Saturday, July 23, 2011

ಅನಂತ ಸಂಪತ್ತಿನ ರಕ್ತಸಿಕ್ತ ಚರಿತ್ರೆ





ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಅನಂತಪದ್ಮನಾಭನ ಪಾದಮೂಲದಲ್ಲಿ ಸಿಕ್ಕಿದ ಬೆಲೆ ಕಟ್ಟಲಾಗದ ಅಪಾರ ಹೊನ್ನರಾಶಿಯನ್ನು ಇಡೀ ಜಗತ್ತೇ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದೆ.
ಆದನ್ನು ಜಗತ್ತಿನೆದುರು ತೆರೆದಿಡಲು ಕಾರಣಕರ್ತರಾಗಿದ್ದ ವಕೀಲ ಸುಂದರರಾಜನ್ ಈಗ ಅನಂತಪದ್ಮನಾಭನಲ್ಲಿ ಲೀನರಾಗಿದ್ದಾರೆ.

ಯಾರೀ ಸುಂದರರಾಜನ್?

ಸಾಯುವ ಕಾಲಕ್ಕೆ ಎಪ್ಪತ್ತು ವರ್ಷವಾಗಿದ್ದ ಇವರು ಸಾಮಾನ್ಯ ವಕೀಲರಲ್ಲ. ತಿರುವಾಂಕೂರು ರಾಜವಂಶಕ್ಕೆ ಪರಂಪರಾಗತ ಕಾನೂನು ಸಲಹೆಗಾರರಾಗಿದ್ದ ಕುಟುಂಬದ ಕುಡಿಯಿವರು. ೧೯೬೪ರ ಬ್ಯಾಚಿನ ಐ.ಪಿ.ಎಸ್ ಅಧಿಕಾರಿ; ದಿ.ಇಂದಿರಾಗಾಂಧಿಯವರ ಆಪ್ತ ಅಂಗರಕ್ಷಕ ಸಿಬ್ಬಂದಿ ಪಡೆಯಲ್ಲಿದ್ದವರು. ನಿವೃತ್ತಿ ಪಡೆದ ನಂತರ ಕಾನೂನು ಅಭ್ಯಾಸವನ್ನು ಮಾಡಿ ವಕೀಲಿ ವೃತ್ತಿಯನ್ನು ಮಾಡಿಕೊಂಡಿದ್ದವರು. ಅಂದರೆ ದೇವಸ್ಥಾನದ ಎಲ್ಲಾ ವ್ಯವಹಾರಗಳನ್ನು ಹತ್ತಿರದಿಂದ ಕಂಡವರು ಮತ್ತು ತನ್ನ ಹಿರಿಯರ ಬಾಯಿಯಿಂದ ಕೇಳಿ ಬೆಳೆದವರು. ಸಂಸಾರವನ್ನು ಕಟ್ಟಿಕೊಳ್ಳದೆ ರಾಜಮನೆತನದವರೇ ಕೊಟ್ಟಿರುವ ಮನೆಯೊಂದರಲ್ಲಿ ದೇವಸ್ಥಾನದ ಸಮಿಪವೇ ವಾಸಮಾಡಿಕೊಂಡಿದ್ದಂತವರು. ಅಂತವರು ದೇವಸ್ಥಾನದ ಸಂಪತ್ತಿನ ದುರ್ವಿನಿಯೋಗವಾಗುತ್ತಿದೆ; ಅಲ್ಲಿಯ ಆಡಳಿತ ಪಾರದರ್ಶಕವಾಗಿರಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಆದರೆ ರಾಜಮನೆತನದ ಈಗಿನ ಉತ್ತರಾದಿಕಾರಿ ತೊಂಬತ್ತರ ಹರೆಯದ ಉತ್ತರಾಡಂ ತಿರುನಾಳ್ ಮಾರ್ತಾಂಡವರ್ಮ ಅವರು ಅದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್ ಏಳು ಜನರ ತಜ್ನರ ಸಮಿತಿಯೊಂದನ್ನು ನೇಮಿಸಿತು.

ಸಮಿತಿಯಲ್ಲಿ ಕೇರಳ ಹೈಕೋರ್ಟ್ ನ ಇಬ್ಬರು ನಿವೃತ್ತ ನ್ಯಾಯಾದೀಶರು, ಒಬ್ಬರು ಹರಳು ತಜ್ನ, ರಾಜ್ಯ ಪ್ರಾಚ್ಯ ಇಲಾಖೆಯ ನಿರ್ದೇಶಕರು, ತಿರುವಾಂಕೂರು ರಾಜ ಮನೆತನದ ಒಬ್ಬರು ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿಯ ಒಬ್ಬರು ಸದಸ್ಯರು ಮತ್ತು ಕೇರಳ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇರುತ್ತಾರೆ. ಅವರ ಉಸ್ತುವಾರಿಯಲ್ಲಿ ನೆಲಮಾಳಿಗೆಯಲ್ಲಿರುವ ಐದು ಕೋಣೆಗಳ ಬಾಗಿಲು ತೆರೆದು ಅದರಲ್ಲಿರುವ ಅಪಾರ ಸಂಪತ್ತನ್ನು ಸಮಿತಿ ಜಗತ್ತಿನೆದುರು ತೆರೆದಿಟ್ಟಿದೆ. ಆದರೆ ನಾಗಮುದ್ರಿಕೆಯಿಂದ ಬಂಧಿತವಾಗಿರುವ ಆರನೇ ಕೋಣೆಯ ಬಾಗಿಲನ್ನು ತೆರೆಯಲಾಗಿಲ್ಲ. ಒಂದು ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಮೌಲ್ಯದ ಬಂಗಾರವನ್ನು ಕಂಡು ಜನತೆ ದಂಗಾಗಿದೆ. ಸುಪ್ರೀಂ ಕೋರ್ಟ್ ಬಿ ಕೋಣೆಯ ಬಾಗಿಲು ತೆರೆಯುವುದನ್ನು ಮುಂದೂಡಿ ತಜ್ನರ ಮತ್ತು ರಾಜಮನೆತನದವರ ಸಲಹೆಯನ್ನು ಕೇಳಿದೆ.
ಈಗ ಇದಕ್ಕೆಲ್ಲಾ ಕಾರಣಪುರುಷನಾಗಿದ್ದ ಸುಂದರರಾಜನ್ ತೀರಿಕೊಂಡಿದ್ದಾರೆ.
ಅನಂತಪದ್ಮನಾಭನ ಸಂಪತ್ತನ್ನು ಒತ್ತಾಯಪೂರ್ವದಿಂದ ತೆಗೆದರೆ ಕೆಡುಕಾಗುತ್ತದೆ ಎಂಬ ಆಸ್ತಿಕರ ವಾದಕ್ಕೆ ಪುಷ್ಟಿ ದೊರೆತಿದೆ. ಈ ಮೊದಲೇ ಸುಪ್ರೀಂಕೋರ್ಟ್ ನೇಮಿಸಿದ್ದ ತಂಡದ ಸದಸ್ಯರೊಬ್ಬರ ತಾಯಿ ಇತ್ತೀಚೆಗೆ ತೀರಿಕೊಂಡಿದ್ದರು.ಇನ್ನೊಬ್ಬರ ಕಾಲಿಗೆ ಗಾಯವಾಗಿತ್ತು. ಹಾಗಾಗಿ ಅನಂತಪದ್ಮನಾಭನ ಮಹಿಮೆಗೆ ಇನ್ನಷ್ಟು ರೆಕ್ಕೆಪುಕ್ಕಗಳು ಹುಟ್ಟಿಕೊಂಡಿವೆ.

ಮುಂದೆ ಈ ಪ್ರಕರಣ ಯಾವ ರೀತಿಯಲ್ಲಿ ಮುಂದುವರಿಯಬಹುದು? ಗೊತ್ತಿಲ್ಲ. ಆದರೆ ಸುಂದರರಾಜನ್ ಅವರು ನ್ಯಾಯಾಲಯದಲ್ಲಿ ಹೂಡಿದ್ದು ಸಾರ್ವಜನಿಕ ಹಿತಾಸಕ್ತಿಯ ಅರ್ಜ. ಹಾಗಾಗಿ ಅದನ್ನು ಅವರ ಪರವಾಗಿ ಇನ್ಯಾರದರೂ ಮುಂದುವರಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಅದಕ್ಕೆ ಯಾರಾದರೂ ಮುಂದೆ ಬರುತ್ತಾರೆಯೇ ಎಂಬುದು ಈಗಿನ ಪ್ರಶ್ನೆ.

ಆದರೆ ಅದಕ್ಕಿಂತಲೂ ಮುಖ್ಯವಾಗಿ ಸುಂದರರಾಜನ್ ನಿಮಿತ್ತದಿಂದ ನಮ್ಮಲ್ಲಿ ಹಲವಾರು ಪ್ರಶ್ನೆಗಳು ಎದ್ದಿವೆ. ಅದರಲ್ಲೂ ಅಲ್ಲಿ ಅಷ್ಟೊಂದು ಸಂಪತ್ತು ಹೇಗೆ ಕ್ರೋಢಿಕರಣಗೊಂಡಿರಬಹುದು? ಮತ್ತು ಈಗ ಅದನ್ನು ಏನು ಮಾಡುವುದು? ಹೇಗೆ ಸುರಕ್ಷಿತವಾಗಿಡುವುದು? ಈ ಕುತೂಹಲದ ಪ್ರಶ್ನೆಗಳಿಗೆ ಇನ್ನೂ ಯಾವುದೇ ರೀತಿಯಲ್ಲಿ ಸಮಾಧಾನ ಸಿಕ್ಕಿಲ್ಲ.
ಅನಂತಪದ್ಮನಾಭ ದೇವಸ್ಥಾನ ರಾಜಾಶ್ರಯದ ದೇವಸ್ಥಾನ. ರಾಜ ಸಮೃದ್ಧನಾಗಿದ್ದನೆಂದರೆ ರಾಜ್ಯವೂ ಸುಭೀಕ್ಷವಾಗಿರುತ್ತಿತ್ತು. ಆತನ ಆದ್ಯತಾ ವಲಯಗಳಿಗೆಲ್ಲಾ ರಾಜ ಭಂಡಾರದಿಂದ ಧಾರಾಳ ಕೊಡುಗೆ ಸಿಗುತ್ತಿತ್ತು. ರಾಜ ಸಮೃದ್ಧನಾಗುವುದು ಹೇಗೆ? ಸಂಪತ್ತಿನ ಕ್ರೋಢಿಕರಣದಿಂದ. ಸಂಪತ್ತು ಕ್ರೋಢಿಕರಣವಾಗುವುದು ಹೇಗೆ? ಅದಕ್ಕೆ ಮೂರು ದಾರಿಗಳಿವೆ.ಮೊದಲನೆಯದು ವ್ಯಪಾರ ವಹಿವಾಟು. ಎರಡನೆಯದು ತೆರಿಗೆ. ಮೂರನೆಯದು ಕಾಣಿಕೆಯಿಂದ.

ಪ್ರಾಚೀನ ಕಾಲದಿಂದಲೂ ಭಾರತದ ಪಶ್ಚಿಮ ಕರಾವಳಿಯ ರಾಜರು ವಿದೇಶದೊಡನೆ ವಾಣಿಜ್ಯ ಸಂಬಂಧ ಹೊಂದಿದ್ದರು. ಇಲ್ಲಿಯ ಸಂಬಾರು ಪದಾರ್ಥಗಳಿಗೆ ಮುಖ್ಯವಾಗಿ ಕಾಳುಮೆಣಸಿಗೆ ಮದ್ಯಪ್ರಾಚ್ಯ ದೇಶಗಳಲ್ಲಿ ಬಹು ಬೇಡಿಕೆಯಿತ್ತು. ಭಾರತಕ್ಕೆ ಬ್ರಿಟೀಷ್ ರ ಆಗಮನದ ಬಹು ಹಿಂದೆಯೇ ತಿರುವಾಂಕೂರು ರಾಜರು ಗ್ರೀಸ್, ಈಜಿಪ್ಟ್, ರೋಮ್, ಡೆನ್ಮಾರ್ಕ್, ಪೋರ್ಚ್ ಗಲ್, ಫಿನ್ ಲ್ಯಂಡ್, ಪ್ರಾನ್ಸ್ ಮತ್ತು ಬ್ರಿಟನ್ ಜೊತೆ ಸಮುದ್ರ ಮಾರ್ಗವಾಗಿ ವ್ಯಾಪಾರ ಮಾಡುತ್ತಿದ್ದರು. ಕೊಲ್ಲಂ, ತಿರುವಾಂಕೂರು, ಪುರಕ್ಕಾಡು ಮತ್ತು ವಿಜನಾಂ ಅವರ ಪ್ರಮುಖ ಬಂದರುಗಳಾಗಿದ್ದವು. ಪೋರ್ಚ್ ಗಲ್ ವ್ಯಾಪಾರಿ ವಾಸ್ಕೋಡಗಾಮ ೧೪೯೮ರಲ್ಲಿ ಕೇರಳದ ಕೊಜಿಕ್ಕೋಡಿಗೆ ಬಂದಿಳಿದ. ಆಗಲೇ ಗೋವಾ ಅವರ ವಸಹಾತು ಆಗಿತ್ತು. ಸಂಬಾರು ಪದಾರ್ಥಗಳ ವ್ಯಾಪಾರದಲ್ಲಿ ಏಕಸ್ವಾಮ್ಯತೆ ಪಡೆಯುವುದು ಪೋರ್ಚ್ಗೀಸರ ಉದ್ದೇಶವಾಗಿತ್ತು. ಬ್ರಿಟೀಷ್ ಮತ್ತು ಡಚ್ಚರು ಅವರ ಪ್ರತಿಸ್ಪರ್ಧಿಗಳಾಗಿದ್ದರು. ಇಂಥ ಡಚ್ಚರನ್ನು ೧೭೪೧ರಲ್ಲಿ ತಿರುವಾಂಕೂರು ರಾಜ ಮಾರ್ತಾಂಡವರ್ಮ ಸೋಲಿಸಿದ್ದ. ಅವರ ಬಳಿ ಬಲಾಢ್ಯವಾದ ಸೈನವಿತ್ತು. ವಿದೇಶಿ ವಿನಿಮಯ ಚಿನ್ನದ ರೂಪದಲ್ಲಿ ನಡೆಯುತ್ತಿತ್ತು ಎಂಬುದು ಗಮನಾರ್ಹ.

