Showing posts with label ಕಥೆ. Show all posts
Showing posts with label ಕಥೆ. Show all posts

Thursday, May 12, 2016

ಮತ್ಸ್ಯಗಂಧಿಯ ಪ್ರಲಾಪ.

ಅದೊಂದು ಹೆಂಗಸು. ಅದರ ಪರಿಚಯ ನನಗಿರಲಿಲ್ಲ. ಆದರೆ ಅಲ್ಲಿ ಇಲ್ಲಿ ನೋಡಿ ಗೊತ್ತಿತ್ತು. ಹಾಗಾಗಿ ಎದುರು ಸಿಕ್ಕಾಗ ಒಂದು ನಗುವಿನ ವಿನಿಮಯ ಆಗುತ್ತಿತ್ತು.
ಒಂದು ದಿನ ಅದು ಅದ್ಯಾವುದೋ ಕಾರ್ಯಕ್ರಮಕ್ಕೆ ಪರಊರಿಗೆ ಹೋಗಿ ಬಂತು.
ಅಲ್ಲಿ ಅದೇನಾಯ್ತೋ ಗೊತ್ತಿಲ್ಲ. ಅದರ ವರಸೆಯೇ ಬದಲಾಯ್ತು. ಮೈ ಮೇಲೆ ಭೂತ ಮೆಟ್ಟಿಕೊಂಡವಳವಂತೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿತು. ಕಂಡ ಕಂಡವರ ಮೇಲೆಲ್ಲ ಹರಿ ಹಾಯಲು ಆರಂಭಿಸಿತು.
ಅದೊಂದು ಊರು. ಅಲ್ಲೊಂದು ಜಾತ್ರೆ ನಡೆಯುತ್ತಿತ್ತು. ಈ ಯಮ್ಮ ಅಲ್ಲಿಗೆ ಎಂಟ್ರಿ ಕೊಟ್ಟಿತು. ಅಲ್ಲಿದ್ದವರನ್ನೆಲ್ಲಾ ತಾನಾಗಿಯೇ ಮಾತಾಡಿಸಲಾರಂಭಿಸಿತು. ಜನ ತಮಗೆ ತಿಳಿದಂತೆ ಅವಳು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಿದ್ದರು.. ಮಾತು ಮುಂದುವರಿಸಿದಂತೆಲ್ಲಾ ಆಕೆ ಒಂದು ಜಾತಿಯ ಬಗ್ಗೆ ವಿಶೇಷ ಮುತುವರ್ಜಿಯಿಂದ ಉತ್ಸಾಹದಿಂದ ಮಾತನಾಡುತ್ತಿದ್ದುದು ಅಲ್ಲಿದ್ದವರ ಗಮನಕ್ಕೆ ಬಂತು.. ಪ್ರೇಕ್ಷಕರಲ್ಲಿ ಒಬ್ಬಾಕೆ.’ನೀವು ಯಾವ ಪೈಕಿ ಜನ ? ಎಂದು ಪ್ರಶ್ನಿಸಿದಳು.
ಈಕೆ ನಿಗೂಢವಾಗಿ ನಕ್ಕಳು. ಕೇಳಿದವಳೂ ಅದನ್ನು ತಿಳಿದುಕೊಳ್ಳುವ ಉತ್ಸಾಹ ತೊರಲಿಲ್ಲ. ಕೊನೆಕೊನೆಗೆ ಅವಳಿಗೆ ಜಾತೀಯ ಭೂತ ಮೆಟ್ಟಿಕೊಂಡಿದೆ. ಶ್ರೇಷ್ಠತೆಯ ವ್ಯಸನ ಅಂಟಿಕೊಂಡಿದೆ ಅಂತ ಎಲ್ಲರಿಗೂ ಗೊತ್ತಾಗಿ ಹೋಯ್ತು. ಜನ ತಂತಮ್ಮ ಕೆಲಸ-ಬೊಗಸೆಯಲ್ಲಿ ಮೈ ಮರೆತರು
ಕೆಲದಿನಗಳು ಕಳೆದವು .
ಆ ಗಯ್ಯಾಳಿ ಹೆಂಗಸು ಒಂದು ಮರದಡಿಯಲ್ಲಿ ಕೂತಿದ್ದಳು. ಒಂದಷ್ಟು ಜನ ಅವಳ ಸುತ್ತ ನೆರೆದಿದ್ದರು. ವೇದಿಕೆಯಲ್ಲಿ ಒಬ್ಬಾತ ಗಂಟಲು ಹರಿದುಕೊಳ್ಳುವಂತೆ ಕಿರುಚಿ ಮಾತಾಡುತ್ತಿದ್ದ. ಅವರೆಲ್ಲಾ ಆತ ಹೇಳುವುದನ್ನು ಗಲ್ಲಕ್ಕೆ ಕೈಯಿಟ್ಟು ಕೇಳುತ್ತಿದ್ದರು. ಆತ ಮಾತಿನ ಮಧ್ಯೆ ದೂರದಲ್ಲಿದ್ದ ಅ ಅಲೆಮಾರಿ ಹೆಂಗಸಿನತ್ತ ನೋಡಿದ. ಗಲ್ಲಕ್ಕೆ ಕೈಯ್ಯಿಟ್ಟು ಅವನ ಮಾತುಗಳನ್ನು ಕೇಳುತ್ತಿದ್ದ ಆ ಅಲಿಮಾರಿಯ ಪಕ್ಕ ಒಂದು ಬುಟ್ಟಿಯಿತ್ತು. ಪ್ಲಾಸ್ಟಿಕ್ ಹಾಳೆಯಿಂದ ಅದನ್ನು ಮುಚ್ಚಲಾಗಿತ್ತು, ಅಲೆಮಾರಿ ಹೆಂಗಸನ್ನು ನೋಡಿದ ಗಯ್ಯಾಳಿ ಹೆಂಗಸು ತನ್ನ ಸುತ್ತಮುತ್ತ ಕುಳಿತಿದ್ದ ಪಟಾಲಂಗೆ ಏನೋ ಹೇಳಿದಳು. ಅವರೆಲ್ಲಾ ಅಲೆಮಾರಿ ಹೆಂಗಸನ್ನು ನೋಡಿ ಅಟ್ಟಹಾಸದಿಂದ ನಗಲು ಆರಂಭಿಸಿದರು. ದೂರದಲ್ಲಿದ್ದ ಅವಳಿಗೆ ಇವರೆಲ್ಲಾ ಜೋರಾಗಿ ನಗುತ್ತಿದ್ದಾರೆಂದು ಗೊತ್ತಾಯಿತು. ಆದರೆ ಯಾಕೆ ನಗುತ್ತಿದ್ದರೆಂದು ಅರ್ಥವಾಗಲಿಲ್ಲ.
ಅಲೆಮಾರಿ ಹೆಂಗಸಿಗೆ ಮುಂದಕ್ಕೆ ಹೋಗಲು ಅದೊಂದೇ ದಾರಿಯಿದ್ದುದ್ದು. ಅಲ್ಲಿ ಆ ಪಟಲಾಂ ದಾರಿಗಡ್ಡವಾಗಿ ಕೂತಿತ್ತು. ಹಾಗಾಗಿ ತಲೆಯ ಮೇಲೆ ಸೆರಗು ಹೊದ್ದು ಅದರ ಮೇಲೆ ಬುಟ್ಟಿಯಿಟ್ಟು ಅವರು ಕೂತಿದ್ದ ಮರದಡಿಯ ಕಾಲು ದಾರಿಯತ್ತ ಹೆಜ್ಜೆ ಹಾಕತೊಡಗಿದಳು. ಅಲ್ಲಿದ್ದ ಕೆಲವರು ’ಎಲ್ಲಿಗೆ ಹೊರಟ್ಟಿದ್ದಿಯಾ? ತಲೆಯ ಮೇಲೇನಿದೆ?ಯಾವ ಜಾತಿ ನಿಂದು’ ಎಂದು ಒಬ್ಬಾರದಮೇಲೆ ಒಬ್ಬರು ಪ್ರಶ್ನೆಗಳ ಸುರಿಮಳೆಗೆಯ್ದರು.
ಅವಳು ಅವರನ್ನೆಲ್ಲಾ ಒಮ್ಮೆ ನೋಡಿದಳು. ಯಾವ ಪ್ರಶ್ನೆಗೆ ಮೊದಲು ಉತ್ತರಿಸಬೇಕೇಂದು ಗೊಂದಲಕ್ಕೆ ಬಿದ್ದು ತಲೆಯ ಮೇಲಿನ ಬುಟ್ಟಿ ಸರಿ ಮಾಡಿಕೊಂಡಳು. ಆಗ ಈ ಗಯ್ಯಾಳಿ ಹೆಂಗಸು ತಾನು ನಿಮ್ಮೆಲ್ಲರಿಗಿಂತ ಭಿನ್ನ ಎಂಬಂತೆ ತನ್ನ ಗುಂಪಿನವರತ್ತ ಕುತ್ಸಿತ ನಗುವೊಂದನ್ನು ಬೀರಿ ಸೊಂಟದ ಮೇಲೆ ಕೈಯ್ಯಿಟ್ಟು ’ ಆ ಬುಟ್ಟಿಯಲ್ಲೇನಿದೆ? ತೋರಿಸು’ ಎಂದು ಅಪ್ಪಣೆ ಕೊಟ್ಟಳು.
‘ಅದರಲ್ಲಿ ನನ್ನ ಬದುಕಿದೆ’
’ಓಹೋ..ನಿನ್ನ ಬದುಕು ಬುಟ್ಟಿಯಲ್ಲಿ ಮದುರಿಕೊಂಡು ಮಲಗಿದೆಯಾ?’ ಎನ್ನುತ್ತಾ ಆಕೆ ಗುಂಪಿನೆಡೆಗೆ ’ಹೆಂಗಿದೆ ನನ್ನ ಬಾಣ?’ ಎಂಬಂತೆ ನೋಡಿದಳು. ಅವರು ಅವಳನ್ನು ಉತ್ತೇಜಿಸುವಂತೆ’ ಕುನ್ನಿ’ಎಂದು ಬೆರಳಲೇಡಿಸುತ್ತಾ ಕಿಸಕ್ಕನೆ ನಕ್ಕರು. ಅವಳು ಮತ್ತಷ್ಟು ಎತ್ತರಕ್ಕೇರಿ ಇವಳ ಬುಟ್ಟಿಗೆ ಕೈ ಹಾಕಿದಳು. ಈ ಜಗ್ಗಾಟದಲ್ಲಿ ಅವಳ ಬುಟ್ಟಿಯಲ್ಲಿದ್ದ ಮೀನೆಲ್ಲ ಇವಳ ತಲೆ ಮೇಲೆ ಚೆಲ್ಲಿ ಮೈಯ್ಯನ್ನು ಸವರಿಕೊಂಡು 
ನೆಲ ಸೇರಿ ಹೊರಳಾಡತೊಡಗಿದವು.
ದೂರದಲ್ಲಿ ಎಲ್ಲಿಯೋ ಇದ್ದ ನಾಯಿಗಳು ಬೊಗಳುತ್ತಾ ಇವರಿದ್ದೆಡೆಗೆ ಓಡಿ ಬರುತ್ತಿರುವುದು ಕಣ್ಣು ಕಿವಿಗಳಿಗೆ ನಾಟಿ ಇವಳು ಗಟ್ಟಿಯಾಗಿ ಕಣ್ಮುಚ್ಚಿಕೊಂಡಳು..
ಈಗ ಗಯ್ಯಾಳಿ ಕಂಡ ಕಂಡವರೆಲ್ಲಾ ಹೇಳಿಕೊಂಡು ತಿರುಗುತ್ತಿದ್ದಾಳೆ; ’ಅವಳು ನನ್ನ ತಲೆ ಮೇಲೆ ಮೀನಿನ ಬುಟ್ಟಿ ಎತ್ತಿ ಹಾಕಿದಳು.ಈಗ ಮೈಮೇಲೆಲ್ಲಾ ಮೀನುಗಳು ಓಡಾಡುತ್ತಿವೆ. ಗುಳು ಗುಳು ಎಂದು ಸದ್ದು ಮಾಡುತ್ತಿವೆ. ಬೇಕಾದ್ರೆ ನೀವೇ ಆಲಿಸಿ ನೋಡಿ’ ಅಂತ ತಲೆಯನ್ನು ಓರೆ ಮಾಡಿ ಕಿವಿಗೆ ಅಂಗೈಯನ್ನು ಅರ್ಧ ಮರೆ ಮಾಡಿ ಆಲಿಸುತ್ತಾಳೆ. ನೀವು ಕೂಡಾ ಆಲಿಸಿ ಅಂತ ಅಕ್ಕಪಕ್ಕದವರನ್ನು ಕರೆಯುತ್ತಾಳೆ. 
ಜನ ಹೌದೌದು ಅಂತ ತಲೆಯಾಡಿಸುತ್ತಾ ಅವಳ ಮೈಯ ಮೀನಗಂಧವನ್ನು ಅಸ್ವಾಧಿಸುತ್ತಾರೆ.!

Monday, February 4, 2013

ಪಾರಿಜಾತದ ಬಿಕ್ಕಳಿಕೆ…




ಮಧ್ಯರಾತ್ರಿ..ನಾನು ಪಾರಿಜಾತದ ಕಂಪಿನಲ್ಲಿದ್ದೆ.
ನನ್ನ ಬೆಡ್ ರೂಮಿನ ಕಿಟಕಿಯತ್ತ ಬಾಗಿದ ಆ ದೇವಲೋಕದ ವೃಕ್ಷದಲ್ಲಿ ಬಿರಿಯುತ್ತಿದ್ದ ದೇವಪುಷ್ಪದ ಸುಂಗಂಧಲ್ಲಿ ಮೈಮರೆತು ನಿದ್ರೆಯಾಳಕ್ಕೆ ಜಾರುತ್ತಲಿದ್ದೆ..
ಆಗ ನನ್ನ ಮೊಬೈಲ್ ಪೋನ್ ರಿಂಗುಣಿಸಿತು…
ಆತ ರಣರಂಗದಲ್ಲಿದ್ದ.. ನನ್ನ ಹೆಸರನ್ನು ಹೇಳುತ್ತಾ ತಡೆ ತಡೆದು ಬಿಕ್ಕಳಿಸುತ್ತಿದ್ದ..
’ಏನಾಯ್ತು?’ ಎನ್ನುತ್ತಲೇ ತಟ್ಟನೆದ್ದು ಕುಳಿತವಳು, ನನ್ನ ಮಾತಿನಿಂದ ಮನೆಯಲ್ಲಿದ್ದವರಿಗೆ ತೊಂದರೆಯಾಗಬಾರದೆಂದು ಟೆರೇಸ್ ಮೇಲೆ ಹೋದೆ. ಪಾರಿಜಾತದ ಗೆಲ್ಲಿನ ನೆರಳಲ್ಲಿ ಹಾಕಿದ ಕುರ್ಚಿಯಲ್ಲಿ ದೊಪ್ಪನೆ ಕುಳಿತೆ..ಅಲ್ಲಿಗೆ ಬರುವ ತನಕ ’ಹೆದರಬೇಡಿ ನಾನಿದ್ದೇನೆ’ ಎಂದು ಸಮಾಧಾನಿಸುತ್ತಲೇ ಬಂದಿದ್ದೆ.
ಅಂದೇ ಮೊದಲ ಬಾರಿ ಗಂಡಸೊಬ್ಬ..ಅದರಲ್ಲೂ ಬಹಳಷ್ಟು ಜೀವನವನ್ನು ಕಂಡಿದ್ದ, ಮಧ್ಯವಯಸ್ಸನ್ನು ಸಮೀಸುತ್ತಿರುವ ವ್ಯಕ್ತಿಯೊಬ್ಬ ಮಗುವಿನಂತೆ,ಅಸಹಾಯಕನಾಗಿ ಅತ್ತದ್ದನ್ನು ನಾನು ನನ್ನ ಕಿವಿಯಾರೆ ಕೇಳುತ್ತಲಿದ್ದೆ..

