Thursday, November 19, 2009

ಶೋಭಾ ಮಾಡಿದ ತಪ್ಪಾದರೂ ಏನು?





ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರ ರಾಜಿನಾಮೆಯನ್ನು ಕೇಂದ್ರ ವಸ್ತುವಾಗಿರುವ ’ಯಡಿಯೂರಪ್ಪ ಪ್ರಹಸನ’ದ ಹದಿನಾಲ್ಕು ದಿನಗಳ ಧಾರಾವಾಹಿಯನ್ನು ನೋಡುತ್ತಿರುವಾಗ ನನಗೆ ನೆನಪಿಗೆ ಬಂದದ್ದು,ನನ್ನ ಅಜ್ಜಿ ಬಾಲ್ಯದಲ್ಲಿ ಹೇಳುತ್ತಿದ್ದ ಬ್ರಹ್ಮ ರಾಕ್ಷಸನ ಕಥೆ. ಬಹಳ ರಂಜನಿಯವಾದ ಈ ಕಥೆಯಲ್ಲಿ ಬ್ರಹ್ಮರಾಕ್ಷಸನ ಪ್ರಾಣ ಏಳು ಸಮುದ್ರದಾಚೆಗಿರುವ ದ್ವೀಪದ ಯಾವುದೋ ಪೊಟರೆಯಲ್ಲಿರುವ ಪಕ್ಷಿಯಲ್ಲಿರುತ್ತದೆ. ಆ ಪಕ್ಷಿಯನ್ನು ಹುಡುಕಿ ಅದಕ್ಕೆ ಚಿತ್ರಹಿಂಸೆ ನೀಡಿದರೆ ಇಲ್ಲಿ ರಾಕ್ಷಸ ವಿಲಿವಿಲಿ ಒದ್ದಾಡುತ್ತಾನೆ. ಅಲ್ಲಿ ಅದರ ಕಾಲು ಮುರಿದರೆ ಇಲ್ಲಿ ರಾಕ್ಷಸನ ಕಾಲು ಮುರಿಯುತ್ತದೆ. ಅಲ್ಲಿ ಗೋಣು ಮುರಿದರೆ ಇಲ್ಲಿ ರಾಕ್ಷಸ ಸಾಯುತ್ತಾನೆ.
’ಯಡಿಯೂರಪ್ಪ ಪ್ರಹಸನ’ದಲ್ಲಿ ಪ್ರಾಣ ಪಕ್ಷಿಯನ್ನು ಹಿಂಸಿಸಲಾಗಿದೆ. ನಾಯಕ ವಿಲಿವಿಲಿ ಒದ್ದಾಡುತ್ತಿದ್ದಾನೆ.

ಶೋಭಾ ಸಿಕ್ಕ ಸಿಕ್ಕ ಮಾಧ್ಯಮಗಳಲೆಲ್ಲಾ ಪ್ರಶ್ನಿಸುತ್ತಿದ್ದಾರೆ ’ನಾನು ಮಾಡಿದ ತಪ್ಪೇನು?’

ನಾವು ಕೂಡಾ ನಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತೆದ್ದೇವೆ ’ಶೋಭಾ ಮಾಡಿದ ತಪ್ಪಾದರೂ ಏನು?’
ನಮ್ಮ ರಾಜ್ಯ ಸಚಿವ ಸಂಪುಟದಲ್ಲಿ ಮುವತ್ತಮೂರು ಜನ ಸಚಿವರಿದ್ದಾರೆ. ಅದರಲ್ಲಿರುವ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ. ರಾಜ್ಯದ ಮೂರು ಕೋಟಿ ಮಹಿಳೆಯರ ಪ್ರತಿನಿಧಿ. ಆದರೂ ಆಕೆಯ ರಾಜಿನಾಮೆಯ ಬಗ್ಗೆ ಒಂದೇ ಒಂದು ಮಹಿಳಾ ಧ್ವನಿಯಿಲ್ಲ ಯಾಕೆ? ಆಕೆಯ ರಾಜಿನಾಮೆ ಪಡೆಯಬಾರದು ಎಂದು ಆಕೆ ಪ್ರತಿನಿಧಿಸುತ್ತಿರುವ ಯಶವಂತಪುರದ ಒಂದಷ್ಟು ಜನ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲಿಯೂ ಮಹಿಳೆಯರ್ಯಾರೂ ಕಾಣಿಸಲಿಲ್ಲ. ಹೋಗಲಿ ಅವರ ಊರಿನ ಜನರಾದರೂ ಪ್ರತಿಕ್ರಿಯಿಸಿದರಾ ಅದೂ ಇಲ್ಲ. ಬೆಂಗಳೂರಿನಲ್ಲಿ ’ದಕ್ಷಿಣ ಕನ್ನಡ ಗೌಡರ ಸಂಘ’ ಒಂದಿದೆ. ಅದರಲ್ಲಿರುವವರೆಲ್ಲಾ ಆಕೆಯ ಬಂಧು-ಬಾಂಧವರೇ. ಕಳೆದ ಚುನಾವಣೆಯಲ್ಲಿ ಇವರೆಲ್ಲಾ ಯಶವಂತಪುರ ತುಂಬೆಲ್ಲಾ ಓಡಾಡಿ ಆಕೆಯ ಪರವಾಗಿ ಮತ ಯಾಚಿಸಿದ್ದರು. ಕೈಲಾದ ಆರ್ಥಿಕ ಸಹಾಯವನ್ನು ನೀಡಿದ್ದರು. ಈಗ ಅವರೆಲ್ಲಾ ಆಕೆಯ ಹೆಸರೆತ್ತಲೂ ಇಷ್ಟ ಪಡುವುದಿಲ್ಲ. ಯಾಕೆ?

ಯಾಕೆಂದರೆ ಆಕೆ ಹಿಂದಿನಂತಿಲ್ಲ; ಆಕೆಗೆ ಅಹಂಕಾರ ಬಂದಿದೆ ಎಂಬುದು ಅವರೆಲ್ಲರ ಆಪಾದನೆ. ಅದನ್ನು ರೆಡ್ಡಿ ಬಣದ ಶಾಸಕರು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ; ’ಶೋಭಾ ಸೂಪರ್ ಸಿಎಂ ತರಹ ವರ್ತಿಸುತ್ತಾರೆ’.
ಅಹಂಕಾರ ಮತ್ತು ಸ್ವಾಭಿಮಾನದ ಮಧ್ಯೆ ಬಹಳ ತೆಳುವಾದ ಗೆರೆಯಿರುತ್ತದೆ. ಮಹಿಳೆಯ ಸ್ವಾಬಿಮಾನ ಪುರುಷನ ಕಣ್ಣಿಗೆ ಅಹಂಕಾರವಾಗಿ ಕಾಣಿಸಬಹುದು. ಶೋಭಾ ಸ್ವಾಬಿಮಾನಿ. ಅದವಳ ಹುಟ್ಟುಗುಣ.
ಶೋಭಾ ರೈತಾಪಿ ಮನೆತನದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಹೆಣ್ಣುಮಗಳು. ಅವಿಭಜಿತ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮ ಒಂದು ಸಾಧಾರಣ ಹಳ್ಳಿ. ಆದರೆ ಆಕೆ ಬೆಳೆದ ಪರಿಸರ ಸಾಮಾನ್ಯದಲ್ಲ. ಸದಾ ನಿಗೂಢತೆಯನ್ನು ಉಳಿಸಿಕೊಂಡು,ಸವಾಲುಗಳನ್ನು ಎಸೆಯುತ್ತಲಿರುವ ಮಲೆನಾಡಿನ ಬೆಟ್ಟ,ಗುಡ್ಡ, ಕಾನನ, ನೀಲ ಸಮುದ್ರ. ಇದು ಆಕೆಯಲ್ಲಿ ಹೋರಾಟದ ಮನೋಭೂಮಿಕೆಯನ್ನು ರೂಪಿಸಿತ್ತು. ಜೊತೆಗೆ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ತಿನ ಒಡನಾಟ ಶಿಸ್ತನ್ನು ರೂಡಿಸಿತ್ತು. ಪುತ್ತೂರಿನ ಸೈಂಟ್ ಪಿಲೋಮಿನ ಕಾಲೇಜ್ ಓದಿನ ಹಸಿವನ್ನು ಹೆಚ್ಚಿಸಿತ್ತು. ಮಂಗಳೂರಿನ ಪ್ರತಿಷ್ಠಿತ ಕಾಲೇಜ್ ರೋಷನಿ ನಿಲಯದಲ್ಲಿ ಸಮಾಜ ಸೇವೆಯಲ್ಲಿ ಸ್ನಾತಕೋತರ ಪದವಿ ಪಡೆದ ಪ್ರತಿಭಾವಂತೆ ಈಕೆ. ಮುಂದೆ ಸಂಘ ಪರಿವಾರದ ಮೌಲ್ಯಗಳು ಆಕೆಯ ವ್ಯಕ್ತಿತ್ವದ ಭಾಗವಾಯ್ತು. ಸಮಾಜ ಸೇವೆ ಅವರ ಗುರಿಯಾಯ್ತು. ಆ ಸೇವಾ ಮನೋಭಾವವೇ ಸುನಾಮಿ ಸಂತ್ರಸ್ತರ ನೆರವಿಗೆ ಧಾವಿಸಿತು; ಹೆಣಗಳನ್ನು ಎತ್ತಿತು.ಸಂಘ ಪರಿವಾರ ಆಕೆಯ ನಿಷ್ಟೆಯನ್ನು ಗುರುತಿಸಿತು. ಹಾಗಾಗಿ ರಾಜಕೀಯದ ಹಿನ್ನೆಲೆಯಿಲ್ಲದಿದ್ದರೂ ಶಕ್ತ ರಾಜಕಾರಣದ ಪ್ರವೇಶ ಸುಲಲಿತವಾಯಿತು.

