Wednesday, September 7, 2011

”ದಿ ಪ್ಯಾಕ್’- ಕಾಡಿನೊಳಗೊಂದು ಸಜ್ಜನಿಕೆ




ದೊಂದು ಪುಟ್ಟ ಹೆಣ್ಣು ಜೀವ. ಅವಳ ಕಣ್ಣೆದುರೇ ಹುಲಿಯೊಂದು ಅವಳ ಹೆತ್ತಮ್ಮನನ್ನು ಕೊಲ್ಲುತ್ತದೆ. ಒಡಹುಟ್ಟಿದ ಎರಡು ಸಹೋದರರೊಡನೆ ಆಕೆ ಅನಾಥೆಯಾಗುತ್ತಾಳೆ. ತನ್ನ ಬಳಗವನ್ನು ತೊರೆದು ಕಾಡಿನಲ್ಲಿ ಏಕಾಂಗಿಯಾಗಿ ಅಲೆದಾಡುತ್ತಾಳೆ. ತನ್ನದೇ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಾಳೆ. ಬದುಕಿನ ಹೋರಾಟದ ಹಾದಿಯಲ್ಲಿ ಆಕೆಗೊಬ್ಬ ಪ್ರಿಯಕರ ದೊರೆಯುತ್ತಾನೆ. ತನ್ನದೇ ಬಳಗ ಕಟ್ಟಿಕೊಳ್ಳುತ್ತಾಳೆ. ಅವರಿಗೆಲ್ಲಾ ಆಹಾರ ಹೊಂಚಲು ಸಂಚುಗಳನ್ನು ರೂಪಿಸುತ್ತಾಳೆ. ಅದನ್ನು ಸಮರ್ಥ, ಬಲಾಢ್ಯ ತಂಡವಾಗಿ ಕಟ್ಟಲು ಎದುರಾಳಿ ತಂಡಗಳ ಜೊತೆ ದಿಟ್ಟತನದಿಂದ ಹೋರಾಡುತ್ತಾಳೆ. ಕಾಡ್ಗಿಚ್ಚಿನಿಂದ ತನ್ನ ತಂಡವನ್ನು ರಕ್ಷಿಸಿಕೊಳ್ಳುತ್ತಾಳೆ. ಸವಾಲುಗಳನ್ನು ಎದುರಿಸುತ್ತಲೇ ಬದುಕು ಕಟ್ಟಿಕೊಂಡ ಆಕೆಗೆ ತನ್ನ ಮಗಳೇ ಸವತಿಯಾಗುತ್ತಾಳೆ.ಆದರೂ ನೋವು ನುಂಗಿಕೊಳ್ಳುತ್ತಾಳೆ. ತಾಯಿ-ಮಗಳಿಬ್ಬರೂ ಒಮ್ಮೆಲೇ ಗರ್ಭಿಣಿಯರಾಗಿ ತಮ್ಮ ತಂಡದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಆ ಮಹಾತಾಯಿಯ ಹೆಸರು ಕೆನ್ನಾಯಿ. ಹೌದು, ಇವಳು ’ದಿ ಪ್ಯಾಕ್’’ ಸಾಕ್ಷ್ಯ ಚಿತ್ರದ ನಾಯಕಿ; ಒಂದು ಕಾಡು ನಾಯಿ. ಈಕೆ ಯಾವ ಆಧುನಿಕ ಮಹಿಳೆಗೂ ಕಡಿಮೆಯಿಲ್ಲ. ಅವಳು ಎದುರಿಸುವ ಎಲ್ಲಾ ಸವಾಲುಗಳನ್ನು ಈಕೆಯೂ ಎದುರಿಸುತ್ತಾಳೆ.

