Wednesday, May 25, 2011

’ಸ್ಮರ ಸಂಜೀವನೆ ಕೃಷ್ಣೆ ಪೂ ಮುಡಿದಳ್’!




ಅಂದು ನಮ್ಮ ಮದುವೆಯ ವಾರ್ಷಿಕೋತ್ಸವ. ಅದು ನಮಗೇನೂ ವಿಶೇಷ ದಿನವಲ್ಲ. ಆದರೆ ಆ ದಿನ ಭಾನುವಾರ ಬಂದಿದ್ದರಿಂದ ನಮ್ಮ ಮನೆಗೆ ಇಬ್ಬರು ಕಿರಿಯ ಸ್ನೇಹಿತರು ಬಂದಿದ್ದರು.

ಈ ಘಟನೆ ನಡೆದು ಹಲವಾರು ವರ್ಷಗಳು ಕಳೆದಿವೆ. ಆದರೂ ಅದಿನ್ನೂ ನಿನ್ನೆ ಮೊನ್ನೆ ನಡೆದಿದೆಯೆನೋ ಎಂಬಷ್ಟು ಹಸಿರಾಗಿ ನನ್ನ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ.

ನಾನು ಅಡುಗೆ ಮನೆಯಲ್ಲಿ ಸಾರಿಗೆ ಒಗ್ಗರಣೆ ಹಾಕುವುದರಲ್ಲಿ ನಿರತಳಾಗಿದ್ದೆ. ಆಗ ಆ ಹುಡುಗ ಅಡುಗೆ ಮನೆಗೆ ಬಂದ. ಬಂದವನೇ ನನ್ನೆಡೆಗೆ ಪ್ರಶೆಯೊಂದನ್ನು ಎಸೆದ. ತುಂಬಾ ಸರಳವಾದ ಪ್ರಶ್ನೆಯದು; ’ನೀವು ಕೂಡಾ ಹೂ ಮುಡಿಯುತ್ತಿರಾ?’ ’ನೀವು ಕೂಡಾ’ ಎಂಬ ಪದಗಳನ್ನು ಆತ ಒತ್ತಿ ಹೇಳಿದ ರೀತಿಯಲ್ಲಿ ನಾನೇನೋ ಮಾಡಬಾರದ್ದನ್ನು ಮಾಡಿದ್ದೇನೆನೋ ಎಂಬುದನ್ನು ಧ್ವನಿಸುತ್ತಿತ್ತು.

ಆ ಹುಡುಗ ಪ್ರಶ್ನೆ ಮಾಡಿದ ರೀತಿ, ಅದರ ಹಿಂದಿನ ಭಾವವನ್ನು ಅರ್ಥ ಮಾಡಿಕೊಳ್ಳಲು ನನಗಿ ಒಂದೆರಡು ನಿಮಿಷ ಬೇಕಾಯಿತು. ಹಾಗಿದ್ದರೂ ಸಮಯಸ್ಪೂರ್ತಿಯಿಂದ ಉತ್ತರಿಸಿದೆ, ’ಯಾಕೆ ನಾನು ಹೆಣ್ಣಲ್ಲವೇ?’

ಊಟವೆಲ್ಲಾ ಮುಗಿದು ಹರಟೆ ಹೊಡೆಯುತ್ತಾ ಕೂತಿದ್ದರೂ ಆ ಪ್ರಶ್ನೆಯ ಗುಂಗಿನಲ್ಲೇ ನಾನಿದ್ದೆ. ನನಗಿಂತ ತುಂಬಾ ಚಿಕ್ಕವನಾದ ಆ ಹುಡುಗನ ಬಳಿ ಆ ಪ್ರಶ್ನೆ ಮೂಡಿಸಿದ ಗೊಂದಲವನ್ನು ಚರ್ಚಿಸುವಂತಿರಲಿಲ್ಲ. ಅವನಿಗಿಂತ ಸ್ವಲ್ಪ ಭಿನ್ನವಾಗಿ ಯೋಚಿಸಬಲ್ಲ ನನ್ನ ಕಿರಿಯ ಸ್ನೇಹಿತೆಯ ಬಳಿ ಆತ ಕೇಳಿದ ಪ್ರಶ್ನೆಯನ್ನು ಹೇಳಿ ’ನಾನು ಅಸ್ಟೊಂದು ವಿಲಕ್ಷಣವಾಗಿ ಕಾಣಿಸ್ತಿನೇನೆ’ ಎಂದೆ, ಎಂದೆ ತಲೆಯಲ್ಲಿನ ಮಲ್ಲಿಗೆ ಹೂವನ್ನು ಮುಟ್ಟಿ ನೋಡಿಕೊಳ್ಳುತಾ. ಅದಕ್ಕವಳು ’ಹೂ ಮುಡಿದುಕೊಂಡರೆ ನೀನು ತುಂಬಾ ಚೆನ್ನಾಗಿ ಕಾಣಿಸ್ತಿಯಾ, ಅದೊಂದು ಚೈಲ್ಡ್. ಅದಕ್ಕೇನು ಗೊತ್ತಾಗುತ್ತೆ ಹೆಣ್ತನದ ವಿಸ್ತಾರತೆ’ ಎಂದವಳೇ ಸ್ವಲ್ಪ ಹೊತ್ತು ಸುಮ್ಮನಿದ್ದು, ’ನಾವು ಸ್ತ್ರೀಪರವಾಗಿ ಮಾತಾಡ್ತೀವಿ, ಅವರ ಬಗ್ಗೆ ಲೇಖನಗಳನ್ನು ಬರೀತೇವೆ. ಮಹಿಳಾ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ಸಂಘಟನೆಗಳ ಬಗ್ಗೆ ಸಾಪ್ಟ್ ಕಾರ್ನರ್ ಹೊಂದಿದ್ದೇವೆ. ನೀನಂತೂ ಗಂಡನನ್ನು ಸೇಹಿತನ ತರಹ ನೋಡ್ತಿದ್ದೀಯಾ. ಹಾಗಿರುವಾಗ ಸ್ತ್ರೀಯ ಗುಲಾಮಗಿರಿಯ ಸಂಖೆತವಾದ ಬಳೆ, ಕುಂಕುಮ, ಹೂಗಳನ್ನು ತೊಟ್ಟು ಭಾರತೀಯ ಸಂಪ್ರದಾಯಸ್ಥ ಮುತ್ತೈದೆ ತರಹ ನಡೆದುಕೊಂಡರೆ ಆ ಗಂಡು ಜೀವ ಹೇಗೆ ತಡೆದುಕೊಂಡೀತು’ ಎಂದು ಕಣ್ಣು ಮಿಟುಕಿಸಿ ನಕ್ಕಳು.

ಅಂದು ಆ ಹುಡುಗ ಕೇಳಿದ ಪ್ರಶ್ನೆ ಇಂದಿಗೂ ನನ್ನನ್ನು ಕಾಡುತ್ತಲೇ ಇದೆ. ಹೂ ಮೃದು ಭಾವನೆಗಳ ಸಂಕೇತ; ಹೆಣ್ಣಿನ ಮನಸ್ಸಿನಂತೆ. ಈಗೀಗ ನನ್ನಂತವಳು, ನನ್ನ ಹಾಗೆ ಯೋಚಿಸುವ ಮಹಿಳೆಯರು ಹೂವನ್ನು ತಮ್ಮ ಬದುಕಿನಿಂದ ದೂರ ಇಡುತ್ತಿದ್ದಾರೆಯೇ? ಹೂವಿನಂಥ ಹೆಣ್ಣು ಬದಲಾಗುತ್ತಿದ್ದಾಳೆಯೇ?

