Wednesday, September 24, 2008

ಬಳೆಗಾರ ಚೆನ್ನಯ್ಯನಂತಹ ಬ್ಯಾರಿಗಳು

ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೋದವಳು ಇಂದು ತಿರುಗಿ ಬಂದೆ.

ಕಳೆದ ಸರ್ತಿ ರಾಸಾಯನಿಕ ಗೊಬ್ಬರ ಅಂದ್ರೆ, ಯೂರಿಯ, ಪೊಟಾಶ್, ರಾಕ್ ಫಾಸ್ಪೇಟ್ ಗಳನ್ನು ೧;೨;೩ರ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಹಾಕಿದ್ದೆ. ನಾನು ಸಾವಯವಕೃಷಿಯ ಪರವಾಗಿದ್ದರೂ ಕಳೆದ ಬಾರಿ ರಾಸಾಯನಿಕ ಹಾಕುವುದು ಅನಿವಾರ್ಯವಾಗಿತ್ತು. ಯಾಕೆಂದರೆ, ನಾನು ಖರೀದಿಸಿದ ಆ ತೋಟಕ್ಕೆ ಕಳೆದ ಹತ್ತು ವರ್ಷಗಳಿಂದ ಗೊಬ್ಬರ ಹಾಕಿರಲಿಲ್ಲವಂತೆ. ಹಾಗಾಗಿ ಮರಗಳಿಗೆ ಒಮ್ಮೆ ಚೈತನ್ಯ ತುಂಬಲು ರಾಸಾಯನಿಕ ಗೊಬ್ಬರ ಕೊಡಲೇ ಬೇಕಾಗಿತ್ತು.

ಭಾನುವಾರ ಬೆಳಿಗ್ಗೆ ತೋಟದ ಮನೆ ತಲುಪಿ, ತೋಟವೆಲ್ಲಾ ಸುತ್ತಾಡಿ, ಗಿಡಮರಗಳ ಮೈದಡವಿ, ತುಂಬಿ ಹರಿಯುವ ಕಪಿಲೆಯ ಭೊರ್ಗೆರೆತಕ್ಕೆ ಬೆರಗಾಗುತ್ತ ಮನೆ ತಲುಪಿದಾಗ ಶಿವಾನಂದ ಹಂಡೆ ತುಂಬ ಬಿಸಿ ನೀರು ಕಾಯಿಸಿ ಇಟ್ಟಿದ್ದ. ಸ್ನಾನ ಮಾಡಿ ಬರುವುದರೊಳಗೆ ಅವನ ಹೆಂಡ್ತಿ ರೇಖಾ ಮನೆಯನ್ನು ಚೊಕ್ಕಟ ಮಾಡಿ ಟೀಗೆ ನೀರಿಡುತ್ತಿದ್ದಳು

ಟೀ ಕುಡಿದು ಲೋಕಸಂಚಾರಕ್ಕಾಗಿ ಟಿ.ವಿ ಅನ್ ಮಾಡಿದಾಗ ಲಾರಿ ಹಾರ್ನ್ ಕೇಳಿಸಿತು. ದೂರದಲ್ಲಿ ಮಮ್ಮದೆಬ್ಯಾರಿಯ ಲಾರಿ ಕಾಣಿಸುತ್ತಾ ಗೇಟಿನೊಳಗೆ ನುಸುಳಿ ಅಂಗಳದೊಳಗೆ ಬಂದೇಬಿಟ್ಟಿತು. ೮೦ ಚೀಲ ಅಂದರೆ ೪ಟನ್ ಗೊಬ್ಬರವನ್ನು ಅವರದೇ ಜನ ಕೊಟ್ಟಿಗೆಯಲ್ಲಿ ನೀಟಾಗಿ ಜೋಡಿಸಿಟ್ಟರು. ಟೀ ಮಾಡಿ ಕೊಟ್ಟರೆ ’ರಂಜಾನ್ ತಿಂಗಳಲ್ವಾ.. ಹಾಗಾಗಿ ಉಪವಾಸದಲ್ಲಿದ್ದೇವೆ’ ಎಂದು ನಗುತ್ತಲೇ ನಿರಾಕರಿಸಿದರು.

ಮೀನು, ಬೇವಿನ ಹಿಂಡಿ ಮತ್ತು ಎಲುಬಿನ ಪುಡಿಯ ಈ ಸಾವಯವ ಗೊಬ್ಬರ ಅಡಿಕೆ,ಕೊಕ್ಕೊ ಮತ್ತು ತೆಂಗಿನ ಮರಕ್ಕೆ ಅತ್ಯುತ್ತಮ ಗೊಬ್ಬರ .ಭೂಮಿಯಲ್ಲಿ ಸಮೃದ್ಧವಾಗಿ ಎರೆಹುಳು ಉತ್ಪತ್ತಿಯಾಗುತ್ತದೆ. ಇಂಥ ಗೊಬ್ಬರವನ್ನು ಇದೇ ಮಮ್ಮದೆಬ್ಯಾರಿ ಆ ಊರಿನ ಹಲವಾರು ಮನೆಗಳಿಗೆ ಹಲವಾರು ವರ್ಷಗಳಿಂದ ಪೂರೈಸುತ್ತಿದ್ದರು.