ತಿರುವಾಂಕೂರು ರಾಜವಂಶ ಬಹು ಹಳೆಯ ಮತ್ತು ಸುದೀರ್ಘ ಕಾಲ ಕೇರಳದ ಬಹುಭಾಗವನ್ನು ಆಳಿದ ರಾಜಮನೆತನ. ಅಲ್ಲಿನ ಜನರಿಗೆ ರಾಜ ಪ್ರತ್ಯಕ್ಷ ದೈವನಾಗಿದ್ದ. ಆತನನ್ನು ಅವರು ’ಪೊನ್ನು ತಂಬುರನ್’ ಎಂದು ಕರೆಯುತ್ತಿದ್ದರು. ಹಾಗೆಂದರೆ ಚಿನ್ನದ ರಾಜ ಎಂಬುದಾಗಿತ್ತು. ಹಾಗೆ ಕರೆಯಲು ಕಾರಣವಿತ್ತು. ಅತನ ಬಳಿಯಲ್ಲಿ ಅಪಾರ ಪ್ರಮಾಣದ ಚಿನ್ನವಿತ್ತು. ಆತ ಚಿನ್ನದಲ್ಲಿ ತುಲಾಭಾರ ಮಾಡಿಸಿಕೊಂಡು ಆ ಚಿನ್ನವನ್ನು ಬ್ರಾಹ್ಮಣರಿಗೆ ದಾನ ಮಾಡುತ್ತಿದ್ದ.ಅದಕ್ಕೆ ’ತುಲಾ ಪುರುಷ ದಾನ’ವೆಂದು ಕರೆಯಲಾಗುತ್ತಿತ್ತು. ಅದಲ್ಲದೆ ರಾಜ ಪೊನ್ನ ತಂಬುರನೆಂದು ಕರೆಯಲು ಇನ್ನೊಂದು ವಿಶಿಷ್ಟ ಕಾರಣವಿತ್ತು. ಅದುವೇ ’ಪದ್ಮ ಗರ್ಭ ದಾನಂ’
ಪದ್ಮ ಗರ್ಭ ದಾನಂ ರಾಜನ ವಿಶೇಷ ಸ್ನಾನಕ್ಕೆ ಸಂಬಂಧಿಸಿದ್ದು.ತಾವರೆ ಹೂವಿನಾಕಾರ ದೊಡ್ಡ ಚಿನ್ನದ ಪಾತ್ರೆಯಲ್ಲಿ ನೀರಿನೊಂದಿಗೆ ಹಾಲು, ತುಪ್ಪ, ಚಂದನ, ಶ್ರೀಗಂಧ ಇನ್ನಿತರ ಸುಗಂಧ ದ್ರವ್ಯಗಳನ್ನು ಹಾಕಿ, ಅಂಥ ನೀರಿನಲ್ಲಿ ಬ್ರಾಹ್ಮಣರ ವೇದಘೋಷದ ನಡುವೆ ರಾಜ ಸ್ನಾನ ಮಾಡುತ್ತಾನೆ. ಹಾಗೆ ಸ್ನಾನ ಮಾಡಿ ಬಂದ ರಾಜನನ್ನು ಪ್ರಜೆಗಳು ಪೊನ್ನ ತಂಬುರನ್ ಎಂದು ಕರೆಯುತ್ತಿದ್ದರು.

ಜನಪ್ರಿಯ ರಾಜನಾಗುವುದು ಹೇಗೆ?

ಇತಿಹಾಸದಲ್ಲಿ ಉಲ್ಲೇಖಿಸಲ್ಪಟ್ಟ ಹಾಗೆ, ಕೆರೆಗಳನ್ನು ಕಟ್ಟಿಸಿದಾತ, ಅರವಟ್ಟಿಗೆಗಳನ್ನು[ದಾರಿಹೋಕರಿಗೆ ಕುಡಿಯುವ ನೀರಿನ ವ್ಯವಸ್ಥೆ] ನಿರ್ಮಿಸಿದಾತ, ಸಾಲು ಮರಗಳನ್ನು ನೆಡಿಸಿದಾತ, ಧರ್ಮಛತ್ರಗಳನ್ನು ಕಟ್ಟಿಸಿದಾತ, ದೇವಸ್ಥಾನಗಳಿಗೆ ಧಾರಾಳ ಉಂಬಳಿಗಳನ್ನು ಕೊಟ್ಟಾತ, ಪ್ರಜೆಗಳ ಮೇಲೆ ಅನಗತ್ಯ ತೆರಿಗೆಗಳನ್ನು ಹೊರಿಸದಾತ ಜನಾನುರಾಗಿ ರಾಜನೆನಿಸಿಕೊಳ್ಳುತ್ತಿದ್ದ.
ತಿರುವಾಂಕೂರು ರಾಜರು ಹಾಗಿದ್ದರೇ? ೧೭೫೦ರವರೆಗೆ ಇತಿಹಾಸ ಈ ಬಗ್ಗೆ ಏನನ್ನೂ ಹೇಳಿದಂತಿಲ್ಲ. ಆದರೆ ಅಂತರ್ಜಾಲವನ್ನು ಜಾಲಾಡಿದಾಗ ಆ ಕಾಲದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಒಂದಷ್ಟು ವಿವರಗಳು ದೊರೆತವು; 

ಪ್ರತಿಯೊಂದು ರಾಜವಂಶಕ್ಕೂ ದಂತ ಕಥೆಗಳಿರುತ್ತವೆ. ಐತಿಹ್ಯಗಳಿರುತ್ತವೆ. ಇತಿಹಾಸವಿರುತ್ತದೆ.
ತಿರುವಾಂಕೂರು ರಾಜಮನೆತನದ ಐತಿಹ್ಯ ಕ್ರಿಸ್ತ ಶಕದಿಂದಲೇ ಆರಂಭಗೊಳ್ಳುತ್ತದೆ. ಆಗ ಅವರನ್ನು ಚೇರರು ಎಂದು ಕರೆಯುತ್ತಿದ್ದರು. ಎಲ್ಲಾ ಅರಸರ ಹಾಗೆ ಅವು ಕೂಡಾ ರಾಜ್ಯ ವಿಸ್ತರಣೆಯಲ್ಲಿ ತೊಡಗಿದ್ದವು; ನೆರೆಯ ರಾಜ್ಯದವರೊಡನೆ ಯುದ್ಧ ಮಾಡುತ್ತಿದ್ದವು; ಸೋತ ರಾಜ್ಯವನ್ನು ದೋಚಿ ತಮ್ಮ ಬೊಕ್ಕಸ ತುಂಬಿಕೊಳ್ಳುತ್ತಿದ್ದವು. ರಾಜಿ ಸಂಧಾನದ ನೆಪದಲ್ಲಿ ಅನ್ಯ ರಾಜ್ಯದ ಹೆಣ್ಣುಮಕ್ಕಳನ್ನು ತಮ್ಮ ಅಂತಃಪುರ ತುಂಬಿಸಿಕೊಳ್ಳುತ್ತಿದ್ದರು. ಅಲ್ಲಿ ಕಠಿಣ ತೆರಿಗೆಯನ್ನು ವಿಧಿಸಿ ತಮ್ಮ ಭಂಡಾರ ತುಂಬಿಸಿಕೊಳ್ಳುತ್ತಿದ್ದರು ಏಳೆಂಟು ಶತಮಾನಗಳ ಕಾಲ ಆಳ್ವಿಕೆ ನಡೆಸಿದ ರಾಜಮನೆತನವೊಂದರ ಬೊಕ್ಕಸ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದರಲ್ಲಿ ಆಶ್ಚರ್ಯವೇನಿಲ್ಲ. ಅದೆಲ್ಲಾ ಸಾಮಾನ್ಯ. ಆದರೆ ಕ್ರಿ.ಶ.೧೭೫೦ರಲ್ಲಿ ರಾಜ ಮಾರ್ತಾಂಡವರ್ಮ ತನ್ನ ಸಮಸ್ತ ಸಂಪತ್ತೆಲ್ಲವನ್ನು ಅನಂತಪದ್ಮನಾಭನಿಗೆ ಅರ್ಪಿಸಿ ಯಾಕೆ ಪದ್ಮನಾಭ ದಾಸನಾದ? . ಅಂತಹ ವೈರಾಗ್ಯ ಉಂಟಾಗುವಂತಹ ಯಾವ ಘಟನೆ ಆತನ ಬದುಕಿನಲ್ಲಿ ಘಟಿಸಿರಬಹುದು?

ತಿರುವಾಂಕೂರು ಅರಮನೆಯ ಪುರಾತನ ದಾಖಲೆಗಳಾದ ’ಮತಿಲಾಕಂ ರೆಕಾರ್ಡ್ಸ್’ ಅನ್ನು ಉಲ್ಲೆಖಿಸಿ ಇತ್ತೀಚೆಗೆ ಇಂಗ್ಲೀಷ್ ಪತ್ರಿಕೆಯೊಂದು ಲೇಖನವೊಂದನ್ನು ಪ್ರಕಟಿಸಿತ್ತು. ಅದರಲ್ಲಿ ರಾಜ ಮಾರ್ತಾಂಡವರ್ಮ ಯಾಕೆ ಪದ್ಮನಾಭದಾಸನಾದ ಎಂಬುದರ ಬಗ್ಗೆ ಸುಳಿವುಗಳಿವೆ. ’ಮತಿಲಾಕಂ’ ಎಂದರೆ ಅರಮನೆಯ ದಾಖಲೆಗಳು ಎಂದರ್ಥ. ಮಲೆಯಾಳಂ ಕವಿ ಉಳ್ಳೂರು ಎಸ್ ಪರಮೇಶ್ವರನ್ ಅಯ್ಯರ್ ೧೯೪೧ರಲ್ಲಿ ರಾಜಮನೆತನ ಮತ್ತು ದೇವಸ್ಥಾನದ ಇತಿಹಾಸದ ದಾಖಲೆಗಳನ್ನು ಸಂಕಲಿಸಿ ದಾಖಲಿಸಿದ್ದಾರೆ. ಇದರಲ್ಲಿ ಅನಂತಪದ್ಮನಾಭನ ನೆಲಮಾಳಿಗೆಯ ಕೊಠಡಿಗಳಲ್ಲಿ ಕೂಡಿಟ್ಟ ಸಂಪತ್ತಿನ ವಿವರಗಳಿವೆ
’ಮತಿಲಾಕಂ’ನಲ್ಲಿ ದೊರಕಿದ ವಿವರಗಳನ್ನು ಓದುತ್ತಿದ್ದರೆ ರಾಜ ಮಾರ್ತಾಂಡ ಮುಂದಾಲೋಚನೆಯಿದ್ದ, ಅತ್ಯಂತ ಚಾಣಕ್ಷ್ಯ ದೊರೆ ಎಂಬುದು ಗೊತ್ತಾಗುತ್ತದೆ. ಆತ ಪದ್ಮನಾಭದಾಸನಾದ ಹಿನ್ನೆಲೆಯನ್ನು ಗಮನಿಸಿದರೆ ಅದರಲ್ಲಿ ವೈರಾಗ್ಯ ಗೋಚರಿಸುವುದಿಲ್ಲ. ಬದಲಾಗಿ ಅದು ಆತನ ಪ್ರಭುದ್ಧ ರಾಜಕೀಯ ನಡೆಯೆಂದು ಗೊತ್ತಾಗುತ್ತದೆ.

ಹದಿನೈದನೇ ಶತಮಾನದವರೆಗೆ ಪದ್ಮನಾಭಸ್ವಾಮಿಯ ಆಡಳಿತವನ್ನು ’ಎಟ್ಟರ ಯೋಗಂ’ಎನ್ನುವ ಮಂಡಳಿ ನಿರ್ವಹಿಸುತ್ತಿತ್ತು. ಇದು ಅತ್ಯಂತ ಪ್ರಭಾವಶಾಲಿಯಾದ ಬ್ರಾಹ್ಮಣರ ಕೂಟದಂತಿತ್ತು. ಒಂಬತ್ತು ಮಂದಿ ಇದರಲ್ಲಿ ಇದ್ದರೂ ಇದಕ್ಕೆ ಓಟಿನ ಅಧಿಕಾರವಿರುವುದು ಎಂಟುವರೆಯಷ್ಟೇ. ಇದರಲ್ಲಿ ಅರ್ಧ ಓಟಿನ ಅಧಿಕಾರವಿರುವುದು ಯಾರಿಗೆ ಗೊತ್ತೇ? ರಾಜನಿಗೆ. ಅಶ್ಚರ್ಯ ಪಡಬೇಕಾಗಿಲ್ಲ. ರಾಜ ಮನೆತನಕ್ಕೆ ನಿಜವಾಗಿಯೂ ಯವುದೇ ಅಧಿಕಾರವಿರಲಿಲ್ಲ. ಅವರು ನಾಮಕಾವಸ್ಥೆಯ ರಾಜರು. ಎತ್ತರಯೋಗಂನ ಉಳಿದ ಎಂಟು ಜನರಲ್ಲಿ ಏಳು ಮಂದಿ ಮಲೆಯಾಳಿ ಬ್ರಾಹ್ಮಣರಾಗಿದ್ದರೆ ಒಬ್ಬರು ನಾಯರ್ ಜಾತಿಗೆ ಸೇರಿದವರಾಗಿದ್ದರು.

’ಎಟ್ಟರ ಯೋಗಂ’ನ ಅಧಿಕಾರ ವ್ಯಾಪ್ತಿ ಕೇವಲ ದೇವಸ್ಥಾನಕ್ಕಷ್ಟೇ ಸೀಮಿತವಾಗಿರಲಿಲ್ಲ.ಬದಲಾಗಿ ಅದು ರಾಜ್ಯಾಡಳಿತಕ್ಕೂ ವ್ಯಾಪಿಸಿಕೊಂಡಿತ್ತು. ಅದು ತಿರುವಾಂಕೂರು ರಾಜ್ಯವನ್ನು ಎಂಟು ಮಂಡಲಗಳಾಗಿ ವಿಭಜಿಸಿತ್ತು. ಪ್ರತಿಯೊಂದು ಮಂಡಲಕ್ಕೂ ನಾಯರ್ ಜಾತಿಗೆ ಸೇರಿದ ವ್ಯಕ್ತಿಯನ್ನು ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು. ಈ ಎಂಟು ಮಂದಿ ರಾಜನಿಗಿಂತಲೂ ಹೆಚ್ಚು ಅಧಿಕಾರ ಹೊಂದಿದ್ದರು. ಮತ್ತು ಅತ್ಯಂತ ಕ್ರೂರ ತೆರಿಗೆ ಪದ್ದತಿಯನ್ನು ಪ್ರಜೆಗಳ ಮೇಲೆ ವಿದಿಸಿದ್ದರು. ಅದರಲ್ಲಿಯೂ ಕೆಳಜಾತೀಯ ಜನರಿಗೆ ಮದುವೆಯಾದರೆ, ಮಕ್ಕಳು ಹುಟ್ಟಿದರೆ ಕೊನೆಗೆ ಸತ್ತಾಗಲೂ ತೆರಿಗೆ ಹಾಕುತ್ತಿದ್ದರು. ನಾಡದೋಣಿ, ನೇಗಿಲು, ಎತ್ತಿನ ಗಾಡಿ, ಮುಂಡಾಸು, ಕೊಡೆ ಅಷ್ಟೇಕೆ ಮೀಸೆ ಬಿಡಬೇಕಾದರೂ ತೆರಿಗೆ ಕಟ್ಟಬೇಕಾಗಿತ್ತು.ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಬೇಕದರೂ ತೆರಿಗೆ ಕಟ್ಟಬೇಕಾಗಿತ್ತು. ಆ ತೆರಿಗೆಅನ್ನು ’ಮುಲಕ್ಕಾರಮ್’ ಎಂದು ಕರೆಯಲಾಗಿದೆ. ಇಂಥ ಅನಾಗರಿಕ, ಹೀನ ತೆರಿಗೆಯನ್ನು ಚೆರತ್ತಾಲಿನ ಕಪುಂತಾಲ ಮನೆತನದ ನಂಗಲಿ ಎಂಬ ಹೆಣ್ಣುಮಗಳು ಪ್ರತಿಬಟಿಸಿದ ಬಗ್ಗೆ ’ಮತಿಲಾಕಂ ರೆಕಾರ್ಡ್ಸ್’ನಲ್ಲಿ ದಾಖಲಾಗಿದೆ. ಮತ್ತೂರು ಪಣಿಕ್ಕರ್ ಮಂಡಲಾಧಿಪತಿಯಾಗಿದ್ದ ಕಾಲದಲ್ಲಿ ಆತನ ಪ್ರತಿನಿಧಿ ಬಂದು ಆ ಹಸುಕಂದನ ತಾಯಿಯಲ್ಲಿ ’ಮುಲಕ್ಕಾರಮ್’ ತೆರಿಗೆಯನ್ನು ಕೇಳಿದ್ದಾನೆ. ಆಗ ಆಕೆ ಒಳಗೆ ಹೋದವಳೇ ಎರಡೂ ಮೊಲೆಗಳನ್ನು ಕೊಯ್ದು ತಂದು ಅವನ ಕೈಗಿಟ್ಟವಳೇ ರಕ್ತಸ್ರಾವದಿಂದ ಕುಸಿದು ಬಿದ್ದು ಸಾವನ್ನಪ್ಪುತ್ತಾಳೆ.
ಇಂಥ ತೆರಿಗೆಗಳಿಂದ ಸಂಗ್ರಹವಾದ ಧನ ಕನಕಗಳು ಕೂಡಾ ಇಂದು ಪದ್ಮನಾಭಸ್ವಾಮಿಯ ಪಾದಮೂಲದಲ್ಲಿ ಸಿಗುತ್ತಿರುವ ಸಂಪತ್ತಿನ ಜೊತೆ ಸೇರಿಕೊಂಡಿವೆ. ಅದನ್ನು ಅಲ್ಲಿ ತುಂಬಿಸಿಟ್ಟವನೇ ರಾಜ ಮಾರ್ತಾಂಡವರ್ಮ. ಆತ ರಾಜ ಭಂಡಾರವನ್ನೆಲ್ಲಾ ಅಲ್ಲಿ ಯಾಕೆ ಹುದುಗಿಸಿಟ್ಟ?

