Wednesday, August 27, 2008

ಬದುಕಬೇಕು....ಬದುಕಲೇಬೇಕು

ಬಹಳ ಹಿಂದೆ, ತಮ್ಮ ಅತ್ಯಂತ ಸಂಕಟದ ಘಳಿಗೆಯಲ್ಲಿ ಕೆ ರಾಮಯ್ಯ ಒಂದು ಮಾತು ಹೇಳಿದ್ದರು "ಅತ್ಮಹತ್ಯೆ’ಗೆ ನಾನು ಕೊಟ್ಟುಕೊಳ್ಳುವ ಕಾರಣಗಳು ’ಕಾರಣ’ಗಳೇ ಅಲ್ಲವೇನೋ ಎಂಬ ಗುಮಾನಿ ನನ್ನನ್ನು ಬದುಕುವಂತೆ ಮಾಡಿದೆ"ನನ್ನ ಅತ್ಯಂತ ದುಃಖದ, ಯಾತನೆಯ ಕ್ಷಣಗಳಲ್ಲಿ ಇದು ನನ್ನನ್ನು ಆತ್ಮವಿಮರ್ಶೆಗೆ ದೂಡುತ್ತದೆ. ನನ್ನನ್ನು ಮತ್ತೆ ಜೀವನ್ಮುಖಿಯಾಗುವಂತೆ ಪ್ರೇರ್‍ಎಪಿಸುತ್ತದೆ. ಮುಖ್ಯವಾಗಿ ನಾನು ಭೂತಕಾಲದೊಳಗೆ ಜಾರಿಬಿಡುತ್ತೇನೆ. ಗದ್ದೆ, ತೋಟ, ನದಿ, ಕಾಡುಗಳಲ್ಲಿ ಅಲೆದಾಡಿ ಅರಬ್ಬಿ ಸಮುದ್ರದ ನದಿಗುಂಟ ಹೆಜ್ಜೆ ಹಾಕುತ್ತೇನೆ. ಸೋಮೇಶ್ವರದ ರುದ್ರಪಾದೆಯ ಮೇಲೆ ಗಲ್ಲಕ್ಕೆ ಕೈಯೂರಿ ಕುಳಿತು ಅನಂತ ನೀಲಿ ಕಡಲನ್ನು ದಿಟ್ಟಿಸುತ್ತೇನೆ. ಬಂಡೆಗೆ ಅಪ್ಪಳಿಸುವ ದಡೂತಿ ತೆರೆಗಳು ತುಂತುರು ಹನಿಗಳಾಗಿ ಮುಖಕ್ಕೆ ಮುತ್ತಿಕ್ಕುತ್ತವೆ. ಹಾಗೆಯೇ ಕಣ್ಮುಚ್ಚಿ ಕಡಲ ಭೊರ್ಗೆರೆತಕ್ಕೆ ಕಿವಿಯಾಗುತ್ತೇನೆ. ಅದರ ಪಂಥಾಹ್ವಾನ ನನ್ನೊಳಗಿನ ಹೋರಾಟದ ಕೆಚ್ಚನ್ನು ಕೆರಳಿಸುತ್ತದೆ. ಕಣ್ತೆರೆದರೆ ನಿಜವಾಗಿಯೂ ನನ್ನಲೆನೋ ತುಂಬಿಕೊಂಡಂತೆ ಭಾಸವಾಗುತ್ತದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಹುರುಪು ಕಾಣಿಸಿಕೊಳ್ಳುತ್ತದೆ. ನಿಜಕ್ಕೂ ಬದುಕೆಷ್ಟು ಸರಳ ಮತ್ತು ಸುಂದರ! ಆದರೂ ಆಳದಲ್ಲೊಂದು ಶೂನ್ಯ ಇದ್ದೇ ಇದೆ. ಬಹಳ ಭಾರಿ ನನಗೆ ಅನ್ನಿಸುವುದಿದೆ; ಎಲ್ಲರಿಗೂ ಅವರದೇ ಆದ ಗೆಳೆಯರ ಬಳಗವಿದೆ. ಆತ್ಮೀಯ ವರ್ತುಲವಿದೆ. ನನಗೇಕೆ ಆ ಭಾಗ್ಯವಿಲ್ಲ?ನಾನು ಅಂತರ್ಜಾತೀಯ ಮದುವೆ ಮಾಡಿಕೊಂಡಿದ್ದೇನೆ. ಗಂಡನ ಮನೆಯವರಿದ್ದಾರೆ ಕಷ್ಟಸುಖಕ್ಕೆ; ಆದರೆ ಆಪ್ತರಲ್ಲ. ನನ್ನ ತವರಿದೆ; ಆದರೆ ಮನ ಬಿಚ್ಚಿ ಎಲ್ಲವನ್ನೂ ಹೇಳಿಕೊಳ್ಳಲಾರೆ. ಯಾಕೆಂದರೆ ಇದು ನಾನು ಆಯ್ಕೆ ಮಾಡಿಕೊಂಡ ಬದುಕು. ಇದರ ಸೋಲು ಗೆಲುವುಗಳೆರಡೂ ನನ್ನದೇ. ಹಾಗಾಗಿ ಗೆಳೆತನಕ್ಕಾಗಿ ನಾನು ಹಪಹಪಿಸುತ್ತೇನೆ. ಈ ಹಪಹಪಿಕೆ ಎಲ್ಲರಲ್ಲೂ ಇರುತ್ತದೆ. ಆದರೂ ಯಾರಿಗೂ ಯಾರೂ ಸಿಗುವುದಿಲ್ಲ. ಯಾಕೆ ಹೀಗೆ? ಯಾವ ತರಂಗಾಂತರದಲ್ಲಿ ಟ್ಯೂನ್ ಮಾಡಿದರೆ ನಮಗೆ ಬೇಕಾದ ಗೆಳೆಯರು ಸಿಗಬಹುದು?. ಗೊತ್ತಿಲ್ಲ. ಹಾಗಾಗಿ ಸದ್ಯಕ್ಕೆ ತರಂಗಾಂತರಗಳು