ಗೊಬ್ಬರದ ಬೆಲೆ ೩೦ ಸಾವಿರ ರೂಪಾಯಿಗಳಲ್ಲಿ ೧೦ ಸಾವಿರ ರೂಪಾಯಿಗಳನ್ನು ಮೊದಲ ಅಡಿಕೆ ಕೊಯ್ಲಿನ ನಂತರ ಕೊಡುವುದಾಗಿ ಹೇಳಿದಾಗ ಮಮ್ಮದೆಬ್ಯಾರಿ ’ಆಯ್ತು ಅಕ್ಕಾ.ದುಡ್ಡು ಎಲ್ಲಿ ಹೊಗುತ್ತೆ ಬಿಡಿ. ನೀವು ಚೆನ್ನಾಗಿ ಕೃಷಿ ಮಾಡಿ’ ಎಂದು ಶುಭ ಹಾರೈಸಿ ಲಾರಿ ಸ್ಟಾರ್ಟ್ ಮಾಡಿದರು.

ಈ ಘಟನೆಯನ್ನು ಯಾಕೆ ಹೇಳುತ್ತಿದ್ದೇನೆಂದರೆ ಈ ಬ್ಯಾರಿಗಳು ನಮ್ಮ ಕರಾವಳಿ ಜಿಲ್ಲೆಯ ಆರ್ಥಿಕ ಸುಧಾರಣೆಯ ಕೊಂಡಿಗಳು. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮಳೆಗಾಲದಲ್ಲಿ ನೆರವು ನೀಡಿ ಫಸಲು ಬಂದ ಮೇಲೆ ಅದನ್ನು ಪಡೆದು ತಮ್ಮ ಸಾಲಕ್ಕೆ ವಜಾ ಮಾಡಿಕೊಳ್ಳುತ್ತಾರೆ. ನಮ್ಮ ಕರಾವಳಿಯ ಜನರು ಲೇವಾದೇವಿಗಾರರ ಬಡ್ಡಿಯ ವಿಷವರ್ತುಲದೊಳಗೆ ಸಿಕ್ಕಿ ಬೀಳದಿರಲು ಇದೂ ಒಂದು ಕಾರಣವಿರಬಹುದು.

ಜಾನಪದದಲ್ಲಿ ಬಳೆಗಾರ ಚೆನ್ನಯ್ಯ ಹೇಗೆ ಅಂಚೆಯಣ್ಣನ ಪಾತ್ರವನ್ನು ವಹಿಸುತ್ತಿದ್ದನೋ ಹಾಗೆಯೇ ಬ್ಯಾರಿಗಳು ಕರಾವಳಿಯಲ್ಲಿ ಸರಕು ಸಾಗಾಣಿಕೆಯ ಪಾತ್ರವನ್ನು ವಹಿಸುತ್ತಿದ್ದರು. ರುಚಿಕರವಾದ ಒಣಮೀನನ್ನು ಇಂದಿಗೂ ಹಳ್ಳಿ ಹಳ್ಳಿಗಳಿಗೆ ತಲಪಿಸುವವರು ಇವರೇ. ಸೇಕುಂಝ್ ಬ್ಯಾರಿ ತಂದು ಕೋಡುತ್ತಿದ್ದ ಓಲೆ ಬೆಲ್ಲದ ರುಚಿ ಇಂದು ಕೂಡ ನನ್ನ ನಾಲಗೆಯಲ್ಲಿದೆ. ನಮ್ಮೂರಿನಲ್ಲಿ ಈಗಲೂ ವ್ಯಾಪಾರಕ್ಕಾಗಿ ಬಂದ ಬ್ಯಾರಿಗಳಿದ್ದಾರೆ. ನಮ್ಮ ಅವರ ನಡುವಿನ ಸಂಬಂಧ,ವಿಸ್ವಾಸದಲ್ಲಿ ಬಹಳ ಬದಲಾವಣೆಯೇನು ಆದಂತಿಲ್ಲ.

