Friday, March 18, 2011

’ರಿಯಾಲಿಟಿ ಶೋ’ಗಳ ವೈನೋದಿಕ ಹಿಂಸೆ

[ಬಾಗಲಕೋಟೆ ಜಿಲ್ಲೆಯ ಕೆರಕಲ್ ಮಟ್ಟಿ ಹಳ್ಳಿಯಲ್ಲಿ ೬ ವರ್ಷದ ಬಾಲಕನನ್ನು ಪ್ಯ್ಯಾಟೆ ಹುಡುಗಿಯರು ಚಡ್ಡಿ ಬಿಚ್ಚಿ ಅಹ್ಲೀಲವಾಗಿ ಲೇವಡಿ ಮಾಡಿದ್ದು ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ .ಸುವರ್ಣ ಚಾನಲ್ ಗಾಗಿ ಚಿತ್ರಿಕರಿಸಲಾಗುತ್ತಿದ್ದ ಈ ರಿಯಾಲಿಟಿ ಶೋ ಮುಗ್ಧ ಮನಸ್ಸಿನ ಮೇಲಾಗುತ್ತಿರುವ ನಗರ ಸಂಸ್ಕೃತಿಯ ದಾಳಿ ಎಂದೇ ನಾನು ಪರಿಗಣಿಸುತ್ತೇನೆ.
ಕಳೆದ ವರ್ಷ ಸೆಪ್ಟಂಬರದಲ್ಲಿ ನಾನು ’ರಿಯಾಲಿಟಿ ಶೋಗಳಲ್ಲಿ ವೈನೋದಿಕ ಹಿಂಸೆ’ ಎಂಬ ಲೇಖನ ಬ್ಲಾಗಿಗೆ ಪೋಸ್ಟ್ ಮಾಡಿದ್ದೆ. ಅದು ಈಗಲೂ ಪ್ರಸ್ತುತವಾಗಬಹುದೆಂದು ಮತ್ತೆ ಪೋಸ್ಟ್ ಮಾಡುತ್ತಿದ್ದೇನೆ ]


ಇಪ್ಪತ್ತು ವರ್ಷಗಳ ಹಿಂದಿನ ಸಮಾಚಾರ; ’ಮನ್ವಂತರ’ ಎಂಬ ರಾಜಕೀಯ ವಾರಪತ್ರಿಕೆಯ ಮುಖಾಂತರ ನಾನು ಪತ್ರಿಕಾರಂಗಕ್ಕೆ ಅಡಿಯಿಟ್ಟೆ. ಆ ಪತ್ರಿಕೆಯ ಸಹ ಪ್ರಕಟಣಾ ಮಾಸಪತ್ರಿಕೆಯೊಂದಿತ್ತು. ಅದರ ಹೆಸರು ’ಸುರತಿ’. ಮಾರುಕಟ್ಟೆಯಲ್ಲಿ ಅದಕ್ಕೆ ಪೈಪೋಟಿ ನೀಡುತ್ತಿರುವ ಇನ್ನೊಂದು ಮಾಸಪತ್ರಿಕೆಯಿತ್ತು. ಅದರ ಹೆಸರು ’ರತಿವಿಜ್ನಾನ’. ಸರ್ಕ್ಯೂಲೇಶನಿನಲ್ಲೂ ಪರಸ್ಪರ ಪೈಪೋಟಿ ನೀಡುತ್ತಿದ್ದ ಆ ಪತ್ರಿಕೆಗಳ ಒಟ್ಟು ಪ್ರಸರಣ ಸಂಖ್ಯೆ ಐದು ಲಕ್ಷ ದಾಟಿ ಹೋಗುತ್ತಿತ್ತು.

ಪ್ರಸರಣದ ದೃಷ್ಟಿಯಿಂದ ನೋಡಿದರೆ ಅವೆರಡು ಪತ್ರಿಕೆಗಳು ಜನಪ್ರಿಯವಾದ ಮಾಸಪತ್ರಿಕೆಗಳು. ಆದರೆ ಅವು ಮನುಷ್ಯನ ಬೇಸಿಕ್ ಇನ್ಸ್ಟಿಂಗ್ಟ್ ಆದ ಲೈಂಗಿಕ ಕುತೂಹಲವನ್ನು, ತಣಿಸುವ, ಕೆರಳಿಸುವ ಪುಸ್ತಕಗಳು ಅಷ್ಟೆ. ’ಸೆಗಣಿಯಲ್ಲಿ ಸಾವಿರ, ಮಧ್ಯಾಹ್ನಕ್ಕೆ ಲಯ’ ಎಂಬಂತೆ ಅದರಿಂದಾಚೆಗೆ ಅವುಗಳಿಗೆ ಪ್ರತ್ಯೇಕ ಐಡೆಂಟಿಟಿ ಇರಲಿಲ್ಲ.