೧೭೦೬ರಲ್ಲಿ ಜನಿಸಿದ ಮಾರ್ತಾಂಡವರ್ಮ ಎಟ್ಟರಯೋಗಂ ಸದಸ್ಯರ ಹೀನ ಕೃತ್ಯಗಳನ್ನು ಗಮನಿಸುತ್ತಲೇ ಬಂದಿದ್ದಾನೆ.ಈ ಹಿಂದೆ ಮಹಾರಾಜ ಆದಿತ್ಯವರ್ಮ ಅರಮನೆಯೊಂದನ್ನು ಕಟ್ಟಬೇಕೆಂದು ಆಸೆ ಪಟ್ಟಾಗ ಅದನ್ನುಎಟ್ಟಾರ ಯೋಗಂ ನಿರಾಕರಿಸಿತ್ತಲ್ಲದೆ ಅನಂತರದಲ್ಲಿ ಅವನ ಕೊಲೆಯನ್ನೂ ಮಾಡಿತ್ತು. ರಾಣಿ ಉಮ್ಮಾಯಮ್ಮನ ಐದು ಮಕ್ಕಳನ್ನು ಕೂಡಾ ಇವರೇ ಕೊಲ್ಲಿಸಿದ್ದರು. ರಾಜಮನೆತನದ ವಿರುದ್ಧ ಎಟ್ಟರಯೋಗಂ ಸದಾ ಸಂಚು, ಪಿತೂರಿಗಳನ್ನು ನಡೆಸುತ್ತಿತ್ತು. ಆ ಪಿತೂರಿನ ಒಂದು ಭಾಗವೇ ರಾಜಾ ಮರ್ತಾಂಡವರ್ಮನ ಕೊಲೆ ಸಂಚು.

ಮಾರ್ತಾಂಡವರ್ಮ ಬುದ್ಧಿವಂತನಾಗಿದ್ದ. ಮುತ್ಸದ್ದಿಯಾಗಿದ್ದ. ತಾನು ಇನ್ನೂ೧೭ ವರ್ಷದವನಾಗಿದ್ದಾಗಲೇ ಅಂದರೆ ೧೭೨೩ರಲ್ಲೇ ಇಂಗೀಷರೊಡನೆ ರಾಜಕೀಯ ಒಪ್ಪಂದ ಮಾಡಿಕೊಂಡ. ಆತನ ಸಲಹೆಯಂತೆ ತಿರುವಾಂಕೂರು ರಾಜ್ಯವನ್ನಾಳುತ್ತಿದ್ದ ರಾಜಾ ರವಿವರ್ಮ ಮಧುರೈ ರಾಜನ ಜೊತೆ ಸೌಹಾರ್ಧ ಸಂಬಂಧವಿಟ್ಟುಕೊಂಡ. ಈತ ತಮ್ಮ ಅಂಕೆಯನ್ನು ಮೀರಿ ಬೆಳೆಯುತ್ತಿದ್ದಾನೆ ಎಂಬುದನ್ನು ಮನಗಂಡ ’ಎಟ್ಟರಯೋಗಂ’ ಮಾರ್ತಾಂಡನ ಕೊಲೆ ಮಾಡಲು ನಿರ್ದರಿಸಿತು.
ತನ್ನ ಕೊಲೆಯ ಸಂಚನ್ನು ಹೇಗೋ ಅರಿತುಕೊಂಡ ಯುವಕ ಮರ್ತಾಂಡವರ್ಮ ಅರಮನೆಯಿಂದ ತಪ್ಪಿಸಿಕೊಂಡು ಹೋಗಿ ಹಲಸಿನ ಮರದ ರೆಂಬೆಗಳೆಡೆಯಲ್ಲಿ ಅಡಗಿ ಕುಳಿತು ಜೀವ ಉಳಿಸಿಕೊಂಡ. ಹಾಗೆ ದೇಶಭ್ರಷ್ಟನಾದ ಮಾರ್ತಾಂಡವರ್ಮ ನೆರೆಯ ರಾಜ್ಯಗಳ ಸಹಾಯದಿಂದ ಸೈನ್ಯ ಕಟ್ಟಿ ’ಎಟ್ಟರಯೋಗಂ’ದ ಮೇಲೆ ದಂಡೆತ್ತಿ ಬಂದ. ಎಟ್ಟರ ನಿಯೋಗದ ಎಂಟೂ ಮಂದಿಯನ್ನೂ ಕೊಂದು ಹಾಕಿ ತಾನು ರಾಜನಾದ. ಇತಿಹಾಸದ ದಾಖಲೆಗಳ ಪ್ರಕಾರ ಆತ ಪಟ್ಟವೇರಿದ್ದು ೧೭೨೯ರಲ್ಲಿ. ಆಗ ಆತನಿಗೆ ಇಪ್ಪತ್ತನಾಲ್ಕು ವರ್ಷ. ಆತ ತನ್ನ ಕಿರೀಟವನ್ನು ಪದ್ಮನಾಭನ ಪಾದಕ್ಕೊಪ್ಪಿಸಿ ಪದ್ಮನಾಭದಾಸನಾದದ್ದು ೧೭೫೦ರಲ್ಲಿ. ಇದರ ನಡುವಿನ ಇಪ್ಪತ್ತೊಂದು ವರ್ಶದಲ್ಲಿ ಆತ ಮಾಡಿದ್ದಾದರೂ ಎನು?

ಮೊತ್ತ ಮೊದಲನೆಯದಾಗಿ ಆತ ೧೭೨೪ರಲ್ಲಿ ಎಟ್ಟರ ನಿಯೋಗದ ಕಾಲಾವಧಿಯಲ್ಲಿ ಪ್ರಾರಂಭಗೊಂಡ ದೇವಸ್ಥಾನದ ಪುನರ್ ನಿರ್ಮಾಣದ ಕಾರ್ಯವನ್ನು ತ್ವರಿತ ಗತಿಯಲ್ಲಿ ಮುಗಿಸಿದ. ರಾಜ್ಯದ ಅಭಿವೃದ್ದಿಯತ್ತ ಗಮನ ಹರಿಸಿದ. ಕೃಷಿಗೆ ವಿಶೇಷ ಒತ್ತು ನೀಡಿದ ರಾಜನೀತ. ಅನೇಕ ಅಣೆಕಟ್ಟುಗಳನ್ನು ಕಟ್ಟಿ ನೀರಾವರಿಗೆ ಅನುಕೂಲ ಮಾಡಿದ. ಇದರಿಂದಾಗಿ ಭತ್ತದಲ್ಲಿ ಎರಡು ಬೆಳೆ ತೆಗೆಯುವಂತಾಯಿತು.ಅನಂತರ ಇತಿಹಾಸದಿಂದ ತಿಳಿದು ಬಂದ ಪ್ರಕಾರ ಆತ ಅನೇಕ ಯುದ್ದಗಳಲ್ಲಿ ಭಾಗಿಯಾದ ಮತ್ತು ಎಲ್ಲವುದರಲ್ಲಿ ಗೆಲ್ಲುತ್ತಾ ಹೋದ. ಅದರಲ್ಲಿ ೧೭೪೧ರಲ್ಲಿ ನಡೆದ ಡಚ್ ವಿರುದ್ದದ ಗೆಲುವು ಪ್ರಮುಖವಾದುದು. ಯುದ್ದ ಗೆದ್ದಂತೆಲ್ಲಾ ರಾಜನ ಬೊಕ್ಕಸ ತುಂಬಿ ತುಳುಕತೊಡಗಿತು. ಹಾಗೇ ಶೇಖರವಾಗುತ್ತಲೇ ಹೋಗುತ್ತಿರುವ ಬಂಗಾರವನ್ನು ಶತ್ರುಗಳಿಂದ ರಕ್ಷಿಸಿಕೊಳ್ಳುವ ಚಿಂತೆ ಕಾಡತೊಡಗಿತು. ಅದಾಗಲೇ ಮೈಸೂರಿನ ಅರಸ ಹೈದರಾಲಿ ಕೇರಳದ ಸಣ್ಣಪುಟ್ಟ ರಾಜರನ್ನು ಸೋಲಿಸಿ ಮುಂದೊತ್ತಿ ಬರುತ್ತಿದ್ದ. ಬ್ರಿಟೀಷರು ನಮ್ಮ ದೇಶದ ಸಂಪತ್ತೆಲ್ಲವನ್ನೂ ಹಡಗುಗಳಲ್ಲಿ ಹೇರಿಕೊಂಡು ತಮ್ಮ ದೇಶಕ್ಕೆ ಸಾಗಿಸುತ್ತಿದ್ದರು. ಇದನ್ನೆಲ್ಲಾ ಮನಗಂಡ ಮಾರ್ತಾಂಡವರ್ಮ ಪದ್ಮನಾಭ ದಾಸ ನಾಗುವ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆಗಳಿವೆ.
 
೧೭೫೦ ಜನವರಿ ೩ರಂದು ಮಾರ್ತಾಂಡವರ್ಮ ಪದ್ಮನಾಭದಾಸನಾದ. ಅಂದರೆ ತಿರುವಾಂಕೂರು ರಾಜ್ಯದ ರಾಜ ಸಾಕ್ಷಾತ್ ಅನಂತಪದ್ಮನಾಭ. ಆತನ ಪ್ರತಿನಿಧಿಯಾಗಿ ಮಾರ್ತಾಂಡವರ್ಮ ರಾಜ್ಯಬಾರ ನಡೆಸತೊಡಗಿದ. ಈ ಚತುರ ನಡೆ ಅವನನ್ನು ಬಹು ಎತ್ತರಕ್ಕೆ ಕೊಂಡೊಯ್ಯ್ದಿತ್ತು. ನೆರೆಯ ಯಾವ ರಾಜರೂ ತಾವಾಗಿ ಯುದ್ದಕ್ಕೆ ಅಣಿಯಾಗಲಿಲ್ಲ. ಯಾರಾದರೂ ದೇವರ ಮೇಲೆ ಯುದ್ದಕ್ಕೆ ಹೋಗುತ್ತಾರೆಯೇ? ಹಾಗೆಯೇ ದೇವರನ್ನು ಸಂಪ್ರೀತಗೊಳಿಸಲು, ಅವನ ಅನುಗ್ರಹ ಪಡೆಯಲು ನೆರೆಯ ರಾಜರೂ ಸೇರಿದಂತೆ ಪ್ರಜೆಗಳು ರಾಶಿ ರಾಶಿ ಕಾಣಿಕೆಗಳನ್ನು ತಂದು ಪದ್ಮನಾಭನ ಸನ್ನಿದಿಗೆ ಅರ್ಪಿಸತೊಡಗಿದರು. ಪದ್ಮನಾಭ ಸ್ರೀಮಂತನಾಗುತ್ತಲೇ ಹೋದ.

ನೇರವಾಗಿ ಪದ್ಮನಾಭನಿಗೆ ಬಂದ ಸಂಪತ್ತು ಮತ್ತು ರಾಜ್ಯ ಬೊಕ್ಕಸಕ್ಕೆ ಹರಿದು ಬಂದ ಸಂಪತ್ತು ಇವನ್ನೆಲ್ಲಾ ಕಾಪಾಡಿಕೊಳ್ಳುವುದು ಮಾರ್ತಾಂಡವರ್ಮನಿಗೆ ಚಿಂತೆಯಾಯಿಗಿರಬೇಕು ಅಥವಾ ಅತನ ವೈರಾಗ್ಯಕ್ಕೆ ಇನ್ಯಾವುದೋ ಬಲವಾದ ಕಾರಣ ಇದ್ದಿರಲೂಬಹುದು.ಹಾಗಾಗಿ ಅದನ್ನೆಲ್ಲಾ ಪದ್ಮನಾಭನ ಸನ್ನಿಧಿಯಲ್ಲಿರುವ ನೆಲಮಾಳಿಗೆಯಲ್ಲಿ ಕೂಡಿಟ್ಟ. ಆದರೆ ಆತನ ವ್ಯಕ್ತಿತ್ವ ಮಾಗಿದೆ ಎಂಬುದಕ್ಕೆ ಉದಾಹರಣೆಗಳು ಸಿಗುತ್ತವೆ. ೧೭೫೩ರ ಅಗಸ್ಟ್ ೧೫ರಂದು ಆತ ಡಚ್ಚರೊಡನೆ ಶಾಂತಿ ಮತ್ತು ಸೌಹಾರ್ಧದ ಒಪ್ಪಂದ ಮಾಡಿಕೊಳ್ಳುತ್ತಾನೆ. ತಾನು ಸಾಯುವ ಮೊದಲು[೧೭೫೮] ಮುಂದಿನ ರಾಜ ತನ್ನಳಿಯ ಧರ್ಮರಾಜನನ್ನು ಕರೆದು ರಾಜಮನೆತನದವರು ಎಂದೂ ಪರಸ್ಪರ  ಜಗಳವಾಡಬಾರದೆಂದು ಬುದ್ಧಿವಾದ ಹೇಳುತ್ತಾನೆ. ಮುಖ್ಯಾವಾಗಿ ರಾಜ್ಯದ ಆಧಾಯಕ್ಕಿಂತ ಖರ್ಚು ಹೆಚ್ಚಾಗಬಾರದೆಂದು ಸೂಚನೆ ನೀಡುತ್ತಾನೆ.
ಬಹುಶಃ ಅನಂತಪದ್ಮನಾಬನ ಸಂಪತ್ತಿನ ದೂಳಿನ ಕಣವೂ ತಮಗೆ ಬೇಡ ಎಂಬ ತಿರ್ಮಾನ ಇಲ್ಲಿಂದಲೇ ಆಗಿರಬೇಕು . ಈಗಲೂ ರಾಜ ಪರಿವಾರದವರು ದೇವರ ದರ್ಶನವಾದ ಮೇಲೆ ಕಾಲೊರಸಿಕೊಂಡು ಹೊರಬರುವ ಸಂಪ್ರದಾಯವಿದೆ. ಅಥವಾ ಆ ಸಂಪತ್ತು ಬಡವರ ಬೆವರು ಮತ್ತು ರಕ್ತದಿಂದ ತೊಯ್ದಿದೆ ಅದು ತಮ್ಮನ್ನು ಅಂಟಿಕೊಳ್ಳದಿರಲಿ ಎಂಬ ಪ್ರಾಯಶ್ಚಿತ ಭಾವವೂ ಕಾರಣವಾಗಿರಬಹುದೇ? ಗೊತ್ತಿಲ್ಲ.

