Tuesday, May 26, 2015

ಕೆರೆಯ ಕರೆಗೆ ಕಿವಿಗೊಡುವವರಿಲ್ಲ....!

ನೈನಿತಾಲ್.
.

ವಿಸ್ತಾರವಾದ ಕೆರೆಗಳನ್ನು ನೋಡಿದಾಗ, ಅವು ನೀರುಣಿಸುವ ಕೃಷಿ ಭೂಮಿಯನ್ನು ಗಮನಿಸಿದಾಗ, ನಮ್ಮ ಹಿಂದಿನ ತಲೆಮಾರಿನ ಗ್ರಾಮೀಣ ಕೃಷಿ ತಂತ್ರಜ್ನರ ಬಗ್ಗೆ ಹೆಮ್ಮೆ ಮೂಡುತ್ತದೆ. ಶಿಕಾರಿಪುರದಲ್ಲಿರುವ ಮಾಸೂರು ಕೆರೆ, ಕುಣಿಗಲ್ ಕೆರೆ, ಸೂಳೆಕೆರೆ [ಶಾಂತಿಸಾಗರ]ಗಳು ವಿಸ್ತಾರವಾದ ಸರೋವರವನ್ನು ನೆನಪಿಸುತ್ತವೆ.

ಇತಿಹಾಸದ ವಿದ್ಯಾರ್ಥಿಗಳಿಗೆ ಇದು ಗೊತ್ತಿದೆ; ವಸಾಹತುಶಾಹಿ ವ್ಯವಸ್ಥೆ ಭಾರತದಲ್ಲಿ ತಳವೂರುವುದಕ್ಕೆ ಮೊದಲು ಇಲ್ಲಿ ಅಣೆಕಟ್ಟುಗಳ ಕಲ್ಪನೆ ಇರಲಿಲ್ಲ. ಕೆರೆಗಳೇ ಭಾರತದ ನೀರಾವರಿ ಮೂಲಗಳು. ಕೆರೆಗಳನ್ನು ಆಧರಿಸಿಯೇ ಇಲ್ಲಿ ಕೃಷಿ ಪದ್ಧತಿ ಜಾರಿಯಲ್ಲಿತ್ತು.

ಭಾರತದ ಯಾವ ಹಳ್ಳಿಗೆ ಹೋದರೂ ಅಲ್ಲಿ ಕನಿಷ್ಠ ಐದಾರು ಕೆರೆಗಳಿರುತ್ತಿದ್ದವು. ನಮ್ಮ ಕರ್ನಾಟಕದಲ್ಲಿಯೇ 38,608 ಸಣ್ಣ ನೀರಾವರಿ ಕೆರೆಗಳಿವೆ. ಕೆರೆಗಳು ಗ್ರಾಮಗಳ ಅವಿಭಾಜ್ಯ ಅಂಗ. ಇದರ ಉಸ್ತುವಾರಿಯನ್ನು ಸ್ಥಳೀಯ ಮುಖಂಡರೇ ನೋಡಿಕೊಳ್ಳುತ್ತಿದ್ದರು.