ಬ್ಲಾಗ್ ಗಳಲ್ಲಿ ಹರಿದಾಡುತ್ತಿವೆ. ಮೊದಲೆಲ್ಲ ನನ್ನ ಗೆಳೆಯರು, ಅವನ ಗೆಳೆಯರು ಎಂದು ಒಂದಷ್ಟು ಬಳಗ ನಮ್ಮ ಸುತ್ತಲಿತ್ತು. ಆದರೆ ಅವರು ಯಾರೂ ’ನಮ್ಮ’ ಗೆಳೆಯರಾಗಲಿಲ್ಲ. ತಪ್ಪು ನಮ್ಮಲ್ಲಿಯೇ ಇತ್ತು. ನಮ್ಮ ನಮ್ಮ ಪರಿಧಿಯೊಳಗೆ ಇದ್ದುಕೊಂಡೇ ವ್ಯವಹರಿಸಿದೆವು. ಇಲ್ಲೊಂದು ಸೂಕ್ಷವನ್ನು ಗಮನಿಸಬೇಕು; ಗಂಡನ ಗೆಳೆಯರು ಎಂದಿಗೂ ಪತ್ನಿಗೆ ಹತ್ತಿರದವರಾಗುವುದಿಲ್ಲ. ಒಂದುವೇಳೆ ಹತ್ತಿರದವರಾದರೆ ಗಂಡನ ’ಅಹಂ’ಗೆ ಪೆಟ್ಟು ಬೀಳುತ್ತದೆ. ಅವನಲ್ಲಿ ಸಂಶಯ, ಅಸಹನೆ ಹುಟ್ಟಿಕೊಳ್ಳುತ್ತದೆ. ದಾಂಪತ್ಯ ಬಿರುಕಿಗೆ ಇದುವೇ ಬೀಜವಾಗುತ್ತದೆ. ಇನ್ನು ಪತ್ನಿಯ ಗೆಳತಿಯರು ಅವನ ಭೌದ್ಧಿಕತೆಗೆ ಎಂದಿದ್ದರೂ ಕಡಿಮೆಯೇ ಎಂಬ ಭಾವನೆ ಗಂಡಂದಿರಲ್ಲಿದೆ. ಒಂಟಿಯಾಗಿಯೇ ಬದುಕುವುದು ನನಗೀಗ ರೂಢಿಯಾಗಿದೆ. ಅದು ನನ್ನ ಶಕ್ತಿ ಎಂಬುದು ನನಗೀಗ ಅರಿವಾಗಿದೆ. ಆ ಶಕ್ತಿ ಹೊರಚಿಮ್ಮುವುದಕ್ಕೂ ಒಂದು ಪ್ರೇರಣೆಯಿದೆ. ಅದನ್ನು ಇನ್ನೊಮ್ಮೆ ಹೇಳುತ್ತೇನೆ. ಸಂಪೂರ್ಣ ನೆಲ ಕಚ್ಚಿ ಹೋದೆ, ಉಸಿರಾಡುವುದೂ ಕಷ್ಟವಾಗುತ್ತಿದೆ ’ಸತ್ತುಹೋಗೋಣ’ ಎನಿಸಿದಾಗ ಕೆ. ರಾಮಯ್ಯರ ಮಾತುಗಳು ನೆನಪಾಗುತ್ತವೆ. ಮೈ ಕೊಡವಿ ಹೊಸ ಸವಾಲುಗಳನ್ನು ಎದುರಿಸಲು ಮನಸ್ಸು ಸಜ್ಜಾಗುತ್ತದೆ. ಒಂದು ದಾರಿ ಮುಚ್ಚಿದಾಗ ಹತ್ತು ದಾರಿಗಳು ತೆರೆದುಕೊಳ್ಳುತ್ತವೆ. ಒಂದನ್ನು ಆಯ್ಕೆ ಮಾಡಿಕೊಂಡು ನುಗ್ಗಿಬಿಡಬೇಕು; ದುಮ್ಮಿಕ್ಕಿ ಬಿಡಬೇಕು. ಸೋಲಾದರೂ ನಮ್ಮದೇ. ಗೆಲುವಾದರೂ ನಮ್ಮದೇ. ಸೋಲಿಗೆ ಬೇರೆಯವರತ್ತ ಬೊಟ್ಟು ತೋರಿಸಬಾರದು. ಅದು ನಮ್ಮ ಪ್ರಯತ್ನದಲ್ಲಿನ ವೈಪಲ್ಯ ಎಂದು ಭಾವಿಸಬೇಕು. ಗೆಲುವನ್ನು ಹೆಮ್ಮೆಯಿಂದ ಸ್ವೀಕರಿಸಬೇಕು. ಅದು ನಮ್ಮ ಸಾಧನೆ. ಒಮ್ಮೆ ಗೆಲುವಿನ ರುಚಿ ಅನುಭವಿಸಿ. ಅದು ನಿಮ್ಮ ಹಿಂದಿನ ಹತ್ತಾರು ಸೋಲುಗಳನ್ನು ಮರೆಸಿಬಿಡುತ್ತದೆ. ಆತ್ಮವಿಸ್ವಾಸವನ್ನು ಹೆಚ್ಚಿಸುತ್ತದೆ. ರಿಸ್ಕ್ ಗಳನ್ನು ತೆಗೆದುಕೊಳ್ಳುವಂತೆ ಹುರಿದುಂಬಿಸುತ್ತದೆ. ಅಪಾಯವನ್ನು ಎದುರಿಸುವುದರಲ್ಲೇ ಜೀವಚೈತನ್ಯ ಆಡಗಿದೆ. ಅದು ನಿಸರ್ಗಕ್ಕೂ ಪ್ರಿಯ. ಬರಹಕ್ಕೆ ಉಪದೇಶದ ಛಾಯೆ ಬಂದುಬಿಟ್ಟಿತೇ?. ಇಲ್ಲ ಗೆಳೆಯಾ, ಇದು ನನ್ನ ಅನುಭವ. ನನಗೆ ಅನ್ನಿಸಿದ್ದು ನಿಮಗೂ ಅನ್ನಿಸಬಹುದಲ್ಲವೇ? ಅನ್ನಿಸಬೇಕು; ಅದು ಸುರಗಿಗೆ ಇಷ್ಟ.

