Wednesday, January 28, 2009

ಪಬ್ ದಾಳಿ; ನಮ್ಮನ್ನು ದೇವರೇ ಕಾಪಾಡಬೇಕು!




ಮಂಗಳೂರಿನಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಪಬ್ ಮೇಲೆ ದಾಳಿ ನಡೆಸಿ ಮಹಿಳೆಯರನ್ನು ಅಟ್ಟಾಡಿಸಿಕೊಂಡು ಹೊಡೆದ ಸುದ್ದಿ ರಾಷ್ಟ್ರ್‍ಆದ್ಯಂತ ಪ್ರಚಾರ ಪಡೆಯಲು ಕಾರಣವಾದ ಅಂಶಗಳೇನು?

ಮೆಲ್ನೋಟಕ್ಕೆ ಇದು ಮಹಿಳಾಪರವಾದ ಮಾದ್ಯಮಗಳ ನಿಲುವು ಅನ್ನಿಸುತ್ತದೆ, ನಿಜ. ಆದರೆ ಇಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಕೆಲಸ ಮಾಡಬೇಕಾದ, ಫೋರ್ತ್ ಎಸ್ಟೇಟ್ ಎಂದು ಕರೆಸಿಕೊಳ್ಳುವ ಪತ್ರಿಕಾ ಮಾದ್ಯಮವೂ ಖಾಕಿ, ಕಾವಿ ಮತ್ತು ಖಾದಿಗಳ ಜೋತೆ ಸೇರಿಕೊಂಡಿದೆಯೇ?

ಹೌದು ಎನ್ನಲು ಕಾರಣಗಳಿವೆ.

ಪಬ್ ಮೇಲೆ ದಾಳಿ ನಡೆದದ್ದು, ಜನವರಿ ೨೪ರ ಶನಿವಾರದ ಇಳಿ ಮದ್ಯಾಹ್ನದಲ್ಲಿ. ದಾಳಿಯ ವಿಚಾರವನ್ನು ಸೇನೆಯ ಕಾರ್ಯಕರ್ತರು ಒಂದು ಘಂಟೆಯ ಮುಂಚಿತವಾಗಿಯೇ ಮಾದ್ಯಮದವರಿಗೆ ತಿಳಿಸಿದ್ದರು. ಯಾಕೆಂದರೆ ಅವರಿಗೆ ಪ್ರಚಾರ ಬೇಕಾಗಿತ್ತು.

ಆರೇಳು ಕ್ಯಾಮರಮ್ಯಾನ್ ಗಳು, ಎರಡ್ಮೂರು ಪೊಟೋಗ್ರಾಫರುಗಳು, ಮೂರು ಜನ ಮುದ್ರಣ ಮಾದ್ಯಮದ ವರದಿಗಾರರು ದಾಳಿಯ ಸಮಯದಲ್ಲಿ ಅಲ್ಲಿ ಹಾಜರಿದ್ದರು. ದೃಶ್ಯ ಮಾದ್ಯಮದಲ್ಲಿ ಸುದ್ದಿ ಹೈಲೈಟ್ ಆಗುವುದು ಸೇನೆಗೆ ಬೇಕಾಗಿತ್ತು. ಆದರೆ ಅದು ಉಲ್ಟಾ ಹೊಡೆಯಿತು.ಸೇನೆಗೆ ಉರುಳಾಯಿತು.

ನೀವು ಗಮನಿಸಿರಬಹುದು; ಶನಿವಾರದಂದು ಪಬ್ ಮೇಲೆ ನಡೆದ ದಾಳಿ ಮರುದಿನ ’ಹಿಂದು’ವನ್ನು ಹೊರತುಪಡಿಸಿ ಇನ್ಯಾವ ಪ್ರಮುಖ ಪತ್ರಿಕೆಯಲ್ಲೂ ವರಧಿಯಾಗಲಿಲ್ಲ. ಸುದ್ದಿವಾಹಿನಿಗಳೂ ಅನಗತ್ಯ ಲಂಬಿಸಲಿಲ್ಲ. ಆದರೆ ಭಾನುವಾರ ಈ ಸುದ್ದಿ ವೇಗವನ್ನು ಪಡೆದುಕೊಂಡಿತು. ಅದಕ್ಕೆ ಕಾರಣವಾದದ್ದು ’ಟೈಮ್ಸ್ ನೌ’ ಎಂಬ ಸುದ್ದಿ ವಾಹಿನಿ. ಅದು ಹಾಗೆ ಮಾಡಲು ಕಾರಣವಿತ್ತು.

ಸುಮಾರು ಎರಡ್ಮೂರು ತಿಂಗಳುಗಳ ಹಿಂದೆ ಮಂಗಳೂರಿನಲ್ಲಿ ಟೈಮ್ಸ್ ಗ್ರೂಪಿನವರು ಪ್ಯಾಂಟಲೂಮ್ ನವರ ಸಹಭಾಗಿತ್ವದಲ್ಲಿ ಸೌಂದರ್ಯ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು. ಅದು ’ಮಿಸ್ ಸೌತ್ ಇಂಡಿಯಾ’ ಸ್ಪರ್ಧೆಯ ಪೂರ್ವಭಾವಿ ಸ್ಪರ್ದೆಯಾಗಿತ್ತು. ಆಗ ಅದನ್ನು ಶ್ರೀರಾಮ ಸೇನೆ ವಿರೋಧಿಸಿ ದಾಂಧಲೆ ನಡೆಸಿತ್ತು. ಸ್ಪರ್ದೆ ನಡೆಯಲಿಲ್ಲ.