 ಭಾರತದಲ್ಲಿದ್ದ ಇಂತಹ ಅತ್ಯುತ್ತಮವಾದ ಜಲನಿರ್ವಹಣ ಪದ್ಧತಿಯನ್ನು ನೋಡಿ ಬೆಕ್ಕಸಬೆರಗಾದವರು ಇಲ್ಲಿಗೆ ಬಂದ ಇಂಗ್ಲೀಷರು. ಕೆರೆ ತುಂಬಿದ ಮೇಲೆ ತಂತಾನೆ ಹರಿದು ಹೋಗುವ ಅಥವಾ ಕೋಡಿ ಬೀಳುವ ವ್ಯವಸ್ಥೆ, ಯಾವುದೇ ಖರ್ಚು ವೆಚ್ಚಗಳಿಲ್ಲದೆ ಅದನ್ನು ಗ್ರಾಮಸ್ಥರು ನಿರ್ವಹಿಸುತ್ತಿದ್ದ ಪರಿ, ಅಂತರ್ಜಲ ಅಭಿವೃದ್ಧಿಗೆ ಕೆರೆಗಳ ಕೊಡುಗೆ...ಇದೆಲ್ಲಾ ಅವರಿಗೆ ವಿಸ್ಮಯ ಎನಿಸಿತ್ತು. ಏಕೆಂದರೆ, ಈ ರೀತಿಯಾಗಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿಡುವ ತಂತ್ರಜ್ನಾನ ಅಲ್ಲಿಯವರೆಗೂ ಯುರೋಪಿನಲ್ಲಿ ಅಭಿವೃದ್ಧಿಯಾಗಿರಲಿಲ್ಲ.
ಒಂದು ಮೂಲದ ಪ್ರಕಾರ, ಮಧ್ಯಪ್ರದೇಶದ ವಿಶಾಲವಾದ ಕೆರೆಯೊಂದನ್ನು ಅಧ್ಯಯನ ನಡೆಸಿದ ಬ್ರೀಟಿಶ್ ಎಂಜಿನಿಯರೊಬ್ಬ ಡ್ಯಂ ತಂತ್ರಜ್ನಾನವನ್ನು ಅಭಿವೃದ್ಧಿಪಡಿಸಿದನಂತೆ.
ಗ್ರಾಮ ಬೊಕ್ಕಸವನ್ನು ತುಂಬಿಸುವ ಉದ್ದೇಶದಿಂದ ಬ್ರೀಟಿಶರು ಗ್ರಾಮ ಮುಖಂಡರ  ಸುಪರ್ದಿಯಲ್ಲಿದ್ದ ಕೆರೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಬಳಕೆದಾರರಿಗೆ ತೆರಿಗೆಯನ್ನು ವಿಧಿಸಿದರು. ಗ್ರಾಮೀಣ ಜನರ ಭಾವಕೋಶಕ್ಕೆ ಸೇರಿದ್ದ ಕೆರೆಗಳು ಅವರಿಂದ ದೂರವಾದವು. ಊರ ಉಳಿವಿಗಾಗಿ ಗರ್ಭೀಣಿ ಸ್ತ್ರೀಯರು, ಸೊಸೆಯಂದಿರನ್ನು ಬಲಿಕೊಟ್ಟು ನೀರುಣಿಸಿದ ಕಥೆ ಲಾವಣಿಗಳು ಅರ್ಥ ಕಳೆದುಕೊಂಡವು. ಕ್ರಮೇಣ ಕೆರೆಗಳು ಹಾಳಾಗತೊಡಗಿದವು. ಹಾಗೆಯೇ ಅದರಲ್ಲಿ ಹೂಳು ತುಂಬತೊಡಗಿತು.

ನಮ್ಮಲ್ಲಿರುವ ಯಥೇಚ್ಛ ಕೆರೆಗಳು ನೀರಿನ ಸಮತೋಲನವನ್ನು ಕಾಯ್ದುಕೊಳ್ಳುತ್ತಿದ್ದವು; ಅಂತರ್ಜಲ ವೃದ್ಧಿಗೆ ಕಾರಣವಾಗುತ್ತಿದ್ದವು. ಹಾಗಾಗಿಯೇ ಕೆರೆಗಳು ಜಲಪಾತ್ರೆಗಳು ಅನ್ನಿಸಿಕೊಂಡವು. ಅಂದರೆ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ  ವೃದ್ಧಿಗೊಂಡು ಅಮ್ತ್ತೆ ಆವಿಯಾಗಿ, ಮಳೆಯಾಗಿ..ಹೀಗೆ ಜಲಚಕ್ರ ತಿರುಗುತ್ತಿತ್ತು..; ನೀರು ಮರು ಪೂರಣಗೊಳ್ಳುತ್ತಿತ್ತು. ಆದರೆ ಕೆರೆಗಳು ಹೂಳು ತುಂಬಿ ಅಥವಾ ಸೈಟುಗಳಾಗಿ ಪರಿವರ್ತನೆಗೊಂಡು ಈ ವರ್ತುಲ ಛಿಧ್ರಗೊಂಡಿತು.

