ಇವತ್ತು ಕೆಂಡಸಂಪಿಗೆ ವೆಬ್ ಸೈಟ್ ನೋಡುತ್ತಲಿದ್ದೆ. ಬಸವರಾಜು ಅವರು ’ರಾಜಕಾರಣಿಗಳೂ, ಪತ್ರಕರ್ತರೂ’ ಎಂಬ ಲೇಖನ ಬರೆದಿದ್ದರು. ಅದನ್ನು ಓದಿ ಮುಗಿಸುತ್ತಿರುವಾಗಲೇ ಸುದ್ದಿವಾಹಿನಿಗಳಲ್ಲಿ ತುಮಕೂರಿನ ಸಿದ್ದಗಂಗಾಸ್ವಾಮಿಗಳ ಬೈಟ್ ಪ್ರಸಾರವಾಗುತ್ತಿತ್ತು. ಅವರು ಹೇಳುತ್ತಿದ್ದರು; ಯಡಿಯೂರಪ್ಪ ಶ್ರಮಜೀವಿ. ಗಾಮೀಣ ಭಾಗದಲ್ಲಿ ಅವರು ಜನಪ್ರಿಯರಾಗಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ..... ಹೀಗೆ ಅವರ ಮಾತು ಮುಂದುವರಿದಿತ್ತು.
ಹಾಗೆ ನೋಡಿದರೆ ಇವತ್ತಿನ ದಿನವೇ ಲಿಂಗಾಯಿತ ಸ್ವಾಮಿಗಳ ಪ್ರತಿಭಟನಾ ದಿನ. ಎಲ್ಲಾ ಲಿಂಗಾಯಿತ ಸ್ವಾಮಿಗಳು, ಅರ್ಥಾತ್ ಜಗದ್ಗುರುಗಳು ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಬೀದಿಗಿಳಿದ ದಿನ. ಹಾಗೆ ಅವರು ಬೀದಿಗಿಳಿದದ್ದು ನ್ಯಾಯಯುತವಾದುದೇ!. ಮಠ ಮಾನ್ಯಗಳಿಗೆ ರಾಜ್ಯದ ಬೊಕ್ಕಸದಿಂದ ಕೋಟಿ ಕೋಟಿ ಹಣವನ್ನು ಬಾಚಿ ಕೊಟ್ಟ ಪ್ರಭುಗಳ ಋಣ ಸಂದಾಯ ಮಾಡಬೇಡವೇ?
ಸಿದ್ದಗಂಗಾ ಸ್ವಾಮಿಗಳನ್ನು ಇಡೀ ನಾಡು ಗೌರವಿಸುತ್ತದೆ. ಅವರು ಮಠವನ್ನು ಕಟ್ಟಿಕೊಂಡರೂ ಯಾವುದೇ ಒಂದು ಜಾತಿಗೆ ಸೀಮಿತವಾಗಿ ನಡೆದುಕೊಂಡವರಲ್ಲ. ಆದರೆ ಶತಾಯುಷಿ ಅನ್ನಿಸಿಕೊಂಡ ಮೇಲೆ ಅವರು ಬದಲಾದಂತೆ ಕಾಣುತ್ತಿದೆ. ಅವರು ಲಿಂಗಾಯಿತ ಸಮುದಾಯಕ್ಕೆ ಮಾತ್ರ ಸೇರಿದ ಸ್ವಾಮೀಜಿಯೇನೋ ಎಂದು ಭಾಸವಾಗುತ್ತಿದೆ.
ಎರಡು ವರ್ಷಗಳ ಹಿಂದಿನ ಘಟನೆ;
ನಾಡ ಹಬ್ಬವಾದ ಮೈಸೂರು ದಸರಾದ ಉದ್ಘಾಟನೆಗಾಗಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಸಿದ್ದಗಂಗಾಸ್ವಾಮಿಗಳನ್ನು ಗೌರವದಿಂದ ಕರೆದಿದ್ದರು. ಅವರು ಕೂಡಾ ಸಂತೋಷದಿಂದ ಒಪ್ಪಿಕೊಂಡಿದ್ದರು.
