Tuesday, March 12, 2013

ಕಾಣದ ಕಡಲಿಗೆ ಹಂಬಲಿಸಿದೆ ಮನ.....

ಚಿತ್ರಕೃಪೆ; ಅಂತರ್ಜಾಲ

ಸ್ವಲ್ಪ ಹೊತ್ತು ತಲೆ ತಗ್ಗಿಸಿ ಕುಳಿತಳು. ಅನಂತರ ತಲೆಯೆತ್ತಿ ಶೂನ್ಯದತ್ತ ದೃಷ್ಟಿ ನೆಟ್ಟು ತನಗೆ ತಾನೇ ಎಂಬಂತೆ ಹೇಳಿಕೊಂಡಳು.
ಅದು ನಿಜವಾಗಿಯೂ ನನ್ನ ಬದುಕಿನ ವಸಂತಕಾಲ’...ಎಲ್ಲೋ ಕಳೆದು ಹೋದವಳಂತೆ ಮತ್ತೆ ಅರೆಗಣ್ಣು ಮುಚ್ಚಿದಳು. ಕಾಲನ್ನು ಸ್ವರ್ಣಲೇಖೆಯ ತಿಳಿ ಜಲದಲ್ಲಿ ಮೆಲ್ಲನೆ ಅದ್ದಿದಳು. ಬಗ್ಗಿ ಒಂದು ಚಪ್ಪಟೆ ಕಲ್ಲನೆತ್ತಿ ನದಿ ಒಡಲನ್ನು ಸವರಿಕೊಂಡು ಹೋಗುವಂತೆ ನದಿಮೇಲ್ಮೈಯಿಂದ ಜಾರುಗುಪ್ಪೆಯಂತೆ ಓರೆಯಾಗಿ ಒಗೆದಳು. ಅದು ಕಪ್ಪೆಯಂತೆ ಹಲವು ಬಾರಿ ಕುಪ್ಪಳಿಸುತ್ತಾ ನದಿ ಮಧ್ಯದವರೆಗೂ ಹೋಯಿತು. ಅವಳು ಚಿಕ್ಕಮಗುವಿನಂತೆ ಸಡಗರದಿಂದ ಎದ್ದು ನಿಂತು  ’ಹನ್ನೆರಡು ಕಪ್ಪೆ’ ಎಂದು ಚಪ್ಪಾಳೆ ತಟ್ಟಿದಳು.
ಅನುಪಮ ಅವಳತ್ತ ಅವಕ್ಕಾಗಿ ನೋಡುತ್ತಾ ಕುಳಿತುಬಿಟ್ಟಳು. ತಟ್ಟನೆ ಅವಳು ವಾಸ್ತವಕ್ಕೆ ಬಂದು ಬಂಡೆಯ ಮೇಲೆ ಕುಳಿತಳು. ಕೈಯ್ಯಲ್ಲಿದ ನುಣ್ಣನೆಯ ಹಾಲು ಬಿಳುಪಿನ ಬೆಣಚು ಕಲ್ಲನ್ನು ತಿರುಗಿಸುತ್ತಾ ಹೇಳತೊಡಗಿದಳು.
’ಎಲ್ಲರೂ ಹೇಳುತ್ತಾರೆ ಒಂದು ಹೆಣ್ಣಿನ ಗುಣಾತ್ಮಕವಾದ ಬದುಕು ನಲವತ್ತನೇ ವಯಸ್ಸಿಗೆ ಮುಗಿದು ಹೋಗುತ್ತದೆ ಎಂದು. ಆದರೆ ನನ್ನ ಪಾಲಿಗದು ಒಂದು ಮಿಥ್ಯೆ. ನನ್ನ ಬದುಕು  ಆರಂಭಗೊಂಡಿದ್ದೇ ನಲ್ವತ್ತಕ್ಕೆ. ಹದಿನೈದನೇ ವಯಸ್ಸಿನಿಂದ ಇಪ್ಪತ್ತರೆಡನೇ ವಯಸ್ಸಿನವರೆಗೆ ನನ್ನದಲ್ಲದ ಬಾಳನ್ನು ಬದುಕಿಬಿಟ್ಟೆ. ಅದೊಂದು ರೀತಿಯಲ್ಲಿ ಉರ್ಧ್ವಮುಖಿಯಾದ ಚೇತನವನ್ನು ಪ್ರಥ್ವಿ ತತ್ವ ಹಿಡಿದಿಟ್ಟಂತೆ ಇತ್ತು. ಸದಾ ಅಸ್ಥಿರತೆ. ಒಂದು ದಿನ ಜೀವಭಯದಲ್ಲಿ ಓಡಿ ಬಂದೆ. ರತ್ನಾಪುರ ಬಿಟ್ಟು ಬೇರೆ ಆಯ್ಕೆ ನನ್ನಲಿರಲಿಲ್ಲ.  ವಿಧವೆಯಾದ ದಿನದಂದೇ ಗೌರಿಗೆ ತಾಯಿಯಾದೆ. ಅಪ್ಪ ನನ್ನನ್ನೂ ನನ್ನ ಮಕ್ಕಳನ್ನು ಎದೆಗೊತ್ತಿಕೊಂಡ.’
’ಅದು ನನಗೆ ಗೊತ್ತಿರುವ ಸಂಗತಿಯೇ. ನಿನ್ನನ್ನು ಮತ್ತು ಮಕ್ಕಳನ್ನು ಕರೆದೊಯ್ಯಲು ನಿನ್ನ ಗಂಡನ ಮನೆಯವರು ಹಲವು ಬಾರಿ ಇಲ್ಲಿಗೆ ಬಂದಿದ್ದರು ಎಂಬುದನ್ನೂ ಕೇಳಿದ್ದೇನೆ. ನೀನು ಯಾಕೆ ಹೋಗಿಲ್ಲ?’
