Wednesday, December 3, 2014

ಉರ್ದುಇರಲಿ, ಕನ್ನಡ ಮೆರೆಯಲಿ.




ಇದು ನವೆಂಬರ್ ತಿಂಗಳು ಹಾಗಾಗಿ ಕನ್ನಡದ ಬಗ್ಗೆ ಸ್ವಲ್ಪ ಮಾತಾಡೋಣ..ಅದರಲ್ಲಿಯೂ ನಮ್ಮ ಮುಸ್ಲಿಂರು ಮುಖಂಡರು ಪ್ರಾದೇಶಿಕ ಭಾಷೆಯ ಮಹತ್ವವನ್ನು ಹೇಗೆ ಗ್ರಹಿಸಿದ್ದಾರೆ ಎಂಬುದರತ್ತ ಒಂಚೂರು ಗಮನ ಹರಿಸೋಣ.

ಇದೇ ವರ್ಷ ಜುಲೈ ತಿಂಗಳಿನಲ್ಲಿ ನಮ್ಮ ರಾಜ್ಯದ ಮುಸ್ಲಿಂ ಶಾಸಕರ ನಿಯೋಗವೊಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರನ್ನು ಬೇಟಿ ಮಾಡಿ ಮನವಿಯೊಂದನ್ನು ಅರ್ಪಿಸಿತ್ತು.ಆ ಮನವಿಯಲ್ಲಿ ರಾಜ್ಯದಲ್ಲಿರುವ ಉರ್ದು ಶಾಲೆಗಳನ್ನು ಕನ್ನಡ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಬೇಕೆಂಬ ಬೇಡಿಕೆಯಿತ್ತು. ಈ ಮನವಿಯಲ್ಲಿ ಅವರು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಬೇಕಾದರೆ ಪ್ರಾದೇಶಿಕ ಭಾಷೆಯನ್ನು ಕಲಿಯುವುದು ಎಷ್ಟು ಅವಶ್ಯಕವೆಂಬುದನ್ನು ಒತ್ತಿ ಹೇಳಿದ್ದರು.

ಮಾತೃ ಭಾಷೆ ಮತ್ತು ಪ್ರಾದೇಶಿಕ ಭಾಷೆ ಬೇರೆ ಬೇರೆಯಾಗಿದ್ದಾಗ ಮಗುವೊಂದು ತನ್ನ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆದುಕೊಂಡು ಮುಂದೆ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ಮುಂದುವರಿಸುವುದು ಅದರ ಸರ್ವಾಂಗೀಣ ಅಭ್ಯುದಯದ ದೃಷ್ಟಿಯಿಂದ ಮುಖ್ಯವಾದುದು. ಯಾಕೆಂದರೆ ಒಬ್ಬ ವ್ಯಕ್ತಿ ಕೌಟುಂಭಿಕ ಪರಿಸರದಲ್ಲಿ ಎದುರಿಸುವ ಸಮಸ್ಯೆಗಳೇ ಬೇರೆ,ಸಮಾಜಿಕ ಪರಿಸರದಲ್ಲಿ ಎದುರಿಸುವ ಸಮಸ್ಯೆಗಳೇ ಬೇರೆ. ತನ್ನ ಭಾಷೆಯ ಕಾರಣದಿಂದಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿಯಬೇಕಾದ ಸಂದರ್ಭವೊಂದು ಉಂಟಾದರೆ ಅದು ನಿಜಕ್ಕೂ ಶೋಚನಿಯವಾದುದು. ಉರ್ದು ಭಾಷೆಯನ್ನು ಮಾತ್ರ ಕಲಿಯುವ, ಮಾತಾಡುವ ಮುಸ್ಲಿಂರ ಸಧ್ಯದ ಸ್ಥಿತಿಯೂ ಹಾಗೆಯೇ ಇದೆ.