ನನ್ನ ಮನಸ್ಸು ಬಾಲ್ಯ ಕಾಲದ್ದತ್ತ ಚಲಿಸಿತು. ನನ್ನೂರು ಬಾಳುಗೋಡಿನಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಎಂಟು ಮೈಲಿಗಳ ಹಾದಿ. ದಟ್ಟ ಕಾಡು. ಒಮ್ಮೊಮ್ಮೆ ಕಾಡಾನೆಗಳ ದರ್ಶನವಾಗುದೂ ಉಂಟು. ವಿವಿಧ ರೀತಿಯ ಪಕ್ಷಿ, ಪ್ರಾಣಿಗಳು ದಾರಿಯಲ್ಲಿ ಕಾಣಿಸುತ್ತಿದ್ದವು. ಅದರಲ್ಲಿ ’ಕುಪ್ಪುಳು’ ಅಂದರೆ ಕೆಂಬೂತವೂ ಒಂದು. ಅದಕ್ಕೆ ನಾವನ್ನುತ್ತಿದ್ದುದು-ಗುಡ್ ಲಕ್. ಯಾಕೆಂದರೆ ಅದನ್ನು ನೋಡುವುದು ಶುಭಶಕುನವಂತೆ. ನಾವು ದಿನದಲ್ಲಿ ಕನಿಷ್ಟ ಹತ್ತಾದರೂ ಗುಡ್ ಲಕ್ ನೋಡುತ್ತಿದ್ದೆವು. ಅದನ್ನು ಶಾಲೆಗೆ ಬಂದು ಇತರ ಗುಡ್ ಲಕ್ ವೀಕ್ಷಕರ ಜೊತೆ ತಾಳೆ ಹಾಕುತ್ತಿದ್ದೆವು.

ನಾವು ನಡೆದು ಹೋಗುತ್ತಿದ್ದ ಹಾದಿಯಲ್ಲಿ ಮಾವಿನಕಟ್ಟೆ ಗುಡ್ಡ ಇಳಿದು ಅಜ್ಜಿಗುಡ್ಡೆ ಹತ್ತುವ ಮಧ್ಯದಲ್ಲಿನ ಸ್ವಲ್ಪ ಸಮತಟ್ಟಾದ ಜಾಗದಲ್ಲಿ ಒಂದು ರೆಂಜಾಳ ಹೂವಿನ ಮರವಿತ್ತು. ಮೊದಲು ಬಂದ ಹುಡುಗ-ಹುಡುಗಿಯರೆಲ್ಲಾ ಈ ಮರದಡಿಯಲ್ಲಿ ಸೇರಿ ರೆಂಜಾಳ ಹೂ ಹೆಕ್ಕಿ ಅದನ್ನು ಪೋಣಿಸುವುದು ನಿತ್ಯ ಸಂಪ್ರದಾಯ. ಈ ಹೂ ಇಡೀ ಕಾಡಿಗೆಲ್ಲಾ ಪರಿಮಳ ಬೀರುತ್ತಿತ್ತು. ಅದನ್ನು ಮುಡಿದೇ ನಾವು ಶಾಲೆಗೆ ಹೋಗುತ್ತಿದ್ದುದ್ದು.

ತಲೆಗೆ ಮುಡಿಯಲು ನಮಗೆ ಹೂವೇ ಆಗಬೇಕೆಂದಿರಲಿಲ್ಲ. ಕಾಸರಕನ ಮರದ ಚಿಗುರು [ ಈ ಮರ ತೆಂಗಿನ ಮರಕ್ಕೆ ಒಳ್ಳೆ ಗೊಬ್ಬರ.ಇದನ್ನು ನಾಲ್ಕು ವರ್ಷಕ್ಕೊಮ್ಮೆ ಇದರ ಸೊಪ್ಪನ್ನು ಕಡಿದು ತೆಂಗಿನ ಮರದ ಬುಡಕ್ಕೆ ಹಾಕಿದರೆ ಸಮೃದ್ಧಿಯಾಗಿ ಕಾಯಿ ಬಿಡುತ್ತದೆ.]. ಇದನ್ನು ಮುಡಿದರೆ ದೃಷ್ಟಿ ತಾಗುವುದಿಲ್ಲವೆಂಬ ನಂಬಿಕೆಯಿದೆ.

ಮಲೆನಾಡಿನಲ್ಲಿ ಸುರಗಿ ಹೂವೆಂಬ ವಿಶಿಷ್ಟ ಜಾತೀಯ ಹೂವಿದೆ [ನನ್ನ ’ಮೌನಕಣಿವೆ’ ಬ್ಲಾಗನ್ನು ಎರಡು ವರ್ಷಗಳ ತನಕ ಸುರಗಿ ಎಂಬ ಹೆಸರಿನಲ್ಲಿ ನಿರ್ವಹಿಸುತ್ತಿದ್ದೆ!] ಪುರುಷ ಭೂತಕ್ಕೆ ಹರಕೆ ಒಪ್ಪಿಸುವ ಹೂವಿದು [ತುಳುನಾಡಿನ ಕಾರಣಿಕ ದೈವ ಪುರುಷಭೂತ] ಈ ಹೂವಿನಲ್ಲಿ ಮತ್ತೇರಿಸುವ ಸುಗಂಧವಿರುತ್ತದೆ. ಒಣಗಿದ ಮೇಲೂ ಈ ಸುಗಂಧ ತಿಂಗಳಾನುಗಟ್ಟಲೆ ಹಾಗೆಯೇ ಉಳಿದಿರುತ್ತದೆ. ನಮ್ಮ ಮನೆಯ ಹಿರಿಯರು ಈ ಮರಕ್ಕೆ ಹತ್ತಿ ಹೂ ಕೊಯ್ಯಲು ಬಿಡುವುದಿಲ್ಲ. ಬೇಡ ಎಂದುದ್ದನ್ನು ಮಾಡುವುದರಲ್ಲೇ ನಮಗೆ ಖುಷಿ. ಬಳ್ಳಿ ಪೊದೆಗಳಲ್ಲಿ ಸುಲಭವಾಗಿ ಸಿಗುವ ಹೂಗಳಲ್ಲಿ ನನಗೆ ಅಂಥಾ ಆಕರ್ಷಣೆಯೇನೂ ಇರಲಿಲ್ಲ. ಸೀತೆ ಹೂವನ್ನು ಕೊಯ್ಯಲು ಅಂದು ನಾನು ಹತ್ತುತ್ತಿದ್ದ ಮರಗಳನ್ನು ಈಗ ನೆನೆಸಿದರೆ ಅಚ್ಚರಿಯಾಗುತ್ತದೆ.

’ಹೂ ಕೊಯ್ಯುವುದು’ ಎಂಬುದು ಸರಿಯಾದ ಪದ ಅಲ್ಲ. ಅದರಲ್ಲಿ ಹಿಂಸೆ ಮತ್ತು ಕ್ರೌರ್ಯ ಇದೆ. ’ಹೂ ಬಿಡಿಸುವುದು’ ಎಂಬುದು ಸರಿಯಾದ ಪದ ಎಂದು ನಮ್ಮ ಗುರುಗಳಾದ ತಾಳ್ತಜೆ ವಸಂತ ಕುಮಾರರು ಹೇಳುತ್ತಿದ್ದರು. ಗುಲಾಬಿ ಹೂವಿನ ಹುಟ್ಟಿನ ಬಗ್ಗೆ ಅವರೇ ಹೇಳಿದ ಇನ್ನೊಂದು ಮಾತು ನನ್ನ ನೆನಪಿನಲ್ಲಿದೆ. ಒಮ್ಮೆ ರತಿ ಮನ್ಮಥರಿಬ್ಬರು ಆಕಾಶ ಮಾರ್ಗದಲ್ಲಿ ವಿಹರಿಸುತ್ತಿದ್ದರಂತೆ. ಆಗೊಮ್ಮೆ ರತಿಯ ಕೆಂಪಾದ ತುಟಿಗಳನ್ನು ಕಂಡ ಮನ್ಮಥ ಉನ್ಮತ್ತಗೊಂಡು ಪ್ರೇಮದಿಂದ ಕಚ್ಚಿದನಂತೆ. ಆಗ ರತಿಯ ತುಟಿಯಿಂದ ಒಸರಿದ ರಕ್ತದ ಬಿಂದುವೊಂದು ಧರೆಗೆ ಬಿದ್ದು ಗುಲಾಬಿ ಹೂವಾಗಿ ಅರಳಿತಂತೆ. ಇದು ಕುವೆಂಪು ಕಾವ್ಯವೊಂದರಲ್ಲಿ ಬಂದ ಸಾಲುಗಳೆಂದು ಅವರೇ ಹೇಳಿದ ನೆನೆಪು. ಎಂತಹ ಅದ್ಭುತ ಕಲ್ಪನೆಯಲ್ಲವೇ?