ಆತ ನಡುಗಿ, ಜರ್ಜರಿತನಾಗುವುದಕ್ಕೆ ಕಾರಣವಿತ್ತು..ಆತನ ಸಹೋದ್ಯೋಗಿಯಾಗಿದ್ದ, ಆತನ ಜೀವದ ಗೆಳೆಯ ಅವನ ಕಣ್ಣೆದುರಿನಲ್ಲೇ ಬಾಂಬ್ ಸ್ಪೋಟದಿಂದಾಗಿ ಛೀದ್ರ ಛೀದ್ರವಾಗಿ ಸತ್ತು ಬಿದ್ದಿದ್ದ. ನನ್ನನ್ನೂ ಸೇರಿದಂತೆ ಜಗತ್ತಿನಾದ್ಯಂತ ಬಹಳಷ್ಟು ಜನರು ಆ ಸುದ್ದಿಯನ್ನು ಟೆಲಿವಿಶನ್ ನಲ್ಲಿ ವೀಕ್ಷಿಸಿದ್ದರು..…ಆ ಕ್ಷಣದಲ್ಲಿ ಆತನಿಗೆ ನನ್ನ ನೆನಪಾಗಿದೆ..ಪೋನ್ ಮಾಡಿದ್ದಾನೆ..ಅದು ಅಂತರಾಷ್ಟ್ರೀಯ ಕರೆ..ಆದರೂ ಒಂದು ಘಂಟೆಗೂ ಮಿಗಿಲಾಗಿ ಆತ ನನ್ನೊಡನೆ ಮಾತಾಡಿದ..ಆತ ರಣರಂಗದ ಮಾತಾಡುತ್ತಲಿದ್ದರೆ..ನಾನು ಪಾರಿಜಾತದ ಕಂಪಿನೊಡನೆ ಅಲೌಕಿಕತೆಯ ಗಂಧವನ್ನು ಬೆರೆಸಿ ಅವನಿಗೆ ರವಾನಿಸುತ್ತಿದ್ದೆ…

ನಿಮಗೀಗ ಅನ್ನಿಸಬಹುದು..ಆತ ನಿಮ್ಮ ಆತ್ಮೀಯ ಗೆಳೆಯನಾಗಿರಬೇಕೆಂದು. ಖಂಡಿತಾ ಅಲ್ಲ. ಅದೊಂದು ಪೇಸ್ ಬುಕ್ ಗೆಳೆತನ ಅಷ್ಟೇ.. ಅದನ್ನೇ ಆತ ಮಾತಿನ ಮಧ್ಯೆ ಹೇಳಿದ..’ಇಷ್ಟೊಂದು ಗೆಳೆಯ-ಗೆಳತಿಯರಿದ್ದಾರೆ ನನಗೆ.. ಆದರೆ ಈ ಹೊತ್ತಿನಲ್ಲಿ ನನಗೆ ನೀವು ಮಾತ್ರ ಯಾಕೆ ನೆನಪಾದಿರೋ ಗೊತ್ತಿಲ್ಲ’
ಹೌದು…ಆತ ನನಗೆ ಪೇಸ್ ಬುಕ್ ನಲ್ಲಿ ಪರಿಚಿತನಾದವನು..ಯಾವುದೋ ಒಂದು ಮಾಹಿತಿಗಾಗಿ ನನ್ನ ಪತಿಯ ಸಲಹೆಯಂತೆ ನಾನವನನ್ನು ಸಂಪರ್ಕಿಸಿದ್ದೆ. ಹಾಗಾಗಿ ಆತನ ಬಳಿ ನನ್ನ ದೂರವಾಣಿ ನಂಬರ್ ಇತ್ತು..ಮುಂದೆ ಅದು ಒಂದು ಸೌಹಾರ್ಧ ಗೆಳೆತನವಾಗಿ ಮುಂದುವರಿದಿತ್ತು…ಆದರೆ ನಡುವೆ ಒಂದು ಚಿಕ್ಕ ತಪ್ಪು ತಿಳುವಳಿಕೆಯಿಂದಾಗಿ ನಮ್ಮಿಬ್ಬರ ನಡುವಿನ ಸಂಪರ್ಕ ಕೊಂಡಿಗೆ ತುಕ್ಕು ಹಿಡಿದಿತ್ತು..ನಾನವನನ್ನು ಪೇಸ್ ಬುಕ್ ನಲ್ಲಿ ಅನ್ಪ್ರೆಂಡ್ ಮಾಡಿದ್ದೆ.

ಹೀಗಿರುವಾಗಲೇ ಆ ಪೋನ್..ಅದೂ ಮಧ್ಯರಾತ್ರಿಯಲ್ಲಿ ಬಂದಿತ್ತು.
 
ಅಂದು ಹುಣ್ಣಿಮೆಯಾಗಿರಬೇಕು. ಸುತ್ತ ಬೆಳದಿಂಗಳು ಚೆಲ್ಲಿತ್ತು. ಆ ಹಾಲ್ಬೆಳಕಲ್ಲಿ ಮಾಯಾನಗರಿ ಬೆಂಗಳುರು ಹೇಗೆ ನಿಶಬ್ದವಾಗಿ ಮಲಗಿ ನಿಟ್ಟುಸಿರು ಬಿಡುತ್ತಿದೆಯೆಂದು ನಾನವನಿಗೆ ವಿವರಿಸುತ್ತಾ, ತಲೆಯೆತ್ತಿ ಆಕಾಶವನ್ನು ನೋಡುವಂತೆ ಹೇಳಿದೆ. ಆ ಚಂದಿರನ್ನು ನೋಡು..ಅಲ್ಲಿ ನಿನ್ನ ಗೆಳೆಯನಿರಬಹುದು..ಅವನು ಅಲ್ಲಿಂದ ನಿನ್ನನ್ನು ನೋಡುತ್ತಿರಬಹುದು..ನಾನು  ನಿನ್ನ ಮಾತುಗಳಿಂದ ಅವನನ್ನು ಅಲ್ಲಿ ಕಾಣುತ್ತಿದ್ದೇನೆ. ಜಗತ್ತಿಗೆ ತಂಪನ್ನು ತರಲು ಅವನು ಚಂದಿರನಲ್ಲಿ ಸೇರಿ ಹೋಗಿದ್ದಾನೆ…ನಾವಿಬ್ಬರೂ ಏಕಕಾಲದಲ್ಲಿ ಅವನನ್ನು ನೋಡುತ್ತಲಿದ್ದರೆ ಅವನು ನಗದೆ ಇರಲು ಸಾಧ್ಯವೇ?’...

ನಾನು ಅವನೊಡನೆ ಮಾತಾಡುತ್ತಲೇ ಹೋದೆ..ಅವನು ಚಿಕ್ಕ ಮಗುವಿನಂತೆ ಕೇಳುತ್ತಲೇ ಹೋದ.
ಅವನು ಸಹಜಸ್ಥಿತಿಗೆ ಬರುವುದು ನನ್ನ ಅರಿವಿಗೆ ಬರುತ್ತಿತ್ತು. ಹಾಗಾಗಿ ಅವನಿಂದ ಕಳಚಿಕೊಳ್ಳುವುದರ ಬಗ್ಗೆ ಆಲೋಚಿಸುತ್ತಲೇ ಮತ್ತಷ್ಟು ಮಾತು ಮುಂದುವರಿಸುತ್ತಾ ಹೇಳಿದೆ ”ಎರಡು ಪೆಗ್ ವಿಸ್ಕಿ ಕುಡಿದು ಚಂದಿರನ ಜೊತೆ ಸೇರಿರುವ ನಿನ್ನ ಗೆಳೆಯನನ್ನು ನೆನೆಯುತ್ತಾ ಮಲಗು. ನಾಳೆ ಬೆಳಿಗ್ಗೆ ಏಳುವಾಗ ನೀನು ಹೊಸ ಮನುಷ್ಯರಾಗಿರುತ್ತಿ’ ಎಂದು ಅಮ್ಮನಂತೆ ರಮಿಸಿ ನಾನು ಪೋನ್ ದಿಸ್ಕನೆಕ್ಟ್ ಮಾಡಿದೆ.
ನನ್ನನ್ನು ಅತ್ಯಂತ ಕೀಳಾಗಿ ಕಂಡ ಈ ವ್ಯಕ್ತಿಯೊಡನೆ ಇಂತಹ ಅಪರಾತ್ರಿಯಲ್ಲಿ ನಾನು ಯಾಕಾಗಿ ಇಷ್ಟೊಂದು ಮಾರ್ಧವತೆಯಿಂದ ನಡೆದುಕೊಂಡೆ? ಎಂದು ನನ್ನ ಬಗ್ಗೆ ನಾನೇ ಅಚ್ಚರಿಗೊಳ್ಳುತ್ತಾ, ಪಾರಿಜಾತದ ಒಂದೆರಡು ಹೂಗಳನ್ನು ಬಿಡಿಸಿಕೊಂಡು, ಬೊಗಸೆಯಲ್ಲಿ ಹಿಡಿದು ಅದನ್ನು ಅಘ್ರಾಣಿಸುತ್ತಾ ಮೆಟ್ಟಲಿಳಿದು ಮನೆಗೆ ಬಂದೆ.  ರಾತ್ರಿ ಓದಿ ಮಡಚಿಟ್ಟ ಪುಸ್ತಕದ ಮೇಲೆ ಹೂಗಳನ್ನಿಟ್ಟೆ. ಹಾಸಿಗೆಯ ಮೇಲೆ ಒಂದೆರಡು ನಿಮಿಷ ವಜ್ರಾಸನದಲ್ಲಿ ಕಣ್ಮುಚ್ಚಿ ಕುಳಿತೆ. ಆಮೇಲೆ ಸಮಾಧಾನ ಚಿತ್ತದಿಂದ ಮಲಗಿಕೊಂಡೆ.

ಬೆಳಗ್ಗಿನ ಜಾವವಿರಬೇಕು. ಎಚ್ಚರವೂ ಅಲ್ಲದ ಕನಸೂ ಅಲ್ಲದ ಸ್ಥಿತಿ. ನನ್ನ ಕೆನ್ನೆಯ ಮೇಲೆ ಸುಕೋಮಲ ಸ್ಪರ್ಶ. ’ನನ್ನ ಮೇಲೆ ನಿನಗೇಕೆ ಇಷ್ಟು ಮೋಹ’ ಕಿವಿಯ ಬಳಿ ಉಲಿದ ಪಿಸುನುಡಿ. ನಾನು ಗಲಿಬಿಲಿಗೊಳ್ಳುತ್ತಿರುವಾಗಲೇ..ಮತ್ತೆ ಅದೇ ಇನಿದನಿ...
 ’ನೀನು ಯಾಕೆ ನನ್ನ ಹಾಗೆ ಆದೆ?
ನಿನ್ನ ಹಾಗೆಯೇ...ಹಾಗೆಂದರೇನು?
ಲಜ್ಜಾಭರಣೆ..!.ನಿನ್ನ ಹಾಗೆ ನನಗೂ ಒಂದು ಕಥೆಯಿದೆ..ಹೇಳಲೇ?
ಕಥೆಯೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಕ್ಕಳ-ಪಕ್ಕಳ ಕೂತು ಗಲ್ಲಕ್ಕೆ ಕೈನೆಟ್ಟೆ.
ನಾನೊಬ್ಬಳು ರಾಜಕುಮಾರಿಯಾಗಿದ್ದೆ. ದಿನಾ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶಸ್ತ್ರಾಭ್ಯಾಸ ಮಾಡುತ್ತಿದ್ದೆ..ಪ್ರತಿಧಿನ ಸೂರ್ಯ ನಮಸ್ಕಾರ ಮಾಡುತ್ತಿದ್ದಾಗ ಅವನನ್ನು ನೋಡುತ್ತಿದ್ದೆ..ಕೆಂಪನೆಯ ಕೆಂಡದುಂಡೆಯಂತಿದ್ದ ಆತ ಬರಬರುತ್ತಾ ಹೊಂಬಣ್ಣದ ರೂಪ ಪಡೆಯುತ್ತದ್ದ; ನನ್ನ ಯೌವನಂತೆಯೇ! ನನ್ನ ಹೆಣ್ತನ ಅರಳುವುದನ್ನು ನೋಡುತ್ತಲೇ ಅವನೂ ಬಣ್ಣಗಾರನಾಗುತ್ತಿದ್ದ. ಅವನು ನನ್ನ ಮೋಹಿಸಿದ. ನಾನವನನ್ನು ಅಚ್ಚರಿಯಿಂದ ನೋಡುತ್ತಿದ್ದೆ. ಪ್ರತಿದಿನ ಸೂರ್ಯ ನಮಸ್ಕಾರಕ್ಕಾಗಿ ಕೈಯೆತ್ತಿದಾಗಲೆಲ್ಲ ಅವನು ನನ್ನ ಬೆರಳುಗಳನ್ನು ಹಿಡಿದೇ ನನ್ನೊಳಗೆ ಇಳಿಯುತ್ತಿದ್ದ.ನಾನವನನ್ನು ಪ್ರೀತಿಸಿಬಿಟ್ಟೆ. ಮುಂಜಾನೆಯಲ್ಲಿ ಪ್ರತಿದಿನ ಅವನೊಡನೆ ಅವನ ಪ್ರಿಯ ಮಡದಿ ಉಷೆಯಿರುತ್ತಿದ್ದಳು ಆದರೂ ಆತ ಜಾರತನದಲ್ಲಿ ನನ್ನೆಡೆಗೆ ಬಾಗಿದ..ನಾವು ಭೂಮ್ಯಾಕಾಶಗಳಲ್ಲಿ ಒಂದಾಗಿ ಬೆರೆಯುತ್ತಿದ್ದೆವು.

ಆದರೆ ಒಂದು ದಿನ ಅವನು ನನ್ನ ನನ್ನ ಬೆರಳುಗಳಿಗೆ ತನ್ನ ಬೆರಳನ್ನು ಜೋಡಿಸಲಿಲ್ಲ. ಮರುದಿನವೂ ಇಲ್ಲ..ಮತ್ತೆಂದೂ ಬರಲಿಲ್ಲ. ನಾನು ಕಾದೇ ಕಾದೆ..ಸೊರಗಿದೆ.. ಕೈಚಾಚಿದರೆ ಅವನು ನನಗೆಟುಕದಷ್ಟುಎತ್ತರದಲ್ಲಿದ್ದ. ಅವನಿಲ್ಲದೆ ನನ್ನೊಳಗೆ ಬೆಳಕಿರಲಿಲ್ಲ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶಸ್ತ್ರಾಭ್ಯಾಸ ಮಾಡುವ ನನ್ನೊಳಗಿನ ರಾಜಕುಮಾರಿ ಕಳೆದುಹೋಗಿದ್ದಳು.ಅದು ಗೊತ್ತಾದ ಒಡನೆ ನನಗೆ ಬದುಕುವುದರಲ್ಲಿ ಅರ್ಥವಿಲ್ಲವೆನಿಸಿತು. ಜಗತ್ತನ್ನೆಲ್ಲಾ ಆ ಸೂರ್ಯದೇವ ಬೆಳಗುತ್ತಾನೆಂದು ನೀವೆಲ್ಲಾ ಅನ್ನುತ್ತೀರಿ. ಆತ ಬೆಳಕಿನೊಡೆಯನಂತೆ. ಆದರೆ ನನ್ನೊಳಗಿನ ಬೆಳಕನ್ನು ಅವನ್ಯಾಕೆ ಕಿತ್ತುಕೊಂಡ? ’ಸಾವಿರಾರು ಕರ ಚಾಚಿ ಕಮಲೆಯರ ಕಣ್ಣ ನೀರ ಒರೆಸುವವನು ಎಂದೆಲ್ಲ ಅನ್ನುತ್ತೀರಿ..ನನ್ನ ಕಣ್ಣೀರು ಅವನಿಗೆ ಕಾಣದಾಯಿತೆ?

 ಮತ್ತೆ ಬದುಕಬೇಕೆನಿಸಲಿಲ್ಲ. ಕಠಾರಿಯಿಂದ ಇರಿದುಕೊಂಡು ಸತ್ತು ಹೋದೆ. ದೇಹವನ್ನು ನಾಶಪಡಿಸಿಕೊಂಡರೇನು ಆತ್ಮ ಅವಿನಾಶಿನಿಯಲ್ಲವೇ? ನನ್ನನ್ನು ಸುಟ್ಟ ಬೂದಿಯೇ ಬೀಜವಾಗಿ ರೂಪುವಡೆದು ಸಸಿಯಾಗಿ ಭೂಮಿಯನ್ನು ಸೀಳಿ ನಿಂತೆ. ಹೂವಾಗಿ ಅರಳಿದೆ. ಯಾರಾದರೂ ಮುಟ್ಟಿದರೆ ಬಾಡಿ ಹೋಗುವ ಭಯ. ಅದಕ್ಕಾಗಿ ಸುತ್ತ ಒರಟು ಎಲೆಯನ್ನು ಹೊದ್ದೆ.  ಅದರ ಆಕಾರವನ್ನು ನೋಡಿದೆಯಾ?.  ಅದು ನನದೇ ಹ್ರುದಯ. ಪೂರ್ವ ಜನ್ಮದ ಸೆಳೆತ. ದೇಹ ನಶ್ವರವಾದರೂ ಪ್ರೀತಿ ಅವಿನಾಶಿಯಲ್ಲವೇ? . ನನ್ನನ್ನು ದೂರದಲ್ಲಿ ನಿಂತು ಜನರು ನೋಡಿ ಆನಂದಿಸಲಿ. ನಾನೆಂದೂ ಅವನನ್ನು ತಲೆಯೆತ್ತಿ ನೋಡಲಾರೆ. ನಾನು ಕತ್ತಲಲ್ಲಿಯೇ ಅರಳುತ್ತೇನೆ. ನೊಂದ ಮನಸ್ಸುಗಳಿಗೆ ತಂಪನ್ನಿಯುತ್ತೇನೆ; ಕಂಪನ್ನು ತುಂಬುತ್ತೇನೆ. ತೊರೆದು ಹೋದವರಿಗಾಗಿ ದುಃಖಿಸುವುದರಲ್ಲಿ ಅರ್ಥವಿಲ್ಲ. ಅವರು ಆಕಾಶದಲ್ಲೇ ಇರಲಿ..ನಾವು ಭೂಮಿಯಲ್ಲೇ ಇರೋಣ..ಅಲ್ಲವೇ ನನ್ನ ಪ್ರಿಯ ಸಖಿ...?


