Friday, April 28, 2017

ನಮಾಮಿ ಬ್ರಹ್ಮಪುತ್ರ- ಎಲ್ಲಿ ನೋಡಿದರೂ ನೀರೇ ನೀರು!



ಭಾರತದ ಏಕೈಕ ಗಂಡು ನದಿ ಬ್ರಹ್ಮಪುತ್ರ.

ಹೀಗೆಂದು ಭಾರತಿಯರೆಲ್ಲರೂ ಭಾವಿಸಿಕೊಂಡಿದ್ದಾರೆ. ಆದರೆ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ನೇತ್ರಾವತಿಯಲ್ಲಿ ಐಕ್ಯಗೊಳ್ಳುವ ಕುಮಾರಧಾರ ನದಿ ದಂಡೆಯಲ್ಲಿ ಹುಟ್ಟಿ ಬೆಳೆದ ನನ್ನಂತವರುರು ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ? ಇಲ್ಲವಲ್ಲ. ಯಾಕೆಂದರೆ ಕುಮಾರಧಾರ ಗಂಡು ನದಿ, ಇದರ ದೊಡ್ಡಣ್ಣನಂತಿರುವ ಬ್ರಹ್ಮಪುತ್ರ ನದಿಗೆ ಗೌರವ ಸಮರ್ಪಿಸುವ ’ನಮಾಮಿ ಬ್ರಹ್ಮಪುತ್ರ’ ಎಂಬ ಉತ್ಸವವೊಂದು ಕಳೆದ ಮಾರ್ಚ್ ೩೧ರಿಂದ ಏಪ್ರಿಲ್ ೪ರ ತನಕ ಐದು ದಿನಗಳ ತನಕ ಅಸ್ಸಾಂನ ವಿವಿದೆಡೆಗಳಲ್ಲಿ ಬ್ರಹ್ಮಪುತ್ರದ ನದಿ ದಂಡೆಗಳಲ್ಲಿ ನಡೆಯಿತು..
 ಅಸ್ಸಾಂನ ರಾಜಧಾನಿ ಗೌಹಾಟಿ. ಪುರಾಣ್ದ ಹಿನ್ನೆಲೆಯಿಂದ ನೋಡಿದರೆ ಮಹಾಭಾರತದಲ್ಲಿ ಕಾಮರೂಪವೆಂಬ ರಾಜ್ಯದ ಉಲ್ಲೇಖವಿದೆ. ಅದರ ರಾಜಧಾನಿ ಪ್ರಾಗ್ಜ್ಯೋತಿಷ್ಯಪುರ. ಅಂದಿನ ಪ್ರಾಗ್ಜೋತಿಷ್ಯಪುರವೇ ಇಂದಿನ ಗೌಹಾಟಿ.
ಯಾಕೋ ಗೊತ್ತಿಲ್ಲ. ನದಿಗಳೆಂದರೆ ನನಗೆ ವಿಪರೀತ ಆಕರ್ಷಣೆ. ನದಿ ದಂದೆಯಲ್ಲಿ ಹುಟ್ಟಿ, ಐದಾರು ನದಿಗಳನ್ನು ದಾಟಿ ಶಾಲೆಗೆ ಹೋಗುತ್ತಾ ಕೌಮಾರ್ಯವನ್ನು ಕಳೆದದ್ದಕ್ಕಿರಬಹುದೆನೋ! ಒಟ್ಟಿನಲ್ಲಿ ನದಿಯೆಂಬುದು ರಮ್ಯಗೆಳೆಯನಂತೆ ನನ್ನ ಬದುಕಿನುದ್ದಕ್ಕೂ  ಪ್ರವಹಿಸುತ್ತಲೇ ಇದೆ.

