Thursday, February 18, 2010

ಸಾಹಿತಿಗಳು ಅನ್ಯಗ್ರಹ ಜೀವಿಗಳಲ್ಲ




ಬರವಣಿಗೆಯೆನ್ನುವುದೊಂದು ಬಿಡುಗಡೆಯ ಭಾವ. ಒಳಗಿನ ಒತ್ತಡವನ್ನು ಹೊರ ಹಾಕಲೊಂದು ರಹದಾರಿ. ಅದಕ್ಕೆ ಲಿಂಗಬೇಧವಿಲ್ಲ. ಅನಕ್ಷರಸ್ತರಾಗಿದ್ದರೂ ಕಥೆ- ಕಾವ್ಯ ಕಟ್ಟಿ ಮನದಿಂಗಿತವನ್ನು ಬಿಚ್ಚಿಡುತ್ತಿದ್ದ ಜಾನಪದ ಸಾಹಿತ್ಯ ಲೋಕವನ್ನು ಒಮ್ಮೆ ಹೊಕ್ಕರೆ ಸಾಕು, ಸೃಜನಶೀಲ ಮಹಿಳಾ ಲೋಕವೊಂದು ಅನಾವರಣಗೊಳ್ಳುವ ಪರಿಗೆ ಬೆರಗುಗೊಳ್ಳುವ ಸರದಿ ನಮ್ಮದು. ಕುಟ್ಟುವುದು, ಬೀಸುವುದು, ಉಳುವುದು, ನೇಜಿ ನೇಡುವುದು,ಕೊಯ್ಯುವುದು; ತಮಗಿರುವ ಸೀಮಿತ ಅವಕಾಶದಲ್ಲೇ ಸಾಹಿತ್ಯ ಚಿಗುಗುರೊಡೆದ ಪರಿಯಿದು.

ಇಂದಿನ ಆಧುನಿಕ ಮಹಿಳೆ ಅದೇ ಜನಪದ ಮಹಿಳೆಯೇ. ಆಕೆಯ ಹೊರಜಗತ್ತಿನಲ್ಲಾಗಲಿ, ಒಳಪ್ರಪಂಚದಲ್ಲಾಗಲಿ ಅಂತಹ ದೊಡ್ಡ ವ್ಯತ್ಯಾಸವೇನೂ ಆದ ಹಾಗಿಲ್ಲ. ಅಂದು ಆಕೆ ತನ್ನ ದುಃಖ ದುಮ್ಮಾನಗಳನ್ನು, ಸುಖ-ಸಂತೋಷವನ್ನು ದೇವರೊಡನೆ ಅಥವಾ ಪ್ರಕೃತಿಯೊಡನೆ ತೋಡಿಕೊಳ್ಳುತ್ತಿದ್ದಳು; ಸಖಿಯರೊಡನೆ ಹಂಚಿಕೊಳ್ಳುತ್ತಿದ್ದಳು. ಆಕೆಯದು ಪುಟ್ಟ ಕ್ಯಾನ್ವಾಸ್. ಆದರೆ ಆಧುನಿಕ ಮಹಿಳೆಯ ಜಗತ್ತು ವಿಸ್ತಾರವಾದುದು. ಲಿಂಗಬೇಧವಿಲ್ಲದ ಜಗತ್ತೊಂದನ್ನು ಕಟ್ಟಿಕೊಳ್ಳುವ, ಸೃಷ್ಟಿಸಿಕೊಳ್ಳುವ ಎಲ್ಲ ಅವಕಾಶಗಳು ಆಕೆಗಿದೆ. ಆದರೂ ಆಕೆ ಒಂಟಿಯೇ. ಆಕಾಶದತ್ತ ಮುಖ ಮಾಡಿದವಳೇ. ಹಾಗಾಗಿ ಒಳಜಗತ್ತಿನಲ್ಲಿ ಇಬ್ಬರ ಭಾವವೂ ಒಂದೇ.

