನ್ನು ನೀಡಿದರೆ ಕೊಚ್ಚಿ ಬಿಯನಾಲೆಯೆಂಬುದು ಉಳಿದೆಲ್ಲಾ ಕಲಾಪ್ರದರ್ಶನಗಳಿಗಿಂತ ಹೇಗೆ ಭಿನ್ನ ಎಂಬುದು ನಮಗೆ ಮನದಟ್ಟಾಗುತ್ತದೆ. ಅಲ್ಲದೆ ಇದು ಬಿಯನಾಲೆಯ ಬಹುಮುಖ್ಯ ಆಕರ್ಷಣೆಯಯೂ ಆಗಿತ್ತು. ಅದರ ಹೆಸರು ನೋವಿನ ಸಮುದ್ರ’ [ The Sea of Pain]  ರಹುಲ್ ಝರಿಟ್ [Raul Zurita] ಎಂಬ ಚಿಲಿ ದೇಶದ ಕವಿಯ ಆಲೋಚನೆಗಳು [Thoughts ] ಇಲ್ಲಿ ಮೂರ್ತ ಸ್ವರೂಪವನ್ನು ಕಂಡಿದ್ದವು. ಆ ಕವನದ ಹುಟ್ಟಿಗೆ ಒಂದು ಹಿನ್ನೆಲೆಯಿತ್ತು;
ಕಳೆದ ಸೆಪ್ಟಂಬರ್ ನಲ್ಲಿ ಟರ್ಕಿಯ ಬೋರ್ಡಮ್ ಬೀಚಿನಲ್ಲಿ ಸಿರಿಯಾದ ಪುಟ್ಟ ಕಂದ ಅಯ್ಲಾನ್ ಕುರ್ದಿಯ ಶವ ಸಿಕ್ಕಿತ್ತು. ನೀಲಿ ಚಡ್ಡಿ ಕೆಂಪು ಟೀ ಶರ್ಟ್ ಧರಿಸಿ ತಲೆಕೆಳಗಾಗಿ ಬಿದ್ದ ಆ ಎಳೆಬಾಲಕನ ಶವ ಪ್ರಪಂಚದಾದ್ಯಂತ ಸುದ್ದಿ ಮಾಡಿತ್ತು; ರೂಪಕವಾಗಿ ಬೆಳೆಯಿತು. ಆದರೆ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಅವನ ತಾಯಿ ಮತ್ತು ಸಹೋದರ ಗಾಲಿಪ್ ಕುರ್ದಿಯ ಶವ ಮಾತ್ರ ಯಾರ ಗಮನವನ್ನೂ ಸೆಳೆದಿರಲಿಲ್ಲ.  ರಹುಲ್ ಝುರಿಟ್ ನ ಮನವನ್ನು ಇದು ಕಲಕಿತು, ಅದು ಕವನವಾಗಿ ಹೊಮ್ಮಿತು. ಕೊಚ್ಚಿ ಬಿಯನಾಲೆಯಲ್ಲಿ ಅದು ಕಲಾರೂವನ್ನು ತಾಳಿತು. ಅದೇ ಸಿ ಆಪ್ ಪೈನ್’ ” ಸುಮಾರು ಎಪ್ಪತ್ತು ಅಡಿ ಉದ್ದ ಮೂವತ್ತು ಅಡಿ ಅಗಲದ ಮೂರೂ ಕಡೆ ಗೋಡೆಗಳಿಂದಾವ್ರುತವಾದ ಕೊಳವೊಂದನ್ನು ನಿರ್ಮಿಸಲಾಗಿತ್ತು.. ಕಲಾಪ್ರೇಮಿಗಳು ಅಲ್ಲಿ ಬಂದು ಚಪ್ಪಲಿ, ಶುಗಳನ್ನು ಕಳಚಿಟ್ಟು, ತೊಟ್ಟ ಬಟ್ಟೆಯನ್ನು ಮೊಳಕಾಲು ತನಕ ಮಡಚಿ ನೀರಿಗಿಳಿಯುತ್ತಿದ್ದಂತೆಯೇ. ಸಿ ಅಪ್ ಪೈನ್ ಕವನದ ಸಾಲುಗಳನ್ನೊಳಗೊಂಡ ವಿಷಾಧ ಬೆರೆತ ಆಡಿಯೋದ ಅನುರಣನ. ಎರಡೂ ಬದಿಯ ಗೋಡೆಯ ಮೇಲೆಲ್ಲಾ ಕವನದ ಸಾಲುಗಳು. ಮುಂದೆ ಮುಂದೆ ಸಾಗಿದಂತೆಲ್ಲಾ ಎದುರಿನ ಗೋಡೆಯ ಮೇಲೆ ಇಡೀ ಕವನ ಸ್ಕ್ರೋಲಿಂಗ್ ಆಗುತ್ತಿರುತ್ತದೆ.’ ” ನಾನು ಅವನ ತಂದೆಯಲ್ಲ. ಆದರೆ ಅವನು ನನ್ನ ಮಗ ಎಂದು ಅಂತ್ಯವಾಗುವ ಕವನ ,ವಿಸ್ತಾರತೆಯನ್ನು ಪಡೆದುಕೊಳ್ಳುತ್ತಾ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತದೆ..ಅದನ್ನು ಓದಿ ಹಿಂದಿರುಗಿ ನೀರಿನಲ್ಲಿ ಕಾಲೆಳೆಯುತ್ತಾ ಬರುವಾಗ ನಮ್ಮಳೊಗೂ ರುದ್ರ ಮೌನ ಮೆಲ್ಲನೆ ಪಸರಿಸಿಕೊಳ್ಳುತ್ತದೆ.   ಕವನವನ್ನು ಅನುಭವಿಸುವುದು ಅಂದರೆ ಇದೇ ಏನು? ಅದು ಕಣ್ಣೀರಿನ ಕೊಳವೇ? ಅದು ಸಮುದ್ರದ ನೋವೇ? ನೋವಿನ ಸಮುದ್ರವೇ? ಅಥವಾ ಮನುಕುಲದ ನೋವೇ?   ಇದೇ ಕವಿ ಹೇಳಿದ ಮಾತೊಂದು ನೆನಪಾಗುತ್ತದೆ..’If poetry ends, the dremes is dead’

೩೧ ವಿಡಿಯೋ ಕ್ಯಾಮರಾ, ೩೧ ಪ್ರಾಜೆಕ್ಟರ್ ಗಳನ್ನು ಬಳಸಿ ಗ್ಯಾರಿ ಹಿಲ್ ನಿರ್ಮಿಸಿದ ಡ್ರೀಮ್ ಸ್ಟಾಪ್ಎಂಬ ವಿಡಿಯೋ ಆರ್ಟ್ ಮತ್ತು ಅವರದೇ ತುಂಡಾದ ಒಡೆದ ಗಾಜಿನ ಚೂರುಗಳನ್ನು ಜೋಡಿಸಿ ಮಾಡಿದ ಆಕರ್ಷಕ ಸಂಯೋಜನೆಯೂ ಬಿಯನಾಲೆಯ ಮತ್ತೊಂದು ಆಕರ್ಷಣೆ.
ಸಮಕಾಲೀನ ಕಲೆಯ ವಿಶೇಶತೆಯೇ ಅದು ಅದು ಕಲಾಕಾರನ ಭಾವನೆ, ವಿಚಾರ [thoughts] , ಕಾಳಜಿ ಮತ್ತು ಐಡಿಯಾಗಳನ್ನು ಪ್ರಸ್ತುತ ವಿದ್ಯಾಮಾನದೊಡನೆ ಸಂಯೋಜಿಸಿ ಅದಕ್ಕೊಂದು ಮೂರ್ತರೂಪವನ್ನು ಕೊಟ್ಟು ನೋಡುಗರನ್ನೂ ತನ್ನೊಡನೆ ಅಂತರ್ಗತಮಾಡಿಕೊಳ್ಳುತ್ತದ. ಅಲ್ಲೊಂದು ರೂಪಾಂತರದ ಕ್ರಿಯೆ ನಡೆಯುತ್ತಿರುತ್ತದೆ.

ಗ್ಯಾರಿ ಹಿಲ್, ಶರ್ಮಿಷ್ಟ ಮೊಹಾಂತೀ...ಮುಂತಾದವರ ವಿಡಿಯೋ ಆರ್ಟ್ ಗಳನ್ನು ನೋಡುವಾಗ ನಮ್ಮ ಯೋಚನೆಗಳನ್ನು ಹೀಗೂ ದಾಟಿಸಬಹುದಲ್ಲಾ ಎಂದು ಅಚ್ಚರಿಯಾಗುತ್ತದೆ. ಯಾವ ಪ್ರದರ್ಶನವನ್ನೇ ನೋಡಲಿ ಅಲ್ಲೊಂದು ಹೊಸತನದ ಸಂವಹನ ಸಾಧ್ಯತೆಯಿತ್ತು..

 ಬಿಯನಾಲೆಯಲ್ಲಿ ಸಂಗೀತ ಕಚೇರಿಯೂ ಸೇರಿದಂತೆ ವಿವಿಧ ಪ್ರಕಾರದ ಪ್ರದರ್ಶನ ಕಲೆಗಳಿರುತ್ತವೆ. ಪ್ರಾತ್ಯಕ್ಷಿಕೆಯಿರುತ್ತದೆ. ಸಿನೇಮಾ, ಡಾಕ್ಯುಮೆಂಟರಿ ಶೋಗಳ ಪ್ರದರ್ಶನವಿರುತ್ತದೆ. ಅಸಕ್ತರಿಗೆ ಪಿಲ್ಮ್ ಮೇಕಿಂಗ್ .ನ್ರುತ್ಯ ಸೇರಿದಂತೆ ಲಲಿತಕಲೆಗಳಿಗೆ ಸಂಬಂಧಿಸಿದಂತೆ ಎರಡ್ಮೂರು ದಿವಸಗಳ ಕಾರ್ಯಾಗಾರವಿರುತ್ತಿತ್ತು .ಈ ಕಾರ್ಯಾಗಾರಗಳ ವಿಶೇಶತೆ ಏನೆಂದರೆ ದೇಶ-ವಿದೇಶಗಳ ಕಲಾವಿದರು ಮತ್ತು ತಂತ್ರಜ್ನರ ಜೊತೆ ಬೆರೆಯುವ, ಸಂವಾದಿಸುವ ಅಪೂರ್ವ ಅವಕಾಶ ಸಿಗುತ್ತಿತ್ತು.. ನಾಟಕ .ಸ್ಟೋರಿ ಟೆಲ್ಲಿಂಗ್. ಜಾನಪದ ನ್ರುತ್ಯ. ಕವ್ವಾಲಿ, ಕರಕುಶಲ ವಸ್ತುಗಳ ಪ್ರದರ್ಶನವಿತ್ತು. ವಿದೇಶಿಯರಿಗೆ ಸ್ಥಳೀಯ ಕಲೆ, ಸಂಸ್ಕ್ರುತಿಯನ್ನು ತಿಳಿದುಕೊಳ್ಳುವ ವಿಫುಲ ಅವಕಾಶಗಳನ್ನು ಬಿಯನಾಲೆ ಆಯೋಜಿಸಿದೆ.
ಸಮಕಾಲೀನ ವಿಷ್ಯಗಳ ಬಗ್ಗೆ ಚರ್ಚೆ ಮತ್ತು ಸೆಮಿನಾರುಗಳಿರುತ್ತವೆ. ಜನವರಿ ೨೦ರಂದು ಕಮ್ಯೂನಲಿಸಂ, ಕ್ಯಾಸ್ಟ್ ಸೆಕ್ಯೂಲರಿಸಂ ನ ಚರ್ಚೆಯಲ್ಲಿ ಸಿದ್ದಾರ್ಥ ವರದರಾಜನ್, ಜಿಗ್ನೇಶ್ ಮವಾನಿ ಮತ್ತು ರಾಕೇಶ್ ಶರ್ಮ ಭಾಗವಹಿಸಿದ್ದರು. ಅಂದೇ ಡೈಲಾಗ್ ಅನ್ ಪೀಸ್; ಅಂಡರ್ಸ್ಟ್ಯಾಂಡಿಂಗ್ ವಯ್ಲೆನ್ಸ್ಸಿನೇಮಾ ಪ್ರದರ್ಶನವೂ ಇತ್ತು.. ಸೆಲ್ಪ್ ಇಮೇಜಸ್ ಆಪ್ ಕೇರಳ ಮೊಡರ್ನಿಟಿಚರ್ಚೆಯಲ್ಲಿ ಕೇರಳದ ಚಿಂತಕರು ಬರಹಗಾರರು ಭಾಗವಹಿಸಿದ್ದರು. ಸಿನೇಮಾ ನಿರ್ದೇಶಕರಾದ ರಾಕೇಶ್ ಶರ್ಮ, ಅಡೂರು ಗೋಪಾಲಕ್ರುಷ್ಣ, ಪ್ರಿಯದರ್ಶನ್, ರಾಜಕೀಯ ವಿಶ್ಲೇಶಕರಾದ್ ಮಾಧವಪ್ರಸಾದ್, ಬರಹಗಾರರದ ರಾಮಚಂದ್ರ ಗುಹಾ ಮಲ್ಟಿ ಮಿಡಿಯಾ ತಜ್ನರಾದ ಖಲೀದ್ ಸಬ್ಸಾಬಿ, ಸುದೀರ್ ಕಕ್ಕರ್ ಸೇರಿದಂತೆ ದೇಶವಿದೇಶಗಳ ಚಿತ್ರನಿರ್ದೇಶಕರು, ಸಾಹಿತಿಗಳು, ಕಲಾವಿದರು. ಸಂಗೀತಗಾರರು ವಿಡಿಯೋ ಆರ್ಟಿಸ್ಟ್ ಗಳು  ಇಲ್ಲಿ ಬಂದು ಚರ್ಚೆ-ಸಂವಾದಗಳಲ್ಲಿ ಭಗವಹಿಸಿದ್ದಾರೆ. ನಾಡಿದ್ದು ಮಾರ್ಚ್ ೨೫ರಂದು ಇತಿಹಾಸ ತಜ್ನ ಮತ್ತು ಟ್ರಾನ್ಸ್ಲೇಟರ್ ಆಗಿರುವ ದಿಲಿಪ್ ಮೆನನ್ ಏರುತ್ತಿರುವ ಭೂ ಉಷ್ಣತೆಯ ಬಗ್ಗೆ ಮಾತಾಡಲಿದ್ದಾರೆ..