ಆ ಸೇಡನ್ನು ಟೈಮ್ಸ್ ಗ್ರೂಪ್ ನವರು ಈಗ ತೀರಿಸಿಕೊಂಡರು. ಸೇನೆಯ ಕಾರ್ಯಕರ್ತರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆಯುವ ವಿಶುವಲ್ಸ್ ಗಳನ್ನು ಪದೇ ಪದೇ ಪ್ರಸಾರ ಮಾಡಿ ದೇಶದ ಗಮನ ಸೆಳೆದರು. ಇದರ ಜೋತೆ ಎನ್ ಡಿ ಟೀವಿ ಸೇರಿಕೊಂಡಿತು. ಸುದ್ದಿಯ ಹಸಿವಿನಿಂದ ಬಳಲುತ್ತಿರುವ ಇತರ ಸುದ್ದಿವಾಹಿನಿಗಳಿಗೂ ರುಚಿಕಟ್ಟಾದ ಊಟ ಸಿಕ್ಕಿತು.

ಇನ್ನು ಸುದ್ದಿಯ ಮೂಲಕ್ಕೆ ಬರುವುದಾದರೆ, ಪಬ್ ಮೇಲಿನ ಧಾಳಿ ಭಜರಂಗಿಗಳ ಅರ್ಥಾತ್ ಶ್ರೀರಾಮ ಸೇನೆಯ ಮಂಗಾಟಗಳಲ್ಲಿ ಇದೂ ಒಂದು. ಮಂಗಾಟ ಎಂದು ಯಾಕೆ ಕರೆದೆನೆಂದರೆ, ಭಜರಂಗಿ ಅಂದ್ರೆ ಅರ್ಥ ಏನು? ಹನುಮಂತ; ಕಪಿ. ಶ್ರೀರಾಮ ಸೇನೆ ಯಾವುದು? ಕಪಿ ಸೈನ್ಯ. ಅಂದ್ರೆ ಮಂಗಗಳು. ಕಪಿಗಳು ಮಾಡೋದು ಕಪಿಚೇಷ್ಟೆ ತಾನೆ?

ಆದರೇನು ಮಾಡೋದು, ಕಪಿಚೇಷ್ಟೆಯನ್ನು ನಾಗರಿಕ ಸಮಾಜ ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ. ಅವರ ಕಪಿಚೇಷ್ಟೆಯ ಬಗ್ಗೆ ಈ ಹಿಂದೆ ’ಬಳೆಗಾರ ಚೆನ್ನಯ್ಯನಂಥ ಬ್ಯಾರಿಗಳು’ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಹಾಗಾಗಿ ಮತ್ತೆ ಬರೆಯಲು ಹೋಗುವುದಿಲ್ಲ.

ಶ್ರೀರಾಮಸೇನೆ ಪಬ್ ಮೇಲಿನ ದಾಳಿಗೆ ಕೊಟ್ಟುಕೊಳ್ಳುವ ಸಮರ್ಥನೆ ಏನೆಂದರೆ, ಪಬ್ ಸಂಸ್ಕೃತಿ ನಮ್ಮದಲ್ಲ; ಅಲ್ಲಿ ಅಶ್ಲೀಲ ನೃತ್ಯ ನಡೆಯುತ್ತಿತ್ತು; ಹುಡುಗಿಯರು ಮದ್ಯ ಸೇವಿಸುತ್ತಿದ್ದರು; ಅರೆಬೆತ್ತಲೆಯಾಗಿದ್ದರು.

ವರದಿಗಾರರು ಸುದ್ದಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು; ತಿರುಚಿ ಬರೆಯಬಹುದು; ಬೈಟ್ ಗಳನ್ನು ಕಾಂಟೆಕ್ಸ್ಟ್ ನಾಚೆ ತುರುಕಿ ತಮಗೆ ಬೇಕಾದಂತೆ ಅರ್ಥ ಹೊರಡಿಸಬಲ್ಲರು. ಆದರೆ ಕ್ಯಾಮರ ಎಂದೂ ಸುಳ್ಳು ಹೇಳಲಾರದು. ಆ ಹುಡುಗಿಯರೆಲ್ಲಾ ಮೈ ತುಂಬಾ ಬಟ್ಟೆ ಹಾಕಿಕೊಂಡಿದ್ದರು. ಅವರನ್ನು ಗಂಡಸರು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದರು. ಇದು ಕಣ್ಣಿಗೆ ಕಂಡ ಸತ್ಯ.

ಈ ಕಪಿ ಸೈನಕ್ಕೆ ನನ್ನ ಕೆಲವು ಪ್ರಶ್ನೆಗಳಿವೆ. ಸಮಾಜಕ್ಕೆ ನೀತಿಪಾಠವನ್ನು ಬೋಧಿಸುವ ಕೆಲಸವನ್ನು ಇವರಿಗೆ ಯಾರು ವಹಿಸಿದ್ದಾರೆ? ಅದಕ್ಕೆ ಗೌರವಧನವನ್ನು ಯಾರು ಕೊಡುತ್ತಾರೆ?. ಭಾರತಿಯ ಸಂಸ್ಕೃತಿಯೆಂದರೆ ಹಿಂದು ಸಂಸ್ಕೃತಿ ಮಾತ್ರವೇ? ಅದನ್ನು ರಕ್ಷಿಸುವ ಹೊಣೆಗಾರಿಕೆ ಮಹಿಳೆಯದೇ?
ಇನ್ನೊಂದು ವಿಷಯವನ್ನು ಅವರ ಗಮನಕ್ಕೆ ತರಬೇಕಾಗಿದೆ; ಪಬ್ ಗಳಿಗೆ ಹೋಗುವ ಮಹಿಳೆಯರು ಅವಿದ್ಯಾವಂತರಲ್ಲ. ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಸ್ಪಷ್ಟ ಅರಿವಿದೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶಗಳಿರುವ ಭಾರತ ದೇಶವೆಂಬ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವು ಬದುಕುತ್ತಿದ್ದೇವೆಂದು ನಾನು ಭಾವಿಸಿಕೊಂಡಿದ್ದೇನೆ.

