Sunday, October 30, 2016

ಬಲಿಚಕ್ರವರ್ತಿ ಮತ್ತೆ ಬೇರೆ ರಾಜ್ಯ ಕಟ್ಟಿದನೇ?



ದೀಪಾವಳಿಯನ್ನು ವಾಮನ ಜಯಂತಿಯನ್ನಾಗಿ ಆಚರಿಸಬೇಕೆಂದು ಕೆಲವು ವಾರಗಳ ಹಿಂದೆ ಬಿಜೆಪಿಯ ಅಧ್ಯಕ್ಷ ಅಮಿತಾ ಶಾ ಅಪ್ಪಣೆ ಕೊಡಿಸಿದಾಗ ನನಗೆ ನಗುವುಕ್ಕಿ ಬಂದದ್ದನ್ನು ಬಿಟ್ಟರೆ ಇನ್ನೇನೂ ಪ್ರತಿಕ್ರಿಯೆ ಇರಲಿಲ್ಲ. ನಮ್ಮ ಜನಪದರ ಬದುಕಿನಲ್ಲಿ ಬಲಿ ಚಕ್ರವರ್ತಿ ಎಷ್ಟು ಹಾಸುಹೊಕ್ಕಾಗಿದ್ದಾನೆ ಎಂದರೆ ಇಂತಹ ಹತ್ತು ಅಮಿತ್ ಶಾಗಳು ಉರುಳಾಡುತ್ತಾ ಬಂದು ತಿಪ್ಪರಲಾಗ ಹಾಕಿದರೂ ಅವರ ನಂಬುಗೆಯ ಜಗತ್ತನ್ನು ಕಿಂಚಿತ್ತು ಅಲ್ಲಾಡಿಸಲಾರರು.

ದೀಪಾವಳಿಯೆಂದರೆ ಬೆಳಕಿನ ಹಬ್ಬ. ಕತ್ತಲನ್ನು ದೂರ ಓಡಿಸುವ ಹಣತೆ ಹಬ್ಬ.
ಪುರಾಣದ ಪ್ರಕಾರ ವಿಷ್ಣುವಿನ ಅವತಾರನಾದ ವಾಮನ ಅಸುರ ಚಕ್ರವರ್ತಿ ಬಲಿಯ ಅಸ್ಥಾನಕ್ಕೆ ಬಂದು ಮೂರಡಿ ಭೂಮಿಯನ್ನು ಬಿಕ್ಷೆಯಾಗಿ ಕೇಳುತ್ತಾನೆ. ಬಲಿ ’ತಥಾಸ್ತು ಅನ್ನುತಾನೆ. ವಾಮನ ಆಕಾಶದೆತ್ತರಕ್ಕೆ ಬೆಳೆದು ನಿಂತು ಒಂದು ಪಾದದಿಂದ ಭೂಮಿಯನ್ನೂ ಇನ್ನೊಂದು ಪಾದದಿಂದ ಆಕಾಶವನ್ನೂ ಅಳೆದು ಇನ್ನೊಂದು ಪಾದವನ್ನು ಎಲ್ಲಿಡಲಿ? ಎಂದು ಕೇಳಿದಾಗ ಸತ್ಯಸಂಧನಾದ ಆ ಅಸುರ ದೊರೆ ಮೂರನೆಯ ಪಾದವನ್ನು ತನ್ನ ತಲೆಯ ಮೇಲಿಡುವಂತೆ ಹೇಳುತ್ತಾನೆ. ಅಲ್ಲಿಗೆ ಕಾಲಿಟ್ಟ ವಾಮನ ಅವನನ್ನು ಪಾತಾಳಕ್ಕೆ ತಳ್ಳಿಬಿಡುತ್ತಾನೆ.

 ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಇನ್ನೆಂದೂ ತನ್ನ ದೇಶವನ್ನು, ತನ್ನ ಪ್ರೀತಿಪಾತ್ರ ಪ್ರಜೆಗಳನ್ನು ಕಾಣಲು ಸಾಧ್ಯವಿಲ್ಲವೆಂಬುದು ಅರಿವಾದಾಗ ಆತ ತೀವ್ರ ಸಂಕಟಗೊಳಗಾಗುತ್ತಾನೆ. ಅದಕ್ಕಾಗಿ ವರ್ಷದಲ್ಲಿ ಮೂರು ದಿನಗಳ ಮಟ್ಟಿಗೆ ತನ್ನ ರಾಜ್ಯಕ್ಕೆ ಬೇಟಿ ಕೊಡಲು ಅನುಮತಿಯನ್ನು ನೀಡುವಂತೆ ತನ್ನ ಶತ್ರುವಾದ ವಾಮನನನ್ನೇ ಕೇಳಿಕೊಳ್ಳುತ್ತಾನೆ. ವಾಮನ ಅವನ ಕೋರಿಕೆಯನ್ನು ಮನ್ನಿಸುತ್ತಾನೆ. ಆ ಮೂರು ದಿನಗಳೇ ದೀಪಾವಳಿ. ತಮ್ಮ ಪ್ರಿಯ ಪ್ರಜೆಗಳು ಹೇಗಿದ್ದಾರೆಂದು ನೋಡಲು ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕಕ್ಕೆ ಬರುತ್ತಾನೆ. ತಮ್ಮ ಪ್ರೀತಿಯ ರಾಜನ ಬರವನ್ನು ಸ್ವಾಗತಿಸಲು ಜನರು ನಡೆಸುವ ತಯಾರಿಯೇ ದೀಪಾವಳಿ.

ನನಗೆ ದೀಪಾವಳಿಯೆಂದರೆ ನೆನಪಾಗುವುದು ನನ್ನ ಬಾಲ್ಯದ ದೀಪಾವಳಿ. ಮುಖ್ಯವಾಗಿ ನಾವು ಸಂಗ್ರಹಿಸುತ್ತಿದ್ದ ವಿವಿಧ ಜಾತಿಯ ಹೂಗಳು. ಅದರಲ್ಲಿಯೂ ಕುರುಡಿ ಹೂ ಎಂಬ ವಿಶೇಷ ಪರಿಮಳವುಳ್ಳ ಬಳ್ಳಿ ಜಾತಿಯ ಹೂ. ಇದರ ಪರಿಮಳ ಪರ್ಲಾಂಗ್ ಗಟ್ಟಲೆ ದೂರ ಪಸರಿಸುತ್ತಿರುತ್ತದೆ. ಆ ಹೂವನ್ನು ಹುಡುಕಿಕೊಂಡು ನಾವು, ಮಕ್ಕಳು ಅಡ್ಕ. ಕಾಡುಗಳಲ್ಲಿ ಮೈಲಿಗಟ್ಟಲೆ ಅಲೆದಾಡುತ್ತಿದ್ದೆವು. ಹಬ್ಬ ಇನ್ನೇನು ಒಂದುವಾರ ಇದೆಯೆನ್ನುವಾಗಲೇ ಅಲೆದಾಡಿ ಅದಿರುವ ಜಾಗವನ್ನು ಗುರುತು ಮಾಡಿ ಇಡುತ್ತಿದ್ದೆವು. ದೀಪಾವಳಿಯಂದು ಬೆಳಿಗ್ಗೆಯೇ ಹೋಗಿ ಅದನ್ನು ಕಿತ್ತು ತರುತ್ತಿದ್ದೆವು.

