Thursday, June 11, 2009

....ಮಾನವೀಯ ಸ್ಪರ್ಶ ಇರಲಿ


[ಕಳೆದ ವರ್ಷ ಜೂನ್ ೧೦ರಂದು ಕಾಣೆಯಾದ ಪದ್ಮಪ್ರಿಯ ಜೂನ್ ೧೫ರಂದು ದೆಹಲಿಯಲ್ಲಿ ಹೆಣವಾಗಿ ಕಾಣಿಸಿದರು.ಆ ಸಂದರ್ಭದಲ್ಲಿ ’ಸುಧಾ’ದಲ್ಲಿ ಪ್ರಕಟವಾಗಿದ್ದ ಲೀಖನ. ಆಕೆಯ ಸಾವು ಇಂದಿಗೂ ನಿಗೂಢ]

ಉಡುಪಿ ಶಾಸಕ ಬಿ.ಜೆ.ಪಿಯ ರಘುಪತಿಭಟ್ಟರ ಪತ್ನಿ ಪದ್ಮಪ್ರಿಯ ಇತ್ತಿಚೆಗೆ ದೆಹಲಿಯಲ್ಲಿ ಆತ್ಮಹತ್ಯೆ ಮಾದಿಕೊಂಡರು.
ತಕ್ಷಣ ನನಗೆ ನೆನಪಿಗೆ ಬಂದದ್ದು ಲಕ್ಶ್ಮಿ. ಆಕೆ ಕಳೆದ ವರ್ಷ ಇದೇ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಕೌಟುಂಬಿಕ ಬದುಕು ಕೂಡ ಚನ್ನಾಗಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಆಕೆ ತನ್ನ ದೊಡ್ಡಪ್ಪನ ಮಗನೊಡನೆ ಕಾಣೆಯಾದಳು. ಒಂದು ವಾರದ ನಂತರ ನನಗೆ ಹಿಮಾಲಯದ ಸೆರಗಿನಿಂದ ೨೪ ಪುಟಗಳ ಡೆತ್ ನೋಟ್ ಕೊರಿಯರಿನಲ್ಲಿ ಬಂತು. ತಕ್ಷಣ ಕಾರ್ಯೋನ್ಮುಖರಾಗಿ ದೆಹಲಿಯಲ್ಲಿ ಅವರಿಬ್ಬರನ್ನು ಪತ್ತೆ ಹಚ್ಚಿ ಇಲ್ಲಿಗೆ ಕರೆತರಲಾಯಿತು. ಅವರಿಬ್ಬರಿಗೂ ಸಾಂತ್ವನ ಹೇಳಿ ಬದುಕಿಗೆ ಭರವಸೆಯನ್ನು ತುಂಬಲೆತ್ನಿಸಿದೆವು. ಆಕೆಯ ಆಪೇಕ್ಷೆಯಂತೆ ಗಂಡನಿಂದ ವಿಛ್ಛೇದನ ಕೊಡಿಸಿ, ಆಕೆಗೊಂದು ನೌಕರಿ, ವಾಸಕ್ಕೆ ಸ್ವಂತ ಪ್ಲಾಟ್, ಕಾರು, ೨೦ ಲಕ್ಷ ನಗದು ನೀಡುವುದೆಂದು ತೀರ್ಮಾನಿಸಲಾಯ್ತು. ಆದರೂ ಮರುದಿನ ಬೆಳಿಗ್ಗೆ ಅವರಿಬ್ಬರೂ ಸಯನೈಡ್ ತಿಂದು ಸತ್ತು ಹೋದರು.

ಅವರಿಗೆ ಬದುಕಬೇಕೆಂಬ ಇಚ್ಚೆಯೇ ಸತ್ತು ಹೋಗಿತ್ತು. ಸಾವನ್ನು ಅವರು ಪ್ರಜ್ನಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದರು.
ಆದರೆ ಮೊನ್ನೆ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪದ್ಮಪ್ರಿಯಳಿಗೆ ಬದುಕು ಬೇಕಾಗಿತ್ತು. ತುಂಬು ಜೀವನಪ್ರೀತಿ ಇಟ್ಟುಕೊಂಡ ಹೆಣ್ಣುಮಗಳು ಆಕೆ. ಆಕೆಗೆ ಇಲ್ಲಿಯ ಬದುಕು ಅಸಹನೀಯವಾಗಿತ್ತು.ಅದಕ್ಕಾಗಿ ಆಕೆ ಹೊಸ ಬದುಕನ್ನು ಕಟ್ಟಿಕೊಳ್ಳಲು ದೆಹಲಿಗೆ ಹೋಗಿದ್ದಳು. ಅದಕ್ಕಾಗಿ ಸಕಲ ಸಿದ್ದತೆಯನ್ನೂ ಮಾಡಿಕೊಂಡಿದ್ದಳು.

ಉಡುಪಿಯನ್ನು ತೊರೆದು ಹೊರಟಾಗ ಆಕೆ ಒಂದಷ್ಟು ದುಡ್ಡು ಡ್ರಾ ಮಾಡಿಕೊಂಡಿದ್ದಳು. ದೆಹಲಿಯಲ್ಲಿ ವಾಸ್ತವ್ಯದ ವ್ಯವಸ್ಥೆ, ಓಡಾಡಲು ಕಾರು, ಹೊಸ ಮೊಬ್ಯೆಲ್ ಸಿಮ್, ನೌಕರಿಯ ಪ್ರಯತ್ನ ಎಲ್ಲವನ್ನೂ ಆಕೆ ಪೂರ್ವಯೋಜನೆಯಂತೆ ಎಚ್ಚರದಿಂದ ಮಾಡಿಕೊಂಡಿದ್ದಳು. ಈ ಪ್ರಕ್ರಿಯೆಯಲ್ಲಿ ಆಕೆಯ ಕುಟುಂಬ ಸ್ನೇಹಿತ ಅತುಲ್ ಆಕೆಗೆ ನೆರವಾಗಿದ್ದಾನೆ.

