ಅದು ೨೦೦೯ರ ಜನವರಿ೨೪ರ ಶನಿವಾರದ ಇಳಿಸಂಜೆ.
ಮಂಗಳೂರಿನ ಬಲ್ಮಠದ ಸಮೀಪವಿರುವ ”ಅಮ್ನೇಷಿಯ’ ಪಬ್ ಮೇಲೆ ಶ್ರೀರಾಮ ಸೇನೆಯ ಕಾರ್ಯಕರ್ತರು ಹಠಾತ್ತಾನೆ ದಾಳಿ ಮಾಡಿದರು. ಅಲ್ಲಿದ್ದ ಹುಡುಗಿಯರ ಮೇಲೆ ದೈಹಿಕ ಹಲ್ಲೆ ನಡೆಸಿ ಅವರನ್ನು ಅಕ್ಷರಶಃ ಅಟ್ಟಾಡಿಸಿಕೊಂಡು ಹೊಡೆದರು. ತಮ್ಮ ದಾಳಿಗೆ ಅವರು ಕೊಟ್ಟ ಕಾರಣ ಏನೆಂದರೆ, ಪಬ್ ಸಂಸ್ಕೃತಿ ನಮ್ಮದಲ್ಲ. ಅಲ್ಲಿ ಅಶ್ಲೀಲ ನೃತ್ಯ ನಡೆಯುತ್ತಿತ್ತು; ಹುಡುಗಿಯರು ಮಧ್ಯ ಸೇವಿಸುತ್ತಿದ್ದರು.; ಅರೆಬೆತ್ತಲೆ ನೃತ್ಯ ನಡೆಯುತ್ತಿತ್ತು ಎಂಬುದಾಗಿತ್ತು. ಆದರೆ ಕ್ಯಾಮಾರದೃಶ್ಯಗಳಲ್ಲಿ ದಾಖಲಾದಂತೆ ಆ ಹೆಣ್ಣುಮಕ್ಕಳು ಮೈತುಂಬಾ ಬಟ್ಟೆ ಧರಿಸಿದ್ದರು.
ಅನಂತರದ ಬೆಳವಣಿಗೆಯಲ್ಲಿ ಸುದ್ದಿವಾಹಿನಿಗಳು ಇದನ್ನು ಮತ್ತೆ ಮತ್ತೆ ಪ್ರಸಾರ ಮಾಡಿ ರಾಷ್ಟ್ರಮಟ್ಟದ ಸುದ್ದಿಯಾಗಿಸಿದವು….
ಆಗ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ರೇಣುಕಅ ಚೌಧರಿಯವರು ಈ ಘಟನೆಯನ್ನು ಉಲ್ಲೇಖಿಸಿ ’ಮಂಗಳೂರು ತಾಲೀಬಾನ್ ಗೊಳ್ಳುತ್ತಿದೆ’ ಎಂದು ಹೇಳಿಕೆ ನೀಡಿದರು. ಅದು ನನಗೆ ನೋವನ್ನುಂಟುಮಾಡಿತು. ಯಾಕೆಂದರೆ ಅದು ನನ್ನ ಜಿಲ್ಲೆ; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ.
ದ.ಕ ಹಿಂದೆ ಹೀಗಿರಲಿಲ್ಲ. ಅದಕ್ಕಿರುವ ಸಮೃದ್ಧ ಜಾನಪದ ಪರಂಪರೆಯೇ ಅದಕ್ಕೆ ಸಾಕ್ಷಿಯಾಗಿತ್ತು.
ಎಲ್ಲರಿಗೂ ಇರುವಂತೆ ನನ್ನ ಜಿಲ್ಲೆಯ ಬಗ್ಗೆ ನನಗೆ ಅತೀವ ಮೋಹವಿದೆ. ಪಶ್ಚಿಮದಲ್ಲಿ ಸದಾ ಬೋರ್ಗರೆಯುವ ಕಡಲು. ಪೂರ್ವದಲ್ಲಿ ನಿತ್ಯ ಹರಿಧ್ವರ್ಣದ ಪಶ್ಚಿಮ ಘಟ್ಟಶ್ರೇಣಿ. ಇವುಗಳನ್ನು ಬೆಸೆಯುವ ಜೀವ ನದಿಗಳು. ಸದಾ ಕ್ರಿಯಾಶೀಲವಾಗಿರುವ ಜನ. ನಮ್ಮೇಲ್ಲರ ನಡೆ-ನುಡಿಯಲ್ಲಿ ಯಕ್ಷಗಾನದ ಲಯವಿದೆ. ಪುರಾಣದಲ್ಲಿ ವರ್ಣಿತವಾಗಿರುವ ನಾಗಲೋಕವಿದು.
ತುಳುನಾಡು ಎಂದು ಕರೆಯಲ್ಪಡುವ ಈ ಜಿಲ್ಲೆಯಲ್ಲಿ ನಾಗಾರಾಧಾನೆ ಭೂತಾರಾಧನೆಯಂತಹ ಆರಾಧನಾ ಪದ್ಧತಿಯಿದೆ. ಕಂಬಳ, ಚೆನ್ನೆಮಣೆ ಕಾಯಿ ಕುಟ್ಟುವುದು, ಕೋಳಿ ಅಂಕದಂತ ಜಾನಪದ ಕ್ರೀಡೆಗಳಿವೆ. ಆಟಿಕಳಂಜ, ಚೆನ್ನುನಲಿಕೆಯಂತ ಜಾನಪದ ಕುಣಿತವಿದೆ. ಧರ್ಮ ಸಮನ್ವಯಕ್ಕೆ ಕಾರಣವಾದ ಅಲಿ, ಬಬ್ಬರ್ಯ ಭೂತವಿದೆ [ ಮುಸ್ಲಿಂ ಕಾರಣಿಕ ದೈವಗಳು ]. ಸರ್ವಧರ್ಮದವರಿಂದಲೂ ಪೂಜಿಸಲ್ಪಡುವ ಅತ್ತೂರು ಚರ್ಚ್ ಇದೆ. ಜೈನ-ಶೈವ ಸಂಗಮದ ಧರ್ಮಸ್ಥಳವಿದೆ. ಉಳ್ಳಾಲದ ದರ್ಗವಿದೆ. ಬಪ್ಪಬ್ಯಾರಿಯಿಂದ ಕಟ್ಟಲಾಗಿದೆಯೆನ್ನುವ ದುರ್ಗಪರಮೇಶ್ವರಿ ದೇವಸ್ಥಾನವಿದೆ.