ಕಪಿ ಸೈನದ ’ನೈತಿಕ ಪೋಲಿಸ್’ ಪಡೆಯ ಉಪಟಳಕ್ಕೆ ಕರಾವಳಿ ನಲುಗಿ ಹೋಗಿದೆ. ತುಳು ನಾಡಿಗೆ ಎಂತಹ ಭವ್ಯ ಪರಂಪರೆಯಿತ್ತು!. ಮುಸ್ಲಿಂ ಜನಾಂಗದಲ್ಲಿ ಹುಟ್ಟಿದ ಬೊಬ್ಬರ್ಯ, ಅಲಿ ಎಂಬವರು ದೈವವಾಗಿ ಇಂದಿಗೂ ಹಿಂದುಗಳಿಂದ ಆರಾಧನೆಗೊಳ್ಳುತ್ತಾರೆ. ಹಾಗೆಯೇ ಕೆಳವರ್ಗದಲ್ಲಿ ಹುಟ್ಟಿದ ಕಲ್ಕುಡ್ಕ-ಕಲ್ಲುರ್ಟಿ, ಕಾಂತಬಾರೆ-ಬೂದಬಾರೆ ಮುಂತಾದ ದೈವಗಳು ಮೆಲ್ವರ್ಗದಿಂದಲೂ ಆರಾಧನೆಗೊಳ್ಳುತ್ತಿದ್ದಾರೆ. ಪ್ರಾಣಿಗಳನ್ನೂ ದೈವವೆಂದು ಆರಾಧಿಸುವ ನಾಡಿದು.

ಶಿಷ್ಟ ಪರಂಪರೆಯಲ್ಲಿ ದ್ರೌಪದಿಯನ್ನು ಸ್ವಾಭಿಮಾನಿ ಹೆಣ್ಣಾಗಿ ಚಿತ್ರಿಸಲಾಗಿದೆ. ಆದರೆ ತುಳು ಜಾನಪದದಲ್ಲಿ ಅವಳನ್ನು ಮೀರಿಸುವ ಹೆಣ್ಣೊಬ್ಬಳಿದ್ದಾಳೆ. ಅವಳೇ ಸಿರಿ. ಬಹುಶಃ ಗಂಡನ ನೈತಿಕತೆಯನ್ನು ಪ್ರಶ್ನಿಸಿ, ತಾನಾಗಿಯೇ ವಿಛ್ಚೇಧನ ನೀಡಿದ ಮೊದಲ ಹೆಣ್ಣು ಈಕೆ. ಇಂಥ ಮಣ್ಣಿನಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಮೊನ್ನೆ ಪುರುಷ ದೌರ್ಜನ್ಯಕ್ಕೆ ತುತ್ತಾಗಿ ಅಸಹಾಯಕರಾಗಿ ಕೆಳಗೆ ಬೀಳುತ್ತಿರುವುದನ್ನು ಕಂಡಾಗ ರೋಷ ಉಕ್ಕದಿರಲು ಸಾಧ್ಯವೇ?

ಒಂದು ದೇಶದ- ರಾಜ್ಯದ- ಆಂತರಿಕ ಸುಭದ್ರತೆ ಗೃಹ ಇಲಾಖೆಗೆ ಸಂಬಂದಿಸಿದ್ದು. ಗೃಹಸಚಿವರು ಸಮರ್ಥರಾಗಿದ್ದರೆ ಗೃಹ ಇಲಾಖೆಯೂ ಸದೃಢವಾಗಿರುತ್ತದೆ. ನಮ್ಮ ಗೃಹ ಸಚಿವರು ಎಂಥವರೆಂಬುದು ಅವರು ಅಧಿಕಾರ ವಹಿಸಿಕೊಂಡ ತಕ್ಷಣ ನಡೆದ ಹಾವೇರಿ ಗೋಲಿಬಾರ್‍ಇನಲ್ಲಿ ಗೊತ್ತಾಗಿದೆ. ಪದ್ಮಪ್ರಿಯ ಪ್ರಕರಣದಲ್ಲಿ ಅದು ದೃಢಪಟ್ಟಿದೆ. ಚರ್ಚ್ ಮೇಲಿನ ದಾಳಿಯಲ್ಲಿ ಜಗಜ್ಜಾಹೀರಾಗಿದೆ.

ಹೀಗಾದಾಗ ಪೋಲಿಸರು ವಿಜೃಂಬಿಸುತ್ತಾರೆ; ಮುಖ್ಯಮಂತ್ರಿಗಳ ಮಾತನ್ನೂ ಧಿಕ್ಕರಿಸುತ್ತಾರೆ. ಮಾದ್ಯಮದವರಿಗೂ ತಾಕೀತು ಮಾಡುತ್ತಾರೆ ರೈತರು, ಮಹಿಳೆಯರು, ಅಸಹಾಯಕರ ಮೇಲೆ ಲಾಠಿ ಬೀಸುತ್ತಾರೆ.