ಅದು ಮುದ್ರಣ ಮಾಧ್ಯಮದ ಸಾರ್ವಭೌಮತ್ವದ ಕಾಲಘಟ್ಟ. ಈಗ ಏನಿದ್ದರೂ ದೃಶ್ಯ ಮಾಧ್ಯಮದ ಯುಗ. ಸರ್ಕ್ಯೂಲೇಷನ್ ಎಂಬುದು ಹಿಂದಕ್ಕೆ ಸರಿದು ಟಿ.ಆರ್.ಪಿ ಎಂಬ ಭೂತ ಟಿ.ವಿಯನ್ನು ಆಳುತ್ತಿರುವ ಕಾಲ. ಇಲ್ಲೂ ಅದೇ ಟೆಕ್ನಿಕ್; ಮನುಷ್ಯನ ಮೂಲಭೂತ ಕಾಮನೆಗಳನ್ನು ತಣಿಸುವುದು. ಮನುಷ್ಯ ಮೂಲತಃ ಕ್ರೂರಿ. ಆತ ಹಿಂಸ್ರಾ ಪಶು. ಆತನಲ್ಲಿರುವ ಆಕ್ರಮಣಶೀಲತೆ ಸೂಕ್ತ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿರುತ್ತದೆ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಟಿ.ವಿ ಧಾರಾವಾಹಿಗಳನ್ನೇ ನೋಡಿ; ಟಿ,ಅರ್.ಪಿ ಗ್ರಾಪ್ ಉರ್ಧ್ವಮುಖಿಯಾಗಿ ಸಾಗಿದ್ದು, ಸಾಗುತ್ತಿರುವುದು; ಸಚ್ ಕಾ ಸಾಮ್ನ್, ಇಮೋಷನಲ್ ಅತ್ಯಾಚಾರ್, ಕನ್ನಡದ ಹಳ್ಳಿಹೈದ ಪ್ಯಾಟೆಗೆ ಬಂದ...ಮುಂತಾದ ಭಾವಕೋಶವನ್ನು ಕಲುಷಿತಗೊಳಿಸುವ ದಾರಾವಾಹಿಗಳಿಗೆ ಮಾತ್ರ. ಇದರ ಜೊತೆಗೆ ಕೃತ್ರಿಮತೆಯನ್ನೇ ಢಾಳಾಗಿ ತೋರಿಸುವ ಸ್ವಯಂವರದ ಧಾರಾವಾಹಿಗಳು, ಖಾಸಗಿ ಬದುಕನ್ನು ನಾಟಕಿಯವಾಗಿ ರಂಗದ ಮೇಲೆ ತಂದು ಸಾರ್ವಜನಿಕರ ಬಾಯಿಗೆ ಎಲೆಯಡಿಕೆಯಾಗಿಸುವ ಕಥೆಯಲ್ಲ ಜೀವನಗಳು; ಬದುಕು ಜಟಕಾ ಬಂಡಿಗಳು. ಸಾವಿನಾಚೆಗೆ ಏನಿದೆ ಎಂಬ ಮನುಷ್ಯನ ಅನಾದಿ ಕಾಲದ ಜಿಜ್ನಾಸೆಯನ್ನು, ಸಹಜ ಕುತೂಹಲವನ್ನು ಮಾರುಕಟ್ಟೆಯ ಮೌಲ್ಯಗಳಿಗೆ ಬಾಗಿಸುತ್ತಿರುವ ಜನ್ಮಾಂತರಗಳು, ಹೀಗೇ ಉಂಟುಗಳು..!

ಟಿ.ಅರ್.ಪಿ ಗ್ರಾಪ್ ಮೇಲೆರಿದಂತೆಲ್ಲಾ ಚಾನಲ್ ಗಳಿಗೆ ಅಡ್ ರೆವಿನ್ಯು ಜಾಸ್ತಿಯಾಗುತ್ತದೆ. ಟಿ.ಅರ್.ಪಿ ಅಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್. ಇದು ಜನಪ್ರಿಯ ಟಿ.ವಿ ಪ್ರೋಗ್ರಾಮ್ ಗಳ ಪಟ್ಟಿಯನ್ನು ಕೊಡುತ್ತದೆ. ಕನ್ನಡದಲ್ಲಿ ಪ್ರತಿ ಬುದವಾರದಂದು ಈ ಪಟ್ಟಿ ಬಿಡುಗಡೆಯಾಗುತ್ತದೆ. ಹಾಗಾಗಿ ವಾರಕೊಮ್ಮೆ ಟಿ.ವಿ ನಿರ್ಮಾಪಕರ ಎದೆಬಡಿತ ಏರುಪೇರಾಗುತ್ತದೆ!. ಯಾಕೆಂದರೆ ರೇಟಿಂಗ್ ಇಲ್ಲ ಎಂಬ ಕಾರಣದಿಂದಾಗೆ ಹಲವು ಸದಭಿರುಚಿಯ ಕಾರ್ಯಕ್ರಮಗಳು ವೈಂಡ್ ಅಫ್ ಆದ ಉದಾಹರಣೆ ಟಿ.ವಿ ಇತಿಹಾಸಕ್ಕಿದೆ.