ಪಂಪಭಾರತದಲ್ಲಿ ಪಂಪ ತನ್ನ ಹುಟ್ಟೂರಾದ ಬನವಾಸಿಯ ವರ್ಣನೆ ಮಾಡುವಾಗ ಅಲ್ಲಿಯ ಪುಷ್ಪ ಸಂಪತ್ತಿನ ಬಗ್ಗೆಯೂ ವರ್ಣಿಸುತ್ತಾನೆ. ಆದರೆ ಹರಿಹರನ ’ಪುಷ್ಪ ರಗಳೆ’ಯಲ್ಲಿ ಬರುವ ನೂರಾರು ಜಾತೀಯ ಹೂಗಳ ವರ್ಣನೆ ವಿಶಿಷ್ಟವಾದುದು.ಆತ ಉಷಃಕಾಲದಲ್ಲೇ ’ಅನಿಲ ನಲುಗದ, ರವಿಕರಂ ಪೊಗದ,ದುಂಬಿ ಎರಗದ’ ಪರಿಶುದ್ಧ ಹೂಗಳನ್ನು ಬಿಡಿಸಿ ತಂದು ತನ್ನ ಇಷ್ಟ ದೈವ ಶಿವನಿಗೆ ಸಮರ್ಪಿಸುತ್ತಿದ್ದ.

ಪುರಾಣದಲ್ಲಿ ಬರುವ ನಮ್ಮ ಪ್ರೇಮ ದೇವತೆ ಮನ್ಮಥ. ಅತನ ಬಿಲ್ಲು ಕಬ್ಬು. ಅದಕ್ಕೆ ಹೂಡುವ ಐದು ಬಾಣಗಳು; ಅರವಿಂದ, ಅಶೋಕ,ಚೂತ,ನವಮಲ್ಲಿಕಾ, ನಿಲೋತ್ಪಲಗಳೆಂಬ ಐದು ಬಗೆಯ ಹೂಗಳು. ಸಿಹಿ ಕಬ್ಬಿನ ಬಿಲ್ಲಿನಿಂದ ಹೂವಿನ ಬಾಣವನ್ನು ನಮ್ಮ ಎದೆಗೆ ನೆಟ್ಟು ಮೋಹ ಪಾಶದಲ್ಲಿ ಕೆಡವುತ್ತಾನೆ! ನಮ್ಮ ಪೂರ್ವಿಕರ ಶೃಂಗಾರಭಾವದಲ್ಲಿ ಎಂಥ ಲಾಲಿತ್ಯವಿದೆ ಅಲ್ಲವೇ?

ದ್ರೌಪದಿಗಾಗಿ ಸೌಗಂಧಿಕಾ ಪುಷ್ಪ ತರಲು ಪಾಡುಪಟ್ಟ ಭೀಮ, ತನ್ನ ಪ್ರೀಮದ ಮಡದಿ ಸತ್ಯಭಾಮೆಗಾಗಿ ದೇವಲೋಕದ ಪಾರಿಜಾತವನ್ನು ಭೂಮಿಗೆ ತಂದ ಶ್ರೀಕೃಷ್ಣ-ಇಬ್ಬರೂ ನನ್ನ ದೃಷ್ಟಿಯಲ್ಲಿ ಸಾರ್ವಕಾಲಿಕ ಹೀರೋಗಳೇ. ಯಾಕೆಂದರೆ ಅವರಿಬ್ಬರೂ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದವರು.

ಗದಾಯುದ್ಧದ ನಾಯಕ ಭೀಮ ದ್ರೌಪದಿಯ ಬಿಚ್ಚಿದ ಮುಡಿಯನ್ನು ದುರ್ಯೊಧನನ [ದುಶ್ಯಾಸನನ ಅಲ್ಲ] ರಕ್ತದಲ್ಲಿ ಅದ್ದಿ, ಅವನ ಹಲ್ಲನ್ನು ಕಿತ್ತು ಅದರಲ್ಲಿ ತಲೆಬಾಚಿ, ತುರುಬು ಕಟ್ಟಿ, ಕರುಳಮಾಲೆಯನ್ನು ಮುಡಿಸಿ ಧನ್ಯತೆಯ ಭಾವ ಪ್ರದರ್ಶಿಸುತ್ತಾನೆ.ತನ್ನ ಪ್ರತಿಜ್ನೆ ನೆರವೇರಿದ ಸಂತಸದಲ್ಲಿ ಬೀಗುತ್ತಿದ್ದ ದ್ರೌಪದಿಯನ್ನು ಕಂಡು ರನ್ನ ಉದ್ಘರಿಸಿದ ಮಾತು, ’ಸ್ಮರ ಸಂಜೀವನೆ ಕೃಷ್ಣೆ ಪೂ ಮುಡಿದಳ್’ ಇಂಥ ಹೂವನ್ನು ಮುಡಿಸಿದ ಭೀಮ ಯಾರಿಗೆ ತಾನೆ ಇಷ್ಟವಾಗಲಾರ?

ನಾನು ಮಂಗಳಗಂಗೋತ್ರಿಯಲ್ಲಿ ಓದುತ್ತಿದ್ದ ದಿನಗಳವು. ನಾವೆಲ್ಲಾ ರ್‍ಯಾಗಿಂಗ್ ವಿರೋಧಿಗಳು. ಆದರೂ ಜ್ಯೂನಿಯರ್ಸನ್ನು ಸಭ್ಯತೆಯ ಚೌಕಟ್ಟಿನೊಳಗೆ ಸ್ವಾಗತಿಸುವ ಪದ್ಧತಿಯಿತ್ತು. ಅದಕ್ಕಾಗಿ ನಮ್ಮ ಕ್ಲಾಸ್ ರೂಮಿನಲ್ಲೇ ಚಿಕ್ಕ ಸಮಾರಂಭ ಏರ್ಪಾಟಾಗಿತ್ತು. ಬಾಕ್ಸೊಂದರಲ್ಲಿ ಹಲವು ಚೀಟಿಗಳನ್ನಿಟ್ಟಿದ್ದೆವು. ಜ್ಯೂನಿಯರ್ಸ್ ಒಬ್ಬೊಬ್ಬಾರಾಗಿ ಬಂದು ಅದರಲ್ಲಿರುವ ಚೀಟಿಯಲ್ಲಿ ಒಂದನ್ನೆತ್ತಿಕೊಂಡು ಅದರಲ್ಲಿ ಬರೆದಂತೆ ಅಭಿನಯಿಸಬೇಕಾಗಿತ್ತು. ಮ್ಯಾಥ್ಯು ಎಂಬ ವಿದ್ಯಾರ್ಥಿಗೆ ಬಂದ ಚೀಟಿಯಲ್ಲಿ ’ಮೇಜಿನ ಮೇಲಿರುವ ಗುಲಾಬಿಗಳಲ್ಲಿ ಒಂದನ್ನು ನೀವು ಇಷ್ಟಪಡುವ ಸೀನಿಯರ್ ವಿದ್ಯಾರ್ಥಿನಿಗೆ ನೀಡಿ’ ಎಂದಿತ್ತು. ಆತ ಒಂದು ಕ್ಷಣ ನಮ್ಮೆಲ್ಲರನ್ನು ಕಣ್ಣಲ್ಲೇ ಅಳೆದ. ಹಳದಿ ಗುಲಾಬಿಯೊಂದನ್ನು ಕೈಗೆತ್ತಿಕೊಂಡು ಎದುರಿಗಿರುವ ಅಧ್ಯಾಪಕ ವೃಂದದತ್ತ ಒಮ್ಮೆ ನೋಡಿ, ನನ್ನ ಕೈಯಲ್ಲಿ ಹೂವಿಟ್ಟು ನಾಚುತ್ತಾ ಹೋದ.

