ಪ್ರತಿವರ್ಷ ಮಾರ್ಚ್ ೮ ಬಂದೊಡನೆ ನಮಗೆ ಮಹಿಳಾ
ದಿನಾಚರಣೆಯ ನೆನಪಾಗುತ್ತದೆ. ಆಗ ನಾವು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಹಿಳೆಯರ
ಬಗ್ಗೆ ಮಾತಾಡುತ್ತೇವೆ. ಅವರ ಬಗ್ಗೆ ಮಾಧ್ಯಮಗಳು ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ.
ಪತ್ರೆಕೆಗಳು ವಿಶೇಷ ಪುರವಣಿಗಳನ್ನು ತರುತ್ತವೆ. ಪತ್ರಿಕಾ ಕಛೇರಿಗಳು. ಆ ದಿನದ ಮಟ್ಟಿಗೆ
ಸಂಪಾದಕರ ಸ್ಥಾನವೂ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಮಹಿಳಾ ಸಿಬ್ಬಂದಿಗೆ
ಬಿಟ್ಟುಕೊಡುತ್ತದೆ. ಈ ಒಂದು ದಿನದ ಉತ್ಸವ ಮೂರ್ತಿಯಾಗಿ ಮಹಿಳೆ ಮೆರೆಯುತ್ತಾಳೆ.
ಇದಿಷ್ಟೇ ಸಾಕೆ?
ಕುಟುಂಬದ ಪರಿಕಲ್ಪನೆಯನ್ನು ಮೂಡಿಸಿದವಳು ಮಹಿಳೆ,
ಕುಟುಂಬವನ್ನು ಕಟ್ಟಿ, ಪೋಷಿಸಿ ಅದಕ್ಕೆ ಶಕ್ತಿ ತುಂಬಿಸಿದವಳು ಮಹಿಳೆ. ಆದರೆ ಈಗ
ಕುಟುಂಬದಲ್ಲಿ ಅವಳ ಸ್ಥಾನ ಮಾನ ಹೇಗಿದೆ? ಅವಳು ಬರಿಯ ದುಡಿಯುವ ಯಂತ್ರವಾಗಿದ್ದಾಳೆಯೇ? ಕುಟುಂಬ
ನಿರ್ವಹಣೆಯಲ್ಲಿ ಅವಳ ಸಹಭಾಗಿಯಾದ ಪುರುಷ ಈಗ ಎಲ್ಲಿ ನಿಂತಿದ್ದಾನೆ? ಈ ಪ್ರಶ್ನೆಗಳನ್ನು
ಕೇಳಿಕೊಂಡು ನಗರ ಬದುಕಿನತ್ತ ತಿರುಗಿದಾಗ ಅಲ್ಲಿ ನಮಗೆ ಉತ್ಸಾಹಿ ಮಹಿಳೆ ಕಾಣಿಸುತ್ತಿಲ್ಲ.
ಮೇಲ್ನೋಟಕ್ಕೆ ಸಶಕ್ತ ಮಹಿಳೆ ಎಂದು ಕಾಣಿಸಿಕೊಂಡರೂ ವೈಯ್ಯಕ್ತಿಕವಾಗಿ ಸಂಬಂಧಗಳ ಗೋಜಲಿನಲ್ಲಿ
ಸಿಕ್ಕಿಬಿದ್ದ ಅಸಾಯಕ ಹೆಣ್ಣುಮಗಳೊಬ್ಬಳು ಕಾಣಸಿಗುತ್ತಾಳೆ.