ಎರಡ್ಮೂರು ದಶಕಗಳ ಹಿಂದಿನ ಘಟನಾವಳಿಗಳು ಇವು; ಪುತ್ತೂರಿಗೆ ವಯಾ ಪಂಜದ ಹಾದಿಯಲ್ಲಿ ಹೋದರೆ ಬೈತಡ್ಕ ಎಂಬ ಊರು ಸಿಗುತ್ತದೆ. ಅಲ್ಲಿನ ಸೇತುವೆ ದಾಟಿ, ಮೊದಲ ತಿರ್ಗಾಸಿನ ಬಲ ಬದಿಯಲ್ಲೊಂದು ಪಳ್ಳಿ[ಮಸೀದಿ] ಸಿಗುತ್ತದೆ. ’ಬೈತಡ್ಕ ಪಳ್ಳಿ’ ಎಂದೇ ಖ್ಯಾತಿಯನ್ನು ಪಡೆದಿರುವ ಆ ಮಸೀದಿ ತುಂಬಾ ಕಾರಣಿಕವಾದುದು ಎಂದುಸುತ್ತಮುತ್ತಲ ತಾಲೂಕಿನವರು ಹೇಳುತ್ತಿದ್ದರು. ಪುತ್ತೂರಿಗೆ ಹೋಗಿ ಬರುವ ಪ್ರತಿ ಬಸ್ಸು ಅಲ್ಲಿ ಒಂದರೆಗಳಿಗೆ ನಿಂತು ಅಥವಾ ನಿಧಾನಿಸಿ ಮುಂದಕ್ಕೆ ಸಾಗುತ್ತಿತ್ತು. ಜಾತಿ-ಮತ ಭೇದವಿಲ್ಲದೆ ಜನರು ಆ ಪಳ್ಳಿಯೆಡೆಗೆ ದುಡ್ಡನ್ನು ಕಿಟಿಕಿಯಿಂದ ಹಾಕಿ ಹರಕೆ ತೀರಿಸುತ್ತಿದ್ದರು.

ನನ್ನ ಅಜ್ಜಿಗೆ ಈ ಪಳ್ಳಿಯ ಮೇಲೆ ವಿಶೇಷ ನಂಬಿಕೆಯಿತ್ತು. ಆಕೆ ತುಂಬಾ ಕೋಳಿ ಸಾಕುತ್ತಿದ್ದಳು. ಚಳಿಗಾಲದಲ್ಲಿ ಸಹಜವಾಗಿ ಕೋಳಿಹೇನುಗಳಾಗುತ್ತಿದ್ದವು. ಬೈತಡ್ಕ ಪಳ್ಳಿಗೆ ಹರಕೆ ಹೇಳಿಕೊಂಡರೆ ಹೇನುಗಳೆಲ್ಲಾ ಮಂಗಮಾಯ ಎಂಬುದು ಭಕ್ತರ ನಂಬಿಕೆ.ನಾನು ಹತ್ತಾರು ವರ್ಷಗಳಿಂದ ಆ ದಾರಿಯಲ್ಲಿ ಹೊಗಿಲ್ಲ. ಬಹುಶಃ ಈಗ ಅಲ್ಲಿ ಬಸ್ಸು ನಿಲ್ಲಲಾರದು

ಹಾಗೆ ಭಾವಿಸಲು ಕಾರಣವಿದೆ. ಹುಟ್ಟಿದೂರಿನಿಂದ ದೂರವಿರುವ ನಾನು ಅಲ್ಲಿಯ ಆಗುಹೋಗುಗಳನ್ನು ತಿಳಿದುಕೊಳ್ಳುವ ಕಾರಣದಿಂದ ’ಸುದ್ದಿ ಬಿಡುಗಡೆ’ ಎಂಬ ಪತ್ರಿಕೆಯನ್ನು ತರಿಸುತ್ತೇನೆ. ಅದರಲ್ಲಿ ನಾಲ್ಕೈದಾದರು ಭಜರಂಗಿಗಳ ದರ್ಭಾರ್ ಇದ್ದೇ ಇರುತ್ತದೆ ಹೆಚ್ಚಾಗಿ ಅವರು ಮಾಡುವುದು ಪತ್ತೆದಾರಿಕೆ ಕೆಲಸವನ್ನು. ಒಂದು ಹಿಂದು ಯುವತಿ ಒಬ್ಬ ಯುವಕನೊಡನೆ ಆತ್ಮೀಯವಾಗಿ ಮಾತಾಡುವುದು ಕಂಡು ಬಂದರೆ ಆ ಯುವಕ ಯಾವ ಕೋಮಿನವನೆಂದು ಪತ್ತೆ ಹಚ್ಚುವುದು. ಅನ್ಯ ಕೋಮಿನವನೆಂದು ಗೊತ್ತಾದರೆ ಅವನಿಗೆ ಚೆನ್ನಾಗಿ ತದಕುವುದು. ತಾನೇನು ತಪ್ಪು ಮಾಡಿದೆನೆಂದು ಅವನು ಕಕ್ಕಾಬಿಕ್ಕಿಯಾಗುತ್ತಿರುವಾಗಲೇ ಅವನ ಶರ್ಟ್ ಹರಿದು ಕೆನ್ನೆ ಊದಿಕೊಂಡಿರುತ್ತದೆ.ದೂರದ ಊರಿನವರಾಗಿದ್ದರೆ ಅಲ್ಲಿಗೆ ಮೇಸೇಜ್ ಮುಟ್ಟಿಸುತ್ತಾರೆ. ಅಲ್ಲಿ ಅವರಿಗೆ ತಕ್ಕ ಪೂಜೆ ಅಲ್ಲಿಯ ಭಜರಂಗಿಗಳಿಂದ ಆಗುತ್ತದೆ. ಭಜರಂಗಿಗಳ ಇನ್ನೊಂದು ಕೆಲಸ; ದನ ಕಾಯುವುದು. ಎಲ್ಲಿಯಾದರು ಟ್ರಕ್ ಗಳಲ್ಲಿ ದನ ಕೊಂಡೊಯ್ಯುತ್ತಿರುವ ಸುದ್ದಿ ಸಿಕ್ಕಿದರೆ ಅಲ್ಲಿಗೆ ಹಾಜರು. ಬಡ ಸಾಬರು ಹಣ್ಣುಗಾಯಿ-ನೀರುಗಾಯಿ. ಈ ಸಣ್ಣ ಕಿಡಿ ಮುಂದೆ ಕೋಮುದಳ್ಳುರಿಯಾಗುತ್ತದೆ.