Saturday, August 9, 2008

ಬೇಡದ ತಾಯ್ತನ... ಬೇಡ

ಅಂಗವೈಕಲ್ಯದಿಂದ ಜನಿಸಲಿರುವ ಮಗು ತನಗೆ ಬೇಡ ಎಂಬ ಕಾರಣ ನೀಡಿ, ವೈದ್ಯಕೀಯ ಪುರಾವೆಗಳನ್ನು ಒದಗಿಸಿ, ತನಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಬೇಕೆಂದು ನ್ಯಾಯಾಲಯದ ಮೆಟ್ಟಲೇರಿದ ನಿಖಿತಾ ಮತ್ತು ಆಕೆಯ ಗಂಡ ಹರ್ಷಮೆಹತಾರ ಕೋರಿಕೆಯನ್ನು ಮುಂಬೈ ಹೈಕೋರ್ಟ್ ಆಗಸ್ಟ್ ೪ರ ಸೋಮವಾರ ತಳ್ಳಿ ಹಾಕಿದೆ।ನ್ಯಾಯಮೂರ್ತಿಗಳಾದ ಅರ್ ಎಮ್ ಎಸ್ ಖಾಂಡೆಪರ್ಕರ್ ಮತ್ತು ಅಮ್ಜದ್ ಸಯಿದ್ ರನ್ನೊಳಗೊಂಡ ವಿಭಾಗಿಯ ಪೀಠ ಈ ತೀರ್ಪು ನೀಡಿದೆ।

 ೧೯೭೧ರಲ್ಲಿ ಜಾರಿಗೆ ಬಂದಿದ್ದ ಮೆಡಿಕಲ್ ಟರ್ಮಿನೇಶನ್ ಅಫ್ ಪ್ರೆಗ್ನೆನ್ಸಿ ಕಾಯ್ದೆಯ ೩ ಮತ್ತು ೫ನೆಯ ಸೆಕ್ಷನ್ ತೀರ್ಪಿಗೆ ತಳಹದಿಯಾಗಿತ್ತು। ೧೯೭೧ರ ಕಾನೂನಿನ ಪ್ರಕಾರ ಗರ್ಭ ಧರಿಸಿದ ೨೦ ವಾರಗಳ ನಂತರ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ. ಆದರೆ ವಿಶೇಷ ಪರಿಸ್ಥಿತಿಯಲ್ಲಿ ೨೦ವಾರಗಳ ನಂತರವೂ ಗರ್ಭಪಾತ ಮಾಡಿಸಿಕೊಳ್ಳಲು ಈ ಕಾಯ್ದೆಯ ೩ ಮತ್ತು ೫ನೆಯ ಸೆಕ್ಷನಿನಲ್ಲಿ ಅವಕಾಶವಿದೆ. ಸೆಕ್ಷನ್ ೩ರಲ್ಲಿ ಮಗು ಅಂಗ ವೈಕಲ್ಯದಿಂದ ಹುಟ್ಟುವ ಸಂದರ್ಭವಿದ್ದರೆ, ಆ ಬಗ್ಗೆ ವೈಧ್ಯಕೀಯ ಪುರಾವೆಯಿದ್ದರೆ ಗರ್ಭಪಾತ ಮಾಡಿಸಬಹುದು. ಹಾಗೆಯೇ ಸೆಕ್ಷನ್ ೫ರ ಪ್ರಕಾರ ಬ್ರೂಣದ ಬೆಳವಣಿಗೆಯ ವೇಳೆ ಅಥವಾ ಹೆರಿಗೆಯ ಸಂದರ್ಭದಲ್ಲಿ ತಾಯಿ ಜೀವಕ್ಕೆ ಅಪಾಯವಿದ್ದು, ಅದಕ್ಕೆ ವೈಧ್ಯಕೀಯ ಪುರಾವೆಗಳಿದ್ದರೆ ಗರ್ಭಪಾತಕ್ಕೆ ಅನುಮತಿ ಇದೆ.