ಈಗ ನಮ್ಮ ಕರ್ನಾಟಕದಲ್ಲಿರುವ ಮುಸ್ಲಿಂರತ್ತ ಗಮನ ಹರಿಸೋಣ. ಕರಾವಳಿ ಜಿಲ್ಲೆಗಳಲ್ಲಿ ಬ್ಯಾರಿ ಮತ್ತು ನವಾಯತ್ ಭಾಷೆಗಳನ್ನು ಬಿಟ್ಟರೆ ಉಳಿದೆಡೆಗಳಲ್ಲಿ ಅವರು ಮಾತಾಡುವುದು ಉರ್ದು ಭಾಷೆಯನ್ನು. ಹೆಚ್ಚಿನ ಮುಸ್ಲಿಮ್ ಮಕ್ಕಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮದರಾಸಗಳಲ್ಲಿ ಪಡೆಯುತ್ತಾರೆ.

ರಾಜ್ಯದಲ್ಲಿ ಉರ್ದು ಮಾಧ್ಯಮದ ೫೮೬೫ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು,೧೨೬ ಪ್ರೌಢಶಾಲೆಗಳು ಮತ್ತು ೨೩ ಪದವಿ ಕಾಲೇಜುಗಳಿವೆ. ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ. ೭೦ರಷ್ಟು ಮಕ್ಕಳು ಹೈಸ್ಕೂಲ್ ಮೆಟ್ಟಲು ಹತ್ತುವುದಿಲ್ಲ. ಈ ಮಕ್ಕಳಿಗೆ ಉರ್ದು ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಪ್ರಾದೇಶಿಕ ಭಾಷೆಯಾದ ಕನ್ನಡವನ್ನೂ ಸರಿಯಾಗಿ ಕಲಿತಿರುವುದಿಲ್ಲ. ಹಾಗಾಗಿ ಒಳ್ಳೆಯ ಉದ್ಯೋಗವೂ ದೊರೆಯುವುದಿಲ್ಲ. ಇಂತಹ ಶಾಲೆಗಳನ್ನು ಕನ್ನಡ ಅಥವಾ ಇಂಗ್ಲೀಷ್ ಭಾಷಾ ಮಾಧ್ಯಮ ಶಾಲೆಗಳಾಗಿ ಬದಲಾಯಿಸಬೇಕೆಂದು ಸರಕಾರದ ಮೇಲೆ ಒತ್ತಡವನ್ನು ತರಲಾಗುತ್ತಿದೆಯಾದರೂ ಸರಕಾರ ಈ ವಿಷಯದ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತಾಳಿದೆ. ಈ ಶಾಲೆಗಳಲ್ಲಿ ಖಾಲಿಯಿರುವ ಸುಮಾರು ಇಪ್ಪತ್ತು ಸಾವಿರದಷ್ಟು ಶಿಕ್ಷಕರನ್ನು ಭರ್ತಿ ಮಾಡುವ ಪ್ರಯತ್ನವನ್ನೂ ಮಾಡಿಲ್ಲ.