’ಹೋಗಬಾರದು ಎಂದೇನೂ ಇರಲಿಲ್ಲ. ಆದರೆ ಅಲ್ಲಿ ಹೋಗಿ ಮಾಡುವುದಾದರೂ ಏನಿತ್ತು? ಅಲ್ಲಿ ಹೋಗಿದ್ದರೆ ಹತ್ತರಲ್ಲಿ ಹನ್ನೊಂದನೆಯವಳಾಗಿರುತ್ತಿದೆ. ಆದರೆ ಇಲ್ಲಿ. ಇದು ನನ್ನದೇ ಮನೆಯಾಗಿತ್ತು. ಈ ನದಿ, ಈ ಕಾಡು, ಇಲ್ಲಿಯ ಪಶು-ಪಕ್ಷಿ, ಇಲ್ಲಿಯ ಹೂ-ಹಣ್ಣು, ಇಲ್ಲಿಯ ಗಂಧ ಎಲ್ಲವೂ ನನ್ನ ಉಸಿರಿನಷ್ಟೇ ಸಹಜವಾಗಿತ್ತು.ಇಲ್ಲಿ ನಾನು ನಾನಾಗಿರಬಹುದಿತ್ತು. ಗೌರಿಗೆ ಒಂದು ವರ್ಷವಾಗುವತನಕ ಅಪ್ಪ ಏನೂ ಮಾತಾಡಲಿಲ್ಲ. ದೊಡ್ಡಮನೆಯವರು ನಮ್ಮನ್ನು ನೋಡಲು ಬಂದಾಗ ಅವರನ್ನು ಆದರದಿಂದಲೇ ಬರಮಾಡಿಕೊಳ್ಳುತ್ತಿದ್ದರು. ಆದರೆ ಅವರು ಯಾವಾಗ ತಾಯಿ-ಮಕ್ಕಳನ್ನು ಕರೆದುಕೊಂಡು ಹೋಗಲು ಬರುತ್ತಾರೆಂದು ಸುದ್ದಿ ಕಳುಹಿಸಿದರೋ ಆಗ ಅಪ್ಪ ನಿರ್ಧಾರದ ಜವಾಬ್ದಾರಿಯನ್ನು ನನಗೆ ವರ್ಗಾಯಿಸಿಬಿಟ್ಟರು.
 ನನ್ನ ಹೆತ್ತವರಿಗೆ ನಾನು ಏಕೈಕ ಸಂತಾನ. ಇಳಿಗಾಲದಲ್ಲಿ ನಾನವರನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ. ಈಗ ನನಗೆ ಆ ಅವಕಾಶ ಸಿಕ್ಕಿದೆ. ನಾನು ನಿರ್ಧರಿಸಿಬಿಟ್ಟೆ. ಇದು ನನ್ನ ಕರ್ಮ ಭೂಮಿ. ನಾನು ಇಲ್ಲಿಯೇ ಬದುಕು ಕಂಡು ಕೊಳ್ಳುತ್ತೇನೆ. ನನ್ನ ಮಕ್ಕಳನ್ನು ಇಲ್ಲಿಯ ಸ್ವಚ್ಛಂಧ ಪರಿಸರದಲ್ಲಿ ಮುಕ್ತವಾಗಿ ಬೆಳೆಸುತ್ತೇನೆ.
ಅಪ್ಪ-ಅಮ್ಮನಿಗೆ ನೆಮ್ಮದಿಯಾಯಿತು. ಆದರೆ ಅಪ್ಪ ನನ್ನಿಂದ ಒಂದು ಭಾಷೆ ತೆಗೆದುಕೊಂಡರು. ಯಾವುದೇ ಸಂದರ್ಭದಲ್ಲೂ ಮಕ್ಕಳಿಗೆ ತಾವು ಯಾವ ಮನೆತನಕ್ಕೆ ಸೇರಿದವರೆಂಬುದು ತಿಳಿಯಬಾರದು. ಮತ್ತು ಅವರ ವಿಧ್ಯಾಭ್ಯಾಸ ದೂರದ ಮಂಗಳೂರಿನಲ್ಲಿ ನಡೆಯಬೇಕು. ಅವರು ಇಲ್ಲಿಗೆ ಅಪ್ಪಿತಪ್ಪಿಯೂ ಬರಬಾರದು. ಅವರ ರಜಾದಿನಗಳಲ್ಲಿ ನಾವೇ ಅಲ್ಲಿಗೆ ಬರುತ್ತೇವೆ. ಮೊಮ್ಮಕ್ಕಳೊಂದಿಗೆ ಒಂದೆರಡು ತಿಂಗಳು ಇದ್ದು ಬರುತ್ತೇವೆ. ನೀನು ಮಕ್ಕಳ ಜೊತೆ ಇದ್ದುಕೊಂಡು ನಿನ್ನ ವಿಧ್ಯಾಭ್ಯಾಸ ಮುಂದುವರಿಸಬೇಕು.
ಅವರ ಎಲ್ಲಾ ಶರತ್ತುಗಳನ್ನೂ ನಾನು ಒಪ್ಪಿಕೊಂಡೆ.
ನಮ್ಮನ್ನು ಕರೆದುಕೊಂಡು ಹೋಗಲು ಸ್ವತಃ ನನ್ನ ಮೈದುನನೇ ಬಂದಿದ್ದ. ಈಗವನು ಊರ ಪಟೇಲ . ಎರಡು ಗಾಡಿಗಳಲ್ಲಿ ಮನೆ ಮಂದಿ ಬಂದಿದ್ದರು. ಅಪ್ಪ ಖಡಾಖಂಡಿತವಾಗಿ ಹೇಳಿದ; ತನ್ನ ಮಗಳಿಗೆ ಆ ಮನೆಯೊಂದಿಗಿನ ಋಣ ಕಡಿದು ಬಿದ್ದಿದೆ. ಇನ್ನಾಕೆ ಅಲ್ಲಿಗೆ ಬರುವುದಿಲ್ಲ. ಶಕುಂತಲಾ ಅತ್ತೆ ಅಪ್ಪನೊಂದಿಗೆ ವಾಗ್ವಾದ ನಡೆಸಿದಳು. ಹೆಣ್ಣಿನ ಅಸ್ತಿತ್ವ ಇರುವುದೇ ಗಂಡನ ಮನೆಯಲ್ಲಿ, ಅದು ಅವಳ ಹಕ್ಕು ಕೂಡ. ಇದು ದೊಡ್ಡಮನೆಯ ಘನತೆ, ಗೌರವದ ಪ್ರಶ್ನೆ ಎಂದೆಲ್ಲಾ ವಾದಿಸಿದಳು. ಆದರೆ ಅಪ್ಪ. ತನ್ನ ಮಗಳ ಅಸ್ತಿತ್ವ ಇರುವುದು ಅವಳ ವ್ಯಕ್ತಿತ್ವ ಅರಳುವುದರಲ್ಲಿ. ಅವಳು ಇಲ್ಲಿದ್ದರೆ ಅರಳುತ್ತಾಳೆ. ಅಲ್ಲಿ ಭಯದಲ್ಲಿ ನಲುಗುತ್ತಾಳೆ. ಕಳುಹಿಸುವುದಿಲ್ಲ. ಎಂದು ಒಂದೇ ಮಾತಿನಲ್ಲಿ ಹೇಳಿಬಿಟ್ಟರು. ಗಂಡಸರು ಹೆಚ್ಚು ಮಾತಾಡಲಿಲ್ಲ. ಅವರು ತಮ್ಮ ಕರ್ತವ್ಯವನ್ನು ಮಾಡಲು ಬಂದಂತಿತ್ತು.