ಇನ್ನೊಂದು ವಿಶೇಷತೆಯೆಂದರೆ ಬಲಿಯೇಂದ್ರ ಕಲ್ಲಿನ ಮುಂದೆ ಮರ ಹಾಕುವುದು. ಮರ ಅಂದರೆ ಅದು ಹಾಲೆ ಮರ. ಈ ಹಾಲೇ ಮರಕ್ಕೆ ಗಡಿ ಹಾಕಿದಾಗ ಅಂದರೆ ಗಾಯ ಮಾಡಿದಾಗ ಅದರಿಂದ ಹಾಲಿನಂತ ದ್ರವ ಒಸರುತ್ತದೆ. ಆಟಿ ತಿಂಗಳಲ್ಲಿ- ಆಷಾಡಮಾಸದಲ್ಲಿ- ತುಳುನಾಡಿನಲ್ಲಿ ಆಚರಿಸುವ ಆಟಿ ಅಮವಾಸ್ಯೆಯೆಂಬ ಕಹಿ ಮದ್ದು ಕುಡಿಯುವ ಆಚರಣೆಯಲ್ಲೂ ಇದೇ ಮರದ ಹಾಲನ್ನೇ ಮದ್ದಿಗೆ ಬೆರೆಸುವ ಪದ್ದತಿಯಿದೆ. ದೀಪಾವಳಿಯಲ್ಲಿ ಈ ಮರದ ಮೂರು ಕವಲುಗಳುಳ್ಳ ಎರಡು ಗೆಲ್ಲುಗಳು ಬೇಕೇ ಬೇಕು.  ಇದನ್ನು ಕೂಡಾ ವಾರಕ್ಕಿಂತ ಮೊದಲೇ ಕಾಡು-ಕುಮೇರಿಯಲೆಲ್ಲ ಅಲೆದಾಡಿ ಗುರುತಿಟ್ಟುಕೊಳ್ಳುತ್ತಿದ್ದೆವು. ಅದರ ತೊಗಟೆಯನ್ನು ಪೂರ್ತಿ ಕೆತ್ತಿದರೆ ಗಂಡು. ಉದ್ದಕ್ಕೆ ಸ್ವಲ್ಪ ಸ್ವಲ್ಪ ತೊಗಟೆ ಉಳಿಸಿದರೆ ಹೆಣ್ಣು. ಇನ್ನುಳಿದಂತೆ ಅಂಬಳೆಕಾಯಿ, ಲಂಬಾಸು , ಅಡಿಕೆಹಣ್ಣಿನ ಮಾಲೆಗಳನ್ನು ವಾರಕ್ಕೆ ಮೊದಲೇ ಸಿದ್ದಮಾಡಿಕೊಳ್ಳುತ್ತಿದ್ದೆವು..

ಉಗ್ರಸ್ತಂಭ- ಹಿರಣ್ಯಕಸಿಪನ ಅರಮನೆಯ ಕಂಬವಿದಂತೆ.
ದೀಪಾವಳಿಯೆಂಬುದು ಕೃಷಿಕರ ಹಬ್ಬ. ಗೋವುಗಳಿಗೂ ರೈತಾಪಿ ಜನರಿಗೂ ಭಾವನಾತ್ಮಕವಾದ ನೆಂಟಿದೆ.
ವರ್ಷವಿಡೀ ತನ್ನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳಿಗೆ,ದನ-ಕರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ. ಇನ್ನೂ ಕೆಂಪಗೆ ತಿರುಗದ ಕಾಯಿ ಅಡಿಕೆಯನ್ನು ಮಧ್ಯದಲ್ಲಿ ಭಾಗ ಮಾಡಿ ಒಳಗಿನ ತಿರುಳನ್ನು ತೆಗೆದು ಅದಕ್ಕೆ ಎಣ್ಣೆ ಹಾಕಿ ಬತ್ತಿಯಿಟ್ಟರೆ ನಮ್ಮ ಹಣತೆಗಳು ಸಿದ್ದಗೊಳ್ಳುತ್ತಿದ್ದವು. ಅದನ್ನು ಮನೆಯ ಸುತ್ತಲೂ ಹಚ್ಚಿಡುತ್ತಿದ್ದೆವು.
 ನನ್ನ ಅಜ್ಜಿ ದನಗಳಿಗೆ ಬೆಳಕು ತೋರಿಸುವ ದಿನಚಿತ್ರಣ ನನಗೀಗಲೂ ನೆನಪಿದೆ.

ಅಜ್ಜಿಯ ಎಡಗೈಯಲ್ಲಿ ಒಂದು ಬುಟ್ಟಿ. ಅದರೊಳಗೆ ಬಾಳೆಹಣ್ಣು, ಅವಲಕ್ಕಿ ಮತ್ತು.ಅಪ್ಪ [ಗುಳಿಹಿಟ್ಟು] ಬಲಗೈಯಲ್ಲಿ ಊರುಗೋಲು.. ನಮ್ಮಕೈಯ್ಯಲಿ ದೊಡ್ಡ ದೊಂದಿ ಮತ್ತು ದನಗಳ ಕೊರಳಿಗೆ ಹಾಕುವ ಹೂವಿನ ಹಾರಗಳು. ಆ ಹೂಗಳನ್ನು ನಾವು ಸಂಗ್ರಹಿಸುವ ಪರಿಯನ್ನು ಹೇಳಹೊರಟರೆ ಅದೇ ಒಂದು ದೊಡ್ಡ ಪ್ರಬಂಧವಾದೀತು. ಇದರೊಂದಿಗೆ ಹಟ್ಟಿಗೆ ನಮ್ಮ ಪಯಣ. ಅಲ್ಲಿಗೆ ಹೋದ ಒಡನೆಯೇ ನಮ್ಮವ್ವ [ಅಜ್ಜಿಯನ್ನು ನಾವೆಲ್ಲಾ ಕರೆಯೋದು ಅವ್ವಾ ಅಂತ] ಬುಟ್ಟಿಯನ್ನು ಬೈಪಾಣೆ ಮೇಲಿರಿಸಿ ನಮ್ಮ ಕೈಯ್ಯಿಂದ ದೊಂದಿಯನ್ನು ತಗೊಂಡು ಸೊಂಟವನ್ನು ನೆಟ್ಟಗೆ ಮಾಡಿಕೊಂಡು ಎಲ್ಲಾ ದನಗಳ ಮುಖವನ್ನೂ ಆ ಬೆಳಕಲ್ಲಿ ನೋಡಿ..ವರ್ಷಕ್ಕೊಂದು ಹಬ್ಬ ಬೆಳಕು ನೋಡಿ ಮಕ್ಕಳೇಅಂತ ಗಟ್ಟಿಯಾಗಿ ಹೇಳುತ್ತಿದ್ದರು. ಅನಂತರ ಎಲ್ಲಾ ದನಗಳ ಕುತ್ತಿಗೆಗೂ ನನ್ನ ಕೈಯ್ಯಲ್ಲಿ ಹಾರ ಹಾಕಿಸುತ್ತಿದ್ದರು. ನನ್ನ ಕೈಯ್ಯಲ್ಲೆ ಯಾಕೆ ಗೊತ್ತಾ? ನಾನು ಅಜ್ಜಿ ಸಾಕಿದ ಪುಳ್ಳಿ. ಅಜ್ಜಿ ಸಾಕಿದ ಪುಳ್ಳಿ ಬೊಜ್ಜಕ್ಕೂ ಬಾರಅಂತ ನಮ್ಮಕಡೆ ಲೇವಡಿ ಮಾಡಿಕೊಂಡು ಆಡುವುದುಂಟು. ನಾನು ಹಾಗೇನೂ ಇಲ್ಲ ಬಿಡಿ..ಸಖತ್ ಬುದ್ಧಿವಂತಳು. ಇದು ನಿಮಗೂ ಗೊತ್ತಲ್ಲ!


 ಅಜ್ಜಿ ಹಟ್ಟಿಯಲ್ಲಿ ನಿಂತು ಹೇಳುತ್ತಿದ್ದ ಹಾಡೊಂದು ಮೂರು ದಶಕಗಳು ಕಳೆದರೂ ಇನ್ನೂ ನನಗೆ ನೆನಪಿದೆ...

ಹುಲ್ಲು ಕಂಡಲ್ಲಿ ಹುಲ್ಲು ಮೇದ್ಕೊಂಡು
ನೀರ್ ಕಂಡಲ್ಲಿ ನೀರ್ ಕುಡ್ಕೊಂಡು
ಕಾಲಲ್ಲಿ ಹೋಗಿ ಕೋಲಲ್ಲಿ ಬನ್ನಿ
ಬಾಳ್ ಮಗನೇ..ಬಾಳ್

ಇದಾದ ಮೇಲೆ ಗೊಬ್ಬರಗುಂಡಿಗೆ, ಗದ್ದೆಗೆ ಎಡೆ ಇಟ್ಟು ಕೊಲ್ತಿರಿ ಚುಚ್ಚಿ ಕೈಮುಗಿಯಬೇಕು..ಅನಂತರದಲ್ಲಿ
ಅಂಗಾರ ಕಲ್ಲಿನ ಹತ್ತಿರದಲ್ಲಿ ಹಾಕಿರುವ ಹಣ್ಣಡಿಕೆ, ಹೂ,ಪಿಂಗಾರಗಳಿಂದ ಶೃಂಗರಿಸಿದ ಬಲೀಂದ್ರ ಕಂಬದಲ್ಲಿ ಬಲೀಂದ್ರನನ್ನು ಕರೆಯುವ ಬಲೀಂದ್ರ ಪೂಜೆ. ದೀಪವಿಟ್ಟು, ಕಾಯಿ ಒಡೆದು ಪೂಜೆ ಸಲ್ಲಿಸಿ ಎಡೆಯಿಟ್ಟು  ಕೈಮುಗಿಯುತ್ತಾ ;’ ಬಲಿಯೇಂದ್ರಾ ಬಾ ಕೂ .....ಕೂ..ಕೂ..’ ಎಂದು ಕೂಗುತ್ತಾ ಬೆನ್ನು ಹಾಕಿ ಹಿಂತಿರುಗಿ ನಿಲ್ಲುವುದು
ಆಮೇಲೆ ಮನೆಗೆ ಬಂದು ಎಲ್ಲರೂ ಒಟ್ಟಾಗಿ ಕೂತು ಊಟ ಮಾಡುವುದು..ಇದೆಲ್ಲಾ ಇವತ್ತಿಗೂ ನಡೆದುಕೊಂಡು ಬರುತ್ತಿದೆ..

