Thursday, September 12, 2013

’ಸನ್ನಿಧಿ’ಯಲ್ಲಿ ಧ್ಯಾನವೆಂಬ ಮನಸಿನ ಸ್ನಾನ



ನಾನು ವಾಸಿಸುವುದು ಬೆಂಗಳೂರೆಂಬ ಮಹಾನಗರದಲ್ಲಿ. ಕಾಲುಗಳಿಗೆ ಚಕ್ರ ಕಟ್ಟಿಕೊಂಡಂತೆ ಸದಾ ಓಡಾಟದಲ್ಲಿರೋಳು. ತಲೆಯ ಮೇಲೆ ಹೊತ್ತಿರುವ ಮಣ ಬಾರದ ಹೊರೆ. ಮುಖದ ಮೇಲೆ ನಗುವಿನ ಮುಖವಾಡ..ದಿನದ ಇಪ್ಪತ್ತನಾಲ್ಕು ಘಂಟೆಯೂ ತನಗೆ ಸಾಲದೇನೋ ಎಂಬ ಆತಂಕ...

ಇಲ್ಲಿಂದ ಎಲ್ಲಾದರೂ ಓಡಿ ಹೋಗಬೇಕೆಂಬ ತವಕ..ಯಾರಿಗೂ ಕಾಣದ ಜಾಗ...ಅಲ್ಲಿ ಮನುಷ್ಯರಿರಬಾರದು..ಇದ್ದರೂ ಅವರ ಗಮನ ನನ್ನೆಡೆಗೆ ಹರಿಯಬಾರದು... ಇದೆಲ್ಲಾ ಬಹಳ ಕಾಲದಿಂದ ನನ್ನ ಮಮಸ್ಸಿನಲ್ಲಿ ಮಿಡುಕಾಡುತ್ತಿದ್ದ ಭಾವಗಳು.  ಮನೆ ಮತ್ತು ಮನೆಯಿಂದಾಚೆ ದುಡಿದು ಹೈರಾಣಾಗಿರುವ ಎಲ್ಲರಲ್ಲೂ ಆಗೊಮ್ಮೆ- ಈಗೊಮ್ಮೆ ಮಿಂಚಿ ಮಾಯವಾಗುವ ಸಂಚಾರಿ ಭಾವಗಳಿವು.

ಹೀಗಿರುವಾಗಲೇ ಕಳೆದ ವಾರ ನನ್ನ ಗೆಳೆಯನೊಡನೆ ಜಗಳವಾಯ್ತು.  ನನ್ನ ಸಣ್ಣ-ಪುಟ್ಟ ತಲ್ಲಣಗಳನ್ನೂ ಅವನೊಡನೆ  ಹಂಚಿಕೊಳ್ಳುತ್ತಿದ್ದೆ. ಈಗ ಮಾತಿಗೆ ಮಾತು ಬೆಳೆದು ’ನೀನು ಎಲ್ಲಾದರೂ ಹಾಳಾಗಿ ಹೋಗು’ ಅಂದುಬಿಟ್ಟು ಪೋನ್ ಡಿಸ್ ಕನೆಕ್ಟ್ ಮಾಡಿಬಿಟ್ಟ.. ನನಗಿದ್ದ ಏಕೈಕ ಗೆಳೆಯನವನು. ಆದರೆ ಅವನಿಗೆ ನನ್ನಂತಹ ಹಲವಾರು ಗೆಳೆಯ-ಗೆಳತಿಯರಿದ್ದರು. ನಾನಿಲ್ಲದಿದ್ದರೂ ಅವನ ಬದುಕಿನಲ್ಲಿ ಯಾವ ಬದಲಾವಣೆಯೂ ಆಗದು. ಆದರೆ ನನಗೆ?
ಪೋನ್ ಇಟ್ಟ ಮೇಲೆ ನನ್ನಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡವು;
 ಆತ ನಿಜವಾಗಿಯೂ ನನ್ನ ಗೆಳೆಯನಾಗಿದ್ದರೆ, ನನ್ನನ್ನು ಪ್ರೀತಿಸಿದ್ದರೆ  ಹಾಗೆ ಹೇಳಲು ಸಾಧ್ಯವಿತ್ತೆ? ಆತನ ಮನದಲ್ಲಿ ನನ್ನ ಬಗ್ಗೆ ಅಷ್ಟೊಂದು ಅಸಹನೆ ಹೇಗೆ ತುಂಬಿತು? ಅಷ್ಟು ಒಳ್ಳೆಯ ವ್ಯಕ್ತಿ ಹಾಗೆ ರೂಕ್ಷವಾಗಿ ಪ್ರತಿಕ್ರಿಯಿಸಿದ್ದು ಯಾಕೆ? ಅಷ್ಟು ಕೆಟ್ಟದಾಗಿ ನಾನು ಅವನೊಡನೆ ವ್ಯವಹರಿಸಿದೆನೇ? ಒಂದು ವೇಳೆ ನಾನು ಹಾಗೆ ನಡೆದುಕೊಂಡಿದ್ದರೆ ಅದರ ಹಿಂದಿನ ಭಾವ ಗೆಳೆಯನಾದ ಅವನಿಗೆ ಗೊತ್ತಾಗಬೇಕಿತ್ತಲ್ಲವೇ?. ದುಃಖ ಒತ್ತರಿಸಿಬಂತು.  ಆಗ ನನಗೆ ನೆನಪಾಗಿದ್ದೇ ನಾನು ವರ್ಷಗಳಿಂದ ಭಾಗವಹಿಸಿಬೇಕೆಂದುಕೊಂಡಿದ್ದ ಓಶೋ ಮೆಡಿಟೇಷನ್ ಕ್ಯಾಂಪ್..