ಮಾತಿನ್ನು ಸಾಕು ಎಂಬಂತೆ ತಲೆಯ ಮೇಲಿನ ಮುಂಡಾಸನ್ನು ಬಿಚ್ಚಿ ಕೊಡವಿ ಹೆಗಲಮೇಲೆ ಹಾಕಿಕೊಂಡು ’ಏಳಿ ಊಟ ಮಾಡೋಣ’ ಎಂದು ಎದ್ದೇ ಬಿಟ್ಟರು. ಯಾರೂ ತುಟಿ ಪಿಟಕ್ ಎನ್ನಲಿಲ್ಲ.
ಚಿತ್ರಕೃಪೆ; ಅಂತರ್ಜಾಲ
ಅಮ್ಮ ಬೀಗರಿಗಾಗಿ ಒಳ್ಳೆಯ ಔತಣದ ಊಟವನ್ನು ಮಾಡಿಸಿದ್ದಳು. ಸ್ವರ್ಣಲೇಖೆಯ ಒಡಲಲ್ಲಿ ಯಥೇಚ್ಛವಾಗಿ ಸಿಗುವ ’ಕಲ್ಲುಮುಳ್ಳ’ವೆಂಬ ಮೀನಿನ ಸಾರು. ಎಣ್ಣೆಯಲ್ಲಿ ಕರಿದ ಕಾಡುಹಂದಿಯ ಉಪ್ಪಣ. ಕಬ್ಬೆಕ್ಕು ಗಸಿ, ಪುಳಿಮುಂಚಿ ಮೀನು. ಹುರಿದ ಕೋಳಿ, ಪೊಕ್ಕಳ ರೊಟ್ಟಿ, ಪದಂಜಿ ಪಾಯಸ. ಅಲಸಂಡೆ ಪಲ್ಯ. ಗೇರು ಬೀಜ; ಕಡ್ಲೆ;ತೊಂಡೆಕಾಯಿ ಮಿಶ್ರಪಲ್ಯ....ಎಲ್ಲವನ್ನೂ ಒತ್ತಾಯಿಸಿ ಅಕ್ಕರೆಯಿಂದ ಬಡಿಸಿದರು ನಮ್ಮಮ್ಮ. ಅಮ್ಮನಿಗೆ ನಾನೂ ಜೊತೆಯಾದೆ. ನನಗೆ ಒಳಗೊಳಗೇ ಅನ್ನಿಸುತ್ತಿತ್ತು. ಇನ್ನಿವರಿಗೆ ನಾನೆಂದೂ ಹೀಗೆ ಬಡಿಸುವ ಸಂದರ್ಭ ಬರಲಾರದು. ಹಾಗಾಗಿ ಕಣ್ಣು-ಕರಳು ತುಂಬಿ ಬಂದಂತಾಗುತ್ತಿತ್ತು. ಮೌನದಲ್ಲೇ ಊಟ ಸಾಗಿತು.
ಎಲ್ಲರೂ ಕೈ ತೊಳೆದುಕೊಂಡ ನಂತರ ನಾನು ನನ್ನ ಕೋಣೆಗೆ ಹೋಗಿ ಮಗುವಿಗೆ ಹಾಲೂಡಿಸುತ್ತಿದ್ದೆ. ಅಲ್ಲಿಗೆ ಬಂದ ಅನುಸೂಯ ಮಗುವನ್ನು ಮುದ್ದಿಸಿ ಅವಳ ಕೈಗೆ ನೂರು ರೂಪಾಯಿಯ ಒಂದು ನೋಟನ್ನಿತ್ತು. ಮಗುವನ್ನು ಚೆನ್ನಾಗಿ ನೋಡಿಕೋ ಅದು ಆ ಮನೆಯ ಕುಡಿ ಎಂಬುದನ್ನು ಯಾವತ್ತೂ ಮರೆಯದಿರು. ಅದನ್ನು ಸಮಯ ಬಂದಾಗ ಅವುಗಳಿಗೂ ತಿಳಿಸು. ಎನ್ನುತ್ತಾ ನನ್ನ ಕೈಗೆ ಒಂದು ದೊಡ್ಡ ಬಟ್ಟೆಯ ಗಂಟನ್ನಿತ್ತು. ಇದು ಅಲ್ಲಿ ನೀನು ಬಿಟ್ಟು ಬಂದಿದ್ದ ನಿನ್ನ ವಸ್ತುಗಳು ಎಂದಳು. ನಾನು ಅಚ್ಚರಿಯಿಂದ ಅವಳತ್ತ ನೋಡಿದೆ. ಅವಳ ಮುಖದಲ್ಲೊಂದು ನಿಗೂಢ ನಗೆಯಿತ್ತು.
ಅವರು ಹೊರಟು ಹೋದರು.. ಇದಾದ ಎರಡು ತಿಂಗಳ ನಂತರ ನಾನು ಮಂಗಳೂರಿಗೆ ಬಂದು ಬಿಟ್ಟೆ. ಅಪ್ಪ ನಮಗಾಗಿ ಬಿಜೈನಲ್ಲಿ ಒಂದು ಮನೆಯನ್ನು ಖರೀದಿಸಿದರು. ನಮ್ಮನ್ನು ನೋಡಿಕೊಂಡು ಅಡುಗೆ ಮಾಡಿ ಹಾಕಲು ಕೆಲಸದವಳನ್ನು ನೇಮಿಸಿದರು. ಆಗ ಮಂಗಳೂರಿನಲ್ಲಿ ತುಂಬಾ ಪ್ರಸಿದ್ಧಿಯಾಗಿದ್ದ ಹಂಪನಕಟ್ಟೆಯಲ್ಲಿರುವ ಸರಕಾರಿ ಕಾಲೇಜಿನಲ್ಲಿ ಪಿಯುಸಿ ಕ್ಲಾಸಿಗೆ ಜಾಯಿನ್ ಆದೆ. ಶಾಂಭವಿಯನ್ನು ಕೊಡಿಯಾಲಬೈಲಿನಲ್ಲಿರುವ ಸೈಂಟ್ ಅಗ್ನೆಸ್ ಸ್ಕೂಲಿಗೆ ಅಪ್ಪ ಸೇರಿಸಿದರು.
 ಕಾಡಿನ ನದಿ ದಂಡೆಯಿಂದ ಪಟ್ಟಣದ ಕಡಲತಡಿಗೆ ಬಂದೆ. ಸಮುದ್ರದ ಅಬ್ಬರದ ತೆರೆಗಳನ್ನು ನೋಡ ನೋಡುತ್ತಲೇ ನನ್ನೊಳಗಿನ  ಪಿಸು ಮಾತುಗಳು ನದಿಯಾಗಿ ಹರಿಯಲು ಆರಂಭಿಸಿದವು.