ನಿಖಿತಾ ೨೬ ವಾರಗಳ ಗರ್ಭವತಿ.ಆಕೆಗೆ ಎಮ್ ಟಿ ಪಿ ಕಾಯ್ದೆಯ ೩ ಮತ್ತು ೫ನೆಯ ಸೆಕ್ಷನ್ ಗಳು ಅನ್ವಯವಾಗುವುದಿಲ್ಲವೆಂದು ಕೋರ್ಟ್ ಹೇಳಿದೆ. ಹಾಗೆ ಹೇಳುವ ಮೊದಲು ಕೋರ್ಟ್, ಮುಂಬೈನ ಜೆ.ಜೆ ಹಾಸ್ಪಿಟಲ್ ನ ಪರಿಣಿತ ವೈದ್ಯ ತಂಡವೊಂದರಿಂದ ಬ್ರೂಣದ ಪರೀಕ್ಷೆ ನಡೆಸಿ ರಿಪೋರ್ಟ್ ತರಿಸಿಕೊಂಡಿತು. ಅದರಲ್ಲಿ ಮಗುವಿಗೆ ಹೃದಯ ತೊಂದರೆ ಇರುವುದು ನಿಜ,ಆದರೆ ಅಂಗವಿಕಲತೆಯ ಚಾನ್ಸ್ ಕಡಿಮೆ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದೆ. ಆದರೆ ಅಂಗವೈಕಲ್ಯ ಖಂಡಿತಾ ಉಂಟಾಗುತ್ತದೆ ಎಂದು ನಿಖಿತಾನ ಡಾಕ್ಟರ್ ನಿಖಿಲ್ ದಾತಾರ್ ಪುರಾವೆ ಒದಗಿಸಿದ್ದರು.
 ಸೆಕ್ಷನ್೫ರ ಪ್ರಕಾರ ಗರ್ಭ ಮುಂದುವರಿಯುವುದರಿಂದ ತಾಯಿ ಜೀವಕ್ಕೆ ಅಪಾಯವಿಲ್ಲ. ಹಾಗಾಗಿ ಗರ್ಭಪಾತಕ್ಕೆ ಅವಕಾಶವಿಲ್ಲ. ಒಂದು ವೇಳೆ ಅನುಮತಿ ಕೊಟ್ಟರೆ ಅದು ದಯಾಮರಣದ ರೂಪ ಪಡೆಯುತ್ತದೆ. ದಯಾಮರಣಕ್ಕೆ ನಮ್ಮ ದೇಶದಲ್ಲಿ ಅನುಮತಿಯಿಲ್ಲ.ಇತಿಹಾಸ ಸೃಷ್ಠಿಸಬಹುದಾಗಿದ್ದ ಈ ತೀರ್ಪಿನ ಬಗ್ಗೆ ಜನರಲ್ಲಿ ಮುಖ್ಯವಾಗಿ ಮಧ್ಯಮವರ್ಗದ ಮಹಿಳೆಯರಲ್ಲಿ ಕುತೂಹಲವಿತ್ತು. ತನ್ನ ಹಾಗೆ ಸಂದಿಗ್ಧ ಸ್ಥಿತಿಯಲ್ಲಿರುವ ಅನೇಕ ಮಹಿಳೆಯರಿಗೆ ಸಹಾಯವಾಗಬಹುದೆಂಬ ಉದ್ಧೇಶದಿಂದ ನಿಖಿತಾ, ೩೭ ವರ್ಷದ ಹಿಂದಿನ ಎಮ್.ಟಿ.ಪಿ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ನ್ಯಾಯಾಲಯವನ್ನು ಕೋರಿಕೊಂಡಿದ್ದಳು. ಆದರೆ ಕಾನೂನಿಗೆ ತಿದ್ದುಪಡಿ ತರಬೇಕಾದ್ದು ಸಂಸತ್ತು ಎಂದು ನ್ಯಾಯಾಲಯ ನೆನಪಿಸಿದೆ. ನಿಖಿತಾಳ ಒಂದು ಕೇಸಿನ ಹಿನ್ನೆಲೆಯಲ್ಲಿ ಕಾನೂನಿಗೆ ತಿದ್ದುಪಡಿ ತರುವ ಆಲೋಚನೆಯಿಲ್ಲ, ಎಂದು ಕೇಂದ್ರ ಆರೋಗ್ಯ ಸಚಿವರಾದ ಅನ್ಬುಮಣಿ ರಾಮದಾಸ್ ಹೇಳಿದ್ದಾರ್‍ಎ. ಆದರೂ ಆ ಬಗ್ಗೆ ಎಲ್ಲಾ ಆಯಾಮಗಳಿಂದಲೂ ವಿಸ್ತ್ರತ ಚರ್ಚೆಯಾಗಲಿ ಎಂದಿದ್ದಾರೆ. ಕೋರ್ಟ್ ಮಾನವೀಯವಾಗಿ ವರ್ತಿಸಿತು. ತನ್ನ ಕೆಲಸವನ್ನು ಅತ್ಯಂತ ಸಮರ್ಪಕವಾಗಿ, ಜವಾಬ್ದಾರಿಯಿಂದ ನಿರ್ವಹಿಸಿತು.