ಹಾಗಿದ್ದರೂ ನನ್ನ ಜಿಲ್ಲೆ ಸತತ ಕೋಮು ಗಲಭೆಗಳಿಂದ ತತ್ತರಿಸುತ್ತಿತ್ತು. ಮಾತೃಮೂಲ ಸಂಸ್ಕೃತಿ ಇನ್ನೂ ಜೀವಂತವಾಗಿರುವ ಈ ನಾಡಿನಲ್ಲಿ ಮಹಿಳೆಯರ ಮೇಲೆ ನಿರಂತರ ಹಲ್ಲೆಗಳಾಗುತ್ತಿವೆ. ಜನ ಭಯ ಭೀತರಾಗಿದ್ದಾರೆ. ಇದರ ವಿರುದ್ಧ ಧ್ವನಿಯೆತ್ತುವವರ ಧ್ವನಿಯನ್ನು ಅಡಗಿಸಲಾಗುತ್ತಿತ್ತು. ಈಗ ಕೇಂದ್ರ ಸಚಿವೆಯೊಬ್ಬರು ಟೀವಿ ವರದಿಗಳನ್ನು ನೋಡಿ ನಮ್ಮನ್ನು ತಾಲೀಬಾನಿಗಳು ಎಂದು ಕರೆಯುತ್ತಿದ್ದಾರೆ….ಹಾಗಾಗಿ ನಾನು ’ನಾವು ಹಾಗಿಲ್ಲ’ ಎಂಬ ಲೇಖನವೊಂದನ್ನು ಬರೆದು ಕನ್ನಡಪ್ರಭಾ ಸಾಪ್ತಾಹಿಕ ಪುರವಣಿಗೆ ಕಳುಹಿಸಿಕೊಟ್ಟೆ. ಅದು ಅಲ್ಲಿ ಪ್ರಕಟವಾಯ್ತು. ಅದನ್ನು ಓದಿದ ದೆಹಲಿಯಲ್ಲಿರುವ ಜಾನಪದ ವಿಧ್ವಾಂಸ, ಅಮೇರಿಕನ್ ಇನ್ಸ್ ಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿ ಉದೋಗಸ್ಥರಾಗಿರುವ ಪುರುಷೋತ್ತಮ ಬಿಳಿಮಲೆ ನನ್ನನ್ನು ಸಂಪರ್ಕಿಸಿ, ನಮ್ಮ ಜಿಲ್ಲೆ ಹಾಗಿರಲಿಲ್ಲ ಎಂಬುದನ್ನು ನಾವು ಬೇರೆಯವರಿಗೆ ಹೇಳಬೇಕಲ್ಲ, ಅದಕ್ಕಾಗಿ ಏನು ಮಾಡಬಹುದು? ಎಂದು ಪರಸ್ಪರ ಸಮಾಲೋಚನೆಯಲ್ಲಿ ತೊಡಗಿದೆವು…
ಆಗ ಇನ್ನೊಂದು ಘಟನೆ ನಡೆಯಿತು; ಪೆ. ೧೩ರಂದು ಮಂಗಳೂರು ನಗರಪಾಲಿಕೆ ರೇಣುಕಾ ಚೌಧರಿಗೆ ನೋಟಿಸ್ ಜಾರಿ ಮಾಡಿತು. ಸಚಿವೆಯ ಬೇಜಾವಾಬ್ದಾರಿ ಹೇಳಿಕೆಯನ್ನು ಆಕ್ಷೇಪಿಸಿ ಆಕೆ ಮಂಗಳೂರು ಜನರ ಕ್ಷಮೆ ಕೇಳಬೇಕು ಎಂದು ತಾಖೀತು ಮಾಡಿದರಲ್ಲದೆ ಅದಕ್ಕಾಗಿ ಮೂರು ದಿನ ಗಡುವು ನೀಡಿ, ಹಾಗೆ ಮಾಡದಿದ್ದರೆ ಕ್ರಿಮಿನಲ್ ಮೊಕ್ಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಆಗ ತಾನೇ ಮೊತ್ತ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು. ಹಾಗ್ಯೇ ಮಂಗಳೂರು ಮಹಾನಗರಪಾಲಿಕೆ ಬಿಜೆಪಿ ಆಡಳಿತದಲ್ಲಿತ್ತು. ಹಾಗಾಗಿಯೇ ಮೇಯರ್ ಗಣೇಶ್ ಕೇಂದ್ರದಲ್ಲಿರುವ ಕಾಂಗ್ರೇಸ್ ನೇತೃತ್ವದ ಸಚಿವರೊಬ್ಬರಿಗೆ ನೋಟಿಸ್ ಕೊಡುವ ದಾರ್ಷ್ಟ್ಯವನ್ನು ತೋರಿದ್ದರು.
ಇದೇ ತಿಂಗಳಿನಲ್ಲಿ ಇನ್ನೊಂದು ಘಟನೆ ನಡೆಯಿತು. ಕರಾವಳಿ ಅಲೆ ಸಂಪಾದಕ ಬಿ.ವಿ ಸೀತಾರಾಂ ಅವರನ್ನು ಬಂದಿಸಿದ ಪರಿ ಮತ್ತು ಅವರನ್ನು ನಡೆಸಿಕೊಂಡ ರೀತಿಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಸರಕಾರಕ್ಕೆ ಹತ್ತು ಸಾವಿರ ರೂಪಾಯಿಗಳ ದಂಡ ವಿಧಿಸಿತು.
ಇದೆಲ್ಲಾ ಅಂದಿನ ವರ್ತಮಾನದ ವಿಷಯಗಳಾದವು..