[ ಕಳೆದ ಸಂಚಿಕೆಯ ಕಥೆ ಮುಂದುವರಿದಿದೆ.....]

Friday, March 1, 2013

ಸ್ವರ್ಣಲೇಖೆಯ ಬಾಳಲ್ಲೊಬ್ಬ ಕುಮಾರಧಾರಾ...!

ಚಿತ್ರಕೃಪೆ; ಅಂತರ್ಜಾಲ



ಹಾಂ..ನಾನು ಮರೆತೇ ಬಿಟ್ಟಿದ್ದೆ. ಇಷ್ಟರವರೆಗೆ ಹೆಸರಿಲ್ಲದಂತೆ ಬದುಕಿದ್ದ ನನ್ನಮ್ಮನ ಹೆಸರು ಹೇಳುವುದನ್ನೇ ಮರೆತುಬಿಟ್ಟಿದ್ದೆ. ಅವರ‍ ಹೆಸರು ಸ್ವರ್ಣಲೇಖಾ.  ಅವರಿಗೆ ಆ ಹೆಸರನ್ನಿಟ್ಟದ್ದು ನನ್ನಜ್ಜ. ಅದಕ್ಕೊಂದು ಹಿನ್ನೆಲೆಯಿದೆ. ನಮ್ಮ ಅಜ್ಜನ ಜಮೀನಿನ ಸುತ್ತ ಮೂರೂ ಬದಿಯಲ್ಲಿ ಒಂದು ನದಿ ಬಾಗಿ ಬಳುಕಿ ಮೈದುಂಬಿ ಹರಿಯುತ್ತಿದೆ. ಆ ಜೀವ ನದಿಯ ಕಾರಣದಿಂದಾಗಿ ನನ್ನಜ್ಜನ ಆಸ್ತಿ ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿಸುತ್ತಾ ಹೋಯಿತಂತೆ. ನಾಗರಿಕ ಜಗತ್ತಿನಿಂದ ತೀರ ದೂರದಲ್ಲಿ ಕಾಡಿನ ಮಧ್ಯೆ ತುಂಡರಸನಂತೆ ಬದುಕುತ್ತಿದ್ದ ನನ್ನಜ್ಜ. ತನ್ನ ಈ ಐಶ್ವರ್ಯಕ್ಕೆ ಪಶ್ಚಿಮ ಘಟ್ಟದಿಂದ ದುಮ್ಮಿಕ್ಕಿ ಹರಿಯುವ ಈ ನದಿಯೇ ಕಾರಣವೆಂದು ಬಲವಾಗಿ ನಂಬಿದ್ದ. ಹಾಗಾಗಿ ಹೆಸರಿಲ್ಲದ ಈ  ನದಿಗೆ ಸ್ವರ್ಣಲೇಖಾ ಎಂದು  ಹೆಸರಿಟ್ಟರಂತೆ. ತಮಗೆ ಮದುವೆಯಾಗಿ ಬಹುಕಾಲದ ನಂತರ ಹುಟ್ಟಿದ ಹೆಣ್ಣು ಮಗುವಿಗೂ ಅವರು ಅದೇ ಹೆಸರನ್ನು ಇಟ್ಟದ್ದು ಸಹಜವೇ ಆಗಿತ್ತು. ಅವಳೇ ನನ್ನಮ್ಮ ಸ್ವರ್ಣಲೇಖಾ.