ಓಶೋ ಅಂದ ತಕ್ಷಣ ಕೆಲವರ ಹುಬ್ಬು ಮೇಲೇರಬಹುದು. ಅದಕ್ಕೆ ಅವರು ಕೊಡುವ ಕಾರಣ ಓಶೋ ಪ್ರತಿಪಾದಿಸುತ್ತಿದ್ದ ಮುಕ್ತ ಲೈಂಗಿಕತೆಯ ವಿಚಾರಗಳು.ಓಶೋ  ಪುಸ್ತಕಗಳನ್ನು ನಾನು ಹುಚ್ಚಳಂತೆ ಓದಿದ್ದೇನೆ. ಅವರ ’ಸ್ತ್ರೀ ಮುಕ್ತಿ’ ಪುಸ್ತಕವನ್ನು ಹಲವಾರು ಗೆಳತಿಯರಿಗೆ ಉಡುಗೋರೆಯಾಗಿ ನೀಡಿದ್ದೇನೆ. ಸದಾ ವರ್ತಮಾನದಲ್ಲಿ, ಈ ಕ್ಷಣದಲ್ಲಿ ಬದುಕುತ್ತಿದ್ದ ಓಶೋ ಭವಿಷ್ಯದ ಜಗತ್ತಿನ ಬಗ್ಗೆ ಗಂಭೀರವಾಗಿ ಚಿಂತಿಸಿದ ದಾರ್ಶನಿಕ.

ತಡಮಾಡಲಿಲ್ಲ ನಾನು, ಓಶೋ ಧ್ಯಾನಕೇಂದ್ರವನ್ನು ಸಂಪರ್ಕಿಸಿದೆ. ಇನ್ನೆರಡೇ ದಿನಕ್ಕೆ ಈ ತಿಂಗಳ ಕ್ಯಾಂಪ್ ಆರಂಭವಾಗಲಿದೆ ಎಂಬುದು ಅದರ ಆಯೋಜಕರಿಂದ ತಿಳಿಯಿತು. .ಪ್ರತಿಯೊಂದು ಘಟನೆಗೂ ಕಾರ್ಯಕಾರಣ ಸಂಬಂಧವಿರುತ್ತದೆ ಎಂದು ನಂಬಿರುವಳು ನಾನು. ನನ್ನೊಳಗಿನ ಮಹಾಸಾಗರವನ್ನೊಮ್ಮೆ ಕಡೆಯಬೇಕಾಗಿತ್ತು. ನಾನು ’ಸನ್ನಿಧಿ’ ಗೆ ಬಂದುಬಿಟ್ಟೆ.