ಕಳೆದ ಮಾರ್ಚ್ ೨ರಂದು ರಂದು ನಮ್ಮ  ರಾಷ್ಟ್ರಪತಿಗಳಾದ ಪ್ರಣವ ಮುಖರ್ಜಿಯವರು ಇಲ್ಲಿಗೆ ಆಗಮಿಸಿ ವಿ ನೀಡ್ ದಿ ಆರ್ಟ್ಸ್ಎಂಬ ಸೆಮಿನಾರನ್ನು ಉದ್ಘಾಟಿಸಿ ಇಂಪಾರ್ಟೆನ್ಸ್ ಅಪ್ ಸಸ್ಟೈನೇಬಲ್ ಕಲ್ಚರ್-ಬ್ಯುಲ್ಡಿಂಗ್ ’’ ಬಗ್ಗೆ ಉಪನ್ಯಾಸ ನೀಡಿ. ಕೊಚ್ಚಿ ಬಿಯನಾಲೆ ಎಂಬುದು ನಮ್ಮ ದೇಶದ ಕಲ್ಚರಲ್ ಕ್ಯಾಲೆಂಡರನ ಭಾಗವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮೂರು ದಿನಗಳ ಕಾಲ ನಾನು ಪೋರ್ಟ್ ಕೊಚ್ಚಿಯಲೆಲ್ಲಾ ಅಡ್ಡಾಡಿದೆ.  ಅಡ್ಡಾಡಿದೆ ಎಂದರೆ ಕಾಲ್ನಡಿಗೆಯಲ್ಲಿ ಇದನ್ನೆಲ್ಲಾ ಸುತ್ತಾಡಲು ಸಾಧ್ಯವಿಲ್ಲ. ಯಾಕೆಂದರೆ,,ಇಡೀ ಪೋರ್ಟ್ ಕೊಚ್ಚಿಯೇ ಬಿಯನಾಲೆಯಾಗಿತ್ತು. ನಾಲ್ಕು ಚದರ ಕಿಮೀ ವಿಸ್ತಾರದಲ್ಲಿ ಹರಡಿಕೊಂಡಿರುವ ಕಲಾಪ್ರದರ್ಶನದಲ್ಲಿ ಹೆಚ್ಚಿನ ಕಲಾಪ್ರದರ್ಶನವಿದ್ದುದ್ದು ಆಸ್ಪಿಯನ್ ಹಾಲ್ ಮತ್ತು ಪೆಪ್ಪರ್ ಹೌಸ್ ನಲ್ಲಿ, .ಆಸ್ಪಿಯನ್ ಹಾಲ್ ನಿಂದ ಹತ್ತು ಹೆಜ್ಜೆ ಎಡಕ್ಕೆ ನಡೆದರೆ ಪೆಪ್ಪರ್ ಹೌಸ್ ಸಿಗುತ್ತಿತ್ತು. ಅಲ್ಲಿ ಕ್ಯಾಂಟೀನ್ ಕೂಡಾ ಇದೆ. ಮುಖ್ಯವಾಗಿ ವಿದೇಶಿಯರನ್ನು ಗಮನದಲ್ಲಿರಿಸಿಕೊಂಡ ಆಹಾರ ಮತ್ತು ಪಾನೀಯಗಳು ಅಲ್ಲಿ ದೊರೆಯುತ್ತಿದ್ದವು. ಆಸ್ಪಿಯನ್ ಹಾಲ್ ನಿಂದ ಬಲಕ್ಕೆ ನೇರವಾಗಿ ನಡೆದು ಸ್ವಲ್ಪ ದೂರ ನಡೆದರೆ ಗೆಬ್ರಲ್ ಯಾರ್ಡ್, ಇಲೊಂದು ಥೆಯೇಟರ್ ಇದೆ. ನಾಟಕ, ಸಂಗೀತ ಕಚೇರಿಗಳು ಸೇರಿದಂತೆ ಕೆಲವು ಪ್ರದರ್ಶನ ಕಲೆಗಳು ಇಲ್ಲಿ ನಡೆಯುತ್ತವೆ..ಅಲ್ಲಿಂದ ಬಲಕ್ಕೆ ಹೊರಳಿದರೆ ಕಾಶಿ ಆರ್ಟ್ ಗ್ಯಾಲರಿ ಸಿಗುತ್ತದೆ.  ವಿಶಾಲಾರ್ಥದಲ್ಲಿ ಹೇಳಬೇಕೆಂದರೆ ಅದೊಂದು ರೆಸ್ಟೊರೆಂಟ್. ಆದರೆ ಕಲಾಕ್ರುತಿಯಂತೆ ಭಾಸವಾಗುವ ಒಂದು ಕಲಾಪರಿಸರ ಅಲ್ಲಿದೆ. ನಿಮಗೆ ಬೇಕಾದ ಆಹಾರ -ಪಾನೀಯಗಳನ್ನು ಆರ್ಡರ್ ಮಾಡಿ ಅಲ್ಲಿಯ ಮೆಲುಸಂಗೀತಕ್ಕೆ ಮೈಮನಸುಗಳು ಹಗುರವಾಗುವ ಅನುಭವ ಪಡೆಯಬಹುದು...ಉಳಿದ ಜಾಗಗಳನ್ನು ನೋಡಲು ನೀವು ಆಟೋ, ಬಸ್ಸು ಟ್ಯಾಕ್ಸಿಗಳನ್ನು ಅವಲಂಬಿಸಲೇ ಬೇಕಾಗುತ್ತದೆ. ವಿದೇಶಿ ಪ್ರವಾಸಿಗರ ದಟ್ಟಣೆ ಹೆಚ್ಚಿರುವ ಕಾರಣದಿಂದಲೇ ಇರಬಹುದು ಇಲ್ಲಿ ಬಾಡಿಗೆ ದ್ವಿಚಕ್ರವಾಹನಗಳು ದೊರೆಯುತ್ತವೆ. ದಿನಕ್ಕೆ ಇನ್ನುರೈವತ್ತು ರೂಪಾಯಿ, ಆದರೂ ಎಲ್ಲವನ್ನೂ ನೋಡಲು ಕನಿಷ್ಟ ಎರಡು ದಿನಗಳಾದರೂ ಬೇಕು. ಊಟ ವಸತಿಯ ವಿಚಾರಕ್ಕೆ ಬಂದರೆ ಪಕ್ಕದ ಎರ್ನಾಕುಲಂಗಿಂತ ಈ ದ್ವೀಪದಲ್ಲಿ ದುಪ್ಪಟ್ಟು ದುಬಾರಿ.

ಇಡೀ ಪೊರ್ಟ್ ಕೊಚ್ಚಿಯೇ ಒಂದು ಕಲಾಗ್ಯಾಲರಿಯಾದಾಗ ಅದರೊಳಗಿರುವ ಇಂಡೋ ಡಚ್ ಮ್ಯೂಸಿಯಂನನ್ನಾಗಗಿ, ವಾಸ್ಕೋಡಗಾಮನ ಸಮಾಧಿಯಿರುವ ಹಳೆಯ ಯುರೋಪಿಯನ್ ಚರ್ಚ್  ಸೈಂಟ್ ಪ್ರಾನ್ಸಿಸ್ ಚರ್ಚನನ್ನಾಗಲಿ ನೋಡದೇ ಮರಳುವುದುಂಟೇ? ಸಂಜೆಯ ಕಡಲ ಕಿನಾರೆ ಮತ್ತು ಚೈನಿಶ್ ಪಿಶ್ಶಿಂಗ್ ನೆಟ್ ಆಕರ್ಷಣೆಯನ್ನು ಯಾವ ಪ್ರವಾಸಿಯೂ ತಪ್ಪಿಸಿಕೊಳ್ಳಲಾರ.

ಜಗತ್ತಿನ ಹಲವಾರು ಸಂಗತಿಗಳು ನಮ್ಮ ಕಣ್ಣ ಮುಂದೆ ನಡೆಯುತ್ತದೆ.ಅದರಲ್ಲಿ ಕೆಲವನ್ನು ನಮ್ಮ  ಕಣ್ಣು ನೋಡುತ್ತದೆ. ಕೆಲವನ್ನು ನಮ್ಮ ಬುದ್ದಿ ಗ್ರಹಿಸುತ್ತದೆ. ಇನ್ನು ಕೆಲವು ನಮ್ಮ ಎದೆಯಾಳಕ್ಕೆ ಇಳಿಯುತ್ತದೆ.ಹಾಗೆ ಇಳಿದದ್ದು ಬುದ್ದಿಯ ಜೊತೆ ಸಂಲಗ್ನಗೊಂಡು. ಹೊಸತೊಂದರ ಅವಿಷ್ಕಾರಕ್ಕೆ ಕಾರಣವಾಗುತ್ತದೆ. ಅದನ್ನು ಸ್ರುಷ್ಟಿಸಬಲ್ಲವನು ವಿಜ್ನಾನಿಯಾಗುತ್ತಾನೆ. ಕವಿಯಾಗುತ್ತಾನೆ, ಕಲಾವಿದನಾಗುತ್ತಾನೆ, ಇಂತವರ ಸ್ರುಷ್ಟಿಯನ್ನು ನೋಡಿ ಆನಂದಿಸಬಲ್ಲವನು, ತನ್ನೊಳಗೆ ಯಾವುದೋ ಅನೂಹ್ಯವಾದುದನ್ನು ತುಂಬಿಕೊಳ್ಳಬಲ್ಲವನು ಕಲಾರಸಿಕನಾಗುತ್ತಾನೆ, ಸಹ್ರುದಯನಾಗುತ್ತಾನೆ. ೧೦೮ ದಿನಗಳ ಕಾಲ ನಮ್ಮ ನೆರೆಯ ರಾಜ್ಯದ ಪೋರ್ಟ್ ಕೊಚ್ಚಿಯಲ್ಲಿ ನಡೆಯುತ್ತಿರುವ ಈ ವಿಶಿಷ್ಟ ಉತ್ಸವ ಅಂತಹದೊಂದು ವಾತಾವರಣವನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ನಿರ್ಮಿಸುತ್ತಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಕಲೆಯೊಂದೇ ಹ್ರುದಯ-ಹ್ರುದಯಗಳನ್ನು ಬೆಸೆಯಬಲ್ಲುದು.ದೇಶ-ದೇಶಗಳ ಗಡಿ ರೇಖೆಯನ್ನು ಅಳಿಸಬಲ್ಲುದು.








Sunday, May 20, 2018

ಹಿಂದು, ಜೈನ, ಬೌದ್ಧ ಧರ್ಮಿಯರ ಶ್ರದ್ಧಾಕೇಂದ್ರ-ಕೈಲಾಸ ಪರ್ವತ.




ಕೈಲಾಸ ಪರ್ವತವೆಂದರೆ, ಅದು ಶಿವನ ಆವಾಸ ಸ್ಥಾನ. ಬದುಕಿನಲ್ಲಿ ಒಮ್ಮೆಯಾದರೂ ಅಲ್ಲಿಗೆ ಹೋಗಬೇಕೆಂದು ಪ್ರತಿಯೊಬ್ಬ ಭಾರತೀಯನೂ ಆಸೆಪಡುತ್ತಾನೆ. ಪ್ರತಿಯೊಬ್ಬ ಭಾರತೀಯನೂ ಎಂದು ಯಾಕೆ ಒತ್ತಿಹೇಳಿದೆನೆಂದರೆ ಅದು ಕೇವಲ ಹಿಂದುಗಳಿಗೆ ಮಾತ್ರ ಪೂಜನೀಯ ಜಾಗವಲ್ಲ. ಅದು ಬೌದ್ಧ ಮತ್ತು ಜೈನರಿಗೂ ಕೂಡಾ ಅದು ಪವಿತ್ರ ಸ್ಥಳವೇ ಆಗಿದೆ. ಇದರ ಎತ್ತರ ೨೧೭೭೮ ಅಡಿ . ಸದಾ ಹಿಮದಿಂದ ಆವೃತವಾದ ಶಿಖರವಿದು

ಕೈಲಾಸ ಪರ್ವತದ ಪಕ್ಕದಲ್ಲಿಯೇ ಇದೆ. ಮಾನಸ ಸರೋವರ. 
ಮಾನಸ ಸರೋವರ, ಹಾಗೆಂದಕೂಡಲೇ  ತಕ್ಷಣಕ್ಕೆ ನೆನಪಿಗೆ ಬರುವುದು ಕೈಲಾಸ ಪರ್ವತವೇ. ಅದೊಂದು ಜೋಡಿ ಶಬ್ದದಂತೆ. . ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಕಾರಣದಿಂದಾಗಿ ಇದಕ್ಕೆ ಮಾನಸ ಸರೋವರವೆಂಬ ಹೆಸರು ಬಂದಿದೆ. ಇದು ಅತ್ಯಂತ ಎತ್ತರದಲ್ಲಿರುವ ತಿಳಿ ನೀರಿನ ಸರೋವರ. ಇದರಲ್ಲಿ ಸ್ನಾನ ಮಾಡಿದರೆ ಸರ್ವಪಾಪಗಳು ಪರಿಹಾರವಾಗಿ ಮೋಕ್ಷ ದೊರಕುತ್ತದೆಯೆಂದು ಆಸ್ತಿಕರು ನಂಬುತ್ತಾರೆ. ಇದರ ವಿಸ್ತಿರ್ಣ ೪೧೦ ಕಿ.ಮೀ ಮತ್ತು ೩೦೦ ಅಡಿ ಆಳ ಹೊಂದಿದೆ.

