Wednesday, September 29, 2010

’ರಿಯಾಲಿಟಿ ಶೋ’ಗಳ ವೈನೋದಿಕ ಹಿಂಸೆ




ಇಪ್ಪತ್ತು ವರ್ಷಗಳ ಹಿಂದಿನ ಸಮಾಚಾರ; ’ಮನ್ವಂತರ’ ಎಂಬ ರಾಜಕೀಯ ವಾರಪತ್ರಿಕೆಯ ಮುಖಾಂತರ ನಾನು ಪತ್ರಿಕಾರಂಗಕ್ಕೆ ಅಡಿಯಿಟ್ಟೆ. ಆ ಪತ್ರಿಕೆಯ ಸಹ ಪ್ರಕಟಣಾ ಮಾಸಪತ್ರಿಕೆಯೊಂದಿತ್ತು. ಅದರ ಹೆಸರು ’ಸುರತಿ’. ಮಾರುಕಟ್ಟೆಯಲ್ಲಿ ಅದಕ್ಕೆ ಪೈಪೋಟಿ ನೀಡುತ್ತಿರುವ ಇನ್ನೊಂದು ಮಾಸಪತ್ರಿಕೆಯಿತ್ತು. ಅದರ ಹೆಸರು ’ರತಿವಿಜ್ನಾನ’. ಸರ್ಕ್ಯೂಲೇಶನಿನಲ್ಲೂ ಪರಸ್ಪರ ಪೈಪೋಟಿ ನೀಡುತ್ತಿದ್ದ ಆ ಪತ್ರಿಕೆಗಳ ಒಟ್ಟು ಪ್ರಸರಣ ಸಂಖ್ಯೆ ಐದು ಲಕ್ಷ ದಾಟಿ ಹೋಗುತ್ತಿತ್ತು.

ಪ್ರಸರಣದ ದೃಷ್ಟಿಯಿಂದ ನೋಡಿದರೆ ಅವೆರಡು ಪತ್ರಿಕೆಗಳು ಜನಪ್ರಿಯವಾದ ಮಾಸಪತ್ರಿಕೆಗಳು. ಆದರೆ ಅವು ಮನುಷ್ಯನ ಬೇಸಿಕ್ ಇನ್ಸ್ಟಿಂಗ್ಟ್ ಆದ ಲೈಂಗಿಕ ಕುತೂಹಲವನ್ನು, ತಣಿಸುವ, ಕೆರಳಿಸುವ ಪುಸ್ತಕಗಳು ಅಷ್ಟೆ. ’ಸೆಗಣಿಯಲ್ಲಿ ಸಾವಿರ, ಮಧ್ಯಾಹ್ನಕ್ಕೆ ಲಯ’ ಎಂಬಂತೆ ಅದರಿಂದಾಚೆಗೆ ಅವುಗಳಿಗೆ ಪ್ರತ್ಯೇಕ ಐಡೆಂಟಿಟಿ ಇರಲಿಲ್ಲ.

ಅದು ಮುದ್ರಣ ಮಾಧ್ಯಮದ ಸಾರ್ವಭೌಮತ್ವದ ಕಾಲಘಟ್ಟ. ಈಗ ಏನಿದ್ದರೂ ದೃಶ್ಯ ಮಾಧ್ಯಮದ ಯುಗ. ಸರ್ಕ್ಯೂಲೇಷನ್ ಎಂಬುದು ಹಿಂದಕ್ಕೆ ಸರಿದು ಟಿ.ಆರ್.ಪಿ ಎಂಬ ಭೂತ ಟಿ.ವಿಯನ್ನು ಆಳುತ್ತಿರುವ ಕಾಲ. ಇಲ್ಲೂ ಅದೇ ಟೆಕ್ನಿಕ್; ಮನುಷ್ಯನ ಮೂಲಭೂತ ಕಾಮನೆಗಳನ್ನು ತಣಿಸುವುದು. ಮನುಷ್ಯ ಮೂಲತಃ ಕ್ರೂರಿ. ಆತ ಹಿಂಸ್ರಾ ಪಶು. ಆತನಲ್ಲಿರುವ ಆಕ್ರಮಣಶೀಲತೆ ಸೂಕ್ತ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿರುತ್ತದೆ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಟಿ.ವಿ ಧಾರಾವಾಹಿಗಳನ್ನೇ ನೋಡಿ; ಟಿ,ಅರ್.ಪಿ ಗ್ರಾಪ್ ಉರ್ಧ್ವಮುಖಿಯಾಗಿ ಸಾಗಿದ್ದು, ಸಾಗುತ್ತಿರುವುದು; ಸಚ್ ಕಾ ಸಾಮ್ನ್, ಇಮೋಷನಲ್ ಅತ್ಯಾಚಾರ್, ಕನ್ನಡದ ಹಳ್ಳಿಹೈದ ಪ್ಯಾಟೆಗೆ ಬಂದ...ಮುಂತಾದ ಭಾವಕೋಶವನ್ನು ಕಲುಷಿತಗೊಳಿಸುವ ದಾರಾವಾಹಿಗಳಿಗೆ ಮಾತ್ರ. ಇದರ ಜೊತೆಗೆ ಕೃತ್ರಿಮತೆಯನ್ನೇ ಢಾಳಾಗಿ ತೋರಿಸುವ ಸ್ವಯಂವರದ ಧಾರಾವಾಹಿಗಳು, ಖಾಸಗಿ ಬದುಕನ್ನು ನಾಟಕಿಯವಾಗಿ ರಂಗದ ಮೇಲೆ ತಂದು ಸಾರ್ವಜನಿಕರ ಬಾಯಿಗೆ ಎಲೆಯಡಿಕೆಯಾಗಿಸುವ ಕಥೆಯಲ್ಲ ಜೀವನಗಳು; ಬದುಕು ಜಟಕಾ ಬಂಡಿಗಳು. ಸಾವಿನಾಚೆಗೆ ಏನಿದೆ ಎಂಬ ಮನುಷ್ಯನ ಅನಾದಿ ಕಾಲದ ಜಿಜ್ನಾಸೆಯನ್ನು, ಸಹಜ ಕುತೂಹಲವನ್ನು ಮಾರುಕಟ್ಟೆಯ ಮೌಲ್ಯಗಳಿಗೆ ಬಾಗಿಸುತ್ತಿರುವ ಜನ್ಮಾಂತರಗಳು, ಹೀಗೇ ಉಂಟುಗಳು..!

ಟಿ.ಅರ್.ಪಿ ಗ್ರಾಪ್ ಮೇಲೆರಿದಂತೆಲ್ಲಾ ಚಾನಲ್ ಗಳಿಗೆ ಅಡ್ ರೆವಿನ್ಯು ಜಾಸ್ತಿಯಾಗುತ್ತದೆ. ಟಿ.ಅರ್.ಪಿ ಅಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್. ಇದು ಜನಪ್ರಿಯ ಟಿ.ವಿ ಪ್ರೋಗ್ರಾಮ್ ಗಳ ಪಟ್ಟಿಯನ್ನು ಕೊಡುತ್ತದೆ. ಕನ್ನಡದಲ್ಲಿ ಪ್ರತಿ ಬುದವಾರದಂದು ಈ ಪಟ್ಟಿ ಬಿಡುಗಡೆಯಾಗುತ್ತದೆ. ಹಾಗಾಗಿ ವಾರಕೊಮ್ಮೆ ಟಿ.ವಿ ನಿರ್ಮಾಪಕರ ಎದೆಬಡಿತ ಏರುಪೇರಾಗುತ್ತದೆ!. ಯಾಕೆಂದರೆ ರೇಟಿಂಗ್ ಇಲ್ಲ ಎಂಬ ಕಾರಣದಿಂದಾಗೆ ಹಲವು ಸದಭಿರುಚಿಯ ಕಾರ್ಯಕ್ರಮಗಳು ವೈಂಡ್ ಅಫ್ ಆದ ಉದಾಹರಣೆ ಟಿ.ವಿ ಇತಿಹಾಸಕ್ಕಿದೆ.

ಟಿ.ಅರ್.ಪಿಯನ್ನು ಯಾರು ನಿರ್ಧರಿಸುತ್ತಾರೆ? ವಿಕ್ಷಕರು. ಆದರೆ ಎಲ್ಲಾ ವಿಕ್ಷಕರಲ್ಲ. ಆಯ್ದ ವೀಕ್ಷಕರು. ಅದರ ನಿರ್ವಹಣೆಯನ್ನು ಏಜನ್ಸಿಯೊಂದು ಮಾಡುತ್ತದೆ. ಅವರು ಆಯ್ದ ಕೆಲವರ ಮನೆಗಳಲ್ಲಿ ’ಪೀಪಲ್ಸ್ ಮೀಟರ್’ ಎಂಬ ಉಪಕರಣವೊಂದನ್ನು ಅಳವಡಿಸುತ್ತಾರೆ. ಆ ಮನೆಯವರು ಯಾವ ಚಾನಲ್, ಯಾವ ಪ್ರೋಗ್ರಾಮನ್ನು ಎಷ್ಟೊತ್ತು ನೋಡುತ್ತಾರೆ ಎಂಬುದರ ಮೇಲೆ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಏಜನ್ಸಿ ಸಂಯೋಜಿಸುತ್ತದೆ. ಅದೇ ಟಿ.ಅರ್.ಪಿ. ಆದರೆ ಅದರ ನಿಖರತೆಯ ಬಗ್ಗೆಯೇ ಈಗೀಗ ಸಂಶಯ ವ್ಯಕ್ತವಾಗುತ್ತಿದೆ.

ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಒಟ್ಟು ೮ ಟಿ.ಅರ್.ಪಿ ಸೆಂಟರ್ ಗಳಿವೆ.ಅದನ್ನು ಟಿ.ವಿ ಭಾಷೆಯಲ್ಲಿ ಅರ್.ಒ.ಕೆ ಎಂದು ಕರೆಯುತ್ತಾರೆ. ಅಂದರೆ ರೆಸ್ಟ್ ಅಫ್ ಕರ್ನಾಟಕ. ಅವು ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳಿ, ಗದಗ, ಬೆಳಗಾವಿ, ಗುಲ್ಬರ್ಗಾ ಮತ್ತು ರಾಯಚೂರು. ಜಾಹಿರಾತುದಾರರು ಈ ಸೆಂಟರ್ ಗಳಿಗಿಂತಲೂ ಬೆಂಗಳೂರಿಗೇ ಹೆಚ್ಚು ಗಮನ ಕೊಡುತ್ತಾರೆ. ಯಾಕೆಂದರೆ ಬೆಂಗಳೂರಲ್ಲಿ ಹೆಚ್ಚು ದುಡ್ಡು ಓಡಾಡುತ್ತದೆ. ಇಲ್ಲಿಯ ಜನರ ಖರೀದಿ ಶಕ್ತಿ ಜಾಸ್ತಿ ಎಂಬುದು ಅವರ ತರ್ಕ. ಹಾಗಾಗಿ ಈ ನಗರವೊಂದರಲ್ಲೇ ಸುಮಾರು ೧೮೦ ಮನೆಗಳಲ್ಲಿ ಟಿ.ಅರ್.ಪಿ ಮಾಪನವಾದ ’ಪೀಪಲ್ಸ್ ಮೀಟರ್’ ಗಳನ್ನು ಅಳವಡಿಸಲಾಗಿದೆ.

ಇದರರ್ಥ ಇಷ್ಟೆ; ಟಿ.ವಿ ಮಾಧ್ಯಮದವರ ಲೆಕ್ಕಾಚಾರದಲ್ಲಿ ಗ್ರಾಮಾಂತರ ಪ್ರದೇಶದ, ಬಹುಸಂಖ್ಯಾತ ಜನರು ಟಿ.ವಿ ವೀಕ್ಷಕರೇ ಅಲ್ಲ. ಅಡ್ ರೆವಿನ್ಯೂ ತರುವ ಟಿ.ಅರ್.ಪಿ ಸೆಂಟರ್ ನ ಜನರಿಗಾಗಿ ಅವರು ಕಾರ್ಯಕ್ರಮವನ್ನು ತಯಾರಿಸಬೇಕು. ಅಂದರೆ ಆಧುನಿಕ ಮನೋಭಾವದ, ಉಳ್ಳವರ ಮನೋರಂಜನೆಗಾಗಿ ಕಾರ್ಯಕ್ರಮ ಹಣೆಯಬೇಕು. ನಿಜಕ್ಕೂ ಅದೊಂದು ಸವಾಲು. ಸಾಹಸ, ಹಾಸ್ಯ ಮತ್ತು ಭಾವುಕತೆಯ ಹದವಾದ ಮಿಶ್ರಣದ ಕಾರ್ಯಕ್ರಮಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರ ತಯಾರಿಕೆಗೆ ಶ್ರಮ ಮತ್ತು ಪ್ರತಿಭೆ ಬೇಕು. ಮುಖ್ಯವಾಗಿ ಹೃದಯವಂತಿಕೆ ಬೇಕು. ಅದಿಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಪ್ರಸಾರವಾಗುತ್ತಿರುವ ’ಹಳ್ಳಿಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋ ಉತ್ತಮ ಉದಾಹರಣೆ.

ಇಲ್ಲಿ ಎಲ್ಲವೂ ಇದೆ. ಆದರೆ ಹೃದಯವಂತಿಕೆ ಇಲ್ಲ. ಹಳ್ಳಿಯ ಎಳೆಂಟು ಹುಡುಗರನ್ನು ಪೇಟೆಗೆ ತಂದು ಹಾಕಿದ್ದಾರೆ. ಅವರಿಗೆ ನಾಗರಿಕೆ ನಡವಳಿಕೆಗಳನ್ನು[!] ಕಲಿಸಲು ಒಬ್ಬೊಬ್ಬ ಹುಡುಗಿಯರನ್ನು ನೇಮಿಸಲಾಗಿದೆ. ಅವರ ವೇಷ ಭೂಷಣಗಳನ್ನು ನೋಡಿಯೇ ಪಾಪ ಆಹುಡುಗರು ದಂಗಾಗಿರಬೇಕು! ಅಮೇಲೆ ಶುರು ನೋಡಿ, ಅವರಿಗೆ ನಾಗರಿಕ ನಡತೆಯನ್ನು ಕಲಿಸುವ ಪಾಠಗಳು; ಮಾಲ್ ಗಳಲ್ಲಿ ಬಿಕ್ಷೆ ಬೇಡುವುದು, ಬ್ರಿಗೇಡ್ ರೋಡ್ ನಲ್ಲಿ ಹುಡುಗಿಯರ ಮೊಬೈಲ್ ನಂಬರ್ ಗಳನ್ನು ಕಲೆಕ್ಟ್ ಮಾಡುವುದು, ಇಂಗ್ಲೀಷ್ ಕಲಿಯುವುದು, ಯಾರ್ಯರನ್ನೊ ಕಾಡಿ ಬೇಡಿ ಮೆಜೆಸ್ಟಿಕ್ ತಲುಪುವುದು, ಹುಡುಗಿಯರನ್ನು ಹೊತ್ತುಕೊಂಡು ಕೆಸರಿನಲ್ಲಿ ಓಡುವುದು. ಇದೆಲ್ಲಕಿಂತಲೂ ಬೀಬತ್ಸಕರವಾದ ಇನ್ನೊಂದು ಟಾಸ್ಕ್ ಇತ್ತು, ಅತೀ ಹೆಚ್ಚು ಯಾರು ತಿನ್ನುತ್ತಾರೆ, ಕುಡಿಯುತ್ತಾರೆ ಅಂತ. ಅದರಲ್ಲಿ ಸ್ಪರ್ಧಿಗಳಿಗೆ ಗೊತ್ತಿಲ್ಲದಂತೆ ಭೇದಿ ಮಾತ್ರೆ ಹಾಕಿರ್ತಾರೆ. ಆದರೆ ಟಾಯ್ಲೆಟ್ಗೆ ಹೋದ್ರೆ ಸ್ಪರ್ಧೆಯಿಂದ ಹೊರ ಹೋಗಬೇಕಾಗುತ್ತಾದೆ. ದೇಹ ಭಾದೆಯನ್ನು ತಡೆದುಕೊಂಡು ಅವರು ಒದ್ದಾಡುವುದು ನೋಡುವಾಗ ಇದು ಅಮಾನವೀಯ ಅನ್ನಿಸಿಬಿಡುತ್ತಾದೆ. ಇನ್ನು ಆ ಹಳ್ಳಿ ಹುಡುಗರ ಜೋತೆ ಪೇಟೆ ಹುಡುಗಿಯರನ್ನು ರೆಸ್ಲಿಂಗ್ [ಕುಸ್ತಿ] ಆಡಿಸುವುದು ಖಂಡಿತವಾಗಿಯೂ ಆರೋಗ್ಯಕರ ಟಾಸ್ಕ್ ಅನ್ನಿಸುವುದಿಲ್ಲ. ಯಾವ ಮನಸ್ಥಿತಿಯಿಂದ ಅವರು ಪ್ಯಾಟೆಗೆ ಬಂದರೋ ಅದೇ ಮನಸ್ಥಿತಿಯೊಂದಿಗೆ ಅವರು ಹಳ್ಳಿಗೆ ಮರಳಲು ಸಾಧ್ಯವೇ? ಅವರ ಮುಗ್ಧತೆಯನ್ನು ನಾಶ ಮಾಡಿದ ಶಾಪ ಯಾರನ್ನು ತಟ್ಟುತ್ತದೆ?