ತಲೆ ತಲಾಂತರದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೂ ಕನ್ನಡ ಮಾತಾಡದ ಅಲ್ಪಸಂಖ್ಯಾತರನ್ನು ನಾನು ನೋಡಿದ್ದೇನೆ. ಹೆಚ್ಚೇಕೆ ನಮ್ಮ ಪ್ರಖ್ಯಾತ ಕ್ರಿಕೇಟ್ ಪಟು ಕಿರ್ಮಾನಿ ಯಾವತ್ತದರೂ ಕನ್ನಡ ಮಾತಾಡಿದ್ದನ್ನು ಯಾರಾದ್ರೂ ಕಂಡಿದ್ದೀರಾ? ಬೆಂಗಳೂರಿನ ಲಾಲ್ ಬಾಗ್ ಎದುರುಗಡೆಯಿರುವ ಆಲ್ ಅಮೀನ್ ಕಾಲೇಜಿನಲ್ಲಿ ನಾನು ಪಾರ್ಟ್ ಟೈಂ ಲೆಕ್ಚರರ್ ಆಗಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ, ಮುಸ್ಲಿಮರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳಾಗಿಲ್ಲ.ಕಾಂಗ್ರೇಸಿನ ಹಿರಿಯ ಮುಖಂಡರಾಗಿದ್ದ ಅಜೀಜ್ ಸೇಠ್ ಅವರು  ಕನ್ನಡ ಕಲಿಕೆಯ ಮಹತ್ವವನ್ನು ಅರಿತಿದ್ದರು. ಹಾಗಾಗಿಯೇ ಅವರು 1962 ನೇ ಇಸವಿಯಲ್ಲೇ ಉರ್ದು ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಹೋರಾಟ ನಡೆಸಿದ್ದರು. ಐದು ದಶಕಗಳಿಂದ ಮುಸ್ಲಿಂ ಮುಖಂಡರು ಈ ಅಭಿಪ್ರಾಯಕ್ಕೆ ಬದ್ಧರಾಗಿಯೇ ಇದ್ದಾರೆ. ಅದರೆ ನಮ್ಮ ಆಳುವ ಸರಕಾರಗಳು ಘನ ಘೋರ ನಿದ್ದೆಯಲ್ಲಿವೆ. ಹೀಗಿರುವಾಗ ಸಮಾಜದ ಸರ್ವಾಂಗೀಣ ಅಭಿವೃದ್ಧಿಯೆಂಬುದು ಹೇಗೆ ಸಾಧ್ಯವಾಗುತ್ತದೆ. ದೇಹದಲ್ಲಿ ಒಂದು ಅಂಗ ಬಲಹೀನಗೊಂಡರೆ ಅದು ಒಟ್ಟು ವ್ಯಕ್ತಿತ್ವಕ್ಕಾಗುವ ಕುಂದಲ್ಲವೇ? ಇಂದು ಮುಸ್ಲಿಮರು ಮಾತಾಡುವ ಕನ್ನಡವೆಂದರೆ ಸಿನಿಮಾ, ಕಿರುತೆರೆ, ನಾಟಕಗಳಿಗೆ ತಮಾಶೆಯ ವಸ್ತುವಾಗಿದೆ.

ಸಂವಿಧಾನದ 30 ಬಿ ಕಲಂ ಪ್ರಕಾರ ನಿರ್ಧಿಷ್ಟ ಸಮುದಾಯಕ್ಕೆ ಭಾಷಾ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವಿದೆ. ಸಂವಿಧಾನ ಕೊಡ ಮಾಡಿರುವ ಈ ವಿಶೇಷ ಸವಲತ್ತನ್ನು ತಾವು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಿ ಎಂದು ಅವರಾಗಿಯೇ ಕೇಳಿಕೊಳ್ಳುತ್ತಿದ್ದರೂ ಅದನ್ನವರಿಗೆ ಕಲ್ಪಿಸಿಸಿಕೊಡುತ್ತಿಲ್ಲವೆಂದರೆ?! ಸರಕಾರ ಅಲ್ಪಸಂಖ್ಯಾತರ ವಿಚಾರದಲ್ಲಿ ಮಾತ್ರ ಅಲ್ಲ.ಪ್ರಾಥಮಿಕ ಶಿಕ್ಷಣವನ್ನೇ ಗಂಭೀರವಾಗಿ ಪರಿಗಣಿಸಿಲ್ಲ.ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮವಾಗಿಯೇ ನಗರಗಳಂತೆ ಪ್ರತಿ ಹಳ್ಳಿಯಲ್ಲಿಯೂ ನಾಯಿ ಕೊಡೆಗಳಂತೆ ಇಂಗ್ಲೀಷ್ ಮೀಡಿಯಂ ಶಾಲೆಗಳು ಹುಟ್ಟಿಕೊಳ್ಳುತ್ತಿವೆ.
ಪ್ರಾದೇಶಿಕ ಭಾಷೆಯನ್ನೇ ಯಾಕೆ ಕಲಿಯಬೇಕು? ಜಾಗತಿಕ ಭಾಷೆಯಾದ ಇಂಗ್ಲೀಷ್ ಕಲಿತರೆ ಸಾಕಲ್ಲವೇ ಎಂದು ವಾದಿಸುವವರು ಇದ್ದಾರೆ..ಶಾಲೆಗೆ ಸೇರಿದ ದಿನದಿಂದಲೇ ಇಂಗ್ಲೀಷ್ ಭಾಷೆಯನ್ನು ಮಾತ್ರ ಕಲಿತು ಪ್ರಾದೇಶಿಕ ಭಾಷೆಯತ್ತ ಕಣ್ಣೆತ್ತಿ ನೋಡದವರು ಕೂಡಾ ಇದ್ದಾರೆ.