ಭಜರಂಗಿಗಳಿಗೆ ಗೊತ್ತಿಲ್ಲದಿರಬಹುದು; ಸಾಮೂಹಿಕವಾಗಿ ದನದ ಮಾಂಸ ತಿನ್ನುವುದನ್ನೇ ಒಂದು ಸಂಭ್ರಮವನ್ನಾಗಿಸಿ ಆಚರಿಸಿಕೊಳ್ಳುವ ವೈಚಾರಿಕ ಹಿಂದುಗಳು ನಮ್ಮ ನಡುವೆಯೇ ಇದ್ದಾರೆ. ಅವರನ್ನು ಯಾವ ಕೋಮಿಗೆ ಸೇರಿಸುತ್ತಿರಿ?

ಯಾವ ಧರ್ಮದಲ್ಲಿ ತನಗೆ ನೆಮ್ಮದಿ ಸಿಗುತ್ತದೆ; ಯಾವ ಆಹಾರವನ್ನು ತಿಂದರೆ ತನಗೆ ಹಿತ ಅನ್ನಿಸುತ್ತದೆ ಎಂಬುದು ವ್ಯಕ್ತಿಯ ವೆಯ್ಯಕ್ತಿಕ ಆಯ್ಕೆ. ಅದು ವೆಯ್ಯಕ್ತಿಕ ಮಟ್ಟದಲ್ಲೇ ಇದ್ದರೆ ಅದರಿಂದ ಯಾರಿಗೂ ಹಾನಿಯಿಲ್ಲ. ಅದು ಬಹಿರಂಗಗೊಂಡು ಸಾರ್ವತ್ರಿಕಗೊಂಡಾಗ ಘರ್ಷಣೆಗಳುಂಟಾಗುತ್ತವೆ. ಸಾಮಾಜಿಕ ನೆಮ್ಮದಿ ಕದಡುತ್ತದೆ.