ತನ್ನ ಹುಟ್ಟೂರಿಗೆ ಹೊರತಾದ ಅಪರಿಚಿತ ಕ್ಷೇತ್ರ ಯಶವಂತಪುರದಿಂದ ಗೆದ್ದು ಬಂದು ಮಂತ್ರಿಯಾಗುವ ಅವಕಾಶ ಒದಗಿ ಬಂದಾಗಲೂ ಆಕೆ ಅದಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದರು. ತನ್ನ ವಿದ್ಯಾ ಗುರುಗಳಾಗಿದ್ದ ಪ್ರಭಾಕರ ರಾವ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡರು. ಶೋಭಾ ಓದಿದ ಸಮಾಜ ಸೇವೆಗೆ ರಿಲೇಟ್ ಆಗುವ ’ಗ್ರಾಮೀಣಾಬಿವೃದ್ಧಿ ಮತ್ತು ವಿಲೇಜ್ ಪಂಚಾಯತ್’ ಪ್ರಭಾಕರ್ ಅವರ ಪಿ.ಎಚ್.ಡಿ ವಿಷಯವಾಗಿತ್ತು. ಸಮಾಜ ಸೇವೆಗೆ ಹೆಚ್ಚು ಅವಕಾಶಗಳಿರುವ, ನೀರ್ ಸಾಬ್ ಎಂದೇ ಪ್ರಖ್ಯಾತಿ ಗಳಿಸಿರುವ ನಜಿರ್ ಸಾಬಿ ನಿರ್ವಹಿಸಿದ ಗ್ರಾಮೀಣಬಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆಯನ್ನೇ ಶೋಭಾ ಮೆಚ್ಚಿ ಆಯ್ಕೆ ಮಾಡಿಕೊಂಡಿದ್ದರು. ಎಂ.ವೈ.ಘೋರ್ಪಡೆ, ಎಂ.ಪಿ. ಪ್ರಕಾಶ್ ನಂತವರು ಕೆಲಸ ಮಾಡಿದ ಖಾತೆಯಿದು. ಕರ್ನಾಟಕಾದ್ಯಂತ ಹರಡಿಕೊಂಡಿರುವ, ಯಾರೇ ಮಂತ್ರಿಯಾದರೂ ಸದಾ ಸುದ್ದಿಯಲ್ಲಿರುವ ಖಾತೆಯಿದು. ಶೋಭಾ ಪಾದರಸದಂತೆ ಓಡಾಡುತ್ತಾ ಕೆಲಸವೂ ಮಾಡಿಕೊಂಡಿದ್ದರು. ಆದರೂ ಶೋಭಾ ಸಂಪುಟದಿಂದ ಕಿತ್ತೊಗೆಯಲ್ಪಟ್ಟರು. ಯಾಕೆ?

ಆಕೆಯ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ಹಗರಣಗಳಿಲ್ಲ. ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿಲ್ಲ. ಹೈಕಮಾಂಡ್ ಆಕೆಯ ರಾಜಿನಾಮೆ ಕೇಳುವಾಗ ಅದಕ್ಕೆ ಕಾರಣಗಳನ್ನೇ ನೀಡಿಲ್ಲ.ಆದರೂ ಆಕೆಯ ರಾಜಿನಾಮೆಗಾಗಿ ಏಕಕಾಲದಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ ರಂಗಮಂದಿರಗಳಲ್ಲಿ ಹದಿನೈದು ದಿನಗಳ ಪ್ರಹಸನ ನಡೆಯಿತು. ನಾಟಕದ ಫಲಶ್ರುತಿಯೆಂದರೆ ಶೋಭಾ ದುರಂತನಾಯಕಿಯಾಗಿ ಹೊರ ಹೊಮ್ಮಿದಳು.
ದುರಂತ ನಾಯಕನ ಕಲ್ಪನೆ ಗ್ರೀಕ್ ನಾಟಕಗಳ ಕೊಡುಗೆ. ಧೀರೋದ್ದಾತ ನಾಯಕನ ಎಲ್ಲಾ ಗುಣಲಕ್ಷಣಗಳಿದ್ದಾಗ್ಯೂ ಆತನ ಮಾನವಸಹಜವಾದ ದೌರ್ಬಲ್ಯವೊಂದು ಆತನನ್ನು ಪತನದಂಚಿಗೆ ತಳ್ಳಿಬಿಡುತ್ತದೆ. ದೇವತೆಗಳು ಕೂಡ ಅವನನ್ನು ಅಲ್ಲಿಂದ ಮೇಲೆತ್ತಲಾರರು. ಅಂತಹ ದೌರ್ಬಲ್ಯವೊಂದು ಶೋಭನಲ್ಲಿತ್ತೆ?

ಯಡಿಯೂರಪ್ಪ ಪ್ರಹಸನದಲ್ಲಿ ಶೋಭಾ ಮಾಧ್ಯಮವನ್ನು ಎದುರಿಸಿದ ರೀತಿಯಲ್ಲೇ ಗೊತ್ತಾಗುತ್ತದೆ; ಆಕೆ ಸ್ವಾಬಿಮಾನದ ದಿಟ್ಟ ಹೆಣ್ಣು ಮಗಳು. ಆಕೆಯಲ್ಲಿ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿತ್ತು. ಪತ್ರಕರ್ತರ ಪ್ರಶ್ನೆಗಳಿಗೆ ಅಳುಕಿಲ್ಲದೆ ಉತ್ತರಿಸುತ್ತಿದ್ದರು. ಕಾಂಟ್ರವರ್ಸಿ ಆಗಬಹುದಾಗಿದ್ದ ಪ್ರಶ್ನೆಗಳಿಗೆ ’ನನಗೆ ಗೊತ್ತಿಲ್ಲ, ನನ್ನಲ್ಲೂ ಆ ಪ್ರಶ್ನೆ ಇದೆ, ಯಾಕೆ ಅಂತಹ ಗೊತ್ತಾಗ್ಲಿಲ್ಲ, ’ಅದು ಹಿರಿಯರ ತೀರ್ಮಾನ...’ ಎಂಬ ಜಾಣತನದ ಉತ್ತರಗಳನ್ನು ನೀಡಿ ಜಾರಿಕೊಳ್ಳುತ್ತಿದ್ದರು. ’ನನಗನ್ನಿಸುತ್ತದೆ...’ ಎಂದು ತನ್ನೊಳಗೆ ಮಾತಾಡಿಕೊಂಡಂತೆ ಮಾತು ಆರಂಭಿಸಿದರೆಂದರೆ ತನ್ನ ನಿಲುವನ್ನು ಸ್ಪಷ್ಟಪಡಿಸುವುದರೊಂದಿಗೆ ಬೇರೆಯವರಿಗೆ ತಲುಪಿಸುವ ಸಂದೇಶವೂ ಅದರಲ್ಲಿ ಅಡಕವಾಗಿದೆ ಎಂದೇ ಅರ್ಥ. ಇಂಥ ಜಾಣೆಯೆದುರು ಬಳ್ಳಾರಿ ಗಣಿ ದೊರೆಗಳ ಪರಿಶ್ರಮದಿಂದ ಸಂಸತ್ ಸದಸ್ಯೆಯಾದ ಶಾಂತಳ ಸೌಂಡ್ ಬೈಟ್ ನ್ನು ಹೋಲಿಸಿ ನೋಡಿ; ’ನಾಲಗೆ ಕುಲವನರುಹಿತು’ ಎಂದು ಇಂತಹ ಸಂದರ್ಭವನ್ನು ನೋಡಿಯೇ ಪಂಪ ಬರೆದಿರಬೇಕೆನಿಸುತ್ತದೆ.