ಇಲ್ಲಿ ನಾವು ಗಮನಿಸಬೇಕಾದ ವಿಷವೆನೇಂದರೆ.. ಮಾತೃ ಭಾಷೆ, ಪ್ರಾದೇಶಿಕ ಭಾಷೆ ಎರಡನ್ನೂ ಕಡೆಗಣಿಸಿ ಇಂಗ್ಲೀಷ್ ಭಾಷೆಯನ್ನು ಮಾತ್ರ ಅಪ್ಪಿಕೊಂಡ ವ್ಯಕ್ತಿಗಳು ಸೃಜನಶೀಲವಾಗಿ ಮಹತ್ತರವಾದುದನ್ನು ಯಾವುದನ್ನೂ ಸೃಷ್ಟಿಸಲು ಸಾಧ್ಯವಾಗಿಲ್ಲ ಎಂಬುದನ್ನು ಮನಗಾಣಬೇಕು. ನಮ್ಮ ದೇಶಕ್ಕೆ ಇಂಗ್ಲೀಷ್ ಭಾಷೆ ಅಡಿಯಿಟ್ಟು ಶತಮಾನಗಳೇ ಉರುಳಿದರೂ ಆ ಭಾಷೆಯಲ್ಲಿ ಅತ್ಯುತ್ತಮವೆನ್ನಬಹುದಾದ ಕೃತಿಗಳಾಗಲಿ, ಬರಹಗಾರರಾಗಲಿ ಗಮನಾರ್ಹ ಪ್ರಮಾಣದಲ್ಲಿ ರೂಪುಗೊಂಡಿಲ್ಲವೆನ್ನುವುದನ್ನು ನಾವು ಮರೆಯಬಾರದು...ಅದೇ ಪ್ರಾದೇಶಿಕ ಭಾಷೆಗಳತ್ತ ಗಮನ ಹರಿಸಿ..ಅಲ್ಲಿ ವಿಶ್ವ ಸಾಹಿತ್ಯದಲ್ಲಿ ನಿಲ್ಲಬಹುದಾದ ಅನೇಕ ಹೆಸರುಗಳು ನಮ್ಮ ಕಣ್ಮುಂದೆ ಬಂದು ಹೋಗುತ್ತವೆ. ಇಂಗ್ಲೀಷ್ ಭಾಷೆಯಲ್ಲಿ ವಿಧ್ಯಾಭ್ಯಾಸ ಪಡೆದವರು ಒಳ್ಳೆಯ ಉದ್ಯೋಗ ಪಡೆದಿರಬಹುದು, ಅಪಾರ ಪ್ರಮಾಣದಲ್ಲಿ ದುಡ್ಡು ದುಡಿರಬಹುದು.ಐಷಾರಾಮ ಬದುಕನ್ನೂ ಬದುಕುತ್ತಿರಬಹುದು. ಸಮಾಜದಲ್ಲಿ ಅಂತಸ್ತು, ಖ್ಯಾತಿ ಎಲ್ಲವನ್ನೂ ಪಡೆದಿರಬಹುದು. ಬದುಕು ಅಂದರೆ ಇಷ್ಟೆನಾ? ಇದರಾಚೆಯೂ ಇನ್ನೇನೋ ಇದೆಯಲ್ಲಾ..ಮನುಷ್ಯರಾಗುವುದಕ್ಕೆ ಇನ್ನೋನೋ ಬೇಕಾಗುತ್ತದೆಯಲ್ಲವೇ?