Saturday, September 20, 2008

ಬರೆಯಬಾರದೆಂದಿದ್ದರೂ....ಬರೆದೆ

ನನ್ನ ಬ್ಲಾಗ್ ಬರಹಕ್ಕೆ ಪ್ರತಿಕ್ರಿಯಿಸುತ್ತ ರಾಮರವರು ’ಬಜರಂಗಿಗಳ ಪುಂಡಾಟದ ಬಗ್ಗೆ ಬರೆಯಿರಿ’ ಎಂದಿದ್ದರು. ಆ ಪುಂಡುಪೋಕರಿಗಳ ಪಡೆಯನ್ನು ನಿಯಂತ್ರಿಸಬೇಕಾದ ಸರಕಾರವೇ ತೆರೆಮರೆಯಲ್ಲಿ ಅದನ್ನು ಮುನ್ನಡೆಸುತ್ತಿರುವಾಗ ನಾವೇನು ಮಾಡಲು ಸಾಧ್ಯ? ಎಂದು ಅಸಹಾಯಕತೆಯಿಂದ ಮನಸ್ಸು ಕಂದು ಹೊಗಿತ್ತು. ಆದರೆ ಇಂದು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಾಪಸಿಂಹ ಎಂಬ ಪತ್ರಕರ್ತರು ಬರೆದ ಅಂಕಣ ಬರಹವನ್ನು ಒದಿದಾಗ ಪ್ರತಿಕ್ರಿಯಿಸದೆ ಇರಲಾಗಲಿಲ್ಲ.
ಅವರ ಉವಾಚ ಇದು; ’ಅದು ಬಜರಂಗದಳವಿರಬಹುದು ಅಥವಾ ಇನ್ನಾವುದೇ ಸಂಘಟನೆ ಇರಬಹುದು. ಧರ್ಮದ ಅವಹೇಳನ ಮಾಡಿದಾಗ ಕಾನೂನನ್ನು ಕೈಗೆತ್ತಿಕೊಳ್ಳುವುದು ಸಹಜ.....’
’ಅವರು ಹಂಚುವ ಅವಹೇಳನಕಾರಿ ಪುಸ್ತಕಗಳನ್ನು ಮೊದಲು ಪಡೆದುಕೊಂಡು, ಅನಂತರ ಮೈಗೆ ಬಿಸಿ ಮುಟ್ಟಿಸಿ. ಆಧಾರ ಸಮೇತ ಪೋಲಿಸರಿಗೊಪ್ಪಿಸಿ.’
ಹೀಗೆ ಅಪ್ಪಣೆ ಕೊಡಿಸುವ ಪತ್ರಕರ್ತನ ಮನಸ್ಥಿತಿಯನ್ನು ಬಿಡಿಸಿ ಹೇಳುವ ಅವಸ್ಯಕತೆಯಿಲ್ಲ.
ಕ್ರಿಯೆಗೊಂದು ಪ್ರತಿಕ್ರಿಯೆ ಇದ್ದೇ ಇರುತ್ತದೆ. ಆದರೆ ವ್ಯಕ್ತಿಯೊಬ್ಬ ಪ್ರತಿಕ್ರಿಯಿಸುವುದಕ್ಕೂ, ಸಂಘಟನೆಯೊಂದು ಪ್ರತಿಕ್ರಿಯಿಸುವುದಕ್ಕೂ, ಸರಕಾರವೊಂದು ಪ್ರತಿಕ್ರಿಯಿಸುವುದಕ್ಕೂ ವ್ಯತ್ಯಾಸವಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಚರ್ಚ್ ಗಳ ಮೇಲೆ ನಡೆದ ಸೀರಿಯಲ್ ದಾಳಿಗಳ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ವರ್ತಿಸಲಿಲ್ಲ. ಬಿಜೆಪಿ ಪಕ್ಷದ ವಕ್ತಾರರಂತೆ ವರ್ತಿಸಿದ್ದರು.
ಕುಮಾರಸ್ವಾಮಿಯಿಂದ ’ನಪುಂಸಕ’ ಎಂದು ಕರೆಯಿಸಿಕೊಂಡು, ಕೇಂದ್ರದಿಂದ ಒತ್ತಡ ಬಂದ ಮೇಲೆ ಈಗ ಕರ್ನಾಟಕದ ಮುಖ್ಯಮಂತ್ರಿಯಾಗಲು ಮನಸ್ಸು ಮಾಡಿದಂತಿದೆ. ಚರ್ಚ ಮೇಲೆ ದಾಳಿ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ. ಶ್ರೀರಾಮ ಸೇನೆಯ ಮುಖಂಡ ಪ್ರಮೋದ ಮುತಾಲಿಕ್ ಬಂದನಕ್ಕೆ ವಾರಂಟ್ ಹೊರಡಿಸಲಾಗಿದೆ. ಚರ್ಚ್ ಗಳಿಗೆ ಬಿಗಿ ಬಂದೋಬಸ್ತು ನಿಡುವಂತೆ ಆದೇಶಿಸಲಾಗಿದೆ.
ಇವತ್ತು ಬೆಳಗಾವಿಯಲಿದ್ದ ಮುಖ್ಯಮಂತ್ರಿಗಳ ಮುಖ ಸುಟ್ಟ ಬದನೆಕಾಯಿಯಂತಿತ್ತು. ಸಿಡ ಸಿಡ ಎನ್ನುತ್ತಿದ್ದರು. ’ಬಿಜೆಪಿ ಶರವೇಗದಲ್ಲಿ ಬೆಳೆಯುತ್ತಿದೆ. ಅದನ್ನು ಸಹಿಸದ ಕಾಂಗ್ರೇಸ್ ಅಪಪ್ರಚಾರ ಮಾಡುತ್ತಿದೆ....ಕುಮಾರಸ್ವಾಮಿ ಸಂಯಮ ಕಳೆದುಕೊಂಡಿದ್ದಾರೆ...’ಎಂದೆಲ್ಲಾ ಹತಾಶರಾಗಿ ನುಡಿದರು.
ಅದು ನಿಜವಿದ್ದರೂ ಇರಬಹುದು. ಅದರೆ ಒಬ್ಬ ರಾಜಕೀಯ ಮುತ್ಸುದ್ಧಿಗೆ ಇತಿಹಾಸದ ಅರಿವಿರಬೇಕು. ಮುಖ್ಯಮಂತ್ರಿ ವಿರೇಂದ್ರಪಾಟೀಲರನ್ನು ಕೆಳಗಿಳಿಸಲು ಅವರದೇ ಪಕ್ಷದ ಜಾಫರ್ ಷರೀಫ್ ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ಕೊಮುಗಲಭೆಯನ್ನು ಹುಟ್ಟುಹಾಕಿದ್ದು ಈಗ ಇತಿಹಾಸ. ಹಾಗಾಗಿ ಎರಡು ಅಲಗಿನ ಮೇಲಿನ ನಡಿಗೆಯಂತಿರಬೇಕು ಅಧಿಕಾರದ ಗದ್ದುಗೆ.
ಗೃಹಮಂತ್ರಿ ವಿಎಸ್ ಆಚಾರ್ಯರಂತೂ ನಿಜವಾದ ಅರ್ಥದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ನಿಷ್ಣಾತರು!
ಗೇಳೆಯರೇ, ನಾನು ನನ್ನ ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೊರಟಿದ್ದೇನೆ. ಹಾಗಾಗಿ ಉಳಿದ ವಿಚಾರಗಳನ್ನು ಊರಿಂದ ಬಂದ ನಂತರ ಮಾತಡೋಣಾ ಆಗದೇ?