’ಯಡಿಯೂರಪ್ಪ ಪ್ರಹಸನ’ದಲ್ಲಿ ’ಮೇಲ್ ಇಗೋ’ ಒಟ್ಟಾಗಿ ಕೆಲಸ ಮಾಡಿತ್ತೆ? ಹೌದೆಂದು ಕಾಣುತ್ತದೆ. ಅದಕ್ಕೆ ಕಾರಣವಾದದ್ದು ಆಕೆಯ ಕೆಲಸದ ವೈಖರಿ; ತನ್ನ ಖಾತೆಯ ಸಮರ್ಥ ನಿರ್ವಹಣೆ. ಸಾಮಾನ್ಯವಾಗಿ ಯಾರನ್ನೂ ಹೊಗಳದ ವಿರೋಧ ಪಕ್ಷದ ನಾಯಕ ಉಗ್ರಪ್ಪನವರು ಅವರ ಕಾರ್ಯದಕ್ಷತೆಯನ್ನು ಮುಕ್ತಕಂಠದಿಂದ ಹೊಗಳಿ ಅಕೆಗೆ ಗೃಹ ಮಂತ್ರಿಯಾಗುವ ಯೋಗ್ಯತೆ ಇದೆಯೆಂದು ಹೇಳಿದ್ದಾರೆ.ಅವರು ಪ್ರತಿಪಕ್ಷದ ನಾಯಕನಿರಬಹುದು ಆದರೂ ಕಲ್ಲಿನಲ್ಲಿ ಮೊಸರು ಹುಡುಕುವ ಉಗ್ರಪ್ಪನಂಥ ಉಗ್ರ ಮಾತುಗಾರನ ಬಾಯಿಯಿಂದ ಹೊಗಳಿಸಿಕೊಳ್ಳುವುದೆಂದರೆ ಸಾಮಾನ್ಯ ಮಾತಲ್ಲ.
ಶೋಭಾ ಮುಖ್ಯಮಂತ್ರಿ ಜೊತೆ ಹೊಂದಿದ್ದ ಆತ್ಮೀಯ ಸಂಬಂಧ ’ಎಲ್ಲಾ ಗುಣಗಳನ್ನು ಮಸಿ ನುಂಗಿಬಿಡ್ತು’ ಎಂಬ ಗಾದೆಯಂತಾಯ್ತು. ಇಲ್ಲವಾದರೆ ರೇಣುಕಾಚಾರ್ಯಾನಂತಹ ಕಚ್ಚೆ ಹರುಕ, ಕ್ಷುದ್ರ ಜಂತು ಆಕೆಯ ಮೇಲೆರಗಲು ಸಾಧ್ಯವಿತ್ತೆ? ಅವರು ಆರೋಗ್ಯಕರ ಅಂತರವನ್ನು ಕಾಯ್ದುಕೊಂಡಿದ್ದರೆ ಇಷ್ಟು ದೊಡ್ಡ ಪ್ರಹಸನವಾಗುತ್ತಿರಲಿಲ್ಲವೇನೋ...ಅದನ್ನು ಕಣ್ಣು ಕುಕ್ಕುವಂತೆ ಸಾರ್ವಜನಿಕಗೊಳಿಸಿದ್ದು ಅವರು ಮಾಡಿದ ಬಹುದೊಡ್ಡ ತಪ್ಪು. ಅವರ ಸಂಬಂಧ ಸಚಿವೆಯ ಕಾರ್ಯವೈಖರಿಯಲ್ಲಿ ಪ್ರತಿಫಲನಗೊಳ್ಳುತ್ತಿತ್ತು.ಎಲ್ಲಾ ಸಚಿವರ ಖಾತೆಗಳಲ್ಲಿ ಮೂಗು ತೂರಿಸುತ್ತಾರೆ ಎಂದು ಶಾಸಕರೊಬ್ಬರು ಆರೋಪಿಸುತ್ತಾರೆ; ಸಚಿವರಲ್ಲ. ಮುಖ್ಯಮಂತ್ರಿಗಳ ಬಳಿಗೆ ಬರುವ ಫೈಲುಗಳನ್ನೆಲ್ಲಾ ಅವರು, ’ಶೋಭಾ ಒಮ್ಮೆ ನೋಡಿ ಬಿಡಲಿ’ ಅನ್ನುತ್ತಿದ್ದರಂತೆ. ಬಹುಶಃ ಮುಖ್ಯಮಂತ್ರಿಗಳ ಕಾರ್ಯ ಬಾಹುಳ್ಯ ಅವರು ಇನ್ನೊಬ್ಬ ಆಪ್ತ ಸಚಿವರನ್ನು ಅವಲಂಭಿಸುವಂತೆ ಮಾಡಿರಬಹುದು. ತಮಗೆ ವಹಿಸಿದ ಕೆಲಸವನ್ನು ಶೋಭಾ ತುಂಬಾ ಕಟ್ಟುನಿಟ್ಟಾಗಿ ಪಾಲಿಸಿರಬಹುದು. ಇದೇ ’ಸೂಪರ್ ಸಿ.ಎಂ’ ಎಂಬ ಆಪಾದನೆಗೆ ಕಾರಣವಾಗಿರಬಹುದು.

ಇದೆಲ್ಲಾ ’ಬಹುದು’ ಸಾಮ್ರಾಜ್ಯ. ಆದರೆ ಎದ್ದು ಕಾಣುವ, ಅತೃಪ್ತರನ್ನು ಮತ್ತಷ್ಟು ಕುದಿಸುವ ಕಾರಣವೊಂದಿದೆ.ಅದು, ಇದುವರೆಗೆ ನಡೆದುಕೊಂಡು ಬಂದ ಸಂಪ್ರದಾಯದಂತೆ ಕ್ಯಾಬಿನೆಟ್ ಬ್ರಿಫಿಂಗ್ ಅನ್ನು ವಾರ್ತಾ ಸಚಿವರು ಅಥವಾ ಸಂಪುಟದ ಹಿರಿಯ, ಅನುಭವಿ ಸಚಿವರು ನಡೆಸುತ್ತಿದ್ದರು. ಆದರೆ ಅದನ್ನು ಹೊಸಬಳಾದ ಶೋಭಾಗೆ ಮುಖ್ಯಮಂತ್ರಿಗಳು ಕೊಟ್ಟರು.ಇದು ಹಲವು ಸಚಿವರಿಗೆ ಇಷ್ಟವಾಗಲಿಲ್ಲ. ಅದನ್ನು ನಯವಾಗಿ ಆಕೆ ತಿರಸ್ಕರಿಸಬಹುದಿತ್ತು ಆದರೆ ಆಕೆ ಹಾಗೆ ಮಾಡಲಿಲ್ಲ. ಶೋಭಾ ಬ್ರಹ್ಮಚಾರಿಣಿಯಾಗಿರಬಹುದು ಆದರೆ ಸನ್ಯಾಸಿಯಲ್ಲ. ಬ್ರಹ್ಮಚರ್ಯಕ್ಕೂ ಸನ್ಯಾಸತ್ವಕ್ಕೂ ಅಪಾರ ವ್ಯತ್ಯಾಸವಿದೆ. ಬ್ರಹ್ಮಚರ್ಯ, ಸಮಾಜದಲ್ಲಿದ್ದುಕೊಂಡೇ ಯಾವುದೋ ಒಂದು ಸಾಧನೆಗಾಗಿ ಸಂಕಲ್ಪ ತೊಟ್ಟು ವೈವಾಹಿಕ ಬಂಧನಗಳಿಂದ ದೂರವಿರುವುದು. ಸನ್ಯಾಸತ್ವ ಎಂದರೆ ಸಮಾಜದಿಂದ ದೂರವಾಗಿ, ಏಕಾಂತದಲ್ಲಿದ್ದು ಆತ್ಮೋನ್ನತಿಗಾಗಿ, ಸಮಾಜದ ಒಳಿತಿಗಾಗಿ ಚಿಂತನೆ ನಡೆಸುವುದು. ಈ ಅರ್ಥದಲ್ಲಿ ಶೋಭಾ ರಾಗ ದ್ವೇಷಾದಿ ಭಾವನೆಗಳನ್ನು ಮೀರಿದವರೇನಲ್ಲ!
ಒಬ್ಬ ಗಂಡಸಿಗೆ ಅವಮಾನ ಮಾಡಬೇಕಾದರೆ ಅವನನ್ನು ಕೆರಳಿಸಬೇಕಾದರೆ ಏನು ಮಾಡಬೇಕು? ಅವನಿಗೆ ಸಂಬಂಧಪಟ್ಟ ಹೆಣ್ಣೊಬ್ಬಳನ್ನು ಕೆಣಕಬೇಕು; ಅವಮಾನಿಸಬೇಕು; ಚಾರಿತ್ರ್ಯವಧೆ ಮಾಡಬೇಕು.
ಸ್ವಸಾಮರ್ಥ್ಯದಿಂದ ತನ್ನ ಕೇತ್ರದಲ್ಲಿ ಹಂತ ಹಂತವಾಗಿ ಮೇಲೆರುತ್ತಿರುವ ಮಹಿಳೆಯನ್ನು ಪ್ರಪಾತಕ್ಕೆ ದೂಡಿಬಿಡಲು ಏನು ಮಾಡಬೇಕು? ಅವಳ ಚಾರಿತ್ಯವಧೆ ಮಾಡಿದರಾಯ್ತು.
ಇಲ್ಲಿ ಎರಡೂ ಆಗಿದೆ. ಶೋಭಾಳ ಚಾರಿತ್ರ್ಯ ವಧೆಯನ್ನು ಕೇವಲ ರೆಡ್ಡಿ ಬಣದವರು ಮಾತ್ರ ಮಾಡಲಿಲ್ಲ. ಮುಖ್ಯಮಂತ್ರಿಗಳು ಅದಕ್ಕೆ ತುಪ್ಪ ಎರೆದಿದ್ದಾರೆ. ಆಕೆಯ ರಾಜಿನಾಮೆಯನ್ನು ಪಡೆದುಕೊಳ್ಳುವ ಸಂದರ್ಭ ಬಂದಾಗ ಸಾರ್ವಜನಿಕವಾಗಿ ಕಣ್ಣೀರು ಹಾಕಿ ಮುಖ್ಯಮಂತ್ರಿ ಘನತೆಗೆ ಕುಂದು ತಂದಿದ್ದಾರೆ. ತನ್ನ ದೌರ್ಬಲ್ಯವನ್ನು ಜಗಜ್ಜಾಹಿರುಗೊಳ್ಸಿದ್ದಾರೆ. ಅಷ್ಟಿದ್ದರೆ ಅವರು ಆಕೆಯನ್ನು ಸಂಪುಟದಿಂದ ಕೈ ಬಿಡಲೇಬಾರದಿತ್ತು. ಅದದ್ದಾಗಲಿ ಎಂದು ತಮ್ಮ ನಿಲುವಿಗೇ ಬದ್ಧರಾಗಿರಬೇಕಿತ್ತು.ಆತ್ಮೀಯರ ಸಲಹೆಗಳನ್ನು ಪಡೆಯಬಹುದಿತ್ತು. ಯಡಿಯೂರಪ್ಪ ಹೋರಾಟಗಾರರು ನಿಜ. ಆದರೆ ಮುಂಗೋಪಿ, ಒರಟ, ಒಡ್ಡ.ಇಂತಹ ಯಡಿಯೂರಪ್ಪನವರಿಗೆ ಯಾರಾದರೂ ಆತ್ಮೀಯರಿರಲು ಸಾಧ್ಯವೇ? ನಮ್ಮ ಕನ್ನಡದ ಎಷ್ಟು ಜನ ಪತ್ರಕರ್ತರ ಹೆಸರು ಅವರ ನೆನಪಲ್ಲಿರಬಹುದು? ಬಹುಶಃ ಅದು ಐದಾರನ್ನು ದಾಟಲಾರದು.
ಅಧಿಕಾರದಾಸೆ ಎಲ್ಲಾ ಸಂಬಂಧಗಳನ್ನು ಗೌಣವಾಗಿಸುತ್ತದೆ. ರಾಜಿನಾಮೆ ಸಂದರ್ಭದಲ್ಲಿ ಶೋಭಾ ತೋರಿದ ಸಂಯಮದಲ್ಲಿ ಒಂಚೂರಾದರೂ ಮುಖ್ಯ ಮಂತ್ರಿಗಳು ತೋರಿದ್ದರೆ ನಗುವವರ ಮುಂದೆ ಎಡವಿ ಬಿದ್ದಂತಾಗುತ್ತಿರಲಿಲ್ಲ. ಶೋಭಾ ಪತನಕ್ಕೆ ಅವರು ಆಕೆಯಲ್ಲಿ ಹೊಂದಿದ್ದ ಮೋಹವೇ ಕಾರಣ. ಸ್ವತಃ ಆಕೆಯೇ ಅದಕ್ಕೆ ಅವಕಾಶ ಕೊಟ್ಟಿದ್ದಾಳೆ. ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆಯೋ ಅದು ನಮಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಅಗತ್ಯವೂ ನಮಗಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿರುವವರು ತಮ್ಮ ನಡವಳಿಕೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಕನಿಷ್ಟಪಕ್ಷ ಮುಚ್ಚಿಟ್ಟುಕೊಳ್ಳುವ ಕಲೆಯಾದರೂ ಗೊತ್ತಿರಬೇಕು. ಯಾಕೆಂದರೆ ಅವರು ಹಲವು ಜನರಿಗೆ ಮಾದರಿಗಳಾಗಿರುತ್ತಾರೆ.