ಮೇಲಿನ ಇಬ್ಬರು ಮಹಿಳೆಯರ ಮಧ್ಯೆ ಉಲ್ಕೆಯಂತೆ ಜ್ವಾಜಲ್ಯಮಯವಾಗಿ ಉರಿದ ಮಹಿಳಾ ಗುಚ್ಛವೊಂದು ೧೨ನೇ ಶತಮಾನದಲ್ಲಿ ನಮಗೆ ಕಾಣಸಿಗುತ್ತದೆ. ಮಹಿಳೆಯರ ಅಂತರಂಗದ ಸ್ಫೋಟಕ್ಕೆ ಆ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆ, ಲಿಂಗತಾರತಮ್ಯವೇ ಕಾರಣ. ಅವರು ನುಡಿದುದೆಲ್ಲವೂ ’ವಚನ’ಗಳಾಗಿ ಅನ್ಯರಿಗೆ ದಾರಿದೀಪಗಳಾದವು. ಅಂದು ಸಮಾಜದೆದುರು ಮಹಿಳೆಯರು ಮುಕ್ತವಾಗಿ ತೆರೆದುಕೊಂಡ ಪರಿ ನಮಗಿಂದು ಅಚ್ಚರಿ ಹುಟ್ಟಿಸುತ್ತದೆ. ಅವರು ಅಭಿವ್ಯಕ್ತಿಗಾಗಿ ಹೆದರಲಿಲ್ಲ; ತಿಣುಕಾಡಲಿಲ್ಲ. ಅನ್ನಿಸಿದ್ದನ್ನು ಹೇಳಿದರು. ಹೇಳಿದಂತೆ ಬದುಕಿದರು. ಆದರವರು ಉಲ್ಕೆಯಂತೆ ಉರಿದು ಮಾಯವಾದರು. ಅನಂತರ ತಮಗನ್ನಿಸಿದ್ದನ್ನು ನೇರವಾಗಿ, ಮುಕ್ತವಾಗಿ ಹೇಳಬಲ್ಲ ಮಹಿಳೆಯರಿಗಾಗಿ ನಾವು ೧೯ನೇ ಶತಮಾನದವರೆಗೂ ಕಾಯಬೇಕಾಯ್ತು. ಆದರೂ ವಚನಕಾರ್ತಿಯರ ನಿರ್ಭಿಡೆಯ ಅಭಿವ್ಯಕ್ತಿ ಅಧುನಿಕ ಮಹಿಳೆಯರಲ್ಲಿ ಇದ್ದಂತಿಲ್ಲ. ಅಥವಾ ಬಸವಣ್ಣನಂಥ ಸಹಚಾರಿಗಳು ಇವರಿಗೆ ಒತ್ತಾಸೆಯಾಗಿ ನಿಂತಿಲ್ಲವೆನಿಸುತ್ತದೆ.

೧೯ನೇ ಶತಮಾನದ ನಂತರದಲ್ಲಿ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸಾಹಿತ್ಯವೂ ಸಾಥ್ ನೀಡಿತು. ಪುರುಷ ಜಗತ್ತಿಗೆ ತೀರಾ ಭಿನ್ನವಾದ ಮಹಿಳಾ ಆಂತರಿಕ ಜಗತ್ತೊಂದು ಅನಾವರಣಗೊಳ್ಳತೊಡಗಿತು. ಅದರ ಸಣ್ಣ ಸಣ್ಣ ವಿವರಗಳು ಮಹಿಳೆಯರ ಬರವಣಿಗೆಯಲ್ಲಿ ದಾಖಲಾಗತೊಡಗಿದವು. ಬರವಣಿಗೆಗೆ ಸಾಮಾಜಿಕ ಆಯಾಮ ದೊರಕತೊಡಗಿತು. ಅದನ್ನು ಸ್ತ್ರೀವಾದಿ ಸಾಹಿತ್ಯವೆಂಬ ಪ್ರತ್ಯೇಕ ನೆಲೆಯಲ್ಲಿ ಸಾಹಿತ್ಯ ಜಗತ್ತು ಗುರುತಿಸತೊಡಗಿತು. ಸ್ತ್ರೀವಾದಿ ವಿಮರ್ಶೆ ಕೂಡಾ ಸ್ಪಷ್ಟ ರೂಪ ಪಡೆಯತೊಡಗಿತು. ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳಲ್ಲಿ ’ಮಹಿಳಾ ಅಧ್ಯಯನ’ ಈಗ ಆಸಕ್ತಿಯ ಜ್ನಾನಶಾಖೆ.

