Friday, December 18, 2015

ಸಾಹಿತ್ಯ ಸಮ್ಮೇಳನಗಳಿಗಿರುವ ಮಹತ್ವ ಮಕ್ಕಳ ಮೇಳಕ್ಕೆ ಏಕಿಲ್ಲ?.






ನಾವು ೮ ಮಂದಿ. ನಮ್ಮ ಮುಂದೆ ೨೭೦ ಮಕ್ಕಳಿದ್ದರು. ನಾವು ಅವರ ಪ್ರತಿಭೆಯನ್ನು ಒರೆಗೆ ಹಚ್ಚಿ ಇಬ್ಬರನ್ನು ಆಯ್ಕೆ ಮಾಡಬೇಕಾಗಿತ್ತು. ಬಲು ಸವಾಲಿನ ಜೊತೆಗೆ ಎಚ್ಚರಿಕೆಯ ಕೆಲಸವೂ ಆಗಿತ್ತು.
ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ  ಇಂದು ನಡೆಯುತ್ತಿರುವ ರಾಜ್ಯಮಟ್ಟದ ಮಕ್ಕಳ ಸಮ್ಮೇಳನದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನೊಳಗೊಂಡ ಹದಿನಾಲ್ಕು ಪಧಾಧಿಕಾರಿಗಳನ್ನು ಆಯ್ಕೆ ಮಾಡಬೇಕಾದ ಅಂದಿನ ಸಂದರ್ಭವಾಗಿತ್ತು.

ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾದ ಸೌಮ್ಯ ಕೆ. ಮತ್ತು ಗುರು ಎ.ವಿ.
ಎರಡು ವರ್ಷಗಳ ಹಿಂದೆ ಅಮ್ರುತ ಮಹೋತ್ಸವವನ್ನು ಆಚರಿಸಿಕೊಂಡ ಬೆಂಗಳೂರಿನ ಮಕ್ಕಳ ಕೂಟ ಸಂಸ್ಥೆಯು ವಿವಿಧ ಸಂಘಟನೆಗಳ ಸಹಯೋಗದೊಂದಿಗ ಕಳೆದ ಮೂವತ್ತು ವರ್ಷಗಳಿಂದ  ರಾಜ್ಯಮಟ್ಟದ ಮಕ್ಕಳ ಸಮ್ಮೇಳನವನ್ನು ನಡೆಸುತ್ತಾ ಬಂದಿದೆ. ಮಕ್ಕಳಲ್ಲಿ ಅಕ್ಕರೆಯಿರುವ ಬಳಷ್ಟು ಮಂದಿಗೆ ಗೊತ್ತಿದೆ. ಆರ್ ಕಲ್ಯಾಣಮ್ಮ ಎಂಬ ಮಹಾನ್ ಮಹಿಳೆಯೊಬ್ಬರು ೧೯೩೮ರಲ್ಲಿ ಸ್ಥಾಪಿಸಿದ ಸಂಸ್ಥೆಯಿದು. ಬೇಬಿ ಸಿಟ್ಟಿಂಗ್, ಮಹಿಳಾ ಸಂಘ ಸೇರಿದಂತೆ ಅನೇಕ ಆದಿಗಳಿಗೆ ಮುನ್ನುಡಿ ಬರೆದ ಸಂಸ್ಥೆಯಿದು. 
ಪದಾಧಿಕಾರಿಗಳು.