ಆದರೆ ಒಳಗೊಳಗೇ ಕುದಿಯುತ್ತಿದ್ದ ನನ್ನ ಜಿಲ್ಲೆಯ ಒಳಗುದಿ ನನಗೆ ಅಲ್ಲಿಯ ಸ್ಥಳೀಯ ಪತ್ರಿಕೆಗಳಿಂದ ತಿಳಿಯುತ್ತಿತ್ತು.ಬೆಂಗಳೂರಿನಲ್ಲಿ ಕುಳಿತು ಅವುಗಳನ್ನು ಓದುತ್ತಿದ್ದರೆ ಊರಿಗೆ ಹೋಗಿ ಬಂದ ಅನುಭವಾಗುತ್ತಿತ್ತು. ಬಿಟುವಿನ್ ದಿ ಲೈನ್ಸ್ ಓದುವವರಿಗೆ ಅಲ್ಲಿ ಹಲವಾರು ವಿಷಯಗಳು ಗೋಚರಿಸುತ್ತಿದ್ದವು. ಆದರೆ ಬರಬರುತ್ತಾ ನನ್ನ ಗಮನ ಸೆಳೆಯುತ್ತಿದ್ದ ವಿಷಯ ಅಂದ್ರೆ ಅಲ್ಲಿ ಹಿಂದು-ಮುಸ್ಲಿಂ ಸಾಮರಸ್ಯವನ್ನು ಕದಡುವುದಕ್ಕೆ ಕಾರಣವಾಗುತ್ತಿದ್ದ ಕ್ಷುಲಕವೆನಿಸುವ ವಿಷಯಗಳು.
ದ.ಕನ್ನಡದಲ್ಲಿ ಕೋಮು ಭಾವನೆಯ ಪತ್ತೇದಾರಿ ಕೆಲಸ ಭಾರಿ ದೊಡ್ಡ ಪ್ರಮಾಣ್ದಲ್ಲಿದೆ. ಒಂದು ಹುಡುಗ ಹುಡುಗಿ ಪರಸ್ಪರ ಮಾತಾಡುತ್ತಿದ್ದರೆ. ಅವರ ಜಾತಿ ಪತ್ತೆ.ಮಾಡುವ, ದನ ಸಾಗಾಟ ನಡೆಯುತ್ತಿದ್ದರೆ, ಅದು ಕಸಾಯಿಖಾನೆಗೇ ತೆದುಕೊಂಡು ಹೋಗಲಾಗುತ್ತಿದೆ ಎಂದು ಬಿಂಬಿಸುವ ಮತ್ತು ಅದಕ್ಕೆ ತಕ್ಕ ಶಾಸಿಯನ್ನು ಮಾಡುವ ಕೆಲಸ ಇವರದ್ದು…ಇದರ ಮುಂದುವರಿಕೆಯೇ ’ನೈತಿಕ ಪೋಲಿಸ್’ ಜಾಲ. ಇದು ಹಿಂದುಗಳಲ್ಲೂ ಇದೆ. ಮುಸ್ಲಿಂರಲ್ಲೂ ಇದೆ. ಹಾಗಾಗಿಯೇ ಕೋಮು ಪ್ರಜ್ನೆ ಎಂಬುದು ಈಗ ಬಾಲ್ಯದಿಂದಲೇ ಮಕ್ಕಳ ಮನಸ್ಸಿನಲ್ಲಿ ಬೇರೂರುತ್ತಲಿದೆ.
ನನ್ನ ಅಥವಾ ದೆಹಲಿಯಲ್ಲಿರುವ ಬಿಳಿಮಲೆಯ ಬಾಲ್ಯದಲ್ಲಿ ಹೀಗಿರಲಿಲ್ಲ. ಸಾಮನ್ಯವಾಗಿ ನಾವು ಒಂಟೊಂಟಿ ಮನೆಗಳಲ್ಲಿ ಬೆಳೆದವರು. ಅಡಿಕೆ ಅಲ್ಲಿಯ ಮುಖ್ಯ ವಾಣಿಜ್ಯ ಬೆಳೆ. ಅದನ್ನು ಖರೀದಿ ಮಾಡಲು ನಮ್ಮ ಮನೆಗೆ ಬ್ಯಾರಿಗಳು ಬರುತ್ತಿದ್ದರು. ಮಳೆಗಾಲದಲ್ಲಿ ನಮಗೆ ಅಗತ್ಯವಾಗಿದ್ದ ದುಡ್ಡಿನ ಸಹಾಯ ಮಾಡಿ ದೀಪಾವಳಿಯ ಸಮಯದಲ್ಲಿ ಅಡಿಕೆಯನ್ನು ಕೊಂಡೊಯ್ಯುತ್ತಿದ್ದರು. ಎಲ್ಲವೂ ಬಾಯಿಮಾತಿನ ಮೇಲೆ ನಡೆಯುವ ಸೌಹಾರ್ಧ ಸಂಬಂಧ ಅದಾಗಿತ್ತು..ಈ ಮಧ್ಯೆ ನಮಗೆ ಬೇಕಾದ ಕೆಲವು ವಸ್ತುಗಳನ್ನು ಅವರು ಮಂಗಳೂರಿನಿಂದ ತಂದುಕೊಡುತ್ತಿದ್ದರು. ಸೇಕುಂಝಿ ಬ್ಯಾರಿ ಎಂಬುವರು ನನಗೆ ನನ್ನ ಮೊದಲ ವಾಚ್ ತಂದುಕೊಟ್ಟವರು. ಅವರೇ ನಮಗೆ ಮಂಗಳೂರಿನಿಂದ ರುಚಿಯಾದ ಓಲೆ ಬೆಲ್ಲವನ್ನು ತಂದುಕೊಡುತ್ತಿದ್ದರು. ಅಂಟುವಾಳ ಕಾಯಿ ಕೊಟ್ಟರೆ ವರ್ಷಕ್ಕಾಗುವಷ್ಟು ಸೋಪುಗಳನ್ನು ತಂದು ಕೊಡುತ್ತಿದ್ದರು. ಇಂತಹ ’ ಬಳೆಗಾರ ಚೆನ್ನಯ್ಯನಂತಹ’ ಆರೇಳು ಬ್ಯಾರಿಗಳು ನಮ್ಮೂರಲ್ಲಿದ್ದರು. ನನ್ನಪ್ಪನ ಆಪ್ತ ಸೇಹಿತರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು.