ಕೇರಳದ ಮಾಧವಿ ಕುಟ್ಟಿ ಅಂತರಂಗದ ಹುಡುಕಾಟದಲ್ಲೇ ಕಮಲಾದಾಸಳಾಗಿ, ಮತ್ತೆ ಸುರೈಯಳಾಗಿ ತೀವ್ರ ವ್ಯಾಮೋಹಿಯಾಗಿ ಬದುಕಿದವರು. ಪ್ರೋತಿಮಾ ಬೇಡಿ, ಅಮೃತ ಪ್ರೀತಂ, ಮರಾಠಿಯ ಮಾಧವಿ ದೇಸಾಯಿ, ಕನ್ನಡದ ಪ್ರತಿಭಾ ನಂದಕುಮಾರ್ ಸೇರಿದಂತೆ ಎಲ್ಲಾ ಬರಹಗಾರ್ತಿಯರೂ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಡಿ ನರಳಿದವರೇ. ಹಾಗಿದ್ದರೂ ಪುರುಷನಿಲ್ಲದ ಸ್ತ್ರೀಯ ಬಾಳು ಅಪೂರ್ಣ ಎಂಬುದನ್ನು ಮನಗಂಡವರು. ಸ್ತ್ರೀಯ ಅನನ್ಯತೆಯನ್ನು ಗುರುತಿಸಿಕೊಂಡು ಪುರುಷನನ್ನು ಅನುಸರಿಸದೆ, ಅವರಂತಾಗಲು ಬಯಸದೆ ಪ್ರಕೃತಿಧರ್ಮವನ್ನು ಅರಿತುಕೊಂಡು ಅವನಲ್ಲೇ ಆತ್ಮಬಂಧುವನ್ನು ಹುಡುಕಿದವರು.

ಇಂತಹದೊಂದು ಸ್ತ್ರೀ ಬಳಗ ಸಮಾಜದಲ್ಲಿ ಒಳಗಿಂದೊಳಗೆ ಸೃಷ್ಟಿಯಾಗುತ್ತಿದೆ. ಅವರು ವಿದ್ಯಾವಂತರು. ಸ್ವತಂತ್ರ ಚಿಂತನೆ ಹೊಂದಿದವರು. ಹೀಗೆಯೇ ಬದುಕಬೇಕೆಂದು ನಿರ್ಧರಿಸಿಕೊಂಡವರು. ಆರ್ಥಿಕವಾಗಿ ಸಬಲರು. ನೆಮ್ಮದಿಯ ಬದುಕಿಗೆ ಮದುವೆ ಅನಿವಾರ್ಯ ಅಲ್ಲ ಎಂದು ತಿಳಿದುಕೊಂಡವರು. ಇಂತಹ ಟ್ರೆಂಡ್ ಬಗ್ಗೆ ಸಾಹಿತ್ಯ ವಲಯದಲ್ಲಿ ಚರ್ಚೆಯಾಗಬೇಕು. ಯಾಕೆಂದರೆ ಭಾರತೀಯ ಸಮಾಜ ನಿಂತಿರುವುದೇ ಕುಟುಂಬ ವ್ಯವಸ್ಥೆಯ ಮೇಲೆ. ಮಹಿಳೆ ಅದರ ಆಧಾರ ಸ್ತಂಭ. ಈ ವ್ಯವಸ್ಥೆಯೇ ಅಲ್ಲಾಡತೊಡಗಿದರೆ ಸ್ವಸ್ಥ ಸಮಾಜ ರೂಪುಗೊಳ್ಳಲಾರದು. ಮಹಿಳೆಯರಂತೆ ಮಕ್ಕಳು ಮತ್ತು ವೃದ್ಧರ ಮನಸ್ಥಿತಿಯ ಬಗ್ಗೆ ಕೂಡ ಗಂಭೀರವಾಗಿ ಚಿಂತಿಸಬೇಕಾದ ಕಾಲಘಟ್ಟವಿದು.