ಮಾನಸ ಸರೋವರ ಹಿಂದೆ ಅದು ಭಾರತದ ಭೂಭಾಗವೇ ಆಗಿದ್ದರೂ ಈಗ ಅದು ಚೀನಾದ ಸ್ವಾಧೀನದಲ್ಲಿರುವ ಟಿಬೇಟ್ ನಲ್ಲಿದೆ. ಆದ ಕಾರಣ ಅಲ್ಲಿಗೆ ಹೋಗಲು ಚೀನಾ ಸರಕಾರ ವೀಸಾ ಕೊಡಲೇಬೇಕು.  ಇಂತಿಷ್ಟೇ ಸಂಖ್ಯೆಯಲ್ಲಿ  ಯಾತ್ರಿಗಳು ಬರಬಹುದು ಎಂದು ಅದು ನಿಗದಿ ಮಾಡುತ್ತದೆ. ಮಾನಸ ಸರೋವರಕ್ಕೆ ಹೋಗಲು ಇದುವರೆಗೆ ಎರಡೇ ದಾರಿಗಳಿದ್ದವು ಅದು ಉತ್ತರಾಖಂಡ ರಾಜ್ಯದ ಲಿಪುಲೇಖ್ ಪಾಸ್ ಮುಖಾಂತರ ಹಾದು ಹೋಗುವ ಕಠಿಣವಾದ ಹಾದಿ. ಇದಕ್ಕೆ ಸರಿಸುಮಾರು ಮುನ್ನೂರು ಕಿ. ಮೀ ನಡೆಯಬೇಕಾಗುತ್ತದೆ. ಇದು ಗೌರ್ನ್ಮೆಂಟ್ ರೂಟ್, ನೇಪಾಳದ ಕಟ್ಮಂಡು ಮುಖಾಂತರ ಹೋಗುವ ಖಾಸಗಿ ರೂಟ್ ಇನ್ನೊಂದು. ಇದಕ್ಕೆ ಜೀಪು, ಬಸ್ಸು ಹೆಲಿಕಾಪ್ಟರ್ ಮುಂತಾದ ಸೌಲಭ್ಯಗಳನ್ನು ಆಯೋಜಕರು ಒದಗಿಸುವ ಕಾರಣಗಳಿಂದ ಯಾತ್ರೆ ಕಠಿಣವೆನಿಸುವುದಿಲ್ಲ

ಸರಕಾರಿ ರೂಟ್ನಲ್ಲಿ ಅಬ್ಬರಿಸುವ ಮಹಾಕಾಳಿ ನದಿ ಹರಿಯುತ್ತಿರುವುದರಿಂದ ಅಲ್ಲಿ ಭೂಕುಸಿತವಾಗುವುದು ಸಾಮಾನ್ಯ. ಹಾಗಾಗಿ ಈ ದಾರಿಯಲ್ಲಿ ಸರಕಾರದ ಸುಪರ್ದಿಯಲ್ಲೇ ಯಾತ್ರೆ ಕೈಗೊಳ್ಳಬೇಕಾಗುತ್ತದೆ. ಇದೇ ಹಾದಿಯಲ್ಲಿ ಮಲ್ಪಾದ ಹತ್ತಿರ ೧೯೯೭ರಲ್ಲಿ ಪ್ರಖ್ಯಾತ ಓಡಿಸ್ಸಿ ನ್ರುತ್ಯಗಾತಿಯೂ, ರೂಪದರ್ಶಿಯೂ ಆದ ಪ್ರೋತಿಮಾಬೇಡಿ ಭೂಕುಸಿತದಲ್ಲಿ ಸಾವನ್ನಪ್ಪಿದ್ದು. ಕಳೆದ ವರ್ಷ ಇಲ್ಲಿ ಸತತ ಭೂಕುಸಿತವುಂಟಾಗಿ ಮಾನಸ ಯಾತ್ರೆಯ ನಾಲ್ಕು  ಬ್ಯಾಚ್ ರದ್ದಾಗಿತ್ತು. ರದ್ದಾದ ಬ್ಯಾಚಿನಲ್ಲಿ ನಾನೂ ಒಬ್ಬಳಾಗಿದ್ದೆ. ಹಾಗಾದಾಗ ನಾವು ಕಟ್ಟಿದ್ದ ದುಡ್ಡು ವಾಪಾಸು ಸಿಕ್ಕಿದರೂ ಅದಕ್ಕಾಗಿ ನಡೆಸಿದ ತಯಾರಿ ಮತ್ತು ವಿಮಾನ ಟಿಕೇಟ್ ಗಳ ಕಾರಣದಿಂದಾಗಿ ಸುಮಾರು ನಷ್ಟವುಂಟಾಗುತ್ತದೆ.

ನರೇಂದ್ರ ಮೋದಿ ಸರಕಾರದ ಮಾತುಕತೆಯ ಫಲವಾಗಿ ಈ ವರ್ಷದಿಂದ ಮೂರನೆಯ ಹಾದಿಯೊಂದು ತೆರೆದುಕೊಂಡಿದೆ. ಇದು ಸಿಕ್ಕಿಂ- ಚೀನಾ ಗಡಿಭಾಗವಾದ ನಾತೂಲ ಪಾಸ್ ಮೂಲಕವಾಗಿ ಹೋಗುವ ರಸ್ತೆ ಮಾರ್ಗ. ಇದು ಅತ್ಯಂತ ಸುಲಭವಾದ ರಸ್ತೆ ಹಾದಿ ಮತ್ತು ಯಾತ್ರೆಯ ಸಮಯದ ಅವಧಿ ಕೂಡಾ ಕಡಿಮೆ.
ಕೈಲಾಸ ಮಾನಸಯಾತ್ರೆಯ ಸಂಕಲ್ಪ ಮಾಡಿಕೊಂಡರೂ ಅದು ನೆರವೇರುತ್ತದೆಯೆಂಬ ಯಾವ ಭರವಸೆಯೂ ಇರುವುದಿಲ್ಲ. ಯಾಕೆಂದರೆ ಅದಕ್ಕೆ ಬಹುದೊಡ್ಡ ಅಡ್ಡಿಯಾಗುವುದು ಪ್ರಕೃತಿಯೇ. ಹಿಮಪಾತ, ಭೂಕುಸಿತ ಮುಂತಾದ ಹವಮಾನ ವೈಪರಿತ್ಯಗಳಿಂದ ಹಲವಾರು ಭಾರಿ ಯಾತ್ರೆ ಅರ್ಧಕ್ಕೆ ನಿಂತಿರುವುದೂ ಇದೆ.

ಇಷ್ಟೇಲ್ಲಾ ಕಷ್ಟಪಟ್ಟು ಯಾತ್ರೆಯನ್ನು ಕೈಗೊಂಡ ಮೇಲೆ ಅಲ್ಲಿ ನೋಡುವುದಾದರೂ ಏನನ್ನು? ಮಾನಸಸರೋವರ ಮತ್ತು ಕೈಲಾಸ ಪರ್ವತ ಎಲ್ಲರಿಗೂ ಗೊತ್ತಿರುವಂತಹದೇ. ಅಲ್ಲಿರುವುದು ಇಷ್ಟು ಮಾತ್ರವೇ, ಇನ್ನೇನು ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.

ನನಗೊಬ್ಬ ಚಾರಣದ ಗೆಳತಿಯಿದ್ದಾಳೆ. ಆಕೆಯ ಹೆಸರು ಗಾಯತ್ರಿ. ನಮ್ಮದೊಂದು ಪುಟ್ಟ ಐದು ಜನರ ತಂಡವಿದೆ. ಪ್ರತಿವರ್ಷ ಹಿಮಾಲಯದಲ್ಲಿ ಚಿಕ್ಕಪುಟ್ಟ ಚಾರಣ್ಗಳನ್ನು ಕೈಗೊಳ್ಳುತ್ತೇವೆ.ಗಾಯತ್ರಿ ಆರು ಭಾರಿ ಕೈಲಾಸ ಮಾನಸ ಸರೋವರ ಯಾತ್ರೆ ಮಾಡಿದ್ದಾಳೆ. ’ ಅಷ್ಟು ಬಾರಿ ನೋಡುವಂತದ್ದು ಅಲ್ಲೇನಿದೆ?’ ಅಂತ ಅವಳನ್ನು ಪ್ರಶ್ನಿಸಿದರೆ ಆಕೆ ಅಲ್ಲಿರುವ ಸ್ಥಳಗಳ ಪಟ್ಟಿಯನ್ನೇ ಕೊಡುತ್ತಾಳೆ.

ರಾಕ್ಷತಾಳ್, ಅಷ್ಟಪಾದ, ನಂದಿಪರಿಕ್ರಮ, ಸಪ್ತಋಷಿ ಗುಹೆ, ಯಮಧ್ವಾರ..ಹೀಗೆ ಪಟ್ಟಿ ಮುಂದುವರಿಯುತ್ತದೆ.
ರಾಕ್ಷಸ ತಾಳ್ [ರಾಕ್ಷಸ ಸರೋವರ.] ಇದು ಮಾನಸ ಸರೋವರಕ್ಕಿಂತಲೂ ದೊಡ್ಡದು. ಇದರ ಹೆಸರಿಗೊಂದು ಹಿನ್ನೆಯಿದೆ. ರಾವಣ ತನ್ನ ತಾಯಿಯ ಬಯಕೆಯಂತೆ ಆತ್ಮಲಿಂಗವನ್ನು ಪಡೆಯುವುದಕ್ಕಾಗಿ ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡುತ್ತಾನೆ. ಆದರೆ ಶಿವ ಪ್ರತ್ಯಕ್ಷನಾಗುವುದಿಲ್ಲ. ಆಗ ಹತ್ತು ತಲೆಯ ರಾವಣ ತನ್ನ ಒಂದೊಂದೇ ತಲೆಯನ್ನು ಕಡಿದು ಹೋಮಕುಂಡಕ್ಕೆ ಅರ್ಪಿಸುತ್ತಾನೆ. ಹತ್ತನೆಯ ತಲೆಗೆ ಕತ್ತಿಯಿಕ್ಕುವಾಗ ಶಿವ ಪ್ರತ್ಯಕ್ಷನಾಗಿ ಆತ್ಮಲಿಂಗವನ್ನು ಕೊಡುತ್ತಾನೆ.. ರಾವಣ ಅಮೇಲೆ ಈ ಸರೋವರದಲ್ಲಿ ಸ್ನಾನ ಮಾಡಿದಾಗ ಆತ ಕಳೆದುಕೊಂಡ ತಲೆ ಪುನಃ ಚಿಗುರಿತಂತೆ. ಈ ಸರೋವರ ಮಾನಸ ಸರೋವರಕ್ಕಿಂತಲೂ ವಿಸ್ತೀರ್ಣ್ದಲ್ಲಿ ದೊಡ್ಡದು. ನೀರು ಶುಬ್ರವಾಗಿದ್ದರೂ ರಾಕ್ಷಸ ಗುಣ ಬರಬಹುದೆಂಬ ಭಯದಿಂದ ಭಕ್ತರು ಇಲ್ಲಿ ಸ್ನಾನ ಮಾಡುವುದಿಲ್ಲ.  

ಬೌದ್ದರಿಗೂ ಕೈಲಾಸ ಮಾನಸ ಸರೋವರ ಪವಿತ್ರವೆಂದು ಹಿಂದೆ ಪ್ರಸ್ತಾಪಿಸಿದ್ದೆ. ಹೌದು, ಇದೇ ರಾಕ್ಷಸ ಸರೋವರದಲ್ಲಿ ಎರಡ್ಮೂರು ಚಿಕ್ಕಪುಟ್ಟ ದ್ವೀಪಗಳಿವೆ. ಇದರಲ್ಲಿ ಬೌದ್ಧಬಿಕ್ಕುಗಳು, ಲಾಮಗಳು ವಾಸಿಸುತ್ತಾರೆ. ಚಳಿಗಾಲದ ಸಮಯದಲ್ಲಿ ಈ ಸರೋವರ ಹೆಪ್ಪುಗಟ್ಟುತ್ತದೆ. ಆಗ ಇವರು ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದು ಬಂದು ಇಡೀ ವರ್ಷಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟುಕೊಂಡು ತಮ್ಮ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರಿಸುತ್ತಾರೆ.

ನಮ್ಮ ಹಾಗೆಯೇ ಬೌದ್ಧರು ಕೂಡಾ ಕೈಲಾಸ ಪರ್ವತವನ್ನು ಬುದ್ಧನ ಆವಾಸ ಸ್ಥಾನವೆಂದು ನಂಬುತ್ತಾರೆ. ಅವರ ಭಾವ ದ್ರುಷ್ಟಿಗೆ ಕೈಲಾಸ ಪರ್ವತವು ಸಮಾಧಿ ಸ್ಥಿತಿಯಲ್ಲಿ ಕುಳಿತ ಬುದ್ಧನಂತೆ ಗೋಚರವಾಗುತ್ತದೆ. ಅವರೂ ಕೂಡಾ ಹಿಂದುಗಳಂತೆಯೇ ಕೈಲಾಸ ಪರ್ವತಕ್ಕೆ ಪರಿಕ್ರಮವನ್ನು ಮಾಡುತ್ತಾರೆ. ಇನ್ನೀತರ ಪವಿತ್ರ ಬೌದ್ಧಮಂದಿರಗಳಲ್ಲಿ ಮಾಡುವ ಹಾಗೆ ಹೆಜ್ಜೆ ನಮಸ್ಕಾರ ಮತ್ತು ಮಂಡಿಯೂರಿ ನಮಸ್ಕಾರ ಮಾಡುವ ಬೌದ್ಧ ಸನ್ಯಾಸಿಗಳನ್ನು ಪರಿಕ್ರಮದ ಹಾದಿಯಲ್ಲಿ ಕಾಣಬಹುದು. ಇಲ್ಲಿಯೂ ಬೌದ್ದರೇ ಭಾಗವಹಿಸುವ ಬಹುದೊಡ್ಡ ಕುಂಭಮೇಳವೊಂದು ಯಮಧ್ವಾರದ ಬಳಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತದೆ. . ಇದನ್ನು ’ಹಾರ್ಸ್ ಇಯರ್’ ಎಂದು ಕರೆಯುತ್ತಾರೆ. ಯಮಧ್ವಾರದಿಂದ ನಿಂತು ನೋಡಿದರೆ ಎರಡು ಬೆಟ್ಟಗಳು ಕಾಣುತ್ತವೆ. ಅವುಗಳ ಹೆಸರು ಅವಲೋಕಿತೇಶ್ವರ ಬೆಟ್ಟ ಮತ್ತು ಮಂಜುಶ್ರೀ ಬೆಟ್ಟ.

ಜೈನರಿಗೂ ಇದು ಪವಿತ್ರ ಜಾಗ. ಜೈನ ತೀರ್ಥಂಕರಲ್ಲಿ ಮೊದಲನೆಯವನಾದ ವೃಷಭದೇವನು ಕೈಲಾಸ ಪರ್ವತದ ಪಕ್ಕದಲ್ಲಿರುವ ಬೆಟ್ಟವನ್ನು ಕೇವಲ ಎಂಟು ಹೆಜ್ಜೆಗಳಲ್ಲಿ ಹತ್ತಿ ಕೈಲಾಸ ಪರ್ವತವನ್ನು ತಲುಪಿ ಅಲ್ಲಿ ನಿರ್ವಾಣ ಹೊಂದಿದ ಎಂಬ ನಂಬಿಕೆಯಿದೆ. ಹಾಗಾಗಿ ಆ ಬೆಟ್ಟಕ್ಕೆ  ಅಷ್ಟಪಾದ ಎಂಬ ಹೆಸರು ಬಂದಿದೆ. ಆ ಬೆಟ್ಟದ ಬುಡದಲ್ಲಿ ವೃಷಭದೇವನ ಸಮಾಧಿಯಿರುವ ಗೊಂಪವಿದೆ.

ಕೈಲಾಸ ಮಾನಸ ಸರೋವರದ ಯಾತ್ರೆಯನ್ನು ತಾನು ಮುಗಿಸಿ ಬಂದೆ ಅಂತ ಯಾರದರೂ ಹೇಳಿದರೆ ಅದರ ಬಗ್ಗೆ ಸ್ವಲ್ಪ ಗೊತ್ತಿದ್ದವರು ತಕ್ಷಣ ಒಂದು ಪ್ರಶ್ನೆ ಕೇಳುವುದಿದೆ. ’ಇನ್ನರ್ ಪರಿಕ್ರಮ ಮಾಡಿದ್ರಾ ಅಥ್ವಾ ಔಟರ್ ಮಾತ್ರವಾ?’ ಅಂತ. ಹಾಗೆಂದರೇನು?   ಕೈಲಾಸ ಪರ್ವತದ ಹೊರ ಆವರಣದಲ್ಲಿ ಪರ್ವತಕ್ಕೆ ಸುತ್ತು ಬರುವುದಕ್ಕೆ ಔಟರ್ ಪರಿಕ್ರಮ ಎನ್ನುತ್ತಾರೆ. ಇದನ್ನು ಕಾಲುನಡಿಗೆಯಲ್ಲಿ ಮಾಡಿದರೆ ಮೂರು ದಿವಸ ಬೇಕಾಗುತ್ತದೆ. ವಾಹನದಲ್ಲಾದರೆ ಕೆಲವು ಘಂಟೆಗಳು ಸಾಕು. ಒಳಗಿನಿಂದ ಸುತ್ತು ಬರುವುದಕ್ಕೆ ಇನ್ನರ್ ಪರಿಕ್ರಮ ಎನ್ನುತ್ತಾರೆ. ಮೈಕೊರೆಯುವ ಚಳಿಯಲ್ಲಿ ಇದನ್ನು ಮಾಡುವುದು ತುಂಬಾ ಕಷ್ಟಕರ. ಆ ಕಾರಣದಿಂದಲೇ ಇರಬಹುದು. ಈಗ ಐದಾರು ವರ್ಷಗಳಿಂದ ಇನ್ನರ್ ಪರಿಕ್ರಮಕ್ಕೆ ಚೀನಾ ಸರಕಾರವು ಒಪ್ಪಿಗೆಯನ್ನು ನೀಡುತ್ತಿಲ್ಲ.