ಇದೇ ಚಾನಲಿನ ’ಪ್ಯಾಟೆ ಹುಡ್ಗೀರ ಹಳ್ಳಿ ಲೈಪ್’ ಇದಕ್ಕೆ ಹೋಲಿಸಿದರೆ ಚೆನ್ನಾಗಿತ್ತು, ಯಾಕೆಂದರೆ ಹಳ್ಳಿಯಲ್ಲಿ ಮುಕ್ತವಾದ ವಾತಾವರಣವಿರುತ್ತದೆ. ಅವರಲ್ಲಿ ಇನ್ನೂ ಅಂತಃಕರಣ ಉಳಿದಿರುತ್ತದೆ. ಹೊರಗಿನಿಂದ ಬಂದವರನ್ನು ಕೂಡ ಅವರು ಕ್ರಮೇಣ ತಮ್ಮವರೆಂದು ಒಪ್ಪಿಕೊಂಡುಬಿಡುತ್ತಾರೆ. ನಗರದ ಜನತೆಯದು ಕವರ್ಡ್ ಮನಸ್ಥಿತಿ, ಅವರು ಯಾರನ್ನು ನಂಬಲಾರರು. ಹಳ್ಳಿ ಹುಡುಗರಿಗೆ ಮೊಬೈಲ್ ನಂಬರ್ ಕಲೆಕ್ಟ್ ಮಾಡುವುದು, ಲಿಪ್ಟ್ ಪಡೆಯುವುದು ಹಾಗಾಗಿಯೇ ತುಂಬಾ ಕಷ್ಟವಾಗಿದ್ದು. ನಾಗರಿಕ ಜನರ ಕೈಯಲ್ಲಿ ಸಿಕ್ಕು ಅವರು ಪಡುವ ಪರಿಪಾಟಲು ಕಂಡಾಗ ೨೦ ವರ್ಷಗಳ ಹಿಂದೆ ಹಳ್ಳಿಯಿಂದ ನೇರವಾಗಿ ಬೆಂಗಳೂರೆಂಬ ಮಾಯಾಂಗನೆಯ ತೆಕ್ಕೆಗೆ ಬಂದು ಬಿದ್ದ ನನ್ನದೇ ಅನುಭವ ಮರುಕಳಿಸಿದಂತಾಯಿತು. ರಾಜೇಶನೆಂಬ ಹಳ್ಳಿ ಹುಡುಗನಲ್ಲಿ ನನ್ನನ್ನು ನಾನು ಕಂಡುಕೊಂಡೆ.

ಇನ್ನು, ನಿರೂಪಕ ಅಕುಲ್ ಬಾಲಾಜಿಯ ಇಂಗೀಷ್ ಶೈಲಿಯ ಕನ್ನಡ ಉಚ್ಛಾರಣೆ ಮತ್ತು ಅವರು ಹುಡುಗಿಯರನ್ನು ಬಹುವಚನದಲ್ಲೂ ಹುಡುಗರನ್ನು ಏಕವಚನದಲ್ಲೂ ಸಂಬೋಧಿಸುವುದು. ಹುಡಿಗಿಯರಿಗೆ ಗಂಭೀರವಾಗಿ ಬಯ್ಯುವುದು,ಹುಡುಗರಿಗೆ ಅದನ್ನೇ ಗೇಲಿ ಮಾಡುತ್ತಾ ಎಚ್ಚರಿಸುವುದು ಅವರು ನಗರ ಪಕ್ಷಪಾತಿ ಎಂಬುದನ್ನು ತೋರಿಸುತ್ತದೆ. ಇನ್ನು ಸ್ಕ್ರಿಪ್ಟ್ ಮತ್ತು ವಾಯ್ಸ್ ಒವರ್ ವೈನೋದಿಕ ಹಿಂಸೆಗೆ ಅತ್ಯುತ್ತಮ ಉದಾಹರಣೆ. ಅವಕಾಶ ಸಿಕ್ಕಾಗಲೆಲ್ಲಾ ಇಡೀ ಗ್ರಾಮೀಣ ಜನತೆಯನ್ನು, ಅವರ ನಂಬಿಕೆಗಳನ್ನು ಮತ್ತು ಅವರ ಕಪ್ಪು ವರ್ಣವನ್ನು ಲೇವಡಿ ಮಾಡಲಾಗಿದೆ. ಇದಲ್ಲದೆ ಆ ಹುಡುಗರ ಬಾಯಲ್ಲಿ ಪ್ರೀತಿ, ಪ್ರೇಮ, ಮುತ್ತು ಎಂಬ ಮಾತುಗಳನ್ನೆಲ್ಲಾ ಆಡಿಸಿ ಕಾಮನೆಗಳನ್ನು ಕೆರಳಿಸುವ ಪ್ರಯತ್ನವೂ ನಡೆಯುತ್ತಿದೆ.

ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು; ಅಲ್ಲಿ ’ಡಿವೈಡ್ ಅಂಡ್ ರೂಲ್’ ಅಂದರೆ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತದೆಯೆಂದು. ಸ್ಪರ್ಧಿಗಳಲ್ಲೇ ಪೈಪೋಟಿಯನ್ನು ಹುಟ್ಟು ಹಾಕಿ ಪರಸ್ಪರ ಅಪನಂಬಿಕೆಯನ್ನು ಸೃಷ್ಟಿಸುವುದು. ಪ್ರತಿಯೊಬ್ಬರಿಗೂ ಗೆಲ್ಲುವ ತವಕ. ಹಳ್ಳಿಹೈದ....ದಲ್ಲಿ ಪ್ಯಾಟೆ ಸುಂದರಿಯರಿಗೆ ಮಾತ್ರ ಗೆಲ್ಲುವ ತವಕ .ಹೈದರಿಗೆ ಇಲ್ಲಿಂದ ತಪ್ಪಿಸಿಕೊಂಡು ಊರಿಗೆ ಓಡುವ ತುಡಿತ. ಬಹುಶಃ ಕಾರ್ಯಕ್ರಮದ ನಿಬಂಧನೆಗಳು ಮತ್ತು ಆಕರ್ಷಣೆಗಳು ಅವರನ್ನು ’ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ’ ಎಂದು ಕಟ್ಟಿ ಹಾಕಿರಬಹುದು.

ಹಳ್ಳಿ ಜನರ ಬಡತನ, ಅಸಹಾಯಕತೆ ಮತ್ತು ಮುಗ್ಧತೆ ಟಿ.ವಿಯಲ್ಲಿ ಮಾರಾಟದ ಸರಕಾಗುತ್ತಿದೆ. ಅದ್ದೂರಿಯ ಬಂಗಲೆಗಳಲ್ಲಿ ಕುಳಿತು, ಕುರುಕುಲು ತಿಂಡಿ ತಿನ್ನುತ್ತಾ ನಗರಗಳ ಸುಶಿಕ್ಷಿತ ಜನರು ಇದನ್ನು ಎಂಜಾಯ್ ಮಡುತ್ತಾರೆ! ಹಾಗೆಂದು ಅವರನ್ನು ಹೃದಯಹೀನರೆಂದು, ಗ್ರಾಮೀಣ ಜನರನ್ನು ಉಪೇಕ್ಷೆಸುವರೆಂದು ಅನ್ನುವ ಹಾಗಿಲ್ಲ. ಯಾಕೆಂದರೆ ಕಳೆದ ಬಾರಿ ಉತ್ತರ ಕರ್ನಾಟಕದ ಜನತೆ ನೆರೆ ಹಾವಳಿಯಿಂದ ಬದುಕು ಕಳೆದುಕೊಂಡಾಗ ಮುಖ್ಯಮಂತ್ರಿಗಳ ಜೋಳಿಗೆಗೆ ಕೋಟ್ಯಾಂತರ ರೂಪಾಯಿಗಳನ್ನು ಹಾಕಿದವರು ಇದೇ ಪೇಟೆ ಜನರು.

ಇದೇ ನಗರದ ಸೆಲೆಬ್ರಿಟಿಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದ ಹಳ್ಳಿ ಜನರೆದುರು ಅವರ ಖಾಸಗಿ ಬದುಕನ್ನು ತೆರೆದಿಟ್ಟು ಮಾದರಿಗಳನ್ನು ಒಡೆಯುವ ಪ್ರಯತ್ನವೂ ಕಿರು ತೆರೆಯಲ್ಲಿ ನಿರಂತರ ನಡೆಯುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೆಂಬುದು ದೃಶ್ಯ ಮಾಧ್ಯಮದ ನಿಘಂಟಿನಲ್ಲಿಲ್ಲದ ಪದ. ಇದೇ ಚಾನಲ್ ನವರು ಹಿಂದೆ ಸ್ವಯಂವರ ರಿಯಾಲಿಟಿ ಶೋ ಒಂದು ಮಾಡಿದ್ದರು. ಅದರಲ್ಲಿ ಭಾಗವಹಿಸಲು ವಧುಗಳು ಮುಂದೆ ಬರದಾದಾಗ ಕಿರುತೆರೆ ನಟಿಯರನ್ನೇ ಬಾಡಿಗೆ ವಧುಗಳಾಗಿ ತಂದು ವಿವಾಹಕಾಂಕ್ಷಿಗಳನ್ನು ಬೆಚ್ಚಿ ಬೀಳಿಸಿದ ಇತಿಹಾಸವೂ ಇದಕ್ಕಿದೆ.

ನಾನು ಇದನ್ನು ಬರೆಯುವ ಹೊತ್ತಿಗಾಗಲೇ ಪುತ್ತೂರಿನ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮಾಧವ ಭಾವಿಕಟ್ಟೆಯವರು ’ ಹಳ್ಳಿ ಹೈದ ಪ್ಯಾಟೆಗೆ ಬಂದ’ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನಗೊಂಡು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆಗಳನ್ನು ಮಾಡಿಕೊಳ್ಳೊತ್ತಿದ್ದಾರೆ. ಹಳ್ಳಿ ಜನರನ್ನು ಸ್ನಾನ ಮಾಡದವರು, ತಲೆ ಬಾಚಿಕೊಳ್ಳದವರು, ಕಾಡುಜನರಂತೆ ಬದುಕುತ್ತಾರೆ ಎಂಬಂತೆ ಚಿತ್ರಿಸಲಾಗಿದೆ; ಗ್ರಾಮೀಣ ಜನರನ್ನು ಅವಮಾನಿಸಲಾಗಿದೆ ಎಂಬುದು ಅವರ ಆರೋಪ. ನಾನು ಮಾತಾಡಿಸಿದ ಬಹುತೇಕ ಜನರ ಅಭಿಪ್ರಾಯವೂ ಇದೇ ಆಗಿದೆ.


’ಹಳ್ಳಿ ಹೈದ ಪ್ಯಾಟೆಗೆ ಬಂದ’ ಎಂಬ ರಿಯಾಲಿಟಿ ಶೋದ ಕೆಲವು ಎಪಿಸೋಡುಗಳನ್ನು ನೋಡಿದೆ. ಅದು ನನಗೆ ಇಷ್ಟನ್ನೆಲಾ ಬರೆಯಲು ಪ್ರಚೋದಿಸಿತು. ಅದಕ್ಕಾಗಿ ಆ ಶೋ ದ ಕ್ರಿಯೇಟಿವ್ ಹೆಡ್ ಗೆ ನನ್ನ ಕೃತಜ್ನತೆಗಳು!

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]

Thursday, September 2, 2010

ದ್ರೌಪದಿಗೆ ಕೃಷ್ಣನಂತೆ.......!?





ಈಗೀಗ ಒಂಟಿಯಾಗಿ ಇರುವುದೇ ಹೆಚ್ಚು ಖುಷಿಯನ್ನು ಕೊಡುತ್ತದೆ. ಯಾವಾಗಲೂ ಅಷ್ಟೇ. ಮೌನದೊಡನೆ ಸಂವಾದ ಸಾಧ್ಯವಾಗುವಷ್ಟು ಶಬ್ದಗಳ ಜೊತೆ ಆಗುವುದಿಲ್ಲ. ಚಿಕ್ಕಂದಿನಿಂದಲೂ ಮನೆ, ಶಾಲೆಗಳಲ್ಲಿ ಕಲಿತದ್ದಕ್ಕಿಂತಲೂ ತೋಟ, ಗದ್ದೆ, ಕಾಡು, ನದಿ, ಗೋಮಾಳಗಳಲ್ಲಿ ಕಲಿತದ್ದೇ ಹೆಚ್ಚು.

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಎಲ್ಲರೂ ಹಾಗೇ. ಬಾಲ್ಯದಲ್ಲಿ ಗೋಪಾಲಕರಾಗುತ್ತಾರೆ, ಇಲ್ಲವೆ ಗೋಪಿಕೆಯರಾಗುತ್ತಾರೆ. ಅವರ ಸುತ್ತಮುತ್ತ ದನಕರುಗಳಿರುತ್ತವೆ; ನದಿಯಿರುತ್ತವೆ; ಕಾಡಿರುತ್ತದೆ; ಬೆಟ್ಟಗುಡ್ಡವಿರುತ್ತದೆ; ಮನೆಯವರ ಜೊತೆ ಮುನಿಸಿಕೊಂಡರೆ ಸುತ್ತಮುತ್ತ ಯಶೋಧೆಯರಿರುತ್ತಾರೆ; ಆಳುಗಳಿರುತ್ತಾರೆ. ಒಟ್ಟಿನಲ್ಲಿ ಸಮೃದ್ಧ ಬಾಲ್ಯ.

ಈಗ ಬೆಂಗಳೂರಿನಲ್ಲಿರುವ ನನಗೆ ಒಂಟಿತನ ಅನಿರ್ವಾಯ. ಅದು ಆಧುನಿಕ ಬದುಕಿನ ಕೊಡುಗೆ! ಎರಡು ವರ್ಷಗಳ ಹಿಂದೆ ನಾನು ಬ್ಲಾಗ್ ಆರಂಭಿಸಿದಾಗ ಇದನ್ನೇ ಬರೆದುಕೊಂಡಿದ್ದೆ;
ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ
ಧರ್ಮಸಂಕಟಗಳಲಿ, ಜೀವಸಮರದಲಿ
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ
ನಿರ್ಮಿತ್ರನಿರಲು ಕಲಿ-ಮಂಕುತಿಮ್ಮ.