ಸನ್ನಿಧಿಯಿರುವುದು ಮೈಸೂರಿನಿಂದ ೧೦ ಕಿ.ಮೀ ದೂರದಲ್ಲಿರುವ ಉತ್ತನಹಳ್ಳಿಯಲ್ಲಿ, ಸುತ್ತಮುತ್ತ ಹಚ್ಚ ಹಸಿರನ ಭತ್ತದ ಗದ್ದೆಗಳು.. ಅದರ ಗೇಟ್ ನಲ್ಲಿ ನಿಂತು ಎಡಕ್ಕೆ ನೋಡಿದರೆ ತಾಯಿ ಚಾಮುಂಡೇಶ್ವರಿ ನೆಲೆನಿಂತಿರುವ ಚಾಮುಂಡಿ ಬೆಟ್ಟದ  ವಿಹಂಗಮ ನೋಟ .

. ಓಶೋ ವಿಚಾರಧಾರೆಯಿಂದ ಪ್ರಭಾವಿತರಾದ  ಅಡ್ವೋಕೇಟ್ ವೇಣುಗೋಪಾಲ್ ಎಂಬ ತರುಣ ಭಾರತದಾದ್ಯಂತ ಜರಗುತ್ತಿದ್ದ ಓಶೋ ಕ್ಯಾಂಪ್ ಗಳಲ್ಲಿ ಭಾಗಿಯಾಗುತ್ತಿದ್ದರು. ಕೊನೆಗೆ ಈ ಅಲೆದಾಟ ಸಾಕು ಎಂದು  ತಮ್ಮ  ತೋಟದಲ್ಲಿ ’ಮೌನ’ ಎಂಬ ಪುಟ್ಟ ಗುಡಿಸಲೊಂದನ್ನು ಕಟ್ಟಿಕೊಂಡು ತಮ್ಮ ಬೆರಳೆಣಿಕೆಯ ಸ್ನೇಹಿತರೊಡನೆ ಧ್ಯಾನ ಮಾಡಲಾರಂಭಿಸಿದರು. ಅನಂತರದಲ್ಲಿ ಸ್ನೇಹಿತರ, ಅಸಕ್ತರ ಸಂಖ್ಯೆ ಜಾಸ್ತಿಯಾಗುತ್ತಾ ಈಗ ತಿಂಗಳೊಂದರಲ್ಲಿ ನೂರು ಜನ ಭಾಗವಹಿಸುವಂತಹ ಮೂರು ದಿನಗಳ ರೆಸಿಡೆನ್ಷಿಯಲ್ ಧ್ಯಾನ ಶಿಭಿರವಾಗಿ ಬೆಳೆದಿದೆ. ಅದರ ಹೆಸರೇ ’ಸನ್ನಿಧಿ’

  ”ಸನ್ನಿಧಿ’ ಇದೊಂದು ಧ್ಯಾನ ಪರಿಸರ. ಬಾಳೆ, ತೆಂಗು, ಹಣ್ಣಿನ ತೋಟದ ಮಧ್ಯೆ ನಿರ್ಮಿಸಲಾಗಿರುವ ಪುಟ್ಟ ಪುಟ್ಟ ಸರಳ ಕಾಟೇಜುಗಳು. ಇಲ್ಲಿ ಉಳಿದುಕೊಳ್ಳುವ ಶಿಭಿರಾರ್ಥಿಗಳು ಕಡ್ಡಾಯವಾಗಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಲೇಕು. ಹಾಗಾಗಿ ತೋಟದಲ್ಲಿ ಮಧ್ಯೆ ಇರುವ ವಿಶಾಲ ಕೆರೆಯಿಂದ ಶೌಚಾದಿ ಕೆಲಸಗಳಿಗೆ ಸಮ್ರುದ್ಧವಾದ ನೀರಿನ ಪೂರೈಕೆಯಿದೆ.
ಮೊದಲೇ ಹೇಳಿಬಿಡುತ್ತೇನೆ ನನಗೆ ಗುಂಪೆಂದರೆ ಅಲರ್ಜಿ. ಆ ಜಾಗ ನನಗೆ ಎಷ್ಟು ಹಿಡಿಸಿತು ಎಂದರೆ ಅಷ್ಟು ಜನರಿದ್ದರೂ ನಾನಲ್ಲಿ ಏಕಾಂತವನ್ನು ಅನುಭವಿಸಿದೆ. ಮೌನದ ಮಹತ್ವವನ್ನು ಅರಿಯುವ ಪ್ರಯತ್ನ ಮಾಡಿದೆ...