ಇಷ್ಟನ್ನು ಹೇಳಿದವಳೇ...ತನ್ನ ಹವಳದ ಬೆರಳುಗಳಿಂದ ನನ್ನ ಗಲ್ಲವನ್ನು ಹಿಡಿದೆತ್ತಿ ನನ್ನ ಕಣ್ಣುಗಳನ್ನೆ ದಿಟ್ಟಿಸುತ್ತಾ..’ನನ್ನ ಹಾಗೆ ನೀನಾಗಬೇಡ.. ದಿನಾ ನನ್ನನ್ನು ಬೊಗಸೆಯಲ್ಲಿ ತುಂಬಿಕೊಂಡು ನಿನ್ನ ಮನೆಯೊಳಗೆ ಬರಮಾಡಿಕೊಳ್ಳುತ್ತಿಯಲ್ಲಾ... ಆಗ ನಿನ್ನ ನಿಟ್ಟುಸಿರ ಬೇಗೆಗೆ ನಾನು ಬಾಡಿ ಹೋಗುತ್ತೇನೆ. ಅದಕ್ಕೆ ಕಾರಣ ನನಗೆ ಗೊತ್ತು..ನನ್ನವನು ನನಗೆ ಕೈಗೆಟುಕದಷ್ಟು ದೂರದಲ್ಲಿದ್ದ. ಆದರೆ ನಿನಗಾಗಿ ಹಂಬಲಿಸುವವನು ಇಲ್ಲೇ ಹತ್ತಿರದಲ್ಲಿದ್ದಾನೆ..ನಾನು ನಿನ್ನ ಅಂತರಂಗದ ಗೆಳತಿಯಲ್ಲವೇ? ನನಗಾಗಿಯಾದರೂ
ಇವತ್ತಿನ ಒಂದು ದಿನದ ಮಟ್ಟಿಗೆ ನೀ ಅಭಿಸಾರಿಕೆಯಾಗು. ನಿನ್ನ ಜೊತೆಗೆ ನಾನಿರುತ್ತೇನೆ..ಅವನೆದುರಲ್ಲಿ ನೀನೇನೂ ಮಾತೇ ಆಡಬೇಕಿಲ್ಲ. ಅವನ ಕೈಗೆ ನನ್ನನ್ನು ಹಸ್ತಾಂತರಿಸು..ಮತ್ತೆ ಬರುವುದೆಲ್ಲಾ ಮೇಘಸಂದೇಶವೇ...ನೀನು ಕಾಣುವುದೆಲ್ಲಾ ಯಕ್ಷ-ಕಿನ್ನರ ಲೋಕವೇ...!’

ಹಾಗೇ ಹೇಳುತ್ತಲೇ ಆ ದ್ವನಿ ಬಣ್ಣ-ಬಣ್ಣಗಳ ಸುಂದರವಾದ ಬೆಳಕಿನ ರೇಖೆಗಳಾಗಿ, ನೋಡ ನೋಡುತ್ತಲೇ ಬಣ್ಣದ ಗೋಲವಾಗಿ. ನನ್ನನ್ನು ನುಂಗಲೋ ಎಂಬಂತೆ ನನ್ನತ್ತ ಶರವೇಗದಲ್ಲಿ ಬರತೊಡಗಿತು. ನಾನು ಜೋರಾಗಿ ಕಿರುಚಿ, ದಡಕ್ಕನೆ ಎದ್ದು ಕುಳಿತೆ. ಕೆನ್ನೆ ಮುಟ್ಟಿ ನೋಡಿಕೊಂಡೆ. ಒದ್ದೆಯಾಗಿತ್ತು. ಅಚ್ಚರಿಗೊಳ್ಳುತ್ತಾ ಪುಸ್ತಕದತ್ತ ನೋಡಿದೆ. ಪಾರಿಜಾತದ ಹೂಗಳು ನಗುತ್ತಿದ್ದವು. ಎದುರಿಗಿದ್ದ ಕನ್ನಡಿಯತ್ತ ದಿಟ್ಟಿ ಹಾಯಿಸಿದೆ.. ಪಾರಿಜಾತದ ಕಂಪಿನಲ್ಲಿ ನನ್ನ ಬಿಂಬ ಮಸುಕು ಮಸುಕಾಗಿ ಕಂಡಿತು.

[ 'ಪದ ಪಾರಿಜಾತ’ದಲ್ಲಿ ಪ್ರಕಟವಾದ ಕಥೆ ]
.

Tuesday, January 29, 2013

’ಯಾಕೆ ನನ್ನನ್ನು ತಿರಸ್ಕರಿಸಿದೆ?’

ಚಿತ್ರಕೃಪೆ; ಅಂತರ್ಜಾಲ.
ಅದೊಂದು ಸರ್ಕಾರಿ ಬಂಗಲೆ. ಅವನೊಬ್ಬನೇ ಇದ್ದಾನೆ. ಅವನ ಹೆಂಡತಿ ಮಕ್ಕಳು ದೂರದ ಊರಿನಲ್ಲಿದ್ದಾರೆ. ರಾತ್ರಿಯ ನೀರವತೆ. ನಗರ ಮೆಲ್ಲ ಮೆಲ್ಲನೆ ಸದ್ದು ಕಳೆದುಕೊಳ್ಳುತ್ತದೆ. ಒಂಟಿತನ ಅವನೊಳಕ್ಕೆ ಇಳಿಯುತ್ತಿದೆ. ಜ್ವರದ ಕಾವು ಇನ್ನೂ ಇದೆ. ಫೋನ್ ಎತ್ತಿಕೊಂಡು ಅವಳೊಡನೆ ಮಾತಾಡುತ್ತಾನೆ. ಇಪ್ಪತ್ತು ವರ್ಷಗಳ ಹಿಂದಿನ ನೆನಪುಗಳಿಗೆ ಮೆಲ್ಲ ಮೆಲ್ಲನೆ ಜಾರುತ್ತಾನೆ. “ಯಾಕೆ ನನ್ನನ್ನು ತಿರಸ್ಕರಿದೆ?” ಎಂದು ಬಿಕ್ಕಳಿಸುತ್ತಾನೆ. ಅವಳಿಗಿಲ್ಲಿ ಮೈಯ್ಯೆಲ್ಲ ಬಿಸಿಯಾಗುತ್ತದೆ. ತಲೆ ಭಾರವಾಗುತ್ತದೆ. ಅವನನ್ನು ಹೇಗೆ ಸಂತೈಸುವುದೆಂದು ಗೊತ್ತಾಗದೆ ಕುಸಿದು ಕುಳಿತವಳಿಗೆ….ಮುಂದೇನೂ ಕಾಣಿಸುತ್ತಿಲ್ಲ…..
ಅವನಂದ ಎರಡು ಮಾತುಗಳು ಆಕೆಯನ್ನು ಚೂರಿಯಂತೆ ಇರಿದವು; ಕ್ಷಮಿಸಿ, “ಆಕೆ” ಎಂದು ನಾನೇಕೆ ನನ್ನನ್ನು ವಂಚಿಸಿಕೊಳ್ಳಲಿ? ಈ ಕಥೆಯ ನಾಯಕಿ ನಾನೇ..! ಅವನು ಮಾತಾಡಿದ್ದು ನನ್ನೊಡನೆಯೇ…
“ನಾನು ಕಪ್ಪಗಿದ್ದೆ, ಕೆಳಜಾತಿಯವನಾಗಿದ್ದೆ, ಬಡವನಾಗಿದ್ದೆ. ಹಾಗಾಗಿ ನನ್ನನ್ನು ತಿರಸ್ಕರಿದ್ದೆ ಅಲ್ವಾ?”
ಹೌದಾ..ನಾನಂದು ಹಾಗೆ ಯೋಚಿಸಿದ್ದೆನಾ? ನನಗೆ ಬುದ್ಧಿ ಬಂದಾಗಿನಿಂದ, ಬದುಕಿನುದ್ದಕ್ಕೂ ಜಾತಿ ಭೇದದ ಬಗ್ಗೆ ಯೋಚಿಸಿದವಳೇ ಅಲ್ಲ. ಅರೇ ಈಗ ತಾನೇ ಹೊಳೆದದ್ದು. ನನಗಿಂದಿಗೂ ಅವನ ಜಾತಿ ಯಾವುದೆಂದೂ ಗೊತ್ತಿಲ್ವಲ್ಲಾ..! ಕಪ್ಪಗಿದ್ದಾನೆ, ಜೊತೆಗೆ ನಡೆ-ನುಡಿಯಲ್ಲಿ ನಾಜೂಕುತನವಿಲ್ಲ. ಹಾಗಾಗಿ ಆತ ಬ್ರಾಹ್ಮಣನಾಗಿರಲಾರ. ಗೌಡರ ಗತ್ತು ಅವನಲಿಲ್ಲ. ಪರ ಊರಿನವನಾಗಿರುವ ಕಾರಣ ಬಂಟನಾಗಿರಲಾರ. ಲಿಂಗಾಯಿತ ಎಂಬ ಜಾತಿ ಇದೆ ಎಂಬುದರ ಬಗ್ಗೆ ಆಗ ನನಗೆ ಗೊತ್ತೇ ಇರಲಿಲ್ಲ. ದ.ಕ ದ ಹಳ್ಳಿಯೊಂದರಲ್ಲಿ ಹುಟ್ಟಿದ ನನಗೆ ಜಾತಿಯ ಬಗ್ಗೆ ಯಾವುದೇ ಪೂರ್ವಾಗ್ರಹಗಳಿರಲಿಲ್ಲ. ಬಡವನಾಗಿದ್ದನೇ ಆತ…? ಇಲ್ವಲ್ಲ. ನನಗೆ ತಿಳಿದಂತೆ ಆತನ ಅಪ್ಪ ಸರಕಾರದ ಒಳ್ಳೆಯ ಹುದ್ದೆಯಲ್ಲಿದ್ದರು. ಅಣ್ಣ ಇಂಜಿನಿಯರಿಂಗ್ ಓದುತ್ತಿದ್ದ. ಅವನ ತಂಗಿಯರಿಬ್ಬರು ಸುಂದರಿಯರು; ಓದಿನಲ್ಲಿ ಜಾಣೆಯರು. ನಾನು ಬಡವಳಾಗಿದ್ದೆ, ಕಪ್ಪಗಿದ್ದೆ ಎಂಬುದು ಸತ್ಯ….ಮತ್ತೆ..?
ನನ್ನ, ಅವನ ಪ್ರಥಮ ಭೇಟಿಯನ್ನು ನೆನಪಿಸಿಕೊಂಡೆ. ನನ್ನ ಅಣ್ಣನ ಮುಖಾಂತರ ಪರಿಚಯವಾದವನು ಅವನು. ನಂತರ ಪತ್ರಗಳ ಮುಖಾಂತರ ಅಭಿರುಚಿಗಳ ವಿನಿಮಯವಾಯ್ತು. ಒಂದು ದಿನ ನನ್ನನ್ನು ಭೇಟಿಯಾಗಬೇಕೆಂದು ಪಕ್ಕದ ಜಿಲ್ಲೆಯಿಂದ ನನ್ನ ಕಾಲೇಜಿಗೆ ಬಂದ. ನನಗೆ ಹುಡುಗರನ್ನು ಭೇಟಿಯಾಗುವುದು ಹೊಸತೇನೂ ಅಲ್ಲ. ಅದಾಗಲೇ ನನ್ನ ನೇರ ನಡೆ ನುಡಿಗಳಿಂದ ನನ್ನ ಮನೆಯವರಿಂದ, ಬಂಧು ಬಾಂಧವರಿಂದ, ಕೊನೆಗೆ ಕಾಲೇಜಿನಲ್ಲಿಯೂ “ಗಂಡುಬೀರಿ” ಎಂದು ಹೆಸರು ಪಡೆದಿದ್ದೆ.
ಚಿತ್ರಕೃಪೆ; ಅಂತರ್ಜಾಲ.
ಆಗೆಲ್ಲಾ ಭೇಟಿ ಹೋಟೇಲಿನಲ್ಲಿ ತಾನೇ? ಹೋಟೇಲ್ ಅಂದ್ರೆ ಈಗ ಬೇರೆಯೇ ಅರ್ಥ ಬರುತ್ತೆ..! ಅದು ಆ ಕಾಲ. ಬಸ್ ಸ್ಟ್ಯಾಂಡಿನಲ್ಲಿ ನಾನು ಕಾದಿದ್ದೆ. ಪೇಟೆಯ ಯಾವುದೋ ಹೋಟೇಲಿನಲ್ಲಿ ಎದುರಾ ಬದುರಾ ಕೂತು ಅವನು ಅವನು ಚಹಾ-ತಿಂಡಿಗೆ ಆರ್ಡರ್ ಮಾಡಿದ.. ನನಗೆ ಬರೀ ಚಾ ಮಾತ್ರ ಸಾಕು ಅಂದೆ. ಅವನು ತಾನು ಇತ್ತೀಚೆಗೆ ಬರೆದ ಕವನಗಳ ಬಗ್ಗೆ ಮಾತಾಡುತ್ತಿದ್ದ. ಬೆಳದಿಂಗಳ ರಾತ್ರಿಯಲ್ಲಿ ತನ್ನ ಪ್ರಿಯತಮೆಯ ಜೊತೆ ಕಳೆಯಲಿರುವ ರಮ್ಯ ಕಲ್ಪನೆಯ ಬಗ್ಗೆ ಹೇಳುತ್ತಿದ್ದ….
ಅವನು ತಿಂಡಿ ತಿನ್ನುತ್ತಿದ್ದ..ಆದರಲ್ಲಿ ನಾಜೂಕು ಇರಲಿಲ್ಲ; ಒರಟುತನವಿತ್ತು. ಕೊನೆಗೆ ತಟ್ಟೆಯಲ್ಲೇ ಕೈ ತೊಳೆದುಕೊಂಡ. (ನನ್ನ ಗಂಡನೂ ಹೀಗೇ ಮಾಡುತ್ತಾನೆ.) ನನಗೆ ತಟ್ಟೆಯಲ್ಲೇ ಕೈ ತೊಳೆದುಕೊಳ್ಳುವವರ ಬಗ್ಗೆ ಕೊಂಚ ಅಸಹನೆಯಿದೆ. ನನ್ನ ಮನೆಯಲ್ಲಿ ಊಟ ಮಾಡಿದವರು ತಟ್ಟೆಯಲ್ಲೇ ಕೈ ತೊಳೆದುಕೊಂಡರೆ ಇನ್ನೊಮ್ಮೆ ಅವರನ್ನು ಊಟ ಮಾಡಿ ಎನ್ನಲು ನಾನು ಸ್ವಲ್ಪ ಹಿಂದೆ ಮುಂದೆ ನೋಡುತ್ತೇನೆ.
ಸ್ವಲ್ಪ ಹೊತ್ತು ಅದೂ-ಇದೂ ಮಾತಾಡಿ ಅವನು ತನ್ನೂರಿಗೆ ಹೊರಡಲು ಸಿದ್ಧನಾದ. ನಾನು ಬಸ್ಟ್ಯಾಂಡ್ ತನಕ ಹೋಗಿ, ಅವನನ್ನು ಬಸ್ ಹತ್ತಿಸಿ, ಬಸ್ ಹೊರಟ ಮೇಲೆ ಕೈ ಬೀಸಿ ಹಾಸ್ಟೇಲಿಗೆ ಬಂದೆ…
ಅವನು ಆಗಾಗ ಕಾಗದ ಬರೆಯುತ್ತಿದ್ದ. ನೀವು ನಂಬುತ್ತೀರೋ ಇಲ್ಲವೋ…ಅವನೊಮ್ಮೆ ಫುಲ್ ಸ್ಕೇಪ್ ಹಾಳೆಯಲ್ಲಿ ಮೂವತ್ತೈದು ಪುಟಗಳ ಕಾಗದ ಬರೆದಿದ್ದ. ಅದರಲ್ಲಿ ಏನು ಬರೆದಿದ್ದ ಎಂಬುದು ನನಗೀಗ ನೆನಪಿಲ್ಲವಾದರೂ ಅದರಲ್ಲಿ “ರಾಜಾ ಪಾರ್ವೈ” ಎಂಬ ತಮಿಳು ಸಿನೇಮಾದ ಬಗ್ಗೆ ಪುಟಗಟ್ಟಲೆ ಬರೆದಿದ್ದ. ಅದರಲ್ಲಿ ಕಮಲ್ ಹಾಸನ್ ಒಬ್ಬ ಅಂಧ ವಯಲಿನ್ ವಾದಕ. ಮಾಧವಿ ಒಬ್ಬಳು ಶ್ರೀಮಂತಳಾದ ಚೆಲುವೆ. ಎಲ್ಲರ ವಿರೋಧದ ನಡುವೆ ಅವರ ಪ್ರೇಮ ಗೆಲ್ಲುವ ಪರಿಯನ್ನು ವಿವರವಾಗಿ ಬರೆದಿದ್ದ..
ಚಿತ್ರಕೃಪೆ; ಅಂತರ್ಜಾಲ.
ಅವನೊಮ್ಮೆ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೂ ಬಂದಿದ್ದ. ನಮ್ಮ ಮನೆಗೆ ಯಾರೇ ಬಂದರೂ, ಅವರು ಅಪರಿಚಿತರಾದರೂ ಆತ್ಮೀಯವಾದ ಆತಿಥ್ಯವಿರುತ್ತದೆ. ನಿನ್ನೆ ಕೂಡಾ ಅದನ್ನು ಫೋನಿನಲ್ಲಿ ನೆನಪಿಸಿಕೊಂಡ. “ನಿನ್ನಮ್ಮ..ಆ ತಾಯಿ ಮಾಡಿದ ಕೋಳಿ ಪದಾರ್ಥ, ಅವರು ಪ್ರೀತಿಯಿಂದ ಮಾಡಿ ಬಡಿಸಿದ ಆ ರೊಟ್ಟಿಯ ಸ್ವಾದ ಇವತ್ತಿಗೂ ನನ್ನ ನಾಲಗೆಯಲ್ಲಿ ಇದೆ…ಆದರೆ ನೀನು ಮಾತ್ರ…” ಎಂದು ಮೌನವಾಗಿದ್ದ.
ಹೌದು. ನನಗೆ ಆತ ಯಾಕೆ ಇಷ್ಟವಾಗಲಿಲ್ಲ.? ನನ್ನ ಮುಂದೆ ಒಂದು ಅಸ್ಪಷ್ಟ ಗುರಿಯಿತ್ತು. ಅದನ್ನು ನಾನು ಸಾಧಿಸಬೇಕಾಗಿತ್ತು. ಅಷ್ಟು ಬೇಗನೆ ನನಗೆ ಪ್ರೇಮದಲ್ಲಿ ಬೀಳುವುದು ಬೇಕಾಗಿರಲಿಲ್ಲ. “ದ್ವಂದ್ವಮಾನ- ಭೌತಿಕವಾದ”ದ ಓದು ಹೃದಯದ ಮಾತಿಗಿಂತ ಬುದ್ಧಿಯ ಮಾತಿಗೆ ಹೆಚ್ಚು ಒತ್ತು ಕೊಡುತ್ತಿತ್ತು. ಹಾಗಾಗಿಯೇ ಮುಂದೆ ಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ನಾವು ಎರಡು ವರ್ಷ ಜೊತೆಯಾಗಿಯೇ ಇದ್ದರೂ “ಹಲೋ” “ಹಾಯ್” ಬಿಟ್ಟರೆ ಒಂದು ಟೀ ಗೂ ನಾವು ಜೊತೆಯಾಗಲಿಲ್ಲ.
ಆಮೇಲೆ ಹದಿನೆಂಟು ವರ್ಷ ಹಾಗೊಬ್ಬ ಪರಿಚಿತ ನನಗಿದ್ದ ಎಂಬುದನ್ನು ಮರೆತು ನಾನು ಬದುಕಿದ್ದೆ.
ಅದೊಂದು ಸಂಜೆ ನನಗೊಂದು ಫೋನ್ ಬಂದಿತ್ತು. ನಾನು ಆಫೀಸಿನಲ್ಲಿದ್ದೆ. ಅವನು ಸಂಭ್ರಮದಿಂದ ತನ್ನನ್ನು ಪರಿಚಯಿಸಿಕೊಂಡಿದ್ದ. ತಾನು ಬೆಂಗಳೂರಿನ ಹೊರವಲಯದಲ್ಲಿ ಒಂದು ಮನೆ ಕಟ್ಟಿರುವುದಾಗಿ ಅದರ ಗೃಹ ಪ್ರವೇಶ ದಿನಾಂಕ ತಿಳಿಸಿ, ತನ್ನ ಪತ್ನಿಯ ಕೈಗೂ ಫೋನ್ ಕೊಟ್ಟು ಅವಳ ಕೈಯ್ಯಿಂದಲೂ ಆಮಂತ್ರಿಸಿದ್ದ.  ಕಾಲೇಜು ಗೆಳೆಯನೊಬ್ಬ ಈ ಮಹಾನಗರದಲ್ಲಿ ಸಿಕ್ಕಿದ್ದು ನನಗೆ ನಿಜಕ್ಕೂ ಖುಷಿಯಾಗಿತ್ತು.
ಆಫೀಸಿಗೆ ರಜೆ ಹಾಕಿ, ಒಂದು ಸುಂದರವಾದ ಬುದ್ಧನ ವಿಗ್ರಹವನ್ನು ಖರೀದಿಸಿ ಅವನ ಮನೆಗೆ ಹೋಗಿದ್ದೆ. ಅವನ ಮನೆಯವರೆಲ್ಲಾ ತುಂಬಾ ಆದರದಿಂದ ನನ್ನನ್ನು ಬರಮಾಡಿಕೊಂಡರು. ಅವನ ಪತ್ನಿ ಅಪ್ರತಿಮ ಚೆಲುವೆಯಾಗಿದ್ದಳು. ಅವನ ಮಗನಂತೂ ನನ್ನನ್ನು ನೋಡಿ “ಅಪ್ಪನ ಗರ್ಲ್ ಫ್ರೆಂಡ್ ನೀವೇನಾ?” ಎಂದು ನನ್ನಲ್ಲಿ ಅಚ್ಚರಿ ಮೂಡಿಸಿದ. ಆತನ ಪತ್ನಿಯ ಮೊಗದಲ್ಲೂ ಮೂಡಿದ ಮಂದಹಾಸ ನನ್ನನ್ನು ನಿರಾಳವಾಗಿಸಿತ್ತು.  ಅವನ ತಂದೆ ಮತ್ತು ಅಣ್ಣ ನನ್ನನ್ನು ನೋಡಿ ತುಂಬಾ ಸಂತಸಪಟ್ಟರು. ನಮ್ಮೂರಿನ ಬಗ್ಗೆ ನಾವು ಪರಸ್ಪರ ತುಂಬಾ ಮಾತಾಡಿಕೊಂಡೆವು.  ಬ್ಲಡ್ ಕ್ಯಾನ್ಸರಿನಿಂದ ಒಬ್ಬ ಮಗಳನ್ನು ಕಳೆದುಕೊಂಡ ಸಂಗತಿಯನ್ನು ಹೇಳುತ್ತಲೇ ಆ ತಂದೆ ಕಣ್ಣೀರಾಗುತ್ತಾ ನನ್ನನ್ನೂ ಭಾವುಕರನ್ನಾಗಿಸಿದರು.
ಆಮೇಲೆ ನಾವೆಲ್ಲ ಆಗಾಗ ಫೋನಿನಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಆದರೆ ನಾನು ಅವನ ಮನೆಗೆ ಹೋಗಲಿಲ್ಲ. ಒಂದೆರಡು ಸಾರಿ ಆತ ನಮ್ಮ ಮನೆಗೆ ಬಂದಿದ್ದ. ಒಂದೆರಡು ಪುಸ್ತಕಗಳನ್ನು ಕೊಂಡು ಹೋಗಿದ್ದ.
ಒಂದು ಇಳಿಸಂಜೆ ನನಗವನ ಪತ್ನಿ ಫೋನ್ ಮಾಡಿದ್ದಳು. “ಅವರ ಸ್ಥಿತಿ ಚಿಂತಾಜನಕವಾಗಿದೆ. ನಿಮ್ಮನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ. ನೀವು ಅವರಿಗಿರುವ ಏಕೈಕ ಫ್ರೆಂಡ್ ಅಂತೆ. ದಯಮಾಡಿ ಒಮ್ಮೆ ಮನೆಗೆ ಬರ್ತೀರಾ?”  ಹೇಳುತ್ತಲೇ ಆಕೆ ಬಿಕ್ಕಳಿಸಿದಳು.
ಚಿತ್ರಕೃಪೆ; ಅಂತರ್ಜಾಲ.
ನಾನು ತಕ್ಷಣ ನಮ್ಮ ಡ್ರೈವರನ್ನು ಕರೆದು ಅವನ ಮನೆಗೆ ಧಾವಿಸಿದ್ದೆ. ಅದ್ಯಾವುದೋ ವಿಚಿತ್ರ ಹೆಸರಿನ ಮಾರಣಾಂತಿಕ ಕಾಯಿಲೆಯಿಂದ ಆತ ನರಳುತ್ತಿದ್ದ. ನಾನು ತಡರಾತ್ರಿಯವರೆಗೂ ಅಲ್ಲಿದ್ದು ನಂತರ ಮನೆಗೆ ಬಂದಿದ್ದೆ. ಆಮೇಲೆ ಬಹು ಸಮಯ ಆ ಕುಟುಂಬದೊಡನೆ ನಿರಂತರ ಸಂಪರ್ಕದಲ್ಲಿದ್ದೆ. ನಾನು ಫೋನ್ ಮಾಡಿದಾಗಲೆಲ್ಲ “ಅಪ್ಪಾ.. ನಿನ್ನ ಗರ್ಲ್ ಫ್ರೆಂಡ್ ಫೋನ್..” ಎಂದು ಆತನ ಮಗ ರಾಗ ಎಳೆಯುತ್ತಾ ತನ್ನಪ್ಪನನ್ನು ಕರೆಯುತ್ತಿದ್ದುದು ನಮ್ಮ ಸಹಜ ಮಾತುಕತೆಗೆ ಮುನ್ನುಡಿಯಾಗುತ್ತಿತ್ತು. ಆತ ಕ್ರಮೇಣ ಚೇತರಿಸಿಕೊಂಡ. ಆತನ ಪತ್ನಿ ಅವನನ್ನು ಉಳಿಸಿಕೊಂಡಳು.
ಈಗ ಒಂದೆರಡು ವರ್ಷಗಳಿಂದ ಮತ್ತೆ ಅವನ ಸಂಪರ್ಕ ಕಡಿದು ಹೋಗಿತ್ತು. ಈಗ ಫೋನ್ ಮಾಡಿ ಈ ರೀತಿ ಪ್ರಶ್ನಿಸಿದ್ದಾನೆ.
ನಾನು ಏನೆಂದು ಉತ್ತರಿಸಲಿ?
ಅವನಿಗೆ ನನ್ನಲ್ಲಿ ಪ್ರೀತಿ ಮೂಡಿರಬಹುದು. ನನಗೂ ಹಾಗೆ ಅನ್ನಿಸಬೇಕಲ್ಲವೇ? ಪ್ರೀತಿ ಎಂಬುದು ಒಳಗಿನಿಂದ ಕಾರಂಜಿಯಂತೆ ಚಿಮ್ಮಬೇಕು. ಬೆಂಕಿಯ ಹಾಗೆ ಸುಡಬೇಕು. ಪ್ರತಿಕೂಲ ಸಂದರ್ಭ ಬಂದರೆ ಜ್ವಾಲಾಮುಖಿಯಂತೆ ಸ್ಫೋಟಿಸಬೇಕು. ನನಗೆ ಹಾಗೆ ಆಗಿಲ್ವೆ? ನಾನೇನು ಮಾಡಲಿ?
[ ಕಥೆಗಳ ಮಾರಾಣಿ ಎಂಬ ಟ್ಯಾಗ್ ಲೈನ್ ಹೊತ್ತಿರುವ ”ಐರಾವತಿ’ ಬ್ಲಾಗ್ ನಲ್ಲಿ ನನ್ನ ಕಾಲಂ ’ ಪದ ಪಾರಿಜಾತ’ ಕ್ಕಾಗಿ ಬರೆದ ಮೊದಲ ಕಥೆಯಿದು ]