ಟಿ.ಅರ್.ಪಿಯನ್ನು ಯಾರು ನಿರ್ಧರಿಸುತ್ತಾರೆ? ವಿಕ್ಷಕರು. ಆದರೆ ಎಲ್ಲಾ ವಿಕ್ಷಕರಲ್ಲ. ಆಯ್ದ ವೀಕ್ಷಕರು. ಅದರ ನಿರ್ವಹಣೆಯನ್ನು ಏಜನ್ಸಿಯೊಂದು ಮಾಡುತ್ತದೆ. ಅವರು ಆಯ್ದ ಕೆಲವರ ಮನೆಗಳಲ್ಲಿ ’ಪೀಪಲ್ಸ್ ಮೀಟರ್’ ಎಂಬ ಉಪಕರಣವೊಂದನ್ನು ಅಳವಡಿಸುತ್ತಾರೆ. ಆ ಮನೆಯವರು ಯಾವ ಚಾನಲ್, ಯಾವ ಪ್ರೋಗ್ರಾಮನ್ನು ಎಷ್ಟೊತ್ತು ನೋಡುತ್ತಾರೆ ಎಂಬುದರ ಮೇಲೆ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಏಜನ್ಸಿ ಸಂಯೋಜಿಸುತ್ತದೆ. ಅದೇ ಟಿ.ಅರ್.ಪಿ. ಆದರೆ ಅದರ ನಿಖರತೆಯ ಬಗ್ಗೆಯೇ ಈಗೀಗ ಸಂಶಯ ವ್ಯಕ್ತವಾಗುತ್ತಿದೆ.

ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಒಟ್ಟು ೮ ಟಿ.ಅರ್.ಪಿ ಸೆಂಟರ್ ಗಳಿವೆ.ಅದನ್ನು ಟಿ.ವಿ ಭಾಷೆಯಲ್ಲಿ ಅರ್.ಒ.ಕೆ ಎಂದು ಕರೆಯುತ್ತಾರೆ. ಅಂದರೆ ರೆಸ್ಟ್ ಅಫ್ ಕರ್ನಾಟಕ. ಅವು ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳಿ, ಗದಗ, ಬೆಳಗಾವಿ, ಗುಲ್ಬರ್ಗಾ ಮತ್ತು ರಾಯಚೂರು. ಜಾಹಿರಾತುದಾರರು ಈ ಸೆಂಟರ್ ಗಳಿಗಿಂತಲೂ ಬೆಂಗಳೂರಿಗೇ ಹೆಚ್ಚು ಗಮನ ಕೊಡುತ್ತಾರೆ. ಯಾಕೆಂದರೆ ಬೆಂಗಳೂರಲ್ಲಿ ಹೆಚ್ಚು ದುಡ್ಡು ಓಡಾಡುತ್ತದೆ. ಇಲ್ಲಿಯ ಜನರ ಖರೀದಿ ಶಕ್ತಿ ಜಾಸ್ತಿ ಎಂಬುದು ಅವರ ತರ್ಕ. ಹಾಗಾಗಿ ಈ ನಗರವೊಂದರಲ್ಲೇ ಸುಮಾರು ೧೮೦ ಮನೆಗಳಲ್ಲಿ ಟಿ.ಅರ್.ಪಿ ಮಾಪನವಾದ ’ಪೀಪಲ್ಸ್ ಮೀಟರ್’ ಗಳನ್ನು ಅಳವಡಿಸಲಾಗಿದೆ.