ಮತ್ತೆ ನನ್ನ ಕೈಗೆ ಗುಲಾಬಿ ಹೂ ಬಂದದ್ದು ನಾನು ಪ್ರೀತಿಸಿದ ಹುಡುಗನಿಂದ. ಈಗ ಆತ ನನ್ನ ಪತಿ. ನನ್ನ ಸಹೋದ್ಯೋಗಿಯಾಗಿದ್ದ ಆತ ಪ್ರತಿದಿನ ನನ್ನ ಮೇಜಿನ ಮೇಲೆ ಗುಲಾಬಿ ಹೂವೊಂದನ್ನು ಇಟ್ಟಿರುತ್ತಿದ್ದ. ಮದುವೆಯಾದೊಡನೆ ಇದು ನಿಂತು ಹೋಯಿತು! ಮದುವೆಯಾದ ನಂತರವೂ ಇಂತಹ ಅಮೃತ ಘಳಿಗೆಗಳು ಮತ್ತೆ ಮತ್ತೆ ಸಂಭವಿಸುತ್ತಿರಲಿ ಎಂದು ಪ್ರತಿ ಸ್ತ್ರೀಯೂ ಅಂತರಂಗದಲ್ಲಿ ಬಯಸುತ್ತಿರುತ್ತಾಳೆ. ಆದರದು ಸಾಧ್ಯವಾಗುವುದಿಲ್ಲ.

ಒಮ್ಮೆ ಮಂಗಳೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಹದಿನಾಲ್ಕು ವರ್ಷದ ನಂತರ ಭೇಟಿಯಾದ ಬಾಲ್ಯದ ಗೆಳೆಯ ಪಕ್ಕದಲ್ಲಿದ್ದ. ಸುತ್ತೆಲ್ಲಾ ಮಂಗಳೂರು ಮಲ್ಲಿಗೆ ಮಾರುವ ಹೆಂಗಸರಿದ್ದರು. ಬಾಲ್ಯದಲ್ಲಿ ಸೀತೆ ಹೂವನ್ನು ಕೈಗಿತ್ತ ಹುಡುಗನನ್ನು ಈಗ ತಲೆಯೆತ್ತಿ ನೋಡಬೇಕು.ಆದರೂ ಕೇಳಿದೆ, ’ಮಂಗಳೂರು ಮಲ್ಲಿಗೆಯ ಘಮ ಎಷ್ಟು ಚಂದ ಅಲ್ವಾ’ ಆತ ನಕ್ಕ. ಅವನ ಬಸ್ಸು ಬಂತು. ಓಡಿ ಹತ್ತಿ ಕೈ ಬೀಸಿದ. ಇದನ್ನು ಅವನನ್ನೇ ಹೋಲುವ ಇನ್ನೊಬ್ಬ ಗೆಳೆಯನೊಡನೆ ಹಂಚಿಕೊಂಡೆ. ಅವನಿಗದು ಅರ್ಥವಾಗಲೇ ಇಲ್ಲ. ಪೆಚ್ಚು ಪೆಚ್ಚಾಗಿ ನಕ್ಕ. ಅಥವಾ ನಕ್ಕಂತೆ ನಟಿಸಿರಬೇಕು!

Friday, May 13, 2011

’ಸಂವೇದಿ’ಯಲ್ಲಿ ಪರಿವರ್ತನೆಯ ಬೀಜ




ಪತ್ರಿಕಾರಂಗ ಈಗ ಸೇವಾ ಕ್ಷೇತ್ರವಲ್ಲ. ಅದೊಂದು ಉದ್ಯಮವಾಗಿದೆ. ಉದ್ಯಮ ಅಂದಮೇಲೆ ಅಲ್ಲಿ ಲಾಭ-ನಷ್ಟದ ಲೆಖ್ಖಾಚಾರ ನಡೆಯುತ್ತದೆ. ಮಾರುಕಟ್ಟೆಯ ಶಕ್ತಿಗಳು ಸಂಪಾದಕೀಯ ನೀತಿಯನ್ನು ನಿಯಂತ್ರಿಸುತ್ತವೆ; ನಿರ್ದೇಶಿಸುತ್ತವೆ. ಹಾಗಾಗಿ ಸಾಮಾಜಿಕ ನ್ಯಾಯ, ಸಾಮಾಜಿಕ ಹೊಣೆಗಾರಿಕೆ, ಮಹಿಳಾ ಕಾಳಜಿ ಎನ್ನುವ ಆದರ್ಶಗಳೆಲ್ಲಾ ಸಮೂಹ ಮಾಧ್ಯಮಗಳಿಂದ ದೂರವಾಗುತ್ತಿದೆ.

ಅದಕ್ಕಾಗಿಯೇ ಸಮಾಜ ಬದಲಾವಣೆಯ ಕನಸು ಕಾಣುತ್ತಿದ್ದ ಜನಪರ ಮನಸ್ಸುಗಳು ಪರ್ಯಾಯ ವೇದಿಕೆಗಳತ್ತ ಹೊರಳತೊಡಗಿದರು. ಯುವಮನಸುಗಳು ಅಂತರ್ಜಾಲವನ್ನು ಹೆಚ್ಚೆಚ್ಚಾಗಿ ಬಳಸತೊಡಗಿದರು. ಟ್ವೀಟ್ಟರ್, ಪೇಸ್ ಬುಕ್, ಬ್ಲಾಗ್ ಗಳು ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ,ಯಾವುದೇ ಅಳುಕಿಲ್ಲದೆ ಅಭಿಪ್ರಾಯ, ಚಿಂತನೆಗಳನ್ನು ಹಂಚಿಕೊಳ್ಳುವ ವೇದಿಕೆಗಳಾಗಿವೆ. ಮೊನ್ನೆ ಮೊನ್ನೆ ನಡೆದ ಈಜಿಪ್ತಿನ ಜನ ಬಂಡಾಯಕ್ಕೆ ಪೋನ್, ಪೇಸ್ ಬುಕ್ ಗಳ ಮುಖಾಂತರ ಜನಜಾಗೃತಿಯನ್ನು ಮೂಡಿಸಲಾಗಿದ್ದೇ ಕಾರಣವೆನ್ನಲಾಗುತ್ತಿದೆ.