ಯಾವುದೇ ಭಾಷೆಯೊಂದರ ಪದಕಕೋಶಗಳನ್ನು ನೋಡಿ..ಅದು ಪರಿಸರದಿಂದ ಹುಟ್ಟಿರುತ್ತದೆ. ಅಲ್ಲಿಯ ನೆಲ, ಜಲ, ಮರ ಗಿಡ, ಪ್ರಾಣಿ ಪಕ್ಷಿ, ಕೆಲಸ ಬೊಗಸೆಯಿಂದ ಸೃಜಿಸಲ್ಪಟ್ಟಿರುತ್ತದೆ. ಇಂತಹ ಭಾಷೆಯನ್ನು ಕಡೆಗಣಿಸಲ್ಪಟ್ಟು ಅನ್ಯಭಾಷೆಯತ್ತ ನಾವು ಕೈ ಚಾಚಿದರೆ ನಾವು ಬೇರುಗಳನ್ನು ಕಳಚಿಕೊಂಡಂತೆಯೇ ಅಲ್ಲವೇ? ಒಂದು ಭಾಷೆಯನ್ನು ನಮ್ಮದಾಗಿಸಿಕೊಳ್ಳುವುದೆಂದರೆ ಆ ಸಂಸ್ಕೃತಿಯನ್ನು ನಮ್ಮದಾಗಿಸಿಕೊಂಡಂತೆ. ಯಾಕೆಂದರೆ ಭಾಷೆಯೆಂಬುದು ಒಂದು ಜನಜೀವನದ, ಬದುಕಿನ ಸಾಂಸ್ಕೃತಿಕ ಮೊತ್ತವಾಗಿರುತ್ತದೆ... ಅ ಕಾರಣದಿಂದಲೇ ಇಲ್ಲಿ ಒಬ್ಬ ಸಂತ ಶಿಶುನಾಳ ಶರೀಪ ಹುಟ್ಟಿಕೊಳ್ಳುತ್ತಾರೆ, ಕರಿಂಖಾನ್ ಜಾತಿ ಮತಗಳನ್ನು ಮೀರಿ ಜನಪ್ರಿಯರಾಗುತ್ತಾರೆ. ರಂಜಾನ್ ದರ್ಗಾ ಬಸವ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗುತ್ತಾರೆ.. ಹಾಗೆಯೇ ಮಾಧ್ಯಮಗಳಲ್ಲಿ, ಸಾಹಿತ್ಯ ಕ್ಷೇತ್ರಗಳಲ್ಲಿ ಹಲವಾರು ಜನ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈ ಮೂಲಕವೇ ಮುಸ್ಲಿಂ ಸಂವೇಧನೆಯ ಬಾಗಿಲುಗಳು ಸಮಾಜಕ್ಕೆ ತೆರೆದುಕೊಳ್ಳುತ್ತಿವೆ.. ಇವರ ಮುಖಾಂತರವೇ ಮುಸ್ಲಿಮೇತರರು ಆ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ನಿಸಾರ ಅಹಮ್ಮದ್, ಎಂ. ಅಕಬರ್ ಅಲಿ, ಬೊಳುವಾರು ಮಹಮದ್ ಕುಂಜ್ಞಿ, ಪಕೀರ್ ಮಹಮ್ಮದ್ ಕಟ್ಪಾಡಿ ಮುಂತಾದ ಲೇಖಕರು ಕನ್ನಡ ಭಾಷೆಯನ್ನು ತಮ್ಮದಾಗಿಸಿಕೊಂಡ ಕಾರಣದಿಂದಾಗಿಯೇ ಅವರು ಜಾತಿ, ಧರ್ಮಗಳನ್ನು ಮೀರಿ ಬೆಳೆದಿದ್ದಾರೆ. ಸಮಾಜದ ಸ್ವಾಸ್ಥ್ಯಕ್ಕೆ ಇಂತಹ ಮನಸ್ಸುಗಳ ಹೆಚ್ಚಳವಾಗಬೇಕಾಗಿದೆ.