ನನ್ನ ತವರು ಮನೆಯಲ್ಲಿ ಹಟ್ಟಿ ತುಂಬಾ ನಾಟಿ ದನಗಳಿವೆ..ಆದರೆ ಗದ್ದೆ ಅಡಿಕೆತೋಟವಾಗಿದೆ..ಗೊಬ್ಬರ ಗುಂಡಿಯಿಲ್ಲ. ಇನ್ನು ದನಗಳನ್ನೂ ಮಾರಿಬಿಟ್ಟರೆ ದೀಪಾವಳಿ ಹಬ್ಬವೆಂಬುದು ನಗರಗಳಲ್ಲಾಗುತ್ತಿದ್ದಂತೆಯೇ ರೈತಾಪಿ ಜನರಲ್ಲಿ ಕೂಡಾ ಹೊಸ ವ್ಯಾಖ್ಯೆಯನ್ನು ಪಡೆದುಕೊಳ್ಳಬಹುದು..


ರಕ್ತಕೊಳ- ಹಿರಣ್ಯಕಶಿಪನನ್ನು ಕೊಂದಾದ ಮೇಲೆ ನರಸಿಂಹನು ಕೈತೊಳೆದುಕೊಂಡ ಕೊಳ.
ಈ ನೀರನ್ನು ತಲೆಗೆ ಪ್ರೋಕ್ಷಿಸಿಕೊಳ್ಳುವುದಿಲ್ಲ.
ಬಲಿ ಚಕ್ರವರ್ತಿಯ ಅಪ್ಪ ವಿರೋಚನ. ವಿರೋಚನನ ಅಪ್ಪ ಪ್ರಹ್ಲಾದ. ಪ್ರಹ್ಲಾದನನ ಅಪ್ಪ. ಹಿರಣ್ಯಕಶಿಪ್.  ಹಿರಣ್ಯಕಶಿಪ್ ನನ್ನು ಕೊಂದವನೇ ಅವನ ಮರಿಮಗನಾದ ಬಲಿಯ ಬದುಕನ್ನೂ ಬಲಿ ತೆಗೆದುಕೊಳ್ಳುತ್ತಾನೆ. ಅವನೇ ವಿಷ್ಣು. ಅಂದರೆ ಇದು ಶೈವ ಮತ್ತು ವೈಷ್ಣವ ಪಂಥಗಳ ನಡುವಿನ ತಿಕ್ಕಾಟವಾಗಿರಬಹುದೇ? ಗೊತ್ತಿಲ್ಲ. ಆದರೆ ತುಳುನಾಡಿನಲ್ಲಿ ಬಲಿಯೇಂದ್ರನನ್ನು ಬರಮಾಡಿಕೊಳ್ಳುತ್ತಿರುವ ಆಚರಣೆಗಳೆಲ್ಲವೂ ಮೂಲತಃ ನಿಸರ್ಗಕ್ಕೆ ಹತ್ತಿರವಾದ ಪರಿಶಿಷ್ಟ ಆಚರಣೆಗಳೇ ಆಗಿವೆ.

ಹಿರಣ್ಯಕಶಿಪ್ ರಾಜ್ಯಭಾರ ಮಾಡಿದನೆಂದು ನಂಬಲಾದ ಜಾಗವೊಂದು ಈ ಭೂಮಿಯ ಮೇಲಿದೆಯೆಂದು ನನಗೆ ಗೊತ್ತೇ ಇರಲಿಲ್ಲ. ಆದರೆ ಮೂರು ವರ್ಷಗಳ ಹಿಂದೆ ಅಂದ್ರಪ್ರದೇಶದ ನಲ್ಲಮಲ ಕಾಡಿಗೆ ಚಾರಣಕ್ಕೆಂದು ಹೋದಾಗ ದಂತಕಥೆಯಾಗಿರುವ ಆ  ಜಾಗಗಳನ್ನು ನೋಡಿ ಬಂದೆ. ಆಗ ನನಗೆ ಅನ್ನಿಸಿದ್ದು, ಹಿರಣ್ಯಕಶಿಪು ಅಂಧ್ರದ ನಲ್ಲಮಲ ಅರಣ್ಯಪ್ರದೇಶದಲ್ಲಿ ರಾಜ್ಯಭಾರ ಮಾಡಿದ್ದರೆ ಅವನ ಮರಿಮಗ ಬಲಿ ಚಕ್ರವರ್ತಿಯೂ ಇಲ್ಲೇ ರಾಜ್ಯಭಾರ ಮಾಡಿರಬೇಕು. ಅವನನ್ನು ವಾಮನ ಪಾತಾಳಲೋಕಕ್ಕೆ ತಳ್ಳಿದ ಎನ್ನುತ್ತದೆ ಪುರಾಣ. ಅಂದರೆ ಕೊಂದಿರಬಹುದೇ? ಹಾಗಿಲ್ಲದೆ ಅಲ್ಲಿಂದ ಓಡಿಸಿದ್ದರೆ ಅವನು ಓಡಿ ಹೋದ ಜಾಗ ಪಾತಾಳಲೋಕವೆಂದು ಕರೆಯುತ್ತಿದ್ದ ಇಂದಿನ ಕೇರಳವಾಗಿರಬಹುದೇ? ನಲ್ಲಮಲ ಅರಣ್ಯಕ್ಕಿಂತಲೂ ದಟ್ಟವಾದ ಸೈಲೆಂಟ್ ವ್ಯಾಲಿಯಲ್ಲಿ ಆತ ಮತ್ತೆ ತನ್ನ ರಾಜ್ಯ ಕಟ್ಟಿರಬಹುದೇ? ಇಂದಿಗೂ ಕರಾವಳಿಯ ಜನ ಬಲಿಯೇಂದ್ರನನ್ನು ಬಲು ಆದರದಿಂದ ಬರಮಾಡಿಕೊಳ್ಳುತ್ತಾರೆ. ದೂರದ ನಲ್ಲಮಲದ ಅಸುರ ರಾಜ ಇಲ್ಲಿ ಹೇಗೆ ವಂದಿತನಾದ?