ಕುಮಾರ ಬಂಗಾರಪ್ಪ ಸಣ್ಣ ನೀರಾವರಿ ಸಚಿವರಾಗಿದ್ದಾಗ ’ ಕಾಯಕ ಕೆರೆ’ ಎಂಬ ಯೋಜನೆಯಡಿಯಲ್ಲಿ ಕೆರೆಗಳ ಹೂಳು ತೆಗೆಯುವ ಕಾರ್ಯ ಆರಂಭವಾಗಿತ್ತು. ಇದಕ್ಕೆ ವಿಶ್ವಬ್ಯಾಂಕ್ ಕೂಡಾ ನೆರವು ನೀಡಿತ್ತು. ಬರಪೀಡಿತ ಪ್ರದೇಶದ ಜನರಿಗೆ ಉದ್ಯೋಗವನ್ನು ಒದಗಿಸುವುದಕ್ಕಾಗಿ ಸರಕಾರ ’ಕೂಲಿಗಾಗಿ ಕಾಳು’ ಎಂಬ ಯೋಜನೆಯನ್ನು ಜಾರಿಗೆ ತಂದಿತ್ತು. ಆ ಯೋಜನಡಿಯಲ್ಲಿ ಬರುವ ಜನರನ್ನು ಇಅದಕ್ಕಾಗಿ ಬಳಸಿಕೊಳ್ಳಬೇಕಾಗಿತ್ತು. ಆದರೆ ಹೂಳೆತ್ತುವ ಈ ಯೋಜನೆ ಗ್ರಾಮಾಂತರ ಪ್ರದೇಶದ ಸಣ್ಣಪುಟ್ಟ ರಾಜಕೀಯ ಪುಢಾರಿಗಳಿಗಳಿಗೆ ಒಳ್ಳೆ ಮೇವಿನ ತಾಣವಾಯಿತೇ ಹೊರತು ಇದರಿಂದ ಕೆರೆಯಂತೂ ಉದ್ಧಾರವಾಗಲಿಲ್ಲ.

ಮನಸು ಮಾಡಿದರೆ ಖಾಸಗಿ ಸಂಘಟನೆಗಳು ಇದನ್ನು ಅಚ್ಚುಕಟ್ಟಾಗಿ ಮಾಡಬಲ್ಲವು ಎಂಬುದಕ್ಕೆ ರಾಜಸ್ಥಾನ ಉತ್ತಮ ಉದಾಹರಣೆಯಾಗಬಲ್ಲುದು. ಅಲ್ಲಿನ ಪ್ರಮುಖ ದಿನಪತ್ರಿಕೆಯಾದ’ ರಾಜಸ್ತಾನ್ ಪತ್ರಿಕೆ’ ಒಂದು ಲಕ್ಷದ ಐವತ್ತೈದು ಸಾವಿರ ಸ್ವಯಂ ಸೇವಕರನ್ನು ಪ್ರೇರೆಪಿಸಿ 388 ಕೆರೆಗಳ ಹೂಳೆತ್ತಿಸಿ ಶುಚಿ ಮಾಡಿಸಿತು. ಚಿಕ್ಕ ಬಂಡುಗಳನ್ನು ನಿರ್ಮಿಸಿ ನೀರನ್ನು ಸದ್ಬಳಕೆ ಮಾಡಿತು.