ಕೇವಲ ’ವಿಕಿಲೀಕ್ಸ್’ ಎಂಬ ವೆಬ್ ಸೈಟ್ ಮುಖಾಂತರ ಜಗತ್ತಿನಾದ್ಯಂತ ರಾಜಕೀಯ ಸಂಚಲನವನ್ನುಂಟುಮಾಡಿದ್ದು ಜ್ಯೂಲಿಯನ ಅಸಾಂಜೆ ಎಂಬ ಒಬ್ಬ ಖಾಸಾಗಿ ವ್ಯಕ್ತಿ. ಸಮಾಜ ಬದಲಾವಣೆಯ ಕನಸು ಕಾಣುತ್ತಿರುವ ಕೋಟ್ಯಾಂತರ ಜನಗಳ ಪಾಲಿಗೆ ಇಂದು ಆತ ಆರಾಧ್ಯ ದೈವ.
ನಮ್ಮ ಮುಂದೆ ಸಮಸ್ಯೆಗಳಿವೆ; ಸವಾಲುಗಳಿವೆ ನಿಜ. ಆದರೆ ದಾರಿಯೂ ಇರುತ್ತದೆ. ಅದನ್ನು ನಾವು ಹುಡುಕಿಕೊಳ್ಳಬೇಕು ಅಷ್ಟೇ. ಹಾಗೆ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಹೊರಟ ಮಂಗಳೂರಿನ ಮಾನಿನಿಯರ ಮನದಲ್ಲಿ ಹುಟ್ಟಿದ್ದು ’ಸಂವೇದಿ’

’ಸಂವೇದಿ’ ಎಂಬ ಸುಂದರ ಹೆಸರಿನ ನಿಯತಕಾಲಿಕವನ್ನು ನಾನು ನೋಡಿದ್ದು ಕೆಲವು ತಿಂಗಳುಗಳ ಹಿಂದೆ. ಮೊದಲ ನೋಟಕ್ಕೆ ನನ್ನನ್ನು ಆಕರ್ಷಿಸಿದ್ದು ಅದರ ಮುಖಪುಟಗಳು. ತುಂಬಾ ಸಾಂಕೇತಿಕವಾದ, ತನ್ನೊಳಗೆ ಹಲವು ಅರ್ಥಗಳನ್ನು ಹುದುಗಿಸಿಕೊಂಡ ವಿಶಿಷ್ಠ ರಚನೆಗಳಿವು.

ಖಾಸಗಿ ಪ್ರಸಾರಕ್ಕಾಗಿ ಮೀಸಲಾದ ಈ ಪತ್ರಿಕೆ ಹದಿನಾರು ಪುಟಗಳನ್ನೊಳಗೊಂಡಿದೆ. ’ಡೀಡ್ಸ್’ ಎನ್ನುವ ಸರ್ಕಾರೇತರ ಸೇವಾ ಸಂಸ್ಥೆಯೊಂದು ಈ ನಿಯತಕಾಲಿಕವನ್ನು ಹೊರತರುತ್ತಿದೆ.
’ಕಿರಿದರೊಳ್ ಪಿರಿದರ್ಥವನ್ ಪೇಳುವ’ ಇದು ಮೊದಲ ಓದಿನಲ್ಲಿಯೇ ನನ್ನಲ್ಲಿ ಕುತೂಹಲ ಮೂಡಿಸಿತು. ಇದಕ್ಕೆ ಹಲವು ಕಾರಣಗಳಿವೆ.
ಮೊತ್ತಮೊದಲನೆಯ ಕಾರಣವೆಂದರೆ ಸಂವೇದಿ, ಮಹಿಳೆಯರ ಕಷ್ಟ-ಕಾರ್ಪಣ್ಯಗಳನ್ನು, ನೋವು-ನಲಿವುಗಳನ್ನು ಅವಳ ನೆಲೆಯಲ್ಲಿಯೇ ನಿಂತು ಗ್ರಹಿಸುತ್ತದೆ. ಹಾಗಾಗಿಯೇ ಅದರ ಹೆಸರಿನಂತೆಯೇ ಒಳಗಿನ ಬರಹಗಳು ಕೂಡ ಆಪ್ತವಾಗಿ ನಮ್ಮನ್ನು ತಟ್ಟುತ್ತದೆ.

ಎರಡನೆಯ ಕಾರಣ ಅದರ ಸ್ಪಷ್ಟತೆ ಮತ್ತು ನಿಖರತೆ. ತಾನು ಏನನ್ನು ಹೇಳುತ್ತಿದ್ದೇನೆ? ಯಾರಿಗೆ ಹೇಳುತ್ತಿದ್ದೇನೆ? ಹೇಗೆ ಹೇಳುತ್ತಿದ್ದೇನೆ? ಎಂಬುದರ ಸ್ಪಷ್ಟ ಅರಿವು ಸಂವೇದಿ ಬಳಗಕ್ಕಿದೆ. ಅದರಲ್ಲಿನ ಲೇಖನಗಳನ್ನು ಓದುತ್ತಾ ಹೋದಂತೆಲ್ಲಾ ಆ ನಿಯತಕಾಲಿಕದ ಹಿಂದೆ ಎಂಥ ಮನಸ್ಸುಗಳು ಕೆಲಸ ಮಾಡುತ್ತಿವೆ ಎಂಬುದು ನಮಗೆ ಅರಿವಾಗುತ್ತಾ ಹೋಗುತ್ತದೆ.

ಉದಾಹರಣೆಗೆ ೨೦೦೯ರಲ್ಲಿ ಮಂಗಳೂರಿನಲ್ಲಿ ಭಜರಂಗದಳದವರಿಂದ ಪಬ್ ದಾಳಿ ನಡೆಯಿತು. ಅದಕ್ಕೆ ಈ ಪುಟ್ಟ ಪತ್ರಿಕೆ ಪ್ರತಿಕ್ರಿಯಿಸಿದ್ದು ಹೀಗೆ;
ಅದರ ಮುಖಪುಟದಲ್ಲಿ ಒಬ್ಬ ಮಹಿಳೆಯ ಮುಖದ ಕ್ಯಾರಿಕೇಚರ್ ಇದೆ. ಹಿಂದಿನಿಂದ ಬಂದ ಬಲಿಷ್ಟ ಕೈಯೊಂದು ಅವಳ ಬಾಯನ್ನು ಮುಚ್ಚಿದೆ. ಆ ಕೈಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಮಂದಿರ, ಮಸಿದಿ ಮತ್ತು ಚರ್ಚ್ ಗಳಿಂದ ಬಂದಿರುತ್ತದೆ. ದೆಹಲಿಯ ಸಹೇಲಿ ಪತ್ರಿಕೆಯಿಂದ ಈ ಚಿತ್ರವನ್ನು ಎರವಲು ಪಡೆಯಲಾಗಿದೆಯೆಂದು ಸಂಪಾದಕೀಯದ ಎರಡನೆ ಪುಟದಲ್ಲಿ ನಮೂದಿಸಲಾಗಿದೆ.
ಪುಟ ತೆರೆಯುತ್ತಿದ್ದಂತೆ ಕಣ್ಣಿಗೆ ಬೀಳುವ ಮೊದಲ ಲೇಖನ’ ಭಯೋತ್ಪಾದನೆ ಏನೆಂದು ತಿಳಿಯಬೇಕೆ? ಬನ್ನಿ ಮಂಗಳೂರಿಗೆ’ ಎಂಬ ಲೇಖನ. ಸಂದರ್ಶನ ಆಧಾರಿತವಾದ ಈ ಲೇಖನದಲ್ಲಿ ನೈತಿಕ ಪೋಲಿಸ್ ಪಡೆ ವಿದ್ಯಾರ್ಥಿವೃಂದವನ್ನು ಹೇಗೆ ಹೆದರಿಸಿ ಬೆದರಿಸಿ ವಿದ್ಯಾಸಂಸ್ಥೆಗಳ ವಾತಾವರಣವನ್ನು ಹಾಳುಗೆಡವುತ್ತಿದೆ ಎಂಬುದನ್ನು ಸರಳವಾಗಿ ಹೇಳಲಾಗಿದೆ.