ನನ್ನಪ್ಪನ ಅಪ್ಪ  ಅಂದರೆ ನನ್ನ ಮುತ್ತಜ್ಜ  ಎಲ್ಲಿಂದಲೋ ಬಂದು ಈ ಕಾಡಿನಲ್ಲಿ ನೆಲೆ ನಿಂತು ಇಲ್ಲಿ ಕೃಷಿ ಮಾಡಿ ಈ ಪ್ರದೇಶಕ್ಕೆ ’ರತ್ನಾಪುರ’ ಎಂಬ ಹೆಸರನ್ನಿಟ್ಟರಂತೆ. ಅದಕ್ಕೂ ಒಂದು ಕಾರಣವುಂಟು. ಬಹಳ ಸಾಹಸಿಯಾದ ನನ್ನಜ್ಜ ಗುಡ್ಡ ಬೆಟ್ಟ ಪರ್ವತಗಳನ್ನು ಹತ್ತುವುದರಲ್ಲಿ ನಿಸ್ಸಿಮನಂತೆ. ಹಾಗೊಂದು ದಿನ ಕುಮಾರಪರ್ವತವನ್ನು ಹತ್ತಿ ಅಲ್ಲಿಯ ಸೊಬಗಿಗೆ ಮೈಮರೆತು ಅಲ್ಲಿಯೇ ಹಣ್ಣು-ಹಂಪಲ, ಗೆಡ್ಡೆ-ಗೆಣಸುಗಳನ್ನು ತಿನ್ನುತ್ತಾ ಗುಹೆಯೊಂದರಲ್ಲಿ ಕೆಲಕಾಲ ತಂಗಿದ್ದನಂತೆ. ಆಗ ಅಲ್ಲಿ ಅವರಿಗೊಬ್ಬ ಸಾಧುವಿನ ಪರಿಚಯವಾಯಿತು. ಆತ ನನ್ನ ಮುತ್ತಜ್ಜನಿಗೆ ಹೇಳಿದರಂತೆ, ’ನೀನೊಬ್ಬ ಗೃಹಸ್ಥ. ಸನ್ಯಾಸಿಯ ತರ ಊರೂರು ಅಲೆಯಬಾರದು. ಅದಕ್ಕೂ ಒಂದು ಕಾಲವಿದೆ. ಈಗ ನೀನು ಒಂದು ಕಡೆ ನೆಲೆಯೂರಬೇಕು.’ ಎಂದು ಮುತ್ತಜ್ಜನನ್ನು ದೀರ್ಘವಾಗಿ ನೋಡುತ್ತಾ, ತಾನು ನಿಂತ ಜಾಗವನ್ನು ತೋರಿಸಿ, ’ಇದು ನೋಡು, ಇಲ್ಲಿಯೇ ಒಂದು ಕಾಲದಲ್ಲಿ ಪರಶುರಾಮ ನಿಂತಿದ್ದ. ಇಲ್ಲಿಂದಲೇ ಆತ ತನ್ನ ಕೊಡಲಿಯನ್ನು ಸಮುದ್ರದತ್ತ ಎಸೆದು ತನ್ನ ”ವಾಸಕ್ಕೆ ಒಂದಿಷ್ಟು ಜಾಗವನ್ನು ಕೊಡು’ ಎಂದು ಆಜ್ನಾಪಿಸಿದನಂತೆ.. ಅದೋ ನೋಡು ಕೆಳಗೆ ಹರಡಿಕೊಂಡಿರುವ ಪುಷ್ಪಗಿರಿ ಅರಣ್ಯ ಪ್ರದೇಶ. ಇಲ್ಲಿಂದ ನೇರವಾಗಿ ಕೆಳಗೆ ಇಳಿದು ಹೋಗು.’ ಎನ್ನುತ್ತಾ ದೂರದ ಪ್ರಪಾತದಂಚಿನಲ್ಲಿ ಬೆಳ್ಳಿರೇಖೆಯಂತೆ ಕಾಣುತ್ತಿರುವ ಕಿರು ತೊರೆ ಒಂದನ್ನು ತೋರಿಸಿ’ ಅದು ನೋಡು....ಪರುಷರಾಮ ನದಿ. ಭೂಮಿಯನ್ನು ಇಪ್ಪತ್ತೊಂದು ಬಾರಿ ಸಂಚರಿಸಿ, ಕ್ಷತ್ರಿಯ ಕುಲವನ್ನೆಲ್ಲಾ ನಾಶಪಡಿಸಿದ ಮೇಲೆ ತನ್ನ ರಕ್ತರಂಜಿತ ಕೊಡಲಿಯನ್ನು ಇದೇ ನದಿಯಲ್ಲಿ ಅದ್ದಿ ತೊಳೆದುಕೊಳ್ಳಲು ಪ್ರಯತ್ನಿಸಿದ. ಆದರೆ ಆತನ ಕೊಡಲಿಗಂಟಿದ ರಕ್ತ ಹಾಗೆಯೇ ಉಳಿಯಿತು. ಆಗ ಸಿಟ್ಟಿನಿಂದ ಆತ ನದಿಗೆ ಕೊಡಲಿನಿಂದ ಅಪ್ಪಳಿಸಿದ. ಬೆದರಿದ ಆ ನದಿ ಹಿಂದಕ್ಕೆ ಬಾಗಿ ಬಳುಕಿದಳು. ಹಾಗೆ ಹಿಂದಕ್ಕೆ ಸರಿದ ಜಾಗ ಅರ್ಧಚಂದ್ರಾಕೃತಿಯ ಭೂಭಾಗವಾಯ್ತು. ಅದು ವಸುಂಧರೆಯ ಗರ್ಭ.  ಅದೊರೊಳಗೆ ಹೊನ್ನಿದೆ.ಅನರ್ಘ್ಯ ರತ್ನ ಬಂಢಾರವಿದೆ. ಅದು ಯಾರದೋ ಬರವಿಗಾಗಿ ಕಾಯುತ್ತಿದೆ. ನೀನು ಅಲ್ಲಿಗೆ ಹೋಗು.’ ಎಂದು ಆ ಸಾಧು ಮುತ್ತಜ್ಜನ ನೆತ್ತಿಯ ಮೇಲೆ ಕಯ್ಯಿಟ್ಟನಂತೆ. ಅಜ್ಜನಿಗೆ ಆ ಕ್ಷಣದಲ್ಲಿ ಆಳವಾದ ಗುಹೆಯೊಂದಕ್ಕೆ ದುಮುಕಿದ ಅನುಭವ. ತನ್ನನ್ನು ಮರೆತು ಶಿಲೆಯಾದಂತೆ. ನಂತರ ಅಲ್ಲಿಂದ ನಿಧಾನವಾಗಿ ಇಳಿಯುತ್ತಾ ಬಂದ. ಸಾಧು ನಿರ್ಧೇಶಿಸಿದ ನದಿಯನ್ನು ತಲುಪಲು ಎರಡು ದಿನ ಬೇಕಾಯಿತಂತೆ. ಆ ನದಿಗುಂಟ ನಡೆಯುತ್ತಾ ಬಂದವನು ಆ ಸಾಧು ಹೇಳಿದ ನದಿ ಆ ಭೂಭಾಗಕ್ಕೆ ಬಂದವರು ದಿಗ್ಮೂಢರಾಗಿ ನಿಂತುಬಿಟ್ಟರು. ಆಗ ಅವರ ಬಾಯಿಯಿಂದ ಹೊರಟ ಶಬ್ದವೇ.’ ಅಹಾಹ..ಇದು ರತ್ನಾಪುರವೇ..!’

ಇಂತಪ್ಪ ರತ್ನಾಪುರದ ರಾಜಕುಮಾರಿ ಸ್ವರ್ಣಲೇಖಾ ಬೆಳೆದು ದೊಡ್ಡವಳಾಗುವ ಕಾಲಕ್ಕೆ ರತ್ನಾಪುರಕ್ಕೆ ಜಿಲ್ಲಾ ಕೇಂದ್ರವಾದ ಮಂಗಳೂರಿನೊಡನೆ ಸಂಪರ್ಕ ಬೆಳೆದಿತ್ತು. ಅದಕ್ಕೆ ಕಾರಣವಾಗಿದ್ದು ಟಿಂಬರ್ ಸಾಗಿಸುವ ಲಾರಿಗಳು. ನಿತ್ಯ ಹರಿದ್ವರ್ಣದಿಂದ ಸುತ್ತುವರಿದಿದ್ದ ರತ್ನಾಪುರ ಪಶ್ಚಿಮ ಘಟ್ಟದ ಸೆರಗಿನಲ್ಲಿತ್ತು. ಅತ್ಯಮೂಲ್ಯವಾದ ವನ್ಯಸಂಪತ್ತನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿತ್ತು. ಆಗ ತಾನೇ ನಮ್ಮ ದೇಶ ಬ್ರಿಟೀಷರ ಸೆರೆಯಿಂದ ಬಿಡುಗಡೆಯನ್ನು ಪಡೆದಿತ್ತು. ನಮ್ಮ ಜನನಾಯಕರೇ ನಮ್ಮನಾಳುವ ಪ್ರಭುಗಳಾದರು. ಅವರ ಕಾಕ ದೃಷ್ಟಿ ಈ ಕಾಡಿನಲ್ಲಿ ಸ್ವಚ್ಛಂದವಾಗಿ ಮುಗಿಲೆತ್ತರ ಬೆಳೆದು ನಿಂತ ಬೃಹತ್ ಮರಗಳೆಡೆಗೆ ಹರಿಯಿತು. ಅವು ಅವರ ಕಣ್ಣಿಗೆ ದುಡ್ಡಿನ ರಾಶಿಯಂತೆ ಕಾಣಿಸತೊಡಗಿದವು. ಪರಿಣಾಮವಾಗಿ ಸಾವಿರಾರು ಎಕ್ರೆ ಅರಣ್ಯವನ್ನು ಸರಾಸಗಟಾಗಿ ಹೊಡೆದುರುಳಿಸಲು ಖಾಸಗಿ ಗುತ್ತಿಗೆದಾರರಿಗೆ ಪರವಾನಾಗಿ ಕೊಡಲಾಯ್ತು. ಹುಣಸೂರಿನ ಲಾರಿಗಳು ರತ್ನಾಪುರದ ರನ್ನದ ಮಣಿಗಳಂತಿದ್ದ ಮರಗಳನ್ನು ಉರುಳಿಸಿ, ಉರುಳಿಸಿ ಲಾರಿಯಲ್ಲಿ ಹೇರಿಕೊಂಡು ಮಡಿಕೇರಿ ಮಾರ್ಗವಾಗಿ ಸಂಚರಿಸಲು ಶುರು ಮಾಡಿದವು. ಇನ್ನು ಕೆಲವು ಮಂಗಳೂರಿನ ಬಂದರನ್ನು ಸೇರತೊಡಗಿದವು. ಹಾಗೆ ಲಾರಿಗಳಲ್ಲಿ ಬಂದ ಅಪರಿಚಿತರು ಸುತ್ತಮುತ್ತಲಿನ ಹಳ್ಳಿಗಳಿಗೆ ಹೇಗೆ ಪರಿಚಿತರಾದರೋ ಹಾಗೆ ರತ್ನಾಪುರ ಪುರದ ನನ್ನಜ್ಜನಿಗೂ ಪರಿಚಿತರಾದರು. ಅಜ್ಜನೂರಿಗೆ ಒಂದು ಕಚ್ಚಾ ರಸ್ತೆ ಕಾಣಿಸಿಕೊಂಡಿತು.  