ಇಂತಹದೊಂದು ಪ್ರಶ್ನೆಯನ್ನು ನಾನು ನನ್ನ ಪೇಸ್ಬುಕ್ ನಲ್ಲಿ ಕೇಳಿದ್ದೆ. ಅದಕ್ಕೆ ನನ್ನ ಪತ್ರಕರ್ತ ಮಿತ್ರರೊಬ್ಬರು ಹೇಳಿದ್ದರು; ಪಾತಾಳಕ್ಕೆ ತಳ್ಳಿದ್ದು ಅಂದರೆ ದಕ್ಷೀಣದಂಚಿಗೆ ಓಡಿಸಿದ್ದು. ಬಲಿ ಮತ್ತೆ ಕೇರಳದಲ್ಲಿ ರಾಜ್ಯ ಕಟ್ಟುತ್ತಾನೆ. ಅದನ್ನು ಅಂಧ್ರ ತನಕ ವಿಸ್ತರಿಸುತ್ತಾನೆ. ಮತ್ತೆ ಬಲಾಢ್ಯನಾದ ಬಲಿಯನ್ನು ತಿರುಮಲ ಬೆಟ್ಟದಲ್ಲಿ ಮೋಸದಿಂದ ಹತ್ಯ ಮಾಡಲಾಯ್ತು. ಅಲ್ಲಿ ವೆಂಕಟೇಶನ ಸನ್ನಿಧಿಯಲ್ಲಿ ಆತನ ಸಮಾಧಿ ಇದೆಯಂತೆ. ಆತನಿಂದ ಬದುಕು ಕಟ್ಟಿಕೊಂಡಿದ್ದೇವೆ ಎಂದು ನಂಬಲಾದ ಭಕ್ತರು ಇಂದಿಗೂ ಅಲ್ಲಿಗೆ ತೆರಳಿ ತಮ್ಮ ಕಾಣಿಕೆಗಳನ್ನು ಅರ್ಪಿಸುತ್ತಾರಂತೆ. ಅವರಲ್ಲಿ ಕೇರಳಿಗರೇ ಹೆಚ್ಚಂತೆ. ಹಾಗೆ ಭಕ್ತರಿಂದ ಕಾಣಿಕೆಗಳನ್ನು ಪಡೆಯುತ್ತಿದ್ದ ಬಲಿ ಚಕ್ರವರ್ತಿಯ ಸಮಾಧಿ ಸ್ಥಳ ವೈಷ್ಣವರ ಆಕ್ರಮಕ್ಕೊಳಗಾಗಿ ನಂತರ ದೇವಾಲಯವಾಗಿ ಪರಿವರ್ತನೆಯಾಯಿತಂತೆ
ಇದು ದಂತಕಥೆಯೋ ಐತಿಹ್ಯವೋ ನನಗೆ ಗೊತ್ತಿಲ್ಲ. ನಾನು ಇದುವರೆಗೂ ತಿರುಪತಿಗೆ ಹೋಗಿಲ್ಲ. ಆ ಏಳು ಬೆಟ್ಟವನ್ನು ಒಮ್ಮೆ ಕಾಲ್ನಡಿಗೆಯಲ್ಲಿ ಹತ್ತಬೇಕೆಂದು ಆಸೆಯಿತ್ತು. ಇದುವರೆಗೂ ಆಗಿಲ್ಲ. ಇನ್ನು ಮುಂದೆ ಆಗುತ್ತೋ ಗೊತ್ತಿಲ್ಲ. ಒಂದು ವೇಳೆ ಹೋದರೆ  ಬಿನ್ನ ನೋಟವನ್ನು ಹೊತ್ತು ಬೆಟ್ಟವೇರುತ್ತೇನೆ.





Thursday, October 20, 2016

ಭಾರತ-ಪಾಕ್ ನಡುವಣ ಸ್ನೇಹ ’ಸಿಂಧು’



ಪಂಪನ ಆಧಿಪುರಾಣದಲ್ಲಿ ಒಂದು ಪ್ರಸಂಗ ಬರುತ್ತದೆ. ಭರತ ಬಾಹುಬಲಿಯವರು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿದ್ದಾರೆ. ಅವರ ಹಿಂದೆ ಅಪಾರ ಸೈನ್ಯವಿದೆ. ಇನ್ನೇನು ಅಣ್ಣ ತಮ್ಮಂದಿರ ನಡುವೆ ಯುದ್ಧ ಆರಂಭವಾಗಬೇಕು. ಆಗ  ಚಾಣಕ್ಷ್ಯರಾದ ಮಂತ್ರಿಗಳು, ಇವರಿಬ್ಬರೂ ವಜ್ರದೇಹಿಗಳಾದ ಕಾರಣ ಯುದ್ಧ ನಡೆದರೆ ಸೋಲು ಗೆಲುವುಗಳು ನಿಶ್ಚಯವಾಗದು, ಬದಲಾಗಿ ಎರಡೂ ಕಡೆಗಳಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಬಹುದೆಂದು ಮನಗಂಡು ಇಬ್ಬರ ಮಧ್ಯೆ ಮಾತ್ರ ಯುದ್ಧ ನಡೆಯುವಂತೆ ಏರ್ಪಾಟು ಮಾಡುತ್ತಾರೆ. ಅದರಂತೆ ದ್ರುಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ದ ನಡೆಯುತ್ತದೆ. ಇದರಲ್ಲಿ ಆಜಾನುಬಾಹುವಾದ ತಮ್ಮ ಬಾಹುಬಲಿ ಅಣ್ಣನಾದ ಭರತನನ್ನು ಸೋಲಿಸುತ್ತಾನೆ.

ಈಗ ವರ್ತಮಾನದಲ್ಲಿ ಇಂತಹದೇ ಸನ್ನಿವೇಶವೊಂದು ಎದುರಾಗಿದೆ. ನೆರೆಯ ಪುಟ್ಟ ದೇಶ ಪಾಕಿಸ್ತಾನ ಬಾಹುಬಲಿಯಂತಹ ಬಲಿಷ್ಟ ಭಾರತದೆದುರು ಮಲೆತು ನಿಂತು ಪರೋಕ್ಷ ಯುದ್ಧದಲ್ಲಿ ತೊಡಗಿಕೊಂಡಿದೆ. ಮಾತಿನಲ್ಲೇ ಪಂಥಾಹ್ವಾನ ನೀಡುತ್ತಿದೆ. ಭಾರತ ಇದನ್ನು ಸಂಯಮದಿಂದ ಎದುರಿಸುತ್ತಿದೆ. .

ಇದು ಖಂಡಾಂತರ ಕ್ಷಿಪಣಿಗಳ ಕಾಲ; ಅಣುಯುಗ. ಕೇವಲ ಒಂದು ಗುಂಡಿ ಅದುಮುವ ಮೂಲಕ ಜಗತ್ತಿನ ಯಾವುದೋ ತುದಿಯಲ್ಲಿರುವ ನಿರ್ಧಿಷ್ಟ ಜಾಗವನ್ನು ಕುಳಿತಲ್ಲೇ ಬೂದಿ ಮಾಡಬಲ್ಲ ತಾಂತ್ರಿಕತೆಯೀಗ ಮನುಷ್ಯನ ಬತ್ತಳಿಕೆಯಲ್ಲಿದೆ. ಹಾಗಾಗಿ ಈಗ ಸಂಯಮದ ಬಗ್ಗೆಯೇ ಹೆಚ್ಚೆಚ್ಚು ಮಾತಾಡಬೇಕಾಗಿದೆ. ಅದರಲ್ಲೂ ಭಯೋತ್ಪಾದನೆಯ ಟಂಕಶಾಲೆಯಂತಿರುವ ಪಾಕಿಸ್ತಾನದ ವಿರುದ್ಧದ ಪ್ರತಿ ನಡೆಯೂ ಹಗ್ಗದ ಮೇಲಿನ ನಡಿಗೆಯೇ..ಭಾರತವೀಗ ಪಂಚತಂತ್ರದ ಜಾಣ್ಮೆಯಡಿ ಜಲಯುದ್ಧಕ್ಕೆ ಮುಂದಾಗಿದೆ.

ಬಾರತವೀಗ ತನ್ನ ನೆಲದಲ್ಲಿ ಹರಿಯುವ ಸಿಂಧು ನದಿಯ ತನ್ನ ಪಾಲಿನ ಸಂಪೂರ್ಣ ನೀರನ್ನು ಬಳಸಿಕೊಳ್ಳುವ ಬಗ್ಗೆ ತಜ್ನರ ಸಲಹೆ ಪಡೆಯುತ್ತಿದೆ.. ೧೯೬೦ ರಲ್ಲಿ ಆಗಿನ ನಮ್ಮ ಪ್ರಾಧಾನಿ ಜವಹರಲಾಲ್ ನೆಹರು ಮತ್ತು ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್ ನಡುವೆ ನಡೆದ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಾದ ’ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದ’ ವನ್ನು ಉಲ್ಲಂಘಿಸುತ್ತಿಲ್ಲ. ಬದಲಾಗಿ ತನ್ನ ಪಾಲಿನ ನೀರಿನ ಹಕ್ಕನ್ನು ಪೂರ್ತಿಯಾಗಿ ಬಳಸಿಕೊಳ್ಳುವ ನಿರ್ಧಾರ ಮಾಡುತ್ತಿದೆ. ಭಾರತವೇನಾದರೂ ಈ ಕಠಿಣ ನಿರ್ಧಾರ ತೆಗೆದುಕೊಂಡರೆ ಪಾಕಿಸ್ತಾನ ಸಂಪೂರ್ಣ ಬರಡಾಗಲಿದೆ. ಯಾಕೇಂದರೆ ಪಾಕಿಸ್ತಾನಕ್ಕೆ ತನ್ನ ದೇಶದಲ್ಲಿ ಹುಟ್ಟಿ ಹರಿಯುವ ಪ್ರಮುಖ ನದಿಗಳಿಲ್ಲ.. ಭಾರತದಲ್ಲಿ ಹುಟ್ಟಿ, ಅಥವಾ ಭಾರತದ ನೆಲದ ಮುಖಾಂತರ ಹರಿದು ಬರುವ ನದಿಗಳೇ ಆ ದೇಶದ ಜೀವದಾಯಿನಿಗಳು. ಅಲ್ಲಿಯ ಕ್ರುಷಿ, ಕೈಗಾರಿಕೆ, ಮೀನುಗಾರಿಕೆ, ಜಲವಿದ್ಯುತ್ ಯೋಜನೆಗಳು, ಕುಡಿಯುವ ನೀರಿನ ಮೂಲ ಎಲ್ಲವೂ ಭಾರತದಿಂದ ಹರಿದು ಬರುವ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿದೆ. ಈ ನದಿಗಳೇ ಅವರ ಅರ್ಥಿಕತೆಯ ಬೆನ್ನೆಲುಬು. ಭಾರತವೀಗ ಪಾಕಿಸ್ತಾನದೊಡನೆ ನೇರ ಯುದ್ದದಲ್ಲಿ ತೊಡಗದೆ ಅದರ ಬೆನ್ನುಲುಬಿಗೆ ಚಿಕ್ಕ ಪ್ರಹಾರ ಕೊಡಲು ತೀರ್ಮಾನಿಸಿದೆ.