”ದಿ ಪ್ಯಾಕ್’ ; ಕೃಪಾಕರ-ಸೇನಾನಿ ಎಂಬ ವನ್ಯ ಜೀವಿ ಪೋಟೋಗ್ರಾಪ್ ರ ಜೋಡಿ ನಿರ್ಮಿಸಿದ ಸಾಕ್ಷ್ಯ ಚಿತ್ರ. ಪ್ಯಾಕ್ ಎಂದರೆ ಬಳಗ; ತಂಡ. ಇದು ಕೆನ್ನಾಯಿಗಳ ಬಳಗ. ಕೆನ್ನಾಯಿ ಇದು ಕನ್ನಡದ ಶಬ್ದ. ಕೆಂಪು ನಾಯಿ- ಕೆನ್ನಾಯಿ. ದಿ ಪ್ಯಾಕ್ ಡಾಕ್ಯುಮೆಂಟರಿ ಮೂಲಕ ಈ ಶಬ್ದ ಇದೀಗ ಜಗತ್ತಿಗೆ ಪರಿಚಯಯವಾಗಿದೆ. ಅದಕ್ಕಾಗಿ ಕನ್ನಡಿಗರೆಲ್ಲರೂ ಕೃಪಾಕರ-ಸೇನಾನಿ ಜೋಡಿಗೆ ಕೃತಜ್ನರು.

ಕೆನ್ನಾಯಿ- ಈ ಶಬ್ದ ನನಗೆ ಅಪರಿಚಿತವಲ್ಲ. ಕುಕ್ಕೇ ಸುಬ್ರಹ್ಮಣ್ಯ ಸಮೀಪದ ಬಾಳುಗೋಡು ನನ್ನೂರು. ಅದು ಪಶ್ಚಿಮ ಘಟ್ಟದಂಚಿನ ಊರು. ಆ ಊರಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಮಗು ಏನಾದರು ಹಠ ಹಿಡಿದರೆ ಸೌಮ್ಯ ಗದರಿಕೆಯ ಧ್ವನಿಯಲ್ಲಿ ’ಗುಮ್ಮ ಬರುತ್ತದೆ ನೋಡು’ ಎಂದು ಹೆದರಿಸುತ್ತಿದ್ದರು. ಮಗು ಗಪ್ ಚುಪ್. ಇನ್ನೂ ಹಠ ಮಾಡಿದರೆ ’ಕಾಡಿನಿಂದ ಕೆನ್ನ ನಾಯಿ ಬಂದು ಕಚ್ಚಿಕೊಂಡು ಹೋಗುತ್ತದೆ’ ಎಂದು ಹೆದರಿಸುತ್ತಿದ್ದರು. ಆದರೆ ಕೆನ್ನಾಯಿಯನ್ನು ಯಾರಾದರೂ ನೋಡಿ ವರ್ಣಿಸಿದ್ದು ನನಗೆ ನೆನಪಿಲ್ಲ. ಆದರೆ ನಮ್ಮ ನದಿಯಂಚಿನ ಕಾಡಿನಲ್ಲಿ ಆಗಾಗ ಕಡವೆಯ ತಲೆಗಳು ಬಿದ್ದಿರುತ್ತಿದ್ದವು. ಅವುಗಳನ್ನು ತೋರಿಸಿ ಇದು ಕೆನ್ನಾಯಿಗಳೇ ತಿಂದಿದ್ದು ಎಂದು ನಮ್ಮೂರಿನ ಜನ ವರ್ಣಿಸುತ್ತಿದ್ದರು. ಕೆಲವೊಮ್ಮೆ ತಾಯಿಯೊಡನೆ ಕಾಡಿಗೆ ಹೋದ ಕರುಗಳು ಪುನಃ ಹಟ್ಟಿಗೆ ಹಿಂದಿರುಗದಿದ್ದರೆ ಕೆನ್ನಾಯಿ ಹಿಡಿದಿರಬೇಕೆಂದು ಮಾತಾಡಿಕೊಳ್ಳುತ್ತಿದ್ದರು.

ಬಾಯಿ ಮಾತುಗಳಲ್ಲಿ ಮಾತ್ರ ಕೆನ್ನಾಯಿಗಳ ಬಗ್ಗೆ, ಅವುಗಳ ಕ್ರೂರತ್ವದ ಬಗ್ಗೆ ತಿಳಿದುಕೊಂಡಿದ್ದ ನನಗೆ ಅದರ ಬದುಕಿನ ವಿವರಗಳೊನ್ನೊಳಗೊಂಡಿದ್ದ ’ದ್ ಪ್ಯಾಕ್’ ಎಂಬ ಸಾಕ್ಷ್ಯ ಚಿತ್ರವೊಂದು ತಯಾರಾಗುತ್ತಿದೆಯೆಂಬ ಸುದ್ದಿ ಬಹಳ ಹಿಂದೆಯೇ ಪತ್ರಿಕೆಗಳ ಮುಖಾಂತರ ಗೊತ್ತಾಗಿತ್ತು. ನಮ್ಮ ಪರಿಸರ ಪ್ರೇಮಿ ಪೂರ್ಣಚಂದ್ರ ತೇಜಸ್ವಿಯವರಂತೆ ಕಾಡಿನಲ್ಲೇ ವಾಸಿಸುತ್ತಾ, ಕೃಪಾಕರ ಸೇನಾನಿಯರೆಂಬ ಛಾಯಗ್ರಾಹಕರಿಬ್ಬರು ಅದರಲ್ಲೇ ಮುಳುಗಿ ಹೋಗಿದ್ದಾರೆಂದು ತಿಳಿದ್ದಾಗ ಕುತೂಹಲ ಮೂಡಿತ್ತು. ಕಳೆದ ವರ್ಷ ಅದಕ್ಕೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿ ಬಂದಾಗ ಅದನ್ನೊಮ್ಮೆ ನೋಡಬೇಕಲ್ಲಾ ಅನ್ನಿಸಿತ್ತು. ಆದರೆ ಅದಕ್ಕೆ ಅಪರೂಪದ ಪುರಸ್ಕಾರ ದೊರೆತಾಗಲೂ ಮಾಧ್ಯಮಗಳು ವಿಶೇಷ ಪ್ರಚಾರವೆನನ್ನೂ ಕೊಡಲಿಲ್ಲ. ಹಾಗೂ ಮೈಸೂರು ಬಿಟ್ಟರೆ ರಾಜ್ಯ ರಾಜಧಾನಿಯಲ್ಲಿ ಅದರ ಪ್ರದರ್ಶನಕ್ಕೆ ಯಾರೂ ಏರ್ಪಾಟು ಮಾಡಲಿಲ್ಲ. ಆದರೆ ಕಳೆದ ಭಾನುವಾರ ಸಂವಾದ ಡಾಟ್ ಕಾಂ ಗೆಳೆಯರು ಬೆಂಗಳೂರಿನ ಯವನಿಕಾದಲ್ಲಿ ಅದರ ಪ್ರದರ್ಶನದ ಏರ್ಪಾಟು ಮಾಡಿದ್ದರು. ಸ್ವತಃ ಕೃಪಾಕರ- ಸೇನಾನಿ ಜೋಡಿ ಮತ್ತು ಕೆಲವು ತಂತ್ರಜ್ನರು ಈ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರೇಕ್ಷಕರ ಜೊತೆ ಸಂವಾದ ನಡೆಸಿದರು.