ನಾವು ಆಧುನಿಕ ಮನುಷ್ಯರು ಸದಾ ಒತ್ತಡದಲ್ಲೇ ಬದುಕುತ್ತೇವೆ..ಪ್ರತಿ ಕ್ಷಣವೂ ನಾವು ಸ್ಪರ್ಧೆಗೆ ಬಿದ್ದು ಓಡುತ್ತಿರುತ್ತೇವೆ.ಸಂಬಂಧಗಳ ಗೋಜಲುಗಳು, ಅರ್ಥಿಕ ಸೋಲುಳು, ಪ್ರತಿಷ್ಠೆಯ ಮೇಲಾಟಗಳು, ದುಃಖ, ನೋವು, ನಿರಾಶೆ,ಪ್ರೇಮ ವೈಫಲ್ಯದಂತಹ ಹತ್ತಿಕ್ಕಿದ ಭಾವನೆಗಳು. ಇವೆಲ್ಲವುಗಳಿಂದ ಮನಸ್ಸು ಸುಟ್ಟ ಬದನೆಕಾಯಿಯಂತಾಗಿದ್ದರೆ ಮಿದುಳು ಕುದಿಯುವ ಹಂಡೆಯಾಗಿರುತ್ತದೆ. ಹೀಗಿರುವಾಗಲೇ ಮನೋ ಸಂಬಂಧಿ [ಸೈಕೋ ಸೊಮೋಟಿಕ್] ಕಾಯಿಲೆಗಳು ದೇಹವನ್ನು ಆಕ್ರಮಿಸಿಕೊಂಡು ಜೀವನ ಸಾಕಪ್ಪಾ ಎನಿಸಿಬಿಡುತ್ತದೆ.ಮನಸ್ಸಿನಾಳದಲ್ಲಿರುವ ಇಂತಹ ಜ್ವಾಲಾಮುಖಿಯನ್ನು ಒಮ್ಮೆ ಸ್ಪೋಟಿಸಿ ಮನಸ್ಸನ್ನು ಸಹಜ ಆನಂದಮಯ ಸ್ಥಿತಿಗೆ ತರುವ ಪ್ರಯತ್ನವನ್ನು ಸನ್ನಿಧಿಯ ಧ್ಯಾನ ಕ್ಯಾಂಪ್ ಮಾಡುತ್ತದೆ. ಅಲ್ಲಿ ಕೆಲವರ ಭಾವ ಸ್ಪೋಟ ಹೇಗಿತ್ತೆಂದರೆ ನನಗೆ ಗುಲ್ಭರ್ಗಾ ಜಿಲ್ಲೆಯ ಗಾಣಗಾಪುರದ ದೃಶ್ಯಗಳು ಕಣ್ಣ ಮುಂದೆ ಹಾದು ಹೋದವು. ಇದರ ಜೊತೆಗೆ ನನಗೆ ಅಚ್ಚರಿ ತಂದಿದ್ದು ಶಿಭಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದವರು ಯುವಕರು ಮತ್ತು ಯುವತಿಯರು. ಅದರಲ್ಲಿಯೂ ಐಟಿ ಜಗತ್ತಿಗೆ ಸೇರಿದವರು. ಅವರಲ್ಲಿ ಮೇಲ್ನೋಟಕ್ಕೆ ಎಲ್ಲವೂ ಇದೆ. ಯಾವುದನ್ನು ತುಂಬಿಕೊಳ್ಳುವುದಕ್ಕಾಗಿ ಅವರಿಲ್ಲಿಗೆ ಬಂದಿರಬಹುದು?