ಸಪ್ತಸಿಂಧುಗಳಲ್ಲಿ ಉಲ್ಲೇಖವಾಗಿರುವ ಗಂಗಾನದಿಯೂ ಸೇರಿದಂತೆ, ಸಿಂಧು, ಸಟ್ಲೇಜ್ ಮುಂತಾದ ನದಿಗಳ ಉಗಮ ಸ್ಥಾನ ಕೂಡ ಇದೇ ಇದೇ ಮಾನಸ ಸರೋವರ. ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ದೇವತೆಗಳು ಬೆಳಕಿನ ರೂಪದಲ್ಲಿ, ನಕ್ಷತ್ರಗಳಾಗಿ ಬಂದು ಇಲ್ಲಿ ಸ್ನಾನ ಮಾಡುತ್ತಾರೆಂಬು ಆಸ್ತಿಕರು ನಂಬುತ್ತಾರೆ. ತಾವದನ್ನು ನೋಡಿದುದಾಗಿಯೂ ಕೆಲವರು ಹೇಳುತ್ತಾರೆ.

 ಆಸ್ತಿಕರು ಗುಡಿಯೊಳಗಿನ ದೇವರನ್ನು ನಂಬುತ್ತಾರೆ.  ಹಾಗೆಯೇ ಪ್ರಕೃತಿಯಲ್ಲೂ ದೇವರನ್ನು ಕಾಣುತ್ತಾರೆ. ನನ್ನಂತವರು ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕೃತಿಯನ್ನು, ಸೃಷ್ಟಿಯ ಅದ್ಭುತವನ್ನು ನೋಡಿ ಬೆರಗಾಗಿ ನಿಲ್ಲುತ್ತೇವೆ. ಹಾಗಾಗಿಯೇ ಅಸ್ತಿಕಳಾದ ಗಾಯತ್ರಿ ಮತ್ತು  ಪೂಜೆ, ಪುನಸ್ಕಾರಗಳಲ್ಲಿ ಆಸಕ್ತಿಯಿಲ್ಲದ ನಾನು ಒಟ್ಟಾಗಿ ಪ್ರವಾಸ ಹೋಗಲು ಸಾಧ್ಯವಾಗುತ್ತದೆ. ಅವಳು ಗರ್ಬಗುಡಿಯೊಳಗೆ ಹೊಕ್ಕರೆ ನಾನು ಗಿರಿ- ಶಿಖರ, ಹಕ್ಕಿ ಪಕ್ಕಿಗಳ ಕಡೆಗೆ ಕ್ಯಾಮಾರ ಫೋಕಸ್ ಮಾಡುತ್ತೇನೆ.

[ಇವತ್ತಿನ -೫.೨೦.೨೦೧೮- ಸಂಯುಕ್ತ ಕರ್ನಾಟಕ ಪೇಪರಿನ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ]


Saturday, March 10, 2018

ಶ್ರೀಲಂಕಾದಲ್ಲಿ ಸಂಘರ್ಷ ಮತ್ತು ಸಹಿಷ್ಣುತೆ.







ಶ್ರೀಲಂಕಾದಲ್ಲಿ ಬೌದ್ಧರಿಗೂ ಮುಸ್ಲಿಂರಿಗೂ ಸಂಘರ್ಷ ಉಂಟಾಗಿ ಅಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. ೧೯೭೧ರಲ್ಲಿ ಶ್ರೀಲಂಕಾ ತಮಿಳರು ಮತ್ತು ಸೇನೆಯ ನಡುವೆ ಸಂಘರ್ಷವೇರ್ಪಟ್ಟ ಸಮಯದಲ್ಲಿ ದಶಕಗಳ ಕಾಲ ತುರ್ತುಪರಿಸ್ಥಿ ಹೇರಲಾಗಿತ್ತು. ಈಗ ಮತ್ತೆ ಹತ್ತು ದಿನಗಳ ತುರ್ತುಪರಿಸ್ಥಿತಿ ಬಂದಿದೆ. ಇಂಟರ್ನೆಟ್ ಸ್ಥಗಿತಗೊಳಿಸಿ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳನ್ನು ಬ್ಯಾನ್ ಮಾಡಿದೆ.

ತುರ್ತುಪರಿಸ್ಥಿಗೆ ಕಾರಣವಾಗಿದ್ದು ಒಂದು ಸಾಧಾರಣ ಘಟನೆ. ಪೆಭ್ರವರಿ ೨೨ರಂದು ಕ್ಯಾಂಡಿಯಲ್ಲಿ ಕುಮಾರಸಂಘಿಯೆಂಬ ಟ್ರಕ್ ಡ್ರೈವರ್ ಗಾಡಿ ಓಡಿಸುತ್ತಿದ್ದ. ಹಿಂದಿನಿಂದ ಒಂದು ಅಟೊ ಬರುತ್ತಿತ್ತು. ಈತ ಅವನಿಗೆ ದಾರಿಬಿಡಲಿಲ್ಲ. ಇಬ್ಬರಿಗೂ ಜಗಳ ಹತ್ತಿಕೊಂಡಿತು. ಅದು ಮುಸ್ಲಿಂ ಪ್ರಾಬಲ್ಯದ ಪ್ರದೇಶ. ಹತ್ತಾರು ಮುಸ್ಲಿಮರು ಸೇರಿಕೊಂಡು ಕುಮಾರಸಂಘಿಯನ್ನು ಥಳಿಸಿದರು. ಆತ ಸತ್ತು ಹೋದ. ಆತನ ಶವದ ಮೆರವಣಿಗೆಯ ಸಮಯದಲ್ಲಿ ಬೌದ್ಧರು ಸಿಕ್ಕ ಸಿಕ್ಕ ಮುಸ್ಲಿಮರ ಮೇಲೆ ಏರಿ ಹೋದರು. ಅವರ ಮನೆ ಅಂಗಡಿಗಳನ್ನು ಸುಟ್ಟು ಹಾಕಿದರು. ಮಸೀದಿಗಳಿಗೆ ಹಾನಿ ಉಂಟು ಮಾಡಿದರು. ಪರಿಸ್ಥಿತಿ ಬಿಗಾಡಾಯಿಸಿತು. ಸೇನೆ ಮತ್ತು ಪೋಲಿಸರು ಮಧ್ಯೆ ಪ್ರವೇಶಿಸಿದರು.  ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು.

ಕಳೆದ ವಾರ ನಾನು ಅಲ್ಲಿದ್ದೆ. ತಮ್ಮ ಧರ್ಮದ ವಿಷಯವಾಗಿ ಅಲ್ಲಿನ ಜನರು ಎಷ್ಟು ಸೂಕ್ಷ್ಮಮತಿಗಳು ಎಂಬುದಕ್ಕೆ  ಒಂದು ಪ್ರತ್ಯಕ್ಷ ಘಟನೆಯನ್ನು ಹೇಳುತ್ತೇನೆ.

ನಮ್ಮ ಪ್ರವಾಸಿ ತಂಡ ಭಾರತಕ್ಕೆ ಮರಳಲು ಕೊಲೊಂಬೋದ ಭಂಡಾರೆನಾಯಿಕೆ ಇಂಟರ್ ನ್ಯಾಷನಲ್ ವಿಮಾನ ನಿಲ್ಡಾಣದ ಚಿಕ್ ಇನ್ ಕೌಂಟರ್ ನಲ್ಲಿ ನಿಂತಿದ್ದೆವು.  ಸರತಿ ಸಾಲಿನಲ್ಲಿ ನಮ್ಮ ಸಹ ಪ್ರವಾಸಿಗರಾದ ನಮ್ಮ ಕನ್ನಡದ ಹಿರಿಯ ನಟ ಅಶೋಕ್ ರವರ ಅಣ್ಣ ಮತ್ತು ಅತ್ತಿಗೆ ಕೂಡಾ ಇದ್ದರು. ನಮ್ಮ ಪಕ್ಕದ ಸಾಲಿನಲ್ಲಿದ್ದ ಮೂರ್ನಾಕು ಜನ ಬೌದ್ಧಬಿಕ್ಕುಗಳು ಪರಸ್ಪರ ಗುಸುಗುಸು ಮಾತಾಡುತ್ತಾ ಆಗಾಗ ಅಶೋಕರ ಅತ್ತಿಗೆಯನ್ನು ನೋಡುತ್ತಿರುವುದನ್ನು ಗಮನಿಸಿದೆ.
ನಾವೆಲ್ಲ ಬುದ್ಧ ಹುಟ್ಟಿದ ನಾಡಿನವರು. ಹಾಗಾಗಿ ಅಭಿಮಾನದಿಂದ ನಮ್ಮನ್ನವರು ನೋಡುತ್ತಿರಬಹುದೆಂದು ಒಳಗಿಂದೊಳಗೆ ಹೆಮ್ಮೆಯಿಂದ ಬೀಗುತ್ತಲಿದ್ದೆ.. ಆದರೆ ಇದ್ದಕ್ಕಿದ್ದಂತೆ ಮೂರ್ನಾಲ್ಕು ಜನ ಸೆಕ್ಯೂರಿಟಿ ಗಾರ್ಡಗಳು ಆಕೆಯಿದ್ದೆಡೆಗೆ ಬಂದುನಮ್ಮ ಜೊತೆ ಬನ್ನಿ ಎಂದು ಕರೆದಾಗ ಅವರ ಜೊತೆ ನಾವು ಕೂಡಾ ತಬ್ಬಿಬ್ಬುಗೊಂಡೆವು. ಗಂಡ ಹೆಂಡತಿಯರಿಬ್ಬರೂ ಚಕಿತಗೊಳ್ಳುತ್ತಲೇ ಅವರನ್ನು ಹಿಂಬಾಲಿಸಿದರು. ನಾವೆಲ್ಲಾ ಯಾಕಾಗಿರಬಹುದು? ಎಂದು ಕಾತರದಿಂದ ಅವರು ಹಿಂದಿರುಗಿ ಬರುವುದನ್ನೇ ಕಾಯುತ್ತಿದ್ದೆವು. ಆಕೆ ಹಿಂದಿರುಗಿ ಬರುತ್ತಲೇ ತನ್ನ ಲಗ್ಗೇಜ್ ಬ್ಯಾಗನ್ನು ತಡಕಾಡುತ್ತಾ ಅದರಿಂದ ಒಂದು ಚೂಡಿದಾರ್ ಟಾಪ್ ಎತ್ತಿಕೊಂಡು ಲೇಡಿಸ್ ರೆಸ್ಟ್ ರೂಮ್ ನತ್ತ ಹೋದರು. ನಾವು ಪ್ರಶ್ನಾರ್ಥಕ ಚಿಹ್ನೆಯಿಂದ ಆಕೆಯ ಗಂಡನೆಡೆ ನೋಡಿದಾಗ ಅವರು ಹೇಳಿದರು; ತಮ್ಮ ಪತ್ನಿ ಬುದ್ಧನ ಚಿತ್ರಗಳಿದ್ದ ಟಾಪ್ ಹಾಕಿಕೊಂಡಿದ್ದು ಅಲ್ಲಿಯ ಬಹುಸಂಖ್ಯಾತ ಬೌದ್ಧರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟುಮಾಡುವಂತಿತ್ತಂತೆ. ಹಾಗಾಗಿ ಬದಲಾಯಿಸಲು ಹೇಳಿದರಂತೆ. ನಿಜ ಬೌದ್ಧರಿಗೆ ಬುದ್ಧ ದೇವರಿದ್ದಂತೆ. ಅತನ ಚಿತ್ರಗಳಿರುವ ಮೇಲುಡುಗೆಯನ್ನು ವಿದೇಶಿಯ ಹೆಣ್ಣುಮಗಳೊಬ್ಬಳು ತೊಟ್ಟಾಗ ಅವರು ಅಕ್ಷೇಪಿಸುವುದು ಸಹಜವಾಗಿತ್ತು.

 ದೇವರ ವಿಷಯದಲ್ಲಿ ನಾವು ಭಾರತೀಯರು ಉದಾರಿಗಳು, ನಮ್ಮಲ್ಲಿ ಮೂವತ್ತಮೂರು ಕೋಟಿ ದೇವತೆಗಳಿದ್ದಾರೆ, ಅವರನ್ನು ನಾವು ಬೇಕಾದಂತೆ ಬಳಸಿಕೊಳ್ಳುತ್ತೇವೆ. ಅವರ ಟ್ಯಾಟು ಹಾಕಿಸಿಕೊಳ್ಳುತ್ತೇವೆ, ನಾವು ಉಡುವ ವಸ್ತ್ರಗಳಲ್ಲಿ ದೇವರ ಚಿತ್ರಗಳಿದ್ದರೆ ನಮಗದು ಅಕ್ಷೇಪಾರ್ಹವಲ್ಲ, ಗಣೇಶ, ಶಿವ,  ಶ್ರೀಕೃಷ್ಣರಂತೂ ಸರ್ವಾಂತರ್ಯಾಮಿಗಳು. ಅದರೆ ವಿದೇಶಿಗರು ಇವರನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡಾಗ ನಮ್ಮಿಂದಲೂ ಪ್ರತಿಭಟನೆ ವ್ಯಕ್ತವಾದುದುಂಟು. ಬುದ್ಧ ನಮ್ಮ ನಾಡಿನಲ್ಲೇ ಹುಟ್ಟಿದರೂ ಆತ ನಮ್ಮವನಾಗಿಯೇ ಉಳಿದಿಲ್ಲ. ಆ ಕಾರಣದಿಂದಲೇ ಇರಬಹುದು, ಅವನ ಚಿತ್ರವನ್ನೂ ನಾವು ಸಹ ಬೇಕಾಬಿಟ್ಟೆಯಾಗಿ ಉಪಯೋಗಿಸುತ್ತಿದ್ದೀವೆನೋ ಎಂಬ ಶಂಕೆ ಶ್ರೀಲಂಕಾದ ಏರ್ಪೋರ್ಟ್ ಘಟನೆಯಿಂದ ನನ್ನಲ್ಲಿ ಮೂಡಿದೆ.