ಮೈಸೂರು ದಸರ ಸಂದರ್ಭದಲ್ಲಿ ಸಾರ್ವಜನಿಕರ ಕಣ್ಣಿಗೆ ರಾಚುವಂತೆ ಕಟ್ಟೌಟ್ ಗಳಲಿ ಅವರಿಬ್ಬರೇ ಯಾಕೆ ಮಿಂಚಬೇಕಿತ್ತು? ಹೋಮ ಹವನ, ಬಾಗಿನ ಸಮರ್ಪಣೆಯಂತ ಧಾರ್ಮಿಕ ಸಮಾರಂಬಗಳಲ್ಲಿ ಯಾಕೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳಬೇಕಾಗಿತ್ತು? ಜೋತೆಯಾಗಿ ಯಾಕೆ ವಿದೇಶ ಪ್ರವಾಸಗಳನ್ನು ಕೈಗೊಳ್ಳಬೇಕಾಗಿತ್ತು? ಮಂತ್ರಾಲಯದ ಸ್ವಾಮಿಗಳನ್ನು ರಕ್ಷಿಸಿ ತರಲು ಶೋಭಾಳೇ ಯಾಕೆ ಹೋಗಬೇಕಾಗಿತ್ತು?. ಅದೇ ಪರಿಸರದವರೂ ಕಂದಾಯ ಸಚಿವರೂ ಆದ ಕರುಣಾಕರ ರೆಡ್ಡಿ ಇರಲಿಲ್ಲವೇ?. ಇದು ಪುರುಷ ಪ್ರಧಾನವಾದ ಸಮಾಜ. ಮಹಿಳೆಯರೂ ಕೂಡ ಪುರುಷರಂತೆಯೇ ಯೋಚಿಸುತ್ತಾರೆ. ಬಿಜೆಪಿ ಪಕ್ಷ ಈ ಯೋಚನೆಯ ಒಂದು ಭಾಗ. ಅದರ ಒಳಸುಳಿಗಳೇ ಬೇರೆ. ಪ್ರದರ್ಶಕ ಗುಣಗಳೇ ಬೇರೆ. ಸಮಾಜವನ್ನು ಅಧ್ಯಯನ ಮಾಡಿದ ಶೊಭಗೆ ಈ ಸೂಕ್ಷ್ಮ ಹೊಳೆಯಲಿಲ್ಲವೇ?

ಎಂತಹ ಗಟ್ಟಿ ಮನಸ್ಸಿಗೂ ಭಾವನಾತ್ಮಕವಾದ ಆಸರೆಯೊಂದು ಬೇಕಾಗುತ್ತದೆ. ಹಿಂದಿನ ಮುಖ್ಯಮಂತ್ರಿಗಳಾದ ಅರಸು, ಬೊಮ್ಮಾಯಿ, ಗುಂಡೂರಾವ್, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಕುಮಾರಸ್ವಾಮಿ ಇವರ ಬಗ್ಗೆ ಕೂಡಾ ಇಂತಹ ವದಂತಿಗಳಿದ್ದವು. ಆದರೆ ಅವೆಲ್ಲಾ ತೆರೆಯ ಮರೆಯ ಪ್ರಹಸನಗಳು, ಸಾರ್ವಜನಿಕರ ಕಣ್ಣಿಗೆ ರಾಚುತ್ತಿರಲಿಲ್ಲ. ಈಗ ರಾಚಿದೆ. ’ಮೆಲ್ ಇಗೋ’ ಕೆಲಸ ಮಾಡಿದೆ. ಸಮರ್ಥ ನಾಯಕಿಯಾಗುವ ಎಲ್ಲಾ ಅರ್ಹತೆಗಳಿರುವ ವಿದ್ಯಾವಂತ ಯುವ ರಾಜಕಾರಣಿ ಸಧ್ಯಕ್ಕೆ ಪುರುಷ ರಾಜಕಾರಣಕ್ಕೆ ಬಲಿಪಶುವಾಗಿದ್ದರೆ. ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನ, ದುಶ್ಯಾಸನ, ಕರ್ಣ, ಜಯದೃಥ ಮುಂತಾದ ಅತಿರಥ-ಮಹಾರಥರೆಲ್ಲಾ ಸೇರಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಕೆಡವಿಕೊಂಡು ಅಮಾನುಷವಾಗಿ ಕೊಂದಂತೆ ರೆಡ್ಡಿ ಬಳಗ ಚಕ್ರವ್ಯೂಹ ಹೆಣೆದಿದೆ. ಆದರೆ ಅದನ್ನೆಲ್ಲಾ ಕೊಡವಿಕೊಂಡು ಎದ್ದು ನಿಲ್ಲುವ ಶಕ್ತಿ ಆಕೆಯೊಳಗೇ ಇದೆ.ಅದನ್ನು ಆಕೆ ಗುರುತಿಸಿಕೊಳ್ಳಬೇಕು ಅಷ್ಟೆ.

Tuesday, November 3, 2009

ಕೆಂಪಿಯ ನೆನಪಲ್ಲಿ





ಅದೊಂದು ದಿನ ಯಾಕೋ ಭರಿಸಲಾಗದಷ್ಟು ಒಂಟಿತನ ನನ್ನನ್ನು ಆವರಿಸಿಕೊಂಡಿತ್ತು. ಇಲ್ಲಿ, ಈ ಬೆಂಗಳೂರೆಂಬ ಮಾಹಿತಿ ನಗರದಲ್ಲಿ ತೀರಾ ಆತ್ಮೀಯತೆಯಿಂದ ಮನಸ್ಸಿನ ಒಳಹೊಕ್ಕು ಮಾತಾಡುವವರು ಯಾರೂ ಇರಲಿಲ್ಲ.