ಇಲ್ಲಿ ನಾನು ಯಾವುದರ ಪರಿವೇ ಇಲ್ಲದಂತೆ ಪರ್ವತಗಳು ಪ್ರತಿಧ್ವನಿಸುವಂತೆ ಕಿರುಚಿದೆ. ಒಳಗಿನ ಒತ್ತಡ ಸ್ಪೋಟಗೊಳ್ಳುವಂತೆ ನಕ್ಕೆ. ಸಾಗರ ಉಕ್ಕುವಂತೆ ಅತ್ತೆ. ಮೈಬೆವರು ಹರಿದು ಇಳೆ ತೋಯುವಂತೆ ಡ್ಯಾನ್ಸ್ ಮಾಡಿದೆ. ಇದೆಲ್ಲಾ ಹೊರಜಗತ್ತಿಗೆ ಕಾಣ ಬಹುದಾದ ನೋಟಗಳಾಯ್ತು.  ನನ್ನ ಅಂತರ್ ಮನಸ್ಸಿನಲ್ಲಿ ಏನಾಯ್ತು? ಅದನ್ನು ಹೇಳಬೇಕೆಂದರೆ ಇಲ್ಲಿ ನಮಗೆ ಹೇಳಿಕೊಟ್ಟ ಕೆಲವು ಧ್ಯಾನದ ಟೆಕ್ನಿಕ್ ಗಳನ್ನು ಹೇಳಬೇಕಾಗುತ್ತದೆ. ಆದರೆ ನಿಮಗೆ ಗೊತ್ತಿದೆ ಧ್ಯಾನವನ್ನು ಮಾತುಗಳಲ್ಲಿ ಹೇಳಲು ಬಾರದು ಅದನ್ನು ಅನುಭವಿಸಬೇಕು. ದೇಹ, ಮನಸ್ಸು,ಭಾವಗಳು ಒಂದಾಗುವ ದಿವ್ಯ ಕ್ಷಣಗಳವು.

ಇಲ್ಲಿ ಪ್ರಾತ್ಯಕ್ಷಿಕೆ ನೀಡಿದ  ನಾದ ಬ್ರಹ್ಮ [ಪತಂಜಲಿಯ ಯೋಗಸೂತ್ರವನ್ನು ಸಂಗೀತದ ಹಿನ್ನೆಲೆಗೆ ಅಳವಡಿದ ಟೆಕ್ನಿಕ್]
 ಕುಂಡಲಿನಿ [ಸೆಕ್ಸ್ ಎನರ್ಜಿಯನ್ನು ಉರ್ಧ್ವಮುಖಿಯಾಗಿ ಚಕ್ರ, ನಾಡಿಗಳಲ್ಲಿ ಹರಿಸಿ ಸಹಸ್ರಾರವನ್ನು ತಲುಪಿಸಿ ಆನಂದಮಯ ಸ್ಥಿತಿಯನ್ನು ತಲುಪುವುದು]  
ಸರ್ವಸಾರ [ದೈನಂದಿನ ಉಲ್ಲಾಸದ ಬದುಕಿಗೆ ಸುಲಭವಾಗಿ ಮಾಡಬಲ್ಲ ಬಸ್ತ್ರೀಕಾ, ಕಪಾಲಬಾತಿ, ತ್ರಿಬಂಧ, ಉಜೈ, ಅನುಲೋಮ-ವಿಲೋಮಾ ಅಥವಾ ನಾಡಿಶುದ್ಧಿ, ಭ್ರಮರಿ, ಓಂಕಾರ, ಶವಾಸನವನ್ನು ತಿಳಿಸುವ ಒಂದು ಘಂಟೆಯ ಮೆಡಿಟೇಷನ್]
 ಡೈನಾಮಿಕ್  ಮೆಡಿಟೇಷನ್ [ ಇದು ಭಾವಸ್ಪೋಟ, ಭಾವ ವಿರೇಚನ ಮತ್ತು ಸೆಲೆಬ್ರೇಷನ್]