ಇದರರ್ಥ ಇಷ್ಟೆ; ಟಿ.ವಿ ಮಾಧ್ಯಮದವರ ಲೆಕ್ಕಾಚಾರದಲ್ಲಿ ಗ್ರಾಮಾಂತರ ಪ್ರದೇಶದ, ಬಹುಸಂಖ್ಯಾತ ಜನರು ಟಿ.ವಿ ವೀಕ್ಷಕರೇ ಅಲ್ಲ. ಅಡ್ ರೆವಿನ್ಯೂ ತರುವ ಟಿ.ಅರ್.ಪಿ ಸೆಂಟರ್ ನ ಜನರಿಗಾಗಿ ಅವರು ಕಾರ್ಯಕ್ರಮವನ್ನು ತಯಾರಿಸಬೇಕು. ಅಂದರೆ ಆಧುನಿಕ ಮನೋಭಾವದ, ಉಳ್ಳವರ ಮನೋರಂಜನೆಗಾಗಿ ಕಾರ್ಯಕ್ರಮ ಹಣೆಯಬೇಕು. ನಿಜಕ್ಕೂ ಅದೊಂದು ಸವಾಲು. ಸಾಹಸ, ಹಾಸ್ಯ ಮತ್ತು ಭಾವುಕತೆಯ ಹದವಾದ ಮಿಶ್ರಣದ ಕಾರ್ಯಕ್ರಮಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರ ತಯಾರಿಕೆಗೆ ಶ್ರಮ ಮತ್ತು ಪ್ರತಿಭೆ ಬೇಕು. ಮುಖ್ಯವಾಗಿ ಹೃದಯವಂತಿಕೆ ಬೇಕು. ಅದಿಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಪ್ರಸಾರವಾಗುತ್ತಿರುವ ’ಹಳ್ಳಿಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋ ಉತ್ತಮ ಉದಾಹರಣೆ.
ಇಲ್ಲಿ ಎಲ್ಲವೂ ಇದೆ. ಆದರೆ ಹೃದಯವಂತಿಕೆ ಇಲ್ಲ. ಹಳ್ಳಿಯ ಎಳೆಂಟು ಹುಡುಗರನ್ನು ಪೇಟೆಗೆ ತಂದು ಹಾಕಿದ್ದಾರೆ. ಅವರಿಗೆ ನಾಗರಿಕೆ ನಡವಳಿಕೆಗಳನ್ನು[!] ಕಲಿಸಲು ಒಬ್ಬೊಬ್ಬ ಹುಡುಗಿಯರನ್ನು ನೇಮಿಸಲಾಗಿದೆ. ಅವರ ವೇಷ ಭೂಷಣಗಳನ್ನು ನೋಡಿಯೇ ಪಾಪ ಆಹುಡುಗರು ದಂಗಾಗಿರಬೇಕು! ಅಮೇಲೆ ಶುರು ನೋಡಿ, ಅವರಿಗೆ ನಾಗರಿಕ ನಡತೆಯನ್ನು ಕಲಿಸುವ ಪಾಠಗಳು; ಮಾಲ್ ಗಳಲ್ಲಿ ಬಿಕ್ಷೆ ಬೇಡುವುದು, ಬ್ರಿಗೇಡ್ ರೋಡ್ ನಲ್ಲಿ ಹುಡುಗಿಯರ ಮೊಬೈಲ್ ನಂಬರ್ ಗಳನ್ನು ಕಲೆಕ್ಟ್ ಮಾಡುವುದು, ಇಂಗ್ಲೀಷ್ ಕಲಿಯುವುದು, ಯಾರ್ಯರನ್ನೊ ಕಾಡಿ ಬೇಡಿ ಮೆಜೆಸ್ಟಿಕ್ ತಲುಪುವುದು, ಹುಡುಗಿಯರನ್ನು ಹೊತ್ತುಕೊಂಡು ಕೆಸರಿನಲ್ಲಿ ಓಡುವುದು. ಇದೆಲ್ಲಕಿಂತಲೂ ಬೀಬತ್ಸಕರವಾದ ಇನ್ನೊಂದು ಟಾಸ್ಕ್ ಇತ್ತು, ಅತೀ ಹೆಚ್ಚು ಯಾರು ತಿನ್ನುತ್ತಾರೆ, ಕುಡಿಯುತ್ತಾರೆ ಅಂತ. ಅದರಲ್ಲಿ ಸ್ಪರ್ಧಿಗಳಿಗೆ ಗೊತ್ತಿಲ್ಲದಂತೆ ಭೇದಿ ಮಾತ್ರೆ ಹಾಕಿರ್ತಾರೆ. ಆದರೆ ಟಾಯ್ಲೆಟ್ಗೆ ಹೋದ್ರೆ ಸ್ಪರ್ಧೆಯಿಂದ ಹೊರ ಹೋಗಬೇಕಾಗುತ್ತಾದೆ. ದೇಹ ಭಾದೆಯನ್ನು ತಡೆದುಕೊಂಡು ಅವರು ಒದ್ದಾಡುವುದು ನೋಡುವಾಗ ಇದು ಅಮಾನವೀಯ ಅನ್ನಿಸಿಬಿಡುತ್ತಾದೆ. ಇನ್ನು ಆ ಹಳ್ಳಿ ಹುಡುಗರ ಜೋತೆ ಪೇಟೆ ಹುಡುಗಿಯರನ್ನು ರೆಸ್ಲಿಂಗ್ [ಕುಸ್ತಿ] ಆಡಿಸುವುದು ಖಂಡಿತವಾಗಿಯೂ ಆರೋಗ್ಯಕರ ಟಾಸ್ಕ್ ಅನ್ನಿಸುವುದಿಲ್ಲ. ಯಾವ ಮನಸ್ಥಿತಿಯಿಂದ ಅವರು ಪ್ಯಾಟೆಗೆ ಬಂದರೋ ಅದೇ ಮನಸ್ಥಿತಿಯೊಂದಿಗೆ ಅವರು ಹಳ್ಳಿಗೆ ಮರಳಲು ಸಾಧ್ಯವೇ? ಅವರ ಮುಗ್ಧತೆಯನ್ನು ನಾಶ ಮಾಡಿದ ಶಾಪ ಯಾರನ್ನು ತಟ್ಟುತ್ತದೆ?