ಪಾಕಿಸ್ತಾನಕ್ಕೆ ಭಾರತದ ಮೂಲಕ ಹರಿದು ಹೋಗುವ ಪ್ರಮುಖ ನದಿಗಳು ಆರು. ಇದನ್ನು ಪೂರ್ವದ ನದಿಗಳು ಮತ್ತು ಪಶ್ಚಿಮದ ನದಿಗಳು ಎಂದು ವಿಂಗಡಣೆ ಮಾಡಲಾಗಿದೆ  ಬಿಯಾಸ್. ರಾವಿ ಮತ್ತು ಸಟ್ಲೇಝ್ ಪೂರ್ವದ ನದಿಗಳು. ಇವು ನಮ್ಮ ಪಂಜಾಬ್ ರಾಜ್ಯದ ಮುಖಾಂತರ ಹಾದು ಪಾಕಿಸ್ತಾನವನ್ನು ಪ್ರವೇಶಿಸುತ್ತದೆ. ನೀವು ಮನಾಲಿಗೆ ಹೋಗಿದ್ದರೆ ಅಲ್ಲಿ ನಗರದಂಚಿನಲ್ಲೇ ಹರಿಯುವ  ಬಿಯಾಸ್ ನದಿಯನ್ನು ನೋಡೇ ನೋಡಿರುತ್ತಿರುತ್ತೀರಿ ಅದರ ದಂಡೆಯುದ್ದಕ್ಕೂ ನಳನಳಿಸುತ್ತಿರುವ ಸೇಬು ತೋಟಗಳು ನಿಮ್ಮ ಮನವನ್ನು ಸೂರೆಗೊಳ್ಳುತ್ತವೆ.. ಚಂಡಿಗಡದಲ್ಲೂ ಈ ನದಿ ನಿಮಗೆ ನೋಡಲು ಸಿಗುತ್ತದೆ. ಈ ಮೂರೂ ನದಿಗಳ ಮೇಲಿನ ಸಂಪೂರ್ಣ ಹಕ್ಕು ಭಾರತದ್ದು. ಅದನ್ನು ಹೇಗೆ ಬೇಕಾದರೂ ಭಾರತ ಬಳಸಿಕೊಳ್ಳಬಹುದು.

  ಸಿಂಧು,ಚಿನಾಬ್ ಮತ್ತು ಝೇಲಂ ನದಿಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಸೇರುತ್ತವೆ. ಇವು ಪಶ್ಚಿಮದ ನದಿಗಳು. ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಪ್ರಕಾರ ಇದರ ಒಡೆತನ ಪಾಕಿಸ್ತಾನಕ್ಕೆ ಸೇರಿದ್ದರೂ ಇದರ ಮೇಲೆ ಭಾರತಕ್ಕೆ ಸಿಂಹ ಪಾಲಿದೆ. ಹಾಗಿದ್ದರೂ ತನ್ನ ಹಕ್ಕಿನ ನೀರನ್ನು ಭಾರತ ಇದುವರೆಗೂ ಸಂಪೂರ್ಣ ಬಳಕೆ ಮಾಡಿಕೊಂಡಿರಲಿಲ್ಲ. ಅದು ಯಾವುದೇ ನಿಯಂತ್ರಣವಿಲ್ಲದೆ ಪಾಕ್ ನೆಡೆಗೆ ಹರಿದು ಹೋಗುತ್ತಿತ್ತು. ಈ ಆರೂ ನದಿಗಳು ಮತ್ತದರ ಉಪನದಿಗಳು ಸೇರಿ ಸಿಂಧು ಎಂಬ ಮಹಾನದಿಯಾಗಿ ಪಾಕಿಸ್ತಾನದ ಜೀವ ನದಿಯಾಗಿ ಅಲ್ಲಿನ ಜನತೆಯ ಬಾಳನ್ನು ಸಮ್ರುದ್ಧಗೊಳಿಸುತ್ತಾಳೆ. ತನ್ನ ಪಾಲಿನ ನೀರನ್ನೂ ಭಾರತ  ತನ್ನ ನೆರೆಯ ರಾಷ್ಟ್ರಕ್ಕೆ ಉದಾರತೆಯಿಂದ ಬಿಟ್ಟು ಕೊಟ್ಟಿದ್ದು ಆ ದೇಶಕ್ಕೆ  ತೋರಿದ ಔದಾರ್ಯವಾಗಿತ್ತು. ಆದರೆ ಪಾಕಿಸ್ತಾನ ಈ ಉದಾರತೆಗೆ ಎಂದೂ ಕೊಡಬೇಕಾದ ಗೌರವವನ್ನು ಕೊಟ್ಟಿಲ್ಲ. ಆದರೆ ಬದಲಾದ ಸನ್ನಿವೇಶದಲ್ಲಿ ಭಾರತವೀಗ ತನ್ನ ಹಕ್ಕಿನ ನೀರನ್ನು ಬಳಸಿಕೊಳ್ಳಲು ಮುಂದಾಗಿದೆ. ಅದು ಈಗ ಚರ್ಚೆಯಲ್ಲಿರುವ ಸಂಗತಿ.

೧೯೬೦ರಲ್ಲಿ ಆಗಿನ ಭಾರತದ ಪ್ರಧಾನಿ ಜವಹರಲಾಲ್ ನೆಹರು ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿಗಳಾದ ಅಯೂಬ್ ಖಾನ್ ಅವರ ನಡುವೆ ವಿಶ್ವಸಂಸ್ಥೆಯ ನೇತ್ರುತ್ವದಲ್ಲಿ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದಕ್ಕೆ ಪರಸ್ಪರ ಸಹಿ ಮಾಡಿದ್ದವು. ಪ್ರಮುಖ ನದಿಗಳಿಲ್ಲದ ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ನೀರಿನ ಕೊರತೆಯಾಗಬಾರದೆಂಬ ದೂರದರ್ಶಿತ್ವದಲ್ಲಿ ಮಾಡಿಕೊಂಡ ಒಪ್ಪಂದವಾಗಿತ್ತದು.ಇದರ ಪ್ರಕಾರ ಭಾರತಕ್ಕೆ ೯.೧೨ ಲಕ್ಷ ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಹಕ್ಕಿದೆ. ಆ ಹಕ್ಕನ್ನು ಮತ್ತೆ ೪.೨ ಲಕ್ಷಕ್ಕೆ ವಿಸ್ತರಿಸಲೂ ಬಹುದು. ಆದರೆ ಭಾರತ ಕೇವಲ ೮ಲಕ್ಷ ಎಕರೆಗೆ ಮಾತ್ರ ನೀರಾವರಿ ಸೌಕರ್ಯವನ್ನು ಮಾಡಿಕೊಂಡಿದೆ. ಹಾಗೆಯೇ ಈ ಮೂರು ನದಿ ನೀರನ್ನು ಬಳಸಿಕೊಂಡು ೧೮,೬೦೦ ಮೆಗಾವಾಟ್ ವಿದ್ಯುತ್ತನ್ನು ಉತ್ಪಾದಿಸಿಕೊಳ್ಳಬಹುದು. ಆದರೆ ಈಗ ಕೇವಲ ೩,೦೩೪ ಮೆಗಾವಾತ್ ವಿದ್ಯುತ್ ಮಾತ್ರ ಉತ್ಪಾದಿಸುತ್ತಿದೆ.
ಯಾಕೆ ಹೀಗಾಯ್ತು?

ನಮಗೆ ಗೊತ್ತಿದೆ; ಹೆಹಲಿಯಲ್ಲಿ ರಾಜಕಾರಣ ಮಾಡಿದ ಎಲ್ಲಾ ಸರಕಾರಗಳು ’ಕಾಶ್ಮೀರ ಅಖಂಡ ಭಾರತದ ಅವಿಭಾಜ್ಯ ಅಂಗ’ ಎನ್ನುತ್ತಲೇ ಬಂದವು, ಹೊರತಾಗಿ ಅಲ್ಲಿಯ ಜನರ ಆಶೋತ್ತರಗಳೇನು ಎಂಬುದರ ಬಗ್ಗೆ ಹೆಚ್ಚಿನ ಮಹತ್ವ ಕೊಡಲಿಲ್ಲ. ಕಾಸ್ಮೀರ ಎಂಬ ಭೂಭಾಗದ ಬಗ್ಗೆ ಏರಿದ ದನಿಯಲ್ಲಿ ಮಾತಾಡುತ್ತಲೇ ಅಲ್ಲಿನ ಜನರನ್ನು. ಅಲ್ಲಿಯ ಶ್ರೀಮಂತ ಸಂಸಕೃತಿಯನ್ನು ಮರೆತೇಬಿಟ್ಟವು. ಶಸ್ತ್ರಾಸ್ಥದ ಬಲ ತೋರಿಸಿ ಅಲ್ಲಿಯ ಭೂಮಿಯನ್ನು ವಶಪಡಿಸಿಕೊಂಡರೆ ಜನರೇ ಇಲ್ಲದ  ಭೂಪ್ರದೇಶವಷ್ಟೇ ನಮ್ಮದಾಗುತ್ತದೆ. ಜನರಿಂದ, ಜನಜೀವನದಿಂದ ದೇಶದ ಕಲ್ಪನೆ ಹುಟ್ಟಿಕೊಳ್ಳುತ್ತದೆ. ವೈವಿದ್ಯಮಯವಾದ ಜೀವಂತ ಸಮಾಜವಿಲ್ಲದಿದ್ದರೆ ಅದು ಸ್ಮಶಾನದಲ್ಲಿರುವ ಹೂದೋಟವಷ್ಟೆ. ಮನಸು ಅರಳದು, ಪೂಜೆಗೆ ಸಲ್ಲದು.
  ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳ ಅಭಿವ್ರುದ್ದಿಗೆ ಯಾವ ಸರಕಾರಗಳು ಒತ್ತನ್ನು ಕೊಟ್ಟಿಲ್ಲ. ಕನಿಷ್ಟ ಮೂಲಭೂತ ಅವಶ್ಯಕತೆಯಾದ ನೀರು ಮತ್ತು ರಸ್ತೆಯ ವ್ಯವಸ್ಥೆಯನ್ನೂ ಮಾಡಿಲ್ಲ.ಕ್ರುಷಿಗೆ ಉತ್ತೇಜನ ನೀಡಿಲ್ಲ. ಕರ ಕುಶಲ ಕಲೆಗಳಿಗೆ ಪ್ರೋತ್ಸಾಹ ನೀಡಿಲ್ಲ. ಹಾಗಾಗಿ ಸಾಂಸ್ಕ್ರುತಿಕ ಅನನ್ಯತೆಯನ್ನು ಉಳಿಸಿಕೊಂಡಿರುವ ಅಲ್ಲಿಯ ಜನರಲ್ಲಿ ಪರಕೀಯತೆಯ ಭಾವನೆಯಿದೆ. ಆ ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗು ಬಲವಾಗಿ ಕೇಳಿ ಬರುತ್ತಿದೆ. ಅವರನ್ನು ದೇಶದ ಮುಖ್ಯ ಧಾರೆಯಲ್ಲಿ ಸೇರಿಸಿಕೊಳ್ಳಲು ಅಲ್ಲಿ ಅಭಿವ್ರುದ್ಧಿ ಕಾರ್ಯಗಳನ್ನು ಕೈಗೊಂಡು, ಅಲ್ಲಿನ ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ಏಕೈಕ ಮಾರ್ಗ.  ಈಗ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಸದ್ವಿನಿಯೋಗ ಮಾಡಿಕೊಂಡರೆ ಬಹುಶಃ ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳು ಭಾರತದ ಮುಖ್ಯ ಧಾರೆಯೊಳಗೆ ತಮ್ಮನ್ನು ತಾವು ಗುರುತಿಸಿಸಿಕೊಳ್ಳಬಲ್ಲರು ಅನ್ನಿಸುತ್ತಿದೆ.

ಆದರೆ ಹಿಮಾಲಯ ವಲಯದಲ್ಲಿ ಅಬಿವ್ರುದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಒಂದು ಎಚ್ಚರಿಕೆಯನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು. ಹಿಮಲಯ ಪರ್ವತವಿನ್ನೂ ತನ್ನ ಬಾಲ್ಯವಾಸ್ಥೆಯಲ್ಲಿದೆ. ಭಾರತದ ಇತರೆಡೆಗಳಲ್ಲಿನ ಪರ್ವತಗಳಿಗೆ ಅದರಲ್ಲೂ ಪಶ್ಚಿಮಘಟ್ಟಗಳಿಗೆ ಹೋಲಿಸಿದರೆ ಅದಿನ್ನೂ ಎಳಸು. ಅದರ ಧಾರಣಾಶಕ್ತಿ ಅತ್ಯಂತ ದುರ್ಭಲವಾದುದು. ೨೦೧೩ರಲ್ಲಿ ಉತ್ತರಾಖಂಡದಲ್ಲಾದ ಮೇಘಸ್ಪೋಟ ಮತ್ತು ಭೂಕುಸಿತಕ್ಕೆ ಅಲ್ಲಿ ಎಗ್ಗಿಲ್ಲದೆ ಕಟ್ಟಿದ ಅಣೆಕಟ್ಟುಗಳು ಮತ್ತು ಜಲ ವಿದ್ಯುತ್ ಯೋಜನೆಗಳೇ ಕಾರಣ ಎಂದು ತಜ್ನರು ಅಭಿಪ್ರಾಯ ಪಟ್ಟಿದ್ದಾರೆ.ಹಾಗಾಗಿ  ಅಭಿವ್ರುದ್ಧಿ ಯೋಜನೆಗಳನ್ನು ಕೈಗೊಳ್ಳುವಾಗ ಯಾವ ರೀತಿಯ ಅಭಿವ್ರುದ್ಧಿ ನಮಗೆ ಬೇಕು?ಪರಿಸರಕ್ಕೆ, ಜೀವಜಾಲಕ್ಕೆ ತೊಂದರೆಯಾಗದಂತೆ ಮನುಷ್ಯ, ಮನುಷ್ಯನಾಗಿ ಬದುಕಲು ಬೇಕಾದ ಅನುಕೂಲತೆಗಳೇನು ಎಂದು ಪ್ರಶ್ನಿಸಿಕೊಂಡರೆ ಬಹುಶಃ ನಮ್ಮ ಅಭಿವ್ರುದ್ಧಿಯ ಮಾನದಂಡ ಅರ್ಥವಾಗಬಹುದು.

ಭಾರತವೀಗ ಜಲಯುದ್ಧಕ್ಕೆ ಸನ್ನದ್ದವಾಗಿ ನಿಂತಿದೆ. ಈ ನೆಪದಲ್ಲಾದರೂ ಕಾಶ್ಮೀರದಲ್ಲಿ ಅಬಿವ್ರುದ್ಧಿ ಕಾರ್ಯಗಳು ನಡೆಯಲಿ. ಕಾಶ್ಮೀರಿಗಳು ಭಾರತತನುಜಾತೆಯಾಗಲಿ ಎಂಬುದು ಎಲ್ಲರ ಆಶಯ.
..



[ಹಾರ್ನ್ಬಿಲ್ ಉತ್ಸವದಿಂದ ಸಿಂಧು ಉತ್ಸವತನಕ...]

ಐದು ಸಾವಿರ ವರ್ಷಗಳಷ್ಟು ಪುರಾತನವಾದ ಸಿಂಧು ಕೊಳ್ಳ್ದ ನಾಗರೀಕತೆ, ಸಿಂಧು ನದಿಯ ತಟದಲ್ಲಿ ಅರಳಿತ್ತು ಮತ್ತು ಹಿಂದು ಸ್ತಾನಕ್ಕೆ ಆ ಹೆಸರು ಬರಲು ಕಾರಣ್ವಾಗಿತ್ತು ಎಂಬುದನ್ನು ಚರಿತ್ರೆಯಲ್ಲಿ ಓದಿದ್ದೇವೆ. ಆದರೆ ಆ ನದಿ ಮತ್ತು ನಾಗರೀಕತೆಯ ಪಳೆಯುಳಿಕೆಗಳು ಇಂದು ಪಾಕಿಸ್ತಾನದ ಆಸ್ತಿ.

’ಗಂಗೇಚಾ ಯಮುನೇ ಚೈವಾ ಗೋಧಾವರಿ ಸರಸ್ವತಿ, ನರ್ಮದೇ, ಸಿಂಧು, ಕಾವೇರಿ ಜಲಸ್ಮಿನ್ ಸನ್ನಿಧಿಂಕರ
ಹೀಗೆ ಭಾರತೀಯರು ಪರಮ ಪವಿತ್ರವಾದುದೆಂದು ಪೂಜಿಸುವ, ನಮ್ಮ  ಭಾವಕೋಶದಲ್ಲಿ ಸೇರಿ ಹೋಗಿರುವ,  ನಮ್ಮ ರಾಷ್ಟ್ರಗೀತೆಯಲ್ಲಿ ಉಲ್ಲೇಖಿತವಾಗಿ ನಮ್ಮವಳಾಗಿದ್ದ ಸಿಂಧು  ಭಾರತದಲ್ಲಿಯೂ ಸ್ವಲ್ಪ ದೂರ ಹರಿಯುತ್ತಾಳೆಂದು ನನಗೆ ಬಹುಕಾಲದವರೆಗೂ ಗೊತ್ತಿರಲೇ ಇಲ್ಲ. ನನ್ನ ಹಾಗೇ ಯೋಚಿಸುವವರು ತುಂಬಾ ಮಂದಿ ಇದ್ದಾರೆಂದು ಕೋರಾ ಎಂಬ ಪ್ರಶ್ನೋತ್ತರ ವಬ್ ಸೈಟ್ ನಲ್ಲಿ ಮಾಹಿತಿ ದೊರೆಯಿತು. ಕುತೂಹಲಕ್ಕಾಗಿ ಸಿಂಧುವಿನ ಬಗ್ಗೆ ಒಂದಷ್ಟು ವಿಷಯ ಸಂಗ್ರಹಿಸುತ್ತಿದ್ದಂತೆ ಆಕೆಯನ್ನೊಮ್ಮೆ ನೋಡಬೇಕು.  ಬೊಗಸೆಯಲ್ಲಿ ತುಂಬಿಕೊಳ್ಳಬೇಕು ಎಂಬ ಆಸೆ ಹೆಚ್ಚಾಗತೊಡಗಿತು. ಅದಕ್ಕಾಗಿಯೇ ಕಾಶ್ಮೀರ ಪ್ರವಾಸ ಕೈಗೊಂಡಾಗ ’ಸಿಂಧು ಉತ್ಸವ’ ನಡೆಯುವ ಸಮಯವನ್ನೇ ಆಯ್ದುಕೊಂಡು ಆಕೆಯ ದಂಡೆಯ ಮೇಲೆಲ್ಲಾ ಅಡ್ಡಾಡಿ ನನ್ನ ಬಯಕೆಯನ್ನು ತೀರಿಸಿಕೊಂಡೆ.

ಹಿಮಾಲಯದ ತಪ್ಪಲಿನ ರಾಜ್ಯಗಳ ಎರಡು ಬ್ರಹತ್ ನದಿಗಳಾದ ಸಿಂಧು ಮತ್ತು ಬ್ರಹ್ಮಪುತ್ರಾ ನದಿಗಳ ಉಗಮ ಸ್ಥಾನ ಈಗ ಚೀನಾದಲ್ಲಿರುವ ಭಾರತೀಯ ಶ್ರದ್ಧಾಕೆಂದ್ರವಾದ ಮಾನಸ ಸರೋವರ. ಸಟ್ಲೇಜ್ ನದಿ ಕೂಡಾ ಇಲ್ಲಿಯೇ ಹುಟ್ಟುತ್ತದೆ. ಬ್ರಹ್ಮಪುತ್ರಾ ನದಿ ಟಿಬೇಟ್ ನಲ್ಲಿ ಅರುಣಾಚಲ. ಅಸ್ಸಾಂ ಮೂಲಕ ಹರಿಯುತ್ತಾ ಬಾಂಗ್ಲಾದೇಶವನ್ನು ಹಸನುಗೊಳಿಸುತ್ತಾ ಬಂಗಾಲಕೊಲ್ಲಿಯನ್ನು ಸೇರುತ್ತಾಳೆ. ಸಿಂಧು ಕಾರಕೋರಂ ಹಿಮ ಪರ್ವತಗಳೆದೆಯಲ್ಲಿ ಬಾಗಿ ಬಳುಕುತ್ತಾ ಜಮ್ಮು ಕಾಶ್ಮೀರದ ಲೇಹ್ ಮೂಲಕ ಭಾರತವನ್ನು ಪ್ರವೇಶಿಸಿ ಅನಂತರ ಪಾಕಿಸ್ತಾನವನ್ನು ಸಮ್ರುದ್ಧಗೊಳಿಸುತ್ತಾ ಅರಬ್ಬಿ ಸಮುದ್ರವನ್ನು ಸೇರುತ್ತಾಳೆ. ವೇದದಲ್ಲಿ ಉಲ್ಲೇಖಿತವಾದ ಇನ್ನೆರಡು ದಿನಗಳಾದ ಗಂಗೆ ಯಮುನೆಯರು ಭಾರತದ್ಲ್ಲೇ ಹುಟ್ಟಿ, ಇಲ್ಲಿಯೇ ಹರಿಯುತ್ತಾ ಬಂಗಾಳಕೊಲ್ಲಿಯನ್ನು ಸೇರಿಕೊಳ್ಳುತ್ತಾರೆ. ಕಾವೇರಿಯ ಕಥೆ ನಮಗೆಲ್ಲಾ ಗೊತ್ತಿದೆ. ಆದರೆ ಭಾರತದ ಏಕೈಕ ಗಂಡು ನದಿಯೆಂದು ಕರೆಯಲಾಗುವ ಬ್ರಹ್ಮಪುತ್ರಾ ನದಿಯನ್ನು ವೇದಗಳಲ್ಲಿ ಯಾಕೆ ಉಲ್ಲೇಖಿಸಿಲ್ಲ? ಅಂದರೆ ನಿಜಾರ್ಥದಲ್ಲಿ ಸ್ತ್ರೀತ್ವಕ್ಕೆ ಮನ್ನಣೆಯಿದ್ದ ಕಾಲ ಅದಾಗಿರಬಹುದೆ? ಗೊತ್ತಿಲ್ಲ. ಇದ್ದಿರಲೂ ಬಹುದು.