Wednesday, September 3, 2008

ಚೌತಿ ಎಂದರೆ.... ಬರಹ ಹಿಡಿಸುವುದು

ನಾನು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯವಳು. ನಮ್ಮ ತಾಲೂಕಿನಲ್ಲಿ ಬ್ರಾಹ್ಮಣರ ಮನೆಯಲ್ಲಿ, ಅದು ಕೂಡ ಉಳ್ಳವರ ಮನೆಯಲ್ಲಿ ಮಾತ್ರಾ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಿದ್ದರು. ಅದು ಖಾಸಗಿ ಮಟ್ಟದಲ್ಲಿ ಮಾತ್ರ. ಹಾಗಾಗಿ ಗಣೇಶ ನನಗೇನೂ ಇಷ್ಟದೈವವಲ್ಲ.ಆದರೂ ಗಣಪ ನನ್ನ ಭಾವಕೋಶದಲ್ಲಿನ ಒಂದು ಪ್ರಮುಖ ದೇವರು. ಚೌತಿ ಅಂದ್ರೆ ಗಣೇಶ ಚತುರ್ಥಿಯಂದು ನನಗೆ ನೆನಪಾಗುವುದು ನನ್ನ ಬಾಲ್ಯ.ಶಾಲೆಯಲ್ಲಿ ಆನೇಕ ರಾಷ್ಟೀಯ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಸಾಂಸ್ಕ್ರತಿಕವಾಗಿ ಆಚರಿಸುವ ಹಬ್ಬವೆಂದರೆ ಬಹುಶಃ ಗಣೇಶ ಚತುರ್ಥಿ ಒಂದೇ. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಶಾಲೆಗಳಲ್ಲಿ ಚೌತಿಯನ್ನು ಆಚರಿಸುವುದನ್ನು ನಾನು ನೋಡಿಲ್ಲ. ಕೇಳಿಲ್ಲ. ಚೌತಿ ನೆನಪಿರುವುದು ನನಗೆ ಎರಡು ಕಾರಣಗಳಿಗಾಗಿ. ಒಂದು; ಅಂದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಅಥವ ಬರಹ ಹಿಡಿಸುತ್ತಾರೆ. ಇನ್ನೊಂದು; ಮಕ್ಕಳಿಗೆಲ್ಲಾ ಅವಲಕ್ಕಿ ಪಂಚಕಜ್ಜಾಯವನ್ನು ಯಥೇಚ್ಚವಾಗಿ ಹಂಚುತ್ತಾರೆ. ಇದರಲ್ಲಿನ ಕೆಲವು ಸ್ವಾರಸ್ಯಕರ ಸಂಗತಿಗಳನಿಲ್ಲಿ ಹಂಚಿಕೊಳ್ಳುವುದು ನನ್ನ ಉದ್ದೆಶ. ದ.ಕ. ಸೆಖೆನಾಡದ್ದರಿಂದ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರೆಲ್ಲ ಸಂಜೆ ಸ್ನಾನ ಮಾಡುವುದು ರೂಢಿ. ಆದರೆ ಚೌತಿಯಂದು ಶಾಲಾಮಕ್ಕಳೆಲ್ಲ ಮುಂಜಾನೆಯೇ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಶಾಲೆಗೆ ಬರುತ್ತಾರೆ. ಪ್ರತಿ ವಿದ್ಯಾರ್ಥಿಯೂ ಮೂರರಿಂದ ಐದು ಸೇರಿನಷ್ಟು ಅರಳನ್ನು ತರಬೇಕು. ಅನುಕೂಲವಿದ್ದವರು ಒಂದು ಬಾಳೆಗೋನೆಯನ್ನು ತರಬಹುದು. ಪಂಚಕಜ್ಜಾಯಕ್ಕೆ ಬೇಕಾದ ಬೆಲ್ಲವನ್ನು ಶಾಲಾವತಿಯಿಂದಲೇ ಖರೀದಿಸಲಾಗುತ್ತಿತ್ತು. ನಮ್ಮೂರಿನಲ್ಲಿ ಕಬ್ಬು ಬೆಳೆಯುವುದಿಲ್ಲ. ಹಾಗಾಗಿ ಪಂಚಕಜ್ಜಾಯಕ್ಕೆ ಅತ್ಯಗತ್ಯವಾಗಿ ಬೇಕಾದ ಕಬ್ಬು ಎಲ್ಲಿ ಸಿಗುತ್ತದೆಯೆಂದು ತಿಂಗಳುಗಳ ಮೊದಲೇ ಹೆಡ್ಮಾಸ್ತರರು ಹೊಂಚಿ ಇಟ್ಟಿರುತ್ತಿದ್ದರು. ಶಿಷ್ಟ ಭಾಷೆಯಲ್ಲಿ ವಿದ್ಯಾರಂಭವೆಂಬ ’ಬರಹ ಹಿಡಿಸುವ’ ಈ ವಿಶಿಷ್ಟ ಪದ್ಧತಿ ಈಗ ಮರೆಯಾಗಿದೆ. ಈಗ ಮಗು ಅಂಬೆಗಾಲಿಡಲು ಆರಂಭಿಸಿದಾಗಲೇ ಅದರ ಕೈಗೆ ಮೌಸ್ ಹಿಡಿಸುತ್ತಾರೆ. ಹಿಂದೆಲ್ಲಾ ಮಗುವನ್ನು ಶಾಲೆಗೆ ಸೇರಿಸಲು ಐದು ವರ್ಷ ಹತ್ತು ತಿಂಗಳು ತುಂಬಬೇಕಾಗಿತ್ತು. ಇದಕ್ಕೆ ಒಂದೆರಡು ವರ್ಷ ಮೊದಲು ಅದಕ್ಕೆ ಬರಹ ಹಿಡಿಸುತ್ತಿದ್ದರು. ಅದಕ್ಕಾಗಿ ಚೌತಿಯಂದು ಒಂದು ಸೇರು ಬೆಳ್ತಿಗೆ ಅಕ್ಕಿ-ಇಲ್ಲಿ ಒಂದು ವಿಷಯ ಹೇಳಬೇಕು, ಅಲ್ಲಿಯ ಜನಸಾಮನ್ಯರು ಊಟ ಮಾಡುವುದು ಕುಚ್ಚಲಕ್ಕಿ. ದೇವರು ಇದಕ್ಕಿಂತ ಸ್ವಲ್ಪ ಭಿನ್ನವಾಗಿರಬೇಕಲ್ಲ ಅದಕ್ಕಾಗಿ ದೇವರಿಗೆ ಬೆಳ್ತಿಗೆ ಅಕ್ಕಿ- ಇದರ ಜೊತೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಮಗುವಿನ ಜೊತೆ ಶಾಲೆಗೆ ಬರಬೇಕು. ಊರ ಜನರು, ಉಪಾಧ್ಯಾಯರುಗಳು, ವಿದ್ಯಾರ್ಥಿವೃಂದ ಎಲ್ಲರೂ ಸೇರಿ ವಿಜೃಂಭಣೆಯಿಂದ ಆದಿ ದೈವವನ್ನು ಪೂಜಿಸುತ್ತಾರೆ. ನಂತರ ಮುಖ್ಯೋಪಧ್ಯಾಯರು ’ಬರಹ ಹಿಡಿಸುವವರು ಯಾರಾದರು ಇದ್ದರೆ ಬನ್ನಿ.’ ಎಂದು ಹೇಳುತ್ತಾ ಗಣೇಶನ ಮುಂದೆ ಚಕ್ಕಲ ಮಕ್ಕಲ ಹಾಕಿ ಕುಳಿತುಕೊಳ್ಳುತ್ತಾರೆ. ಮಗುವಿನ ಹಿರಿಯರು ತಂದ ಅಕ್ಕಿಯನ್ನು ದೇವರ ಮುಂದೆ ಒಂದಿಂಚು ದಪ್ಪದಲ್ಲಿ ಹರಡುತ್ತಾರೆ. ಮಗುವನ್ನು ಎತ್ತಿ ತಮ್ಮ ಎಡತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುತ್ತಾರೆ. ಅದನ್ನು ಎಡಗೈಯಿಂದ ಬಳಸಿ ಮಗುವಿನ ತೋರುಬೆರಳನ್ನು ಅಕ್ಕಿಯ ಮೇಲಿಟ್ಟು ಓಂ ಎಂದು ಬರೆದು, ನಂತರ ಅದನ್ನು ಅಳಿಸಿ ಓಂ ಗಣೇಶಾಯ ನಮಃ ಎಂದು ಬರೆಯಿಸುತ್ತಾರೆ. ನಂತರ ಮಗು ತೊಡೆಯಿಂದಿಳಿದು ಗುರುಗಳಿಗೆ ನಮಸ್ಕರಿಸಿ ಗಣೇಶನಿಗೂ ವಂದಿಸಿ ಪ್ರಸಾಧ ಸ್ವೀಕರಿಸಲು ಸಾಲಿನಲ್ಲಿ ಅಪ್ಪನ ಜೋತೆ ಕುಳಿತುಕೊಳ್ಳುತ್ತದೆ. ನಮ್ಮ ಶಾಲೆಯ ಉಪಾಧ್ಯಾಯರುಗಳು ಜಾಣರು!. ಒಂದು ದೊಡ್ಡ ಅಂಡೆಯಲ್ಲಿ ಪಂಚಕಜ್ಜಾಯವನ್ನು ಯಾರಿಗೂ ಗೊತ್ತಾಗದಂತೆ ಎತ್ತಿಡುತ್ತಿದ್ದರು. ಮರುದಿನ ನಮಗೆಲ್ಲಾ ಅದನ್ನು ಹಂಚುತ್ತಿದ್ದರು. ಅದು ಎಷ್ಟಿರುತ್ತಿರುತ್ತೆಂದರೆ ನಮಗೆಲ್ಲ ಹೊಟ್ಟೆ ತುಂಬಿ ಮನೆಗೂ ಕೊಂಡೊಯ್ಯುತ್ತಿದ್ದೆವು. ನನಗೆ ಈಗಲೂ ನೆನಪಿದೆ; ನನಗೆ ಬರಹ ಹಿಡಿಸುವಾಗ ದೇವರಿಗೆ ದೊಡ್ಡ ತೆಂಗಿನಕಾಯಿಯನ್ನು ನಾನು ಇಟ್ಟಿದ್ದೆ. ಪೂಜೆ ಭಟ್ರಿಗೇಕೆ ದೊಡ್ಡ ಕಾಯಿ ಎಂದು ನಮ್ಮಪ್ಪ ಅದನ್ನು ಬದಲಾಯಿಸಿ ಸಣ್ಣ ಕಾಯಿ ಇಟ್ಟರು. ಪೂಜೆಯ ಅಕ್ಕಿ ಮತ್ತು ಕಾಯಿಯನ್ನು ಪೂಜೆ ಭಟ್ರೇ ಕೊಂಡೊಯ್ಯುತ್ತಿದ್ದರು. ಅದವರ ಹಕ್ಕು. ಅದೇ ಅವರ ಜೀವನಾಧಾರ. ನಾನು ಮತ್ತೆ ದೊಡ್ಡ ಕಾಯಿ ಇಡುತ್ತಿದ್ದೆ. ಭಟ್ರ ಕಾಯಿ ಅಂದ್ರೆ ಸಣ್ಣ ಕಾಯಿ ಇಡಲು ಬಿಡುತ್ತಿರಲಿಲ್ಲ. ಎಲ್ಲಾ ಮಕ್ಕಳು ಹೀಗೆ ಮಾಡುತ್ತಿದ್ದರಂತೆ. ನಾವು ಗೆಳೆಯರೆಲ್ಲ ಒಟ್ಟು ಸೇರಿ ಬಾಲ್ಯದ ಮೆಲುಕು ಹಾಕಿದಾಗ ಇಂತಹ ಹತ್ತಾರು ಘಟನೆಗಳು ನೆನಪಾಗುತ್ತಾವೆ. ಕೆಲವು ವಿಷಾಧಕ್ಕೆ, ಪಶ್ಚತ್ತಾಪಕ್ಕೆ ಕಾರಣವಾದರೆ ಇನ್ನು ಕೆಲವು ತುಟಿಯಂಚಿನಲ್ಲಿ ನಗು ಮೂಡಿಸುತ್ತವೆ.