ಆತ ಆಕೆಗೆ ಯಾಕೆ ನೆರವಾದ? ಆತ ಯಾರು? ಆತ ಆಕೆಯ ಗಂಡನ ಬಾಲ್ಯ ಸ್ನೇಹಿತ. ಹಾಗಾಗಿ ಆತ ಕುಟುಂಬಕ್ಕೆ ಚಿರಪರಿಚಿತ . ತನ್ನ ಸುಖ ದು;ಖಗಳನ್ನು, ಗಂಡನ ಕ್ರಷ್ಣಲೀಲೆಗಳನ್ನು ಆತನಲ್ಲಿ ಸಹಜವಾಗಿ ಆಕೆ ಹೇಳಿಕೊಂಡಿರಬಹುದು. ಅದಕ್ಕೆ ಆತ ಪೂರಕವಾಗಿ ಸ್ಪಂದಿಸಿರಬಹುದು
ಪದ್ಮಪ್ರಿಯಳ ಸಾಂಸಾರಿಕ ಬದುಕಿನಲ್ಲಿ ಬಿರುಕಿತ್ತು. ಗಂಡಹೆಂಡತಿಯರ ನಡುವೆ ಜಗಳಗಳಾಗುತ್ತಿದ್ದವು. ಹಿಂದೆ ಒಂದೆರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಮನೆ ಬಿಟ್ಟು ಹೋಗುವ ಪ್ರಯತ್ನ ಕೂಡ ಮಾಡಿದ್ದಳು. ವಿಛ್ಛೇದನವನ್ನೂ ಬಯಸಿದ್ದಳು ಎಂಬುದನ್ನು ಆಕೆಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಗೆಳೆಯನ ಮಡದಿಯ ತುಮುಲವೆಲ್ಲವನ್ನು ಅತುಲ್ ಹತ್ತಿರದಿಂದ ನೋಡಿದ್ದಾನೆ; ಗಮನಿಸಿದ್ದಾನೆ. ಹಾಗಾಗಿಯೋ ಏನೋ ಆಕೆ ಸಹಾಯ ಯಾಚಿಸಿದಾಗ ಆತ ಮಾನವೀಯ ನೆಲೆಯಲ್ಲಿ ನೆರವು ನೀಡಿರಬಹುದು.ಆಕೆ ಇಲ್ಲಿಂದ ಪಾರಾಗಿ ಹೋಗಲು ಸಹಾಯ ಮಾಡಿರಬಹುದು
ಇದೊಂದು ಊಹೆ. ಆದರೂ ಇದುವೇ ನಿಜಕ್ಕೆ ಹತ್ತಿರವಾದುದು ಅನ್ನಿಸುತ್ತಿದೆ.ಆದರೂ ಆಕೆ ಸತ್ತು ಹೋದಳು ಯಾಕೆ?

ಆಕೆಯದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಬಾಲ್ಯದಲ್ಲಿ ಆದರ್ಶಮಯ ವಾತಾವರಣ. ಇನ್ನೂ ಡಿಗ್ರಿ ಓದುತ್ತಿರುವಾಗಲೇ ಫೆನಾನ್ಶಿಯಲ್ ಕುಳ ರಘುಪತಿಭಟ್ಟರ ಜೊತೆ ಮದುವೆ .ಮದುವೆಯಾದ ಮೇಲೂ ವಿದ್ಯಾಭ್ಯಾಸ ಮುಂದುವರಿಸಿ ಡಿಗ್ರಿ ಪಡೆದಳು.ಡ್ರೈವಿಂಗ್ ಕಲಿತಳು. ಗಂಡನ ಫೈನಾನ್ಶಿಯಲ್ ಕಂಪೆನಿ ನಿಬಾಯಿಸಿದಳು. ಅತ್ತೆ-ಮಾವ, ಬಂದು-ಬಳಗ,ಆಳು-ಕಾಳು,..ಹೀಗೆ ತುಂಬು ಕುಟುಂಬದ ನಡುವೆ ಸದಾ ಚಟುವಟಿಕೆಯಿಂದ ಬಾಳಿದವಳು. ಇದ್ಯಾವುದೂ ತನಗೆ ಬೇಡ ಎಂದು ದೂರದ ದೆಹಲಿಗೆ ಹೋಗಿ ಬದುಕನ್ನು ಕಟ್ಟಿಕೊಳ್ಳಬಯಸಿದ್ದ ಸ್ವಾಭಿಮಾನಿ ಹೆಣ್ಣು ಪದ್ಮಪ್ರಿಯ. ಇಂತಹ ’ಗಟ್ಟಿಗಿತ್ತಿ’ ಹೆಣ್ಣುಮಗಳು ಹೇಗೆ ಕುಸಿದು ಹೋದಳು? ಅವಳ ದ್ರ್ರಢತೆಯನ್ನು ಯಾರು ಅಲುಗಾಡಿಸಿದರು? ಯಾವ ಕಾಣದ ಕೈ ಅವಳ ಜೀವನ ಪ್ರೀತಿಯನ್ನು ಕಸಿದುಕೊಂಡಿತು?

ಎಲ್ಲವೂ ಸರಿಯಗಿತ್ತು; ಅಕೆ ದೆಹಲಿ ತಲುಪುವತನಕ .ಆಕೆ ಬಯಸಿದ್ದ ವಿಛ್ಛೇದನ ಸಿಕ್ಕಿದ್ದರೆ ಅಲ್ಲಿ ನೆಲೆಯೂರಿ ಬೆಳೆಯುತ್ತಿದ್ದಳು.ಆದರೆ ಹಾಗಾಗಲಿಲ್ಲ. ಯಾಕೆ? ಬಹುಶ: ಆಕೆ ದೆಹಲಿಯಲ್ಲಿ ಖರಿದಿಸಿದ್ದ ವಸ್ತುಗಳ ಪ್ಯೆಕಿ ಟಿ.ವಿಯೊಂದು ಇರದಿರುತ್ತಿದ್ದರೆ ಆಕೆ ಬದುಕಿ ಉಳಿಯುತ್ತಿದ್ದಳೋ ಏನೋ!. ಆಕೆಯ ಗಟ್ಟಿ ಮನಸ್ಸನ್ನು ಆಲುಗಾಡಿಸಿದವರು ಮಾಧ್ಯಮಗಳು. ಅದರಲ್ಲೂ ಇಲೆಕ್ಟಾನಿಕ್ ಸುದ್ದಿ ಮಾಧ್ಯಮಗಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ವಾತಾವರಣವನ್ನು ಮಾಧ್ಯಮಗಳು ಮತ್ತು ಪೋಲಿಸ್ ಇಲಾಖೆ ಜಂಟಿಯಾಗಿ ನಡೆಸಿದವು.