ರಸ್ತೆಯಾಯಿತು ಎಂದರೆ ಹೊರಜಗತ್ತಿಗೆ ತೆರೆದುಕೊಂಡಂತೆ ತಾನೇ..? ಅಜ್ಜಾ ಒಂದು ಎತ್ತಿನ ಗಾಡಿಯನ್ನು ಖರಿದಿಸಿದರು.. ಆ ಎತ್ತಿನ ಗಾಡಿಯಲ್ಲಿ ಎಂಟು ಮೈಲಿ ದೂರದ ಶಾಲೆಗೆ ನನ್ನಮ್ಮ ಹೋಗುತ್ತಿದ್ದರಂತೆ. ಸ್ವರ್ಣಲೇಖಾ ನದಿ ದಂಡೆಯಲ್ಲಿ ಆಡಿದ ನನ್ನಮ್ಮ ಇಂದುಮತಿ ನದಿಯ ದಡದಲ್ಲಿದ್ದ ಆ ದೊಡ್ಡಮನೆಯ ಪಟೇಲರನ್ನು ಮದುವೆಯಾಗಿದ್ದು ಹೇಗೆ?
ರತ್ನಾಪುರಕ್ಕೆ ಇತಿಹಾಸವಿಲ್ಲ. ಆದರೆ ದೊಡ್ಡಮನೆಯ ಇತಿಹಾಸವನ್ನು ಲಾವಣಿ ಕಟ್ಟಿ ಹಾಡುವವರಿದ್ದಾರೆ. ಇಂತವರ ಕಣ್ಣಿಗೆ ಎತ್ತಿನ ಗಾಡಿಯಲ್ಲಿ ಶಾಲೆಗೆ ಹೋಗುವ ಹೆಣ್ಣುಮಗಳು ಬೀಳದೆ ಇರಲು ಸಾಧ್ಯವೇ? ನನ್ನಪ್ಪನ ಅಪ್ಪ ಪಟೇಲ್ ಅಜ್ಜ ಈಕೆಯನ್ನು ಸೊಸೆಯಾಗಿ ತರಲು ನಿರ್ಧರಿಸಿದರು. ದೊಡ್ಡಮನೆಯ ಪಟೇಲರು ತಾವಾಗಿಯೇ ಹೆಣ್ಣು ಕೇಳಲು ಬಂದಾಗ ನನ್ನಜ್ಜ ಸುಲಭದಲ್ಲಿ ಒಪ್ಪಿಬಿಟ್ಟರಂತೆ. ಆದರೆ ಅಜ್ಜಿ ಹುಡುಗನಿಗೆ ವಯಸ್ಸಾಗಿದೆ ಎಂದು ತಕರಾರು ಎತ್ತಿದರಂತೆ. ಆದರೆ ಕೊನೆಯಲ್ಲಿ ಆ ಮನೆಯ ಇತಿಹಾಸವೇ ವರ್ತಮಾನವನ್ನು ಗೆದ್ದಿತು.. ಅಮ್ಮನ ಇಷ್ಟಾನಿಷ್ಟವನ್ನು ಯಾರೂ ಕೇಳದಿದ್ದರೂ ಆ ಮನೆ ಇಂದುಮತಿ ನದಿಯ ದಡದ ಮೇಲಿದೆ ತನ್ನ ಒಡನಾಟಕ್ಕೆ ಅಲ್ಲೊಂದು ನದಿಯಿದೆ ಮತ್ತು ಆ ಮನೆ ತುಂಬಾ ಜನರಿರುತ್ತಾರೆ ಎಂಬ ಕಾರಣಕ್ಕೆ ಅಮ್ಮನೂ ಆ ಮದುವೆಗೆ ಒಪ್ಪಿದಳಂತೆ. ಆಗ ಅಮ್ಮನ ವಯಸ್ಸು ಹದಿನೈದು.