ಬೀಮ್ ತಾಲ್[ ಉತ್ತರಾಖಂಡ್]
ಈಗ ಸಧ್ಯಕ್ಕೆ ಬೆಂಗಳೂರನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಇಲ್ಲಿ ಒಟ್ಟು 360 ಕೆರೆಗಳಿದ್ದುವೆಂದು ಇತಿಹಾಸ ಹೇಳುತ್ತದೆ. ಇಲ್ಲಿನ ಬೌಗೋಳಿಕ ಮೇಲ್ಮೈ ಹೇಗಿದೆಯೆಂದರೆ ಈ ಕೆರೆಗಳು ಪರಸ್ಪರ ಇಂಟರ್ ಲಿಂಕ್ ಆಗಿವೆ. ಮೇಲಿನ ಕೆರೆಗಳು ತುಂಬಿದ ಮೇಲೆ ಕೆಳಗಿನ ಕೆರೆಗಳು ತುಂಬಿಕೊಳ್ಳುತ್ತಿದ್ದವು. ಈ ನೈಸರ್ಗಿಕ ಕೆರೆಗಳಿಂದಾಗಿಯೇ ಬೆಂಗಳೂರು ಹವಾನಿಯಂತ್ರಿತ ನಗರವಾಗಿತ್ತು.

ತೀರ ಇತ್ತೀಚೆನವರೆಗೂ ಇಲ್ಲಿ 82 ಕೆರೆಗಳಿದ್ದವು. ಈಗ ಎರಡು ಡಜನಿನಷ್ಟು ಕೆರೆಗಳಿದ್ದರೆ ಅದು ಬೆಂಗಳೂರಿಗರ ಪುಣ್ಯ. ಅದರಲ್ಲಿ ಒಂಬತ್ತು ಕೆರೆಗಳಲ್ಲಿ ಮಾತ್ರ ನೀರಿದೆ. ಇವುಗಳಿಗೂ ಒತ್ತುವರಿ ವ್ಯಧಿ ತಗುಲಿಕೊಂಡಿದೆ. ಸರಕಾರವೇ ತೆರೆಮರೆಯಿಂದ ಈ ಕೆರೆಗಳನ್ನು ಖಾಸಗಿಯವರಿಗೆ ಮಾರುವ ಪ್ರಯತ್ನ ಮಾಡುತ್ತಿದೆ. ಒಂದೆರಡನ್ನು ಪಂಚತಾರಾ ಹೋಟೇಲ್ ನವರಿಗೆ ಗುತ್ತಿಗೆ ನೀಡಿದೆ.

ಕಳೆದ ವರ್ಷ ಇಂಡೋ-ನಾರ್ವೆ ಪ್ರಾಜೆಕ್ಟ್ ನಡಿಯಲ್ಲಿ ಹೆಬ್ಬಾಳ ಕೆರೆಯ ಹೂಳು ತೆಗೆಸಿ ಸ್ವಚ್ಛ ಮಾಡಲಾಗಿತ್ತು. ಹಾಗೆಯೇ ಸಾರ್ವಜನಿಕರಿಗಾಗಿ ಬೋಟಿಂಗ್- ವಿಹಾರಗಳಿಗೆ ಅಣಿಗೊಳಿಸಿ ಲಾಭ ಗಳಿಸುತ್ತಿತ್ತು. ಈಗ ಅದನ್ನು ಪಂಚತಾರ  ಹೋಟೇಲೋಂದಕ್ಕೆ ವಹಿಸಿಕೊಡಲಾಗಿದೆ. ತೀರಾ ಇತ್ತೀಚೆಗೆ ನಕ್ಕುಂಡಿ ಕೆರೆಯ 13 ಎಕ್ರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಪ್ರಯತ್ನ ನಡೆದಾಗ ಮೇಸ್ಟ್ರು ಒಬ್ಬರು ಮುತುವರ್ಜಿ ವಹಿಸಿ ಒತ್ತುವರಿಯನ್ನು ತಡೆಹಿಡಿದಿದ್ದರು.