ಕನ್ನಡದಲ್ಲೊಂದು ಗಾದೆ ಮಾತಿದೆ, ’ಕಂತೆಗೆ ತಕ್ಕ ಬೊಂತೆ’-ಕರ್ನಾಟಕ ಸರಕಾರ ಸಂಪೂರ್ಣ ಕೇಸರೀಕರಣಗೊಂಡಿದೆ. ಸಿಡುಕ ಮುಖ್ಯಮಂತ್ರಿಗಳಿಗೆ ಗಂಜಿಯಲ್ಲಿ ಬಿದ್ದ ನೊಣದಂತಿರುವ ಗೃಹಮಂತ್ರಿ. ದಾಳಿಯನ್ನು ಸಮರ್ಥಿಸಿಕೊಳ್ಳುವ ಚೆಡ್ಡಿ ಉಸ್ತುವಾರಿ ಸಚಿವರು... ಇವರಿಗೆಲ್ಲಾ ಆಧಾರಸ್ತಂಭವಾಗಿ ತಳ ಮಟ್ಟದಿಂದ ಕೆಲಸ ಮಾಡುವ ಕಪಿಸೈನ್ಯ....ಪ್ರಭುಗಳು ಹೊಡೆದಂತೆ ಮಾಡುತ್ತಾರೆ. ಸೈನ್ಯ ಅತ್ತಂತೆ ನಟಿಸುತ್ತದೆ. ನಾವು ನಾಗರಿಕ ಸಮಾಜದಲ್ಲಿದ್ದೇವೆಯೇ?

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರು. ಆದರೂ ಅದು ಒಂದೇ ದಿಕ್ಕಿನತ್ತ ಹರಿಯುವುದಿಲ್ಲ. ಹಾಗಾಗುವುದು ಯಾವ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ. ಅದು ಏಕಮುಖವಾಗಿ ಹರಿದಿದ್ದರೆ ಚುನಾವಣೆಯಲ್ಲಿ ಮನುವಾದಿಗಳನ್ನು ಮಣಿಸಬಹುದಾಗಿತ್ತು. ಅದಾಗುವುದಿಲ್ಲವಲ್ಲಾ....

ಹಾಗಾಗಿ ನಮ್ಮನ್ನು ದೇವರೇ ಕಾಪಾಡಬೇಕು!

Friday, January 16, 2009

ಗಂಡಸರು ಅವಲಂಬಿತರೇ?

ಗಂಡಸರು ಅವಲಂಬಿತರೇ?


ಈ ಪ್ರಶ್ನೆಯನ್ನು ಮಹಿಳೆಯೊಬ್ಬಳಲ್ಲಿ ಕೇಳಿ ನೋಡಿ. ಆಕೆ ತಕ್ಷಣ ಹೌದೆಂದು ಹೇಳುತ್ತಾಳೆ! ಅದಕ್ಕವಳು ಸಮರ್ಥನೆಯನ್ನೂ ನೀಡುತ್ತಾಳೆ; ಗಂಡಸು ಹೆಣ್ಣೊಬ್ಬಳಿಗೆ ಸಂಪೂರ್ಣ ಅವಲಂಬಿತ, ಯಾಕೆಂದರೆ ಆತ ಮಾನಸಿಕವಾಗಿ ದುರ್ಬಲ.

ಇದೇ ಪ್ರಶ್ನೆಯನ್ನು ಗಂಡಸಿನ ಬಳಿ ಕೇಳಿ ನೋಡಿ,”ಇಲ್ಲ ಎಂದಿಂದಿಗೂ ಇಲ್ಲ; ನಾನು ಯಾರಿಗೂ ಅದರಲ್ಲಿಯೂ ಮಹಿಳೆಯೊಬ್ಬಳಿಗೆ ಅವಲಂಬಿತನಾಗುವ ಪ್ರಶ್ನೆಯೇ ಇಲ್ಲ!” ಎಂದು ಆತ ಖಡಾಖಂಡಿತವಾಗಿ ಹೇಳಿಬಿಡುತ್ತಾನೆ.
ಯಾವುದು ಸರಿ?
ಮಹಿಳೆಯೊಬ್ಬಳು ತನ್ನ ಆಪ್ತ ವಲಯದ ಗಂಡಸಿನ ಬಳಿ ಇದೇ ಪ್ರಶ್ನೆಯನ್ನು ಕೇಳಿದರೆ ಆತ ಖಂಡಿತವಾಗಿಯೂ ಹೇಳುತ್ತಾನೆ;’ ಹೌದು ಗಂಡಸು ಹೆಣ್ಣೊಬ್ಬಳಿಗೆ ಸಂಪೂರ್ಣವಾಗಿ ಅವಲಂಬಿತ. ಹಾಗೆ ಅವನನ್ನು ಅವಲಂಬಿತನನ್ನಾಗಿ ಮಾಡುವವಳು ಆಕೆಯೇ. ಯಾಕೆಂದರೆ ಆಕೆಗೆ ಆತನ ರಕ್ಷಣೆ ಬೇಕಾಗಿದೆ.’ ಅಂದರೆ ಸ್ತ್ರೀ ಮತ್ತು ಪುರುಷ ಇಬ್ಬರೂ ಪರಸ್ಪರ ಅವಲಂಬಿತರೇ. ಆದರೆ ಯಾರು ಹೆಚ್ಚು ಅವಲಂಬಿತರು?
ಇದಕ್ಕೆ ಉತ್ತರವನ್ನು ನಿಸರ್ಗದ ವೈಚಿತ್ರ್ಯದಲ್ಲಿ ಹುಡುಕಬೇಕಾಗಿದೆ.
ಬುದ್ಧಿಸಂನಲ್ಲಿ ಬರುವ ಇನ್ ಮತ್ತು ಯಾಂಗ್ ಥಿಯರಿಯನ್ನೇ ನೋಡೋಣ. ಇಲ್ಲಿ ಇನ್ ಎಂದರೆ ಬೆಳಕು. ಯಾಂಗ್ ಎಂದರೆ ಕತ್ತಲು. ಇದು ಸ್ತ್ರಿ ಮತ್ತು ಪುರುಷ ಶಕ್ತಿಗಳ ಸಂಕೇತ. ಕತ್ತಲೆಯ ಅಸ್ತಿತ್ವ ಇದ್ದಾಗ ಮಾತ್ರ ಬೆಳಕಿಗೆ ಮಹತ್ವ ಬರುತ್ತದೆ. ಕತ್ತಲೆ ಇಲ್ಲದೆ ಬೆಳಕು ಇಲ್ಲ. ಬೆಳಕು ಇಲ್ಲದೆ ಕತ್ತಲೆ ಇಲ್ಲ.