 ಈಗ ಕೋರ್ಟಿನಾಚೆಗಿನ ಸಂಗತಿಗಳನ್ನು ನಾವು ಗಮನಿಸಬೇಕಾಗಿದೆ. ಒಬ್ಬ ತಾಯಿಯ ತಳಮಳವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ತೀರ್ಪು ಹೊರಬಿದ್ದೊಡನೆ ಸುದ್ದಿವಾಹಿನಿಗಳು ಇದನ್ನು ಬಿತ್ತರಿಸಿದವು. ಜನರ ಸಿಂಪತಿ ಪೂರ್ತಿಯಾಗಿ ನಿಖಿತಾ ಕಡೆಗಿತ್ತು. ಗರ್ಭವನ್ನು ಉಳಿಸಿಕೊಳ್ಳುವುದು, ಬಿಡುವುದು ದಂಪತಿಗಳಿಗೆ ಬಿಟ್ಟ ವಿಚಾರವೆಂದು ಬಹುತೇಕ ಎಲ್ಲರೂ ಅಭಿಪ್ರಾಯ ಪಟ್ಟರು. ಕೊಚ್ಚಿಯಿಂದ ಅನುರಾಧ ಎಂಬ ಮಹಿಳೆ ಪೋನ್ ಮಾಡಿ, ತಾನು ೭ನೇ ತಿಂಗಳಿನಲ್ಲಿ ಅಂದರೆ ೨೮ನೇ ವಾರದಲ್ಲಿ ಗರ್ಭಪಾತ ಮಾಡಿಸಿಕೊಂಡು ಈಗ ಅರೋಗ್ಯವಂತ ಮಗುವನ್ನು ಪಡೆದಿರುವುದಾಗಿ ಹೇಳಿಕೊಂಡಳು. ಸುದ್ದಿ ಚಾನಲ್ಲೊಂದು ಎಸ್ಸೆಮ್ಮೆಸ್ ಪೋಲ್ ನಡೆಸಿತು; ಶೇ೯೧ರಷ್ಟು ವಿಕ್ಷಕರು ನಿಖಿತಾ ಅಬಾರ್ಷನ್ ಮಾಡಿಸಿಕೊಳ್ಳಲಿ ಎಂದು ಅಭಿಪ್ರಾಯ ಪಟ್ಟರು. ಆದರೆ ಇಂಡಿಯನ್ ಮೆಡಿಕಲ್ ಅಸೋಷಿಯೆಷನ್ ಅಧ್ಯಕ್ಷರಾದ ಡಾ. ಅಜಯಕುಮಾರ್ ’ತಾಯಿಯೆಂದರೆ ತ್ಯಾಗದ ಸಿಂಬಲ್. ಹೀಗಾದರೆ ಒಬ್ಬ ತಾಯಿಗೂ ಇತರರಿಗೂ ಏನು ವ್ಯತ್ಯಾಸ ಬಂತು? ತಾಯಿ ಎಂದಿಗೂ ತಾಯಿಯೇ’ ಎಂದು ಟಿಪಿಕಲ್ ಗಂಡಸಿನಂತೆ ನುಡಿದರು.

 ನಿಜ, ತಾಯಿ ಎಂದೆಂದಿಗೂ ’ತಾಯಿ’ಯೇ. ಆಕಸ್ಮಿಕವಾಗಿ ತನಗೊಂದು ಅಂಗವೈಕಲ್ಯವುಳ್ಳ ಮಗು ಜನಿಸಿಬಿಟ್ಟರೆ ಅದನ್ನವಳು ನಿರಾಕರಿಸುವುದಿಲ್ಲ. ಅದನ್ನವಳು ವಿಷೇಶ ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ತನ್ನ ಜೀವ ತೇದಾದರೂ ಆ ಮಗು ಸ್ವಾವಲಂಬಿಯಾಗಿ ಮಾಡಲು ಶ್ರಮಪಡುತ್ತಾಳೆ. ಆದರೆ ತನಗೆ ಹುಟ್ಟಲಿರುವ ಮಗು ಅಂಗವೈಕಲ್ಯದಿಂದ ಕೂಡಿದೆ, ಎಂದು ಗೊತ್ತಾದಗಲೂ ಅವಳ್ಯಾಕೆ ಮಗುವನ್ನು ಉಳಿಸಿಕೊಳ್ಳಬೇಕು? ಮಗುವನ್ನು ಉಳಿಸಿಕೊಳ್ಳಿ ಎಂದು ಬೇರೆಯವರಿಗೆ ಹೇಳುವುದು ಸುಲಭ. ಅದರೆ ವಾಸ್ತವವನ್ನು ಎದುರಿಸುವುದು ಕಷ್ಟ. ಆಶಾವಾದಿಯಾಗಿರಬೇಕು, ನಿಜ. ಆದರೆ ನಾಳೆ ಒಳ್ಳೆಯಾದಾಗಲೂ ಬಹುದು ಎಂದು ಇವತ್ತು ರಿಸ್ಕ್ ತೆಗೆದುಕೊಳ್ಳುವುದು ಬುದ್ಧಿವಂತರ ಲಕ್ಷಣವಲ್ಲ. ತಾಯಿಯಾಗುವುದಕ್ಕೆ ಪೂರ್ವ ಸಿದ್ಧತೆ ಬೇಕು. ಅಧುನಿಕ ಮಹಿಳೆ ಆ ಬಗ್ಗೆ ಮುತುವರ್ಜಿ ವಹಿಸುತ್ತಾಳೆ. ಆಕೆಗೆ ತನ್ನ ತಾಯ್ತನವನ್ನು ಸಾರ್ಥಕಪಡಿಸಿಕೊಳ್ಳುವ ಕನಸಿದೆ. ಅರೋಗ್ಯವಂತ ಮಗುವನ್ನು ಪಡೆಯುವ ಬಯಕೆ ಇದೆ. ಇನ್ನೊಂದು ಚಾನ್ಸ್ ನೋಡಿಬಿಡೋಣ ಎಂದುಕೊಳ್ಳಲು ಹಿಂದಿನಂತೆ ಎರಡ್ಮೂರು ಹೆರಲು ಇಂದಿನ ಮಹಿಳೆ ಸಿದ್ದಳಿಲ್ಲ.