ಕೋಮುಸಂಘರ್ಷ ಮತ್ತು ಅದರಿಂದಾಚೆ ವಿಸ್ತರಿದ ಸ್ತ್ರೀ ದೌರ್ಜನ್ಯ..ಇವೆಲ್ಲವೂ ನನ್ನ ಮತ್ತು ಬಿಳಿಮಲೆಯ ನಿರಂತರ ಮಾತುಕತೆಯಲ್ಲಿ ಒಂದು ನಿರ್ದಿಷ್ಟ ರೂಪವನ್ನು ಪಡೆಯುತ್ತಾ…ದ.ಕನ್ನಡದ ಬಹುಮುಖಿ ಸಂಸ್ಕೃತಿ ಏಕಮುಖಿ ಸಂಸ್ಕೃತಿಯೆಂಬಂತೆ ಬಿಂಬಿತವಾಗುತ್ತಿರುವ ಈ ಹೊತ್ತಿನಲ್ಲಿ ನಮ್ಮ ಜಿಲ್ಲೆಯ ಬಹುಮುಖ ಸಂಸ್ಕೃತಿಯನ್ನು ಪರಿಚಯಿಸುವ ಪುಸ್ತಕವನ್ನು ಹೊರತರುವ ಆಲೋಚನೆಯೊಂದು ನಮ್ಮಲ್ಲಿ ಮೂಡಿತು. ಅದರ ಫಲವಾಗಿ ಮೂಡಿ ಬಂದ ಪುಸ್ತಕವೇ ’ಕಡಲ ತಡಿಯ ತಲ್ಲಣ’
ಪುಸ್ತಕ ತರುವುದರ ಬಗ್ಗೆ ನಿರ್ಧರಿಸಿಯಾಗಿತ್ತು. ಆದರೆ ಲೇಖನಗಳನ್ನು ಯಾರಿಂದ ಬರೆಸಬೇಕು? ಯಾವ ಹಿನ್ನೆಲೆಯಿಂದ ಅವರಲ್ಲಿ ಲೇಖನಗಳನ್ನು ಕೇಳಬೇಕು ಎಂದು ಯೋಚಿಸಿದಾಗ ನಮಗೆ ಅನ್ನಿಸಿದ್ದು; ಪಾರ್ಲಿಮೆಂಟ್ ಚುನಾವಣೆ ಹತ್ತಿರದಲ್ಲಿದೆ. ನಮ್ಮಲ್ಲಿ ಹೆಚ್ಚು ಸಮಯವಿಲ್ಲ. ಹಾಗಾಗಿ ತುಳುನಾಡಿನ ಬಹುಮುಖ ಸಂಸ್ಕೃತಿಯನ್ನು ಪ್ರೀತಿಸಿದ ಮತ್ತು ಇಲ್ಲಿಯ ಕೋಮು ಸೌಹಾರ್ಧತೆಗೆ ಸಂಬಂಧಪಟ್ಟಂತೆ ಕರಾವಳಿಯ ಸೃಜನಶೀಲ ಸಾಹಿತಿ-ಕಲಾವಿದರ ಮನಸು ಹೇಗೆ ಮಿಡಿದಿದೆ; ಪ್ರತಿಕ್ರಿಸಿದೆ ಎಂಬುದನ್ನು ಒಂದೆಡೆಗೆ ತರುವ, ದಾಖಲಿಸುವ ಪ್ರಯತ್ನ ಮಾಡುವುದೆಂದು. ಆ ಉದ್ದೇಶದಿಂದ ನಾವು ಲೇಖನಗಳನ್ನು ಹುಡುಕತೊಡಗಿದೆವು. ಆಗ ನಮಗೆ ಗೊತ್ತಾಗಿದ್ದು ಒಂದು ವೇಳೆ ಯಾರಾದರೂ ತುಳುನಾಡನ್ನು ವರ್ತಮಾನದ ನೆಲೆಯಲ್ಲಿ ನಿಂತು ಅಭ್ಯಾಸ, ಅಧ್ಯಯನ ಮಾಡುವುದಾದರೆ ಸರಿಯಾದ ಆಕರ ಗ್ರಂಥಗಳೇ ಇಲ್ಲವೆಂದು. ಬಿಡಿ ಬಿಡಿ ಬರಹಗಳು ಸಿಗುತ್ತವೆ. ಆದರೆ ಸಮಗ್ರಹ ಚಿತ್ರಣ ಸಿಗುವುದಿಲ್ಲ. ಹಾಗಾಗಿ ನಾವು ತರಲಿರುವ ನಮ್ಮ ಪುಸ್ತಕಕ್ಕೆ ಸ್ಪಷ್ಟವಾದ ಉದ್ದೇಶ ನಮಗೆ ಸಿಕ್ಕಂತಾಯಿತು. ತುಳುನಾಡನ್ನು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ನೆಲೆಯಿಂದ ಅಧ್ಯಯನ ಮಾಡುತ್ತಾ, ವರ್ತಮಾನದ ಜೊತೆ ಮುಖಾಮುಖಿಯಾಗಿಸುವ ಪ್ರಯತ್ನ ನಮ್ಮದಾಗಿತ್ತು. ಆ ಹಿನ್ನೆಲೆಯಲ್ಲಿ ನಾವು ಮೂವತ್ತಾರು ಬರಹಗಳನ್ನು ಆಯ್ಕೆ ಮಾಡಿಕೊಂಡೆವು.