’ದಿ ಪ್ಯಾಕ್’ ಸಾಕ್ಷ್ಯ ಚಿತ್ರವನ್ನು ಹೇಗೆ ನೋಡಬೇಕು ಎಂಬುದರ ಬಗ್ಗೆ ಸೇನಾನಿ ಹೇಗೆ ಹೇಳುತ್ತಾರೆ; ’ಈ ಚಿತ್ರವನ್ನು ಒಂದೋ ನೀವು ಮೇಲಿನಿಂದ ನೋಡಬೇಕು ಇಲ್ಲವೇ ಕೆಳಗಿನಿಂದ ನೋಡಬೇಕು’ ನಿಜ, ಈ ಚಿತ್ರವನ್ನು ನೇರವಾಗಿ ನೋಡಲು ಸಾಧ್ಯವಾಗಲಾರದು. ಇದರಲ್ಲಿ ಕೃಪಾಕರ- ಸೇನಾನಿ ಜೋಡಿಯ ಹದಿನೆಂಟು ವರುಷಗಳ ತಪಸ್ಸಿನ ಸಾರವಿದೆ. ಎಂದೋ ಅವರ ಕಣ್ಣೆದುರಿನಲ್ಲಿ ಮಸುಕಾಗಿ ಮಿಂಚಿ ಮರೆಯಾದ ಕಾಡುನಾಯಿಗಳ ಚಿತ್ರಣವೊಂದರ ನೆನಪು ಅವರನ್ನು ಎಡೆಬಿಡದೆ ಕಾಡಿ”ದಿ ಪ್ಯಾಕ್’ ಆಗಿ ರೂಪು ಪಡೆದಿದೆ. ಅವರಿಗದು ಜೀವಂತ ಅನುಭವ. ಅದೇ ಅವರ ಬದುಕು. ನೋಡುವ ನಮಗೆ ಅದೊಂದು ಪಕ್ಷಿನೋಟ. ಕ್ಯಾಮಾರ ಭಾಷೆಯಲ್ಲಿ areal shot ಅಷ್ಟೇ. ದಕ್ಕಿದ್ದಷೇ ಭಾಗ್ಯ.

ಅವರೇ ಹೇಳುವಂತೆ ಸೀಳುನಾಯಿಗಳ ಬಗ್ಗೆ myth ಇದೆ. ಅಂದರೆ ಕಲ್ಪಿತ ಕತೆಗಳಿವೆ. ಅವು ನಿಜವಲ್ಲ, ಆದರೆ ನಿಜದ ಎಳೆಯೊಂದು ಅದರಲ್ಲಿರಬಹುದು. ನಮ್ಮೂರಿನ ಸುತ್ತಮುತ್ತ ಕೆನ್ನಾಯಿ ಅಥವಾ ಸೀಳುನಾಯಿಗಳೆಂದು ಕರೆಯುವ ಈ ಕಾಡುನಾಯಿಗಳನ್ನು ಇಂಗ್ಲೀಷಿನಲ್ಲಿ dhole ಎಂದು ಕರೆಯುತ್ತಾರೆ. ಧೊಳ್ ಎಂಬ ಶಬ್ದದ ವ್ಯುತ್ಪತ್ತಿ ತೋಳ ಆಗಿರಬಹುದೇ? ಯಾಕೆಂದರೆ ಅವುಗಳನ್ನು ತೋಳ ಅಂತಲೂ ನಮ್ಮೂರಿನಲ್ಲಿ ಕರೆಯುತ್ತಾರೆ. ಅಂತರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಕೆನ್ನಾಯಿಗಳನ್ನು ಅವಸಾನದ ಅಂಚಿನಲ್ಲಿರುವ ಪ್ರಾಣಿ ಪ್ರಬೇದ ಎಂದು ಗುರುತಿಸಿದೆ. ಭಾರತದಲ್ಲಿ ಪಶ್ಚಿಮ ಘಟ್ಟ ಪ್ರದೇಶದ ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳಲ್ಲಿ ಇವು ಗುಂಪಾಗಿ ವಾಸಿಸುತ್ತವೆ. ಇವು ಹಿಡಿದ ಬೇಟೆಯನ್ನು-ಅಂದರೆ ಆಹಾರವನ್ನೂ-ಕಿತ್ತುಕೊಳ್ಳಲು ಸದಾ ಹೊಂಚು ಹಾಕುವ ಮನುಷ್ಯನನ್ನು ಇವುಗಳು ಎಂದೂ ನಂಬುದಿಲ್ಲ ಎಂದು ಅವುಗಳ ವರ್ತನೆಯನ್ನು ಹದಿನೆಂಟು ವರ್ಷಗಳಿಂದ ಸೂಕ್ಷವಾಗಿ ಅಧ್ಯಯನ ನಡೆಸಿದ ಈ ಜೋಡಿ ಹೇಳುತ್ತಾರೆ. ಅವರ ಬದುಕಿನ ಬಹು ಭಾಗವನ್ನು ಕಾಡಿನಲ್ಲಿ ಕಳೆದು ತಯಾರಿಸಿದ ’ದಿ ಪ್ಯಾಕ್’ ಗೀನ್ ಅಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಾಗ ಅವರು ಪ್ರಶಸ್ತಿ ಸಿಕ್ಕಷ್ಟೆ ಸಂತೋಷಗೊಂಡರಂತೆ. ಅದಕ್ಕೆ ಕಾರಣವೂ ಇತ್ತು.