 ನಮ್ಮ ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಕರಕುಶಲವಸ್ತು ಪ್ರದರ್ಶನಗಳಲ್ಲಿ ಬುದ್ಧನ ಚಿತ್ರಗಳಿರುವ ಸೀರೆ, ಕುಪ್ಪಸ, ಶರ್ಟ್, ಕಿವಿಯೋಲೆ, ಪೆಂಡೆಂಟ್ ಎಲ್ಲವೂ ದೊರೆಯುತ್ತದೆ. ಚಿತ್ರಕಲಾ ಪರಿಶತ್ತಿನಲ್ಲಾದ ಕರಕುಶಲ ಮೇಳದಲ್ಲಿ ಖರೀದಿಸಿದ ಒಂದು ಚೂಡಿದಾರ್ ಟಾಪ್ ನನ್ನಲ್ಲೂ  ಇದೆ. ಬುದ್ಧನ ಮೇಲಿನ ಪ್ರೀತಿ, ಆರಾಧನೆಗಳಿಂದ ಖರೀದಿಸಿದ್ದೆ. ಬಹುಶಃ ಇನ್ನದನ್ನು ನಾನು ಧರಿಸಲಾರೆ!

ಭಾರತಕ್ಕೆ ನೇತು ಬಿದ್ದಿರುವ ನೀರಿನ ಬಿಂದುವಿನಂತಿರುವ ಪುಟ್ಟ ದ್ವೀಪ ರಾಷ್ಟ್ರ. ಶೀಲಂಕಾ. ೧೯೮೮ರ ಜನಗಣತಿಯಂತೆ ಇಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ  ಶೇ. ೯೩ರಷ್ಟು ಜನರು ಸಿಂಹಳೀಯ ಬುದ್ದಿಸ್ಟ್ ಆಗಿದ್ದರು. ೨೦೧೧ರ  ಜನಗಣತಿಗೆ ಬರುವಾಗ ಆ ಸಂಖ್ಯೆ ಶೇ ೭೦.೧೯ಕ್ಕೆ ಇಳಿದಿತ್ತು. ಉಳಿದವರಲ್ಲಿ ೧೨.೬ ಹಿಂದುಗಳು. ೯.೭ ಮುಸ್ಲೀಮರು ಮತ್ತು ೭.೪ ರಷ್ಟು ಕ್ರಿಶ್ಚಿಯನ್ನರು ಇದ್ದಾರೆ. ಏರುತ್ತಿರುವ ಮುಸ್ಲಿಮ್ ಜನಸಂಖ್ಯೆಯ ಬಗ್ಗೆ ಬೌದ್ಧರಲ್ಲಿ ಈಗ ಅಸಮಧಾನ ಮೂಡುತ್ತಿದೆ. ಹಾಗಾಗಿ ಅಲ್ಲಲ್ಲಿ ಚಿಕ್ಕಪುಟ್ಟ ಸಂಘರ್ಷಗಳು ಈ ಹಿಂದೆಯೂ ನಡೆಯುತ್ತಿದ್ದವು. ಅಂಪಾರವೆಂಬ ಪ್ರದೇಶದಲ್ಲಿ ಮುಸ್ಲಿಮರು ತಿಂಡಿ ತಿನಿಸುಗಳ ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತ್ತಿದ್ದಾರೆ. ಅವರು ಸಿಂಹಳಿ ಬೌದ್ಧರಿಗೆ ಆಹಾರದಲ್ಲಿ ನಿರ್ವೀರ್ಯರಾಗುವಂತ ಔಷಧಿಗಳನ್ನು ಬೆರೆಸಿ ಅವರ ಜನಸಂಖೆಯನ್ನು ನಿಯಂತ್ರಿಸಿಸುತ್ತಾರೆ, ಆ ಮೂಲಕ ತಮ್ಮ ಸಂಖ್ಯಬಲವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಅವರು ಕುಟುಂಬಯೋಜನೆಯನ್ನು ಪಾಲಿಸುತ್ತಿಲ್ಲ ಎಂಬುದು ಸಿಂಹಳೀಯರ ಆರೋಪ. ಬರ್ಮಾದಿಂದ ಓಡಿ ಬಂದ ರೋಹಿಂಗಾ ಮುಸ್ಲಿಮರು ಶ್ರೀಲಂಕಕ್ಕೆ ನುಗ್ಗುತ್ತಿದ್ದಾರೆ, ಮುಸ್ಲಿಮರ ಸಂಘಟನೆಗಳಿಗೆ ಸೌದಿ ಅರೇಬಿಯಿಂದ ಹಣ ಬರುತ್ತಿದೆ ಎಂಬ ಆರೋಪದೊಂದಿಗೆ ಅಲ್ಲಿ ಮುಸ್ಲಿಮ್ ದ್ವೇಷ ಒಳಗಿನ ಕಿಚ್ಚಾಗಿ ಉರಿಯುತ್ತಿದೆ. ಈಗ ಅಲ್ಲಿ ಬುರ್ಕಾಗಳೂ, ದಾಡಿಗಳು ಕಾಣಿಸಿಕೊಳ್ಳಲು ಶುರುವಾಗಿದೆ.

ಈಗಿನ ಶ್ರೀಲಂಕಾಕ್ಕೆ ಬೌದ್ಧಧರ್ಮ ಹೇಗೆ ಬಂದಿಳಿಯಿತು ಎಂದು ಇತಿಹಾಸದತ್ತ ಕಣ್ಣು ಹೊರಳಿಸಿದಾಗ ಸಿಗುವುದೇ ಮೌರ್ಯ ಸಾಮ್ರಟ ಅಶೋಕನ ಚರಿತ್ರೆ. ಅದು ಕ್ರಿ.ಫು ಮೂರನೇ ಶತಮಾನ, ಕಳಿಂಗ ಯುದ್ಧದ ಭೀಕರತೆಯಿಂದ ಕನಲಿ ಹೋದ ಅಶೋಕ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧದರ್ಮವನ್ನು ಅಂಗೀಕರಿಸುತ್ತಾನೆ. ಧರ್ಮಪ್ರಚಾರಕ್ಕಾಗಿ ತನ್ನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರರನ್ನು ಸಿಂಹಳಕ್ಕೆ ಕಳುಹಿಸುತ್ತಾನೆ. ಅಶೋಕನ ಸಮಕಾಲೀನನಾದ ದೊರೆ ದೇವನಾಂಪ್ರಿಯ ಟಿಸ್ಸಾ ಅವರಿಗೆ ಆಶ್ರಯನ್ನು ನೀಡಿದ. ಅವರು  ಧರ್ಮಪ್ರಚಾರವನ್ನು ಮಾಡುತ್ತಾ ಅಲ್ಲಿಯೇ ಕೊನೆಯುಸಿರೆಳೆಯುತ್ತಾರೆ.  ಆ ಅಣ್ಣತಂಗಿಯರಿಬ್ಬರೂ ಅಲ್ಲಿಗೆ ಬರುವ ಮೊದಲು ಶ್ರೀಲಂಕಾ ಹೇಗಿತ್ತು?

ವಿದೇಶಿ ಪ್ರವಾಸಿಗರು ಕಂಡಂತೆ ಅಲ್ಲಿ ಪ್ರಕೃತಿಯ ಆರಾಧನೆಯಿತ್ತು.  ನಿಗೂಢ ಶಕ್ತಿಗಳಲ್ಲಿ ನಂಬುಗೆಯಿತ್ತು, ಆತ್ಮ, ಪುನರ್ಜನ್ಮಗಳಲ್ಲಿ ನಂಬಿಕೆಯಿತ್ತು. ಸತ್ತವರನ್ನು ಪೂಜಿಸುತ್ತಿದ್ದರು. ಮುಖ್ಯವಾಗಿ ಯಕ್ಷ-ಯಕ್ಷಿಣಿಯರ ಆರಾಧನೆಯಿತ್ತು. ಈಗ ಕ್ಯಾಂಡಿಯಲ್ಲಿ ಪ್ರತಿದಿನವೂ ವಿದೇಶಿ ಪ್ರವಾಸಿಗರನ್ನು ದೃಷಿಯಲ್ಲಿಟ್ಟುಕೊಂಡು ಕಲ್ಚರಲ್ ಶೋ ನಡೆಯುತ್ತಿದೆ. ಅಲ್ಲಿ ಕಲಾವಿದರು ಬಳಸುವ ಮುಖವಾಡಗಳು, ವಾದ್ಯಪರಿಕರಗಳು, ವಸ್ತ್ರವಿನ್ಯಾಸ, ಬಳಸುವ ಬಣ್ಣಗಳು- ಇವೆಲ್ಲವುಗಳಲ್ಲಿ ಬೌದ್ಧಪೂರ್ವದ ಸಿಂಹಳೀಯ ಸಂಸ್ಸ್ಕೃತಿಯನ್ನು ಕಾಣಬಹುದು.  ಆ ಕಾಲಕ್ಕೆ ಮೂಲನಿವಾಸಿಗಳ ಜೊತೆ ಸಾಕಷ್ಟು ಸಂಖ್ಯೆಯಲ್ಲಿ ಜೈನರೂ ಇದ್ದರು. ಆದರೆ ಈಗ ಅವರು ನಾಮಾವಶೇಷವಾಗಿದ್ದಾರೆ.

ರಾಮಾಯಣದ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಒಂದು ಕಾಲದಲ್ಲಿ ರಾವಣನ ಸ್ವರ್ಣಲಂಕೆಯೆಂದು ಕರೆಯಿಸಿಕೊಂಡಿದ್ದ ಶ್ರೀಲಂಕಾಗೆ ಹೋದವಳು ನಾನು. ಆದರೆ ಹೋದೆಡೆಯಲೆಲ್ಲಾ ನಮಗೆ ಕಂಡಿದ್ದು ರಾಮಾಯಣದ ಘಟನೆಗಳು ನಡೆಯಿತ್ತೆನ್ನಲಾದ ಜಾಗಗಳಲ್ಲಿ ನಿರ್ನಾಮಗೊಂಡಿರುವ ದೇವಾಲಯದ ಅವಶೇಷಗಳು, ಮತ್ತು ಅವುಗಳ ಅಸ್ತಿಭಾರದಲ್ಲಿಯೇ ಅರಳಿರುವ ಬೌದ್ಧಚೈತ್ಯಾಲಯಗಳು.
 ಶ್ರೀರಾಮಚಂದ್ರನು ವಿಭಿಷಣನಿಗೆ ಪಟ್ಟಾಭೀಷೇಕ ಮಾಡಿದನೆಂಬ ನಂಬಲಾದ ಕೆಲಿನಿಯಾ ಟೆಂಪಲ್ ಗೆ ಹೋದರೆ ಅಲ್ಲೇನಿದೆ? ಅದೀಗ ಬೌದ್ಧರ ಬಹುಮುಖ್ಯ ಆರಾಧನಕೇಂದ್ರ. ಪ್ರಾಚೀನ ಮಂದಿರವಿರಬಹುದೆಂದು ತೋರುವ ಎತ್ತರದ ಗೋಡೆಗಳ ಮೇಲೆಲ್ಲಾ ಸಸ್ಯಜನ್ಯ ಬಣ್ಣಗಳಿಂದ ಮಾಡಿದ ಚಿತ್ತಾರಗಳು. ವಿಶಾಲವಾದ ಪ್ರವೇಶಧ್ವಾರವನ್ನು ಪ್ರವೇಶಿಸಿ ನೀಲತಾವರೆಗಳಿಂದ ಅಲಂಕೃತನಾದ ಬುದ್ಧನಿಗೆ ಪ್ರದಕ್ಷಿಣೆ ಹಾಕಿ ಬರುತ್ತಿರುವಾಗ ಎಡ ಬದಿಯ ಗೋಡೆಯಲ್ಲಿ ಕೆತ್ತಿದ ಕೊಳಲನ್ನುದೂತ್ತಿರುವ ಗೋಪಾಲ ಕೃಷ್ಣ .. ವಿಭಿಷಣನನ್ನು ಹುಡುಕಲೇ ಬೇಕೆಂದು ಕಣ್ಣು ಕಿರಿದುಗೊಳಿಸಿ ಆ ಬಿರು ಬಿಸಿಲಿನಲ್ಲಿ ಬರಿಗಾಲಿನಲ್ಲಿ ದೇವಸ್ಥಾನ ಪೌಳಿಯುದ್ದಕ್ಕೂ ಸುತ್ತು ಹಾಕುತ್ತಿರುವಾಗ ಗರ್ಭಗುಡಿಯಲ್ಲಿರುವ ಬುದ್ಧನ ಹಿಂಬದಿಗೆ ಸರಿಯಾಗಿ ಬರುವಂತೆ ಪಟ್ಟಾಭಿಷೇಕದ  ಚಿತ್ರವನ್ನು ಕೆತ್ತಿದ್ದನ್ನು ಕಂಡೆ. 

ನಮ್ಮ ಮುಂದಿನ ಪ್ರವಾಸದುದ್ದಕ್ಕೂ ನಮಗೆ ಇಂತಹದೇ ಅನುಭವಗಳಾದವು. ಸೀತೆಯ ಅಗ್ನಿ ಪ್ರವೇಶ ನಡೆಯಿತ್ತೆನ್ನಲಾದ  ಲಿಟ್ಲ್ ಇಂಗ್ಲೆಂಡ್ ಎಂದು ಕರೆಯುವ ನೌರಾ ಎಲಿಯಾದ ದುವೊಂಪುಲಾ, ರಾವಣನ ಅರಮನೆ ಇತ್ತೆನ್ನಲಾದ ಸಿಗೇರಿಯಾ, ಕಟಿಗ್ರಾಮದ ಸುಪ್ರಸಿದ್ಧ ಸುಬ್ರಹ್ಮಮಣ್ಯ ಸ್ವಾಮಿ ದೇವಾಲಯ, ಎಲ್ಲಾ ಎಂಬಲ್ಲಿರುವ ರಾವಣನ ಪುರಾತನ ಗುಹೆ, ರಾವಣ ತನ್ನ ಒಂದು ತಲೆಯನ್ನು ಶಿವನಿಗರ್ಪಿಸಿದ ಎಂದು ನಂಬಿರುವ ಟ್ರಿಂಕಮಲೆಯ ತ್ರಿಕೋನೇಶ್ವರ ದೇವಾಲಯ. ಕ್ಯಾಂಡಿಯಲ್ಲಿರುವ ಬುದ್ಧ ಹಲ್ಲನ್ನು ಇಟ್ಟಿರುವ ಬುದ್ಧ ಟೂತ್ ರಿಕ್ ಟೆಂಪಲ್, ಅಶೋಕನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರ ಚಿನ್ನದ ಪಾತ್ರೆಯಲ್ಲಿ ತಂದ ಬುದ್ಧನಿಗೆ ಜ್ನಾನೋದಯವಾದ ಬೋಧಗಯಾದ ಬೋಧಿವೃಕ್ಷದ ರೆಂಬೆಯನ್ನು ಊರಿದ ಮತ್ತೆ ಅಲ್ಲಿಯೇ ಅವ್ರು ಮಾಹಾನಿರ್ವಾಣವಾದ ಅನುರಾಧಪುರ ಸೇರಿದಂತೆ ಎಲ್ಲಿಯೂ ನಮಗೆ ರಾಮಾಯಣದ ಪುರಾತನ ಕುರುಹಗಳು ದೊರೆಯುವುದಿಲ್ಲ. ಅದೆಲ್ಲವೂ ಬೌದ್ಧ ಮಂದಿರಗಳಾಗಿವೆ, ಹುಡುಕಿದರೆ ಹಿಂದೂ ಧರ್ಮದ ಕೆಲವು ಕುರುಹುಗಳನ್ನಷ್ಟೇ ಅಲ್ಲಿ ಕಾಣಬಹುದು.