ಅದರೆ ಸಾಮಾಜಿಕವಾಗಿ ನೋಡಿದರೆ ತಿರುವಾಂಕೂರು ಅರಸರ ಕಾಲದಲ್ಲಿ ಅನೇಕ ಸಾಮಾಜಿಕ ಅನಿಷ್ಟಗಳು ಜಾರಿಯಲ್ಲಿದ್ದವು .ಜಾತಿ ಬೇದ ಉಚ್ಛ್ರ್ಯಾಯ ಸ್ಥಿತಿಯಲ್ಲಿತ್ತು.೧೯ನೆ ಶತಮಾನದ ತನಕ ತಿರುವಾಂಕೂರು, ಕೊಚ್ಚಿನ್ ಮಲಬಾರ್ ಗಳಲ್ಲಿ ಕೆಳಜಾತೀಯ ಸ್ತ್ರೀಯರು ತೆರೆದೆದೆಯಲ್ಲಿ ಓಡಾಡಬೇಕಾಗಿತ್ತು. ಅದಕ್ಕಾಗಿ ವೈಕುಂಠಸ್ವಾಮಿ ನೇತೃತ್ವದಲ್ಲಿ ೧೮೧೮ರಲ್ಲಿ ಬಹುದೊಡ್ಡ ಚಳುವಳಿಯೇ ನಡೆಯಿತು. ಈ ಕಾಲಘಟ್ಟದಲ್ಲಿ ಅನೇಕ ಸ್ತ್ರೀಯರು ಕ್ರಿಶಿಯನ್ ಧರ್ಮಕ್ಕೆ ಮತಾಂತರಗೊಂಡರು. ಕೇರಳದ ಜಾತಿ ಮೌಡ್ಯವನ್ನು ಕಂಡ ವಿವೇಕಾನಂದರು ಈ ರಾಜ್ಯವನ್ನು ’ಜಾತಿ ಭೇದದ ಹುಚ್ಚರ ಅಶ್ರಯ ತಾಣ’ ಎಂದು ಕರೆದಿದ್ದರು. ತಮ್ಮಗೆ ’ಕುಪ್ಪಾಯಂ’ [ ಮೇಲುಡಿಗೆ] ಧರಿಸಲು ಅನುಮತಿ ನೀಡಬೇಕೆಂದು ಕೇರಳದ ಹೆಂಗಸರು ಆಗಿನ ಮದ್ರಾಸ್ ಗವರ್ನರನ್ನು ಕೇಳಿಕೊಂಡಿದ್ದರು. ಜುಲೈ೨೬ ೧೮೮೯ರಲ್ಲಿ ಈ ಕುರಿತಾಗಿ ಗವರ್ನರರು ತಿರುವಾಂಕೂರು ರಾಜರಿಗೆ ನಿರ್ದೇಶನ ನೀಡಿ ಅವರಿಗೆ ಕುಪ್ಪಾಯಂ ಧರಿಸಲು ಅಡ್ಡಿಮಾಡಬಾರು ಎಂದ ಆದೇಶ ನೀಡಿದ್ದು ದಾಖಲೆಯಲ್ಲಿದೆ.

ಹೇಳುತ್ತಾ ಹೋದರೆ ಚರಿತ್ರೆ ಮುಗಿಯುವುದೇ ಇಲ್ಲ.

ಒಳ್ಳೆಯ ಉದ್ದೇಶದಿಂದ ಅನಂತ ಪದ್ಮನಾಭನ ಸಂಪತ್ತನ್ನು ಹೊರಜಗತ್ತಿಗೆ ತೋರಿಸಲು ಕಾರಣಕರ್ತರಾಗಿದ್ದ ಸುಂದರರಾಜನ್ ಸಾವು ಆಕಸ್ಮಿಕವಲ್ಲ. ಅದು ವಯೋಸಹಜ ತೊಂದರೆಗಳಿಂದಾದ ಸಹಜ ಸಾವು. 

ಅನಂತಪದ್ಮನಾಭನ ಸಂಪತ್ತು ಯಾವ ಮೂಲದಿಂದಲೇ ಬಂದಿರಲಿ. ಅದೀಗ ಪಾರಂಪರಿಕ ಮೌಲ್ಯವುಳ್ಳದ್ದು ಅದು ಕೇವಲ ಚಿನ್ನ ಮಾತ್ರ ಅಲ್ಲ! ದೇಶದ ಸಂಪತ್ತು

Thursday, July 14, 2011

ತುಳುನಾಡಿನಲ್ಲಿದೆ, ಅನಂತಪದ್ಮನಾಭನ ಮೂಲ ನೆಲೆ

ಗರ್ಭ ಗುಡಿಯಲ್ಲಿರುವ ಸಸ್ಯಜನ್ಯ ಬಣ್ಣಗಳಿಂದ ಬಿಡಿಸಿದ ವರ್ಣಚಿತ್ರ
ಅನಂತಪುರದ ಅನಂತಪದ್ಮನಾಭ ಕ್ಷೇತ್ರ
ಸರ್ಪ ಕೋಟೆ
ವಿಗ್ರಹದ ಅನಾಟಮಿ-ಪೀಠ ಪ್ರತಿಷ್ಟಾಪನೆ
ಶ್ರೀದೇವಿ ಭೂದೇವಿಯರೊಡನೆ ಕಡುಶರ್ಕರ ಪಾಕದಲ್ಲಿ ರಚನೆಯಾಗುತ್ತಿರುವ ಅನಂತಪದ್ಮನಾಭ




ತಿರುವನಂತಪುರದ ಅನಂತ ಪದ್ಮನಾಭ ಈಗ ಕುಬೇರನಾಗಿದ್ದಾನೆ. ಅವನ ಭಂಡಾರದಲ್ಲಿ ಮೊಗೆದಷ್ಟು ಚಿನ್ನ ಸಿಗುತ್ತಿದೆ. ಅವನ ಪಾದಮೂಲದಲ್ಲಿ ಸಿಕ್ಕಿದ ಚಿನ್ನ ಕರ್ನಾಟಕದ ವಾರ್ಷಿಕ ಬಜೆಟ್ ಅನ್ನು ಮೀರಿ ಮುಂದೆ ಸಾಗುತ್ತಿದೆ. ತಿರುಪತಿ ತಿಮ್ಮಪ್ಪನಿಗಿಂತ ಮೂರುಪಟ್ಟು ಶ್ರೀಮಂತನೀಗ ಅನಂತಪದ್ಮನಾಭ. ಆತನೀಗ ಲಕ್ಷ ಕೋಟಿ ರೂಪಾಯಿಗಳ ಸಂಪತ್ತಿಗೆ ಒಡೆಯ.


ಆದರೆ ಆತನ ಮೂಲಸ್ಥಾನವಾದ ಅನಂತಪುರದಲ್ಲಿ ಆತ ಹೇಗಿದ್ದಾನೆ ಗೊತ್ತೇ?


ಐದು ವರ್ಷಗಳ ಹಿಂದೆ ಟೀವಿ ಕಾರ್ಯಕ್ರಮವೊಂದರ ಶೂಟಿಂಗ್ ಗಾಗಿ ನಾನು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರಕ್ಕೆ ಹೋಗಿದ್ದೆ. ನನ್ನನ್ನು ಅಲ್ಲಿಗೆ ಸೆಳೆದದ್ದು ಅನಂತಪದ್ಮನಾಭ ದೇವನಲ್ಲ. ದೇವಸ್ಥಾನದ ಕೊಳದಲ್ಲಿರುವ ಒಂದು ಅಪೂರ್ವವಾದ ಮೊಸಳೆ. ಬಬಿಯ ಎಂಬ ಹೆಸರಿನ ಮೊಸಳೆಗೆ ಅರುವತ್ತು ವರ್ಷವಾಗಿತ್ತು. ತನ್ನ ಸಾಧು ಸ್ವಭಾವದಿಂದಾಗಿ ಅಲ್ಲಿಗೆ ಬರುವ ಭಕ್ತರನ್ನು ಅದು ಆಕರ್ಷಿಸುತ್ತಿತ್ತು. ಜನ್ಮಜಾತವಾಗಿ ಕ್ರೂರವಾಗಿದ್ದ ಪ್ರಾಣಿಯೊಂದು ಅನಂತಪದ್ಮನಾಭನ ಸನ್ನಿಧಿಯಲ್ಲಿ ಸಾಧು ಪ್ರಾಣಿಯಾಗಿ ಆರ್ಚಕರ ಕೈಯಿಂದ ನೈವೇದ್ಯವನ್ನು ಸ್ವೀಕರಿಸುತ್ತದೆಯೆಂಬ ವದಂತಿಯೇ ನನ್ನನ್ನು ಅಲ್ಲಿಗೆ ಎಳೆದು ತಂದಿತು.


ಆದರೆ ಅನಂತಪದ್ಮನಾಭನ ಸನ್ನಿದಿಗೆ ಬಂದ ಮೇಲೆ ನನ್ನ ಇರಾದೆಯೇ ಬದಲಾಯಿತು. ಅನಂತಪದ್ಮನಾಭನ ಕಡುಶರ್ಕರ ಪಾಕದ ಮೂಲವಿಗ್ರಹ, ಆತನ ಗರ್ಭ ಗುಡಿಯಲ್ಲಿರುವ ಸಾವಿರಾರು ವರ್ಷಗಳ ಹಿಂದಿನ ಬಣ್ಣದ ಚಿತ್ರ ಚಿತ್ತಾರಗಳು, ದೇವಸ್ಥಾನದ ಸುತ್ತ ಇರುವ ಸರ್ಪಕೋಟೆ, ಗುಂಡಿ ಬಟ್ಟಲಿನಾಕಾರದ ಅಲ್ಲಿನ ಪರಿಸರ ಎಲ್ಲವೂ ನನ್ನನ್ನು ಸಂಪೂರ್ಣ ಆವರಿಸಿಕೊಂಡುಬಿಟ್ಟಿತು.


ಜನವಸತಿಯಿಂದ ಬಹು ದೂರದಲ್ಲಿರುವ, ವಾಹನ ಸೌಕರ್ಯವಿಲ್ಲದ, ಒಂದು ಪುಟ್ಟ ಅಂಗಡಿಯನ್ನು ಹೊರತುಪಡಿಸಿದರೆ ಇನ್ನೇನೂ ಅನುಕೂಲತೆಗಳಿಲ್ಲದ ಪ್ರಶಾಂತ ದೇಗುಲಕ್ಕೆ ನಾನು ಭೇಟಿ ಕೊಟ್ಟದ್ದು ನಟ್ಟ ಮಳೆಗಾಲದಲ್ಲಿ, ಅಂದರೆ ಜಡಿಮಳೆಯ ಜುಲೈ ತಿಂಗಳಲ್ಲಿ.ಮೊದಲ ನೋಟಕ್ಕೇ ಅದು ಪುರಾತನ ದೇವಾಲಯ ಅನ್ನಿಸಿತು. ಹಾಗಾಗಿ ಅದರ ಪುರಾಣ ಮತ್ತು ಇತಿಹಾಸದ ಬಗ್ಗೆ ವಿಚಾರಿಸಿಕೊಂಡೆ.