ಡಿ.ವಿ.ಜಿಯವರ ಕಗ್ಗದ ಈ ಪದ್ಯ ನನ್ನ ಉತ್ಕಟ ಕ್ಷಣಗಳಲ್ಲಿ ನನಗೆ ಎಲ್ಲವನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ. ಹಾಗಿದ್ದರೂ ಬಾಲ್ಯದಿಂದಲೂ ಗೆಳೆತನದ ಬಗ್ಗೆ ನನಗೆ ತುಂಬಾ ಉದಾತ್ತವಾದ ಭಾವನೆಯಿತ್ತು; ಆದರ್ಶ ಕಲ್ಪನೆಯಿತ್ತು, ಇಂದಿಗೂ ಅಷ್ಟು ಸುಲಭವಾಗಿ ನಾನು ಯಾರನ್ನೂ ’ಇವರು ನನ್ನ ಪ್ರೆಂಡ್’ ಎಂದು ಹೇಳಿಕೊಳ್ಳುವುದಿಲ್ಲ. ಇವರು ನನ್ನ ಪರಿಚಯದವರು, ಕ್ಲಾಸ್ ಮೇಟ್, ಕೊಲಿಗ್, ಪ್ಯಾಮಿಲಿ ಪ್ರೆಂಡ್, ರಿಲೇಟಿವ್, ಬೇಕಾದವರು ಎಂದೆಲ್ಲಾ ಹೇಳಿಕೊಳ್ಳುತ್ತೇನೆ. ಆದರೆ ’ಪ್ರೆಂಡ್’ ಎಂಬ ಪದವನ್ನು ಅತ್ಯಂತ ಜಾಗರೂಕತೆಯಿಂದ ಉಪಯೋಗಿಸುತ್ತೇನೆ. ಯಾರಾದರೂ ’ ನಿಂಗೆ ತುಂಬಾ ಬೇಕಾದವರು, ಆತ್ಮೀಯರಾದವರು ಯಾರು?’ ಎಂದು ಕೇಳಿದರೆ ತಕ್ಷಣ ಕಣ್ಮುಂದೆ ದ್ರೌಪದಿಯ ಸಖ ಕೃಷ್ಣ ಕಾಣಿಸಿಕೊಳ್ಳುತ್ತಾನೆ.

ದ್ರೌಪದಿಯ ಸಖ ಕೃಷ್ಣ ಎನ್ನಲು ಕಾರಣವಿದೆ, ಆತ ಆಕೆಯ ಬೌದ್ಧಿಕ ಸಂಗಾತಿ. ಇಡೀ ಮಹಾಭಾರತದಲ್ಲಿ ದ್ರೌಪದಿಯ ಶಕ್ತಿಯನ್ನು ಅರಿತವನು ಕೃಷ್ಣ ಮಾತ್ರ. ಅವಳ ಸಮಗ್ರ ವ್ಯಕ್ತಿತ್ವದ ಆಳ ವಿಸ್ತಾರಗಳು ಆತನಿಗೆ ಗೊತ್ತಿತ್ತು. ಎಲ್ಲರೆದುರಲ್ಲಿ ಅವರವರ ಭಾವಕ್ಕೆ ತಕ್ಕಂತೆ ಗೋಚರವಾಗುತ್ತಿದ್ದ ಕೃಷ್ಣ ಒಂದು ಮೆಟ್ಟಿಲು ಎತ್ತರದಲ್ಲಿಯೇ ಇರುತ್ತಿದ್ದ. ಆದರೆ ದ್ರೌಪದಿಯ ಎದುರಿನಲ್ಲಿ ಮಾತ್ರ ಸಮಾನ ನೆಲೆಯಲ್ಲಿ ಸ್ಪಂದಿಸುತ್ತಿದ್ದ, ಅವರ ನಡುವೆ ಹೃದಯ ಸಂವಾದವಿತ್ತು. ಮೌನದಲ್ಲೂ ಮಾತಿತ್ತು.

ದ್ರೌಪದಿ ಅಸಹಾಯಕ ಹೆಣ್ಣಲ್ಲ. ಆದರೂ ನೆರವು ಬೇಕೆಂದಾಗ ಅವಳು ಯಾಚಿಸಿದ್ದು ತನ್ನ ವೀರಾಧಿವೀರ ಗಂಡರನ್ನಲ್ಲ. ಆಪತ್ಬಾಂಧವ ಕೃಷ್ಣನನ್ನು. ಅವನಲ್ಲಿ ಆಕೆಗೆ ಅಂತಹ ನಂಬಿಕೆಯಿತ್ತು. ಗಂಡು-ಹೆಣ್ಣಿನ ನಡುವಿನ ಸಂಬಂಧಕ್ಕೆ ಹೊಸ ವ್ಯಾಖ್ಯೆಯನ್ನು ಬರೆದವರು ಅವರು.

ಪ್ರೀತಿ ದೇವನಂತಿರುವ, ಬೆಚ್ಚನೆಯ ಭಾವವನ್ನು ಮೂಡಿಸುವ ಆ ಕೃಷ್ಣ ಸದಾ ನನ್ನ ಜತೆಗಿರುತ್ತಾನೆ. ಅವನ ಕಿರುಬೆರಳನ್ನು ಹಿಡಿದು, ಸಮುದ್ರಗುಂಟ ಹೆಜ್ಜೆ ಹಾಕುತ್ತಾ ಬದುಕಿನ ಅನೇಕ ಸವಾಲುಗಳನ್ನು ನಾನು ಎದುರಿಸಿದ್ದೇನೆ.

ನಿಜ, ಪರಿಪೂರ್ಣವಾದ ಸಂಬಂಧವೊಂದಕ್ಕಾಗಿ ನಾವೆಲ್ಲರೂ ಸದಾ ಹಾತೊರೆಯುತ್ತಿರುತ್ತೇವೆ. ಆ ಹುಡುಕಾಟ ನಮ್ಮನ್ನು ಎಲ್ಲೆಲ್ಲಿಯೋ ಕೊಂಡೊಯ್ಯುತ್ತದೆ. ಅದೃಷ್ಟವಿದ್ದರೆ ಒಂಚೂರಾದರೂ ದಕ್ಕೀತು, ಇಲ್ಲವದಾರೆ ನಿರಾಶೆ, ದುಃಖ, ಹತಾಶೆ ತಪ್ಪಿದ್ದಲ್ಲ. ಯಾಕೆಂದರೆ ಪರಿಪೂರ್ಣತೆ ಎನ್ನುವುದೇ ಒಂದು ಆದರ್ಶ. ಅದು ಎಂದೂ ವಾಸ್ತವವಾಗುವುದಿಲ್ಲ. ಆದರೆ ಕೃಷ್ಣನದು ಪರಿಪೂರ್ಣವಾದ ವ್ಯಕ್ತಿತ್ವ. ಅವನ ವ್ಯಕ್ತಿತ್ವ ಎಲ್ಲವನ್ನೂ, ಎಲ್ಲರನ್ನೂ ತನ್ನೊಳಗೆ ಲೀನವಾಗಿಸಿಕೊಳ್ಳುತ್ತದೆ. ಒಬ್ಬ ಸ್ತ್ರೀ ಬಯಸುವ ಎಲ್ಲವೂ ಅವನಲ್ಲಿದೆ.

ಒಬ್ಬ ಸ್ತ್ರೀಯ ನಿಡಿದಾದ ಬದುಕಿನಲ್ಲಿ ಪುರುಷ ವಹಿಸುವ ಎಲ್ಲಾ ಪಾತ್ರಗಳನ್ನು ಒಬ್ಬನೇ ಕೃಷ್ಣ ವಿವಿಧ ರೂಪಗಳಲ್ಲಿ ವಹಿಸಿಬಿಡುತ್ತಾನೆ. ಬಾಲ್ಯದಲ್ಲಿ ಈಕೆ ಗೋಪಿಕೆಯಾದರೆ ಆತ ಮುರಳಿಲೋಲ. ಯೌವನದಲ್ಲಿ ಇವಳು ರಾಧೆಯಾದರೆ ಆತ ರಾಸಲೀಲೆಯಾಡುವ ಮಾಧವ. ಆದರ್ಶ ದಾಂಪತ್ಯದಲ್ಲಿ ಇವಳು ರುಕ್ಮಿಣಿಯಾದರೆ ಅವನು ಕೃಷ್ಣ. ತಾಯ್ತನದಲ್ಲಿ ಇವಳು ಯಶೋಧರೆಯಾದರೆ ಅವನು ಬೆಣ್ಣೆಚೋರ. ದಾಂಪತ್ಯ ಕಲಹದಲ್ಲಿ ಇವಳು ಸತ್ಯಭಾಮೆಯಾದರೆ ಅವನು ಓಲೈಸುವ ಚಿತ್ತಚೋರ. ಯಾರೂ ಇಲ್ಲವೆಂದು ಮೊರೆಯಿಟ್ಟರೆ ಅವನು ಅನಾಥರಕ್ಷಕ.

ಇಷ್ಟೆಲ್ಲಾ ಆಗಿದ್ದರೂ ಒಬ್ಬ ದ್ರೌಪದಿಗೆ ಮಾತ್ರ ಅವನು ಆತ್ಮಬಂಧು. ಯಾಕೆಂದರೆ ಮೇಲಿನ ಯಾವ ಸಂದರ್ಭದಲ್ಲೂ ಅವಳಿಗೆ ಕೃಷ್ಣ ಆದರ್ಶವಾಗಿರಲಿಲ್ಲ. ಅವಳು ಸಾಮಾನ್ಯ ಹೆಣ್ಣಾಗಿರಲಿಲ್ಲ. ಅವಳ ಹುಟ್ಟಿಗೆ ನಿರ್ಧಿಷ್ಟ ಕಾರಣವಿತ್ತು. ಹಾಗಾಗಿ ಅವಳು ಋಣಾನುಬಂಧಕ್ಕೆ ಒಳಗಾದವಳಲ್ಲ; ಯಾರಿಗೂ ಸೇರಿದವಳಲ್ಲ. ತಾನು ಯಾರಿಗೋ ಸೇರಿದವಳಾಗಿರಬೇಕೆಂದು ಪ್ರತಿಯೊಬ್ಬ ಹೆಣ್ಣೂ ಬಯಸುತ್ತಾಳೆ. ಯಾಕೆಂದರೆ ಹೆಣ್ಣಿನಲ್ಲೊಂದು ಅರ್ಪಣಾ ಭಾವವಿರುತ್ತದೆ. ದ್ರೌಪದಿಗೆ ಅರ್ಪಿಸಿಕೊಳ್ಳುವುದಕ್ಕೆ ಯಾರೂ ಇರಲಿಲ್ಲ!.

ತಂದೆ ದ್ರುಪದನಿಗೆ ದ್ರೋಣನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಅವಳೊಂದು ವಾಹಕವಾಗಿದ್ದಳು. ಪಾಂಡವರು ಅವಳನ್ನು ಬಯಸಿ ಪಡೆದವರಲ್ಲ. ಹಾಗಿರುವಾಗ ಅವಳು ಜೀವದುಂಬಿ ಯಾರನ್ನು ಪ್ರೀತಿಸಬೇಕು? ಮಕ್ಕಳನ್ನೇ? ಅವು ಕೂಡಾ ಅವಳ ದೇಹವನ್ನು ಹರಿದು ಹಂಚಿ ಉಂಡ ಗಂಡಸರದಲ್ಲವೇ? ಅಗ್ನಿಯಲ್ಲಿ ಹುಟ್ಟಿದವಳು; ಅಗ್ನಿಯಂತೆಯೇ ತೀಕ್ಷಣವಾಗಿ ಯೋಚಿಸುವವಳು. ಮೇಲೆ ತಣ್ಣಗಿದ್ದರೂ ಒಳಗೊಳಗೇ ಕಠೋರನಾಗಿದ್ದ ಕೃಷ್ಣ ಅವಳಿಗೆ ಹತ್ತಿರನಾದ. ಅವನನ್ನೇ ಅವಳು ಬುದ್ದಿಪೂರ್ವಕವಾಗಿ ನಂಬಿದಳು.

ಸಾಮಾನ್ಯ ಗೃಹಿಣಿಯೂ ಸೇರ್‍ಇದಂತೆ ಹೆಣ್ಣೊಬ್ಬಳ ಮನಸ್ಸಿನಲ್ಲಿ ಎಷ್ಟೊಂದು ತೀವ್ರವಾದ ಭಾವನೆಗಳು ಇರುತ್ತವೆಯೆಂದರೆ ಅದನ್ನು ಒಬ್ಬ ಕೃಷ್ಣ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಅದೂ ದ್ರೌಪದಿಗೊಲಿದ ಕೃಷ್ಣ ಮಾತ್ರ!

ಒಬ್ಬ ಹೆಣ್ಣುಮಗಳು ದ್ರೌಪದಿಯ ಮನಸ್ಥಿತಿಯನ್ನು ತಲುಪುವುದು ನಲುವತ್ತು ದಾಟಿದ ಮೇಲೆಯೇ. ಈ ಹೊತ್ತಿಗಾಗಲೇ ಪುರುಷನೊಬ್ಬ ಆಕೆಯ ಬದುಕಿನಲ್ಲಿ ಏನೇನು ಪಾತ್ರ ವಹಿಸಬಹುದೋ ಅದೆಲ್ಲವನ್ನೂ ವಹಿಸಿ ಆಗಿರುತ್ತದೆ. ತಂದೆ, ಅಣ್ಣ-ತಮ್ಮ, ಗೆಳೆಯ, ಗಂಡ, ಮಗ, ಸಹೋದ್ಯೊಗಿ, ಮೇಲಾಧಿಕಾರಿ, ನೆರೆಮನೆಯಾತ- ಇವೆಲ್ಲಾ ಮುಖಗಳ ಪರಿಚಯ ಆಕೆಗಾಗಿದೆ. ಹೆಣ್ಣೊಬ್ಬಳ ಪಾಲಿಗೆ ಈ ’ಗಂಡಸು’ ಅನ್ನುವವನು ’ಇಷ್ಟೇ’ ಎಂಬ ಅನುಭವ ಅವಳಿಗೆ ಸ್ವಲ್ಪವಾದರೂ ಆಗಿರುತ್ತದೆ. ಈ ಅನುಭವ ಗಂಡಸಿನೆಡೆಗೆ ನೋಡುವ ಆಕೆಯ ನೋಟವನ್ನು ಬದಲಿಸಿದೆ.

ಸಾಮಾನ್ಯ ಗೃಹಿಣಿಯಾದರೆ ’ಇಷ್ಟೇ’ ಎಂಬ ತೀರ್ಮಾನದೊಂದಿಗೆ ಬದುಕು ಯಥಾ ಪ್ರಕಾರ ಸಾಗುತ್ತಿರುತ್ತದೆ. ಅವಳು ಮೇಲ್ನೋಟಕ್ಕೆ ಸಂತೃಪ್ತ ಗೃಹಿಣಿಯಾಗಿಯೂ ಕಾಣಿಸಿಕೊಳ್ಳಬಹುದು. ಆದರೆ ಸ್ವಲ್ಪ ವಿಭಿನ್ನವಾಗಿ ಯೋಚಿಸುವ ಮಹಿಳೆಯರು ’ಇನ್ಯಾವುದಕ್ಕೋ’ ಹುಡುಕಾಟ ಆರಂಭಿಸಿಬಿಡುತ್ತಾರೆ. ನನ್ನ ಮಟ್ಟಿಗೆ ಸೀಮಿತಗೊಳಿಸಿ ಹೇಳುವುದಾರೆ ಅದು ಕೃಷ್ಣನಿಗಾಗಿ ದ್ರೌಪದಿ ಹುಡುಕಾಡಿದಂತೆ.

ಹಿಂದೆಯೇ ಹೇಳಿದಂತೆ ಈ ಹುಡುಕಾಟ ದಾರಿ ತಪ್ಪಿದರೆ? ಅತ್ಯಂತ ಪ್ರಕ್ಷುಬ್ದಗೊಂಡ ಮನಸ್ಥಿತಿಯಲ್ಲಿ ಅದರ ಭಾರವನ್ನು ಎಲ್ಲಿಯಾದರೂ ಇಳುಹಬೇಕೆಂದು ಅನ್ನಿಸುವುದು ಸಹಜ. ಆದರೆ ಕೈ ನೀಡಲು ಯಾರೂ ಇಲ್ಲದಿದ್ದರೆ? ಅಂಥ ಸನ್ನಿವೇಶದಲ್ಲಿ ತಲೆಯ ಮೇಲಿನ ಭಾರವನ್ನು ಹೊತ್ತು ಹಾಕಲೇಬೇಕು.