ಎರಡನೆಯ ಲೇಖನ ’ನಾವು ಪಬ್ ದಾಳಿಯನ್ನು ವಿರೋಧಿಸುತ್ತೇವೆ ಯಾಕೆಂದರೆ......’
ಮೂರನೆಯ ಲೇಖನ ’ಕೋಮು ಗಲಭೆ [ಪ್ರತಿಬಂಧ, ನಿಯಂತ್ರಣ ಮತ್ತು ಸಂತ್ರಸ್ತರ ಪುನರ್ವಸತಿ] ಮಸೂದೆ ೨೦೦೫’
ನಾಲ್ಕನೆಯ ಲೇಖನ ’ಜಿಲ್ಲಾ ಮಹಿಳಾ ನ್ಯಾಯಾಲಯ’ದ ಉದ್ಘಾಟನಾ ವರದಿ.
ಕೊನೆಯ ಪುಟದ ಹಿಂದಿನ ಪುಟದಲ್ಲಿ, ಅಂದರೆ ಹದಿನೈದನೆ ಪುಟದಲ್ಲಿ ’ಡೀಡ್ಸ್ ಸುತ್ತ’ದಲ್ಲಿ ಮಂಗಳೂರಿನ ಸುತ್ತಮುತ್ತದಲ್ಲಿ ನಡೆದ ಮಹಿಳಾಪರವಾದ ಚಟುವಟಿಕೆಗಳ ಪುಟ್ಟ ವರದಿಗಳಿರುತ್ತವೆ.
ಕೊನೆಯ ಪುಟ ’ಸಂವಾದ ಸಾಂತ್ವನ’. ಇದು ಬಹಳ ಮಹತ್ವದ ಪುಟ. ಒಂದು ದೃಷ್ಟಿಯಲ್ಲಿ ಇದು ಸಂವೇದಿಯ ಆತ್ಮ ಇದ್ದಂತೆ. ಯಾಕೆಂದರೆ ಇದು ಓದುಗರ ಜೊತೆ ನೇರ ಸಂವಾದವನ್ನು ನಡೆಸುತ್ತದೆ. ಇದು ಶಾಶ್ವತವಾದ ಅಂಕಣ. ಪ್ರತಿಬಾರಿಯೂ ಇಲ್ಲಿ ಒಂದು ಸಮಸ್ಯೆಯನ್ನು ಎತ್ತಿಕೊಳ್ಳಲಾಗುತ್ತದೆ. ಆ ಸಮಸ್ಯೆಯ ಬಗ್ಗೆ ಮಾನವೀಯವಾದ ವರಿದಿಯನ್ನು ನೀಡಲಾಗುತ್ತದೆ. ಆ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ಕೆಲವು ಪ್ರಶ್ನೆಗಳನ್ನು ಓದುಗರ ಮುಂದಿಡುತ್ತದೆ. ಅದಕ್ಕೆ ಓದುಗರಿಂದ ಬಂದ ಅಭಿಪ್ರಾಯಗಳನ್ನು ಸಂವೇದಿ ತನ್ನ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತದೆ. ಅದಕ್ಕೆ ಕೊನೆಯ ಪುಟದ ಹಿಂದಿನ ಪುಟವನ್ನು ಬಳಸಿಕೊಳ್ಳುತ್ತದೆ. ಓದುಗರು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂಬುದು ಅಲ್ಲಿ ಪ್ರಕಟವಾದ ಪತ್ರಗಳನ್ನು ಓದಿದರೆ ತಿಳಿಯುತ್ತದೆ.

ಇಡೀ ಸಂವೇದಿಯೇ ಒಂದು ಸಮಸ್ಯೆಯ ಗುಚ್ಚದಂತೆ ಕಲಾತ್ಮವಾಗಿ ರೂಪಗೊಳ್ಳುತ್ತದೆ. ಹಾಗೆ ರೂಪುಗೊಂಡು ನಿಗದಿತ ಸಮಯಕ್ಕೇ ಓದುಗರ ಮುಂದೆ ಬರುತ್ತದೆ. ಆಗ ಆ ಸಮಸ್ಯೆ ಓದುಗರದೂ ಆಗಿಬಿಡುತ್ತದೆ. ಸಮೂಹದ ಪಾಲ್ಗೊಳ್ಳುವಿಕೆ ಇಲ್ಲಿ ಬಹು ಮುಖ್ಯವಾದುದು

ಪ್ರತಿಷ್ಟಿತ, ಜನಪ್ರಿಯ ಪತ್ರಿಕೆಗಳು ಸಾಮಾನ್ಯವಾಗಿ ಯಾವುದೋ ಒಂದು ವ್ಯಕ್ತಿಯ ಜೋತೆ, ಇಲ್ಲವೇ ಪಕ್ಷರಾಜಕಾರಣದ ಜೊತೆ ಪ್ರತ್ಯಕ್ಷವಾಗಿ ಇಲ್ಲವೇ ಅಪ್ರತ್ಯಕ್ಷವಾಗಿ ಗುರುತಿಸಿಕೊಂಡಿರುತ್ತವೆ. ಅವು ಕಾಲಕ್ಕನುಗುಣವಾಗಿ ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳುತ್ತವೆ. ಆದರೆ ಸಾಮಾಜಿಕ ಸಮಸ್ಯೆಗಳೊಡನೆ ಸೆಣಸಾಡುತ್ತಾ ಪರಿವರ್ತನೆಯ ಕನಸನ್ನು ಹುಟ್ಟುಹಾಕುತ್ತಾ, ಮನಸ್ಸುಗಳನ್ನು ಕಟ್ಟುವ ಕಾಯಕದಲ್ಲಿ ಸಂವೇದಿ, ಸಂವಾದ, ಮಾನಸ, ಶೈನಿ[ಕೈಬರಹದ ಪತ್ರಿಕೆ]ಯಂಥ ಪತ್ರಿಕೆಗಳು ತೊಡಗಿಕೊಂಡಿರುವುದು ಭರವಸೆಗೆ ಕಾರಣವಾಗಿದೆ.

ಸಂವೇದಿಯಂಥ ಪತ್ರಿಕೆಗಳು ಸಮಾಜದ ಪಿಸುನುಡಿಗಳಿದ್ದಂತೆ. ಅವು ಪಿಸುನುಡಿಗಳೇ ಆಗಿದ್ದರೂ ಸಮಾಜದ ನಡುವಿನಿಂದ ಎಳುತ್ತಿರುವ ಶಕ್ತಿಯುತವಾದ ಧ್ವನಿಗಳು. ಸ್ವಸ್ಥ ಸಮಾಜ ರಚನೆಯಲ್ಲಿ ಇಂಥ ಸಶಕ್ತ ಪಿಸುನುಡಿಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾಕೆಂದರೆ ಸಮಾಜ ಪರಿವರ್ತನೆಯ ಬೀಜಗಳು ಇಂಥ ಪಿಸುನುಡಿಗಳಲ್ಲಿ ಅಡಗಿರುತ್ತವೆ.

[ಮಂಗಳೂರಿನಿಂದ ಪ್ರಕಟವಾಗುತ್ತಿರುವ ’ಸಂವೇದಿ’ಯ ದಶಮಾನೋತ್ಸವ ಸಂಚಿಕೆಗಾಗಿ ಬರೆದ ಲೇಖನ]

Wednesday, May 4, 2011

ಕಣ್ಣು ಕಿತ್ತ ಘಟನೆ; ನೋಡಿ ಪ್ರೇಮದಂದವ!