ಈಗ ಸಾಹಿತ್ಯ ವಲಯದಲ್ಲಿ ಇದರ ಬಗ್ಗೆ ಚಿಂತನೆ ನಡೆಯುತ್ತಿಲ್ಲವೆಂದಲ್ಲ. ಅದು ಅಕಾಡಮಿಕ್ ಮಟ್ಟದಲ್ಲಾಗುತ್ತಿದೆ. ಅದು ಮಾತೃ ದೃಷ್ಟಿಕೋನದಿಂದ ಆಗಬೇಕು. ಸಾಹಿತ್ಯ ಮತ್ತು ಜನಸಾಮಾನ್ಯರ ನಡುವೆ ಬಹುದೊಡ್ಡ ಕಂದಕವಿದೆ. ಚಿಂತಕರು ಜನ ಸಾಮಾನ್ಯರತ್ತ ಇಳಿದು ಬರಬೇಕು. ಅರ್ಥವಾಗುವ ಸರಳ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಗಬೇಕು. ಭಾಷೆ ಉಳಿದರೆ ತಾನೆ ಸಾಹಿತ್ಯ ಸೃಷ್ಟಿ? ಅವರ ಕಣ್ಣಮುಂದೆ ಕನ್ನಡವನ್ನು ನಿಜವಾಗಿ ಪ್ರೀತಿಸುವ ಐಟಿ,ಬಿಟಿ ಯುವ ಮನಸ್ಸುಗಳಿರಬೇಕು. ನವಸಾಕ್ಷರರಿರಬೇಕು. ದೇಸಿಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಗ್ರಾಮೀಣ ಜನರಿರಬೇಕು. ರೈತ ಸಮುದಾಯವಿರಬೇಕು. ಜನಪರ ಚಳುವಳಿಗಳಿರಬೇಕು. ಅವರೆಲ್ಲರಿಗೂ ಸಾಹಿತಿ ಕಿವಿಯಾಗಬೇಕು; ಧ್ವನಿಯಾಗಬೇಕು. ಆದರೆ ಆಗುತ್ತಿರುವುದೇನು? ಸಾಹಿತ್ಯ ನಗರಕೇಂದ್ರಿತವಾಗುತ್ತಿದೆ. ಸಾಹಿತಿಗಳೆಲ್ಲಾ ಭ್ರಮಾ ಲೋಕದಲ್ಲಿದ್ದಾರೆ. ಪರಸ್ಪರ ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಅಕ್ಷರ ಬಲ್ಲವರೆಲ್ಲಾ ಸಾಹಿತಿಗಳಾಗುತ್ತಿದ್ದಾರೆ. ಅವರು ಬರೆದದ್ದೆಲ್ಲವನ್ನು ಪ್ರಕಟಿಸುವ ಪ್ರಕಾಶಕರಿದ್ದಾರೆ. ಸಿದ್ದ ಸೂತ್ರದ ವಿಮರ್ಶಕರಿದ್ದಾರೆ. ಓದುಗರಿಗೆ ಯಾವುದನ್ನು ಓದಬೇಕೆಂಬ ಗೊಂದಲವಿದೆ.

ಸಾಹಿತ್ಯ ಸಮ್ಮೇಳನವೆಂಬುದೊಂದು ಜಾತ್ರೆ. ಜಾತ್ರೆಯಲ್ಲಿ ಸಡಗರವಿರುತ್ತದೆ. ಸಂಭ್ರಮವಿರುತ್ತದೆ. ಅಲ್ಲಿ ಗಂಭೀರ ಚಿಂತನೆ ನಡೆಯದು. ಆದರೆ ಚಿಂತನೆಯ ಝಳಕು ತೋರಿಸಲು ಅವಕಾಶವಿದೆ. ಸುದ್ದಿಯನ್ನೂ ಮಸಾಲೆ ಸೇರಿಸಿ ಉಣಬಡಿಸುವ ಕಾಲವಿದು. ಹಳೆ ಮುತ್ತೈದೆಯ ಹಾಗಿರುವ ಸಾಹಿತ್ಯ ಪರಿಷತ್ತು ಬದಲಾಗಬೇಕು. ಸಮ್ಮೇಳನದ ರೂಪುರೇಷೆ ಬದಲಾಗಬೇಕು.

ಬರವಣಿಗೆಯೆನ್ನುವುದು ಸ್ವಗತದಂತೆ; ಅಂತರಂಗದ ಪಿಸುಮಾತಿನಂತೆ; ಆಪ್ತ. ಆದರೂ ಅದರೊಳಗೇ ಪ್ರತಿಭಟನೆ ಹುದುಗಿರುತ್ತದೆ. ಅದು ಜನರ ಆಲೋಚನಾ ಕ್ರಮವನ್ನು, ಮೌಲ್ಯಗಳ ಕುಸಿತವನ್ನು, ಸಾಂಸ್ಕೃತಿಕ ಪಲ್ಲಟವನ್ನು ಹಿಡಿದಿಡುತ್ತದೆ. ಗಡಿಸಮಸ್ಯೆ, ಭಾಷಾ ಸಮಸ್ಯೆ, ನದಿನೀರು ಹಂಚಿಕೆ ಇವೆಲ್ಲಾ ಭಾವಾನಾತ್ಮಕ ಸಮಸ್ಯೆಗಳು. ಶಾಸನ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು. ಅವುಗಳ ಪರಿಹಾರಕ್ಕೆ ರಾಜಕೀಯ ವೇದಿಕೆ ಬೇಕು. ಅವುಗಳನ್ನು ವೇದಿಕೆಯತ್ತ ತರುವ ಚಳುವಳಿಗಳು ಬೇಕು. ಅದನ್ನು ಸಾಹಿತ್ಯ ಮುನ್ನಡೆಸುತ್ತಿರಬೇಕು. ಸಾಹಿತಿಗಳು, ಸಾಹಿತ್ಯ ಪರಿಷತ್ತು ಇದನ್ನೆಲ್ಲಾ ಮಾಡುತ್ತಿದೆಯೇ ಎಂಬುದು ಈಗಿರುವ ಬಹುಮುಖ್ಯ ಪ್ರಶ್ನೆ.