ನಿಜ, ಒಬ್ಬ ದೊರೆ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದಾಗ ಅಲ್ಲಿಯ ಕಟ್ಟಡಗಳನ್ನು ನಾಶಪಡಿಸಿ, ಅಲ್ಲಿಯ ಸಂಸ್ಕೃತಿಯನ್ನು ಹತ್ತಿಕ್ಕಿ ತನ್ನದೇ  ಛಾಪನ್ನು ಒತ್ತುವುದು, ಅಲ್ಲಿಯ ಜನರನ್ನು ಮತಾಂತರಗೊಳಿಸುವುದನ್ನು ನಾವು ಇತಿಹಾಸದುದ್ದಕ್ಕೂ ಓದುತ್ತಾ ಬಂದಿದ್ದೇವೆ. ಅದು ಒಪ್ಪಿತ ಸತ್ಯ. ಇದು ಧರ್ಮಗಳಿಗೂ ಅನ್ವಯವಾಗುತ್ತದೆ. 
 ಬೌದ್ಧರು ಶಾಂತಿಪ್ರಿಯರು, ಕರುಣಾಳುಗಳು, ಅಧ್ಯಾತ್ಮದೆಡೆ ದೃಷ್ಟಿ ನೆಟ್ಟವರು ಎಂಬುದನ್ನು ನಾವು ಚರಿತ್ರೆಯಲ್ಲಿ ಓದಿದ್ದೇವೆ. ಅವರು ಕತ್ತಿಯ ಮೊನೆಯಲ್ಲಿ ಸಾಮ್ರಜ್ಯಗಳನ್ನು ಗೆದ್ದವರಲ್ಲ . ಪ್ರೀತಿಯಿಂದಲೇ ತಮ್ಮ ಧರ್ಮವನ್ನು ಜಗತ್ತಿನೆಲ್ಲೆಡೆ ಪಸರಿಸಿದವರು. ಆದರೆ ಮಯ್ನಮಾರು ನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರ ಮಾರಣ ಹೋಮ ನೋಡಿದರೆ ಹಾಗೆನ್ನಿಸುವುದಿಲ್ಲ. ಶ್ರಿಲಂಕಾವೂ ಆ ಸಾಲಿಗೆ ಸೇರುತ್ತದೆಯಾ?

 ಶಾಂತಿ ಮತ್ತು ಸಹಬಾಳ್ವೆಯನ್ನು ಭೋದಿಸಬೇಕಾಗಿದ್ದ, ಬೋದಿಸಿದ್ದನ್ನು ಆಚರಣೆಯಲ್ಲಿ ತರಬೇಕಾಗಿರುವ ಧರ್ಮಗಳು ಉಗ್ರತ್ವದ ರಕ್ತಸಿಕ್ತ [ಮಿಲಿಟೆಂಟ್] ಹಾದಿಯನ್ನು ತುಳಿಯುತ್ತಿದೆಯಾ? ಸಿರಿಯದಲ್ಲಾಗುತ್ತಿರುವ ಹಸುಕಂದಮ್ಮಗಳ, ನಾಗರಿಕರ ಪೈಶಾಚಿಕ ಹತ್ಯೆಗಳನ್ನು ನೋಡುತ್ತಿದ್ದರೆ, ಹೌದು ಎಂದು ಉತ್ತರಿಸಲೇಬೇಕಾಗಿದೆ. ಇದಕ್ಕೆ ಪರಿಹಾರವೇನು? ಗೊತ್ತಿಲ್ಲ, ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದು, ಸಂಪತ್ತನ್ನು ಕೂಡಿಡುವ ಲಾಲಸೆಯನ್ನು ಬಿಟ್ಟು ಪ್ರೀತಿ ಹಂಚಿಕೊಂಡು ಬಾಳಿದರೆ ಪರಿಸ್ಥಿತಿ ಸುಧಾರಿಸಬಹುದೇನೋ! ಅದೂ ಸರಿಯಾಗಿ ಗೊತ್ತಾಗುತ್ತಿಲ್ಲ.

[ ೧೧.೩.2018ರ ಉದಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಬರಹ]



Sunday, December 10, 2017

’ಮಜೂಲಿ ’ ಬ್ರಹ್ಮಪುತ್ರನ ಕಂದ!



ಏಳು ಸಮುದ್ರಗಳ ನಡುವೆಯೊಂದು ದ್ವೀಪ. ಅಲ್ಲಿ  ಬಂಧನದಲ್ಲಿರುವ ರಾಜಕುಮಾರಿ. ಅವಳನ್ನು ಬಿಡಿಸಿಕೊಂಡು ಬರಲು ಹೊರಟ್ ರಾಜಕುಮಾರ್. ಅವನು ಎದುರಿಸುವ ಸಂಕಷ್ಟಗಳು...ಇದೆಲ್ಲಾ ಬಾಲ್ಯದಲ್ಲಿ ನಾವು ಕಣ್ಣರಳಿಸಿಕೊಂಡು ಕೇಳುತ್ತಿದ್ದ ರಮ್ಯ ಕಥೆ.  ಆ ರಾಜಕುಮಾರಿ ನಾನಾಗಿದ್ದರೆ? ಆ ದ್ವೀಪಕ್ಕೆ ಹೋಗಲು ಸಾಧ್ಯವಾಗಿದ್ದರೆ?

ಹೌದು, ಕನಸುಗಾರರ. ಸಾಹಸಿಗಳ. ಏಕಾಂತಪ್ರಿಯರ ಮನಸ್ಸನ್ನು ಸೆಳೆಯುವ ನಿಗೂಡಶಕ್ತಿ ದ್ವೀಪಗಳಿಗಿದೆ; ಸಮುದ್ರಕ್ಕಿದೆ; ಸಮುದ್ರದಂತಹ ನದಿಗಿದೆ. ಬ್ರಹ್ಮಪುತ್ರವೆಂಬ ಉನ್ಮತ್ತ ನದಿಯ ಕಾಂತಶಕ್ತಿ ಇನ್ನೂ ವಿಸ್ತಾರವಾದದ್ದು. ಅಂತಹ ಕಾಂತಶಕ್ತಿಯಿಂದ ಸೆಳೆಯಲ್ಪಟ್ಟು ನಾನು ಮಜೂಲಿ ಎಂಬ ದ್ವೀಪಕ್ಕೆ ಹೋದೆ. ನನ್ನ ಪ್ರವಾಸದ ಪಟ್ಟಿಯಲ್ಲಿ ಮಜೂಲಿಯ ಹೆಸರಿರಲಿಲ್ಲ. ನನ್ನ ಗಮ್ಯ ಬ್ರಹ್ಮಪುತ್ರ ಎಂಬ ಮಹಾನದಿಯ ಚೊಚ್ಚಲ ಉತ್ಸವ ’ ನಮಾಮಿ ಬ್ರಹ್ಮಪುತ್ರ’ವನ್ನು ನೋಡುವುದಾಗಿತ್ತು ಆದರೆ ನಾನವನ ಮಗುವಿನ ಮೋಹದಲ್ಲಿ ಬಿದ್ದೆ.!

ಹೌದು! ಮಾಜೂಲಿ ಬ್ರಹ್ಮಪುತ್ರ ಸ್ರುಜಿಸಿದ ದ್ವೀಪ. ಜಗತ್ತಿನಲ್ಲಿಯೇ ನದಿಯೊಂದು ಹುಟ್ಟು ಹಾಕಿದ  ಅತ್ಯಂತ ದೊಡ್ಡ ದ್ವೀಪವಿದು. ಹಾಗೆಂದು ಗಿನ್ನಿಸ್ ಬುಕ್ ನಲ್ಲಿಯೂ ದಾಖಲಾಗಿದೆ.
ಸತ್ರದೊಳಗಿನ ಮೂಲದೇವರು ಕೃಷ್ಣ.
ಜಗತ್ತಿನ ಅತೀ ದೊಡ್ಡ ನದಿಗಳ ಪಟ್ಟಿಯಲ್ಲಿ ಭಾರತದ ಬ್ರಹ್ಮಪುತ್ರವೂ ಸೇರಿದೆ. ಅದೊಂದು ಉನ್ಮತ್ತ ನದಿ. ಬ್ರಹ್ಮದೇವನ ಪುತ್ರನಾದ ಕಾರಣ ಇದು ಬ್ರಹ್ಮಪುತ್ರ. ಹಾಗಾಗಿಯೇ ಇದು ಗಂಡುನದಿ, ಗಂಡಾದ ಕಾರಣದಿಂದಾಗಿಯೇ ಅಬ್ಬರ ಜಾಸ್ತಿ; ವಿದ್ವಂಸಕತೆಯೆಡೆಗೆ ಒಲವೆನ್ನಬಹುದೇ?. ಇದರ ಹರಹನ್ನು ನೋಡಿದವರು ಖಂಡಿತವಾಗಿಯೂ ಇದನ್ನು ನದಿಯೆನ್ನಲಾರರು ಅದೊಂದು ಸಮುದ್ರ.ಅದರಲ್ಲಿಯೂ ಸಾಗರದಂತೆ ಅಲೆಗಳೇಳುತ್ತವೆ. ಸೊಕ್ಕಿ ಹರಿದರೆ ಅಪಾರ ಸಂಖ್ಯೆಯಲ್ಲಿ ಆಸ್ತಿ ಮತ್ತು ಜೀವ ಹಾನಿಯನ್ನು ಉಂಟುಮಾಡುತ್ತದೆ. ಪ್ರತಿವರ್ಷವೂ ಈ ನದಿ ಉಕ್ಕಿ ಹರಿಯುತ್ತದೆ; ಇಲ್ಲಿಯ ಜನರ ದುಃಖಕ್ಕೆ ಕಾರಣವಾಗುತ್ತದೆ.

ಬ್ರಹ್ಮಪುತ್ರ ಅಸ್ಸಾಂ ಜನತೆಯ ಜೀವಚೈತನ್ಯವೂ ಹೌದು, ಕಣ್ಣೀರಿನ ನದಿಯೂ ಹೌದು. ೧೯೭೦ರಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಸುಮಾರು ಮೂರು ಲಕ್ಷದಿಂದ ಐದು ಲಕ್ಷದಷ್ಟು ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಈ ನದಿಯಲ್ಲಿ ನೆರೆ ಬಂದು ಕಾಜೀರಂಗ ನ್ಯಾಷನಲ್ ಪಾರ್ಕ್ ಮುಳುಗಿ ಅಸಂಖ್ಯಾತ ಪ್ರಾಣಿಗಳು ಕೊಚ್ಚಿ ಹೋಗಿದ್ದವು.
ಬ್ರಹ್ಮಪುತ್ರನ ಪುಟ್ಟ ಮಗು ಮಾಜುಲಿ. ಇದಕ್ಕಿರುವುದು ಕೇವಲ ನಾಲ್ಕು ಶತಮಾನಗಳ ಇತಿಹಾಸ.ಇದರ ಹುಟ್ಟಿನ ಕಥೆ ಕೇಳಿ;
ಮಾಜುಲಿ ಅಂದರೆ ಅಸ್ಸಾಮಿ ಭಾಷೆಯಲ್ಲಿ ಸಮಾನಂತರವಾಗಿ ಹರಿಯುವ ಎರಡು ನದಿಗಳ ನಡುವಿನ ಭೂಮಿ ಎಂದರ್ಥ. ಈಗ ನಮಗೆ ಗೋಚರವಾಗುವ ಮಾಜುಲಿ ದ್ವೀಪ ಹಿಂದೊಮ್ಮೆ ಬ್ರಹ್ಮಪುತ್ರನ ಒಡಲೊಳಗಿತ್ತು. . ಡಿಬಾಂಗ್ ಮತ್ತು ಬ್ರಹ್ಮಪುತ್ರ ನದಿಗಳು ಪರಸ್ಪರ ೧೯೦ ಕಿ.ಮೀ ದೂರದಲ್ಲಿ ಸಮಾನಂತರವಾಗಿ ಹರಿಯುತ್ತಿದ್ದವು. ಅದು ೧೭೫೦ ರ ಸಮಯ.ಸತತ ಹದಿನೈದು ದಿನಗಳ ಕಾಲ ಮಳೆ ಸುರಿಯಿತು. ಜೊತೆಗೆ ಆ ಪ್ರದೇಶದಲ್ಲಿ ಭೂಕಂಪನವೊಂದು ಸಂಭವಿಸಿತು. ಎರಡೂ ನದಿಗಳು ಹುಚ್ಚೆದ್ದು ಕುಣಿದು ತಮ್ಮ ತಮ್ಮ ಪಾತ್ರಗಳ ಮೇರೆ ಮೀರಿ ಹರಿದು ಒಂದನ್ನೊಂದು ಅಪ್ಪಿಕೊಂಡವು. ಆವರಿಬ್ಬರೂ ಸೇರಿ ಬಳುಕಿದ ಜಾಗದಲ್ಲಿ ಭೂಭಾಗವೊಂದು ನಿರ್ಮಾಣವಾಯ್ತು, ಅದುವೇ ಮಜೂಲಿ ದ್ವೀಪ.