ಅಂಥದೊಂದು ಸ್ಥಿತಿಯಲ್ಲಿ ನಾನೊಮ್ಮೆ ಏನು ಮಾಡಿದೆ ಗೊತ್ತಾ? ಚಂದ್ರಶೇಖರ ಪಾಟೀಲರ ’ಲೇಖಕರ ವಿಳಾಸ ಪುಸ್ತಕ’ ನನ್ನಲ್ಲಿತ್ತು.ಅದರಲ್ಲಿ ನಾನು ತುಂಬಾ ಮೆಚ್ಚುವ ಲೇಖಕರೊಬ್ಬರ ದೂರವಾಣಿ ನಂಬರ್ ಇತ್ತು. ಸಭೆ ಸಮಾರಂಭಗಳಲ್ಲಿ ಅವರನ್ನು ನೋಡಿದ್ದೆ. ಕೆಲವೊಮ್ಮೆ ಮಾತಾಡಿಸಿಯೂ ಇದ್ದೆ. ಅವರಿಗೆ ಕರೆ ಮಾಡಿ ನನ್ನ ಸಮಸ್ಯೆ ಹೇಳಿಕೊಳ್ಳಲೆತ್ನಿಸಿದೆ. ಹೇಳ ಹೇಳುತ್ತಲೇ ಬಿಕ್ಕಳಿಸಿ ಅತ್ತುಬಿಟ್ಟೆ. ಅವರು ಸಮಾಧಾನದಿಂದಲೇ ಆಲಿಸಿದರು. ಒಂದೂ ಮಾತಾಡದಿದ್ದರೂ ಕೆಲವೊಮ್ಮೆ ’ಆಲಿಸುವ’ ಕಿವಿಗಳು ಎಷ್ಟು ಸಾಂತ್ವನ ನೀಡುತ್ತವೆ ಅಲ್ಲವೇ? ನನ್ನ ಗೆಳತಿಯೊಬ್ಬಳ ಬದುಕಿನಲ್ಲಿ ನಡೆದ ಘಟನೆಯಿದು; ಕನ್ನಡದ ಸಂವೇದನಾಶೀಲ ಬರಗಾರರೊಬ್ಬರ ಮೇಲೆ ಆಕೆಗೆ ಹುಚ್ಚು ಮೋಹ, ಅವರ ಬರವಣಿಗೆಯಿಂದ ಪ್ರಭಾವಿತಳಾಗಿ ಹಿಂದು ಮುಂದು ಯೋಚಿಸದೆ ಅವರನ್ನವಳು ಆರಾಧಿಸತೊಡಗಿದಳು. ಅದೂ ನಿರಂತರ ಆರು ವರ್ಷಗಳ ಕಾಲ.

ನಮ್ಮ ಬರಹಗಾರರನ್ನು ಹತ್ತಿರದಿಂದ ಬಲ್ಲವರಿಗೆ ಅವರ ವಿಕ್ಷಿಪ್ತ ನಡವಳಿಕೆಗಳ ಪರಿಚಯ ಇರುತ್ತದೆ, ಅವರ ಭಾವ ಜಗತ್ತೇ ಬೇರೆ. ಬಾಹ್ಯ ಜಗತ್ತೇ ಬೇರೆ. ಇದು ಅರಿವಾಗುವ ಹೊತ್ತಿಗೆ ಅವಳು ಬಹು ದೂರ ಸಾಗಿ ಬಂದಿದ್ದಳು. ಕೊನೆಗೆ ಡಿಪ್ರೆಶನ್ನಿಗೆ ಒಳಗಾದಳು. ಅದರಿಂದ ಹೊರಬರಲು ಅವಳು ಮಾನಸಿಕ ತಜ್ನರ ಮೊರೆ ಹೋಗಬೇಕಾಯಿತು.

ಕೃಷ್ಣನ ಹುಡುಕಾಟ ಹೊರಗಡೆ ಯಾಕೆ ಆಗಬೇಕು, ಗಂಡನೇ ಗೆಳೆಯನೂ ಆಗಲಾರನೇ? ಎಂದು ಕೆಲವರಿಗನ್ನಿಸಬಹುದು. ಆದರೆ ಗಂಡ ಯಾವತ್ತಿದ್ದರೂ ಗಂಡನೇ!. ಆ ಶಬ್ದದ ಅರ್ಥವೇ ’ಒಡೆಯ’. ಆತ ತನ್ನ ಒಡೆತನದ ಹಕ್ಕನ್ನು ಚಲಾಯಿಸಿಯೇ ಚಲಾಯಿಸುತ್ತಾನೆ. ಎಷ್ಟಾದರೂ ಗಂಡಸು ದೈಹಿಕವಾಗಿ ಐಕ್ಯವಾಗುವುದನ್ನು ಬಯಸುತ್ತಾನೆ. ಹೆಣ್ಣು ಮಾನಸಿಕವಾಗಿ ಐಕ್ಯವಾಗುವ ಕನಸು ಕಾಣುತ್ತಾಳೆ. ಹಾಗಾಗಿ ಕೆಲವೊಂದು ಸೂಕ್ಷ್ಮಭಾವನೆಗಳು, ಗುಟ್ಟುಗಳು, ತಲ್ಲಣಗಳನ್ನು ಹಂಚಿಕೊಳ್ಳಲು ಹೆಣ್ಣೊಬ್ಬಳು ’ಕೃಷ್ಣ’ನನ್ನು ಹಂಬಲಿಸುವುದು ತಪ್ಪೆಂದು ನನಗೆ ತೋರುವುದಿಲ್ಲ.

ಅದರೆ ನನಗೆ ಗೊತ್ತಿದೆ, ’ಕೃಷ್ಣ’ ನಮಗೆ ಎಂದೂ ಸಿಗಲಾರ. ಸಿಗಬಾರದು ಕೂಡಾ. ಹುಡುಕಾಟ ನಿರಂತರವಾಗಿರಬೇಕು. ಅವನ ಮುರಳಿಯ ದಿವ್ಯಗಾನ ಸದಾ ನಮ್ಮ ಕಿವಿಯಲ್ಲಿ ಮೊರೆಯುತ್ತಿರಬೇಕು. ಆ ಮೂಲಕ ನಮ್ಮ ದುರ್ಭರ ಕ್ಷಣಗಳನ್ನು ಗೆಲ್ಲುವ ಅಂತಃಶಕ್ತಿ ನಮ್ಮಲ್ಲೇ ಮೂಡಿಬರಬೇಕು. ಆ ಧೀಶಕ್ತಿ ಸ್ತ್ರೀಯರಲ್ಲಿ ಇದೆ ಎಂಬುದು ನನ್ನ ಬಲವಾದ ನಂಬಿಕೆ.

[೨೦೦೪ರಲ್ಲಿ ’ಹಂಗಾಮ’ ಕ್ಕಾಗಿ ಬರೆದ ಬರಹವನ್ನು ಒಂಚೂರು ಎಡಿಟ್ ಮಾಡಿದ್ದೇನೆ]

Thursday, August 26, 2010

’ಸ್ಮೃತಿ ವಿಸ್ಮೃತಿ; ಭಾರತೀಯ ಸಂಸ್ಕೃತಿ’- ವಿಭಿನ್ನ ಚಿಂತನೆಯ ಕೃತಿ


ಭಾನುವಾರ, ಆಗಸ್ಟ್ ೨೯ರಂದು ಬೆಳಿಗ್ಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಸ್.ಎನ್. ಬಾಲಗಂಗಾಧರ ರಾವ್ ಅವರ ”ಹೀದನ್ ಇನ್ ಹಿಸ್ ಬ್ಲೈಂಡ್ನೆಸ್” ಕೃತಿಯ ಕನ್ನಡಾನುವಾದ ”ಸ್ಮೃತಿ ವಿಸ್ಮೃತಿ; ಭಾರತೀಯ ಸಂಸ್ಕೃತಿ” ಬಿಡುಗಡೆಯಾಗಲಿದೆ.

ಕನ್ನಡಿಗರಾದ ಬಾಲಗಂಗಾಧರನಾಥರು ಕಳೆದ ಮೂರು ದಶಕಗಳಿಂದ ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ವಿಭಾಗದ ನಿರ್ದೇಶಕರಾಗಿದ್ದಾರೆ. ವಿಭಿನ್ನ ಮಾನವ ಸಂಸ್ಕೃತಿಗಳ ಕುರಿತು ಪರ್ಯಾಯವಾದ ದೃಷ್ಟಿಕೋನವೊಂದು ಬೆಳೆಸುವ ನಿಟ್ಟಿನಲ್ಲಿ ಅವರು ಸಂಶೋಧನೆಯನ್ನು ಕೈಗೊಂಡಿದ್ದಾರೆ. ಅದರ ಫಲಶ್ರುತಿಯಾಗಿ ಈ ಪುಸ್ತಕ ಹೊರಬಂದಿದೆ.

ಪಾಶ್ಚಾತ್ಯ ಸಂಸ್ಕೃತಿ ಚಿಂತಕರ ಪ್ರಕಾರ, ಎಲ್ಲಾ ಸಂಸ್ಕೃತಿಗಳು ಒಂದಿಲ್ಲೊಂದು ಪ್ರಕಾರದ ರಿಲೀಜನ್ ಅನ್ನು ಹೊಂದಿರುತ್ತವೆ; ರಿಲೀಜನ್ ಗಳು ಇಲ್ಲದ ಸಂಸ್ಕೃತಿಗಳೇ ಇಲ್ಲ.ಆದರೆ ಬಾಲಗಂಗಾಧರನಾಥರು ಪಾಶ್ಚ್ಯಾತ್ಯರ ಗ್ರಹಿಕೆಯನ್ನು ಅಲ್ಲಗೆಳೆಯುತ್ತಾ’ ರಿಲೀಜನ್ ಸಾಂಸ್ಕೃತಿಕ ಸಾರ್ವತಿಕವಲ್ಲ’ ಎಂದು ವಾದಿಸುತ್ತಾರೆ. ಅವರ ವಾದವು ಮುಂದುವರೆದು ಹೇಗೆ ಕ್ರಿಶ್ಚಿಯನ್ ಥಿಯಾಲಜಿಯು ಎಲ್ಲಾ ಸಂಸ್ಕೃತಿಗಳು ಒಂದಿಲ್ಲೊಂದು ಪ್ರಕಾರದ ರಿಲೀಜನ್ನುಗಳನ್ನು ಹೊಂದಿದೆ ಎಂದು ಪಾಶ್ಚಿಮಾತ್ಯಾರು ಗ್ರಹಿಸಿಕೊಳ್ಳುವಂತೆ ಹಾಗು ಅದರಿಂದುಂಟಾದ ಪರಿಣಾಮಗಳೇನು? ಎಂಬ ಪ್ರಶ್ನೆಯ ಕುರಿತು ತೀರಾ ತರ್ಕಬದ್ಧವಾಗಿ, ಹಾಗು ವಿವರಣಾತ್ಮಕವಾಗಿ ಚರ್ಚಿಸಿದ್ದಾರೆ. ಭಾರತದ ಇಂದಿನ ಸಂದರ್ಭದಲ್ಲಿ ಕೂಡ ಹಲವಾರು ಬಗೆ ಹರಿಯದ ಸಮಸ್ಯೆಗಳನ್ನು ಅರ್ಥ್ಯೈಸಿಕೊಳ್ಳಲು ಈ ಪುಸ್ತಕ ನೆರವಾಗುತ್ತದೆ.

೫೭೨ ಪುಟಗಳ ಈ ಪುಸ್ತಕದಲ್ಲಿ ಒಟ್ಟು ನಾಲ್ಕು ಭಾಗಗಳಿವೆ; ೧೨ ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯದಲ್ಲಿ ರಿಲಿಜನ್ನಿನ ವಿದ್ವಾಂಸರಲ್ಲಿ ಇರುವ ಅಸಂಗತತೆಯನ್ನು ಲೇಖಕರು ಎತ್ತಿ ತೋರಿಸುತ್ತಾರೆ.
೨,೩,೪ನೇ ಅಧ್ಯಾಯಗಳು ರಿಲಿಜನ್ನು ಎಲ್ಲಾ ಸಂಸ್ಕೃತಿಗಳಿಗೂ ಸಾಮಾನ್ಯವಾದ ಸಂಗತಿ ಎಂಬ ಧೋರಣೆಯ ಉಗಮ,ಮತ್ತು ವಿಕಾಸ ಹೇಗಾಯಿತು? ಪ್ರಪಂಚದ ತುಂಬೆಲ್ಲಾ ಹಿಂದೂಯಿಸಂ, ಶಿಂಟೋಯಿಸಂ ಇತ್ಯಾದಿ ರಿಲಿಜನ್ ಗಳು ಹೇಗೆ ಸೃಷ್ಟಿಯಾದವು ಎಂಬುದರ ಐತಿಹಾಸಿಕ ಅವಲೋಕನವಾಗಿದೆ.
೫,೬,೭ನೇ ಅಧ್ಯಾಯಗಳು ರಿಲಿಜನ್ನಿನ ಕುರಿತ ಆಧುನಿಕ ಸಿದ್ಧಾಂತಗಳು ಥಿಯಾಲಜಿಗಳನ್ನು ತಿರಸ್ಕರಿಸಿ ವೈಜ್ನಾನಿಕ ವಿಧಾನದಲ್ಲಿ ರಿಲಿಜನ್ನಿನ ಅಧ್ಯಯನವನ್ನು ನಡೆಸುತ್ತಿವೆಯೆಂಬುದಾಗಿ ಹೇಳಿಕೆಯಿದ್ದರೂ ಕೂಡ ಅವು ಮೂಲತಃ ಥಿಯಾಲಜಿಯದೇ ಸೆಕ್ಯೂಲರ್ ರೂಪಗಳು ಎಂಬುದನ್ನು ನಿರ್ದೇಶಿಸುತ್ತದೆ.
೮,೯, ೧೦ನೇ ಅಧ್ಯಾಯಗಳಲ್ಲಿ ಲೇಖಕರು ರಿಲಿಜನ್ನಿನ ಕುರಿತು ಸಿದ್ಧಾಂತವನ್ನು ಕಟ್ಟುವ ಪ್ರಯತ್ನಕ್ಕೆ,
ತೊಡಗುತ್ತಾರೆ.
೧೧ ಮತ್ತು ೧೨ನೇ ಅಧ್ಯಾಯಗಳಲ್ಲಿ ರಿಲಿಜನ್ ಇಲ್ಲದ ಸಂಸ್ಕೃತಿಗಳಿಗೂ ಅದು ಇರುವ ಸಂಸ್ಕೃತಿಗಳಿಗೂ ನಡುವೆ ತುಲನಾತ್ಮಕ ಅಧ್ಯಯನವನ್ನು ನಡೆಸಬಹುದಾದ ಸಾಧ್ಯತೆಯನ್ನು ಶೋಧಿಸುತ್ತಾರೆ.

