Monday, July 22, 2013

ಪೇಸ್ ಬುಕ್ ಎಂಬ ’ಪ್ರತಿಮಾ ಲೋಕ’



 ವೈಯ್ಯಕ್ತಿಕ ಸಂಬಂಧಗಳಲ್ಲಿ ಪೇಸ್ ಬುಕ್ ತಂದೊಡ್ಡುವ ಸಮಸ್ಯೆಗಳನ್ನು ನೀವು ಪತ್ರಿಕೆಗಳಲ್ಲಿ ಆಗಾಗ ಓದಿಯೇ ಇರುತ್ತೀರಿ. ಅದು ಸಂಸಾರಗಳನ್ನು ಒಡೆದಿದೆ. ಗೆಳೆತನದ ಮಧ್ಯೆ ಬಿರುಕು ತಂದಿದೆ. ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ.
ಚಿತ್ರಕೃಪೆ; ಅಂತರ್ಜಾಲ.
ಈಗ ನನ್ನ ಮುಂದೆ ಎರಡು ಪತ್ರಿಕಾ ವರದಿಗಳಿವೆ; ಇದು ಎಲ್ಲೆಲ್ಲಿಯೋ ನಡೆದದ್ದಲ್ಲ. ನನ್ನದೇ ಜಿಲ್ಲೆಯಾದ ಅವಿಭಜಿತ ದಕ್ಷಿಣಕನ್ನಡದಲ್ಲಿ ನಡೆದ ಘಟನೆಗಳಿವು..  ಪೇಸ್ ಬುಕ್ ನಲ್ಲಿ ಪರಿಚಯವಾದ ,ಪೇಸ್ ಬುಕ್ ನಿಂದಾಚೆ ಎಂದೂ ಬೇಟಿಯಾಗದ ಹುಡುಗನೊಬ್ಬನ ಸವಿನುಡಿಗಳಿಗೆ ಮರುಳಾಗಿ ಆತನ ಕಷ್ಟಗಳಿಗೆ ಮರುಗಿ ಮೊದಲ ಬೇಟಿಯಲ್ಲೇ ತನ್ನ ಕತ್ತಿನಲ್ಲಿದ್ದ ಚಿನ್ನದ  ಸರ, ಕೈಯ್ಯ ಬಳೆಗಳನ್ನು ಕೊಟ್ಟು ಇಂಗು ತಿಂದ ಮಂಗನಂತಾದ ಹುಡುಗಿಯೊಬ್ಬಳ ಕಥೆ. ಇನ್ನೊಂದು ಘಟನೆಯಲ್ಲಿ ಬೆಂಗಳೂರಿನ ಯುವಕನೊಬ್ಬ ತನ್ನ ಜೀವಮಾನದ ದುಡಿತವೆಲ್ಲವನ್ನೂ ಅಂದರೆ ಸುಮಾರು ಹದಿನಾಲ್ಕು ಲಕ್ಷದಷ್ಟು ಹಣವನ್ನು ಗುರುತು ಪರಿಚಯವಿರದ ಹುಡುಗಿಯೊಬ್ಬಳ ಪಾದಗಳಿಗೆ ಸುರಿದು ಅವಳನ್ನು ನೋಡಬೇಕೆಂಬ ಹಪಹಪಿಕೆಯಿಂದ ಅವಳು ಪೇಸ್ ಬುಕ್ ನಲ್ಲಿ ಕೊಟ್ಟ ವಿಳಾಸವನ್ನಿಡಿದುಕೊಂಡು ಪುತ್ತೂರಿನಲ್ಲೆಲ್ಲಾ ಸುತ್ತಾಡಿ ಅವಳು ಸಿಗದೆ ನೆಲ್ಯಾಡಿಯಲ್ಲಿ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ಅ ದುರಂತ ಘಟನೆ..