ಈಗ ಸುದ್ದಿಯಲ್ಲಿರುವ ಸಿಂಧು, ಜಗತ್ತಿನ ಅತೀ ಉದ್ದದ ನದಿಗಳಲ್ಲಿ ಮುಖ್ಯವಾದುದು. ಇದರ ಉದ್ದ ೩೨೦೦ ಕಿಮೀ. ಇದರ ಉಗಮ ಸ್ಥಳ ಸಮುದ್ರ ಮಟ್ಟದಿಂದ ಹದಿನೆಂಟು ಸಾವಿರ ಎತ್ತರದಲ್ಲಿದೆ. ಭಾರತದಲ್ಲಿ ಮುನ್ನೂರು ಕಿ.ಮೀ ಹರಿದು  ಪಾಕಿಸ್ತಾನಕ್ಕೆ ಅಡಿಯಿಡುತ್ತಾಳೆ.  ಅದು ಚೀನಾದಿಂದ ಹರಿದು ಬಂದು ಭರತ ಭೂಮಿಗೆ ಮೊದಲ ಅಡಿಯಿಡುವುದೇ ಹನ್ನೊಂದವರೆ ಸಾವಿರ ಎತ್ತರದಲ್ಲಿರುವ ಜಮ್ಮು ಕಾಶ್ಮೀರದ ಲೇಹ್ ನಲ್ಲಿ. ಚಿಕ್ಕ ತೊರೆಯಂತೆ ಹರಿಯುವ ಆಕೆ ಬಹುಕಾಲ ಅನಾಮಿಕಳಂತೆ ಉಳಿದು ನನ್ನಂತವರಿಗೆಲ್ಲಾ ’ಸಿಂಧು ಬಾರತದಲ್ಲಿ ಹರಿಯುತ್ತಿದ್ದಾಳೆಯೇ? ಎಂದು ಪ್ರಶ್ನಿಸುವ ಹಾಗಾಗಿತ್ತು. ಆದರೆ ಲಾಲ್ ಕ್ರುಷ್ಣ ಅಡ್ವಾಣಿ ಎಂಬ ರಾಜಕಾರಣಿ ಮತ್ತು ತರುಣ್ ವಿಜಯ್ ಎಂಬ ಪತ್ರಕರ್ತನ ಕನಸಿನ ಫಲವಾಗಿ ಲೇಹ್ ನಲ್ಲಿ ’ಸಿಂಧು ಉತ್ಸವ ’ ಎಂಬ ಮೂರು ದಿನಗಳ ಅದ್ದೂರಿ ಕಾರ್ಯಕ್ರಮವನ್ನು ೧೯೯೭ರಿಂದ ಆಯೋಜನೆಗೊಳ್ಳುತ್ತಿದೆ. ಈ ಮೂಲಕ ಸಿಂಧು ನಮ್ಮವಳು, ನಮ್ಮ ಹೆಮ್ಮೆಯ ಪ್ರತೀಕ, ಭಾರತದ ಭಾವೈಕತೆಯ ಸಂಕೇತ ಎಂಬ ನಿಟ್ಟಿನಲ್ಲಿ ದೇಶದಾದ್ಯಂತ ಬಂದ ಜನರು ಈ ಉತ್ಸವದಲ್ಲಿ ಪಾಲುಗೊಳ್ಳುತ್ತಿದ್ದಾರೆ.

ಸಿಂಧು ಉತ್ಸವದಲ್ಲಿ ಜಮ್ಮು ಕಾಶ್ಮೀರ ಬಹುತೇಕ ಜಾನಪದ ನ್ರುತ್ಯಗಳು ಪ್ರದರ್ಶಿಸಲ್ಪಟ್ಟವು. ಭಾವುಕರು ಸಿಂಧು ಜಲವನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು ಪುನೀತರಾಗುತ್ತಿದ್ದರು. ಮಹಿಳೆಯರು ಆಕೆಯ ಮಡಿಲಿಗೆ ಬಾಗಿನಗಳನ್ನು ಅರ್ಪಿಸಿದರು ಆಸ್ತಿಕರು ಆ ನದಿ ದಂಡೆಯಲ್ಲೇ ಕುಳಿತು ಹೋಮ ಹವನಗಳನ್ನು ನಡೆಸುತ್ತಿದ್ದರು. ಪವಿತ್ರ ಜಲವನ್ನು ಬಾಟಲುಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಆದರೆ ಇವೆಲ್ಲವೂ ಸೈನ್ಯದ ಸರ್ಪಗಾವಲಿನಲ್ಲಿ ನಡೆಯುತ್ತಿದ್ದವು ಎಂಬುದು ಗಮನಿಸತಕ್ಕ ಅಂಶ. ಆ ಉತ್ಸವದಲ್ಲಿ ಕರ್ನಾಟಕದಿಂದ ಬಂದ ೧೭೫ ಪ್ರತಿನಿಧಿಗಳನ್ನು ಕಂಡು ನನಗೆ ತುಂಬಾ ಖುಷಿಯಾಯ್ತು.

ಲೇಹ್ ನಿಂದ ಮೂವತ್ತೈದು ಕಿಮೀ ದೂರದಲ್ಲಿ ಕಾರ್ಗಿಲ್ ಗಿಂತ ಸ್ವಲ್ಪ ಹಿಂದೆ ನಿಮ್ಮು ಎಂಬ ಚಿಕ್ಕ ಊರು ಸಿಗುತ್ತದೆ. ಅಲ್ಲಿ ಮ್ಯಾಗ್ನಟಿಕ್ ಹಿಲ್ ಪಕ್ಕ ಸಿಂಧುಕೊಳ್ಳವನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಅಲೌಕಿಕ ಅನುಭವ.. ಅಪ್ಘಾನಿಸ್ತಾನದಲ್ಲಿರುವ ಹಿಂದು ಕುಶ್ ಪರ್ವತವನ್ನು ನೋಡಬೇಕೆನ್ನುವುದು ನನ್ನ ಹೆಬ್ಬಯಕೆಗಳಲ್ಲೊಂದು. ಅದರ ಮಿನಿಯೇಚರನ್ನು ಇಲ್ಲಿ ಕಂಡಂತೆ ಭಾಸವಾಯ್ತು. ಅಲ್ಲಿಯೇ ಸ್ವಲ್ಪ ಮುಂದಕ್ಕೆ ಝೆನ್ಸಂಕಾರ್ ಮತ್ತು ಸಿಂಧು ನದಿಗಳ ಸಂಗಮವಾಗುತ್ತದೆ. ಅಚ್ಚ ನೀಲಿ ಬಣ್ಣದ ಸಿಂಧು ಮತ್ತು ಬೂದಿ ಬಣ್ಣದ ಝೆನ್ಸಂಕಾರ್ ಸಂಗಮದ ದ್ರುಶ್ಯವನ್ನು ಪದಗಳಲ್ಲಿ ವರ್ಣಿಸಲು ಬಾರದು. ಅದನ್ನು ಅನುಭವವೇದ್ಯವಾದುದು. ಆದರೆ ಇಲ್ಲೊಂದು ಅಚ್ಚರಿಯ ವಿಷಯವಿದೆ. ನಾವು ನದಿಯನ್ನು ಸ್ತ್ರೀಯಾಗಿ ಕಲ್ಪ್ಸಿಕೊಳ್ಳುತ್ತೇವೆ. ದೇವತೆಯಾಗಿ ಆರಾಧಿಸುತ್ತೇವೆ. ಎಲ್ಲಾ ನದಿಗಳಿಗೂ ನಾವು ಮಂದಿರವನ್ನು ಕಟ್ಟಿದ್ದೇವೆ. ಗಂಗೆ-ಯಮುನೆ, ನಂದಾದೇವಿ ಪರ್ವತ ಮಾತೆಯ ಗುಡಿಯನ್ನೂ ನೋಡಿದ್ದೇನೆ. ಆದರೆ ಸಿಂಧು ನದಿಗೆ ಎಲ್ಲಿಯೂ ಗುಡಿಯಿದ್ದದ್ದನ್ನು ನಾನು ನೋಡಿಲ್ಲ, ಕೇಳಿಲ್ಲ. ಯಾಕಿರಬಹುದು? ಇದು ಅಧ್ಯಯನ ಯೋಗ್ಯ ವಿಚಾರ.

ಕಾಶ್ಮೀರದ ಲೇಹ್ ನಲ್ಲಿ ನಡೆಯುವ ಸಿಂಧು ಉತ್ಸವ, ನಾಗಲ್ಯಾಂಡ್ ನಲ್ಲಿ ನಡೆಯುವ ಈಶಾನ್ಯ ರಾಜ್ಯಗಳ ಸಾಂಸ್ಕ್ರುತಿಕ ಮೇಳ ’ಹಾರ್ನ್ ಬಿಲ್ ಉತ್ಸವ’ ಸಾಂಸ್ಕ್ರುತಿಕವಾಗಿ ಅಲ್ಲಿನ ಜನತೆಯನ್ನು ಭಾರತದ ಇನ್ನಿತರ ಭಾಗದೊಡನೆ ಬೆಸೆಯುತ್ತದೆ. ಬಲಿಷ್ಟ ಭಾರತದ ಬಗ್ಗೆ ಮಾತಾಡುವ ನಾವು ಇಂತಹ ಉತ್ಸವಗಳಲ್ಲಿ ಹೆಚ್ಚೆಚ್ಚು ಭಾಗವಹಿಸುವುದರ ಮುಖಾಂತರ ನಾವದನ್ನು ಸಾಧ್ಯ ಮಾಡಬೇಕು.  ನಮ್ಮ ಮಿಳಿತ ಅವರಲ್ಲಿರುವ ಪರಕೀಯತೆಯ ಭಾವನೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು.



[ ಪ್ರಜಾವಾಣಿಯ ಭಾನುವಾರದ ಪುರವಣಿ ’ಮುಕ್ತಛಂದ’ ದಲ್ಲಿ ಪ್ರಕಟವಾಗಿರುವ ಲೇಖನ ]