ಬಲ್ಲವರ ಪ್ರಕಾರ ಇಲ್ಲಿ ಬಹಳ ಹಿಂದೆ ಬಿಲ್ವಮಂಗಲ ಸ್ವಾಮಿಗಳೆಂಬ ಮಹಾತ್ಮರು ತಪಸ್ಸು ಮಾಡುತ್ತಿದ್ದರಂತೆ. ಮಹಾವಿಷ್ಣುವಿನ ಭಕ್ತರಾಗಿದ್ದ ಇವರು ಒಮ್ಮೆ ಪೂಜಾ ಕೈಂಕರ್ಯದಲ್ಲಿ ನಿರತರಾಗಿದ್ದ ಸಮಯದಲ್ಲಿ ಬಾಲಕನೊಬ್ಬ ಅವರ ಏಕಾಗ್ರತೆಗೆ ಅಡ್ಡಿ ತಂದನಂತೆ. ಆಗ ಮುನಿಗಳು ಅವನನ್ನು ಎಡದ ಕೈನಿಂದ ದೂಡಿಬಿಟ್ಟರಂತೆ. ಆಗ ಬಾಲಕ ಈಗ ದೇವಸ್ಥಾನದ ಈಶಾನ್ಯ ಭಾಗದಲ್ಲಿರುವ ಗುಹೆಯ ಹತ್ತಿರ ಬಿದ್ದ. ಹಾಗೆ ಬಿದ್ದ ಬಾಲಕ ಒಂದು ಪ್ರಕಾಶಮಾನವಾದ ಗೋಳವಾಗಿ ಗುಹೆಯನ್ನು ಪ್ರವೇಶಿಸಿದ. ಆಗ ಬಿಲ್ವಮಂಗಲ ಮಹರ್ಷಿಗಳಿಗೆ ಈತ ಸಾಮಾನ್ಯನಾದ ಬಾಲಕನಲ್ಲ, ತಾನು ಅರ್ಚಿಸುತ್ತದ್ದ ಮಹಾವಿಷ್ಣುವೇ ಇರಬೇಕೆಂದು ತಿಳಿದು ಅತನನ್ನು ಹಿಂಬಾಲಿಸುತ್ತಾ ಹೋದರರು. ಹಾಗೆ ಹೋಗುತ್ತಾ ಅನಂತನ ಕಾಡು ಎಂಬ ಪ್ರದೇಶವನ್ನು ತಲುಪುತ್ತಾರೆ. ಅದೇ ಇಂದಿನ ತಿರುವನಂತಪುರ. ಅಲ್ಲಿ ಪ್ರಕಾಶಗೋಳವು ಪದ್ಮನಾಭನಾಗಿ ಪ್ರತ್ಯಕ್ಷವಾಗುತ್ತದೆ. ಇದನ್ನು ಕಂಡು ಪಶ್ಚತ್ತಾಪದಿಂದ ಕ್ಷಮೆ ಯಾಚಿಸಿದ ಮುನಿಗಳಿಗೆ, ಇದರಲ್ಲಿ ನಿನ್ನದೇನೂ ತಪ್ಪಿಲ್ಲ ಎಂದು ಸಂತೈಸಿ ತನಗೆ ಆಯಾಸವಾಗಿದೆ ಹಾಗು ಹಸಿವಾಗಿದೆ ಎನ್ನಲು ಮುನಿಗಳು ಸಮೀಪದಲ್ಲೇ ಇದ್ದ ಮಾವಿನ ಮರದಿಂದ ಹಣ್ಣೊಂದನ್ನು ಕಿತ್ತು ತೆಂಗಿನ ಚಿಪ್ಪಿನಲ್ಲಿಟ್ಟು ಕೊಟ್ಟರಂತೆ. [ಇಂದಿಗೂ ತಿರುವನಂತಪುರದ ಅನಂತಪದ್ಮನಾಭನಿಗೆ ಚಿನ್ನದ ಗೆರಟೆಯಲ್ಲಿ ಮಾವಿನ ಹಣ್ಣನ್ನಿಟ್ಟು ನೈವೇದ್ಯ ಮಾಡುವ ಸಂಪ್ರದಾಯವಿದೆ] ಹಣ್ಣನ್ನು ತಿಂದ ಪದ್ಮನಾಭ, ತಾನು ಸ್ವಲ್ಪ ಶಯನ ಮಾಡುತ್ತೇನೆ ಎಂದು ಮಲಗಲು ಅಣಿಯಾದ. ಆಗ ಅಲ್ಲಿಗೆ ಬಂದ ಆದಿಶೇಷ ಆತನಿಗೆ ಹಾಸುಗೆಯಾದ. ಆದಿಶೇಷನ ಇನ್ನೊಂದು ಹೆಸರು ಅನಂತ. ಹಾಗಾಗಿ ಹಿಂದೆ ತುಳುನಾಡಾಗಿದ್ದ, ಇಂದಿನ ಕೇರಳ ರಾಜ್ಯದ ಉತ್ತರ ತುದಿಯಲ್ಲಿರುವ ಅನಂತಪುರದ ಅನಂತ ಪದ್ಮನಾಭ ಕೇರಳದ ದಕ್ಷಿಣತುದಿಯಲ್ಲಿರುವ ತಿರುವನಂತಪುರದಲ್ಲಿ ಅನಂತಶಯನ ಪದ್ಮನಾಭನಾದ. ಇದುವೇ ಮಹಾವಿಷ್ಣುವಿನ ಸುಪ್ರಸಿದ್ಧವಾದ ಯೋಗನಿದ್ರಾಭಂಗಿ. ಕಾಲಕ್ರಮೇಣಶಯನಲೋಪವಾಗಿ ಅನಂತಪದ್ಮನಾಭನಾದ. ಬಿಲ್ವಮಂಗಲ ಮುನಿಗಳು ಇಲ್ಲಿ ದಿವಾಕರ ಮುನಿಗಳಾದರು. ಅವರ ಮೂರ್ತಿಯೂ ದೇವಸ್ಥಾನದ ಅವರಣದಲ್ಲಿದೆ.


ಮಂಗಳೂರಿನಿಂದ ಅನಂತಪುರಕ್ಕೆ ಸುಮಾರು ನಲ್ವತ್ತು ಕಿ.ಮೀ ಅಂತರವಿದೆ. ಕರ್ನಾಟಕ-ಕೇರಳ ಗಡಿಯಿಂದ ಸುಮಾರು ಇಪ್ಪತ್ತು ಕಿ.ಮೀ. ಒಳಗಡೆ ಹೋಗಬೇಕು. ಆದರೆ ಅನಂತಪುರ ಮತ್ತು ತಿರುವನಂತಪುರಗಳ ನಡುವೆ ಏಳುನೂರು ಕಿ.ಮೀ.ಗಳ ಅಂತರವಿದೆ.ಬಿಲ್ವ ಮಂಗಲ ಮುನಿಗಳು ಅನಂತಪದ್ಮನಾಭನನ್ನು ಹಿಂಬಾಲಿಸಿದ ಗುಹೆಯನ್ನು ಈಗ ಕಬ್ಬಿಣದ ಸರಳುಗಳಿಂದ ಮುಚ್ಚಲಾಗಿದೆ. ಈಗಲೂ ಸ್ವಲ್ಪ ದೂರದವರೆಗೆ ಗುಹೆಯಲ್ಲಿ ಸಾಗಬಹುದಾಗಿದೆ. ಮುಂದೆ ಹೋದಂತೆಲ್ಲಾ ದಾರಿ ಕಿರಿದಾಗುತ್ತಾ ಹೋಗಿ ತೆವಳಿಕೊಂಡು ಹೋಗಬೇಕಾಗುತ್ತಂತೆ. ಅನಂತಪುರದಿಂದ ತಿರುವನಂತಪುರಕ್ಕೆ ಪದ್ಮನಾಭ ಹೋದನೆನ್ನಲಾದ ಗುಹೆಯನ್ನು ನಾವು ನೋಡಬಹುದಾಗಿದೆ. ಆದರೆ ಅನಂತಪುರದಿಂದ ಬಂದನೆನ್ನಲಾದ ಗುಹೆಯನ್ನುತಿರುವನಂತಪುರದಲ್ಲಿ ಕಂಡವರಿಲ್ಲ. ಅಂದರೆ ಈಗ ತೆರೆಯದೆ ಉಳಿದಿರುವ ಬಿ ನೆಲಮಾಳಿಗೆಯಲ್ಲಿ ಸುರಂಗಮಾರ್ಗವಿರಬಹುದೇ? ಅನುಮಾನಕ್ಕೆ ಆಸ್ಪದವಿದೆ.


ತಿರುವನಂತಪುರದಲ್ಲಿ ಅದಿಶೇಷನ ಮೇಲೆ ಮಲಗಿ ಅನಂತಶಯನನಾದ ಮಹಾವಿಷ್ಣು ಅನಂತಪುರದಲ್ಲಿ ಅದಿಶೇಷನ ಮೇಲೆ ಕುಳಿತ ಭಂಗಿಯಲ್ಲಿರುತ್ತಾನೆ. ಆದರೆ ಎರಡೂ ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿಗಳು ಸಾಮಾನ್ಯವಾದುದಲ್ಲ. ಅವು ಕಡುಶರ್ಕರ ಪಾಕದಿಂದಾದ ರಚನೆಗಳು.


ಏನಿದು ಕಡುಶರ್ಕರ ಪಾಕ?


ವಿಗ್ರಹ ರಚನೆಯಲ್ಲಿ ಒಂಬತ್ತು ವಿಧಾನಗಳಿವೆ. ಅದರಲ್ಲಿ ಬಹು ಕ್ಲಿಷ್ಟಕರವಾದ ವಿಧಾನವೇ ಕಡುಶರ್ಕರ ಪಾಕ ವಿಧಾನ. ಇದು ಅತೀ ಪಾಚೀನವಾದ ಗ್ರಂಥಗಳಲ್ಲಿ ಉಲ್ಲೇಖವಾದ ವಿಗ್ರಹ ನಿರ್ಮಾಣ ವಿಧಾನ. ಪ್ರಸ್ತುತ ನಮ್ಮ ದೇಶದಲ್ಲಿ, ಬಹುಶಃ ವಿಶ್ವದಲ್ಲೇ ಕೇವಲ ಮೂರು ಕಡೆ ಮಾತ್ರ ರೀತಿಯ ವಿಗ್ರಹಗಳಿವೆ. ಒಂದು ಅನಂತಪುರದಲ್ಲಿರುವ ಅನಂತಪದ್ಮನಾಭ. ಇನ್ನೊಂದು ತಿರುವನಂತಪುರದಲ್ಲಿರುವ ಅನಂತಪದ್ಮನಾಭ. ಮತ್ತೊಂದು ಇದೇ ರಾಜ್ಯದ ಕಣ್ಣೂರು ಸಮೀಪದಲ್ಲಿರುವ ಮಾಡಾಯಿಕಾವು ಮಹಾಕಾಳಿಯ ವಿಗ್ರಹ. ಇದೇ ಭಗವತಿ ಕ್ಷೇತ್ರದಲ್ಲಿ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಶತ್ರು ಸಂಹಾರ ಯಾಗ ಮಾಡಿದ್ದು. ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದಾಗಲೆಲ್ಲ ಅವರು ಅಮ್ಮನ ಮೊರೆ ಹೋಗುತ್ತಾರೆ.


ಕಡುಶರ್ಕರಾ ಪಾಕವಿಧಾನದ ಮೊದಲ ಹಂತ ಎಂದರೆ ಪೀಠ ಪ್ರತಿಷ್ಟಾಪನೆ. ಎರಡನೆಯದು ನರ ಸಂಕಲ್ಪ. ಮೂರನೆಯದು ಮಜ್ಜೆಸಂಕಲ್ಪ. ನಾಲ್ಕನೆಯದು ಮಾಂಸ ಸಂಕಲ್ಪ. ಇದೆಲ್ಲಾ ಆದ ಮೇಲೆ ಅದಕ್ಕೆ ೨೩ ರೀತಿಯ ಲೇಪನಗಳನ್ನು ಒಂದು ತಿಂಗಳ ಅಂತರದಲ್ಲಿ ಲೇಪಿಸುತ್ತಾ ಹೋಗುತ್ತಾರೆ. ಕೊನೆಯಲ್ಲಿ ೨೪ನೇ ಲೇಪನವಾಗಿ ಬೆಳ್ಳಿ ಮತ್ತು ಚಿನ್ನದ ಲೇಪನ ಮಾಡಿ ಅನಂತರದಲ್ಲಿ ಪ್ರಾಣ ಪ್ರತಿಷ್ಟೆ ಮಾಡುತ್ತಾರೆ.


ಮನುಷ್ಯನ ದೇಹ ರಚನೆ ಯಾವ ರೀತಿಯಲ್ಲಿದೆಯೋ ಅದೇ ರೀತಿಯಾಗಿ ವಿಗ್ರಹವೂ ರಚನೆಯಾಗುತ್ತದೆ. ಮೊಟ್ಟಮೊದಲನೆಯದಾಗಿ ಪೀಠ ಪ್ರತಿಷ್ಠಾಪನೆಗಾಗಿ ಕಾಚಿಮರದ [ಕದಿರಮರ] ತಿರುಳನ್ನು ತೆಗೆದು ಅಸ್ಥಿಪಂಜರ ತಯಾರಿಸುತ್ತಾರೆ. ಅದಕ್ಕೆ ಮನುಷ್ಯ ಶರೀರದಲ್ಲಿರುವಂತೆ ೨೦೬ ಎಲುಬುಗಳ ಜೋಡಣೆ ಮಾಡಿ ಪೀಠದಲ್ಲಿ ಕುಳ್ಳಿರಿಸುವುದೇ ಪೀಠ ಪ್ರತಿಷ್ಟಾಪನೆ.


ಅನಂತರ ಹಣ್ಣು ತೆಂಗಿನಕಾಯಿಯ ಒಂದೊಂದು ನಾರನ್ನೂ ಶುದ್ದೀಕರಿಸಿ ನಾಜೂಕಾಗಿ ಹಣೆದು ಸುಮಾರು ಮುನ್ನೂರು ಮೀಟರ್ ಉದ್ದದ ಹುರಿಹಗ್ಗವನ್ನು ತಯಾರಿಸಿ ಸುಷುಮ್ನನಾಡಿಯಿಂದ ಮಣಿಶಿರದತನಕ ಅಸ್ಥಿಪಂಜರದ ಮೇಲೆ ಸುತ್ತುತ್ತಾರೆ. ಇದು ನರ ಸಂಕಲ್ಪ.


ಇದಾದ ನಂತರದ್ದು ಮಜ್ಜೆ ಸಂಕಲ್ಪ. ಇದಕ್ಕಾಗಿ ತ್ರಿವೇಣಿ ಸಂಗಮದಿಂದ ತಂದಂಥ ಬಿಳಿಕಲ್ಲು, ಕೆಂಪುಕಲ್ಲು, ಕಪ್ಪುಕಲ್ಲುಗಳನ್ನು ಪುಡಿಮಾಡಿ ,ಅರೆದು, ಪ್ರಕೃತಿಯಲ್ಲಿ ಸಿಗುವ ಮೇಣದೊಡನೆ ಕಾಯಿಸಿ ಸುಗಂಧಬರಿತವಾದ ಕೆಂಪಾದ ಪಾಕವೊಂದನ್ನು ಸಿದ್ದ ಪಡಿಸುತ್ತಾರೆ. ಅದು ಬಿಸಿಬಿಸಿಯಾಗಿರುವಾಗಲೇ ನರಸಂಕಲ್ಪವಾದ ಅಸ್ಥಿಪಂಜರದ ಮೇಲೆ ಲೇಪಿಸಿದಾಗ ಅದು ತಕ್ಷಣವೇ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಇದು ಪ್ರಾರಂಭದ ಕೋಟಿಂಗ್.


ಅನಂತರದ್ದು ಮಾಂಸ ಸಂಕಲ್ಪ. ನಮ್ಮ ಪರಿಸರದಲ್ಲಿ ಸಿಗುವ ಅರುವತ್ತನಾಲ್ಕು ಆಯುರ್ವೇದದ ಗುಣಗಳಿರುವ ಸಸ್ಯಜನ್ಯ, ಪ್ರಾಣಿಜನ್ಯ ವಸ್ತುಗಳನ್ನು ನಿಶ್ಚಿತ ಪ್ರಮಾಣದಲ್ಲಿ ಅರೆದು,ಪುಡಿಮಾಡಿ, ಪಾಕಬರಿಸಿ ಒಂದೊಂದೇ ಕೋಟಿಂಗ್ ಕೊಡುತ್ತಾ ಹೋಗುತ್ತಾರೆ. ಒಂದೊಂದು ತಿಂಗಳ ಅಂತರದಲ್ಲಿ ಇಂತಹ ಇಪ್ಪತ್ತಮೂರು ಲೇಪನಗಳನ್ನು ಬಳಿಯಲಾಗುತ್ತದೆ. ಪ್ರತಿ ಲೇಪನಕ್ಕೂ ಅದರದೇ ಆದ ಬಣ್ಣ, ಪರಿಮಳಗಳಿರುತ್ತದೆ.


ಕೊನೆಯ ಹಾಗೂ ಇಪ್ಪತ್ತನಾಲ್ಕನೆಯ ಲೇಪನವೇ ಚಿನ್ನ ಮತ್ತು ಬೆಳ್ಳಿಯ ಲೇಪನ.