ಇದೆರಡು ಘಟನೆಗಳು ಕೇವಲ ಪ್ರಾಸಂಗಿಕವಷ್ಟೇ. ಇಂತಹ ಸಾವಿರ ಸಾವಿರ ಪೇಸ್ ಬುಕ್ ವಂಚನೆಯ ಉದಾಹರಣೆಗಳನ್ನು ನಾನು ನೀಡಬಲ್ಲೆ. ಪೇಸ್ ಬುಕ್ ಎಂಬುದು ಇಂಟರ್ ನೆಟ್ ನಲ್ಲಿರುವ ಒಂದು ಸಾಮಾಜಿಕ ತಾಣ. ಸೋಷಿಯಲ್ ನೆಟ್ ವರ್ಕ್ ಎಂಬುದು ನಿಮಗೆಲ್ಲಾ ಗೊತ್ತಿರುತ್ತೆ. ನಿಮ್ಮಲ್ಲಿ ಒಂದು ಕಂಪ್ಯೂಟರ್  ಮತ್ತು ಅದಕ್ಕೆ ಇಂಟರ್ ನೆಟ್ ಸಂಪರ್ಕ [ಪೋನ್ ಮೂಲಕ] ಇದ್ದರೆ ನೀವು ನಿಮ್ಮದೇ ಆದ ಒಂದು ಪೇಸ್ ಬುಕ್ ಅಕೌಂಟ್ ಅನ್ನು ಹೊಂದಬಹುದು..ಬ್ಯಾಂಕ್ ನಲ್ಲಿ ಹಣ ಜಮಾ ಮಾಡಿದ ಹಾಗೆ ನಿಮ್ಮ ಭಾವನೆಗಳನ್ನು, ಅಲೋಚನೆಗಳನ್ನು, ವಿಚಾರಗಳನ್ನು ನೀವಿಲ್ಲಿ ಬರೆಯುತ್ತಾ ಹೋಗಬಹುದು. ಅದನ್ನು ಓದಿದ ಇತರ ಅಕೌಂಟ್ ದಾರಾರು ಅವುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅಲ್ಲಿ ವ್ಯಕ್ತ ಪಡಿಸುತ್ತಾರೆ. ಅಲ್ಲೊಂದು ಬಹಿರಂಗ ಸಂವಾದ ಏರ್ಪಡುತ್ತದೆ. ಈ ಸಂವಾದದ ಬಗ್ಗೆ ಹೆಚ್ಚೇನಾದರೂ ಆಪ್ತವಾಗಿ ಹೇಳಬೇಕಾಗಿದ್ದರೆ ಅದಕ್ಕೂ ಅವಕಾಶವಿದೆ. ಅದೇ ಇನ್ ಬಾಕ್ಸ್ ಎಂಬ ಖಾಸಗಿ ಕೋಣೆ; ಆಪ್ತ ಆವರಣ. ಅಲ್ಲಿ ನೀವು ಎಷ್ಟು ಬೇಕಾದರೂ ಹರಟೆ ಹೊಡೆಯಬಹುದು. ವಾಗ್ವಾದ ನಡೆಸಬಹುದು ಲಲ್ಲೆ ಗೆರೆಯಬಹುದು. ಮೇಲೆ ಪ್ರಸ್ತಾಪಿಸಿದಂತಹ ಖಾಸಗಿ ದುರಂತಗಳಿಗೆ ಕಾರಣವಾಗುವುದೇ ಈ ಇನ್ ಬಾಕ್ಸ್ ಚಾಟಿಂಗ್.

ಕೇವಲ ಹುಡುಗ-ಹುಡುಗಿಯರಷ್ಟೇ ಈ ಪೇಸ್ ಬುಕ್ ಎಂಬ ಮಾಯಾಂಗನೆಯ ತೆಕ್ಕೆಯೊಳಗೆ ಬೀಳುತ್ತಾರೆಂದುಕೊಳ್ಳಬೇಡಿ. ಪ್ರೀತಿ, ವಿಶ್ವಾಸ, ನಂಬಿಕೆಗಾಗಿ ಹಂಬಲಿಸುವ ಎಲ್ಲಾ ವಯಸ್ಸಿನವರೂ ಇದರ ಮೋಹ ಜಾಲಕ್ಕೆ ಬೀಳುತ್ತಾರೆ, ಪಂಚೇಂದ್ರಿಯಗಳಿಗೆ ಎಂದೂ ಸಿಗದ ನಿಗೂಡ ವ್ಯಕ್ತಿಯೆದುರು ಕನ್ಪೆಕ್ಷನ್ ಬಾಕ್ಸ್ ನಲ್ಲಿ ನಿಂತು ಎಲ್ಲವನ್ನೂ ಹೇಳಿಕೊಂಡಂತೆ ಹೇಳಿಕೊಳ್ಳುವವರಿದ್ದಾರೆ. ಹಾಗೆ ಮಾತನಾಡುತ್ತಲೇ ಪರಸ್ಪರ ಆತ್ಮಬಂಧುವಾಗಿಬಿಡುವ ಸಹೃದಯರೂ ಇದ್ದಾರೆ. ಜೊತೆಗೆ ತಮ್ಮ ಸಿಹಿ ಮಾತುಗಳ ಬಲೆಯಲ್ಲಿ ಕೆಡವಿಕೊಂಡು ಅವರನ್ನು ಭಾವನಾತ್ಮಕವಾಗಿ ದೋಚಿ ಬಿಡುವ ವಿಕ್ಷಿಪ್ತರೂ ಇದ್ದಾರೆ. ಅದು ಇನ್ ಬಾಕ್ಸ್ ನಲ್ಲಿ ವ್ಯವರಿಸುವ ರೀತಿಯನ್ನು ಅವಲಂಭಿಸಿರುತ್ತದೆ.