ಪುಸ್ತಕದ ಮುಖಪುಟದ ಆಯ್ಕೆಯನ್ನು ಎಷ್ಟು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡಿದ್ದಾರೆ ಅಂದರೆ ಪುಸ್ತಕದ ಹೂರಣವನ್ನು ಚಿತ್ರವೇ ಹಿಡಿದಿಟ್ಟುಕೊಂಡಿರುವಂತಿದೆ.ಇದು ಮೂಲತ ನರಸಿಂಹನ ಚಿತ್ರ.ಲುಡುವಿಕೋ ವಾರ್ಥೆಮಾ ಎಂಬ ಇಟಲಿ ಪ್ರವಾಸಿ ೧೫೦೫ರಲ್ಲಿ ಕ್ಯಾಲಿಕಟಿನ ರಾಜನನ್ನು ಭೇಟಿ ಮಾಡಿದಾಗ ಆತನು ಪೂಜಿಸುತ್ತಿದ್ದ ನರಸಿಂಹನನ್ನು ಕಂಡು ತಾನು ಅರ್ಥೈಸಿಕೊಂಡಿದ್ದನ್ನು ತನ್ನ ಪ್ರವಾಸಿ ಕಥನದಲ್ಲಿ ವಿವರಿಸಿದ್ದನು. ಅದನ್ನು ಓದಿ ಜರ್ಮನ್ ಚಿತ್ರಕಾರನೊಬ್ಬನು ಚಿತ್ರಿಸಿದ ಚಿತ್ರವಿದು. ೧೬ನೇ ಶತಮಾನದಲ್ಲಿ ಐರೋಪ್ಯರು ಮೊಟ್ಟ ಮೊದಲ ಬಾರಿಗೆ ಭಾರತೀಯ ಸಂಸ್ಕೃತಿಯನ್ನು ಸಂಧಿಸಿದಾಗ ಅವರು ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಕಣ್ಣಿಂದ ಎಲ್ಲಿನ ಆಚರಣೆಗಳನ್ನು ವೀಕ್ಷಿಸಿದರು.ಅವರಿಗೆ ಭಾರತೀಯ ಮೂರ್ತಿ ಪೂಜೆಯು ಪ್ರಾಚೀನ ಪೇಗನ್ನರ ಮೂರ್ತಿ ಪೂಜೆಯಂತೆ ಪಾಪವಾಗಿ ಹಾಗೂ ದೋಷಪೂರ್ಣವಾಗಿ ಕಂಡಿತಲ್ಲದೆ, ಅದು ಡೆವಿಲ್ಲನ ಪೂಜೆ ಎಂಬುದಾಗಿ ಭಾವಿಸಿದರು. ಆ ಮೂರ್ತಿಯ ಕೀರಿಟವನ್ನು ಕ್ಯಾಥೋಲಿಕ್ ಪೋಪನ ಕಿರೀಟಕ್ಕೆ ಹೋಲಿಸುವುದೂ ಗಮನಾರ್ಹ.

ಈ ವಿದ್ವತ್ಪೂರ್ಣ ಕೃತಿಯನ್ನು ಕುವೆಂಪು ವಿಶ್ವವಿದ್ಯಾನಿಲಯದ ’ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ’ದ ನಿರ್ದೇಶಕರಾಗಿರುವ ರಾಜರಾಮ ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಹೆಗ್ಗೋಡಿನ ಅಕ್ಷರ ಪ್ರಕಾಶನದಿಂದ ಪ್ರಕಟವಾಗಿದೆ. ಬೆಲೆ ರೂ ೪೧೫

Monday, July 19, 2010

ಬೈರಪ್ಪನವರ ಕವಲು; ಸ್ತ್ರೀ ವಿರೋಧಿ ವಕಾಲತ್ತು




ಎಸ್.ಎಲ್ ಬೈರಪ್ಪನವರ ಹೊಸ ಕಾದಂಬರಿ ’ಕವಲು’ವಿನ ೧೪ನೇ ಪುಟದಲ್ಲಿ ಒಂದು ಸಂಭಾಷಣೆ ಬರುತ್ತದೆ; ”ಓದಿದ ಗಂಡಸರೆಲ್ಲ ಎಂಗಸರಾಗ್ತಾರೆ. ಓದಿದ ಎಂಗಸರೆಲ್ಲಾ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಎಂಗಸರು ಎಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು” ಇದನ್ನು ಹೇಳುವಾತ ಒಬ್ಬ ಪೋಲಿಸ್ ಕಾನ್ಸ್ಟೇಬಲ್.
ಕಥಾನಾಯಕ ಜಯಕುಮಾರ್ ವಾರ್ಷಿಕ ೧೨೦ ಕೋಟಿ ವ್ಯವಹಾರ ನಡೆಸುವ ’ಜಯಂತಿ ಹೈಪ್ರಿಸಿಶನ್’ ಪ್ಯಾಕ್ಟರಿಯ ಮಾಲೀಕ. ಈಗ ಎರಡನೇ ಪತ್ನಿಯ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮಹಿಳಾ ಠಾಣೆಯೊಂದರಲ್ಲಿ ಬಂದಿತನಾಗಿದ್ದಾನೆ. ಅವನನ್ನು ನೋಡಿ ಕಾನ್ಸ್ಟೇಬಲ್ ಅನುಕಂಪದಿಂದ ನುಡಿಯುವ ಮಾತುಗಳಿವು. ಈ ಸಂಭಾಷಣೆಯೇ ಇಡೀ ಕಾದಂಬರಿಯ ತಿರುಳೂ ಆಗಿದೆ.

ಬೈರಪ್ಪನವರಿಗೆ ಅಧುನಿಕ ಮನೋಭಾವದ, ಸ್ವತಂತ್ರ ವ್ಯಕ್ತಿತ್ವದ ಮಹಿಳೆಯರ ಬಗ್ಗೆ ಅಪಾರ ಅಸಹನೆಯಿದೆ; ತಿರಸ್ಕಾರವಿದೆ. ಅದರ ಜೊತೆಗೆ ಶಿಥಿಲಗೊಳ್ಳುತ್ತಿರುವ ಕುಟುಂಬ ವ್ಯವಸ್ಥೆಯ ಬಗ್ಗೆ ವ್ಯಥೆಯಿದೆ. ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ಮಹಿಳೆಯೇ ಕಾರಣ ಎಂಬುದು ಅವರ ಬಲವಾದ ನಂಬಿಕೆ. ಇದನ್ನವರು ಕಾದಂಬರಿಯುದ್ದಕ್ಕೂ ಬರುವ ಸ್ತ್ರೀ ಪಾತ್ರಗಳ ಮುಖಾಂತರ ಬಿಂಬಿಸಲೆತ್ನಿಸಿದ್ದಾರೆ. ಕಥಾನಾಯಕನ ದಿವಂಗತ ಮೊದಲ ಪತ್ನಿ ವೈಜಯಂತಿ,ಅವರ ಮನೆಗೆಲಸದ ಸಹಾಯಕಿ ದ್ಯಾವಕ್ಕ ಮತ್ತು ಆತನ ತಮ್ಮನ ಪತ್ನಿ ಪಾರ್ವತಿಯನ್ನು ಬಿಟ್ಟು ಉಳಿದ ಎಲ್ಲಾ ಮಹಿಳೆಯರನ್ನು ಉಗ್ರ ವಿಮೋಚನವಾದಿಗಳನ್ನಾಗಿ ಇಲ್ಲವೇ ಜಾರಿಣಿಯರನ್ನಾಗಿ, ವಂಚಕರನ್ನಾಗಿ, ಮನೆಮುರುಕರನ್ನಾಗಿ ಚಿತ್ರಿಸಿದ್ದಾರೆ. ಅವರ ಬಳೆಯಿಲ್ಲದ ಕೈ, ಕುಂಕುಮವಿಲ್ಲದ ಹಣೆ,ಸರವಿಲ್ಲದ ಕತ್ತು ಸೂತಕದ ಕಳೆಯೆಂದು ಕಾದಂಬರಿಯುದ್ದಕ್ಕೂ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಲೇ ಇರುತ್ತದೆ. ಇವರು ಹೀಗಾಗಲು ಉನ್ನತ ವಿದ್ಯಾಭಾಸ ಪಡೆದುದೇ ಕಾರಣವೆಂದು ಬಿಂಬಿಸಲಾಗಿದೆ. ಈ ವಿದ್ಯಾವಂತೆಯರೆಲ್ಲಾ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾನೂನನ್ನು ಪುರುಷರ ಶೋಷಣೆಗೆ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂಬುದು ಬೈರಪ್ಪನವರ ವಾದ.

ವಿವಾಹ ಬಾಹಿರ ಸಂಬಂಧಗಳು ಬೈರಪ್ಪನವರ ಹಿಂದಿನ ಕಾದಂಬರಿಗಳಲ್ಲಿ ಸಾಮಾನ್ಯ. ಆದರೆ ಅಲ್ಲೆಲ್ಲ ಅದಕ್ಕೊಂದು ತಾರ್ಕಿಕ ಹಿನ್ನೆಲೆಯಿರುತ್ತಿತ್ತು. ಆದರೆ ಇಲ್ಲಿ ಅದು ಗಂಡಸರ ಹಕ್ಕು, ಮಹಿಳೆ ಮಾಡಿದರೆ ಅಪರಾಧ ಎನ್ನುವಂತೆ ಪ್ರತಿಪಾದಿಸಲಾಗಿದೆ. ಹೆಂಗಸರ ಲೈಂಗಿಕ ಸ್ವಾತಂತ್ರ್ಯವನ್ನು ಘೋರ ಅಪರಾಧವೆಂದು ಚಿತ್ರಿತವಾಗಿದೆ. ಮಾತ್ರವಲ್ಲ ಮಹಿಳಾ ವಿಮೋಚನವಾದಿಗಳನ್ನು ಸಲಿಂಗಕಾಮಿಗಳೆಂದು ಬಿಂಬಿಸಲು ಸರಾಪ ಎಂಬ ಪಾತ್ರವನ್ನು ತರಲಾಗಿದೆ. ಡಾಕ್ಟರ್ಸ್, ಲಾಯರುಗಳು, ವಿಶ್ವವಿದ್ಯಾಲಯಗಳ ಪ್ರೋಪೆಸರುಗಳು ಸೇರಿದ ಕ್ರಿಮಿನಲ್ ಗಳ ದೊಡ್ಡ ಜಾಲವೆಂದು ಮಹಿಳಾವಾದಿಗಳನ್ನು ತೋರಿಸಲಾಗಿದೆ.

ಕಾದಂಬರಿಯಲ್ಲಿ ಬೈರಪ್ಪನವರು ಎತ್ತಿಕೊಳ್ಳುವ ಇನ್ನೊಂದು ಬಹು ದೊಡ್ಡ ಜಿಜ್ನಾಸೆ ಎಂದರೆ; ಪತ್ನಿಯಾದವಳು ಪತಿಯನ್ನು ಏಕವಚನದಲ್ಲಿ ಕರೆಯುವುದು ಸರಿಯೇ ಎಂಬುದು. ಮದುವೆಗೆ ಮೊದಲು ಮಂಗಳೆ ಏಕವಚನದಲ್ಲಿ ಕರೆದರೂ ಹಾಸುಗೆಯಲ್ಲಿ ರಸಭಂಗವಾಗದ ಕಥಾನಾಯಕ ಮದುವೆಯ ನಂತರ ಏಕವಚನದಲ್ಲಿ ಕರೆದಾಗ ನಿಷ್ಖ್ರ್‍ಇಯನಾಗುತ್ತಾನೆ. ದೊರೆರಾಜು ಎಂಬ ರಾಜಕಾರಣಿ ಮತ್ತು ಇಳಾ ಮೇಡಂ ನಡುವೆಯೂ ಏಕವಚನದ ಜಿಜ್ನಾಸೆಯಿದೆ. ಇದೇ ರೀತಿಯಲ್ಲಿ ಕಾದಂಬರಿಯುದ್ದಕ್ಕೂ ’ಮೇಲ್ ಇಗೋ’ ವಿಜೃಂಬಿಸಿದೆ.

ಸಾಮಾನ್ಯವಾಗಿ ಬೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ಅಧ್ಯಯನಶೀಲತೆ ಕಾದಂಬರಿಗೆ ಆಳವನ್ನು ತಂದುಕೊಡುತ್ತದೆ; ಶೈಲಿ ಓದುಗರನ್ನು ಸೆರೆಹಿಡಿಯುತ್ತದೆ. ಆದರೆ ಕವಲಿನಲ್ಲಿ ಇವೆರಡೂ ಇಲ್ಲ. ಮೇಲ್ಮಟ್ಟದ ಸ್ತ್ರೀ ವಿರೋಧಿ ವಕಾಲತ್ತು ಇದೆ ಅಷ್ಟೆ.

ಮಹಿಳೆ ತನ್ನ ಕರ್ತವ್ಯಗಳನ್ನು ಮರೆತು ವ್ಯಯಕ್ತಿಕ ಬದುಕಿಗೆ ಮಾತ್ರ ಗಮನ ಕೊಡುತ್ತಿದ್ದಾಳೆ ಎಂಬುದು ಕಾದಂಬರಿಕಾರರ ಗ್ರಹಿಕೆ.ಆದರೆ ಭಾರತೀಯ ಸಮಾಜದಲ್ಲಿ ಗೃಹಿಣಿ ಧರ್ಮ ಇರುವಂತೆಯೇ ಗೃಹಸ್ಥ ಧರ್ಮ ಎಂಬುದಿದೆ. ಅದನ್ನು ಸ್ವಲ್ಪ ಮಟ್ಟಿಗಾದರೂ ಪಾಲಿಸಿದರೆ ಮಾತ್ರ ಕುಟುಂಬ ವ್ಯವಸ್ಥೆ ಉಳಿದುಕೊಳ್ಳಲು ಸಾಧ್ಯ. ಸ್ವಸ್ಥ ಸಮಾಜ ರೂಪುಗೊಳ್ಳಲು ಸಾಧ್ಯ. ಆ ಹೊಣೆಗಾರಿಕೆಯನ್ನು ಇವತ್ತಿನ ದಂಪತಿಗಳು ನಿಭಾಯಿಸುತ್ತಿದ್ದಾರೆಯೇ ಎಂಬುದನ್ನು ಬೈರಪ್ಪನಂಥ ಜನಪ್ರಿಯ ಕಾದಂಬರಿಕಾರರು ಶೋಧಿಸಬೇಕಾಗಿದೆ. ಒಬ್ಬ ಗಂಡಸು ಮಗನಾಗಿ, ಗಂಡನಾಗಿ, ಅಪ್ಪನಾಗಿ, ಕುಟುಂಬದ ಯಜಮಾನನಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆಯೇ? ಮಗಳಾಗಿ, ಪತ್ನಿಯಾಗಿ, ಅಮ್ಮನಾಗಿ, ಗೃಹಿಣಿಯಾಗಿ ಒಬ್ಬ ಮಹಿಳೆ ನಿರ್ವಹಿಸಿದಷ್ಟು ಹೊಣೆಗಾರಿಕೆಯನ್ನು ಒಬ್ಬ ಗಂಡಸು ನಿರ್ವಹಿಸುತ್ತಿಲ್ಲವೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅದನ್ನು ಕಾದಂಬರಿಕಾರನೊಬ್ಬ ಸಮಾಜಶಾಸ್ತ್ರಜ್ನನ ರೀತಿಯಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಅದನ್ನು ಬೈರಪ್ಪನವರು ಮಾಡುವುದಿಲ್ಲ ಯಾಕೆಂದರೆ ಅವರು ಅಧುನಿಕತೆಯನ್ನು ಒಪ್ಪಿಕೊಳ್ಳಲಾರರು. ಅವರ ಬದಲಾವಣೆಯೆನಿದ್ದರೂ ಸಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯೊಳಗಡೆಯೇ ಆಗಬೇಕು. ಹಾಗಾಗಿಯೇ ಜಯಕುಮಾರನ ಬುದ್ದಿಮಾಂದ್ಯ ಮಗಳನ್ನು ಅವನ ಅಕ್ಕನ ಮಗ, ವಿದೇಶದಲ್ಲಿ ಎರಡು ಹೆಂಗಸರ ಜೊತೆ ಸಂಬಂಧವಿದ್ದು ಈಗ ಭಾರತಕ್ಕೆ ಬಂದು ನೆಲೆಸಿರುವ ನಚಿಕೇತನ ಜೊತೆ ಮದುವೆ ಮಾಡಿಸಿ ಸುಖ ದಾಂಪತ್ಯದ ಮಾದರಿಯನ್ನು ಕೊಡುತ್ತಾರೆ. ಮಂಗಳೆಯನ್ನು ಶಿಕ್ಷಿಸುವ ಭರದಲ್ಲಿ ಅವಳನ್ನು ಜೀವವಿರೋಧಿಯಾಗಿ, ಭಾವನಾರಹಿತಳಾಗಿ ಚಿತ್ರಿಸಲಾಗಿದೆ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಇಂಗೀಷ್ ಪ್ರೋಪೆಸರ್ ಇಳಾಮೇಡಂ ಅನ್ನು ವ್ಯಕ್ತಿತ್ವ ಮಾರಿಕೊಂಡಂತೆ ಚಿತ್ರಿಸಿ ರಾಜಕಾರಣಿಯೊಬ್ಬನ ’ಕೀಪ್’ ಮಾಡಿದ್ದಾರೆ.