‘ಬೇಸರಿನ ಸಂಜೆಯಿದು...ಬೇಕೆನೆಗೆ ನಿನ್ನ ಜೊತೆ’ ಎಂದು ಗುಣುಗುಣಿಸುತ್ತಾ ಅದನ್ನೇ ಮೊಬೈಲ್ ನಲ್ಲಿ ಕೀ ಮಾಡತೊಡಗಿದೆ. ಆದರೆ ಯಾರಿಗೆ ಕಳುಹಿಸಲಿ?

ಹೀಗೆ ವರ್ತಮಾನ ಅಸಹನೀಯ ಅನ್ನಿಸಿದಾಗಲೆಲ್ಲಾ ಮನುಷ್ಯ ಬಾಲ್ಯಕ್ಕೆ ಮರಳುತ್ತಾನೆ. ಹುಟ್ಟಿದೂರನ್ನು ನೆನೆದು ಅಲ್ಲಿ ನಾನಿರುತ್ತಿದ್ದರೆ...ಆ ಒಡನಾಡಿ ಪಕ್ಕದಲ್ಲಿರುತ್ತಿದ್ದರೆ....ಎಂದು ಮನಸ್ಸು ಹಂಬಲಿಸುತ್ತದೆ.

ನನಗಿನ್ನೂ ನೆನೆಪಿದೆ; ಬಾಲ್ಯದಲ್ಲಿ ನನಗೆ ಅತ್ಯಂತ ದುಃಖವಾದಾಗ ಕೈಯಲ್ಲೊಂದು ಕತ್ತಿ ಹಿಡಿದು ತೋಟಕ್ಕೆ ಹೋಗುತ್ತಿದ್ದೆ. ಎತ್ತರವಾಗಿ ಬೆಳೆದು ನಿಂತಿರುತ್ತಿದ್ದ ಅಡಿಕೆ ಮರಗಳನ್ನು ಸುಮ್ಮನೆ ನೋಡುತ್ತಿದ್ದೆ. ಫಲ ತುಂಬಿ ತುಳುಕುತ್ತಿದ್ದ ತೆಂಗಿನ ಮರದ ಗರಿಗಳ ಮಧ್ಯೆ ಪುರುಳಿ ಹಕ್ಕಿಯ ಗೂಡನ್ನು ಹುಡುಕುತ್ತಿದ್ದೆ. ಕೊಕ್ಕೋ ಗಿಡದಲ್ಲಿ ಮಾಲೆಯಂತೆ ತೂಗಾಡುತ್ತಿದ್ದ ಕಾಯಿಗಳನ್ನು ಲೆಖ್ಖ ಹಾಕುತ್ತಿದ್ದೆ; ಬಾಳೆಯಲ್ಲೇ ಹಣ್ಣಾದ ಬಾಳೆಹಣ್ಣನ್ನು ಹುಡುಕಿ ತಿನ್ನುತ್ತಿದ್ದೆ.

ತೋಟದ ಬದಿಯಲ್ಲಿ ಝುಳು ಝಳು ನದಿ ಹರಿಯುತ್ತಿತ್ತು. ದಡದ ಬಂಡೆಯ ಮೇಲೆ ಕುಳಿತುಕೊಳ್ಳುತ್ತಿದ್ದೆ. ಕಾಲುಗಳಿಗೆ ಮೀನುಗಳು ಕಚ್ಚಿ ಕಚಗುಳಿಯಿಡುತ್ತಿದ್ದವು.ಕಲ್ಲಿನ ಅಡಿಯಲ್ಲಿ ಮೀನೊಂದು ನುಸುಳಿ ಮರೆಯಾದರೆ ಇನ್ನೊಂದು ಕಲ್ಲನ್ನೆತ್ತಿ ಆ ಕಲ್ಲಿನ ಮೇಲೆ ಹೊಡೆಯುತ್ತಿದ್ದೆ. ಕಲ್ಲಿನ ಅಡಿಯಲ್ಲಿದ್ದ ಮೀನು ಸತ್ತು ಹೋಗುತ್ತಿತ್ತು. ಈಗ ನೆನೆಸಿದರೆ ಮನಸ್ಸಿಗೆ ಒಂಥರ ಕಸಿವಿಸಿ.

ನಮ್ಮ ಮನೆಯ ಆಳು ಕರಿಯ ವಾಟೆ ಜಾತಿಯ ಬಿದಿರುಮೆಳೆಯಿಂದ ಕೊಳಲು ಮಾಡಿಕೊಡುತ್ತಿದ್ದ. ಬಂಡೆಯ ಮೇಲೆ ಕುಳಿತು ಕಣ್ಮುಚ್ಚಿ ಕೊಳಲು ನುಡಿಸುತ್ತಿದ್ದೆ. ಆಗ ನನಗೆ ನೆನಪಾಗುತ್ತಿದ್ದವನು ಯಮುನೆಯ ದಡದಲ್ಲಿ ಗೋವುಗಳ ಮಧ್ಯೆ ಕೊಳಲು ನುಡಿಸುತ್ತಿದ್ದ ಕೃಷ್ಣ. ನಂಗೆ ಕೃಷ್ಣ ಇಷ್ಟ. ಅವನ ಕಪ್ಪು ಮೈ ಬಣ್ಣ ಇಷ್ಟ. ಅವನ ಕೊಳಲ ಗಾನ ಇಷ್ಟ. ಇಂದಿಗೂ ಈ ಮೂರೂ ನನಗಿಷ್ಟ.

ಎಷ್ಟೋ ಹೊತ್ತಿನ ನಂತರ ಹೊಳೆಯ ದಡದಿಂದೆದ್ದು ನಾಣಿಲು ಮರದ ಹತ್ತಿರ ಬಂದು ಹಣ್ಣು ಕೊಯ್ದು ತಿನ್ನುತ್ತಿದ್ದೆ. ಎಲೆಯಲ್ಲಿ ಒಂದಷ್ಟು ಹಣ್ಣುಗಳನ್ನು ತಂಗಿಯರಿಗಾಗಿ ಕಟ್ಟಿಕೊಳ್ಳುತ್ತಿದ್ದೆ. ಬೇಲಿ ದಾಟಿ ತೋಟ ಹತ್ತಿ ಬಂದ ಮೇಲೆ ತಪ್ಪದೆ ಹೊಂಬಾಳೆಯನ್ನು ಆಯ್ದುಕೊಳ್ಳುತ್ತಿದ್ದೆ. ಅದು ನನ್ನ ಪ್ರೀತಿಯ ಕೆಂಪಿ ಹಸುವಿಗೆ.

ಕೆಂಪಿ ನನ್ನ ಬಾಲ್ಯದ ಒಡನಾಡಿ. ಅದು ಎಂತಹ ಹರಾಮಿ ದನ ಆಗಿತ್ತೆಂದರೆ ಊರಿನಯಾವ ಬೇಲಿಯೂ ಅದಕ್ಕೆ ಅಡ್ಡಿ ಅಲ್ಲ. ಅದನ್ನು ಮುರಿದು ಒಳನುಗ್ಗಿ ಕದ್ದು ಹುಲ್ಲು ಮೇಯುತ್ತಿತ್ತು. ನಮ್ಮೂರಿನಲ್ಲಿ ದನ-ಕರುಗಳನ್ನು ಹಟ್ಟಿಯಲ್ಲೇ ಕೂಡಿ ಹಾಕಿ ಸಾಕುವ ಪದ್ದತಿ ಇಲ್ಲ. ಬೆಳಿಗ್ಗೆ ಎದ್ದೊಡನೆ ದನಗಳ ಮುಂದೆ ಒಂದಷ್ಟು ಒಣ ಹುಲ್ಲು ಹಾಕುತ್ತಿದ್ದರು. ಆಮೇಲೆ ಹಟ್ಟಿ ಬಾಗಿಲು ತೆಗೆದು ದನಗಳನ್ನು ಬಯಲಿಗೆ ಅಟ್ಟಿ ಬಿಡುತ್ತಿದ್ದರು. ಅವು ಕಾಡಿನಲ್ಲಿ ಅಥವಾ ಗೋಮಾಳದಲ್ಲಿ ಮೇವು ಹುಡುಕಿಕೊಳ್ಳುತ್ತಿದ್ದವು. ಕೆಂಪಿಯಂತಹ ಹರಾಮಿ ದನಗಳಾದರೆ ಯಾರ‍್ಯಾರದೋ ತೋಟ ಗದ್ದೆಗಳಿಗೆ ನುಗ್ಗಿ, ಹೊಟ್ಟೆ ಬಿರಿಯೆ ತಿಂದು ಸೂರ್ಯ ಮುಳುಗುವ ಸಮಯಕ್ಕೆ ಸರಿಯಾಗಿ ಮನೆಗೆ ಹಿಂದಿರುಗುತ್ತಿದ್ದವು.