ವೈಜ್ನಾನಿಕವಾಗಿ ಅನ್ವೇಷಿಸುತ್ತ ಹೋದರೂ, ಸೃಷ್ಟಿಯ ಮೂಲ ಅಗತ್ಯ, ದ್ರವ್ಯ[ಮ್ಯಾಟರ್] ಮತ್ತು ಚೇತನ[ಸ್ಪಿರಿಟ್]; ಅಂದರೆ ಸ್ತ್ರೀ ಮತ್ತು ಪುರುಷ ಶಕ್ತಿಗಳು. ಹೆಣ್ಣು ಮತ್ತು ಗಂಡು, ದ್ರವ್ಯ ಮತ್ತು ಚೇತನದ ಅತ್ಯಂತ ಕನಿಷ್ಠತಮ ಪ್ರಾತಿನಿಧಿಕ ರೂಪಗಳು. ಅಡಂ ಮತ್ತು ಈವ್ ಎಂದರೂ ಸರಿಯೇ. ಒಟ್ಟಿನಲ್ಲಿ ಭೂಮಿ ಮತ್ತು ಆಕಾಶದ ಸಂಗಮ. ಎಲ್ಲಾ ಮಾನವ ನಾಗರೀಕತೆಗಳಿಗೂ ಸಮಾನವಾಗಿರುವ ಆರ್ಕಿಟೈಪಲ್ ಪ್ರತೀಕ. ಮೂಲ ವಿರೋಧಗಳ ಸೃಜನಾತ್ಮಕ ಸಮನ್ವಯ.

ಆದರೆ ಭೂಮಿ ಮತ್ತು ಆಕಾಶ ಸಂಗಮಿಸುತ್ತದೆಯೇ? ಇಲ್ಲ. ಸಂಗಮದ ಭ್ರಮೆ ಇರುತ್ತದೆ. ಭೂಮಿ ಎಂಬ ವಾಸ್ತವ ಇಲ್ಲದಿದ್ದರೆ ಆಕಾಶವೆಂಬ ಅಮೂರ್ತ ಕಲ್ಪನೆಗೆ ಅಸ್ತಿತ್ವವೇ ಇಲ್ಲ. ಈ ಎರಡು ಅಪೂರ್ಣಗಳು ಪೂರ್ಣತೆಯೆಡೆಗೆ ಸಾಗುವ ಪ್ರಯತ್ನವೇ ಗಂಡು- ಹೆಣ್ಣುಗಳ ಸಮಾಗಮ.

ಮನುಷ್ಯ ಮೂಲತಃ ಒಂಟಿ. ಅದು ಅವನ ಸ್ಥಾಯಿ ಭಾವ. ಅವನ ಮನದಾಳದಲ್ಲಿ ಸದಾ ಖಾಲಿತನ, ಶೂನ್ಯ ಇದ್ದೇ ಇರುತ್ತದೆ. ಸ್ತೀ-ಪುರುಷರಿಬ್ಬರಲ್ಲೂ ಈ ಭಾವ ಇರುತ್ತದೆ. ಸ್ತೀಗೆ ಹೋಲಿಸಿದರೆ ಪುರುಷರಲ್ಲಿ ಈ ಭಾವ ಇನ್ನೂ ತೀವ್ರವಾಗಿರುತ್ತದೆ. ಅದಕ್ಕೆ ಕಾರಣಗಳೂ ಇವೆ. ಇಲ್ಲಿ ಅದು ಮುಖ್ಯವಲ್ಲ. ಆದರೂ ಸೃಷ್ಟಿಕ್ರೀಯೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಸ್ತ್ರೀ ಈ ಖಾಲಿತನವನ್ನು ಸೃಜನಾತ್ಮಕ ಕ್ರಿಯೆಯಲ್ಲಿ ತುಂಬಿಕೊಳ್ಳುತ್ತಾಳೆ ಎಂದಷ್ಟೇ ತಿಳಿದುಕೊಂಡರೆ ಸಾಕು.

ಹಿಂದೆಯೇ ಹೇಳಿದಂತೆ ಒಳಗಿನ ಒಂಟಿತನವನ್ನು ಮೀರುವ, ಖಾಲಿತನವನ್ನು ತುಂಬಿಸಿಕೊಳ್ಳುವ ಪ್ರಯತ್ನವೇ ಅವಲಂಬನೆ.