[ ಸಾಹಿತ್ಯ ಸಮ್ಮೇಳನಕ್ಕಾಗಿಯೇ ವಿಶೇಷವಾಗಿ ರೂಪಿತವಾಗಿರುವ ”ನುಡಿನಮನ” ಬ್ಲಾಗ್ ಗಾಗಿ ಬರೆದ ಲೇಖನ]

Wednesday, February 10, 2010

’ರಣ್’ ಮಾಧ್ಯಮಕ್ಕೆ ಹಿಡಿದ ಕನ್ನಡಿ




ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡದೆ ವರ್ಷಗಳೇ ಆಗಿತ್ತು. ’ರಣ್’ ಸುದ್ದಿ ಚಾನಲ್ ಗಳ ನಡುವಿನ ರಣಾಂಗವೆಂದು ಪ್ರಚಾರ ಪಡೆದಿತ್ತು. ನಮ್ಮಲ್ಲೂ ಎರಡು ಸುದ್ದಿ ಚಾನಲ್ ಗಳ ನಡುವೆ ಟಿಆರ್ ಪಿ ಸಮರ ಇದೆಯಲ್ಲ! ಅಲ್ಲದೆ ನಮ್ಮ ಸುದೀಪ್, ಅಮಿತಾಭ್ ಎದುರು ಹೇಗೆ ನಟಿಸಿರಬಹುದೆಂಬ ಕುತೂಹಲ. ಪೂರ್ವಾಶ್ರಮದ ಸೆಳೆತ ಬೇರೆ. ರಾಮ್ ಗೋಪಾಲವರ್ಮರ ’ರಣ್’ ಸಿನಿಮಾಕ್ಕೆ ಹೋದೆ.

ವಿಜಯ್ ಹರ್ಷವರ್ಧನ್ ಮಲಿಕ್ [ಅಮಿತಾಭ್] ಸುದ್ದಿ ಚಾನಲ್ಲೊಂದರ ಮಾಲಿಕ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪ್ರಜಾಪ್ರಭುತ್ವವನ್ನು ರಕ್ಷಿಸುವ ಮೂರು ಸ್ತಂಭಗಳು. ಪತ್ರಿಕೋಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಯಲಾಗುತ್ತದೆ. ಅದಕ್ಕೆ ಸಾಮಾಜಿಕ ಹೊಣೆಗಾರಿಕೆಯಿರುತ್ತದೆ. ಅದನ್ನು ನಂಬಿದವನು ವಿಜಯ್. ಆತನ ದೃಷ್ಟಿಯಲ್ಲಿರುವುದು ಜನ ಸಾಮಾನ್ಯರು. ಆತನ ಮಟ್ಟಿಗೆ ಸುದ್ದಿಯೆನ್ನುವುದು ಸತ್ಯಸೋಧನೆ.

ವಿಜಯ್ ನ ಪ್ರತಿಸ್ಪರ್ಧಿ ಚಾನಲ್ ಮಾಲೀಕ ಮೊಹನೀಶ್ ಬೆಹ್ಲ್ [ಪಾತ್ರದ ಹೆಸರು ನೆನಪಾಗುತ್ತಿಲ್ಲ]. ವಿಜಯ್ ಗರಡಿಯಲ್ಲಿ ಪಳಗಿದವನಾದರೂ ಈತನಿಗೆ ಪತ್ರಿಕೋಧ್ಯಮದ ಮೌಲ್ಯಗಳು ಮುಖ್ಯವಲ್ಲ, ಟಿಆರ್ ಪಿ ಮುಖ್ಯ. ಅದಕ್ಕಾಗಿ ಆತ ಸುದ್ದಿವಾಚಕರಿಗೆ ಕನಿಷ್ಟ ಉಡುಗೆ ಹಾಕಲು ಸೂಚಿಸುತ್ತಾನೆ.ಸುದ್ದಿಯನ್ನು ವೈಭವಿಕರಿಸುತ್ತಾನೆ; ಮಸಾಲೆ ಬೆರೆಸುತ್ತಾನೆ. ಹಾಗಾಗಿ ಟಿಅರ್ ಪಿ ಲಿಸ್ಟ್ ನಲ್ಲಿ ಸದಾ ನಂ೧. ಆದರೆ ನ್ಯೂಸ್ ಕ್ರೆಡಿಬಿಲಿಟಿಯನ್ನು ಉಳಿಸಿಕೊಂಡಿರುವುದು ವಿಜಯ್ ಚಾನಲ್.