ಪದ್ಮಪ್ರಿಯ ವಾಸಿಸುತ್ತಿದ್ದ ಮನೆಯ ಬಾಗಿಲನ್ನು ಒಡೆದು ಪ್ರವೇಶಿಸಿದಾಗ ಟಿ.ವಿ ಚಾಲೂ ಆಗಿತ್ತು.ಆಕೆ ನೇಣಿನ ಕುಣಿಕೆಯಲ್ಲಿ ಚಿರನಿದ್ರೆಯಲ್ಲಿದ್ದರು. ಕನ್ನದದ ಸುದ್ದಿವಾಹಿನಿಯೊಂದು ’ಅತುಲ್ ಬಂಧನ’ ಕರ್ನಾಟಕ ಪೋಲಿಸರು ದೆಹಲಿಯಲ್ಲಿ’ ಎಂಬ ಬ್ರೆಕಿಂಗ್ ನ್ಯೂಸ್ ಪ್ರಸಾರ ಮಾಡುತ್ತಿತ್ತು.
ತನಗಾಗಿ ರಿಸ್ಕ್ ತೆಗೆದುಕೊಂಡ ಅತುಲ್ ಬಂಧನವಾಯ್ತು ಎಂದು ಆ ಜೀವ ತಲ್ಲಣಿಸಿಬಿಟ್ಟಿತೆ? ದೆಹಲಿಗೆ ಪೋಲಿಸರು ಬಂದು ತನ್ನನ್ನೂ ಬಂಧಿಸಿದರೆ? ಅಥವ ತಾನು ಅತ್ಯಂತ ಗಾಢವಾಗಿ ನಂಬಿದ ಅತುಲ್ ವಿಶ್ವಾಸಘಾತುಕನಾದನೆ? ಎಕಕಾಲಕ್ಕೆ ಹಲವಾರು ಸಂದೇಹಗಳು,ಪ್ರಶ್ನೆಗಳು ಅವಳನ್ನು ಕಾಡಿವೆ. ಜೀವ ಕುಸಿದು ಹೋಗಿದೆ. ಆ ನರಕಕ್ಕೆ ಮತ್ತೆ ಹೋಗುವುದಕ್ಕಿಂತ ಸಾವೇ ಲೇಸೆನಿಸಿದೆ

ಆಕೆ ವಾಸವಾಗಿದ್ದ ಪ್ಲಾಟ್ ನ ಬಾಗಿಲು ಒಡೆಯುವುದಕ್ಕಿಂತ ಕೆಲವೇ ಘಂಟೆಗಳ ಮೊದಲು ಆ ಪ್ಲಾಟ್ ಗೆ ಕರ್ನಾಟಕದಿಂದ ಬಂದಿದ್ದ ಮೂರು ಜನ ಪ್ರವೇಶಿಸಿದ್ದರು.ಅದು ಅಲ್ಲಿಯ ರಿಜಿಸ್ಟರ್ ನಲ್ಲಿ ದಾಖಲಾಗಿದೆ. ಅವರು ಯಾರು? ಅವರೇ ಅವಳಿಗೊಂದು ಗತಿ ಕಾಣಿಸಿದರೇ...?

ಈ ಪ್ರಕರಣವನ್ನು ಮಾಧ್ಯಮಗಳು ಅತಿ ರಂಜಿತವಾಗಿ ಲಂಬಿಸಿವೆ. ಅವರಿಬ್ಬರಿಗೂ ಅನ್ಯೆತಿಕ ಸಂಬಂಧವಿತ್ತು ಎಂದು ಬಿತ್ತರಿಸ್ಸಿದ್ದಾರೆ. ಅವರಿಬ್ಬರ ನಡುವೆ ಏನು ಸಂಬಂಧವಿತ್ತೋ ನಮಗೆ ತಿಳಿಯದು. ಆದರೆ ಪುರುಷ ಮನಸ್ಸುಗಳಿಗೆ ಅರ್ಥವಾಗದ ಕೆಲವು ವಿಚಾರಗಳಿರುತ್ತವೆ. ನೀವು ವಿವಾಹಿತರಾಗಿದ್ದರೂ ಮನಸ್ಸು ಮಾಡಿದರೆ ಒಂದು ಹುಡುಗಿಯನ್ನು ಒಲಿಸಿಕೊಳ್ಳಬಹುದು.ಮಕ್ಕಳಿಲ್ಲದ ಪರಸ್ತ್ರೀಯನ್ನೂ ಕಷ್ಟಪಟ್ಟು ತನ್ನವಳಾಗಿಸಿಕೊಳ್ಳಬಹುದು. ಆದರೆ ಒಬ್ಬಳು ತಾಯಿಯನ್ನು ಅಷ್ಟು ಸುಲಭವಾಗಿ ಹಾಸಿಗೆಯೆಡೆಗೆ ಸೆಳೆದುಕೊಳ್ಳಲಾರಿರಿ. ಹಾಗೊಂದು ವೇಳೆ ಆಕೆ ಒಲಿದು ಬಂದರೆ ಅದು ಆಕೆ ಆತನ ಮೇಲೆ ಇಟ್ಟ ಅಚಲ ನಂಬಿಕೆ ಮತ್ತು ವಿಶ್ವಾಸ .ಅದು ಅಕೆಗೆ ಗಂಡನಿಂದ ಸಿಕ್ಕಿರಲಿಕ್ಕಿಲ್ಲ.
ಇಷ್ಟಕ್ಕೂ ಗೆಳೆತನ ವೆಂಬುದು ಸಮಾನಲಿಂಗಿಗಳಲ್ಲಿ ಮಾತ್ರ ಇರಬೇಕೆ?