ಮೊಳಕೆಯೊಡೆಯುತ್ತಿರುವ ಸಸಿಯೊಂದಕ್ಕೆ ನೀರು, ಗೊಬ್ಬರ, ಪರಿಸರ ಎಷ್ಟು ಮುಖ್ಯವೆಂಬುದು ನಮಗೆ ಗೊತ್ತಿದೆ. ಹಾಗೆಯೇ ಮಕ್ಕಳು ಕೂಡಾ ಭಿವಿಷ್ಯದ ಚಿಗುರುಗಳೇ.. ವ್ಯಕ್ತಿತ್ವ ರೂಪುಗೊಳ್ಳುವ ಕಾಲಘಟ್ಟವಿದು. ಅವರ ಭಾವ ಮತ್ತು ಬುದ್ಧಿಗಳ ಸಮನ್ವಯಕ್ಕೆ ಬೇಕಾದ ಪೂರಕ ವಾತಾವರಣವನ್ನು ಮನೆಯಲ್ಲಿ ಹೆತ್ತವರು ಶಾಲೆಯಲ್ಲಿ ಶಿಕ್ಷಕರು ಹಾಗೂ ಸಮಾಜದಲ್ಲಿ ಮಾದರಿವ್ಯಕ್ತಿಗಳೆನಿಸಿಕೊಂಡವರು ತಮ್ಮ ನಡವಳಿಕೆಗಳಿಂದ ಕಟ್ಟಿಕೊಡಬೇಕು.
ತೀರ್ಪುಗಾರರೊಂದಿಗೆ ಆಯ್ಕೆಯಾದ ವಿದ್ಯಾರ್ಥಿಗಳು. [ಖಾಲಿ ಕುರ್ಚಿ ನನ್ನದು!]
ಈ ಲೇಖನವನ್ನು ಬರೆಯುತ್ತಿರುವ ಹೊತ್ತಿನಲ್ಲಿ ಯಾವ ಶಿಕ್ಷಣ ತಜ್ನರ ಮಾತಾಗಲಿ ಇಲ್ಲವೇ ತತ್ವಜ್ನಾನಿಯ ತರ್ಕವಾಗಲಿ ನನಗೆ ನೆನಪಾಗುತ್ತಿಲ್ಲ. ಬದಲಾಗಿ ಎರಡು ವರ್ಷದ ಹಿಂದೆ ನನ್ನ ಮಗಳು ತನ್ನ ಡಿಗ್ರಿ ಮುಗಿಸಿ ಬಂದು ತಾನು ಒಂದು ವರ್ಷದ ಮಟ್ಟಿಗೆ ಎನ್ ಜಿ ಓ ಒಂದರಲ್ಲಿ ಶಿಕ್ಷಕಿಯಾಗಿ ಕಲ್ಕತ್ತದ ಕೊಳೆಗೇರಿಯೊಂದರಲ್ಲಿ ಕೆಲಸ ಮಾಡುತ್ತೇನೆ, ಪುಟ್ಟ ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ. ಮತ್ತೆ ಮುಂದಿನ ವರ್ಷ ಓದು ಮುಂದುವರಿಸುತ್ತೇನೆ ಎಂದಾಗ ನಾನು ಅದರ ಬಗ್ಗೆ ವಿವರ ಕೇಳಿದೆ. ಆಗ ಅವಳು ಹೇಳಿದ್ದು ’ಅಮ್ಮಾ ಈ ಜಗತ್ತಿನಲ್ಲಿ ಎರಡು ವಿಷಯಗಳಲ್ಲಿ ಮಾತ್ರ ಹೋಪ್ ಅನ್ನೋದು ಇದೆ. ಒಂದು ಪುಟ್ಟ ಮಕ್ಕಳ ಮನಸ್ಸಿನಲ್ಲಿ ಅಂದರೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಒಳ್ಳೆಯ ಮೌಲ್ಯಗಳನ್ನು ಬಿತ್ತೋದು. ಇನ್ನೊಂದು ಭೂಮಿಯಲ್ಲಿ ಬೀಜವೊಂದನ್ನು ಹುಗಿದು, ಅದು ಮೊಳಕೆಯಾಗಿ ಸಸಿಯಾಗಿ ಚಿಗುರೊಡೆಯುವ ಪ್ರಕ್ರಿಯಲ್ಲಿ- ಇವೆರಡರಲ್ಲಿ ಮಾತ್ರ ನಾವು ಭರವಸೆಯಿಡಬಹುದು’ ಎಂದಳು ಅವಳು ಚಿಕ್ಕವಳೇ ಇರಬಹುದು. ಆದರೆ ಅವಳು ನನಗೆ ಕೊಟ್ಟ ಒಳನೋಟ ಚಿಕ್ಕದಾಗಿರಲಿಲ್ಲ.