ಸ್ತ್ರಿ ಸಂವೇದನೆಗಳನ್ನು ಗೌರವಿಸುವ, ಆಕೆಯ ಅನನ್ಯತೆಯನ್ನು ಒಪ್ಪಿಕೊಳ್ಳುವ, ಸಮಾನತೆಗಾಗಿ ತುಡಿಯುವ ಎಲ್ಲರೂ ಉಪೇಕ್ಷಿಸಬೇಕಾದ ಕಾದಂಬರಿಯಿದು.

[ಜುಲೈ ೧೯ರಂದು ಕನ್ನಡ ಪ್ರಭದಲ್ಲಿ ಪ್ರಕಟವಾದ ಬರಹ]

Monday, July 5, 2010

ಮಾಧ್ಯಮಗಳಲ್ಲಿ ಮಹಾ ಕಾವ್ಯಗಳ ಮರು ಓದು




ಮಹಾ ಕಾವ್ಯಗಳು ಸೃಜನಶೀಲ ಮನಸ್ಸುಗಳನ್ನು ಮತ್ತೆ ಮತ್ತೆ ಕಾಡುತ್ತವೆ; ಕೆಣಕುತ್ತವೆ; ಅವರ ಕಲ್ಪನೆಯ ಮೂಸೆಯಲ್ಲಿ ರೂಪಾಂತರ ಹೊಂದುತ್ತವೆ. ಭಾರತೀಯ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳು ಅಂಥ ಬತ್ತದ ಕಣಜಗಳು. ಪ್ರಕಾಶ ಝಾ ಮತ್ತು ಮಣಿರತ್ನರು ಆ ಕಣಜಕ್ಕೆ ಕೈ ಹಾಕಿ ’ರಾಜನೀತಿ’ ಮತ್ತು ’ರಾವಣ’ ಎಂಬ ಸಿನೇಮಾಗಳನ್ನು ತಯಾರಿಸಿದ್ದಾರೆ.ಅದ್ದೂರಿ ಪ್ರಚಾರದೊಂದಿಗೆ ತೆರೆ ಕಂಡ ಈ ಚಿತ್ರಗಳು ನಿರೀಕ್ಷೆಯ ಯಶಸ್ಸನ್ನು ಕಾಣಲಿಲ್ಲ. ಮಹಾಕಾವ್ಯದ ಹರಹನ್ನು ಹೊಂದಿರುವ ಕುವೆಂಪುರವರ ಕಾದಂಬರಿ ’ಮಲೆಗಳಲ್ಲಿ ಮದುಮಗಳು’ ಕೂಡಾ ರಂಗ ಪ್ರಯೋಗವಾಗಿ ದಾಖಲೆಯಾಯಿತೇ ಹೊರತು ಯಶಸ್ಸನ್ನು ಕಾಣಲಿಲ್ಲ ಎಂದು ನಾಟಕ ನೋಡಿದವರ ಬಾಯಿಂದ ಕೇಳಿದ್ದೇನೆ.

ಯಾಕೆ ಹೀಗೆ? ಜನ ಮಾನಸದಲ್ಲಿ ನೆಲೆ ನಿಂತಿರುವ ಕಥೆ/ಕೃತಿಯೊಂದನ್ನು ಇನ್ನೊಂದು ಮಾಧ್ಯಮಕ್ಕೆ ಅಳವಡಿಸಿದಾಗ ಪ್ರೇಕ್ಷಕ ಪೂರ್ವನಿರ್ಧಾರಿತ ಮನಸ್ಸಿನೊಂದಿಗೆ ಅದನ್ನು ನೋಡಲು ಬರುತ್ತಾನೆ. ಆತ ಮೂಲ ಕೃತಿಯೊಡನೆ ಇದನ್ನು ಹೊಲಿಸಿ ನೋಡುತ್ತಾನೆ. ನಿರ್ದೇಶಕ ಹೊಸತೇನನ್ನು ಕೊಟ್ಟಿದ್ದಾನೆ ಎಂದು ಹುಡುಕಾಡುತ್ತಾನೆ. ಪ್ರೇಕ್ಷಕನಿಗೆ ಗೊತ್ತಿದೆ; ’ಅದು’ ಇದಾಗದು. ಎಷ್ಟೆಂದರೂ ಇದು ಅದರ ರೀಮೆಕ್. ಇದೇ ಅದಾಗಲು ಪ್ರಯತ್ನಿಸಿದರೆ ಪ್ರೇಕ್ಷಕನನ್ನು ಗೆಲ್ಲಲು ಸಾಧ್ಯವಾಗದು. ಮಣಿರತ್ನಂರವರ ’ರಾವಣ’ ಅದೇ ಆಗಲು ಪ್ರಯತ್ನಿಸಿದೆ. ಸೋತಿದೆ.

ರಾವಣದಲ್ಲಿ ಕಥೆಯೇ ಇಲ್ಲ.ಕೇವಲ ದೃಶ್ಯ ವೈಭವಗಳಷ್ಟೆ ಒಂದು ಸಿನೆಮಾವನ್ನು ಗೆಲ್ಲಿಸಲು ಸಾಧ್ಯವಾಗದು. ನಿರ್ದೇಶಕನಿಗೆ ಕಥನ ಕಲೆ ಗೊತ್ತಿರಬೇಕು. ಭಾರತೀಯ ಪ್ರೇಕ್ಷಕನಿಗಂತೂ ಕಥೆಯೇ ಮುಖ್ಯ.
ರಾಜನೀತಿಯಲ್ಲಿ ಕಥೆ ಇದೆ. ಅದ್ದೂರಿ ತಾರಾ ಸಮೂಹವಿದೆ. ಆದರೆ ಹೀರೊ ಇಲ್ಲ. ಎಲ್ಲಾ ಪಾತ್ರಗಳೂ ವಿಲನ್ ಗಳೇ. ಪ್ರತಿ ಪ್ರೇಮಿನಲ್ಲಿಯೂ ನಮಗೆ ಮಹಾಭಾರತ ನೆನಪಾಗುತ್ತದೆ. ಹಾಗಾಗಿ ಸಿನೇಮಾ ವಾಚ್ಯವಾಗಿದೆ.
ಸಿನೇಮಾವೊಂದು ಬಿಡುಗಡೆಗೆ ಪೂರ್ವದಲ್ಲಿಯೇ ಇದು ಇಂತಹ ಕಾವ್ಯದ ಆಧಾರವೆಂದು ಅದ್ದೂರಿ ಪ್ರಚಾರ ನೀಡಬಾರದು. ಸಿನೇಮಾ ನೋಡಿದ ಪ್ರೇಕ್ಷಕನಿಗೆ ಮಹಾಭಾರತ ಇಲ್ಲವೆ ರಾಮಾಯಣದ ಪಾತ್ರಗಳು, ಘಟನೆಗಳು ನೆನಪಾಗಬೇಕು.

ಕುವೆಂಪುರವರ ’ಮಲೆಗಳಲ್ಲಿ ಮದುಮಗಳು’ ಮಹಾಕಾವ್ಯದ ವಿಸ್ತಾರವನ್ನು ಹೊಂದಿರುವ, ಮಲೆನಾಡಿನ ಸಮಗ್ರ ಚಿತ್ರಣವನ್ನು ಸರಳವಾಗಿ ಕಟ್ಟಿಕೊಡುವ ಬೃಹತ್ ಕಾದಂಬರಿ.ಇಂತಹ ಕಾದಂಬರಿ ರಂಗಪ್ರಯೋಗಕ್ಕೆ ಒಳಪಡುತ್ತಿದೆ ಎಂಬುದನ್ನು ಕೇಳಿದಾಗಲೇ ಅಚ್ಚರಿಯಾಗಿತ್ತು. ಕೆಲವರಿಗೆ ಅದಕ್ಕಿಂತಲೂ ಅಚ್ಚರಿಯಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದಕ್ಕೆ ಮಂಜೂರು ಮಾಡಿದ ಹಣದ ಮೊತ್ತ. ಬಹುಶಃ ಆ ಹಣದಲ್ಲಿ ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ನಾಟಕೋತ್ಸವವನ್ನು ಏರ್ಪಡಿಸಬಹುದಿತ್ತು ಎಂಬುದು ಅವರ ತಕರಾರು.

ಇದೆಲ್ಲಾ ನಿಜವೇ. ಆದರೆ ಕೇಂದ್ರ ಪಾತ್ರವಿಲ್ಲದ, ಅತ್ಯಲ್ಪ ನಾಟಕೀಯ ಘಟನೆಗಳಿರುವ, ಕೇವಲ ವಿವರಣೆಗಳಲ್ಲೇ ಮಲೆನಾಡಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ೭೧೮ ಪುಟಗಳ ಮಹಾ ಕಾದಂಬರಿ’ ಮಲೆಗಳಲ್ಲಿ ಮದುಮಗಳು’ ನ್ನು ಯಶಸ್ವಿಯಾಗಿ ರಂಗಕ್ಕೆ ಅಳವಡಿಸುವುದಕ್ಕೆ ಧೈರ್ಯ, ಪ್ರತಿಭೆ ಮತ್ತು ಆರ್ಥಿಕ ಸಾಮರ್ಥ್ಯ ಎಲ್ಲವೂ ಬೇಕು.

ಬಸವಲಿಂಗಯ್ಯನವರಿಗೆ ದೈರ್ಯ ಇತ್ತು. ಅವರು ನಾಟಕಕ್ಕೆ ಆಯ್ಕೆ ಮಾಡಿಕೊಳ್ಳುವ ವಸ್ತುಗಳೇ ಅದನ್ನು ಪ್ರತಿಫಲಿಸುತ್ತಿದ್ದವು. ಈ ಮೊದಲೇ ಅವರು ಕುವೆಂಪುರವರ ’ಶೂದ್ರ ತಪಸ್ವಿ’ ಕಾರ್ನಾಡರ ’ಅಗ್ನಿ ಮತ್ತು ಮಳೆ’ ದೇವನೂರು ಮಹಾದೇವರ ’ಕುಸುಮ ಬಾಲೆ’ ’ದ್ಯಾವನೂರು’ಗಳನ್ನು ರಂಗರೂಪಕ್ಕೆ ಅಳವಡಿಸಿದ್ದರು. ಇನ್ನು ಪ್ರತಿಭೆಯೂ ಇತ್ತು. ಯಾಕೆಂದರೆ ಅವರು ಎನ್ ಎಸ್ ಡಿ ಪಧವಿದರರು. ಆರ್ಥಿಕ ಸಹಾಯಕ್ಕಾಗಿ ಅವರು ಸರಕಾರದೆಡೆ ನೋಡಲೇಬೇಕಾಗಿತ್ತು. ಮೈಸೂರಿನಲ್ಲಿರುವ ’ರಂಗಾಯಣ’ ರೆಪರ್ಟರಿ ಸರಕಾರದ ಅಂಗ ಸಂಸ್ಥೆ. ಅಲ್ಲಿಯ ಕಲಾವಿದರೆಲ್ಲಾ ಸರಕಾರಿ ನೌಕರರು. ಬಸವಲಿಂಗಯ್ಯನವರಿಗೆ ಅವಕಾಶ ಒದಗಿ ಬಂತು. ಮದುಮಗಳು ರಂಗಕ್ಕೆ ಬಂದಳು.

ಮಾಧ್ಯಮಗಳಲ್ಲಿ ಮದುಮಗಳ ರಂಗಪ್ರಯೋಗದ ಬಗ್ಗೆ ಹಲವು ಅಭಿಪ್ರಾಯಗಳು ಬಂದವು. ಬೆಂಗಳೂರಿನಲ್ಲಿರುವ ನನಗೆ ಮೈಸೂರಿನಲ್ಲಿ ನಡೆದ ಪ್ರಯೋಗವನ್ನು ನೋಡಲಾಗಲಿಲ್ಲ. ಆದರೆ ಅದು ಒಂಬತ್ತು ಘಂಟೆಗಳ ಸುದೀರ್ಘ ಅವಧಿಯ ಪ್ರಯೋಗವೆಂದು ಕೇಳಿ ಮತ್ತೊಮ್ಮೆ ಅಚ್ಚರಿಯಾಯಿತು. ನಾವು ಕರಾವಳಿಯ ಜನ. ರಾತ್ರಿಯಿಡಿ, ಒಂಬತ್ತು ಘಂಟೆಗಳ ಯಕ್ಷಗಾನವನ್ನು ನೋಡುತ್ತ ಬೆಳೆದು ಬಂದವರು. ಅಂಥ ನನ್ನೂರ ಜನರೇ ಇಂದು ಮೂರು ಘಂಟೆಗಳ ಯಕ್ಷಗಾನಕ್ಕೆ ಒಗ್ಗಿಕೊಂಡಿದ್ದಾರೆ. ಯಕ್ಷಗಾನದ ಯಕ್ಷ, ಕಿನ್ನರ, ಗಂದರ್ವ ಲೋಕವೇ ಕಾಲನ ತೆಕ್ಕೆಯಲ್ಲಿ ಮಸುಕಾಗಿದೆ. ಇನ್ನು ಜೀವಂತ ರಂಗಭೂಮಿಯಾದ ನಾಟಕ ಪ್ರೇಕ್ಷಕನ ಏಕಾಗ್ರತೆಯನ್ನು ಬಯಸುತ್ತೆ. ೧೫೦ ಪಾತ್ರಗಳು,೫೮ ದೃಶ್ಯ, ೪೮ ಹಾಡು, ೬೭ ನಟರು ನಾಲ್ಕು ವಿರಾಮವಿರುವ ಈ ನಾಟಕಕ್ಕೆ ಆರು ತಿಂಗಳ ತಯಾರಿ ನಡೆಸಲಾಗಿತ್ತು.

ಖಂಡಿತವಾಗಿಯೂ ರಂಗಾಯಣ ಮಾತ್ರ ಇಂತಹ ಪ್ರಯೋಗಗಳನ್ನು ಮಾಡಲು ಸಾಧ್ಯ. ಆದರೆ ಅದನ್ನು ರಾಜ್ಯದ ಎಲ್ಲಾ ರಂಗಪ್ರೇಮಿಗಳು ನೋಡುವಂತಾಗಬೇಕು ಯಾಕೆಂದರೆ ಅದಕ್ಕೆ ವ್ಯಯವಾಗಿರೋದು ಪ್ರಜೆಗಳ ತೆರಿಗೆ ಹಣ. ಅದಕ್ಕಾಗಿ ನಾಟಕದ ಅವಧಿಯನ್ನು ಕಡಿಮೆಗೊಳಿಸಿ ಅದನ್ನು ರಾಜ್ಯಾದ್ಯಂತ ತಿರುಗಾಟಕ್ಕೆ ಅಣಿಗೊಳಿಸಬೇಕು.