ಈಗ ಸಾರ್ವಜನಿಕರಿಗೆ ಹಲವು ಗೊಂದಲಗಳಿವೆ. ಅತುಲ್ ನಿಜಕ್ಕೂ ಪದ್ಮಪ್ರಿಯಳಿಗೆ ತೀರಾ ಹತ್ತಿರವಾಗಿದ್ದು ಅವಳ ಗಂಡನ ವಿರುದ್ಧವಾಗಿ ಅಕೆಗೆ ಸಹಾಯ ಮಾಡಿದ್ದರೆ ಆತ ಈಗ ಆಪಾಯದಲ್ಲಿದ್ದಾನೆ. ಈ ಸಹಾಯ ಆಕೆಯ ಪತ್ನಿಗೆ ಗೊತ್ತಿದ್ದರೆ ಸರಿ. ಇಲ್ಲವಾದರೆ ಅವರ ಸಂಸಾರದ ಚೌಕಟ್ಟು ಅಲುಗಾಡಿದಂತೆಯೇ. ಪದ್ಮಪ್ರಿಯಳ ಅಂತರಂಗ ಬಲ್ಲ ಗೆಳೆಯ ಆತ. ಹಾಗಾಗಿ ಪ್ರಕರಣದ ಕುರಿತಾಗಿ ಎದ್ದಿರುವ ಅನೇಕ ಪ್ರಶ್ನೆಗಳಿಗೆ ಅತುಲ್ ಮಾತ್ರ ಉತ್ತರ ನಿಡಬಲ್ಲ. ಖಸಾಗಿಯಿರಬೇಕಾದಂತಹ ವಿಚಾರ ಈಗ ಬೀದಿಗೆ ಬಿದ್ದಿದೆ. ಹಾಗಾಗಿ ಸತ್ಯವನ್ನು ತಿಳಿಯಬೇಕಾದ ಹಕ್ಕು ಜನತೆಗಿದೆ.
ಹಿರಿಯ ಪೋಲಿಸ್ ಅಧಿಕಾರಿ ಶಂಕರಿ ಬಿದರಿ ಈ ಪ್ರಕರಣಕ್ಕೆ ಸರಿಯಾದ ವ್ಯಖ್ಯಾನವನ್ನು ನೀಡಿದ್ದಾರೆ. ’ನನಗೆ ಕಣ್ಣಿದೆ, ಕಿವಿಯಿದೆ ಆದರೆ ಬಾಯಿ ಇಲ್ಲ.’ ಅವರ ಬಾಯಿಯನ್ನು ಕಟ್ಟಿ ಹಾಕಿದವರು ಯಾರು?

ಮಾಲೂರಿನಲ್ಲಿ ಪದ್ಮಪ್ರಿಯ ಮತ್ತು ಅತುಲ್ ಪತ್ತೆಯಾದರು ಎಂಬ ಸುದ್ದಿಯನ್ನು ಮಾಧ್ಯಮದವರಿಗೆ ನೀಡಿದವರು ಯಾರು? ಅದರಿಂದ ಅವರಿಗೇನು ಲಾಭ? ಬಿ.ಜೆ.ಪಿ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಆಗಲೇ ಎರಡು ದುರದೃಷ್ಟಕರ ಘಟನೆಗಳು ನಡೆದಿವೆ. ಅದರಲ್ಲಿ ಪೋಲಿಸ್ ಇಲಾಖೆ ನೇರವಾಗಿ ಭಾಗಿಯಾಗಿದೆ. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರಿಗೆ ಆಜ್ನೆ ಕೊಟ್ಟವರು ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಈಗ ಮಾಲೂರು ಸುದ್ಧಿ ಪ್ಲಾಂಟ್ ಮಾದಿದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.
ಬಿ.ಜೆ.ಪಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ’ ಎಂಬ ವಿರೋಧ ಪಕ್ಷದವರ ಹೇಳಿಕೆಯಲ್ಲಿ ಹುರುಳಿದೆ ಅನಿಸುತ್ತೆ ಅಲ್ವೆ?

ಸುದ್ಧಿವಾಹಿನಿಯ್ಂದು ಹೇಳಿಯೆಬಿಟ್ಟಿತು ಬಿ.ಜೆ.ಪಿಯವರಿಗೆ ಸರ್ಕಾರ ಮಾಡೋಕೆ ಬರೊದಿಲ್ಲ ಎಂಬೊದು ಎಲ್ಲರಿಗೂ ಗೊತ್ತಿದೆ ಇಗ ಸಂಸಾರ ಮಾಡೊಕು ಬರೊದಿಲ್ಲ ಎಂಬುದು ಗೊತ್ತಾಯ್ತು’ ಅರ್ದಘಂಟೆ ಅವಧಿಯ ಈ ಕಾರ್ಯಕ್ರಮದಲ್ಲೆಲ್ಲ ಪದ್ಮಪ್ರಿಯ ಮತ್ತು ಅಕೆಯ ಪ್ರಿಯಕರ ಎಂದೇ ಹೇಳಲಾಗುತ್ತಿತ್ತು. ಓ..ಪ್ರಿಯ..ಪ್ರಿಯಾ’ ಎಂದು ಸ್ಕ್ರೂಲಿಂಗ್ ಬರುತ್ತಿತ್ತು. ಸಾವಿನಲ್ಲೂ ಕ್ರೌರ್ಯವೇ? ಅದಕ್ಕೊಂದು ಘನತೆ ಬೇಡವೇ? ಸ್ಕ್ರೀಪ್ಟ್ ಬರೆದವರು ಮತ್ತು ನಿರೂಪಣೆ ಮಾಡಿದವರು ಹೆಣ್ಣುಮಕ್ಕಳೆಂಬುದು ಇನ್ನೊಂದು ದುರಂತ!

ಒಬ್ಬ ಛಲಗಾತಿ ಮಹಿಳೆಗೆ ಬದುಕು ಬದುಕಲಾರದಷ್ಟು ನಿಕೃಷ್ಟ ಎನಿಸಿದಾಗ,ಕರುಳಬಳ್ಳಿ ಕೂಡ ಈ ಲೋಕದ ಜೊತೆ ಬಂಧಿಸಲಾಗದು ಎನಿಸಿದಾಗ ಮಾನವೀಯ ನೆಲೆಯಲ್ಲಿ ಯುವಕನೊಬ್ಬ ಅವಳಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದು ತಪ್ಪೆ? ಬಿ.ಜೆ.ಪಿ ಪ್ರಣಿತ ಮಾಧ್ಯಮದವರಿಗೆ ’ಆದರ್ಶ್ ಕುಟುಂಬ’ದ ಕಲ್ಪನೆಯೇ ಮುಖ್ಯ.ಆ ಮೂಲಕ ಪರಂಪರಾಗತ ಕುಟುಂಬ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ. ಹುತಾತ್ಮರಾಗುವುದು ಅವರಿಗೆ ಹೆಚ್ಚು ಪ್ರಿಯ.ಸಹಗಮನಕ್ಕೆ ಸತಿಯೇ ಸೂಕ್ತ!
ಪದ್ಮಪ್ರಿಯ ಪ್ರಕರಣದಲ್ಲಿ ಇಡೀ ವ್ಯವಸ್ಥೆಯೇ ಪುರುಷಸಿಂಹನಂತೆ ವರ್ತಿಸಿದೆ. ಮಾಧ್ಯಮಗಳು ಪುರುಷಪರ.ಸರಕಾರ ಪುರುಷಪರ, ಪೋಲಿಸ್ ಪುರುಷಪರ.