ಕಳೆದ ಬಾರಿಯ ಅಧ್ಯಕ್ಷರಿಂದ ಅಧಿಕಾರ ಹಸ್ತಾಂತರ.
ಇಂತಹ ಭವಿಷ್ಯದ ಭರವಸೆಯ ಕುಡಿಗಳು ನಮ್ಮ ಮುಂದಿದ್ದರು. ಅವರೆಲ್ಲಾ  ಬೇರೆ ಬೇರೆ ಶಾಲೆಗಳಿಂದ ಬಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಾಗಿದ್ದರು. ನಾವು ಎರಡೆರಡು ಮಂದಿಯ ನಾಲ್ಕು ತಂಡವಾಗಿ ವಿಭಜಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯ ಪತಿಸ್ಪಂದನಕ್ಕನುಗುಣವಾಗಿ ಒಂದರಿಂದ ಐದು ನಿಮಿಷಗಳ ಕಾಲ ಸಂದರ್ಶನ ನಡೆಸುತ್ತಾ ಹೋದೆವು. ಹಾಗೆ ಮಾತಾಡಿಸಿದಾಗಲೆಲ್ಲ ಆ ಗ್ರಾಮೀಣ ಭಾಗದ ಜನರ ಬದುಕು,ಹೆತ್ತವರ ಆರ್ಥಿಕ ಮಟ್ಟ, ಆ ಮಕ್ಕಳ ಕನಸು, ಅವರ ಮುಗ್ಧತೆ ಎಲ್ಲವೂ ಅನಾವರಣಗೊಳ್ಳುತ್ತಾ ಹೋದವು. ಹೆಚ್ಚಿನ ಮಕ್ಕಳು ಸರಕಾರಿ ಶಾಲೆಯ ಮಕ್ಕಳಾದ ಕಾರಣ ಇವರು ಪೋಷಕರು ರೈತರು, ಅಟೊ ಓದಿಸುವವರು, ಗಾರೆ ಕೆಲಸಗಾರರು ಮತ್ತು ಕೂಲಿ ಕಾರ್ಮಿಕರ ಮಕ್ಕಳಾಗಿದ್ದರು. ಕೆಲವು ಮಕ್ಕಳಲ್ಲಿ ಮುಂದೇನು ಆಗಬೇಕೆಂದಿದ್ದಿಯಾ ಎಂದು ಕೇಳಿದಾಗ ಅವರಲ್ಲಿ ಹೆಚ್ಚಿನವರು ಹೇಳಿದ್ದು. ತಾನು ಸೈನಿಕನಾಗುತ್ತೇನೆ, ಐಎ ಎಸ್ ಆಪೀಸರ್ ಆಗುತ್ತೇನೆ. ಟೀಚರ್ ಆಗುತ್ತೇನೆ, ರೈತನಾಗುತ್ತೇನೆ ಎಂದು.  ಒಬ್ಬ ಮಾತ್ರ ತಾನು ಸಿನೇಮಾ ನಟನಾಗುತ್ತೇನೆ ಎಂದನು. ಆದರೆ ಒಬ್ಬನೇ ಒಬ್ಬ ಕೂಡಾ ತಾನು ಎಂಜಿನಿಯರ್ ಅಥವಾ ಡಾಕ್ಟರ್ ಆಗುತ್ತೇನೆ ಎಂದು ಹೇಳಲಿಲ್ಲ. ಬೆಂಗಳೂರಿನಲ್ಲಿರುವ ಮಕ್ಕಳೆಲ್ಲ ಡಾಕ್ಟರ್ ಇಂಜಿಯನರ್ ಬಿಟ್ಟರೆ ಇನ್ನೊಂದಾಗುವ ಕನಸನ್ನೇ ಕಾಣದ ಈ ಬರಗಾಲದಲ್ಲಿ ಈ ಮಕ್ಕಳು ಭವಿಷ್ಯ ಕಟ್ಟುವ ಸಮಾಜದ ಆಧಾರ ಸ್ತಂಬಗಳಾಗಿ ಕಂಡು ಬಂದರು.
ಸಮ್ಮೇಳನದ ಸಂಪೂರ್ಣ ನಿರ್ವಹಣೆ ಮಕ್ಕಳದೇ.