೨೦೧೦ರ ತನಕ ಗ್ರೀನ್ ಆಸ್ಕರ್ ಪ್ರಶಸ್ತಿ ಯುರೋಪ್ ಮತ್ತು ಅಮೇರಿಕಾ ದೇಶಗಳ ಕ್ರೀಟವನ್ನು ಅಲಂಕರಿಸುತ್ತಿದ್ದವು. ಆದರೆ ೨೦೧೦ರಲ್ಲಿ ಏಷ್ಯಾ ಖಂಡದಿಂದ ಪ್ರಥಮ ಬಾರಿಗೆ ಸಾಕ್ಷ್ಯ ಚಿತ್ರವೊಂದು ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದ ಮುಕ್ತ ವಿಭಾಗಕ್ಕೆ ಪ್ರವೇಶ ಪಡೆಯಿತು, ಅದುವೇ ಕೃಪಾಕರ ಸೇನಾನಿಯವರ ’ದಿ ಪ್ಯಾಕ್’’ ಚಿತ್ರ. ಅವರು ಸಂತೋಷ ಪಡಲು ಇನ್ನೂ ಒಂದು ಕಾರಣವಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಚಿತ್ರ ನಿರ್ಮಾಪಕರ ಹತ್ತಿರ ಅತ್ಯಾಧುನಿಕ ಕ್ಯಾಮಾರ ಮತ್ತು ನುರಿತ ತಂತ್ರಜ್ನರ ದೊಡ್ಡ ಪಡೆಯೇ ಇರುತ್ತಿತ್ತು. ಆದರೆ ಈ ಜೋಡಿಯ ಬಳಿ ಅದ್ಯಾವುದೂ ಇರಲಿಲ್ಲ. ಆದರೆ ಕಠಿಣ ಪರಿಶ್ರಮ, ತಾಳ್ಮೆ, ಸೂಕ್ಷ್ಮ ಸಂವೇದನೆ ಮತ್ತು ಅವರೇ ಹೇಳಿಕೊಳ್ಳುವಂತೆ ಕಾಡಿನ ಸಜ್ಜನಿಕೆಯ ನಡಳಿಕೆ ಅವರಲ್ಲಿತ್ತು.

ಆ ವರ್ಷ ೪೪೬ ಚಿತ್ರಗಳು ಸ್ಪರ್ಧೆಗೆ ಬಂದಿದ್ದವು.ಆದರಲ್ಲಿ ಅಂತಿಮ ಸುತ್ತಿನಲ್ಲಿ ಉಳಿದುಕೊಂಡದ್ದು ೬೧. ’ದಿ ಪ್ಯಾಕ್’’ ಅರ್ದ ಘಂಟೆಯ ಐದು ಕಂತುಗಳನ್ನು ಒಳಗೊಂಡಿತ್ತು. ಅದರ ಕೊನೆಯ ಕಂತು ಪ್ರಾಣಿವರ್ತನಾ ವಿಬಾಗದ ಗ್ರೀನ್ ಆಸ್ಕರ್ ಪ್ರಶಸ್ತಿಗೆ ಬಾಜನವಾಯಿತು.