ನಮ್ಮ ತುಳುನಾಡು ಹೇಗೆ ಬಹುಮುಖಿ ಸಂಸ್ಕೃತಿಯನ್ನು ಹೊಂದಿತ್ತೋ ಹಾಗೆಯೇ ಹಾಗೆಯೇ ನಮ್ಮ ಪುಸ್ತಕವೂ ಇರಲಿ ಎಂಬ ಉದ್ದೇಶದಿಂದ ನಾವು ಇದರಲ್ಲಿ ಲೇಖನ, ಕಥೆ, ಕವನ, ಮುನ್ನುಡಿ, ಪತ್ರ, ಬ್ಲಾಗ್ ಬರಹ, ಅನುಭವ ಕಥನ, ವರದಿ ಎಲ್ಲವನ್ನೂ ಬಳಸಿಕೊಂಡಿದ್ದೇವೆ. ಕೇವಲ ಒಂದು ವಾರದ ಅವಧಿಯಲ್ಲಿ ಇದನ್ನೆಲ್ಲಾ ಸಂಗ್ರಹಿಸಿ ಲೇಖಕರ ಒಪ್ಪಿಗೆಯನ್ನು ಪಡೆದುಕೊಂಡೆವು. ಕೇವಲ ನಮ್ಮವರಷ್ಟೆ ಯಾಕೆ ? ಕೆಲವು ನೆಂಟರ ಅಭಿಪ್ರಾಯವನ್ನೂ ಕೇಳೋಣ ಎಂದುಕೊಂಡು.’ಘಟ್ಟದ ಮೇಲಿನಿಂದ ನಿಂತು ಕೆಳಗಿರುವ ಕರಾವಳಿಯನ್ನು ನೋಡಿದಾಗ ನಿಮಗೇನನ್ನಿಸುತ್ತಿದೆ?’ ಎಂದು ಕೇಳಿ ಲೇಖನವನ್ನು ಪಡೆದುಕೊಂಡು ಎಲ್ಲವನ್ನೂ ಪೆ.೨೮ಕ್ಕೆ ಪ್ರಕಾಶಕರ ಕಯ್ಯಲ್ಲಿ ಕೊಟ್ಟು ಮಾರ್ಚ್ ೨೮ಕ್ಕೆ ಪುಸ್ತಕ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆವು.
’ಬ್ಯಾರಿ ಸಮಾಜ ಮತ್ತು ಶಿಕ್ಷಣ’ ಎಂಬ ಗಂಭೀರ ಬರಹದಿಂದ ’ಭಯೋತ್ಪಾದನೆ ಏನೆಂಬುದು ತಿಳಿಯಬೇಕೆ? ಬನ್ನಿ ಮಂಗಳೂರಿಗೆ’ ಎಂಬ ಪ್ರತ್ಯಕ್ಷ ವರದಿಯತನಕ ಈ ಪುಸ್ತಕದಲ್ಲಿ ಒಟ್ಟು ೩೬ ಬರಹಗಳಿವೆ. ಪುಸ್ತಕದ ಮುಖಪುಟವನ್ನು ತುಂಬಾ ಅರ್ಥಪೂರ್ಣವಾಗಿ ರಚಿಸಿಕೊಟ್ಟವರು ನಮ್ಮ ಜಿಲ್ಲೆಯವರೇ ಆದ ಸುಧಾಕರ ದರ್ಭೆ.
ನಮ್ಮ ಗೌರವಾನ್ವಿತ ಲೇಖಕರು ಮತ್ತು ಅವರು ಬರೆದ ಲೇಖನ ಹೀಗಿದೆ;
೧. ’ಹೆಳವನ ಹೆಗಲ ಮೇಲೆ ಕುರುಡ ಕುಳಿತ್ತಿದ್ದಾನೆಯೇ?”-ಡಾ.ಪುರುಷೋತ್ತಮ ಬಿಳಿಮಲೆ.
೨.ಕೂಡಿ ಕಟ್ಟಿದ್ದನ್ನು ಒಡೆದು ಮುರಿದರು-ದಿನೇಶ್ ಅಮೀನ್ ಮಟ್ಟು.
೩.ಬುದ್ಧಿವಂತರ ಜಿಲ್ಲೆಯಲ್ಲಿ ಮೂಕಜ್ಜಿಗೆ ಕನಸುಗಳಿಲ್ಲ-ಡಾ. ಮುಜಾಫರ್ ಅಸ್ಸಾದಿ.
೪.ನಗಣ್ಯವಾಗುತ್ತಿರುವ ದ.ಕ.ಜಿಲ್ಲೆ-ವಡ್ಡರ್ಸೆ ರಘುರಾಮ ಶೆಟ್ಟಿ.
೫.ನಾವು ಹಾಗಿಲ್ಲ ಮಾರಾಯ್ರೇ!-ಉಷಾಕಟ್ಟೆಮನೆ.
೬.ಭಯೋತ್ಪಾದನೆ ಏನೆಂದು ತಿಳಿಯಬೇಕೆ? ಬನ್ನಿ ಮಂಗಳೂರಿಗೆ-ಗುಲಾಬಿ ಬಿಳಿಮಲೆ.
೭. ಮಂಗಳೂರು ಎಂಬ ಭಾವನೆ-ಬಾಲಕೃಷ್ಣ ನಾಯಕ್.
೮. ಬಹು ಭಾಷೆಗಳ ಆಡುಂಬೊಲ-ಎಂ. ಮರಿಯಪ್ಪ ಭಟ್ಟ.
೯.ತುಳುನಾಡು ಬಹುಧರ್ಮಗಳ ಬೀಡು.-ಎಸ್.ಡಿ.ಶೆಟ್ಟಿ.
೧೦.ಸಾಂಸ್ಲೃತಿಕ ಚಹರೆ;ಕೆಲವು ಟಿಪ್ಪಣಿಗಳು-ಅಮೃತ ಸೋಮೇಶ್ವರ.
೧೧. ನನ್ನ ಬಾಲ್ಯದ ದೀಪಾವಳಿ-ಫಕೀರ್ ಮಹಮ್ಮದ್ ಕಟ್ಪಾಡಿ.
೧೨. ತುಳುನಾಡಿನ ಶಕ್ತಿಶಾಲಿ ಮಹಿಳೆಯರು-ಡಾ.ಗಾಯತ್ರಿ ನಾವಡ.