ಇದನ್ನೆಲ್ಲಾ ಮನದಲ್ಲೇ ಮಥಿಸುತ್ತಾ ನಾನು ಬಂದಿದ್ದು ಈ
ಹಿಮಾಲಯವೆಂಬ ದೇವಭೂಮಿಗೆ. ಬೆಟ್ಟಗುಡ್ಡಗಳನ್ನು ಏರಿಳಿಯುತ್ತಾ ಹಳ್ಳ ಕಣಿವೆಗಳಲ್ಲಿ ಹರಿದಾಡುತ್ತಾ
ಭವಿಷ್ಯ ಬದ್ರಿಯನ್ನು ಚಾರಣ ಮಾಡುತ್ತಿರುವಾಗ ಎದುರಾದವಳು ಈಕೆ. ಇವಳ ಹೆಸರು ಸುಮಿತ್ರಾದೇವಿ.
ಬೆನ್ನ ಮೇಲೆ ಆಕೆ ಹೊತ್ತುಕೊಂಡಿದ್ದ ಉದ್ದವಾದ ಮರದ ದಿಮ್ಮಿಗಳನ್ನು ನೋಡಿ ನಾವು ದಂಗಾಗಿ
ಹೋಗಿದ್ದೆವು. ಆಮೇಲೆ ಎಚ್ಚೆತ್ತು ಅವಳಲ್ಲಿ ಮಾತಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದೆವು. ಆಗ ಆಕೆ
ಹೇಳಿದ್ದು; ತನ್ನ ಹೆಸರು ಸುಮಿತ್ರಾದೇವಿ. ತಪೋವನದಿಂದ ಮೇಲೆ ಮೂರು ಕಿ.ಮೀ ದೂರವಿರುವ ಸುಹಾನಿ
ಎಂಬ ಊರಿಗೆ ತಮಗೊಂದು ಮನೆ ಕಟ್ಟಿಕೊಳ್ಳಲೆಂದು ಈ ತೊಲೆಗಳನ್ನು ಹೊತ್ತೊಯ್ಯುತ್ತಿದ್ದಳು. ಆಕೆಯ
ಗಂಡನ ಬಗ್ಗೆ ವಿಚಾರಿಸಿದಾಗ, ಆತ ದೂರದ ದೆಹಲಿಯಲ್ಲಿ [ಇಲ್ಲಿಂದ ಸುಮಾರು ಐನೂರು ಕಿ.ಮೀ.ದೂರ]
ಸೆಕ್ಯುರಿಟಿ ಗಾರ್ಡ್ ಆಗಿದ್ದಾನೆಂದು, ವರ್ಷಕ್ಕೆ ಎರಡ್ಮೂರು ಬಾರಿ ವಾರದ ಮಟ್ಟಿಗೆ ರಜೆಗೆ
ಬರುವವನೆಂದೂ ಹೇಳಿದಳು.
ಹಿಮಾಲಯದಲ್ಲಿ ಬೆನ್ನ ಮೇಲೆ ಹೊರೆ ಹೊತ್ತ ಮಹಿಳೆಯರನ್ನು
ನೋಡಿದಾಗಲೆಲ್ಲ ಇದು ನನಗೆ ನೆನಪಿಗೆ ಬರುತ್ತಿತ್ತು. ಇಲ್ಲಿ ಗಂಡಸರೆಲ್ಲಾ ದೂರದ ಊರುಗಳಿಗೆ,
ನಗರಗಳಿಗೆ ದುಡಿಯಲು ಹೋಗುತ್ತಾರೆ. ಹೆಂಗಸರು ತಮ್ಮ ಪುಟ್ಟ ಹೊಲಗಳಲ್ಲಿ ದುಡಿಯುತ್ತಾ,
ಹೈನುಗಾರಿಕೆ ಮಾಡುತ್ತಾ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾ ಸುಂದರ ನಾಳೆಗಳ ಬಗ್ಗೆ
ಹೊಂಗನಸು ಕಾಣುತ್ತಿರುತ್ತಾರೆ. ನಾವು ಮಾತಾಡಿಸಲು ನಿಂತಾಗ ಸುಂದರವಾದ ಹಿಮ ಬಿಳುಪಿನ ನಗು ಚೆಲ್ಲಿ
ನಮ್ಮ ದುಗುಡಗಳನ್ನು ಕ್ಷಣಕಾಲ ಮರೆಸಿಬಿಡುತ್ತಾರೆ.