ಆರೋಗ್ಯವಂತ ಸಮಾಜ ಸೃಷ್ಟಿಗೆ ಅತೀ ಅಗತ್ಯವಾಗಿ ಬೇಕಾದ, ಪ್ರತಿ ಮನುಷ್ಯನಲ್ಲಿರುವ ಮಾತೃತ್ವದ ಭಾವವನ್ನು ಉದ್ದೀಪಿಸುವ ಕಾರ್ಯವನ್ನು ಸನ್ನಿಧಿಯ ಶಿಭಿರ ಮಾಡುತ್ತದೆ. ಅದು ಇಂದಿನ ಅಗತ್ಯ ಕೂಡಾ ಹೌದು. 

ಈ ಎಲ್ಲಾ ಟೆಕ್ನಿಕ್ ಗಳ ಜೊತೆ ಬುದ್ದ ನಡಿಗೆ,ಝೆನ್ ಸ್ಟಿಕ್, ಸೂಫಿ ಸಂತನ ಜಿಬ್ರೀಶ್ ಭಾಷೆ, ವಿಪಶ್ಯನ, ಮುಂತಾದವುಗಳ ಪ್ರಾತ್ಯಕ್ಷಿತೆಯನ್ನು ನೀಡಲಾಗುತ್ತದೆ. ಬದುಕನ್ನು ಹೇಗೆ ಸಂಭ್ರಮವನ್ನಾಗಿಸಿಕೊಳ್ಳಬೇಕು ಎಂಬುದರ ಬಗೆಗೆನ ಕೀಲಿ ಕೈಯನ್ನು ನಮಗೆ ಹಸ್ತಾಂತರಿಸುವ ಒಂದು ಪ್ರಕ್ರಿಯೆಗೆ ಇಲ್ಲಿ ಚಾಲನೆ ದೊರೆಯುತ್ತದೆ. ಆ ಕಿಲಿ ಕೈಯೇ ಧ್ಯಾನ.
 

ನಾವು ಮಗುವಾಗಿರುವಾಗ ಮುಕ್ತವಾಗಿ ನಕ್ಕಿರಬಹುದು. ಆಮೇಲಾಮೇಲೆ ನಾವು ನಗುವುದನ್ನೇ ಮರೆತಿದ್ದೇವೆ.
 ಧ್ಯಾನದ ಬಗ್ಗೆ ಓಶೋ ಹೇಳುತ್ತಾರೆ;   ’ನೀವೊಮ್ಮೆ ಆಳದಿಂದ ನಿಜವಾಗಿ ನಕ್ಕಾಗ, ಆ ಕೆಲವು ಕ್ಷಣಗಳ ಮಟ್ಟಿಗೆ ನಿಮ್ಮೊಳಗೆ ಆಳವಾದ ಧ್ಯಾನ ಸ್ಥಿತಿ ಉಂಟಾಗುವುದು. ಆಗ  ನಿಮ್ಮ ಮನಸ್ಸು ಅದೃಶ್ಯವಾಗಿಬಿಡುತ್ತದೆ. ಇಡೀ ಝೆನ್ ಪದ್ಧತಿಯೇ ಮನೋ ರಹಿತವಾದ ಸ್ಥಿತಿಗೆ ತಲುಪುವುದು ಹೀಗೆಯೇ. ಇಂತಹ ಸ್ಥಿತಿಯನ್ನು ತಲುಪಲು ಇರುವ ಸುಂದರವಾದ ಮಾರ್ಗವೇ ನಗು ಮತ್ತು ನೃತ್ಯ. ನೀವು ನಿಜವಾಗಿಯೂ ನರ್ತಿಸುತ್ತಿದ್ದರೆ ನಿಮ್ಮ ಆಲೋಚನೆಗಳೆಲ್ಲ ನಿಂತು ಹೋಗುತ್ತವೆ. ನೀವು ನೃತ್ಯವನ್ನು ನಿಭಾಯಿಸದೇ, ನೃತ್ಯವೇ ನಿಮ್ಮನ್ನು ನಿಭಯಿಸಲು ಬಿಟ್ಟಲ್ಲಿ, ನೀವು ಆಲೋಚನಾ ರಹಿತ ಸ್ಥಿತಿಯನ್ನು ತಲುಪುವಿರಿ. ಅದೇ ಧ್ಯಾನ ಸ್ಥಿತಿ.’