ಅಲ್ಲಿ ನಮ್ಮಡೆಗೆ ಬಂದ ೨೭೦ ಮಕ್ಕಳನ್ನು ಮೂರು ಹಂತದಲ್ಲಿ ಜರಡಿ ಹಿಡಿದು ಹನ್ನೆರಡು ಮಂದಿಯನ್ನು  ಆಯ್ಕೆ ಮಾಡಿದೆವು. ಮೂರು ದಿನಗಳ ಸಮ್ಮೇಳನವನ್ನು ಇವರೇ ಮುನ್ನಡೆಸಬೇಕಾಗಿರುವುದರಿಂದ ಅವರಲ್ಲೇ ನಾಯಕತ್ವಗುಣಗಳಿರುವ, ಯಾವುದೇ ವಿಷಯದ ಮೇಲೆಯೂ ಅಧಿಕಾರಯುತವಾಗಿ ಮಾತಡಬಲ್ಲ ಬುದ್ಧಿವಂತರಾದ ಇಬ್ಬರನ್ನು ಅಧ್ಯಕ್ಷ ಉಪಾಧ್ಯಕ್ಷರಾಗಿ ಆರಿಸಿದೆವು. ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಶ್ರೀಕ್ಷೇತ್ರದ ಭೈರವೇಶ್ವರ ಶಾಲೆಯ ೯ನೇ ತರಗತಿಯ ಸೌಮ್ಯಕೆ  ಅಧ್ಯಕ್ಷೆಯಾಗಿ ಆಯ್ಕೆಯಾದಳು. ಈಕೆಯ ತಾಯಿ ಎನ್ ವರಲಕ್ಷ್ಮಿ ಹಿಂದಿ ಶಿಕ್ಷಕಿ ತಂದೆ ಕ್.ಎನ್ ಕ್ರುಷ್ಣಮೂರ್ತಿ. ಕೈವಾರದ ಅಂಬೇಡ್ಕರ್ ಶಾಲೆಯ ಗುರು ಎ.ವಿ ಉಪಾಧ್ಯಕ್ಷನಾಗಿಯೂ ಆಯ್ಕೆಯಾದರು. ಈತ ಬುರ್ರಾಕಥಾ ವಿದ್ವಾನ್ ಎಲ್ ,ವೆಂಕಟೇಶ್. ತಾಯಿ ರಾಮಲಕ್ಷ್ಮಮ್ಮ. ಇವರ ಜೊತೆಗೆ ೧೨ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಇಡೀ ಮೂರು ದಿನಗಳ ಸಮ್ಮೇಳನವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಈ ತಂಡದ ಮೇಲಿದೆ.
ಕರ್ನಾಟಕ ಬಾಲ ವಿಕಾಸ ಅಕಾಡಮಿ, ಕೆನರಾಬ್ಯಾಂಕ್ ಮತ್ತು ಕೈವಾರ ಆಧಿನಾರಾಯಣ ಟ್ರಸ್ಟ್ ಸಹಯೋಗದೊಂದಿಗೆ ಮಕ್ಕಳಕೂಟವು ಆಯೋಜಿಸಿರುವ ಈ ಮಕ್ಕಳ ಮೇಳದಲ್ಲಿ ವಿಚಾರ ಸಂಕಿರಣ,ಕವಿಗೋಷ್ಟಿ, ಚರ್ಚಾಗೋಷ್ಠಿ ಮತ್ತು ಸಾಂಸ್ಕ್ರುತಿಕ ಕಾರ್ಯಕ್ರಮಗಳು ಜರಗುತ್ತವೆ.
ಮೊನ್ನೆ ತಾನೇ ಅದ್ದೂರಿಯಾಗಿ ಮೂಡಬಿದಿರೆಯಲ್ಲಿ ನುಡಿ ಸಿರಿ ನಡೆಯಿತು. ಇದೇ ೧೯, ೨೦ರಂದು ಮಂಗಳೂರಿನಲ್ಲಿ ’ಜನನುಡಿ’ ನಡೆಯುತ್ತದೆ. ಮುಂಬರುವ ಜನವರಿ ೧೫,೧೬ರಂದು ಆಧಿಚುಂಚನಗಿರಿಯಲ್ಲಿ ೪ನೇಯ ರಾಜ್ಯಮಟ್ಟದ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ.  ಹಾಗೆಯೇ ಕಳೆದ ಜೂನ್ ೧೪,೧೫ರಂದು ವಿಜಯಪುರದಲ್ಲಿ  ರಾಜ್ಯಮಟ್ಟದ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆದಿತ್ತು.
ನೆರೆದ ಜನಸ್ತೋಮ.