೧೩.ಕೊಂಕಣಿಯೊಬ್ಬನ ಸ್ವಜನ ಪ್ರೇಮ-ಗುರು ಬಾಳಿಗ.
೧೪.ಗೇಣಿದಾರನ ಏಣಿಯಾಟ-ಡಾ.ಎಚ್.ನಾಗವೇಣಿ.
೧೫.ಪಡ್ನೂರಿನ ಪಾಠಗಳು-ಎಸ್.ಆರ್. ವಿಜಯಶಂಕರ್.
೧೬.ಸಂಸ್ಕೃತಿ ಮತ್ತು ವಿಕೃತಿ-ಕೆ.ವಿ.ತಿರುಮಲೇಶ್.
೧೭.ಅಸ್ಪೃಶ್ಯ ಬಣ್ಣಗಳು-ಶ್ರೀನಿವಾಸ ಕಾರ್ಕಳ.
೧೮. ಮತ್ತೆ ಪಡೆದ ಶಕುಂತಲೆ ಮತ್ತು ತೋಡಿದ ಬಾವಿಗಳು.
೧೯.ಸಮುದ್ರದ ಅಲೆ ನಿಲ್ಲಬಾರದು-ಭಾಸ್ಕರ ಹೆಗಡೆ.
೨೦.ನೆಂಟನೊಬ್ಬನ ಬಿಕ್ಕಳಿಕೆ- ಜಿ.ಎನ್. ಮೋಹನ್
೨೧ ಓಟಿಗೋ? ಒಗ್ಗಟ್ಟಿಗೋ?- ಯು.ಆರ್.ಅನಂತಮೂರ್ತಿ.
೨೨.ಪ್ರವಾದಿಯ ಕನಸು-ಬಿ.ಎಂ.ಬಶೀರ್.
೨೩.ಒಂದು ತುಂಡು ಗೋಡೆ-ಬೊಳುವಾರು ಮಹಮ್ಮದ್ ಕುಂಝಿ.
೨೪.ಅಂಬೆಡ್ಕರ್ ಮತ್ತು ನನ್ನೂರ ಕೊರಗನ ಆನೆಕಾಲು-ಆರ್ಕೆ ಮಣಿಪಾಲ.
೨೫.ಒಂದು ಸುಖಕ್ಕೆ ಹತ್ತು ದುಃಖ-ಶಿವರಾಮ ಕಾರಂತ.
೨೬.ಶ್ರೀ ಮುಖ-ಕಯ್ಯಾರ ಕಿಝಂಣ ರೈ.
೨೭.ಅರ್ಘ್ಯ-ಎಂ.ವ್ಯಾಸ.
೨೮.ನಿರಂಜನರ ಪತ್ರಗಳು.
೨೯.ಮುಸ್ಲಿಂ ಬುದ್ಧಿಜೀವಿಗಳೇ ಎಚ್ಚೆತ್ತುಕೊಳ್ಳಿ!-ಡಿ.ಎಸ್. ನಾಗಭೂಷಣ್.
೩೦.ಮುಸ್ಲಿಂ ಸಂವೇದನೆ ಮತ್ತು ನಾನು-ಸಾರಾ ಅಬೂಬಕ್ಕರ್.
೩೧. ಬ್ಯಾರಿ ಸಮಾಜ ಮತ್ತು ಶಿಕ್ಷಣ- ಬಿ.ಎಮ್.ಇಚ್ಲಂಗೋಡು.
೩೨.ಎಣ್ಣೆ ಹೊಯ್ಯಮ್ಮ ದೀಪಕ್ಕೆ!-ಸೇಡಿಯಾಫ್ ಕೃಷ್ಣಭಟ್.
೩೩.ಕೋಮು ಸಂಘರ್ಷವಾದ ಆರ್ಥಿಕ ಸಂಘರ್ಷ…!-ಶಶಿಧರ್ ಭಟ್
೩೪.ಕರಾವಳಿ ಕೋಮು ಸಂಘರ್ಷದ ಸುತ್ತ- ಡಾ.ವಿ.ಲಕ್ಷ್ಮೀನಾರಾಯಣ.
೩೫.ಮತಧರ್ಮ ಮತ್ತು ರಾಜಕೀಯ-ಜಿ.ರಾಮಕೃಷ್ಣ.
೩೬. ಅಬ್ದುಲ್ಲನ ಕೈಲಾಸ-ಸುದೇಶ್ ಮಹಾನ್.