ಇದೇ ಚಾನಲಿನ ’ಪ್ಯಾಟೆ ಹುಡ್ಗೀರ ಹಳ್ಳಿ ಲೈಪ್’ ಇದಕ್ಕೆ ಹೋಲಿಸಿದರೆ ಚೆನ್ನಾಗಿತ್ತು, ಯಾಕೆಂದರೆ ಹಳ್ಳಿಯಲ್ಲಿ ಮುಕ್ತವಾದ ವಾತಾವರಣವಿರುತ್ತದೆ. ಅವರಲ್ಲಿ ಇನ್ನೂ ಅಂತಃಕರಣ ಉಳಿದಿರುತ್ತದೆ. ಹೊರಗಿನಿಂದ ಬಂದವರನ್ನು ಕೂಡ ಅವರು ಕ್ರಮೇಣ ತಮ್ಮವರೆಂದು ಒಪ್ಪಿಕೊಂಡುಬಿಡುತ್ತಾರೆ. ನಗರದ ಜನತೆಯದು ಕವರ್ಡ್ ಮನಸ್ಥಿತಿ, ಅವರು ಯಾರನ್ನು ನಂಬಲಾರರು. ಹಳ್ಳಿ ಹುಡುಗರಿಗೆ ಮೊಬೈಲ್ ನಂಬರ್ ಕಲೆಕ್ಟ್ ಮಾಡುವುದು, ಲಿಪ್ಟ್ ಪಡೆಯುವುದು ಹಾಗಾಗಿಯೇ ತುಂಬಾ ಕಷ್ಟವಾಗಿದ್ದು. ನಾಗರಿಕ ಜನರ ಕೈಯಲ್ಲಿ ಸಿಕ್ಕು ಅವರು ಪಡುವ ಪರಿಪಾಟಲು ಕಂಡಾಗ ೨೦ ವರ್ಷಗಳ ಹಿಂದೆ ಹಳ್ಳಿಯಿಂದ ನೇರವಾಗಿ ಬೆಂಗಳೂರೆಂಬ ಮಾಯಾಂಗನೆಯ ತೆಕ್ಕೆಗೆ ಬಂದು ಬಿದ್ದ ನನ್ನದೇ ಅನುಭವ ಮರುಕಳಿಸಿದಂತಾಯಿತು. ರಾಜೇಶನೆಂಬ ಹಳ್ಳಿ ಹುಡುಗನಲ್ಲಿ ನನ್ನನ್ನು ನಾನು ಕಂಡುಕೊಂಡೆ.