ಅಮ್ಮನೂರಿನ ಸ್ವರ್ಣಲೇಖಾ ನದಿ ಮತ್ತು ಅಪ್ಪನೂರಿನ ಇಂದುಮತಿ ನದಿ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಕಡಲಿನನ್ನು ಸೇರುವ ಭರದಲ್ಲಿ ಸಮಾನಂತರವಾಗಿ ಹರಿಯುತ್ತಾ ಉಪ್ಪಂಗಳವೆಂಬ ಊರಿನಲ್ಲಿ ಹರಿಹರೇಶ್ವರನ ಸನ್ನಿದಿಯಲ್ಲಿ ಒಂದಾಗಿ ಬೆರೆತು, ಮುಂದೆ ಭವನಾಶಿಯೆಂಬ ಒಂದೇ ನದಿಯಾಗಿ ಚಾಗನೂರಿನಲ್ಲಿ ಕುಮಾರಾಧಾರವೆಂಬ ಗಂಡು ನದಿಯಲ್ಲಿ ಲೀನವಾಗುತ್ತಾರೆ.
ಗಂಡು ನದಿ ಎಂದಾಗ ನೆನಪಾಯ್ತು. ದೊಡ್ಡಮನೆಯ ಊಟದ ಹಾಲ್ ನಲ್ಲಿ ನಾವು ಮಕ್ಕಳೆಲ್ಲಾ ಮಲಗುತ್ತಿದ್ದೆವಲ್ಲಾ..ಅಗ ಅಜ್ಜಿ ಹೇಳುತ್ತಿದ್ದ ಕಥೆಗಳಲ್ಲಿ ಕುಮಾರಧಾರಾ ಮತ್ತು ನೇತ್ರಾವತಿಯ ಪ್ರೇಮ ಕಥೆಯನ್ನೂ ಹೇಳಿದ್ದರು.
 ಸಾಮಾನ್ಯವಾಗಿ ನಾವೆಲ್ಲಾ ನದಿಯನ್ನು ಹೆಣ್ಣಿನ ರೂಪದಲ್ಲೇ ಕಂಡಿದ್ದೇವೆ. ಆದರೆ ಅಜ್ಜಿ ಹೇಳಿದ ಕಥೆಯಲ್ಲಿ ಕುಮಾರಧಾರಾ ಗಂಡಾಗಿದ್ದ; ತನ್ನ ಪಕ್ಕದಲ್ಲೇ ಹುಟ್ಟಿದ ಅಪೂರ್ವ ಸುಂದರಿಯಾದ ನೇತ್ರಾವತಿಯ ಮೇಲೆ ಕುಮಾರಧಾರನಿಗೆ ಪ್ರೀತಿ ಮೊಳಕೆಯೊಡೆಯುತ್ತದೆ. ಅವಳ ಬಾಗು ಬಳುಕುವಿಕೆಗೆ, ಮಿಂಚಿನ ಸೆಳವಿಗೆ ಈತ ಮೋಹ ಪರವಶನಾಗುತ್ತಾನೆ. ಪ್ರೇಮೊತ್ಕಂಠಿತನಾದ ಆತ ಅವಳ ಮುಂದೆ ಮಂಡಿಯೂರಿ ತನ್ನನ್ನು ಮದುವೆಯಾಗುವಿಯಾ? ಎಂದು ಕೇಳಿಕೊಳ್ಳುತ್ತಾನೆ. ಆಗ ಆಕೆ ಕೊರಳು ಕೊಂಕಿಸಿ, ಆತನನ್ನು ತಿರಸ್ಕಾರದಿಂದ ನೋಡುತ್ತಾ ’ ನಿನ್ನಂತಹ ಮುದ್ದಣ [ಮೊಡವೆ]ದ ಮುಖವುಳ್ಳವನನ್ನು ಮದುವೆಯಾಗಲಾರೆ’ ಎಂದು ರಭಸದಿಂದ ಮುಂದಕ್ಕೆ ಹರಿದು ಬಿಟ್ಟಳಂತೆ. [ಇಂದಿಗೂ ಕುಮಾರಧಾರ ನದಿಯಲ್ಲಿ ಕಲ್ಲು ಬಂಡೆಗಳೇ ಜಾಸ್ತಿ ಇವೆ.] ಮುಂದೆ ಅವಳು ಧರ್ಮಸ್ಥಳದಲ್ಲಿ ಜಗತ್ ಪಿತ ಶಿವನಿಗೆ ಅಭಿಶೇಕ ಜಲವಾದರೆ,  ಅವಳಿಂದ ಅವಮಾನಿತನಾದ ಕುಮಾರಧಾರ ಮುಂದಕ್ಕೆ ಹರಿದು ಕುಕ್ಕೇಸುಬ್ರಹ್ಮಣ್ಯದಲ್ಲಿ ಜಗತ್ ಪಿತನ ಮಗ ದೇವಸೇನಾನಿಯ ಪಾದವನ್ನು ತೊಳೆಯುತ್ತಾನೆ. ಏನಾದರೇನು ಕುಮಾರಧಾರನಿಗೆ ತನ್ನ ಮೊದಲ ಪ್ರೇಮವನ್ನು ಮರೆಯಲಾಗುವುದಿಲ್ಲ. ಆತ ನೇತ್ರಾವತಿಯ ಸಮಾನಂತರವಾಗಿ ಹರಿಯುತ್ತಾ ತನ್ನತನವನ್ನೆಲ್ಲಾ ಕಳೆದುಕೊಳ್ಳುತ್ತಾ ಸುಮಾರು ಅರುವತ್ತು ಮೈಲಿ ಹರಿದು ಬಂದು ಉಪ್ಪಿನಂಗಡಿಯಲ್ಲಿ ತನ್ನ ಅಸ್ತಿತ್ವವನ್ನೆಲ್ಲ ಇಲ್ಲವಾಗಿಸಿಕೊಂಡು ನೇತ್ರಾವತಿಯಲ್ಲಿ ಐಕ್ಯಗೊಳ್ಳುತ್ತಾನೆ. ಮುಂದೆ ಅಖಂಡ ನೇತ್ರಾವತಿ ಸಮುದ್ರದಲ್ಲಿ ಸಂಯೋಗ ಹೊಂದುತ್ತಾಳೆ.

ಅಜ್ಜಿ ಅಂದು ಹೇಳಿದ ಆ ಕಥೆಯಲ್ಲಿನ ಆ ಉತ್ಕಟ ಪ್ರೇಮಿ ಕುಮಾರಧಾರಾ ನನ್ನ ಚಿತ್ತ ಭಿತ್ತಿಯಲ್ಲಿ ಚಿರಸ್ಥಾಯಿಯಾಗಿ ಉಳಿದು ನನ್ನನ್ನು ಬೇಟಿಯಾದ ಪ್ರತಿ ಗಂಡಿನಲ್ಲಿಯೂ ಅವನನ್ನೇ ಹುಡುಕುವ ಒಬ್ಸೇಷನ್ ಆಗಿ ಮುಂದುವರಿದಿರಬೇಕು. ಇಲ್ಲವಾದರೆ ನೈಲ್ ನದಿಯ ದಡಲ್ಲಿ ಸಿಕ್ಕಿದ ಐರ್ವಿನ್ ಸ್ಟೊನ್ ನನ್ನ ಎದೆಯ ಕೊಳವನ್ಯಾಕೆ ಕಲಕುತ್ತಿದ್ದಾನೆ.?

ಅರೇ ನನ್ನ ಹೆಸರನ್ನೂ ನಾನು ಇದುವರೆಗೂ ನಿಮಗೆ ಹೇಳಲೇ ಇಲ್ಲವಲ್ಲ. ನನ್ನ ಹೆಸರು ಶಾಂಭವಿ. ನನ್ನ ತಮ್ಮನ ಹೆಸರು ಗೌರಿಶಂಕರ. ಅಮ್ಮ ತನ್ನ ಹದಿನೇಳನೇ ವಯಸ್ಸಿನಲ್ಲಿ ನನಗೆ ಜನ್ಮ ನೀಡಿದಳು. ನಾನು ಹುಟ್ಟಿದ ಐದು ವರಷಗಳ ನಂತರ ನನ್ನ ತಮ್ಮ ಹುಟ್ಟಿದ. ಅದೂ ತನ್ನಪ್ಪ ಸತ್ತ ದಿನವೇ, ನಿಗದಿತ ಸಮಯದ ಒಂದು ತಿಂಗಳ ಮೊದಲೇ ನಾಗೂರಿನ ಶಾಲೆಯಲ್ಲಿ ಗತಿ ಗೋತ್ರ ಇಲ್ಲದವನಂತೆ ಹುಟ್ಟಿದ ಎಂಬುದನ್ನು ನಾನು ನಿಮಗೆ ಹಿಂದೆಯೇ ಹೇಳಿದ್ದೇನೆ.