ಪ್ರೀತಿಯಂತೆ ಅಳು ಮತ್ತು ನಗು ಅತ್ಯಂತ ಸಹಜ ಕ್ರಿಯೆಗಳು . ಅದನ್ನು ಹತ್ತಿಕ್ಕಬಾರದು. ಹೊರಚೆಲ್ಲಬೇಕು. ಅದು ನಿಮ್ಮೊಳಗೇ ಇದ್ದರೆ ನಿಮ್ಮನ್ನೇ ಕೊಳೆಯಿಸುತ್ತದೆ. ಅದುಮಿಟ್ಟ ಎಲ್ಲಾ ಭಾವನೆಗಳನ್ನು ಎಕ್ಸ್ ಪ್ರೆಸ್ ಮಾಡಿ ನಿರಾಳತೆಯನ್ನು ಅನುಭವಿಸಿಸಬೇಕು. ಅದನ್ನು ಧ್ಯಾನ ಕಲಿಸಿಕೊಡುತ್ತದೆ. ಧ್ಯಾನವೆಂಬುದು ಮನಸ್ಸಿನ, ಆತ್ಮದ ಸ್ನಾನವಂತೆ. ಆ ದಿವ್ಯ ಸ್ನಾನದಲ್ಲಿ ಮಿಂದು ಬಂದಿದ್ದೇನೆ. ಪ್ರತಿನಿತ್ಯ ಆ ಸ್ನಾನವನ್ನು ಮಾಡುವ ಸಂಕಲ್ಪ ತೊಟ್ಟಿದ್ದೇನೆ. 
ಒಂದು ವೇಳೆ ನಿಮಗೆ ಮತ್ತೆ ಮತ್ತೆ ಏಕಾಂತದಲ್ಲಿರಬೇಕು, ಮೌನದ ಮೂಲಕ ತನ್ನ ಅಂತಃಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದಿದ್ದರೆ ಅದಕ್ಕೂ ಇಲ್ಲಿ ಅವಕಾಶವಿದೆ. ಹೆಣ್ಣುಮಕ್ಕಳು ತವರಿಗೆ ಬಂದಷ್ಟೇ ಆರಾಮವಾಗಿ ನೀವಿಲ್ಲಿಗೆ ಬರಬಹುದು. ನನಗೂ ಇನ್ನೊಮ್ಮೆ ಅಲ್ಲಿಗೆ ಹೋಗುವ ಆಶೆಯಿದೆ.   
ನೀವು ಕೂಡಾ ಅಧ್ಯಾತ್ಮ ಮನೋಭಾವದವರಾಗಿದ್ದು, ಧ್ಯಾನ ಶಿಭಿರದಲ್ಲಿ ಪಾಲ್ಗೊಳ್ಳಬೇಕೆಂಬ ತುಡಿತವಿದ್ದಲ್ಲಿ ನೀವು ಸಂಪರ್ಕಿಸಬೇಕಾದ ವಿಳಾಸ;

ಓಶೋ ಸನ್ನಿಧಿ, ಕೋಕೋನಟ್ ಫಾರ್ಮ್,
ಚಾಮುಂಡಿ ಬೆಟ್ಟದ ಹಿಂಬಾಗ,
ಉತ್ತನಹಳ್ಳಿ, ಮೈಸೂರು.
ದೂ; ಮನೀಷಾ-೯೪೮೦೨೭೮೧೪೪
    ಜಯರಾಂ-೯೧೬೪೩೮೫೫೫೧.