ಅವಲಂಬನೆ ವ್ಯಕ್ತಿಗಳ ನಡುವೆ ಸಂಬಂಧಗಳನ್ನು ಕುದುರಿಸುತ್ತದೆ. ರೇಡಿಯೋ. ಪುಸ್ತಕ, ಟೀವಿ, ಕಂಪ್ಯೂಟರ್, ಮಾತು-ಹರಟೆ, ಕಲೆ, ಸಂಸ್ಕ್ರತಿ, ಚರ್ಚೆ ಮುಂತಾದ ಆಯಾಮಗಳಲ್ಲಿ ಅಸ್ತಿತ್ವ ಪಡೆಯುತ್ತದೆ.
ವಿಸ್ತಾರವಾದ ಜಗತ್ತಿನಲ್ಲಿ ವ್ಯಕ್ತಿಯೊಬ್ಬನಿಗೆ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳಲು ಅವಲಂಬನೆ ಸಹಾಯಕವಾಗುತ್ತದೆ. ಇಲ್ಲಿಗೆ ಅವಲಂಬನೆಯ ಉದ್ದೇಶ ಮುಗಿಯುತು. ಅಂದರೆ ಒಂಟಿತನವನ್ನು ಮೀರುವ ಪ್ರಯತ್ನ, ಅದರಿಂದ ಸಿಗುವ ರಕ್ಷಣೆಯ ಭಾವ[ಸೆಕ್ಯೂರ್ಡ್ ಫೀಲಿಂಗ್] ವ್ಯಕ್ತಿಗೆ ಉಂಟಾದರೆ ಸಾಕು.

ಇದೇನೋ ಸರಿ. ಆದರೆ ಇದರಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಯಾಕೆಂದರೆ ಇರುವ ಸ್ಥಿತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರೂಪಿಸಿಕೊಂಡಿರುವ ಅವಲಂಬನೆಗಳೇ ನಮ್ಮನ್ನು ಡಿಕ್ಟೇಟ್ ಮಾಡಲಾರಂಬಿಸುತ್ತವೆ.

ಗಂಡು-ಹೆಣ್ಣು ನಡುವಿನ ಸಂಬಂಧವನ್ನೇ ನೋಡಿ, ನೀವು ಗಮನಿಸಿದ್ದೀರೋ ಇಲ್ಲವೋ, ವೃದ್ಧ ದಂಪತಿಗಳಲ್ಲಿ ಯಾರದರೊಬ್ಬರು ಮೃತಪಟ್ಟರೆ ಉಳಿದವರೊಬ್ಬರು ಬಹು ಬೇಗನೆ ಅವರ ಹಾದಿ ಹಿಡಿಯುತ್ತಾರೆ. ಶಂಭಾಜೋಷಿ ದಂಪತಿಗಳು, ಕುರ್ತಕೋಟಿ ದಂಪತಿಗಳು... ಹೀಗೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಕನ್ನಡದ ಕವಿಯೊಬ್ಬರು ತನ್ನ ಕಂಪ್ಯಾನಿಯನ್ ಬಿಟ್ಟುಹೋದಾಗ ಸಂಪೂರ್ಣವಾಗಿ ಹತಾಶರಾಗಿಬಿಟ್ಟರು. ಈಗ ಅವರ ಸೃಜನಶೀಲ ಚಟುವಟಿಕೆ ಬಹುಮಟ್ಟಿಗೆ ನಿಂತೇಹೋಗಿದೆ.
ಹೀಗೆ ಸಂಗಾತಿಯ ಅಗಲಿಕೆಯಿಂದ ಸಾಯುವವರಲ್ಲಿ ಅಥವಾ ಡಿಸ್ಟರ್ಬ್ ಆಗುವವರಲ್ಲಿ ಪುರುಷರೇ ಹೆಚ್ಚು. ಈಗ ನೋಡಿ, ಪ್ರೇಯಸಿಯನ್ನು ಕಳೆದುಕೊಂಡು ದೇವದಾಸ್ ಆಗುವವರು ಹುಡುಗರೇ ಹೊರತು ಹುಡುಗಿಯರಲ್ಲ.! ಹುಡುಗಿಯರು ಯಾವುದೋ ಕಾರಣದಿಂದಾಗಿ ಪ್ರೀತಿಸಿದವನನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ, ಮದುವೆಯಾದವನನ್ನು ಒಪ್ಪಿಕೊಂಡುಬಿಡುತ್ತಾರೆ. ಆದರೆ ಹುಡುಗರು ಮಾತ್ರ ಅಷ್ಟು ಬೇಗ ಹಳೆಯದನ್ನು ಮರೆಯುವುದಿಲ್ಲ. ಗಂಡಸರು ಬಲು ಬೇಗನೆ ವ್ಯಸನಗಳಿಗೆ, ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇದೂ ಅವಲಂಬನೆಯ ಒಂದು ಮುಖ.

ಅಂದರೆ ಸ್ತೀಗಿರುವ ಧಾರಣಸಾಮರ್ಥ್ಯ ಪುರುಷನಲ್ಲಿ ಇಲ್ಲ. ಒಂದು ಕಠಿಣ ಪ್ರಸಂಗವನ್ನು ಎದುರಿಸುವ ಪರಿಸ್ಥಿತಿ ಸ್ತ್ರೀಪುರುಷರಿಬ್ಬರಿಗೂ ಏಕಕಾಲದಲ್ಲಿ ಒದಗಿದಾಗ ಪುರುಷ ಬಹುಬೇಗ ಕುಸಿದುಬೀಳುತ್ತಾನೆ. ಸ್ತ್ರೀ ದೃಢವಾಗಿ ನಿಂತು ಅದನ್ನು ಎದುರಿಸುತ್ತಾಳೆ, ಎನ್ನುತ್ತಾರೆ ಓಶೋ. ಅವಳಲ್ಲಿ ಪ್ರತಿರೋಧ ಶಕ್ತಿ ವಿಪುಲವಾಗಿರುತ್ತದೆ. ವಿಜ್ನಾನ ಕೂಡ ಇದನ್ನು ದೃಢೀಕರಿಸಿದೆ.