Monday, December 15, 2008

’ನನ್ನದಾಗಿದ್ದ ನನ್ನದಲ್ಲದ ಕ್ಷಣಗಳು’




ಕಳೆದ ರಾತ್ರಿ ರಾಧಿಕಾಳ ಫೋನ್ ಬಂದಾಗಿನಿಂದ ರಾಜೀವ, ರಾಜೀವನಾಗಿರಲಿಲ್ಲ. ಕುಳಿತಲ್ಲಿ, ನಿಂತಲ್ಲಿ ರಾಧೆಯ ಬಗ್ಗೆಯೇ ಯೋಚಿಸುತ್ತಿದ್ದ. ”ನನಗೆ ನಿನ್ನೊಡನೆ ತುಂಬಾ ಮಾತಾಡುವುದಿದೆ. ಮಂಗಳೂರಿಗೆ ಬರುತ್ತಿದ್ದೇನೆ. ಗುರುವಾರ ಬೆಳಿಗ್ಗೆ ಬಸ್ ಸ್ಟ್ಯಾಂಡಿನಲ್ಲಿ ನನಗಾಗಿ ಕಾದಿರುತ್ತಿಯಾ...?” ಎಂದು ಕೇಳಿದ್ದಳು.

ಇಪ್ಪತ್ತು ವರ್ಷಗಳ ನಂತರ ಅವಳ ಧ್ವನಿ ಕೇಳಿ ಪುಳಕಿತಗೊಂಡಿದ್ದ ರಾಜೀವ.

ಈಗ ರಾಧೆ ಹೇಗಿರಬಹುದು?. ತನ್ನ ನಂಬರು ಆಕೆಗೆ ಹೇಗೆ ಸಿಕ್ಕಿತು?.... ಎಂದೆಲ್ಲಾ ಪ್ರಶ್ನೆಗಳ ಮಳೆಗೆರೆದಾಗ ’ಅಲ್ಲಿಗೇ ಬರುತ್ತಿದ್ದೇನಲ್ಲಾ.. ಆಗ ಎಲ್ಲವನ್ನೂ ಹೇಳುತ್ತೇನೆ.’ ಎಂದು ಪೋನ್ ಕಟ್ ಮಾಡಿದ್ದಳು.

ಬದುಕು ಎಂದರೆ ಸಂಬಂಧಗಳ ಜೋಡಣೆ ಮತ್ತು ವಿಘಟನೆ. ಹಲವು ಬಾರಿ ಅದು ಬಿಡುಗಡೆಯ ಹಂಬಲವೂ ಆಗಿರುತ್ತದೆ.

ಒಂದು ಕಾಲದಲ್ಲಿ ರಾಧಿಕಾ ರಾಜೀವನ ಬದುಕಿನ ಒಂದು ಭಾಗವಾಗಿದ್ದಳು. ನಾಟಕ, ಯಕ್ಷಗಾನ, ಸೆಮಿನಾರು, ಕ್ಷೇತ್ರಕಾರ್ಯಗಳಲೆಲ್ಲಾ ಅವಳು ಅವನ ಸಂಗಾತಿ. ನಸುಗಪ್ಪು ಬಣ್ಣದ ಆ ಹುಡುಗಿ ರಾಜೀವನ ಜೀವದ ಗೆಳತಿಯಾಗಿದ್ದಳು. ಅವಳ ಗೈರು ಹಾಜರಿ ಅವನಲ್ಲಿ ಬ್ರಹ್ಮಾಂಡದಷ್ಟು ಶೂನ್ಯತೆಯನ್ನು ಉಂಟುಮಾಡುತ್ತಿತ್ತು. ರಜೆ ಬಂದಾಗಲೆಲ್ಲಾ ಕಂಬೈನ್ಡ್ ಸ್ಟಡಿಯ ನೆಪದಲ್ಲಿ ಅವಳನ್ನು ತನ್ನ ಮನೆಗೆ ಆಮಂತ್ರಿಸುತ್ತಿದ್ದ. ನಿಷ್ಕಪಟ ಮನಸ್ಸಿನ ರಾಧಿಕಳನ್ನು ಕಂಡರೆ ರಾಜೀವನ ತಾಯಿ ಅನುಸೂಯರಿಗೂ ವಿಶೇಷ ಮಮತೆ. ತಂಗಿ ಕುಸುಮ ತನಗೊಬ್ಬಳು ಜೊತೆಗಾತಿ ಸಿಕ್ಕಿದಳೆಂದು ಹಿರಿಹಿರಿ ಹಿಗ್ಗುತ್ತಿದ್ದಳು.

ರಾಜೀವನಿಗೆ ಯಕ್ಷಗಾನದ ಶೋಕಿ ಜಾಸ್ತಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ವಾರ್ಷಿಕೋತ್ಸವದಂದು ಹಳೆ ವಿದ್ಯಾರ್ಥಿಗಳವತಿಯಿಂದ ಸಾಮಾನ್ಯವಾಗಿ ಯಕ್ಷಗಾನ ಇದ್ದೇ ಇರುತ್ತಿತ್ತು. ರಾಜೀವನಿಗೆ ಪುಂಡು ವೇಷ ಕಟ್ಟಿಟ್ಟ ಬುತ್ತಿ. ರಾಧಿಕಾಳಿಗೂ ಅಷ್ಟಿಷ್ಟು ಕುಣಿತ ಬರುತಿತ್ತು. ಭಾಗವತಿಕೆಯ ಮೇಲೆ ಆಕೆಗೆ ವಿಶೇಷ ಆಸಕ್ತಿ. ಶಾಸ್ತ್ರೀಯ ಸಂಗೀತದ ಗಂಧಗಾಳಿಯೂ ಇಲ್ಲದವರು ಅಷ್ಟೊಂದು ಭಾವಪೂರ್ಣವಾಗಿ ಹಾಡುವುದನ್ನು ಕೇಳಿ ಆಕೆ ಅಚ್ಚರಿ ಪಡುತ್ತಿದ್ದಳು; ಮೈಮರೆಯುತ್ತಿದ್ದಳು.

’ತನಗೆ ಎಂಥ ಸಖಿಯಾಗಿದ್ದಳು ರಾಧೆ...!’ ಎಂದು ನಿಟ್ಟುಸಿರು ಬಿಡುತ್ತಾ ಮಗ್ಗುಲು ಬದಲಾಯಿಸಿದ ರಾಜೀವ. ಆಕೆಯನ್ನು ಮದುವೆಯಾಗಬೇಕೆಂದು ಒಂದು ದಿನವೂ ಕನಸು ಕಾಣಲಿಲ್ಲ. ವರ್ತಮಾನವೇ ಅಷ್ಟೊಂದು ಸುಂದರವಾಗಿದ್ದವು. ಭವಿಷ್ಯದ ಬಗ್ಗೆ ಯೋಚಿಸುವ ಪ್ರಮೆಯವೇ ಬರಲಿಲ್ಲ. ಆದರೆ ಆಕೆ ಮುಂದಿನ ತಿಂಗಳು ತನ್ನ ಮದುವೆ ಎಂದಾಗ ತಾನು ಒಳಗೊಳಗೆ ಕುಸಿದು ಹೋಗಿದ್ದು ಸತ್ಯ. ಅಂದು ಜುಲೈ ೧೮. ಆ ದಿನ ಈಗಲೂ ತನ್ನ ನೆನಪಿನಲ್ಲಿ ಹಚ್ಚಹಸಿರಾಗಿ ಉಳಿದಿದೆ ಅಂದರೆ ಅದಕ್ಕೆ ಏನರ್ಥ?

’ನನ್ನನು ಮದುವೆಯಾಗುತ್ತಿಯಾ?’ ಎಂದು ಕೇಳಿಬಿಡೋಣವೆಂದುಕೊಳ್ಳುತ್ತಿದ್ದ. ಆದರೆ ಇನ್ನೊಂದು ಮನಸ್ಸು ಪ್ರತಿರೋಧ ಒಡ್ಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು. ಅವಳನ್ನು ಮೃದುವಾಗಿ ಬಳಸಿ ಎದೆಗೊರಗಿಸಿಕೊಡು ನೆತ್ತಿಯ ಮೇಲೆ ಗಲ್ಲವೂರುವವರೆಗೆ ಅವನ ಕಲ್ಪನೆಗಳು ಗರಿಗೆದರುತ್ತಿದ್ದವು. ತುಟಿಗೆ ತುಟಿ ಬೆಸೆದು ಮೈಗೆ ಮೈ ಹೊಸೆದು ರತಿಕ್ರೀಡೆಯಾಡುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಅವನಿಂದಾಗುತ್ತಿರಲಿಲ್ಲ. ತನ್ನ ಪುರುಷತ್ವದಲ್ಲೇನಾದರೂ ಕೊರತೆಯಿರಬಹುದೇ, ಎಂದು ಆತ ಯೋಚಿಸಿದ್ದೂ ಇದೆ. ಅದನ್ನು ಪರೀಕ್ಷಿಸಿ ’ಹಾಗೇನೂ ಇಲ್ಲ’ ಎಂಬುದನ್ನು ದೃಢಪಡಿಸಿಕೊಂಡದ್ದೂ ಆಯಿತು.