ಈಗ ವೈದಕಿಯ ಸವಲತ್ತುಗಳು ಹೆಚ್ಚಾಗಿವೆ. ಹಾಗಾಗಿ ಆರ್ಥಿಕವಾಗಿ ಸಬಲರಾಗಿದ್ದರೆ ಬ್ರೂಣದಲ್ಲಿನ ಕೆಲವು ನ್ಯೂನತೆಗಳನ್ನು ಗರ್ಬದಲ್ಲಿರುವಗಲೇ ಸರಿಪಡಿಸಿಕೊಳ್ಳಬಹುದು. ಸರಿಪಡಿಸಲಾಗದ ತೊಂದರೆಗಳಾದರೆ ಎಮ್.ಟಿ.ಪಿ ಮಾಡಿಸಿಕೊಳ್ಳುವುದು ತಪ್ಪೇನೂ ಅಲ್ಲ. ಬ್ರಿಟನಿನಲ್ಲಿ ಇದಕ್ಕೆ ೯ ತಿಂಗಳು ತುಂಬುವ ತನಕವೂ ಅವಕಾಶ್ ಇದೆ. ಚೀನಾದಲ್ಲಿ ೨೮ ವಾರಗಳ ತನಕ ಜಪಾನಿನಲ್ಲಿ ೨೪ ವಾರಗಳ ತನಕ ಎಮ್.ಟಿ.ಪಿ ಮಾಡಿಸಿಕೊಳ್ಳಲು ಅವಕಾಶ ಇದೆ. ಪ್ರತಿಯೊಂದು ವಿಷಯಕ್ಕೂ ಸಂಬಂಧಪಟ್ಟಂತೆ ಸಮಾಜದಲ್ಲೊಂದು ಒಳ ಪ್ರವಾಹ[ಅಂಡರ್ ಕರೆಂಟ್] ಇರುತ್ತದೆ. ಅದು ಬಹಳ ಸ್ಟ್ರಾಂಗಾದ ಸಮಾಜದ ವಿಲ್ ಪವರ್. ಅದು ಸಕಾರಾತ್ಮಕವಾಗಿರಬಹುದು ಇಲ್ಲವೇ ನಕಾರಾತ್ಮಕವಾಗಿರಬಹುದು. ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ಈ ಒಳಪ್ರವಾಹವೇ ಕಾನೂನು ಬಾಹಿರವಾಗಿ ಲಕ್ಷ ಲಕ್ಷ ಹೆಣ್ಣು ಬ್ರೂಣಗಳನ್ನು ಕೊಲೆ ಮಾಡಿದೆ. ಕೋಮು ಗಲಭೆಗಳ ದಳ್ಳುರಿಯಲ್ಲೂ ಮಾನವೀಯತೆ ಮೆರೆದಿದೆ. ಚುನಾವಣೆಯಲ್ಲಿ ರಾಜಕೀಯ ಲೆಖ್ಖಾಚಾರಗಳನ್ನೆಲ್ಲ ತಲೆಕೆಳಗು ಮಾಡಿದೆ. ಆ ವಿಲ್ ಪವರ್ ಈಗ ನಿಖಿತಾ ಪರವಾಗಿದೆ.ನಿಖಿತಾ ವಯಸ್ಸು ಈಗ ೩೧. ಅವಳ ಮುಂದೆ ನಿಡಿದಾದ ಬದುಕಿದೆ.ಅಂಗವಿಕಲತೆಯುಳ್ಳ ಮಗುವನ್ನು ಹೆತ್ತು ಅದನ್ನು ಪೋಶಿಸುವುದರಲ್ಲೆ ಬದುಕು ಕಳೆದು ಹೋಗಬೇಕಾಗಿಲ್ಲ.
ನಿಜ, ಹುಟ್ಟಲಿರುವ ಮಗುವಿನ ಚಿಕಿತ್ಸಾವೆಚ್ಚವನ್ನು ಭರಿಸಲು ಆಸ್ಪತ್ರೆಗಳು, ಸೇವಾಸಂಸ್ಥೆಗಳು ಮುಂದೆ ಬಂದಿವೆ. ಇಲ್ಲಿ ಗಮನಿಸಬೇಕಾದ್ದು; ಸಮಾಜಕ್ಕೊಂದು ಪ್ರದರ್ಶಕ ಗುಣವಿದೆ. ಈ ವಿಶಿಷ್ಟ ಗುಣ ಗಂಡಿನಲ್ಲಿಯೂ ಇರುತ್ತದೆ. ಹಾಗಾಗಿ ಆತ ಕೋರ್ಟಿಗೆ ಬರಬಲ್ಲ. ಆಸ್ಪತ್ರೆಗೆ ಬರಬಲ್ಲ.ಹೆರಿಗೆ ಕೋಣೆವರೆಗೂ ಬರಬಲ್ಲ. ಆದರೆ ದೇಹದ ಭಾಗವಾಗಿ ಮಗುವನ್ನು ಪೋಷಿಸಲಾರ, ತಾಯಿಯಂತೆ ಭಾವಕೋಶದ ಭಾಗವಾಗಿಸಿಕೊಳ್ಳಲಾರ. ಹಾಗಾಗಿ ಮಗುವನ್ನು ಬೆಳೆಸುವಲ್ಲಿ ಆಕೆ ಏಕಾಂಗಿ.