ಮಹಿಳೆಯರು ಬರೆಯಲು ಆರಂಭಿಸಿದ ಮೇಲೆ ಮಹಿಳಾ ಸಂವೇಧನೆ ಏನು ಎಂಬುದು ಪುರುಷ ಜಗತ್ತಿಗೆ ಅರ್ಥವಾಗುತ್ತಿದೆ. ಹಾಗೆಯೇ ದಲಿತ ಸಂವೇಧನೆ, ಮುಸ್ಲಿಂ ಸಂವೇಧನೆ. ಬಹುಶಃ ಸಾರಾ ಅಬುಬೂಕ್ಕರ್, ಭಾನು ಮುಸ್ತಾಕ್, ಕೆ. ಶರೀಪಾರಂತಹ ಮಹಿಳೆಯರು ಬರೆಯಲು ಆರಂಭಿಸದಿದ್ದರೆ.”ಬುರ್ಕಾ’ದೊಳಗಿನ ತಳಮಳಗಳು ಹೊರಜಗತ್ತಿಗೆ ಅರ್ಥವಾಗುತ್ತಲೇ ಇರಲ್ಲಿಲ್ಲ..ಮುಸ್ಲಿಂ ಮಹಿಳೆಯರು ವಿದ್ಯಾವಂತರಾಗಿ ಹೆಚ್ಚೆಚ್ಚು ಹೊರಜಗತ್ತಿಗೆ ತೆರೆದುಕೊಳ್ಳಬೇಕೆಂಬುದು ನನ್ನ ವಯ್ಯಕ್ತಿಕ ಆಸೆ ಮತ್ತು ಹಂಬಲ ಕೂಡಾ.. ಯಾವ ಧರ್ಮವೇ ಆಗಲಿ, ಅದರೊಳಗೇ ಒಂದು ಆಂತರಿಕ ಪ್ರಜಾಪ್ರಭುತ್ವವಿರಬೇಕು..ಅಲ್ಲೊಂದು ಆರೋಗ್ಯಕಾರಿಯಾದ ಸಂವಾದವಿರಬೇಕು, ಚರ್ಚೆಯಿರಬೇಕು, ಸಂಘರ್ಷವಿರಬೇಕು..ಹಾಗಾದಾಗ ಮಾತ್ರ ಅದು ಕಾಲಧರ್ಮಕ್ಕನುಗುಣವಾಗಿ ಪರಿಷ್ಕರಣೆಗೊಳ್ಳುತ್ತಲೇ ಹೋಗುತ್ತದೆ. ಈ ಮೂಲಕ ಹೆಚ್ಚೆಚ್ಚು ಮಾನವೀಯವಾಗುತ್ತದೆ.. ಪ್ರಶ್ನಿಸಿಕೊಳ್ಳದೇ ಹೋದ ಧರ್ಮಗಳು ಕೇವಲ ಆಚರಣೆಯಲ್ಲಿ ಮಾತ್ರ ಉಳಿದುಕೊಂಡು ನಿಂತ ನೀರಾಗಿರುವುದನ್ನು ನಾವು ವರ್ತಮಾನದಲ್ಲಿ ಕಾಣುತ್ತೇವೆ.

 ಉತ್ತರಕರ್ನಾಟಕದ ನೆಲವೆಂದರೆ ಬಿರುಬಿಸಿಲಿನ ನಾಡೆಂದೂ ನಾವು ದಕ್ಷಣದ ಜನ ಸಾರಸಗಟಾಗಿ ಭಾವಿಸುವಂತೆ ಮುಸ್ಲಿಮರನ್ನು ಬಡರೆಂದು ಭಾವಿಸುವುದು ಸಾಮಾನ್ಯದ ಮಾತು. ಅಂತಹ ಬಡ ಮುಸ್ಲಿಮನ ಬದುಕು ಈಗ ಕಾದ ಕಾವಲಿಯಮೇಲೆ ನಿಂತಂತಿದೆ. ಹಾಗಾಗಿ ಸಮಾಜದ ಮುಖ್ಯ ವಾಹಿನಿಯೊಂದಿಗೆ ಬೆರೆಯುವುದು ಇಂದಿನ ತುರ್ತು ಅಗತ್ಯ.ದಕ್ಕೆ ಭಾಷೆಯೂ ಒಂದು ದಾರಿಯಾಗಬಹುದು.