ತನ್ನ ಬದುಕಿನಲ್ಲಿ ರಾಧೆಯ ಸ್ಥಾನ ಏನು? ಎಂದು ರಾಜೀವ ತೊಳಲಾಡುತ್ತಿರುವಾಗ ಇತ್ತ ರಾಧಿಕ ನಗುನಗುತ್ತಲೇ ಮದುವೆ ಮಾಡಿಕೊಂಡು ಬೆಂಗಳೂರು ಸೇರಿದಳು. ಇವನು ಮಂಗಳೂರಿನಲ್ಲೇ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿಕೊಂಡ. ಮದುವೆಯೂ ಆಯ್ತು. ಪತ್ನಿ ವಸುಂಧರ ಸುಸಂಸ್ಕೃತ ಮಹಿಳೆ. ಚುರುಕಾದ ಇಬ್ಬರು ಮಕ್ಕಳು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು?

ಸಾಮಾನ್ಯರಿಗೆ ಇಷ್ಟೇ ಸಾಕಾಗಿತ್ತೇನೋ, ಆದರೆ ರಾಜೀವನಿಗೆ ಇನ್ನೇನೋ ಬೇಕಾಗಿತ್ತು. ಸಂಜೆಯಾಯಿತೆಂದರೆ ಆವರಿಸಿಕೊಳ್ಳುವ ಶೂನ್ಯ. ಖಾಲಿತನ, ಪರಿಪೂರ್ಣವಾದ ಸಂಬಂಧವೊಂದರ ಹುಡುಕಾಟ. ’ರಾಧೆ ಇದ್ದಿದ್ದರೆ...’ ನಿಟ್ಟುಸಿರು...
"ನಿದ್ದೆ ಬಂದಿಲ್ವಾ?" ಎನ್ನುತ್ತಾ ವಸುಂಧರ ಮಗ್ಗುಲು ಬದಲಾಯಿಸಿ ಗಂಡನನ್ನು ತಬ್ಬಿಕೊಂಡು ಅವನ ಭುಜ ತಟ್ಟುತ್ತಾ ನಿದ್ದೆ ಹೋದಳು.

ಅತ್ತ ಎಚ್ಚರವೂ ಅಲ್ಲದ ಇತ್ತ ನಿದ್ರೆಯೂ ಅಲ್ಲದ ಸ್ಥಿತಿಯಲ್ಲಿರುವಾಗಲೇ ಅಲಾರಂ ಸದ್ದಾಯಿತು. ಎದ್ದವನೇ ಟೀ ಮಾಡಿಕೊಂಡು ಕುಡಿದು ಕಾರು ತಗೊಂಡು ಬಸ್ ಸ್ಟ್ಯಾಂಡಿಗೆ ಬಂದು ಬೆಂಗಳೂರು ಬಸ್ಸಿಗಾಗಿ ಕಾಯತೊಡಗಿದ. ರಾಧೆ ಈಗ ಹೇಗಾಗಿರಬಹುದು? ತಾಯ್ತನ, ಗೃಹಕೃತ್ಯಗಳು ಹುಡುಗಿಯರಿಗೆ ಸ್ಥೂಲಕಾಯವನ್ನು ತರುತ್ತದೆ ಎಂದುಕೊಳ್ಳುತ್ತಿರುವಾಗಲೇ ಬಸ್ ಬಂತು. ಅರೇ.... ಅದು ರಾಧೆಯಲ್ಲವೇ?

ಜುಬ್ಬ ಪೈಜಾಮ ತೊಟ್ಟ, ಸ್ವಚ್ಚಂದವಾಗಿ ಹಾರುತ್ತಿರುವ ಕೂದಲನ್ನು ಎಡಗೈನಿಂದ ಹಿಂದಕ್ಕೆ ಸರಿಸುತ್ತಾ ತನ್ನೆಡೆಗೆ ಮುಗುಳ್ನಕ್ಕ ಬಳ್ಳಿ ದೇಹದ ಯುವತಿಯನ್ನು ರಾಧಿಕಳೆಂದು ಗುರುತು ಹಿಡಿಯಲು ರಾಜೀವನಿಗೆ ಒಂದು ಕ್ಷಣ ಗಲಿಬಿಲಿಯಾಯಿತು. ಅವಳೇ ಮುಂದೆ ಬಂದು "ಹಾಯ್ ರಾಜಿ" ಎಂದು ಕೈ ಹಿಡಿದುಕೊಂಡಳು. ಅವಳನ್ನೇ ದಿಟ್ಟಿಸಿ ನೋಡುತ್ತಾ, ’ಎಷ್ಟು ಸುಂದರಿಯಾಗಿದ್ದಿಯಾ ನೀನು’ ಎಂದು ಮೆಲ್ಲನೆ ಅವಳ ಭುಜ ತಟ್ಟಿದ ರಾಜೀವ. ’ನೀನೆನೂ ಕಮ್ಮಿ ಇಲ್ಲ.’ ಎಂದು ತೋಳು ಹಿಡಿದು ತನ್ನೆಡೆಗೆ ತಿರುಗಿಸಿಕೊಂಡು ಅವನನ್ನೇ ದಿಟ್ಟಿಸಿ ’ಹಿಂದೆ ನೀನು ಹೀಗಿರಲಿಲ್ಲ’ ಎನ್ನುತ್ತಾ ಅವನ ಅಂಗೈಗಳನ್ನು ಮೃದುವಾಗಿ ಹಿಸುಕಿದಳು.

ಇಬ್ಬರೂ ಸ್ವಲ್ಪ ಹೊತ್ತು ಮೌನವಾದರು. ’ನಿನ್ನ ಪ್ರೋಗ್ರಾಂ ಏನೂಂತ ಗೊತ್ತಾಗಿಲ್ಲಾ. ಯಾವುದಾದರೂ ಹೋಟೇಲ್...’ಎಂದು ಅನುಮಾನಿಸುತ್ತಲೇ ಕೇಳಿದ ರಾಜೀವ. ತಕ್ಷಣ ರಾಧಿಕಳ ಮುಖ ಬಾಡಿ ಹೋಯಿತು. ’ನಿನ್ನ ಮನೆಗೆ ನಾ ಬರಬಾರದೇ..ನಿನ್ನ ಹೆಂಡ್ತಿಯೇನಾದರೂ.....?’ ಎಂದು ಅವನ ಮುಖ ನೋಡಿದಳು. ರಾಜೀವ ಮರುಮಾತಾಡದೆ ಅವಳ ಕೈಯಿಂದ ಬ್ಯಾಗ್ ತೆಗೆದುಕೊಂಡು ಎಡಗೈಗೆ ಬದಲಾಯಿಸಿ ಬಲಗೈಯನ್ನು ಅವಳೆಡೆಗೆ ಚಾಚಿದ.

ಕಾರು ಮುಂದಕ್ಕೆ ಚಲಿಸುತ್ತಿತ್ತು. ಮೌನ ಮಾತಾಡುತ್ತಿತ್ತು. ರಾಧಿಕ ಮೆಲ್ಲನೆ ಬಲಕ್ಕೆ ವಾಲಿ ಆತನ ಭುಜದ ಮೇಲೆ ತಲೆಯಿಟ್ಟಳು. ಅವನು ಎಡಗೈನಿಂದ ಅವಳ ಭುಜ ಬಳಸಿದ. ಅವಳು ಹಾಗೆಯೇ ಕಣ್ಮುಚ್ಚಿದಳು.

ಕಾರು ಮನೆಯ ಮುಂದೆ ನಿಂತಾಗ ರಾಧಿಕ ಭಾವಲೋಕದಿಂದ ಹೊರಬಂದಳು. ವಸುಂಧರ ಮನೆಯಿಂದ ಹೊರಬಂದಳು. ಸೇಹಿತ ಬರುತ್ತಾನೆಂದಿದ್ದರು, ಈಗ ನೋಡಿದರೆ ಸೇಹಿತೆ ಬಂದಿದ್ದಾಳೆ. ಯಾರಿರಬಹುದು? ಎಂದುಕೊಳ್ಳುತ್ತಲೇ ಸ್ವಾಗತಿಸಲು ಕಾರಿನ ಹತ್ತಿರ ಬಂದಳು.
’ಇವಳು ನನ್ನ ಬಾಲ್ಯ ಸೇಹಿತೆ ರಾಧಿಕಾ’ ಎಂದು ಪತ್ನಿಗೆ ಪರಿಚಯಸಿದ ರಾಜೀವ ರಾಧಿಕಳತ್ತ ತಿರುಗಿ, ’ಇವಳು ನನ್ನ ಗೃಹಲಕ್ಷ್ಮಿ, ವಸುಂಧರ..’ ಎಂದು ನಾಟಕೀಯವಾಗಿ ಪರಚಯಿಸಿದ.
ವಸುಂಧರ ರಾಧಿಕಳ ಕೈ ಹಿಡಿದು ಬರಮಾಡಿಕೊಂಡಳು.

ರಾಜೀವನ ಮೊದಲ ಮಗಳು ರಂಜಿತಾ ಸುಳ್ಯಕ್ಕೆ ವಾಸ್ತವ್ಯದ ಸಮ್ಮರ್ ಕ್ಯಾಂಪಿಗೆ ಹೋಗಿದ್ದಳು. ಅವಳ ರೂಮಿನಲ್ಲಿ ರಾಧಿಕಳ ಲಗೇಜನಿಟ್ಟು ಅಣಿ ಮಾಡಿದಳು ವಸುಂಧರಾ. ಸ್ನಾನ ತಿಂಡಿಗಳಾದವು. ರಾದಿಕಳಂತೆ ವಸುಂಧರಾ ಕೂಡಾ ಒಳ್ಳೆಯ ಅಭಿರುಚಿಯುಳ್ಳ ಮಾತುಗಾತಿಯಾಗಿದ್ದಳು. ಇಬ್ಬರೂ ಬಹುಕಾಲದ ಗೆಳತಿಯರಂತೆ ಹೊಂದಿಕೊಂಡುಬಿಟ್ಟರು.

ಇಬ್ಬರೂ ಹಂಪನಕಟ್ಟೆಗೆ ಹೋಗಿ ತಾಜ ಮೀನು ತಂದು ರುಚಿಯಾದ ಅಡುಗೆ ಮಾಡಿದರು. ಊಟ ಮುಗಿದ ಒಡನೆಯೇ ರಾಧಿಕಳಿಗೆ ಗಡದ್ದಾದ ನಿದ್ರೆ ಬಂತು. ನಿದ್ದೆಯಿಂದ ಎಚ್ಚೆತ್ತಾಗ ಹಬೆಯಾಡುವ ಚಹ ಜೊತೆಗೆ ಬಾಳೆಕಾಯಿ ಬಜ್ಜಿಯೂ ಬಂತು. ಇನ್ನೊಬ್ಬರ ಕೈನಲ್ಲಿ ಉಪಚಾರ ಹೇಳಿಸಿಕೊಂಡು ತಿಂಡಿ ತಿನ್ನುವುದರಲ್ಲಿ ಎಷ್ಟು ಗಮ್ಮತ್ತಿದೆ ಎಂದುಕೊಳ್ಳುತ್ತಲೇ ರ್‍ಆಧಿಕಾ ತಿಂಡಿ ತಿಂದಳು.

ಸಂಬಂಧಗಳನ್ನು ಸಂಭಾಳಿಸುವುದರಲ್ಲಿ ರಾದಿಕ ಬಹು ಜಾಣೆ. ತನ್ನ ಆತ್ಮೀಯ ವರ್ತುಲದೊಳಗಿನ ಯಾರಾದರೊಬ್ಬ ಗಂಡಸಿನ ಬಗ್ಗೆ ತನಗೇನಾದರು ಅನೂಹ್ಯವಾದ ಸೆಳೆತವೇನಾದರು ಹುಟ್ಟಿಬಿಟ್ಟರೆ ಅದನ್ನು ಅಲ್ಲಿಯೇ ಚಿವುಟಲು ಪ್ರಯತ್ನಿಸುತ್ತಾಳೆ. ಅದು ನಿಸರ್ಗ ಸಹಜವಾದ ಆಕರ್ಷಣೆ ಎಂಬುದು ಆಕೆಗೆ ಗೊತ್ತಿದೆ. ಆದರೆ ಸೆಳೆತದ ಗುಂಗು ಆವರಿಸಿಕೊಂಡರೆ ಅವಳು ಅದೀರ್‍ಅಳಾಗುತ್ತಾಳೆ. ತಕ್ಷಣ ಆಕೆ ಅತನ ಪತ್ನಿಯ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಒಂದು ಹೆಣ್ಣು ಇನ್ನೊಂದು ಪರಿಚಿತ ಹೆಣ್ಣಿಗೆ ಮೋಸ ಮಾಡಲಾರಳು ಎಂಬುದು ಅವಳ ನಂಬಿಕೆ. ’ತಾಯ್ತನ’ ಹಾಗೆ ಮಾಡಲು ಬಿಡಲಾರದು.

ರಾಜೀವನೆಡೆಗಿನ ಆಕರ್ಷಣೆ ಆ ತೆರನಾದ್ದಲ್ಲ. ಅದು ವ್ಯಾಖ್ಯೆಗೆ ನಿಲುಕದ್ದು. ಬಹುಶಃ ಆತ್ಮವನ್ನು ಹುಡುಕಿ ಬಂದ ಜೀವದ ಆಕರ್ಷಣೆ.

ಪೈಂಟಿಂಗ್ ಕ್ಲಾಸಿಗೆ ಹೋಗಿದ್ದ ಕಾರ್ತಿಕ ಬಂದ ನಂತರ ಎಲ್ಲರೂ ಸೇರಿ ಬೀಚಿಗೆ ಹೋದರು. ಇಪ್ಪತ್ತು ವರ್ಷಗಳ ಹಿಂದೆ ಓಡಾಡಿದ ಜಾಗದಲ್ಲಿ ಈಗ ಮತ್ತೊಮ್ಮೆ ರಾದಿಕಾ, ರಾಜೀವ ಜತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಅಂದಿಗೂ ಇಂದಿಗೂ ಅಪಾರ ಅಂತರವಿತ್ತು. ವಸುಂಧರೆಗೂ ಇದು ಗೊತ್ತಾಗುತ್ತಿತ್ತು.ಹಾಗಾಗಿ ಆಕೆ ಕುರುಕು ತಿಂಡಿ ತರುತ್ತೇನೆಂದು ಮಗನೊಡನೆ ಅಂಗಡಿಯತ್ತ ಹೋದಳು.

ರಾಜೀವನಿಗೆ ಆಕೆ ಇಲ್ಲಿಗೆ ಯಾಕೆ ಬಂದಿದ್ದಾಳೆ ಎಂಬ ಚಿಕ್ಕ ಕುತೂಹಲವಿತ್ತು. ಆದರೆ ಕೇಳಲು ಮುಜುಗರ. ಏನಾದರು ಮಾತಾಡಬೇಕಲ್ಲಾ ಎನಿಸಿ
’ಮಕ್ಕಳೇನು ಮಾಡುತ್ತಿದ್ದಾರೆ?’ ಎಂದ.
’ಮೊದಲನೆಯವಳು ಸೆಕೆಂಡ್ ಪಿಯುಸಿ, ಎರಡನೆಯವನು ಎಂಟನೇ ಕ್ಲಾಸ್. ಇಬ್ಬರೂ ತುಂಬಾ ಬುದ್ಧಿವಂತರು. ಆ ಮಟ್ಟಿಗೆ ನಾನು ಪರಮ ಸುಖಿ’.
’ಆ ಮಟ್ಟಿಗೆ’ ಶಬ್ದ ರಾಜೀವನಿಗೆ ಇನ್ನೇನೋ ರವಾನಿಸಿದಂತಾಯಿತು.
’ಯಶವಂತ ಹೇಗಿದ್ದಾರೆ?’
’ಚೆನ್ನಾಗಿದ್ದಾರೆ. ಪೀಲ್ಡ್ ನಲ್ಲಿ ಒಳ್ಳೆ ಹೆಸರಿದೆ. ಪ್ರಾಮಾಣಿಕ. ತನ್ನ ಕೆಲಸದ ಮೇಲಿರುವಷ್ಟು ನಿಷ್ಟೆ, ಶ್ರದ್ಧೆ, ಇನ್ಯಾವುದರ ಮೇಲೂ ಇಲ್ಲ. ಇದೇ ನಮ್ಮಿಬ್ಬರ ನಡುವೆ.....’ ಎಂದವಳೇ ಅರ್ಧಕ್ಕೆ ನಿಲ್ಲಿಸಿದಳು.
ರಾಜೀವನಿಗೆ ಮಾತು ಬದಲಾಯಿಸಬೇಕೆನಿಸಿತು.
’ನೀನು ಇಲ್ಲಿಗೆ ಬಂದ ಕಾರಣ....’ಮುಜುಗರದಿಂದಲೇ ತಡೆ ತಡೆದು ಕೇಳಿದ.
ನಡೆಯುತ್ತಿದ್ದವಳು ತಟ್ಟನೆ ನಿಂತು ಅವನನ್ನೇ ದಿಟ್ಟಿಸುತ್ತಾ,’ ಯಾಕೋ? ನಿನ್ನನ್ನು ಕಾಣಲು ನಾನು ಬರಬಾರದೇ?’
ರಾಜೀವ ಕಿರುನಗು ನಕ್ಕು ಅವಳ ತಲೆಗೊಂದು ಮೊಟಕಿದ. ಅವಳು ಅವನ ತೋಳು ಚಿವುಟಿದಳು. ಇಬ್ಬರೂ ಏನನ್ನೋ ನೆನಸಿಕೊಂಡು ಜೋರಾಗಿ ನಕ್ಕರು.
’ಏನದು ಅಷ್ಟೊಂದು ನಗು’ ಎನ್ನುತ್ತಾ ಕೈಯಲ್ಲಿ ಬೇಲ್ ಪುರಿ ಹಿಡಿದು ಬಂದ ವಸುಂಧರಾ ಅವರ ಜೊತೆ ಸೇರಿದಳು.
ಎಲ್ಲರೂ ರುದ್ರಪಾದೆ ಹತ್ತಿ ಕಡಲಿಗೆ ಮುಖಮಾಡಿ ಕುಳಿತು ಬೇಲ್ ಪುರಿ ತಿನ್ನುತ್ತಾ ಮುಳುಗುತ್ತಿರುವ ಸೂರ್ಯನ ಕೆಂಬಣ್ಣ ತೆರೆಗಳೊಡನೆ ಚೆಲ್ಲಾಟವಾಡುತ್ತಿರುವುದನ್ನು ನೋಡುವುದರಲ್ಲಿ ಮಗ್ನರಾದರು.
ರಾದಿಕಳಿಗೆ ಕಡಲೆಂದರೆ ಹುಚ್ಚು ಮೋಹ. ಅಬ್ಬರದ ತೆರೆಗಳನ್ನು ದಡಕ್ಕಪ್ಪಳಿಸುವ ಪರಿ ನೋಡಿದರೆ ’ನನ್ನ ಮುಂದೆ ನೀನು ಅಲ್ಪ. ತಾಕತ್ತಿದ್ದರೆ ನನ್ನನ್ನು ಗೆಲ್ಲು ಬಾ’ ಎಂದು ಸವಾಲು ಹಾಕುತ್ತಿರುವಂತೆ ಭಾಸವಾಗುತ್ತಿತ್ತು.