ರಘು ಎಂಬ ಪ್ರೇಮಿಯ ಕಣ್ಣು ಕಿತ್ತ ಘಟನೆ ಈಗ ನೇಪಥ್ಯಕ್ಕೆ ಸರಿದಿದೆ. ನನ್ನನ್ನು ಗಾಢವಾಗಿ ತಟ್ಟಿದ ಘಟನೆಯಿದು. ಗಾಢವಾಗಿ ತಟ್ಟಿದ್ದನ್ನು ಗದ್ಯದಲ್ಲಿ ಹಿಡಿದಿಡುವುದು ಕಷ್ಟ. ಅದು ಮೌನದಲ್ಲಿ ಮಾಗಬೇಕು. ಪದ್ಯದಲ್ಲಿ ಅರಳಬೇಕು. ಆದರೆ ಪದ್ಯ ನನಗೆ ಒಲಿಯದ ಮಾಧ್ಯಮ.

ಪಂಚೆಂದ್ರಿಯಗಳಾಚೆ ತುಡಿಯಲಾರದ್ದು ಪ್ರೀತಿಯೇ ಅಲ್ಲ ಎಂದು ಬಲವಾಗಿ ನಂಬಿರುವವಳು ನಾನು. ಲೌಕಿಕವನ್ನು ಮೀರಿ ಪ್ರೀತಿ ಇನ್ಯಾವುದಕ್ಕೋ ತುಡಿಯಬೇಕು. ಅಂಥ ಪ್ರೇಮಾನುಭೂತಿ ಎಂದೂ ಜೀವವಿರೋಧಿಯಾಗಲು ಸಾಧ್ಯವೇ ಇಲ್ಲ. ಆದರೆ ಕಣ್ಣು ಕಿತ್ತ ಪ್ರಕರಣದಲ್ಲಿ ಪ್ರೀತಿ ಆ ಹಂತವನ್ನು ಏರಲು ಪ್ರಯತ್ನಿಸಿತ್ತೇ? ಇಲ್ಲ. ಇಲ್ಲಿ ಅದು ಜೀವವಿರೋಧಿಯಾಗಿ, ಹಿಂಸ್ರಾರೂಪ ಪಡೆದಿದೆ. ಮಾನವೀಯವಾಗಿ ಸ್ಪಂದಿಸಬೇಕಾದ ಸಂಗತಿಯೊಂದು ಮನುಷ್ಯನ ಅನಾಗರಿಕ ವರ್ತನೆಗಳಿಂದ ರಕ್ತಲೇಪನಗೊಂಡಿದೆ.

ಯಾಕೆ ಹಾಗಾಯ್ತು? ಹಾಗಾದರೆ ರಘು-ಅನುಷಾ ಪರಸ್ಪರ ಪ್ರೀತಿಸಿದ್ದು ಸುಳ್ಳೆ?
ಸುಳ್ಳಲ್ಲ ಎಂಬುದು ಅವರ ನಡವಳಿಕೆಗಳಿಂದ, ಹೇಳಿಕೆಗಳಿಂದ ಗೊತ್ತಾಗುತ್ತದೆ. . ಎಲ್ಲಾ ಪ್ರೇಮಿಗಳಂತೆ ಅವರೂ ಪ್ರೀತಿಸಿದ್ದರು. ಪಂಚೇಂದ್ರಿಯಗಳ ವಶವಾದರು. ರೂಪ, ಗಂಧ, ಸ್ವಾದ, ಸ್ಪರ್ಶ, ಮಾತುಗಳು ವರ್ತಮಾನವನ್ನು ಮರೆಸಿಬಿಟ್ಟವು. ಪ್ರೇಮದಮಲಿನಲಿ ಅವರು ತೇಲಿ ಹೋದರು. ಆ ಸ್ಥಿತಿಯನ್ನು ಉಮರ್ ಖಯ್ಯಾಮ್ ಹೀಗೆ ಹೇಳುತ್ತಾನೆ;

’ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು,
ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು,
ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ!
ಕಾಡಾದೊಡೇನದುವೆ ಸಗ್ಗಸುಖವೆನಗೆ.’

ಆ ಸ್ವರ್ಗಸುಖದಲ್ಲಿ ತಮ್ಮ ಮನೆತನ, ಅಂತಸ್ತು, ಗೌರವ, ಘನತೆಗಳೆಲ್ಲವನ್ನು ಮರೆತುಬಿಟ್ಟರು. ಆದರೆ ಅನುಷಳ ಮನೆಯವರು ಮರೆಯಲಿಲ್ಲ. ಯಾಕೆಂದರೆ ಅವರು ಆರ್ಥಿಕವಾಗಿ ರಘುವಿಗಿಂತ ಮೇಲ್ಮಟ್ಟದಲ್ಲಿದ್ದರು. ತಮ್ಮದೇ ಜಾತಿಯವನಾಗಿದ್ದರೂ ರಘುವನ್ನು ಅಳಿಯನೆಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಹಾಗಾಗಿ ತಮ್ಮ ಪ್ರಭಾವವನ್ನು ಬಳಸಿ ಅನುಷಾಳಿಂದ ರಘುವನ್ನು ದೂರ ಮಾಡಿದರು. ಎರಡು ವರ್ಷ ಕಡಿಮೆ ಅವಧಿಯೇನಲ್ಲ. ಒಬ್ಬ ಮನುಷ್ಯನ ಬ್ರೈನ್ ವಾಶ್ ಮಾಡಲು ಅಷ್ಟು ಅವಧಿ ಸಾಕು. ಅನುಷಾ ಹೆತ್ತವರ ಅಜ್ನಾನುವರ್ತಿಯಾದಳು. ಆಕೆ ಇನ್ನೊಂದು ಮದುವೆಗೆ ಸಿದ್ಧವಾದಳು.

ರಘುವಿನ ದುರಂತ ಕಥೆಯನ್ನು ಕೇಳಿದಾಗ ನನಗೆ ಪಕ್ಕನೆ ನೆನಪಾಗಿದ್ದು ಸಿದ್ದಲಿಂಗಯ್ಯನವರ ’ರಾಣಿಯ ಪ್ರೇಮ’ ಎಂಬ ಕವನ. ”ಕಪ್ಪು ಕಾಡಿನ ಹಾಡು” ಎಂಬ ಕವನ ಸಂಕಲನದಲ್ಲಿರುವ ಈ ಹಾಡನ್ನು ನೀವೂ ಒಮ್ಮೆ ಓದಿಬಿಡಿ;

ಉತ್ತರ ದಿಕ್ಕಿಗೆ ರಾಣಿಯೊಬ್ಬಳು
ಇದ್ದಳು ಬಲು ಹಿಗ್ಗಿ
ಎತ್ತರದಲ್ಲಿ ರಾಣಿ ಇದ್ದಳು
ಕಣ್ಣುಗಳಿಗೆ ಸುಗ್ಗಿ
ಆಳನು ಕರೆದಳು ಪಟ್ಟದ ರಾಣಿ
ಆಳು ಬಾರೊ ನನ್ನ
ಜೀತಗಾರನ ಜೊತೆಗೆ ಕರೆದಳು
ಪ್ರೀತಿ ಮಾಡೊ ನನ್ನ

ಆಳು; ಕೊಕ್ಕರೆಯೊಂದು ಮೀನ ಪ್ರೀತಿಸಿತು
ಈ ಪ್ರೇಮದ ಗುಟ್ಟೇನು
ಮಸೆದ ಕತ್ತಿಯು ಕೊರಳ ಪ್ರೀತಿಸಿತು
ಈ ಒಲವಿನ ಪರಿಯೇನು?
.........................
ಜೀತಗಾರನು ಜೀವ ಭಯದಲ್ಲಿ
ಊರ ಬಿಡುವೆನೆಂದ
ಬೇಲಿ ಮರೆಯಲ್ಲಿ ಹೆಣ ಬಿದ್ದಿತ್ತು
ನೋಡಿ ಪ್ರೇಮದಂದ.