ಆದರೆ ಅವರು ಉದ್ಘಾಟನೆ ಮಾಡಲಿಲ್ಲ. ಕಾರಣ ಕುಮಾರಸ್ವಾಮಿ ವಚನ ಭ್ರಷ್ಟರಾದದ್ದು ಸ್ವಾಮಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿಗೆ ಕೊಟ್ಟ ಮಾತಿನಂತೆ ೨೦ ತಿಂಗಳ ಆಢಳಿತದ ನಂತರ ಮುಖ್ಯಮಂತ್ರಿ ಗಾದಿಯನ್ನು ಬಿಟ್ಟುಕೊಡಬೇಕಾಗಿತ್ತು. ಯಡಿಯೂರಪ್ಪ ಅದನ್ನು ಅಲಂಕರಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ.
ಈಗ ಕರ್ನಾಟಕದ ಬಹುತೇಕ ಎಲ್ಲಾ ವೀರಶೈವ ಮಠಾದೀಶರು ಬಹಿರಂಗವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ನಿಂತಿದ್ದಾರೆ. ಕೊಳದ ಮಠದ ಸ್ವಾಮೀಜಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಧಾನ ಪರಿಷತ್ತಿನಲ್ಲಿ ಮಠಾದೀಶರಿಗೂ ಪ್ರಾತಿನಿಧ್ಯವಿರಬೇಕು ಎಂದು ಆಗ್ರಹಿಸಿದರು.
ಸ್ವಜನಪಕ್ಷಪಾತವೆಂಬುದು ಕೇವಲ ರಾಜಕಾರಣಿಗಳಿಗೆ ಸ್ವತ್ತಲ್ಲ!
ಮಠಾದೀಶರನ್ನು ಪಕ್ಕದಲ್ಲಿಟ್ಟುಕೊಂಡು, ಕಂಡ ಕಂಡ ದೇವಸ್ಥಾನಗಳಿಗೆ ಬೇಟಿಕೊಡುತ್ತಾ, ಹೋಮ ಹವನಗಳಲ್ಲಿ ಭಾಗವಹಿಸುತ್ತಾ ಕುರ್ಚಿಯನ್ನು ಉಳಿಸುಕೊಳ್ಳುವುದನ್ನೇ ಕಾಯಕವನ್ನಾಗಿಸಿಕೊಂಡ ಮುಖ್ಯಮಂತ್ರಿಗಳಿಗೆ ದೂರದರ್ಶಿತ್ವವಿಲ್ಲದ ಜನಪ್ರಿಯ ಕಾರ್ಯಕ್ರಮಗಳೇ ಅಭಿವೃದ್ಧಿ ಯೋಜನೆಗಳಾಗಿ ಭಾಸವಾಗುತ್ತಿದೆ. ಹಾಗಾಗಿಯೇ ಅವರಿಗೆ ಕಳೆದ ವರ್ಷ ನೆರೆಹಾವಳಿಯಿಂದ ತತ್ತರಿಸಿದ ಉತ್ತರ ಕರ್ನಾಟಕದ ಜನತೆಗೆ ಸೂರು ಕಟ್ಟಿಕೊಡುವುದಕ್ಕಿಂತ ಮುಖ್ಯವಾಗಿ ಭಾಗ್ಯಲಕ್ಷ್ಮಿ ಕಾರ್ಯಕ್ರಮದಲ್ಲಿ ಸೀರೆ ಹಂಚುವುದೇ ಮುಖ್ಯವಾಗುತ್ತದೆ.