ವಿಜಯ್ ಮಗ ಜಯ್. ಆ ಪಾತ್ರವನ್ನೇ ನಮ್ಮ ಕನ್ನಡದ ಹುಡುಗ ಸುಧಿಪ್ ಮಾಡಿರೊದು. ಪತ್ರಿಕೋದ್ಯಮವನ್ನು ವಿದೇಶದಲ್ಲಿ ಓದಿ ಬಂದವನು. ಆತ ತಮ್ಮ ಚಾನಲ್ ಅನ್ನು ನಂ೧ ಚಾನಲ್ ಮಾಡಲು ಹೊರಡುತ್ತಾನೆ. ಆತ ಮಹಾತ್ವಾಕಾಂಕ್ಷಿ. ಮಹಾತ್ವಾಕಾಂಕ್ಷಿಗಳಿಗೆ ಗುರಿ ಮುಟ್ಟುವುದೇ ಮುಖ್ಯ. ದಾರಿ ಮುಖ್ಯವಲ್ಲ. ಅವನ ಭಾವ ಪ್ರಭಾವಿ ವಾಣಿಜ್ಯೋದ್ಯಮಿ-ಅಮಿತಾಬ್ ಅಳಿಯ-ರಜತ್ ಕಪೂರ್[ಪಾತ್ರದ ಹೆಸರು ನೆನಪಿಲ್ಲ] ಅವನನ್ನು ವಿರೋಧ ಪಕ್ಷದ ನಾಯಕ ಮೋಹನ ಪಾಂಡೆಗೆ ಪರಿಚಯಿಸುತ್ತಾನೆ. ಆತನಿಗಾದರೋ ಪ್ರಧಾನ ಮಂತ್ರಿ ಗಾದಿಯ ಮೇಲೆ ಕಣ್ಣು. ಆತ ’ಸುದ್ದಿಯನ್ನು ಹುಡುಕುವುದಲ್ಲ; ಸೃಷ್ಟಿಸಬೇಕು’ ಎಂದು ನಕಲಿ ಸ್ಟಿಂಗ್ ಆಪರೇಷನ್ ಐಡಿಯಾ ಕೊಡುತ್ತಾನೆ. ವಿಜಯ್ ಅದನ್ನು ಕಾರ್ಯರೂಪಕ್ಕೆ ತರುತ್ತಾನೆ.