ಸತ್ರದ ಹೊರಮೈ
ಮಜೂಲಿ ದ್ವೀಪ ಉದಯವಾದ ಕಾಲಕ್ಕೆ ಅದರ ವಿಸ್ತೀರ್ಣ ೧೨೨೫ ಚದರ ಕಿ.ಮೀ ಆಗಿತ್ತು. ಕ್ರಮೇಣ ಬ್ರಹ್ಮಪುತ್ರ ಅದನ್ನು ಕಬಳಿಸುತ್ತಾ ಬಂದು ಈಗ ಕೇವಲ ೫೨೦ ಚದರ ಕಿ.ಮೀ ಭೂಭಾಗ ಉಳಿದುಕೊಂಡಿದೆ. ಭೂಮಿಯ ತಾಪಮಾನ ಏರುತ್ತಲೇ ಇದೆ. ವಾತಾವರಣದಲ್ಲಿ ಅಸಾಧಾರಣವಾದ ಏರುಪೇರುಗಳಾಗುತ್ತಿದೆ. ಹಿಮಾಲಯ ಕರಗುತ್ತಿದೆ. ಹಾಗಾಗಿ ಬ್ರಹ್ಮಪುತ್ರನ ನೆರೆ ಹೆಚ್ಚುತ್ತಲೇ ಇದೆ. ಹೀಗೇ ಮುಂದುವರಿದರೆ ಇನ್ನೆರಡು ದಶಕದಲ್ಲಿ ಮಾಜುಲಿ ದ್ವೀಪ ಮತ್ತೆ ಬ್ರಹ್ಮಪುತ್ರನ ಒಡಲನ್ನು ಸೇರಲಿದೆ ಎಂದು ತಜ್ನರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವರ್ಷ ಮಾರ್ಚ್ ೩೧ರಿಂದ ಏಪ್ರಿಲ್ ೪ ರತನಕ ಅಸ್ಸಾಂನಲ್ಲಿ ’ನಮಾಮಿ ಬ್ರಹ್ಮಪುತ್ರ’ ಉತ್ಸವ ನಡೆಯಿತು. ಅದರಲ್ಲಿ ಭಾಗವಹಿಸುವುದಕ್ಕಾಗಿ ಅಸ್ಸಾಂನ ರಾಜಧಾನಿ ಗೌಹಾಟಿಗೆ ಹೋಗಿದ್ದೆ. ಈ ಹಿಂದೆ ಕಾಶ್ಮೀರದ ಲಡಾಕ್ ನಲ್ಲಿ ನಡೆಯುತ್ತಿರುವ ’ಸಿಂಧು ಉತ್ಸವ’ ವನ್ನು ನೋಡಿದ್ದೆ. ಹಾಗಾಗಿ ಇದನ್ನೂ ನೋಡುವ ಬಯಕೆ ಹುಟ್ಟಿತ್ತು. ಆದರೆ ಈ ಬಾರಿ ಅಸ್ಸಾಂಗೆ ವಾಡಿಕೆಯ ಮೊದಲೇ ಮಳೆಗಾಲ ಆರಂಭವಾದಂತಿತ್ತು. ಉದ್ಘಾಟನೆಯಂದು ಆರಂಭವಾದ ಮಳೆ ಸಮಾರೋಪದ ತನಕ ಎಡೆಬಿಡದೆ ಸುರಿಯಿತು. ಬ್ರಹ್ಮಪುತ್ರದ ದಂಡೆಯ ಮೇಲೆ ನಿರ್ಮಿಸಿದ ಮುಖ್ಯ ವೇದಿಕೆಯಲ್ಲಿ ಒಂದೇ ಒಂದು ಸಾಂಸ್ಕ್ರುತಿಕ ಕಾರ್ಯಕ್ರಮವೂ ನಡೆಯಲಿಲ್ಲ. ನಾನು ಮತ್ತು ನನ್ನ ಪ್ರೆಂಡ್ ಹೊರಗೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ಬೆಂಗಳೂರಿನ ರಣಬಿಸಿಲನ್ನು ನೆನಪಿಸಿಕೊಳ್ಳುತ್ತಾ ಎರಡು ದಿನ ಕಳೆದವು. ರಿಟರ್ನ್ ಟಿಕೇಟ್ ಬುಕ್ ಆಗಿದ್ದ ಕಾರಣದಿಂದ ಅಲ್ಲಿಯೇ ಉಳಿಯುವುದು ಅನಿವಾರ್ಯವಾಗಿತ್ತು. ಎರಡನೆಯ ರಾತ್ರಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾ  ಗೌಹಾಟಿಯ ಸುತ್ತಮುತ್ತ ಯಾವುದಾದರೂ ಪ್ರೇಕ್ಷಣಿಯ ಸ್ಥಳವಿದೆಯೇ ಎಂದು ಹುಡುಕಾಡತೊಡಗಿದೆವು. ಆಗ ಸಿಕ್ಕಿದ್ದೇ ಈ ಮಜೂಲಿಯೆಂಬ ಸ್ವರ್ಗ. ಸರಿ ಬ್ಯಾಗನ್ನು ಹೋಟೇಲ್ ನಲ್ಲೇ ಬಿಟ್ಟು ಬ್ಯಾಕ್ ಪ್ಯಾಕ್ ಏರಿಸಿಕೊಂಡು ರಾತ್ರಿ ಬಸ್ಸಿನಲ್ಲಿ ಕುಳಿತೆವು.

ಸತ್ರದ ಪ್ರವೇಶ ದ್ವಾರ.
 ಗೌಹಾಟಿಯಿಂದ ಮಜೂಲಿ ೩೦೦ ಕಿ.ಮೀ ದೂರದಲ್ಲಿದೆ. ಮಾಜುಲಿಗೆ ಹೋಗಲು ಎರಡು ಮಾರ್ಗಗಳಿವೆ, ಹತ್ತಿರದ ದಾರಿಯೆಂದರೆ ಗೌಹಾಟಿಯಿಂದ ಜೋರಾಟ್ ಗೆ ಹೋಗಬೇಕು. ಬಸ್ಸಿನಲ್ಲಾದರೆ ಆರು ಘಂಟೆ ಬೇಕು. ಅಲ್ಲಿಂದ ಶೇರ್ ಆಟೋ ಹಿಡಿದು ನಿಮಾಟಿ ಘಾಟ್ಗೆ ಬಂದರೆ ಅಲ್ಲಿ ಮಜೂಲಿಗೆ ಹೋಗುವ ಪೆರ್ರಿ ಸಿಗುತ್ತದೆ. ನಿಮಾಟಿ ಘಾಟ್ ಎಂಬುದು ಬ್ರಹ್ಮಪುತ್ರಾದ ನದಿ ಬಂದರು. ಗೌಹಾಟಿಯಿಂದ ಕಾರು ಮಾಡಿಕೊಂಡು ಬಂದರೆ ಕಾರು ಸಮೇತ ಪೆರ್ರಿಯಲ್ಲಿ ಸಾಗಬಹುದು. ನಿಮಟಿಘಾಟ್ ನಿಂದ ಮಜೂಲಿ ೨೦ ಕಿ.ಮೀ ದೂರದಲ್ಲಿದೆ. ಇನ್ನೊಂದು ಹಾದಿ ಲಕಮಿಪುರದ ಮೇಲೆ ನೇರ ಮಜೂಲಿಯನ್ನು ತಲುಪುವುದು. ಇದು ತುಂಬಾ ದೂರದ ಹಾದಿ ಒಂಬತ್ತು ಘಂಟೆಯ ಪಯಣ. ಈ ಹಾದಿಯಲ್ಲಿ ಪೆರ್ರಿಯಲ್ಲಿ ಹೋಗಬೇಕಾಗಿಲ್ಲ. ಬ್ರಹ್ಮಪುತ್ರ ಮತ್ತು ಮಜೂಲಿಯ ನಡುವೆ ಕಿರಿದಾದ ನದಿ ಹರಿವು ಇದ್ದೆಡೆಯಲ್ಲಿ ಭೂಮಿಯನ್ನೇ ಮುಂದೊತ್ತಿ ಒಂದು ಸೇತುವೆಯನ್ನು ನಿರ್ಮಿಸಿ ಅದರ ಮುಖಾಂತರ ಬಸ್ಸು ಹೋಗುವಂತೆ ಮಾಡಲಾಗಿತ್ತು. ನಾವು ಮಾಹಿತಿಯ ಕೊರತೆ ಕಾರಣವಾಗಿ ಈ ಬಸ್ಸಿನಲ್ಲಿ ಟಿಕೇಟ್ ರಿಸರ್ವ ಮಾಡಿಸಿದ್ದೆವು. ಬಸ್ಸು ಹತ್ತುವಾಗಲೇ ನಮಗೆ ಅನುಮಾನ ಮೂಡಿತ್ತು. ಅದರಲ್ಲಿದ್ದುದು ಕೆಲವೇ ಪ್ರಯಾಣಿಕರು. ಲಕುಮಿಪುರಕ್ಕೆ ಹೋಗುವ ಐದಾರು ಪ್ರಯಾಣಿಕರ ಜೊತೆ  ಮಜುಲಿಗೆ ಹೊರಟವರು ನಾವಿಬ್ಬರೇ!

ನಮ್ಮ ಗ್ರಹಚಾರ ನೆಟ್ಟಗಿರಲಿಲ್ಲ. ಮಧ್ಯರಾತ್ರಿಯಲ್ಲಿ ಯಾವುದೋ ಊರಲ್ಲಿ ಬಸ್ಸು ಕೆಟ್ಟು ನಿಂತಿತು. ಡ್ರೈವರ್ ರಿಪೇರಿ ಮಾಡಿದ, ಬಸ್ಸು ಮುಂದೆ ಹೋಗುತ್ತಿತ್ತು. ಮತ್ತೆ ಕೆಟ್ಟು ನಿಲ್ಲುತ್ತಿತ್ತು..ಮತ್ತೆ ..ಮತ್ತೆ..
ಆದಿವಾಸಿಗಳ ಗುಡಿಸಲು
ಬೆಳಿಗ್ಗೆ ಮಜೂಲಿಗೆ ತಲುಪಬೇಕಾದವ್ರು ಅಂತೂ ಇಂತೂ ಮಧ್ಯಾಹ್ನ ಒಂದೂವರೆಗೆ ತಲುಪಿದೆವು. ಆದರೆ ಬಹಳಷ್ಟು ಸಂದರ್ಭದಲ್ಲಿ ನನಗೆ ನಾನೇ ಹೇಳಿಕೊಳ್ಳುವ ಹಾಗೆ ಗುರಿಯಷ್ಟೇ ಮುಖ್ಯವಲ್ಲ ಅದನ್ನು ಕ್ರಮಿಸುವ ಹಾದಿಯೂ ಅಷ್ಟೇ ಮುಖ್ಯ ಎಂಬುದು ಇಲ್ಲಿಯೂ ಮನದಟ್ಟಾಯ್ತು. ದಾರಿಯ ಎರಡೂ ಬದಿಯಲ್ಲೂ ಹಸಿರೇ ಹಸಿರು. ಪೈರಿನಿಂದ ಕಂಗೊಳಿಸುವ ಹೊಲಗದ್ದೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದವು.ಅಲ್ಲಲ್ಲಿ ಸಿಗುತ್ತಿದ್ದ ಸ್ಥಳೀಯ ಮುಗ್ಧ ಜನರು, ಅವರ ಪ್ರೀತಿ, ವಿಶ್ವಾಸದ ಮಾತುಗಳ ಮಧ್ಯೆ ಪ್ರಯಾಣ ಕಷ್ಟವೆನಿಸಲಿಲ್ಲ.

ಮಜೂಲಿ ಬಸ್ ನಿಲ್ದಾಣ್ದಲ್ಲಿ ಇಳಿದ ಜಾಗದಲ್ಲಿ ಪುಟ್ಟ ಕಟ್ಟಡದ ಮಹಡಿ ಮೇಲೊಂದು ಊಟದ ಹೋಟೇಲಿತ್ತು. ಆ ಹೋಟಿಲಿನ ಓನರ್ ಒಬ್ಬ ನಗುಮೊಗದ ಯುವಕ, ಕಲ್ಕತ್ತಾದವನಂತೆ, ಅತ್ಯಂತ ಆದರದಿಂದ ಬಿಸಿ ಬಿಸಿಯಾದ ರುಚಿಯಾದ ಊಟ ಬಡಿಸಿದಾಗ ಆತನೊಬ್ಬ ದೇವದೂತನಂತೆ ನಮಗೆ ಕಂಡ. ಯಾಕೆಂದರೆ ಕಳೆದ ರಾತ್ರಿಯಲ್ಲಿ ಯಾವುದೋ ಊರಿನಲ್ಲಿ ಒಂದು ಮೀನು ಪ್ರೈ ತಿಂದಿದ್ದು ಬಿಟ್ಟರೆ  ಏನನ್ನೂ ತಿಂದಿರಲಿಲ್ಲ. ಬ್ಯಾಗಲಿದ್ದ ಬಿಸ್ಕತ್ತು, ಕುರುಕಲು ತಿಂಡಿಗಳು ಬೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಾಗಿದ್ದವು. ನಮ್ಮೊಡನೆ ನಮ್ಮ ಡ್ರೈವರ್ ಕೂಡಾ ಉಪವಾಸವಿದ್ದ. ಅಷ್ಟು ಅಡೆತಡೆಗಳಾದರೂ ತಮಾಶೆಯಾಗಿ ಹರಟುತ್ತಾ ಇದ್ದ ಕೆಲವೇ ಮಂದಿ ಪ್ರಯಾಣಿಕರನ್ನು ಉಲ್ಲಾಸದಿಂದಿಡಲು ಪ್ರಯತ್ನಿಸುತ್ತಿದ್ದ ಅವರ ನೆನಪು ಊಟ ಮಾಡುತ್ತಿರುವಾಗ ಕಾಡಿತು.
ಇದು ತುಲಸಿ ಮರದ ದಿಮ್ಮಿಯಂತೆ!
ಗೌಹಾಟಿಯಿಂದ ಹೊರಡುವಾಗಲೇ ಮಜೂಲಿಯಲ್ಲಿ ಒಂದು ವೆಹಿಕಲ್ ತಗೊಂಡು ಇಡೀ ದಿನ ದ್ವೀಪ ಸುತ್ತುವ ಪ್ಲಾನ್ ಮಾಡಿದ್ದೆವು. ಸಾಧ್ಯಾವಾದರೆ ಅಲ್ಲಿಯ ಮೂಲನಿವಾಸಿಯ ಮನೆಯಲ್ಲಿ ಅವರದೇ ಶೈಲಿಯ ಊಟ ಮಾಡಬೇಕೆಂದಿದ್ದೆವು. ಆದರೆ ಈ ಲಟಾರಿ ಬಸ್ಸಿನ ದೆಸೆಯಿಂದ ನಮ್ಮ ಪ್ಲಾನ್ ಎಲ್ಲಾ ಉಲ್ಟಾ ಆಗಿತ್ತು. ಈಗ ನಮ್ಮಲ್ಲಿ  ಹೆಚ್ಚೆಂದರೆ ಎರಡು ಘಂಟೆಯಷ್ಟೇ ಸಮಯವಿತ್ತು. ನಮ್ಮ ಸಮಸ್ಯೆಯನ್ನು ನಮಗೆ ಅನ್ನ ನೀಡಿದ ಯುವಕನಲ್ಲಿ ತೋಡಿಕೊಂಡಾಗ ಆತ ಮಹಡಿ ಮೇಲಿನಿಂದಲೇ ಕೆಳಗಿದ್ದ ಕಾರಿನವನಿಗೆ ಏನೋ ಹೇಳಿ ನಮ್ಮತ್ತ ತಿರುಗಿ’ ಆ ಕಾರಿನಲ್ಲಿ ಹೋಗಿ ಆತ ನಿಮ್ಮನ್ನು ಊರಲ್ಲಾ ಸುತ್ತಾಡಿ ನಿಮ್ಮನ್ನು ಪೆರ್ರಿಗೆ ಸಕಾಲದಲ್ಲಿ ತಲುಪಿಸುತ್ತಾನೆ ಎಂದ. ನಿಮಿಟಿಘಾಟ್ ಗೆ ಹೋಗುವ ಕೊನೆಯ ಪೆರ್ರಿ ಮೂರೂವರೆಗೆ ಎಂದು ಗೊತ್ತಾಯ್ತು. ಅಷ್ಟರೊಳಗೆ ಅಂದರೆ ಒಂದೂಮುಕ್ಕಾಲು ಘಂಟೆಯೊಳಗೆ ನಾವು ಊರೆಲ್ಲಾ ಸುತ್ತಬೇಕಾಗಿತ್ತು; ಹೊರಟೆವು. ಪ್ರವಾಸ ಕಾಲದಲ್ಲಿ ಪ್ಲಾನ್ ಗಳು ತಲೆ ಕೆಳಗಾಗುವುದು ಸಾಮನ್ಯ. ಆಗ ಅದನ್ನು ತಮಗೆ ಅನುಕೂಲಕರವಾಗುವಂತೆ ಪರಿವರ್ತಿಸಿಕೊಳ್ಳುವುದೂ ಒಂದು ಕಲೆ. ’ಇದಲ್ಲದಿದ್ದರೆ ಅದು. ಅದು ಸಾಧ್ಯವಾಗದಿದ್ದರೆ ಇದು ” ಅಷ್ಟೇ. ಮುಖ ಬಾಡಿಸಿಕೊಂಡು ಯಾರನ್ನೋ ಬಯ್ದುಕೊಂಡು, ಅದ್ರುಷ್ಟವನ್ನು ಹಳಿದುಕೊಂಡು ಕೈಚೆಲ್ಲಿ ಕುಳಿತುಕೊಳ್ಳಬಾರದು. .