  ’ಪೇಸ್ ಬುಕ್ ವಂಚನೆಯ ಬಗ್ಗೆ ನಾನೊಂದು ಲೇಖನ ಬರೆಯಬೇಕೆಂದಿರುವೆ. ವಂಚನೆಗೊಳಗಾಗಿರುವವರಲ್ಲಿ ಹುಡುಗಿಯರು ಹೆಚ್ಚಿರಬಹುದೋ..ಹುಡುಗರು ಹೆಚ್ಚಿರಬಹುದೋ’ ಎಂಬ ಸ್ಟೇಟಸ್ ಒಂದನ್ನು ನನ್ನ ಪೇಸ್ ಬುಕ್ ಟೈಮ್ ಲೈನ್ ನಲ್ಲಿ  ಹಾಕಿದ್ದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ವಂಚಿಸುವುದರಲ್ಲಿ ಇಬ್ಬರೂ ಸಮಾನರು ಎಂಬುದು ವ್ಯಕ್ತವಾಗುತ್ತಿತ್ತು. ಬಹಿರಂಗವಾಗಿ ಹೇಳಿಕೊಳ್ಳಲಾರದವರು ನನ್ನ ಇನ್ ಬಾಕ್ಸ್ ನಲ್ಲಿ ಮೆಸೇಜ್ ಹಾಕಿ ತಮ್ಮ ವೇದನೆಯನ್ನು ತೋಡಿಕೊಂಡಿದ್ದರು. ತಾವು ತಮ್ಮನ್ನು ನಂಬಿದವರಿಗಾಗಿ ಕೊಟ್ಟ ವಸ್ತು, ಹಣ ಒಡವೆಗಳ ಪಟ್ಟಿಯನ್ನು ಕೊಟ್ಟಿದ್ದರು. ಹೀಗೆ ವಸ್ತು, ಒಡವೆ, ಹಣ ಕೊಟ್ಟವುಗಳನ್ನು ನಾವು ಭವಿಷ್ಯದಲ್ಲಿ ಮತ್ತೆ ಸಂಪಾದಿಸಬಹುದು..ಕಾಲಕ್ರಮೇಣ ಅದನ್ನು ಮರೆಯಲೂ ಬಹುದು. ಆದ್ರೆ ಮನಸ್ಸು ಒಡೆದು ಹೋದರೆ.? ನಾವು ಮುಂದೆ ಯಾರನ್ನೂ ನಂಬಲಾರದ ಸ್ಥಿತಿಯನ್ನು ತಲುಪಿದರೆ..? ಆಗ ಅದು ನಿಜವಾದ ದುರಂತ!

 ಯಾಕೆ ಹೀಗೆ ನಾವೆಲ್ಲಾ ಮೋಸ ಹೋಗುತ್ತೇವೆ.? ಮೋಸ ಮಾಡುತ್ತೇವೆ. ಇಲ್ಲಿ ಯಾರನ್ನು ನಾವು ದೋಷಿಗಳನ್ನಾಗಿ ಮಾಡಬಹುದು ? ಹಾಗೆ ಯಾರನ್ನಾದರೂ ದೋಷಿ ಸ್ಥಾನದಲ್ಲಿ ನಿಲ್ಲಿಸುವುದೇ ಆದಲ್ಲಿ ಅದು ನಮ್ಮ ಮನಸ್ಸನ್ನೇ.. ಯಾಕೆಂದರೆ..ಮನುಷ್ಯನಿಗೊಂದು ಅವಲಂಬನೆ ಬೇಕು.ನಂಬಿಕೆ ಬೇಕು.