ಬ್ರಹ್ಮಪುತ್ರ ಹಲವು ವೈಶಿಷ್ಟಗಳನ್ನೊಳಗೊಂಡ ಮಹಾನದಿ. ಅದು ಈಗ ಚೀನಾದ ಸ್ವಾಧೀನದಲ್ಲಿರುವ ಟಿಬೇಟ್ ನಲ್ಲಿ ಸಮುದ್ರ ಮಟ್ಟದಿಂದ ೧೭೦೯೩ ಅಡಿ ಎತ್ತರದಲ್ಲಿ ಹುಟ್ಟುತ್ತದೆ. ಅಲ್ಲಿ ಅದಕ್ಕಿರುವ ಹೆಸರು ಯಾರ್ಲುಂಗ್ ಟಾಂಗ್ಪೋ. ಇಲ್ಲಿಂದ ಆರಂಭವಾಗುವ ಅದರ ಪಯಣ ಭಾರತವನ್ನು ದಾಟಿ ಬಾಂಗ್ಲಾ ದೇಶದತ್ತ ಮುನ್ನುಗ್ಗಿ ಬಂಗಾಳಕೊಲ್ಲಿಯನ್ನು ಸೇರುವಲ್ಲಿಯವರೆಗಿನ ಅದರ ಉದ್ದ ೨೯೦೦ ಕಿಮೀ. ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಅದರ ಉದ್ದ ೩೩೫೦ ಕಿಮೀ. ಇದರಲ್ಲಿ ೧೭೦೦ ಕಿಮೀ ತಿಬೇಟ್ ನಲ್ಲಿ ಹರಿಯುತ್ತದೆ. ಬಾರತದಲ್ಲಿ  ೯೧೬ ಕಿಮೀ ಮತ್ತು ಬಾಂಗ್ಲಾದಲ್ಲಿ ೨೮೪ ಕಿಮೀ ದೂರ ಕ್ರಮಿಸುತ್ತದೆ. ಬಾಂಗ್ಲದಲ್ಲಿ ಅದಕ್ಕಿರುವ ಹೆಸರು ಜಮುನಾ. ಟಿಬೇಟ್ ನಲ್ಲಿ ಇದು ಹತ್ತುಸಾವಿರ ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ಹರಿಯುತ್ತಿರುತ್ತದೆ.. ಇಷ್ಟು ಎತ್ತರದಲ್ಲಿ ಹರಿಯುತ್ತಿರುವ ಜಗತ್ತಿನ ಮೊದಲ ನದಿಯಿದು. 

ಅರುಣಾಚಲಪ್ರದೇಶದ ಮುಖಾಂತರ ಭಾರತವನ್ನು ಪ್ರವೇಶಿಸುತ್ತದೆ. ಹಿಮಾಚಲ ಪ್ರದೇಶ  ಕೂಡಾ ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುವ ಕಾರಣದಿಂದಾಗಿ ಅಲ್ಲಿಯೂ ಬ್ರಹ್ಮಪುತ್ರ ಉಪ್ಪರಿಗೆಯ ಮೇಲಿನ ನದಿಯೇ. ಅಲ್ಲಿ ಅದಕ್ಕಿರುವ ಹೆಸರು ಸಿಯಾಂಗ್. ಸಿಯಾಂಗ್ ನದಿಗೆ ಡಿಬಾಂಗ್ ಮತ್ತು ಲೋಹಿತ್ ನದಿಗಳು ಸೇರಿಕೊಳ್ಳುತ್ತವೆ. ಅಸ್ಸಾಂಗೆ ಇಳಿದ ಮೇಲೆ ಅದು ಸ್ವಲ್ಪ ಮಟ್ಟಿಗೆ ನೆಲದ ನದಿಯಾಗುತ್ತದೆ. ಇಲ್ಲಿ ಹಲವಾರು ಉಪನದಿಗಳು ಇದರೊಡನೆ ಸೇರಿಕೊಂಡು ಅದಕ್ಕೆ ಬ್ರಹ್ಮಪುತ್ರ ಎಂಬ ಅಭಿಧಾನ ದೊರೆಯುತ್ತದೆ.