ಸ್ಟಿಂಗ್ ಅಪರೇಷನ್ ಚಾನಲ್ ನಲ್ಲಿ ಪ್ರಸಾರವಾಗುತ್ತದೆ[ ನಿಮಗೆ ಟಿವಿ೯ ನೆನಪಾಯಿತೇ?] ಸ್ವತಃ ವಿಜಯ್ ಸುದ್ದಿ ವಿಶ್ಲೇಷಣೆ ಮಾಡುತ್ತಾರೆ. ಪರಿಣಾಮವಾಗಿ ದಕ್ಷ ಪ್ರಧಾನಮಂತ್ರಿ ಕೆ.ಕೆ.ರೈನಾ ರಾಜಿನಾಮೆ ಕೊಡಬೇಕಾಗುತ್ತದೆ. ಟಿಆರ್ ಪಿ ಸಡನ್ನಾಗಿ ಏರಿ ನಂ೧ ಪಟ್ಟ ಸಿಕ್ಕಿ ಬಿಡುತ್ತದೆ. ಜಯ್ ಗೆ ಮಾಧ್ಯಮ ಪ್ರಶಸ್ತಿಯೂ ದೊರೆಯುತ್ತದೆ. ಆದರೆ ವಿಜಯನ ಆದರ್ಶಗಳನ್ನು ಮೆಚ್ಚಿ ಅವರಲ್ಲಿಗೆ ಬಂದು ಕೆಲಸಕ್ಕೆ ಸೇರಿಕೊಂಡ ಯುವ ಪತ್ರಕರ್ತ ಪೂರಭ್ [ಭೂಮಿಕೆ ನಿಭಾಯಿಸಿದ್ದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರಮಂತ್ರಿ ವಿಲಾಶ್ ರಾವ್ ದೇಶ್ ಮುಖ್ ಮಗ ರಿತೇಶ್ ದೇಶ್ ಮುಖ್] ಈ ವಿದ್ಯಾಮಾನಗಳಿಂದ ಭ್ರಮನಿರಸಗೊಳ್ಳುತ್ತಾನೆ. ತಾನೇ ಸ್ಟಿಂಗ್ ಅಪರೇಷನ್ನಿನ ಪೂರ್ವಾಪರ ತನಿಖೆ ಮಾಡಿ ಸಿಡಿ ತಯಾರಿಸುತ್ತಾನೆ. ತನ್ನ ಚಾನಲ್ ನಲ್ಲಿ ಇದು ಪ್ರಸಾರವಾಗದೆಂದು ಎದುರಾಳಿ ಚಾನಲ್ ಮೊಹನೀಶ್ ಬೆಹ್ಲ್ ಬಳಿ ಹೋಗುತ್ತಾನೆ. ಆತ ಅದನ್ನು ಪ್ರಸಾರ ಮಾಡದೆ ಪಾಂಡೆಯೊಡನೆ ೫೦೦ ಕೋಟಿಗೆ ಡೀಲ್ ಕುದುರಿಸಿ,ಅದನ್ನು ಪೂರಭ್ ನೆದುರು ಹೆಮ್ಮೆಯಿಂದ ಹೇಳಿಕೊಂಡು ಆತನಿಗೂ ೧೦ ಕೋಟಿ ಕೊಡುವುದಾಗಿ ಹೇಳುತ್ತಾನೆ. ಪೂರಭ್ ಅದನ್ನೆಲ್ಲಾ ಚಿತ್ರಿಸಿಕೊಂಡು ತಂದು ಅಮಿತಾಭ್ ಕೈಗೆ ಕೊಟ್ಟು ಹೊರಟು ಹೋಗುತ್ತಾನೆ.

ಸಿಡಿ ನೋಡಿ ಅಮಿತಾಭ್ ದಿಗ್ಮೂಢನಾಗುತ್ತಾನೆ. ಅತ್ತ ಪಾಂಡೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ಇತ್ತ ಅಮಿತಾಭ್ ವೀಕ್ಷಕರ ಕ್ಷಮೆ ಯಾಚಿಸುತ್ತ ತನ್ನ ಚಾನಲ್ ನಲ್ಲಿ ಈ ಷಡ್ಯಂತ್ರದ ಎಳೆ ಎಳೆಯನ್ನೂ ಬಿಚ್ಚಿಡುತ್ತಾನೆ. ಪ್ರಮಾಣ ವಚನ ಸಮಾರಂಭ ನಡೆಯುವುದಿಲ್ಲ. ಆದರೆ ಅವಮಾನಿತನಾದ ಜಯ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ವಿಜಯ್ ಚಾನಲ್ ಜವಾಬ್ದಾರಿಯನ್ನು ಪೂರಭ್ ಗೆ ವಹಿಸಿಕೊಟ್ಟು ತಾನು ನಿವೃತ್ತನಾಗುತ್ತಾನೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮ ತನ್ನ ಸಿನೆಮಾದ ಬಗ್ಗೆ ಹೇಳಿಕೊಂಡದ್ದು ಹೀಗೆ; ಇದು ಮೀಡಿಯಾ ಬಗ್ಗೆ ನನ್ನ ಕಮೆಂಟ್ ಅಲ್ಲ. ಮೀಡಿಯಾ ಹೀಗೆಯೇ ಇರಬೇಕೆಂದು ನಾನು ಹೇಳಲಾರೆ. ನಾನು ಮಿಡಿಯಾವನ್ನು ಕಂಡಂತೆ , ಅರ್ಥ ಮಾಡಿಕೊಂಡಂತೆ ಸಿನೆಮಾ ಮಾಡಿದ್ದೇನೆ.