ದೇವಸ್ಥಾನಕ್ಕೆ ಬರುವ ಭಕ್ತರು ಸಾಮಾನ್ಯವಾಗಿ ದೇವರಲ್ಲಿ ಕೇಳಿಕೊಳ್ಳ್ವುದು ಆರೋಗ್ಯ ಮತ್ತುಐಶ್ವರ್ಯ. ಅವೆರಡೂ ಅನಂತಪದ್ಮನಾಭನ ದೇಹರಚನೆಯಲ್ಲೇ ಇದೆ. ಅದನ್ನು ಆತ ತನ್ನ ಭಕ್ತರಿಗೆ ಧಾರಾಳವಾಗಿ ಹಂಚುತ್ತಾನೆ ಎಂದುಇಲ್ಲಿಗೆಬರುತ್ತಿರುವ ಭಕ್ತರು ನಂಬಿಕೊಂಡಿದ್ದಾರೆ

ವಿಗ್ರಹವಲ್ಲದೆ ಇನ್ನೂ ಹಲವಾರು ವಿಷಯಗಳಲ್ಲೂ ಸಾಮ್ಯತೆಯಿದೆ.ಎರಡೂ ಕಡೆಯಲ್ಲಿಯೂ ಅನಂತಪದ್ಮನಾಭನ ಅರ್ಚಕರು ತುಳುನಾಡು ಮೂಲದ ಶಿವಳ್ಳಿ ಬ್ರಾಹ್ಮಣರು. ಎರಡೂ ಕಡೆಯಲ್ಲಿಯೂ ಮೂಲ ವಿಗ್ರಹಕ್ಕೆ ಅಭಿಷೇಕವಿಲ್ಲ. ಬದಲಾಗಿ ಪುರಾತನವಾದ ಪಂಚಲೋಹದ ಅರ್ಚನ ಬಿಂಬ, ಅಭಿಷೇಕ ಬಿಂಬ, ಉತ್ಸವ ಬಿಂಬಗಳಿವೆ. ಮೂರು ಬಿಂಬಗಳನ್ನು ಮುಖಮಂಟಪದಲ್ಲಿಟ್ಟು ಅಭಿಷೇಕ ಮಾಡಿ ಮತ್ತೆ ಗರ್ಭಗುಡಿಯಲ್ಲಿಡುತ್ತಾರೆ.


ಗರ್ಭಗುಡಿಯಲ್ಲಿ ಪದ್ಮನಾಭನ ಜೊತೆ ಶ್ರೀದೇವಿ, ಭೂದೇವಿ, ಗರುಡ, ಹನುಮಂತ ಮತ್ತು ಎರಡು ನಾಗಕನ್ನಿಕೆಗಳ ವಿಗ್ರಹಗಳಿವೆ.


ಈ ದೇವಾಲಯ ೯ನೇ ಶತಮಾನದಲ್ಲಿ ನಿರ್ಮಾಣವಾಗಿರಬೇಕೆಂದು ಅಂದಾಜಿಸಲಾಗಿದೆ.ಅನಂತ ಪದ್ಮನಾಭನ ಗರ್ಭಗುಡಿ ತುಂಬಾ ವಿಶಿಷ್ಟವಾದುದು. ಅಲ್ಲಿಯ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಕರುಣಾಕರ ಅನಂತಪುರ ಹೇಳುವ ಪ್ರಕಾರ ಗರ್ಭಗುಡಿ ಸಾವಿರದ ಇನ್ನೂರು ವರ್ಷಗಳ ಹಳೆಯದು. ದೇವಸ್ಥಾನವನ್ನು ಹಲವು ಬಾರಿ ಜೀರ್ಣೋದ್ಧಾರ ಮಾಡಿದ್ದರೂ ಗರ್ಭಗುಡಿಯನ್ನು ಇದುವರೆಗೂ ಬದಲಾಯಿಸಿಲ್ಲ. ಅದಕ್ಕವರು ಗರ್ಭಗುಡಿಯ ಮೇಲ್ಛಾವಣಿಗೆ ಹಾಕಿದ ತ್ರಿಕೋನಾಕೃತಿಯ ಕಲ್ಲುಗಳನ್ನು ತೋರಿಸುತ್ತಾರೆ.


ಇದರ ಹೊರತಾಗಿಯೂ ದೇವಾಲಯದ ಪ್ರಾಚೀನತೆಯನ್ನು ಸಾರುವ ಇನ್ನೊಂದು ಕುರುಹು ಅನ್ನು ಗರ್ಭಗುಡಿಯ ಗೋಡೆಗಳಲ್ಲೇ ಕಾಣಬಹುದು. ಸಿಂಧು ನಾಗರೀಕತೆಯಲ್ಲಿ ಸಸ್ಯ ಜನ್ಯ ಬಣ್ಣಗಳನ್ನು ಉಪಯೋಗಿಸಿ ವರ್ಣಚಿತ್ರಗಳನ್ನು ರಚಿಸುತ್ತಿದ್ದರೆಂದು ನಾವು ಕೇಳಿದ್ದೇವೆ. ಅಜಂತ ಗುಹೆಗಳಲ್ಲಿಯೂ ವರ್ಣಚಿತ್ರಗಳಿವೆ. ಅಂಥ ಸುಂದರವಾದ ರಚನೆಗಳನ್ನು ನಾವಿಲ್ಲಿ ಕಾಣಬಹುದು. ಗರ್ಭಗುಡಿಯಲ್ಲಿರುವ ದೇವರು ಸಸ್ಯಜನ್ಯ ವಸ್ತುಗಳಿಂದ ಮಾಡಿರುವ ಕಡುಶರ್ಕರ ಪಾಕದ ವಿಗ್ರಹ. ತನ್ನ ಶರೀರದಲ್ಲೇ ಔಷಧ ಮತ್ತು ಚಿನ್ನ ಬೆಳ್ಳಿ ಹೊಂದಿದ್ದು ತನ್ನಲ್ಲಿಗೆ ಬರುವ ಭಕ್ತರಿಗೆ ಆಯುಸ್ಸು ಮತ್ತು ಐಶ್ವರ್ಯವನ್ನು ದಯ ಪಾಲಿಸುವ ದೇವನಾಗಿದ್ದಾನೆ ಅನಂತ ಪದ್ಮನಾಭ. ಇಂತವನ ಸನ್ನಿದಾನದಲ್ಲಿ ಸಸ್ಯಜನ್ಯವಾದ ಬಣ್ಣಗಳಿಂದಲೇ ಚಿತ್ರ ರಚನೆಯಾಗಿರಬಹುದೆಂದು ನಾವು ತಾರ್ಕಿಕವಾಗಿಯೂ ಚಿಂತಿಸಬಹುದು. ಇದು ನಿಜವೇ ಆಗಿದ್ದಲ್ಲಿ ಇದರ ಪ್ರಾಚೀನತೆಯನ್ನು ಕ್ರಿಸ್ತಪೂರ್ವದಂಚಿಗೆ ತಂದು ನಿಲ್ಲಿಸಬಹುದು

.

ವಿಗ್ರಹದ ಪಾವಿತ್ರ್ಯತೆಗೆ ಸೂಕ್ಮತೆಗೆ ಧಕ್ಕೆಯಾದರೆ ಅವಘಡಗಳು ಸಂಭವಿಸುತ್ತವೆ ಎಂಬುದನ್ನು ಅಲ್ಲಿನ ಭಕ್ತರು ನಂಬುತ್ತಾರೆ. ಹಾಗೆಯೇ ಅನಂತಪದ್ಮನಾಭ ಕಡುಶರ್ಕರ ಪಾಕದ ವಿಗ್ರಹದಲ್ಲದೆ ಬೇರೆ ವಿಗ್ರಹದಲ್ಲಿ ನೆಲೆಗೊಳ್ಳುವುದಿಲ್ಲ. ಅದಕ್ಕವರು ಉದಾಹರಣೆಯನ್ನು ಕೊಡುತ್ತಾರೆ; ಸಾವಿರದ ಇನ್ನೂರು ವರ್ಷಗಳ ಹಳೆಯದಾದ ಕಡುಶರ್ಕರ ಪಾಕದ ವಿಗ್ರಹ ಅಲ್ಲಲ್ಲಿ ಭಿನ್ನವಾದ ಕಾರಣ ಅದನ್ನು ಪುನಃ ತಯಾರಿಸಲು ತೀರ್ಮಾನಿಸಿ ಬದಲಿಗೆ ಪಂಚಲೋಹದ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಆದರೆ ಅದರಿಂದ ಹಲವಾರು ದೋಷಗಳು ಕಂಡುಬಂದವು. ಅಷ್ಟ ಮಂಗಲ ಜ್ಯೋತಿಷ್ಯ ಪ್ರಶ್ನೆಯ ವಿಧಿ ವಿಧಾನದಲ್ಲಿ ದೇವ ಪ್ರಶ್ನೆಯನ್ನಿಟ್ಟಾಗ, ದೇವರು, ತನ್ನ ಹಳೆಯ ರೂಪವನ್ನು ಪ್ರತಿಷ್ಟಾಪನೆ ಮಾಡಿದರೆ ಮಾತ್ರ ತಾನಿಲ್ಲಿ ನೆಲೆಗೊಂಡು ಭಕ್ತರಿಗೆ ಅಭಯ ನೋಡುತ್ತೇನೆ ಎಂಬುದಾಗಿ ಗೋಚರಿಸಿದ ಕಾರಣ ಮತ್ತೆ ಹೊಸವಿಗ್ರಹದ ರಚನೆಯ ಪ್ರಕ್ರಿಯೆಗಳು ಆರಂಭಗೊಂಡವು. ಕೊಟ್ಟಾಯಂ ಜಿಲ್ಲೆಯ ವಿಶ್ವಕರ್ಮ ಶಿಲ್ಪಿಗಳ ಬಳಗ ಏಳು ವರ್ಷಗಳ ಕಾಲ ಶ್ರಮ ವಹಿಸಿ ವಿಗ್ರಹಗಳನ್ನು ರಚಿಸಿದೆ,


೧೯೭೬ರಿಂದಲೇ ಆರಂಭಗೊಂಡ ಗೋಪುರದ ನಿರ್ಮಾಣ ಕಾರ್ಯ ಎರಡು ವರ್ಶಗಳ ಹಿಂದಷ್ಟೇ ಮುಗಿದು ಕಡುಶರ್ಕರಪಾಕದ ಹೊಸ ಮೂರ್ತಿಗಳ ಪ್ರತಿಶ್ಟಾಪನೆ ಆಗಿದೆ. ಸ್ವತಃ ತಿರುವಾಂಕೂರಿನ ರಾಜಮನೆತನದ ಹಿರಿಯ ಉತ್ತರಾಧಿಕಾರಿ ಉತ್ತರಾಡಂ ತಿರುನಾಳ್ ಮಾರ್ತಾಂಡವರ್ಮ ಅವರು ಗೋಪುರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು. ಇವರೀಗೀಗ ತೊಂಬತ್ತರ ಹರೆಯ. ಟಿ.ಪಿ ಸುಂದರರಾಜನ್ ಎಂಬವರು ತಿರುವನಂತಪುರದ ದೇವಸ್ಥಾನದ ಆಡಳಿತ ಪಾರದರ್ಶಕವಾಗಿರಬೇಕೆಂದು ಹೈಕೋರ್ಟ್ ಮೊರೆ ಹೋದಾಗ ಕೋರ್ಟ್ ದೇವಸ್ಥಾನದ ನಿರ್ವಹಣೆಯನ್ನು ಸರಕಾರ ತೆಗೆದುಕೊಳ್ಳಬೇಕೆಂದು ಆದೇಶ ನೀಡಿತ್ತು. ಅದನ್ನೇ ಈ ವಯೋವೃದ್ಧ ಮಾರ್ತಾಂಡವರ್ಮರು ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅದರ ಪರಿಣಾಮವಾಗಿ ಸುಪ್ರಿಂ ಕೋರ್ಟ್ ತಜ್ನರ ಸಮಿತಿಯೊಂದನ್ನು ನೇಮಿಸಿ ನೆಲಮಾಳಿಗೆಯನ್ನು ತೆರೆದು ಅಪಾರ ಸಂಪತ್ತನ್ನು ಹೊರಜಗತ್ತಿನ ಮುಂದಿಡುತ್ತಿರುವುದು ಈಗ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿದೆ.


ಈ ಸುದ್ದಿಯ ಹಿನ್ನೆಲೆಯಲ್ಲಿ ಮತ್ತೆ ಅನಂತಪುರದೆಡೆ ನೋಡಿದರೆ ಅನಂತಪದ್ಮನಾಭನ ತವರು ನೆಲೆ ನಿಜವಾಗಿಯೂ ಬಡವಾಗಿದೆ. ಅದರೆ ಅದು ಒಂದು ಕಾಲದಲ್ಲಿ ಮಹಾಕ್ಷೇತ್ರವಾಗಿತ್ತೆಂದು ಅದರ ಕುರುಹುಗಳನ್ನು ನೋಡಿದರೆ ಗೊತ್ತಾಗುತ್ತದೆ. ಹಿಂದೆಯೇ ಹೇಳಿದಂತೆ ದೇವಸ್ಥ್ಹಾನದ ಪರಿಸರ ಅಗಲವಾದ ಗುಂಡಿ ಪಾತ್ರೆಯ ಆಕಾರದಲ್ಲಿದೆ.ತಳ ಭಾಗದಲ್ಲಿ ಕ್ಷೀರ ಸಮುದ್ರದ ಮಾದರಿಯ ವಿಶಾಲವಾದ ಕೊಳವಿದೆ. ಅದರ ಮಧ್ಯದಲ್ಲಿ ಅನಂತಪದ್ಮನಾಭ ಕುಳಿತಿದ್ದಾನೆ. ಸುತ್ತಲೂ ಗಟ್ಟಿಯಾದ ಕಪ್ಪಗಿನ ಸ್ಥಳಿಯವಾಗಿ ಮುರಕಲ್ಲು ಎಂದು ಕರೆಯಲ್ಪಡುವ ಗುಡ್ಡವಿದೆ. ಆ ಗುಡ್ಡದ ಮೇಲೆಯೇ ವಿಶಿಷ್ಟ ವಿನ್ಯಾಸದ ’ಸರ್ಪಕೋಟೆ’ಯೆಂಬ ಕೋಟೆಯಿದೆ. ಇಂತಹ ಕೋಟೆಗಳನ್ನು ಕೇರಳದ ಪ್ರಾಚೀನ ಮಹಾಕ್ಷೇತ್ರಗಳಲ್ಲಿ ಮಾತ್ರ ಕಾಣಬಹುದು. ಕ್ರೂರ ಸರ್ಪಗಳು ಇದನ್ನು ಹತ್ತಿ ಒಳಬಾರದಂತೆ ಅದನ್ನು ವಿನ್ಯಾಸ ಮಾಡಲಾಗಿದೆ. ಕೇರಳಮತ್ತು ದಕ್ಷಿಣಕನ್ನಡದ ಬಹುತೇಕ ಭಾಗಗಳು ದಟ್ಟ ಅರಣ್ಯದಿಂದ ಕೂಡಿದ್ದು ಹಾವು ಮತ್ತು ಇತರ ಕ್ರೂರ ಜಂತುಗಳು ಹಿಂದೆ ಇಲ್ಲಿ ಸಾಮಾನ್ಯವಾಗಿತ್ತು ಎಂಬುದನ್ನು ನಾವಿಲ್ಲಿ ಜ್ನಾಪಿಸಿಕೊಳ್ಳಬಹುದು

.