ಬ್ರಹ್ಮದೇವನ ಪುತ್ರನಾದ ಕಾರಣ ಇದು ಇದು ಬ್ರಹ್ಮಪುತ್ರ. ಹಾಗಾಗಿಯೇ ಇದು ಗಂಡುನದಿ, ಗಂಡಾದ ಕಾರಣದಿಂದಾಗಿಯೇ ಅಬ್ಬರ ಜಾಸ್ತಿ; ವಿದ್ವಂಸಕತೆಯೆಡೆಗೆ ಒಲವು. ಇದರ ಹರಹನ್ನು ನೋಡಿದವರು ಖಂಡಿತವಾಗಿಯೂ ಇದನ್ನು ನದಿಯೆನ್ನಲಾರರು ಅದೊಂದು ಸಮುದ್ರ.ಅದರಲ್ಲಿಯೂ ಸಾಗರದಂತೆ ಅಲೆಗಳೇಳುತ್ತವೆ. ಸೊಕ್ಕಿ ಹರಿದರೆ ಅಪಾರ ಸಂಖ್ಯೆಯಲ್ಲಿ ಆಸ್ತಿ ಮತ್ತು ಜೀವ ಹಾನಿಯನ್ನು ಉಂಟುಮಾಡುತ್ತದೆ. ಪ್ರತಿವರ್ಷವೂ ಈ ನದಿ ಉಕ್ಕಿ ಹರಿಯುತ್ತದೆ; ಇಲ್ಲಿಯ ಜನರ ದುಃಖಕ್ಕೆ ಕಾರಣವಾಗುತ್ತದೆ. ಬ್ರಹ್ಮಪುತ್ರ ಅಸ್ಸಾಂ ಜನತೆಯ ಜೀವಚೈತನ್ಯವೂ ಹೌದು, ಕಣ್ಣೀರಿನ ನದಿಯೂ ಹೌದು. ಈ ನದಿ ಅಸ್ಸಾಂ ರಾಜ್ಯವನ್ನು ಸದಾ ಹಚ್ಚ ಹಸಿರನ್ನಾಗಿ ನೋಡಿಕೊಳ್ಳುತ್ತದೆ, ಸುತ್ತ ನೀಲಾಚಲ ಪರ್ವತ. ಎಲ್ಲಿ ನೋಡಿದರೂ ಹಸಿರಾದ ಬಯಲು, ಈತ ರೊಚ್ಚಿಗೆದ್ದರೆ ಮಾರಣಹೋಮ ನಡೆಯುತ್ತದೆ.  ೧೯೭೦ರಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಸುಮಾರು ಮೂರು ಲಕ್ಷದಿಂದ ಐದು ಲಕ್ಷದಷ್ಟು ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಈ ನದಿಯಲ್ಲಿ ನೆರೆ ಬಂದು ಕಾಜೀರಂಗ ನ್ಯಾಷನಲ್ ಪಾರ್ಕ್ ಮುಳುಗಿ ಅಸಂಖ್ಯಾತ ಪ್ರಾಣಿಗಳು ಕೊಚ್ಚಿ ಹೋಗಿದ್ದವು. ಇಲ್ಲಿಯೇ ಅಳಿವಿನಂಚಿನಲ್ಲಿರುವ ಘೆಂಡಾಮ್ರುಗಳಿರುವುದು. ಹಾಗಾಗಿ ಕಾಜಿರಂಗ ವರ್ಲ್ಡ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿದೆ.
ಅಸ್ಸಾಂನಲ್ಲಿ ಬ್ರಹ್ಮಪುತ್ರದ ಆಳ ವಿಸ್ತಾರಗಳು ಎಷ್ಟಿದೆಯೆಂದರೆ ಕೆಲವೆಡೆ ಇದರ ಅಗಲ ಹತ್ತು ಕಿಮೀ ಗಳಿಗಿಂತಲೂ ಹೆಚ್ಚು. ಆಳ  ಸರಾಸರಿ ೧೨೪ ಅಡಿ. ಕೆಲವೆಡೆ ಇದು ೩೬೦ ಅಡಿ ತಲುಪುತ್ತದೆ. ಆಳ ಮತ್ತು ವಿಸ್ತಾರದಲ್ಲಿ ಇದಕ್ಕೆ ದಕ್ಷಿಣ ಅಮೇರಿಕಾದ ಅಮೇಜಾನ್ ನದಿಯ ನಂತರದ ಸ್ಥಾನ ದೊರೆಯುತ್ತದೆ.

ಬ್ರಹ್ಮಪುತ್ರ ಎಗ್ಗಿಲ್ಲದ ಹರಿಯುವ ನದಿ. ಇದು ತನ್ನ ಬಾಹುಗಳನ್ನು ಎಲ್ಲಿ ಬೇಕಾದರೂ ಚಾಚಿಕೊಳ್ಳಬಹುದು. ತನ್ನ ದೇಹವನ್ನೇ ಸೀಳಿಕೊಳ್ಳಬಹುದು, ಹಾಗೆ ಎರಡು ಕವಲಾಗಿ ಹರಿದು ನಡುವೆ ಮಾಜುಲಿ ಎಂಬ ೧೨೨೫ ಚದರ ಕಿಮೀ ದ್ವೀಪವೊಂದನ್ನು ಸ್ರುಷ್ಟಿಸಿದೆ, ಇದು ಪ್ರಪಂಚದಲ್ಲಿಯೇ ನದಿಯೊಂದು ಸ್ರುಜಿಸಿದ ಅತ್ಯಂತ ದೊಡ್ಡ ದ್ವೀಪವಾಗಿದೆ. ಕಳೆದ ವರ್ಷ ಅದನ್ನೊಂದು ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿದೆ. ಪ್ರಸ್ತುತ ಅಸ್ಸಾಂನ ಮುಖ್ಯಮಂತ್ರಿಯಾಗಿರುವ ಸಬ್ರಾನಂದ ಸೋನುವಾಲ ಮಾಜುಲಿ ದ್ವೀಪಕ್ಕೆ ಸೇರಿದವರು.