ಇನ್ನು, ನಿರೂಪಕ ಅಕುಲ್ ಬಾಲಾಜಿಯ ಇಂಗೀಷ್ ಶೈಲಿಯ ಕನ್ನಡ ಉಚ್ಛಾರಣೆ ಮತ್ತು ಅವರು ಹುಡುಗಿಯರನ್ನು ಬಹುವಚನದಲ್ಲೂ ಹುಡುಗರನ್ನು ಏಕವಚನದಲ್ಲೂ ಸಂಬೋಧಿಸುವುದು. ಹುಡಿಗಿಯರಿಗೆ ಗಂಭೀರವಾಗಿ ಬಯ್ಯುವುದು,ಹುಡುಗರಿಗೆ ಅದನ್ನೇ ಗೇಲಿ ಮಾಡುತ್ತಾ ಎಚ್ಚರಿಸುವುದು ಅವರು ನಗರ ಪಕ್ಷಪಾತಿ ಎಂಬುದನ್ನು ತೋರಿಸುತ್ತದೆ. ಇನ್ನು ಸ್ಕ್ರಿಪ್ಟ್ ಮತ್ತು ವಾಯ್ಸ್ ಒವರ್ ವೈನೋದಿಕ ಹಿಂಸೆಗೆ ಅತ್ಯುತ್ತಮ ಉದಾಹರಣೆ. ಅವಕಾಶ ಸಿಕ್ಕಾಗಲೆಲ್ಲಾ ಇಡೀ ಗ್ರಾಮೀಣ ಜನತೆಯನ್ನು, ಅವರ ನಂಬಿಕೆಗಳನ್ನು ಮತ್ತು ಅವರ ಕಪ್ಪು ವರ್ಣವನ್ನು ಲೇವಡಿ ಮಾಡಲಾಗಿದೆ. ಇದಲ್ಲದೆ ಆ ಹುಡುಗರ ಬಾಯಲ್ಲಿ ಪ್ರೀತಿ, ಪ್ರೇಮ, ಮುತ್ತು ಎಂಬ ಮಾತುಗಳನ್ನೆಲ್ಲಾ ಆಡಿಸಿ ಕಾಮನೆಗಳನ್ನು ಕೆರಳಿಸುವ ಪ್ರಯತ್ನವೂ ನಡೆಯುತ್ತಿದೆ.

ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು; ಅಲ್ಲಿ ’ಡಿವೈಡ್ ಅಂಡ್ ರೂಲ್’ ಅಂದರೆ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತದೆಯೆಂದು. ಸ್ಪರ್ಧಿಗಳಲ್ಲೇ ಪೈಪೋಟಿಯನ್ನು ಹುಟ್ಟು ಹಾಕಿ ಪರಸ್ಪರ ಅಪನಂಬಿಕೆಯನ್ನು ಸೃಷ್ಟಿಸುವುದು. ಪ್ರತಿಯೊಬ್ಬರಿಗೂ ಗೆಲ್ಲುವ ತವಕ. ಹಳ್ಳಿಹೈದ....ದಲ್ಲಿ ಪ್ಯಾಟೆ ಸುಂದರಿಯರಿಗೆ ಮಾತ್ರ ಗೆಲ್ಲುವ ತವಕ .ಹೈದರಿಗೆ ಇಲ್ಲಿಂದ ತಪ್ಪಿಸಿಕೊಂಡು ಊರಿಗೆ ಓಡುವ ತುಡಿತ. ಬಹುಶಃ ಕಾರ್ಯಕ್ರಮದ ನಿಬಂಧನೆಗಳು ಮತ್ತು ಆಕರ್ಷಣೆಗಳು ಅವರನ್ನು ’ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ’ ಎಂದು ಕಟ್ಟಿ ಹಾಕಿರಬಹುದು.

ಹಳ್ಳಿ ಜನರ ಬಡತನ, ಅಸಹಾಯಕತೆ ಮತ್ತು ಮುಗ್ಧತೆ ಟಿ.ವಿಯಲ್ಲಿ ಮಾರಾಟದ ಸರಕಾಗುತ್ತಿದೆ. ಅದ್ದೂರಿಯ ಬಂಗಲೆಗಳಲ್ಲಿ ಕುಳಿತು, ಕುರುಕುಲು ತಿಂಡಿ ತಿನ್ನುತ್ತಾ ನಗರಗಳ ಸುಶಿಕ್ಷಿತ ಜನರು ಇದನ್ನು ಎಂಜಾಯ್ ಮಡುತ್ತಾರೆ! ಹಾಗೆಂದು ಅವರನ್ನು ಹೃದಯಹೀನರೆಂದು, ಗ್ರಾಮೀಣ ಜನರನ್ನು ಉಪೇಕ್ಷೆಸುವರೆಂದು ಅನ್ನುವ ಹಾಗಿಲ್ಲ. ಯಾಕೆಂದರೆ ಕಳೆದ ಬಾರಿ ಉತ್ತರ ಕರ್ನಾಟಕದ ಜನತೆ ನೆರೆ ಹಾವಳಿಯಿಂದ ಬದುಕು ಕಳೆದುಕೊಂಡಾಗ ಮುಖ್ಯಮಂತ್ರಿಗಳ ಜೋಳಿಗೆಗೆ ಕೋಟ್ಯಾಂತರ ರೂಪಾಯಿಗಳನ್ನು ಹಾಕಿದವರು ಇದೇ ಪೇಟೆ ಜನರು.