ಇದರ ಪ್ರಾಚೀನತೆಯನ್ನು ದೃಢಪಡಿಸುವ ಇನ್ನೊಂದು ಕುರುಹು ಕೂಡಾ ಇಲ್ಲಿದೆ. ದೇವಸ್ಥಾನವನ್ನು ಇಳಿದು ಪ್ರವೇಶಿಸುವ ದಾರಿಯಲ್ಲಿ ಬಲ ಭಾಗದಲ್ಲಿ ಒಂದು ಶಿಲಾಶಾಸನವಿದೆ. ಅದನ್ನು ಪೂರ್ತಿಯಾಗಿ ಇದುವರೆಗೂ ಯಾರಿಂದಲೂ ಓದಲಾಗಿಲ್ಲ. ಉಡುಪಿಯ ಇತಿಹಾಸತಜ್ನರಾದ ಗುರುರಾಜ ಭಟ್ಟರು ಇದನ್ನು ಓದಲು ಪ್ರಯತ್ನಿಸಿದ್ದಾರೆ. ಅವರ ಪ್ರಕಾರ ಇದು ಹಲವಾರು ಭಾಷೆಗಳ ಮತ್ತು ಲಿಪಿಗಳ ಮಿಶ್ರಣ. ತುಳುಲಿಪಿಯ ಕೆಲವು ಶಬ್ದಗಳನ್ನು ಅವರು ಗುರುತಿಸಿದ್ದರಂತೆ. ತುಳು ಭಾಷೆಗೆ ತಿಗಾಳಾರಿ ಎಂಬ ಲಿಪಿಯಿತ್ತೆಂದು ನಾವು ಭಾಷಾ ಚರಿತ್ರೆಯಲ್ಲಿ ಓದಿದ್ದೇವೆ.ಅದೊಂದು ರಹಸ್ಯ ಲಿಪಿಯೆಂಬ ವಾದವೂ ಇದೆ. ಬಹುಶಃ ಇದನ್ನು ಓದಲು ಸಾಧ್ಯವಾಗುತ್ತಿದ್ದರೆ ಅನಂತಪದ್ಮನಾಭನ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತೇನೋ.


ದೇವಸ್ಥಾನದ ನೈಋತ್ಯ ದಿಕ್ಕಿನಲ್ಲಿ ಬಿಲ್ವ ಮಂಗಳ ಸ್ವಾಮಿಗಳು ಪ್ರಾರಂಭದಲ್ಲಿ ಪೂಜಿಸುತ್ತಿದ್ದ ಪಾರ್ಥಸಾರಥಿಯ ಮಂದಿರವಿದೆ. ಅಲ್ಲಿ ಪುರಾತನವಾದ ಪಾರ್ಥ ಸಾರಥಿಯ ವಿಗ್ರಹವಿದೆ. ಇನ್ನೊಂದು ಕುತೂಹಲದ ವಿಷಯವೆಂದರೆ ಇಲ್ಲಿಗೆ ಸುಮಾರು ಹದಿನೈದು ಕಿ.ಮೀ ದುರದಲ್ಲಿ ಮುಜುಂಗಾವು ಎಂಬ ಪುರಾಣಪ್ರಸಿದ್ದವಾದ ಕ್ಷೇತ್ರವಿದೆ. ಅಲ್ಲಿಯ ಒಡೆಯ ಪಾರ್ಥ ಸಾರಥಿ.


ತಿರುವನಂತಪುರದ ಅನಂತಪದ್ಮನಾಭನಿಗೆ ಇದು ಆದಿ ಎಂಬುದಕ್ಕೆ ಇನ್ನೂ ಒಂದು ಪುಷ್ಟಿಯಿದೆ.ಮಲೆಯಾಳದಲ್ಲಿ ತಿರು ಎನ್ನುವುದಕ್ಕೆ ಚಿಕ್ಕ, ಸಣ್ಣದು ಎಂಬ ಅರ್ಥವಿದೆ. ಓಣಂ ಅಲ್ಲಿನ ಬಹುದೊಡ್ಡ ಹಬ್ಬ. ಒಂದು ವೇಳೆ ಹಬ್ಬ ಆಚರಿಸುವುದಕ್ಕೆ ಸೂತಕ ಬಂದರೆ ಆಗ ಅಂತವರು ತಿರು ಓಣಂನಲ್ಲಿ ಹಬ್ಬ ಮಾಡುತ್ತಾರೆ. ಹಾಗೆಯೇ ’ತಿರು ಮಂತ್ರ’ ಎಂಬ ಪದ ಜನ ಮಾನಸದಲ್ಲಿ ಹಾಸುಹೊಕ್ಕಾಗಿದೆ. ಉದಾಹರಣೆಗೆ ’ಗುರುವಿಗೇ ತಿರುಮಂತ್ರ ಹಾಕುವವನು’ ಇಲ್ಲಿ ಮಂತ್ರ ಮೊದಲು ತಿರು ಮಂತ್ರ ಅದಕ್ಕೆ ಪ್ರತಿಯಾಗಿ ಬರುವಂಥದು, ಅನಂತರದ್ದು.


ತಿರುವನಂತಪುರದಲ್ಲಿ ಪದ್ಮನಾಭನಿಗೆ ರಾಜಾಶ್ರಯ ದೊರಕಿ ಆತನಿಗೆ ಉತ್ತರೋತ್ತರ ಶ್ರೇಯಸ್ಸಾಗಿರಬಹುದು.ಅದು ಪುಣ್ಯನದಿಗಳ ಉಗಮ ಸ್ಥಾನದಂತೆ. ವೈಭವ, ಆಡಂಬರ, ಆರಾಧನೆಗಳೆಲ್ಲಾ ಅನಂತರದಲ್ಲಿ ಲಬಿಸುವಂತಹದು.


ಅನಂತಪುರದ ಅನಂತಪದ್ಮನಾಭನ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಮಾಯಿಪ್ಪಾಡಿ ಅರಸು ಮನೆತನ. ಕುಂಬಳೆ ಸೀಮೆಯನ್ನು ಆಳಿದ ಅರಸು ಮನೆತನ ಅದು. ಉತ್ತರದಲ್ಲಿ ಮಂಜೇಶ್ವರದಿಂದ ದಕ್ಷಿಣದಲ್ಲಿ ಚಂದ್ರಗಿರಿಯ ತನಕ ಪಶ್ಚಿಮ ಕರಾವಳಿಯ ಮೊಗ್ರಾಲ್ ನಿಂದ ಪೂರ್ವದಲ್ಲಿ ಅಡೂರು ತನಕ ಅವರ ಸೀಮೆಯು ಹರಡಿತ್ತು. ಆ ಸೀಮೆಯ ವ್ಯಾಪ್ತಿಗೆ ಬರುವ ಮದೂರಿನ ಗಣಪತಿ, ಮುಜುಂಗಾವಿನ ಪಾರ್ಥಸಾರಥಿ, ಅನಂತಪುರದ ಅನಂತಪದ್ಮನಾಭ, ಮತ್ತು ಅಡೂರಿನ ಕೃಷ್ಣ ದೇಗುಲಗಳಿಗೆ ಕುಂಬಳೆ ಅರಸರು ಪಾರಂಪರಿಕ ಟ್ರಷ್ಟಿಗಳಾಗಿದ್ದಾರೆ. ಅವರು ತಿರುವಾಂಕೂರು ರಾಜ ಮನೆತನದವರಷ್ಟು ಪ್ರಸಿದ್ದರಲ್ಲ. ಹಾಗಾಗಿ ಅನಂತ ಪದ್ಮನಾಭನೂ ಪ್ರಸಿದ್ದಿಗೆ ಬರಲಿಲ್ಲವೇನೋ!


ತಿರುವನಂತಪುರದ ಅನಂತಶಯನಪದ್ಮನಾಭ ಅಧ್ವೈತ ಕಲ್ಪನೆಯ ಮೂರ್ತರೂಪ ಎಂಬ ವಾದವೂ ಇದೆ. ಬ್ರಹ್ಮ, ವಿಷ್ಣು,ಮಹೇಶ್ವರನಲ್ಲಿ ಬೇಧವಿಲ್ಲ ಎಂಬ ಎಕ ಭಾವಕ್ಕೆ ಭಕ್ತರು ಹೇಳುವ ಕಥೆಯೆಂದರೆ ಅನಂತಶಯನನಾದ ಪದ್ಮನಾಭನನ್ನು ನೋಡಲೆಂದು ಕೈಲಾಸದಿಂದ ಶಿವನು ಬರುತ್ತಾನೆ. ಆಗ ಪದ್ಮನಾಭ ಆತನನ್ನು ಎದುರ್ಗೊಳ್ಳಲೆಂದು ಯೋಗನಿದ್ರೆಯಿಂದ ಎದ್ದು ಬರುತ್ತಾನೆ. ಆ ದಿನವೇ ಉತ್ಥಾನ ದ್ವಾದಶಿ. ಬ್ರಹ್ಮ ಹೇಗಿದ್ದರೂ ಪದ್ಮನಾಭನ [ಹೊಕ್ಕಳು] ನಾಭಿಯಲ್ಲೇ ಇದ್ದಾನೆ. ಹಾಗಾಗಿ ಉತ್ಥಾನ ದ್ವಾದಶಿಯಂದು ಬ್ರಹ್ಮ, ವಿಷ್ಣು, ಶಿವನ ಸಂಗಮವಾಗುತ್ತದೆ. ’ಅಹಂ ಬ್ರಹ್ಮಾಸ್ಮಿ’ ಎಂದು ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರು ಕೇರಳದವರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.


ಸುತ್ತಲೂ ಬೆಟ್ಟಗುಡ್ಡಗಳಿಂದ ಅವೃತವಾಗಿ, ಅನೇಕ ಔಷದಿಯ ಸಸ್ಯಗಳ ಮೇಲೆ ಬಿದ್ದ ನೀರನ್ನು ತನ್ನೊಡಲಲ್ಲಿ ಗರ್ಭೀಕರಿಸಿಕೊಂಡು ಮತ್ತೆ ಇಲ್ಲಿಯ ಕಲ್ಲುಗಳೆಡೆಯಿಂದ ಹರಿದು ಬಂದು ಕೊಳವನ್ನು ಸೇರುವ ಈ ನೀರು ಸರ್ವರೋಗ ಪರಿಹಾರಕ ಎಂಬ ಭಾವನೆ ಭಕ್ತರಲ್ಲಿದೆ ಇಲ್ಲಿಯ ನೀರಲ್ಲಿ ಸಲ್ಫರ್ ಅಂಶ ಜಾಸ್ತಿಯಿರುವ ಕಾರಣದಿಂದಾಗಿ ಅದು ನಿಜವಿದ್ದರೂ ಇರಬಹುದು..

ಇಲ್ಲಿಗೆ ಬರುವ ಆಸ್ತಿಕರ ಮನಸ್ಸನ್ನು ತನ್ನ ಚಿನ್ನಾಟಗಳಿಂದ ಸೆಳೆಯುವ ಬಬಿಯಾ ಎಂಬ ಮೊಸಳೆಯ ಬಗ್ಗೆ ಹೇಳದೆ ಈ ಲೇಖನವನ್ನು ಮುಗಿಸುವಂತಿಲ್ಲ. ಬಬಿಯಾ ಈ ಕೊಳಕ್ಕೆ ಬಂದ ಬಗ್ಗೆಯೂ ಒಂದು ಕತೆಯಿದೆ. ೧೯೪೫ರಲ್ಲಿ ದೇವಸ್ಥಾನದ ಪಕ್ಕ ಬ್ರಿಟೀಶ್ ಸೈನಿಕರು ಕ್ಯಾಂಪ್ ಹಾಕಿದ್ದರು. ಕೆಲವು ಸೈನಿಕರು ಕೊಳದಲ್ಲಿರುವ ಅಪೂರ್ವ ಮೊಸಳೆಯನ್ನು ನೋಡಲೆಂದು ಬಂದಿದ್ದರು. ಸಾಧು ಸ್ವಭಾವದ ಆ ಮೊಸಳೆ ತನ್ನ ಹೆಸರನ್ನು ಯಾರೇ ಕೂಗಲಿ ಅವರ ಬಳಿ ಬರುತ್ತಿತ್ತು. ಹಾಗೆಯೇ ಸೈನಿಕರು ಕೊಳದ ಬಳಿ ನಿಂತು ’ಬಬಿಯಾ’ ಎಂದು ಕೂಗಿದರು. ಅದು ಚಿನ್ನಾಟವಾಡುತ್ತಾ ಪಲ್ಟಿ ಹೊಡೆಯುತ್ತಾ ಅವರೆಡೆಗೆ ಬರತೊಡಗಿತು. ಆಗ ಅವರಲ್ಲೊಬ್ಬ ಅದರೆಡೆಗೆ ಗುಂಡು ಹಾರಿಸಿದ. ಮೊಸಳೆ ಸತ್ತು ಹೋಯಿತು.ಆದರೆ ಅನಂತರದಲ್ಲಿ ಸರ್ಪವೊಂದು ಕಡಿದು ಆ ಸೈನಿಕನನ್ನು ಬಲಿ ತೆಗೆದುಕೊಂಡಿತೆಂಬ ಪ್ರತಿತಿಯಿದೆ.


ಈ ಘಟನೆ ನಡೆದ ಮರುದಿನ ದೇವರ ನೈವೇದ್ಯವನ್ನು ಯಾರಿಗೆ ನೀಡುವುದೆಂದು ಅರ್ಚಕರು ಚಿಂತಿತರಾಗಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಕೊಳದಲ್ಲಿ ಮೊಸಳೆಯೊಂದು ಕಂಡಿತಂತೆ. ಆ ಮೊಸಳೆಯೇ ಇಂದಿಗೂ ಕೊಳದಲ್ಲಿದೆ.ಅದಕ್ಕೂ ’ಬಬಿಯಾ’ ಎಂದೇ ಹೆಸರಿಡಲಾಗಿದೆ. ಅದಕ್ಕೀಗ ಅರುವತ್ತು ವಯಸ್ಸು ದಾಟಿದೆ. ಹೆಸರಿಡಿದು ಕರೆದರೆ ಈಗಲೂ ಅದು ಮೆಲ್ಲನೆ ದಡಕ್ಕೆ ಬರುತ್ತದೆ ಪ್ರತಿನಿತ್ಯವೂ ಅರ್ಚಕರ ಕೈಯಿಂದ ನೈವೇದ್ಯ ಸ್ವೀಕರಿಸುತ್ತದೆ. ಹಾಗೆಯೇ ಭಕ್ತರು ಕೂಡಾ ತಮ್ಮ ಇಷ್ಟಾರ್ಥದ ನೆರವಿಗಾಗಿ ಮೊಸಳೆಗೆ ನೈವೇದ್ಯದ ಹರಕೆ ಹೇಳಿಕೊಳ್ಳುತ್ತಾರೆ. ಅದನ್ನು ಸಾಕ್ಷಾತ್ ವರುಣದೇವನೆಂದು ಭಾವಿಸುತ್ತಾರೆ.