ಬದುಕು ನಿಂತಿರುವುದೇ ನಂಬಿಕೆಗಳ ಮೇಲೆ. ನಮಗೆ ನಂಬಲು ದೇವರು ಬೇಕು; ಆತನನ್ನು ಒಲಿಸಿಕೊಳ್ಳಲು ಆಚರಣೆಗಳು ಬೇಕು. ಅನುಕರಿಸಲು ಮಹಾಪುರುಷರು ಬೇಕು. ಅಂತರಂಗದ ಭಾವನೆಗಳನ್ನು ತೆರೆದಿಡಲು ನಂಬಿಕೆಯ ಹೆಗಲು ಬೇಕು; ನೆಮ್ಮದಿಯ ಮಡಿಲು ಬೇಕು. ಅದಕ್ಕಾಗಿ ನಮ್ಮ ಮನಸ್ಸು ಸದಾ ಅಲೆಮಾರಿಯಂತೆ ಅಲೆದಾಡುತ್ತಲೇ ಇರುತ್ತದೆ. ಹಾಗೆ ಅಲೆದಾದುವಾಗ ಸಿಗುವ ತಂಗುದಾಣಗಳಲ್ಲಿ ಈ ಪೇಸ್ ಬುಕ್ ಕೂಡಾ ಒಂದು.

ಚಿತ್ರಕೃಪೆ; ಅಂತರ್ಜಾಲ.
ಒಂದು ಹೆಣ್ಣು ಏಕಾಂತದಲ್ಲಿ, ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಿದಾಗ ಒಬ್ಬ ಗಂಡಸಿನ ನಡವಳಿಕೆ ಹೇಗಿರುತ್ತದೆ ಎಂಬುದರ ಮೇಲೆ ಒಬ್ಬ ಗಂಡಸಿನ ಸ್ವಭಾವ ನಿರ್ಧಾರಿತವಾಗುತ್ತದೆ. ಹಾಗೆಯೇ ಸಹೃದಯಿ ಗಂಡಸೊಬ್ಬ ತನ್ನ ಆಪ್ತ ಆವರಣಕ್ಕೆ ಪ್ರವೇಶ ಪಡೆದಾಗ ಒಬ್ಬ ಹೆಣ್ಣು ಮಗಳು ಹೇಗೆ ವರ್ತಿಸುತ್ತಾಳೆ ಮತ್ತು ಆತನಿಂದ ಏನನ್ನು ನಿರೀಕ್ಸಿಸುತ್ತಾಳೆ  ಎಂಬುದು ಕೂಡಾ ಅವಳ ಸಹಜ ಸ್ವಭಾವದ ಅನಾವರಣಕ್ಕೆ ಕಾರಣವಾಗುತ್ತದೆ .ಪೇಸ್ ಬುಕ್ ಅಂತಹ ಏಕಾಂತದ ಕ್ಷಣಗಳನ್ನು  ಹುಡುಗ-ಹುಡುಗಿಯರಿಗೆ ಯಥೇಚ್ಛವಾಗಿ ಒದಗಿಸಿಕೊಟ್ಟಿದೆ. ಇದು ತಪ್ಪಲ್ಲ. ಭಾವನೆಗಳನ್ನು ಹೊರಹಾಕಲು ಇದೊಂದು ರಹದಾರಿ ಅಷ್ಟೇ. ಆದರೆ ಈ ಪರಿಚಯ ಅವಲಂಬನೆಯಾಗಿ ಬೆಳೆಯುತ್ತಿದೆ..ಮನಸ್ಸು ಸದಾ ಅವನನ್ನೇ\ಅವಳನ್ನೇ ಧೇನಿಸುತ್ತಿದೆ..ಚಿತ್ತ ಚಾಂಚಲ್ಯದಿಂದಾಗಿ ತನ್ನ ಧೈನಂದಿನ ಕೆಲಸ ಕಾರ್ಯಗಳಲ್ಲಿ ಏರು ಪೇರಾಗುತ್ತದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಆ ಅಪರಿಚಿತ ಬಂಧುವನ್ನು ಪೇಸ್ ಬುಕ್ ನಿಂದಾಚೆ ಭೇಟಿಯಾಗಬೇಕು. ಹಾಗೊಮ್ಮೆ ಭೇಟಿಯಾಗಿಬಿಟ್ಟರೆ ’ ಓ ಅವರು..ಇವರೇನಾ?’ ಎಂಬ ಉದ್ಗಾರವೊಂದು ನಿಮ್ಮ ಬಾಯಿಯಿಂದ ಹೊರಡದಿದ್ದರೆ ಕೇಳಿ...!