ಕೃಪಾಕರ- ಸೇನಾನಿ ವನ್ಯ ಜೀವಿ ಛಾಯಾಗ್ರಹಕರೆಂದು ನಮಗೆ ಗೊತ್ತಿದೆ. ಹೇಗೆಂದರೆ, ಅವರು ತೆಗೆದ ಅಪರೂಪದ ಚಿತ್ರಗಳನ್ನು ಪತ್ರಿಕೆಗಳು ಆಗಾಗ ಪ್ರಕಟಿಸುತ್ತಿರುತ್ತವೆ. ಆದರೆ ಅವರಲ್ಲಿ ಕೃಪಾಕರ ಯಾರು? ಸೇನಾನಿ ಯಾರು ಎಂಬುದರ ಬಗ್ಗೆ ಹಲವರಿಗೆ ಗೊಂದಲಗಳಿವೆ. ಅದು ಮೊನ್ನೆ ನಡೆದ ಸಂವಾದದಲ್ಲೂ ವ್ಯಕ್ತವಾಯಿತು. ಪ್ರೇಕ್ಷಕರು ಅವರ ಕಾರ್ಯ ವೈಖರಿಯ ಬಗ್ಗೆ ಕುತೂಹಲದಿಂದ ಕೇಳಿದ ಪ್ರಶ್ನೆಗಳಿಗೆ ಅವರು ತಾಳ್ಮೆಯಿಂದ ಸರಳ ಕನ್ನಡದಲ್ಲಿಯೇ ಉತ್ತರಿಸುತ್ತಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿಯೇ ಕನ್ನಡದಲ್ಲಿ ಕಿರು ಚಿತ್ರಗಳನ್ನು ನಿರ್ಮಿಸುವ ಯೋಚನೆಯನ್ನು ಹಂಚಿಕೊಂಡರು. ಕನ್ನಡ ಎಂಬ ಪದವನ್ನು ಯಾಕೆ ಒಪಯೋಗಿಸಿದೆ ಎಂದರೆ ಅವರಿಗೆ ಕನ್ನಡದ ಬಗ್ಗೆ ಅಸಡ್ಡೆಯಿದೆ ಎಂಬ ವದಂತಿಗಳಿವೆ. ಕೃಪಾಕರ, ಕನ್ನಡಿಗರ ವೈಚಾರಿಕ ಪ್ರಜ್ನೆಯನ್ನು ವಿಸ್ತರಿಸಿದ ವಡ್ಡರಸೆ ರಘುರಾಮ ಶೆಟ್ಟರ’ಮುಂಗಾರು’ ಪೇಪರಿನಲ್ಲೂ ಸ್ವಲ್ಪ ಕಾಲ ಕೆಲಸ ಮಾಡಿದ್ದವರು. ಸೇನಾನಿ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಓದಿದವರು. ಸೂಕ್ಷ್ಮ ಮತ್ತು ಆರೋಗ್ಯಕರ ಮನಸ್ಸಿನ ಈ ಜೋಡಿ ಕಾಡನ್ನು ಬಿಟ್ಟು ನಮ್ಮ ನಾಡಿಗೂ ಆಗಾಗ ಭೇಟಿ ನೀಡುತ್ತಾ ಕಾಡಿನ ಸಜ್ಜನಿಕೆಯನ್ನು ನಮಗೂ ತಿಳಿಸುತ್ತಿರಲಿ ಎಂಬುದು ನಮ್ಮ ಕೋರಿಕೆ.