ಕಾಲೇಜು ದಿನಗಳಲ್ಲಿ ಕಡಲಿಗೆ ಬಂದಾಗಲೆಲ್ಲಾ ಮರಳ ಮೇಲೆ ’ ಸಮುದ್ರರಾಜ, ಐ ಲವ್ ಯೂ’ ಎಂದು ಬರೆಯುವುದು, ಅದನ್ನು ಅಲೆಗಳು ಅಳಿಸಿ ಹಾಕುತ್ತವೆಯೇನೋ ಎಂದು ಕಾತರದಿಂದ ನೋಡುವುದು, ಅಳಿಸಿದರೆ ಸಮುದ್ರರಾಜನಿಗೆ ತನ್ನಲ್ಲಿ ಪೇಮವಿದೆ ಎಂದು ಸಂಭ್ರಮವಿಸುವುದು, ಅಳಿಸದಿದ್ದರೆ ತನ್ನ ಬಗ್ಗೆ ಉಪೇಕ್ಷೆಯಿದೆ ಎಂದು ಮನಸ್ಸು ಬಾಡಿಸಿಕೊಳ್ಳುವುದು.
ಅದನ್ನೆಲ್ಲ ನೆನೆಸಿಕೊಂಡು ರಾಧಿಕಳ ಮುಖದಲ್ಲಿನಗು ಲಾಸ್ಯವಾಡಿತು.ಇನ್ನೊಮ್ಮೆ ಬಂದಾಗ ಅಂದಿನ ಎಲ್ಲಾ ಗೆಳೆಯ-ಗೆಳತಿಯರ ವಿಳಾಸ ಪತ್ತೆ ಮಾಡಿ ಸಂಬಂಧಗಳನ್ನು ಪುನರ್ ಜೋಡಿಸಬೇಕು ಎಂದುಕೊಂಡಳು.

ಯಶವಂತನ ಜೊತೆ ಬಂದು ಈ ರುದ್ರಪಾದೆಯ ಮೇಲೆ ಕುಳಿತು ಸಮುದ್ರದ ರುದ್ರ ರಮಣೀಯ ದೃಶ್ಯವನ್ನು ನೋಡಬೇಕೆಂದು ಎಷ್ಟೊಂದು ಹಂಬಲಿಸಿದ್ದಳು. ಮದುವೆಯಾದಂದಿನಿಂದ ತೀರಾ ಇತ್ತೀಚಿನವರೆಗೂ ಕಂಡಂತ ಕನಸದು. ಆದರೆ ಅದು ಕನಸಾಗಿಯೇ ಉಳಿಯಿತು. ಅವಳಿಂದ ನಿಟ್ಟುಸಿರು ಹೊಮ್ಮಿತು.
’ರಾತ್ರಿಯಿಡಿ ಪ್ರಯಾಣ ಮಾಡಿ ನಿನ್ಗೆ ಆಯಾಸ ಆಗಿರ್ಬೇಕು. ನಾಳೆ ಬೇಕಾದ್ರೆ ಬರೋಣ.’ ಎನ್ನುತ್ತಾ ಎದ್ದ ರಾಜೀವ.
’ನಾಳೆ ರಾತ್ರಿ ಬೆಂಗಳೂರಿಗೆ ವಾಪಾಸ್ಸಾಗ್ಬೇಕು’ ಎನ್ನುತ್ತಾ ಬಟ್ಟೆ ಕೊಡವಿಕೊಂಡಳು.
’ಒಂದೆರಡು ದಿನ ಇದ್ದು ಹೋಗಬಾರದೇ? ನಮ್ಮವರಿಗೆ ನೀವೊಬ್ಬರೇ ಆತ್ಮೀಯರೆಂದು ಅವರು ಆಗಾಗ ಹೇಳುತ್ತಿದ್ರು. ನಿಮ್ಮನ್ನು ನೋಡುವ ಕುತೂಹಲವೂ ನನಗಿತ್ತು. ಈಗ ನನಗೂ ನೀವು ಹತ್ತಿರದವರೆನಿಸುತ್ತಿದೆ’ ಎಂದು ವಸುಂಧರೆಯೂ ಒತ್ತಾಯಿಸಿದಳು.
’ಇನ್ನೊಮ್ಮೆ ಖಂಡಿತವಾಗಿಯೂ ಬರುತ್ತೇನೆ’ ಅವಳ ಧ್ವನಿ ಕಂಪಿಸಿದ್ದು ರಾಜೀವನ ಅನುಭವಕ್ಕೆ ಬಂತು.
ಯಾಕೆ, ನನ್ನ ರಾಧೆ ನೆಮ್ಮದಿಯಾಗಿಲ್ಲವೇ?
ಮರುದಿನ ಬೆಳಿಗ್ಗೆ ಎಷ್ಟೇ ಒತ್ತಾಯ ಮಾಡಿದರೂ ರಾಧಿಕ ನಿಲ್ಲಲಿಲ್ಲ. ಕಳುಹಿಸಿ ಕೊಡಲೆಂದು ಸಿದ್ದನಾದ ರಾಜೀವನನ್ನು ನೋಡಿ, ’ರಂಜಿತಾಳ ಮನೆಗೆ ಹೋಗುತ್ತಿದ್ದೇನೆ. ನೀನೂ ಬಂದರೆ ಚೆನ್ನಾಗಿರುತ್ತಿತ್ತು. ಎಂದಳು.
’ರಂಜಿತಾ ಇಲೆ ಇದ್ದಾಳಾ? ನನಗೆ ಗೊತ್ತೆ ಇರಲಿಲ್ಲಾ..’ಎಂದ ರಾಜೀವ.
’ಅವರೊಬ್ಬರೇ ಹುಡುಕಿಕೊಂಡು ಹೋಗ್ಬೆಕಲ್ಲಾ. ನೀವೂ ಜೋತೆಯಲ್ಲಿ ಹೋಗಿ’ ಎಂದಳು. ವಸುಂಧರಾ.
’ಹೆಂಗಸರ ಕಷ್ಟ ಹೆಂಗಸರಿಗೆ ಮಾತ್ರ ಅರ್ಥ ಆಗುತ್ತೆ, ಅಲ್ವಾ ವಸು.’ ಎಂದು ನಕ್ಕಳು ರಾಧಿಕಾ.
ರಾಧಿಕಾಳನ್ನು ಪ್ರೀತಿಯಿಂದ ವಸುಂಧರಾ ಬೀಳ್ಕೊಟ್ಟಳು.
ಕಾರು ಎಕ್ಕೂರನ್ನು ದಾಟಿ ಪಂಪ್ ವೆಲ್ ಹತ್ತಿರಕ್ಕೆ ಬಂದಾಗ ’ರಂಜಿತಳ ಮನೆ ಯಾವ ಕಡೆಗೆ’ ಎಂದ ರಾಜೀವ.
ರಾಧಿಕಾ ಅವನನ್ನೇ ಆಳವಾಗಿ ದಿಟ್ಟಿಸಿ ನೋಡಿ,’ಹೋಟೇಲ್ ನವರತ್ನಕ್ಕೆ ಹೋಗೋಣ’ ಎಂದಳು.
ಯಾಕೆ ಎಂದು ಪ್ರಶ್ನಿಸಬೇಕೆನಿಸಿದರೂ ಹಿಂದಿನ ದಿನಗಳ ಅವಳ ಹಟಮಾರಿತನ ನೆನಪಾಗಿ ಹೋಟೇಲಿನತ್ತ ಕಾರು ತಿರುಗಿಸಿದ. ಹೋಟೇಲ್ ಮುಂದೆ ಕಾರು ನಿಂತಿತು. ತಾನೇ ರಿಸೆಪ್ಷನ್ ಬಳಿ ಹೋಗಿ ರೂಂ ಪಡೆದು ಲಿಪ್ಟ್ ನತ್ತ ನಡೆದಳು. ರಾಜೀವ ಮೌನವಾಗಿ ಹಿಂಬಾಲಿಸಿದನು.

ರೂಮಿಗೆ ಬಂದವಳೇ ಹಾಸಿಗೆ ಮೇಲೆ ದೊಪ್ಪೆಂದು ಬಿದ್ದಳು. ರಾಜೀವನಿಗೆ ಏನೂ ತೋಚದೆ ಕಿಟಿಕಿಯನ್ನು ತೆರೆಯುತ್ತಾ ದೂರದಲ್ಲಿ ಕಾಣುತ್ತಿರುವ ಸಮುದ್ರವನ್ನೊಮ್ಮೆ ಆಕೆಯನ್ನೊಮ್ಮೆ ದಿಟ್ಟಿಸತೊಡಗಿದನು. ಸ್ವಲ್ಪ ಹೊತ್ತಿನ ನಂತರ ನಿಧಾನವಾಗಿ ರಾಜೀವನ ಹತ್ತಿರ ಬಂದ ರಾಧಿಕ ಅವನ ಕೈ ಹಿಡಿದುಕೊಂಡಳು. ಪವಿತ್ರ ಮುಂಜಾವಿನಲ್ಲಿ ಪಾರಿಜಾತ ಪುಷ್ಪ ಮೆಲ್ಲನೆ ಧರೆಯನ್ನು ಸ್ಪರ್ಶಿಸುವಂತೆ ಮೆಲ್ಲನೆ ಅವನ ಎದೆಗೊರಗಿದಳು. ಅರೆಗಣ್ಣು ಮುಚ್ಚಿದ ಆಕೆ ಈ ಲೋಕದಲ್ಲಿರುವಂತೆ ಕಾಣುತ್ತಿರಲಿಲ್ಲ. ರಾಜೀವ, ಅವಳನ್ನು ಮೃದುವಾಗಿ ತೋಳುಗಳಿಂದ ಬಳಸಿ ಮಂಚದ ಬಳಿ ತಂದು ಹಾಸಿಗೆಯ ಮೇಲೆ ಮಲಗಿಸಿ ಮೇಲೇಳಬೇಕೆನ್ನುವಷ್ಟರಲ್ಲಿ ಆಕೆ ಆತನ ಕೈ ಹಿಡಿದು ಕುಳ್ಳಿರಿಸಿದಳು. ಅವನು ಏನೋ ಹೇಳಲೆಂದು ಬಾಯ್ತೆರೆದಾಗ ಅವಳು ಮಾತಾಡದಂತೆ ತಡೆದಳು.

ಆ ದಿವ್ಯ ಘಳಿಗೆಯನ್ನು ಪೂರ್ತಿಯಾಗಿ ಅನುಭವಿಸುತ್ತಿರುವಂತೆ ಅವನತ್ತ ಸರಿದು ತೊಡೆಯ ಮೇಲೆ ತಲೆಯಿಟ್ಟಳು. ಹೊಟ್ಟೆಯಲ್ಲಿರುವ ಮಗುವಿನಂತೆ ಕಾಲುಗಳನ್ನು ಮಡಿಚಿ, ಗಲ್ಲದ ಮೇಲೆ ಕೈಗಳನ್ನಿಟ್ಟುಕೊಂಡು ಮಗ್ಗುಲಾಗಿ ಮಲಗಿದಳು. ರಾಜೀವನಿಗೆ ಏನೂ ತೋಚದೆ ಸುಮ್ಮನೆ ಅವಳ ಕೂದಲು ಸವರುತ್ತಾ ಕುಳಿತುಕೊಂಡ.

ಸ್ವಲ್ಪ ಹೊತ್ತಿನಲ್ಲಿ ತನ್ನ ಪ್ಯಾಂಟ್ ಒದ್ದೆಯಾದ ಅನುಭವವಯ್ತು. ಬಗ್ಗಿ ನೋಡಿದರೆ ಮುಚ್ಚಿದ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯುತ್ತಿದೆ. ಬಹುಕಾಲದಿಂದ ತಡೆಹಿಡಿದಿದ್ದ ಭಾವನೆಗಳ ಮಹಾಪೂರವಿರಬೇಕು. ಹರಿದುಬಿಡಲಿ. ಸ್ವಾಭಿಮಾನದ ಹೆಣ್ಣು. ಎಲ್ಲಿಯೂ, ಯಾರೆದುರೂ ಇದುವರೆಗೆ ತನ್ನ ಅಂತರಂಗವನ್ನು ಬಿಚ್ಚಿಟ್ಟಿರಲಾಳು ಎಂದುಕೊಳ್ಳುತ್ತಾ, ಬಲಗೈನಿಂದ ಅವಳನ್ನು ಬಾಚಿ ತನ್ನ ಹೊಟ್ಟೆಯೆಡೆಗೆ ಇನ್ನಷ್ಟು ಒತ್ತಿಕೊಂಡ.

ಎಷ್ಟೋ ಹೊತ್ತು ರಾಜೀವ ಹಾಗ್ಯೇ ಕುಳಿತಿದ್ದನು. ಕಾಲುಗಳು ಚೋಮುಗಟ್ಟಿ ನೋಯಲಾರಂಭಿಸಿದಾಗ ಮೆಲ್ಲಗೆ ಅವಳ ಮುಖದೆಡೆಗೆ ಬಾಗಿದ. ಶತಮಾನಗಳಿಂದ ನಿದ್ದೆಯೇ ಮಾಡಿಲ್ಲವೇನೋ ಎಂಬಂತೆ ಶಾಂತಳಾಗಿ ನಿದ್ರಿಸುತ್ತಿದ್ದಳು. ರಾಜೀವನಿಗೆ ಅಕ್ಕರೆ ಉಕ್ಕಿ ಬಂತು. ಮೆಲ್ಲನೆ ಬಾಗಿ ಅವಳ ಹಣೆಯ ಮೇಲೆ ಹೂ ಮುತ್ತನ್ನಿತ್ತ. ಆಕೆ ನಿದ್ದೆಯಲ್ಲಿಯೇ ಹೊರಳಿ ಇನ್ನಷ್ಟು ಹತ್ತಿರಕ್ಕೆ ಸರಿದಳು.

ಇವಳ ಸಂಸಾರದಲ್ಲೇನಾದರು ತೊಡಕಿರಬಹುದೇ? ಎಂದು ಚಿಂತಿಸುತ್ತಲೇ ತುಂಬಾ ಹೊತ್ತು ಸುಮ್ಮನೆ ಕುಳಿತ ರಾಜೀವ. ನೀರು ಕುಡಿಯಬೇಕೆನಿಸಿತು. ಮೆಲ್ಲನೆ ಅವಳನ್ನು ಹಾಸಿಗೆಯಲ್ಲಿ ಮಲಗಿಸಿ ಗಂಟಲಿಗೆ ನೀರು ಸುರಿದುಕೊಂಡ. ಪ್ಯಾನ್ ಹಾಕಿ ಕುರ್ಚಿಯಲ್ಲಿ ಒರಗಿಕೊಂಡ.

ಎಚ್ಚರ ಆದಾಗ ಮದ್ಯಾಹ್ನವಾಗಿತ್ತು. ’ಎನೋ ಕುಂಭಕರ್ಣ, ಬೇಗ ಎದ್ದು ರೆಡಿಯಾಗು. ಸಂಜೆ ಮರವಂತೆಗೆ ಹೋಗ್ಬೇಕು’ ಎಂದಳು ರಾಧಿಕ. ರಾಜೀವನಿಗೆ ಆಶ್ಚರ್ಯವಯ್ತು; ಸ್ವಲ್ಪ ಹೊತ್ತಿನ ಹಿಂದಿನ ರಾಧಿಕ ಇವಳೆನಾ...?

ಮರವಂತೆಗೆ ಮಂಗಳೂರಿನಿಂದ ಎರಡೂವರೆ ಘಂಟೆಗಳ ಪಯಣ. ದಾರಿಯುದ್ದಕ್ಕೂ ತಮ್ಮ ಕಾಲೇಜು ದಿನಗಳನ್ನು ಆ ಕಾಲದ ಸೇಹಿತರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಹಾದಿ ಸವೆದದ್ದೇ ಗೊತ್ತಾಗಲಿಲ್ಲ.