ಮನಸುಗಳನ್ನು ರೂಪಿಸುವ ಮಕ್ಕಳ ಸಮ್ಮೇಳನಗಳಿಗೆ ಸಾಹಿತ್ಯ ಸಮ್ಮೇಳನಗಳಿಗೆ ನೀಡುವಷ್ಟೇ ಮಹತ್ವ ಮತ್ತು ಪ್ರಚಾರ ನೀಡಿದ್ದಲ್ಲಿ ಭವಿಷ್ಯದ ಸ್ವಸ್ಥ, ಆರೋಗ್ಯವಂತ ಸಮಾಜಕ್ಕೆ ನಾವು ಇಂದೇ ಅಡಿಗಲ್ಲನ್ನು ಹಾಕಿದಂತಾಗುತ್ತದೆ. ಅದು ನಮ್ಮೆಲ್ಲರ ಕರ್ತವ್ಯವೂ ಹೌದು.



[ವಿಜಯಕರ್ನಾಟಕದ ಅಲ್ಲಿಯ ಎಡಿಷನ್ ನಲ್ಲಿ ಪ್ರಕಟವಾದ ಲೇಖನ]


   

Sunday, December 13, 2015

ಆತ್ಮಕ್ಕಂಟಿದ ದೂಳು.






ಅನುಮಾನಿಸಿದೆ; ಅವಮಾನಿಸಿದೆ.
ಪ್ರೀತಿಯೋ ಪ್ರೇಮವೋ ವಾಂಛೆಯೋ
ಗೊತ್ತಿಲ್ಲದ ಏನೋ ಒಂದು.
ಆವರಿಸಿ ಅಪ್ಪಳಿಸಿದ ರಬಸಕ್ಕೆ
ಆಕಾರವಿಲ್ಲದೆ ನರಳಿದ್ದೇನೆ.

ಆಕಾಶಕ್ಕೆ
ಸಹಸ್ರ ಸಹಸ್ರ ಬಾಹುಗಳ ಚಾಚಿ ಬೋರಿಟ್ಟು
ಅಳುತ್ತಿರುವಾಗ
ಮೋಟು ಬೀಡಿಗೆ ಬೆಂಕಿ ಹಚ್ಚಿ ಸುಖಿಸುತ್ತಿದ್ದೆ.
ನೀನು, ನನ್ನ ಆತ್ಮಕ್ಕಂತಿದ ದೂಳು.

ಪಾತಾಳಗಂಗೆಯಲ್ಲಿ ಈಜುತ್ತಿರುವವನಿಗೆ ಸುರಗಂಗೆಯ ಕನವರಿಕೆ.
ವೈತರಣಿಯಲ್ಲೂ ಜೀವ ಮೊಳಕೆಯೊಡೆದೀತೆ?
ಇದು ಕಾಲವಲ್ಲ; ಮಿಲನದ ಭೂಮಿಕೆಯಲ್ಲ.

ಆಳವಿದ್ದಲ್ಲೇ ತೆರೆಗಳೇಳುವುದು;
ನಾನೊಂದು ಶರಧಿ.
ಆಗಸದೆದೆಯಲ್ಲಿ ಬಚ್ಚಿಟ್ಟುಕೊಳ್ಳಬಲ್ಲೆ..
ನೀನು ಆಗಸವಾಗು.
ಅಣು ಅಣುವನ್ನೂ ಹೀರಿ ಜೀವಕೋಶವನ್ನೆಲ್ಲಾ ಬರಿದು ಮಾಡು.
ಆವರ್ತನದ ಕಂಪನಕ್ಕೆ
ಇಳೆ ಬಸಿರಾಗುತ್ತದೆ.
ಆತ್ಮ ಶುಭ್ರವಾಗುತ್ತದೆ.