ಕೆರೆಗಳು ಹಿಂದಿನಿಂದಲೂ ಸಾಮಾಜಿಕ ಸ್ವತ್ತು. ಅದನ್ನು ಖಾಸಗಿಯವರಿಗೆ ನೀಡಿ ಸೈಟುಗಳಾಗಿ ಪರಿವರ್ತಿಸಿದರೆ ನೈಸರ್ಗಿಕ ಅಸಮತೋಲನ ಉಂಟಾಗುವುದಿಲ್ಲವೇ? ಅಲಸೂರು ಕೆರೆಯ ಹೂಳು ತೆಗೆಸುವ ನೆಪದಲ್ಲಿ ಪೂರ್ಣ ನೀರನ್ನು ಖಾಲಿ ಮಾಡಿಸಿದ್ದರು. ಇದರಿಂದ ಕೆರೆಯ ಜೀವವೈವಿಧ್ಯತೆಯೇ ಗಂಡಾಂತರಕ್ಕೊಳಗಾಯ್ತು.

ವೈಶಂಪಾಯನ ಸರೋವರ[ಕುರುಕ್ಷೇತ್ರ]
ಕಾವೇರಿ ನದಿ ವಿವಾದ ಸಂದರ್ಭದಲ್ಲಿ ಇದೆಲ್ಲ ಮುಖ್ಯವೆನಿಸುತ್ತದೆ. ಅಂಕಿ ಅಂಶಗಳ ಪ್ರಕಾರ 2025 ನೇ ಇಸವಿಗೆ ಬೆಂಗಳೂರಿಗೆ 30 ಟಿಎಂಸಿ  ಕುಡಿಯುವ ನೀರಿನ ಅವಶ್ಯಕತೆ ಇರುತ್ತದೆ. ಈಗ ಬೆಂಗಳೂರಿನ ಜನತೆಯ ನೀರಿನ ಎಲ್ಲಾ ಅವಶ್ಯಕತೆಗಳನ್ನು ಕಾವೇರಿ ನದಿ ಪೂರೈಸುತ್ತಿದೆ. ವರ್ಷಗಳು ಕಳೆದಂತೆಲ್ಲಾ ನದಿ ನೀರಿನಲ್ಲೇನೂ ಹೆಚ್ಚಳ ಉಂಟಾಗುವುದಿಲ್ಲ. ಬದಲಾಗಿ ಪ್ರಕೃತಿ ಮೇಲಿನ ದೌರ್ಜನ್ಯದಿಂದಾಗಿ ಅಂತರ್ಜಲವೇ ಕುಂದಿ ಹೋಗುತ್ತದೆ. ಆದರೆ ಜನಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ. ನೀರಿನ ಬಳಕೆಯೂ ಗಣನೀಯವಾಗಿ ಏರಿಕೆಯಾಗುತ್ತದೆ. ಹೀಗಾಗಿಯೋ ಏನೋ ನೀರಿಗಾಗಿ ಜಗಳ, ವೈಮನಸ್ಸು ಮತ್ತೆ ಮತ್ತೆ ಮರುಕಳಿಸುತ್ತದೆ. ಹಾಗಾಗಿಯೇ ನೀರಿನ ಪರ್ಯಾಯ ಮೂಲಗಳನ್ನು ಹುಡುಕಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

ಇಷ್ಟಕ್ಕೂ ಬೆಂಗಳೂರಿಗೆ ಕಾವೇರಿ ನೀರಿನ ಮೇಲೆ ಯಾವ ಹಕ್ಕಿದೆ? ನಾಗರಿಕತೆ ಹುಟ್ಟಿಕೊಳ್ಳುವುದೇ ನದಿ ದಂಡೆಗಳಲ್ಲಿ.ಅಲ್ಲಿನ ಜನರೇ ಆ ನದಿ ನೀರಿನ ಮೊದಲ ಹಕ್ಕುದಾರರು. ಬೆಂಗಳೂರು ನದಿ ಪಾತ್ರದಲ್ಲಿರುವ ನಗರ ಅಲ್ಲ. ಅಲ್ಲದೆ ಸಮುದ್ರಮಟ್ಟದಿಂದ 1,500 ಅಡಿಗಳಷ್ಟು ಎತ್ತರದಲ್ಲಿರುವ ಪ್ರದೇಶ.

ಸುಮಾರು 120 ಕಿ.ಮೀ. ದೂರದಿಂದ ಈ ನಗರಕ್ಕೆ ಕಾವೇರಿ ನೀರು ಹರಿದು ಬರಬೇಕು. ಏಷ್ಯದ ಯಾವ ನಗರಕ್ಕೂ ಇಷ್ಟು ದೂರದಿಂದ ನೀರು ಸರಬರಾಜು ಆಗುತ್ತಿರುವ ಉದಾಹರಣೆ ಇಲ್ಲ. ಇಷ್ಟು ದೂರ ಮತ್ತು ಎತ್ತರಕ್ಕೆ ನೀರು ಹರಿಸಬೇಕಾದರೆ ಅಪಾರ ವೆಚ್ಚ ತಗುಲುತ್ತದೆ. ಹಾಗಾಗಿ ನೀರಿನ ಪರ್ಯಾಯ ಮೂಲಗಳತ್ತ ಗಮನ ಹರಿಸಲು ಇದು ಸೂಕ್ತ ಸಮಯ. ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಇದು ಇಂದಿನ ಅಗತ್ಯ ಮತ್ತ ಅನಿರ್ವಾಯವೂ ಹೌದು.
ಬೆಂಗಳೂರಿನ ಮಟ್ಟಿಗಾದರೆ ಮಳೆ ಕೊಯ್ಲನ್ನು ಕಡ್ಡಾಯಗೊಳಿಸಬಹುದು. ಯಾಕೆಂದರೆ ಇಲ್ಲಿ ವಾರ್ಷಿಕ 970ಮಿ.ಮೀ. ಮಳೆಯಾಗುತ್ತದೆ. ಇದು ಅತ್ಯಧಿಕ ಮಳೆ ಬೀಳುವ ಮಲೆನಾಡಿನ ಮಳೆಯ ಮೂರನೇ ಒಂದು ಭಾಗದಷ್ಟು ಆಗುತ್ತದೆ. ಒಂದು ಕುಟುಂಭದ ನೀರಿನ ಅವಶ್ಯಕತೆಗಳನ್ನು ಭರಿಸಲು ಇದು ಸಾಕು. ಒಂದು ವೇಳೆ ಕಡಿಮೆ ಬಿದ್ದರೆ ಕುಡಿಯಲು ಮಾತ್ರ ಕಾವೇರಿ ನೀರನ್ನು ಬಳಸಿಕೊಳ್ಳಬಹುದು. ತಮಿಳುನಾಡು ಸರಕಾರ ಕಾನೂನಿನ ಮೂಲಕ ಸಣ್ಣಪುಟ್ಟ ನಗರ, ಪಟ್ಟಣಗಳಲ್ಲಿ ಮಳೇ ಕೊಯ್ಲನ್ನು ಕಡ್ಡಾಯಗೊಳಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಹಸಿರು ಊರು ಎಂಬುದು ಕೇವಲ ಘೋಷಣೆಯ ವಾಕ್ಯವಾಗಬಾರದು. ಬೆಂಗಳೂರು ದಿನದಿಂದ ದಿನಕ್ಕೆ ಅಸ್ತಮಾ ರೋಗಿಗಳ ನಗರವಾಗುತ್ತಿದೆ. ಹಸಿರನ್ನು ಉಳಿಸಬೇಕಾದ್ರೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಜಾರಿಗೊಳಿಸಿದ ಕಾನೂನನ್ನು ಇಲ್ಲಿಯೂ ಕಡ್ಡಾಯವಾಗಿ ಜಾರಿಗೊಳಿಸಬೇಕಾಗುತ್ತದೆ. ಮನೆ ಕಟ್ಟುವಾಗ ಪೂರ್ಣ ಸೈಟಿನಲ್ಲಿ ಮನೆ ಕಟ್ಟಬಾರದು. ಶೇಕಡಾ ಅರುವತ್ತು ಭಾಗದಲ್ಲಿ ಮನೆ, ಉಳಿದ ನಲುವತ್ತು ಭಾಗದಲ್ಲಿ ಕೈತೋಟದ ನಿರ್ಮಾಣ ಮಾಡಬೇಕು. ಕೈತೋಟದ ಜತೆಯಲ್ಲಿಯೇ ಮಳೆ ಕೊಯ್ಲು ಕಡ್ಡಾಯವಾಗಬೇಕು.