ಇಂತಹ ಉನ್ಮತ್ತ  ನದಿಯ ಉತ್ಸವವನ್ನು ನೋಡುವ ಬಯಕೆ ಹುಟ್ಟಿದರೆ ಅದನ್ನು ಹತ್ತಿಕ್ಕಲು ಸಾಧ್ಯವೇ? ಈ ಹಿಂದೆ ಲಡಾಕ್ ನಲ್ಲಿ ನಡೆದ ’ಸಿಂಧು ಉತ್ಸವ’ದಲ್ಲಿ ಭಾಗಿಯಾಗಿದ್ದೆ. ಅದೇ ಗುಂಗಿನಲ್ಲಿ ಗೌಹಾಟಿಗೆ ವಿಮಾನ ಹತ್ತಿದ್ದೆ.  ಆದರೆ ನಾನಲ್ಲಿ ಇಳಿಯುತ್ತಿರುವಾಗಲೇ ಮಳೆರಾಯ ಅದ್ದೂರಿಯ ಸ್ವಾಗತ ನೀಡಿದ್ದ. ಮಳೆ ಹೊಯ್ದರೆ  ಗೌಹಾಟಿ ನಗರದ ಹೊರವಲಯವೆಲ್ಲಾ ಕೊಚ್ಚೆಗುಂಡಿಯಂತಾಗುತ್ತದೆ. ಅಲ್ಲಿ ಹಲವಾರು ಕಡೆ ಸಮರ್ಪಕವಾದ ಒಳಚರಂಡಿ ವ್ಯವಸ್ಥೆಯಿದ್ದಂತಿರಲಿಲ್ಲ.ಗೌಹಾಟಿ ವಿಮಾನ ನಿಲ್ದಾಣದಿಂದ ಗೌಹಾಟಿಯ ಹೊರವಲಯದಲ್ಲಿರುವ ಬ್ರಹ್ಮಪುತ್ರ ದಂಡೆಯಲ್ಲಿರುವ ಸುಕ್ರೇಶ್ವರ ಘಾಟ್ ಗೆ ೨೨ ಕಿ.ಮೀ ದೂರವಿದೆ. ಇಲ್ಲೆಯೇ ನಮಾಮಿ ಬ್ರಹ್ಮಪುತ್ರದ ಮುಖ್ಯ ಉತ್ಸವ ನಡೆಯುತ್ತಿರುವುದು.

ನಮಾಮಿ ಬ್ರಹ್ಮಪುತ್ರ ಉತ್ಸವದ ಆಚರಣೆಗೆ ಅಸ್ಸಾಮಿನ ಎಲ್ಲಾ ೨೧ ಜಿಲ್ಲೆಗಳೂ ಸಜ್ಜುಗೊಂಡಿದ್ದವು. ಹದಿನಾಲ್ಕು ಕೋಟಿ ರೂಪಯಿಗಳ ವೆಚ್ಚದಲ್ಲಿ ಬ್ರಹ್ಮಪುತ್ರ ನದಿ ದಂಡೆಗಳು ಮದುವೆ ಮಂಟಪದಂತೆ ಸಿಂಗಾರಗೊಂಡಿದ್ದವು. ಬಗೆ ಬಗೆಯ ಭಕ್ಷಬೋಜ್ಯದ ಶಾಖಾಹಾರಿ ಮತ್ತು ಮಾಂಸಹಾರಿ ಸ್ಟಾಲ್ ಗಳು ತಲೆಯೆತ್ತಿ ನಿಂತಿದ್ದವು. ಆದರೆ ಮಳೆರಾಯ ಇದೆಲ್ಲವನ್ನೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಮಾಡಿಬಿಟ್ಟ.

ನಮ್ಮಲ್ಲಿ ಅಂದರೆ ಕರ್ನಾಟ್ಕದಲ್ಲಿ ಜೂನ್ ಮೊದಲ ಅಥವಾ ಎರಡನೆ ವಾರದಲ್ಲಿ ಮಳೆಗಾಲ ಆರಂಭವಾಗುತ್ತದೆ. ಅದಕ್ಕೂ ಒಂದು ವಾರಕ್ಕಿಂತ ಮೊದಲು ನೈರುತ್ಯ ಮಾರುತ ಕೇರಳವನ್ನು ಪ್ರವೇಶಿಸಿಸುತ್ತದೆ. ಬೌಗೋಳಿಕವಾಗಿ ನಮ್ಮ ದೇಶ ಬಹು ವಿಸ್ತಾರವನ್ನು ಹೊಂದಿದೆ. ಕರ್ನಾಟಕದಿಂದ ಮೂರು ಸಾವಿರ ಕಿ.ಮೀ ದೂರದಲ್ಲಿರುವ ಅಸ್ಸಾಂಗೆ ವಾಡಿಕೆಯ ಪ್ರಕಾರ ಮಳೆಗಾಲ ಆರಂಭವಾಗುವುದು ಬಿಹು ಹಬ್ಬದ ನಂತರವೇ.ಅಂದರೆ ಏಪ್ರಿಲ್ ೧೪ರ ನಂತರ. ಅದೇ ದಿನವನ್ನು ತುಳುನಾಡಿಗರೂ ಬಿಸು ಎಂದು ಆಚರಿಸುತ್ತಾರೆ, ಅಂದು ಸೂರ್ಯಮಾನ ಯುಗಾದಿ. ಅಂದರೆ ಹೊಸ ವರ್ಷದ ಆರಂಭ. ರೈತಾಪಿ ಜನರು ಬಿತ್ತನೆಗೆ ಭೂಮಿ ಹದಗೊಳಿಸಿ ವಸಂತಋತುವನ್ನು ಬರಮಾಡಿಕೊಳ್ಳುವ ಕಾಲ.