ಹಿಮಾಲಯದ ಬಹುಪಾಲು ಶಿಖರಗಳನ್ನು ಹೊಂದಿರುವ ಉತ್ತರಾಖಂಡ
ರಾಜ್ಯವನ್ನು ಪ್ರವಾಸೋಧ್ಯಮದ ಅನುಕೂಲತೆಗಳಿಗಾಗಿ ಎರಡು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಒಂದು
ಗಡ್ವಾಲ್ ವಲಯ. ಇನ್ನೊಂದು ಕುಮಾಂ ವಲಯ. ಗಡ್ವಾಲ್ ವಲಯದ ಕೆಲವು ಪಟ್ಟಣಗಳಲ್ಲಿ ನಿಮಗೆ ಸೈಕಲ್
ರಿಕ್ಷಗಳು, ಟ್ಯಾಕ್ಷಿಗಳು ಕಾಣಸಿಗುತ್ತವೆ.ತೀರಾ ವಿರಳವಾಗಿ ಅದೂ ಕೆಲವೆಡೆ ಮಾತ್ರ ರಿಕ್ಷಾಗಳು
ಕಾಣುತ್ತವೆ. ಆದರೆ ಕುಮಂ ವಲಯದಲ್ಲಿ ಒಂದೇ ಒಂದು ರಿಕ್ಷಾವನ್ನೂ ನಾನು ಕಂಡಿಲ್ಲ. ಅಂದರೆಅವರು
ದಿನಬಳಕೆಯ ಅಗತ್ಯ ವಸ್ತುಗಳ ಸಾಗಾಣೆಗೆ ಏನನ್ನು ಬಳಸುತ್ತಾರೆ? ಸಂಶಯಬೇಡ. ಅವರು ನಂಬಿರುವುದು
ತಮ್ಮ ಬೆನ್ನನ್ನೇ...ಬೆನ್ನ ಮೇಲೆ ಗ್ಯಾಸ್ ಸಿಲಿಂಡರನ್ನು, ಬೀರುಗಳನ್ನು ಹೊತ್ತುಕೊಂಡು ಏರು
ಹಾದಿಯಲ್ಲಿ ಹತ್ತಿ ಹೋಗುತಿರುವ ಜನರನ್ನು ನೀವಿಲ್ಲಿ ಕಾಣಬಹುದು.
ಹೊರೆ ಅಂದ ತಕ್ಷಣ ನಮಗೆ ಹೊಳೆಯುವುದು ತಲೆಯ ಮೇಲಿನ
ಹೊರೆಯೇ. ಆದರೆ ಬೆನ್ನ ಮೇಲಿನ ಹೊರೆಯನ್ನು ಏನೆಂದು ಕರೆಯುವುದು? ಅದಕ್ಕೆ ಬೇರೆಯದೇ ಆದ
ಶಬ್ದವಿದೆಯೇ? ಅಥವಾ ತಲೆ ಹೊರೆ, ಬೆನ್ನ ಹೊರೆ ಎಂದು ವಿಂಗಡಿಸಿಕೊಳ್ಳಬೇಕೆ? ಗೊತ್ತಿಲ್ಲ. ಆದರೆ
ವಿಚಾರ ಮತ್ತು ಭಾವಕ್ಕೆ ಸಂಬಂಧಿಸಿದ ಮನಸಿನ ಹೊರೆಯೊಂದು ಈ ಲೇಖನ ಬರೆಯಲು ನನ್ನನ್ನು
ಪ್ರೇರೇಪಿಸಿತು.
[ಮಂಗಳೂರಿನಿಂದ ಪ್ರಕಟವಾಗುವ ’ಸಂವೇದಿ’ ನಿಯತಕಾಲಿಕದ ಮಹಿಳಾ ದಿನಾಚಾರಣೆ ಸಂಚಿಕೆಗಾಗಿ ಬರೆದ ಬರಹ].