ಸೂರ್ಯ ಮುಳುಗುವ ವೇಳೆಗೆ ಅವರು ಮರವಂತೆ ಬೀಚಿನಲ್ಲಿದ್ದರು. ಕಡಲಂಚಿನಲ್ಲಿ ಮರೆಯಾಗುತ್ತಿದ್ದ ರಕ್ತವರ್ಣದ ದಿನಕರನನ್ನು ಕಣ್ತುಂಬಿಸಿಕೊಂಡರು. ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಏಕಕಾಲದಲ್ಲಿ ನೋಡಬಹುದಾದ ಅಪರೂಪದ ಸ್ಥಳ ಇದು. ತಾವು ಒಂದಷ್ಟು ಜನ ಪ್ರೆಂಡ್ಸ್ ಹುಣ್ಣಿಮೆಯ ರಾತ್ರಿಯಲ್ಲಿ ಇಡೀ ದಿನ ಇಲ್ಲಿ ಕಳೆದ ರಸಘಳಿಗೆಗಳನ್ನು ಅವರು ನೆನಪಿಸಿಕೊಂಡರು.

ಒಂದು ಬದಿಯಲ್ಲಿ ಶಾಂತವಾಗಿ ಹರಿಯುವ ಸೌಪರ್ಣೀಕಾ ನದಿ. ಇನ್ನೊಂದು ಬದಿಯಲ್ಲಿ ಬೊರ್ಗೆರೆಯುತ್ತಿರುವ ಕಡಲು. ಸುತ್ತೆಲ್ಲಾ ಹಾಲು ಚೆಲ್ಲಿದಂತ ಬೆಳದಿಂಗಳು. ಕಡಲ ಕೊರೆತ ತಡೆಯಲು ಹಾಕಿದ ಬಂಡೆಗಲ್ಲುಗಳ ಮೇಲೆ ಕುಳಿತ ಆ ಜೋಡಿ. ಬಹುಶಃ ಅವರು ಶಾಪಗ್ರಸ್ತ ಕಿನ್ನರ ದಂಪತಿಗಳೇ ಇರಬೇಕು!
[ಆರು ವರ್ಷಗಳ ಹಿಂದೆ ಕಥೆ ಬರೆಯುವ ಪ್ರಯತ್ನದಲ್ಲಿ ಮೂಡಿ ಬಂದ ಬರಹ ಇದು. ]

Tuesday, November 11, 2008

’ಬಿಂಬ’ದಿಂದ ’ಬಿಂಬ’ಕ್ಕೆ




ಅವನನ್ನು ನೋಡಿದ ಮೊದಲ ದಿನವೇ ಅವಳಿಗನ್ನಿಸಿತ್ತು ’ಇವನು, ಅವನನ್ನು ಹೋಲುತ್ತಾನಲ್ಲಾ..!’
ಅವಳು ನೋಡಿಯೇ ನೋಡಿದಳು... ಮತ್ತೆ ಮತ್ತೆ ನೋಡಿದಳು. ನೋಡುತ್ತಾ ಹೋದಳು.


ಒಂದು ದಿನ ಅವನು ತುಟಿಯಂಚಿನಲ್ಲಿ ನಕ್ಕ. ಇಲ್ಲಾ... ಅವನ ಕಣ್ಣು ನಕ್ಕಿತು. ಇವಳಲ್ಲಿ ಸಣ್ಣ ಕಂಪನ. ಅವನು ಬರುತ್ತಾನೆಂಬ ನಂಬಿಕೆಯಿಂದಲೇ ಕಲಾಕ್ಷೇತ್ರದಲ್ಲಿ ನಡೆಯುವ ಪ್ರತಿ ನಾಟಕಕ್ಕೂ ಅವಳು ಹಾಜರಾಗುತ್ತಿದ್ದಳು. ಅವನ ನಿರೀಕ್ಷೆಯೂ ಅದೇ ಆಗಿತ್ತು.

ಮನಸ್ಸಿನ ಮಾತು ಕಣ್ಣಲ್ಲಿ ಪ್ರತಿಪಲಿಸಲು ಕ್ಷಣಾರ್ಧ ಸಾಕು. ಆದರೆ ಬಾಯಿಗೆ ಬರಲು ವರ್ಷಗಳೇ ಹಿಡಿಯುತ್ತವೆ. ಬರದೆಯೂ ಹೋಗಬಹುದು. ಹಾಗೆ ಬಂದ ದಿನ ಇರುವ ಸಂಬಂಧ ಮತ್ತಷ್ಟು ಗಟ್ಟಿಯಾಗಬಹುದು, ಇಲ್ಲವೇ ಸಡಿಲವಾಗಲೂ ಬಹುದು. ಈ ಅರಿವೂ ಇಬ್ಬರಲ್ಲಿಯೂ ಇತ್ತು. ಹಾಗಾಗಿ ಆ ನವಿರು ಸಂಬಂಧ ಮೌನವಾಗಿ ಮುಂದುವರಿದಿತ್ತು.

ಆತನ ನಡವಳಿಕೆಯಲ್ಲಿ ಅವಳಿಗೆ ನಂಬಿಕೆ ಬೆಳೆಯುತ್ತಾ ಹೋಯಿತು. ಒಂದು ದಿನ ಆತ ’ಟೀ ಕುಡಿಯೋಣ ಬನ್ನಿ’ ಅಂದ. ಅವಳು ಸಮ್ಮತಿಸಿದಳು. ಇಬ್ಬರಿಗೂ ಲಿಂಬು ಟೀ ಇಷ್ಟ. ತಮ್ಮ ಅಭಿರುಚಿ ಒಂದೇ ಆಗಿರುವುದರ ಬಗ್ಗೆ ಪರಸ್ಪರ ಅಚ್ಚರಿ ವ್ಯಕ್ತಪಡಿಸಿಕೊಂಡರು.

ಅಮೇಲೆ ಅವರು ಅಲ್ಲಿ-ಇಲ್ಲಿ ಜೊತೆಯಾಗಿ ಕಾಣಿಸಿಕೊಳ್ಳತೊಡಗಿದರು. ಅದಕ್ಯಾರು ಅಂಥ ಮಹತ್ವ ಕೊಡಲಿಲ್ಲ. ಈ ಮಹಾನಗರದಲ್ಲಿ ಎಲ್ಲರೂ ಇಂಥಹದೊಂದು ಸಾಂಗತ್ಯಕ್ಕಾಗಿ ಹಾತೊರೆಯುವವರೇ ಆಗಿರುತ್ತಾರೆ. ಒಂದಷ್ಟು ಜನ ಅವರ ಭಾಗ್ಯಕ್ಕೆ ಕರುಬಿದರು.

ಅವನ ಪೀತಿಯ ಕಂಪನ ಅವಳ ಅನುಭವಕ್ಕೆ ಬರುತಿತ್ತು. ಭಾವನಾತ್ಮಕವಾಗಿ ಅವಳು ಅವನಲ್ಲಿ ಐಕ್ಯವಾಗುತ್ತಾ ಹೋದಳು. ನಂಬಿಕೆಯ ಶಿಖರದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಳ್ಳತೊಡಗಿದಳು.

ಕನ್ಪೆಕ್ಷನ್ ಬಾಕ್ಸ್ ನಲ್ಲಿ ನಿಂತು ಎಲ್ಲವನ್ನೂ ಹೇಳಿಕೊಂಡ ಹಾಗೆ ಆಕೆ ಬಯಲಾಗುತ್ತಾ ಬಂದಳು. ಆತ ನಿರಂತರ ಆಲಿಸುತ್ತಲೇ ಹೋದ. ಅವಳ ಅವಲಂಬನೆ ಅತನಿಗೆ ಹಿತವೆನಿಸುತಿತ್ತು; ಹೆಮ್ಮೆಯಾಗುತಿತ್ತು.

ಈಗ ವೈಯಕ್ತಿಕ ಸಂಘರ್ಷವೊಂದರ ಸಂದರ್ಭದಲ್ಲಿ ತನ್ನ ಜೊತೆಯಾಗು ಎನ್ನುತಿದ್ದಾನೆ. ಅದವಳ ಜಾಯಮಾನಕ್ಕೆ ಒಗ್ಗಿದ್ದಲ್ಲ. ನಿರಾಕರಿಸಿದಳು.

ಅವನು ಸಿಡಿದು ನಿಂತ. ಅವನ ಹೊಸ ರೂಪ ಕಂಡು ಅವಳು ದಂಗಾದಳು. ’ನೀನು ನನ್ನಲ್ಲಿ ಎನೆಲ್ಲಾ ಹೇಳಿಕೊಂಡಿದ್ದಿ ಗೊತ್ತಾ...? ಅದನ್ನ ನಾನು ಇದುವರೆಗೂ ಯಾರಿಗೂ ಹೇಳಿಲ್ಲ...’ ಮೌನ ಮೊಗ್ಗೆಯನೊಡೆದು ಮಾತಾಗಿ ಹೊರಬರುತಿತ್ತು!

ಅವಳು ಜರ್ರನೆ ಇಳಿದು ಹೋದಳು. ಅವಳು ಪ್ರಾಕ್ಟಿಕಲ್ ಕಿಟಿಸಿಸಂ ವಿದ್ಯಾರ್ಥಿ. ಒಂದು ಶಬ್ದ ಕೊಡುವ ಹತ್ತಾರು ಅರ್ಥ, ಯಾವ ಕಾಂಟ್ಕ್ಸೆಟ್ ಒಳಗಡೆ ಯಾವ ಅರ್ಥ ಸ್ಫುರಿಸಬಲ್ಲುದು ಎಂಬುದೆಲ್ಲಾ ಅವಳಿಗೆ ಗೊತ್ತು. ಕ್ಷಣಾರ್ಧದಲ್ಲಿ ಅವಳು ನಿರ್ಧರಿಸಿಬಿಟ್ಟಳು; ಇಂದು ಈಸಂಬಂಧದ ಎಕ್ಸ್ ಪಯರಿ ಡೇಟ್. ಮುಗಿಯಿತು; ಎಲ್ಲವೂ ಮುಗಿಯಿತು.

ಆಯ್ಕೆಗಳು ಇಲ್ಲದಿದ್ದಾಗ್ಯೂ ನಿಷ್ಟೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಳು. ಅದವಳ ಶಕ್ತಿ.ಚಿಕ್ಕಂದಿನಿಂದಲೇ ಅದವಳಿಗೆ ಸಿದ್ಧಿಸಿತ್ತು. ಅಳು ಅವಳ ಪಾಲಿಗಂತೂ ಅಸಹಾಯಕತೆಯ ಲಕ್ಷಣ ಅಲ್ಲ. ಆಪ್ತರ ವಿಷಯಕ್ಕೆ ಬಂದಾಗ ಭಾವನೆಗಳೇ ಅವಳನ್ನಾಳುತ್ತವೆ.. ಇಷ್ಟರವರೆಗೆ ಅವನ ವಿಷಯಕ್ಕೆ ಭಾವನೆಗಳೇ ಮುನ್ನೆಲೆಗೆ ಬರುತ್ತಿದ್ದವು, ಈಗ..

ತಟ್ಟನೆ ಅವಳಿಗೆ ಹೊಳೆಯಿತು; ಅವನ ಇರವಿನ ಬಗ್ಗೆ ತನ್ನಲ್ಲಿ ಯಾವುದೇ ಆಧಾರ ಇಲ್ಲ, ಅವನ ಸಂಪರ್ಕದ ಕೊಂಡಿ ಕೇವಲ ಮೊಬೈಲ್ ಮಾತ್ರ, ಸಿಮ್ ಬದಲಾಯಿಸಿದರೆ ಅವನನ್ನು ಈ ಮಹಾನಗರದಲ್ಲಿ ಪತ್ತೆ ಮಾಡುವುದು ಸಾಧ್ಯವೇ ಇಲ್ಲ, ಆದರೆ ಅವನಿಗೆ ತನ್ನ ಮನೆ ಗೊತ್ತು, ಆಪೀಸು ಗೊತ್ತು, ಬಂಧು- ಬಾಂಧವರು ಗೊತ್ತು. ಪ್ರೆಂಡ್ಸ್ ಗೊತ್ತು. ಮನಸ್ಸು ಎಚ್ಚರಿಸಿತು ’ನೀನು ರೂಪಕಗಳಲ್ಲೇ ಉಳಿದು ಬಿಟ್ಟೆ. ವಾಸ್ತವಕ್ಕೆ ಬಾ’

ಅವನು ಯಾರಲ್ಲಿ ಹೇಳಬಹುದೆಂಬ ಸ್ಪಷ್ಟ ಕಲ್ಪನೆ ಅವಳಿಗಿತ್ತು. ಅಂದರೆ ಆತ ’ಅಲ್ಲಿಗೆ’ ತಲುಪಲು ತನ್ನನ್ನು ಏಣಿಯಾಗಿ ಬಳಸಿಕೊಂಡುಬಿಟ್ಟನೇ..?

ಅವಳಿಗೆ ತಡೆದುಕೊಳ್ಳಲಾಗಲಿಲ್ಲ. ಕುರ್ಚಿಯಲ್ಲಿ ಕುಳಿತಿದ್ದವಳು ತಟ್ಟನೆ ನೆಲಕ್ಕೆ ಕುಸಿದಳು. ಗೋಡೆಗೊರಗಿ ಮಂಡಿ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ತಲೆ ಭಾರವಾಯಿತು. ಗಂಟಲ ಪಸೆ ಆರಿ ಹೋಯಿತು. ನೀರು ಬೇಕೇ ಬೇಕು ಅನಿಸಿತು. ಗೋಡೆ ಹಿಡಿದುಕೊಂಡು ತಡವರಿಸುತ್ತಲೇ ಅಡುಗೆ ಕೋಣೆಗೆ ಹೋಗಿ ಜಗ್ಗಿನಿಂದ ನೀರು ಬಗ್ಗಿಸಿಕೊಂಡಳು. ಕೈ ನಡುಗಿ ನೀರು ಗ್ಲಾಸಿನ ಸುತ್ತೆಲ್ಲಾ ಹರಿದಾಡಿತು. ಜಗ್ಗಿಗೇ ಬಾಯಿಟ್ಟು ನೀರು ಹೀರತೋಡಗಿದಳು. ಧರಿಸಿದ್ದ ಟಾಪ್ ಒದ್ದೆಯಾಯಿತು,

ಹಾಸಿಗೆಯಲ್ಲಿ ಬಂದು ಬಿದ್ದುಕೊಂಡಳು. ದಿಂಬನ್ನು ಕೆನ್ನೆಗೆ ಒತ್ತಿಕೊಂಡು ಕವುಚಿ ಮಲಗಿದಳು. ತಲೆ ನೋಯಲು ಆರಂಭವಾಯಿತು. ಯಾರದಾದರು ಕೈಯನ್ನು ಬದ್ರವಾಗಿ ಹಿಡಿದುಕೊಳ್ಳಬೇಕು, ತೋಳನ್ನು ಅವುಚಿಕೊಳ್ಳಬೇಕೆನಿಸಿತು. ಆದರೆ ಇಹ ಲೋಕದ ಯಾರೂ ನೆನಪಾಗಲಿಲ್ಲ. ಡ್ರಾವರ್ ಎಳೆದು ಒಂದು ನಿದ್ರೆ ಮಾತ್ರೆ ನುಂಗಿ ಕಣ್ಮುಚ್ಚಿದಳು.

ಎಳೆ ಬಿಸಿಲು ಮುಖದ ಮೇಲೆ ಬಿದ್ದಾಗ ಎಚ್ಚರಾಯಿತು. ಕೈ ಅನಾಯಸವಾಗಿ ಮೊಬೈಲಿನತ್ತ ಹೋಯಿತು. ಮೊದಲ ಬಾರಿಗೆ ಅವನ ಮೆಸೇಜ್ ಮಿಸ್ ಆಗಿತ್ತು.

ಆಮೇಲೆಯೂ ಬರಲಿಲ್ಲ.

ಕೆಲವು ತಿಂಗಳು ಕಳೆಯಿತು. ಒಂದು ದಿನ ಅವಳು ಕೆನೆಟಿಕ್ ನಲ್ಲಿ ಹೋಗುತ್ತಿದ್ದಳು. ಪಕ್ಕದಲ್ಲೇ ಒಂದು ಪಲ್ಸರ್ ಪಾಸಾಯ್ತು ಅವಳು ತನ್ನಲ್ಲೇ ಅಂದುಕೊಂಡಳು ’ಇವನು ಅವನನ್ನು ಹೋಲುತ್ತಾನಲ್ಲಾ....’

ಅವಳು ಅಕ್ಸಿಲೇಟರ್ ತಿರುಗಿಸಿದಳು.