ಈ ಸಂದರ್ಭದಲ್ಲಿ ಪೀಟರ್ ಬ್ರೂಕ್ ರ ’ಮಹಾಭಾರತ’ ನೆನಪಾಗುತ್ತದೆ. ಒಂಬತ್ತು ಘಂಟೆಗಳ ಈ ನಾಟಕದ ಸ್ಕ್ರೀನ್ ಪ್ಲೆಗಾಗಿ ಅವರು ಎಂಟು ವರ್ಷ ಕೆಲಸ ಮಾಡಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು ನಲ್ವತ್ತೆರಡು ಕಲಾವಿದರಲ್ಲಿ ದ್ರೌಪದಿ ಪಾತ್ರ ಮಾಡಿದ್ದು ಭಾರತದ ಮಲ್ಲಿಕಾ ಸಾರಾಭಾಯಿ. ೫ ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಾದ ಈ ನಾಟಕದಲ್ಲಿ ಆಪ್ರಿಕಾದ ಕಪ್ಪು ವರ್ಣದವರೇ ಜಾಸ್ತಿಯಿದ್ದರು. ಜೊತೆಗೆ ರವೀಂದ್ರನಾಥ ಠಾಕೂರರ ಸಂಗೀತವಿತ್ತು.ಅದರ ಕಾಸ್ಟ್ಯೂಮ್ ವಾಸ್ತವಕ್ಕೆ ಹತ್ತಿರವಿತ್ತು. ಚಕ್ರವ್ಯೂಹದ ರಚನೆ ನಿರ್ದೇಶಕರ ಸೃಜನಶೀಲತೆಗೆ ಕನ್ನಡಿ ಹಿಡಿದಂತಿತ್ತು. ಬಹುರಾಷ್ಟ್ರೀಯ, ಬಹುಜನಾಂಗೀಯ ಕಲಾವಿದರಿದ್ದ ಈ ತಂಡ ನಾಲ್ಕು ವರ್ಷಗಳ ಕಾಲ ಪ್ರಪಂಚದಾದ್ಯಂತ ತಿರುಗಾಟ ನಡೆಸಿತ್ತು. ಅನಂತರ ಅದು ಆರು ಘಂಟೆಗಳ ಟೀವಿ ಧಾರಾವಾಯಿಯಾಗಿ ಚಿತ್ರಿಕರಿಸಲಾಯಿತು.ಅದು ದೂರದರ್ಶನದಲ್ಲಿಯೂ ಬಿತ್ತರಗೊಂಡಿತು. ಕೊನೆಗೆ ಮೂರು ಘಂಟೆಗಳ ನಾಟಕವಾಗಿಸಿ ಅದರ ಡಿವಿಡಿ ರಿಲೀಸ್ ಮಾಡಲಾಯ್ತು.

ನಾಟಕ, ಸಿನೇಮಾದಂತಹ ಪ್ರಭಾವಿ ಮಾಧ್ಯಮಕ್ಕೆ ಸಮೂಹವನ್ನು ಸಮ್ಮೋಹನಗೊಳಿಸುವ ಶಕ್ತಿ ಇದೆ. ಅದು ನಮಗೆ ಮನರಂಜನೆಯನ್ನು ನೀಡಬೇಕು.ಇಲ್ಲವೇ ಅದು ಪ್ರದರ್ಶನದಾಚೆಯೂ ಕೆಲಕಾಲ ನಮ್ಮನ್ನು ಕಾಡಬೇಕು. ಅಥವಾ ಇನ್ಯಾವುದಕ್ಕೊ ನಮ್ಮನ್ನು ಸಕಾರಾತ್ಮಕವಾಗಿ ಪ್ರೆರೇಪಿಸಬೇಕು. ಅದ್ಯಾವುದನ್ನು ರಾವಣ ಮತ್ತು ರಾಜನೀತಿ ಮಾಡುವುದಿಲ್ಲ.
ಮಲೆಗಳಲ್ಲಿ ಮದುಮಗಳು ಏನು ಮಾಡಿದೆಯೆಂಬುದು ಮೈಸೂರಿನ ರಂಗಾಸಕ್ತರು ಮತ್ತು ಅಲ್ಲಿಗೆ ಹೋಗಿ ನಾಟಕ ನೋಡಲು ವ್ಯವಧಾನ ಮತ್ತು ಸಾಮರ್ಥ್ಯವಿದ್ದ ಕೆಲವರಿಗಷ್ಟೆ ಗೊತ್ತಾಗಿದೆ!
[ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]

Saturday, May 29, 2010

ಸುಚೇಂದ್ರಪ್ರಸಾದರ ’ಪ್ರಪಾತ’ಕ್ಕೆ ಹರಿದು ಬಂದ ತೊರೆಗಳು





ಅನ್ನವನ್ನು ಅರಸಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಹೋದ ನನ್ನೂರ ಜನರನ್ನು ತವರೂರಿಗೆ ಹೊತ್ತು ತರುತ್ತಿದ್ದ ವಿಮಾನ ಮೇ ೨೨ರ ಶನಿವಾರ ಬೆಳಿಗ್ಗೆ ಬಜ್ಪೆ ಸಮೀಪದ ಕೆಂಜಾರು ಗುಡ್ಡದ ೩೦೦ ಅಡಿ ಪ್ರಪಾತಕ್ಕೆ ಬಿದ್ದು ಹೊತ್ತಿ ಉರಿಯಿತು. ೬ ಸಿಬ್ಬಂದಿ, ೧೮ ಕಂದಮ್ಮಗಳು ಸೇರಿದಂತೆ ೧೫೮ ಜನ ಉರಿದು ಕರಕಲಾದರು. ೮ ಜನ ಅದೃಷ್ಟವಂತರು ಬದುಕುಳಿದರು.

ಮೃತ್ಯು ಬಂದು ಅಪ್ಪಳಿಸಿದ ಪರಿಯನ್ನು, ಆಪ್ತರ ಆಕ್ರಂದನವನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿ ಭಾರವಾದ ಮನಸ್ಥಿತಿಯಲ್ಲಿರುವಾಗಲೇ ಗೆಳತಿ ಸುಧಾಶರ್ಮ ಚವತ್ತಿ ಪೋನ್ ಮಾಡಿ ಮರುದಿನ ಸುಚೇಂದ್ರಪ್ರಸಾದರ ’ಪ್ರಪಾತ’ದ ಶೋ ಇದೆ ಹೋಗೋಣ್ವಾ? ಎಂದರು.

ಒಂದು ಪ್ರಪಾತದಿಂದ ಇನ್ನೊಂದು ಪ್ರಪಾತಕ್ಕೆ ಯಾನ ಮಾಡಲು ಮನಸ್ಸನ್ನು ಸಿದ್ಧ ಮಾಡಿಕೊಳ್ಳತೊಡಗಿದೆ. ನಟ ಸುಚೇಂದ್ರಪ್ರಸಾದ್ ರಂಗಭೂಮಿಯ ಹಿನ್ನೆಲೆಯೆಯವರು. ರಂಗಭೂಮಿ ಎಂಬುದು ಎಲ್ಲಾ ಕಲೆಗಳ, ಇನ್ನೊಂದರ್ಥದಲ್ಲಿ ಎಲ್ಲಾ ತೆವಲುಗಳ ಸಂಗಮ ಸ್ಥಳ. ಹಾಗಾಗಿ ಅವರ ಸಾಹಸವನ್ನೊಮ್ಮೆ ನೋಡೋಣವೆಂದುಕೊಂಡು ಭಾನುವಾರ ಮಧ್ಯಾಹ್ನ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಿಜಾಯ್ಸ್ ಗೆ ಹೋದೆ.

ಭಾರದ್ವಾಜ ಮುನಿ ಸಂಸ್ಕೃತದಲ್ಲಿ ಬರೆದಿರುವ ವೈಮಾನಿಕ ಶಾಸ್ತ್ರ ಕುರಿತಾದ ’ಯಂತ್ರ ಸಾರಸ್ವ’ ಕ್ಕೆ ಭಾಷ್ಯವನ್ನು ಬರೆದಿರುವ ಅನೇಕಲ್ ಸುಬ್ಬರಾಯ ಶಾಸ್ತ್ರಿ ಕುರಿತಾದ ಚಿತ್ರ ’ಪ್ರಪಾತ’. ಹಾಗೆಂದು ಅದು ಸಾಕ್ಷ್ಯ ಚಿತ್ರವಲ್ಲ. ಸಾಕ್ಷ್ಯ ಚಿತ್ರದಂತೆ ಆರಂಭಗೊಂಡರೂ ಮುಂದೆ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಾ ಎರಡು ಗಂಟೆಗಳ ಪೂರ್ಣ ಪ್ರಮಾಣದ ಚಲನಚಿತ್ರವಾಗಿ ರೂಪಾಂತರ ಪಡೆದಿದೆ. ಇಂತಹ ಚಿತ್ರವನ್ನು ನಿರ್ಮಿಸುವ ಸಾಹಸ ಮಾಡಿದವರು ಮಾರುತಿ ಎಸ್ ಜಡಿ ಅವರ್.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರು ತಾಲೂಕಿನಲ್ಲಿ೧೮೧೬ರಲ್ಲಿ ಜನಿಸಿದ ಶಾಸ್ತ್ರಿಗಳು ’ಯಂತ್ರ ಸಾರಸ್ವ’ ವನ್ನು ಅಧ್ಯಯನ ಮಾಡಿ ೧೯೦೩ರಲ್ಲೇ ಸ್ವದೇಶಿ ನಿರ್ಮಿತ ವಿಮಾನವನ್ನು ಉಡಾಯಿಸಿದ್ದರೆಂಬ ಪ್ರತಿತಿಯಿದೆ. ಕೇವಲ ಒಂದೇ ಶತಮಾನದಲ್ಲಿ ಐತಿಹ್ಯವಾಗಿ ನಂತರ ದಂತಕಥೆಯಾಗಿ ವಿಸ್ಮೃತಿಗೆ ಸಂದಿದ ಸಾಧಕರಿವರು.

ಇಂಥ ಸಾಧಕರನ್ನು’ ಅವರ ಸಾಧನೆಯನ್ನು ಅನ್ವೇಶಕ ದೃಷ್ಟಿಯಿಂದ ನೋಡಿದ್ದಾರೆ ನಿರ್ದೇಶಕ ಸುಚೇಂದ್ರಪ್ರಸಾದ್. ಶಾಸ್ತ್ರೀಯಂಥ ಮೇರುಸದೃಷ ವ್ಯಕ್ತಿತ್ವದವರನ್ನು ಮತ್ತವರ ಸಾಧನೆಯನ್ನು ನಾವು ಪ್ರಪಾತದಲ್ಲಿ ನಿಂತು ನೋಡುತ್ತಿದ್ದೇವೆ. ಅಥವ ಅವರ ಜ್ನಾನದ ಆಳವನ್ನು ಶಿಖರದ ತುದಿಯಲ್ಲಿ ನಿಂತು ನೋಡುತ್ತಿದ್ದೇವೆ. ಅದು ಬೌದ್ಧಿಕತೆಯ ಪ್ರಪಾತ ಎಂಬುದು ಪ್ರಸಾದ್ ಗ್ರಹಿಕೆ.

ಅಪರೂಪಕ್ಕೆ ಆ ಜ್ನಾನಶಿಖರಗಳನ್ನು ಮುಟ್ಟುವ ಪ್ರಯತ್ನ ಮಾಡಿದವರು ಆ ಜ್ನಾನವನ್ನು ಬೇರೆಯವರಿಗೂ ಹಂಚದೆ ತಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳುವ ಪ್ರಯತ್ನಿಸುತ್ತಾರೆ; ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಅಲ್ಪರಂತೆ ವರ್ತಿಸುತ್ತಾರೆ. ಇಂಥ ಅರೆಬೆಂದವರ ಪಾತ್ರದಲ್ಲಿ ದತ್ತಣ್ಣ, ಕೃಷ್ಣ ಅಡಿಗ, ಶಿವರಾಂ, ವಿದ್ಯಾಮೂರ್ತಿ, ಸೇತುರ್‍ಆಂ ಪಾತ್ರದ ಒಳಹೊಕ್ಕು ಅಭಿನಯಿಸಿದ್ದಾರೆ. ಮಾತ್ರವಲ್ಲ ವರ್ತಮಾನದಲ್ಲಿರುವ ಹಲವರನ್ನು ಅನುಕರಣೆ ಮಾಡಿದ್ದಾರೆ. ಅನ್ವೇಶಕನ ಪಾತ್ರದಲ್ಲಿ ಅಮಾನ್ ಅವರದು ಸಂಯಮದ ಅಬಿನಯ. ಆತನ ವಿದ್ಯಾರ್ಥಿ ಮಿತ್ರನ ಪಾತ್ರದಲ್ಲಿರುವ ಸಂತೋಷ್, ಅಡಿಗರ ’ವರ್ಧಮಾನ’ ಕವನದ ನಾಯಕನನ್ನು ನೆನಪಿಸುತ್ತಾರೆ. ಕೆ.ಎಸ್.ಎಲ್ ಸ್ವಾಮಿ, ಸ್ರೀನಿವಾಸಪ್ರಭು ಸೇರಿದಂತೆ ಪ್ರತಿಯೊಬ್ಬರದ್ದೂ ಸಹಜಾಭಿನಯ. ಚಿತ್ರದ ಒಟ್ಟಂದಕ್ಕೆ ಶಶಿಧರ್.ಕೆ ಅವರ ಕ್ಯಾಮರ ವರ್ಕ್ ಮತ್ತು ಎಡಿಟರ್ ಗಳಾದ ಲಿಂಗರಾಜು ಮತ್ತು ನಾಗೇಶ್ ರ ಕಾಣಿಕೆ ದೊಡ್ಡದು.

’ಪ್ರಪಾತ’ದಲ್ಲಿ ನಿರ್ದೇಶಕರ ಪ್ರತಿಭೆ ಚಿಕ್ಕಚಿಕ್ಕ ಶಶಕ್ತ ತೊರೆಗಳಾಗಿ ಪ್ರಪಾತಕ್ಕೆ ಹರಿದಿದೆ-ಆಹ್ವಾನಿತ ಪ್ರೇಕ್ಷಕರು ಕೂಡಾ ತೊರೆಗಳಾಗಿ ಹರಿದು ಬಂದಿದ್ದಾರೆ. ಆದರೆ ಅವೆಲ್ಲಾ ಒಂದಾಗಿ ಜೀವನದಿಯಾಗಿ ಹರಿದ ಅನುಭವವಾಗುವುದಿಲ್ಲ. ಅದರೂ ಇಷ್ಟೆಲ್ಲಾ ಚಿಂತನೆಗೆ, ವಾದಕ್ಕೆ, ಊಹೆಗೆ ಕಾರಣವಾದ ಈ ಚಿತ್ರವನ್ನು ಖಂಡಿತವಾಗಿಯೂ ಒಮ್ಮೆ ನೋಡಬಹುದು. ಸಧ್ಯದಲ್ಲಿಯೇ ನಿರ್ಧೇಶಕರು ಇದರ ಇನ್ನೊಂದು ಪ್ರದರ್ಶನವನ್ನು ಏರ್ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

[ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾದ ಬರಹ ]





Monday, May 10, 2010

.....ಎನ್ನನು ಮಾರಿ ಕಾಂಚಾಣವನ್ನು ಕೊಂಡರೇ?






’ಹರಕೆಯ ಕುರಿ’ ಎಂಬುದೊಂದು ನಾಟಕವನ್ನು ಚಂದ್ರಶೇಖರ ಕಂಬಾರರು ೧೯೮೩ರಲ್ಲಿ ಬರೆದಿದ್ದಾರೆ. ಇದರಲ್ಲಿ ರಾಜಕೀಯವೆಂಬುದು ನಮ್ಮ ಮನೆಯ ಪಡಸಾಲೆ, ಅಡುಗೆಮನೆಗಳನ್ನು ನಮಗರಿವಿಲ್ಲದಂತೆ ಆವರಿಸಿಕೊಳ್ಳುತ್ತಿರುವ ಪರಿಯನ್ನು ಸೂಕ್ಷವಾಗಿ ಹಿಡಿದಿಟ್ಟಿದ್ದಾರೆ. ಗಂಡ-ಹೆಂಡತಿಯೆಂಬ ಎರಡೇ ಪಾತ್ರವಿರುವ ಈ ನಾಟಕ ಬದಲಾಗುತ್ತಿರುವ ಮಧ್ಯಮ ವರ್ಗದ ತಳಮಳದ ಜೀವನಶೈಲಿಯನ್ನು ಹಿಡಿದಿಡುವ ಪ್ರಯತ್ನ ಮಾಡಿತ್ತು. ಅನಂತರ ಅದು ಸಿನಿಮಾ ಆಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆಯಿತು.