ಗಂಡು ಮಗುವಿನ ಹುಟ್ಟಿಗೆ ಕಾರಣವಾಗುವ ವೈ ಕ್ರೋಮೋಸೋಮುಗಳು, ಹೆಣ್ಣು ಮಗುವಿನ ಜನನಕ್ಕೆ ಕಾರಣವಾಗುವ ಎಕ್ಸ್ ಕ್ರೋಮೋಸೋಮುಗಳಿಗಿಂತ ಬಲಹೀನವಾಗಿರುತ್ತವೆ. ವೈ ಕ್ರೋಮೋಸೋಮುಗಳು ಗಂಡಸರ ವೀರ್ಯಾಣುವಿನಲ್ಲೇ ಇರುತ್ತವೆ ಎಂಬುದು ಇನ್ನೊಂದು ಐರನಿ. ಆ ಕಾರಣದಿಂದಲೇ ನಿಸರ್ಗದ ಜೊತೆ ಹೆಣ್ಣು ಸರಿಜೋಡಿಯಾಗಿ ಹೋರಾಡಬಲ್ಲಳು. ಬದುಕನ್ನು ಕಟ್ಟಿಕೊಳ್ಳಬಲ್ಲಳು. ಪ್ರಕೃತಿಯ ಎದುರು ಪುರುಷ ನಿಸ್ಸಾಯಕ. ಇದೇ ಅವನ ಅವಲಂಬನೆಗೆ ಕಾರಣವೇ? ಹೇಳಲಾಗದು.

ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ ಅಥವಾ ವಿಶೇಷ ಸಾಧನೆ ಮಾಡಿದ ಪುರುಷರ ಬಗ್ಗೆ ಹೇಳುವಾಗ ಒಂದು ಮಾತನ್ನು ಬಳಸುತ್ತಾರೆ-’ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿದ್ದಾಳೆ’. ಗಾದೆ ಮಾತಿನಂತೆ ಚಾಲ್ತಿಯಲ್ಲಿರುವ ಈ ಮಾತುಗಳನ್ನು ಗಮನಿಸಿ. ಇಲ್ಲಿರುವವಳು ತಂಗಿ, ಗೆಳತಿ, ಪ್ರೇಯಸಿ, ಟೀಚರ್, ಆಂಟಿ.. ಯಾರೇ ಆಗಿರಬಹುದು ಆದರೆ ಪತ್ನಿಯಂತೂ ಆಗಿರಲಾರಳು.
ಯಾಕೆಂದರೆ ಪತ್ನಿ ಎಂಬವಳು ವಾಸ್ತವ. ವಾಸ್ತವ ಯಾವಾಗಲೂ ಸಂಕೀರ್ಣವಾಗಿರುತ್ತದೆ.
ನಮ್ಮ ಬುದ್ಧಿಜೀವಿಗಳ ಖಾಸಗಿ ಬದುಕನ್ನು ಒಳಹೊಕ್ಕು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಅವರಿಗೆ ಸಂತಾನಾಭಿವೃದ್ಧಿಗೆ ಒಬ್ಬಳು ಹೆಂಡತಿ. ಬೌದ್ಧಿಕ ಸಾಂಗತ್ಯಕ್ಕೆ ಇನ್ನೊಬ್ಬಳು. ಸುಪ್ರಸಿದ್ದ ಬರಹಗಾರರಾದ ಜೀನ್ ಪಾಲ್ ಸಾರ್ತ್ರೆ ಮತ್ತು ಸೀಮನ್ ಡಿ ಬುವಾ ಇಂತಹ ಬೌದ್ಧಿಕ ಸಾಂಗತ್ಯಕ್ಕೆ ಉತ್ತಮ ಉದಾಹರಣೆ. ಅಷ್ಟು ದೂರ ಯಾಕೆ? ನಮ್ಮ ಕನ್ನಡದ ಹಲವು ಲೇಖಕರು, ಕವಿಗಳು ಇಬ್ಬರು ಹೆಂಡಿರ ಮುದ್ದಿನ ಗಂಡಂದಿರಾಗಿದ್ದಾರೆ.

ನಮ್ಮ ಕನ್ನಡದ ಕವನವೊಂದು ಹೀಗೆ ಹೇಳುತ್ತದೆ;
ಎದೆಯ ಮೇಲಿಹಳು ತೊಡೆಗೆ ಬಾರಹಳು, ತೊಡೆಯ ಮೇಲಿಹಳು ಎದೆಗೆ ಏರಳು’
ಇದು ಗಂಡಸಿನ ಸಮಸ್ಯೆಯ ಮೂಲ. ಎದೆ ಮತ್ತು ತೊಡೆಯ ಮೇಲೆ ಏಕಕಾಲದಲ್ಲಿ ಪ್ರತಿಷ್ಠಾಪನೆಗೊಳ್ಳುವ ಸಂಗಾತಿ ದೊರಕದಿದ್ದರೆ? ಆಗ ಅವನಿಗೆ ಅಲ್ಲೊಬ್ಬಳು ಬೇಕು; ಇಲ್ಲೊಬ್ಬಳು ಬೇಕು.
ನಮ್ಮ ಮಹಾರಾಜರುಗಳ ಅಂತಃಪುರದಲ್ಲಿ ಸಾವಿರಾರು ರಾಣಿಯರಿರುತ್ತಿದ್ದರು. ಆದರೂ ರಾಜನ ಹತ್ತಿರಕ್ಕೆ ಬರುತ್ತಿದ್ದವರು ಇಬ್ಬರೇ. ಒಬ್ಬಳು ಪಟ್ಟದರಸಿ, ಇನ್ನೊಬ್ಬಳು ಪ್ರೇಮದರಸಿ; ಕೃಷ್ಣನಿಗೆ ರಾಧಾ,ರುಕ್ಮಿಣಿಯರಿದ್ದಂತೆ. ಹೆಣ್ಣಿಗೆ ಇಂತಹ ಕಲ್ಪನೆಗಳಿಲ್ಲ. ಅವಳಿಗೆ ಅವಳು ಮಾತ್ರ ಅವಲಂಬಿತಳು.