ಕೆಂಪಿ ಹಸುವಿನ ಬಗ್ಗೆ ಹೇಳುತ್ತಿದ್ದೆ ಅಲ್ವಾ..ಅದೆಂದರೆ ನನಗೆ ಅಚ್ಚುಮೆಚ್ಚು. ಅದಕ್ಕೆ ಬಹಳ ವಿಶಿಷ್ಟ ರೀತಿಯ ಕೊಂಬಿತ್ತು. ಆ ಕೊಂಬುಗಳ ಮೂಖಾಂತರ ಎಂತಹ ದಣಪೆಯನ್ನಾದರು ಅಲ್ಲಾಡಿಸಿ ತೆಗೆದು ಹೊಲ, ತೋಟಗಳಿಗೆ ನುಗ್ಗಿ ಬಿಡುತಿತ್ತು. ಇದು ಊರಿಗೇ ತಿಳಿದ ವಿಷಯ. ಅದು ದಣಪೆಗೆ ಹಾಕಿದ ಉದ್ದವಾದ ಕೋಲನ್ನು ಕೊಂಬುಗಳ ಮೂಲಕ ಸ್ವಲ್ಪ ಸ್ವಲ್ಪವಾಗಿ ಅಲ್ಲಾಡಿಸು ತೆಗೆಯುವುದೇ ಕಲಾತ್ಮಕ.

ಕೆಂಪಿ ಹಸುವಿನ ಈ ಕಲಾತ್ಮಕತೆಯೇ ಊರವರ ಕಣ್ಣು ಕೆಂಪಗೆ ಮಾಡಿ, ಅದರ ಬೆನ್ನಿನ ಮೂಳೆ ಮೂಳೆಯೂ ಪುಡಿ ಪುಡಿಯಾಗುತಿತ್ತು. ಅದರ ತೊಡೆ ಕೂಡಾ ಕಲ್ಲಿನ ಹೊಡೆತದಿಂದಾಗಿ ಒಂದೆರಡು ಕಡೆ ಉಬ್ಬಿಕೊಂಡಿತ್ತು. ಹೊಟ್ಟೆ, ಭುಜಗಳಲ್ಲಿ ಬಲವಾದ ಕೋಲಿನಿಂದ ಹೊಡೆದ ಉದ್ದನೆಯ ಗುರುತುಗಳಿದ್ದವು. ಅಲ್ಲಿ ರೋಮವಿರಲಿಲ್ಲ.

ಈ ಕೆಂಪಿಗೊಂದು ರೋಗವೂ ಇತ್ತು. ಅದು ಒಮ್ಮೊಮ್ಮೆ ಕಣ್ಣು ಮೆಟ್ರೆ ಮಾಡಿಕೊಂಡು ನೆಲದ ಮೇಲೆ ಬಿದ್ದು ಹೊರಳಾಡುತಿತ್ತು. ಬೇರೆ ದನಗಳೂ ಅಪರೂಪಕ್ಕೆ ಹೀಗೆ ಮಾಡುವುದುಂಟು. ಆಗ ದೃಷ್ಟಿಯಾಗಿದೆ ಎಂದುಕೊಂಡು (ಈ ದೃಷ್ಟಿ ತಾಗುವುದು ಕಲ್ಲುರ್ಟಿ, ಪಂಜುರ್ಲಿ ಮುಂತಾದ ಭೂತಗಳ ದೆಸೆಯಿಂದ) ಕಿವಿ ಸ್ವಲ್ಪ ಕೊಯ್ಯುತಿದ್ದರು. ರಕ್ತ ಬಾರದಿದ್ದರೆ ಸ್ವಲ್ಪ ಜಾಸ್ತಿಯೇ ಕೊಯ್ಯುತಿದ್ದರು. ಒಟ್ಟಿನಲ್ಲಿ ಸ್ವಲ್ಪ ರಕ್ತ ಬರಬೇಕು ಅಷ್ಟೇ. ಹೀಗೆ ಕೊಯ್ದು ಕೊಯ್ದು ನಮ್ಮ ಕೆಂಪಿ ಹಸುವಿನ ಕಿವಿಗಳು ಜೋರು ಮಳೆ ಗಾಳಿಗೆ ಸಿಕ್ಕ ಬಾಳೆ ಎಲೆಯ ಹಾಗೆ ಛಿದ್ರ ಛಿದ್ರವಾಗಿದ್ದವು.

ಹೀಗೆ ಮನೆಯವರಿಂದ, ಊರವರಿಂದ ಉಪೇಕ್ಷೆಗೊಳಗಾದ ಕೆಂಪಿ ಹಸು ಕರು ಬೇರ‍ೆ ಹಾಕಿರಲಿಲ್ಲ. ಇದರ ಹರಾಮಿ ಬುದ್ಧಿ ನೋಡಿ ಯಾವ ಎತ್ತು ಕೂಡ ಇದರ ಹತ್ತಿರ ಸುಳಿಯಲಿಲ್ಲವೇನೋ!. ಅಂತೂ ಈ ಬಂಜೆ ದನದ ಉಪಯೋಗ ಎಂದರೆ ಹಟ್ಟಿಗೆ ಗೊಬ್ಬರ ಅಷ್ಟೇ.

ಇಂತಹ ಕೆಂಪಿ ಹಸು ನನಗೆ ತೀರಾ ಅಚ್ಚುಮೆಚ್ಚಾದುದು ತೀರಾ ಸಹಜವಾಗಿತ್ತು. ಮನೆಯಲ್ಲಿ ಅಪ್ಪ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ನನ್ನ ಸೊಕ್ಕು, ಗರ್ವ, ಹಟಮಾರಿತನ ಎಲ್ಲರನ್ನು ಕೆರಳಿಸಿಬಿಡುತ್ತಿತ್ತು. ನಾನು ಎಷ್ಟು ಪೆಟ್ಟು ತಿನ್ನುತ್ತಿದ್ದೆನೆಂದರೆ ಅಪ್ಪನ ಬೆತ್ತದ ಛಡಿಯೇಟಿನಿಂದಾಗಿ ತೋಳು, ಬೆನ್ನು, ತೊಡೆಗಳಿಂದ ಕೆಲವೊಮ್ಮೆ ರಕ್ತ ಜಿನುಗುತಿತ್ತು. ಮಂಚದ ಕೆಳಗೆ ಅಡಗಿಕೊಂಡರೆ ಕಾಲಿನಿಂದಲೇ ಒದೆಯುತ್ತಿದ್ದರು.

ನಾನು ಅಪ್ಪ, ಅಣ್ಣ, ಅಮ್ಮ (ಅಮ್ಮ ಹೊಡೆಯುತ್ತಿದ್ದದ್ದು ತೀರ ಅಪರೂಪ. ಹೊಡೆದಾದ ಮೇಲೆ ಅವರು ಒಬ್ಬರೇ ಸೆರಗಿನಿಂದ ಕಣ್ಣೊರಿಸಿಕೊಳ್ಳುತ್ತಾ ಅಳುತ್ತಿದ್ದರು) ಪೆಟ್ಟು ತಿನ್ನುವಾಗಲೆಲ್ಲ ಹಲ್ಲು ಕಚ್ಚಿ ಅದನೆಲ್ಲ ಸಹಿಸಿಕೊಳ್ಳುತ್ತಿದ್ದೆ. ಕೊನೆಗೆ ಸೀದಾ ಹಟ್ಟಿಗೆ ಹೋಗುತ್ತಿದ್ದೆ. ಕೆಂಪಿ ಹಸುವಿನ ಕೊರಳನ್ನಪ್ಪಿ ಅಳುತ್ತಿದ್ದೆ. ಅದರ ಹತ್ತಿರ ಮಾತಾಡುತ್ತಿದ್ದೆ. ಅದರೊಡನೆ ದುಃಖ ತೋಡಿಕೊಳ್ಳುತ್ತಿದ್ದೆ.

‘ನಾನು ನೀನು ಇಬ್ಬರೂ ಒಂದೇ. ನಾವು ಯಾರಿಗೂ ಬೇಡವಾದವರು’ ಎಂದು ತುಂಬಾ ಹೊತ್ತು ಬಿಕ್ಕಳಿಸಿ ಅಳುತ್ತಿದ್ದೆ. ಅದಕ್ಕೆ ಇದೆಲ್ಲ ಅರ್ಥವಾಗುತ್ತಿತ್ತು. ಸುಮ್ಮನೆ ನನ್ನ ನೆತ್ತಿಯನ್ನು ಮೂಸಿ ನೋಡುತ್ತಾ ಮೈಕೈಗಳನ್ನು ನಾಲಗೆಯಿಂದ ಸವರುತಿತ್ತು.

ಇಂತಹ ಕೆಂಪಿ ಹಸು ಒಂದು ದಿನ ಮನೆಗೆ ಬರಲೇ ಇಲ್ಲ. ಯಾರೂ ಅದನ್ನು ಗಮನಿಸಲೇ ಇಲ್ಲ. ನಾನು ಹೇಳಿದರೂ ಯಾರೂ ಕ್ಯಾರೇ ಅನ್ನಲಿಲ್ಲ. ಮಾರನೆಯ ದಿನವು ಬರದಾಗ ಅಪ್ಪ, ಅಣ್ಣನಿಗೆ ಅದನ್ನು ಹುಡುಕಿಕೊಂಡು ಬರಲು ಅಮ್ಮ ಹೇಳಿದರು. ಅವರಿಗೋ ಗೊಬ್ಬರದ ಚಿಂತೆ. ಗದ್ದೆ ತೋಟಗಳಿಗೆ ಹಟ್ಟಿ ಗೊಬ್ಬರವನ್ನೇ ಉಪಯೋಗಿಸುತ್ತಿದ್ದರು. ರಾಸಯನಿಕ ಗೊಬ್ಬರಗಳಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆಯೆಂಬುದು ನನ್ನ ಅಪ್ಪನ ಬಲವಾದ ನಂಬಿಕೆ. ಅದವರ ಪ್ರತಿಪಾದನೆ.