ಇದೆಲ್ಲಾ ಲೆಕ್ಕಾಚಾರವನ್ನು ಹಾಕಿಯೇ ನಮಾಮಿ ಬ್ರಹ್ಮಪುತ್ರ ಉತ್ಸವನ್ನು ಆಯೋಜಕರು ಹಮ್ಮಿಕೊಂಡಿದ್ದರು. ಆಯೋಜಕರಿಗೆ ಮಧ್ಯ ಪ್ರದೇಶ ಸರಕಾರವು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ’ನಮಾಮಿ ನರ್ಮದಾ’ ಉತ್ಸವ ಫ್ರ‍ೇರಣೆಯಾಗಿತ್ತು. ಪ್ರವಾಸೋಧ್ಯಮ, ಅರ್ಥಿಕ , ಮತ್ತು ಸಾಂಸ್ಕ್ರುತಿಕ ಆಯಾಮಗಳ ಬೆಸುಗೆಯನ್ನು ನಮಾಮಿ ಬ್ರಹ್ಮಪುತ್ರದ ಈ ಮೊದಲ ಉತ್ಸವದಲ್ಲಿ ಜಗತ್ತಿನೆದುರು ತೋರಿಸಲು ಅವರು ಉತ್ಸುಕರಾಗಿದ್ದರು. ಆದರೆ ಈ ಬಾರಿ ಏಪ್ರಿಲ್ ಆರಂಭಕ್ಕೆ ಮುನ್ನವೇ ಮಳೆರಾಯ ಧಾಂಗುಡಿಯಿಟ್ಟಿದ್ದ.

ಅಸ್ಸಾಂ ಮೂಲತಃ ಬೋಡೋ ಎಂಬ ಬುಡಕಟ್ಟು ಜನಾಂಗದವರ ನಾಡು. ಅವರು ಇದನ್ನು ’ಬುಲ್ಲಮ್ ಬುಧೂರ್’ ಎಂದು ಕರೆಯುತ್ತಾರೆ. ಅವರ ಹಾಡು, ಕವಿತೆಗಳಲ್ಲಿ ಈ ನದಿಗೆ ವಿಶೇಶವಾದ ಮನ್ನಣೆಯಿದೆ. ಬೋಡೋ ಸೇರಿದಂತೆ ಇನ್ನಿತರ ಹಲವು ಬುಡಕಟ್ಟು ಜನರನ್ನು, ಮುಸ್ಲಿಮರನ್ನು, ಕ್ರಿಶ್ಚಿಯನರನ್ನು ಸರಕಾರವು ನವಾಮಿ ಬ್ರಹ್ಮೋತ್ಸವದಿಂದ ದೂರವಿಡಲಾಗಿತ್ತು ಎಂಬ ಮಾತುಗಳು ಉತ್ಸವದಲ್ಲಿ ಅಲ್ಲಲ್ಲಿ ಕೇಳಿಬಂದವು. ಗಂಗಾ ಆರತಿಯ ಮಾದರಿಯಲ್ಲೇ ಉದ್ಘಾಟನೆಯಂದು ಬ್ರಹ್ಮಪುತ್ರನಿಗೆ ದಶಾಸ್ವಮೇದ ಘಾಟ್ ನಲ್ಲಿ ದೀಪದಾರತಿಯನ್ನು ಮಾಡಲಾಗಿತ್ತು. ಅದಕ್ಕೆಂದೇ ನಿಯೋ ವೈಷ್ಣವ ಪೂಜಾರಿಗಳನ್ನು ಹರಿದ್ವಾರದಿಂದ ಕರೆಸಲಾಗಿತ್ತು. ಆದರೆ ಗೌಹಾಟಿಯ ರಕ್ಷಕ ದೇವತೆಯಂತೆ ಎತ್ತರದ ಗುಡ್ಡದ ಮೇಲೆ ಕುಳಿತಿರುವ ಶಕ್ತಿ ದೇವತೆ ಕಾಮಕ್ಯ ದೇವಾಲಯದ ಮುಖ್ಯ ಅರ್ಚಕರಿಗೆ ಉತ್ಸವಕ್ಕೆ ಅಹ್ವಾನ ಕೊಟ್ಟಿರಲಿಲ್ಲ, ಇದು ಅಸ್ಸಾಮಿನ ಸತ್ರಿಯಾ [Sattriya] ಕಲ್ಚರ್ ಗೆ ಮಾಡಿದ ಅವಮಾನ ಎಂಬ ಮಾತುಗಳೂ ಕೇಳಿ ಬಂದವು.