ಹೆಣ್ಣಿನಲ್ಲಿರುವ ಶಕ್ತಿ ಎರಡು ಬಗೆಯದು. ಒಂದು, ಆಕೆಯಲ್ಲಿರುವ ಧೀಶಕ್ತಿ; ಎಲ್ಲವನ್ನೂ ಎದುರಿಸುವ , ಕಟ್ಟುವ, ನಿಸರ್ಗದ ಜೊತೆ ಸಮಬಲವಾಗಿ ಹೋರಾಡುವ ಅಂತಃಶಕ್ತಿ. ಇದನ್ನು ಪುರುಷ ಬೆರಗಿನಿಂದ ನೋಡುತ್ತಾನೆ. ಅದಕ್ಕೆ ಅವನು ತಲೆ ಬಾಗುತ್ತಾನೆ. ಆದರೆ ಪ್ರಕಟಪಡಿಸುವುದಿಲ್ಲ. ಇನ್ನೊಂದು ಆಕೆಯಲ್ಲಿರುವ ಪಾಲನೆಯ ಗುಣ. ಆಕೆ ಎಲ್ಲವನ್ನೂ ಪೊರೆಯುತ್ತಾಳೆ. ಎಲ್ಲವನ್ನೂ ರಕ್ಷಿಸುತ್ತಾಳೆ. ಈ ಎರಡೂ ಗುಣಗಳು ಒಬ್ಬ ತಾಯಿಯಲ್ಲಿರುತ್ತದೆ. ಎಲ್ಲಾ ಸಸ್ತನಿಗಳಲ್ಲಿರುತ್ತದೆ.

ಹೋರಾಟ ಮತ್ತು ಪಾಲನೆಯ ಗುಣಗಳು ಪ್ರಕೃತಿಯ ಗುಣಗಳೇ. ಹೆಣ್ಣು ಪ್ರಕೃತಿಯನ್ನು ಪ್ರತಿನಿಧಿಸುತ್ತಾಳೆ. ಭೂಮಿಯನ್ನು ಹೆಣ್ಣಿಗೆ ಹೋಲಿಸುವುದು ಇದೇ ಕಾರಣಕ್ಕೇ ಇರಬಹುದು. ಈ ಎಲ್ಲ ಗುಣಗಳೇ ಪುರುಷನನ್ನು ಸ್ತ್ರೀಯ ಅವಲಂಬಿಯನ್ನಾಗಿ ಮಾಡಿವೆ. ಮನಶಾಸ್ತ್ರ ಕೂಡ ಇದನ್ನು ಒಪ್ಪಿಕೊಂಡಿದೆ.

ಸಿಗ್ಮಂಡ್ ಪ್ರಾಯ್ಡ್ ನ ಪ್ರಕಾರ ಎಲ್ಲಾ ಗಂಡಂದಿರೂ ಹೆಂಡತಿಯಲ್ಲಿ ತಮ್ಮ ತಾಯಿಯನ್ನೇ ಹುಡುಕುತ್ತಾರೆ. ಗಂಡು ಮಗುವೊಂದು ತನ್ನ ತಾಯಿಗೆ ಹೆಚ್ಚಾಗಿ ಅಂಟಿಕೊಂಡಿದ್ದರೆ, ಹೆಣ್ಣು ಮಗು ತಂದೆಗೆ ಅಂಟಿಕೊಂಡಿರುತ್ತದೆ. ಇದು ವಿರುದ್ಧ ದ್ರುವದ ಆಕರ್ಷಣೆ.
ಗಂಡು ಬಯಸುವ ತಾಯ್ತನವನ್ನು, ಸಾಂತ್ವನವನ್ನು ನೀಡುವ ಹೆಣ್ಣು ಆತನ ಪಾಲಿಗೆ ಸದಾ ನಿಗೂಢ, ಜತೆಗೆ ಸ್ಪೂರ್ತಿಯ ಖನಿ. ಆಧುನಿಕ ಪರಿಭಾಷೆಯಲ್ಲಿ ಕಂಪ್ಯಾನಿಯನ್. ಇಂತಹ ಹೆಣ್ಣಿನ ಮುಂದೆ ಗಂಡು ಸಂಪೂರ್ಣ ಶರಣಾಗುತ್ತಾನೆ. ಶರಣಾಗತಿಯಲ್ಲಿ ಅಹಂ ನೆಲಕಚ್ಚುತ್ತದೆ. ಆದರೂ ಗಂಡಸು ಒಂದೇ ಹೆಣ್ಣಿಗೆ ನಿಷ್ಠನಾಗಿರುವುದಿಲ್ಲ. ಯಾಕೆಂದರೆ ಭೂಮಿ ಸ್ಥಾವರವಾಗಿದ್ದು ಎಲ್ಲವನ್ನೂ ಸ್ವೀಕರಿಸುತ್ತಾ ಪೊರೆಯುತ್ತಾಳೆ. ಪುರುಷ ಬೀಜಪ್ರಸಾರ ಮಾಡುತ್ತಾ ಅಲೆಮಾರಿಯಾಗುತ್ತಾನೆ. ಇದುವೇ ನಿಸರ್ಗದ ವೈಚಿತ್ರ್ಯ!
[ ಓ ಮನಸೇ ನಿಯತಕಾಲಿಕದಲ್ಲಿ ಪ್ರಕಟವಾದ ಬರಹ.]