ಜಾಗತೀಕರಣಕ್ಕೆ ತೆರೆದುಕೊಂಡವರು ನಾವು. ನಾವು ಪ್ರಾದೇಶಿಕತೆಯನ್ನು ಮೀರಿ ಬೆಳೆಯಬೇಕು..ಆದರೆ ನಮ್ಮ ಕಾಲು ಇಲ್ಲೇ ಗಟ್ಟಿಯಾಗಿ ಊರಿರಬೇಕು..ಇಲ್ಲಿಯ ಪರಿಸರವನ್ನು, ನೆಲ, ಜಲ, ಭಾಷೆಯನ್ನು ನಾವು ಪ್ರೀತಿಸದಿದ್ದರೆ, ಯಾವುದಕ್ಕೋ ಕೈ ಚಾಚುತ್ತಾ ಹೋದಲ್ಲಿ ನಾವು ಒಂದು ದಿನ ಗಾಳಿಯಲ್ಲಿ ತೇಲಾಡುತ್ತಾ ಅಸ್ತಿತ್ವವನ್ನು ಕಳೆದುಕೊಳ್ಳಲಾರೆವೆ?
ನಾವು ಬೇರಿಳಿದು ಎತ್ತರಕ್ಕೆ ಬೆಳೆಯಬೇಕು..ಅದಕ್ಕೆ ನಮ್ಮ ಪರಿಸರದ ಭಾಷೆ ಕಾರಣವಾಗಬೇಕು..ಅದಕ್ಕೆ ಜಾತಿ ಮತದ ಸೋಂಕಿರಬಾರದು. ಮುಸ್ಲಿಮರು ಭಾಷೆಯ ಕಾರಣದಿಂದಾಗಿ ಸಮೂಹದಿಂದ ಅಸ್ಪರ್ಷರಾಗಿ ದೂರ ನಿಲ್ಲುವಂತರಾಗಬಾರದು. ಬಸ್ಟ್ಯಾಂಡಿನಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿ, ಇದೀಗ ಮೆಡಿಕಲ್ ಕಾಲೇಜು ಕಟ್ಟುವುದರಲ್ಲಿ ವ್ಯಸ್ತವಾಗಿರುವ ಅನಕ್ಷರಸ್ಥ ಹರೇಕಳದ ಹಾಜಬ್ಬನಂತಹ ಸಮಾಜಮುಖಿ ವ್ಯಕ್ತಿತ್ವದವರು ಜಾತಿ ಧರ್ಮವನ್ನು ಮೀರಿ ನಿಲ್ಲುತ್ತಾರೆ. ಅಂತವರು ಮುಸ್ಲಿಂ ಜನಾಂಗಕ್ಕೆ ಆದರ್ಶವಾಗಬೇಕು..


[ಕಳೆದ ವಾರದ ’ಸ್ವತಂತ್ರ’ ವಾರ ಪತ್ರಿಕೆಗಾಗಿ ಬರೆದ ಲೇಖನ]





3 comments:

ravivarma said...

ಜಾಗತೀಕರಣಕ್ಕೆ ತೆರೆದುಕೊಂಡವರು ನಾವು. ನಾವು ಪ್ರಾದೇಶಿಕತೆಯನ್ನು ಮೀರಿ ಬೆಳೆಯಬೇಕು..ಆದರೆ ನಮ್ಮ ಕಾಲು ಇಲ್ಲೇ ಗಟ್ಟಿಯಾಗಿ ಊರಿರಬೇಕು..ಇಲ್ಲಿಯ ಪರಿಸರವನ್ನು, ನೆಲ, ಜಲ, ಭಾಷೆಯನ್ನು ನಾವು ಪ್ರೀತಿಸದಿದ್ದರೆ, ಯಾವುದಕ್ಕೋ ಕೈ ಚಾಚುತ್ತಾ ಹೋದಲ್ಲಿ ನಾವು ಒಂದು ದಿನ ಗಾಳಿಯಲ್ಲಿ ತೇಲಾಡುತ್ತಾ ಅಸ್ತಿತ್ವವನ್ನು ಕಳೆದುಕೊಳ್ಳಲಾರೆವೆ?
ನಾವು ಬೇರಿಳಿದು ಎತ್ತರಕ್ಕೆ ಬೆಳೆಯಬೇಕು..ಅದಕ್ಕೆ ನಮ್ಮ ಪರಿಸರದ ಭಾಷೆ ಕಾರಣವಾಗಬೇಕು..ಅದಕ್ಕೆ ಜಾತಿ ಮತದ ಸೋಂಕಿರಬಾರದು. ಮುಸ್ಲಿಮರು ಭಾಷೆಯ ಕಾರಣದಿಂದಾಗಿ ಸಮೂಹದಿಂದ ಅಸ್ಪರ್ಷರಾಗಿ ದೂರ ನಿಲ್ಲುವಂತರಾಗಬಾರದು. ಬಸ್ಟ್ಯಾಂಡಿನಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿ, ಇದೀಗ ಮೆಡಿಕಲ್ ಕಾಲೇಜು ಕಟ್ಟುವುದರಲ್ಲಿ ವ್ಯಸ್ತವಾಗಿರುವ ಅನಕ್ಷರಸ್ಥ ಹರೇಕಳದ ಹಾಜಬ್ಬನಂತಹ ಸಮಾಜಮುಖಿ ವ್ಯಕ್ತಿತ್ವದವರು ಜಾತಿ ಧರ್ಮವನ್ನು ಮೀರಿ ನಿಲ್ಲುತ್ತಾರೆ. ಅಂತವರು ಮುಸ್ಲಿಂ ಜನಾಂಗಕ್ಕೆ ಆದರ್ಶವಾಗಬೇಕು.heart touching..