ಗಣ್ಯ ವ್ಯಕ್ತಿಯನ್ನು ಮದುವೆಯಾಗಿ ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಮತ್ತು ಹುಡುಕಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಅದು ಗಾಜಿನ ಮನೆ. ಕಲ್ಲು ಹೊಡೆಯುವ ಜನ ಜಾಸ್ತಿ. ಸುಲಭ ಕೂಡ. ಜೋಡಿಸುವುದು ಕಷ್ಟ.
ಈಗಲೂ ಕೂಡ ಮಾಧ್ಯಮಗಳಲ್ಲಿ ಪದ್ಮಪ್ರಿಯಳ ಚಾರಿತ್ಯವಧೆ ಮುಂದುವರಿಯುತ್ತಲೇ ಇದೆ. ಜರ್ನಲಿಸಂನಿಂದ ವ್ರತ್ತಿಪರತೆ ಮತ್ತು ನೈತಿಕತೆ ದೂರವಾಗುತ್ತಿದೆ. ಮುದ್ರಣಮಾಧ್ಯಮವನ್ನು ಜಾಹಿರಾತುಗಳು ನಿರ್ದೇಶಿಸಿದರೆ ದ್ರಶ್ಯಮಾಧ್ಯಮವನ್ನು ಟಿ.ಅರ್.ಪಿ ನಿಯಂತ್ರಿಸುತ್ತದೆ
ಆರಂಭದಲ್ಲಿ ಹೇಳಿದ ಲಕ್ಸ್ಮಿ ಮತ್ತು ಪದ್ಮಪ್ರಿಯ ಗಣ್ಯವ್ಯಕ್ತಿಯರ ಪತ್ನಿಯರಾಗಿರದಿದ್ದಲ್ಲಿ ಹೀಗೆ ದುರಂತ ಕಾಣುತ್ತಿರಲ್ಲಿಲ್ಲ.

ಬದುಕಿನ ಖುಶಿ ಯಾವಗಲೂ ಆ ಕ್ಷಣದ ಸಣ್ಣ ಸಣ್ಣ ಸಂಗತಿಯಲ್ಲಿರುತ್ತದೆ.ಅದನ್ನು ತನ್ನವರೊಂದಿಗೆ ಆನುಭವಿಸಬೇಕು. ಹಿಡಿದಿಟ್ಟುಕೊಳ್ಳಬೇಕು. ಆಪ್ತರೊಂದಿಗೆ ಹಂಚಿಕೊಳ್ಳಬೇಕು. ಇದು ಗಣ್ಯರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಪತ್ನಿಯರು ಒಂಟಿಯಾಗುತ್ತಾರೆ. ಖಿನ್ನರಾಗುತ್ತಾರೆ. ಭಾವನಾತ್ಮಕ ಅಸರೆಗಾಗಿ ಹಾತೊರೆಯುತ್ತಾರೆ.ಅದನ್ನು ಅತುಲ್ ನಂತವರು ಬಳಸಿಕೊಳ್ಳುತ್ತಾರೆ. ನೌಕರಿಯಲ್ಲಿರುವವರು, ಲಲಿತಕಲೆ,ಸಾಮಾಜಿಕಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ತಮ್ಮ ಲ್ಲಿನ ಶೂನ್ಯವನ್ನು ಹೇಗಾದರೂ ತುಂಬಿಸಿಕೊಳ್ಳಬಲ್ಲರು ಆದರೆ ಗ್ರಹಿಣಿ..?

ಗಂಡಂದಿರು ತನ್ನವರಿಗಾಗಿ, ತನ್ನ ಕುಟುಂಬಕ್ಕಾಗಿ ಒಂಚೂರಾದರೂ ಸಮಯ ಮಿಸಲಿಡಲೇಬೇಕಾಗಿದೆ. ಇಲ್ಲವಾದರೆ ಮನೆ ಮನೆಯಾಗಿ ಉಳಿಯಲಾರದು. ಯಾಕೆಂದರೆ ಈಗಿನ ಮಹಿಳೆಯ ಮುಂದೆ ಆನೇಕ ಆಯ್ಕೆಗಳಿವೆ. ಆಕೆ ಎಲ್ಲವನ್ನೂ ಬಿಟ್ಟು ಎದ್ದು ನಡೆಯಬಲ್ಲಳು.
’ನನ್ನದು’ ಆ ಮೂಲಕ ಒಳಗೊಳ್ಳುವ ’ನಮ್ಮದು’ ಎಂಬ ಭಾವವೇ ಮನುಷ್ಯನನ್ನು ಈ ಲೋಕದೊಡನೆ ಬಂಧಿಸುತ್ತದೆ. ಅದು ವ್ಯಯಕ್ತಿಕ ನೆಲೆಯಲ್ಲಿ ಗ್ರಹಿಣಿಯೊಬ್ಬಳ ಬದುಕಿನಲ್ಲಿ ’ಗಂಡ ಮತ್ತು ಮಕ್ಕಳು’ ಆಗಿರುತ್ತಾರೆ. ಅಲ್ಲಿ ಎಲ್ಲವೂ ಸರಿಯಾಗಿದ್ದರೆ ’ನಮ್ಮದು’ ಎಂಬ ಭಾವ. ಇಲ್ಲವಾದರೆ.....?.

Saturday, June 6, 2009

ಗೃಹಿಣಿ ಎಂಬ ಒಬ್ಬಂಟಿ



ನಾನು ಚಿಕ್ಕವಳಿರುವಾಗ ನನ್ನೂರು ಬಾಳುಗೋಡಿನಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಶಾಲೆಗೆ ಹೋಗುತ್ತಿದೆ. ಸುಮಾರು ಏಳು ಮೈಲಿಗಳ ಕಾಲುಹಾದಿ. ತುಂಬಿ ಹರಿಯುವ ನದಿಗಳು ಮತ್ತು ಹೊಳೆಗಳು ಎರಡೆರಡು. ಚಿಕ್ಕ ತೊರೆಗಳು ಮೂರು. ದಟ್ಟವಾದ ಅರಣ್ಯ.