ತುಲಸಿ ಮರ!
೫೨೦ ಚದರ ಕಿ.ಮೀ ಸುತ್ತಳತೆಯ ಮಜೂಲಿ ಜಿಲ್ಲೆಯ ಜನಸಂಖ್ಯೆ ಸುಮಾರು ಒಂದು ಲಕ್ಷದ ಅರುವತ್ತೇಳು ಸಾವಿರ. ಕಾರಲ್ಲಿ ಕೂತ ಒಡನೆಯೇ ನಾವು ಭೇಟಿ ಕೊಟ್ಟದ್ದು ಇಲ್ಲಿಯ ಸತ್ರಗಳಿಗೆ. ಸತ್ರಗಳು ಮಾಜೂಲಿಯ ವೈಶಿಷ್ಟತೆಗಳಲ್ಲೊಂದು. ೧೬ನೇಯ ಶತಮಾನದ ಸಮಾಜ ಸುಧಾರಕ ಶಂಕರದೇವ ಈ ದ್ವೀಪಕ್ಕೆ ಭೇಟಿ ನೀಡಿ ೬೫ ಸತ್ರಗಳನ್ನು [ಧಾರ್ಮಿಕ ಕೇಂದ್ರ] ಸ್ಥಾಪಿಸಿ ವೈಷ್ಣವ ಧರ್ಮವನ್ನು ಪ್ರಚುರಪಡಿಸಿದರಂತೆ. [ ಅಂದರೆ ೧೬ ಶತಮಾನದಲ್ಲಿ ಈ ದ್ವೀಪ ಅಸ್ತಿತ್ವದಲ್ಲಿತ್ತು] ಈಗಲೂ ಅಲ್ಲಿ ೨೨ ಸತ್ರಗಳಿವೆ. ಇವುಗಳು ಪುರಾತನ ಸಾಹಿತ್ಯ, ಸಂಸ್ಕ್ರುತಿ, ಆಚಾರ ವಿಚಾರಗಳನ್ನು ಪೋಷಿಸುತ್ತವೆ ಮಾತ್ರವಲ್ಲ ದ್ವೀಪದ ಪರಂಪರೆಯ ಗುರುತುಗಳಾದ ಕಲಾಕ್ರುತಿಗಳು, ಆಯುಧಗಳನ್ನು ಸಂರಕ್ಷಿಸಿ ಇಡುವ ತಾಣಗಳಾಗಿವೆ. ನನ್ನನ್ನು ಹೆಚ್ಚು ಆಕರ್ಷಿಸಿದ್ದು ಔನಿಯಟಿ [Auniati ] ಸತ್ರ. ನಾವು ಹೋದಾಗ ಪುಟ್ಟ ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ಸ್ಥಳೀಯ ಜಾನಪದ ಶೈಲಿಯ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅಲ್ಲಿ ಅಭ್ಯಾಸ ಮಾಡುತ್ತಿದ್ದ ಸಂಗೀತದ ಆಲಾಪನೆ ಮತ್ತು ದೀಪದ ಪರಿಕರಗಳು ತುಂಬಾ ಆಸಕ್ತಿದಾಯಕವಾಗಿದ್ದವು. ಇದೆಲ್ಲಕ್ಕಿಂತಲೂ ನನಗೆ ಅತೀ ಅಚ್ಚರಿಯನ್ನು ಉಂಟು ಮಾಡಿದ್ದು ಅಲ್ಲಿನ ಮುಖ್ಯ ಪುಜಾರಿ\ ಮೇಲ್ವಿಚಾರಕರು ಪರಿಚಯಿಸಿದ್ದ  ತುಳಸಿ ಮರದ ದಿಮ್ಮಿಗಳು. ನನ್ನ ಜೀವಮಾನದಲ್ಲೇ ಮೂರಡಿಗಿಂತ ಎತ್ತರದ ತುಳಸಿ ಗಿಡವನ್ನು ನೋಡಿರಲಿಲ್ಲ. ಹಾಗಿರುವಾಗ ಅಷ್ಟು ದೊಡ್ಡ ಗಾತ್ರದ ಮರದ ದಿಮ್ಮಿಗಳನ್ನು ತೋರಿಸಿ ಇವು ತುಳಸಿ ಮರಗಳೆಂದು ತೋರಿಸಿದರೆ ನನಗೆ ಹೇಗಾಗಬೇಡ!.. ಸಮಯ ಕಮ್ಮಿ ಇತ್ತು. ಆದರೂ ಅದರ ಪೋಟೋ ಮತ್ತು ವಿಡಿಯೋ ತಗೊಂಡೆ. ಅಲ್ಲಿಂದ ಇನ್ನೊಂದು ಸತ್ರಕ್ಕೆ ಹೋದೆ ಅಲ್ಲಿಯ ಕಟ್ಟಡವನ್ನು ತುಳಸಿ ಮರದ ದಿಮ್ಮಿಗಳಿಂದಲೇ ಕಟ್ಟಲಾಗಿತ್ತು!.’

ಅಲ್ಲಿಯ ಮೂಲನಿವಾಸಿಗಳು ಸರಳಾತಿ ಸರಳರು.  ಸ್ಥಳೀಯವಾಗಿ ಹೇರಳವಾಗಿ ಸಿಗುವ ಬಿದಿರಿನಿಂದ ಕಟ್ಟಿರುವ ತಟ್ಟಿ ಮನೆಗಳು. ಅವು ನೆಲದಿಂದಲೇ ಗೋಡೆಯೆಬ್ಬಿಸಿ ಕಟ್ಟಿದ ಮನೆಗಳಲ್ಲ ; ಸದಾ ನೀರಲ್ಲಿ ಮುಳುಗುವ ಪ್ರದೇಶವಾದ ಕಾರಣ ಎತ್ತರದ ಕಂಬಗಳ ಮೇಲೆ ಮನೆ ಕಟ್ಟಿಕೊಂಡಿರುತ್ತಾರೆ. ಕಳೆದ ವರ್ಷದಿಂದ ಇದು ಜಿಲ್ಲೆಯಾಗಿ ಪರಿವರ್ತನೆಗೊಂಡಿರುವುದರಿಂದ ಇಲ್ಲಿ ಪೋಲಿಸ್, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿಯೂ ಸೇರಿದಂತೆ ಎಲ್ಲಾ ಸರಕಾರಿ ಕಚೇರಿಗಳು, ಸ್ಕೂಲ್ ಕಾಲೇಜುಗಳೂ ಇವೆ. ಚಿಕ್ಕದಾದ ಮೂರ್ನಾಲ್ಕು ಪೇಟೆಗಳಿವೆ. ಈಗ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಬ್ರಾನಂದ ಸೋನುವಾಲ ಈ ಜಿಲ್ಲೆಗೆ ಸೇರಿದವರು.

 ಕೇಂದ್ರ ಸರಕಾರವು ಪ್ರೆಂಚ್ ಸರಕಾರದ ಸಹಯೋಗದಲ್ಲಿ ಇದನ್ನು ಕಾರ್ಬನ್ ಮುಕ್ತ ಜಿಲ್ಲೆಯಾಗಿಸಲು ಯೋಜನೆಗಳನ್ನು ಹಾಕಿಕೊಂಡಿದೆ. ಹಾಗಾದಲ್ಲಿ ಅದು ನಮ್ಮ ದೇಶದ ಮೊದಲ ಕಾರ್ಬನ್ ಮುಕ್ತ ಜಿಲ್ಲೆಯೆನಿಸಲಿದೆ..
ಮಾಜೂಲಿ ಜನರಿಗೆ ವ್ಯವಸಾಯವೇ ಮುಖ್ಯ ವ್ರುತ್ತಿ. ಭತ್ತ ಬಹುಮುಖ್ಯ ಬೆಳೆ. ಇಲ್ಲಿ ನೂರಕ್ಕೂ ಹೆಚ್ಚಿನ ಭತ್ತದ ತಳಿಗಳಿವೆ. ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೆ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುತ್ತಾರೆ. ಡೈರಿ, ಕುಂಬಾರಿಕೆ, ಕೈಮಗ್ಗ ನೇಕಾರಿಕೆ ಇತರ ಉಪಉದ್ಯೋಗಗಳು. ಸಾಲ್ಮರ ವಿಲೇಜ್ ನಲ್ಲಿ ಕೈಗಳಿಂದಲೇ ಮಡಕೆ ಮತ್ತು ಮುಖವಾಡಗಳನ್ನು ತಯಾರಿಸುವ ಕುಶಲಕರ್ಮಿಗಳಿದ್ದಾರೆ. ಈ ಕಲೆಗಾರಿಕೆಯ ಬಗ್ಗೆ ಅರ್ಕ್ಯಾಲಾಜಿಸ್ಟ್ ಗಳು ಆಳವಾದ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಅವರ ಪ್ರಕಾರ ಇದು ಹರಪ್ಪಾ ಮೊಹೆಂಜದಾರೋ ನಾಗರಿಕತೆಯ ನಡುವಿನ ಮಿಸ್ಸಿಂಗ್ ಲಿಂಕ್ ಎನ್ನುತ್ತಾರೆ.
ಮಜೂಲಿ ವೈಷ್ಣವಪಂಥದ ಆರಾಧನ ಭೂಮಿಯಾಗಿರುವ ಕಾರಣದಿಂದಾಗಿ ಹೋಳಿ\ ರಾಸಲೀಲಾ ಈ ದ್ವೀಪದ ಸಂಭ್ರಮದ ಹಬ್ಬ. ಇಲ್ಲಿಗೆ ಹಲವು ಜಾತೀಯ ಅಪರೂಪದ ಪಕ್ಷಿಗಳು ಬರುತ್ತವೆ. ಈ ಕಾರಣದಿಂದ ಪಕ್ಷಿಪ್ರಿಯರಿಗೂ ಇದು ಆಕರ್ಷಕ ಜಾಗ. ಇಲ್ಲಿ ಅಪರೂಪದ ಔಷಧಿಯ ಸಸ್ಯಗಳೂ ಇವೆ.

ನಮ್ಮಲ್ಲಿ ಸಮಯ ಬಹಳ ಕಮ್ಮಿ ಇತ್ತು. ಹಾಗಾಗಿ ಮಜೂಲಿಯಲ್ಲಿ ನಡೆಯುತ್ತಿದ್ದ ನಮಾಮಿ ಬ್ರಹ್ಮಪುತ್ರಾ ಉತ್ಸವನ್ನು ಕಾರಿನಲ್ಲೇ ನೋಡುತ್ತಾ ಪೆರ್ರಿ ನಿಲ್ಲುವ ಜಾಗಕ್ಕೆ ಬಂದೆವು. ಹಾಗೆ ಬರುತ್ತಿರುವಾಗ ಗೊತ್ತಾಯ್ತು, ಬ್ರಹ್ಮಪುತ್ರಾದ ಹರವು ಎಷ್ಟು ದೊಡ್ಡದೆಂದು. ನದಿ ಬೀಚ್ ಮೇಲೆಯೇ ನಾವು ಆರು ಕಿಮೀ ಬಂದೆವು. ಪೆರ್ರಿ ನಿಲ್ಲುವ ಜಾಗದಲ್ಲಿ ಟೀ ಸ್ಟಾಲ್, ಪ್ಯಾನ್ಸಿ ಸ್ಟೋರ್ ಸೇರಿದಂತೆ ಹಲವಾರು ಅಂಗಡಿಗಳಿದ್ದವು. ಪೆರ್ರಿಯಲ್ಲಿ ಬಂದ ಜನರನ್ನು ಕರೆದೊಯ್ಯಲ್ಲು ಹತ್ತರು ವಾಹನಗಳು ನಿಂತಿದ್ದವು.
ಮಜೂಲಿಗೆ ಬರುವಾಗ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಬಂದಿದ್ದೆವು. ಹೋಗುವಾಗ ಬ್ರಹ್ಮಪುತ್ರನ ಒಡಲಲ್ಲಿ ಓಲಾಡುತ್ತಾ ತೇಲಾಡುತ್ತಾ ಮೌನವಾಗಿ ಸಾಗುತ್ತಿದ್ದೆವು. ನಿಮಿಟಿ ಘಾಟ್ ಎಂಬ ನದಿ ಬಂದರು ತಲುಪಲು ಎರಡುವರೆ ಘಂಟೆಯ ನದಿ ಪಯಣ. ಆಗಾಗ ನೀಲ ಆಗಸದತ್ತ  ನೋಟ ಬೀರುತ್ತಾ ದಿಗದಂಚಿನಲ್ಲಿ ಎಲ್ಲಾದರೂ ಭೂಮಾತೆ ಬ್ರಹ್ಮಪುತನನ್ನು ಆಲಂಗಿಸುತ್ತಿರುವ ದ್ರುಶ್ಯ ಕಾಣಸಿಗಬಹುದೇ ಅಂತ ಕ್ಯಾಮಾರದಲ್ಲಿ ಕಣ್ಣಿಟ್ಟು ಕೂತೆ. ನಿರಾಶೆಯಾಯ್ತು.. ನೀರು ಎಲ್ಲೆಲ್ಲೂ ನೀರು.. ಹಿಂದೆ ತಿರುಗಿದರೆ ಮಜೂಲಿ ಬರಬರುತ್ತಾ ಚುಕ್ಕೆಯಾಗಿ ನೀರಿನಲ್ಲಿ ಲೀನವಾಯ್ತು.

[ ಪ್ರಜಾವಾಣಿಯ ಸಾಪ್ತಾಹಿಕ ’ಮುಕ್ತಛಂಧದಲ್ಲಿ ಪ್ರಕಟವಾದ ಬರಹ ]