ಸಮಾಜ ಗುರುತಿಸಿದೆಯೋ ಇಲ್ಲವೋ ಗೊತ್ತಿಲ್ಲ. ನಾನಂತೂ ನನ್ನ ಸುತ್ತಮುತ್ತಲಿರುವ ತಾಯಂದಿರನ್ನು ಗಮನಿಸಿದ್ದೇನೆ. ಮಗುವನ್ನು ಬೆಳೆಸುವಲ್ಲಿ ಆಕೆ ಏಕಾಂಗಿ. ಕೆಲವು ಸಂದರ್ಭಗಳಲ್ಲಿ ಆಕೆ ಭಾವನಾತ್ಮಕವಾಗಿ ಕುಸಿದು ಹೋಗುವುದನ್ನು ನಾನು ಕಂಡಿದ್ದೇನೆ. ಅದೇ ಮಹಿಳೆ ದೃಢತೆಯಿಂದ ತಲೆಯೆತ್ತಿ ಬೀಗಿ ನಡೆಯುವುದನ್ನು ಕೂಡ ಗಮನಿಸಿದ್ದೇನೆ. ಮನಸ್ಸು ಮಾಡಿದರೆ ಆಕೆಗೆ ಯಾವುದೂ ಅಸಾಧ್ಯವಲ್ಲ. ಆದರೆ ವೈದ್ಯಕೀಯ ಅನುಕೂಲತೆಗಳಿದ್ದಾಗ ಯಾಕೆ ಸಂಕಷ್ಟಕ್ಕೆ ಸಿಲುಕಬೇಕು ಎಂಬುದು ಪ್ರಶ್ನೆ. ಕಾಲಕ್ಕೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ. ಬೆಳೆದ ಮಗ ಸತ್ತದ್ದನ್ನೂ, ದಾಂಪತ್ಯಕ್ಕೆ ಕಾಲಿಡುವಾಗಲೇ ವೈದವ್ಯ ಪ್ರಾಪ್ತಿಯಾದದ್ದನ್ನೂ, ಆಪ್ತರ ಅಗಲಿಕೆಯನ್ನೂ ಕಾಲ ಕ್ರಮೇಣ ವಿಸ್ಮ್ರತಿಗೆ ತಳ್ಳಿ ಬಿಡಬಹುದು. ಆದರೆ ಎದುರಿಗಿರುವ ಕರುಳಬಳ್ಳಿ ಯಾತನೆಪಡುವುದನ್ನು ನೋಡುತ್ತಾ ಬದುಕುವುದು ಘೋರ ಶಿಕ್ಷೆಯೇ ಸರಿ. ಈ ಜಗತ್ತಿಗೆ ಕಣ್ಣು ಬಿಟ್ಟ ಪ್ರತಿಯೊಂದು ಪ್ರಾಣಿ ಪಕ್ಷಿ, ಗಿಡ ಮರ ಎಲ್ಲದರ ಬಗ್ಗೆಯೂ ನಮಗೆ ಅಕ್ಕರೆ ಇದೆ. ಮತ್ತು ಅದು ನಮಗಾಗಿಯೇ ಇದೆ ಎಂಬ ಸ್ವಾರ್ಥವೂ ಇದೆ. ಆದರೆ ಅಮೂರ್ತವಾದುದರ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಕೂತುಹಲ ಇರುತ್ತದೆ. ಭ್ರೂಣವೊಂದು ಮಗುವಾಗಿ ಈ ಧರೆಗೆ ಬರುವುದು ಒಂದು ಸುಂದರ ಕಲ್ಪನೆ. ಅದು ಹಚ್ಚಿನ ಸಂದರ್ಭದಲ್ಲಿ ನಿಜವಾಗುತ್ತದೆ. ’ನಿಜ’ವಾಗುವ ಮೊದಲು ಅದೊಂದು ಕಲ್ಪನೆ ಅಷ್ಟೇ.

Saturday, August 2, 2008

ದಂತಗೋಪುರದಲ್ಲಿ ಸಾಹಿತ್ಯವೇ?

ಸಾಹಿತ್ಯದ ಉದ್ದೇಶವೇನು? ತನ್ನ ಹುಟ್ಟಿನಲ್ಲೇ ಅಂತರ್ಗತ ಮಾಡಿಕೊಂಡಿರುವ ಪ್ರಶ್ನೆ ಇದು.ಕಾಲಕ್ಕನುಗುಣವಾಗಿ ಇದಕ್ಕೆ ತಮಗೆ ಸರಿ ಕಂಡ ಉತ್ತರ ಕಂಡುಕೊಳ್ಳುತ್ತಲೇ ಇದ್ದಾರೆ.ಸಾಹಿತ್ಯ ಎನ್ನುವುದು ಯಾವಾಗಲೂ ಜನಸಾಮಾನ್ಯರ ಮಧ್ಯೆಯೇ ಹುಟ್ಟುತ್ತದೆ. ಮತ್ತು ಅದು ಅಲ್ಲಿಯೇ ಪ್ರಸರಣಗೊಳ್ಳುತ್ತದೆ. ಒಮ್ಮೊಮ್ಮೆ ಅದು, ಪಂಪ, ರನ್ನರಂತೆ ಪ್ರಭುಸಮ್ಮುಖದಲ್ಲಿ ಪ್ರಕಟಗೊಂಡರೂ ಅದರ ಗುಣವಿಶೇಶ ಕಾಂತ ಸಂಮಿತವೇ. ಈಗ ನನ್ನಲ್ಲಿ ಈ ಪ್ರಶ್ನೆ ಹುಟ್ಟಿಕೊಳ್ಳುದಕ್ಕೆ ಕಾರಣವಾದ ಘನ ಉದ್ಧೇಶ ಎನೆಂದರೆ, ಇತ್ತೇಚೆಗೆ ಪುಸ್ತಕ ಬಿಡುಗಡೆಗಳು ಪ್ರಭುಸಮ್ಮುಖವಾಗುತ್ತಿವೆ. ಲೇಖಕರು