ಇದಕ್ಕೆ ವ್ಯಾಖ್ಯಾನದ ಅವಶ್ಯಕತೆ ಇಲ್ಲವೆನಿಸುತ್ತದೆ. ವರ್ಣಸಂಕರದ, ವರ್ಗಾಂತರದ ಪ್ರೇಮ ಪ್ರಕರಣಗಳೇ ಹಾಗೆ ಅವು ಧಾರುಣ ಅಂತ್ಯವನ್ನು ಕಂಡದ್ದೇ ಹೆಚ್ಚು. ಉನ್ನತ ಕುಲದ ಹೆಣ್ಣೊಬ್ಬಳು ಕೆಳಸ್ತರದ ಇಲ್ಲವೇ ಅಂತ್ಯಜನಾದ ಗಂಡೊಬ್ಬನನ್ನ ಪ್ರೀತಿಸಿದರೆ ಅದು ದುರಂತದಲ್ಲಿ ಅಂತ್ಯಗೊಳ್ಳುವುದೇ ಹೆಚ್ಚು. ಇಲ್ಲಿ ಪ್ರಭುತ್ವ ಕೂಡಾ ಮೇಲ್ಜಾತೀಯ ಮತ್ತು ಮೇಲ್ವರ್ಗದ ಪರವಾಗಿಯೇ ನಿಲ್ಲುತ್ತದೆ. ಆದರೆ ಉನ್ನತ ಸ್ತರದ ಗಂಡೊಬ್ಬ ಕೆಳವರ್ಗದ ಸ್ತ್ರೀಯನ್ನು ಇಷ್ಟಪಟ್ಟರೆ ಅದೇನೂ ಅಪರಾಧವಾಗುವುದಿಲ್ಲ. ಆತ ತನ್ನ ಜಾತಿಯಲ್ಲಿಯೇ,ತನ್ನ ಅಂತಸ್ತಿಗನುಗುಣವಾದ ಹೆಣ್ಣೊಬ್ಬಳನ್ನು ಮದುವೆಯಾಗುತ್ತಾನೆ. ಇವಳನ್ನು ’ಇಟ್ಟುಕೊಳ್ಳುತ್ತಾನೆ’ ಅದನ್ನು ಸಮಾಜ ಒಪ್ಪಿಕೊಳ್ಳುತ್ತದೆ.

ರಘು ಪ್ರಕರಣವನ್ನೇ ನೋಡಿ; ಇಲ್ಲಿ ಹುಡುಗಿ ಮನೆಯವರು ಶ್ರೀಮಂತರು. ಜೊತೆಗೆ ರಾಜಕೀಯ ವ್ಯಕ್ತಿಗಳ ನಂಟುಳ್ಳವರು. ಹಾಗಾಗಿಯೇ ಈ ಪ್ರಕರಣವನ್ನು ಹೆಚ್ಚು ಲಂಬಿಸದಂತೆ ಮಾಧ್ಯಮಗಳ ಮೇಲೆ ಒತ್ತಡವನ್ನು ತಂದರು ಆದರೆ ಆ ವೇಳೆಗಾಗಿಯೇ ಆ ಪ್ರಕರಣ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿತ್ತು. ಅನಿವಾರ್ಯವಾಗಿ ಪೋಲಿಸ್ ಇಲಾಖೆ ಕಣ್ಣು ಕಿತ್ತ ಆರೋಪ ಹೊತ್ತವರನ್ನು ಬಂದಿಸಲೇ ಬೇಕಾಯ್ತು.

ಮುಂದೆ ಈ ಪ್ರಕರಣ ಯಾವ ಹಾದಿ ಹಿಡಿಯುತ್ತೋ ಗೊತ್ತಿಲ್ಲ. ಆದರೆ ರಘುವಿಗಾದ ಅನ್ಯಾಯವನ್ನು ತುಂಬಿ ಕೊಡಲು ಯಾರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಕಣ್ಣು ಬಹು ಮುಖ್ಯವಾದ ಅಂಗ.
ಈ ಪ್ರಕರಣದ ಹೊರ ಆವರಣದಲ್ಲಿ ನಿಂತು ನೋಡುತ್ತಿರುವ ನಾವು ಅದನ್ನು ಕಪ್ಪು ಬಿಳುಪಾಗಿ ವ್ಯಾಖ್ಯಾನಿಸಬಹುದು. ಇದನ್ನು ಎಸ್.ನಾರಾಯಣ್ ಎಂಬ ಸಿನೇಮಾ ನಿರ್ದೇಶಕ ’ನೆನಪಿದೆಯಾ ಓ ಗೆಳತಿ’ ಎಂಬ ಸಿನೇಮಾ ತೆಗೆಯುವುದರ ಮುಖಾಂತರ ಚೆನ್ನಾಗಿಯೇ ಮಾಡುವವರಿದ್ದಾರೆ!
ಆದರೆ ಅದರ ಗೋಜಲು, ಗಂಭೀರತೆಗಳೆಲ್ಲಾ ಅದರಲ್ಲಿ ನೇರವಾಗಿ ಭಾಗವಹಿಸಿದವರಿಗಷ್ಟೇ ಗೊತ್ತಾಗುವ ಸಂಗತಿ.
ಒಳಾವರಣದಲ್ಲಿರುವ ರಘುವಿನ ಗೆಳೆಯರು ಮತ್ತು ಅನುಷಾ ಬಂಧುಗಳು ಕಣ್ಣು ಕಿತ್ತ ಘಟನೆಯ ಭಾಗಿದಾರರು ಮತ್ತು ಸಾಕ್ಷಿದಾರರು. ಆದರೆ ಇದೆಲ್ಲದರ ಕೇಂದ್ರ ಬಿಂದು ಅನುಷಾ ಮತ್ತು ರಘು. ಅವರ ಆತ್ಮಸಾಕ್ಷಿಗೆ ಏನು ಅನ್ನಿಸಿದೆಯೋ ಅದು ಮಾತ್ರ ಸತ್ಯ. ಬಹುಶಃ ಎರಡು ವರ್ಷದ ಹಿಂದೆ ಪರಸ್ಪರ ಮೆಚ್ಚಿ ಮದುವೆಯಾಗಿ, ಎರಡು ತಿಂಗಳು ದಾಂಪತ್ಯ ಜೀವನ ನಡೆಸಿದ ಅವರಿಗೆ ಪ್ರೀತಿಯ ಬಗ್ಗೆ ಇದ್ದ ಭ್ರಮೆಗಳೆಲ್ಲಾ ಕಳಚಿರಬೇಕು. ಪಂಚೇಂದ್ರಿಯಗಳಾಚೆ ಅವರ ಪ್ರೇಮ ತುಡಿಯಲಿಲ್ಲ. ಒಂದು ವೇಳೆ ತುಡಿದಿದ್ದರೆ ಅದು ಪ್ರೇಮಸಾಪಲ್ಯದ ಒಳದಾರಿಗಳನ್ನು ತಾನಾಗಿಯೇ ಹುಡುಕಿಕೊಳ್ಳುತ್ತಿತ್ತು.

ಅನುಷಾ ತನ್ನ ನಿರ್ಧಾರದ ಬಗ್ಗೆ ಗಟ್ಟಿಯಾಗಿದ್ದಾಳೆ. ರಘು ಕೂಡಾ ದುರಂತ ಪ್ರೇಮಿಯಂತೆ ಕಾಣುತ್ತಿಲ್ಲ. ಮಾಧ್ಯಮವನ್ನು ಅವರು ಎದುರಿಸಿದ ರೀತಿಯಲ್ಲಿಯೇ ಅದು ವ್ಯಕ್ತವಾಗುತ್ತಿತ್ತು. ’ಒಲವೇ ಜೀವನ ಲೆಖ್ಖಾಚಾರ’ ನಿಜವಾಗಿದೆ. ಪ್ರೇಮ ಮತ್ತೆ ಸೋತಿದೆ.