ತಮ್ಮ ಜನಪ್ರಿಯ ಕಾರ್ಯಕ್ರಮಗಳ ಯಥೇಚ್ಛ ಜಾಹೀರಾತುಗಳನ್ನು ಮಾಧ್ಯಮಗಳಿಗೆ ನೀಡಿ ಅವರನ್ನು ಸಂತುಷ್ಟಗೊಳಿಸಿದರು. ಆದರೂ ಮಾಧ್ಯಮಗಳು ಅವರ ವಿರುದ್ಧ ತಿರುಗಿಬಿದ್ದವು. ಯಡಿಯೂರಪ್ಪ ಅವರಿಗೆ ಸಹಜವಾಗಿ ಸಿಟ್ಟು ಬಂದಿದೆ. ಪತ್ರಕರ್ತರಿಗೆ ಸ್ವಲ್ಪವಾದರೂ ಕೃತಜ್ನತೆ ಬೇಡವೇ?
ಯಡಿಯೂರಪ್ಪನವರಿಗೆ ತಾನು ಈ ಸ್ಥಿತಿಯಲ್ಲಿ, ಬೆತ್ತಲಾಗಿ ನಿಲ್ಲಲು ದೇವೆಗೌಡ ಮತ್ತು ಅವರ ಮಗ ಕುಮಾರಸ್ವಾಮಿಯೇ ಕಾರಣ ಎಂದು ನಂಬಿಕೊಂಡಿದ್ದಾರೆ. ಹಾಗಾಗಿ ಆ ’ಅಪ್ಪ ಮಕ್ಕಳನ್ನು ಬಿಡುವುದಿಲ್ಲ’ ಎಂದು ಹಲ್ಲು ಮಸೆಯುತ್ತಿದ್ದಾರೆ. ಚಿಕ್ಕ ಪುಟ್ಟ ವಿಷಯಗಳನ್ನೆಲ್ಲಾ ವಿಜೃಂಬಿಸಿ ತನ್ನನ್ನು ಖಳನಾಯಕನನ್ನಾಗಿ ಬಿಂಬಿಸಿದ ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದಾರೆ. ಸಧ್ಯಕ್ಕೆ ಇವೆರಡೂ ಅವರ ವೈರಿ ಸ್ಥಾನದಲ್ಲಿದೆ.
ಅವರ ಸಿಟ್ಟು ಸಹಜವಾದುದೇ. ಕುಮಾರಸ್ವಾಮಿ ಮಾಡಲಾರದ್ದೇನನ್ನೂ ಇವರು ಮಾಡಿಲ್ಲ. ಇವರು ಅಧಿಕಾರಕ್ಕೆ ಹೊಸಬರು. ಎನೋ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾರೆ. ಆದರೆ ಕುಮಾರಸ್ವಾಮಿ ನಾಜೂಕಯ್ಯ. ಅವರ ಮೈಗೆ ಅವರಪ್ಪ ಚೆನ್ನಾಗಿ ಎಣ್ಣೆಹಚ್ಚಿದ್ದಾರೆ!
ಇನ್ನು ಮಾಧ್ಯಮದವರಿಗೆ ಎನು ಬೇಕೋ ಅದನ್ನು ಹೇಗೆ ಕೊಡಬೇಕೆಂಬುದು ಅಧಿಕಾರಸ್ಥ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ. ಹಿಂದೆಲ್ಲಾ ದೀಪಾವಳಿ ಬೋನಸ್ಸು ಕೊಡುತ್ತಿದ್ದರು. ಅದು ತಿಂಗಳ ಪೇಮೆಂಟ್ ಗೆ ಇಳಿದು ಈಗ ದಿನಗೂಲಿಗೆ ಇಳಿದಿದೆಯಂತೆ. ಯವುದಕ್ಕೂ ಇರಲಿ ಎಂದುಕೊಂಡು ರಾಜಕಾರಣಿಗಳೇ ಈಗ ಸುದ್ದಿಚಾನಲ್ ಗಳ ಒಡೆಯರಾಗುತ್ತಿದ್ದಾರೆ. ಪತ್ರಕರ್ತರ ಹಿಂಡನ್ನೇ ಖರೀದಿ ಮಾಡುವುದು ಹೆಚ್ಚು ಲಾಭದಾಯಕ.