ಸಧ್ಯದ ಪರಿಸ್ಥಿತಿಯನ್ನು ನೋಡಿದರೆ ವರ್ಮ ಮೀಡಿಯವನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದಾರೆಂದು ಅನ್ನಿಸುತ್ತದೆ. ಜಯ್ ನನ್ನು ಮಹಾತ್ವಾಕಾಂಕ್ಷಿಯಾದ ರೆಸ್ಟ್ಲೆಸ್ ಪತ್ರಕರ್ತನನ್ನಾಗಿ ಚಿತ್ರಿಸಿದ್ದಾರೆ. ಕೆಲವೊಮ್ಮೆ ವಾಚಾಳಿಯನ್ನಾಗಿ ಮಾಡಿದ್ದಾರೆ. ನಮ್ಮ ವಿಷುವಲ್ ಮೀಡಿಯಾದ ಬಹುತೇಕ ಪತ್ರಕರ್ತರು ತೆರೆಯ ಮೇಲೆ ಕಾಣಿಸಿಕೊಳ್ಳುವುದೇ ಹಾಗೆ.ಆತನ ವಿಕ್ಷಿಪ್ತ ವ್ಯಕ್ತಿತ್ವವನ್ನು ಅವನ ಮ್ಯಾನರಿಸನಲ್ಲಿ ತೋರಿಸಿದ್ದಾರೆ. ಆತನ ಕೈಯಲ್ಲೊಂದು ಸಿಗರ್ಲೈಟ್ ಕೊಟ್ಟು ಅದನ್ನು ಆತ ಮುಚ್ಚಿ ತೆರೆಯುವ ರೀತಿಯಲ್ಲೇ ಆತನ ಮನಸ್ಸು ಪ್ರತಿಫಲಿಸುವಂತೆ ಮಾಡಿದ್ದಾರೆ. ಅಮಿತಾಭ್ ನಂಥ ಅಭಿಜಾತ ಕಲಾವಿದನೆದುರು ಸುದೀಪ್ ಕಷ್ಟಪಟ್ಟು ಅಭಿನಯಿಸಿದಂತೆ ಭಾಸವಾಗುತ್ತದೆ. ಆದರೆ ಮೌನದಲ್ಲಿ ಗೆಲ್ಲುತ್ತಾರೆ.

ಸಿನೆಮಾ ನೋಡುತ್ತಿರುವಾಗಲೇ ನಿಮಗೆ ಇತ್ತೀಚೆಗೆ ನಡೆದ ’ಅಪರೇಷನ್ ಸುವರ್ಣ’ ನೆನಪಿಗೆ ಬರುತ್ತದೆ. ಜೋಕರ್ ಗಳಗಬೇಕಾದವರು [ರಾಜಪಾಲ್ ಯಾದವ್ ಪಾತ್ರ ], ಜ್ಯೋತಿಷಿಗಳಬೇಕಾದವರು ಗಂಭೀರ ಪತ್ರಕರ್ತರಾಗುತ್ತಿರುವುದು ನೆನಪಾಗಬಹುದು. ಪ್ರಿಂಟ್ ಮೀಡಿಯಾದ ಕೆಲವರು ಸೈಡ್ ವಿಂಗ್ ನಲ್ಲಿ ಕಾಣಿಸಿಕೊಳ್ಳಲೂಬಹುದು. ಸಕ್ಕರೆ ಕಾರ್ಖಾನೆ ಮಾಲೀಕರು, ಗಣಿಧನಿಗಳು ಪತ್ರಕರ್ತರನ್ನು ಪರ್ಚೇಸ್ ಮಾಡುತ್ತಿರುವುದು ನೆನಪಿಗೆ ಬಂದರೂ ಬರಬಹುದು! ಸುದ್ದಿಯ ವೈಭವಿಕರಣದಲ್ಲಿ ನಿಮಗೆ ಏನೇನೋ ನೆನಪಾಗಬಹುದು.

ನಾನು ಸಿನೆಮಾ ನೋಡಿದ್ದು ವೀರೇಶ್ ಚಿತ್ರ ಮಂದಿರದಲ್ಲಿ. ಅಲ್ಲಿಯ ಸೌಂಡ್ ಸಿಸ್ಟಮ್ ದೇವರಿಗೇ ಪ್ರೀತಿ! ಆದರೆ ಚಿತ್ರದ ಆರಂಭದಲ್ಲಿ ಬರುವ ರಾಷ್ಟ್ರಗೀತೆಗೆ ಇಡೀ ಚಿತ್ರಮಂದಿರವೇ ಎದ್ದು ನಿಂತು ಗೌರವ ತೋರಿಸಿದ್ದು ನಿಜಕ್ಕೂ ನಂಗೆ ಖುಷಿ ಕೊಟ್ಟಿತು.