ಭಾರತೀಯರ ದೈವ ಕಲ್ಪನೆಯೇ ಅದ್ಭುತವಾದುದು. ಅದು ಪ್ರಕೃತಿಯೊಡನೆ ಜೋಡಣೆ ಹೊಂದಿದೆ. ಪ್ರಕೃತಿ ನಿಗೂಢವಾದುದು. ಅನಂತಪದ್ಮನಾಭ ಯಾವಾಗಲೂ ನೀರಿನ ನಡುವೆಯೇ ಇರುತ್ತಾನೆ. ಮತ್ತು ದಟ್ಟ ಕಾಡಿನ ನಡುವೆ ಆದಿಶೇಷನ ಮೇಲೆ ಮಲಗಿರುವ ಯೋಗನಿದ್ರಾ ಭಂಗಿಯಲ್ಲಿರುತ್ತಾನೆ ಕಾವೇರಿ ನದಿ ಕ್ಷೇತ್ರಗಳಾದ ಆದಿರಂಗ, ಮಧ್ಯರಂಗ,ಮತ್ತು ಅಂತ್ಯರಂಗಳಲ್ಲಿಯೂ ಮಹಾವಿಷ್ಣು ಯೋಗ ನಿದ್ರಾ ಭಂಗಿಯಲ್ಲಿರುತ್ತಾನೆ.


ದೇವರ ಸ್ವಂತ ನಾಡು’ ಎಂದು ಕರೆಯಿಸಿಕೊಳ್ಳುವ ಕೇರಳ ರಾಜ್ಯದಲ್ಲಿರುವ ಸರೋವರ ನಡುವಿನ ಏಕೈಕ ದೇವಸ್ಥಾನವೆಂದರೆ ಅದು ಅನಂತಪುರದ ಅನಂತಪದ್ಮನಾಭ.ತಿರುವನಂತಪುರದ ಅನಂತಶಯನ ಪದ್ಮನಾಭನಿಗಿರುವ ಶ್ರೀಮಂತಿಕೆ ಅನಂತಪುರದ ಪದ್ಮನಾಭನಿಗಿಲ್ಲದಿರಬಹುದು ಆದರೆ ಶಾಂತಿಯನ್ನು ಅರಸಿ ಬರುವ ಆಸ್ತಿಕರಿಗೆ ಇದು ಶಾಂತಿ, ನೆಮ್ಮದಿಗಳನ್ನು ನೀಡುವ ಸಂಜೀವಿನಿ ತಾಣ ಎಂಬುದರಲ್ಲಿ ಸಂಶಯವಿಲ್ಲ.

.

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಅನಂತಪದ್ಮನಾಭನ ಸನ್ನಿಧಿಯಲ್ಲಿ ಅಷ್ಟೊಂದು ಸಂಪತ್ತು ಹೇಗೆ ಶೇಖರಣೆಗೊಂಡಿರಬಹುದು ಎಂಬುದನ್ನು ಮುಂದಿನ ಪೋಸ್ಟಿನಲ್ಲಿ ಬರೆಯಲು ಪ್ರಯತ್ನಿಸುತ್ತೇನೆ]

Tuesday, July 5, 2011

ದುಃಖವಾಗುತ್ತಿದೆ...!


ಸ್ವಜನಪಕ್ಷಪಾತ ಮತ್ತು ಜಾತಿ ರಾಜಕಾರಣ ಇಡೀ ಕರ್ನಾಟಕವನ್ನು ಆವರಿಸಿಕೊಂಡಿದೆ. ಮುಖ್ಯಮಂತ್ರಿಗಳ ಇಂದಿನ ಹೇಳಿಕೆಯನ್ನೇ ನೋಡಿ, ’ನನ್ನ ಬಂಧುಗಳಿಗೆ ಬೇರೆ ಕಡೆ ನಿವೇಶನ ಇರಲಿಲ್ಲ. ಅದ್ದರಿಂದ ಅನುಕಂಪದ ಆಧಾರದ ಮೇಲೆ ನಿವೇಶನ ವಿತರಿಸಲಾಗಿದೆ.’

ಅನುಕಂಪ ಯಾಕೆ? ಅವರೇ ಹೇಳುವಂತೆ ಅವರ ಸಹೋದರಿ ಗಂಡನನ್ನು ಕಳೆದುಕೊಂಡಿದ್ದಾರಂತೆ. ಅನುಕಂಪದಲ್ಲೆ ಅವರಿಗೂ ಅವರ ಮಗನಿಗೂ ಮುಖ್ಯಮಂತ್ರಿಗಳ ವಿವೇಚನಾ ಕೋಟದಡಿ ಮೂಡಾ[ಮೈಸೂರು ಅಭಿವೃದ್ಧಿ ಪ್ರಾಧಿಕಾರ] ನಿವೇಶನಗಳನ್ನು ವಿತರಿಸಿದ್ದಾರಂತೆ. ಸರಕಾರಿ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿಯೆಂದು ಯಡಿಯೂರಪ್ಪನವರು ಅಂದುಕೊಂಡಿರಬೇಕು! ಲಜ್ಜೆ ಭಂಡತನಕ್ಕೊಂದು ಮಿತಿ ಬೇಡವೇ?ಇಲ್ಲವಾದರೆ ನಾಡಿನ ಎಲ್ಲಾ ವಿಧವೆಯರಿಗೂ ನಿಯಮ ಅನ್ವಯಿಸುತ್ತದೆಯೇ?

ವಿಧವೆ ಅನ್ನುವಾಗ ನೆನಪಾಯಿತು. ಮೊನ್ನೆ ಗುಲ್ಬರ್ಗದಲ್ಲಿ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ಬಹಿರಂಗ ಸಭೆಯಲ್ಲಿ ಹೇಳಿದ ಮಾತುಗಳನ್ನೊಮ್ಮೆ ಕೇಳಿ,” ಏನಮ್ಮಾ..ನಿಮ್ಮಲ್ಲಿ ಯಾರ್ಯಾರು ರಂಡೆ-ಮುಂಡೆಯರಿದ್ದೀರಿ..? ಕೈ ಎತ್ತಿರಿ..ವಯಸ್ಸಾದವರೂ ಪರವಾಗಿಲ್ಲ..” ಮಾನವಂತರು ಆಡುವ ಮಾತೇ ಇದು?

ಅಬ್ಬಾ! ನಿಜಕ್ಕೂ ರಾಜಕಾರಣ ಹೊಲಸೆದ್ದು ಹೋಗಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಹೇಗಿದೆ?

ಮುಖ್ಯಮಂತ್ರಿಗಳು ಮಾಧ್ಯಮದ ವ್ಯಕ್ತಿಗಳಿಗೆಲಕೋಟೆವಿತರಿಸಲೆಂದೇ ವ್ಯಕ್ತಿಯೊಬ್ಬನನ್ನು ನೇಮಕ ಮಾಡಿಕೊಂಡಿದ್ದಾರೆಂದರೆ ಖರೀದಿ ವ್ಯವಹಾರ ಎಷ್ಟು ಬಿಜಿಯಾಗಿರಬಹುದೆಂದು ಊಹಿಸಿಕೊಳ್ಳಬಹುದು. ಮಾದ್ಯಮದ ಸಹಕಾರ ಹೀಗೆ ದೊರೆಯುತ್ತಿದ್ದರೆ ಸರಕಾರ ತನ್ನ ಅವಧಿ ಪೂರೈಸುವುದರೊಳಗಾಗಿ ಎಡೆಯೂರಪ್ಪ ಮತ್ತವರ ವಂಧಿ ಮಾಗಧರು ಕರ್ನಾಟಕದ ಆಯಕಟ್ಟಿನ ಜಾಗವನ್ನೆಲ್ಲಾ ಹರಿದು ಹಂಚಿಕೊಂಡು ತಿನ್ನುತ್ತಾರೆ. ಲಿಂಗಾಯತ ಮಠಾದೀಶರು, ಸ್ವಜಾತಿ ಭಾಂದವರು ಅವರನ್ನು ಕೈಯೆತ್ತಿ ಆಶೀರ್ವದಿಸುತ್ತಾರೆ.

ಆಳುವವರ ಆಟಾಟೋಪಗಳಿಗೆ ಯಾರ ಅಂಕೆಯೂ ಇಲ್ಲ.

ನನಗೊಂದು ಕುತೂಹಲ; ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಿಕೊಂಡು ಬರಲು ವರ್ಷಕ್ಕೊಮ್ಮೆ ಮೂರು ದಿನಗಳ ಮಟ್ಟಿಗೆ ಭೂಲೋಕಕ್ಕೆ ಬರುತ್ತಾನೆ. ಹಾಗೆಯೇ ಬಸವಣ್ಣನೇನಾದರೂ ಭೂಮಿಗೆ ಬಂದರೆ ಏನಾಗಬಹುದು? ಜಾತೀಯತೆಯ ವಿರುದ್ಧ ಹೋರಾಡಿದ ಮಹಾನುಭಾವ ಲಿಂಗಾಯಿತರ ಜಾತಿ ವ್ಯಾಮೋಹವನ್ನು ಕಂಡು ಮೂರ್ಛೆ ಹೋದವನು ಖಂಡಿತವಾಗಿಯೂ ಮೇಲೇಳಲಾರ.

ನಿಷ್ಪಕ್ಷವಾಗಿ ಕೆಲಸ ಮಾಡಬೇಕಾದ ಮಾಧ್ಯಮ ರಂಗದಲ್ಲಿಯೂ ಜಾತೀಯ ಸಂಘಟನೆಗಳಿವೆ. ಅದರ ಬೇಕು-ಬೇಡಗಳನ್ನು ಆಯಾಯ ಜಾತೀಯ ರಾಜಕೀಯ ಮುಖಂಡರು ನೋಡಿಕೊಳ್ಳುತ್ತಾರೆ. ಅದರ ವಿರಾಟ್ ಸ್ವರೂಪವನ್ನು ಸರ್ತಿ ನಡೆದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಕಾಣಬಹುದಿತ್ತು. ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಪತ್ರಕರ್ತರ ಹಿಂಡು ವಲಸೆ ಹೋಗುವಲ್ಲಿಯೂ ಇದರ ಝಳಕ್ಕನ್ನು ಕಾಣಬಹುದು.

ಕೆಲವು ದಿನಗಳ ಹಿಂದೆ ಬ್ರಾಹ್ಮಣರ ಮೊಬೈಲ್ ಗಳಲ್ಲಿ, ಮುಖ್ಯವಾಗಿ ಬ್ರಾಹ್ಮಣ ಪ್ರತ್ರಕರ್ತರ ಮೊಬೈಲ್ ಗಳಲ್ಲಿ ಸಂದೇಶವೊಂದು ಹರಿದಾಡುತ್ತಿತ್ತು. ಅದುಬ್ರಾಹ್ಮಣ ಜಾಗೋಎಂಬ ಸಂದೇಶ.

ಅದಕ್ಕೊಂದು ಹಿನ್ನೆಲೆಯಿದೆ; ಜೂನ್ ೨೮ರಂದು ಬೆಂಗಳೂರಿನರಂಗಶಂಕರರಂಗಮಂದಿರದಲ್ಲಿ ಕನ್ನಡದ ಜನಪ್ರಿಯ ಕಾದಂಬರಿಕಾರ ಎಸ್.ಎಲ್.ಬೈರಪ್ಪನವರಮಂದ್ರಕಾದಂಬರಿಯ ರಂಗರೂಪದ ಪ್ರದರ್ಶನವಿತ್ತು.

ಮೊಬೈಲ್ ಸಂದೇಶದ ಸೃಷ್ಟಿಕರ್ತನಾರೋ ಗೊತ್ತಿಲ್ಲ. ಆದರೆ ಅದನ್ನು ಕಳುಹಿಸಿದಾತ ಆನಂದ ಟಿ.ಅರ್. ಎಂಬ ಮಹಾನುಭಾವ. ’ಬ್ರಾಹ್ಮಣ ಜಾಗೋಎಂಬ ತಲೆ ಬರಹದಡಿಯಲ್ಲಿ ಕಳುಹಿಸಲಾದ ಸಂದೇಶದ ಸಾರಂಶ ಇಷ್ಟು; ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಾಹಿತ್ಯ ಶನಿ ಅನಂತಮೂರ್ತಿಗಳಿಗೆ ತಕ್ಕ ಉತ್ತರ ನೀಡಿ.

ಅನಂತಮೂರ್ತಿಯವರನ್ನು ಸಾಹಿತ್ಯ ಶನಿ ಎಂದು ಕರೆಯಲು ಈತನ್ಯಾರು? ಮರೆಯಲ್ಲಿ ನಿಂತು ಬಾಣ ಬೀಡುವ ವಿಧ್ಯೆಯನ್ನು ಆತ ಶ್ರೀರಾಮನಿಂದ ಕಲಿತುಕೊಂಡನೆ?

ಅನಂತಮೂರ್ತಿ ಹಾಗು ಬೈರಪ್ಪನವರು ಕನ್ನಡದ ಪ್ರಮುಖ ಸಾಹಿತಿಗಳು. ಅವರ ಸಿದ್ದಾಂತಗಳು ಏನೇ ಇರಲಿ, ಬೈರಪ್ಪನವರು ನಮ್ಮಲ್ಲಿ ಓದಿನ ಅಭಿರುಚಿಯನ್ನು ಹುಟ್ಟಿಸಿದವರು. ಹಾಗೆಯೇ ಅನಂತಮೂರ್ತಿಯವರು ನಮ್ಮ ಪ್ರಜ್ನೆಯನ್ನು ವಿಸ್ತರಿಸಿದವರು. ಇವರಿಬ್ಬರ ಬಗ್ಗೆಯೂ ಸಾಹಿತ್ಯಾಭಿಮಾನಿಗಳಿಗೆ ಮೆಚ್ಚುಗೆಯಿದೆ; ಗೌರವವಿದೆ. ಇವರಿಬ್ಬರ ಮೇಲೂ ಈಗ ಕೆಸರೆರಚಾಟ ನಡೆಯುತ್ತಲಿದೆ. ದುರ್ಧೈವದ ಸಂಗತಿ ಎಂದರೆ ಕನ್ನಡದ ಪ್ರಮುಖ ಪತ್ರಿಕೆಯೊಂದು ಅದಕ್ಕೆ ವೇದಿಕೆಯಾಗಿರೋದು. ಅವಸರದ ಸಾಹಿತ್ಯ ಸೃಷ್ಟಿಸುತ್ತಿರುವ ಪತ್ರಕರ್ತ ಸಾಹಿತಿಗಳು ಅದರಲ್ಲೂ ತೀರಾ ಎಳಸು ಪತ್ರಕರ್ತರು ಅಂಥ ಹಿರಿಯರ ಮೇಲೆ ಎಗರಿ ಬೀಳುತ್ತಿದ್ದಾರೆ. ಸಂಪಾದಕರು ಅವರ ಬೆನ್ನು ತಟ್ಟುತ್ತಿದ್ದಾರೆ. ಇವರ ಬೌದ್ಧಿಕ ಅಹಂಕಾರ ಯಾವ ಕಡೆಗೆ ಇವರನ್ನು ಕರೆದೊಯ್ಯಬಹುದು?

ಇದನ್ನೆಲ್ಲಾ ನೋಡುತ್ತಿರುವಾಗ ಸೋಮೇಶ್ವರ ಶತಕದಹರ ಕೊಲ್ಲಲ್ ಪರ ಕಾಯ್ವನೇ?’ ಎಂಬ ಮಾತು ನೆನಪಾಗುತ್ತದೆ. ಯಾರು ರಕ್ಷಕರಾಗಬೇಕಿತ್ತೋ ಅವರೇ ಭಕ್ಷಕರಾಗಿಬಿಟ್ಟರೆ ನಾವು ಆಸರೆಗಾಗಿ ಯಾರತ್ತ ಕೈ ಚಾಚಬೇಕು?