Saturday, March 22, 2008

’ಹೋಗು ದಕ್ಷನ ಮಗಳೇ’

ಅವಳ ಹೆಸರು ದಾಕ್ಷಾಯಿಣಿ.ತನ್ನ ಹೆಸರಿನ ಬಗ್ಗೆ ಅವಳಿಗೆ ವಿಪರಿತ ಮೋಹ ತನ್ನನು ಪರಿಚಯಿಸಿಕೊಳ್ಳುವಾಗಲೆಲ್ಲ ಹೆಚ್.ಎಸ್.ಶಿವಪ್ರಕಾಶ್ ಅವರ

’ಹೋಗು ದಕ್ಷನ ಮಗಳೇ
ನೀನು ತಿರುಗಿ ಬರುವೆ ಅಂತ
ಕರಗದೆ ಕಾಯುತ್ತವೆ ಈ ನೂರು ಮಂಜಿನ ಬೆಟ್ಟ
ಅಲ್ಲಿ ಕೊರೆವ ಗವಿ ಕತ್ತಲಿನಲ್ಲಿ
ಅರಳುತ್ತಲೇ ಇರುತ್ತವೆ ನೀಲಿ ಮಂಜು ತಾವರೆ
ಹೋಗು ದಕ್ಷನ ಮಗಳೆ...ಕೈಯ ಕೊಳ್ಳಿ ಮಾಡಿ
 ಜೀವದೆಣ್ಣೆ ಬತ್ತಿ ದೀಪಗಳ
ಉರಿಸುತ್ತ ಕಣ್ಣಲ್ಲಿ ಸುತ್ತ
ನಿನ್ನ ಬರವಿನ ಹಗಲು ಇರುಳಿನ
 ಗೆಜ್ಜೆಯುಲಿವಿಗೆ ಹೆಜ್ಜೆಗಳನಿಕ್ಕುತ್ತ......
ಹೊಟ್ಟೆ ಎದೆಗಳ ಡೊಳ್ಳು ಬಾರಿಸುತ
ಪಾತಾಳ ಮೆಟ್ಟಿ, ಗೌರಿಶಂಕರ ನೆತ್ತಿ ನಡುಗುವ ಹಾಗೆ....’

ಎಂದು ಏರು ಧ್ವನಿಯಲ್ಲಿ ಅಭಿನಯಿಸಿ ಹೇಳುತ್ತಿದ್ದಳು. ಎದುರಿಗಿದ್ದವರು ಒಂಥರ ಖುಶಿಯಾಗಿ ಬಹುಬೇಗನೆ ಆಪ್ತರಾಗಿಬಿಡುತ್ತಿದ್ದರು. ಸದಾ ಜೀವಂತಿಕೆಯ ಖನಿ ಅವಳು.

ರಾತ್ರಿ ಎಷ್ಟೇ ಹೊತ್ತಿಗೆ ಮಲಗಿದರೂ ಬೆಳಿಗ್ಗೆ ಕರಾರುವಕ್ಕಾಗಿ ಐದು ಗಂಟೆಗೆ ಎದ್ದುಬಿಡುತ್ತಾಳೆ. ಐದೂವರೆಗೆ ಶೂ ಹಾಕಿ ಬ್ರಿಕ್ ವಾಕ್ ಹೊದ್ರೆ ಐದುಮುಕ್ಕಲಿಗೆ ಯೋಗ ಕ್ಲಾಸ್ ಬಾಗಿಲಲ್ಲಿ ಹಾಜರು. ಮುಕ್ಕಾಲು ಘಂಟೆ ಪ್ರಾಣಾಯಾಮ, ಸೂರ್ಯನಮಸ್ಕಾರ, ಗುರುವಂದನೆ. ಇನ್ನು ಮುಕ್ಕಾಲು ಘಂಟೆ ಯೋಗ. ಏಳುಮುಕ್ಕಾಲು ಘಂಟೆಗೆ ಹಾಲು ತರಕಾರಿ ಹಿಡಿದು ಮನೆ ಮೆಟ್ಟಿಲು ಹತ್ತಿ ಸೀದಾ ಅಡುಗೆ ಮನೆಗೆ. ೮ ಘಂಟೆಗೆ ಬಲಗೈಯಲೊಂದು ಶುಗರ್ ಲೆಸ್ ಟೀ ಕಪ್, ಎಡಗೈಯಲೊಂದು ವಿದ್ ಶುಗರ್ ಟೀ ಕಪ್ ಹಿಡಿದು ಹಾಲ್ ಪ್ರವೇಶ. ಶುಗರ್ ಲೆಸ್ ಅವನಿಗೆ ದಾಟಿಸಿ ಐದು ನಿಮಿಶದಲ್ಲಿ ಪೇಪರ್ ಗಳ ಮೇಲೆ ಕಣ್ಣಾಡಿಸಿ ಅಡುಗೆಮನೆಗೆ ರೀ ಎಂಟ್ರಿ.ಮೂರು ಒಲೆಯ ಗ್ಯಾಸ್ ಸ್ಟೌನಲ್ಲಿ ಕೊತ ಕೊತ ಕುದಿತ. ತರಕಾರಿಗಳ ಮಾರಣ ಹೋಮ. ಕಾಲಲ್ಲಿ ಚಕ್ರ. ಮಗನ ಹಾಸುಗೆಯೆಡೆಗೊಮ್ಮೆ; ’ಪುಟ್ಟಾ ಏಳು’ ಉಲಿತ. ಬಾತ್ ರೂಮಿಗೆ ಚುಕ್ ಬುಕ್ ರೈಲ್. ಯುನಿಫಾರ್ಮ್ ಗೆ ಇಸ್ತ್ರಿ ಪೆಟ್ಟಿಗೆಯ ಜಾರುಗುಪ್ಪೆ. ಬ್ಯಾಗ್ ಹುಡುಕಾಟ. ಡಬ್ಬ ತಯಾರಿ. ಗದರಿಕೆಯ ಕೈತುತ್ತು.ಒಂಬತ್ತಕ್ಕೆ ಸ್ಕೂಲ್ ವ್ಯಾನ್ ಗೆ ಟಾಟಾ ಹೇಳಿ ಸೋಫಾದಲ್ಲೊಮ್ಮೆ ಕುಕ್ಕುರು ಬಡಿದು ಇನ್ನೊಮ್ಮೆ ಪೇಪರಿನೆಡೆಗೆ ಸ್ಥೂಲ ನೋಟ.ರಿಂಗುಣಿಸುವ ಪೋನುಗಳಿಗೆ ಚುಟುಕು ಉತ್ತರ.ಅವನಾಗ ವಾಕ್ ಮುಗಿಸಿ ಬಂದ. ’ಮಗ ಭೂಪ ಶಾಲೆಗೆ ಹೋದ್ನಾ’ ಟವಲ್ ಹೆಗಲ ಮೇಲೆ ಹಾಕ್ಕೊಂಡು ಬಚ್ಹಲು ಮನೆಗೆ ನಡೆದ.

’ಆಮೇಲೆ ’ಈ ಲೇಖನ ಓದಬೇಕು’ ಎನ್ನುತ್ತಲೆ ಅಡಿಗೆ ಮನೆಗೆ ಒಂದೇ ನೆಗೆತ. ಕಾಲಿಗೆ ಮತ್ತೆ ಚಕ್ರ. ’ತಿಂಡಿ ರೆಡಿ ಮಾಡಿ ಇಡು’ ಆಜ್ನಾಪಿಸುತ್ತಲೇ ದೇವರ ಕೋಣೆ ಹೊಕ್ಕವನ ಮೆಡಿಟೇಷನ್ ಆರಂಭ. ಇನ್ನು ಅರ್ದ ಘಂಟೆ ಜೀವಚ್ಛವ. ತಿಂಡಿ ಟೀ ಚಡ್ಡಿ,ಬನೀನು ಕರ್ಚಿಫ್ ಶರ್ಟ್ ಪ್ಯಾಂಟ್...ಸೇವೆ ಮುಂದುವರಿಕೆ....ಹೊರಗಿನಿಂದಲೇ ಸ್ವರ ತೂರಿ ಬಂತು ’ಚೆಕ್ಕ್ ಗೆ ಸಹಿ ಹಾಕಿದ್ದೇನೆ ದುಡ್ಡು ಬೇಕಿದ್ರೆ ತಗೋ’ ಆರ್ಥಿಕ ಸುಭದ್ರತೆಗೆ ಇದಕ್ಕಿಂತಹ ಉದಾಹರಣೆ ಬೇಕೆ?!ಒಂಬತ್ತುವರೆಯಾಯ್ತು; ಆತ ಭುರ್ರನೆ ಹಾರಿ ಹೋದ.

  ಮನೆ ಗೊಬ್ಬರದ ಗುಂಡಿ ಯಾರಾದ್ರು ಬಂದ್ರೆ...ಯಾರೂ ಬರುವುದಿಲ್ಲ ಆದ್ರೂ...ಬಂದ್ರೆ ಏನಾದ್ರು ಅಂದ್ಕೊಂಡ್ರೆ..ಅಂತ ಒಂಚೂರು ಆಚೀಚೆ ಸರಿಸಿ ಜೋಡಿಸಿಡುವುದರಲ್ಲಿ ಮಗ್ನ. ಕೆಲಸದಾಕೆ ಬಂದ ಸದ್ದು ಅಡುಗೆ ಮನೆಯ ಸಪ್ಪಳದಿಂದಲೇ ಕೇಳಿಬರುತ್ತಿತ್ತು. ಸಧ್ಯ ಬಂದ್ಲಲ್ಲ ಎನ್ನುತ್ತ ಹರಿಪ್ರಸಾದ್ ಚೌರಸಿಯ ಸಿದಿ ಹಾಕಿ ಟೀಪಾಯಿ ಮೇಲೆ ಕಾಲಿಟ್ಟು ಸೋಫಾಕ್ಕೆ ಒರಗಿ ಮೋಹನಮುರಳಿಯಲ್ಲಿ ಕರಗಿ ಹೋದಳು. ಹನ್ನೊಂದಕ್ಕೆ ನ್ಯೂಸ್ ಚಾನಲ್ ಅನ್ ಮಾಡಿದಳು...ಸ್ವಲ್ಪ ಹೊತ್ತದ ಮೇಲೆ ಚಾನಲ್ ಬದಲಾಯಿಸ್ತಾ ಹೋಗಿ ಮತ್ತೆ ತನ್ನ ಸುತ್ತ ಪೇಪರು ಹರವಿಕೊಂಡು ಅದರಲ್ಲೆ ಲೀನವಾದಳು.

ಹನ್ನೆರಡು ಕಳೆಯುತ್ತಿದ್ದಂತೆ ಅದೆಂತಹದೋ ಚಡಪಡಿಕೆ.ಜಗತ್ತಿಗೂ ತನಗೂ ಕೊಂಡಿ ತಪ್ಪಿದಂತೆ. ತನ್ನದಲ್ಲದ ಯಾರದೋ ಬದುಕನ್ನು ತಾನು ಬದುಕಿದಂತೆ. ನಿನ್ನೆಯ ಅನ್ನ ಸಾರು ತಿಂದು ಮತ್ತೆ ಚಾನಲ್ ಬದಲಾಯಿಸಿದಂತೆಲ್ಲ, ಬದುಕು ಇಷ್ಟಕ್ಕೇ ಮುಗಿದು ಹೋಗುತ್ತಿದೆಯೇನೋ ಎಂಬ ಭಾವ. ಕಣ್ಣಂಚಿನಲ್ಲಿ ನೀರಿನ ಕಟ್ಟೆ.
ನಾಲ್ಕೂವರೆಗೆ ಸ್ಕೂಲ್ ವ್ಯಾನ್ ಮನೆಯೆದುರು ನಿಂತಾಗ ಜೀವ ಚೈತನ್ಯವೇ ಉಕ್ಕಿ ಹರಿದ ಭಾವ.ತಲೆ ಮುಟ್ಟಿ ಕೆನ್ನೆ ತಟ್ಟಿ ’ಸ್ಕೂಲಲ್ಲಿ ಏನೇನ್ ಮಾಡಿದ್ಯೋ’. ಮತ್ತೆ ಮಗುತನ. ಕಾಲಿಗೆ ಚಕ್ರ. ಹಗಲು ರಾತ್ರಿ ಸಂಗಮಿಸುವ ಹೊತ್ತು. ಮಸುಕು ಕತ್ತಲೆ. ಜಗತ್ತೆಲ್ಲ ಅಳುತ್ತಿದೆ; ತಾನು ಒಂಟಿ ಎನ್ನುವ ಭಾವ. ಕೈ ರಿಮೋಟ್ ಒತ್ತುತ್ತಲೇ ಹೋಗುತ್ತದೆ. ಒಂಬತ್ತಕ್ಕೆ ಮತ್ತೆ ಕಾಲಿಗೆ ಚಕ್ರ.ಜೀವದುಸಿರಿನ ತಲೆ ಮೊಟಕಿ, ಕೆನ್ನೆ ತಟ್ಟಿ, ಸುಮ್ ಸುಮ್ನೆ ತಬ್ಬಿ, ಕಚಗುಳಿ ಇಟ್ಟು ’ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು...ನಿದ್ದೆ ಬರುವಳು ಹೊದ್ದು ಮಲಗು ಮಗುವೆ...ಜೋ..ಜೋ...’

ಹನ್ನೊಂದಕ್ಕೆ ಪುಸ್ತಕದ ರ್‍ಯಾಕಿನಲ್ಲಿ ಕವಿತೆ, ವಿಮರ್ಶೆ, ಪ್ರಬಂದಸಂಕಲನ,ಜೀವನಚರಿತ್ರೆಗಳ ಹುದುಕಾಟ ರೀಡಿಯೋದಲ್ಲಿ ಅರ್ ಜೆಗಳ ಮಾತಿನಬ್ಬರದ ನಡುವೆ ಕಿಶೋರಕುಮಾರನ ವಿಷಾಧಗೀತೆ. ಮೆಲ್ಲನೆ ಅವಳಾಳಕ್ಕೂ ಪ್ರಸರಣ.
ಹನ್ನೆರಡಕ್ಕೆ ಆತನ ಆಗಮನ. ಕಾಲಿಗೆ ಚಕ್ರವಿಲ್ಲ.ತಳ್ಳುಗಾಡಿಯ ಭಾವ. ಮಾಡಿದ್ದನ್ನು ಬಡಿಸುವಾಗ ಆತ ಆಪೀಸಿನ ಬಗ್ಗೆ ಏನೇನೊ ಹೇಳುತ್ತಿದ್ದಾನೆ;ಇವಳು ಹಾಸಿಗೆಗೆ ಬಂದು ಮೈ ಚೆಲ್ಲುತ್ತಾಳೆ. ಇನ್ನೊಂದು ದಿನ ಕಳೆಯಿತು.ಇನ್ನೆಷ್ಟು ನಾಳೆಗಳು ಉಳಿದಿವೆಯೋ ಎಂಬ ಚಿಂತೆಯಲ್ಲಿ ಅವಳ ಕಣ್ಣುಗಳು ಮತ್ತೆ ಜೋಡಿ ಕೊಳ. ದಿಂಬಿಗೆ ಕೆನ್ನೆಯೊತ್ತಿ ಸದ್ದಿಲ್ಲದ ಬಿಕ್ಕಳಿಕೆ.
ಕೌಟುಂಬಿಕ ಸಹಚರ್‍ಯ ಇಲ್ಲ.ಭಾವನಾತ್ಮಕ ಒಡನಾಟವಿಲ್ಲ. ದೈಹಿಕ ಸಾಂಗತ್ಯವಿಲ್ಲ. ಭಾವಸ್ಪಂದನವಿಲ್ಲ. ಮನುಸ್ಯ ಸಂಬಂಧಗಳ ಬಿಸುಪು ಇಲ್ಲ.ಇನ್ಯಾವ ಸಂಬಂಧ ಇವರನ್ನು ಒಟ್ಟಿಗೆ ಬಂಧಿಸಿದೆ? ಮಗುವಾ...? ಆರ್ಥಿಕ ಅವಲಂಬನೆಯಾ...?

ಈಗ ನನ್ನೆದುರು ಕುಳಿತಿದ್ದಾಳೆ. ಅವಳದು ಒಂದೇ ಪ್ರಶ್ನೆ- ’ನನಗೆ ಅವನು ಬೇಕಾ...?’
 ನನಗೆ ಗೊತ್ತಿಲ್ಲ. ಗೊತ್ತಿದ್ದ ಸಮಚಾರವೆಂದರೆ;ಅವರಿಬ್ಬರು ಗಂಡ ಹೆಂಡತಿ,ಪ್ರೀತಿಸಿ ಮದುವೆಯಾದವರು,ಜಗತ್ತನ್ನೆ ಗೆದ್ದಂತೆ ಹತ್ತು ವರ್ಷ ಜೊತೆಯಾಗಿ ಬದುಕಿದವರು. ಈಗ ಹೀಗೆ....ಯಾಕೆ ಹೀಗಾಯ್ತು?.... ಗೊತ್ತಿಲ್ಲ.
ನಿಮಗೆ ಗೊತ್ತಿದ್ದರೆ ತಿಳಿಸಿ...
ಅವಳೆಡೆಗೆಗೊಮ್ಮೆ ನೋಡಿ ಅವಳ ಇಷ್ಟದ ಕವನದ ಮುಂದಿನ ಸಾಲುಗಳನ್ನು ನಾನು ಮುಂದುವರಿಸಿದೆ

 ’ಹೋಗು ದಕ್ಷನ ಮಗಳೇ ದೇವಪುತ್ರಿಗೂ ಆಜೀವ ತಿರುಕನಿಗೂ
 ಯಾವ ಯಾತರ ನಂಟು?
 ಹೊತ್ತಾಯಿತು ಹೊರಡು ಕಟ್ಟಿಕೋ ನೆನಪಿನ ಗಂಟು
ಮುತ್ತುಗಳ ಸರನತ್ತು ಬೆಂಡೋಲೆ
ಅಪ್ಪುಗೆ ಸೋಕುಗಳ ಜರತಾರಿ ಸೀರೆ
ಕಟ್ಟಿಕೋ ಕಟ್ಟಿಕೋ ನೆನಪಿನ ಗಂಟು......’

ಆ ದಾಕ್ಷಾಯಣಿ ಯಜ್ನಕುಂಡದಲ್ಲಿ ದುಮುಕಿ ಪಾರ್ವತಿಯಾಗಿ ಮರುಹುಟ್ಟು ಪಡೆದು ಅದೇ ಶಿವನನ್ನು ಮದುವೆಯಾದಳು.ಈಕೆ ಶಿವೆಯಾಗಬೇಕೆ..? ಅವನು ಶಿವನಾಗದಿದ್ದರೂ.........ಹೇ.. ಅರ್ಧನಾರೀಶ್ವರ !