Anonymous said...

ಉರ್ದುಇರಲಿ, ಕನ್ನಡ ಮೆರೆಯಲಿ ಎಂಬ ತಲೆಬರಹವೇ ಎಲ್ಲವನ್ನು ಹೇಳುತ್ತದೆ. ಮುಸ್ಲಿಂ ಸಂವೇದನೆಯನ್ನು ಮುಖ್ಯಧಾರೆಗೆ ತಲುಪಿಸುವಲ್ಲಿ ಮುಸ್ಲಿಂ ಸಮುದಾಯ ಎಡವಿದ್ದು ನಿಜ. ಮಹಿಳೆಯರ ಶಿಕ್ಷಣದ ಹಕ್ಕನ್ನು ಕಸಿದುಕೊಂಡಿದ್ದ ಮೂಲಭೂತವಾದಿಗಳ ಬಿಗಿ ಹಿಡಿತದಿಂದ ಮುಸ್ಲಿಂ ಸಮುದಾಯ ಹೊರಬಂದದ್ದು ಆಶಾಕಿರಣವನ್ನು ಮೂಡಿಸಿದೆ. ಪ್ರಾದೇಶಿಕ ಭಾಷೆಯ ಕಡೆಗಣನೆಯು ಮುಸ್ಲಿಂ ಸಮುದಾಯವನ್ನು ಮುಖ್ಯಧಾರೆಯಿಂದ ಒಂದು ಮಾರು ದೂರವಿಟ್ಟದ್ದು ಸುಳ್ಳಲ್ಲ. ಪ್ರಾಥಮಿಕ ಶಿಕ್ಷಣವನ್ನು ಪ್ರಾದೇಶಿಕ ಮಾಧ್ಯಮದಲ್ಲೇ ಕೊಡಲು ಸರ್ಕಾರ ಮುತುವರ್ಜಿ ವಹಿಸಬೇಕು, ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯವೇ ಎದ್ದು ನಿಂತು ಸರ್ಕಾರವನ್ನು ಒತ್ತಾಯಿಸಬೇಕು.
ಸಂದರ್ಭೋಚಿತ ಅತ್ಯುತ್ತಮ ಲೇಖನಕ್ಕೆ ಧನ್ಯವಾದಗಳು ಅಕ್ಕಾ ..
ಹುಸೇನ್ (http://nenapinasanchi.wordpress.com/)

sunaath said...

ಪ್ರಾದೇಶಿಕ ಭಾಷೆಯ ಕಲಿಕೆಯ ಮಹತ್ವವನ್ನು ಚೆನ್ನಾಗಿ ಹೇಳಿದ್ದೀರಿ. ಸರಕಾರವು ಕಣ್ಣು ತೆರೆಯಲಿ ಎಂದು ಹಾರೈಸುತ್ತೇನೆ.