ರಾಷ್ಟ್ರಪತಿ ಪ್ರಣವ ಮುಖರ್ಜಿಯವರು ಉತ್ಸವನ್ನು ಉದ್ಘಾಟನೆಯನ್ನು ಮಾಡಿದಾಗ ಮಳೆರಾಯ ಅತ್ತ ಸುಳಿದಾಡದೆ ಮಾನ ಕಾಪಾಡಿದ್ದ. ಆದರೆ ಮರುದಿನ ಏಪ್ರಿಲ್ ಒಂದರಿಂದ ಸತತ ನಾಲ್ಕು ದಿನ ಹನಿ ತುಂಡಾಗಲೇ ಇಲ್ಲ. ಹಾಗಾಗಿ ಯಾವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರಗಲಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಕಲಾತಂಡಗಳು, ಕ್ಲಾವಿದರು, ಹಾಡುಗಾರರು, ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲೆಂದು ಉತ್ಸಾಹದಿಂದ ಬಂದಿದ್ದರು. ಅವರೆಲ್ಲಾ ನಿರಾಶೆಯಿಂದ ಹಿಂದಿರುಗಬೇಕಾಯ್ತು.

 ಕೊನೆಯ ದಿನ ಸಮಾರೋಪವನ್ನು ಕೂಡಾ ದೂರದ ಒಂದು ಸಭಾಂಗಣದಲ್ಲಿ ಮಾಡಬೇಕಾಯ್ತು. ಮಳೆ ಎಕ್ಕಸಕ್ಕ ಸುರಿಯುತ್ತಿದ್ದ ಕಾರಣ ನಾನೂ ಸೇರಿದಂತೆ ಬಹುತೇಕ ಪ್ರವಾಸಿಗರಿಗೆ ಅಲ್ಲಿಗೆ ಹೋಗಲಾಗಲಿಲ್ಲ. ಕೊನೆಯ ದಿನ ಸಂಜೆಯಾಗುತ್ತಿದ್ದಂತೆ ಬ್ರಹ್ಮಪುತ್ರಾ ಉಕ್ಕೇರಿ ವೇದಿಕೆಯತ್ತ ಮುನ್ನುಗ್ಗಲು ಪ್ರಯತ್ನಿಸುತ್ತಿತ್ತು. ಮೆಲ್ಲ ಮೆಲ್ಲನೆ ಅಂಗಡಿ ಮುಂಗಟ್ಟುಗಳತ್ತ ತೋಳು ಚಾಚತೊಡಗಿತು. ದಂಡೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಾ ಅವು ಪುಟ್ಟ ಪುಟ್ಟ ಕಣಿವೆಗಳಾಗುತ್ತಾ ದೊಡ್ಡದಾಗತೊಡಗಿತು. ಅಲ್ಲೇ ಇದ್ದ ಸೇನೆಯ ವಿಪತ್ತು ನಿರ್ವಹಣ ತಂಡದ ಸೈನಿಕರು ಅತ್ತಿತ್ತ ಓಡಾಡುವುದು ಹೆಚ್ಚಾಗತೊಡಗಿತು. ಅದನ್ನೆಲ್ಲಾ ನೋಡುತ್ತಾ ನಾನು ಮನಸ್ಸಿನಲ್ಲೇ ಅಂದುಕೊಂಡೆ; ''ಉದ್ಘಾಟನೆಯನ್ನು ಮನುಷ್ಯರು ತಮಗೆ ಬೇಕಾದಂತೆ ಮಾಡಿಕೊಂಡರು. ಸಮಾರೋಪವನ್ನು ನನಗೆ ಬೇಕಾದಂತೆ ನಾನೇ ಮಾಡಿಕೊಂಡೆ''  ಎಂದು ಬ್ರಹ್ಮಪುತ್ರ ಹೇಳಿಕೊಳ್ಳುತ್ತಿರಬಹುದೇ? ಅಂತ. ಆಶ್ಚರ್ಯವೆಂಬಂತೆ ಮರುದಿನ ಮಧ್ಯಾಹ್ನ ನಾನು ಏರ್ಪೋರ್ಟಿಗೆ ಬರುವ ತನಕ ಮಳೆಯಾಗಲಿಲ್ಲ!