’ಕಡಲ ತಡಿಯ ತಲ್ಲಣಕ್ಕೆ ನಾವು ಬರೆದ ಮುನ್ನುಡಿ ಹೀಗಿತ್ತು ;
”ಕರಾವಳಿ ಕರ್ನಾಟಕದ ಕೆಲವು ಭಾಗಗಳು ಈಗ ಹೊತ್ತಿ ಉರಿಯುತ್ತಿವೆ. ದೇಶದ ಎಲ್ಲಾ ಕಡೆಯ ಜನರ ಆದರಕ್ಕೆ ಒಳಗಾಗಿದ್ದ ಈ ಭಾಗ ಈಗ ಕ್ಷುಲಕ ಕಾರಣಗಳಿಗಾಗಿ ಸುದ್ದಿ ಮಾಡುತ್ತಿದೆ. ಅನೇಕ ಭಾಷೆ, ಸಂಸ್ಕೃತಿಗಳ ನೆಲೆವೀಡಾದ ಕಡಲಕರೆಯ ನೆಲ ಈಗ ಕೆಲವು ನಿರ್ಧಿಷ್ಟ ಶಕ್ತಿಗಳ ಕೈಯ್ಯಲ್ಲಿ ಏಕರೂಪತೆಯನ್ನು ಪಡೆಯುವತ್ತ ಹೆಜ್ಜೆ ಹಾಕುತ್ತಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುರೂಪತೆಯನ್ನು ನಾಶ ಮಾಡುವುದೆಂದರೆ ಅಲ್ಲಿನ ಸಂಸ್ಕ್ಲೃತಿಯನ್ನು ಸಾಯಿಸುವುದೆಂದೇ ಅರ್ಥ. ಈಗ ನಡೆಯುತ್ತಿರುವುದನ್ನು ನೋಡಿದರೆ ಮನಸ್ಸು ಮುದುಡಿಕೊಳ್ಳುತ್ತದೆ.. ಖೇದವೆನಿಸುತ್ತದೆ….’ನಾವು ಹಾಗಿಲ್ಲವಲ್ಲ’ ಎಂದು ಯೋಚಿಸುತ್ತೇವೆ. ಇಂತಹ ಬಿಕ್ಕಟ್ಟಿನ ಕ್ಷಣಗಳಲ್ಲಿ ಏನಾದರೂ ಮಾಡಬೇಕಲ್ಲ ಎಂದು ಯೋಚಿಸುತ್ತಿದ್ದಾಗ ಹೊಳೆದದ್ದೇ”ಕಡಲ ತಡಿಯ ತಲ್ಲಣ’ ಇದು ಕರಾವಳಿಯ ಬಹು ಸಂಸ್ಕೃತಿಯ ಲೇಖನಗಳ ಸಂಕಲನ….ತುಳುನಾಡಿನ ಕ್ರಿಯಾಶೀಲ ಮನಸ್ಸುಗಳು ಇತ್ತೀಚೆಗೆ ಸಂಭವಿಸುತ್ತಿರುವ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸಿವೆ.ಮತ್ತು ಇಲ್ಲಿ ಬಹುಸಂಸ್ಕೃತಿಯ ನೆಲೆಗಳು ಹೇಗೆ ವಿಸ್ತಾರವಾಗಿ ಮತ್ತು ಆಳವಾಗಿ ನೆಲೆಯೂರಿವೆ ಎಂಬುದನ್ನು ದಾಖಲಿಸುವ ಪ್ರಯತ್ನ ನಮ್ಮದು. ಇದು ತುಳುನಾಡನ್ನು ತಿಳಿಯ ಬಯಸುವವರಿಗೆ ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆಗೆ ಕೈಪಿಡಿಯಾಗಬಹುದೆಂಬುದು ನಮ್ಮ ನಂಬಿಕೆ.
ಉಳಿದಂತೆ ನಾವು ನಿಮಗೆ ಏನನ್ನು ದಾಟಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂಬುದನ್ನು ಈ ಸಂಕಲನವೇ ಹೇಳುತ್ತದೆ.”
ಬೆಂಗಳೂರು, ದೆಹಲಿ, ಮಂಗಳೂರು ಮತ್ತು ಮುಂಬಯಿಗಳಲ್ಲಿ ಏಕಕಾಲದಲ್ಲಿ ಪುಸ್ತಕ ಬಿಡುಗಡೆ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿದ್ದರೂ ಬೆಂಗಳೂರಿನಲ್ಲಿ ಮತ್ತು ದೆಹಲಿಯಲ್ಲಿ ಮಾತ್ರ ಬಿಡುಗಡೆ ಮಾಡಲು ಸಾಧ್ಯವಾಯಿತು. ಬೆಂಗಳೂರಿನಲ್ಲಿ ಸಂಸ ಬಯಲು ರಂಗಮಂದಿರದಲ್ಲಿ ನಡೆದ ಈ ಬಿಡುಗಡೆ ಸಮಾರಂಭವನ್ನು ಭಾರತ ಯಾತ್ರ ಕೇಂದ್ರದ ಸಂಚಾಲಕರಾದ ನಾಗರಾಜ ಮೂರ್ತಿಯವರು ’ಸಾಹಿತಿ ಕಲಾವಿದರ ಬಳಗ’ದ ನೆರವಿನೊಡನೆ ಅರ್ಥಪೂರ್ಣಾವಾಗಿ ನಡೆಸಿಕೊಟ್ಟರು. ಆಗ ಅಲ್ಲಿಗೆ ಬಂದ ಸಹೃದಯಿಗಳ ಸಮೂಹವನ್ನು ನೋಡಿ ನಿಜಕ್ಕೂ ನನಗೆ ಆಶ್ಚರ್ಯ ಮತ್ತು ಆನಂದ ಉಂಟಾಗಿತ್ತು. ದೆಹಲಿಯಲ್ಲಿರುವ ಬಿಳಿಮಲೆಯ ಮಾರ್ಗದರ್ಶನದಲ್ಲಿ ಬರಹಗಳ ಆಯ್ಕೆ ಮಾಡಿ ಪ್ರಕಾಶಕರಿಗೆ ಅದನ್ನು ತಲುಪಿಸುವಲ್ಲಿಯವರೆಗೆ ಎಲ್ಲವನ್ನೂ ಒಂದೇ ಉಸಿರಿನಲ್ಲೆಂಬಂತೆ ಮಾಡಿ ಮುಗಿಸಿದರೂ ಅನಂತರದ ನನ್ನ ಅನುಬವಗಳು ಸಂತಸವಾದುದಲ್ಲ. ಹಾಗಾಗಿ ಪುಸ್ತಕವನ್ನು ಎಲ್ಲರಿಗೂ ತಲುಪಿಸಲಾಗಲಿಲ್ಲ. ಅದಕ್ಕೆ ನಮಗೆ ಸಿಕ್ಕಿದ ಪ್ರಕಾಶಕರು ಕಾರಣ. ಆದರೂ ಕೆಲವು ಸಂಶೋಧನಾ ವಿದ್ಯಾರ್ಥಿಗಳು, ಗಂಭೀರ ಓದುಗರು ಅದನ್ನು ಮೆಚ್ಚಿ ಮಾತಾಡುವಾಗ ನಮ್ಮಲ್ಲಿ ಸಾರ್ಥಕ್ಯದ ಭಾವನೆ ಮೂಡುತ್ತದೆ.
ಇನ್ನು ವರ್ತಮಾನಕ್ಕೆ ಬರುವುದಾದರೆ….
ಮೊನ್ನೆ ಜುಲೈ ೨೮ ಶನಿವಾರ…ಸಂಜೆ. ಮಂಗಳೂರಿನ ’ಮಾರ್ನಿಂಗ್ ಮಿಸ್ಟ್’ ಹೋಂ ಸ್ಟೇ.
