Sunday, December 30, 2018

ರಾಘವೇಶ್ವರನ ಬೆಂಬಲಿಗರೂ 'ನಾತಿಚರಾಮಿ'ಯ ನಿಂದಕರೂ..






ಒಬ್ಬಳೇ ಸಿನೇಮಾಕ್ಕೆ ಹೋಗುವುದು ನನಗೆ ಅನಿವಾರ್ಯ. ಮತ್ತು ನಾನದನ್ನು ಇಷ್ಟಪಡುತ್ತೇನೆ ಕೂಡಾ.  ಇಂದು ಕೂಡಾ  ವಂದಿವಾಗದರನ್ನು ಸೇರಿಸಿಕೊಳ್ಳದೆ ಒಬ್ಬಳೇ ನಾತಿಚರಾಮಿ ಸಿನೇಮಾಕ್ಕೆ ಹೋದೆ. ಸಿನೇಮಾದ  ಸಬ್ಜೆಕ್ಟ್ ಹಾಗಿತ್ತು. ಮೊದಲನೆಯದಾಗಿ ಹೇಳಿಬಿಡುತ್ತೇನೆ. ಈ ಸಿನೇಮಾದಲ್ಲಿ ತೊಡಗಿಸಿಕೊಂಡ ಯಾರೂ ನನ್ನ ಸ್ನೇಹದ ವಲಯದಲ್ಲಿರುವವರಲ್ಲ.
ಹೆಡ್ಡಿಂಗ್ ನಲ್ಲೇ ಸ್ವಾಮೀಜಿಯೊಬ್ಬರ ಹೆಸರನ್ನು ಉಲ್ಲೇಖಿಸಿದ ಕಾರಣದಿಂದಲೂ ಹೇಳಿಬಿಡುತ್ತೇನೆ, ರಾಘವೇಶ್ವರರನ್ನು ಪೂಜಿಸುವ ಸಮುದಾಯಕ್ಕೆ ಸೇರಿದವಳೂ ನಾನಲ್ಲ.. ಆದರೆ ನಾನೊಬ್ಬಳು ಹೆಣ್ಣು. ಅದೇ  ಈ ಲೇಖನವನ್ನು ಬರೆಯಲು ನನಗಿರುವ ಅರ್ಹತೆ.

‘ನಾತಿಚರಾಮಿ’ ಸಿನೇಮಾದಲ್ಲಿ ಮೈಮನಗಳ ನಡುವೆ ಸಂಘರ್ಷವಿದೆ ಎಂಬುದನ್ನು ಚಿತ್ರತಂಡ ಮೊದಲೇ ಜಾಹೀರು ಮಾಡಿತ್ತು. ಆಗಲೇ ಈ ಸಿನೇಮಾದ ನನಗೊಂದು ಚೂರು ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸಿತ್ತು. ಯಾಕೆಂದರೆ ಶಿವರಾಮಕಾರಂತರ ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯನ್ನು ನಾನು ಹತ್ತಾರು ಸಲ ಓದಿದ್ದೇನೆ., ಅದು ನನಗೆ ಸ್ನಾತಕೋತ್ತರ ಪದವಿಯಲ್ಲಿ ಪಠ್ಯವಾಗಿತ್ತು. ಮೇಸ್ಟ್ರರಾದ ಕೇಶವ ಶರ್ಮರು ಅದನ್ನು ನಮಗೆ ಅರೆದು ಕುಡಿಸಿದ್ದರು!

ನಾತಿಚರಾಮಿ, ಈ ಹೆಸರೇ ಸಾಮಾನ್ಯರಿಗೆ ಅಪರಿಚಿತ. ತನ್ನ ಹೆಸರಿನಿಂದಲೇ ಈ ಸಿನೇಮಾಕ್ಕೊಂದು ಸೀಮಿತ ಚೌಕಟ್ಟು ಬಂತು, ಅಂದರೆ ಇದರ ವೀಕ್ಷಕರು ಯಾರು ಎಂಬುದು ಮೊದಲೇ ನಿರ್ಧಾರವಾದಂತಿತ್ತು.. ಅಷ್ಟರಮಟ್ಟಿಗೆ ಅದು ಸಾಮಾನ್ಯ ಪ್ರೇಕ್ಷಕರಿಂದ ಅಂತರವನ್ನು ಕಾಯ್ದುಕೊಂಡಿತು. ಸಿನೇಮಾದ ಭಾಷೆಯಲ್ಲಿ ಹೇಳುವುದಾದರೆ ಸಿ ಸೆಂಟರಿಗೆ ಇದು ಹೋಗಲು ಸಾಧ್ಯವೇ ಇಲ್ಲ. ಸಿನೇಮಾ ನೋಡಿದ ಮೇಲೆ ನನಗನ್ನಿಸಿದ್ದು. ಇದು ಬಿ ಸೆಂಟರಿಗೂ ಹೋಗಲಾರದು. ಆದರೆ ಎ ಸೆಂಟರಿನಲ್ಲಿ ಕನಿಷ್ಟ ಇಪ್ಪತೈದು ದಿನವದರೂ ಓಡಬಹುದಾಗಿದ್ದ  ಸದಭಿರುಚಿಯ ಸಿನೇಮಾ. ಆದರೆ ಈಗ ಇದು ಒಂದೇ ವಾರದಲ್ಲಿ ಎತ್ತಂಗಡಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಯಾಕೆ?

ಇದಕ್ಕೆ ಕಾರಣ ಪೇಸ್ಬುಕ್ ಮದ್ಭಕ್ತರ ಪಡೆ. ಇವರು ಕಂಪ್ಯೂಟರ್ ಕೀಲಿಮಣೆಯ ಮೇಲೆ ಕೈಯಿಟ್ಟರೆ ಎಲ್ಲಿಯೋ ಒಂದು ಕಡೆ ಸರ್ವನಾಶವಾಗುವುದು ಖಚಿತ!
[ಸಿನೇಮಾದ ಬಗ್ಗೆ ನಾನು ಹೆಚ್ಚು ಬರೆಯಲು ಹೋಗುವುದಿಲ್ಲ. ಅ ಬಗ್ಗೆ ಪೇಸ್ಬುಕ್ ನಲ್ಲಿ ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಿವೆ]

ನಿಮಗೆ ನೆನಪಿರಬಹುದು, ಇಂದಿಗೆ ನಾಲ್ಕು ವರ್ಷಗಳ ಹಿಂದೆ ರಾಘವೇಶ್ವರ ಸ್ವಾಮೀಜಿಯಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಪ್ರೇಮಲತಾ ಎಂಬ ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಲು ಸಿದ್ಧಳಾಗಿದ್ದರು. ಆದರೆ ಎದರಾಳಿಯಾಗಿದ್ದುದು ಶಂಕರಪರಂಪರೆಯ ಪೀಠಸ್ಥ ಬಲಾಡ್ಯ ಸ್ವಾಮೀಜಿ.  ಮಠದ ಕುತಂತ್ರದ ಕಾರಣವಾಗಿ ಪ್ರೇಮಲತಾ ಮತ್ತು ಆಕೆಯ ಗಂಡನೇ ಇಪ್ಪತ್ತಾರು ದಿನಗಳನ್ನು ಜೈಲಿನಲ್ಲಿ ಕಳೆಯುವಂತಾಯ್ತು. ಆ ಘಟನೆಯನ್ನು ಯಾವ ಮಾಧ್ಯಮವೂ ವರದಿ ಮಾಡಬಾರದು ಎಂದು ಮಠ ನ್ಯಾಯಲಯದಿಂದ ತಡೆಯಾಜ್ನೆ ತಂದಿತ್ತು. ಅವರ ಸಮಾಜಬಾಂಧವರೂ ಅಂದಿನ ದಿನಗಳಲ್ಲಿ ಆ ದಂಪತಿಗಳ ಪರ ವಹಿಸಲಿಲ್ಲ. ಆ ಸಂದರ್ಭದಲ್ಲಿ ‘ಒಪ್ಪಿಸಲ್ಪಡುವ ಸೆಕ್ಸ್ ಎಂಬುದೊಂದು ಇದೆಯಾ?’ ಅಂತ ಲೇಖನವೊಂದನ್ನು ಬರೆದಿದ್ದೆ ಮತ್ತು ಕೆಲವೊಂದು ಸ್ಟೇಟಸ್ ಗಳನ್ನು ಪೇಶ್ಬುಕ್ ಗೆ ಅಪ್ಲೋಡ್ ಮಾಡಿದ್ದೆ.. ಅದನ್ನು ಓದಿ ಕೆರಳಿದ ಗೋಸ್ವಾಮಿ ಭಕ್ತರು ನನ್ನನ್ನು ಟ್ರೋಲ್ ಮಾಡಿ, ಹ್ಯಾಸ್ಟ್ಯಾಗ್ ಸೃಷ್ಟಿಸಿ ಲೇವಡಿ ಮಾಡತೊಡಗಿದರು, ತಲೆಯಲ್ಲಿ ಸೆಗಣಿ ತುಂಬಿಕೊಂಡ ಆ ಭಕ್ತರನ್ನು ನಾನು ನಿರ್ಲಕ್ಷಿಸುತ್ತಾ ಬಂದೆ.

ಈಗ ಕಾಲ ಬದಲಾಗಿದೆ. ಹವ್ಯಕ ಸಮಾಜ ಎರಡು ಬಣಗಳಾಗಿ ಒಡೆದಿದೆ. ಒಂದು ಬಣ ಸ್ವಾಮೀಜಿಯ ಅನೈತಿಕ ಚಟುವಟಿಕೆಗಳನ್ನೆಲ್ಲಾ ಬಯಲು ಮಾಡುತ್ತಾ ಬಂತು. ಇನ್ನೊಂದು ಬಣ ಸ್ವಾಮೀಜಿಗೆ ಬೆನ್ನೆಲುಬಾಗಿ ನಿಂತಿತು.  ಈಗ ಆ ಸ್ವಾಮೀಜಿಯ  ಮೇಲೆ ಮೂರು ಪ್ರಕರಣ್ಗಳಲ್ಲಿ ಚಾರ್ಜ್ ಶೀಟ್ ಪೈಲ್ ಆಗಿದೆ. ಆ ಮಹಿಳೆಯೊಡನೆ ಪರಸ್ಪರ ಒಪ್ಪಿಗೆಯ ಲೈಂಗಿಕ ಸಂಬಂಧ ಇತ್ತು ಎಂದು ಕೋರ್ಟ್ ತೀರ್ಪು ನೀಡಿದೆ. ಇನ್ನೆರಡು ಪ್ರಕರಣ್ಗಳಲ್ಲಿ ಕೋರ್ಟ್ ಸಮನ್ಸ್ ಇದ್ದರೂ ಆ ಸ್ವಾಮೀಜಿ ನ್ಯಾಯಾಲಯಕ್ಕೆ ಹಾಜರಾಗದೆ , ನ್ಯಾಯಾಲಯದ ಕಣ್ಣಿಗೆ ಮಣ್ಣೇರಚಿ ಆಡಂಬರದಿಂದ ತಿರುಗಾಡುತ್ತಿದ್ದಾರೆ. ಶಂಕರಪರಂಪರೆಯ ಪೀಠಾಧಿಪತಿಯಾಗಿಯೇ ಮುಂದುವರೆದಿದ್ದಾರೆ. ಅವರ ಕಳಂಕಿತ ಕೈಯಿಂದಲೇ ಭಕ್ತರು ಮಂತ್ರಾಕ್ಷತೆಯನ್ನು ಸ್ವೀಕರಿಸುತ್ತಿದ್ದಾರೆ.




ಹವ್ಯಕರ ಸ್ವಾಮೀಜಿ ಪರ ಬಣವು ಶುಕ್ರವಾರದಿಂದ ಅರಮನೆ ಮೈದಾನದಲ್ಲಿ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸಿದೆ, ಲಂಪಟ ಸ್ವಾಮೀಯ ಭಕ್ತರು ಗಣನೀಯ ಸಂಖ್ಯೆಯಲ್ಲಿ ಅದರಲ್ಲಿ ಭಾಗವಹಿಸುತ್ತಿದ್ದಾರೆ. ಇವತ್ತು ಪೇಸ್ಬುಕ್ ಗೆ ಬಂದಾಗ ಯು.ಬಿ.ಪವನಜ ಎಂಬ ಮದ್ಭಕ್ತರೊಬ್ಬರು ಈ ಸಮ್ಮೇಳನದ ಬಗ್ಗೆ ಹಾಕಿದ ಸ್ಟೇಟಸ್ ಒಂದು ನನ್ನ ವಾಲ್ ನಲ್ಲಿ ಉರುಳುತ್ತಾ ಬಂತು. ಅದರಲ್ಲಿ ಆತ ನನ್ನನ್ನು ಟ್ರೋಲ್ ಮಾಡಿದ್ದ. ಮಾತ್ರವಲ್ಲ ತನ್ನ ಪರಾಕ್ರಮವನ್ನು ತೋರ್ಪಡಿಸಿಕೊಳ್ಳಲು ನನಗೆ  ಹ್ಯಾಸ್ಟ್ಯಾಗ್ ಸೃಷ್ಟಿಸಿದ ರಾಘವೇಂದ್ರ ಸುಬ್ರಹ್ಮಣ್ಯ ಎಂಬಾತನಿಗೂ ಟ್ಯಾಗ್ ಮಾಡಿದ್ದರು. ಅಷ್ಟರಲ್ಲೇ  ‘ಅಕ್ಕಾ ನಿಮ್ಮನ್ನು ಮತ್ತೆ ಕೆಣಕಲು ನೋಡುತ್ತಿದ್ದಾರೆ’ ಅಂತ ಇನ್ನೊಬ್ಬ ಮದ್ಭಕ್ತನ  ಸ್ಕ್ರೀನ್ ಶಾಟ್ ನನ್ನ ಇನ್ಬಾಕ್ಸ್ ಗೆ ಬಂದು ಬಿತ್ತು. ಇದು ಕೂಡಾ ಈ ಲೇಖನವನ್ನು ಬರೆಯಲು ಪರೋಕ್ಷ ಕಾರಣವಾಯ್ತು.

ರಾಘವೇಶನ ಭಕ್ತರ ಪಡೆ ಸತತ ನಾಲ್ಕು ವರ್ಷಗಳ ಕಾಲ ಯಾಕೆ ನನ್ನನ್ನು ಲೇವಡಿ ಮಾಡುತ್ತಿದೆ? ಅವರೇ ಕೊಡುವ ಕಾರಣ ನಾನು ಗಂಜಿ ಗಿರಾಕಿ!

ಈ ಪೇಸ್ಬುಕ್ ನಲ್ಲಿ ಭಕ್ತರ ಬಹುದೊಡ್ಡ ಪಡೆಯೇ ಇದೆ. ಅವರು ಮೋದಿ ಭಕ್ತರಾಗಬಹುದು, ರಾಘವೇಶನ ಭಕ್ತರಾಗಿರಬಹು, ಅರ್ಜುನ ಸರ್ಜರಂತಹ ನಟರ ಭಕ್ತರಾಗಿರಬಹುದು. ಸಿದ್ಧರಾಮಯನಂತ ಅಹಿಂದ ಭಕ್ತರಾಗಿರಬಹುದು. ಒಟ್ಟಿನಲ್ಲಿ ಅವರು ಭಕ್ತರು ಅಷ್ಟೇ. ಅವರ ತಲೆಯಲ್ಲಿ ಮಿದುಳಿರಬೇಕಾದ ಜಾಗದಲ್ಲಿ ಇನ್ನೆನೋ ಇರುತ್ತದೆ! ಅಂತಹ ಚರಂಡಿಹುಳಗಳ ಬಳಗ ಪ್ರೇಮಲತಾ ಬಗ್ಗೆ ಅತ್ಯಂತ ಅಸಹ್ಯವಾಗಿ ಮಾತಾಡುತ್ತಾರೆಯೇ ವಿನಃ ತಮ್ಮ ಗುರುಗಳ ಮೇಲಾದ ಚಾರ್ಜ್ ಶೀಟ್ ಬಗ್ಗೆ ತುಟಿ ಪಿಟಕ್ ಎನ್ನುವುದಿಲ್ಲ. ಚಾರ್ಜ್ ಶೀಟಿನಲ್ಲಿ ಆ ಸ್ವಾಮೀಜಿ ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡ ಇಪ್ಪತ್ತಾರು ಮಹಿಳೆಯರ ಹೆಸರು , ವಿಳಾಸ ಸಮೇತ ಉಲ್ಲೇಖವಾಗಿದೆ. ಆದರೂ ಭಕ್ತರ ಕಣ್ಣಿನ ಪೊರೆ ಕಳೆದಿಲ್ಲ.

 ಶ್ರುತಿಹರಿಹರನ್ ಎದುರು ಹಾಕಿಕೊಂಡದ್ದು ಬಹುತೇಕ ಇಡೀ ಕನ್ನಡ ಚಿತ್ರರಂಗವನ್ನು. ಸ್ಟಾರ್ ನಟನ ಅಭಿಮಾನಿ ಪಡೆಯನ್ನು. ಚರಂಡಿ ಯಾವುದಾದರೇನು? ಹುಳುಗಳೆಲ್ಲಾ ಒಂದೇ ಪ್ರಭೇದಕ್ಕೆ ಸೇರಿದವುಗಳು! ಮೀಟೂ ಪ್ರಕರಣದ ಜ್ವಾಲೆ ಇನ್ನೂ ಜೀವಂತವಾಗಿರುವಾಗಲೇ ಅವಳ ಸಿನೇಮಾ ಗೆಲ್ಲಲು ಬಿಡುವರೇ? ಅಡ್ಡಗಾಲು ಹಾಕಿಯೇ ಹಾಕುತ್ತಾರೆ. ಉಳಿದವರು ಬಿಡಿ, ನಾತಿಚರಾಮಿ ಚಿತ್ರತಂಡವೇ ಅವಳ ಬೆನ್ನಿಗೆ ನಿಂತ ಹಾಗೆ ಕಾಣುತ್ತಿಲ್ಲ.  ಅಡಿಯೋ ರಿಲೀಸ್, ಟೀವಿ ಡಿಸ್ಕಷನ್ ಸೇರಿದಂತೆ ಸಿನೇಮಾ ಬಿಡುಗಡೆಗೆ ಸಂಬಂಧಪಟ್ಟ ಯಾವ ಚಟುವಟಿಕೆಗಳಲ್ಲೂ ಶ್ರುತಿ ಕಾಣಿಸಿಕೊಂಡದ್ದು ನನಗಂತೂ ಕಾಣಿಸಲಿಲ್ಲ. ಪ್ರೇಮಲತಾ ಪ್ರಕರಣದಲ್ಲಿ ಮೊದಲಿಗೆ ಆಕೆಯ ಇಡೀ ಕುಟುಂಬ ಏಕಾಂಗಿಯಾಗಿ ಹೋರಾಡಿತು, ಶ್ರುತಿ ಕೂಡಾ ಈಗ ಏಕಾಂಗಿಯಾಗಿ ಉಳಿದಿದ್ದಾರೆ ಅನ್ನಿಸುತ್ತಿದೆ. 

ಕೇವಲ ಸಿನೇಮಾ ಪ್ರಚಾರಕ್ಕಾಗಿಯೇ ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲುತ್ತಿರುವ ಈ ಹೊತ್ತಿನಲ್ಲಿ ನಾತಿಚರಾಮಿ ತಂಡ ಪ್ರಚಾರವನ್ನು ತೀರಾ ಕಡೆಗಣಿಸಿದೆ. ಕೇವಲ ಸೋಷಿಯಲ್ ಮೀಡಿಯಾವನ್ನು ಮಾತ್ರ ನೆಚ್ಚಿಕೊಂಡಿದೆ. ಆದರೆ ಸೋಷಿಯಲ್ ಮೀಡಿಯಾ ಅನ್ನುವುದು ಭಕ್ತರ ಅಡುಂಬೊಲ. ಅವು ಗುಂಪುಕಾಗೆಗಳು. ಮೊನ್ನೆ ಜನಪ್ರಿಯ ಟೀವಿಯ ಧಾರವಾಹಿಯ ನಿರ್ದೇಶಕರೊಬ್ಬರು ಚಿತ್ರಕ್ಕೆ ಶುಭ ಹಾರೈಸಿ ಪೋಸ್ಟ್ ಹಾಕಿದರು. ತಕ್ಷಣವೇ ಕಾಗೆಯೊಂದು ಹಾರಿ ಬಂದು ಶ್ರುತಿ ಹರಿಹರನ್ ಅಭಿನಯಿಸಿದ ಚಿತ್ರವನ್ನು ನಾನು ನೋಡುವುದಿಲ್ಲ ಎಂದು ಹಿಕ್ಕೆ ಹಾಕಿತು. ಪಾಪ, ಅವರು ಆ ಪೋಸ್ಟ್ ಅಳಿಸಿಯೇಬಿಟ್ಟರು! ಆಮೇಲೆ ಕಾಗೆಗಳ ಗುಂಪು ಎಲ್ಲೆಲ್ಲೋ ಹಿಕ್ಕೆ ಮಾಡುತ್ತಾ ಸಂಚರಿಸುತ್ತಿದ್ದುದನ್ನು ನೋಡಿದೆ. ಅಂದು ಈ ಗುಂಪು ಸ್ವಾಮೀಜಿಯ ಪರವಾಗಿ ನಿಂತಿತು. ಇಂದು ಈ ಗುಂಪು ಶ್ರುತಿ ವಿರುದ್ಧವಾಗಿ ನಿಂತಿದೆ.ಸಂಪ್ರದಾಯಿಕ ಸಿನೇಮಾ ಪ್ರಮೋಟರ್ಸ್ ಮೌನದ ಮೊರೆ ಹೋಗಿದ್ದಾರೆ. ಮೌನ ಯಾವಗಲೂ ವ್ಯವಸ್ಥೆಯನ್ನು ಪೋಷಿಸುತ್ತಿರುತ್ತದೆ. ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವುದು ಅಷ್ಟು ಸುಲಭವಲ್ಲ. ಇದೆಲ್ಲದರ ನಡುವೆಯೂ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಮೆಲ್ಲ ಮೆಲ್ಲನೆ ಪ್ರಸಾರಿಸುತ್ತಿದೆ. ಅದೊಂದು ಆಶಾದಾಯಕ ಬೆಳವಣಿಗೆ

ಈ ಕಾಗೆಗಳ ಗುಂಪು ಬಿಡಿ. ಕಂಪರ್ಟ್ ಝೋನ್ ನಲ್ಲಿರುವ ಕೆಲ ಮಹಿಳೆಯರು ಕೂಡಾ ‘ಅವಳು ನ್ಯಾಯಾಲಯದ ಅಗ್ನಿದಿವ್ಯದಲ್ಲಿ ಗೆದ್ದು ಬರಲಿ, ಅಲ್ಲಿಯವರೆಗೆ ನನ್ನದು ತಟಸ್ಥ ನಿಲುವು’ ಎನ್ನುತ್ತಾರೆ. ಇವರು ಪ್ರೇಮಲತಾ ಪರವಾಗಿಯೂ ನಿಲ್ಲುವುದಿಲ್ಲ, ಶ್ರುತಿ ಹರಿಹರನ್ ಪರವಾಗಿಯೂ ನಿಲ್ಲುವುದಿಲ್ಲ. 

ಪರ ವಹಿಸಲೇಬೇಕಾದ ಸಂದರ್ಭಗಳಲ್ಲಿ ಕೂಡಾ ತಟಸ್ಥ ನಿಲುವು ತಾಳುವುದು  ವ್ಯವಸ್ಥೆಯನ್ನು ಸಮರ್ಥಿಸಿಕೊಂಡತೆಯೇ ಆಗುತ್ತದೆ. ಲಿಂಗಸಮಾನತೆಯ ಹೋರಾಟದ ಸಂದರ್ಭಗಳಲಂತೂ ಅದು  ಮಹಿಳಾ ವಿರೋಧಿ ನಿಲುವೇ ಆಗಿರುತ್ತದೆ..ಇಂತವರಿಗೆ ಹೇಗೆ ತಿಳಿಸಿಹೇಳುವುದು,?

ನಾತಿಚರಾಮಿ ಎಂಬ ಸಿನೇಮಾವನ್ನು ನೋಡಿದಾಗ ನನಗೆ ನೆನಪಾಗಿದ್ದು ಭವಭೂತಿಯ ‘ಕಟ್ಟಿಯುಮೆನೋ ಮಾಲೆಗಾರನ ಪೊಸ  ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ?’ ಎಂಬ ಭವಭೂತಿಯ ನಿರಿಕ್ಷೆಯಿಂದ ಕೂಡಿದ  ನೋವಿನ ಉದ್ಘಾರ. ನಿರ್ಧೇಶಕ ಮುಂಸೋರೆಯವರು ಅಷ್ಟು ಸೊಗಸಾದ ಹೂಮಾಲೆಯನ್ನು ಪೋಣಿಸಿದ್ದಾರೆ. ಆದರೆ ಅದನ್ನು ಅಘ್ರಾಣಿಸಿ, ಮುಡಿಗೇರಿಸಿಕೊಳ್ಳುವ ರಸಿಕರು ಇಲ್ಲದೆ ಹೋದರೆ ಏನು ಪ್ರಯೋಜನ? ನಾತಿಚಾರಮಿ ಗೆಲ್ಲಬೇಕು, ಅದು ಗೆದ್ದರೆ ಶ್ರುತಿಹರಹರನ್ ಗೆದ್ದಂತೆ. ಅದಕ್ಕಾಗಿ ಚಿತ್ರತಂಡ ಪ್ರಚಾರಕ್ಕಾಗಿ ನಟಿಯನ್ನೇ ಮುನ್ನಲೆಗೆ ತರಬೇಕಾಗಿತ್ತು. ಅದರೆ ಅವರು ಹಿನ್ನೆಲೆಯಲ್ಲೇ ಉಳಿದುಬಿಟ್ಟರು. ಸುಮ್ಮನಾಗಿಬಿಟ್ಟರು


ಒಂದು ವೇಳೆ ಚಿತ್ರದಂಡ ಬಾಕ್ಸ್ ಆಪೀಸ್ ಬಗ್ಗೆ ತಲೆಕೆಡಿಸಿಕೊಳ್ಳದೆ, ಕೇವಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದರೆ ಅವರಿಗೆ ನಿರಾಶೆಯಾಗಲಾರದು. ಪ್ರಶಸ್ತಿಗಳ ಸುರಿಮಳೆಯೇ ಆಗಬಹುದು!.

·         ಉಷಾಕಟ್ಟೆಮನೆ.


Saturday, October 13, 2018

ಕೊಚ್ಚಿ ಬಿಯನಾಲೆ; ಕಲೆಯ ಬಲೆ.












 ಅಮೂರ್ತತೆಯನ್ನು ಮೂರ್ತರೂಪಕ್ಕೆ ತರುವುದು ಹೇಗೆ?  ಮೂರ್ತವಾಗಿರುವುದನ್ನು ವಿವಿಧ ದ್ರುಷಿಕೋನಗಳಿಂದ ಗ್ರಹಿಸಿ ಅದಕ್ಕೆ ಮತ್ತಷ್ಟು ಹೊಳಪು ತುಂಬಿ ಇನ್ನೊಂದು ಮಾಧ್ಯಮಕ್ಕೆ ತರುವುದು ಹೇಗೆ? ಇದು ಕಲಾವಿದನ ಸವಾಲು.

 ಕಲಾಕ್ರುತಿಯನ್ನು ನೋಡುವ. ಅಸ್ವಾದಿಸುವ ಬಗೆ ಹೇಗೆ?  ಕಲಾಕ್ರುತಿಯ ಮುಂದೆ ಕೆಲವು ಜನರು ಯಾಕೆ ಮೌನವಾಗಿ ಘಂಟೆಗಟ್ಟಲೆ ನಿಂತುಕೊಳ್ಳುತ್ತಾರೆ?  ಇದು ಕಲಾವಿದೆಯಲ್ಲದ. ಕಲಾವಿಮರ್ಶಕಳೂ ಅಲ್ಲದ ನನ್ನನ್ನು  ಕಾಡುವ ಕೆಲವು ಪ್ರಶ್ನೆಗಳು.

  .ಹಾಗಿದ್ದರೂ ನಾನಿರುವ ಬೆಂಗಳೂರಿನಿಂದ 528 ಕಿ.ಮೀ ದೂರದಲ್ಲಿರುವ ಕೇರಳದ ಪೋರ್ಟ್ ಕೊಚ್ಚಿಯಲ್ಲಿ ನಡೆಯುತ್ತಿರುವ  ಕೊಚ್ಚಿ ಬಿಯಾನಾಲೆ’ [Kochi-muziris Biennale] ಕಳೆದ ತಿಂಗಳು ಹೋಗಿದ್ದೆ.. ಹಾಗೆ ಹೋಗಲು ಬಲವಾದ ಇನ್ನೊಂದು ಕಾರಣವೂ ಇತ್ತು.ಅದು ಐತಿಹಾಸಿಕ ಹಿನ್ನೆಲೆಯಿರುವ ಪೋರ್ಟ್ ಕೊಚ್ಚಿಯೆಂ ಪುಟ್ಟ ಬಂದರಿನೆಡೆಗಿರುವ ಸಹಜ ಕುತೂಹಲ. ಪೋರ್ಚಿಗೀಸರು, ಡಚ್ಚರು ಮತ್ತು ಬ್ರಿಟೀಶರು ಇಲ್ಲಿ ಕಾಲಾನುಕ್ರಮದಲ್ಲಿ  ವಸಹಾತುಗಳನ್ನು ನಿರ್ಮಿಸಿಕೊಂಡಿದ್ದರು. ಇಲ್ಲಿಂದಲೇ ಸಾಂಬಾರು ಪದಾರ್ಥಗಳು ಸೇರಿದಂತೆ ಭಾರತದ ಇನ್ನಿತರ ವಸ್ತುಗಳು ಮದ್ಯಪ್ರಾಚ್ಯ ದೇಶಗಳಿಗೆ ರವಾನೆಯಾಗುತ್ತಿತ್ತು. ಹಾಗಾಗಿ ಇಂದಿಗೂ  ಇಲ್ಲಿಯ ವಾಸ್ತುಶಿಲ್ಪಗಳಲ್ಲಿ ಆ ದೇಶಗಳ ಪ್ರಭಾವವನ್ನು ಕಾಣಬಹುದು. ಸುಂದರವಾದ ಕಡಲ ಕಿನಾರೆಯನ್ನು ಹೊಂದಿರುವ ಈ ಪುಟ್ಟ ದ್ವೀಪದಲ್ಲಿ ನಮ್ಮ ಗೋಕರ್ಣದ  ಹಾಗೆ ಸದಾ ವಿದೇಶಿಯರೇ ಅಡ್ಡಾಡುತ್ತಿರುತ್ತಾರೆ.

 

  ಬಿಯನಾಲೆ ಎಂಬುದು ಮೂಲತ್ ಇಟಾಲಿಯನ್ ಪದ. ಅದರ ಅರ್ಥಎರಡು ವರ್ಷಗಳಿಗೊಮ್ಮೆ ನಡೆಯುವ ಉತ್ಸವ, ಈ ಉತ್ಸವದ ಕನಸು ಕಂಡು ಕಾರ್ಯಗತಗೊಳಿಸಿದವರಲ್ಲಿ ಮೂವರ ಹೆಸರು ಪ್ರಮುಖವಾದುದು. ಅವರೇ ಈಗ ಕೊಚ್ಚಿ ಬಿಯನಾಲೆಯ ಪ್ರೆಸಿಡೆಂಟ್ ಆಗಿರುವ ಬೋಸ್ ಕ್ರುಷ್ಣಮಾಚಾರಿ, ಪ್ರೋಗ್ರಾಮ್ಸ್ ಡೈರೆಕ್ಟರ್ ಆಗಿರುವ ರಿಯಾಸ್ ಕೋಮ್ ಮತ್ತು ಎಜುಕೇಶನ್ ಕನ್ಸ್ ಲ್ಟೆಂಟ್ ಆಗಿರುವ ಮೀನಾ ವಾರಿ. ಇವರ ಜೊತೆ ಹತ್ತಾರು ಮಂದಿ ಕ್ಯೂರೇಟರ್ ಗಳು, ಪ್ರೋಜೆಕ್ಟ್ ಅಡೈಸರ್ ಗಳು ಬಿಯನಾಲೆಯ ಯಶಸ್ವಿಗಾಗಿ ಹಗಲಿರುಳು ದುಡಿಯುತ್ತಿರುತ್ತಾರೆ. ಈ ವರ್ಷದ ಬಿಯನಾಲೆಯ ಕ್ಯುರೇಟರ್ ಮೂಲತಃ ಕನ್ನಡಿಗರಾದ ಮುಂಬೈನಿವಾಸಿಯಾಗಿರುವ ಆರ್ಟಿಸ್ಟ್ ಸುದರ್ಶನ ಶೆಟ್ಟಿ . ಪ್ರಪಂಚಾದ್ಯಾಂತದ ಕಲಾವಿದರನ್ನೆಲ್ಲಾ ಸಂಪರ್ಕಿಸಿ ಕೊಚ್ಚಿಗೆ ಬರಮಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು. ಬಿಯನಾಲೆಯ ಹಿಂದೆ ವರ್ಷಗಳ ತಯಾರಿಯಿದೆ. ಸಾವಿರಾರು ಜನಗಳ ಪರಿಶ್ರಮವಿದೆ. ಇದೇ ಮಾದರಿಯ ಬಿಯನಾಲೆ ವೆನಿಸ್. ಬರ್ಲಿನ್. ಶಾಂಘೈಗಳಲ್ಲಿ ನಡೆಯುತ್ತಿದೆ.

 ಮುಝುರಿಸ್ ಅಂದರೆ ಕೊಚ್ಚಿಯಲ್ಲಿದ್ದ ಪುರಾತನ ಕೋಟೆ. ಇದು ಕೊಚ್ಚಿಯಲ್ಲಿ ನಡೆಯುತ್ತಿರುವುದರಿಂದ ಕೊಚ್ಚಿ ಮುಝುರೀಸ್ ಬಿಯನಾಲೆ. ಅಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಸ್ಥಳೀಯತೆಯನ್ನು ಒಳಗೊಂಡ ಸಮಕಾಲೀನ ಅಂತರಾಷ್ಟ್ರೀಯ ಮಟ್ಟದ ಕಲಾ ಉತ್ಸವ. ಇಲ್ಲಿಯ ವಿಶೇಶತೆಯೇನೆಂದರೆ ಅಲ್ಲಿ ಯಾವ್ಯಾವ ಕಲಾಪ್ರಕಾರಗಳ ಪ್ರದರ್ಶ ನಡೆಯುತ್ತದೆಯೋ ಅದೆಲ್ಲದರ ರೂವಾರಿಗಳಾದ ಕಲಾವಿದರು ಸ್ವತಃ ಉತ್ಸವದಲ್ಲಿ ಭಾಗಿಯಾಗುತ್ತಾರೆ ಮಾತ್ರವಲ್ಲ. ಕಲಾಪ್ರೇಮಿಗಳ ಜೊತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಾರೆ; ಸಂವಾದದಲ್ಲಿ ಬಾಗಿಯಾಗುತ್ತಾರೆ. ಕೊಚ್ಚಿ ಬಿಯನಾಲೆಯ ಸ್ಥಾಪಕರಲ್ಲಿ ಒಬ್ಬರಾದ ರಿಯಾಸ್ ಕೊಮು [Riyas Komu] ಇದನ್ನು ಜನರ ಬಿಯನಾಲೆಎಂದು ಕರೆಯುತ್ತಾರೆ,

ಕೊಚ್ಚಿ ಬಿಯನಾಲೆ ಮೊದಲ ಬಾರಿಗೆ ೨೦೧೨ರಲ್ಲಿ ಆರಂಭವಾಗಿತ್ತು. ಈಗ ನಡೆಯುತ್ತಿರುವುದು ಮೂರನೆಯ ಬಿಯನಾಲೆ. ದಿಸೆಂಬರ್ ೧೨ರಂದು ಆರಂಭವಾದ ಬಿಯನಾಲೆ ೧೦೮ ದಿನಗಳ ಕಾಲ ನಡೆದು ಮಾರ್ಚ್ ತಿಂಗಳಾಂತ್ಯಕ್ಕೆ ಸಂಪನ್ನಗೊಳ್ಳುತ್ತದೆ. ಈ ವರ್ಷ ೩೧ ದೇಶಗಳ ೯೭ ಆರ್ಟಿಸ್ಟ್ ಗಳು ಭಾಗವಹಿಸುತ್ತಿದ್ದಾರೆ. ಏಕಕಾಲದಲ್ಲಿ ಹತ್ತು ಜಾಗಗಳಲ್ಲಿ ಕಲಾಪ್ರದರ್ಶನ ನಡೆಯುತ್ತಿದೆ. ಹವ್ಯಾಸಿ ಮತ್ತು ವ್ರುತ್ತಿಪರ  ಕಲಾವಿದರ ಜೊತೆ ವಿದ್ಯಾರ್ಥಿ ಬಿಯನಾಲೆಯೂ ನಡೆಯುತ್ತಿದೆ. ರಾಷ್ಟ್ರದಾದ್ಯಂತದ ೫೫ ಕಲಾಶಾಲೆಗಳ ಕಿರಿಯ ಆರ್ಟಿಸ್ಟ್ ಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು ಏಳು ಜಾಗಗಳಲ್ಲಿ ವಿದ್ಯಾರ್ಥಿ ಬಿಯನಾಲೆ ನಡೆಯುತ್ತಿದೆ.. ಮೊಹಮ್ಮದಾಲಿ ವೇರ್ ಹೌಸ್ ಮತ್ತು ಮಟನ್ಚೇರಿ ಟೆಂಪಲ್ ನಲ್ಲಿ ನಡೆಯುತ್ತಿರುವ ಪ್ರದರ್ಶನಗಳು ನಿಜಕ್ಕೂ ವಿದ್ಯಾರ್ಥಿಗಳಲ್ಲಿರುವ ಕಲ್ಪನಾಶಕ್ತಿ ಮತ್ತು ಪ್ರಖರ ಅಲೋಚನೆಗಳ ಕೈಗನ್ನಡಿಯಂತಿದ್ದವು.

ಈ ವರ್ಷದ ಬಿಯನಾಲೆಯ ಥೀಮ್ forming in the pupil of the eye’  ಇದರ ಯಥಾವತ್ ಅನುವಾದ ಮಾಡುವುದಾದರೆ ಕಣ್ಣಿನ ಪಾಪೆಯೊಳಗಿನ ರೂಪಎಂದಾಗುತ್ತದೆ. ಆದರೆ ಇದು ಮಹಾಭಾರತದ ಸಂಜಯನ ನೋಟದಿಂದ ಸ್ಪೂರ್ತಿಯನ್ನು ಪಡೆದಿದೆ.
.ಕಲಾಪ್ರದರ್ಶನವೆಂದರೆ ನಮಗೆ ಅದರಲ್ಲೂ ಬೆಂಗಳೂರಿಗರಿಗೆ ಸಾಮಾನ್ಯವಾಗಿ ನೆನಪಿಗೆ ಬರುವುದು ವೆಂಕಟಪ್ಪ ಆರ್ಟ್ ಗ್ಯಾಲರಿ, ಮಾಡರ್ನ್ ಆರ್ಟ್ ಗ್ಯಾಲರಿ ಮತ್ತು ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಗೊಳ್ಳುವ ವರ್ಣಚಿತ್ರಗಳು. ಪೋಟೋಗಳು ಇಲ್ಲವೇ ಶಿಲ್ಪಕಲಾಕ್ರುತಿಗಳು ನೆನಪಿಗೆ ಬರುತ್ತವೆ. ನಾನು ಪೋರ್ಟ್ ಕೊಚ್ಚಿಗೆ ಹೋಗುವಾಗ ಅದೇ ನನ್ನ ತಲೆಯಲ್ಲಿತ್ತು. ಆದರೆ ಅಲ್ಲಿ ಹೋಗಿ ನೋಡಿದಾಗ ಅದೆಲ್ಲಾ ತಲೆಕೆಳಗಾಯಿತು. ಅಲ್ಲಿನ ಕಲಾಪ್ರದರ್ಶನ ನನ್ನ ಕಲ್ಪನೆಯನ್ನು ಮೀರಿದ ವ್ಯಾಪ್ತಿಯಲ್ಲಿ ಹರಡಿಕೊಂಡಿತ್ತು,

ಅಲ್ಲೊಂದು ಕಲಾಪ್ರದರ್ಶನವಿತ್ತು. ಅದರ ವಿವರಣೆಯನ್ನು ನೀಡಿದರೆ ಕೊಚ್ಚಿ ಬಿಯನಾಲೆಯೆಂಬುದು ಉಳಿದೆಲ್ಲಾ ಕಲಾಪ್ರದರ್ಶನಗಳಿಗಿಂತ ಹೇಗೆ ಭಿನ್ನ ಎಂಬುದು ನಮಗೆ ಮನದಟ್ಟಾಗುತ್ತದೆ. ಅಲ್ಲದೆ ಇದು ಬಿಯನಾಲೆಯ ಬಹುಮುಖ್ಯ ಆಕರ್ಷಣೆಯಯೂ ಆಗಿತ್ತು. ಅದರ ಹೆಸರು ನೋವಿನ ಸಮುದ್ರ’ [ The Sea of Pain]  ರಹುಲ್ ಝರಿಟ್ [Raul Zurita] ಎಂಬ ಚಿಲಿ ದೇಶದ ಕವಿಯ ಆಲೋಚನೆಗಳು [Thoughts ] ಇಲ್ಲಿ ಮೂರ್ತ ಸ್ವರೂಪವನ್ನು ಕಂಡಿದ್ದವು. ಆ ಕವನದ ಹುಟ್ಟಿಗೆ ಒಂದು ಹಿನ್ನೆಲೆಯಿತ್ತು;
ಕಳೆದ ಸೆಪ್ಟಂಬರ್ ನಲ್ಲಿ ಟರ್ಕಿಯ ಬೋರ್ಡಮ್ ಬೀಚಿನಲ್ಲಿ ಸಿರಿಯಾದ ಪುಟ್ಟ ಕಂದ ಅಯ್ಲಾನ್ ಕುರ್ದಿಯ ಶವ ಸಿಕ್ಕಿತ್ತು. ನೀಲಿ ಚಡ್ಡಿ ಕೆಂಪು ಟೀ ಶರ್ಟ್ ಧರಿಸಿ ತಲೆಕೆಳಗಾಗಿ ಬಿದ್ದ ಆ ಎಳೆಬಾಲಕನ ಶವ ಪ್ರಪಂಚದಾದ್ಯಂತ ಸುದ್ದಿ ಮಾಡಿತ್ತು; ರೂಪಕವಾಗಿ ಬೆಳೆಯಿತು. ಆದರೆ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಅವನ ತಾಯಿ ಮತ್ತು ಸಹೋದರ ಗಾಲಿಪ್ ಕುರ್ದಿಯ ಶವ ಮಾತ್ರ ಯಾರ ಗಮನವನ್ನೂ ಸೆಳೆದಿರಲಿಲ್ಲ.  ರಹುಲ್ ಝುರಿಟ್ ನ ಮನವನ್ನು ಇದು ಕಲಕಿತು, ಅದು ಕವನವಾಗಿ ಹೊಮ್ಮಿತು. ಕೊಚ್ಚಿ ಬಿಯನಾಲೆಯಲ್ಲಿ ಅದು ಕಲಾರೂವನ್ನು ತಾಳಿತು. ಅದೇ ಸಿ ಆಪ್ ಪೈನ್’ ” ಸುಮಾರು ಎಪ್ಪತ್ತು ಅಡಿ ಉದ್ದ ಮೂವತ್ತು ಅಡಿ ಅಗಲದ ಮೂರೂ ಕಡೆ ಗೋಡೆಗಳಿಂದಾವ್ರುತವಾದ ಕೊಳವೊಂದನ್ನು ನಿರ್ಮಿಸಲಾಗಿತ್ತು.. ಕಲಾಪ್ರೇಮಿಗಳು ಅಲ್ಲಿ ಬಂದು ಚಪ್ಪಲಿ, ಶುಗಳನ್ನು ಕಳಚಿಟ್ಟು, ತೊಟ್ಟ ಬಟ್ಟೆಯನ್ನು ಮೊಳಕಾಲು ತನಕ ಮಡಚಿ ನೀರಿಗಿಳಿಯುತ್ತಿದ್ದಂತೆಯೇ. ಸಿ ಅಪ್ ಪೈನ್ ಕವನದ ಸಾಲುಗಳನ್ನೊಳಗೊಂಡ ವಿಷಾಧ ಬೆರೆತ ಆಡಿಯೋದ ಅನುರಣನ. ಎರಡೂ ಬದಿಯ ಗೋಡೆಯ ಮೇಲೆಲ್ಲಾ ಕವನದ ಸಾಲುಗಳು. ಮುಂದೆ ಮುಂದೆ ಸಾಗಿದಂತೆಲ್ಲಾ ಎದುರಿನ ಗೋಡೆಯ ಮೇಲೆ ಇಡೀ ಕವನ ಸ್ಕ್ರೋಲಿಂಗ್ ಆಗುತ್ತಿರುತ್ತದೆ.’ ” ನಾನು ಅವನ ತಂದೆಯಲ್ಲ. ಆದರೆ ಅವನು ನನ್ನ ಮಗ ಎಂದು ಅಂತ್ಯವಾಗುವ ಕವನ ,ವಿಸ್ತಾರತೆಯನ್ನು ಪಡೆದುಕೊಳ್ಳುತ್ತಾ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತದೆ..ಅದನ್ನು ಓದಿ ಹಿಂದಿರುಗಿ ನೀರಿನಲ್ಲಿ ಕಾಲೆಳೆಯುತ್ತಾ ಬರುವಾಗ ನಮ್ಮಳೊಗೂ ರುದ್ರ ಮೌನ ಮೆಲ್ಲನೆ ಪಸರಿಸಿಕೊಳ್ಳುತ್ತದೆ.   ಕವನವನ್ನು ಅನುಭವಿಸುವುದು ಅಂದರೆ ಇದೇ ಏನು? ಅದು ಕಣ್ಣೀರಿನ ಕೊಳವೇ? ಅದು ಸಮುದ್ರದ ನೋವೇ? ನೋವಿನ ಸಮುದ್ರವೇ? ಅಥವಾ ಮನುಕುಲದ ನೋವೇ?   ಇದೇ ಕವಿ ಹೇಳಿದ ಮಾತೊಂದು ನೆನಪಾಗುತ್ತದೆ..’If poetry ends, the dremes is dead’

೩೧ ವಿಡಿಯೋ ಕ್ಯಾಮರಾ, ೩೧ ಪ್ರಾಜೆಕ್ಟರ್ ಗಳನ್ನು ಬಳಸಿ ಗ್ಯಾರಿ ಹಿಲ್ ನಿರ್ಮಿಸಿದ ಡ್ರೀಮ್ ಸ್ಟಾಪ್ಎಂಬ ವಿಡಿಯೋ ಆರ್ಟ್ ಮತ್ತು ಅವರದೇ ತುಂಡಾದ ಒಡೆದ ಗಾಜಿನ ಚೂರುಗಳನ್ನು ಜೋಡಿಸಿ ಮಾಡಿದ ಆಕರ್ಷಕ ಸಂಯೋಜನೆಯೂ ಬಿಯನಾಲೆಯ ಮತ್ತೊಂದು ಆಕರ್ಷಣೆ.
ಸಮಕಾಲೀನ ಕಲೆಯ ವಿಶೇಶತೆಯೇ ಅದು ಅದು ಕಲಾಕಾರನ ಭಾವನೆ, ವಿಚಾರ [thoughts] , ಕಾಳಜಿ ಮತ್ತು ಐಡಿಯಾಗಳನ್ನು ಪ್ರಸ್ತುತ ವಿದ್ಯಾಮಾನದೊಡನೆ ಸಂಯೋಜಿಸಿ ಅದಕ್ಕೊಂದು ಮೂರ್ತರೂಪವನ್ನು ಕೊಟ್ಟು ನೋಡುಗರನ್ನೂ ತನ್ನೊಡನೆ ಅಂತರ್ಗತಮಾಡಿಕೊಳ್ಳುತ್ತದ. ಅಲ್ಲೊಂದು ರೂಪಾಂತರದ ಕ್ರಿಯೆ ನಡೆಯುತ್ತಿರುತ್ತದೆ.

ಗ್ಯಾರಿ ಹಿಲ್, ಶರ್ಮಿಷ್ಟ ಮೊಹಾಂತೀ...ಮುಂತಾದವರ ವಿಡಿಯೋ ಆರ್ಟ್ ಗಳನ್ನು ನೋಡುವಾಗ ನಮ್ಮ ಯೋಚನೆಗಳನ್ನು ಹೀಗೂ ದಾಟಿಸಬಹುದಲ್ಲಾ ಎಂದು ಅಚ್ಚರಿಯಾಗುತ್ತದೆ. ಯಾವ ಪ್ರದರ್ಶನವನ್ನೇ ನೋಡಲಿ ಅಲ್ಲೊಂದು ಹೊಸತನದ ಸಂವಹನ ಸಾಧ್ಯತೆಯಿತ್ತು..

 ಬಿಯನಾಲೆಯಲ್ಲಿ ಸಂಗೀತ ಕಚೇರಿಯೂ ಸೇರಿದಂತೆ ವಿವಿಧ ಪ್ರಕಾರದ ಪ್ರದರ್ಶನ ಕಲೆಗಳಿರುತ್ತವೆ. ಪ್ರಾತ್ಯಕ್ಷಿಕೆಯಿರುತ್ತದೆ. ಸಿನೇಮಾ, ಡಾಕ್ಯುಮೆಂಟರಿ ಶೋಗಳ ಪ್ರದರ್ಶನವಿರುತ್ತದೆ. ಅಸಕ್ತರಿಗೆ ಪಿಲ್ಮ್ ಮೇಕಿಂಗ್ .ನ್ರುತ್ಯ ಸೇರಿದಂತೆ ಲಲಿತಕಲೆಗಳಿಗೆ ಸಂಬಂಧಿಸಿದಂತೆ ಎರಡ್ಮೂರು ದಿವಸಗಳ ಕಾರ್ಯಾಗಾರವಿರುತ್ತಿತ್ತು .ಈ ಕಾರ್ಯಾಗಾರಗಳ ವಿಶೇಶತೆ ಏನೆಂದರೆ ದೇಶ-ವಿದೇಶಗಳ ಕಲಾವಿದರು ಮತ್ತು ತಂತ್ರಜ್ನರ ಜೊತೆ ಬೆರೆಯುವ, ಸಂವಾದಿಸುವ ಅಪೂರ್ವ ಅವಕಾಶ ಸಿಗುತ್ತಿತ್ತು.. ನಾಟಕ .ಸ್ಟೋರಿ ಟೆಲ್ಲಿಂಗ್. ಜಾನಪದ ನ್ರುತ್ಯ. ಕವ್ವಾಲಿ, ಕರಕುಶಲ ವಸ್ತುಗಳ ಪ್ರದರ್ಶನವಿತ್ತು. ವಿದೇಶಿಯರಿಗೆ ಸ್ಥಳೀಯ ಕಲೆ, ಸಂಸ್ಕ್ರುತಿಯನ್ನು ತಿಳಿದುಕೊಳ್ಳುವ ವಿಫುಲ ಅವಕಾಶಗಳನ್ನು ಬಿಯನಾಲೆ ಆಯೋಜಿಸಿದೆ.
ಸಮಕಾಲೀನ ವಿಷ್ಯಗಳ ಬಗ್ಗೆ ಚರ್ಚೆ ಮತ್ತು ಸೆಮಿನಾರುಗಳಿರುತ್ತವೆ. ಜನವರಿ ೨೦ರಂದು ಕಮ್ಯೂನಲಿಸಂ, ಕ್ಯಾಸ್ಟ್ ಸೆಕ್ಯೂಲರಿಸಂ ನ ಚರ್ಚೆಯಲ್ಲಿ ಸಿದ್ದಾರ್ಥ ವರದರಾಜನ್, ಜಿಗ್ನೇಶ್ ಮವಾನಿ ಮತ್ತು ರಾಕೇಶ್ ಶರ್ಮ ಭಾಗವಹಿಸಿದ್ದರು. ಅಂದೇ ಡೈಲಾಗ್ ಅನ್ ಪೀಸ್; ಅಂಡರ್ಸ್ಟ್ಯಾಂಡಿಂಗ್ ವಯ್ಲೆನ್ಸ್ಸಿನೇಮಾ ಪ್ರದರ್ಶನವೂ ಇತ್ತು.. ಸೆಲ್ಪ್ ಇಮೇಜಸ್ ಆಪ್ ಕೇರಳ ಮೊಡರ್ನಿಟಿಚರ್ಚೆಯಲ್ಲಿ ಕೇರಳದ ಚಿಂತಕರು ಬರಹಗಾರರು ಭಾಗವಹಿಸಿದ್ದರು. ಸಿನೇಮಾ ನಿರ್ದೇಶಕರಾದ ರಾಕೇಶ್ ಶರ್ಮ, ಅಡೂರು ಗೋಪಾಲಕ್ರುಷ್ಣ, ಪ್ರಿಯದರ್ಶನ್, ರಾಜಕೀಯ ವಿಶ್ಲೇಶಕರಾದ್ ಮಾಧವಪ್ರಸಾದ್, ಬರಹಗಾರರದ ರಾಮಚಂದ್ರ ಗುಹಾ ಮಲ್ಟಿ ಮಿಡಿಯಾ ತಜ್ನರಾದ ಖಲೀದ್ ಸಬ್ಸಾಬಿ, ಸುದೀರ್ ಕಕ್ಕರ್ ಸೇರಿದಂತೆ ದೇಶವಿದೇಶಗಳ ಚಿತ್ರನಿರ್ದೇಶಕರು, ಸಾಹಿತಿಗಳು, ಕಲಾವಿದರು. ಸಂಗೀತಗಾರರು ವಿಡಿಯೋ ಆರ್ಟಿಸ್ಟ್ ಗಳು  ಇಲ್ಲಿ ಬಂದು ಚರ್ಚೆ-ಸಂವಾದಗಳಲ್ಲಿ ಭಗವಹಿಸಿದ್ದಾರೆ. ನಾಡಿದ್ದು ಮಾರ್ಚ್ ೨೫ರಂದು ಇತಿಹಾಸ ತಜ್ನ ಮತ್ತು ಟ್ರಾನ್ಸ್ಲೇಟರ್ ಆಗಿರುವ ದಿಲಿಪ್ ಮೆನನ್ ಏರುತ್ತಿರುವ ಭೂ ಉಷ್ಣತೆಯ ಬಗ್ಗೆ ಮಾತಾಡಲಿದ್ದಾರೆ..

ಕಳೆದ ಮಾರ್ಚ್ ೨ರಂದು ರಂದು ನಮ್ಮ  ರಾಷ್ಟ್ರಪತಿಗಳಾದ ಪ್ರಣವ ಮುಖರ್ಜಿಯವರು ಇಲ್ಲಿಗೆ ಆಗಮಿಸಿ ವಿ ನೀಡ್ ದಿ ಆರ್ಟ್ಸ್ಎಂಬ ಸೆಮಿನಾರನ್ನು ಉದ್ಘಾಟಿಸಿ ಇಂಪಾರ್ಟೆನ್ಸ್ ಅಪ್ ಸಸ್ಟೈನೇಬಲ್ ಕಲ್ಚರ್-ಬ್ಯುಲ್ಡಿಂಗ್ ’’ ಬಗ್ಗೆ ಉಪನ್ಯಾಸ ನೀಡಿ. ಕೊಚ್ಚಿ ಬಿಯನಾಲೆ ಎಂಬುದು ನಮ್ಮ ದೇಶದ ಕಲ್ಚರಲ್ ಕ್ಯಾಲೆಂಡರನ ಭಾಗವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮೂರು ದಿನಗಳ ಕಾಲ ನಾನು ಪೋರ್ಟ್ ಕೊಚ್ಚಿಯಲೆಲ್ಲಾ ಅಡ್ಡಾಡಿದೆ.  ಅಡ್ಡಾಡಿದೆ ಎಂದರೆ ಕಾಲ್ನಡಿಗೆಯಲ್ಲಿ ಇದನ್ನೆಲ್ಲಾ ಸುತ್ತಾಡಲು ಸಾಧ್ಯವಿಲ್ಲ. ಯಾಕೆಂದರೆ,,ಇಡೀ ಪೋರ್ಟ್ ಕೊಚ್ಚಿಯೇ ಬಿಯನಾಲೆಯಾಗಿತ್ತು. ನಾಲ್ಕು ಚದರ ಕಿಮೀ ವಿಸ್ತಾರದಲ್ಲಿ ಹರಡಿಕೊಂಡಿರುವ ಕಲಾಪ್ರದರ್ಶನದಲ್ಲಿ ಹೆಚ್ಚಿನ ಕಲಾಪ್ರದರ್ಶನವಿದ್ದುದ್ದು ಆಸ್ಪಿಯನ್ ಹಾಲ್ ಮತ್ತು ಪೆಪ್ಪರ್ ಹೌಸ್ ನಲ್ಲಿ, .ಆಸ್ಪಿಯನ್ ಹಾಲ್ ನಿಂದ ಹತ್ತು ಹೆಜ್ಜೆ ಎಡಕ್ಕೆ ನಡೆದರೆ ಪೆಪ್ಪರ್ ಹೌಸ್ ಸಿಗುತ್ತಿತ್ತು. ಅಲ್ಲಿ ಕ್ಯಾಂಟೀನ್ ಕೂಡಾ ಇದೆ. ಮುಖ್ಯವಾಗಿ ವಿದೇಶಿಯರನ್ನು ಗಮನದಲ್ಲಿರಿಸಿಕೊಂಡ ಆಹಾರ ಮತ್ತು ಪಾನೀಯಗಳು ಅಲ್ಲಿ ದೊರೆಯುತ್ತಿದ್ದವು. ಆಸ್ಪಿಯನ್ ಹಾಲ್ ನಿಂದ ಬಲಕ್ಕೆ ನೇರವಾಗಿ ನಡೆದು ಸ್ವಲ್ಪ ದೂರ ನಡೆದರೆ ಗೆಬ್ರಲ್ ಯಾರ್ಡ್, ಇಲೊಂದು ಥೆಯೇಟರ್ ಇದೆ. ನಾಟಕ, ಸಂಗೀತ ಕಚೇರಿಗಳು ಸೇರಿದಂತೆ ಕೆಲವು ಪ್ರದರ್ಶನ ಕಲೆಗಳು ಇಲ್ಲಿ ನಡೆಯುತ್ತವೆ..ಅಲ್ಲಿಂದ ಬಲಕ್ಕೆ ಹೊರಳಿದರೆ ಕಾಶಿ ಆರ್ಟ್ ಗ್ಯಾಲರಿ ಸಿಗುತ್ತದೆ.  ವಿಶಾಲಾರ್ಥದಲ್ಲಿ ಹೇಳಬೇಕೆಂದರೆ ಅದೊಂದು ರೆಸ್ಟೊರೆಂಟ್. ಆದರೆ ಕಲಾಕ್ರುತಿಯಂತೆ ಭಾಸವಾಗುವ ಒಂದು ಕಲಾಪರಿಸರ ಅಲ್ಲಿದೆ. ನಿಮಗೆ ಬೇಕಾದ ಆಹಾರ -ಪಾನೀಯಗಳನ್ನು ಆರ್ಡರ್ ಮಾಡಿ ಅಲ್ಲಿಯ ಮೆಲುಸಂಗೀತಕ್ಕೆ ಮೈಮನಸುಗಳು ಹಗುರವಾಗುವ ಅನುಭವ ಪಡೆಯಬಹುದು...ಉಳಿದ ಜಾಗಗಳನ್ನು ನೋಡಲು ನೀವು ಆಟೋ, ಬಸ್ಸು ಟ್ಯಾಕ್ಸಿಗಳನ್ನು ಅವಲಂಬಿಸಲೇ ಬೇಕಾಗುತ್ತದೆ. ವಿದೇಶಿ ಪ್ರವಾಸಿಗರ ದಟ್ಟಣೆ ಹೆಚ್ಚಿರುವ ಕಾರಣದಿಂದಲೇ ಇರಬಹುದು ಇಲ್ಲಿ ಬಾಡಿಗೆ ದ್ವಿಚಕ್ರವಾಹನಗಳು ದೊರೆಯುತ್ತವೆ. ದಿನಕ್ಕೆ ಇನ್ನುರೈವತ್ತು ರೂಪಾಯಿ, ಆದರೂ ಎಲ್ಲವನ್ನೂ ನೋಡಲು ಕನಿಷ್ಟ ಎರಡು ದಿನಗಳಾದರೂ ಬೇಕು. ಊಟ ವಸತಿಯ ವಿಚಾರಕ್ಕೆ ಬಂದರೆ ಪಕ್ಕದ ಎರ್ನಾಕುಲಂಗಿಂತ ಈ ದ್ವೀಪದಲ್ಲಿ ದುಪ್ಪಟ್ಟು ದುಬಾರಿ.

ಇಡೀ ಪೊರ್ಟ್ ಕೊಚ್ಚಿಯೇ ಒಂದು ಕಲಾಗ್ಯಾಲರಿಯಾದಾಗ ಅದರೊಳಗಿರುವ ಇಂಡೋ ಡಚ್ ಮ್ಯೂಸಿಯಂನನ್ನಾಗಗಿ, ವಾಸ್ಕೋಡಗಾಮನ ಸಮಾಧಿಯಿರುವ ಹಳೆಯ ಯುರೋಪಿಯನ್ ಚರ್ಚ್  ಸೈಂಟ್ ಪ್ರಾನ್ಸಿಸ್ ಚರ್ಚನನ್ನಾಗಲಿ ನೋಡದೇ ಮರಳುವುದುಂಟೇ? ಸಂಜೆಯ ಕಡಲ ಕಿನಾರೆ ಮತ್ತು ಚೈನಿಶ್ ಪಿಶ್ಶಿಂಗ್ ನೆಟ್ ಆಕರ್ಷಣೆಯನ್ನು ಯಾವ ಪ್ರವಾಸಿಯೂ ತಪ್ಪಿಸಿಕೊಳ್ಳಲಾರ.

ಜಗತ್ತಿನ ಹಲವಾರು ಸಂಗತಿಗಳು ನಮ್ಮ ಕಣ್ಣ ಮುಂದೆ ನಡೆಯುತ್ತದೆ.ಅದರಲ್ಲಿ ಕೆಲವನ್ನು ನಮ್ಮ  ಕಣ್ಣು ನೋಡುತ್ತದೆ. ಕೆಲವನ್ನು ನಮ್ಮ ಬುದ್ದಿ ಗ್ರಹಿಸುತ್ತದೆ. ಇನ್ನು ಕೆಲವು ನಮ್ಮ ಎದೆಯಾಳಕ್ಕೆ ಇಳಿಯುತ್ತದೆ.ಹಾಗೆ ಇಳಿದದ್ದು ಬುದ್ದಿಯ ಜೊತೆ ಸಂಲಗ್ನಗೊಂಡು. ಹೊಸತೊಂದರ ಅವಿಷ್ಕಾರಕ್ಕೆ ಕಾರಣವಾಗುತ್ತದೆ. ಅದನ್ನು ಸ್ರುಷ್ಟಿಸಬಲ್ಲವನು ವಿಜ್ನಾನಿಯಾಗುತ್ತಾನೆ. ಕವಿಯಾಗುತ್ತಾನೆ, ಕಲಾವಿದನಾಗುತ್ತಾನೆ, ಇಂತವರ ಸ್ರುಷ್ಟಿಯನ್ನು ನೋಡಿ ಆನಂದಿಸಬಲ್ಲವನು, ತನ್ನೊಳಗೆ ಯಾವುದೋ ಅನೂಹ್ಯವಾದುದನ್ನು ತುಂಬಿಕೊಳ್ಳಬಲ್ಲವನು ಕಲಾರಸಿಕನಾಗುತ್ತಾನೆ, ಸಹ್ರುದಯನಾಗುತ್ತಾನೆ. ೧೦೮ ದಿನಗಳ ಕಾಲ ನಮ್ಮ ನೆರೆಯ ರಾಜ್ಯದ ಪೋರ್ಟ್ ಕೊಚ್ಚಿಯಲ್ಲಿ ನಡೆಯುತ್ತಿರುವ ಈ ವಿಶಿಷ್ಟ ಉತ್ಸವ ಅಂತಹದೊಂದು ವಾತಾವರಣವನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ನಿರ್ಮಿಸುತ್ತಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಕಲೆಯೊಂದೇ ಹ್ರುದಯ-ಹ್ರುದಯಗಳನ್ನು ಬೆಸೆಯಬಲ್ಲುದು.ದೇಶ-ದೇಶಗಳ ಗಡಿ ರೇಖೆಯನ್ನು ಅಳಿಸಬಲ್ಲುದು.








Friday, October 5, 2018

ಅಂತಃಪುರದಲ್ಲಿ ಅತ್ಯಾಚಾರ.



Image courtesy; Internet
 ವೈವಾಹಿಕ ಅತ್ಯಾಚಾರ ಅಪರಾಧವಾದರೆ ವಿವಾಹ ಸಂಬಂಧವೇ ಅಸ್ಥಿರವಾಗುತ್ತದೆ.  ಪತಿಗೆ ಕಿರುಕುಳ ನೀಡಲು ವಿವಾಹಿತ ಮಹಿಳೆಯರಿಗೆ ಸುಲಭವಾದ ಅಸ್ತ್ರ ದೊರೆತಂತಾಗುತ್ತದೆ. ಹಾಗಾಗಿ ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬಾರದು.ಎಂದು ಕೇಂದ್ರ ಸರಕಾರ ಕಳೆದ ವರ್ಷ ದೆಹಲಿ ಹೈಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆಗ ಅದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು, ಈಗಲೂ ಆಗುತ್ತಲಿದೆ.

ವೈವಾಹಿಕ ಅತ್ಯಾಚಾರವೆಂದರೇನು? ಪತ್ನಿಯ ಸಮ್ಮತಿಯಿಲ್ಲದೆಯೂ ಅವಳ ಇಚ್ಚೆಗೆ ವಿರುದ್ಧವಾಗಿ ಬಲತ್ಕಾರದಿಂದ ಲೈಂಗಿಕ ಸಂಪರ್ಕ ನಡೆಸುವುದೇ ವೈವಾಹಿಕ ಅತ್ಯಾಚಾರ. ಅದಕ್ಕೆ ಪತ್ನಿಯ ಒಪ್ಪಿಗೆಯನ್ನು ಎಂತಕ್ಕೆ ಕೇಳುವುದು? ಗಂಡನಿಗೆ ಬಯಕೆಯಾದರೆ ಸಹಕರಿಸಬೇಕಾದುದು ಪತ್ನಿಯ ಧರ್ಮ ಎನ್ನುತ್ತದೆ ಭಾರತೀಯ ಸಂಪ್ರದಾಯ. ಅದು ಆ ಕಾಲ., ಈ ಕಾಲದಲ್ಲಿ ತನ್ನ ದೇಹದ ಮೇಲೆ ತನ್ನದೇ ಹಕ್ಕು. ತಾನು ಅವನಂತೆಯೇ ದುಡಿಯುತ್ತೇನೆ, ದಣಿಯುತ್ತೇನೆ, ನನಗೂ ಅನೇಕ ಒತ್ತಡಗಳಿರುತ್ತವೆ. ಕೆಲವು ಸಂದರ್ಭಗಳಲ್ಲಿ ತನಗದು ಬೇಡ ಅನ್ನಿಸುತ್ತದೆ. ಅದನ್ನು ನಯವಾಗಿಯೇ ಅನುನಯಿಸಿ ಹೇಳುತ್ತೇನೆ. ಅದರವನು ಅದನ್ನು ಧಿಕ್ಕರಿಸಿ ತನ್ನ ದೇಹದ ಮೇಲೆ ಅತಿಕ್ರಮಣ ಮಾಡಿದರೆ ಅದು ಅತ್ಯಾಚರವಾಗುತ್ತದೆ. ಆ ಸಂದರ್ಭದಲ್ಲಿ ತನಗೆ ಕಾನೂನಿನ ರಕ್ಷಣೆ ಬೇಕಾಗುತ್ತದೆ. ಆದರೆ ಭಾರತೀಯ ದಂಡ ಸಂಹಿತೆಯಲ್ಲಿ ಅಂತಹದೊಂದು ಕಲಂ ಇಲ್ಲವಲ್ಲ ಎಂದು ಘಾಸಿಗೊಂಡ ಮಹಿಳೆ ಪ್ರಶ್ನಿಸುತ್ತಿದ್ದಾಳೆ. ಈಗ ಇರುವ ಐಪಿಸಿ ೩೭೫ ಕಲಂ೨ರಪ್ರಕಾರ ಹೆಂಡತಿ ಜೊತೆ ಗಂಡ ನಡೆಸುವ ಬಲತ್ಕಾರದ ಲೈಂಗಿಕ ಕ್ರಿಯೆ ಅಪರಾಧವಲ್ಲ.

 ಮಹಿಳಾ ಮತ್ತು ಮಕ್ಕಳಕಲ್ಯಾಣ ಸಚಿವರಾದ ಮನೇಕಾಗಾಂಧಿಯೇ ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ ಅಪರಾಧದ ಅಡಿಯಲ್ಲಿ ತರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೇರೆ ದೇಶಗಳಲ್ಲಿ ವೈವಾಹಿಕ ಅತ್ಯಾಚಾರದ ಬಗೆಗಿನ ನಿಲುವುಗಳನ್ನು ಅವಲೋಕಿಸಿದರೂ ಅದೂ ಕೂಡಾ ಅಷ್ಟೇನೂ ಆಶಾಧಾಯಕವಾಗಿಲ್ಲ. ಹೆಣ್ಣು ಗಂಡಸಿನ ಖಾಸಾಗಿ ಆಸ್ತಿ, ಉಪಭೋಗದ ವಸ್ತು ಎಂಬ ಪುರುಷಮನಸ್ಥಿತಿ ಜಗತ್ತಿನ ಎಲ್ಲೆಡೆ ಇದೆ. ಆದರೂ ೧೦೬ ದೇಶಗಳಲ್ಲಿ ವೈವಾಹಿಕ ಅತ್ಯಾಚಾರವೆಂಬುದು ಶಿಕ್ಷಾರ್ಹ ಅಪರಾಧ. ಇವುಗಳಲ್ಲಿ ೩೨ ದೇಶಗಳಲ್ಲಿ ಇದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿದೆ.

 ಸ್ವತಃ ನಾನೇ ಸಾಕ್ಷಿಯಾಗಿರುವ ಎರಡು ಘಟನೆಗಳನ್ನು ನಿಮ್ಮ ಮುಂದಿಡುತ್ತೇನೆ.

ಆಗ ನಾನು ಚಿಕ್ಕವಳೇನಾಗಿರಲಿಲ್ಲ. ಆದರೆ ಕೆಲವು ವಿಷಯಗಳಲ್ಲಿ ಲೋಕಜ್ನಾನ ಕಮ್ಮಿಯಿತ್ತು. ಹಿಂದಿನ ದಿನ ಸಂಬಂಧಿಯೊಬ್ಬರ ಮದುವೆಯಲ್ಲಿ ಪಾಲ್ಗೊಂಡಿದ್ದೆ. ರಾತ್ರಿ ಮದುಮಗನ ರೂಮಿಗೆ ಮದುಮಗಳು ಹೋಗಿದ್ದಳು. ಬೆಳಿಗ್ಗೆ ಅಡುಗೆಮನೆಯಲ್ಲಿ ದೊಡ್ಡವರ ಜೊತೆ ಕುಳಿತಿದ್ದೆ. ಮದುಮಗಳು ಅಡುಗೆ ಮನೆಗೆ ಬಂದಳು. ಅವಳ ಒಂದು ಕೆನ್ನೆ ರಕ್ತ ಹೆಪ್ಪುಗಟ್ಟಿದಂತಾಗಿ ಕಂದು ಬಣ್ಣಕ್ಕೆ ತಿರುಗಿತ್ತು. ಹಿಂದಿನ ಬೆಳ್ಳಗೆ ಕೆಂಪು ಕೆಂಪಾಗಿ ತುಂಬಾ ಸುಂದರವಾಗಿ ಕಂಡಿದ್ದರು. ಏನಾಯ್ತು ಎಂಬ ಆತಂಕದಲ್ಲಿ ನಾನು ನಿಮ್ಮ ಕೆನ್ನೆ ಯಾಕೆ ಸುಟ್ಟಬದನೆಕಾಯಿಯಂತಾಗಿದೆ? ಪಕ್ಕದಲ್ಲಿದ್ದ ಹಿರಿಯರು ನನ್ನ ತೊಡೆಗೆ ಚುವುಟಿದರು. ಅಲ್ಲಿದ್ದವರು ಕಿರುನಗೆಯಿಂದಲೇ ಪರಸ್ಪರ ಮುಖ ನೋಡಿಕೊಂಡರು. ಮದುಮಗಳು ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಅಲ್ಲಿಂದ ಬಚ್ಚಲು ಮನೆಗೆ ಹೋದಳು. ದೇಹದ ಮೇಲಿನ ಕಲೆಯೂ ಒಮ್ಮೊಮ್ಮೆ ಪ್ರೇಮದ ಗುರುತಾಗಬಹುದು

ಅದರೆ ಮದುವೆಯಾಗಿ ಹತ್ತಾರು ವರ್ಷಗಳು ಕಳೆದಮೇಲೆ ಪತ್ನಿಯಾದವಳು ಬೆಳಿಗ್ಗೆ ಕೆನ್ನೆ ಊದಿಸಿಕೊಂಡು ದಾಂಪತ್ಯದ ಕೋಣೆಯಿಂದ ಬೆಳಿಗ್ಗೆ ಹೊರಬಂದರೆ ಅಸಹಜವಾದುದು ಅಲ್ಲೇನೋ ನಡೆದಿದೆ ಎಂದು ಹತ್ತಿರದವರಿಗೆ ತಿಳಿದೇ ತಿಳಿಯುತ್ತದೆ. ಆದರೆ ಅಲ್ಲೇನೋ ನಡೆದಿದಿದೆ ಎಂದು ಹೊರಗಿನವರು ತರ್ಕಿಸಬಹುದಷ್ಟೇ. ಆದರೆ ಏನು ನಡೆದಿದೆಯೆಂಬುದನ್ನು ಅವರಿಬ್ಬರಲ್ಲಿ ಒಬ್ಬರು ಬಾಯಿಬಿಟ್ಟು ಹೇಳಿದರೆ ಮಾತ್ರ ಉಳಿದವರಿಗೆ ಗೊತ್ತಾಗುತ್ತದೆ.

Image courtesy; Internet
ನಮ್ಮ ಹತ್ತಿರದ ಬಂಧುವೊಬ್ಬರ ಮನೆಯಲ್ಲಿ ಒಂದು ರಾತ್ರಿ ಉಳಿದುಕೊಳ್ಳುವ ಸಂದರ್ಭ ಬಂದಿತ್ತು. ಆ ಮನೆಯ ಯಜಮಾನಿ ತನ್ನ ಮೊಮ್ಮಗಳೊಡನೆ ನಾನು ಮಲಗಿದ್ದ ಹಾಲಿನಲ್ಲೇ ಮಲಗಿದ್ದರು. ಆ ಮನೆಯ ಯಜಮಾನನಾಗಿದ್ದ ಆಕೆಯ ಗಂಡ ಪಕ್ಕದ ರೂಮಿನಲ್ಲಿದ್ದರು. ಮಧ್ಯರಾತ್ರಿ ಯಾರೋ ನರಳಿದಂತೆ ಶಬ್ದ ಕೇಳಿಸಿ ಎಚ್ಚರಾಗಿ ಸುತ್ತ ಕಣ್ಣಾಡಿಸಿದಾಗ ಆ ಮಹಿಳೆ ಕಾಣಿಸಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅವರು ಪಕ್ಕದ ರೂಮಿನಿಂದ ಬಂದು ಮೊಮ್ಮಗಳ ಪಕ್ಕದಲ್ಲಿ ಮಲಗಿಕೊಂಡರು. ಕಾಲುಗಳನ್ನು ಅಗಲಿಸಿಕೊಂಡು ತೊಡೆ ಮದ್ಯಕ್ಕೆ ಲಂಗದಿಂದ ಗಾಳಿಹಾಕಿಕೊಳ್ಳುತ್ತಾ ಆಗಾಗ ಕೈಮುಚ್ಚಿಕೊಳ್ಳುತ್ತಿದ್ದರು.  ಆಗ ನನಗೂ ಮದುವೆಯಾಗಿತ್ತು. ಲೈಂಗಿಕ ಸಮಸ್ಯೆಗಳ ಬಗ್ಗೆ ಕುರಿತಾಗಿಯೇ ಆಪ್ತ ಸಲಹಾ ತರಬೇತಿಯನ್ನೂ ಪಡೆದುಕೊಂಡಿದ್ದೆ. ಹಾಗಾಗಿ ಅರುವತ್ತು ದಾಟಿದ ಆ ಮಹಿಳೆಗಾದ ಹಿಂಸೆಯನ್ನು ನಾನು ಊಹಿಸಿಕೊಳ್ಳಬಲ್ಲವಳಾಗಿದ್ದೆ..

ಕೌನ್ಸಿಲಿಂಗ್ ಎಂದಾಗ ಒಂದು ಘಟನೆ ನನಗೆ ನೆನಪಿಗೆ ಬರುತ್ತದೆ. ಅವಳು ನನ್ನೆದುರು ಕೂತಿದ್ದಳು.ಒಂದು ಮಗುವಿನ ತಾಯಿ. ತುಂಬು ಯೌವನದ ಆರೋಗ್ಯದ ಕಳೆಯಿಂದ ಮಿಂಚುತ್ತಿರುವ ಹುಡುಗಿ. ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಳು.; ಅವಳ ಗಂಡ ಸಂಭೋಗಪೂರ್ವ ಸಲ್ಲಾಪದ ಕಲೆಯನ್ನು ಕರಗತ ಮಾಡಿಕೊಂಡಾತ. ಅವಳ ಬಯಕೆಗಳನ್ನು ಕೆರಳಿಸಿ ಅವಳು ಉನ್ಮಾದಕ್ಕೆ ಜಾರುತ್ತಿದ್ದಾಳೆ ಎಂದೆನಿಸಿದಾಗ ತಾನು ತಣ್ಣಗೆ ಪಕ್ಕಕ್ಕೆ ಸರಿದು ಬಾಲ್ಕನ್ನಿಗೆ ಹೋಗಿ ಸಿಗರೇಟು ಹಚ್ಚಿಕೊಳ್ಳುತ್ತನಂತೆ. ಇದು ಒಂದೆರಡು ದಿನದ ಮಾತಲ್ಲ. ಹಲವಾರು ತಿಂಗಳುಗಳಿಂದ ನಡೇಯುತ್ತಾ ಬಂದಿದೆ. ಆ ಸಂದರ್ಭದಲ್ಲಿ ಬೆಂಕಿಯಂತಾಗುವ ತಾನೇನು ಮಾಡಬೇಕು? ಎಂದವಳು ನನ್ನನ್ನು ಪ್ರಶ್ನಿಸಿದ್ದಳು..
ಅವಳು ತುಂಬಾ ಸಂಕೀರ್ಣವಾದ ಪ್ರಶ್ನೆಯನ್ನು ಕೇಳಿದ್ದಳು. ಕೊಡಬಹುದಾಗಿದ್ದ ಉತ್ತರ ಸರಳವಾದುದಲ್ಲ. ಹತ್ತು ಹಲವು ಆಯಾಮಗಳನ್ನು ಮಥಿಸಿ ಉತ್ತರಿಸಬೇಕಾಗಿತ್ತು.

ಭಾರತೀಯ ಸಂಸ್ಕ್ರುತಿಯಲ್ಲಿ ಮದುವೆಯೆಂಬುದು ಏಳೇಳು ಜನ್ಮಗಳ ಅನುಬಂಧ. ಇದರ ಮುಖ್ಯ ಉದ್ದೇಶ ಸಂತಾನವನ್ನು ಪಡೆಯುವುದೇ ಆಗಿತ್ತು. ಹಾಗಾಗಿ ಇಲ್ಲಿ ದಂಪತಿಗಳು ಮಿಲನಗೊಳ್ಳುವುದಕ್ಕೂ ಒಂದು ಶುಭಮೂಹೂರ್ತವಿದೆ. ಮುಂದೆಯೂ ದಾಂಪತ್ಯನಿಷ್ಠೆ ಎಂಬುದು ಬಹುಮುಖ್ಯ. ಆದರಿದು ಪತ್ನಿಯಾದವಳಿಗೆ ಮಾತ್ರ. ಗಂಡನಾದವನು ಎಷ್ಟು ಮದುವೆಯನ್ನಾದರೂ ಮಾಡಿಕೊಳ್ಳಬಹುದು.ಎಷ್ಟು ಹೆಂಗಸರೊಡನೆಯಾದರೂ ಸಂಬಂಧ ಇಟ್ಟುಕೊಳ್ಳಬಹುದು ಆದರೆ ಹೆಂಡತಿ ಪತಿವ್ರತೆಯಾಗಿರಲೇಬೇಕು!

ಸಪ್ತಪದಿ ತುಳಿಯುವಾಗ ಪರಸ್ಪರ ಸಮಾನತೆಯ, ಬದ್ಧತೆಯ ಏನೇ ಮಂತ್ರಪಠಣವಾಗಿರಲಿ ವಾಸ್ತವದಲ್ಲಿ ಪತ್ನಿಯಾದವಳು ಎಂದೂ ಗಂಡನ ಸಹವರ್ತಿನಿಯಲ್ಲ. ಮಹಿಳೆ ತನ್ನ ಅಸೌಖ್ಯದ, ದಣಿದ ದಿನಗಳಲ್ಲಿ ಇಂದು ಬೇಡಎಂದು ಹೇಳಲು ಸಾಧ್ಯವೇ? ಹಾಗೆ ಹೇಳಲು ಸಾಧ್ಯವಾದರೆ ಅದು ಅನುಕೂಲಕರ ದಾಂಪತ್ಯ. ಲೈಂಗಿಕಬಯಕೆ ಗಂಡಿನಂತೆ ಹೆಣ್ಣಿಗೂ ಇರುತ್ತದೆ. ಹಸಿವು ಬಾಯಾರಿಕೆ, ನಿದ್ರೆಗಳಂತೆ ಅದು ಪ್ರಕೃತಿ ಸಹಜ ಬಯಕೆ ಆದರೆ ಅವಳು ಅದನ್ನು ಬಾಯಿಬಿಟ್ಟು ಹೇಳಿದರೆ ವಾತ್ಸಯಾನ ಅಂತಃಪುರದಲ್ಲಿ ಜೀವಂತವಾಗಿರಬಹುದು1. ಇಲ್ಲವಾದರೆ ಪುರುಷಾಂಕಾರದ ಮಿಷನರಿ ಆಸನವೇ ಅಂತಃಪುರವನ್ನಾಳುತ್ತದೆ. ಹಾಂ. ಅಂದಹಾಗೆ ಮಿಷನರಿ ಆಸನದ ಬಗ್ಗೆ ಬಗ್ಗೆ ಹೇಳುವಾಗ ಕಳೆದ ವರ್ಷ ಬಿಡುಗಡೆಯಾದ ತುಳು ಸಿನೇಮಾದ ದ್ರುಶ್ಯವೊಂದು ನೆನಪಾಗುತ್ತದೆ. ಅದರಲ್ಲಿ ರೇಪ್ ಮಾಡುವುದು ಹೇಗೆ ಎಂಬುದನ್ನೂ ಹೇಳಿಕೊಡಲಾಗುತ್ತದೆಯಂತೆ. ಮತ್ತೆ ನೆನಪಿಸಿಕೊಳ್ಳುತ್ತೇನೆ; ಭಾರತದ ಮಟ್ಟಿಗೆ ಸಿನೇಮಾ ಕೂಡಾ ಪುರುಷಾಧಿಪತ್ಯದ ಕ್ಷೇತ್ರವೇ. ಅಲ್ಲಿಯೂ ಮಹಿಳಾ ಧ್ವನಿ ಕ್ಷೀಣವಾಗಿದೆ

ಗಂಡನಾದವನು ಸೂಕ್ಷ್ಮಜ್ನನಾಗಿದ್ದು ಸಂವೇದನಾಶೀಲನಾಗಿದ್ದರೆ ಆತ ಅರ್ಥ ಮಾಡಿಕೊಳ್ಳುತ್ತಾನೆ. ಕೆಲವೊಮ್ಮೆ ಇಬ್ಬರಿಗೂ ಕೌನ್ಸಿಲಿಂಗ್ ಕೂಡಾ ಬೇಕಾಗಬಹುದು ಆದರೆ ಎಷ್ಟು ಜನ ಗಂಡಂದಿರು ಕೌನ್ಸಿಲಿಂಗ್ ಗೆ ಬರಲು ಒಪ್ಪುತ್ತಾರೆ?. ಹೆಚ್ಚೇಕೆ, ಕುಟುಂಬ ನಿಯಂತ್ರಣ ಸಾಧನಗಳನ್ನು ಅಳವಡಿಸಿಕೊಳ್ಳುವುದಕ್ಕೇ ಶೇ ೯೯ರಷ್ಟು ಗಂಡಸರು ಒಪ್ಪಿಕೊಳ್ಳುವುದಿಲ್ಲ. ಅದು ಹೆಂಗಸರ ಜವಾಬ್ದಾರಿ ಎಂಬುದೇ ಗಂಡಸರ ಧೋರಣೆ. ಇದು ಸಮೀಕ್ಷೆಗಳಿಂದಲೇ ಋಜುವಾತಾಗಿದೆ. ಇನ್ನು ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ಗೆ ಬರುತ್ತಾನೆಯೇ? ದೈಹಿಕಹಿಂಸೆ ಅನುಭವಿಸುತ್ತಾ  ಒಳಗೊಳಗೆ ಬೇಯುತ್ತಿದ್ದ ಮಹಿಳೆ ಕೊನೆಗೊಮ್ಮೆ ಸಿಡಿದು ನಿಂತರೆ ಆಗ ಅವಳಿಗೆ ಕಾನೂನಿನ ನೆರವು ಬೇಕಲ್ಲವೇ?

ನನ್ನ ದೇಶದಲ್ಲಿ ರೇಪ್ ಅನ್ನುವುದು ಪುರುಷತ್ವದ ಸಂಕೇತ. ಅದು ಯುದ್ಧವೇ ಆಗಲಿ ಗುಂಪುಗಳ ನಡುವಿನ ಸಂಘರ್ಶವೇ ಆಗಲಿ ಎದುರಾಳಿಗಳನ್ನು ಹಣೆಯಲು ವಿರುದ್ಧ ಗುಂಪಿನ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರವೆಸಗುವುದು ಕೂಡಾ ಅದರ ಭಾಗವೇ ಆಗಿದೆ.  ಇತ್ತೀಚೆಗೆ ಜಮ್ಮು ಕಾಶ್ಮೀರದ ಅಸಿಫಾ ಎಂಬ ಪುಟ್ಟ ಬಾಲೆಯ ಮೇಲೆ ಧರ್ಮಾಂದರು ನಡೆಸಿದ ಪೈಶಾಚಿಕ ಅತ್ಯಾಚಾರಕ್ಕೆ ಜನಾಂಗೀಯ ದ್ವೇಶವೇ ಕಾರಣವಾಗಿತ್ತು. ಇದೆಲ್ಲದರ ವಿರುದ್ಧ ನಾವು, ನಾಗರಿಕರು ಸಂಘಟಿರಾಗಿ ಹೋರಾಡಬಹುದು, ಆದರೆ ಬೆಡ್ರೂಮಿನಲ್ಲಾಗುವ ಅತ್ಯಾಚಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುವುದು? ಯಾರು ಪ್ರತಿಕ್ರಿಯಿಸಬೇಕು? ಯಾಕೆಂದರೆ ಇದು ಧರ್ಮಸೂಕ್ಷ್ಮದ ಸಂಗತಿ. ಭಾರತೀಯ ಕೌಟುಂಬಿಕ ಬದುಕಿನ ತಾಯಿಬೇರು ಮದುವೆ,ಅದರ ಮೇಲೆ ಪ್ರಹಾರ ಮಾಡಲು ಸಾಧ್ಯವೇ? ಹಾಗಾಗಿಯೇ ಕಾನೂನುಗಳು ಇಲ್ಲಿ ಸೋಲುತ್ತವೆ. ಕಾನೂನನ್ನು ರೂಪಿಸುವ ಸಂಸತ್ತಿನಲ್ಲಿ ಬಹುಸಂಖ್ಯಾತ ಪುರುಷರು ಕೂತಿದ್ದಾರಲ್ಲವೇ? ಪಕ್ಷರಾಜಕಾರಣಿಗಳು ಮಹಿಳೆಯರನ್ನು ನೋಡುವ ಪರಿ ಒಂದೇ ಆಗಿರುತ್ತದೆ. ಇಂತವರು ಮಹಿಳಾ ಪರವಾದ ಕಾನೂನು ರೂಪಿಸುತ್ತಾರೆಯೇ?

ಕಾನೂನು ಸೇರಿದಂತೆ ಜಗತ್ತಿನ ಎಲ್ಲಾ ನೀತಿನಡಾವಳಿಗಳನ್ನು ಧರ್ಮದ\ರಿಲೀಜಿಯನ್ನಿನ ದ್ರುಷ್ಟಿಕೋನದಿಂದ ನೋಡಲಾಗಿದೆ. ಕಾನೂನುಗಳನ್ನು ಪುರುಷನ ಮೂಗಿನ ನೇರಕ್ಕೆ ತಕ್ಕಂತೆ ರೂಪಿಸಲಾಗಿದೆ. ಬಹುಶಃ ಮಹಿಳೆಯರೇ ನೀತಿನಿರೂಪಕರು ಆಗಿದ್ದಲ್ಲಿ ಭಾನುವಾರದ ರಜೆಯ ಬದಲು, ತಮಗೆ ಬೇಕಾದ ದಿನಗಳಲ್ಲಿ ತಿಂಗಳಿಗೆ ಐದು ದಿನ ರಜೆ ತೆಗೆದುಕೊಳ್ಳುವ ಅವಕಾಶವನ್ನು ಮಾಡಿಕೊಳ್ಳುತ್ತಿದ್ದರು. ಜಗತ್ತನ್ನು ತಾಯಿನೋಟವೊಂದು ಕಾಪಾಡುತ್ತಿತ್ತು. ನಾಮಕಾವಸ್ಥೆಯ ಗಡಿರೇಖೆಗಳಿರುತ್ತಿದ್ದವು. ಮುಖ್ಯವಾಗಿ ಯುದ್ಧವೆಂಬುದು ನಡೆಯುತ್ತಿರಲಿಲ್ಲ.

ಪ್ರಜಾವಾಣಿಯ ಮುಕ್ತಛಂಧಕ್ಕಾಗಿ ಬರೆದ ಬರಹ. ಎಡಿಟ್ ಆಗಿ ಪ್ರಸಾರವಾಗಿತ್ತುನಾಲ್ಕು ತಿಂಗಳ ಹಿಂದೆ.  ]







Sunday, June 10, 2018

ಕಾಶ್ಮೀರಿಪಂಡಿತರು ಮತ್ತು ಕಾಶ್ಮೀರಿ ಮುಸ್ಲಿಮರು



 
ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರಗತಿಶೀಲ ಮನಸ್ಸುಗಳು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ  ಮಾತಾಡಲು ಮುಂದಾದಾಗ ಅವರಿಗೆ ಉಗ್ರ ಹಿಂದುತ್ವವಾದಿಗಳು ಎಸೆಯುವ ಲೇವಡಿಯ ಹಾಗು ಬೆದರಿಕೆಯ ಪ್ರಶ್ನೆಗಳು ಎರಡು; ಒಂದು, ಮುಸ್ಲಿಮ್ ಉಗ್ರವಾದಿಗಳು ಕಾಶ್ಮೀರಿ ಪಂಡಿತರ ಮೇಲೆ ಹಲ್ಲೆ ಮಾಡಿ,  ಅವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ, ಆಸ್ತಿಪಾಸ್ತಿ ದೋಚಿ ಅವರನ್ನು ಹುಟ್ಟಿದೂರಿನಿಂದ ಓಡಿಸುವಾಗ ನೀವು ಕಾಂಗಿಗಳು ಎಲ್ಲಿದ್ದೀರಿ? ಆಗ ಯಾಕೆ ನೀವು ಕಣ್ಣೀರು ಹರಿಸಿಲ್ಲ?. ಇನ್ನೊಂದು, ಕೊರೆಯುವ ಚಳಿಯಲ್ಲಿ ಗಡಿಕಾಯುತ್ತಾ  ನಮ್ಮ ದೇಶವನ್ನು ರಕ್ಷಿಸುವ ಸೈನಿಕರ ಬಗ್ಗೆ ನೀವೆಂದಾದರೂ ಕಣ್ಣಿರು ಹಾಕಿದ್ದೀರಾ?

ಅಂತಹ ಕೇಸರಿ ಕನ್ನಡಕದಾರಿಗಳು ಈಗ ಕಕ್ಕಾಬಿಕ್ಕಿಯಾಗಿದ್ದಾರೆ. ಯಾಕೆಂದರೆ ಕಠಾರದಲ್ಲಿ ಎಂಟು ವರ್ಷದ ಪುಟ್ಟ ಮಗುವಿನ ಮೇಲಾದ ಪೈಶಾಚಿಕ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ಅರೋಪಿಗಳ ಸ್ಥಾನದಲ್ಲಿ ನಿಂತ ಎಂಟೂ ಜನರು ಹಿಂದುಗಳು. ಅದು ಅಲೆಮಾರಿ ಬಿಕ್ರವಾಲ್ ಸಮುದಾಯಕ್ಕೆ ಸೇರಿದ ಮುಸ್ಲಿಮ್ ಮಗು, ಅತ್ಯಾಚಾರದ ಅರೋಪಿಗಳಿಗೆ ಕಾನೂನಿನ ಕುಣಿಕೆ ಹಾಕಲು ಪಣತೊಟ್ಟವರು ಎರಡು ಜನ. ಅವರೇ ಈ ಪ್ರಕರಣದ ತನಿಖಾ ದಳದ ಮುಖ್ಯಸ್ಥರಾದ ರಮೇಶ್ ಕುಮಾರ್ ಮತ್ತು ಅಸಿಫಾ ಪರ ವಕೀಲಾರಾದ ದೀಪಿಕಾಸಿಂಗ್. ಇವರಿಬ್ಬರೂ ಕಾಶ್ಮೀರ ಪಂಡಿತರು.  ಒಂದುವೇಳೆ ನಾಳೆ ಅರೋಪಿಗಳ ಅಪರಾಧ ಸಾಬೀತಾಗಿ ಅವರೆಲ್ಲ ನೇಣುಗಂಬವನ್ನೇರಿದರೆ ಅದರ ಪೂರ್ಣ ಶ್ರೇಯಸ್ಸು ಸಲ್ಲ ಬೇಕಾದದ್ದು ಈ ಇಬ್ಬರು ಕಾಶ್ಮೀರಿ ಪಂಡಿತರಿಗೇ

ಈ ಪ್ರಕರಣದ ವಿರುದ್ಧವಾಗಿ ಕೆಲಸ ಮಾಡಲು ಇವರಿಗೆ ಪ್ರಭಲವಾದ ಕಾರಣಗಳಿದ್ದವು.ಆದರೆ ಅವರು ಹಾಗೆ ಮಾಡಲಿಲ್ಲ. ಕಾರಣವೇನಂದರೆ ಅವರು ಮಾನವಪ್ರೇಮಿಗಳಾಗಿದ್ದರು ನ್ಯಾಯನಿಷ್ಠರಾಗಿದ್ದರು. ಸತ್ಯದ ಪರವಾಗಿದ್ದರು . ಇವರಿಬ್ಬರು ತೆಗೆದುಕೊಂಡ ಗಟ್ಟಿ ನಿಲುವು ಭಾರತೀಯರು ಮತ್ತು ಕಾಶ್ಮೀರಿ ಮುಸ್ಲಿಮರ ನಡುವಿನ ಸಂಘರ್ಷವನ್ನು ಭವಿಷ್ಯದಲ್ಲಿ ಹೊಸ ದ್ರುಷ್ಟಿಕೋನದಿಂದ ನೋಡಲು ಸಾಧ್ಯವಾಗಬಹುದು.





ವರ್ತಮಾನದಲ್ಲಿ ಮುಸ್ಲಿಂರೇ ಬಹುಸಂಖ್ಯಾತರಾಗಿರುವ ಭಾರತದ ಏಕೈಕ ರಾಜ್ಯ ಜಮ್ಮು ಕಾಶ್ಮೀರ. ಇದಕ್ಕೆ ವಿಶೇಶ ಸ್ಥಾನಮಾನವಿದೆ. ಭಾರತದ ಭಾಗವಾಗಿದ್ದರೂ ತನ್ನದೇ ಪ್ರತ್ಯೇಕತೆಯನ್ನು ಹೊಂದಿರುವ ರಾಜ್ಯವದು. ಆದರೆ ಅದರ ಇತಿಹಾಸದತ್ತ ಕಣ್ಣು ಹೊರಳಿಸಿದರೆ ಈಗಿನ ಮುಸ್ಲಿಮರು ಹಿಂದೆ ಹಿಂದುಗಳೇ ಆಗಿದ್ದರು ಎಂಬುದು ಗೊತ್ತಾಗುತ್ತದೆ.

ಈಗ ಅಲ್ಪಸಂಖ್ಯಾತರಾಗಿರುವ ಕಾಸ್ಮೀರಿ ಪಂಡಿತರು ಕಾಶ್ಮೀರ ಕಣಿವೆಯ ಮೂಲನಿವಾಸಿಗಳು. ಅಲ್ಲಿಯ ಜನರು ಬೌದ್ಧ ಮತ್ತು ಹಿಂದು ಧರ್ಮದ ಅನುಯಾಯಿಗಳಾಗಿದ್ದರು.  ೧೨ನೇ ಶತಮಾನದಲ್ಲಿ ಇಲ್ಲಿಗೆ ಮುಸ್ಲಿಮರು ಆಗಮಿಸಿದರೆಂದು ಇತಿಹಾಸಕಾರರು ಹೇಳುತ್ತಾರೆ. ಆಗ ಅಳ್ವಿಕೆಕೆಯಲ್ಲಿದ್ದ ಹಿಂದೂ ರಾಜರು ಅವರ ಧರ್ಮಪ್ರಸಾರಕ್ಕೆ ಅಡ್ಡಿಯೇನು ಉಂಟುಮಾಡಲಿಲ್ಲ. ಆದರೆ ಹದಿನಾಲ್ಕನೇ ಶತಮಾನಕ್ಕಾಗುವಾಗ ಅದೊಂದು ಪ್ರಭಲಧರ್ಮವಾಗಿ ಪ್ರವರ್ಧಮಾನ ಬಂತು. ಈನಡುವೆ ಮುಸ್ಲಿಮ್ ಧರ್ಮದವರು ರಾಜರೂ ಆದರು. ಆದರೂ ಹಿಂದು ಮುಸ್ಲಿಮರು ಸೌಹಾರ್ಧತೆಯಿಂದಲೇ ಬದುಕಿದ್ದರು.  ಹಿಂದೆಯೂ ಅವರು ಅನ್ಯಧರ್ಮಿಯರೊಡನೆ ಸೌಹಾರ್ಧತೆಯಿಂದ ಬದುಕಿದವರು. ಸ್ಥಳೀಯ ಸಂಸ್ಕ್ರುತಿಯೊಡನೆ ಮುಸ್ಲಿಮರ ಕಲಾಕೌಶಲ್ಯವು ಸೇರಿಕೊಂಡು ಕರಕುಶಲವಸ್ತುಗಳಿಗೆ ಹೊಸತೊಂದು ಮೆರಗು ಬಂದು ಇಲ್ಲಿಯ ಪಿಂಗಾಣಿವಸ್ತುಗಳು. ಶಾಲು, ಕಾರ್ಪೆಟ್, ಮುಂತಾದ ನೇಕಾರಿಯ ವಸ್ತುಗಳು ಜಗದ್ವಿಖ್ಯಾತಿಯನ್ನು ಪಡೆದುಕೊಂಡವು. ಇದೊಂದು ಪ್ರವಾಸಿಕೇಂದ್ರವಾಗಿ ಬೆಳೆಯತೊಡಗಿತು.

೧೮೧೯ರಲ್ಲಿ ಕಾಶ್ಮೀರ ಮತ್ತೆ ಸಿಖ್ಖ್ ದೊರೆ ಮಹಾರಾಜ ರಂಜಿತ್ ಸಿಂಗ್ ತೆಕ್ಕೆಗೆ ಬಂದಾಗ ಆತ ಕೆಲವು ಮುಸ್ಲಿಂ ವಿರೋಧಿ ಕಾನೂನುಗಳನ್ನು ಜಾರಿಗೆ ತಂದ. ರಾಜ್ಯದ ಉನ್ನತಸ್ಥಾನಗಳಲ್ಲಿ ಕಾಶ್ಮೀರಿ ಪಂಡಿತರ ನೇಮಕವಾಯ್ತು. ಅದುವರೆಗೆ ಇದ್ದ ಸೌಹಾರ್ಧಮಯ ವಾತಾವರಣ ಕದಡಿ ಹೋಯ್ತು. ಆಗಿನ ಕಾಶ್ಮೀರದ ಸ್ಥಿತಿಯನ್ನು ಬ್ರಿಟೀಶ್ ಕೌನ್ಸಿಲ್ ಸದಸ್ಯನೂ, ಬಾರತದಲ್ಲಿ ಅಧಿಕಾರಿಯೂ,ಪ್ರವಾಸಿ ಲೇಖಕನೂ ಆದ ಲಾರೆನ್ಸ್ ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಹಾಗೆಯೇ  ಗೌಶಾನಾಥ್ ಕೌಲ್ ಎಂಬ ಲೇಖಕ ತನ್ನ ’ಕಾಶ್ಮೀರ’ ಎಂಬ ಪುಸ್ತಕದಲ್ಲಿ ಮುಸ್ಲಿಮರ ದಯಾನೀಯ ಸ್ಥಿತಿಯ ಬಗ್ಗೆ ಬರೆಯುತ್ತಾ ಶೇ ೯೦ರಷ್ಟು ಮುಸ್ಲಿಮರ ಆಸ್ತಿಪಾಸ್ತಿ ಹಿಂದೂ ಲೇವಾದೇವಿಗಾರರ ವಶದಲ್ಲಿದ್ದು ಅವರು ತೀರ ಬಡತನದ ಬದುಕನ್ನು ಸಾಗಿಸುತ್ತಲಿದ್ದಾರೆ ಎಂದು ದಾಖಲಿಸಿದ್ದಾನೆ.  ಇದು ಇತಿಹಾಸ.

ಆದರೆ ಆಮೇಲೆ ಭಾರತ ವಿಭಜನೆಯಾಯ್ತು. ಧರ್ಮದ ಆಧಾರದ ಮೇಲೆ ಮುಸ್ಲಿಮರ ರಾಜ್ಯ ಉದಯವಾಯ್ತು. ಕಾಶ್ಮೀರ ನಮ್ಮದೇ ಅನ್ನುತ್ತಾ ಪಾಕಿಸ್ತಾನಿಯರು ಗಡಿಯೊಳಗೆ ನುಸುಳಿ ಬರಲು ಆರಂಭವಾಯ್ತು. ಭಾರತ ಸರಕಾರವೂ ಕಾಶ್ಮೀರದ ಅಬಿವ್ರುದ್ಧಿಯ ಬಗ್ಗೆ ಅಸಡ್ಡೆಯಿಂದಲೇ ನಡೆದುಕೊಂಡಿತ್ತು. ಕ್ರಮೇಣ ಅಲ್ಲಿ ಪ್ರತ್ಯೇಕ ದೇಶದ ಕೂಗು ಕ್ಷೀಣವಾಗಿ ಕೇಳಲಾರಂಭಿಸಿತು.ಅದಕ್ಕೆ ನಮ್ಮ ದಾಯಾದಿ ದೇಶ ಪಾಕಿಸ್ತಾನ ಕುಮ್ಮಕ್ಕು ಕೊಡಾಲಾರಂಭಿಸಿತು. ಅಲ್ಲಿಂದ ಮುಂದಿನ ಇತಿಹಾಸ ಎಲ್ಲರಿಗೂ ಗೊತ್ತಿರುವಂತಹದೇ. ಭೌಗೋಳಿಕವಾಗಿ ಸ್ವರ್ಗದ ತುಣುಕಿನಂತಿದ್ದ ಕಾಶ್ಮೀರದ ಮೇಲೆ ಹಕ್ಕುಸ್ಥಾಪನೆಮಾಡುವುದಕ್ಕಾಗಿ ಪಾಕಿಸ್ತಾನವು ಮುಸ್ಲಿಂ ಉಗ್ರವಾದಿಗಳಿಗೆ ಕುಮ್ಮಕ್ಕು ನೀಡಿ ಶಸ್ತ್ರಾಸ್ತ್ರಗಳನ್ನು ಯಥೇಚ್ಚವಾಗಿ ಪೂರೈಸತೊಡಗಿತು. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತ ಅದರ ಮೇಲೆ ೧೯೭೧ರಲ್ಲಿ ಯುದ್ಧಸಾರಿತು. ಪಾಕಿಸ್ತಾನದ ಒಂದು ಭಾಗವನ್ನು ಕಿತ್ತು ಬಾಂಗ್ಲಾದೇಶ ಮಾಡಿತು. ಪಾಕಿಗಳ ಮನದಲ್ಲಿ ಇದು ಆಳವಾದ ಗಾಯ ಮಾಡಿತು. ಪರಿಣಾಮವಾಗಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾದವು. ಅವರ ಗುರಿ ಈಗಾಗಲೇ ಅಲ್ಪಸಂಖ್ಯಾತರಾಗಿರುವ ಕಾಶ್ಮೀರಿ ಪಂಡಿತರ ಮೇಲೆ ಬಿತ್ತು. ಅವರಿಗೆ ಕಿರುಕುಳ ಕೊಡಲು ಆರಂಭಿಸಿದರು.