ವಿವಿಧ ಹೂ, ಹಣ್ಣು,ಚಿಗುರುಗಳ ವನಸಿರಿ. ಆಗೀಗ ಹಂದಿ, ಮೊಲ, ಕಾಡುಕೋಳಿ, ಬರ್ಕ, ಚಣಿಲು, ಕಬ್ಬೆಕ್ಕು ಮುಂತಾದ ಪ್ರಾಣಿಗಳ ದರ್ಶನ. ವಿವಿಧ ರೀತಿಯ ಹಕ್ಕಿಗಳು. ಮಂಗಗಳದ್ದು ನಿರ್ಭಯ ರಾಜ್ಯಭಾರ.

ಆನೆಗಳ ಭಯದಲ್ಲಿ ನಮ್ಮದು ಗುಂಪುಗಳಾಗಿ ಪಯಣ. ಚೀಲದಲ್ಲಿ ಪಾಠ ಪುಸ್ತಕಗಳಿಗಿಂತ ಹೆಚ್ಚಾಗಿ ನೆಲ್ಲಿಕಾಯಿ, ಚೂರಿಕಾಯಿ, ಮೊಗ್ಗರೆಕಾಯಿ, ಹುಣುಸೆಕಾಯಿ, ಮಾವಿನಕಾಯಿ ಪೇರಲಕಾಯಿಗಳು. ಮಳೆಗಾಲದಲ್ಲಾದರೆ ಹುರಿದ ಹುಣಸೆಬೀಜ, ಸಾಂತಾಣಿ, ಕೊಬ್ಬರಿ ಬೆಲ್ಲ.

ಬೆಳಿಗ್ಗೆ ಪ್ರದೇಶ ಸಮಾಚಾರಕ್ಕೆ ಮನೆ ಬಿಡುತ್ತಿದ್ದರೆ ರಾತ್ರಿ ವಾರ್ತೆಗಳ ಸಮಯಕ್ಕೆ ಮನೆ ಸೇರುತ್ತಿದ್ದೆವು. ಇಡೀ ಹಗಲು ನಮ್ಮದು. ಸಮೃದ್ಧ ಬಾಲ್ಯ. ನದಿ, ತೋಟ, ಗದ್ದೆ, ಗುಡ್ಡ, ದನ-ಕರು, ಹಕ್ಕಿಗೂಡು, ಜೇನು ಎರಿ, ಮೀನು ಬೇಟೆ ಇವೇ ನಮ್ಮ ಕಾರ್ಯ ಕ್ಷೇತ್ರ. ಮಧ್ಯೆ ಆಗೀಗ ಓದು ಅಷ್ಟೇ. ಹಾಗೆಂದು ಪರೀಕ್ಷೆಯಲ್ಲಿ ಫೇಲಾಗುತ್ತಿರಲಿಲ್ಲ.

ಇಡೀ ಊರು ನಮ್ಮದು. ಊರಿನ ಜನ ನಮ್ಮವರು. ಪ್ರತಿಯೊಬ್ಬರಿಗೂ ನಾವು ಅಡ್ಡ ಹೆಸರಿಡುತ್ತಿದ್ದೆವು. ಆದರೂ ಅವರಿಗೆ ನಾವು ಅಚ್ಚುಮೆಚ್ಚು. ನಮ್ಮ ಕೀಟಲೆಗೆ ಅವರು ”ನಿಮ್ಮ ಅಪ್ಪನಿಗೆ ಹೇಳಿ ಬುದ್ಧಿ ಕಲಿಸುತ್ತೇವೆ” ಎಂದು ಅಬ್ಬರಿಸಿದರೂ ನಾವು ಕ್ಯಾರೆ ಅನ್ನುತ್ತಿರಲಿಲ್ಲ. ಅವರು ಹೇಳುವುದಿಲ್ಲವೆಂದು ನಮಗೆ ಗೊತ್ತಿತ್ತು. ಹೇಳಿದರೆ ಈ ಮಕ್ಕಳ ಬೆನ್ನಮೇಲೆ ನಾಗರ ಬೆತ್ತ ಅಥವಾ ಹುಣಸೆ ಬರ್ಲು ಹುಡಿಯಾಗುತ್ತೆ ಎಂಬುದು ಅವರಿಗೂ ಗೊತ್ತು.

ಆ ಊರ ಮಕ್ಕಳು ನಾವು. ಇಲ್ಲಿ ಈ ಕಾಂಕ್ರೀಟ್ ಕಾಡಿಅಲ್ಲಿ ಬಂದು ಬಿದ್ದಿದ್ದೇವೆ. ಇಲ್ಲಿಯ ಜನರ ಕ್ಷುದ್ರತೆ, ಸಣ್ಣತನ, ಬದುಕಿನ ಹೋರಾಟ; ಅದು ತಂದೊಡ್ಡುತ್ತಿರುವ ಮಾನಸಿಕ ಒತ್ತಡ, ಸಂಬಂಧಗಳ ಶಿಥಿಲತೆ, ನಶಿಸುತ್ತಿರುವ ಮಾನವೀಯ ಮೌಲ್ಯ- ಇವುಗಳನ್ನೆಲ್ಲಾ ಕಂಡು ಖಿನ್ನಳಾಗುತ್ತೇನೆ.

ನಾವೆಲ್ಲೋ ಕಳೆದುಹೋಗುತ್ತಿದ್ದೇವೆ. ಕಳೆದುಕೊಂಡದ್ದನ್ನು ಮಾತುಗಳಲ್ಲಿ, ಬರವಣಿಗೆಯಲ್ಲಿ ಕಲಾ ಮಾಧ್ಯಮಗಳಲ್ಲಿ ಪುನರ್ ಸೃಷ್ಟಿಸಲು ಪ್ರಯತ್ನಿಸುತ್ತೇವೆ. ನಾವು ಕಟ್ಟಿಕೊಳ್ಳುವ ಎಲ್ಲಾ ಸಂಬಂಧಗಳಲ್ಲಿ ಕಳೆದುಕೊಂಡದ್ದರ ಹುಡುಕಾಟವೇ ಅಂತರ್ ವಾಹಿನಿಯಾಗಿ ಹರಿಯುತ್ತಿರುತ್ತದೆ.