ಇದೆಲ್ಲಾ ಏನೇ ಇರಲಿ. ದೂರದೇಶಗಳಿಂದ, ದೇಶದ ಇನ್ನಿತರ ರಾಜ್ಯಗಳಿಂದ ಉತ್ಸವದಲ್ಲಿ ಪಾಲ್ಗೊಳ್ಳಲು ಜನರು ಉತ್ಸಾಹದಿಂದ ಆಗಮಿಸಿದ್ದರು. ಕೈಯ್ಯಲ್ಲಿ ಬಣ್ಣಬಣ್ಣದ ಕೊಡೆ ಹಿಡಿದುಕೊಂಡೋ, ಇಲ್ಲವೇ ಮಳೆಯಲ್ಲಿ ನೆಂದುಕೊಂಡೋ ಉತ್ಸವಕ್ಕೆಂದು ನಿಗದಿಯಾದ ಜಾಗದಲ್ಲಿ ಓಡಾಡುತ್ತಾ, ಸ್ಟಾಲ್ ಗಳಲ್ಲಿ ತಮಗೆ ಬೇಕಾದ ಬಟ್ಟೆ ಬರೆ, ವಸ್ತುಗಳನ್ನು ಖರೀದಿಸುತ್ತಾ. ಬ್ರಹ್ಮಪುತ್ರನೊಡನೆ ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಿಸುತ್ತಿದ್ದರು. ಸುರಿಯುವ ಮಳೆಯಲ್ಲೇ ಬ್ರಹ್ಮಪುತ್ರದ ನಡುಗಡ್ಡೆಯಲ್ಲಿರುವ ಉಮಾನಂದ ಮತ್ತು ಗುಡ್ಡದ ಮೇಲೆ ಕುಳಿತಿರುವ ಶಕ್ತಿ ದೇವತೆ ಕಾಮಾಕ್ಯದ ದರ್ಶನಕ್ಕೆ ಹೋಗಿ-ಬರುತ್ತಿದ್ದರು.
’ನಮಾಮಿ ಬ್ರಹ್ಮಪುತ್ರ’ ಆಯೋಜಕರ ದ್ರುಷ್ಟಿಯಲ್ಲಿ ಮಳೆಯಿಂದಾಗಿ ಉತ್ಸವ ಅಸ್ತವ್ಯಸ್ತಗೊಂಡಿರಬಹುದು. ಆದರೆ ಪ್ರವಾಸಿಗರ, ಜನಸಾಮಾನ್ಯರ ದ್ರುಷ್ಟಿಯಲ್ಲಿ ಗೆದ್ದಿದೆ. ಮುಂದಿನ ವರ್ಷ ಈ ಸಲ ಈ ಬಾರಿ ಆದ ಲೋಪ ದೋಶಗಳನ್ನು ಸರಿಪಡಿಸಿಕೊಂಡರೆ ದೇಶದ ಅತೀ ದೊಡ್ಡ ನದಿ ಉತ್ಸವ ಇನ್ನೂ ಹಲವು ನದಿ ಉತ್ಸವಗಳಿಗೆ ಮುನ್ನುಡಿಯಾಗಬಹುದು, ಯಾಕೆಂದರೆ ಕರ್ನಾಟಕದಲ್ಲಿಯೂ  ಪ್ರವಾಸೋಧ್ಯಮವನ್ನು ಬಲಪಡಿಸುವ ಉದ್ದೇಶದಿಂದ ’ಕಾವೇರಿ ದರ್ಶನ ಉತ್ಸವ’ಕ್ಕೆ ಕೊಡಗು ಜಿಲ್ಲಾ ಪಂಚಾಯತ್ ಮುಂದಾಗಿದೆ. ಇದಕ್ಕಾಗಿ ಅದು ಕೇಂದ್ರಕ್ಕೆ ೯೪ ಲಕ್ಷ ರೂಪಾಯಿಗಳ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.