ಯಾಕೆಂದರೆ ಬಹುತೇಕ ಎಲ್ಲರೂ ಮುಖವಾಡಗಳಲ್ಲೇ ಬದುಕುತ್ತಾರೆ. ನಮ್ಮ ಮನಸ್ಸಿನಲ್ಲೇ ಹುಟ್ಟಿ, ಅಲ್ಲಿಯೇ ರೂಪವೊಡೆದು ಅದನ್ನೇ ಅಪಾರವಾಗಿ ಪ್ರೀತಿಸಿದ ವ್ಯಕ್ತಿತ್ವಗಳು ಪರಸ್ಪರ ಎದುರು-ಬದುರಾದರೆ ಅಪರಿಚಿತರಂತೆ ವರ್ತಿಸಲಾರರೇ? ಪೇಸ್ ಬುಕ್ ಪ್ರೇಮದಿಂದ ಭ್ರಮ ನಿರಸನಗೊಂಡವರನ್ನು ಆತ್ಮೀಯತೆಯಿಂದ ಮಾತಾಡಿಸಿ, ಅನುನಯಯಿಸಿ ಕೇಳಿ..ತಮ್ಮ ಮೂರ್ಖತವನ್ನು ಅವರು ಮುಜುಗುರದಿಂದಲೇ ಒಪ್ಪಿಕೊಳ್ಳುತ್ತಾರೆ. ಹಾಗಾಗಿಯೇ ನಾನು ಹೇಳಿದ್ದು ಭಾವನೆಗಳಿಗೆ ಪಕ್ಕಾಗಿ ಮನಸ್ಸು ಒಪ್ಪಿಕೊಂಡಿದ್ದನ್ನು ಕಣ್ಣು ಪರಾಂಬರಿಸಿ ನೋಡುತ್ತದೆ. ನಮಗೆ ಬೇಕಾದ ಗುಣಗಳನ್ನು ಆ ವ್ಯಕ್ತಿಗೆ ಆರೋಪಿಸಿ ಅವನಿಗೊಂದು ವ್ಯಕ್ತಿತ್ವ ಕೊಟ್ಟ ನಾವು ಅವನ\ಅವಳ ನಿಜ ವ್ಯಕ್ತಿತ್ವ ಕಂಡು ದಂಗಾಗುತ್ತೇವೆ..

ಇನ್ನು ಕೆಲವರಿರುತ್ತಾರೆ, ತಮ್ಮ ಕೆಲಸದ ಒತ್ತಡದ ಮಧ್ಯೆ ರಿಲ್ಯಾಕ್ಸ್ ಆಗಲೆಂದೇ ಪೇಸ್ ಬುಕ್ ಪ್ರೆಂಡ್ಸ್ ಜೊತೆ ಹರಟೆ ಹೊಡೆಯುತ್ತಾರೆ. ಇಂತವರು ಕಾಲಹರಣ ಮಾಡಲೆಂದೇ ಮಾತಿನ ಮಂಟಪ ಕಟ್ಟುತ್ತಾರೆ. ಇವರು ಎಂದೂ ಪೇಸ್ ಬುಕ್ ನಿಂದಾಚೆ ನಿಮ್ಮನ್ನು ಬೇಟಿಯಾಗಲಾರರು. ಇಂತವರ ಬಗ್ಗೆ ಎಚ್ಚರದಿಂದಿರಬೇಕು. ಯಾವುದೇ ಮೋಹ ಬಂಧನಕ್ಕೆ ಒಳಪಡದ.ಇವರು ನಂಬಿದವರ ಎದೆ ಒಡೆದು ಬಿಡುತ್ತಾರೆ. ಇವರಿಗೆ ಯಾವುದೇ ಬಂದನಗಳು, ಜವಾಬ್ದಾರಿಗಳು ಬೇಡ. ಆದರೆ ಯಾವುದೇ ಒಂದು ಒಳ್ಳೆಯ ಸಂಬಂಧ ಕೆಲವೊಂದಷ್ಟು ಆದರ್ಶಗಳನ್ನು ಹೊಂದಿರುತ್ತದೆ.ಮತ್ತು ಜವಾಬ್ದಾರಿಯನ್ನು ಬೇಡುತ್ತದೆ.