ಇದೇ ನಗರದ ಸೆಲೆಬ್ರಿಟಿಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದ ಹಳ್ಳಿ ಜನರೆದುರು ಅವರ ಖಾಸಗಿ ಬದುಕನ್ನು ತೆರೆದಿಟ್ಟು ಮಾದರಿಗಳನ್ನು ಒಡೆಯುವ ಪ್ರಯತ್ನವೂ ಕಿರು ತೆರೆಯಲ್ಲಿ ನಿರಂತರ ನಡೆಯುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೆಂಬುದು ದೃಶ್ಯ ಮಾಧ್ಯಮದ ನಿಘಂಟಿನಲ್ಲಿಲ್ಲದ ಪದ. ಇದೇ ಚಾನಲ್ ನವರು ಹಿಂದೆ ಸ್ವಯಂವರ ರಿಯಾಲಿಟಿ ಶೋ ಒಂದು ಮಾಡಿದ್ದರು. ಅದರಲ್ಲಿ ಭಾಗವಹಿಸಲು ವಧುಗಳು ಮುಂದೆ ಬರದಾದಾಗ ಕಿರುತೆರೆ ನಟಿಯರನ್ನೇ ಬಾಡಿಗೆ ವಧುಗಳಾಗಿ ತಂದು ವಿವಾಹಕಾಂಕ್ಷಿಗಳನ್ನು ಬೆಚ್ಚಿ ಬೀಳಿಸಿದ ಇತಿಹಾಸವೂ ಇದಕ್ಕಿದೆ.

ನಾನು ಇದನ್ನು ಬರೆಯುವ ಹೊತ್ತಿಗಾಗಲೇ ಪುತ್ತೂರಿನ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮಾಧವ ಭಾವಿಕಟ್ಟೆಯವರು ’ ಹಳ್ಳಿ ಹೈದ ಪ್ಯಾಟೆಗೆ ಬಂದ’ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನಗೊಂಡು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆಗಳನ್ನು ಮಾಡಿಕೊಳ್ಳೊತ್ತಿದ್ದಾರೆ. ಹಳ್ಳಿ ಜನರನ್ನು ಸ್ನಾನ ಮಾಡದವರು, ತಲೆ ಬಾಚಿಕೊಳ್ಳದವರು, ಕಾಡುಜನರಂತೆ ಬದುಕುತ್ತಾರೆ ಎಂಬಂತೆ ಚಿತ್ರಿಸಲಾಗಿದೆ; ಗ್ರಾಮೀಣ ಜನರನ್ನು ಅವಮಾನಿಸಲಾಗಿದೆ ಎಂಬುದು ಅವರ ಆರೋಪ. ನಾನು ಮಾತಾಡಿಸಿದ ಬಹುತೇಕ ಜನರ ಅಭಿಪ್ರಾಯವೂ ಇದೇ ಆಗಿದೆ.


’ಹಳ್ಳಿ ಹೈದ ಪ್ಯಾಟೆಗೆ ಬಂದ’ ಎಂಬ ರಿಯಾಲಿಟಿ ಶೋದ ಕೆಲವು ಎಪಿಸೋಡುಗಳನ್ನು ನೋಡಿದೆ. ಅದು ನನಗೆ ಇಷ್ಟನ್ನೆಲಾ ಬರೆಯಲು ಪ್ರಚೋದಿಸಿತು. ಅದಕ್ಕಾಗಿ ಆ ಶೋ ದ ಕ್ರಿಯೇಟಿವ್ ಹೆಡ್ ಗೆ ನನ್ನ ಕೃತಜ್ನತೆಗಳು!

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]

8 comments:

sunaath said...

ಅಮೆರಿಕದ ನಕಲು ಮಾಡುತ್ತಿರುವ ಇಂತಹ ಮೂರ್ಖ ಪ್ರದರ್ಶನಗಳನ್ನು ಸರಕಾರವು ಪ್ರತಿಬಂಧಿಸಬೇಕು.

ಮೌನೇಶ ವಿಶ್ವಕರ್ಮ said...

ಹೌದು ಮೇಡಂ.. ರಿಯಾಲಿಟಿ ಶೋ ನ ಎಲ್ಲಾ ವಂಚನೆಗಳನ್ನು ನಿಮ್ಮ ಲೇಖನದಲ್ಲಿ ತೆರೆದಿಟಿದ್ದೀರಿ. baraha chennagide...

EDITOR said...

If you chase TRPs, you never get it; if you chase credible content, you get the ratings and that is how it should be..

Srikanth Manjunath said...