ನಮ್ಮ ಮನೆಯಿಂದ ಒಂದರ್ಧ ಮೈಲಿ ದೂರದಲ್ಲಿ ನಮ್ಮ ದೊಡ್ಡಪ್ಪನ ಜಮೀನಿತ್ತು. ಅಲ್ಲಿ ಅವರು ತೆಂಗಿನ ಸಸಿ ನೆಡಬೇಕೆಂದು ದೊಡ್ಡ ದೊಡ್ಡ ಗುಂಡಿ ತೋಡಿಟ್ಟಿದ್ದರು. ಆ ಗುಂಡಿಗಳಲ್ಲಿ ಆಗಾಗ ನಮಗೆ ಆಮೆಗಳು ಸಿಗುತ್ತಿದ್ದವು. ಇಂತಹ ಒಂದು ಗುಂಡಿಗೆ ನಮ್ಮ ಕೆಂಪಿ ಹೂತು ಬಿದ್ದಿತ್ತು. ಅದರ ಕಾಲುಗಳು ಗುಂಡಿಯ ಒಳಗಿದ್ದವು. ಕೈಗಳು ಗುಂಡಿಯ ಮೇಲ್ಭಾಗದಲ್ಲಿ ಚಾಚಿಕೊಂಡಿದ್ದವು. ದೊಡ್ಡ ಹೊಟ್ಟೆಯನ್ನು ಗುಂಡಿಯೊಳಗೆ ತುರುಕಿಸಿ ಬಿಟ್ಟಂತಾಗಿತ್ತು. ಸುತ್ತಲೂ ನೊಣಗಳು ಮುತ್ತಿಕೊಂಡಿದ್ದವು. ಬಾಲ ಅಲ್ಲಾಡಿಸಿ ಅವುಗಳನ್ನು ಓಡಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಬಾಲ ಗುಂಡಿಯೊಳಗೆ ಇತ್ತು.

ಎರಡು ದಿನ ಹುಲ್ಲು, ನೀರಿಲ್ಲದೆ ಅದು ಬಸವಳಿದು ಹೋಗಿತ್ತು. ಅಪ್ಪನನ್ನು ನೋಡಿದೊಡನೆ ಅದರ ಕಣ್ಣು ಮಿಂಚಿತ್ತು. ಹಾಗೆಂದು ಅಪ್ಪನೇ ಮನೆಗೆ ಬಂದು ಹೇಳಿ ದೊಡ್ಡ ಕೊಡಪಾನವೊಂದರಲ್ಲಿ ಕಲಗಚ್ಚು ನೀರು ತೆಗೆದುಕೊಂಡು ಕರಿಯನನ್ನು ಕರೆದು ಪಿಕಾಶಿ, ಹಾರೆ, ಗುದ್ದಲಿಗಳನ್ನು ಒಟ್ಟು ಮಾಡಿಕೊಂಡು ದೊಡ್ಡಪ್ಪನ ಮಜಲಿನೆಡೆಗೆ ಹೋದರು.

ಮೊದಲಿಗೆ ಕೆಂಪಿಯ ಮೈಮೇಲೆ ಒಂದು ಕೊಡಪಾನ ತಣ್ಣೀರು ಸುರಿದರು. ಬಾಯಿಬಿಡಿಸಿ ಗೊಟ್ಟದಿಂದ (ಬಿದಿರಿನ ಕೊಳವೆ) ಕಲಗಚ್ಚು ಕುಡುಸಿದರು. ಅದಕ್ಕೆ ಸ್ವಲ್ಪ ಚೈತನ್ಯ ಬಂತು. ಇನ್ನು ಇವರು ತನ್ನನ್ನಿಲ್ಲಿಂದ ಮೇಲೆತ್ತುತ್ತಾರೆ ಎಂಬ ಭರವಸೆ ಮೂಡಿತು ಎಂಬಂತೆ ಕಿವಿಗಳನ್ನು ಅಲ್ಲಾಡಿಸಿತು. ಕಣ್ಣು ಮಿಟುಕಿಸಿತು.

ಅಷ್ಟು ಹೊತ್ತಿಗೆ ವಿಷಯ ತಿಳಿದು ಅಣ್ಣನೂ ಅಲ್ಲಿಗೆ ಬಂದ. ಊರಿನ ಕೆಲವರು ಬಂದರು. ಎಲ್ಲರೂ ಕೆಂಪಿಯ ಹರಾಮಿತನವನ್ನು ಕೊಂಡಾಡುವವರೇ! ಹಾಗಿದ್ದರೂ ಇದನ್ನು ಇಲ್ಲಿಂದ ಎತ್ತುವ ಬಗ್ಗೆಯೂ ಗಂಭೀರವಾದ ಸಲಹೆಗಳನ್ನು ನೀಡತೊಡಗಿದರು. ಕೊನೆಗೆ ಎಲ್ಲರೂ ಸೇರಿ ಗುಂಡಿಯನ್ನು ಇನ್ನಷ್ಟು ಅಗಲ ಮಾಡುವುದೆಂದು ತೀರ್ಮಾನಿಸಿ, ಹಾರೆ-ಗುದ್ದಲಿಗಳನ್ನು ಕೈಗೆತ್ತಿಕೊಂಡರು.

ಗುಂಡಿಯನ್ನು ಅಗೆದು ಅಗಲ ಮಾಡಿದ ಮೇಲೆ ಕೆಂಪಿಯ ಸೊಂಟಕ್ಕೆ ಹಗ್ಗ ಬಿಗಿದು ಆಚೆ ಈಚೆ ಜನ ನಿಂತು ಅದನ್ನು ಬಹು ಪ್ರಯಾಸದಿಂದ ಮೇಲೆತ್ತಿದರು. ಆದರೆ ಕೆಂಪಿ ಏಳಲೊಲ್ಲದು. ಬಹುಶಃ ಎರಡು ದಿನ ಅದೇ ಕಾಂಗರೂ ಸ್ಥಿತಿಯಲ್ಲಿ ಇತ್ತಲ್ಲ, ಅದಕ್ಕೆ ಕೈಕಾಲು ಜೋಮು ಹಿಡಿದಿರಬಹುದೆಂದು ಎಂದುಕೊಂಡರು ಎಲ್ಲ. ಅಲ್ಲೇ ನೆರಳಲ್ಲಿ ಕೂತು ಕೆಂಪಿಯ ಗುಣಗಾನ ಮಾಡುತ್ತಾ ಎಲೆಯಡಿಕೆ ಮೆಲ್ಲತೊಡಗಿದರು.

ಮತ್ತೆ ಪ್ರಯತ್ನಿಸಿದರೂ ಕೆಂಪಿಗೆ ಏಳಲು ಆಗಲೇ ಇಲ್ಲ. ನಮ್ಮ ನಾಟಿ ವೈದ್ಯ ಮಂಜಪ್ಪನೂ ಅಲ್ಲೇ ಇದ್ದ. ಆತ ಕೆಂಪಿಯ ಕೈಕಾಲನ್ನು ಮುಟ್ಟಿ ನೋಡಿ ಬಲಗಾಲು ಮುರಿದಿದೆ ಎಂದ. ನೋಡಿದರೆ ನಿಜವಾಗಿಯು ಅದು ಬಾತುಕೊಂಡಿತ್ತು. ಬಿದ್ದ ರಭಸಕ್ಕೆ ಮೊದಲು ಗುಂಡಿಗೆ ಕಾಲಿಟ್ಟ ಕಾಲು ಮುರಿದಿದೆ.

ಕೆಂಪಿಗೆ ನಡೆಯಲು ಆಗಲಿಲ್ಲ. ಅಲ್ಲೇ ಬಿಟ್ಟು ಹೋಗಲು ಯಾರಿಗೂ ಮನಸ್ಸಾಗಲಿಲ್ಲ. ಕೊನೆಗೆ ಭತ್ತ ಹೊಡೆಯುವ ತಡಿಯನ್ನು ತರಿಸಿ ಅದರ ಮೇಲೆ ಕೆಂಪಿಯನ್ನು ಮಲಗಿಸಿದರು. ಅಣ್ಣ, ಮಂಜಪ್ಪ, ಕರಿಯ, ಶೇಖರ ನಾಲ್ಕು ಜನ ತಡಿಯ ನಾಲ್ಕು ಮೂಲೆಗೆ ಹೆಗಲು ಕೊಟ್ಟರು.