ಅಧಿಕಾರ ಗದ್ದುಗೆ ಹಿಡಿದವರ ಕೈಯಿಂದ ತಮ್ಮ ಪುಸ್ತಕ ಬಿಡುಗಡೆಗೊಳಿಸಲು ಹಾತೊರೆಯುತ್ತಾರೆ. ಇದರಿಂದ ಲೇಖಕರಿಗಾಗುವ ಲಾಭವೇನು? ಇವರೇನು ಆಸ್ಥಾನ ಸಾಹಿತಿಗಳೇ? ನಿನ್ನೆಯ ಉದಾಹರಣೆಯನ್ನೇ ನೋಡಿ; ನಿನ್ನೆ ಮುಖ್ಯಮಂತ್ರಿಗಳ ಗೃಹಕಛೇರಿ ’ಕೃಷ್ಣಾ’ದಲ್ಲಿ ಪತ್ರಕರ್ತರೊಬ್ಬರು ಬರೆದ ’ಬದಲಾದ ಭಾರತ’ಎಂಬ ಪುಸ್ತಕ ಬಿಡುಗಡೆಯಾಯ್ತು. ಬಿಡುಗಡೆ ಮಾಡಿದವರು ಮುಖ್ಯಮಂತ್ರಿ ಯೆಡಿಯೂರಪ್ಪನವರು. ಅತಿಥಿ, ಉನ್ನತ ಶಿಕ್ಷಣ ಸಚಿವರಾದ ಅರವಿಂದ ಲಿಂಬಾವಳಿ. ಇವರಿಬ್ಬರಿಗೆ ಸಾಹಿತ್ಯ ಅರ್ಥವಾಗುತ್ತದೆಯೇ? ಹೀಗೆ ಕನ್ನಡದ ಗಂಧಗಾಳಿ ತಿಳಿಯದ ರಾಜ್ಯಪಾಲರಿಂದ, ರಾಜಭವನದಲ್ಲಿಯೇ ಪುಸ್ತಕ ಬಿಡುಗಡೆ ಮಾಡಿಸುವ ಉದ್ಧಾಮ ಸಾಹಿತಿಗಳು ನಮ್ಮಲ್ಲಿದ್ದಾರೆ. ಕಲಾಕ್ಷೇತ್ರಕ್ಕೆ,ಎಡಿಎ ರಂಗಮಂದಿರಕ್ಕೆ,ಯವನಿಕಕ್ಕೆ ಹೋದಷ್ಟೇ ಸಲೀಸಾಗಿ ರಾಜಭವನಕ್ಕೆ, ಕೃಷ್ಣಾಕ್ಕೆ, ವಿಧಾನಸೌಧದ ಬಾಂಕ್ವಟ್ ಹಾಲ್ ಗೆ ಸಾಮಾನ್ಯ ಮನುಷ್ಯರು ಹೋಗಲು ಸಾಧ್ಯವೇ? ಪ್ರಭುಗಳ ಕೃಪಾಕಟಾಕ್ಷಕ್ಕಾಗಿ ಹಾತೊರೆಯುವ ಆಸ್ಥಾನ ಸಾಹಿತಿಗಳಿಗೆ ಮಾನ ಸನ್ಮಾನಗಳ ಮೇಲೆಯೇ ಕಣ್ಣು. ಇನ್ನು ಕೆಲವರಿರುತ್ತಾರೆ; ಅವರು ಒಂದಕ್ಷರ ಬರೆದವರಲ್ಲ. ಆದರೆ ಯಾರೋ ಮಹನೀಯರ ಬಗ್ಗೆ ಅಥವಾ ಅವರು ಬರೆದ ಗ್ರಂಥಗಳ ಬಗ್ಗೆ ಲೇಖನಗಳನ್ನು ಸಂಗ್ರಹಿಸುತ್ತಾರೆ. ನಂತರ ತಾವು ಸಂಪಾದಕರೆಂದು ಹೆಸರು ಹಾಕಿಸಿಕೊಂಡು ಪ್ರಕಟಿಸಿಬಿಡುತ್ತಾರೆ. ನಂತರ ಪ್ರಭುಗಳ ಕೈಯಲ್ಲಿ ಬಿಡುಗಡೆ ಮಾಡಿಸುತ್ತಾರೆ! ಕರ್ನಾಟಕದ ಲೈಬ್ರರಿಗಳನ್ನೊಮ್ಮೆ ಸುಮ್ಮನೆ ಹೊಕ್ಕು ಬನ್ನಿ. ರ್‍ಯಾಕ್ ಗಳಲ್ಲಿ ಸುಂದರವಾಗಿ ಜೋಡಿಸಿಟ್ಟ ಇಂತಹ ಪುಸ್ತಕಗಳೇ ಕಾಣಸಿಗುತ್ತದೆ. ಪುಸ್ತಕ ಪ್ರಕಾಶನ ಕೂಡ ಈಗ ಒಂದು ದಂದೆಯಾಗಿಬಿಟ್ಟಿಯಾಗಿದೆ. ಇಂತಹ ಅಸಂಖ್ಯ ಪುಸ್ತಕಗಳ ನಡುವೆ ಒಳ್ಳೆ ಪುಸ್ತಕ ಯಾವುದೆಂದು ಹುಡುಕುವುದೇ ಕಸ್ಟವಾಗಿಬಿಟ್ಟಿದೆ. ವಿಮರ್ಶೆ ನೋಡಿ ಪುಸ್ತಕ ಕೊಂಡರೆ ಸಿನೆಮಾ ವಿಮರ್ಶೆ ನೋಡಿ ಥಿಯೇಟರಿಗೆ ಹೋದಂತಾಗುತ್ತದೆ! ಲೇಖಕ ಹತ್ತಿರದವನಾಗಿದ್ದರೆ ವಿಮರ್ಶಕನಿಗೆ ಆ ಪುಸ್ತಕದಲ್ಲಿ ಅನೇಕ ಆಯಾಮಗಳು ಗೋಚರಿಸಿಬಿಡುತ್ತದೆ. ಸಿನೇಮಾ ಪತ್ರಕರ್ತನನ್ನು ’ಚೆನ್ನಾಗಿ’ ನೋಡಿಕೊಂಡರೆ ಸಿನೇಮಾ ಸೂಪರ್ ಆಗಿಬಿಡುತ್ತದೆ. ಇದು ಥಳುಕು ಬಳುಕಿನ ಪ್ರಪಂಚ. ಪ್ರದರ್ಶಕ ಗುಣ ಇದ್ದರೆ ಮಾತ್ರ ಮನ್ನಣೆ!