ಚಿತ್ರಕೃಪೆ; ಅಂತರ್ಜಾಲ.
ಕಳೆದ ವರ್ಷ ಪೇಸ್ ಬುಕ್ ನಲ್ಲಿ ಪರಿಚಯವಾಗಿ ಮದುವೆಯ ಬಂಧನಕ್ಕೆ ಒಳಗಾದ ಸರಳ ಮದುವೆಯೊಂದರಲ್ಲಿ ನಾನು ಭಾಗಿಯಾಗಿದ್ದೆ. ವಾರ ಕಳೆಯುವಷ್ಟರಲ್ಲೇ ಅವರಲ್ಲಿ ಪರಸ್ಪರ ಜಗಳ ಆರಂಭವಾಗಿತ್ತು. ಅವರದನ್ನು ನನ್ನಲ್ಲಿ ದೂರಿಕೊಂಡಿದ್ದರು.  ತಿಂಗಳು ಕಳೆಯುವಷ್ಟ್ರಲ್ಲೇ ಆ ದಂಪತಿಯಿಂದ  ಒಂದು ಕಿರು ಕಾದಂಬರಿಗಳಾಗುವಷ್ಟು ಇಮೇಲ್ ಸಂಭಾಷಣೆಗಳು ನನಗೆ ರವಾನೆಯಾಗಿದ್ದವು. ಈಗವರು ವಿಛ್ಚೇದನಕ್ಕಾಗಿ ಅರ್ಜಿ ಹಾಕಿಕೊಂಡಿದ್ದಾರೆ. ಇಲ್ಲಿ ತಪ್ಪಾಗಿರುವುದು ಎಲ್ಲಿ? ಖಂಡಿತಾವಾಗಿಯೂ ನಾನು ಮೇಲೆ ಹೇಳಿದಂತೆ ಪರಸ್ಪರ ಸುಳ್ಳು ವ್ಯಕ್ತಿತ್ವಗಳನ್ನು ಅವರು ಪ್ರೊಜೆಕ್ಟ್ ಮಾಡಿಕೊಂಡಿದ್ದೆ ಕಾರಣ. ಒಟ್ಟಾಗಿ ಬದುಕಲು ಆರಂಭಿಸಿದಾಗ ಒಂದೊಂದಾಗಿ ಭ್ರಮೆಗಳೆಲ್ಲಾ ಕಳಚಿಕೊಳ್ಳತೊಡಗಿದವು. ಹಾಗಾಗಿಯೇ ಒಂದು ಅಮೂರ್ತ ಸಂಬಂಧಕ್ಕಾಗಿ ಸರ್ವಸ್ವವನ್ನು ಒಪ್ಪಿಸಿಬಿಡುವ ಮೊದಲು, ಮನಸ್ಸು ಆಳಕ್ಕಿಳಿಯುವ ಮುನ್ನವೇ  ಪರಸ್ಪರ ಭೇಟಿಯಾಗಿ ಒಡನಾಟದಿಂದ ಅದಕ್ಕೊಂದು ಸ್ಪಷ್ಟ ರೂಪಕೊಟ್ಟು ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳುವುದು ಮುಖ್ಯವಾದುದು. ಬಹುತೇಕ ಪೇಸ್ ಬುಕ್ ಸಂಬಂಧಗಳು ಈ ಹಂತದಲ್ಲೇ ಕಳಚಿಕೊಳ್ಳುತ್ತವೆ. ಆಮೇಲೆಯೂ ಉಳಿದುಕೊಂಡು ನಂತರ ಏನೇ ನಡೆದರೂ ಅದು ;ವಿಧಿ ಚಿತ್ತ’ ಎಂಬ ಸಮಾಧಾನವಾದರೂ ನಮಗೆ ದೊರೆಯಬಹುದು..