ನೆಲ ಜಲ ಭಾಷೆಗಳು ಮನುಷ್ಯರನ್ನು ಭಾವನಾತ್ಮಕವಾಗಿ ಬೆಸೆಯುತ್ತವೆ. ಚೀನಾ ಈಗಾಗಲೇ  ಬ್ರಹ್ಮಪುತ್ರ ನದಿಗೆ ಬಲು ದೊಡ್ಡದಾದ ಅಣೆಕಟ್ಟನ್ನು ಕಟ್ಟಿದೆ. ಈ ನದಿಯ ಇನ್ನಷ್ಟು ನೀರನ್ನು ಕಬಳಿಸಿಕೊಳ್ಳಲು ಅದು ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇದೆ , ಇಂತಹ ಸಂದರ್ಭಗಳಲ್ಲಿ ಈ ನದಿ ನಮ್ಮದು ಎಂಬ ಭಾವನೆ ಮತ್ತಷ್ಟು ಬಲಗೊಳ್ಳಲು ಆ ನದಿ ದಡದಲ್ಲಿ ಹುಟ್ಟಿದ ಕಲೆ, ಸಂಸ್ಕ್ರುತಿಯನ್ನು ಪ್ರಚುರಪಡಿಸುವ ಇಂತಹ ಉತ್ಸವಗಳು ಇನ್ನಷ್ಟು ನಡಿಯುತ್ತಿರಬೇಕು. ಆದರೆ ಇಂತಹ ಉತ್ಸವಗಳು ವೈದಿಕ ಸಂಸ್ಕ್ರುತಿಯ ಮೆರೆಸುವಿಕೆ ಆಗದೆ ನೆಲಮೂಲ ಸಂಸ್ಕ್ರುತಿಯನ್ನೂ ಒಳಗೊಂಡಿರಬೇಕು.

·         [ ಉದಯವಾಣಿ ಪತ್ರಿಕೆಯ ಭಾನುವಾರದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]





1 comments:

sunaath said...

ನಿಮ್ಮ ಈ ಲೇಖನವು ತುಂಬ ಮೆಚ್ಚುಗೆಯಾಯಿತು. ಏಕೆನ್ನುವಿರಾ? ಮೊದಲನೆಯದಾಗಿ ಓದುಗನು ಬಯಸುವ ಮಾಹಿತಿಗಳನ್ನೆಲ್ಲ ಕ್ರಮಬದ್ಧವಾಗಿ ನೀಡಿರುವಿರಿ. ಎರಡನೆಯದಾಗಿ ಈ ಮಾಹಿತಿಗಳನ್ನು ಸೊಗಸಾದ ಭಾಷೆಯಲ್ಲಿ ಕಟ್ಟಿಕೊಟ್ಟಿರುವಿರಿ. ಬ್ರಹ್ಮಪುತ್ರಾ ನದಿಗೆ ಗಂಡು ನದಿ ಎಂದು ಏಕೆ ಕರೆದಿದ್ದಾರೆಯೊ ತಿಳಿಯದು. ನೀವು ಸೂಚಿಸಿದಂತೆ, ಅದರ ಗುಡ್ಡುಗಾಡು ರಭಸಕ್ಕೆ ಇರಬಹುದೇನೊ? ಆದರೆ ಕುಮಾರಧಾರಾ ನದಿಯನ್ನು ನೀವು ಗಂಡುನದಿ ಎಂದು ಏಕೆ ಕರೆಯಬಯಸುತ್ತೀರೊ ತಿಳಿಯಲಿಲ್ಲ. ಇನ್ನೊಂದು ವಿಷಯ: ನಿಮ್ಮ ಈ ವರ್ಗೀಕರಣವು ಗಂಡನ್ನು ರಭಸ ಹಾಗು ಹೆಣ್ಣನ್ನು ಮೃದು ಎನ್ನುವ ಗ್ರಹಿಕೆಗಳ ಮೇಲೆ ಆಧಾರಿತವಾಗಿದೆಯೆ? ಹಾಗಿದ್ದರೆ ಈ ವರ್ಗೀಕರಣವನ್ನು ನಾನು ಒಪ್ಪಲಾರೆ. ನಮ್ಮ ಮಾನವಸಮಾಜವು ಇಂತಹ ಒಂದು ಪರಿಸ್ಥಿತಿಯನ್ನು ಸೃಷ್ಟಿಸಿದೆ ಎನ್ನುವುದು ವಾಸ್ತವ. ಆದರೆ, ಗಂಡಿನ ಅಪಸ್ಥಿತಿಯಲ್ಲಿ ಹೆಣ್ಣು ಗಂಡಿನ ಎಲ್ಲ ಕಾರ್ಯಗಳನ್ನು ಗಂಡಿನಿಗಿಂತ ಹೆಚ್ಚಾಗಿ ಮಾಡಿಲ್ಲವೆ? ಹೆಣ್ಣನ್ನು ಬೇಕಾದರೆ, ‘ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ’ ಎಂದರೆ ಸ್ವಲ್ಪ ಮಟ್ಟಿಗೆ ಒಪ್ಪಬಹುದೇನೊ?