ಗ್ರಾಮಾಂತರ ಪ್ರದೇಶದಿಂದ ಬಂದ ಬಹಳಷ್ಟು ಜನರ ಚಡಪಡಿಕೆ ಇದು. ಅವರ ಬೇರುಗಳು ಅಲ್ಲಿ ಹರಡಿಕೊಂಡಿದೆ. ಇಲ್ಲಿ ಚಿಗುರೊಡೆಯಲು ಪ್ರಯತ್ನಿಸಿದರೂ ಆಳಕ್ಕೆ ಇಳಿಯಲಾಗದು. ಹೆಣ್ಣುಮಕ್ಕಳದಂತೂ ವಿಚಿತ್ರ ಸಮಸ್ಯೆ. ಇಲ್ಲಿಯ ಜೀವನ ಶೈಲಿ ಮನಸ್ಸನ್ನು ಇನ್ನಷ್ಟು ಸೂಕ್ಷವಾಗಿಸಿದೆ. ಹಾಗಾಗಿ ಎಲ್ಲದರತ್ತ ವಿಮರ್ಶೆಯ ನೋಟ. ಬಾಲ್ಯದ ಗೆಳೆಯ/ ಗೆಳತಿ ನಿಂತ ನೀರಾಗಿದ್ದಾರೆ ಎನಿಸುತ್ತದೆ. ಸಂವಹನ ಸಾಧ್ಯವಾಗುವುದಿಲ್ಲ. ಮನೆಗೆ ಬರುವ ಪರಿಚಿತರೆಲ್ಲ ಗಂಡನ ಸಂಬಂಧಿಕರು ಅಥವಾ ಗೆಳೆಯರೇ ಆಗಿರುತ್ತಾರೆ. ಒಂದುವೇಳೆ ತನಗೆ ಆತ್ಮೀಯರಾದ ಗೆಳೆಯರಿದ್ದರೂ ಅವರನ್ನು ಮನೆಗೆ ಆಹ್ವಾನಿಸುವಷ್ಟು ಅಥವಾ ಅವರೊಡನೆ ಹೊರಗೆ ಸುತ್ತಾಡುವಷ್ಟು ನಮ್ಮ ಸಮಾಜ ಮುಕ್ತವಾಗಿಲ್ಲ.

ಆಧುನಿಕ ವಿದ್ಯಾವಂತ ಗೃಹಿಣಿ ಒಂಟಿಯಾಗಿದ್ದಾಳೆ. ಆಕೆಗೆ ಸಂತೋಷವನ್ನು ಹಂಚಿಕೊಳ್ಳಲು ಬೇಕಾದಷ್ಟು ಜನ ಸಿಗುತ್ತಾರೆ. ಆದರೆ ದುಃಖ-ದುಮ್ಮಾನ, ಸಂದೇಹ-ಸಮಸ್ಯೆಗಳನ್ನು ಯಾರಲ್ಲಿ ತೋಡಿಕೊಳ್ಳುವುದು ಎಂದು ಗೊತ್ತಾಗುವುದೇ ಇಲ್ಲ. ಮನದಾಳವನ್ನು ಇನ್ನೊಬ್ಬರೆದುರು ತೆರೆದಿಟ್ಟರೆ ನಾಳೆ ಏನಾಗುವುದೋ ಎಂಬ ಅಳುಕು. ಹಾಗಾಗಿ ಎಲ್ಲವನ್ನು ಅಂತರಂಗದಲ್ಲೇ ಬಚ್ಚಿಟ್ಟುಕೊಳ್ಳುತ್ತಾಳೆ.

ನನ್ನನ್ನೇ ನೋಡಿ; ನನಗೊಬ್ಬ ಗೆಳೆಯನಿದ್ದಾನೆ. ಆತ್ಮೀಯ ಗೆಳೆಯನೆಂದು ಹೇಳಲಾಗದು. ಗೆಳೆತನದಲ್ಲಿ ಪರಸ್ಪರ ಭಾವ ಸ್ಪಂದನವಿರುತ್ತದೆ. ಇಲ್ಲಿ ಅದಿಲ್ಲ. ಹಾಗಿದ್ದರೆ ಆತ ಹೇಗೆ ನಿಮಗೆ ಗೆಳೆಯನಾದಾನು? ಎಂದು ಅನ್ನಿಸಬಹುದು. ಗೊತ್ತಿಲ್ಲ. ಆತ ಗೆಳೆಯನೆಂದು ಮನಸ್ಸು ಒಪ್ಪಿಕೊಂಡಿದೆ. ಬುದ್ಧಿ ತಕರಾರು ಮಾಡುತ್ತಿದೆ.

ನನ್ನ ಆತನ ಸಂಬಂಧದಲ್ಲಿ ನಾನು ಮಾತ್ರ ಮಾತಾಡುತ್ತಿರುತ್ತೇನೆ. ಮಹಿಳೆಯರು ಜಾಸ್ತಿ ಮಾತಾಡುತ್ತಿರುತ್ತಾರೆ ಎಂಬ ಆಪಾದನೆ ಇದೆ. ಅವರು ಮಾತಾಡಿ ಹಗುರವಾಗದಿದ್ದರೆ ಒಳಗಿನ ಒತ್ತಡಕ್ಕೆ ಸ್ಪೋಟಗೊಳ್ಳುವ ಅಪಾಯವಿದೆ. ಒತ್ತಡ ಹರಿಯಲೊಂದು ಚಾನಲ್ ಬೇಕು. ಮಹಿಳೆಯರ ಮಟ್ಟಿಗದು ಮಾತು ಮಾತ್ರ.