ಪೇಸ್ ಬುಕ್ ನಿಂದಾಗಿ ಸಂಬಂಧಗಳು ಹಾಳಾಗುತ್ತವೆ. ನಂಬಿಕೆ ದ್ರೋಹಗಳಾಗುತ್ತವೆ ಎನ್ನುವವರಿಗೆ ನನ್ನದೊಂದು ಅನುಭವದ ಮಾತು; ನಾವು ಚಿಕ್ಕವರಿರುವಾಗ  ಹೆಚ್ಚು ರೇಡಿಯೋ ಕೇಳಿದರೆ ಈ ಮಕ್ಕಳೆಲ್ಲಾ ಹಾಳಗ್ತಿದ್ದಾರೆ ಅಂತ ನಮ್ಮ ಹೆತ್ತವರು ನಮಗೆ ಬಯ್ಯುತ್ತಿದ್ದರು. ಟೀವಿ ಬಂದಾಗ ನಮ್ಮ ಯುವ ಜನಾಂಗವೆಲ್ಲಾ ನೈತಿಕವಾಗಿ ಕೆಳಮಟ್ಟಕ್ಕೆ ಇಳಿದು ಹೋದರು ಎಂದು ಹಿರಿಯ ತಲೆಮಾರಿನವರು ಇದಕ್ಕಿಂತಲೂ ಜಾಸ್ತಿ ಕಳವಳಪಟ್ಟರು. ಈಗ ಇಂಟರ್ ನೆಟ್ ಬಂದ ಮೇಲಂತೂ ಬೇಕಾದ್ದು ಬೇಡದ್ದು ಎಲ್ಲವೂ ಬೆರಳ ತುದಿಯಲ್ಲಿ ಸಿಕ್ಕುತ್ತಿದೆ. ಅದು ಇಂದಿನ ಅಗತ್ಯ ಕೂಡಾ. ಅದಕ್ಕೆ ನಾವು ಬೆನ್ನು ಹಾಕಿ ಕೂರಲಾದೀತೆ?  ಎಲ್ಲಾ ಅವಿಷ್ಕಾರಗಳಿಗೂ ಒಳಿತು ಮತ್ತು ಕೆಡುಕಿನ ಎರಡು ಮುಖಗಳು ಇದ್ದೇ ಇರುತ್ತವೆ. ಆದರೆ ನಾನು ಯಾವುದಕ್ಕೆ ತೆರೆದುಕೊಳ್ಳಬೇಕು ಮತ್ತು ಎಷ್ಟು ತೆರೆದುಕೊಳ್ಳಬೇಕು ಎಂಬುದರ ಬಗ್ಗೆ ನಮಗೆ ಸ್ಪಷ್ಟವಾದ ಅರಿವಿರಬೇಕು. ಆ ಅರಿವು ಎಲ್ಲಿಂದ ಬರುತ್ತದೆ. ನಿಶ್ಚಯವಾಗಿ ಅದು ಬರುವುದು ನಮ್ಮ ಬಾಲ್ಯದಿಂದಲೇ..ನಮ್ಮ ಮಕ್ಕಳನ್ನು ಹತ್ತು ವರ್ಷದ ತನಕ ನಾವು ಹೇಗೆ ಬೆಳೆಸಿರುತ್ತೇವೆ ಮತ್ತು ಯಾವುದಕ್ಕೆ ಅವರು ಸ್ಪಂದಿಸುತ್ತಾರೆ ಎಂಬುದರ ಸೂಕ್ಷ್ಮ ಅವಲೋಕನೊಂದಿಗೆ ಅವರ ಬಾಲ್ಯ ಮತ್ತು ಕೌಮಾರ್ಯವನ್ನು ನಾವು ಕಟ್ಟಿಕೊಟ್ಟರೆ ಅವರು ನಿಶ್ಚಿತವಾಗಿ ತರತಮ ಜ್ನಾನವನ್ನು ಬೆಳೆಸಿಕೊಳ್ಳುತ್ತಾರೆ ಎಂಬುದು ನನ್ನ ಅಚಲವಾದ ನಂಬಿಕೆ. ಆದ್ರೆ ನಾವು ನಮ್ಮ ಮಕ್ಕಳನ್ನು ಅವರಿಷ್ಟದಂತೆ ಬೆಳೆಯಲು ಬಿಡುತ್ತೇವೆಯೇ? ನಮ್ಮ ಈಡೇರಲಾರದ ಆಸೆ ಆಕಾಂಕ್ಷೆಗಳನ್ನೆಲ್ಲಾ ಅವರಮೇಲೆ ಹೇರಲು ಪ್ರಯತ್ನ್ಸುತ್ತೇವೆ. ಪರಿಣಾಮವಾಗಿ ಅವರ ಭಾವನೆಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತವೆ. ಅತ್ತ ಅವರಿಗೆ ತಮಗಿಷ್ಟ ಬಂದದ್ದನ್ನು ಮಾಡಲಾಗದೆ ಇತ್ತ ಹೆತ್ತವರ ನಿರೀಕ್ಷೆಯನ್ನೂ ಪೂರೈಸಲಾಗದೆ ಅವರ ಹದಿ ಹರೆಯದ ದಿನಗಳೆಲ್ಲಾ ಸಹಿಸಲಸಾಧ್ಯವಾದ ಒತ್ತಡಗಳಲ್ಲೇ ಕಳೆದು ಹೋಗುತ್ತದೆ. ಅಂದರೆ ನಮ್ಮ ಮಕ್ಕಳು ಹಾಳಾಗುತ್ತಿದ್ದಾರೆಂದು ನಾವು ಹಳಹಳಿಸುವುದರಲ್ಲಿ ನಮ್ಮ ಅಂದರೆ ಸಮಾಜದ ಮತ್ತು ಹೆತ್ತವರ ಪಾಲೂ ಇದೆಯಲ್ಲವೇ?