. ಇನ್ನು ಮುಂದೆ ಸ್ವರ್ಣಲೇಖಾ ತನ್ನ ಕಥೆಯನ್ನು ತಾನೇ ಹೇಳಿದರೆ ಹೇಗೆ? ಅದೇ ಸರಿ ಅಲ್ವಾ? ಇನ್ನೊಬ್ಬರ ಮನಸು ಹೀಗಿರಬಹುದು..ಹೀಗಿತ್ತೇನೋ...ಎಂದು ಹೊರಗೆ ನಿಂತು ನಾವು ತರ್ಕಿಸಬಹುದು.ಆದರೆ ಅದನ್ನು ಅನುಭವಿಸಲಾರೆವು. ’ತಾನು ಸಾಯಬೇಕು ಸತ್ತು ಸ್ವರ್ಗ ಕಾಣಬೇಕು.’

’ ನನ್ನ ಇಪ್ಪತ್ತೆರಡನೇ ವಯಸ್ಸಿಗೇ ನಾನು ಸತ್ತು ಹೋದೆ’ ಇಷ್ಟು ಹೇಳಿದವಳೇ ಅವಳು ಎದುರಿಗಿದ್ದ ಅನುಪಮಳ ಮುಖ ನೋಡಿದಳು. ಅನುಪಮ ಅವಳ ಕ್ಲಾಸ್ ಮೇಟ್.  ಇಬ್ಬರು ಪ್ರೈಮರಿಯಿಂದ ಹೈಸ್ಕೂಲ್ ತನಕ ಒಟ್ಟಿಗೆ ಓದಿದವರು.ಅವಳದು ಇನ್ನೊಂದು ದೊಡ್ಡ ಕತೆ. ಅದನ್ನು ಸಮಯ ಬಂದಾಗ ಮುಂದೆ ಹೇಳುವೆ ಈಗ ಅವಳು ತನ್ನ ಬಾಲ್ಯದ ಗೆಳತಿಯನ್ನು ನೋಡಲೆಂದೇ ಹದಿನೈದು ವರ್ಷಗಳ ನಂತರ ತನ್ನ ತವರೂರಿಗೆ-ತವರು ಮನೆಗಲ್ಲ- ಬಂದಿದ್ದಾಳೆ.
’ ಅಪ್ಪ ತೀರಿಕೊಂಡ ಮೇಲೆ ನಾನು ರತ್ನಾಪುರಕ್ಕೆ ಮತ್ತೆ ಬರಬೇಕಾಯ್ತು.’
’ಅಲ್ಲಿಯವರೆಗೆ ಎಲ್ಲಿದ್ದೆ?’
’ಮಂಗಳೂರಿನಲ್ಲಿ. ಅಪ್ಪ ನನ್ನನ್ನೂ ನನ್ನ ಮಕ್ಕಳನ್ನೂ ಈ ಊರಿನ ಜೊತೆ ಸಂಪರ್ಕವೇ ಇಲ್ಲದಂತೆ ಬೆಳೆಸಿಬಿಟ್ಟರು. ನಮಗೊಂದು ಮನೆಯನ್ನು ಮಾಡಿಕೊಟ್ಟು. ಶಾಂಭವಿ ಮತ್ತು ಗೌರಿಯನ್ನು ಅಲ್ಲೇ ಶಾಲೆಗೆ ಸೇರಿಬಿಟ್ಟರು. ರಾಜೆಗೂ ನಾವಿಲ್ಲಿ ಬರುತ್ತಿರಲಿಲ್ಲ.’
’ಮತ್ತೆ ಯಾವಾಗ ನೀನಿಲ್ಲಿಗೆ ಬಂದೆ?’
’ ಅಪ್ಪ ಸಡನ್ನಾಗಿ ಹೃದಯಾಘಾತದಿಂದ ತೀರಿಕೊಂಡರು. ಅಮ್ಮ ಒಂಟಿಯಾಗಿಬಿಟ್ಟರು. ಹಾಗಾಗಿ ನಾನಿಲ್ಲಿಗೆ ಬಂದೆ. ಇಷ್ಟು ದೊಡ್ಡ ಆಸ್ತಿಯನ್ನು ನೋಡಿಕೊಳ್ಳಬೇಕಾಗಿತ್ತಲ್ಲಾ. ಆಗ ಬಂದವನೇ ಕರುಣಾಕರ’
”ಕರುಣಾಕರ ಯಾರು?’
’ ಅವನು ನಮ್ಮ ಆಸ್ತಿ ಮೇಲ್ವಿಚಾರಣೆ ನೋಡಿಕೊಳ್ಳಲು ಬಂದ ರೈಟರ್.’
ಅಷ್ಟು ಹೇಳಿದವಳೇ ಸ್ವರ್ಣಲೇಖಾ ಸ್ವಲ್ಪ ಹೊತ್ತು ಮೌನ ತಾಳಿದಳು. ಆಮೇಲೆ ತನಗೆ ತಾನೇ ಎಂಬಂತೆ ಹೇಳಿಕೊಳ್ಳತೊಡಗಿದಳು.
’ ಆಗ ನನ್ನ ವಯಸ್ಸು ಮುವತ್ತೇಳು. ಒಂಟಿಯಾಗಿದ್ದೆ. ಅಸಾಯಕಳಾಗಿದ್ದೆ. ಅವಲಂಬನೆಯೊಂದು ಬೇಕಾಗಿತ್ತು. ಹಾಗಾಗಿ ಇದೆಲ್ಲ ನಡೆದು ಹೋಯ್ತೇನೋ...’ ಎಂದವಳೇ ಅನುಪಮಳತ್ತ ತಿರುಗಿ ಅವಳ ಎರಡೂ ಕೈಗಳನ್ನು ಹಿಡಿದುಕೊಂಡು ’ ಖಂಡಿತವಾಗಿಯೂ ನಾನು ನನ್ನ ಮಕ್ಕಳಿಗೆ ಅನ್ಯಾಯ ಮಾಡಲಿಲ್ಲ..’ ಹೇಳುತ್ತಲೇ ಅವಳ ಕಣ್ಣುಗಳು ತುಂಬಿಕೊಳ್ಳತೊಡಗಿದವು....

[ 'ಅಲ್ಲೊಂದು ಕತ್ತಲೆ ಕೋಣೆ’ಯ ಮುಂದುವರಿದ ಭಾಗ ]