ಒಂದು ಬಾಗಿಲು ಮುಚ್ಚಿದರೆ ನೂರು ಬಾಗಿಲುಗಳು ತೆರೆದುಕೊಳ್ಳುತ್ತವೆ. ಆ ಬಾಗಿಲುಗಳು ಎಲ್ಲೆಲ್ಲಿ ಇವೆ ಎಂಬುದನ್ನು ನಾವು ಹುಡುಕಿಕೊಳ್ಳಬೇಕು. ಜನಾನುರಾಗಿ ಚಕ್ರವರ್ತಿಯೊಬ್ಬ ತನ್ನ ಪ್ರಜೆಗಳ ಯೋಗಕ್ಷೇಮಕ್ಕಾಗಿ ಏನು ಮಾಡುತ್ತಿದ್ದ ಗೊತ್ತೆ? ಕೆರೆಕಟ್ಟೆಗಳನ್ನು ಕಟ್ಟಿಸುತ್ತಿದ್ದ. ಅರವಟ್ಟಿಗೆಗಳನ್ನು ನಿರ್ಮಿಸುತ್ತಿದ್ದ. ಸಾಲುಮರಗಳನ್ನು ನೆಡುತ್ತಿದ್ದ.
ಇಂದಿಗೂ ಮನುಷ್ಯನ ಮೂಲಭೂತ ಅವಶ್ಯಕತೆಗಳು ಅವೇ ಆಗಿವೆ. ಅಂದು ಚಕ್ರವರ್ತಿ ನೀಡುತ್ತಿದ್ದ, ಇಂದು ಪ್ರಜಾಸರ್ಕಾರ ಅವನ್ನು ಒದಗಿಸಿಕೊಡಬೇಕು. ಸರಕಾರಗಳು ದೂರದರ್ಶಿತ್ವ ಹೊಂದಿರಬೇಕು. ಆದರೆ, ನಮ್ಮ ಸರಕಾರದ ಯೋಜನೆಗಳೆಲ್ಲಾ ಕೇವಲ ಕರಡು ಪ್ರತಿಗಳಲ್ಲಿಯೇ ಉಳಿಯುತ್ತಿವೆ. ಅದು ಕಾರ್ಯಗತವಾಗುವುದೇ ಇಲ್ಲ. ಅದು ನಮ್ಮ ದುರಂತ.

[ ಇದು ’ಅಗ್ನಿ’ವಾರಪತ್ರಿಕೆಯಲ್ಲಿ 2007ರ ಮಾರ್ಚ್ 8ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಅಂದರೆ ಎಂಟುವರ್ಷಗಳ ಹಿಂದಿನ ಬರಹ. ಎಲ್ಲೋ ರದ್ದಿಯಲ್ಲಿ ಸೇರಿಕೊಂಡದ್ದು ಇವತ್ತು ಅಕಸ್ಮತ್ತಾಗಿ ಸಿಕ್ಕಿತು!]