ಈಗ ರಾಜಕೀಯವೆಂಬುದು ಮನೆಯನ್ನು ಮಾತ್ರವಲ್ಲ ಮನಸ್ಸಿನೊಳಗೂ ಪ್ರವೇಶ ಪಡೆದಿದೆ. ಭಾವನೆಗಳನ್ನೂ ಆಳತೊಡಗಿದೆ. ಮನುಷ್ಯ ಸಂಬಂಧಗಳನ್ನು ಹಾಳುಮಾಡತೊಡಗಿದೆ. ಮಾನವೀಯವಾಗಿ ನೋಡಬೇಕಾದ ಘಟನೆಗಳಿಗೂ ರಾಜಕೀಯ ಮೆತ್ತಲಾಗುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿಯಾಗಿದ್ದ ಹಾಲಪ್ಪನವರ ಅತ್ಯಾಚಾರ ಪ್ರಕರಣವನ್ನೇ ನೋಡಿ; ಅಲ್ಲಿ ಸಚಿವರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಚಂದ್ರಾವತಿ ಎಂಬ ಮಹಿಳೆ ದೂರು ಕೊಟ್ಟಿದ್ದಾರೆ. ಜೊತೆಗೆ ಅತ್ಯಾಚಾರ ನಡೆಯಿತ್ತೆನ್ನಲಾದ ಸಂದರ್ಭದ ವಿಡಿಯೋ ಕ್ಲಿಪ್ಪಿಂಗ್ಸ್ ಅನ್ನು ಸಾಕ್ಶ್ಯವಾಗಿ ನೀಡಲಾಗಿದೆ. ಕೇಸ್ ರಿಜಿಸ್ಟರ್ ಮಾಡಿಕೊಂಡು ಅರೋಪಿಯನ್ನು ಬಂದಿಸಲು ಇಷ್ಟು ಸಾಕು. ಯಾಕೆಂದರೆ ಭಾರತೀಯ ಸಮಾಜದಲ್ಲಿ ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರ ನಡೆದಿದೆಯೆಂದು ಸಾರ್ವಜನಿಕವಾಗಿ ಹೇಳಿಕೊಳ್ಳುವುದೇ ಘಟನೆಯ ಗಂಭೀರತೆಯನ್ನು ಸೂಚಿಸುತ್ತದೆ. ಆಕೆಗೆ ಗೊತ್ತಿದೆ. ಭವಿಷ್ಯದಲ್ಲಿ ತನ್ನನ್ನು ಮತ್ತು ತನ್ನ ಮಕ್ಕಳನ್ನು ಸಮಾಜ ತುಚ್ಚವಾಗಿ ಕಾಣುತ್ತದೆಯೆಂದು. ಹಾಗಿದ್ದು ಕೂಡಾ ಆಕೆ ಆ ರಿಸ್ಕ್ ತೆಗೆದುಕೊಳ್ಳುತ್ತಾಳೆಂದರೆ ಅದಕ್ಕೆ ಬಲವಾದ ಕಾರಣವಿರಲೇಬೇಕು. ಆ ಕಾರಣ ಏನೆಂಬುದು ನಿಷ್ಪಕ್ಷಪಾತವಾದ ತನಿಖೆಯಿಂದ ಗೊತ್ತಾಗಬೇಕು.
ದೃಶ್ಯಮಾಧ್ಯಮದಲ್ಲಿ ಬಾಡಿಲಾಂಗ್ವೇಜ್ ಎಂಬುದು ಬಹಳ ಪ್ರಮುಖವಾದುದು. ಹಾಲಪ್ಪ ಅತ್ಯಾಚಾರ ಪ್ರಕರಣದ ವಿಡಿಯೋ ಕ್ಲಿಪ್ಪಿಂಗ್ಸ್ ನೋಡುತ್ತಿದ್ದರೆ ಇದರ ನಿರ್ದೇಶಕ ಆಕೆಯ ಗಂಡ ವೆಂಕಟೇಶಮೂರ್ತಿಯೇ ಇರಬಹುದೆಂಬ ಸಂಶಯ ಮೂಡುತ್ತದೆ. ಮನೆಯ ಮರ್ಯಾದೆಯನ್ನು ಬೀದಿಗೆ ತರುವುದರಿಂದ ಆತನಿಗೇನು ಲಾಭವಿದೆ ಎನ್ನುವ ಪ್ರಶ್ನೆ ಸಹಜ. ಗಾಳಿ ಸುದ್ದಿಯ ಪ್ರಕಾರ ಹಾಲಪ್ಪನ ರಾಜಕೀಯ ಎದುರಾಳಿಗಳ ಜೊತೆ ವ್ಯವಹಾರ ಕುದುರಿಸಿ ಕಾಂಚಾಣವನ್ನು ಬಾಚಿಕೊಂಡಿದ್ದಾನೆ. ಆತನ ರಾಜಕೀಯ ವರ್ಚಸ್ಸು ಹೆಚ್ಚಾಗಿದೆ. ಗಂಡು ಹೆಣ್ಣಿನ ಆಪ್ತ ಸಂಬಂಧ ಕೂಡಾ ವ್ಯಾಪಾರಿಕರಣಗೊಳ್ಳುತ್ತಿರುವ ಪರಿಯಿದು.

ಸಭಾಪರ್ವದಲ್ಲಿ ದ್ರೌಪದಿಯನ್ನು ದುಶ್ಯಾಸನ ರಾಜಸಭೆಗೆ ಎಳೆದು ತಂದಾಗ ಆಕೆ ಅಲ್ಲಿದ್ದವರನ್ನು ಉದ್ದೇಶಿಸಿ ಹೀಗೆನ್ನುತ್ತಾಳೆ ” ಪತಿಗಳೆನ್ನನು ಮಾರಿ ಧರ್ಮ ಸ್ಥಿತಿಯನ್ನು ಕೊಂಡರು” ಈಗ ಚಂದ್ರಾವತಿಯದೂ ಅದೇ ಸ್ಥಿತಿ. ’ಎನ್ನ ಮಾನವನು ಮಾರಿ ಕಾಂಚಣವನು ಕೊಂಡರು’ ಎಂದು ಆಕೆ ಕಣ್ಣೀರು ಸುರಿಸಬೇಕಾಗಿದೆ. ಯಾಕೆಂದರೆ ಈಗ ಆಕೆಯ ಮೇಲೆ ನಿಜವಾದ ಅತ್ಯಾಚಾರ ನಡೆಯುತ್ತಿದೆ. ಮಾದ್ಯಮಗಳು ಆ ಕೆಲಸವನ್ನು ನಿರಂತರವಾಗಿ ನಡೆಸುತ್ತಿವೆ. ದೇಹದ ಮೇಲಾಗುವ ಅತ್ಯಾಚಾರ ತೊಳೆದರೆ ಹೋಗುತ್ತದೆ. ಆದರೆ ಮನಸ್ಸಿನ ಮೇಲಾಗುವ ಅತ್ಯಾಚಾರ? ಬಹುಶಃ ಪದ್ಮಪ್ರಿಯ ನೆನಪಿಗೆ ಬರುತ್ತಾರೆ. ಅದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಇವತ್ತಿಗೂ ಗೊತ್ತಾಗಿಲ್ಲ. ಅದೊಂದು ”ಮರ್ಯಾದೆ ಕೊಲೆ” ಎಂಬ ಅನುಮಾನ ಆಗಲೂ ಇತ್ತು ಈಗಲೂ ಇದೆ..
ಗಂಡ ಅಂದರೆ ರಕ್ಷಕ. ಅರ್ಜುನನ ಬಿರುದೇ ನೋಡಿ ಮೂರು ಲೋಕದ ಗಂಡ. ರಕ್ಷಕನಾದವನೇ ಭಕ್ಷಕನಾದರೆ? ಮಹಿಳೆಯರನ್ನು ಮಾತೆಯರೆಂದು ಮಾತುಗಳಲ್ಲಿ ಗೌರವಿಸುವ ನಮ್ಮಬಿಜೆಪಿ ಸರಕಾರ ಕೃತಿಯಲ್ಲಿ ಅವರ ಮಾನವನ್ನು ಬೀದಿಯಲ್ಲಿ ಹರಾಜು ಹಾಕುತ್ತಿದೆ. ರಾಜಕೀಯದ ಚದುರಂಗದಾಟದಲ್ಲಿ ಅವರನ್ನು ದಾಳಗಳಂತೆ ಉಪಯೋಗಿಸಿಕೊಳ್ಳುತ್ತಿದೆ. ಶೋಭಾ ಕರಂದ್ಲಾಜೆಯ ಉದಾಹರಣೆಯೇ ಸಾಕಲ್ಲ...! ಯೆಡಿಯೂರಪ್ಪನನ್ನು ಮಣಿಸಲು ಶೋಭಳ ಚಾರಿತ್ಯವಧೆ ಮಾಡಲಾಯ್ತು. ಹಾಲಪ್ಪನನನ್ನು ಕೆಡವಲು ಚಂದ್ರಾವತಿಯ ಬಲಿ ಪಡೆಯಲಾಯಿತೇ? ರಾಜಕಾರಣಿಗಳು ಅಷ್ಟಮದಗಳಿಂದ ಬೀಗುತ್ತಿದ್ದಾರೆ. ಇದಕ್ಕೆ ರೇಣುಕಾಚಾರ್ಯ, ಗಣಿದೊರೆಗಳಿಗಿಂತ ಬೇರೆ ಉದಾಹರಣೆ ಬೇಕೆ?

ಇದನ್ನೆಲ್ಲಾ ಗಮನಿಸುತ್ತಿರುವಾಗ ಮತ್ತೆ ಕುಮಾರವ್ಯಾಸನೇ ನೆನಪಾಗುತ್ತಾನೆ. ”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ,ಬಡವರ ಬಿನ್ನಪವವಿನ್ನಾರು ಕೇಳುವರು, ಉರಿವುರಿವುತಿದೆ ದೇಶ ” ಅಧಿಕಾರದ ಚುಕ್ಕಾಣಿ ಹಿಡಿದವರು, ಸಾರ್ವಜನಿಕ ಬದುಕಿನಲ್ಲಿರುವವರು ಸಾಧ್ಯವಾದಷ್ಟೂ ಸಚ್ಛಾರಿತ್ಯ ಹೊಂದಿರಬೇಕು. ಇಲ್ಲವಾದರೆ ಇವರೆಲ್ಲಾ ವಿಷಯ ಲಂಪಟರು ಎಂಬ ಭಾವನೆ ಜನ ಸಾಮಾನ್ಯರಲ್ಲಿ ಮೂಡಿಬಿಡುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹಾಲಪ್ಪನ ಅತ್ಯಾಚಾರ ಪ್ರಕರಣದಂಥ ಘಟನೆಗಳು ಪದೇ ಪದೇ ನಡೆಯುತ್ತಿದ್ದರೆ, ಅದನ್ನು ಮಾಧ್ಯಮಗಳು ಅತಿರಂಜಿತವಾಗಿ ವರ್ಣಿಸುತ್ತಿದ್ದರೆ, ಅದು ಸಮಾಜದ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಮ್ಮ ಮನೆಗೆ ಬರುವ ಪುರುಷ ಅಥಿತಿಗಳನ್ನು ಪತಿಯ ಅನುಪಸ್ಥಿತಿಯಲ್ಲೂ ನಾವು ಗೌರವದಿಂದ ಆಧರಿಸಿ ಸತ್ಕರಿಸುತ್ತೇವೆ. ಅದನ್ನು ಅಕ್ಕಪಕ್ಕದವರು ಅನುಮಾನದಿಂದ ನೋಡುವ ಸಂದರ್ಭ ಬಂದರೆ...?ಬಹುಶಃ ಬಿಜೆಪಿ ಸರಕಾರ ಮಹಿಳೆಯರನ್ನು ಹದಿನೈದನೆ ಶತಮಾನಕ್ಕೆ ಕೊಂಡೊಯ್ಯುತ್ತಿರಬೇಕು.
ಲೇಖನದ ಆರಂಭದಲ್ಲಿ ನಾಟಕಕಾರರನ್ನು ಪ್ರಸ್ತಾಪಿಸಿರುವುದು ಪ್ರಾಸಂಗಿಕವಲ್ಲ; ಉದ್ದೇಶ ಪೂರ್ವಕ. ಯಾಕೆಂದರೆ ಹಿಂದೆಲ್ಲಾ ಅನ್ಯಾಯವಾದಾಗ ನೈತಿಕ ಬೆಂಬಲಕ್ಕಾಗಿ ನಾವು ಸಾಹಿತಿ-ಕಲಾವಿದರತ್ತ ನೋಡುತ್ತಿದ್ದೆವು; ಮಾಧ್ಯಮದ ಬೆಂಬಲ ಕೋರುತಿದ್ದೆವು.ಅವರ ಪ್ರತಿಕ್ರಿಯೆಯನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೆವು. ಆದರೆ ಇಂದು ಸಾಹಿತಿಗಳು ಮೌನಕ್ಕೆ ಜಾರಿದ್ದಾರೆ. ಪತ್ರಿಕಾರಂಗ ಉಧ್ಯಮವಾಗಿದೆ. ಪತ್ರಕರ್ತರೆಲ್ಲಾ ಮದ್ಯವರ್ತಿಗಳಾಗುತ್ತಿದ್ದಾರೆ.ಸುದ್ದಿಯನ್ನೂ ಔತಣವನ್ನಾಗಿ ನೀಡುತ್ತಿದ್ದಾರೆ. ಅವರೆಲ್ಲರ ಒಂದು ಕೈ ಉಳ್ಳವರ ಜೇಬಿನಲ್ಲಿದೆ. ಕಾಲೊಂದು ರಾಜಕೀಯದಂಗಣದಲ್ಲಿದೆ.

ಮೊನ್ನೆ ಹಾಲಪ್ಪನವರು ರಾಜೀನಾಮೆ ಕೊಟ್ಟ ಮರುದಿನ ಕನ್ನಡದ ಸುದ್ದಿವಾಹಿನಿಯೊಂದು ಅವರ ಸಂದರ್ಶನ ಮಾಡುತ್ತಿತ್ತು. ಸಂದರ್ಶಕನ ಪ್ರಶ್ನೆಗಳಿಗೆ ಮಾಜಿ ಸಚಿವರು ತುಂಬು ಆತ್ಮವಿಶ್ವಾಸದಿಂದ ಉತ್ತರಿಸುತ್ತಿದ್ದರು. ತನ್ನ ರಕ್ಷಣೆಗೆ ಸರಕಾರ ಮತ್ತು ಪಕ್ಷ ಟೊಂಕ ಕಟ್ಟಿ ನಿಂತಿದೆ ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಹಿಂದಿನ ದಿನ ಪತ್ರಿಕೆಯಲ್ಲಿ ಬಂದ ವರದಿಯ ಬಗ್ಗೆ ಕೇಳಿದಾಗ ”ಬರೆದವರೇನು ಕುಲದೀಪ್ ನಯ್ಯರಾ?” ಎಂದು ಪ್ರಶ್ನಿಸಿಬಿಟ್ಟರು ಮಾಜಿ ಸಚಿವ ಹರತಾಳ್ ಹಾಲಪ್ಪ. ಅದು ಪತ್ರಿಕೋಧ್ಯಮದ ನೈತಿಕತೆಗೆ ಎಸೆದ ಪ್ರಶ್ನೆಯಾಗಿತ್ತು. ಅರೋಪಿ ಸ್ಥಾನದಲ್ಲಿರುವ ರಾಜಕಾರಣಿಯೊಬ್ಬ ಲೈವ್ ಸಂದರ್ಶನವೊಂದರಲ್ಲಿ ಪತ್ರಕರ್ತನೊಬ್ಬನ ಬಗ್ಗೆ ಆ ರೀತಿ ವ್ಯಂಗ್ಯವಾಡುತ್ತಾನೆ ಎಂದರೇ? ಅಪರಾಧಿ ಭಾವದಿಂದ ಕುಗ್ಗಿ ಹೋಗಬೇಕಾದ ಸಂದರ್ಭವದು.

ಹೊಣೆಗಾರಿಕೆಯನ್ನು ಹೊರಬೇಕಾದವರೆ ಹೊಂದಾಣಿಕೆಯನ್ನು ಮಾಡಿಕೊಂಡರೆ ಜನಸಾಮಾನ್ಯರ ಪಾಡೆನು? ದುಡ್ಡು ಎಲ್ಲವನ್ನೂ ಆಳುತ್ತದೆ, ಕೊನೆಗೆ ಹೆಂಡತಿಯ ಶೀಲವನ್ನೂ ಕೂಡಾ ಎಂದಾಗಬಾರದಲ್ಲವೇ?

[ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ]