Showing posts with label ನಾಟಕ. Show all posts
Showing posts with label ನಾಟಕ. Show all posts

Tuesday, November 5, 2019

’ರಾಕ್ಷಸ ತಂಗಡಿ’ ನಾಟಕ ಹೇಳುವುದೇನನ್ನು?






ನೀನಾಸಂ ಅಭಿನಯಿಸಿದ ಗಿರೀಶ್ ಕಾರ್ನಾಡರ ಕೊನೆಯ ನಾಟಕ ’ರಾಕ್ಷಸ ತಂಗಡಿ’ಯನ್ನು ನೋಡಿ ಬಂದೊಡನೆಯ  ಮಾಡಿದ ಮೊದಲ ಕೆಲಸವೆಂದರೆ ಮತ್ತೊಮ್ಮೆ ನಾಟಕದ ಅಂತ್ಯವನ್ನು ಓದಿದ್ದು. ಯಾಕೆಂದರೆ ನಾಟಕದ ಅಂತ್ಯ ನನ್ನಲ್ಲಿ ಗೊಂದಲವನ್ನುಂಟು ಮಾಡಿತ್ತು.


ಪಠ್ಯದಲ್ಲಿ ಆ ದೃಶ್ಯ ಕೆತ್ತಲ್ಪಟ್ಟಿದ್ದು ಹೀಗೆ,  ರೂಮಿಖಾನ್ ರಾಮರಾಯನ ತಲೆಯನ್ನು ಕತ್ತರಿಸಿದ ಕೂಡಲೇ ಅದಿಲ್ ಶಾ ರೋದಿಸುತ್ತಾ ಓಡಿ ಹೋಗಿ ಅ ರುಂಡವನ್ನು ಎತ್ತಿಕೊಳ್ಳುತ್ತಾನೆ. ಆಗ ನಿಝಾಮ್ ಶಾ ಆಡುವ ಮಾತುಗಳಿವು; ’ತಗೋ, ಸುಲ್ತಾನ್ ಆದಿಲ್ ಶಾ ಇದನ್ನು ಕಾಶಿಗೆ ಕಳಿಸಿಕೊಡು. ನಿನ್ನ ಮಾವನ ಕಡೆಯಿಂದ ದೊರೆತ ಉಡುಗೊರೆ. ಇಡಿಯ ದಖ್ಖನ್! ಇಡಿಯ ದಖ್ಖನ್ ನಿನ್ನದು!’ ಇದು ನಾಟಕದ ಕೊನೆಯ ಡೈಲಾಗ್ ಕೂಡಾ ಹೌದು.. ನಾಟಕಾರ ಏನು ಹೇಳಬೇಕೆಂದುಕೊಂಡಿದ್ದರೋ ಅದೆಲ್ಲವೂ ಈ ಒಂದೇ ಒಂದು ಡೈಲಾಗ್ ನಲ್ಲಿತ್ತು. ಆದರೆ ಇದನ್ನು ನಾಟದಲ್ಲಿ ನಿಜಾಂ ಶಾ ಆಡಲೇ ಇಲ್ಲ. ನನ್ನ ಕಿವಿ ನನಗೆ ಮೋಸ ಮಾಡಿರಬಹುದೇ? ಎಂದು ನಾಟ ನೋಡಿದ ಒಂದೆರಡು ಮಂದಿಯಲ್ಲಿ ವಿಚಾರಿಸಿದೆ. ಅದರಲ್ಲಿ ಕೆಲವರು ಆ ಡೈಲಾಗ್ ಇರಲಿಲ್ಲ ಅಂದರು. ಇನ್ನು ಕೆಲವರು ಆ ಡೈಲಾಗ್ ಇತ್ತು. ಆದರೆ ರಾಮರಾಯನಿಗೆ ಅವನದೇ ತಲೆಯನ್ನು ಸೈನಿಕನೊಬ್ಬ ಒಪ್ಪಿಸುವಾಗ ಆ ಡೈಲಾಗ್ ಬಂತು. ಆದರೆ ಆಗ ಹಾಡು ಆರಂಭವಾಯ್ತು [ಲೋಳ ಲೋಟೆ]. ಅಂದರು. ಅಂದರೆ ಪ್ರೇಕ್ಷಕರ ಗಮನ ಗೊಂದಲದಲ್ಲಿ ರಾಮರಾಯನ ತಲೆಯ ಮೇಲೆ ನೆಟ್ಟಿತ್ತು. ಆಗ ರಂಗದ ಬಲಬದಿಯಲೆಲ್ಲೋ ಇದ್ದ ನಿಜಾಂ ಆ ಡೈಲಾಗ್ ಆಡಿರಲೂ ಬಹುದು.

. ಗೊಂದಲವಾಗುವುದಕ್ಕೆ ಇನ್ನೂ ಒಂದು ಕಾರಣವೂ ಇತ್ತು. ಸೆರೆ ಸಿಕ್ಕ ರಾಮರಾಯನನ್ನು  ನಿಜಾಂ ಶಾ ನ ಯುದ್ಧದ ಡೇರೆಯೊಳಗೆ ಬಾಗಿಲ ಬಳಿ ಕುಳ್ಳಿರಿಸುತ್ತಾರೆ. ಅವನಿಗೆ ಹಕೀಂ ಕೆಂಪು ಹೂವಿನ ಹಾರ ಹಾಕಿ, ಆರತಿ ಎತ್ತಿ, ಗಂಗೆ ನೀರಿರಿರುವ ಚೊಂಬಿನಿಂದ ನಿವಾಳಿಸುತ್ತಾನೆ. ನಂತರ ನಿಝಾಂ ಶಾನ ಕಣ್ಸನ್ನೆಯಂತೆ ರೂಮಿಖಾನ್ ರಾಮರಾಯನ  ತಲೆಯನ್ನು ಕತ್ತರಿಸುತ್ತಾನೆ.. ತಲೆ ಹೊಸ್ತಿಲಾಚೆ ಬೀಳುತ್ತದೆ. ದೇಹ ಒಳಗೇ ಉಳಿಯುತ್ತದೆ. [ಹಿರಣ್ಯಕಶಿಪ್ ನನ್ನು ನರಸಿಂಹ ಹೊಸ್ತಿಲ ಮೇಲೆ ವಧಿಸಿದ ನೆನಪು ಬಂತು!] ಅನಂತರ ತಲೆಯನ್ನು ಹರಿವಾಣದೊಳಗೆ ಇಟ್ಟು ಎದ್ದು ಕುಳಿತ ರಾಮರಾಯನಿಗೇ ಕೊಡುತ್ತಾರೆ. ತಲೆ ಚಚ್ಚಿಕೊಂಡರೂ ಇದರ ಅರ್ಥವೇನೆಂದು ಹೊಳೆಯಲೇ ಇಲ್ಲ.

.  ಇದೇ ನಾಟಕವನ್ನು ಇಂಗ್ಲೀಷನಲ್ಲಿಯೂ ನೋಡಿದ್ದೆ. ಅಲ್ಲಿ ನಾಟಕ ಕೊನೆ ತನಕ ತನ್ನ ಬಿಗಿಯನ್ನು ಕಾಯ್ದುಕೊಂಡಿತ್ತು. ರಾಮರಾಯ ನಿಜಾಂ ಶಾನಿಗೆ ತಾಂಬೂಲ ತಿನ್ನಿಸುವ ಒಂದೇ ದೃಶ್ಯವನ್ನು ತಾಳೆ ಹಾಕಿದರೂ ಸಾಕು ಅಲ್ಲಿಯ ಬಿಗಿ ಮತ್ತು ಇಲ್ಲಿಯ ಜಾಳುತನ ಅರಿವಾಗುತ್ತದೆ.  ಅಲ್ಲಿ ಅಳಿಯ ರಾಮರಾಯ ಫಿಸಿಕ್ ಆಕರ್ಷಕವಾಗಿರಲಿಲ್ಲ. ಆದರೆ ನಟನೆಯೇ ಜೀವಾಳವಾಗಿತ್ತು. ಇಲ್ಲಿ ಈತನ ಭಾವಬಂಗಿಗೆ ಯಕ್ಷಗಾನದ ಗಂಧವಿತ್ತು. ಅಲ್ಲಿ ರಾಮರಾಯನ ತಲೆ ಹಾರಿಸುವ ದೃಶ್ಯ ಬೆಳಕಿನ ಸಂಯೋಜನೆಯಲ್ಲಿ ಪೈಂಟಿಂಗ್ ನಂತೆ ಬಿಂಬಿತವಾಗಿತ್ತು. ಆತ ಓರೆಯಾಗಿ ಕುಳಿತ ಭಂಗಿ, ಇಳಿ ಬಿದ್ದ ತೋಳು  ಅಸಾಯಯಕತೆಯಲ್ಲೂ ಅತ್ಮಾಭಿಮಾನ ಚೆಲ್ಲುವಂತಿತ್ತು. ಇಲ್ಲಿ ಮತ್ತೆ ಮತ್ತೆ ಅದಿಲ್ ಶಾ ಎಲ್ಲಿ ಎಂದು ಕೇಳುವಲ್ಲಿ ರಾಮರಾಯನ ಅಸಹಾಯಕತೆಯೇ ಎದ್ದು ಕಾಣುತ್ತಿತ್ತು. ರಾಕ್ಷಸ ತಂಗಡಿಯಲ್ಲಿ ಎಲ್ಲಕ್ಕಿಂತಲೂ ಅಭಾಸ ಅನ್ನಿಸಿದ್ದು, ರಾಜಮಾತೆ ವೀಲ್ ಚೈರ್ ನಲ್ಲಿ ಬಂದಿದ್ದು. ವಿಜಯನಗರ ಕಾಲದಲ್ಲಿ ಅದು ಅಸ್ತಿತ್ವದಲ್ಲಿತ್ತೇ?

ಅಂತ್ಯವೊಂದನ್ನು ಬಿಟ್ಟು ಪೂರ್ತಿ ನಾಟಕ ಪಠ್ಯಕ್ಕೆ ನಿಷ್ಠವಾಗಿತ್ತು. ನಿದೇಶಕರು ಮಾಡಿಕೊಂಡ ಈ ಒಂದು ಬದಲಾವಣೆ ನಾಟಕದ ಆಶಯವನ್ನೇ ಪಲ್ಲಟಗೊಳಿಸಿತ್ತು.
 ನಿಜ, ಪಠ್ಯವನ್ನು ಯಾರು, ಯಾವ ಮನಸ್ಥಿತಿಯವರು ಓದುತ್ತಿದ್ದಾರೆ. ನೋಡುತ್ತಿದ್ದಾರೆ, ನಿರ್ದೇಶನ ಮಾಡುತ್ತಿದ್ದಾರೆ. ನೋಡುತ್ತಿದ್ದಾರೆ ಎಂಬುದು ಕೂಡಾ ಮುಖ್ಯವಾಗುತ್ತದೆ., ಭಿನ್ನ ಗ್ರಹಿಕೆ, ಭಿನ್ನ ನೋಟವಿರುವುದು ಅತ್ಯಂತ ಸಹಜ..

ರಾಕ್ಷಸ ತಂಗಡಿ ನಾಟಕದ ಇಂಗ್ಲೀಷ್ ಅವತರಣಿಕೆ ’ಕ್ರಾಸಿಂಗ್ ಟು ತಾಳಿಕೋಟೆ’  ಎರಡೂ ನಾಟಕಳೂ ಮೊತ್ತ ಮೊದಲ ಬಾರಿಗೆ ಒಂದೇ ತಿಂಗಳಿನಲ್ಲಿ ರಂಗದ ಮೇಲೆ ಬಂದವು. ಕನ್ನಡ ನಾಟಕವನ್ನು ನೀನಾಸಂ ರಂಗಕ್ಕೆ ತಂದರೆ ಇಂಗ್ಲೀಷ್ ನಾಟಕವನ್ನು ನಂದನ್ ನೀಲಕೇಣಿ ಮತ್ತು ಕಿರಣ್ ಮುಜುಮ್ ದಾರ್ ಪ್ರಯೋಜಿಸಿ ಅರ್ಜುನ್ ಸೆಜನಾನಿ ನಿರ್ದೆಶಿಸಿದ್ದರು. ಅಕ್ತೋಬರ್ ೨ರಂದು ಕ್ರಾಸಿಂಗ್ ಟೂ ತಾಳಿಕೋಟೆ ಬಂದರೆ ಅಕ್ಟೋಬರ್ ಅ೧೨ರಂದು ರಾಕ್ಷಸ ತಂಗಡಿ ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನ ಕಂಡಿತು. ಎರಡೂ ಪ್ರದರ್ಶನಗಳು ತುಂಬಾ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಪ್ರದರ್ಶನಗಳು. ಯಾಕೆಂದರೆ, ಇದು ಕಾರ್ನಾಡರು ಬರೆದ ಕೊನೆಯ ನಾಟಕ. ಮತ್ತು ವಿಜಯನಗರ ಸಾಮ್ರಾಜ್ಯದ ಪತನದ ಕಥೆಯನ್ನು ಭಿನ್ನ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ ನಾಟವಿದು.

 ನಾವು ಬಾಲ್ಯದಿಂದಲೂ ಓದಿಕೊಂಡು ಬಂದಿದ್ದು. ವಿಜಯನಗರ ಸಾಮ್ರಜ್ಯದ ಮೇಲೆ ದಕ್ಷಿಣದ ಮುಸ್ಲಿಂ ರಾಜರೆಲ್ಲಾ ಒಟ್ಟಾಗಿ ಸೇರಿ ದಂಡೆತ್ತಿ ಬಂದರು. ರಕ್ಕಸ ತಂಗಡಿ ಎಂಬಲ್ಲಿ ಘೋರಕದನವಾಗಿ ವಿಜಯನಗರದ ಅರಸರು ಸೋತರು. ಮುಸ್ಲಿಮರೆಲ್ಲಾ ಬಂದು ವಿಜಯನಗರದ ಸಂಪತ್ತನ್ನು ದೋಚಿ ಅದನ್ನು ಹಾಳು ಹಂಪೆಯಾಗಿಸಿದರು ಎಂಬುದನ್ನು, ಆದರೆ ಈ ನಾಟಕ,.ವಿಜಯನಗರದ ಅರಸರೇ ಕೃಷ್ಣಾ ನದಿಯನ್ನು ದಾಟಿ ಉತ್ತರಕ್ಕೆ ದಂಡೆತ್ತಿ ಹೋಗಿದ್ದರು. ಅದಕ್ಕೆ ಅಳಿಯ ರಾಮರಾಯನ ದುರಾಂಹಕಾರವೇ ಕಾರಣವಾಗಿತ್ತು. ಸುಲಭದಲ್ಲಿ ಸೆರೆಸಿಕ್ಕ ರಾಮರಾಯನ ತಲೆಯನ್ನು ಮುಸ್ಲಿಮರು ಹಾರಿಸಿದ ಒಡನೆಯೇ ವಿಜಯನಗರದಲ್ಲಿದ್ದ ಅರಮನೆಯ ಪರಿವಾರದವರೇ ಅಲ್ಲಿದ್ದ ಸಂಪತ್ತಿನೊಡನೆ ಪೆನಗೊಂಡಕ್ಕೆ ಪರಾರಿಯಾದರು ಎಂದು ಹೇಳುತ್ತದೆ. ಇದು ನಾಟಕಾರರ ಅಧ್ಯನ ಮತ್ತು ಬರವಣಿಗೆಯ ಸ್ವಾತಂತ್ರ್ಯ ಅದರ ಬಗ್ಗೆ ತಕರಾರಿಲ್ಲ. ಆದರೆ ಅದನ್ನು ರಂಗಕ್ಕೆ ತಂದಾಗ ಅದು ರಂಗಪಠ್ಯವಾಗುತ್ತದೆ. ಅಲ್ಲಿ ಆತ ತೆಗೆದುಕೊಳ್ಳುವ ಸ್ವಾತಂತ್ಯ ಎಷ್ಟು ಎಂಬುದು ಚರ್ಚಾಸ್ಪದ ಸಂಗತಿ. 


ಎರಡೂ ನಾಟಗಳನ್ನು ನೋಡಿದ ಮೇಲೆ ಅನ್ನಿಸಿದ್ದು.  ಓದು ಕೊಟ್ಟ ಅನುಭವವನ್ನು ಪ್ರದರ್ಶನಗಳು ಕೊಡಲು ಸಾಧ್ಯವಾಗಿಲ್ಲ ಎಂಬುದು
ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಏಕಕಾಲದಲ್ಲಿ ಬಹುಮುಖ್ಯ ರಂಗತಂಡಗಳು ಅದನ್ನು ರಂಗಕ್ಕೆ ತಂದಾಗ ಅದರ ಬಗ್ಗೆ ಚರ್ಚೆಯಾಗಬೇಕಾಗಿತ್ತು. ಅದಾಗಲಿಲ್ಲ ಯಾಕೆ? ಕಾರ್ನಾಡರು ತಮ್ಮ ಕೊನೆಗಾಲದ ದಿನಗಳಲ್ಲಿ ಎದುರಿಸಿದ ಪ್ರತಿರೊಧ ಅವರು ಸತ್ತ ಮೇಲೆಯೂ ಮುಂದುವರಿದಿದೆಯೇ?
 ಇವತ್ತು [ನವೆಂಬರ್ ೫] ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ.]


·        




Monday, December 26, 2016

”ಮೋಹನಸ್ವಾಮಿ’; ಕೇವಲ ಚಪ್ಪಾಳೆಗಾಗಿ ಅಲ್ಲ. .

.
’ ನಾಟಕ ಬೆಂಗಳೂರು’ ಏರ್ಪಡಿಸಿದ ನಾಟಕೋತ್ಸವದಲ್ಲಿ ’ ಮೋಹನಸ್ವಾಮಿ’ ನಾಟಕ ಪ್ರದರ್ಶನಗೊಂಡಿತು. ಕನ್ನಡದ ಜನಪ್ರಿಯ ಬರಹಗಾರರಾಗಿರುವ ವಸುಧೇಂದ್ರ ಅವರ ’ಮೋಹನಸ್ವಾಮಿ’ ಕಾದಂಬರಿಯನ್ನು ರಂಗಪಠ್ಯವಾಗಿಸಿದವರು ಬಸವರಾಜ ಸೂಳೇರಿಪಾಳ್ಯ. ’ವಯಸ್ಕರಿಗಾಗಿ’ ಎಂಬ ಟ್ಯಾಗ್ ಲೈನ್ ಹೊತ್ತ ಈ ನಾಟಕವನ್ನು ರೂಪಾಂತರ ತಂಡಕ್ಕಾಗಿ  ನಿರ್ದೇಶಿಸಿದವರು ಕೆ.ಎಸ್.ಡಿ.ಎಲ್ ಚಂದ್ರು.

ಮೊದಲಿಗೆ ಹೇಳಿಬಿಡುತ್ತೇನೆ. ಇದು ನಾಟಕದ ವಿಮರ್ಶೆಯಲ್ಲ. ಇದು ನನ್ನ ಅನ್ನಿಸಿಕೆ ಮಾತ್ರ ..ವೈಯಕ್ತಿಕವಾಗಿ ನನ್ನಲ್ಲಿ ಬಹುನಿರೀಕ್ಷೆಯನ್ನು ಹುಟ್ಟಿಸಿದ ನಾಟಕ ಇದಾಗಿತ್ತು. ನಾಟ್ಕ ಮುಗಿದೊಡನೆ ನನ್ನ ಅಭಿಪ್ರಾಯವನ್ನು ಬರೆಯಬೇಕೆಂದುಕೊಂಡಿದ್ದೆ. ಆದರೆ ಹೊರಊರಿಗೆ ಹೋಗಬೇಕಾದ ಅನಿವಾರ್ಯತೆ ಬಂದಕಾರಣ ಬರೆಯಲಾಗಲಿಲ್ಲ. ಬಂದೊಡನೆ ಪೇಪರ್ ಗಳನ್ನೆಲ್ಲಾ ಮಗುಚಿ ನೋಡಿದೆ. ಯಾರೂ ಇದರ ಬಗ್ಗೆ ಬರೆದಿರುವುದು ಕಣ್ಣಿಗೆ ಬೀಳದ ಕಾರಣ ನನಗನ್ನಿಸಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳೋಣವೆಂದುಕೊಂಡು ಕಂಪ್ಯೂಟರ್ ಮುಂದೆ ಕೂತಿದ್ದೇನೆ. ಯಾಕೆಂದರೆ ನಿರ್ಲಕ್ಷಿಬಿಡಬಹುದಾದ ಕಾದಂಬರಿ ’ಮೋಹನಸ್ವಾಮಿ’ ಅಲ್ಲ.

ಸಾಹಿತ್ಯಾಸಕ್ತರಿಗೆ ಗೊತ್ತಿದೆ. ಮೋಹನಸ್ವಾಮಿ ಹೋಮೋಸೆಕ್ಛುವಲ್ ಬಗ್ಗೆ ಕನ್ನಡದಲ್ಲಿ ಬಂದ ಮೊತ್ತ ಮೊದಲ ಕಾದಂಬರಿ. ಇದು ಪ್ರಕಟನೆಯಾಗಿ ಓದುಗರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿತು.ಅನಂತರದಲ್ಲಿ ಇದರ ಲೇಖಕ ವಸುಧೆಂದ್ರ, ತಾನೊಬ್ಬ ಗೇ ಎಂಬುದನ್ನು ಸಮಾಜದ ಎದುರು  ನಿರ್ಭಯವಾಗಿ ಘೋಷಿಸಿಕೊಂಡರು.ಹಾಗಾಗಿ ಆ ಕಾದಂಬರಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವಾದ ಶಾಶ್ವತ ಸ್ಥಾನವೊಂದು ದೊರಕಿದೆ. ಅಂತಹ ಕಾದಂಬರಿಯೊಂದನ್ನು ನಾಟಕಕ್ಕೆ ಅಳವಡಿಸಲು ಮುಂದಾದ ಚಂದ್ರು ಅವರು ಅಭಿನಂಧನೆಗೆ ಅರ್ಹರು. ಕಾದಂಬರಿಯೆಂಬ ಜನಪ್ರಿಯ ಮಾಧ್ಯಮದಿಂದ ನಾಟಕವೆಂಬ ಇನ್ನೊಂದು ಮಾಧ್ಯಮಕ್ಕೆ ಅಳವಡಿಸಿಕೊಂಡಾಗ ಮಾಡಿಕೊಂಡ ಬದಲಾವಣೆಗಳೇನು? ಅಲ್ಲಿನ ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸಿದರು ಎಂಬುದು ನನ್ನಂಥ ನಾಟಕಾಸ್ತರ ಕುತೂಹಲಕರ ಸಂಗತಿಯಾಗಿತ್ತು.

ಒಬ್ಬ ಓದುಗ ತನಗೆ ತಾನೇ ಸ್ವಯಂಭೂ. ಬರಹವೊಂದನ್ನು ಓದುತ್ತಾ..ಓದುತ್ತಾ ತನಗೆ ತಾನೇ ಕಲ್ಪನಾಲೋಕದಲ್ಲಿ ವಿಹರಿಸಬಲ್ಲ. ಕಾಲದೇಶಗಳನ್ನು ಮೀರಿ ತನಗೆನುಬೇಕೋ ಅದನ್ನು ಪಡೆದುಕೊಳ್ಳಬಲ್ಲ. ಆದರೆ ನಾಟ್ಕ ಹಾಗಲ್ಲ. ಅದು ದ್ರುಶ್ಯಕಲೆ. ಅಲ್ಲಿ ಜೀವಂತ ಪ್ರೇಕ್ಷಕರಿರುತ್ತಾರೆ. ಹಾಗಾಗಿ ರಂಗಮಂದಿರದಿಂದ ಪ್ರೇಕ್ಷಾಗಂಣಕ್ಕೆ ಹರಿದು ಬರಬೇಕಾದ ಅಂಶಗಳು ಯಾವುದು? ಔಚಿತ್ಯಪ್ರಜ್ನೆ ಮೀರದಂತೆ ಯಾವುದನ್ನು ಹೇಗೆ ಕೊಡಬೇಕು ಎಂಬುದನ್ನು ನಾಟ್ಕ ಕಟ್ಟುವವರು ನಿಶ್ಚಯಿಸುವುದು ಅತೀ ಮುಖ್ಯ. ’ಓದುವಿಕೆ’ ಮತ್ತು ’ನೋಡುವಿಕೆ’ ಎರಡೂ ಭಿನ್ನ ಆಯಾಮಗಳೇ.

.ಕೆಲವು ಆದಿಗಳಿಗೆ ಮುನ್ನುಡಿಯಾಗಿದ್ದ ಕಾದಂಬರಿಯೊಂದು ಇನ್ನೊಂದು ಮಾಧ್ಯಮಕ್ಕೆ ರೂಪಾಂತರಗೊಂಡಾಗ ಅದು ಕೂಡಾ ಇನ್ನೊಂದು ಆದಿಗೆ ನಾಂದಿಯಾಗಬಹುದಾಗಿದ್ದ ಸಂದರ್ಭವಿದು. ಅದ್ದರಿಂದ ಇಂತಹ ಹೊತ್ತಿನಲ್ಲಿ ಆ ನಾಟಕವನ್ನು ಭೂತ,ವರ್ತಮಾನ,ಭವಿಷ್ಯತ್ತಿನ ಕ್ಷಕಿರಣದಡಿಯಲ್ಲಿ ನೋಡುವ ಪ್ರಯತ್ನದ ಎಳೆಯೆಂದು ಭಾವಿಸಬಹುದಾದಲ್ಲಿ...

ನಿಮಗೆ ನೆನಪಿರಬಹುದು ೧೯೯೬ರಲ್ಲಿ ಹಿಂದಿಯಲ್ಲಿ ದೀಪಾ ಮೆಹ್ತಾ ’ ಫೈರ್’ ಎನ್ನುವ ಸಿನೇಮಾ ಮಾಡಿದ್ದರು ಅದು ಇಬ್ಬರು ಮಹಿಳೆಯರ ನಡುವಿನ ಲೈಂಗಿಕ ಚಟುವಟಿಕೆಯ ವಸ್ತುವನ್ನು ಒಳಗೊಂಡಿತ್ತು. ಶಬನಾ ಅಜ್ಮಿ ಮತ್ತು ನಂದಿತಾದಾಸ್ ಮುಖ್ಯಭೂಮಿಕೆಯಲ್ಲಿದ್ದರು. ಇದು ಭಾರತೀಯ ಸಿನಿಮಾ ರಂಗದಲ್ಲಿ ಹೋಮೋಸೆಕ್ಚುವಲ್ ಬಗ್ಗೆ  ಬಂದ ಮೊತ್ತ ಮೊದಲ ಸಿನೇಮಾವಾಗಿತ್ತು. ಆಗ ಸಂಪ್ರದಾಯಸ್ಥರು ಈ ಸಿನೇಮಾದ ವಿರುದ್ಧ ದೇಶದ ಹಲವಾರು ಕಡೆ ಪ್ರತಿಭಟನೆಗಳನ್ನು ನಡೆಸಿದ್ದರು.

ಪೈರ್, ಲೆಸ್ಬಿಯನ್ ಗಳ ಬಗ್ಗೆ ಬಂದ ಸಿನೇಮಾವಾದರೆ , ಹನ್ಸಾಲ್ ಮೆಹತಾ ಅನ್ನುವವರು ೨೦೧೬ರಲ್ಲಿ ಅಲಿಗಡ್ [ Aligrah] ಎಂಬ ಸಿನೇಮಾ ಮಾಡಿದ್ದರು. ಅದು ಗೇ ಯಾಗಿ ಬದುಕಿದ ವ್ಯಕ್ತಿಯೊಬ್ಬನ ಜೀವನಚರಿತ್ರೆಯನ್ನಾಧರಿಸಿದ್ದ ಸಿನೇಮಾವಾಗಿತ್ತು. ಅಲಿಗಡ್ ವಿಶ್ವವಿದ್ಯಾಲಯದಲ್ಲಿ ಲಿಂಗ್ವೆಸ್ಟಿಕ್ ಪ್ರೋಪೆಸರ್ ಆಗಿದ್ದ ಶ್ರೀನಿವಾಸ್ ರಾಮಚಂದ್ರ ಎಂಬವರು ಪುರುಷನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ನಿರತರಾಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು ಎಂಬ ಕಾರಣದಿಂದಾಗಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ವಿಚಾರಣೆಗೊಳಪಡಿಸಲಾಗಿತ್ತು. ಅನಂತರ ಅವರನ್ನು ಪುನರ್ ನೇಮಕಗೊಳಿಸಿದರೂ ಕೊನೆಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಮನೋಜ್ ಬಾಜ್ಪೈ ಪ್ರೋಪೆಸರ್ ಪಾತ್ರದಲ್ಲಿಯೂ ರಾಜಕುಮಾರ್ ರಾವ್ ಪತ್ರಕರ್ತನ ಪಾತ್ರದಲ್ಲಿಯೂ ನಟಿಸಿದ್ದರು.   ಒಬ್ಬ ಜರ್ನಲಿಸ್ಟ್ ದೃಷ್ಟಿಕೋನದಿಂದ ಆ ಸಿನೇಮಾವನ್ನು ನಿರೂಪಣೆ ಮಾಡಲಾಗಿತ್ತು.  ಅದೊಂದು ಟೆಕ್ನಿಕ್ ,ಅದು ನಿರ್ದೇಶಕನ ಸ್ವಾತಂತ್ರ್ಯ. ಅಂತಹದೊಂದು ತಂತ್ರದ ಮೂಲಕವೇ ಮೋಹನಸ್ವಾಮಿಯ ಎದೆಯ ತಳಮಳ, ಒಳಗಿನ ವಿಪ್ಲವ ಪ್ರೇಕ್ಷರೆದೆಗೆ ಹರಿದು ಬರಲು ಸಾಧ್ಯತೆಯಿತ್ತು..

ಗಂಭೀರವಾದ ವಸ್ತುವೊಂದನ್ನು ದೃಶ್ಯಮಾಧ್ಯಮಕ್ಕೆ ತಂದಾಗ ಅದನ್ನು ಅಷ್ಟೇ ಗಂಭೀರವಾಗಿ ತೆರೆಯ ಮೇಲೆ ಅಥ್ವಾ ರಂಗದ ಮೇಲೆ ಅನಾವರಣಗೊಳಿಸುವುದು ಅಷ್ಟೇ ಮುಖ್ಯ. ಈ ದೃಷ್ಟಿಯಿಂದ ನೋಡಿದಾಗ ’ಮೋಹನಸ್ವಾಮಿ’ ಎಂಬ ನಾಟಕ ಒಂದು ಪ್ರಯತ್ನದ ಮಟ್ಟಕ್ಕಷ್ಟೇ ಸೀಮಿತವಾಯ್ತು.

ನಾಟಕದ ಬಗ್ಗೆ, ರಂಗ ತಂತ್ರದ ಬಗ್ಗೆ ಏನನ್ನೂ ನಾನು ಹೇಳುವುದಿಲ್ಲ. ನಟ-ನಟಿಯರು, ಬ್ಲಾಕಿಂಗ್, ಸ್ವರಭಾರ, ರಂಗಸಜ್ಜಿಕೆ, ರಂಗಪರಿಕರ, ಸಂಗೀತ, ದ್ವನಿ, ಲೈಟ್-ಎಲ್ಲವೂ ಕೂಡಾ ಪರಿಣಾಮ ಬೀರುವುದು ಪ್ರೇಕ್ಷಕರ ಮೇಲೆ. ಆ ದೃಷ್ಟಿಯಿಂದ ನೋಡುವುದಾದರೆ.... ಜನರು ಆಗಾಗ ಚಪ್ಪಾಳೆ ಹೊಡೆಯುತ್ತಿದ್ದರು. ಶಿಳ್ಳೆ ಹಾಕುತ್ತಿದ್ದರು. ಕನ್ನಡ ಸಿನೇಮಾ ಪ್ರೇಕ್ಷಕರು ಹಿಜಿಡಾಗಳನ್ನು ನೋಡುವ ರೀತಿಯಲ್ಲೇ ಈ ನಾಟಕದ ಕೆಲ ಪ್ರೇಕ್ಷಕರು ಕೂಡಾ ಅದೇ ರೀತಿಯಲ್ಲಿ ಎಂಜಾಯ್ ಮಾಡಿದರು..
ಚಪ್ಪಾಳೆ ಹೊಡೆಸಿಕೊಳ್ಳುವ, ರಂಜನೆಯ ನಾಟಕವೇ ಮೋಹನಸ್ವಾಮಿ? ಅದು  ಪ್ರೇಕ್ಷಕರ ಎದೆಗಿಳಿದು ಅತ್ಮವಲೋಕನಕ್ಕೆ ಎಡೆಮಾಡಿಕೊಡಬೇಕಾಗಿತ್ತಲ್ಲವೇ?

ದೃಶ್ಯಕಲೆಗಳಲ್ಲಿ ಮೌನ ಮಾತಾಡುತ್ತದೆ. ಸಂಗೀತ ಅದಕ್ಕೆ ಪೂರಕವಾಗಿರುತ್ತದೆ. ಆದರೆ ಇಲ್ಲಿ ’ಟೊಂಯ್ ಟೊಂಯ್’ ಅನ್ನುವ ಸಂಗೀತ ನಾಟಕವನ್ನು ವಾಚ್ಯದೆಡೆಗೆ ತಳ್ಳುತ್ತಿತ್ತು. ಬಿಗಿ ಬಂಧದಲ್ಲಿ ಒಂದೂವರೆ ಘಂಟೆಯಲ್ಲಿ ಕಟ್ಟಿಕೊಡಬಹುದಾದ ನಾಟ್ಕವನ್ನು ಎರಡೂವರೆ ಘಂಟೆಗೆ ಲಂಬಿಸಿ ಮೇಲ್ಪದರಿನಲ್ಲಿ ರಂಜಿಸುವಂತೆ ಮಾಡಲಾಗಿತ್ತು.


ಚಂದ್ರು ನನ್ನ ರಂಗ ಗೆಳೆಯರು, ಒಳ್ಳೆಯ ನಿರ್ದೇಶಕರು. ಅವರ ಹಲವಾರು ನಾಟ್ಕಗಳನ್ನು ನೋಡಿದ್ದೇನೆ. ಈ ಬಾರಿ ಯಾಕೆ ಹೀಗಾಯ್ತೋ ಗೊತ್ತಿಲ್ಲ. ಬಹುಶಃ ಮುಂದಿನ ಪ್ರಯೋಗದಲ್ಲಿ ಇಲ್ಲಾದ ನ್ಯೂನತೆಗಳನ್ನು ತುಂಬಬಲ್ಲರು ಅಂತ ವಿಶ್ವಾಸವಿದೆ. ಅದಕ್ಕೆ ತಾನೇ ನಾಟಕವನ್ನು ”ಪ್ರಯೋಗ’ ಎಂದು ಕರೆಯುವುದು. ಪ್ರತಿ ಪ್ರದರ್ಶನವೂ ಒಂದು ಹೊಸ ಪ್ರಯೋಗವೇ. ಮುಂದಿನ ಬಾರಿ ಮೋಹನಸ್ವಾಮಿ ಪ್ರದರ್ಶನಗೊಂಡಾಗ ಇನ್ನೊಮ್ಮೆ ಅದನ್ನು ತಪ್ಪದೆ ನೋಡುವ ಆಸೆಯಿದೆ ನನಗೆ.. 

Monday, May 7, 2012

’ಬೌತಿಕದ ಹಸಿವು ಮತ್ತು ಅಧ್ಯಾತ್ಮದ ಸೆಳೆತ




ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು
ಬಯಲು ಬಯಲಾಗಿ ಬಯಲಾಯಿತಯ್ಯಾ
ಬಯಲು ಜೀವನ ಬಯಲು ಭಾವನೆ
ಬಯಲು ಬಯಲಾಗಿ ಬಯಲಾಯಿತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೇ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಅಲ್ಲಮನ ಈ ವಚನವನ್ನು ಮತ್ತೆ ಮತ್ತೆ ಗುನುಗುಣಿಸಲು ಕಾರಣವಾಗಿದ್ದು ಇತ್ತೀಚೆಗೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಾಲ್ಕು ದಿನಗಳ ಕಾಲ ನಡೆದ ’ಜನಪರ ಸಂಸ್ಕೃತಿ ಉತ್ಸವ’ ಎಂಬ ನಾಟಕೋತ್ಸವ.
ರಂಗಚೇತನ ಕಲಾವಿದರು ಆಯೋಜಿಸಿದ ಈ ನಾಟಕೋತ್ಸವದಲ್ಲಿ ಒಟ್ಟು ನಾಲ್ಕು ನಾಟಕಗಳು ಪ್ರದರ್ಶನಗೊಂಡವು. ಜೊತೆಗೊಂದು ಬೀದಿ ನಾಟಕವೂ ಇತ್ತು. ಎಲ್ಲಾ ನಾಟಕೋತ್ಸವದಂತೆ ಇಲ್ಲಿಯೂ ವಿಚಾರಸಂಕಿರಣ, ಕವಿಗೋಷ್ಠಿ, ಜಾನಪದ ಮೇಳ, ಪ್ರಶಸ್ತಿ ವಿತರಣೆಗಳಿದ್ದವು.

ನಾಟಕೋತ್ಸವದ ಆರಂಭದ ದಿನ ಪ್ರದರ್ಶಿತಗೊಂಡ ನಾಟಕ ’ಅರಿವಿನಮನೆ. ಈ ನಾಟಕೋತ್ಸವದ ಆಯೋಜಕರಾದ ನಂಜುಂಡಸ್ವಾಮಿ ರಚಿಸಿ, ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶಿಸಿದ ಈ ನಾಟಕವನ್ನು ರಂಗಚೇತನ ತಂಡದ ಕಲಾವಿದರು ಅಭಿನಯಿಸಿದ್ದರು.

ಮಾದಾರ ಚೆನ್ನಯ್ಯ ಕೀಳು ಜಾತಿಯವನು ವೃತ್ತಿಯಿಂದ ಚಪ್ಪಲಿ ಹೊಲಿಯುವವನು. ಆದರೆ ಕರಸ್ಥಳದಲ್ಲಿ ಲಿಂಗವನ್ನಿಟ್ಟು ಭಕ್ತಿ ನೈವೇಧ್ಯವನ್ನು ಅರ್ಪಿಸುವಾತ.  ಆ ರಾಜ್ಯದ ಒಡೆಯ ಚೋಳ ಮಹಾರಾಜ ಭಕ್ಷ್ಯಬೋಜ್ಯಗಳನ್ನಿತ್ತು ನೈವೇದ್ಯ ಮಾಡಿದರೂ ಸ್ವೀಕರಿಸದ ಶರಣವೇಷದಾರಿ ಶಿವ. ಚೆನ್ನಯ್ಯನ ಮನೆಯ ಅಂಬಲಿಯನ್ನು ಅಕ್ಕರೆಯಿಂದ ಉಣ್ಣುತ್ತಾನೆ. ಇದನ್ನು ತಿಳಿದ ರಾಜ ’ನನ್ನ ಶಿವನಿಗೆ ಅಂಬಲಿ ಕುಡಿಸಿದನೇ’ ಎಂದು ಚೆನ್ನಯ್ಯನ ಮೇಲೆ ಮೊದಲು ಕುಪಿತಗೊಂಡರೂ ಅಮೇಲೆ ಚೆನ್ನಯ್ಯನ ಮನೆಗೆ ಬಂದು ಅವನ ಭಕ್ತಿ ಪಾರಮ್ಯವನ್ನು ಕಂಡು ಮನಪರಿವರ್ತನೆಗೊಂಡು ಅವನನ್ನು ಆಸ್ಥಾನಕ್ಕೆ ಅಹ್ವಾನಿಸುತ್ತಾನೆ.
 ಚೆನ್ನಯ್ಯ ಆ ರಾಜ್ಯವನ್ನು ಬಿಟ್ಟು ಬಸವಣ್ಣನಿರುವ ಕಲ್ಯಾಣಕ್ಕೆ ತಪ್ಪಿಸಿಕೊಂಡು ಬರುತ್ತಾನೆ. ಅಲ್ಲಿ ಬಸವಣ್ಣನ ಜೊತೆಗೂಡಿ ಅರಿವಿನ ಮನೆಯನ್ನು ಹುಟ್ಟು ಹಾಕುತ್ತಾನೆ. ಅಕ್ಷರ ಕ್ರಾಂತಿಯ ಕನಸು ಕಾಣುತ್ತಾನೆ. ಅರಿವಿನ ಮನೆಗೆ ರಾಜಾಶ್ರಯವನ್ನು ನಯವಾಗಿ ತಿರಸ್ಕರಿಸುವ ಮಾದಾರ ಚೆನ್ನಯ್ಯ, ಮುಂದೆ ಬಿಜ್ಜಳನೇ ಅರಿವಿನ ಮನೆಯನ್ನು ಉದ್ಘಾಟಿಸುವ ಕ್ಷಣಕ್ಕೆ ಸಾಕ್ಷಿಯಾಗಬೇಕಾಗುತ್ತದೆ.  ಆ ಐತಿಹಾಸಿಕ ಕ್ಷಣದಲ್ಲಿಯೇ ಚೆನ್ನಯ್ಯ ಬ್ರಮ ನಿರಸನಗೊಂಡು ಅಲ್ಲಿಂದ ಕಣ್ಮರೆಯಾಗುತ್ತಾನೆ.

ಬಯಲು ಎನ್ನುವುದು ಅಧ್ಯಾತ್ಮಿಕತೆಯ ಅತ್ಯುನ್ನತ ಸಂಕೇತ; ಶೂನ್ಯ ಸ್ಥಿತಿ. ಅದನ್ನೇ ಅಲ್ಲಮ ’ಬಯಲು’ ಎನ್ನುತ್ತಾನೆ. ಅದಕ್ಕೆ ಆದಿಯಿಲ್ಲ ಅಂತ್ಯವಿಲ್ಲ.ಅದು ಅನಂತ.  ಈ ನಾಟಕದಲ್ಲಿ ಚೆನ್ನಯ್ಯ ಅಲ್ಲಮನಿಗೆ ಆಪ್ತನಾಗುತ್ತಾನೆ.
ಒಂದುಮುಕ್ಕಾಲು ಘಂಟೆಯ ಈನಾಟಕವನ್ನು ನಿರ್ದೇಶಕರು ಎಪ್ಪತ್ತು ನಿಮಿಷಗಳಿಗೆ ಇಳಿಸಿಕೊಂಡರೂ ನಾಟಕದ ಆಶಯಕ್ಕೆ ಧಕ್ಕೆಯಾಗಲಿಲ್ಲ. ನಾಟಕದುದ್ದಕ್ಕೂ ಬಳಸಿಕೊಂಡ ಅಲ್ಲಮ, ಬಸವಣ್ಣ ಮತ್ತು ಮಾದಾರ ಚೆನ್ನಯ್ಯನ ವಚನಗಳು ನಾಟಕದ ಸರಾಗ ಚಲನೆಗೆ ಕಾರಣವಾಗಿದ್ದವು.
ನಾಟಕೋತ್ಸವದ ಎರಡನೆಯ ನಾಟಕವಾಗಿ ಪ್ರದರ್ಶನಗೊಂಡದ್ದು ಅಮರೇಶ ನಿಡುಗೋಣಿಯವರ  ಸಣ್ಣ ಕಥೆಯಾಧಾರಿತ ನಾಟಕ ’ನೀರು ತಂದವರು’.ಶಶಿಧರ್ ಭಾರೀಘಾಟ್ ರಂಗರೂಪಕ್ಕೆ ಅಳವಡಿಸಿದ ಈ ನಾಟಕವನ್ನು ರಂಗನಿರಂತರ ತಂಡಕ್ಕಾಗಿ ನಿರ್ದೇಶಿಸಿದವರು ಎಂ. ರವಿ.
ಮೂರನೆಯ ದಿನ ದಾಕ್ಷಾಯಣಿ ಭಟ್ ನಿರ್ದೇಶನದ ’ಮರುಗಡಲು ನಾಟಕ ಪ್ರದರ್ಶನವಾಯಿತು.ಗ.ಸು.ಭಟ್ ರಚಿಸಿದ ಈ ನಾಟಕವನ್ನು ದೃಶ್ಯ ತಂಡದವರು ಅಭಿನಯಿಸಿದ್ದರು.

ಸಮಾರೋಪದಂದು ಪೂರ್ವನಿಗಧಿತವಾದ ನಾಟಕ ’ಕರ್ವಾಲೋ’ ಪ್ರದರ್ಶಿತವಾಗದೇ ಅದೇ ತಂದದವರಿಂದ ’ರಾಮಧಾನ್ಯ’ ನಾಟಕ ಪ್ರದರ್ಶಿತಗೊಂಡಿತು.ನಿರ್ದೇಶನ ಕೆ.ಎಸ್.ಡಿ.ಎಲ್ ಚಂದ್ರು ಅವರದೇ. ಹಾಗಾಗಿ ಒಂದೇ ನಾಟಕೋತ್ಸವದಲ್ಲಿ ಒಬ್ಬರೇ ನಿರ್ದೇಶಕರ, ಒಂದೇ ತಂಡದ ಎರಡು ನಾಟಕಗಳನ್ನು ನೋಡುವಂತಾದುದು ವಿಶೇಷ !
ರಾಮಧಾನ್ಯದ ಕಥೆ ಎಲ್ಲರಿಗೂ ಗೊತ್ತಿರುವಂತಹದೇ. ಇದು ಕನಕದಾಸರ ಕೃತಿ. ಆಕ್ಕಿ ಮತ್ತು ರಾಗಿ ಮಧ್ಯೆ ಯಾರು ಶ್ರೇಷ್ಟರೆಂಬ ವಾಗ್ವಾದ ಶುರುವಾಗಿ ನ್ಯಾಯ ತೀರ್ಮಾನಕ್ಕಾಗಿ ರಾಮನ ಬಳಿ ಬರುತ್ತಾರೆ. ರಾಮ ಅವರಿಬ್ಬರ ವಾದವನ್ನು ಆಲಿಸಿ ರಾಗಿಯೇ ಶ್ರೇಷ್ಟವೆಂದು ತೀರ್ಪು ಕೊಡುತ್ತಾನೆ.
ಈ ನಾಟಕದ ರಾಮ ಕ್ಯಾಲೆಂಡರಿನ ರಾಮನಲ್ಲ. ಕಾಲಿಗೆ ಸ್ಕೆಟಿಂಗ್ ಕಟ್ಟಿಕೊಂಡು ರಂಗದಲೆಲ್ಲಾ ಕರಾರುವಕ್ಕಾಗಿ ಹರಿದಾಡುತ್ತಾನೆ.
ನಾಟಕೋತ್ಸವದ ಆರಂಭ ಮತ್ತು ಅಂತ್ಯದ ನಾಟಕಗಳೆರಡರ ನಿರ್ದೇಶಕ ಮತ್ತು ತಂಡ ಒಂದೇ ಆದ ಕಾರಣದಿಂದಾಗಿಯೋ ಏನೋ ಪರಿಣಾಮದ ದೃಷ್ಟಿಯಿಂದ ಉತ್ತಮ ಪ್ರಯೋಗವೆಂದೇ ಹೇಳಬಹುದು. ಮೊದಲನೆಯದು ಹೊಸ ನಾಟಕ. ಕೊನೆಯದು ಈಗಾಗಲೇ ಹಲವಾರು ಪ್ರಯೋಗಗಳನ್ನು ಕಂಡ ನಾಟಕ. ಎರಡರಲ್ಲು ಉತ್ತಮ ಲೈವ್ ಸಂಗೀತವಿತ್ತು. ಆರಂಭದಿಂದ ಅಂತ್ಯದ ತನಕ ಬಿಗಿಯಾದ ನಿರೂಪಣೆಯಿತ್ತು.ಒಂದೇ ಲಯವಿತ್ತು. ಕೆಲವು ಕಡೆ ಅದ್ದ್ಭುತವೆನಿಸುವಂತ ಬೆಳಕಿನ ವಿನ್ಯಾಸವಿತ್ತು.ಏಕಾತನತೆಯನ್ನು ಭಂಗಗೊಳಿಸಲು ಸಂಗೀತ ಮತ್ತು ನೃತ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿತ್ತು.

 ’ಅರಿವಿನ ಮನೆ’ ನಾಟಕದುದ್ದಕ್ಕೂ ನಾಟಕದ ಆಶಯಕ್ಕೆ ಪೂರಕವಾಗಿ ರಿಂಗುಣಿಸಿದ ’ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು”ಎಂಬ ಅಲ್ಲಮನ ವಚನದ ಧ್ವನಿ ಸಮಾರೋಪದ ನಾಟಕವಾದ ’ರಾಮಧಾನ್ಯ’ದಲ್ಲೂ ಮುಂದುವರಿದಿತ್ತು. ವ್ಯ್ತತ್ಯಾಸ ಇಷ್ಟೆ.ಅಲ್ಲಿ ಇದ್ದುದು ಅಧ್ಯಾತ್ಮದ ಹಸಿವು. ಇಲ್ಲಿ ಇದ್ದುದು ಬೌತಿಕ ಹಸಿವು. ಅಲ್ಲಿಯ ಎಳೆ ಇಲ್ಲಿಯವರೆಗೂ ಹರಿದಿತ್ತು ಅದು ಈ ನಾಟಕೋತ್ಸವದ ಯಶಸ್ಸು.

[ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ ]

Saturday, April 7, 2012

’ಶಿಶಿರ ವಸಂತ’ ದಲ್ಲಿ ವಸಂತನೇ ನಾಪತ್ತೆ…!




ಶಿಶಿರ ವಸಂತ’ ನಾಟಕವನ್ನು ನೋಡಲು ರವೀಂದ್ರ ಕಲಾಕ್ಷೇತ್ರಕ್ಕೆ ಹೊರಟಾಗ ನನ್ನಲ್ಲಿ ನಿರೀಕ್ಷೆಗಳ ಜೊತೆಗೆ ಪುಟ್ಟದೊಂದು ಕುತೂಹಲವೂ ಇತ್ತು. ಮೊದಲನೆಯದಾಗಿ ಅದು ಶೇಕ್ಷ್ ಪಿಯರ್ ನ ನಾಟಕ. ಎರಡನೆಯದಾಗಿ ಅದನ್ನು ಅನುವಾದಿಸಿ ನಿರ್ದೇಶಿಸಿದವರು ಅಕ್ಷರ ಕೆ.ವಿ ಮತ್ತು ಅಭಿನಯಿಸುತ್ತಿರುವವರು ಕನ್ನಡದ ಮೊದಲ ರೆಪರ್ಟರಿಯೆನಿಸಿಕೊಂಡಿರುವ ನೀನಾಸಂ ತಂಡ. ಕುತೂಹಲ ಯಾಕೆಂದರೆ ನಾಲ್ಕು ಶತಮಾನಗಳ ಹಿಂದೆ ರಚನೆಗೊಂಡಿರುವ ನಾಟಕವೊಂದು ವರ್ತಮಾನಕ್ಕೆ ಹೇಗೆ ಸ್ಪಂದಿಸುತ್ತದೆಯೆಂಬುದು…
ನಾಟಕದ ವಸ್ತು ಸಾಮಾನ್ಯವಾದುದು. ಎಲ್ಲರಿಗೂ ಅರ್ಥವಾಗುವಂಥದು. ಇಬ್ಬರು ಗೆಳೆಯರಿರುತ್ತಾರೆ. ಅವರು ಅಕ್ಕಪಕ್ಕ ರಾಜ್ಯದ ರಾಜರೂ ಹೌದು. ಲಿಯಾಂಟೆಸ್ ನ ಮನೆಗೆ ಪಾಲಿಕ್ಸೆನಸ್ ಬರುತ್ತಾನೆ; ದೀರ್ಘ ಕಾಲ ಉಳಿಯುತ್ತಾನೆ. ಆತನನ್ನು ಇನ್ನಷ್ಟು ಕಾಲ ಉಳಿಸಿಕೊಳ್ಳುವ ಆಸೆ ಇವನಿಗೆ, ಆದರೆ ಅವನಿಗೆ ತಾಯ್ನಾಡಿಗೆ ಮರಳುವ ಹಂಬಲ, ಇವನ ಮಾತು ಕೇಳದ ಪಾಲಿಕ್ಸೆನಸ್, ಲಿಯಾಂಟೆಸ್ ನ ಪತ್ನಿ ಹರ್ಮಿಯೋನ್ ಳ ಅನುನಯದ ಮಾತುಗಳಿಗೆ ಒಪ್ಪಿ ಇನ್ನಷ್ಟು ಕಾಲ ಇಲ್ಲೇ ಉಳಿಯಲು ಮನಸ್ಸು ಮಾಡುತ್ತಾನೆ. ಇದು ಲಿಯಾಂಟೆಸ್ ನ ಮನಶ್ಯಾಂತಿಯನ್ನು ಕದಡಿಬಿಡುತ್ತದೆ. ಅವನ ಮತ್ತು ಈಕೆಯ ನಡುವೆ ಅನೈತಿಕ ಸಂಬಂಧ ಇರಬಹುದೆಂದು ಶಂಕಿಸುತ್ತಾನೆ. ಆ ಶಂಕೆಯ ಕಾರಣದಿಂದಾಗಿ ಲಿಯಾಂಟೆಸ್ ನ ಬದುಕಿನ ವಸಂತದಲ್ಲಿ ಶಿಶಿರ [ಶಿಶಿರ;ಆರು ಋತುಗಳಲ್ಲಿ ಕೊನೆಯದು. ಮರಗಳೆಲ್ಲಾ ಎಲೆಗಳನುದುರಿಸಿಕೊಂಡು ಬೋಳಾಗಿ ನಿಲ್ಲುವ ಕಾಲ. ಇದು ಮುಪ್ಪನ್ನು, ಮುದುಡುವಿಕೆಯನ್ನು ಸಂಕೇತಿಸುತ್ತದೆ.]ಆವರಿಸಿಕೊಳ್ಳುತ್ತದೆ. ಆ ಶಂಕೆಯೇ ಮುಂದೆ ನಡೆಯುವ ಹಲವು ಅವಘಡಗಳಿಗೆ ಕಾರಣವಾಗುತ್ತದೆ.
ಪತ್ನಿಯ ಶೀಲದ ಮೇಲಿನ ಶಂಕೆ ಕಾಲ, ದೇಶಾತೀತವಾದುದು. ಅದು ಶ್ರೀರಾಮಚಂದ್ರನಿಂದ ಹಿಡಿದು ಪಕ್ಕದ ಮನೆಯ ರಾಮಪ್ಪನ ತನಕ ಇಂದಿಗೂ ಮುಂದುವರಿದಿದೆ. ಮುಂದೆಯೂ ಮುಂದುವರಿಯುತ್ತದೆ. ಇಂಥ ಸಾರ್ವಕಾಲಿಕ ಸತ್ಯದ ಕಥಾಹಂದರವನ್ನು ಹೊಂದಿರುವ ಶೇಕ್ಷ್ ಪಿಯರ್ ನ ’ದಿ ವಿಂಟರ್ಸ್ ಟೇಲ್’ ನಾಟಕವನ್ನು ವಿಮರ್ಶಕರು, ಆತನ ದುರ್ಬಲ ನಾಟಕಗಳಲ್ಲೊಂದು ಎಂದು ಗುರುತಿಸಿದ್ದಾರೆ. ಇಂತಹ ನಾಟಕವೊಂದನ್ನು ಕೆ.ವಿ.ಅಕ್ಷರ ಅನುವಾದಿಸಿದ್ದಲ್ಲದೆ ಅದನ್ನು ಪ್ರಯೋಗಕ್ಕೊಳಪಡಿಸುವ ಸಾಹಸಕ್ಕೂ ಕೈ ಹಾಕಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾದರೇ?
ನೀನಾಸಂ ನಾಟಕಗಳೆಂದರೆ ’ಹೀಗೆಯೇ ಇರುತ್ತವೆ’ ಎಂಬ ಸಾಮಾನ್ಯ ಕಲ್ಪನೆಗಳನ್ನೆಲ್ಲಾ ಒಡೆದ ನಾಟಕವಿದು. ಅವರ ನಾಟಕಗಳಲ್ಲಿ ವಸ್ತುವನ್ನು ಮೀರಿ ಟೆಕ್ನಿಕ್ ವಿಜೃಂಭಿಸುತ್ತದೆ. ರಂಗಪರಿಕರಗಳ ಭಾರಕ್ಕೆ ನಾಟಕ ನಲುಗಿದಂತೆ ಭಾಸವಾಗುತ್ತದೆ. ನಾಟಕವನ್ನು ಶಿಸ್ತುಬದ್ಧಗೊಳಿಸುತ್ತಾ ಹೋದಂತೆಲ್ಲಾ ಸೃಜನಶೀಲತೆ ಮರೆಯಾಗುತ್ತದೆಯೆನೋ ಎಂಬ ಶಂಕೆಗೆ ನೀನಾಸಂ ನಾಟಕಗಳು ಕಾರಣವಾಗುತ್ತಿದ್ದವು. ಆದರೆ ಶಿಶಿರ ವಸಂತ ಈ ನಂಬಿಕೆಗಳಿಗೆಲ್ಲಾ ಹೊರತಾಗಿತ್ತು.
’ಶಿಶಿರ ವಸಂತ’ದಲ್ಲಿ ಸಮಕಾಲೀನ ವಸ್ತುವಿತ್ತು. ಹಿತಮಿತವಾದ ರಂಗಪರಿಕರಗಳಿದ್ದವು. ಒಳ್ಳೆಯ ಸಂಗೀತವಿತ್ತು.ಆದರೂ ಒಳ್ಳೆಯ ಪ್ರಯೋಗವಾಗವೆಂದು ಹೇಳಲಾಗುವುದಿಲ್ಲ. ಅದಕ್ಕೆ ಕಾರಣ ಸಡಿಲ ನಿರ್ದೇಶನ. ಮೊದಲನೆಯದಾಗಿ ಪಾತ್ರಗಳ ಆಯ್ಕೆಯೇ ಸರಿಯಾಗಿರಲಿಲ್ಲ. ನಾಟಕದ ಕೇಂದ್ರ ಪಾತ್ರವಾದ ಲಿಯಾಂಟೆಸ್ ನದು ದುರಂತ ಪಾತ್ರ. ಆತ ಮಾನಸಿಕ ಅಸ್ವಸ್ಥನಂತೆ ನಟಿಸಬೇಕಾಗಿತ್ತು. ಆದರೆ ಆತನಲ್ಲಿ ಎನರ್ಜಿಯೇ ಇರಲಿಲ್ಲ. ಕುಡುಕನಂತೆ ವರ್ತಿಸುತ್ತಿದ್ದ. ಪೌಲಿನಾ, ಪಾಲಿಕ್ಸ್ ನಸ್,, ಹರ್ಮಿಯೋನ್, ಮುದಿಕುರುಬ ಮುಂತಾದ ಕೆಲವು ಪಾತ್ರಗಳನ್ನು ಹೊರತುಪಡಿಸಿದರೆ ಬಹುತೇಕ ನಟರಲ್ಲಿ ರಂಗ ಹುಮ್ಮಸು ಇರಲಿಲ್ಲ. ರಂಗಚಲನೆಯಿರಲಿಲ್ಲ. ಡೈಲಾಗ್ ಡೆಲಿವರಿ ಮಾತ್ರವೇ ನಾಟಕವಾಗುವುದಿಲ್ಲ. ರಂಗಕ್ರಿಯೆಗಳು ನಡೆಯಬೇಕು. ಅಪೋಲೋ ವಾಣಿಯನ್ನು ಪ್ರೇಕ್ಷಕರ ಮದ್ಯದಿಂದ ಹೊತ್ತು ತಂದು ಬ್ರೆಕ್ಟ್ ನ ಪೋರ್ತ್ ವಾಲ್ ನ ಟೆಕ್ನಿಕ್ ಅನ್ನು ಬಳಸಿಕೊಂಡರೂ ಅದು ನಾಟಕವನ್ನು ಮೇಲೆತ್ತುವಲ್ಲಿ ಸಹಾಯಕವಾಗಲಿಲ್ಲ. ವಸ್ತ್ರ ವಿನ್ಯಾಸದಲ್ಲಿ ಹೊಸತನವಿರಲಿಲ್ಲ.
ನಾಟಕದ ವಸ್ತುವಿನ ಬಗ್ಗೆ ಕಾಲಪ್ರಕೃತಿ ಮತ್ತು ಕಾಲಪುರುಷನ ವಿವರಣೆಯ ನಂತರ ಇಬ್ಬರು ಗೆಳೆಯರ ನಡುವಿನ ಆಪ್ತತೆಯನ್ನು ಬಿಂಬಿಸುವುದರೊಂದಿಗೆ ಆರಂಭವಾದ ನಾಟಕ ಭರವಸೆಯನ್ನು ಹುಟ್ಟಿಸಿತಾದರೂ ಅನಂತರದಲ್ಲಿ ನಿಧಾನ ಗತಿಯಲ್ಲಿ ಸಾಗಿ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡಿತು. ಎರಡೂವರೆ ಘಂಟೆಗೂ ಮೀರಿ ಲಂಬಿಸಲ್ಪಟ್ಟ ನಾಟಕದಲ್ಲಿ ಬಿಡಿಬಿಡಿಯಾಗಿ ಕೆಲವು ದೃಶ್ಯಗಳಲ್ಲಿ ಕಲಾವಿದರು ಚೆನ್ನಾಗಿ ಅಭಿನಯಿಸಿದರೂ ನಾಟಕ ಒಟ್ಟು ಶಿಲ್ಪವಾಗಿ ಮೂಡಿ ಬರಲಿಲ್ಲ. ಬಹುಶ’ ಕೃತಿಯಲ್ಲಿಯೇ ಆ ಮಿತಿಗಳಿದ್ದರೆ ಅದನ್ನು ರಂಗಪ್ರಯೋಗದಲ್ಲಿ ತುಂಬಿಕೊಳ್ಳವ ಸ್ವಾತಂತ್ರ್ಯ ನಿರ್ದೇಶಕನಿಗೆ ಇರುತ್ತದೆಯಲ್ಲವೇ?
ನಾಟಕವೊಂದು ಪ್ರೇಕ್ಷಕನಿಗೆ ಏನನ್ನು ದಾಟಿಸಬೇಕು? ಇದನ್ನು ನಿರ್ದೇಶಕ ಯೋಚಿಸುತ್ತಾನೆ. ಪ್ರೇಕ್ಷಕ ನಾಟಕದಿಂದ ಏನನ್ನು ಗ್ರಹಿಸಿದ್ದಾನೆ ಮತ್ತು ಏನನ್ನು ಬಯಸುತ್ತಾನೆ? ಅದು ಅವನ ನಡವಳಿಕೆಯಿಂದ ಗೊತ್ತಾಗುತ್ತದೆ.. ಬೆಂಗಳೂರಿನಂತಹ ಒತ್ತಡದ, ಜನನಿಬಿಡ ನಗರದಲ್ಲಿ ನಾಟಕ ನೋಡಲು ಅರ್ಧ ದಿನವನ್ನು ವ್ಯಯಿಸಬೇಕಾಗುತ್ತದೆ. ಹಾಗಾಗಿಯೇ ಆತ ತಾನು ನಾಟಕಕ್ಕಾಗಿ ಮೀಸಲಿಟ್ಟ ಸಮಯ ಮತ್ತು ಖರ್ಚು ಮಾಡಿದ ದುಡ್ಡು ವರ್ಥ್ ಅನ್ನಿಸುತ್ತದೆಯೇ ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಆ ದೃಷ್ಟಿಯಿಂದ ನೋಡಿದರೆ ಚಿಕ್ಕದೊಂದು ಅಸಹನೆ ಆತನ ಮನದಲ್ಲಿ ಮೂಡಿದ್ದರೆ ಅಚ್ಚರಿಯೇನಿಲ್ಲ.
[ಇವತ್ತಿನ ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ ]

Sunday, March 25, 2012

ಹೊಸ ಪ್ರಯತ್ನದಲ್ಲಿ ’ಮನ್ವಂತರ’



ಕಲ್ಪನೆ ಇತಿಹಾಸವಾಗಲು ಸಾಧ್ಯವೇ? ಹಾಗೆ ಸಾಧ್ಯವಾದಲ್ಲಿ ಅದನ್ನು ದಾಖಲೆಯಾಗಿಸುವುದು ಹೇಗೆ? ಈ ಪ್ರಶ್ನೆ ಕಾಡಿದ್ದು ಮೊನ್ನೆ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಪ್ರದಶನಗೊಂಡ ’ಮನ್ವಂತರ’ ಎಂಬ ನಾಟಕ ನೋಡಿದ ಮೇಲೆ.
ಆ ನಾಟಕ ಕುತೂಹಲ ಮೂಡಿಸಲು ಕಾರಣವಿತ್ತು; ಕನ್ನಡದಲ್ಲಿ ಹೊಸ ನಾಟಕ ಕೃತಿಗಳು ಬರುತ್ತಿಲ್ಲ ಎಂಬುದು ಹಳೆಯ ಕೂಗು. ಹಾಗಾಗಿ ಆಗಾಗ ನಾಟಕ ರಚನಾ ಕಮ್ಮಟಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಅಲ್ಲಿ ಬಂದ ನಾಟಕಗಳು ಆಮೇಲೆ ಏನಾಗುತ್ತವೆಯೋ ಅದು ಅದರ ಸೃಷ್ಠಿಕರ್ತರಿಗಷ್ಟೇ ಗೊತ್ತಿರುವ ಸತ್ಯ. ಸ್ವತಃ ನಾಟಕ ಅಕಾಡಮಿಯೇ ಇಂಥ ಹಲವಾರು ನಾಟಕ ರಚನಾ ಶಿಬಿರಗಳನ್ನು ರಚಿಸಿದೆ. ಅಲ್ಲಿ ರಚನೆಗೊಂಡ ನಾಟ್ಕಗಳು ಅಕಾಡಮಿಯ ಶೆಲ್ಫ್ ಗಳಲ್ಲಿ ದೂಳು ಹಿಡಿಯುತ್ತಾ ಮಲಗಿವೆ ಎಂಬುದನ್ನು ಅಕಾಡಮಿಯ ರಿಜಿಸ್ಟ್ರಾರ್ ಆಗಿರುವ ನರಸಿಂಹಮೂರ್ತಿಯವರೇ ಒಪ್ಪಿಕೊಳ್ಳುತ್ತಾರೆ. ಹಾಗಿರುವಾಗ…
ಕಳೆದ ವರ್ಷ ಆದಿಚುಂಚನಗಿರಿಯಲ್ಲಿ ’ಸಮಾನ ಮನಸ್ಕರು’ ವೇದಿಕೆಯು ನಾಟಕ ರಚನಾ ಚಿಂತನಾ ಶಿಬಿರವೊಂದು ನಡೆದಿತ್ತು. ಅದರಲ್ಲಿ ೨೩ ಜನ ಭಾಗವಹಿಸಿದ್ದರು. ಅಲ್ಲಿ ಮೂಡಿ ಬಂದ ನಾಟಕವೇ ’ಮನ್ವಂತರ’ ಇದನ್ನು ರಚಿಸಿದವರು ಎಚ್ ಎ.ಎಲ್ ನಲ್ಲಿ ಉದ್ಯೋಗಿಯಾಗಿರುವ ರಾಜು ಭಂಡಾರಿ ಎಂಬ ಯುವಕ. ಆ ನಾಟಕವನ್ನು ಬಹು ಅಕ್ಕರೆಯಿಂದ ಪ್ರದರ್ಶನಕ್ಕೆ ಕೈಗೆತ್ತಿಕೊಂಡದ್ದು ರಂಗಸುಗ್ಗಿ ಟ್ರಸ್ಟ್ ಎಂಬ ಸಾಂಸ್ಕೃತಿಕ ಸಂಘಟನೆ. ನಿರ್ದೇಶನದ ಜವಾಬ್ದಾರಿಯನ್ನು ಹೊತ್ತವರು ಕೆ. ಪ್ರಭಾಕರ ಬಾಬು. ಮತ್ತು ಇದೆಲ್ಲದರ ಸೂತ್ರದಾರಿ ತುಮಕೂರು ಶಿವಕುಮಾರ್. ಇಷ್ಟು ಮಾತ್ರವಲ್ಲಾ ಆ ನಾಟಕ ಮುದ್ರಣಗೊಂಡು ಅಂದೇ ನಾಟಕ ಅಕಾಡಮಿಯ ರಿಜಿಸ್ಟ್ರಾರ್ ಅವರ ಸಮ್ಮುಖದಲ್ಲಿಯೇ ಬಿಡುಗಡೆಯನ್ನೂ ಕಂಡಿತು!
ಧಾರ್ಮಿಕ ಭಯೋತ್ಪಾದನೆ ಎಂಬುದು ಇಂದು ಜಾಗತಿಕ ಸಮಸ್ಯೆ. ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಮರಳುಮಾಡಿ ಉಗ್ರಗಾಮಿಗಳನ್ನಾಗಿ ಪರಿವರ್ತಿಸುವ ಜಾಲ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಸರ್ವಧರ್ಮ ಸಮಾನತೆಯ ವಾತಾವರಣದಲ್ಲಿ ಬೆಳೆದ ಸಮೀರನೆಂಬ ಯುವಕ ಹಿಂದು ಯುವತಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಅಮೃತಾಪುರವೆಂಬ ಹೆಸರಿನ ಆ ದೇಶದ ರಾಜ ಆದಿದೇವರಾಯ ಅವರ ಪ್ರೀತಿಯನ್ನು ಗೌರವಿಸುತ್ತಾನೆ. ಆದರೆ ಬಿಲಾಲ್ ಖಾನ್ ಎಂಬ ಉಗ್ರಗಾಮಿ ಸಮೀರನ ಮನಸ್ಸಿನಲ್ಲಿ ಹಿಂದು ವಿರೋಧಿ ಭಾವನೆಗಳನ್ನು ಬಿತ್ತಿ ಆದಿದೇವರಾಯನ ಕೊಲೆಗೆ ಆತನನ್ನು ಸಿದ್ಧಗೊಳಿಸುತ್ತಾನೆ. ಆಗ ಸಮೀರ ದ್ವಂದಕ್ಕೆ ಬೀಳುತ್ತಾನೆ. ಕೊನೆಯಲ್ಲಿ ಆತನಿಗೆ ತನ್ನ ತಪ್ಪಿನ ಅರಿವಾಗಿ ರಾಜನಿಗೆ ಶರಣಾಗುತ್ತಾನೆ. ರಾಜ ಕ್ಷಮಿಸುತ್ತಾನೆ. ಅಪ್ಪ, ಅಬ್ದುಲ್ಲಾನ ಆಸೆಯಂತೆ ತನ್ನ ಮಗ ಖ್ಯಾತ ಕೊಳಲುವಾದಕನಾಗುವ ಸಮೀರನ ಕನಸಿನೊಂದಿಗೆ ನಾಟಕ ಅಂತ್ಯಗೊಳ್ಳುತ್ತದೆ.
ಬಹುಶಃ ಇಂಥ ಒಂದು ವಿವಾದಾತ್ಮಕ ವಸ್ತುವನ್ನು ಎತ್ತಿಕೊಂಡ ಕಾರಣದಿಂದಲೇ ಇರಬಹುದು ಕೃತಿಕಾರರು ಈ ನಾಟಕವನ್ನು ’ಕಾಲ್ಪನಿಕ ಐತಿಹಾಸಿಕ’ ಎಂದು ಕರೆದಿದ್ದಾರೆ. ಈ ಆಬಾಸವನ್ನು ಹೊರತು ಪಡಿಸಿ ನೋಡಿದರೆ ಈ ಪ್ರದರ್ಶನವನ್ನು ಹೊಸಬರ ಒಳ್ಳೆಯ ಪ್ರಯತ್ನ ಎನ್ನಬಹುದು.
”ಚಂದ್ರನಲ್ಲಿ ಮಿನಾರ್ ಗಳು ಮಾತ್ರ ಮಿನುಗುತ್ತಿರಬೇಕು, ರಕ್ತ ಬಿದ್ದರೂ ಪರವಾಗಿಲ್ಲ; ಕಣ್ಣೀರು ಬೀಳಬಾರದು”ಎಂದು ಹೇಳುತ್ತಾ ಸಮೀರನ ಕಯ್ಯಲ್ಲಿ ಕತ್ತಿಯನ್ನು ಕೊಟ್ಟು ’ನೀನು ದೈವ ಸೈನಿಕನಾಗು’ ಎನ್ನುವ ಉಗ್ರಗಾಮಿ ಬಿಲಾಲ್ ಖಾನ್ ಪಾತ್ರದಲ್ಲಿ ಕೃತಿಕಾರ ರಾಜು ಭಂಡಾರಿ ಲವಲವಿಕೆಯಿಂದ ನಟಿಸಿದ್ದಾರೆ. ಕೃತಿಕಾರನೊಭ್ಭ ಸ್ವತಃ ನಟನೂ ಆದಾಗ ಆತನಿಗೆ ಪಾತ್ರ ಪೋಷಣೆಗೆ ಹೆಚ್ಚಿನ ಅವಕಾಶಗಳಿರುತ್ತವೆ. ಸಮೀರನ ಪಾತ್ರ ನಿರ್ವಹಿಸಿದ ಮಧುಸೂದನರಿಗೆ ಇನ್ನೂ ಹೆಚ್ಚಿನ ಎನರ್ಜಿಯ ಅವಶ್ಯಕತೆಯಿತ್ತು. ಆತನ ಮಾನಸಿಕ ತುಮುಲಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರೆ ನಾಟಕದ ಗಾಂಭೀರ್ಯ ಹೆಚ್ಚುತ್ತಿತ್ತು. ಒಂದು ಕಡೆ ತಾನೊಬ್ಬ ಉತ್ತಮ ಕೊಳಲುವಾದಕನಾಗಬೇಕೆಂದು ಕನಸು ಕಾಣುತ್ತಿರುವ ಅಪ್ಪ. ಇನ್ನೊಂದೆಡೆ ತಾನು ಪ್ರೀತಿಸಿ ಮದುವೆಯಾದ ಅನ್ಯಧರ್ಮೀಯ ಹುಡುಗಿ ಮೃದುಲಾದೇವಿಯೆಡೆಗಿನ ಸೆಳೆತ, ಉಗ್ರಗಾಮಿಗಳ ಹಿಡಿತ ಇವುಗಳೆಲ್ಲವನ್ನು ಬಿಂಬಿಸಲು ಈ ಪಾತ್ರಕ್ಕೆ ಅವಕಾಶವಿತ್ತು.
ಸಮೀರನ ತಂದೆ ಅಬ್ದುಲ್ಲಾನ ಪಾತ್ರದಲ್ಲಿ ಹಿರಿಯ ನಟರಾದ ಆಲೆಮನೆ ಸುಂದರಮೂರ್ತಿಯವರ ಆಂಗಿಕ ಅಭಿನಯ ಕಂಪೆನಿ ನಾಟಕಗಳನ್ನು ನೆನಪಿಸಿಸುತ್ತಿತ್ತು. ಅದು ಸಹಕಲಾವಿದರ ಅಭಿನಯಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಮೃದುಲಾದೇವಿಯ ಪಾತ್ರದಲ್ಲಿ ನಯನ ಜೆ. ಸೂಡ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಜ ಆದಿದೇವನ ಪಾತ್ರಕ್ಕೆ ನಟ ಮಹದೇವ ಗಾಂಭೀರ್ಯ ತುಂಬಿದ್ದಾರೆ. ನಾಟಕದಲ್ಲಿ ದೃಶ್ಯ ಮತ್ತು ಮೂಡ್ ಬದಲಾವಣೆಗೆ ಹಾಡುಗಳನ್ನು ಬಳಸಿಕೊಂಡಿದ್ದಾರೆ. ಹಾಡುಗಳನ್ನು ಬರೆದ ವಿ.ವಿ.ಗೋಪಾಲ್ ವಸ್ತುವಿನ ಗಂಭೀರತೆಯನ್ನು ಮನನ ಮಾಡಿಕೊಂಡಿದ್ದರೆ ಅವರಿಂದ ಒಳ್ಳೆಯ ರಚನೆಗಳು ಬಂದು ನಾಟಕಕ್ಕೆ ಪೂರಕವಾಗುತ್ತಿತ್ತೆನೋ! ನಾಟಕಕ್ಕೆ ಬೆಳಕು ನೀಡಿದವರು ಕೆ.ಪ್ರಭಾಕರಬಾಬು. ಅವರು ಕೆಲವು ಕಡೆಗಳಲ್ಲಿ ಅದ್ಬುತವೆನಿಸುವ ಬೆಳಕು ನೀಡಿದ್ದಾರೆ. ತನ್ನ ಹೊಟ್ಟೆಯಲ್ಲಿರುವ ಮಗುವಿನ ಬದುಕಲ್ಲೂ ಅಂಧಕಾರ ತುಂಬುತ್ತಿದೆಯಲ್ಲಾ ಎಂದು ರೋದಿಸುತ್ತಾ ’ಇಷ್ಟು ಚಿಕ್ಕ ಬೆಳಕಿಗೆ ಇಷ್ಟು ದೊಡ್ಡ ಕತ್ತಲನ್ನು ಬೆಳಗಿಸುವ ಶಕ್ತಿ ಇದೆಯಾ?’ ಎನ್ನುವಲ್ಲಿ ಹಣತೆಯ ಸಹಜ ಬೆಳಕನ್ನು ವಿನ್ಯಾಸ ಮಾಡಿದ್ದು ಪರಿಣಾಮಕಾರಿಯಾಗಿತ್ತು. ಆದರೆ ನಾಟಕದುದ್ದಕ್ಕೂ ಬಳಸಿದ ಪ್ಲಡ್ ದೀಪಗಳು ಪ್ರೇಕ್ಷಕರ ಏಕಾಗ್ರತೆಯನ್ನು ಭಂಗಗೊಳಿಸುತ್ತಿದ್ದವು.
ನಾಟಕದಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಗಳು ಕರಾರುವಾಕ್ಕಾಗಿರಲಿಲ್ಲ; ಗೊಂದಲಗಳಿದ್ದವು. ನಿರ್ದೇಶಕರು ಸ್ವಲ್ಪ ಮುತುವರ್ಜಿ ವಹಿಸಿದ್ದರೆ ನಾಟಕವನ್ನು ಇನ್ನಷ್ಟು ಪಾಲೀಶ್ ಮಾಡಬಹುದಿತ್ತು. ಮುಖ್ಯವಾಗಿ ಉದ್ದುದ್ದ ಡೈಲಾಗ್ ಗಳನ್ನು ತುಂಡರಿಸಿ ಮೌನಕ್ಕೆ ಮತ್ತು ಸಂಗೀತಕ್ಕೆ ಒತ್ತು ಕೊಡಬೇಕಾಗಿತ್ತು.
ಹಳೆಯ ನಟರೊಡನೆ ಹೊಸಬರು ಕೂಡಾ ಕಾಣಿಸಿಕೊಂಡು ಲವಲವಿಕೆಯಿಂದ ನಟಿಸಿದ್ದಾರೆ. ರಂಗಭೂಮಿಗೆ ಒಳ್ಳೆಯ ಕಲಾವಿದರು ಕೆಲವರಾದರೂ ದೊರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿದ ಪ್ರದರ್ಶನವಿದು.
[ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬರಹ ]

Monday, February 27, 2012

ಶಿಖರ ತಲುಪುವ ಮೊದಲೇ ಕುಸಿದ ’ಶಿಖರ ಸೂರ್ಯ’




”ಶಿಖರ ಸೂರ್ಯ’’ ರಂಗಾಯಣದ ಹೊಸ ನಾಟಕ. ಇದೇ ಜನವರಿಯಲ್ಲಿ ಮೈಸೂರಿನಲ್ಲಿ ನಡೆದ ’ಬಹುರೂಪಿ ನಾಟಕೋತ್ಸವ’ದ ಉದ್ಘಾಟನೆಯಂದು ಪ್ರದರ್ಶಿತವಾದ ನಾಟಕ. ಆ ಉತ್ಸವದಲ್ಲಿ ಜ್ನಾನಪೀಠ ವಿಜೇತರ ಕೃತಿಗಳನ್ನು ಆಯ್ದುಕೊಂಡು ಅದಕ್ಕೆ ’ಜ್ನಾನ ಪೀಠ ರಂಗೋತ್ಸವ’ ಎಂದು ಶೀರ್ಷಿಕೆಯನ್ನು ನೀಡಲಾಗಿತ್ತು.
ಶಿಖರ ಸೂರ್ಯ ಚಂದ್ರಶೇಖರ ಕಂಬಾರರ ಇತ್ತೀಚೆಯ ಮತ್ತು ಅವರ ಐದನೆಯ ಕಾದಂಬರಿ. ಜನಪದ ಮಾಹಾಕಾವ್ಯದ ಗುಣಲಕ್ಷಣಗಳನ್ನು ಹೊಂದಿರುವ ಈ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದವರು ರಂಗಾಯಣದವರೇ ಆದ ಎಸ್. ರಾಮನಾಥ್ ಅವರು. ನಿರ್ದೇಶನ, ರಂಗಾಯಣದ ಪ್ರಸಕ್ತ ನಿರ್ದೇಶಕರಾದ ಬಿ.ವಿ. ರಾಜಾರಂ.
ಕಂಬಾರರಿಗೆ ರಂಗಗೌರವ ಸಮರ್ಪಿಸುವ ಸಲುವಾಗ ಬೆಂಗಳೂರಿನ ಸಾಂಸ್ಕೃತಿಕ ಸಂಘಟನೆ ’ಭಾಗವತರು’ ಕಂಬಾರರ ನಾಟಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿತ್ತು. ಅಲ್ಲಿ ಸ್ಪಂದನ ತಂಡದಿಂದ ಬಿ. ಜಯಶ್ರೀ ನಿರ್ದೇಶನದ ’ಕರಿಮಾಯಿ. ಪ್ರಯೋಗರಂಗ ತಂಡದಿಂದ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ’ಶಿವರಾತ್ರಿ’ ಬೆನಕ ತಂಡದಿಂದ ಬಿ.ವಿ. ಕಾರಂತ ನಿರ್ದೇಶನದ ’ಜೋಕುಮಾರ ಸ್ವಾಮಿ’ ಮತ್ತು ರಂಗಾಯಣ ತಂಡದಿಂದ ಡಾ. ಬಿ.ವಿ.ರಾಜಾರಾಂ ನಿರ್ದೇಶನದ ’ಶಿಖರ ಸೂರ್ಯ’ ನಾಟಕಗಳು ಪ್ರದರ್ಶಿಸಲ್ಪಟ್ಟವು.
’ಶಿಖರ ಸೂರ್ಯ’ದ ಕಥೆ ಮೇಲ್ನೋಟಕ್ಕೆ ಸರಳ. ಅದು ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಬಿದ್ದ ಶಿಖರಸೂರ್ಯನೆಂಬ ಸಾಹಸಿಯ ದುರಂತ ಕಥೆ. ಅದು ಒಳಿತು ಕೆಡುಕುಗಳ ನಡುವಿನ ಸಂಘರ್ಷದ ಕಥೆಯೂ ಹೌದು. ಕಂಬಾರರನ್ನು ಓದಿದವರಿಗೆ ಗೊತ್ತಿದೆ. ಅವರ ಎಲ್ಲಾ ಕೃತಿಗಳಲ್ಲಿ ಒಂದು ಆದರ್ಶ ರಾಜ್ಯದ ಕಲ್ಪನೆಯಿರುತ್ತದೆ. ಅದು ಶಿವಾಪುರವೆಂಬ ಜನಪದರ ಕಲ್ಪನೆ..”ಶಿಖರ ಸೂರ್ಯ’ ನಾಟಕ ತೆರೆದುಕೊಳ್ಳುವುದೇ ಶಿವಾಪುರದಿಂದ ಮತ್ತು ’ಎಲ್ಲರೂ ಸುಖವಾಗಿದ್ದರು’ ಎಂಬ ಜನಪದದ ಆಶಯದೊಂದಿಗೆ ಇಲ್ಲಿಯೇ ಅಂತ್ಯಗೊಳ್ಳುತ್ತದೆ. ಇದರ ಮಧ್ಯೆ ನಡೆಯುವ ಹತ್ತಾರು ಘಟನೆಗಳು, ಅನಿರೀಕ್ಷಿತ ತಿರುವುಗಳು ನಾಟಕದಲ್ಲಿ ನಡೆಯುತ್ತದೆ. ಶಿವಾಪುರವೆಂಬ ಒಳಿತುನೂರಿಗೆ ವಿರುದ್ಧವಾಗಿ ಕನಕಗಿರಿಯೆಂಬ ಕೆಡುಕಿನೂರಿದೆ. ಅಲ್ಲಿ ವರ್ತಕರದೇ ಕಾರುಬಾರು.ಅಲ್ಲಿಯ ರಾಜ ವರ್ತಕರ ಕೈಗೊಂಬೆ. ರಾಣಿ ಮಂತ್ರಿಯ ತೋಳಬಂಧಿ. ಆ ರಾಣಿಗೂ ಆಂತರ್ಯದಲ್ಲಿ ಶಿವಾಪುರದ ಬೈರಾಗಿ ಶಿವಪಾದನ ಮೇಲೆ ಆಕರ್ಷಣೆ.
ಒಂದು ರೀತಿಯಲ್ಲಿ ’ಶಿಖರ ಸೂರ್ಯ’ ಚಿನ್ನಮುತ್ತನೆಂಬ ಯುವಕ ಕಲಾವಿದನಾಗಲು ಹಂಬಲಿಸಿ, ವಿಫಲನಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ, ಶಿವಾಪುರದ ಮುಗ್ಧ ದಂಪತಿಗಳಾದ ಜಟ್ಟಿಗ ಮತ್ತು ಬೆಳ್ಳಿಯ ಆರೈಕೆಯಲ್ಲಿ ಮತ್ತೆ ಆರೋಗ್ಯಪಡೆದು, ಕೊನೆಗೆ ಆತ ಬೆಳ್ಳಿಯ ಮೇಲೆ ಆಸೆಪಟ್ಟು ಸಾಧ್ಯವಾಗದಾದಾಗ ಜಯಸೂರ್ಯನೆಂದು ಹೆಸರು ಬದಲಾಯಿಸಿಕೊಂಡು ಅಮ್ಮನ ಬೆಟ್ಟದಲ್ಲಿರುವ ಶಿವಪಾದನ ಬಳಿಬಂದು ಶಿಷ್ಯತ್ವ ಸ್ವೀಕರಿಸಿ ವಜ್ರದೇಹಿಯಾಗುತ್ತಾನೆ.ಅನಂತರದಲ್ಲಿ ಶಿವಪಾದನಿಂದ ಹೊರದೂಡಲ್ಪಟ್ಟು ಬೆಳ್ಳಿಯ ವ್ಯಾಮೋಹದಿಂದ ಜಟ್ಟಿಗನನ್ನು ಕೊಲೆಮಾಡಿ ಅವಳಿಂದ ತಿರಸ್ಕೃತನಾಗಿ ಕನಕಪುರಿಗೆ ಬಂದು ಶಿಖರಸೂರ್ಯನಾಗುತ್ತಾನೆ. ಅಲ್ಲಿ ರಾಜವೈದ್ಯನಾಗಿ ಜನಪ್ರಿಯನಾಗುತ್ತಾನೆ. ರಾಜಕುಮಾರಿಯನ್ನು ಮದುವೆಯಾಗುತ್ತಾನೆ. ಅನಂತರ ನಡೆಯುವುದೆಲ್ಲಾ ಆತನ ಮಹತ್ವಾಂಕ್ಷೆಯ ಕುತಂತ್ರಗಳೇ. ಕೊನೆಗೆ ಆತ ರಾಜ್ಯವನ್ನೂ ಪಡೆಯುತ್ತಾನೆ, ರಾಣಿಯನ್ನೂ ಕೂಡಾ. ಆದರೆ ಆತ ಆ ವೇಳೆಗೆ ವಿಷಪುರುಷನಾಗಿ ಬದಲಾಗಿದ್ದ ಕಾರಣದಿಂದ ರಾಣಿ ಸತ್ತು ಹೋಗುತ್ತಾಳೆ. ಕನಕ ಪುರಿಯಲ್ಲಿ ಎಲ್ಲೆಲ್ಲೂ ಚಿನ್ನವೇ ತಿನ್ನಲು ಧಾನ್ಯವಿಲ್ಲ. ಯಾಕೆಂದರೆ ಧಾನ್ಯವನ್ನೆಲ್ಲಾ ಶಿಖರ ಸೂರ್ಯ ಚಿನ್ನವಾಗಿ ಬದಲಾಯಿದ್ದಾನೆ. ಆತ ಮನುಷ್ಯತ್ವ ಕಳೆದುಕೊಳ್ಳುತ್ತಾ ಹೋಗುತ್ತಾನೆ.. ..ಅದರೆ ಶಿವಾಪುರದಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿ ನಿನ್ನಡಿಯೆಂಬ ಶಿವಪಾದ ವಸ್ತ್ರದಲ್ಲಿ ಮೂರು ಪಾವು ಭತ್ತ ಕಟ್ಟಿಕೊಂಡು, ಅದರಲ್ಲಿ ಆನ್ನಮಾಡಿ ತನಗೆತೃಪ್ತಿಯಾಗುವಂತೆ ಊಟ ಬಡಿಸಬಲ್ಲ ಯೋಗ್ಯ ವದುವನ್ನು ಹುಡುಕಿಕೊಂಡು ಹೊರಟು ಶಿಖರಸೂರ್ಯನ ಮಗಳನ್ನೇ ಪಡೆಯುತ್ತಾನೆ. ಆದರೆ ಶಿಖರ ಸೂರ್ಯ ಆಕೆಯನ್ನೇ ಕೊಲ್ಲಲೆಳಸುತ್ತಾನೆ..ಕೊನೆಯಲ್ಲಿ ನಿನ್ನಡಿಯಿಂದ ತಿರುಮಂತ್ರ ಹಾಕಿಸಿಕೊಂಡು ಚಿನ್ನವೆಲ್ಲಾ ಮೂಲಸ್ಥಿತಿಗೆ ಬಂದು ಆತನಿಗೆ ರಸವಿಧ್ಯೆಯನ್ನು ಹೇಳಿಕೊಟ್ಟ ನಾಗಾರ್ಜುನ ಶಾಪಕ್ಕೆ ಗುರಿಯಾಗಿ ದುರಂತವಪ್ಪುತ್ತಾನೆ.
”ಶಿಖರ ಸೂರ್ಯ’’ದ ಶಿಖರ ಯಾವುದು? ಅದು ಗೊತ್ತಾದರೆ, ನಾಟಕದ ಓಘ ಆ ಕಡೆಗೇ ಇರುತಿತ್ತು.. ಕಂಬಾರರ ಎಲ್ಲಾ ಕೃತಿಗಳ ಮೂಲದ್ರವ್ಯ ಸೆಕ್ಸ್ ಮತ್ತು ಅಧ್ಯಾತ್ಮದ ಹುಡುಕಾಟ. ಅದಕ್ಕವರು ಜಾನಪದದ ಆಕರಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಹಾಗೆ ಮಾಡುತ್ತಲೇ ಸಮಕಾಲೀನ ಸಮಸ್ಯೆಗಳೊಡನೆ ಮುಖಾಮುಖಿಯಾಗುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಕೂಡಾ ಅದೇ ಹುಡುಕಾಟ. ಮತ್ತು ಅದೇ ಆಕರ. ಹಾಗಾಗಿ ನಾಟಕದುದ್ದಕ್ಕೂ ರೂಪಕಗಳೇ ತುಂಬಿವೆ. ಇಲ್ಲಿ ಚಿನ್ನದ ಹಪಹಪಿಕೆ ಭೋಗ ಸಂಕೇತವಾಗಿ ಬರುತ್ತದೆ.
ನಿಜ, ನಾಟಕದ ಹರವು ದೊಡ್ಡದು. ಅದನ್ನೆಲ್ಲಾ ಯಥಾವತ್ತಾಗಿ ತರುವ ಭರದಲ್ಲಿ ನಾಟಕ ಸೊರಗಿದೆ. ಅದರ್ ಜೊತೆಗೆ ನಾಟಕದ ನಿರೂಪಣೆಗೆ ಐದೈದು ಮಂದಿ ಜೋಗತಿಯರು ಮತ್ತು ಇತಿಹಾಸಕಾರರ ಮೇಳವನ್ನು ಬಳಸಿಕೊಳ್ಳಲಾಗಿದೆ. ಇಲ್ಲಿ ಇತಿಹಾಸಕಾರರ ಅಗತ್ಯವೇ ಇರಲಿಲ್ಲ, ಅವರು ಮಾತಿನಲ್ಲಿ ತಡವರಿಸುತ್ತಿದ್ದರು. ಅದರಲ್ಲಿ ಏರಿಳಿತಗಳಿರಲಿಲ್ಲ.. ಅವರ ಬದಲಿಗೆ ಜೋಗತಿಯರನ್ನೇ ಬಳಸಿಕೊಳ್ಳಬಹುದಾಗಿತ್ತು. ಉಳಿದಂತೆ ಎಲ್ಲಾ ಕಲಾವಿದರು ಲೀಲಾಜಾಲವಾಗಿ ತನ್ಮಯತೆಯಿಂದ ಅಭಿನಯಿಸಿದ್ದರು. ಶಿಖರ ಸೂರ್ಯನ ಪಾತ್ರದಲ್ಲಿ ಹುಲಗಪ್ಪ ಕಟ್ಟಿಮನಿಯವರುಅದ್ಭುತವಾಗಿ ಅಭಿನಯಿಸಿದ್ದರು. ಜೊತೆಗೆ ಚಂಡಿದಾಸ, ರಾಣಿ, ಶಿವಪಾದ, ಶುಕ್ರ ಇವರೆಲ್ಲರ ಅಭಿನಯ ಎದ್ದು ಕಾಣುತ್ತಿತ್ತು. ಅರ್ಥ ಕೌಶಲ್ಯನ ಆಂಗೀಕ ಅಭಿನಯವಂತೂ ಆತನ ದುರಳತನವನ್ನೂ ನಾಚಿಸುವಷ್ಟು ಸಹಜವಾಗಿತ್ತು. ರಂಗ ಸಜ್ಜಿಕೆ ಸರಳವಾಗಿತ್ತು. ಕಾಸ್ಟ್ಯೂಮ್ ಆಕರ್ಷಕವಾಗಿತ್ತು. ಬಸವಲಿಂಗಯ್ಯ ಹಿರೇಮಠ್ ಮತ್ತು ಶ್ರೀನಿವಾಸ್ ಭಟ್ ಅವರ ಸಂಗೀತ ವಸ್ತುವಿನ ಗಾಂಬೀರ್ಯಕ್ಕೆ ಪೂರಕವಾಗಿತ್ತು. ಇನ್ನು ನಾಟಕದ ಕಥೆಯ ಬೀಳಲುಗಳು ಎಷ್ಟೊಂದು ದಟ್ಟವಾಗಿತ್ತು ಎಂದರೆ ಪ್ರೇಕ್ಷಕನ ಏಕಾಗ್ರತೆ ಸ್ವಲ್ಪ ತಪ್ಪಿದರೂ ಕಥೆಯ ಎಳೆ ತಪ್ಪಿ ಹೋಗುತ್ತಿತ್ತು. ಇದೊಂದು ಓದುವ ನಾಟಕ, ನೋಡುವ ನಾಟಕ ಅಲ್ಲವೇನೋ ಎಂಬ ಗೊಂದಲ ಉಂಟಾಗುತ್ತಿತ್ತು.
ಶಿಖರ ತಲುಪುವ ಹಂತದಲ್ಲೇ ನಾಟಕ ಕುಸಿದಿದೆ. ಅದಕ್ಕೆ ಕಾರಣವಾಗಿದ್ದು ನಾಟಕದ ಸ್ಕ್ರಿಪ್ಟ್ ಮತ್ತು ನಿರೂಪಣಾ ತಂತ್ರ. ಕಾದಂಬರಿಗೆ ನ್ಯಾಯ ಒದಗಿಸುವ ಭರದಲ್ಲಿ ಸ್ಕ್ರಿಪ್ಟ್ ಬರೆದವರು ಕಾದಂಬರಿಯ ಎಲ್ಲಾ ಘಟನೆಗಳನ್ನು ಹಾಗಾಗೇ ತರಲು ಪ್ರಯತ್ನಿಸಿದ್ದಾರೆ. ಬಹುಶಃ ನಿರ್ದೇಶಕರು ಸ್ಕ್ರಿಪ್ಟ್ ಅನ್ನು ಎಡಿಟ್ ಮಾಡಿಕೊಂಡಿದ್ದರೆ ನಾಟಕ ಇನ್ನಷ್ಟು ಹರಳುಗಟ್ಟುತ್ತಿತ್ತೇನೋ..!
ಬದುಕಿನೆಡೆಗಿನ ಬೆರಗು ಮತ್ತು ವಿಸ್ಮಯ ಪ್ರೇಕ್ಷಕರನ್ನು ಖಂಡಿತಾ ಸೆರೆ ಹಿಡಿಯುತ್ತದೆ. ಆದರೆ ಅದನ್ನು ಹೇಗೆ ಪ್ರೆಸೆಂಟ್ ಮಾಡುತ್ತೇವೆ ಎಂಬುದು ಮುಖ್ಯ. ಆಗ ಮೊದಲ ಪ್ರಯೋಗಗಳಿಗೇ ರವೀಂದ್ರ ಕಲಾಕ್ಷೇತ್ರಕ್ಕೆ ಪ್ರೇಕ್ಷಕರ ಬರ ಬರಲಾರದು. ಇಲ್ಲಿ ಇನ್ನೊಂದು ಮಾತು ಹೇಳಲೇ ಬೇಕು. ಇದು ಧಾವಂತದ ಯುಗ. ಇಲ್ಲಿ ಎಲ್ಲರಿಗೂ ಸಮಯದ ಅಭಾವ ಇಂಥ ಸ್ಥಿತಿಯಲ್ಲಿ, ಟ್ರಾಪಿಕ್ ಕಿರಿಕಿರಿಯನ್ನು ಅನುಭವಿಸುತ್ತಾ ಮೂರು ಘಂಟೆಯ ನಾಟಕವನ್ನು ನೋಡಲು ಬಹುತೇಕರಿಗೆ ತಾಳ್ಮೆಯಿರುವುದಿಲ್ಲ. ರಾತ್ರಿಯಿಡೀ ನಡೆಯುವ ಯಕ್ಷಗಾನವನ್ನೇ ಮೂರು ಘಂಟೆಗೆ ಇಳಿಸಿದವರು ನಾವು. ಇನ್ನೂ ರಂಗಾಯಣ ಸಾಮಾನ್ಯ ರಂಗ ತಂಡದಂತಲ್ಲ; ಅದೊಂದು ರೆಪರ್ಟರಿ. ಅದರ ಬಗ್ಗೆ ರಂಗಪ್ರೇಮಿಗಳಿಗೆ ಹೆಚ್ಚಿನ ನಿರೀಕ್ಷೆಯಿರುತ್ತದೆ. ಹಾಗಾಗಿ ಅದರ ಜವಾಬ್ದಾರಿ ದೊಡ್ಡದು.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ. ]

Friday, February 3, 2012

ಅಧಿಕಾರದ ಹಪಹಪಿಕೆ ಮತ್ತು ಬದುಕಿನ ಕ್ಷಣಭಂಗುರತೆ




ಪಂಪ-ಕನ್ನಡದ ಆದಿ ಕವಿ. ಎಲ್ಲರನ್ನೂ ಎಲ್ಲಾ ಕಾಲಕ್ಕೂ ಕಾಡುವ ಮಹಾನ್ ಪ್ರತಿಭೆ. ಈತ ಮತ್ತೆ ನೆನಪಾಗಿದ್ದು ಮೊನ್ನೆ ಸಂಸ ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಂಡ ನಾಟಕ ’ಮಸ್ತಕಾಭಿಷೇಕ ರಿಹರ್ಸಲ್’ ನಲ್ಲಿ. ಎಚ್.ಎಸ್. ಶಿವಪ್ರಕಾಶ್ ರಚಿಸಿದ ಈ ನಾಟಕವನ್ನು ’ಅನೇಕ’ ತಂಡ ಅಭಿನಯಿಸಿತ್ತು. ನಿರ್ದೇಶನ ಸುರೇಶ್ ಅನಗಳ್ಳಿ ಅವರದು.
ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ್ ಟ್ಯಾಗೂರ್ ಪೀಠದ ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಶಿವಪ್ರಕಾಶ್ ರನ್ನು ಅಭಿನಂದಿಸಲು ಭಾರತ ಯಾತ್ರ ಕೇಂದ್ರವು ಅವರ ನಾಟಕೋತ್ಸವನ್ನು ಏರ್ಪಡಿಸಿತ್ತು. ಅಲ್ಲಿ ಪ್ರದರ್ಶಿತವಾದ ನಾಟಕವಿದು. ಈ ನಾಟ್ಅಕ ಈಗಾಗಲೇ ದೆಹಲಿಯಲ್ಲಿ ನಡೆದ ಎನ್.ಎಸ್.ಡಿ ಪ್ರಾಯೋಜಿತ ಭಾರತ ರಂಗೋತ್ಸವದಲ್ಲಿ ಪ್ರದರ್ಶಗೊಂಡಿದೆ. ಇದು ಅದರ ಎರಡನೇ ಪ್ರದರ್ಶನ.
ಎಚ್.ಎಸ್. ಶಿವಪ್ರಕಾಶ್ ಕನ್ನಡದ ಪ್ರಮುಖ ನಾಟಕಕಾರಲ್ಲಿ ಒಬ್ಬರು. ಅದಕ್ಕಿಂತಲೂ ಮಿಗಿಲಾಗಿ ಅವರೊಬ್ಬ ಅನುಭಾವ ಕವಿ.ಅವರನ್ನು ಬಸವಣ್ಣನಂತೆ ಅಲ್ಲಮನೂ ಕಾಡಿದ್ದಾನೆ. ಈ ನಾಟ್ಕದಲ್ಲಿ ಅವರನ್ನು ಕಾಡಿದ್ದು ಬಾಹುಬಲಿ. ಅದರಲ್ಲಿಯೂ ಪಂಪನ ’ಆದಿಪುರಾಣ’ದಲ್ಲಿ ಅಂತರ್ಗತವಾಗಿರುವ ಭೋಗ ನಶ್ವರತೆ ಮತ್ತು ವೈರಾಗ್ಯದ ಔನತ್ಯ.
ಮಸ್ತಕಾಭಿಷೇಕ ನಾಟಕದ ಪಠ್ಯವಿನ್ನೂ ಪ್ರಕಟಗೊಂಡಿಲ್ಲ. ಆದರೆ ಪಂಪನ ಪ್ರಭಾವ ಆ ನಾಟಕದ ಮೇಲೆ ದಟ್ಟವಾಗಿದೆ. ಅದಕ್ಕೆ ಕಾರಣಗಳಿವೆ; ಜಿನಸೇನನ ’ಪೂರ್ವ ಪುರಾಣ’ ದಲ್ಲಿ ಜೈನ ಧರ್ಮದ ಭವಾವಳಿಗಳನ್ನು ಹೇಳಲಷ್ಟೇ ಬರುವ ಈ ಕಥೆಯನ್ನು ಪಂಪ ವಿಸ್ತಾರವಾದ ಚಂಪೂ ಕಾವ್ಯವಾಗಿಸಿ ಜನಪ್ರಿಯಗೊಳಿಸಿದ್ದಾನೆ. ಆದಿಪುರಾಣದ ಮುಖ್ಯ ಶಿಖರಗಳೆಂದರೆ ನೀಲಾಂಜನೆಯ ನೃತ್ಯ; ಇದರಲ್ಲಿ ವ್ಯಕ್ತವಾಗುವ ಬದುಕಿನ ಕ್ಷಣ ಭಂಗುರತೆ. ಇನ್ನೊಂದು ಭರತ ದಿಗ್ವಿಜಯವನ್ನು ಮುಗಿಸಿಕೊಂಡು ವೃಷಭಾಚಲದ ಎದುರು ನಿಂತು ತನ್ನ ಕೀರ್ತಿಯನ್ನು ಕೆತ್ತಿಸಿಕೊಳ್ಳುವ ಸಂದರ್ಭದಲ್ಲಾಗುವ ಆತನ ಗರ್ವಬಂಗ. ಹಾಗೆಯೇ ಅಣ್ಣ ಭರತನನ್ನು ತಮ್ಮ ಭಾಹುಬಲಿ ಜಲಯುದ್ದ, ದೃಷ್ಟಿಯುದ್ಧಗಳಲ್ಲಿ ಸೋಲಿಸಿ ಕೊನೆಯ ಮಲ್ಲಯುದ್ಧದಲ್ಲಿ ಆತನ್ನನ್ನು ಮೇಲಕ್ಕೆ ಹಿಡಿದೆತ್ತಿ ನಿಂತಾಗ ಆತನ ಅಂತರಂಗದಲ್ಲಿ ಉಂಟಾಗುವ ಮಾನಸಿಕ ವಿಪ್ಲವ; ವೈರಾಗ್ಯದ ಅಂಕುರ-ಇವು ಆದಿಪುರಾಣದ ಹೈಲೈಟ್. ಐಶ್ವರ್ಯ, ಅಧಿಕಾರದ ಮದ ಇವುಗಳು ಅಣ್ಣ ತಮ್ಮಂದಿರನ್ನು, ತಂದೆ ಮಗನನ್ನು ಬೇರ್ಪಡಿಸುತ್ತದೆ; ಕಲಹವನ್ನು ತಂದಿಡುತ್ತದೆ, ಇಂಥ ರಾಜಶ್ರೀಯನ್ನು ತಾನು ಹೇಗೆ ಸ್ವೀಕರಿಸಲಿ ಎಂದು ವೈರಾಗ್ಯ ಹೊಂದಿ ಜೈನ ದೀಕ್ಷೆಯನ್ನು ಪಡೆಯುತ್ತಾನೆ. ಈ ಮೂರೂ ಘಟನೆಗಳು ನಾಟ್ಕದಲ್ಲಿಯೂ ಪ್ರಮುಖ ಘಟನೆಗಳೇ.
ಅದರೆ ಈ ನಾಟಕ ನಡೆಯುವುದು ನಾಟಕದೊಳಗಿನ ನಾಟಕದಲ್ಲಿ. ನಾಟ್ಕದ ಹೊರ ಆವರಣದಲ್ಲಿ ನಡೆಯುವ ನಾಟಕದ ರಿಹರ್ಸಲನಲ್ಲಿ ಅಂಬಾನಿ ಸಹೋದರರ ಕೌಟುಂಬಿಕ ಜಗಳ ಸಾಂಕೇತಿಕವಾಗಿ ಬಂದಿದೆ. ಅವರ ವ್ಯಾಜ್ಯ ಕೋರ್ಟಿನಲ್ಲಿ ಇರುವಾಗಲೇ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಅದನ್ನು ಮಾಧ್ಯಮ ತನ್ನ ಟಿಅರ್ ಪಿ ಹೆಚ್ಚಳಕ್ಕೆ ಬಳಸಿಕೊಂಡರೆ. ಅಂಬಾನಿ ಸಹೋದರನೊಬ್ಬ ನಾಟಕ ನಿರ್ದೇಶಕನೊಬ್ಬನನ್ನು ಗೊತ್ತುಮಾಡಿ ಭರತ ಬಾಹುಬಲಿ ಬಗ್ಗೆ ನಾಟಕ ವಾಡಿಸುತ್ತಾನೆ. ಅವನ ರಿಹರ್ಸಲ್ ನೋಡಿದ ಯು.ಎಸ್. ಮೂಲದ ಟೀವಿ ಚಾನಲ್ಲೊಂದು ಅದರ ಟಿಲಿಕಾಸ್ಟ್ ಹಕ್ಕುಗಳನ್ನು ಪಡೆದುಕೊಳ್ಳುತ್ತದೆ.
’ಮಸ್ತಕಾಭಿಷೇಕ ರಿಹರ್ಸಲ್’ ನಾಟಕವನ್ನು ನೋಡಿದಾಗ ಅನ್ನಿಸಿದ್ದು ಈ ನಾಟಕಕ್ಕೆ ಹಲವು ಆಯಾಮಗಳಿವೆ. ಮೇಲ್ನೋಟಕ್ಕೆ ಇದು ಮಸ್ತಕಾಭಿಷೇಕ ನಾಟಕದ ರಿಹರ್ಸಲ್. ಆದರೆ ಅದರೊಳಗಡೆ ಹಲವಾರು ನೆಯ್ಗೆಗಳಿವೆ. ಯಾವ ಜೈನ ಧರ್ಮ ತ್ಯಾಗ ಮತ್ತು ವೈರಾಗ್ಯವನ್ನು ಜೀವನ ಮೌಲ್ಯವನ್ನಾಗಿ ಅಂಗೀಕರಿಸಿಕೊಂಡಿತ್ತೋ ಆ ಧರ್ಮವೀಗ ವ್ಯಾಪಾರಿಕರಣಗೊಂಡು ಮಾರುಕಟ್ಟೆಯ ಸರಕ್ಕಾಗಿ ಬದಲಾಗಿರುವುದನ್ನು ನಾಟಕ ಹೇಳುತ್ತದೆಯಾದರೂ ಇಲ್ಲಿ ಎಲ್ಲವೂ ಬಿಕರಿಗಿಟ್ಟ ವಸ್ತುಗಳೇ. ಅದು ಮಾಧ್ಯಮಗಳ ಮೇಲಾಟ, ವಿಚಾರವಾದಿಗಳ ವೈಚಾರಿಕತೆ, ಕಲಾವಿದರ ಉಡಾಫೆ. ನಾಟಕದೊಳಗಿನ ನಾಟಕ ನಿರ್ದೇಶಕನ ಆಸೆಬುರುಕತನ ಎಲ್ಲವೂ ಕೂಡಾ ಜಾಗತೀಕರಣದ ಭರಾಟೆಯಲ್ಲಿ ಬಿಕರಿಗಿಟ್ಟ ವಸ್ತುಗಳೇ.
ನಾಟಕ ಪ್ರೇಕ್ಷಕರನ್ನು ತಲುಪುವ ಬಗ್ಗೆ ಅಥವಾ ಅವರ ಗ್ರಹಿಕೆಯ ಬಗ್ಗೆ ನಿರ್ದೇಶಕರಿಗೆ ಅನುಮಾನಗಳಿರಬೇಕು ಹಾಗಾಗಿ ಅವರು ಮಸ್ತಕಾಭಿಷೇಕದ ನೇರ ಪ್ರಸಾರವನ್ನು ’ಹೀಗೂ ಉಂಟೇ’ ಶೈಲಿಯಲ್ಲಿ ನಿರೂಪಿಸಿದ್ದಾರೆ. ಆ ಶೈಲಿ ಟೀವಿ ನಿರೂಪಕರ ದಡ್ಡತನವನ್ನು ತೋರಿಸುವುದರ ಜೊತೆಗೆ ನಾಟಕದ ಗಾಂಭೀರ್ಯವನ್ನು ಮಸುಕಾಗಿಸಿತ್ತು. ಒಂದು ಒಳ್ಳೆಯ ವಿಡಂಬನಾ ನಾಟಕವಾಗಬಹುದಾದ ಸಾಧ್ಯತೆಯನ್ನು ಈ ಪಾತ್ರ ಮಸುಕಾಗಿಸಿತೇನೋ ಎಂಬ ಅನುಮಾನ ಪಡುವಷ್ಟು ಆ ಪಾತ್ರ ಮಿಂಚಿತ್ತು.
ನಾಟಕದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ತನ್ಮಯತೆಯಿಂದ ನಟಿಸಿದ್ದಾರೆ.
ತಾಂತ್ರಿಕವಾಗಿಯೂ ನಾಟಕ ಉತ್ತಮವಾಗಿ ಮೂಡಿ ಬಂದಿದೆ ಇದಕ್ಕೆ ರಂಗಪರಿಕರವನ್ನು ಒದಗಿಸಿದ ಪ್ರಮೋದ್ ಶಿಗ್ಗಾಂವ್, ಬೆಳಕು ವಿನ್ಯಾಸ ಮಾಡಿದ ಅ.ನಾ.ರಮೇಶ್ ಮತ್ತು ಮಹಾದೇವಸ್ವಾಮಿ ಹಾಗೂ ಸೆಟ್ ಸಿದ್ಧಪಡಿಸಿದ ಶಂಕರ್, ಇದಲ್ಲದೆ ಸ್ವತಃ ಸಂಗೀತ ನೀಡಿದ ನಿರ್ದೇಶಕ ಅನಗಳ್ಳಿಯವರ ಕೊಡುಗೆ ಕಾರಣವಾಗಿದೆ
ನಾಟಕದಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ನೇರ ಪ್ರಸಾರದ ತುಣುಕುಗಳನ್ನು ಸಂದರ್ಭಕ್ಕೆ ತಖ್ಖಂತೆ ಬಳಸಿಕೊಳ್ಳಲಾಗಿತ್ತು. ಹಾಗಾಗಿ ಇದನ್ನು ’ಡ್ಯಾಕು ಡ್ರಾಮ’ ಎಂದು ಕರೆಯಬಹುದೆಂದು ನಿರ್ದೇಶಕರು ಹೇಳುತ್ತಾರೆ. ಅದನ್ನು ಒದಗಿಸಿದವರು ಪ್ರಸಿದ್ದ ಇತಿಹಾಸಕಾರರಾದ ಷ.ಶೆಟ್ಟರ್ ಅವರು.
ವರ್ತಮಾನದಲ್ಲಿ ಅಧಿಕಾರಕ್ಕಾಗಿ ನಡೆಯುವ ಕಚ್ಚಾಟ ಮತ್ತು ಬದುಕಿನ ಕ್ಷಣಭಂಗುರತೆ ನಾಟಕಕಾರರನ್ನು ಕಾಡಿದ್ದರೆ, ನಾಟಕ ಪ್ರಯೋಗದ ಸಂಕಷ್ಟ ಮತ್ತು ಮಾಧ್ಯಮದ ಹುಚ್ಚಾಟಗಳು ನಿರ್ದೇಶಕರನ್ನು ಕಾಡಿರಬೇಕು.ಆದರೂ ’ಮಸ್ತಕಾಭಿಷೇಕ ರಿಹರ್ಸಲ್’ ಒಂದು ರಿಹರ್ಸಲ್ ಮಾತ್ರ.ಅಂದರೆ ಮುಂದೆ ನಡೆಯಬಹುದಾದ ನಾಟಕದ ತಾಲೀಮ್ . ಹಾಗಾಗಿ ತಿದ್ದಿಕೊಳ್ಳಲು ಇನ್ನೂ ಅವಕಾಶಗಳಿವೆ ಎಂಬ ಆಶಯವನ್ನು ನಾಟಕ ಸೂಚ್ಯವಾಗಿ ಹೇಳುತ್ತದೆ. ಅದಕ್ಕೆ ಸಾಕ್ಷಿಯಾಗಿ ರಂಗದ ಕೊನೆಯಲ್ಲಿ, ಸ್ಪಾಟ್ ಲೈಟ್ ನಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿ ನಿಶ್ಚಲನಾಗಿ ನಿಂತಿರುತ್ತಾನೆ. ನಾಟಕದೊಳಗಿನ ಆ ಪಾತ್ರದಾರಿ ನಾಟಕದ ರಿಹರ್ಸಲ್ ನಲ್ಲಿ ಪಾಲ್ಗೊಳ್ಳುತ್ತಲೇ ತನಗರಿವಿಲ್ಲದಂತೆ ಬಾಹುಬಲಿಯ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ನಾಟಕದೊಳಗಿನ ನಿರ್ದೇಶಕ ಮತ್ತು ಟೀವಿ ನಿರ್ದೇಶಕನ್ನು ಧಿಕ್ಕರಿಸಿ ಬೆತ್ತಲೆಯಾಗಿ ನಿಲ್ಲುವುದು ಒಟ್ಟು ನಾಟಕದ ಆಶಯವಾಗಿದೆ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ]

Wednesday, February 1, 2012

”ಪಿನಾಕಿನೀ ತೀರದಲ್ಲಿ’ ಇತಿಹಾಸದತ್ತ ಒಂದು ಇಣುಕು ನೋಟ.




ಇತಿಹಾಸದ ಘಟನೆಯೊಂದನ್ನು ವರ್ತಮಾನದಲ್ಲಿ ನಿಂತು ನೋಡುವ ಪ್ರಯತ್ನವೇ ’ಪಿನಾಕಿನೀ ತೀರದಲ್ಲಿ’ ಈ ನಾಟಕವನ್ನು ಕೆ.ಜಿ.ಎಫ್ ಸಮುದಾಯ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು.
ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿ ತೀರದಲ್ಲಿದೆ ವಿದುರಾಶ್ವತ್ಥ. ಮಹಾಭಾರತದ ವಿದುರನ ಹೆಸರಿನೊಂದಿಗೆ ತಳುಕು ಹಾಕಿಕೊಂದಿರುವ ಇಲ್ಲಿರುವ ಅರಳಿ ಮರದ ಕೆಳಗೆ ಸಾವಿರಾರು ನಾಗರ ಕಲ್ಲುಗಳಿವೆ. ಇದೊಂದು ಭಕ್ತರ ಆರಾಧನಾ ಕ್ಷೇತ್ರ. ಆದರೆ ಈ ಜಾಗ ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು ಎಂಬುದು ಬಹಳ ಜನಕ್ಕೆ ಗೊತ್ತಿದ್ದಂತಿಲ್ಲ.
ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ನಡೆದ ಧ್ವಜ ಸತ್ಯಾಗ್ರ್ಹ ಚಳುವಳಿ ಮತ್ತು ಅದರಲ್ಲಿ ಹುತಾತ್ಮರಾದವರ ಇತಿಹಾಸ ವಿದುರಾಶ್ವತ್ಥದೊಂದಿಗೆ ಸೇರಿಕೊಂಡಿದೆ. ಇದನ್ನು ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ.
ಅದು ೧೯೩೮ ನೇ ಇಸವಿ. ವಿದುರರಾಶ್ವತ್ಥ ಜಾತ್ರೆಯ ಸಂದರ್ಭ. ಆಗ ನಡೆದ ಧ್ವಜ ಸತ್ಯಾಗ್ರಹ ಸಂದರ್ಭದಲ್ಲಿ ನಡೆದ ಗೋಲಿಬಾರಿನಲ್ಲಿ ಗರ್ಭಿಣಿ ಮಹಿಳೆಯೂ ಸೇರಿದಂತೆ ಒಂಬತ್ತು ಜನರು ಹುತಾತ್ಮರಾಗಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಡಾ. ರಂಗಾರೆಡ್ಡಿ ನಾಟಕವನ್ನು ರಚಿಸಿದ್ದಾರೆ. ನಿರ್ದೇಶನ ಅಚ್ಯುತ ಅವರದು.
ಒಂದೂವರೆ ಘಂಟೆಯ ಅವಧಿಯ ಈ ನಾಟಕ ಇತಿಹಾಸವನ್ನು ಮೆಲ್ಮಟ್ಟದಲ್ಲಿ ನೋಡುವ ಪ್ರಯತ್ನವನ್ನು ಮಾಡುತ್ತದೆ. ವರ್ತಮಾನದಲ್ಲಿ ನಿಂತು ಇತಿಹಾಸವನ್ನು ನೋಡುವಾಗ ಚಿಕಿತ್ಸಕ ದೃಷ್ಟಿಕೋನವಿರಬೇಕು. ಆ ಚಿಕಿತ್ಸಕ ನೋಟ ನಾಟಕದ ಪಠ್ಯದಲ್ಲಿರಲಿಲ್ಲ. ಆ ಕಾಲಘಟ್ಟದಲ್ಲಿ ಭಾರತ ಸ್ವಾತಂತ್ಯ ಚಳುವಳಿಯಲ್ಲಿ ನಡೆದ ಮಹತ್ವದ ಘಟನೆಗಳನ್ನು ನಾಟಕದಲ್ಲಿ ಒಪ್ಪವಾಗಿ ಜೋಡಿಸಲಾಗಿತ್ತು. ಈ ಜೋಡಣೆಗೆ ನಿರ್ದೇಶಕರು ಬಳಸಿಕೊಂಡದ್ದು ಕಥನ ಕಲೆಯ ಕೌಶಲ್ಯವನ್ನು, ಹಿನ್ನೋಟದ ತಂತ್ರವನ್ನು.
ಕಥೆಗಾರ ಮತ್ತು ಆತನ ಇಬ್ಬರು ಶಿಷ್ಯೆಯರು ವರ್ತಮಾನದಲ್ಲಿ ನಿಂತು ಇತಿಹಾಸದ ನಿರೂಪಣೆಯನ್ನು ಮಾಡುತ್ತಿದ್ದರು. ಇಲ್ಲಿ ವರ್ತಮಾನ ಅಂದರೆ೧೯೩೮ ನೇ ವರ್ತಮಾನ. ಹಾಗಾಗಿ ದೇಶಾದ್ಯಂತ ನಡೆಯುವ ಹೋರಾಟಕ್ಕೆ ಅವರು ಕಣ್ಣಾಗುತ್ತಿದ್ದರು. ರಂಗದ ಒಂದು ಬದಿಯಲ್ಲಿ ಸ್ಪಾಟ್ ಲೈಟ್ ಬೆಳಕಿನಲ್ಲಿ ಅವರು ನಿರೂಪಣೆ ಮಾಡುತ್ತಲಿದ್ದರೆ, ರಂಗದ ಮೇಲೆ ದೃಶ್ಯ ಬದಲಾವಣೆಯ ಪರಿಕರಗಳು ಚಕಚಕನೆ ಸಿದ್ದಗೊಳ್ಳುತ್ತಿದ್ದ ಕಾರಣದಿಂದಾಗಿ ಸಮಯ ಪೋಲಾಗುತ್ತಿರಲಿಲ್ಲ; ರಂಗ ಖಾಲಿಯಿರುತ್ತಿರಲಿಲ್ಲ.
ನಾಟಕದಲ್ಲಿ ರಿಹರ್ಸಲ್ ಕೊರತೆ ಎದ್ದು ಕಾಣುತಿತ್ತು. ಕಲಾವಿದರಲ್ಲಿ ಹೊಂದಾಣಿಕೆಯ ಕೊರತೆ ಇತ್ತು. ಸಂಭಾಷಣೆಯಲ್ಲಿ ಎಡವುತ್ತಿದ್ದರು. ಆದರೂ ನಾಟಕದ ಒಟ್ಟಂದಕ್ಕೆ ಇದರಿಂದ ಅಡ್ಡಿಯಾಗಲಿಲ್ಲ. ಅದಕ್ಕೆ ಕಾರಣ ಸಮರ್ಥವಾಗಿ ಬಳಸಿಕೊಂಡ ಹಾಡುಗಳು. ಸಮುದಾಯದ ನಾಟಕಗಳೆಂದರೆ ಹಾಗೆನೇ ಅಲ್ಲಿ ಯಾವಾಗಲೂ ಜಾನಪದ ಶೈಲಿಯ ಮತ್ತು ಹೋರಾಟದ ಹಾಡುಗಳದ್ದೇ ಪಾರುಪತ್ಯ. ಇಲ್ಲಿಯೂ ಅನೇಕ ಹಾಡುಗಳ ಸಮರ್ಥ ಬಳಕೆಯಾಗಿತ್ತು. ನಟರೇ ಮೇಳಗಾರರಾಗಿಯೂ ಬದಲಾಗುತ್ತಿದ್ದರು.
ದೃಶ್ಯಗಳ ವಿಂಗಡಣೆಯಲ್ಲಿ, ಅದರ ಕಾಲಮಿತಿಯಲ್ಲಿ ಬಿಗುವಿದ್ದ ಕಾರಣದಿಂದಾಗಿ ಎಲ್ಲೂ ನೀರಸ ಅನ್ನಿಸಲಿಲ್ಲ; ನಾಟಕದ ಉದ್ದಕ್ಕೂ ಏಕಸೂತ್ರತೆಯಿತ್ತು. ಸ್ಟೇಜ್ ಬ್ಯಾಲೆನ್ಸ್ ಇತ್ತು. ವಿದುರಾಶ್ವತಥವನ್ನು ಮಧ್ಯದಲ್ಲಿಟ್ಟು ಮಾಡಿದ ರಂಗ ವಿನ್ಯಾಸ ಸಾಂಕೇತಿಕವಾಗಿತ್ತು. ನಾಟಕವೆಲ್ಲಾ ಅದರ ಹಿನ್ನೆಲೆಅಲ್ಲೇ ನಡೆಯುತ್ತಿದ್ದವು. ನಾಟಕದ ಅಂತ್ಯದಲ್ಲಿ ಅದರ ಬಲ ಬದಿಯಲ್ಲಿ ಹುತಾತ್ಮರ ಸ್ಮಾರಕವನ್ನು ತೋರಿಸಿದರೆ ಎಡ ಬದಿಯಲ್ಲಿ ತ್ರಿವರ್ಣ ದ್ವಜ ಸ್ತಂಭವನ್ನು ತೋರಿಸಿದ್ದು ಕೂಡಾ ಆ ಮೂರು ಘಟನೆಗಳನ್ನು ವಿಭಿನ್ನವಾಗಿ ಆದರೆ ಒಂದಾಗಿ ನೋಡುವ ಪ್ರಯತ್ನವಾಗಿತ್ತು.
ಗಣರಾಜೋತ್ಸವದ ಮುನ್ನಾದಿನದಂದು, ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ’ಪಿನಾಕಿನೀ ತೀರದಲ್ಲಿ’ ಪ್ರದರ್ಶನಗೊಂಡದ್ದು ಅರ್ಥಪೂರ್ಣವಾಗಿತ್ತು. ರಂಗದ ತುಂಬೆಲ್ಲಾ ತ್ರಿವರ್ಣ ಧ್ವಜ; ನಟರ ಬಾಯಿಂದ ಹೊರಹೊಮ್ಮುತ್ತಿದ್ದ ’ಝಂಡಾ ಊಂಚಾ ರಹೇ ಹಮಾರ…’ ಹಾಡು ನಾಟಕದಲ್ಲಿ ಅನುರಣಿಸುತ್ತಿದ್ದರೆ ನಾಳೆಯ ಗಣ ರಾಜ್ಯೋತ್ಸವದ ನೆನಪು ಪ್ರೇಕ್ಶಕರಲ್ಲಿ ಮೂಡಿದ್ದರೆ ಅಶ್ಚರ್ಯವಿರಲಿಲ್ಲ.
ಸಮುದಾಯವು ’ಸಂಸ್ಕೃತಿ- ಸಾಮರಸ್ಯ’ ದ ಹೆಸರಿನಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿದ್ದ ರಂಗಚಟುವಟಿಕೆಯ ಸಮಾರೋಪದಂದು ಪ್ರದರ್ಶಿತವಾದ ಈ ನಾಟಕದಲ್ಲಿ, ಕಥನಕಾರನ ’ಮಾಡಬೇಕಿದೆ ಮತ್ತೊಂದು ಹೋರಾಟ’ ಎಂಬ ಡೈಲಾಗ್ ನೊಂದಿಗೆ ನಾಟ್ಅಕ ಅಂತ್ಯಗೊಳ್ಳುತ್ತದೆ. ಅದು ಸಮುದಾಯ ತಂಡದ ಮೂಲ ಆಶಯವೂ ಹೌದು.
ನಾಟ್ಕ ರಚನೆಕಾರನೊಬ್ಬನಿಗೆ ವರ್ತಮಾನದ ಜೊತೆ ಮುಖಾಮುಖಿಯಾಗುವುದು ಯಾವಾಗಲೂ ಕಷ್ಟದ ಕೆಲಸವೇ. ಆದರೆ ವರ್ತಮಾನದಲ್ಲಿ ನಿಂತು ಭೂತಕಾಲವನ್ನು ನೋಡಿ ವಿಶ್ಲೇಷಿಸುವುದು ಅಂಥಹ ಕಷ್ಟವೇನಲ್ಲ. ಇಂತಹ ಕೃತಿಯೊಂದನ್ನು ನಿರ್ದೇಶಕನೊಬ್ಬ ಪ್ರದರ್ಶನಕ್ಕೆ ಕೈಗೆತ್ತಿಕೊಂಡಾಗ ಆತನ ಪ್ರತಿಭೆ ಒರಗೆ ಹಚ್ಚಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಈ ನಾಟಕ ನಿರ್ದೇಶಕರ ಪ್ರತಿಬೆಗೆ ಬಹುದೊಡ್ದ ಸವಾಲಾಗಿತ್ತು ಎಂಬುದು ನಿಜ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

Thursday, January 26, 2012

’ಟ್ರೈನ್ ಟು ಪಾಕಿಸ್ತಾನ’ ದಿಂದ ’ಬುದ್ಧ ಪ್ರಬುದ್ಧ’ನಾದ ಹಾದಿ



ಸಂಸ್ಕೃತಿ- ಸಾಮರಸ್ಯದ ಘೋಷ ವಾಕ್ಯವನ್ನಿಟ್ಟುಕೊಂಡು ರಾಜ್ಯ ಸಾಂಸ್ಕೃತಿಕ ಸಂಘಟನೆ ’ಸಮುದಾಯ’ ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ಜನವರಿ ೨೧ರಿಂದ ಐದು ದಿನಗಳ ಕಾಲ ರಂಗಚಟುವಟಿಗಳನ್ನು ಹಮ್ಮಿಕೊಂಡಿದೆ.
ಉದ್ಘಾಟನೆಯ ದಿನದಂದು ಪ್ರದರ್ಶಿತವಾದ ನಾಟಕ ’ಟ್ರೈನ್ ಟು ಪಾಕಿಸ್ತಾನ್’ ನಮ್ಮ ದೇಶದ ಪ್ರಖ್ಯಾತ ಬರಹಗಾರರಾದ ಖುಷ್ವಂತ್ ಸಿಂಗ್ ಅವರ ಇದೇ ಹೆಸರಿನ ಬಹು ಪ್ರಸಿದ್ಧ ಕಾದಂಬರಿಯನ್ನು ನಾಟಕ ರೂಪಕ್ಕೆ ಅಳವಡಿಸಿದವರು ಚಿದಾನಂದ ಸಾಲಿ. ರಾಯಚೂರಿನ ಸಮುದಾಯ ತಂಡಕ್ಕಾಗಿ ಇದನ್ನು ನಿರ್ದೇಶಿಸಿದವರು ತಾಯಣ್ಣ ಯರಗೇರ.
.ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದು ಮುಸ್ಲಿಮರ ಮಾರಣ ಹೋಮದ ನಡುವೆಯೂ ಪಂಜಾಬಿನ ಮನೋ ಮಜ್ರಾ ಎಂಬ ಪುಟ್ಟ ಹಳ್ಳಿ ಭಾವೈಕತೆಯನ್ನು ಕಾಪಾಡಿಕೊಂಡು ಬರುತ್ತದೆ. ಅಲ್ಲಿನ ಸಿಖ್ ಯುವಕನೊಬ್ಬ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೇಮಿಸುತ್ತಾನೆ. ಟ್ರೈನ್ ಗಳು ಆ ದೇಶದಿಂದ ಹಿಂದುಗಳ ಹೆಣಗಳು ಹೇರಿಕೊಂಡು ಬಂದರೆ ಇಲ್ಲಿಂದ ಮುಸ್ಲಿಂರ ಹೆಣಗಳು ರವಾನೆಯಾಗುತ್ತವೆ. ಇಂತಹ ಸಂದರ್ಭದಲ್ಲಿ ವಯ್ಯಕ್ತಿಕ ಪ್ರೇಮ ಸಾರ್ವತ್ರಿಕಗೊಳ್ಳುವ, ವಿಶ್ವಪ್ರೇಮದ ಸಂದೇಶವನ್ನು ಸಾರುವ ಈ ನಾಟಕದ ವಸ್ತು ಮತ್ತು ಆಶಯ ಎಲ್ಲಾ ಕಾಲಕ್ಕೂ ಸಲ್ಲುವಂತಾಗಿದೆ.
ಬಹುಶಃ ನಿರ್ದೇಶಕರಿಗೆ ಇದು ನಿರ್ದೇಶನದ ಮೊದಲ ಅನುಭವವಾಗಿರಬೇಕು. ಹಾಗಾಗಿ ಅವರು ಪಾತ್ರಧಾರಿಗಳ ಆಯ್ಕೆಯಿಂದ ಹಿಡಿದು ನಾಟಕದ ಆಶಯವನ್ನು ಗ್ರಹಿಸುವಲ್ಲಿಯವರಿಗೆ ಎಡವಿದ್ದಾರೆ. ಮಾತ್ರವಲ್ಲ ರಿಹರ್ಸಲ್ ನ ಕೊರತೆಯೂ ಎದ್ದು ಕಾಣುತ್ತಿತ್ತು. ರಂಗದಲ್ಲಿ ಚಲನೆಯಿರಲಿಲ್ಲ. ನಟರ ಮಾತಿನಲ್ಲಿ ಏರಿಳಿತಗಳಿರಲಿಲ್ಲ. ಸೂಕ್ತ ರಂಗ ಪರಿಕರಗಳಿಲ್ಲ, ಇದ್ದುದರ ಬಳಕೆಯಾಗಲಿಲ್ಲ, ಬೆಳಕಿನ ವಿನ್ಯಾಸದಲ್ಲಿ ಹೊಸತನವಿರಲಿಲ್ಲ. ಈ ಎಲ್ಲಾ ಕೊರತೆಗಳ ಕಾರಣವೋ ಅಥವಾ ರೂಪಾಂತರದ ದೋಷವೋ ಸಂಭಾಶಣೆಯಲ್ಲಿ ತೂಕ, ಹರಿತಗಳಿರಲಿಲ್ಲ.
ಎರಡನೆಯ ದಿನದಂದು ಪ್ರದರ್ಶಿತವಾದ ನಾಟಕ, ’ಬುದ್ಧ ಪ್ರಬುದ್ಧ’ ಧಾರವಾಡದ ಸಮುದಾಯ ತಂಡ ಅಭಿನಯಿಸಿದ ಈ ನಾಟಕವನ್ನು ನಿರ್ದೇಶಕರು ವಾಸುದೇವ ಗಂಗೇರ. ರಚನೆ ಡಾ.ಶ್ರೀಶೈಲ ಹುದ್ದಾರ.
ನಾವೆಲ್ಲಾ ಓದಿದಂತೆ, ತಿಳಿದುಕೊಂಡಂತೆ ಬುದ್ಧ ಅರಿವಿನ ಹರಿಕಾರ. ಅಂಗುಲಿಮಾಲ ಹಿಂಸೆಯ ಪ್ರತಿರೂಪ. ಈ ಎರಡು ವ್ಯಕಿತ್ವಗಳು ನಾಟಕದುದ್ದಕ್ಕೂ ಹರಡಿಕೊಂಡಿದೆ.
ಬೆಳಕಿನ ವಿನ್ಯಾಸ ,ವೇಷಭೂಷಣ,ಅಭಿನಯ ಸಂಗೀತ, ಧ್ವನಿ ಎಲ್ಲವೂ ಕೂಡಾ ಒಂದಕ್ಕೊಂದು ಪೂರಕವಾಗಿ ನಾಟಕವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದರಲ್ಲಿ ಸಹಕಾರಿಯಾಗಿತ್ತು. ನಾಟಕದಲ್ಲಿ ಹಲವು ಸಂಕೇತಗಳನ್ನು ಬಳಸಿಕೊಂಡದ್ದು ನಾಟಕದ ಅರ್ಥ ವಿಸ್ತಾರಕ್ಕೆ ಕಾರಣವಾಗಿತ್ತು.ಪೌರ್ಣಮಿಯೆಂಬುದು ಬುದ್ಧನ ಹುಟ್ಟು, ಜ್ನಾನೋದಯ ಮತ್ತು ನಿರ್ವಾಣದ ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು.ಅದನ್ನು ಹಿಂಬದಿಯ ಪರದೆಯಲ್ಲಿ ಬೆಳಕಿನ ವಿನ್ಯಾಸದಲ್ಲಿ ಶಾಶ್ವತಗೊಳಿಸಲಾಗಿತ್ತು, ಬುದ್ಧ, ಗಾಂಧೀಜಿಯ ಅಹಿಂಸಾ ತತ್ವದ ಬಗ್ಗೆ ಮಾತಾಡುವಾಗ ಗಾಂದೀಜಿಯ ಜನಪ್ರಿಯ ಭಂಗಿಯಾಗಿದ್ದ ಎರಡೂ ಕಾಲುಗಳನ್ನು ಹಿಂಮಡಿಚಿ ಕುಳಿತುಕೊಂಡಿದ್ದ. ಗಾಂದೀಜಿಯ ’ವೈಸ್ಣೋವ ಜನತೋ….’ ಹಾಡನ್ನು ಬಳಸಿಕೊಂಡದ್ದು ಬುದ್ಧನ ತತ್ವಗಳನ್ನು ಸಾರ್ವತ್ರಿಕರಣಗೊಳಿಸುವ ಪ್ರಯತ್ನವಾಗಿತ್ತು. ಮತ್ತೊಮ್ಮೆ ಆತ ಮಾತಾಡುವ ಭಂಗಿ ಅಂಬೇಡ್ಕರ್ ಅವರನನ್ನು ನೆನಪಿಗೆ ತಂದಿತ್ತು.
ಬೋಧಿ ವೃಕ್ಷವನ್ನು ಸಂಕೇತಿಸುವ ಅರಳಿ ಎಲೆಯ ಅಡಿಯಲ್ಲಿ ನಿಂತ ಬುದ್ಧ ಮತ್ತು ಪ್ರಾಪ್ತಾ ಎಂಬ ಹೊಸ ಹೆಸರಿನೊಂದಿಗೆ ಜನರ ಆಶ್ರಯದಲ್ಲಿ ನಿಂತಂತೆ ಭಾಸವಾಗುವ, ದುಡಿಯುವ ಜನರ ಪ್ರತಿನಿಧಿಯಾಗಿ ಬಿಂಬಿಸಲ್ಪಟ್ಟ ಅಂಗುಲಿಮಾಲನೊಂದಿಗೆ ನಾಟಕ ಮುಕ್ತಾಯವಾಗುತ್ತದೆ.
ಸಾರಥಿ, ಸೈನಿಕ, ಮಂತ್ರಿ , ಹಾಸ್ಯಗಾರನಂತೆ ಕಾಣುವ ರಾಜ, ಬೌದ್ಧ ಬಿಕ್ಕುಗಳು ಸೇರಿದಂತೆ ಎಲ್ಲಾ ಪಾತ್ರ್ಧಾರಿಗಳಿಗೂ ನಾಟಕದಲ್ಲಿ ಪ್ರತ್ಯೇಕ ಅಸ್ತಿತ್ವವಿತ್ತು. ಅಭಿನಯಕ್ಕೆ ಅವಕಾಶವಿತ್ತು.’ ಎಲ್ಲಾ ಪಾತ್ರದಾರಿಗಳ ಆಂಗೀಕ ಭಾಷೆಗೆ ಒತ್ತು ನೀಡಲಾಗಿತ್ತು.
ಸಮುದಾಯದ ರಂಗಚಟುವಟಿಕೆ ಎಂದಾಕ್ಷಣ ನಮಗೆ ನೆನಪಾಗುವುದು ಬೀದಿ ನಾಟಕಗಳು. ಪ್ರತಿಭಟನೆ ಮತ್ತು ಚಳುವಳಿಗಳಿಗೆ ನಾಟಕವನ್ನು ಪ್ರಭಲ ಅಸ್ತ್ರವಾಗಿ ಬಳಸಿಕೊಂಡದ್ದು ಸಮುದಾಯದ ವಿಶೇಷತೆ. ಜನರ ಮಧ್ಯದಲ್ಲಿಂದಲೇ ಎದ್ದು ಬರುವ ಪಾತ್ರಗಳು, ಯಾವುದೇ ರಂಗಪರಿಕರಗಳಿಲ್ಲದೇ, ಸಮಯ ಸಂದರ್ಭಕ್ಕನುಗುಣವಾಗಿ ಅವರೇ ರಂಗಪರಿಕರಗಳಾಗಿಯೂ ಪರಿವರ್ತನೆಗೊಳ್ಳುವ ಪರಿ, ರಂಗಭೂಮಿಯ ಪರಿಚಯವಿಲ್ಲದವರ ಮನಸಿನೊಳಗೂ ನಾಟಕ ತಲುಪುವ ಪ್ರಯತ್ನ ಮಾಡುತ್ತದೆ.
ಭಾನುವಾರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರದರ್ಶಿತಗೊಂಡ ಬೀದಿ ನಾಟಕ’ಧನ್ವಂತರಿಯ ಚಿಕಿತ್ಸೆ’ .ಕುವೆಂಪುರವರ ಇದೇ ಹೆಸರಿನ ಕಥೆಯನ್ನಾಧರಿಸಿ ಡಾ.ವಿಜಯಾ ನಾಟ್ಅಕಕ್ಕೆ ರೂಪಾಂತರಿಸಿದ್ದಾರೆ.. ಇದರ ನಿರ್ಧೇಶನ ಶಶಿಧರ್ ಭಾರಿಘಾಟ್ ಅವರದು. ಬೆಂಗಳೂರಿನ ಸಮುದಾಯ ತಂಡ ಇದನ್ನು ಪ್ರದರ್ಶಿಸಿತ್ತು. ಸುಮಾರು ಆರು ದಶಕಗಳಿಗೂ ಹಿಂದೆ ಬರೆದ ಈ ಕಥೆಯಲ್ಲಿ ರೈತನ ಧಾರುಣ ನರಳಿಕೆಗೆ ದೈಹಿಕ ರೋಗ ಕಾರಣವಲ್ಲ, ಬದಲಾಗಿ ಪರಿಸರ ಮತ್ತು ವ್ಯವಸ್ಥೆಯಲ್ಲಿನ ದೋಷವೇ ಕಾರಣವೆಂದು ಹೇಳಲಾಗಿತ್ತು. ಅಂದು ಅವರು ಕಂಡುಕೊಂಡ ಸತ್ಯ ಇವತ್ತಿಗೂ ಪ್ರಸ್ತುತ. ಹಾಗಾಗಿಯೇ ಈಗ ಗಣಿ ರಾಜಕೀಯ, ಟುಜಿ ಹಗರಣ, ರೈತರ ಆತ್ಮಹತ್ಯೆ, ಮಡೆಸ್ನಾನ ಮುಂತಾದ ಸಮಸ್ಯೆಗಳ ಹಿನ್ನೆಲೆಯಲ್ಲಿಟ್ಟು ನೋಡಲಾಗಿದೆ.
ಸದಾ ಬಿಝಿಯಾಗಿರುವ, ಒತ್ತಡದಲ್ಲಿ ಬದುಕುತ್ತಿರುವ ಬೆಂಗಳೂರಿಗರು ನಾಟಕದಂಥ ಕಲಾಪ್ರಕಾರದಿಂದ ದೂರವಾಗುತ್ತಿದ್ದರೆನೋ ಎಂದು ಭಾಸವಾಗುತ್ತಿರುವ ಸಮಯದಲ್ಲೇ ಈ ಪ್ರದರ್ಶನಗಳಿಗೆ ಕಲಾಕ್ಷೇತ್ರ ತುಂಬುತ್ತಿರುದು ಆಶಾಧಾಯಕ ಬೆಳವಣಿಗೆ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

Tuesday, January 17, 2012

ದೆಹಲಿ ನಾಟಕೋತ್ಸವದಲ್ಲಿ ಕರ್ನಾಟಕದ ಮೂರು ನಾಟಕಗಳು



ಹ್ಯಾಮ್ಲೆಟ್, ಡೆನ್ಮಾರ್ಕಿನ ಯುವರಾಜ, ಆತನ ಮಾನಸಿಕ ತೊಳಲಾಟವನ್ನು ನೋಡಿ; ತಂದೆ ತನ್ನ ತಮ್ಮನಿಂದಲೇ ಕೊಲೆಯಾಗಿ ಪ್ರೇತವಾಗಿ ಅಂಡಲೆಯುತ್ತಿದ್ದಾನೆ. ಚಿಕ್ಕಪ್ಪ ಆ ಕೊಲೆಯನ್ನು ದಕ್ಕಿಸಿಕೊಂಡು ತನ್ನಮ್ಮನನ್ನು ಮದುವೆಯಾಗಿದ್ದಾನೆ. ತಾನು ಮನಸಾರೆ ಪ್ರೀತಿಸಿದ ಹುಡುಗಿ ತನ್ನಿಂದ ದೂರವಾಗಿದ್ದಾಳೆ. ಇಡೀ ರಾಜ್ಯ ಸುಖಲೋಲಪ್ತತೆಯಲ್ಲಿ ಮುಳುಗಿ ನೈತಿಕವಾಗಿ ಕುಸಿಯುತ್ತಿದೆ.
ಂತಹ ಹ್ಯಾಮ್ಲೆಟ್ ನ ಮನಕ್ಲೇಶವನ್ನು ರಂಗದ ಮೇಲೆ ತರುವ ಪ್ರಯತ್ನವನ್ನು ಮಾಡಿದವರು ನಿರ್ದೇಶಕ ಇಕ್ಬಾಲ್ ಅಹ್ಮದ್. ಇತ್ತೀಚೆಗಿನ ವರ್ಶಗಳಲ್ಲಿ ರಂಗಭೂಮಿಯಲ್ಲಿ ಹೆಸರು ಮಾಡುತ್ತಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿಯ ”ಕಿನ್ನರ ಮೇಳ’ ತಂಡಕ್ಕಾಗಿ ಅಹ್ಮದ್ ಅವರು ಈ ನಾಟಕವನ್ನು ನಿರ್ದೇಶಿಸಿದ್ದರು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡದ್ದು. ಡಾ. ರಾಮಚಂದ್ರ ದೇವ ಅವರು ಅನುವಾದಿಸಿರುವ ಷೇಕ್ಸಪೀಯರನ ’ಹ್ಯಾಮ್ಲೆಟ್ ’ ನಾಟಕವನ್ನು.
ವಿಲಿಯಂ ಷೇಕ್ಸಪಿಯರ್ ಜಗತ್[ಪ್ರಸಿದ್ಧ ನಾಟಕಕಾರ. ಅವನ ನಾಟಕಗಳು ಇಂದಿಗೂ ಜಗತ್ತಿನಾದ್ಯಂತ ಪ್ರದರ್ಶನ ಕಾಣುತ್ತಲೇ ಇವೆ. ಹಾಗಾಗಿ ಇಂತಹ ನಾಟಕಗಳನ್ನು ನಿರ್ದೇಶಕನೊಬ್ಬ ಪ್ರದರ್ಶನಕ್ಕೆ ಕೈಗೆತ್ತಿಕೊಂಡಾಗ ಆತನಿಗೆ ಹಲವು ಸವಾಲುಗಳಿರುತ್ತವೆ. ಹಾಗ್ಯೇ ಪ್ರೇಕ್ಷಕರಿಗೆ ಈ ನಿರ್ದೇಶಕ ನಾಟಕವನ್ನು ಹೇಗೆ ನೋಡಿದ್ದಾನೆ ಎಂಬ ನಿರೀಕ್ಷೆ, ಕುತೂಹಲಗಳಿರುತ್ತವೆ. ಇದೇ ಪ್ರಶ್ನೆಯನ್ನು ಇಕ್ಬಾಲ್ ಮುಂದಿಟ್ಟಾಗ ಅವರು ಹೇಳಿದ್ದು ಹೀಗೆ ”ನನಗೆ ಹ್ಯಾಮ್ಲೆಟ್ ನ ಒಳತೋಟಿ ಮುಖ್ಯವಾಗಿತ್ತು. ಹಾಗಾಗಿ ಆತ ತನ್ನ ಬಂಧುಗಳ ಜೊತೆ, ಆಪ್ತರ ಜೊತೆ ಹೊಂದಿದ್ದ ಸಂಬಂಧಗಳ ಬಗ್ಗೆ ನಾನು ಹೆಚ್ಚು ಗಮನ ಹರಿಸಿದೆ”.
ನಿಜ, ಅದಕ್ಕಾಗಿ ಅವರು ನಾಟಕವನ್ನು ತಮಗೆ ಬೇಕಾದಂತೆ ಎಡಿಟ್ ಮಾಡಿಕೊಂಡಿದ್ದಾರೆ.ಸುಮಾರು ಎರಡು ಘಂಟೆಗೂ ಮೀರಿ ನಡೆಯಬಹುದಾದ ಈ ನಾಟಕವನ್ನು ಅವರು ತೊಂಬತ್ತು ನಿಮಿಷಗಳಿಗೆ ಇಳಿಸಿದ್ದಾರೆ. ಆ ಕಾರಣದಿಂದಲೇ ಏನೋ ನಾಟಕದ ಸರಾಗ ಓಘಕ್ಕೆ ಆಗಾಗ ಧಕ್ಕೆಯಾಗುತ್ತಿತ್ತು. ಮಾತ್ರವಲ್ಲ ಕಥೆ ಗೊತ್ತಿಲ್ಲದವರಿಗೆ ಸಂವಹನದ ಕೊರತೆಯಾಗುತ್ತಿತ್ತು.
ಹ್ಯಾಮ್ಲೆಟ್ ನ ಮನೋವಿಪ್ಲವಕ್ಕೆ ಒತ್ತು ಕೊಟ್ಟ ಕಾರಣದಿಂದ ಇಡೀ ರಂಗವನ್ನು ಹ್ಯಾಮ್ಲೆಟ್ ಆಳಿಬಿಟ್ಟಿದ್ದಾನೆ. ಆ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ನಾಗರಾಜ್ ಮಳವಳ್ಳಿ ತನ್ನ ಅಭಿನಯದಲ್ಲಿ ನವರಸಗಳನ್ನು ಚೆಲ್ಲಿ ವಿಜೃಂಬಿಸಿಬಿಟ್ಟಿದ್ದಾರೆ. ಆದರೆ ನಾಟಕವೆಂಬುದು ಒಂದು ಟೀಂ ವರ್ಕ್. ಎಲ್ಲಾ ಪಾತ್ರಗಳ ಪಾತ್ರ ಪೋಷಣೆ ಶಕ್ತವಾಗಿ ಮೂಡಿ ಬಂದಾಗ ಮಾತ್ರ ಒಟ್ಟು ನಾಟಕ ಪರಿಣಾಮಕಾರಿಯಾಗಲು ಸಾಧ್ಯ. ಹ್ಯಾಮ್ಲೆಟ್ ಗೆಳೆಯ ಹೊರೇಷಿಯೋ ಸೇರಿದಂತೆ ಕೆಲವು ಪಾತ್ರಗಳಲ್ಲಿ ಭಾಷಾ ಶುದ್ಧತೆ ಇರಲಿಲ್ಲ. ಆದರೆ ಎಲ್ಲಾ ಪಾತ್ರಗಳ ದೈಲಾಗ್ ದೆಲಿವರಿಯಲ್ಲಿ ಹೊಸತನವಿತ್ತು. ಅದು ಒಮ್ಮೆ ಗಮಕದ ಶೈಲಿಯನ್ನು ನೆನಪಿಸಿದರೆ ಇನ್ನೊಮ್ಮೆ ಯಕ್ಷಗಾನದ ಭಾಗವತಿಕೆಯನ್ನು ಕೇಳಿದಂತಾಗುತ್ತಿತ್ತು ವೇಷಭೂಷಣ ಮತ್ತು ಬಣ್ಣಗಾರಿಕೆಯಲ್ಲಿ ಕಥಕ್ಕಳಿ ಹಾಗೂ ಯಕ್ಷಗಾನದ ಮಿಶ್ರಣವಿದ್ದುದರಿಂದ ದೇಶೀಯತೆ ಎದ್ದು ಕಾಣುತ್ತಿತ್ತು.
ಪ್ರತಿವರ್ಷ ರಾಷ್ಟ್ರೀಯ ನಾಟಕ ಶಾಲೆ [NSD ] ದೆಹಲಿಯಲ್ಲಿ ’ಭಾರತ ರಂಗ ಮಹೋತ್ಸವ; ಎಂಬ ನಾಟಕೋತ್ಸವವನ್ನು ನಡೆಸುತ್ತದೆ. ಅದರಲ್ಲಿ ಭಾರತದ ಉಪಭಾಷೆಗಳೂ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ನಾಟ್ಕಗಳು ಭಾಗವಹಿಸುತ್ತವೆ. ಈ ಬಾರಿ ಕರ್ನಾಟಕದಿಂದ ಮೂರು ನಾಟಕಗಳು ಭಾಗವಹಿಸುತ್ತಿವೆ. ಅವುಗಳೆಂದರೆ, ಮಣಿಪಾಲದ ’ಸಂಗಮ ಕಲಾವಿದರು’ ಅಭಿನಯಿಸುವ, ಉಡುಪಿಯ ಶ್ರೀಪಾದ ಭಟ್ ನಿರ್ದೇಶನದ ತುಳು ನಾಟಕ ’ಕರ್ಣಭಾರ’. ಭಾಸನ ಸಂಸ್ಕೃತ ನಾಟಕವನ್ನು ತುಳುವಿಗೆ ಅನುವಾದಿಸಿದವರು ಸತ್ಯ ಉಡುಪಿ, ಬೆಂಗಳೂರಿನ ಅನೇಕ ತಂಡ ಅಭಿನಯಿಸುವ ಎಚ್.ಎಸ್. ಶಿವಪ್ರಕಾಶ್ ಅವರ ’ಮಸ್ತಕಾಭಿಷೇಕ ರಿಹರ್ಸಲ್’ ಇದರ ನಿರ್ದೇಶನ ಸುರೇಶ ಅನಗಳ್ಳಿ.
’ಹ್ಯಾಮ್ಲೆಟ್ ’ ಜನವರಿ ೧೮ ದೆಹಲಿಯಲ್ಲಿ ಪ್ರದರ್ಶನಗೊಳ್ಳಲಿದೆ. ಅದಕ್ಕಾಗಿ ಹೊರಟ ತಂಡ ಮಾರ್ಗ ಮಧ್ಯದಲ್ಲಿ ಬೆಂಗಳೂರಿನಲ್ಲಿ ಅಚಾನಕ್ ಆಗಿ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ಒಂದು ಪ್ರದರ್ಶನ ಏರ್ಪಡಿಸಿತ್ತು.
ಕರ್ಣಭಾರ ಈಗಾಗಲೇ ಜನವರಿ ೧೪ರಂದು ಪ್ರದರ್ಶನಗೊಂಡಿದೆ. ಹ್ಯಾಮ್ಲೆಟ್ ನಂತೆಯೇ ಕರ್ಣಭಾರ ಕೂಡಾ ಕರ್ಣನ ಮನೋಕ್ಲೇಶಗಳಿಗೆ ಸಂಬಂಧಪಟ್ಟದು. ಮಹಾಭಾರತ ಯುದ್ಧ ನಿಶ್ಚಯವಾಗಿದೆ, ಅಂಥ ಸಂದರ್ಭದಲ್ಲಿ ಕೃಷ್ಣ ಮತ್ತು ಕುಂತಿ ಅವನನ್ನು ಭೇಟಿ ಮಾಡಿ ಅವನ ಜನ್ಮ ವೃತ್ತಾಂತವನ್ನು ತಿಳಿಸಿ ಅವನನ್ನು ದ್ವಂದಕ್ಕೆ ಕೆಡವುತ್ತಾರೆ. ಸಾಲದಕ್ಕೆ ಇಂದ್ರ ಬಂದು ಕರ್ಣಕುಂಡಲಗಳನ್ನು ಬೇಡುತ್ತಾನೆ. ಈ ಮೂವರ ಮಾತುಗಳೇ ಅವನಿಗೆ ಭಾರವಾಗಿ ಕರ್ಣ ಕುಸಿದು ಹೋಗುತ್ತಾನೆ. ಅವನ ಮಾನಸಿಕ ಕುಸಿತವನ್ನು ಯಕ್ಷಗಾನದ ಚಕ್ರತಾಳವನ್ನು ಬಳಸಿಕೊಂಡು ಅತ್ಯದ್ಬುತವಾಗಿ ರಂಗದ ಮೇಲೆ ತರಲಾಗಿದೆ. ಆದರೆ ತಾಂತ್ರಿಕ ಅಂಶಗಳು ನಾಟಕದ ವಸ್ತುವನ್ನು ಮಸುಕಾಗಿಸಿದವೆನೋ ಎಂಬ ಸಂಶಯವನ್ನೂ ಈ ನಾಟ್ಕವನ್ನು ದೆಹಲಿಯಲ್ಲಿ ನೋಡಿದ ಪುರುಷೋತ್ತಮ ಬಿಳಿಮಲೆಯವರು ಹೇಳುತ್ತಾರೆ. ಆದರೆ ಮೊತ್ತಮೊದಲ ಭಾರಿಗೆ ತುಳು ನಾಟಕವೊಂದು ರಂಗಮಹೋತ್ಸವದಲ್ಲಿ ಭಾಗವಹಿಸುತ್ತಿರುವುದು ತುಳು ರಂಗಪ್ರೇಮಿಗಳಿಗೆ ಹೆಮ್ಮೆಯ ವಿಷಯ.
’ಮಸ್ತಕಾಭಿಷೇಕದ ರಿಹರ್ಸಲ್’ ಕಥೆ ಎಲ್ಲರಿಗೂ ಗೊತ್ತಿರುವ ಭರತ-ಭಾಹುಬಲಿ ಎಂಬ ಅಣ್ಣತಮ್ಮಂದಿರ ಕಥೆ; ಬಾಹುಬಲಿಯ ತ್ಯಾಗದ ಕಥೆ ಜೈನಧರ್ಮದ ಮೌಲ್ಯಗಳು ನಾಟಕದ ಆವರಣವಾಗಿ ಬಂದರೆ,
ಈ ನಾಟ್ಕದೊಳಗೊಂದು ನಾಟಕದ ರಿಹರ್ಸಲ್ ಇದೆ. ಅದು ಅಂಬಾನಿ ಸಹೋದರರ ಜೊತೆ ತಳುಕು ಹಾಕಿಕೊಂಡಿದೆ. ಯಾವ ಜೈನ ಧರ್ಮ ತ್ಯಾಗ ಮತ್ತು ವೈರಾಗ್ಯವನ್ನು ಜೀವನ ಮೌಲ್ಯವಾಗಿ ಅಂಗೀಕರಿಸಿಕೊಂಡಿತ್ತೋ ಆ ಧರ್ಮವೀಗ ವ್ಯಾಪಾರೀಕರಣಗೊಂಡು ಅದೊಂದು ಸರಕಾಗಿ ಬದಲಾವಣೆಗೊಂಡಿರುವುದನ್ನು ಹೇಳುವ ಪ್ರಯತ್ನವನ್ನು ನಾಟಕ ಮಾಡುತ್ತದೆ. ವಿಚಾರವಾದಿಗಳ ವಿರೋಧ, ಮಾಧ್ಯಮದವರ ಎಡೆಬಿಡಂಗಿತನ, ಅಧುನಿಕ ತಂತ್ರಜ್ನಾನ್,ಕೋರ್ಟ್-ಕಛೇರಿ ಎಲ್ಲವೂ
ಈ ನಾಟಕದಲ್ಲಿ ಒಳ ಹೂರಣವಾಗಿ ಬರುತ್ತದೆ. ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ವಿಡಿಯೋ ದೃಶ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ, ಹಾಗಾಗಿ ಇದೊಂದು ”ಡಾಕ್ಯು ಡ್ರಾಮ’ ಎಂದು ನಿರ್ದೇಶಕ ಸುರೇಶ್ ಅನಗಳ್ಳಿ ಹೇಳುತ್ತಾರೆ. ಈ ನಾಟಕ ಜ.೨೦ ರಂದು ಪ್ರದರ್ಶನಗೊಳ್ಳಲಿದೆ.
ಕಳೆದ ವರ್ಷ ಬಿ. ಜಯಶ್ರೀ ಆಯ್ಕೆ ಸಮಿತಿಯಲ್ಲಿದ್ದರೂ ಕರ್ನಾಟಕದಿಂದ ಒಂದೂ ನಾಟಕ ಆಯ್ಕೆಯಾಗಿರಲಿಲ್ಲ. ಆದರೆ ಈ ಬಾರಿ ಮೂರು ನಾಟಕ ಆಯ್ಕೆಯಾಗಿರುವುದು ಕನ್ನಡಕ್ಕೆ ಹೆಮ್ಮೆಯ ವಿಚಾರ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

Thursday, January 12, 2012

ನೀರು ತಂದೇವಾ…ನಿಮಗಾ…!




ಆಧುನಿಕ ಕನ್ನಡ ರಂಗಭೂಮಿಯಲ್ಲಿ ಸಿಜಿಕೆಯವರದ್ದು ದೊಡ್ಡ ಹೆಸರು. ಅವರೇ ಹುಟ್ಟು ಹಾಕಿದ ಸಂಸ್ಥೆ. ’ರಂಗ ನಿರಂತರ”. ಈ ಸಂಸ್ಥೆ ಸಿಜಿಕೆಯವರ ನೆನಪಿನಲ್ಲಿ ಹೊಸ ನಾಟವೊಂದನ್ನು ರಂಗದ ಮೇಲೆ ತಂದಿದೆ. ಅದು ಡಾ. ಅಮರೇಶ ನುಗಡೋಣಿಯವರ ಸಣ್ಣ ಕಥೆಯಧಾರಿತ ’ನೀರು ತಂದವರು’
ಕಥೆಯನ್ನು ರಂಗರೂಪಕ್ಕೆ ತಂದವರು ಕನ್ನಡದ ಮತ್ತೊಬ್ಬ ನಿರ್ದೇಶಕ ಶಶಿಧರ್ ಭಾರಿಘಾಟ್. ಸಿಜಿಕೆಯ ಒಡನಾಟದಲ್ಲೇ ರಂಗಭೂಮಿಯ ಒಳ ಹೊರಗನ್ನು ಅಭ್ಯಸಿಸುತ್ತಾ ನಾಟಕ ಪ್ರೀತಿಯನ್ನು ಬೆಳೆಸಿಕೊಂಡ ರವಿ.ಎಂ ಇದರ ನಿರ್ದೇಶಕರು.
ನೀರು ಎನ್ನುವುದು ಜೀವದ್ರವ್ಯ. ಗಾಳಿ-ಬೆಳಕುಗಳ ಹಾಗೆ. ಅದು ಯಾರೊಬ್ಬರ ಸ್ವತ್ತೂ ಅಲ್ಲ. ಅದು ಸಕಲ ಜೀವರಾಶಿಗಳಿಗೂ ಬೇಕು. ಅಂಥ ನೀರನ್ನು ಮೇಲ್ವರ್ಗದ ಜನ ತಮ್ಮ ಸ್ವತ್ತಾಗಿಸಿಕೊಂಡು, ಬಡಜನರ ಶೋಷಣೆಯ ಅಸ್ತ್ರವಾಗಿ ಬಳಸುತ್ತಿರುವುದನ್ನು ಮತ್ತು ಅದೇ ಶೋಷಿತ ಜನಾಂಗ ಮಾನವೀಯ ನೆಲೆಯಲ್ಲಿ ಮೇಲ್ವರ್ಗದವರಿಗೆ ನೀರನ್ನು ಹೊತ್ತು ತರುವುದು ನಾಟಕದ ಕಥಾ ಹಂದರ.
ನಾಟಕ ತೆರೆದುಕೊಳ್ಳುವುದೇ ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ಟೀ ಅಂಗಡಿ ಮತ್ತು ಅದರ ಸುತ್ತಲಿನ ಗ್ರಾಮೀಣ ಚಟುವಟಿಕೆಗಳಿಂದ. ಮೇಲ್ಜಾತಿಗೆ ಸೇರಿದ ಈ ಅಂಗಡಿಯ ಮಾಲೀಕ ಕೀಳು ಜಾತಿಯವರಿಗೆ ನೀರು ಕೊಡಲೂ ಹಿಂದು ಮುಂದು ನೋಡುತ್ತಾನೆ. ಅವರಿಗೆ ಪ್ರತ್ಯೇಕ ಲೋಟದಲ್ಲಿ ಚಹಾ ನೀಡುತ್ತಾನೆ. ಅವರು ದೂರದಲ್ಲಿಟ್ಟ ದುಡ್ಡಿನ ಮೇಲೆ ನೀರು ಪ್ರೋಕ್ಷಿಸಿ ತೆಗೆದುಕೊಳ್ಳುವ ಆತ ಮಠದವ್ವ ಹಾದಿಯಲ್ಲಿ ಬಂದರೆ ಓಡಿ ಹೋಗಿ ಅಡ್ಡ ಬೀಳುತ್ತಾನೆ. ಅಂದರೆ ನಾಟಕದ ವಸ್ತು ಏನೆಂಬುದನ್ನು ನಿರ್ದೇಶಕರು ಮೊದಲ ದೃಶ್ಯದಲ್ಲಿ ಸಮರ್ಥವಾಗಿ ಕಟ್ಟಿಕೊಡುವಲ್ಲಿ ಶಕ್ತರಾಗಿದ್ದಾರೆ.
ಎರಡನೆಯ ದೃಶ್ಯದಲ್ಲಿ ಗುಡಿಸಲಿನ ಹೊರಗೆ ಲಾಟೀನ್ ಬೆಳಕಲ್ಲಿ ನಡೆಯುವ, ನೀರಿಗಾಗಿ ಪರಿತಪಿಸುವ ಜನರ ಪರದಾಟ, ಹಿಂದುಳಿದ ಯುವಕರ ರೊಚ್ಚು, ಅವೇಶ ಎಲ್ಲವೂ ಕೂಡಾ ಬಿಗುವಾಗಿಯೇ ಮೂಡಿ ಬಂದಿದೆ. ಅಸ್ಪೃಶ್ಯ ಕೇರಿಯ ಜನರೆಲ್ಲಾ ಮಲಗಿರುವ ವೇಳೆಯಲ್ಲಿ ಮೇಲ್ಜಾತೀಯ ಜನರೆಲ್ಲಾ ಗುಡಿಸಲುಗಳಿಗೆ ನುಗ್ಗಿ ಅಲ್ಲಿ ತುಂಬಿಟ್ಟಿದ ನೀರನ್ನೆಲ್ಲಾ ಚೆಲ್ಲಿದ ಮತ್ತು ಅದನ್ನೆಲ್ಲಾ ಕಂಡು ಆಕ್ರಂದನಗೈದ ಜನರ ಭಾವಾಭಿವ್ಯಕ್ತಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಡೈಲಾಗ್ ಇಲ್ಲದ. ಕೇವಲ ಸಂಗೀತ ಮತ್ತು ಬೆಳಕು ವಿನ್ಯಾಸದಲ್ಲಿ ಬಹಳಷ್ಟನ್ನು ಪ್ರೇಕ್ಷಕರಿಗೆ ದಾಟಿಸಿದೆ. ನಾಲ್ಕನೆಯ ದೃಶ್ಯದಲ್ಲಿ ಅಳವಡಿಸಿಕೊಂಡ ಡೊಳ್ಳು ಕುಣಿತ ನಾಟಕದ ಗಾಂಭೀರ್ಯ ಹೆಚ್ಚಿಸುವಂತಿತ್ತು. ಆದರೆ ಈ ಬಿಗಿಯನ್ನು ಮುಂದಿನ ದೃಶ್ಯಗಳಲ್ಲಿ ಕಾಯ್ದುಕೊಳ್ಳುವಲ್ಲಿ ನಾಟಕ ವಿಫಲವಾಗಿದೆ. ಅದಕ್ಕೆ ಕಾರಣ ನಾಟಕ ವಾಚ್ಯವಾಗುತ್ತಾ ಸಾಗಿದ್ದು. ಅದರ ಜೊತೆಗೆ ವಚನಗಳ ಬಾರಕ್ಕೆ ನಾಟಕದ ವಸ್ತು ಜಗ್ಗತೊಡಗಿದ್ದು. ಆದರೆ ಸಹಬಾಳ್ವೆಯ ಬದುಕಿನ ಮಹತ್ವವನ್ನು ಸಾರುವ ಈ ನಾಟಕ ಈ ಕಾಲಘಟ್ಟದ ಅವಶ್ಕಕತೆಯೂ ಹೌದು
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ನಾಟ್ಕದ ಅವಧಿ; ಒಂದು ಘಂಟೆ ಇಪ್ಪತ್ತು ನಿಮಿಷ. ಅದರೆ ಅದು ಇನ್ನೂ ದೀರ್ಘವಾಗಿತ್ತೆನೋ ಎಂಬ ಅನುಭವ ಬಂದರೆ ಅದು ಸ್ಕ್ರಿಪ್ಟ್ ನಲ್ಲಿನ ಕೊರತೆಯೇ ಕಾರಣ. ಆದರೆ ಎಲ್ಲಾ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸುಮಾರು ಮೂವತ್ತೆರಡು ಕಲಾವಿದರು ರಂಗದ ಮೇಲೆ ಅಭಿನಯಿಸಿದ್ದರೆ, ರಂಗದ ಹಿಂದೆ ಇಪ್ಪತ್ತುಕ್ಕೂ ಹೆಚ್ಚು ತಂತ್ರಜ್ನರು ದುಡಿದಿದ್ದಾರೆ.
ನಾಟಕಕ್ಕೊಂದು ಉದ್ದೇಶವಿರಬೇಕು ನಿಜ. ಆದರೆ ಅದು ಕಲಾತ್ಮಕ ಚೌಕಟ್ಟಿನೊಳಗೆ ಬಿಂಬಿತವಾಗಬೇಕು. ಹಾಗಾಗದಿದ್ದರೆ ಅದು ಕೇವಲ ಘೋಷಣೆಗಳಾಗಿ, ಹೇಳಿಕೆಯ ಮಟ್ಟದಲ್ಲಿ ಉಳಿದು ಬಿಡುತ್ತದೆ. ಆದರೂ ಇಂಥ ನಾಟಕಗಳನ್ನು ನೋಡುತ್ತಿರುವಾಗಲೇ ’ಇನ್ನೊಂದರ’ ನೆನಪಾಗುತ್ತದೆ. ’ನೀರು ತಂದವರು’ ನಾಟ್ಕವನ್ನು ನೋಡುತ್ತಿರುವಾಗ ಮಂಡ್ಯದ ಅಂಬಲವಾಡಿಯಲ್ಲಿ ನಡೆದ ’ಮರ್ಯಾದ ಹತ್ಯೆ’ ಘಟನೆ ನನ್ನ ಮನಸ್ಸಿನಲ್ಲಿ ಹಾದು ಹೋಗುತ್ತಿತ್ತು. ಅದು ಈ ನಾಟಕದ ಯಶಸ್ಸು.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]