ಒಳ್ಳೆಯ ಲೇಖನ..ಕಣ್ಣು ತೆರೆಸುವಂತದ್ದು...ಪ್ರತಿಯೊಂದಕ್ಕೂ ತನ್ನದೇ ಆದ ಸ್ಥಳ, ವಾತಾವರಣ ಇರುತ್ತದೆ...ಹಿಮಗಡ್ಡೆ ನೀರಲ್ಲಿದ್ದರೆ ಚೆನ್ನ...ಬಿಸಿ ಬೆಂಕಿಯಲಿದ್ದರೆ ಚೆನ್ನ..ಎರಡು ಅದಲಿ ಬದಲಿ ಆದ್ರೆ ಶುರುವಾಗುತ್ತೆ ತರಲೆಗಳು..ಇದನ್ನೇ ಈ ರಿಯಾಲಿಟಿ ಶೋಗಳು ಮಾಡುತ್ತಿರುವುದು...ನಿಜಕ್ಕೂ ಹೀನಾಯ...

ಗೆಳತಿ said...

ಉತ್ತಮ ಲೇಖನ್ ಮೇಡಂ........ ರಿಯಾಲಿಟಿ ಷೋ ಗಳ ಹಿಂದೆ ಅಡಕವಾಗಿರುವ ಅಮಾನವೀಯ ನಡವಳಿಕೆಗಳನ್ನು ಚೆನ್ನಾಗಿ ತಿಳಿಸಿದ್ದಿರಿ....

Ittigecement said...

ಪೇಟೆಯನ್ನೇ ನೋಡದ ಹಳ್ಳಿ ಮುಗ್ಧ ಹುಡುಗ
ತನ್ನ ಆರಾಧ್ಯ ದೈವ ಸಿನೇಮಾ ನಟರನ್ನು ನೋಡುತ್ತಾನೆ...
ವೈಭವದ ಹೊಟೆಲ್ಲುಗಳಲ್ಲಿ ಊಟ ಮಾಡುತ್ತಾನೆ...
ಸಿನೇಮಾದಲ್ಲೂ ನಟಿಸುತ್ತಾನೆ...

ಹತ್ತು ಲಕ್ಷ ಹಣವೂ ಸಿಗುತ್ತದೆ...
ಆ ಹಣ ಎಷ್ಟು ದಿನ ಇರಬಲ್ಲದು?

ಮುಂದೆ ಬದುಕಿಗೆ? ಊಟಕ್ಕೆ ಏನು ಮಾಡಬೇಕು...?

ಮತ್ತೆ ಹಳ್ಳಿಗೆ ಹೋಗಿ ಕೆಲಸ ಮಾಡುವ ಸಂದರ್ಭ.....

ಪೇಟೆಯ ಥಳುಕು...ಬೆಡಗು ನೋಡಿದ ಮನಸ್ಸು ಎಷ್ಟು ತೊಳಲಾಡಿರಬಹುದು...?

ನನ್ನ ಪರಿಚಯದವರೊಬ್ಬರ ಮಗು ಒಂದು ರಿಯಾಲಿಟಿ ಷೋಕ್ಕೆ ಬಂದಿತ್ತು...
ಬಹುಮಾನವನ್ನೂ ಗೆದ್ದಿತ್ತು...

ಪತ್ರಿಕೆಗಳಲ್ಲಿ...
ಟಿವಿಗಳಲ್ಲಿ ಬಂದ ಆ ಮಗು ಈಗ ಹೇಗಿದೆ ಗೊತ್ತಾ?

ಮೇಲೆ ಏರಿ ಕುಳಿತ ಆ ಮಗು ಕೆಳಕ್ಕೆ ಇಳಿತಾನೆ ಇಲ್ಲ...
ತನ್ನ ಅಕ್ಕಪಕ್ಕದ ಮಕ್ಕಳೊಡನೆ ಆಡಲೂ ಹೋಗುತ್ತಿಲ್ಲ...!

ತಾನು ಸಿಲೆಬ್ರಿಟಿ... ಎನ್ನುವ ಭಾವ...
ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ರಿಯಾಲಿಟಿ ಷೋಗಳು ಇದಕ್ಕೆ ಹೊಣೆಯೇ...?
ಎಲ್ಲಿ ತಪ್ಪಾಗುತ್ತಿದೆ,,...?...

VEENA said...

ನಾನು ಹಳ್ಳಿಹೈದ.... ಎಂದೂ ನೋಡಿಲ್ಲ. ಇಷ್ಟೆಲ್ಲಾ ಕ್ರೌರ್ಯ ನಡೀತಾ ಇದೆಎಂದು ತಿಳಿದಾಗ ತುಂಬಾ ಬೇಜಾರ್ ಆಯ್ತು .. :(

VEENA said...

ನಾನು ಹಳ್ಳಿಹೈದ.... ಎಂದೂ ನೋಡಿಲ್ಲ. ಇಷ್ಟೆಲ್ಲಾ ಕ್ರೌರ್ಯ ನಡೀತಾ ಇದೆಎಂದು ತಿಳಿದಾಗ ತುಂಬಾ ಬೇಜಾರ್ ಆಯ್ತು .. :(