ವೈಯಕ್ತಿಕವಾಗಿ ನನಗೆ ಪೇಸ್ ಬುಕ್ ನಿಂದಾಗಿ ಯಾವ ಹಾನಿಯೂ ಆಗಿಲ್ಲ. ನನ್ನ ಸ್ವಲ್ಪ ಸಮಯವನ್ನು ಅದು ಅಪಹರಿಸುತ್ತಿದೆ ಎಂಬುದು ನಿಜ. ಆದರೆ ಅದು ನನಗೆ ಕೊಟ್ಟಿದ್ದು ಇದಕ್ಕಿಂತಲೂ ಹೆಚ್ಚು.ನನ್ನ ಕೆಲವು ಹಳೆಯ ಸ್ನೇಹಕ್ಕೆ ಮತ್ತಷ್ಟು ಹೊಳಪು ಕೊಟ್ಟಿದೆ. ಹೊಸ ಸ್ನೇಹವನ್ನು ಕುತೂಹಲದಿಂದ ನೋಡುವಂತೆ ಮಾಡಿದೆ. ವಿಷಯ ಮತ್ತು ಅಭಿಪ್ರಾಯ ಕ್ರೋಢಿಕರಣಕ್ಕೆ ಸಹಾಯ ಮಾಡಿದೆ. ಎಲ್ಲಿಯೂ ಹೇಳಿಕೊಳ್ಳಲಾರದ ವಿಷಯಗಳನ್ನು ಅಪರೋಕ್ಷವಾಗಿ ಹೇಳಿಕೊಂಡು ಸಮಾಧಾನ ಪಟ್ಟುಕೊಂಡದ್ದಿದೆ.  ಅಡಿಗರ ಸಾಲುಗಳು ನೆನಪಾಗುತ್ತಿದೆ.

” ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,
ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ
ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು
ಬದುಕಿಗೂ ಈ ಕರಿ ನೀರಲ್ಲಿ
ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ
ಅತ್ತಿತ್ತ ದೋಣಿ ಸಂಚಾರ. ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ
ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ
ರಿದ್ದರೂ ಸಿಕ್ಕುವುದೆಲ್ಲಾ ಪರಕೀಯ.ಅಕಸ್ಮಾತ್ತಾಗಿ
ತನ್ನ ಇನ್ನೊಂದರ್ಧ ಎಲ್ಲಾದರೂ ಕ್ಷಣಾರ್ಧ
ಸಿಕ್ಕಿದವನೇ ಕೃತಾರ್ಥ, ಭಾಗ್ಯವಂತ.’’

ರಾಮಾಯಣದಲ್ಲೊಂದು ಪ್ರಸಂಗ ಬರುತ್ತದೆ [ಇದು ಯಾವ ರಾಮಾಯಣ ಎಂಬುದು ನನಗೆ ನೆನಪಿಲ್ಲ. ಬಹುಶಃ ಸಂಸ್ಕೃತದ ಭಾಸ ಬರೆದ ’ಪ್ರತಿಮಾಲೋಕ’  ನಾಟಕದಲ್ಲಿರಬೇಕು] ರಾಮನನ್ನು ಕಾಡಿಗಟ್ಟಿದ ಪ್ರಸಂಗ ಭರತನಿಗೆ ತಿಳಿದಿರುವುದಿಲ್ಲ. ಒಮ್ಮೆ ಆತ ತನ್ನ ಪೂರ್ವಜರ ಪ್ರತಿಮೆಗಳನ್ನು ಇಟ್ಟಿರುವ ಮಹಲಿನೊಳಗೆ ಪ್ರವೇಶಿಸುತ್ತಾನೆ. ಅಲ್ಲಿ ತನ್ನ ತಂದೆ ದಶರಥನ ಪುತ್ಥಳಿಯನ್ನು ಕಂಡು ದಂಗಾಗುತ್ತಾನೆ. ಆತನಿಗೆ ತನ್ನ ತಂದೆ ಧೈವಾದೀನರಾದ ವಿಷಯ ತಿಳಿದಿರುವುದಿಲ್ಲ. ಹಾಗೆಯೇ ನಾವು ಕೂಡಾ ಪೇಸ್ ಬುಕ್ ಎಂಬ ಮಹಲನ್ನು ಪ್ರವೇಶಿಸಿದ್ದೇವೆ. ಇಲ್ಲಿ ಯಾರು ಪ್ರತಿಮೆಗಳೋ..ಯಾರು ಜೀವಂತರೋ ಒಂದೂ ತಿಳಿಯದೇ ಒಮ್ಮೊಮ್ಮೆ ದಿಗ್ಭ್ರಾಂತರಾಗಿ ನಿಂತು ಬಿಡುತ್ತೇವೆ.! 


[ಮಂಗಳೂರಿನ ನಿಯತಕಾಲಿಕ ’ಸಂವೇದಿ’ ಗಾಗಿ ಬರೆದ ಲೇಖನ]