ಒಂದಷ್ಟು ಹುಡುಗ-ಹುಡುಗಿಯರು ಬರ್ತ್ ಡೇ ಪಾರ್ಟಿ ಮಾಡುತ್ತಿದ್ದರು. ಆಗ ಅಲ್ಲಿಗೆ ಏಕಾಏಕಿ ನುಗ್ಗಿದ ಒಂದಷ್ಟು ಪಾನಮತ್ತ ಹುಡುಗರು ಹುಡುಗಿಯರ ಮೇಲೆ ದೈಹಿಕ ಹಲ್ಲೆ ನಡೆಸಿ, ಬಟ್ಟೆಗಳನ್ನು ಕಿತ್ತೆಸೆದು, ಬ್ಲೇಡಿನಿಂದ ಗಾಯಮಾಡಿ ಮನಬಂದಂತೆ ಅವರನ್ನು ಥಳಿಸತೊಡಗಿದರು.
ಹಿಂದೂ ಜಾಗರಣ ವೇದಿಕೆಯೆಂದು ತಮ್ಮನ್ನು ಕರೆದುಕೊಂಡ ಆ ಪುಂಡರ ಗುಂಪಿನಲ್ಲಿ ಸ್ಥಳೀಯ ಬಿಜೆಪಿ ಪಕ್ಷದ ಜನಪ್ರತಿನಿಧಿಯೊಬ್ಬರಿದ್ದುದ್ದು ಗಮನಾರ್ಹ.
ಶಿಷ್ಟ ಪರಂಪರೆಯಲ್ಲಿ ದ್ರೌಪದಿಯನ್ನು ಸ್ವಾಭಿಮಾನಿ ಹೆಣ್ಣಾಗಿ ಚಿತ್ರಿಸಲಾಗಿದೆ. ಆದರೆ ತುಳು ಜಾನಪದದಲ್ಲಿ ಅವಳನ್ನು ಮೀರಿಸುವ ಹೆಣ್ಣೊಬ್ಬಳಿದ್ದಾಳೆ ಅವಳೇ ಸಿರಿ. ಬಹುಶಃ ಗಂಡನ ನೈತಿಕತೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿ, ತಾನಾಗಿಯೇ ವಿಛ್ಚೇದನ ನೀಡಿ ಮತ್ತೆ ಮರು ಮದುವೆಯಾದ ಮೊದಲ ಹೆಣ್ಣು ಈಕೆ. ಪ್ರತಿ ವರ್ಷ ನಡೆಯುವ ಸಿರಿ ಜಾತ್ರೆಯಲ್ಲಿ ಇಂದಿಗೂ ಹತ್ತಾರು ಸಾವಿರ ಮಹಿಳೆಯರ ಮೈ ಮೇಲೆ ಏಕಕಾಲದಲ್ಲಿ ಅವಾಹನೆಗೊಳ್ಳುವ ಸ್ತ್ರೀ ಶಕ್ತಿ ಆಕೆ. ಇಂಥ ಮಣ್ಣಿನಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಮೊನ್ನೆ ಪುರುಷ ದೌರ್ಜನ್ಯಕ್ಕೆ ತುತ್ತಾಗಿ ಅಸಾಹಾಯಕರಾಗಿ, ದೇಹವನ್ನು ಹಿಡಿ ಮಾಡಿಕೊಳ್ಳುತ್ತಿರುವುದನ್ನು ಕಂಡಾಗ ಎಂತವರ ಮನಸ್ಸಾದರೂ ಕರಗುತ್ತಿತ್ತು. ಪಾರ್ಟಿ ಕೊಟ್ಟ ಹುಡುಗನಾದರೋ ಆರ್ತನಾಗಿ ತುಳುವಿನಲ್ಲಿ..’ಇದು ನನ್ನ ಬರ್ತ್ ಡೇ ಪಾರ್ಟಿ..ಏನೂ ಮಾಡ್ಬೇಡಿ’ ಎಂದು ಕರುಳು ಕಿವುಚುವಂತೆ ಅಂಗಲಾಚುತ್ತಿದ್ದರೂ ಆ ನರರೂಪದ ಕಿರಾತಕರು ಅವನ ಶರ್ಟ್ ಕಿತ್ತೆಸೆದು ಸಿಕ್ಕ ಸಿಕ್ಕಲ್ಲಿ ಹೊಡೆದು ತಮ್ಮ ಪೈಶಾಚಿಕ ಪ್ರವೃತ್ತಿಯನ್ನು ಮೆರೆದಿದ್ದರು.
ಆ ಮಕ್ಕಳ ಮತ್ತು ಅವರ ಹೆತ್ತವರ ಮೇಲಾದ ಮಾನಸಿಕ ಅಘಾತವನ್ನು ಮೂರನೆಯವರಾದ ನಾವು ಕಲ್ಪಿಸಿಕೊಳ್ಳಲು ಸಾಧ್ಯವೇ?
ಇದನ್ನೆಲ್ಲಾ ನೋಡುತ್ತಿರುವಾಗ ನನ್ನ ಒಳ ಮನಸ್ಸು ಹೇಳುತ್ತಿದೆ.’ನಾವು ಹಾಗಿರಲಿಲ್ಲ. ಖಂಡಿತವಾಗಿಯೂ…ನಾವು ಹಾಗಿರಲಿಲ್ಲ…ಎಂದು. ಆದರೆ ನಾವು ಹೇಗಾಗಿ ಹೋಗಿದ್ದೇವೆ..ಎಂಬುದನ್ನು ಹೊರ ಜಗತ್ತು ತೋರಿಸುತ್ತಿದೆ…ಅದಕ್ಕೆ ಕಾರಣರಾದವರು ಯಾರು? ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು?
ಉತ್ತರಕ್ಕಾಗಿ ಹುಡುಕಾಡುತ್ತಿದ್ದೇನೆ
[ ಈ ವಾರದ ಅಗ್ನಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]