ಈ ವೇಳೆಗಾಗಲೇ ಜಗತ್ತಿನಾದ್ಯಂತ ಉಗ್ರಗಾಮಿಗಳಿಗೆ ಸಂವಾದಿ ಪದವಾಗಿ ಮುಸ್ಲಿಂ ಪದ ಎಲ್ಲೆಡೆ ಪ್ರಚಲಿತವಾಗಿತ್ತು. ಹಿಜ್ಬುಲ್ ಮುಜಾಯಿದ್ , ಅಲ್ಖೈದಾ ಮುಂತಾದ ಸಂಘಟನೆಯ ಜೊತೆ ಪಾಕಿಸ್ತಾನ ನೇರ ಸಂಬಂಧ ಸಂಬಂಧ ಹೊಂದಿರುವುದು ಜಗಜ್ಜಾಹೀರವಾಗಿತ್ತು. ಅದು ೧೯೮೯-೯೦ರ ಸಮಯ ಒಂದು ರಾತ್ರಿ ಜಿಹಾದಿಗಳು  ಕಾಶ್ಮೀರ ಪಂಡಿತರಿಗೆ, ’ ಮತಾಂತರವಾಗಬೇಕು, ಇಲ್ಲವೇ ಎರಡು ದಿನಗಳಲ್ಲಿ ಊರು ಬಿಡಬೇಕು’ ಎಂದು ಎಚ್ಚರಿಕೆ ನೀಡಿದರು. ಕಾಶ್ಮೀರಿ ಪಂಡಿತರು ತಮ್ಮ ಜನ್ಮಭೂಮಿಯನ್ನು ಬಿಟ್ಟು ಉಟ್ಟಬಟ್ಟೆಯಲ್ಲಿ ಅಲ್ಲಿಂದ ಓಡಿ ಬಂದರು. ಹಾಗೇ ಬಂದವರಿಗೆ ಭಾರತ ಸರಕಾರವು ದೆಹಲಿ ಮತ್ತು ಜಮ್ಮುವಿನಲಿ ತಾತ್ಕಲೀಕ ಡೇರೆಗಳಲ್ಲಿ ಇರಿಸಿತು. ಆದರೆ ಪರಿಸ್ಥಿತಿ ತಿಳಿಯಾದಾಗ ತಾವು ತಮ್ಮ ತಾಯ್ನಾಡಿಗೆ ಮರಳಿ ಹೋಗುವೆವೆಂಬ ಆಶಾಭಾವನೆಯಲ್ಲಿ ಈಗಾಗಲೇ ಹದಿನೆಂಟು ವರ್ಷಗಳು ಸರಿದು ಹೋಗಿವೆ. ಆ ಶೀತಪ್ರದೇಶದಿಂದ ಬಂದ ಬಹಳಷ್ಟು ಮಂದಿ ದೆಹಲಿಯ ಬಿಸಿಲಭೇಗೆಯನ್ನು ಸಹಿಸಿಕೊಳ್ಳಲಾರದೆ ಮರಣವನ್ನಪ್ಪಿದ್ದಾರೆ. ಕೆಲವು ಪಂಡಿತರು ನಮ್ಮ ಬೆಂಗಳೂರಿನಲ್ಲಿಯೂ ನೆಲೆಸಿದ್ದಾರೆ.  ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳಿಗೆ ಬೆದರಿ ತಮ್ಮ ಎಲ್ಲಾ ಅಸ್ತಿಪಾಸ್ತಿಯನ್ನು, ಸಾವಿರಾರು ವರ್ಷಗಳ ತಮ್ಮ ಭವ್ಯಪರಂಪರೆಯ ನೆನಪುಗಳನ್ನು ಅಲ್ಲಿಯೇ ಹುಗಿದಿಟ್ಟು ರಾಷ್ಟ್ರ ರಾಜಧಾನಿಗೆ ಓಡಿ ಬಂದ ಜನಾಂಗವದು. ಅವರ ಆಸ್ತಿಪಾಸ್ತಿಯನ್ನು ಮುಸ್ಲಿಮರು ದೋಚಿದರು. ಸುಟ್ಟುಹಾಕಿದರು. ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅಲ್ಲೇ ಉಳಿದ ಹೆಣ್ಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದರು, ಗಂಡಸರನ್ನು ಬರ್ಬರವಾಗಿ ಕೊಂದರು.

 ಕಾಶ್ಮೀರಿ ಪಂಡಿತರ ಬಗ್ಗೆ ನಮಗೆ ಗೊತ್ತಿದ್ದ ವಿಚಾರ ಇಷ್ಟು.ಆದರೆ ಈಗ ರಮೇಶ್ ಕುಮಾರ್ ಮತ್ತು ದೀಪಿಕಾಸಿಂಗ್ ತಮ್ಮ ನಡೆಯಿಂದ ಕೊಡುತ್ತಿರುವ ಸಂದೇಶವೇ ಬೇರೆ; ಇತಿಹಾಸವನ್ನು ಕೇವಲ ಇತಿಹಾಸವನ್ನಾಗಿಯೇ ನೋಡಬೇಕು. ಇತಿಹಾಸದಲ್ಲಾದ ತಪ್ಪುಗಳಿಗೆ ವರ್ತಮಾನದಲ್ಲಿ ನಿಂತು ಪ್ರತಿಕಾರಕ್ಕೆ ಮುಂದಾಗಬಾರದು.

.ಅಲ್ಲಿ ಜನವರಿಯಲ್ಲಿ ಆ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಏಪ್ರಿಲ್ ನಲ್ಲಿ ಕೊಲೆಯಾದ ಮಗುವಿನ ತಂದೆ ಮಹಮ್ಮದ್ ಅಕ್ಬರ್ ಜೊತೆ ಲಾಯರ್ ದೀಪಿಕಾಸಿಂಗ್. ಕೋರ್ಟಿಗೆ ಹಾಜರಾಗಿದ್ದಾಳೆ. ಅಂದರೆ ಎರಡು ತಿಂಗಳು ಆಕೆ ಮಗುವಿನ ಹೆತ್ತವರನ್ನು ಭೇಟಿ ಮಾಡಿ ಮೊಕ್ಕದ್ದಮೆ ಹೂಡಲು ಮನವೊಲಿಸಿದ್ದಾಳೆ ಅಸಿಫಾ ಪರವಾಗಿ ಕೋರ್ಟ್ನಲ್ಲಿ ರಿಟ್ ಪಿಟಿಷನ್ ಹಾಕಿದ್ದಾಳೆ. ಅತ್ಯಾಚಾರ ಮತ್ತು ಕೊಲೆಯ ಆರೋಪ ಹೊತ್ತವರು ಹಿಂದುಗಳೆಂದೂ ಗೊತ್ತಾಗಿ ಅವರ ಪರವಾಗಿ ರಾಜಕೀಯ ಮತ್ತು ವಕೀಲರುಗಳ ಒತ್ತಡ ಬಂದಾಗಲೂ ಅವರ ತಮ್ಮ ಸತ್ಯ ಮತ್ತು ನ್ಯಾಯನಿಷ್ಟುರತೆಯನ್ನು ಬಿಟ್ಟುಕೊಡಲಿಲ್ಲ. ಅವರಲ್ಲಿ ಕಿಂಚಿತ್ತಾದರೂ ಸೇಡಿನ ಮನೋಭಾವವಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಮಾನವಹಕ್ಕುಗಳ ಹೋರಾಟಗಾರ್ತಿಯೂ, ಸ್ವತಃ ’ವಾಯ್ಸ್ ಫಾರ್ ರೈಟ್ಸ್’ ಎಂಬ ಸ್ವಯಂಸೇವಾಸಂಘಟನೆಯ ಸಂಸ್ಥಾಪಕಿಯೂ ಆದ ದೀಪಿಕಾಸಿಂಗ್ ಮತ್ತು ನಿಶ್ಕಳಂಕ ಟ್ರಾಕ್ ರೆಕಾರ್ಡ್ ಹೊಂದಿರುವ ಪೋಲಿಸ ಅಧಿಕಾರಿ ರಮೇಶ್ ಕುಮಾರ್ ಜಲ್ಲಾ ಈ ಕ್ಷಣಕ್ಕೆ ಹೊಸ ಯುಗದ ಹರಿಕಾರರಾಗಿ ಕಾಣುತ್ತಿದ್ದಾರೆ . ಯಾವಾಗಲೂ ಅಷ್ಟೇ. ಪರಸ್ಪರ ಕತ್ತಿ ಮಸೆಯುತ್ತಿದ್ದ ಎರಡು ಗುಂಪುಗಳು ಅಸ್ತ್ರ್ಗಳನ್ನು ಕೆಳಗೆ ಹಾಕಿ ಪ್ರೀತಿಯ ಅಪ್ಪುಗೆಗಾಗಿ ತೋಳು ಚಾಚಲು ಮುಂದಾದರೆ ಅಲ್ಲಿ ಪ್ರಾಣವಾಯು ಸುಳಿದಾಡುತ್ತದೆ.

ಅತ್ತ ಕಾಶ್ಮೀರದಲ್ಲೂ ಮಾನವತೆಯ ಜಲವೊಂದು ಒಸರುತ್ತಿದೆ. ಅದೂ ಕೂಡಾ ಅಸಿಫಾ ಪ್ರಕರಣ ನಡೆದ ಮೇಲೆ ಪೆಭ್ರವರಿ ಮಧ್ಯಭಾದಲ್ಲಿ ಶಿವರಾತ್ರಿ ಆಚರಣೆಯ ಶುಭ ಸಂದರ್ಭದಲ್ಲಿ ನಡೆದಿದೆ ಎಂಭುದು ಆಶಾದಾಯಕ ಬೆಳವಣಿಗೆ. ಜೈಬರ್ ಅಹಮ್ಮದ್ ಎಂಬ ಕಾಶ್ಮೀರಿ ಯುವಕ ಪೇಸ್ಬುಕ್ ಪೇಜ್ ಆರಂಭಿಸಿ, ನಾವು ೨೮ ವರ್ಷಗಳ ಹಿಂದೆ ನಮ್ಮ ಸಹಪಾಥಿಗಳನ್ನು, ಹಳೆಯ ಗೆಳೆಯರನ್ನು, ನಮ್ಮ ನೆರೆಹೊರೆಯವರನ್ನು, ನಮ್ಮ ಕುಟುಂಬ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ. ಅವರ ಬಗ್ಗೆ ಯಾವ ಸಮಚಾರವೂ ಇಲ್ಲ. . ಈಗ ಅವರನ್ನು ನಾವು ಹುಡುಕೋಣ ಮತ್ತೆ ಒಂದಾಗಿ ಬಾಳೋಣ. ಅದಕ್ಕಾಗಿ ಸಹಾಯ ಮಾಡಿ’’ ಎಂದು ಬರೆದುಕೊಂಡಿದ್ದಾನೆ. ಮಾತ್ರವಲ್ಲ. ಕಾಶ್ಮೀರಿ ಮುಸ್ಲಿಮರು ಕಾಶ್ಮೀರಿ ಪಂಡಿತರಿಗೆ ಶಿವರಾತ್ರಿಯ ಶುಭಾಶಯಪತ್ರಗಳನ್ನು [ಹಿರಾತ್ ಮುಬಾರಕ್]  ರವಾನಿಸಿದ್ದಾರೆ.

 ಈ ಪೇಜಿಗೆ ವಿಸಿಟ್ ಕೊಟ್ಟ ಅನೇಕರು ಕಾಶ್ಮೀರಿ ಮುಸ್ಲಿಮರ ಈ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಕಾಮೆಂಟ್ ಗಳನ್ನು ಹಾಕಿದ್ದಾರೆ. ಮುಖ್ಯವಾಗಿ ಆಲ ಪಾರ್ಟೀಸ್ ಹುರಿಯತ್ ಕಾನ್ಫರೆನ್ಸ್ ನ [ APHC ] ಮುಖ್ಯಸ್ಥರಾದ ಮಿರ್ವಾಝಿ ಉಮರ್ ಫಾರೂಕ್ ಹಿರಾತ್ ಶುಭಾಶಯಗಳನ್ನು ಹೇಳುತ್ತಾ  ಕಾಶ್ಮೀರಿ ಪಂಡಿತರನ್ನು ಉದ್ದೇಶಿಸಿ’ ನೀವೆಲ್ಲಾ ತಾಯ್ನಾಡಿಗೆ ಮರಳಿ ಬನ್ನಿ. ನಾವೆಲ್ಲಾ ಮತ್ತೆ ಒಟ್ಟಾಗಿ ಬಾಳೋಣ’ ಎಂಬ ಸಂದೇಶವನ್ನು ಕಳುಹಿಸಿದ್ದಾರೆ.
ಒಳ್ಳೆಯದು ಎಲ್ಲಾ ಕಡೆಯಿಂದಲೂ ಹರಿದು ಬರಲಿ. ಆಗ ಉತ್ತಮವಾದ ಫಲವೇ ದೊರಕುತ್ತದೆ.

[ ಕಾಶ್ಮೀರದ ಕಟುವಾದಲ್ಲಿ ಬಕ್ರೆವಾಲ್ ಬುಡಗಟ್ಟಿನ ಎಂಟುವರ್ಷದ ಬಾಲಕಿಯ ಮೇಲೆ ನಡೆದ  ರೇಪ್ ಮತ್ತು ಮರ್ಡರ್ ಕೇಸನ್ನು ಲಾಯರ್ ದೀಪಿಕಾ ಸಿಂಗ್ ತಾನಾಗಿಯೇ ಕೈಗೆತ್ತಿಕೊಂಡು ನ್ಯಾಯಾಲಯದಲ್ಲಿ ಬಾಲಕಿಯ ತಂದೆಯ ಪರವಾಗಿ ವಕಾಲತ್ತು ವಹಿಸಿಕೊಂಡಾಗ ಮತ್ತು ತನಿಖಾಧಿಕಾರಿಯಾಗಿ ರಮೇಶ್ ಕುಮಾರ ಜಲ್ಲಾ ಅಧಿಕಾರ ವಹಿಸಿಕೊಂಡಾಗ ಏಪ್ರೀಲ್ ನಲ್ಲಿ ಈ ಲೇಖನ ಬರೆದೆ. ಯಾವುದೋ ಹುಕ್ಕಿನಲ್ಲಿ ದಿನಪತ್ರಿಕೆಯೊಂದಕ್ಕೆ ಕಳುಹಿಸಿಬಿಟ್ಟೆ. ಆದರೆ ಪ್ರಕಟವಾಗಲಿಲ್ಲ.


ಈಗ ಅತ್ಯಾಚಾರ ಅರೋಪಿಗಳ ಮೇಲೆ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. ಲಾಯರ್ ದೀಪಿಕಾ ಸಿಂಗ್ ರಾಜವತ್ ಗೆ ಇಂಡಿಯನ್ ಮರ್ಚೆಂಟ್ಸ್ ಚೇಂಬರ್ ಅಫ್ ಕಾಮರ್ಸ್ ಮತ್ತು ಇಂಡಸ್ತ್ರಿ ಲೇಡಿಸ್ ವಿಂಗ್ ‘ವರ್ಷದ ಮಹಿಳೆ’ ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದೆ. ಆದರೆ ಬಿಜೆಪಿ ಸರಕಾರದಲ್ಲಿ ಫಾರೆಸ್ಟ್ ಸಚಿವರಾಗಿದ್ದ ಲಾಲ್ ಸಿಂಗ್ ಮತ್ತು ಇಂಡಸ್ಟ್ರಿ ಸಚಿವರಾದ ಚಂದ್ರ ಪ್ರಕಾಶ್  ರೇಪ್ ಆರೋಪ ಹೊತ್ತವರ ಪರ್ವಾಗಿ ಬೀದಿಗಿಳಿದು ಮೆರವಣಿಗೆ ಮಾಡಿದ್ದರು.
ಹಾಗಾಗಿ ಈ ಲೇಖನವನ್ನು ಬ್ಲಾಗ್ ಗೆ ಹಾಕಬೇಕೆನಿಸಿತು ]