ಮನೆಗೆ ಕೆಂಪಿಯನ್ನು ಹೊತ್ತು ತರುವಾಗ ದಾರಿಯಲ್ಲಿ ನಾಲ್ಕು ಕಡೆ ಇಳಿಸಿ ದಣಿವಾರಿಸಿಕೊಳ್ಳಬೇಕಾಯಿತು. ದಾರಿಯಲ್ಲಿ ಜನ ಅಲ್ಲಲ್ಲಿ ಹುಲ್ಲು, ನೀರು ನೀಡಿ ಕೆಂಪಿಗೆ ಉಪಚಾರ ಮಾಡಿದ್ದೇ ಮಾಡಿದ್ದು. ಕೆಂಪಿಯ ಆಟಾಟೋಪ ನೋಡಿ ‘ಲಟಾಂ ಕುದುರೆ’ ಎಂದು ಅಡ್ಡ ಹೆಸರು ಇಟ್ಟಿದ್ದ ಜನರು ಇವರ‍ೇನಾ ಎಂದು ನನಗಂತೂ ಆಶ್ಚರ್ಯ ಆಗಿತ್ತು.

ಮನೆಗೆ ಬಂದೊಡನೆ ಅಮ್ಮ ಅದನ್ನು ಕರುಗಳನ್ನು ಕಟ್ಟುವ ಕಂಚಿಲುನಲ್ಲಿ ಪ್ರತ್ಯೇಕವಾಗಿ ಇರಿಸಿದರು. ಹಟ್ಟಿಯಲ್ಲಿ ದನಗಳೊಟ್ಟಿಗೆ ಇಟ್ಟರೆ ಅದನ್ನು ಅವೆಲ್ಲಾದರು ತುಳಿದರೆ ಎಂಬ ಭಯ ಅವರಿಗೆ. ಅದಕ್ಕೆ ಹುಲ್ಲು ನೀರಿಟ್ಟು ಉಪಚರಿಸಿದ್ದೇ ಉಪಚರಿಸಿದ್ದು. ಮಂಜಪ್ಪ ದಿನಾ ಬಂದು ನಾರು ಬೇರಿನ ಔಷಧವನ್ನು ಗೊಟ್ಟದಲ್ಲಿ ಕುಡಿಸುತ್ತಿದ್ದ. ಕಾಲಿಗೆ ಔಷಧಿಯನ್ನು ಕಟು ಹಾಕುತ್ತಿದ್ದ. ಅದನ್ನು ಹಿಡಿದುಕೊಳ್ಳಲು ಅಪ್ಪ, ಅಣ್ಣ, ಅಮ್ಮ ಕರಿಯ ಹೆಣಗಾಡುತ್ತಿದ್ದರು. ನಾನು, ತಂಗಿಯರೆಲ್ಲಾ ಮೂಕ ಪ್ರೇಕ್ಷಕರು. ಅದರ ನೆತ್ತಿ ಸವರಿ ಸಾಂತ್ವಾನ ಹೇಳುತ್ತಿದ್ದೆವು.

ದಿನಾ ಸಂಜೆ ಮತ್ತು ಬೆಳಿಗ್ಗೆ ಅದರ ಕಾಲಿನ ಹತ್ತಿರ ಹೊಟ್ಟೆಯ ಅಡಿಗೆ ಹಗ್ಗ ಹಾಕಿ ಆಚೀಚೆ ಹಿಡಿದುಕೊಂಡು ಎದ್ದು ನಿಲ್ಲಿಸುತ್ತಿದ್ದೆವು. ಅದು ಕಾಲೂರಲು ಪ್ರಯತ್ನಿಸುತಿತ್ತು.

ಹೀಗೆ ಸುಮಾರು ದಿನ ಕಳೆಯಿತು. ಕೆಂಪಿ ನಿತ್ರಾಣವಾಗುತ್ತ ಹೋಯಿತು. ಮುರಿದ ಕಾಲು ಸರಿ ಹೋಗಲೇ ಇಲ್ಲ. ಅದಕ್ಕೆ ಇವರಿಂದ ಉಪಚಾರ ಮಾಡಿಸಿಕೊಂಡು ಸಾಕು ಎನಿಸಿತೇನೋ!

ಒಂದು ದಿನ ಬೆಳಿಗ್ಗೆ ಎಂದಿನಂತೆ ನಾನು ಚಾಪೆಯಿಂದ ಎದ್ದವಳೇ ಕೆಂಪಿಯನ್ನು ನೋಡಲು ಹೋದೆ. ಅದು ನೀಳವಾಗಿ ಕತ್ತು ಚಾಚಿ ಮಲಗಿತ್ತು. ಬಾಯಿಂದ ನಾಲಗೆ ತುಸುವೇ ಹೊರಗೆ ಬಂದಿತ್ತು. ಕಣ್ಣು ತೆರೆದೇ ಇತ್ತು. ಆಶ್ಚರ್ಯ ಎಂದರೆ ಅದರ ಕಣ್ಣು ಮಿನುಗುತ್ತಿರುವಂತೆ ಭಾಸವಾಗುತಿತ್ತು. ಮುಟ್ಟಿ ನೋಡಿದೆ. ಮುಖದಲ್ಲಿ ಕೂತಿದ್ದ ನೊಣಗಳೆಲ್ಲಾ ಹಾರಿ ಹೊದವು. ನನಗೆ ಗಾಬರಿಯಾಯಿತು. ಮನೆಗೆ ಓಡಿದೆ. ’ಕೆಂಪಿ ನೀಟ ಮಲಗಿದೆ. ಮುಟ್ಟಿದರೆ ಏಳ್ಲೇ ಇಲ್ಲ.’ ಎಂದು ಅಮ್ಮನಿಗೆ ಹೇಳಿದೆ.

‘ಕೆಂಪಿ ಸತ್ತುಹೋಯಿತು’ ಎನ್ನುತ್ತಾ ಅಪ್ಪ, ಹಾರೆ-ಗುದ್ದಲಿ ತೆಗೆದುಕೊಂಡರು. ಸುಮಾರು ಹೊತ್ತಿನ ನಂತರ ಅಪ್ಪ, ಅಣ್ಣ, ಕರಿಯ, ಅದರ ಹೊಟ್ಟೆಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋದರು. ಅದನ್ನು ಗುಂಡಿಯಲ್ಲಿಟ್ಟರು. ನನ್ಗೆ ಏನನ್ನಿಸಿತೋ ಏನೋ. ನಾನು ಯಾವಾಗಲೂ ಉಪಯೋಗಿಸುತ್ತಿದ್ದ ಬಿಳಿ ಟವಲ್ಲೊಂದನ್ನು ತಂದು ಅದರ ಮೇಲೆ ಹಾಕಿಬಿಟ್ಟೆ. "ಅಮ್ಮ ನಂಗೆ ಒಂದು ರೂಪಾಯಿ ಪಾವಲಿ ಕೊಡಿ" ಎಂದೆ. ಅಮ್ಮ ಯಾಕೆ ಎಂದರು. "ಕೆಂಪಿಯ ಹಣೆಗಿಡಲು" ಎಂದೆ. ನಮ್ಮ ಅಜ್ಜಿ ಸತ್ತಾಗ ಹೀಗೆ ಮಾಡಿದ್ದನ್ನು ನಾನು ನೋಡಿದ್ದೆ. ಅಮ್ಮ ನಂಗೆ ಒಂದು ರೂಪಾಯಿ ಕೊಟ್ಟರು.

ಇಂದು, ಇಂತಹ ಈ ಬೇಸರದ ಸಂಜೆಯಲಿ ನನಗೆ ನನ್ನ ಬಾಲ್ಯದ ಯಾವ ಒಡನಾಡಿಗಳ ನೆನಪೂ ಅಷ್ಟಾಗಿ ಕಾಡದೆ ಕೆಂಪಿಯೇ ಏಕೆ ಕಾಡುತ್ತದೆ? ಕೆಂಪಿಯ ಯಾವ ಗುಣಗಳು ನನ್ನಲ್ಲಿದ್ದವು? ಅದು ಸಾಂಪ್ರದಾಯಿಕ ಹಸುವಾಗಿರದೆ ಹರಾಮಿ ದನವಾಗಿದ್ದೇ ನನ್ನ ಮೆಚ್ಚುಗೆಗೆ ಕಾರಣವಾಗಿತ್ತೆ?

ಕೈಯಲ್ಲಿದ್ದ ಮೊಬೈಲ್ ರಿಂಗುಣಿಸಿತು. ಅಮ್ಮ ಲೈನಿನಲ್ಲಿದ್ದರು. "ಈ ಸಲ ದಸರಾಕ್ಕೆ ಬರ್ತೀಯಲ್ಲಾ, ಮಕ್ಕಳನ್ನು ಕರೆದುಕೊಂಡು ಬಾ, ಕೆಂಪಿ (ಆ ಕೆಂಪಿಯಲ್ಲ) ಕರು ಹಾಕಿದೆ. ಹೆಣ್ಣು ಕರು. ಕಂದು ಬಿಳಿ ಬಣ್ಣ. ಮಂಗಳಾ ಎಂದು ಹೆಸರಿಟ್ಟಿದ್ದೇವೆ. ಮಕ್ಕಳಿಗೆ ಇಷ್ಟವಾಗುವುದು...." ಅಮ್ಮ ಹೇಳುತ್ತಲೇ ಇದ್ದರು. ನಾನು ಕೇಳಿಸಿಕೊಳ್ಳುತ್ತಲೇ ಇದ್ದೆ.


[ ’ಮಯೂರ’ದಲ್ಲಿ ಪ್ರಕಟವಾದ ಪ್ರಬಂಧ ]