ಎರಡು ದಿನಗಳ ಹಿಂದಿನ ಘಟನೆಯೊಂದರ ಉದಾಹರಣೆ ಕೊಡುವುದಾರೆ, ಮುಖ್ಯಮಂತ್ರಿಗಳ ಆಪ್ತವಲಯದಿಂದ ಸಿಡಿಯೊಂದನ್ನು ಕನ್ನಡದ ಮೂರು ಪ್ರಮುಖ ಸುದ್ದಿವಾಹಿನಿಗಳಿಗೆ ಕಳುಹಿಸಿಕೊಡಲಾಗಿತ್ತು. ಜನಾರ್ಧನ ರೆಡ್ಡಿ ಮುಖ್ಯಮಂತ್ರಿಗಳ ವಿರುದ್ಧ ಷಡ್ಯಂತರ ರೂಪಿಸುತ್ತಿರುವ ಚಿತ್ರಣ ಅದರಲ್ಲಿತ್ತು. ಒಂದು ಚಾನಲ್ ಅದನ್ನು ತಡವಾಗಿ ಪ್ರಸಾರ ಮಾಡಿತು. ಇನ್ನೆರಡು ಚಾನಲ್ ಅದನ್ನು ಏನು ಮಾಡಿತೋ ಗೊತ್ತಾಗಲೇ ಇಲ್ಲ!
ನೈತಿಕತೆಯ ವಿಚಾರಕ್ಕೆ ಬಂದರೆ ಈಗ ಮಠಾದೀಶರು, ರಾಜಕಾರಣಿಗಳು, ಪತ್ರಕರ್ತರು ಒಂದೇ ಸಾಲಿನಲ್ಲಿ ನಿಲ್ಲುತ್ತಾರೆ.
ಆದರೂ ಕಳವಳಪಡಬೇಕಾಗಿಲ್ಲ. ನಮ್ಮದು ವೈವಿಧ್ಯಮಯ ದೇಶ. ಪ್ರತಿವ್ಯವಸ್ಥೆಗೂ ಪರ್ಯಾಯ ವ್ಯವಸ್ಥೆಯೊಂದು ಇದ್ದೇ ಇರುತ್ತದೆ. ಶಿಷ್ಟ ಸಾಹಿತ್ಯದಷ್ಟೆ ಪ್ರಭಲವಾದ ಜನಪದ ಸಾಹಿತ್ಯ ಇಲ್ಲಿ ಅನಾಚೂನವಾಗಿ ಹರಿದು ಬಂದಿದೆ. ಪತ್ರಿಕೆ, ಟಿವಿಗಳು ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದರೂ ಚೌಕಟ್ಟುಗಳಿಲ್ಲದ ಬ್ಲಾಗ್, ಪೇಸ್ ಬುಕ್, ಟ್ವೀಟ್ಟರ್ ನಂಥ ಸಾಮಾಜಿಕ ಜಾಲ ತಾಣಗಳಿವೆ. ಕೈಯಲ್ಲಿ ಜಂಗಮವಾಣಿಯಿದೆ. ಸುದ್ದಿಯಾಚೆಗಿನ ಸುದ್ದಿಯನ್ನು ತಿಳಿದುಕೊಳ್ಳುವ ಕುತೂಹಲ ನಮಗಿರಬೇಕು. ಸಮಾಜಮುಖಿ ಚಿಂತನೆ ಇರಬೇಕು ಅಷ್ಟೆ.
Bihar Samuhik Nalkup Yojana Scheme: How to apply, Eligibility, Documents,
benefits
-
Bihar Samuhik Nalkup Yojana : Keeping in view the need of the state, the
government keeps launching different schemes at different times. This time
the g...
7 hours ago