ನನ್ನ ಮಾತುಗಳಿಗೆ ನನ್ನ ಗೆಳೆಯನ ಪ್ರತಿಕ್ರಿಯೆ ಏನು ಎಂಬುದು ನನಗೆ ಗೊತ್ತಾಗುವುದಿಲ್ಲ. ಯಾಕೆಂದರೆ ನಮ್ಮ ಹೆಚ್ಚಿನ ಮಾತುಕತೆಯೆಲ್ಲಾ ನಡೆಯುವುದು ಪೋನಿನಲ್ಲಿ. ಆತ ಸುಮ್ಮನೆ ಹಾ, ಹುಂ, ಹೌದಾ, ಛೇ ಅನ್ನುತ್ತಿರುತ್ತಾನೆ.
ಬಹಳಷ್ಟು ಬಾರಿ ನನಗೆ ಅನ್ನಿಸುತ್ತದೆ; ಆತ ನನ್ನ ಪಾಲಿಗೆ ಕೇವಲ ಒಂದು ಡೈರಿ ಮಾತ್ರ. ಅಲ್ಲಿ ನನ್ನ ಮಾತುಗಳು ಮಾತ್ರ ದಾಖಲಾಗುತವೆ. ದಾಖಲಾಗುತ್ತದೆ ಎಂದು ನಂಬಿಕೊಂಡಿದ್ದೇನೆ. ಹತ್ತಾರು ವರ್ಷಗಳ ದಾಂಪತ್ಯದ ನಂತರ ಗಂಡನೊಬ್ಬ ಹೆಂಡತಿಯ ಪಾಲಿಗೆ ಮುಚ್ಚಿದ ಡೈರಿಯಾಗುವ ಸಂಭವವೇ ಹೆಚ್ಚು.

ಗಂಡಸರ ಜೀವನ ವಿಧಾನವೇ ಅಷ್ಟು. ಅಲ್ಲಿ ಯಾವುದೇ ಸ್ಥಿತ್ಯಂತರಗಳಿಲ್ಲ. ಅವರು ಯಾವುದನ್ನು ಜೀವದುಂಬಿ ಹಚ್ಚಿಕೊಳ್ಳಲಾರರು; ಹಂಚಿಕೊಳ್ಳಲಾರರು. ನಾವು ಹಾಗಲ್ಲ. ನಾವೆಲ್ಲಾ ವಸುಂಧರೆಯರು. ಒಡಲಾಳದಲ್ಲಿ ಕುದಿಯುವ ಲಾವ. ಮೇಲುಮೇಲಕ್ಕೆ ಹದವಾದ ಎರೆಮಣ್ಣು. ಉಕ್ಕುವ ಜೀವಜಲ. ಸಮೃದ್ಧ ಹಸಿರು. ಕಣ್ಣಿಗೆ ತಂಪು.

ವಸುಂಧರೆ ಎಂಬ ಶಬ್ದವನ್ನೇ ನೋಡಿ, ಅದಕ್ಕೆ ಎಷ್ಟೊಂದು ತೂಕವಿದೆ, ಸೌಂದರ್ಯವಿದೆ, ವೈಭವವಿದೆ. ವಸು ಎಂದರೆ ಬಂಗಾರ. ವಸುಂಧರೆ; ದ್ರವ್ಯವನ್ನು ಒಳಗೊಂಡಿರುವವಳು. ಆಕೆಯ ಒಡಲಲ್ಲಿ ಸಂಪತ್ತಿದೆ. ಖನಿಜವಿದೆ. ಏನಾದರೂ ’ಇದೆ’ ಅಂದರೆ ಅದನ್ನು ನೋಡುವ ಕುತೂಹಲ, ದೋಚುವ ಹಂಬಲ ಉಂಟಾಗುತ್ತದೆ. ’ಇದೆ’ ಅನ್ನುವುದು ಒಂದು ದಿನ ಇಲ್ಲವಾಗುತ್ತದೆ! ಬರಿದಾಗುತ್ತದೆ!!

ವಸುಂಧರೆಗೆ ಪರ್ಯಾಯವಾಗಿರುವ ಹಲವಾರು ಶಬ್ದಗಳಲ್ಲಿ ’ಇಳೆ’ ಎಂಬ ಶಬ್ದವೂ ಒಂದು. ವಸುಂಧರೆಯ ವೈಭವದ ಭಾರ ಇಲ್ಲಿಲ್ಲ. ಆದರೆ ಇದು ಮೈ ಮನಗಳಿಗೆ ಮುದವನ್ನು ನೀಡುತ್ತದೆ. ಇಳೆಯಲ್ಲಿ ಅರಳುವ ಪ್ರಕ್ರಿಯೆ ಇದೆ. ಇಳೆ; ಮಳೆ; ಬೆಳೆ; ಕಳೆ; ಶಬ್ದಗಳಿಗಿರುವ ಅನ್ಯೋನ್ಯ ಸಂಬಂಧವನ್ನು ಗಮನಿಸಿದರೆ ಅದು ಅಕ್ಷಯದ, ಸೃಷ್ಟಿಯ ಭಾವನೆಯನ್ನು ಮೂಡಿಸುತ್ತದೆ. ಇದು ಜೀವನ್ಮುಖಿಯಾದುದು.

ಕೋಲಾರದ ಕೆಜಿಎಫ಼್ ನೋಡಿದಾಗ ನನಗೆ ವಸುಂಧರೆ ನೆನಪಾಗುತ್ತದೆ. ಪ್ರಕೃತಿಯ ಮೇಲೆ ಪುರುಷ ದಬ್ಬಾಳಿಕೆಯ, ಆಕ್ರಮಣದ ಚಿತ್ರಣ ಸಿಗುತ್ತದೆ. ಆಧುನಿಕ ಗೃಹಿಣಿ ಕಣ್ಣೆದುರು ನಿಲ್ಲುತ್ತಾಳೆ.

ಅದೇ ಇಳೆ ಎಂದಾಗ ನನಗೆ ನನ್ನೂರು ನೆನಪಾಗುತ್ತದೆ. ಅಲ್ಲಿಯ ಸಮೃದ್ದ ಹಸಿರು, ನಿರಾಳ ಬದುಕು, ನಿಷ್ಕಲ್ಮಶ ಪ್ರೀತಿ ನೆನಪಾಗಿ ಕಾಡುತ್ತದೆ.
ಇಳೆಯಲ್ಲಿ ನನ್ನ ಬಾಲ್ಯ ಇದೆ. ವಸುಂಧರೆಯಲ್ಲಿ ವಾಸ್ತವ ಇದೆ.
ಎರಡನ್ನೂ ಸಮನ್ವಯಗೊಳಿಸುವುದು ಎಷ್ಟು ಕಷ್ಟ!

[’ಹಂಗಾಮ’ದ ವಸುಂಧರೆ ಕಾಲಂನಲ್ಲಿ ಪ್ರಕಟವಾದ ಲೇಖನ]